ಕಾವ್ಯ ಸಂಗಾತಿ
ಹೇಮಂತ್ ಗೌಡ ಪಾಟೀಲ್
“ಬಾಲ್ಯ ವಿವಾಹ ನಿಷೇಧದ ಕಾನೂನು
ಮತ್ತು ರುಕ್ಮಾಬಾಯಿ ಎಂಬ ದಿಟ್ಟ ಮಹಿಳೆ”

ಕಾಲ್ಪನಿಕ ಚಿತ್ರ(ಗೂಗಲ್ ಕೃಪೆ)
ಅದು 1887ರ ಸಮಯ. ಮುಂಬೈಯ ಹೈಕೋರ್ಟ್ ಆ ಮಹಿಳೆಗೆ ಎರಡು ಆಯ್ಕೆಗಳನ್ನು ನೀಡಿತು. ಬಾಲ್ಯದಲ್ಲಿ ನಿನ್ನನ್ನು ವಿವಾಹವಾದ ವ್ಯಕ್ತಿಯೊಂದಿಗೆ ಹೋಗಿ ಬದುಕನ್ನು ಕಟ್ಟಿಕೋ, ಇಲ್ಲವೇ ಜೈಲಿಗೆ ಹೋಗು ಎಂದು. ಆಕೆ ಜೈಲಿಗೆ ಹೋಗಲು ತಯಾರಾದಳು.
ಆಕೆಯ ಉತ್ತರ ಎಲ್ಲರಿಗೂ ದಿಗ್ಬ್ರಾಂತಿಯನ್ನು ಉಂಟು ಮಾಡಿತು. ಕೇವಲ ಭಾರತ ದೇಶವನ್ನು ಮಾತ್ರವಲ್ಲದೆ ಅಂದಿನ ಭಾರತ ದೇಶವನ್ನು ಆಳುತ್ತಿದ್ದ ಇಂಗ್ಲೆಂಡ್ ದೇಶದವರೆಗೆ ಈ ವಿಷಯದ ಕುರಿತ ಚರ್ಚೆ ಮುಂದುವರೆದು ಕಾನೂನಿನ ಕ್ರಮದಲ್ಲಿ ಬದಲಾವಣೆಯನ್ನು ಕೈಗೊಂಡು ನಂತರದ ಕೋಟ್ಯಾಂತರ ಹೆಣ್ಣುಮಕ್ಕಳ ಪಾಲಿಗೆ ವರದಾನವಾಯಿತು. ಕೇವಲ ಒಬ್ಬ ಹೆಣ್ಣುಮಗಳ ದಿಟ್ಟ ನಿರ್ಧಾರ ಒಂದು ಇಡೀ ಬ್ರಿಟೀಷ್ ಸಾಮ್ರಾಜ್ಯವನ್ನು ಮೊಳಕಾಲೂರಿ ನಿಲ್ಲುವಂತೆ ಮಾಡಿತು. ಆ ಹೆಣ್ಣು ಮಗಳೇ ರುಕ್ಮಾಬಾಯಿ.
