ಧಾರಾವಾಹಿ ಸಂಗಾತಿ
ಕಂತು-ಏಳು
ಜಯದೇವಿ ತಾಯಿ ಲಿಗಾಡೆ
ಜೀವನಗಾಥೆ
ಸವಿತಾ ದೇಶಮುಖ

ತಾಳಲಾರೆ ಯಾತನೆ/ಕೇಳೋಕೂಗು ನೀಲಕಂದರನೆ !! ಪಲ್ಲವಿ!!
ಚಂದಿರನ ತಂಗಾಳಿ ನೊಂದ ಮನಕೆ ಬೀರಿ ಕಂದಳನು ಕಾಪಾಡ ಬಾರೋ!!
ಬಾಳಿನ ತುಂಬೆಲ್ಲ ತಾಳಬಾರದು ಗೋಳು
ಹೇಳಲು ಬರೋದು ಎನಗಯ್ಯ !!
ಅಂತ ಪಾಡುತ……
ಚಂದಿರನ ಬೆಳದಿಂಗಳದ ಕೆಳಗೆ ಕುಳಿತು… ತೊರೆದು ಹೋದ ಚೊಚ್ಚಲ ಮಗುವನ್ನು ನೆಯುತ ಜಯದೇವಿ ತಾಯಿಯವರು ಖಾಲಿ ಹೃದಯ ಹೊತ್ತು, ಕಣ್ಣೀರು ಧಾರೆಯಲಿ ಅಮ್ಮನ ಮಡಿಲಲ್ಲಿ ತಲೆ ಇಟ್ಟು ಬಹಳ ಹೊತ್ತು ಅತ್ತರು.
ಆದರೆ ಜೀವನ ಯಾರಿಗೂ ಹೆಚ್ಚು ಕಾಲ ವಿರಾಮ ಕೊಡುವುದಿಲ್ಲವಲ್ಲಾ….!!!
ಮತ್ತೆ ಗಂಡನ ಮನೆಗೆ ಹೊರಡಬೇಕು…..!!!
ಗಂಡನ ಮನೆಗೆ ಹೋಗುವ ದಿನವೂ ಬಂತು…
ತವರ ಬಾಗಿಲು ದಾಟಲು ಕಾಲುಗಳು ಮುಂದೆ ಸಾಗಲಿಲ್ಲ.ಪ್ರತಿ ಹೆಜ್ಜೆಯೂ ಒಂದು ನೆನಪನ್ನು ತುಳಿಯುವಂತೆ……ತವರಿನ ಗೋಡೆಗಳೆಲ್ಲ
ಆ ಮಗು ನಗುವಿನ ಧ್ವನಿ ತುಂಬಿತ್ತು… ಕಳವಳ ಗೊಂಡ ಮನ…. ಕರಳು ಹಿಚುಕುವ ಸನ್ನಿವೇಶ…
ಗಂಡನ ಮನೆಗೆ ಹೋಗುವ ದಾರಿಯಲ್ಲಿ
ಮೌನವಾಗಿ ದೇವರನ್ನು ಕೇಳಿದಳು —
ಕಳವಳಗೊಳ್ಳುತ್ತಾ ಬಳಲುತ್ತ ಬೇಡುವೆ
ತಿಡಿಗೇಡಿಗೆ ಹೇಳೊ ಮನಶಾಂತಿಯ !!
ನೊಂದ ಜೀವ ಬೆಂದ ಮನ ಸಂದುಸಂದಿನ
ನೋವ ಅಂದಿಂದ ಮೈ ಮನಕೆಂದೇ !!
ಹಂಣ್ಣಾದ ಈ ಮನಕೆ ಸಣ್ಣ ಮಾಡುವುದಕ್ಕೆ?!
ಕಣ್ಣು ತೆರೆದು ಕರುಣಿಸಯ್ಯ
ರೋಮರೋಮಂಗಳಿಗೆ ಸ್ವಾಮಿ ನಿನ್ನಯ ಒಲವು ಅಮರ ಧಾರೆಯ ಎರೆಯಯ್ಯಾ!!
ಭವ ದೂರ ಭವನಾಶ ‘ಜಯ ಸಿದ್ದರಾಮೇಶನೆ’ ದಯದೋರೊ ಎನ್ನ ಭಯ ದೂರ ಸರಿಸೋ !!

ಜಯದೇವಿ ತಾಯಿಯವರ ತಮ್ಮ ಶಿವಶಂಕರ್ ಮಡಕಿ ,ತಂಗಿಶ್ರೀದೇವಿ ಗಾಡವೆ, ,ಮಗಳು ಶಶಿಕಲಾ ಮಡಕಿ, ತಂಗಿ ಸುಮತಿ ಅಸ್ಟುರೆ
ಗಂಡನ ಮನೆ ಅವರನ್ನು ಕಾಯುತ್ತಿತ್ತು…..
