ಕಾವ್ಯ ಸಂಗಾತಿ
ಡಾ ಸಾವಿತ್ರಿ ಕಮಲಾಪೂರ
“ಮಾರ್ಧನಿ”


ಅಂದು ಇದೇ ಹಾದಿಯಲ್ಲಿ
ಬೆಂದ ಕಾಲುಗಳು
ಬಸವಳಿದು ರೋಧಿಸಿದವು
ದಿಕ್ಕು ದಿಕ್ಕಿಗೂ ಕೂಗಿ ಕರೆದ ಧ್ವನಿ
ಮರಳಿ ಬಂದಿತು
ನನ್ನದೇ ಕನಸುಗಳ ಹಾದಿಗೆ
ಸಂತಸದ ದಿನಗಳನ್ನು ಮೆಲುಕು ಹಾಕುತ್ತಾ
ಅಂತರಾತ್ಮದ ಅರಿವಿನ ಪ್ರಜ್ಞೆಗೆ
ಮೂಕ ಸಾಕ್ಷಿಯಾಗಿ
ಕಂಗಳಲ್ಲಿ ತುಂಬಿದ ಕನಸುಗಳಿಗೆ
ಸೋತು ಹೋಗಿದ್ದೇನೆ
ದುಡಿದು ಸವೆಸಿದ ಹಾದಿಗೆ
ಹಸಿರುಕ್ರಾಂತಿಯ ಹರಿಕಾರ
ಬಾಬು ಜಗಜ್ಜೀವನರಾಮ್
ನೆಹರು ಭೋಸರ ಅಂತರಾತ್ಮದ
ಸ್ವಾತಂತ್ರ್ಯದ ಕಿಚ್ಚಿನ ರಕುತದ
ಕಲೆಗಳು ಮಾಯವಾಗಿಲ್ಲ
ಮಾಯದ ಜಿಂಕೆ ಬೆನ್ನತ್ತಿದ
ರಾವಣನ ಅರಿ ರಾಮನ
ರಾಮರಾಜ್ಯದ ಪರಿಕಲ್ಪನೆ
ಮಹಾತ್ಮಾ ಗಾಂಧೀಜಿಯ
ಕನಸು ನನಸಾಗಲೇ ಇಲ್ಲ

ಸುಡುವ ಕಾಲು ನೆಲದಲ್ಲಿ
ತಂಪು ತಂಗಾಳಿ ಸೂಸಿದ
ಚಳಿ ಮಳೆ ಗಾಳಿ ಬಿಸಿಲಿಗೆ
ಬೆವರು ಸುರಿಸಿದ ಕಂಗಳು
ಇನ್ನೂ ಸಂತಸ ಕಂಡಿಲ್ಲ
ಸಂತರು ಶರಣರು ದಾಸರು
ಇದೆ ಹಾದಿಯಲ್ಲಿ ನಡೆದು ಹೋದ
ಹೆಜ್ಜೆ ಗುರುತು ಪಾದಗಳ ಪೋಟೋ
ನಮ್ಮ ನಮ್ಮ ಜಗುಲಿಯ ಮೇಲೆ
ಹಾಗೇ ಕುಳಿತುಕೊಂಡು
ರಾರಾಜಿಸುತ್ತಿವೆ
ನಮ್ಮದೇ ಕಟ್ಟೆಯೊಳಗೆ ಬಂಧಿಸಿ ಪರದೆಯೊಳಗೆ ಮಡಿ ಮಾಡಿ ಶೋಷಣೆಯ ಸುಲಿಗೆಯೊಳಗೆ ಬಂದಿಖಾನೆ ಆಗಿದ್ದಾವೆ
ನಮ್ಮ ನಮ್ಮ ದೇವರುಗಳು
ನಾಡು ಸಮತೆಯ ಗೂಡು
ಹುಡುಕುತ್ತಿರುವೆ
ಅಲ್ಲಿ ಇಲ್ಲಿ ಬಸವಣ್ಣ ಬುದ್ಧ ಗಾಂಧಿಯ ಪೋಟೋಗಳ ಮೇಲೆ
ಕುಳಿತ ಧೂಳು ವರೆಸುತ್ತ
ಕಣ್ಣಗಲ ಮಾಡಿ ವರುಷಕ್ಕೊಮ್ಮೆ
ತಳಿರು ತೋರಣ ಕಟ್ಟಿ
ಸಿಂಗರಿಸಿ ಧ್ವಜವು ಹಾರಿಸಿ
ಜೈಕಾರ ಕೂಗುವ ನಮ್ಮೆದೆಯ
ಗಟ್ಟಿ ಕೂಗಿಗೆ ಎಚ್ಚರಗೊಳ್ಳಲಿಲ್ಲ
ನಾಡು ತೆಂಗು ಬಾಳೆ ಶ್ರೀಗಂಧದ ಬೀಡು
ಅನೇಕ ಗುಡಿ ಗೋಪುರ ದೊಳಗೆ
ಬಚ್ಚಿಕೊಂಡು ತಿರುಗುವ
ಅಲೆಮಾರಿಯಂತೆ
ನಮ್ಮ ನಮ್ಮ ಬದುಕು
ಎಲ್ಲಿಂದ ? ಬರಬೇಕು
ಸಮ ಸಮಾಜದ ಪರಿಕಲ್ಪನೆ
ಇದು ನಮ್ಮ ಭ್ರಮೆ ಎನ್ನಲೇ?
—————
ಡಾ ಸಾವಿತ್ರಿ ಕಮಲಾಪೂರ