1864 ರಲ್ಲಿ ಮುಂಬೈಯಲ್ಲಿ ಜಯಂತಿ ಬಾಯಿ ಎಂಬ ಹೆಣ್ಣು ಮಗಳನ್ನು ಕೇವಲ 14 ವರ್ಷ ವಯಸ್ಸಿನಲ್ಲಿಯೇ ಮದುವೆ ಮಾಡಿಕೊಡಲಾಯಿತು. ತನ್ನ 15ನೇ ವಯಸ್ಸಿಗೆ ಆಕೆ ಹೆಣ್ಣು ಮಗುವೊಂದನ್ನು ಹಡೆದಳು ಹಾಗೂ 17ನೇ ವಯಸ್ಸಿಗೆ ಗಂಡನನ್ನು ಕಳೆದುಕೊಂಡು ವಿಧವೆಯಾದಳು. ಮುಂದೆ ತನ್ನ ಮಗಳು ಎಂಟು ವರ್ಷದವಳಿದ್ದಾಗ ಆಕೆಯ ತಾಯಿ ಡಾ. ಸಖಾರಾಮ್ ಅರ್ಜುನ್ ಎಂಬ ವೃತ್ತಿಯಿಂದ ತಜ್ಞ ವೈದ್ಯ ಹಾಗೂ ಪ್ರವೃತ್ತಿಯಿಂದ ಸಮಾಜ ಸುಧಾರಕರಾಗಿದ್ದ ವ್ಯಕ್ತಿಯನ್ನು ವಿವಾಹವಾದಳು. ತನ್ನ ಕಾಲದ ಪುರುಷ ಸಮಾಜದ ಯೋಚನೆಗಳಿಗಿಂತ ವಿಭಿನ್ನವಾಗಿ ಯೋಚಿಸುತ್ತಿದ್ದ ಡಾ. ಸಖಾರಾಮ್ ಹೆಣ್ಣು ಮಕ್ಕಳು ಸುಶಿಕ್ಷಿತರಾಗಬೇಕು ಎಂದು ಬಯಸುತ್ತಿದ್ದರು. ತನ್ನ ಮನೆಯ ತುಂಬಾ ಪುಸ್ತಕಗಳನ್ನು ಜೋಡಿಸಿದ್ದ ಆತ ರುಕ್ಮ ಬಾಯಿಗೆ ಓದಿನಲ್ಲಿ ಆಸಕ್ತಿಯನ್ನು ವಹಿಸಲು ಪ್ರೋತ್ಸಾಹಿಸಿದ.ಸಮಾಜ ಸುಧಾರಕನಾದರೂ ಕೂಡ ಆತನಿಗೂ ಕೂಡ ತನ್ನದೇ ಆದ ಕೆಲವು ಸಾಮಾಜಿಕ ಮಿತಿಗಳು ಇದ್ದವು.
ಅಂತೆಯೇ ರುಕುಮಾ ಬಾಯಿ 11 ವರ್ಷದವಳಾದಾಗ ಆಕೆಗೆ 19ರ ಹರಯದ ದಾದಾ ಜೀ ಭಿಕಾಜಿ ಎಂಬ ವ್ಯಕ್ತಿಯೊಡನೆ ಜಯಂತಿ ಬಾಯಿಯ ತಂದೆ ಸನಾತನ ಕಾಲದಿಂದಲೂ ಆಚರಿಸುತ್ತಿದ್ದ ರೀತಿಯಲ್ಲಿ ಎಲ್ಲ ಭಾರತೀಯ ಸಂಪ್ರದಾಯಗಳನ್ನು ಪಾಲಿಸಿ ಮದುವೆ ಮಾಡಿದರು.
ಪುಟ್ಟ ಬಾಲಕಿಯಾದ ಆಕೆಗೆ ಯಾವುದೇ ರೀತಿಯ ಆಯ್ಕೆಗಳಾಗಲಿ, ಮದುವೆ ಮಾಡಿಕೊಳ್ಳಲು ಒಲ್ಲೆ ಎಂದು ಹೇಳುವ ಧೈರ್ಯವಾಗಲಿ ಇರಲಿಲ್ಲ. ಮೌನ ಒಪ್ಪಿಗೆ ಆಕೆಯದಾಗಿತ್ತು.ಅಂದಿನ ಸಮಾಜದ ನಿಯಮಾವಳಿಗಳ ಪ್ರಸಾರ ಮದುವೆ ಆದ ನಂತರವೂ ಕೂಡ ಋತುಮತಿಯಾಗುವವರೆಗೆ ತನ್ನ ತವರು ಮನೆಯಲ್ಲಿಯೇ ಉಳಿಯಬೇಕಾದ ಕಾರಣ ಆಕೆ ತನ್ನ ಶಿಕ್ಷಣವನ್ನು ರಹಸ್ಯವಾಗಿಯೇ ಮುಂದುವರಿಸಿದಳು