ಆದರೆ ಕಣ್ಣುಗಳಲ್ಲಿ ಜೀವಂತವಾಗಿದ್ದ
ಒಂದು ಚಿಕ್ಕ ಮುಖ…ಒಂದು ಅಪೂರ್ಣ ನಗುವಿನ ನೆನಹು ಮನದಲಿ ತುಂಬಿತ್ತು ……
…. ಅಲ್ಲಿ ಇನ್ನೂ ಏನ ಗ್ರಹಚಾರವಿದೆಯೋ..
ಅತ್ತೆಯ ನೆನಪಾಗಿ ಕೈ ಕಾಲುಗಳು ನಡುಗಲಾರಂಭಿಸಿದವು. ಖಾಲಿ ಕೈಯಲ್ಲಿ ಹೇಗೆ ಹೋಗುವದು ಬರಿದಾದ ಒಡಲನ್ನು ತೆಗೆದುಕೊಂಡು…????
ಹೆದರುತ್ತ ಹೆದರುತ್ತಲೇ ಗಂಡನ ಮನೆಯಲ್ಲಿ ಕಾಲಿಟ್ಟ ತಕ್ಷಣ ಅತ್ತೆ ಪ್ರಯಾಗಬಾಯಿ ಎದುರಾದರು ……
ಎದುರಾದ ಅತ್ತೆ ಮುಖ ಕಳೆಗುಂದಿತು ಕರುಣಾ ಮಯಿಯಾಗಿ ಕಂಡರು……. ಮಡಿಲಲ್ಲಿ ಮಗು ಇಲ್ಲದ ಸೊಸೆಯ ಕಣ್ಣುಗಳೇ ಸಾವಿರ ಮಾತುಗಳ ಹೇಳುವದ ಕಂಡು…….
ಬಾಗಿಲ ಬಳಿ ನಿಂತಿದ್ದ ಸೊಸೆಯನ್ನು ನೋಡಿ
ಅತ್ತೆಯ ಹೃದಯ ಕಗ್ಗತ್ತಲಾಯಿತು…..ಸೊಸೆ ಒಂದು ಹೆಜ್ಜೆ ಒಳಗೆ ಇಟ್ಟಳು…….
ಸೊಸೆಯ ಕಾಲನಡಿಗೆಯ ನಡುಗು.ಹೃದಯದಲ್ಲಿ ಹೊತ್ತಿ ಉರಿಯುವ ಶೋಕ……
ಕಣ್ಣುಗಳಲ್ಲಿ ಅಳಲು ,ಒಣಗಿದ ಕಣ್ಣೀರು, ನೋವಿನ ನಿರಾಶೆ, ಜೀವ ಒಡೆದುಹೋದ ವ್ಯಥೆ ಹೇಳಿದವು…
ಅತ್ತೆ ಮುಂದೆ ಬಂದು “ಇರ್ಲಿ ನಿನ್ನ ಮಗನ ಶಿವ ಕರ್ಸ್ಕೊಂಡಾನ ಇಂತಹ ಹತ್ತು ಮಕ್ಕಳನ್ನು ಮತ್ತೇ ಹೆರುವಂತಿ ಬಾ ಒಳಕ್ಕೆ ಬಾ “ಅಂದರಂತೆ ಕಣ್ಣಲ್ಲಿ ನೀರುತುಂಬಿಕೊಕಡಿದ್ದವು..
ಒಂದು ಕ್ಷಣದಲ್ಲಿ ‘ಅತ್ತೆ’ … ‘ತಾಯಿ’ ಆಗಿಬಿಟ್ಟಳು.
ಸೊಸೆಯ ಖಾಲಿ ಕೈಗಳನ್ನು ಮಮತೆಯಿಂದ ಗಟ್ಟಿಯಾಗಿ ಹಿಡಿದರು.
ಇದು ಮೊಟ್ಟಮೊದಲ ಬಾರಿ —
ಪ್ರೀತಿಯಿಂದ ಸೊಸೆ ಎದೆಗೆ ತಲೆ ಒರಗಿಸಿ
ಮುರಿದು ಬಿದ್ದಳು.
ಇಬ್ಬರ ನೋವು ಒಂದಾಗಿ ಹರಿದ ಕ್ಷಣಗಳಿಗೆ
ಆ ಮನೆಯ ಗೋಡೆಗಳು ಸಾಕ್ಷಿಯಾಗಿದ್ದವು —
ಕಾಡುತ್ತಿದ್ದ ಅತ್ತೆ ಇವತ್ತು ಕರಗಿಬಿಟ್ಟಳು.
