ಶರಣರ ಸಂಗಾತಿ
ಕಾಲಜ್ಞಾನಿ ಸಾಮರಸ್ಯದ ಶರಣ ಕೊಡೇಕಲ್ ಬಸವಣ್ಣನವರು
ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ


ಹನ್ನೆರಡನೆಯ ಶತಮಾನದಲ್ಲಿ ನಡೆದು ಹೋದ ಬಹು ದೊಡ್ಡ ಕಲ್ಯಾಣ ಕ್ರಾಂತಿ ವರ್ಗ ವರ್ಣ ಲಿಂಗ ಭೇದ ಆಶ್ರಮ ರಹಿತ ಸಾಂಸ್ಥಿಕರಣ ಸಮಾಜವನ್ನು ಕಟ್ಟುವಲ್ಲಿ ಶರಣರು ಯಶವನ್ನು ಕಂಡರು ಆದರೆ ಮುಂದೆ ಕಲ್ಯಾಣದಲ್ಲಿ ನಡೆದ ಶರಣರ ಹತ್ಯಾ ಕಾಂಡ ಲಿಂಗಾಯತ ಧರ್ಮಕ್ಕೆ ಒದಗಿದ ಬಹು ದೊಡ್ಡ ವಿಪತ್ತು. ಮೂರು ನೂರು ವರ್ಷಗಳವರೆಗೆ ವಚನಗಳು ಭೂಗರ್ಭದಲ್ಲಿ ಅಡಗಿ ಹೋಗಿದ್ದವು. ಸನಾತನಿಗಳ ಕೋಪ ಜಾತಿವಾದಿ ಸಂಪ್ರದಾಯಿಗಳ ದ್ವೇಷ ಮನೋಭಾವ ಲಿಂಗ ತತ್ವವನ್ನು ಪಸರಿದಂತೆ ವಾತಾವರಣ ನಿರ್ಮಾಣವಾಯಿತು.
ಇದೇ ಸಂದರ್ಭದಲ್ಲಿ ವಚನ ಸಾಹಿತ್ಯದ ಮರು ಹುಟ್ಟಿಗೆ ವಿಜಯನಗರ ಸಾಮ್ರಾಜ್ಯ ಹುಟ್ಟಿ ಕೊಂಡಿತು.
ಹಲವು ಅಗ್ನಿ ಪರೀಕ್ಷೆಯನ್ನು ಲಿಂಗಾಯತ ಧರ್ಮ ಎದುರಿಸ ಬೇಕಾಯಿತು.
ಭಾರತಕ್ಕೆ ಮೊಘಲರ ದಾಳಿ
ಮುಸ್ಲಿಂ ಧರ್ಮ ಪ್ರಸಾರ. ಹೆಚ್ಚುತ್ತಿರುವ ಕ್ರೈಸ್ತ ಮತ ಪ್ರಸಾರ ವೈದಿಕರ ಅಟ್ಟ ಹಾಸ
ಬೌದ್ಧ ಧರ್ಮ ಜೈನ ಧರ್ಮದ ಉಳಿವಿನ ಸಂಘರ್ಷ ಇವುಗಳ ಮಧ್ಯೆ ಲಿಂಗಾಯತ ಧರ್ಮದ ಅಳಿವು ಉಳಿವಿನ ಪೈಪೋಟಿ
ನಡೆದಿತ್ತು. ಇಂತಹ ಸಂದಿಗ್ಧ ಸಂದರ್ಭದಲ್ಲಿ ಇಡಿಯಾಗಿ ಲಿಂಗಾಯತ ಧರ್ಮದ ವಚನ ಚಳುವಳಿಯನ್ನು ಉಳಿಸಿ ಮರು ಸ್ಥಾಪನೆ ಮಾಡುವಲ್ಲಿ ಗಟ್ಟಿಯಾಗಿ ನಿಂತವರು ಈ ಕೊಡೇಕಲ್ ಬಸವಣ್ಣನವರು.