ಆಕೆಯನ್ನು ಮದುವೆಯಾದ ವ್ಯಕ್ತಿ ಅಂದಿನ ಸಾಮಾಜಿಕ ನೀತಿ ನಿಯಮಾವಳಿಗೆ ಬದ್ಧನಾಗಿದ್ದ. ತನ್ನ ಶಿಕ್ಷಣವನ್ನು ಪೂರೈಸಿದ ರುಕ್ಮಭಾಯಿ ಅತ್ಯಂತ ಜಾಣ ಹಾಗೂ ಸಂಸ್ಕಾರವಂತ ಹೆಣ್ಣುಮಗಳಾಗಿ ಪರಿವರ್ತಿತಳಾಗಿದ್ದರು. ಆಕೆಯಲ್ಲಿ ಆಧುನಿಕ ವಿಚಾರಧಾರೆಗಳ ಪ್ರಭಾವದಿಂದ ತನ್ನದೇ ಆದ ವೈಯುಕ್ತಿಕ ಅಭಿಪ್ರಾಯಗಳು ಹರಳುಗಟ್ಟಿದ್ದವು. ಅಂದಿನ ಕಾಲದ ಇತರ ಸಮಾಜ ಸುಧಾರಕರೊಂದಿಗಿನ ಭೇಟಿ, ಅಭಿಪ್ರಾಯ, ವಿಚಾರ ವಿನಿಮಯಗಳು, ಚರ್ಚೆಗಳು, ಭಾಷಣಗಳು, ಉಪನ್ಯಾಸಗಳು ಆಕೆಯ ಮೇಲೆ ಪರಿಣಾಮವನ್ನು ಬೀರಿದ್ದವು.
ಆಕೆಯ ಪತಿ ದಾದಾಜಿ ತನ್ನ ಸೋಮಾರಿತನದ ಕಾರಣದಿಂದ ಶಾಲೆಯಿಂದ ಹೊರ ಹಾಕಲ್ಪಟ್ಟಿದ್ದ ಹಾಗೂ ಸಾಲದ ಸುಳಿಯಲ್ಲಿ ಸಿಲುಕಿದ್ದ. ದುಶ್ಚಟಗಳಿಗೆ ದಾಸನಾದ ಆತನ ಚಿಕ್ಕಪ್ಪನ ಕುಮ್ಮಕ್ಕು ಕೂಡ ಆತನಿಗಿತ್ತು.ತನ್ನೆಲ್ಲ ಆರ್ಥಿಕ ತೊಂದರೆಗಳನ್ನು ನಿವಾರಿಸಲು ತನ್ನ ಪತ್ನಿಯ ತವರು ಮನೆ ಆತನ ಪಾಲಿಗೆ ಅಲ್ಲಾವುದ್ದೀನನ ದೀಪವಾಗಲಿ ಎಂಬುದು ಆತನ ಬಯಕೆಯಾಗಿತ್ತು.
1884 ರಲ್ಲಿ 20 ವರ್ಷದ ರುಕುಮಾಬಾಯಿಯನ್ನು ಆತ ತನ್ನೊಂದಿಗೆ ಬಂದು ವಾಸಿಸಲು ಕೇಳಿಕೊಂಡ… ಆದರೆ ಆತನ ಕೆಟ್ಟ ಚಟಗಳ ಕುರಿತು ಅರಿವಿದ್ದ ಆಕೆ ಆತನ ಕೋರಿಕೆಯನ್ನು ಸಾರಾಸಗಟಾಗಿ ನಿರಾಕರಿಸಿದಳು.ಆಕೆಯನ್ನು ಪತ್ನಿಯಾಗಿ ಮನೆ ತುಂಬಿಸಿಕೊಂಡು ತನ್ನೆಲ್ಲ ಸಮಸ್ಯೆಗಳಿಗೆ ಉತ್ತರ ಕಂಡುಕೊಳ್ಳಬೇಕು ಎಂದು ಆಶಿಸಿದ್ದ ದಾದಾಜಿ ಶತಾಯಗತಾಯ ಆಕೆಯನ್ನು ಹೊಂದಲೇಬೇಕೆಂಬ ಹಟದಿಂದ ನ್ಯಾಯಾಲಯದ ಮೊರೆ ಹೊಕ್ಕ.