ಸೊಸೆ ಮಾತಾಡಲಿಲ್ಲ. ಮೌನವಾಗಿ ಒಳ ನಡೆದರು.
ಆ ದಿನದಿಂದ ಆ ಮನೆಯ ವಾತಾವರಣ ಬದಲಾಗಿತು.ಅತ್ತೇಯ ಕಾಡುವ ಮಾತುಗಳು ಇಲ್ಲವಾಗಿದ್ದವು…..
ಕಾಲ ಕೆಲವೊಮ್ಮೆ ಶಿಕ್ಷಕ ಆಗುತ್ತೆ ಅಲ್ಲವೇ….!!!
ಒಂದು ಮರಣ ಎರಡು ಹೃದಯಗಳನ್ನು ಹತ್ತಿರ ಮಾಡಿತು.
ಅದಕ್ಕೆ ಜಯದೇವಿತಾಯಿಯವರು ಹೇಳ್ತಾರೆ
“ಕಾಡುವವರು ಇರಬೇಕ/ ಕಡಿತನಕ ಜನುಮಕ್ಕ ನೋಡುವರ ಇರಬೇಕು ವರೆಗೆ ಹಚ್ಚಿ-ಈ ಮನೆಕ ನೀಡುವರು ಇರಬೇಕ ನಿಜದರಿವ!!
ಕಾಡುವರು ನನಗ /ಕಡೆತನಕ ಇರಲವ್ವ
ಕೇಡ ಬಯಸಿನು ನಾ ಅವರಿಗ-ಕಡೆತನ
ಹಾಡಿ ಹರಿಸುತ ಸುಖಿಸುವೆ!!
ಏಕೆಂದರೆ ಒಂದೊಂದು ಕಠಿಣ ಪರೀಕ್ಷೆಗಳು ಅವರನ್ನು ದೇವರ ಸಮೀಪ ಕರೆದು ಒಯ್ಯಯುತಿವೆ. ಅನ್ನುವುದು ಖಚಿತಗೊಳ್ಳಲಾರಂಭಿಸಿತ್ತು..
ಅತ್ತೆಯ ಕಾಟಾಚಾರವು ಕೂಡಾ ಜೀವನದಲ್ಲಿ ಅನೇಕ ಪಾಠಗಳನ್ನು ಕಲಿಸಿದ್ದವು ಅವರಿಗೆ ಸಕಾರಾತ್ಮಕ ಬದುಕನ್ನು ಬದುಕುವ ಪಾಠ ಕಲಿಸಿತ್ತು ಅಂತ ಹೇಳುತ್ತಿದ್ದರು.
“ನೋವಿನ ಪೆಟ್ಟು ಬಿದ್ದಂತೇಲ್ಲ ಸಿದ್ದರಾಮನ ಸಾಮಿಪ್ಯಕೆ ಸಮಿಸತಾ ಹೋದೆ…. ಹಾಗೆ ಕನ್ನಡ ತಾಯಿಯನ್ನು ನಾನು ಅಪ್ಪಿಕೊಳ್ತಾ ಹೋದೆ …….ಮನದಲ್ಲಿ ಉಲ್ಬಣಿಸುತ್ತಿದ್ದ ವೇದನೆಗಳು… ಕಾವ್ಯದ ರೂಪದಲ್ಲಿ ಮನದ ಮೂಲೆಯಲ್ಲಿ ಹರಿದು ಬರುತ್ತಿತ್ತು ಕಷ್ಟಗಳನೆಲ್ಲ ನನ್ನ ತಾಯಿ ಭಾಷೆ ಕನ್ನಡಭಾಷೆಯಲ್ಲಿ ತೋಡಿಕೊಳ್ಳುತ್ತಿದ್ದೆ …. ಆದರೆ ಅವುಗಳನ್ನು ಶಬ್ದಾಂಕನ ಗೊಳ್ಳಿಸಲಿಕ್ಕೆ ಬೇಕಾಗುವ ಕನ್ನಡ ಶಬ್ದಗಳು ಬರೆಯುವ ಜ್ಞಾನ ಇನ್ನೂ ನನಗೆ ಇರಲಿಲ್ಲ ಏಕೆಂದರೆ ನಾಲ್ಕನೇ ಇಯತ್ತೆ ಮರಾಠಿ ಕಲಿತವಳು…ಕನ್ನಡ ಭಾಷೆಯನ್ನು ಬರೆಯಲು ನಾನು ಕಲಿತಿರಲಿಲ್ಲ .”ಅಂತ ಹೇಳ್ತಾ ಇದ್ದರು.
