ಕಾವ್ಯ ಸಂಗಾತಿ
ಡಾ ಗೀತಾ ದಾನಶೆಟ್ಟಿ ಬಾಗಲಕೋಟೆ
“ಡಂಬಾಚಾರಿಗಳು”


ಧರ್ಮ- ದೇವರ ಹುಟ್ಟಿಸಿ
ಸುಳ್ಳು ಪವಾಡ ಸೃಷ್ಟಿಸಿ
ಮುಗ್ಧ ಜನರನು ವಂಚಿಸಿ
ಮೋಸ ಮಾಡಿ ದುಡ್ಡು ಗಳಿಸಿ
ಮಡೆ ಎಡೆ ಸ್ನಾನದ
ಹೆಸರಿನಲ್ಲಿ ಎಂಜಲಲೆಯ
ಮೇಲೆ ಹೊರಳಾಡಿಸಿ
ಮಂಡೆ ಬೋಳಿಸುವ
ಡಂಬಾಚಾರಿಗಳು
ಮೂಢಾಚರಣೆಗಳ ದಾಸರಾಗಿಸಿ
ಜ್ಯೋತಿಷ್ಯ- ಭವಿಷ್ಯ ಕೇಳಿ
ಮಾಟ-ಮಂತ್ರವ ಮಾಡಿಸಿ
ಹೋಮ ಹವನದಿ
ಬೇಯಿಸಿ
ವಾಸ್ತುವಿನ ಹೆಸರಿನಲ್ಲಿ
ದಿಕ್ಕು ಬದಲಿಸಿ
ಕಂದಾಚಾರ- ವಾಮಾಚಾರಕ್ಕೆ
ಕಟ್ಟು ಬಿದ್ದು
ಅರ್ಥವಿಲ್ಲದ ಆಡಂಬರದ
ಆಚರಣೆ ಮಾಡಿ
ವ್ಯರ್ಥ ಸಮಯ ಕಳೆಯುವ ಜನರು
ಮೂಢಾಚರಣೆಯ ಗೂಡಿನಲ್ಲಿ
ಬೀಡು ಬಿಟ್ಟಿರುವ ಜಾಡ್ಯಗಳಿಂದ
ಹೊರ ಬರುವುದು ಯಾವಾಗ ?
ಕ್ರಾಂತಿ ಕಹಳೆ ಊದುವುದಾವಾಗ
ಮನುಜ ಪಥದ ದಾರಿ
ವಿಶ್ವ ಪಥವ ಸಾರಿ
ಡಾ ಗೀತಾ ದಾನಶೆಟ್ಟಿ ಬಾಗಲಕೋಟೆ