ಕೊಡೇಕಲ್ ಬಸವಣ್ಣನವರು 15ನೇ ಶತಮಾನದ ಸಂತರು ಮತ್ತು ‘ಕಾಲಜ್ಞಾನಿ’ ಎಂದು ಪ್ರಸಿದ್ಧರಾದವರು. ಅವರು ಮೂಲತಃ ಹಂಪಿಯವರಾಗಿದ್ದು, ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕೃಷ್ಣಾ ನದಿತೀರದ ಕೊಡೇಕಲ್ಲು ಗ್ರಾಮದಲ್ಲಿ ನೆಲೆಸಿದ್ದರು. ಅವರ ತತ್ವಪದಗಳು, ಭವಿಷ್ಯವಾಣಿಗಳು ಹಾಗೂ ‘ಅಮರಗನ್ನಡ’ ಲಿಪಿಯಲ್ಲಿ ಬರೆದ ಕಾಲಜ್ಞಾನಕ್ಕಾಗಿ ಅವರು ಪ್ರಸಿದ್ಧರಾಗಿದ್ದಾರೆ.
*ಕೊಡೇಕಲ್ ಬಸವಣ್ಣನವರ ಚರಿತ್ರೆ*
*ಹುಟ್ಟು ಮತ್ತು ಮೂಲ:*
ಇವರು 1489ರ ಸುಮಾರಿಗೆ ಜನಿಸಿದರು. ಅವರ ತಂದೆ-ತಾಯಿ ಮಲ್ಲಿಶೆಟ್ಟಿ ಮತ್ತು ಲಿಂಗಾಜೆಮ್ಮ.( ಲಿಂಗಾಯತ ಬಣಜಿಗ ದಂಪತಿಗಳು)
*ಆಧ್ಯಾತ್ಮಿಕ ಹಿನ್ನೆಲೆ:*
‘ಅದ್ವೈತ ಸಂಗಮೇಶ್ವರ’ ಎಂಬುವರಿಂದ ಆಧ್ಯಾತ್ಮಿಕವಾಗಿ ಪ್ರಭಾವಿತರಾದರು.
ಶರಣ ಸಾಹಿತ್ಯ ಜೊತೆಗೆ ಅನ್ಯ ಧರ್ಮಗಳನ್ನು ಅಧ್ಯಯನ ಮಾಡಿ ಸಂಸಾರ ಮೋಹ ಬಿಟ್ಟು, ಕಾವಿ ಬಟ್ಟೆ ತೊಟ್ಟು, ಕೈಯಲ್ಲಿ ಕೋಲು, ಕಾಲಲ್ಲಿ ಕಂಸ ಮತ್ತು ‘ಹಂಡಿ’ ಎಂಬ ಮಣ್ಣಿನ ಭಿಕ್ಷಾ ಪಾತ್ರೆಯೊಂದಿಗೆ ಅದ್ವೈತ ಸಾರಲು ಅವರು ಹೊರಟರು ಎಂದು ಹೇಳಲಾಗುತ್ತದೆ.
*ವೈವಾಹಿಕ ಜೀವನ:*
ಮೊದಲ ಪತ್ನಿ ಕಾಶಮ್ಮ ತೀರಿಕೊಂಡ ನಂತರ, ಬಳ್ಳಿಗಾವೆಯ ಪಂಪವೆಣ್ಣಿಯ ಮಗಳು ನೀಲಮ್ಮ (ಮಹಾದೇವಮ್ಮ) ಅವರನ್ನು ವಿವಾಹವಾದರು. ಅವರಿಗೆ ರಾಚಪ್ಪಯ್ಯ, ಸಂಗಪ್ಪಯ್ಯ ಎಂಬ ಇಬ್ಬರು ಮಕ್ಕಳಿದ್ದರು.