ಜಯದೇವಿ ತಾಯಿಯವರ ಮೈದುನ ಜಗದೇವಪ್ಪನವರು ಗಂಡ ಚೆನ್ನಮಲ್ಲಪ್ಪನಂತೆ ವ್ಯಾಪಾರದಲ್ಲಿ ಜಾಣರೇನು ಆಗಿರಲಿಲ್ಲ…….!! ಕೆಟ್ಟ ಸಂಗತಿಯ ಗೆಳೆಯರಿಂದ ಅವರು ದಾರಿ ತಪ್ಪುತ್ತಿರುವುದನ್ನು ನೋಡಿದ ಪ್ರಯಾಗಬಾಯಿಯು ಒಬ್ಬ ಸುಂದರ ಮರಾಠವಾಡಾದ ಹೆಣ್ಣನ್ನು ನೋಡಿ ಮದುವೆ ಮಾಡಿದರು.
ಆದರೆ ಮದುವೆಯಾಗಿ ಬಂದ ಓರಗಿತ್ತಿಯು ತಾಯಿಯವರ ತದ್ವಿರುದ್ಧ ಅವಳು ತುಂಬಾ ಚಂಚಲೆ, ಚಟಪಟ ಅಂತ ಮಾತನಾಡುವ ಎದುರುತ್ತರ ನೀಡುವ ಸೊಸೆ ….
ಅತ್ತಿಯಂದಿರು ಹೇಳಿದ ಮಾತುಗಳನ್ನು ಕೇಳುತ್ತಿರಲಿಲ್ಲ… ಹೀಗಾಗಿ ಮದುವೆಯಾದ ಹೊಸತರಲ್ಲಿ ಪ್ರಯಾಗಬಾಯಿ ಸಣ್ಣ ಸೊಸೆಗೆ ಯಾವುದಾದರೂ ಸಣ್ಣ ಕೆಲಸ ಹೇಳಿದರು ಓರಗಿತ್ತಿಯು ಮಾಡುತ್ತಿರಲಿಲ್ಲ.
ಅವಳು ರಾತ್ರಿ ಸಮಯ ಒಂಬತ್ತು ಗಂಟೆ ಆಗುತ್ತಿದ್ದಂತೆ ತನ್ನ ಗಂಡನ ಕೋಣೆಗೆ ಹೋಗಿಬಿಡುತ್ತಿದ್ದಳು . ಸಿರಿಮಂತ ಮನೆಯ ಸೊಸೆ ಅಲ್ಲವೇ ಬೆಳಗ್ಗಿನ ವಿಹಾರಕೆ ಅಂತ ಇಬ್ಬರೂ ಗಂಡ ಹೆಂಡದಿರು ಹೊರಟು ಹೋಗುತ್ತಿದ್ದರು.
ಅತ್ತಿಯಂದಿರ ಹೇಳುವ ಕೆಲಸಗಳನ್ನು ಎಷ್ಟು ಕೇಳಬೇಕು ಅಷ್ಟೇ ಕೇಳುವಳು…ತಾನಾಯಿತು ತನ್ನ ಗಂಡನಾಯಿತು ಅಷ್ಟೇ ಅವಳ ಪ್ರಪಂಚವಾಗಿತ್ತು.
ಜಯದೇವಿ ತಾಯಿಯವರಂತೆ ಸುಶೀಲ ಸದ್ಗುಣ ಸಾಧ್ವಿ ಸೊಸೆ ಆಗಿರಲಿಲ್ಲ ಹೀಗಾಗಿ ಸಹಜವಾಗಿ ಪ್ರಯಾಗಬಾಯಿಗೆ ಜಯದೇವಿ ತಾಯಿಯವರ ಮೇಲೆ ನಂಬಿಕೆ ಪ್ರೀತಿ ಮಮತೆ ಹುಟ್ಟಲಾರಂಭಿಸಿತು. ಅತ್ತೆಯಂದಿರ ನೆಚ್ಚಿನ ಸೊಸೆಯಾದರು .
ಜಯದೇವಿ ತಾಯಿಯವರ ಗಂಡನ ತಮ್ಮನ ಮದುವೆಯಾದ ನಂತರ ತಾಯಿಯವರು ಎರಡನೆಯ ಹೆರಿಗೆ ಹೋದರು ಈ ಸಲ ಮೊದಲ ಹೇರಿಗೆ ಅಂತ ಉತ್ಸಾಹ ಸಂತಸ ಯಾವುದು ಇರಲಿಲ್ಲ ಯಾವ ಸಂಭ್ರಮ ಇರಲಿಲ್ಲ ಸಹಜವಾಗಿ ಹೊರಟು ನಿಂತರು.