19ನೇ ಶತಮಾನದಲ್ಲಿ ಸಾರ್ವಜನಿಕವಾಗಿ ಅತ್ಯಂತ ಚರ್ಚೆಗೆ ಒಳಗಾದ ಕಾನೂನು ಹೋರಾಟ ದಾದಾಜಿ ಮತ್ತು ರುಕ್ಮಬಾಯಿ ಅವರದಾಗಿತ್ತು. ದಾದಾ ಜೀ ದಾಂಪತ್ಯದ ಹಕ್ಕುಗಳ ಮರುಸ್ಥಾಪನೆಯ ಪ್ರಾಸ್ಟಿಟ್ಯೂಷನ್ ಆಫ್ ಕಾಂಜುಗಲ್ ರೈಟ್ಸ್ ದಾವೆಯನ್ನು ಪತ್ನಿಯ ಮೇಲೆ ಹೂಡಿದ್ದ. ಈ ಹಕ್ಕಿನ ಪ್ರಕಾರ ಪತ್ನಿ ಆತನ ಸೊತ್ತಾಗಿದ್ದು ಕಾನೂನು ಆಕೆ ತನ್ನ ಪತಿಯ ಜೊತೆಯಲ್ಲಿ ಬಾಳುವೆ ಮಾಡಬೇಕು ಎಂದು ಸೂಚಿಸಿತು.
ಇದಕ್ಕೆ ರುಕ್ಮಾ ಬಾಯಿಯ ಉತ್ತರ ಹೀಗಿತ್ತು… ಅರಿಯದ ಅಬೋಧ ವಯಸ್ಸಿನಲ್ಲಿ ತನಗೆ ಮದುವೆ ಮಾಡಿಕೊಡಲಾಗಿದ್ದು ತಾನು ಅಸಹಾಯಕಳಾಗಿದ್ದೆ. ಮದುವೆ ಎಂದರೆ ಏನು ಎಂಬುದೇ ತನಗೆ ಗೊತ್ತಿರಲಿಲ್ಲ. ಅದೂ ಅಲ್ಲದೆ ಹೆಣ್ಣುಮಕ್ಕಳನ್ನು ಹೊಲ ಮನೆ,ದನ ಕರು ಒಡವೆಗಳ ರೀತಿಯಲ್ಲಿ ಆಸ್ತಿಯಂತೆ ಭಾವಿಸಬಾರದು ಎಂದು ಆಕೆ ವಾದ ಹೂಡಿದಳು. ಹೆಣ್ಣು ಮಕ್ಕಳು ಪುರುಷರಷ್ಟೇ ಸರಿ ಸಮಾನವಾಗಿ ಬದುಕುವ ಕಣ್ಣು ಹೊಂದಿದ್ದಾರೆ ಅವರನ್ನು ತಮ್ಮ ಹಕ್ಕಿನ ಸೊತ್ತಾಗಿ ಬೇರೆಯವರು ಭಾವಿಸಬಾರದು ಎಂದು ಆಕೆ ನ್ಯಾಯಾಲಯವನ್ನು ಒತ್ತಾಯಿಸಿದಳು.
ಇದಕ್ಕೂ ಮುನ್ನ ಈ ರೀತಿ ಹೆಣ್ಣು ಮಕ್ಕಳ ಹಕ್ಕಿನ ಕುರಿತಾಗಿ ನ್ಯಾಯಾಲಯದ ಮುಂದೆ ಯಾರೂ ಹಕ್ಕೊತ್ತಾಯವನ್ನು ಮಂಡಿಸಿರಲಿಲ್ಲ.
1885ರಲ್ಲಿ ಜಸ್ಟಿಸ್ ರಾಬರ್ಟ್ ಪಿನ್ಹೇ ಆಕೆಯ ಅಭಿಪ್ರಾಯಕ್ಕೆ ಮನ್ನಣೆ ನೀಡಿ ತಾವು ಪಾಲಿಸುತ್ತಿರುವ ಬ್ರಿಟಿಷ್ ಕಾನೂನು ಬಾಲ್ಯ ವಿವಾಹ ಮಾಡಲ್ಪಟ್ಟ ಅಬೋಧ ರುಕ್ಮಭಾಯಿಗೆ ಸಂಬಂಧ ಪಡುವುದಿಲ್ಲ ಎಂದು ತೀರ್ಪು ನೀಡಿತು.