*ಸಾಹಿತ್ಯ ಕೃತಿಗಳು:*
ಅವರು ‘ಕಾಲಜ್ಞಾನ’ವನ್ನು ಹೇಳುವ ಮೂಲಕ ಪ್ರಸಿದ್ಧರಾದರು. ಸುಮಾರು ಒಂದು ಲಕ್ಷ ತೊಂಬತ್ತಾರು ಸಾವಿರ ವಚನಗಳನ್ನು ರಚಿಸಿದರು ಎಂದು ಹೇಳಲಾಗುತ್ತದೆ. ಅದರಲ್ಲಿ 8,000 ವಚನಗಳು ಮಠದಲ್ಲಿ ಲಭ್ಯವಿದೆ. ಅವರ ಕಾಲಜ್ಞಾನ ಸಾಹಿತ್ಯ ‘ಅಮರಗನ್ನಡ’ ಎಂಬ ಸಾಂಕೇತಿಕ ಲಿಪಿಯಲ್ಲಿ ಬರೆದಿದ್ದಾರೆ.
*ವಚನಗಳ ನುಡಿಗಳು:*
ಅವರು ಇಂದಿನ ಮತ್ತು ಮುಂದಿನ ಭವಿಷ್ಯವನ್ನು ಹೇಳುವ ವಚನಗಳನ್ನು ಬರೆದಿದ್ದಾರೆ. ಉದಾಹರಣೆಗೆ, ರಾಜಕೀಯದಲ್ಲಿ ಪಕ್ಷಾಂತರ, ಕುದುರೆ ವ್ಯಾಪಾರ ಮಾಡುವವರಿಗೆ ಅಧಿಕಾರದ ಯೋಗವಿಲ್ಲ ಎಂದು ಇತ್ತೀಚೆಗೆ ಪ್ರಕಟವಾದ ಭವಿಷ್ಯವಾಣಿಯಲ್ಲಿ ಹೇಳಿದ್ದಾರೆ.
*ಪ್ರಸ್ತುತತೆ:*
ಕೊಡೇಕಲ್ ಬಸವಣ್ಣನವರ ವಚನಗಳನ್ನು ಪ್ರತಿ ವರ್ಷ ಶಿವರಾತ್ರಿ ಹಬ್ಬದಂದು ನುಡಿಯಲಾಗುತ್ತಿದೆ. ಅವರ ಭವಿಷ್ಯವಾಣಿಗಳು ಇಂದಿನ ರಾಜಕೀಯ ಮತ್ತು ಸಾಮಾಜಿಕ ಪರಿಸ್ಥಿತಿಯ ಮೇಲೆ ಬೆಳಕು ಚೆಲ್ಲುತ್ತವೆ.
ಶರಣ ಸಾಹಿತ್ಯ ಮತ್ತು ಲಿಂಗತತ್ವ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುವಲ್ಲಿ ಕೊಡೇಕಲ್ ಬಸವಣ್ಣನವರ ಪಾತ್ರ ಬಹಳ ದೊಡ್ದದು.
ಲಿಂಗಾಯತ ಧರ್ಮದ ಉಳಿವಿಗೆ ಶ್ರಮಿಸಿದ ಶ್ರೇಷ್ಠ ಪರಿಪೂರ್ಣ ಶರಣರು ಕೊಡೇಕಲ್ ಬಸವಣ್ಣನವರು
_____________________

ಡಾ ಶಶಿಕಾಂತ ಪಟ್ಟಣ ರಾಮದುರ್ಗ




ಅರ್ಥಪೂರ್ಣ ಲೇಖನ ಸರ್
Excellent article
ತುಂಬ ಒಳ್ಳೆಯ ಲೇಖನ ಸರ್
ಸುಂದರ ಮತ್ತು ಅರ್ಥಪೂರ್ಣ ಲೇಖನ ಸರ್
ಸುಮಾ ಕಲಬುರ್ಗಿ