ಈ ಸಲದ ಹೇರಿಗೆಯು ಸುರಕ್ಷಿತವಾಗಿ ಸುಗಮವಾಗಿ ಸಾಗಿತು. ಅತ್ಯಂತ ಸುಂದರ ಹೆಣ್ಣು ಮಗುವಿಗೆ ಜನ್ಮವನ್ನು ಕೊಟ್ಟರು ಚಂದಿರನಂತೆ ಸುಂದರವಾಗಿದ್ದ ಮಗುವಿಗೆ ‘ಶಶಿಕಲಾ ‘ಎಂದು ನಾಮಕರಣ ಮಾಡಿ ಸಂತೈಸಿದರು .
ಇಷ್ಟರಲ್ಲಿ ಬ್ರಿಟಿಷರ ಸೊತ್ತಾಗಿದ್ದ ಲಿಗಾಡೆ ಮನೆತನದ ಆಸ್ತಿಯನ್ನೆಲ್ಲ ಚೆನ್ನಮಲ್ಲಪ್ಪನವರಿಗೆ ಬ್ರಿಟಿಷರು ಆದರದಿಂದ ಒಪ್ಪಿಸಿದ್ದರು.
ನಂತರ ಅವರು ಮೂರನೇ ಹೇರಿಗೆ ಹೋರಟರು ಹೀಗೆ ಮೇಲಿಂದ ಮೇಲೆ ತವರು ಮನೆಗೆ ಹೋಗುವುದು ಗಂಡನಿಗೆ ಬೇಸರ ತರುತ್ತಿದ್ದರು ಹೇರಿಗೆಯೂ ಮನೆಯಲ್ಲಿ ಆಗಲಿ ಅಂತ ಹೇಳುವ ಧೈರ್ಯ ಅವರಿಗೆ ಇರಲಿಲ್ಲ.
ಅನಿವಾರ್ಯ ಹೋಗಲೇ ಬೇಕಾಲ್ಲ…
ಮೂರನೆಯ ಹೇರಿಗೆ ಸುಂದರ ಗಂಡು ಮಗವನ್ನು ಹೆತ್ತರು. ಅವನಿಗೆ ‘ಶ್ರೀಕಂಠ ‘ಅಂತ ಹೆಸರಿಡಲಾಯಿತು. ಅತ್ಯಂತ ಅದ್ದೂರಿಯಾಗಿ ಸಂಭ್ರಮವನ್ನು ಆಚರಿಸಿದರು.
ಗಂಡು ಮಗ ಅಂದರೆ ಕೇಳಬೇಕು ಆಗಿನ ಕಾಲದಲ್ಲಿ ಗಂಡು ಮಗ ಹುಟ್ಟಿದರೆ ಸ್ವರ್ಗದ ಬಾಗಿಲ ತೆರೆದಂತೆ
ಆದರೆ ಜಯದೇವಿ ತಾಯಿಯವರು ಹೆಣ್ಣು ಗಂಡು ಎರಡನ್ನು ಸಮಾನತೆಯಲ್ಲಿ ನೋಡುವ ದೃಷ್ಟಿಕೋನವನ್ನು ಚಿಕ್ಕವರಿರುವಾಗಲೇ ಅವರು ಹೊಂದಿದವರಾಗಿದ್ದರು.
ಅದಕ್ಕೆ ತಾಯಿಯವರು ಒಂದು ಕಡೆ ಬರೆಯುತ್ತಾರೆ
ಹೆಣ್ಣು ಹುಟ್ಟೇದಂತ | ಕಣ್ಣೀರ ಕರಿಬ್ಯಾಡ ಸಣ್ಣಾಗಬ್ಯಾಡ ಮನದಾಗ -ತಾಯವ್ವ
ಹೆಣ್ಣಿನ ಜಗದ ಕಣ್ಣೇನ ||
ಕಾನೂನು ಬದ್ಧವಾಗಿ ಹೆಣ್ಣು ಗಂಡು ಇಬ್ಬರೂ ಸಮಾನತೆ ಪಡೆಯುವಂತಹ ಕಾಲದಲ್ಲಿ ಜಯದೇವಿ ತಾಯಿಯವರು ಹುಟ್ಟಿದ್ದರೂ ಸಂಪ್ರದಾಯದಾಯಸ್ಥ ಕುಟುಂಬಕ್ಕೆ ಪುಷ್ಟಿ ಕೊಟ್ಟವರು.
ಯಾವ ಕಾಲದಲ್ಲೂ ಹೆಣ್ಣು ಹುಟ್ಟಿ ಎರಡು ಮನೆಯಲ್ಲಿ ದೀಪ ಬೆಳಗುವಳಾಗಬೇಕು. ಕುಟುಂಬದ ಹೃದಯವಾಗಿ ನಿಲ್ಲಬೇಕು ನಿಜ . ಸೊಸೆಯಾಗಿ ಬಂದವಳು ಮೊದಲು ಸಹನೆ ಸೈಯ್ಯಮ ವಿನಯತೆ ಅವಳಿಗೆ ಆಭರಣ …ಹಿರಿಯರಿಗೆ ಆದರ ತೋರುತ್ತ ಕುಟುಂಬವ ನಿರ್ವಹಿಸುವುದೇ ಅವಳ ಧರ್ಮ. ಸಂಪ್ರದಾಯದ ಬಳುವಳಿಯನ್ನೇ ಬಳವಿಗೆ ಮಾಡಿದ್ದಾರೆ.
ಕುಟುಂಬ ಜೀವನದ ಅನೇಕ ಏರಿಳಿತದ ಬಗ್ಗೆ ಹೇಳ್ತಾ ಹೋಗ್ತಾರೆ … ಗರತಿಯ ಬಗ್ಗೆ ಹೀಗೆ ಹೇಳ್ತಾರೆ
“ದಯ ಬೇಕ ನುಡಿಯಲಿ |ಭಯ ಬೇಕ ನಡೆಯಲ್ಲಿ ದಯ ಬೇಕ ಸಕಲ ಜೀವನದಲ್ಲಿ -ತಾಯವ್ವ
ಲಯ ಬೇಕು ಶಿವನ ನೆನಹುನಲಿ||
ಸೊಸೆಯಾದವಳು ಮೊದಲು ಮನೆ ಕೆಲಸ ಮಾಡಿ ಮನೆಯ ಮಂದಿಯ ಮನವನ್ನೇಲ್ಲ ಗೆಲ್ಲಬೇಕು ಗಂಡನ ಮನ ಗೆಲ್ಲಬೇಕು…. ವಿನಯಶೀಲರಾಗಿರಬೇಕು… ಎಲ್ಲರ ಬೇಕು ಬೇಡುಗಳನ್ನು ನೋಡುವಂಥವಳು ಆಗಿರಬೇಕು. ಮಾತಿಗೆ ಮಾತು ಬೆಳೆಸದಂಥವಳಿರಬಾರದು ಹೆಚ್ಚು ಅಗೆದರೆ ತಗ್ಗು ಬೀಳುವುದು ಹೆಚ್ಚು…. ಎಂಬಂತೆ
ಮಾತಿನ ಗತಿ ಹೇಗಿರಬೇಕೆಂದರೆ ಮನಗಳನ್ನು ತಿಳಿಯಾಗಿಸಬೇಕು ಅನ್ನುತ್ತಿದ್ದರು ….
ಮನೆಯ ಕಂಬವಾಗಿರಬೇಕು ಸೊಸೆ ಆದವಳು.
ಸಿಟ್ಟಲಿ ಗಂಡ-ಅತ್ತೆಗ ಎದುರು ಉತ್ತರ ನುಡಿದರೆ
ಮನೆಯವರ ಮನ ಸುಡು ಸುಡು ಸುಟ್ಟು
ಮರಳಿ ಸೊಸೆಯ ಕಡೆಗೆ ಚಟ್ಟಂತಹ ಸಿಡಿಯುವದ
ಬಿರುಗಾಳಿ ಬೀಸಿದಂಗ ತೂರಿ ಬಂದ ಮಾತು
ಗಗನಕ್ಕಹಾರಿ ಒಯ್ದು ನೆಲಕ್ಕೆ ದೊಪ್ಪೆಂದ ಒಗೆವದ..
ಅಂತ ಹೇಳುವ ಮಾರ್ಮಿಕವಾದ ಉದಾರಣೆಯನ್ನು ಹೇಳುತ್ತಿದ್ದರು .
ಹೆಣ್ಣಾದವಳು ನಗುನಗುತ ಮಾತಾಡಬೇಕು
ಹಗೆ ಎದುರಾದರೂ ಹೊಗೆ ನುಡಿ ಸಲ್ಲ
ಕಾಣಲಾರದ ಕಣ್ಣು ಕಂಡ್ನಗ ಕಂಡಹಂಗ ಆಡಿ ಬಾಣಧಾಂಗ ಮಾತು ಮರಳಿ ಬಡೆಯದ ಮುನ್ನ ಜೋಕೆಯಿಂದಿದ್ದುತಾನು ಸುಟ್ಟುಕೊಂಡು ಇತರರ ಮನ ತಂಪಾಗಿರಬೇಕು…..
ತುಪ್ಪ ಸಕ್ಕರೆ ಉಪ್ಪ-ಖಾರ ಉಣಿಸಿ ಒಪ್ಪುಳ್ಳ ಮಾತು ಕಲಿಸಿದರೆ ನಾಲಿಗೆ ಹಾಲಿನ ಹೆಪ್ಪುಗೆಡಿಸಿತ್ತು ಆಗ
ಸಿರಿ ಇದ್ದು ಸುತರಿದ್ದು ಸುಖವಿಲ್ಲ ಹಿತವಿಲ್ಲದಿದ್ದರೆ ಫಲವೇನು….. ಎನ್ನುತ್ತಾರೆ
ಕಡಿಮೆ ಎಂದರೆ ಮೂರು ತಲೆಮಾರಿನವರು ಜನರು ಕೂಡಿ ಇರುವ ಪದ್ಧತಿಯೇ ನಮ್ಮ ಸಂಸ್ಕೃತಿ ನಮ್ಮ ದೇಶದ ಪರಂಪರೆಯ ಬಳುವಳಿಯನ್ನು ನಾವು ಮೀರಬಾರದು ಅನ್ನುವುದು ಜಯದೇವಿ ತಾಯಿಯವರ ವಾದವಾಗಿತ್ತು.
ಐದು ಜನ ಅತೇರ ಕೈಯಲ್ಲಿ ನಡೆದು ನಾಲ್ಕು ಜನ ಸೊಸೆಯೊಂದನ್ನು ನಡೆಸಿಕೊಂಡ ಗೊತ್ತು 23 ಮೊಮ್ಮಕ್ಕಳು ಮರಿ ಮೊಮ್ಮಕ್ಕಳನ್ನು ಕಂಡ
ತುಂಬಾ ಜೀವನದ ಅನುಭವದ ವಿಚಾರ.
ಹರೆಯದ ಹೆಣ್ಣು ನೂರಾರು ಆಸೆ ಹೊತ್ತು ಅತ್ತೆಯ ಮನೆಗೆ ಬಂದಾಗ ತನ್ನ ಸುಖಕ್ಕಿಂತ ಮನೆಯಲ್ಲಿಯೇ ಹಿತ ರಕ್ಷಿಸುವುದೇ ಮೇಲು ತನ್ನ ಮನ ನೊಂದರು ಉಳಿದವರ ಮನನೊಯದಂತೆ ನೋಡಿಕೊಳ್ಳಬೇಕು ಅನ್ನುತ್ತಿದ್ದ .
ಅವಿಭಕ್ತ ಕುಟುಂಬದಲ್ಲಿ ಬೆಳೆದ ತಾಯಿಯವರು ಸ್ವಾಭಿಮಾನದಿಂದಲೇ ಈ ಮಾತುಗಳ ಹೇಳಿದ್ದಾರೆ ನಮ್ಮ ಸಂಸ್ಕೃತಿಯಿಂದ ದೂರ ಸರಿಯದೇ ವ್ಯಕ್ತಿ ವಿಕಸನವನ್ನು ಮಾಡಿಕೊಳ್ಳಬಹುದು….. ಬೆಳೆಯಬಹುದು ಅನ್ನುವುದು ತೋರಿಸಿಕೊಟ್ಟ ಸಾಕ್ಷಾತ್ ನಿದರ್ಶನ ಅವರ ಜೀವನ.
ಹಾಗೆ ಹೆಣ್ಣಾಗಿ ಸತ್ಯಕ್ಕಾಗಿ ಹೋರಾಡಬೇಕು, ಕೆಟ್ಟದ್ದನ್ನು ಪ್ರತಿಭಟಿಸಬೇಕು ,ಗಂಡನಿಗೆ ಸರಿ ಸಮಾನವಾಗಿ ನಿಲ್ಲಬೇಕು ಜೀವನದಲ್ಲಿ ಸಾಧನೆ ಮುಖ್ಯ ಗುರಿ ಆಗಿರಬೇಕು ಜ್ಞಾನಧ ಎತ್ತರಕ್ಕೆ ಇರಬೇಕು ಅನ್ನೋ ಧೋರಣೆಯನ್ನು ಕೂಡ ಹೊಂದಿದ್ದರು. ಮೊದಲು ಹೆಣ್ಣಾದವಳು ಸೋತು ಸೋತು ಗೆಲ್ಲಬೇಕು ಅನ್ನುವ ತಮ್ಮ ಅನುಭವವನ್ನು ಎಲ್ಲರೊಂದಿಗೆ ಹಂಚಿಕೊಳ್ಳುವುದು ವೈಶಿಷ್ಟ ಪೂರ್ಣವಾದ ವ್ಯಕ್ತಿ ವಿಶೇಷತೆ ತೋರುತ್ತದೆ.
ವ್ಯಾಪಾರದಲ್ಲಿ ನೈಪುಣ್ಯತೆ ಹೊಂದಿರುವ ತಂದೆ ಚನ್ನಬಸಪ್ಪನವರ ಜೊತೆ ಕೂಡಿ ವ್ಯಾಪಾರವನ್ನು ಮಾಡುತ್ತಿದ್ದರು…ಗಂಡ ಚೆನ್ನಮಲ್ಲಪ್ಪನವರು. ಹಾಗೆ ಜಯದೇವಿ ತಾಯಿಯವರ ಅಕ್ಕ ತಂಗಿಯರು ಅಣ್ಣ ತಮ್ಮಂದಿರನ್ನು ಆದರದಿಂದ ನೋಡಿಕೊಳ್ಳುತ್ತಿದ್ದರು.
ಜಯದೇವಿ ತಾಯಿಯವರ ತಂಗಿಯಂದಿರು ಮಕ್ಕಳ ವಯಸ್ಸಿನವರಷ್ಟೇ ಇದ್ದರು .
ಆಗಿನ ಕಾಲದಲ್ಲಿ ತಾಯಿ ಮಗಳ ಹೆರಿಗೆ ಜೊತೆ ಜೊತೆಗೆ ಆಗುವುದು ಸಹಜವಾಗಿತ್ತು…..ಹೀಗಾಗಿ ಜಯದೇವಿ ತಾಯಿಯವರ ತಂಗಿಯಂದಿರು ಹಾಗೂ ಮಕ್ಕಳು ಎಲ್ಲರೂ ಸೇರಿ ಶಾಲೆಗೆ ಹೋಗುತ್ತಿದ್ದರು.

ಈ ಸಮಯದಲ್ಲಿ ತಾಯಿಯವರಿಗೆ ವಚನವನ್ನು ಓದುವ ಮಹದಾಸೆ ಹೆಚ್ಚಾಗಿ ತೊಡಗಿತ್ತು.ಶರಣರ ಬಗ್ಗೆ ಕೇಳಿ ತಿಳಿದುಕೊಳ್ಳುತ್ತಿದ್ದರು. ಆಳವಾದ ಅಮೂಲ್ಯವಾದ ವಚನ ಸಾಹಿತ್ಯವನ್ನು ಅಭ್ಯೆಸಿಸಬೇಕು ತನ್ನಲ್ಲಿ …ಹುಟ್ಟುವ ಭಾವನೆಗಳನ್ನು ತಾಯಿ ಭಾಷೆಯಲ್ಲಿ ವ್ಯಕ್ತಪಡಿಸಬೇಕು ಅನ್ನುವ ತಳಮಳ ಅವರಲ್ಲಿ ಉಲ್ಬಣಗೊಳ್ಳಲಾರಂಭಿಸಿತು ….ಕನ್ನಡ ಪುಸ್ತಕಗಳನ್ನು ಹಿಡಿದು ಹಿಡಿದು ಅವುಗಳನ್ನು ನೋಡಿ ಮತ್ತೆ ಪುಸ್ತಕದ ಎಲೆಗಳನ್ನು ತಿರುವಿ ತಿರುವಿ ನೋಡಿ ಕೈ ಆಡಿಸಿ ಮತ್ತೆ ಇಡುತ್ತಿದ್ದರಂತೆ…. ಹೀಗೆ ತಾಯಿಯವರು ಮೂರು ಮಕ್ಕಳು ಆದನಂತರ ಕನ್ನಡ ಭಾಷೆಯನ್ನು ಕಲಿಯಲೇಬೇಕು ಅನ್ನುವ ಹಠ ಹುಟ್ಟಿಕೊಂಡಿತ್ತು.
ಹಠಕ್ಕೆ ಬಿದ್ದ ಮನುಷ್ಯನು ಏನೆಲ್ಲ ಸಾಧಿಸಬಹುದು ಅಲ್ಲವೇ …….!!!
ಪಣತೊಟ್ಟ ಜಯದೇವಿ ತಾಯಿಯವರು ಕನ್ನಡ ಭಾಷೆಯನ್ನು ಎಂಟು ದಿನಗಳಲ್ಲಿ ಹೇಗೆ ಕಲಿತರು ಮುಂದಿನ ವಾರ ನೋಡೋಣ ಬನ್ನಿ
ಸವಿತಾ ದೇಶಮುಖ