ಸಂಪ್ರದಾಯವಾದಿ ಭಾರತೀಯರು ಸಿಡಿದೆದ್ದರು. ಹಿಂದೂ ರೀತಿ ರಿವಾಜುಗಳನ್ನು ಪ್ರಶ್ನಿಸುವ ನ್ಯಾಯಾಲಯದ ವಿರುದ್ಧ ಸನಾತನವಾದಿಗಳು ದನಿಯೆತ್ತಿದರು.ಉಕ್ಕಿನ ಮನುಷ್ಯ ಎಂದೇ ಭಾರತೀಯ ಸ್ವತಂತ್ರ ಇತಿಹಾಸದಲ್ಲಿ ಹೆಸರಾದ ಬಾಡೋಲಿಯ ಸರದಾರ ಬಾಲಗಂಗಾಧರನಾಥ ತಿಲಕ್ ಅವರು ರುಕ್ಮಾಭಾಯಿಯ ಆಂಗ್ಲ ಶಿಕ್ಷಣದ ಪರಿಣಾಮವೇ ಆಕೆಯ ಈ ತೀರ್ಮಾನಕ್ಕೆ ಕಾರಣ ಎಂದು ಹೇಳಿದರು
ಭಾರತದ ಹಿಂದುತ್ವ ಅಪಾಯದಲ್ಲಿದೆ ಎಂದು ಸಾರ್ವಜನಿಕರು ಕೂಗು ಹಾಕಿದರು . 1886 ರಲ್ಲಿ ಮತ್ತೆ ಮರುಪರಿಶೀಲನೆಗೆ ಒಳಪಟ್ಟ ತೀರ್ಪನ್ನು ಹೆಚ್ಚುವರಿ ನ್ಯಾಯಾಲಯದ ಅಂದಿನ ಜಡ್ಜ್ ಆಗಿದ್ದ ಜಸ್ಟಿಸ್ ಫರಾನ್ ಅವರು ರುಕ್ಮಬಾಯಿ ಮರಳಿ ತನ್ನ ಪತಿಯ ಮನೆಗೆ ಹೋಗಬೇಕು ಇಲ್ಲವೇ ಆರು ತಿಂಗಳ ಕಾಲ ಕಾರಾಗ್ರಹ ವಾಸವನ್ನು ಅನುಭವಿಸುವ ನಿಟ್ಟಿನಲ್ಲಿ ಜೈಲಿಗೆ ಹೋಗಬೇಕು ಎಂದು ಆದೇಶವನ್ನು ಹೊರಡಿಸಿದರು.
ಇದೀಗ ರುಕ್ಮಭಾಯಿತಾನು ಜೈಲಿಗೆ ಹೋದರೂ ಪರವಾಗಿಲ್ಲ, ಆದರೆ ತನ್ನ ಒಪ್ಪಿಗೆ ಇಲ್ಲದೆ ಮಾಡಿದ ವಿವಾಹವನ್ನು ಹಾಗೂ ವಲ್ಲದ ಗಂಡನೊಂದಿಗಿನ ಬದುಕನ್ನು ನಡೆಸಲಾರೆ ಎಂಬ ಹೇಳಿಕೆ ನೀಡಿದ್ದು ಐತಿಹಾಸಿಕ ಸಮರ್ಥನೆಯಾಯಿತು. ಆಕೆಯ ಮಾತುಗಳು, ಕೇಸಿನ ವಿವರಗಳು ಸಮುದ್ರಗಳನ್ನು ದಾಟಿ ಬ್ರಿಟಿಷ್ ವರ್ತಮಾನ ಪತ್ರಿಕೆಗಳಲ್ಲಿ ಪ್ರಕಟವಾದವು. ಇಂಗ್ಲೆಂಡಿನ ಪ್ರಸಿದ್ಧ ಮಹಿಳಾ ನಿಯತಕಾಲಿಕವೊಂದು ರುಕ್ಮಾಬಾಯಿಯ ನಿಲುವನ್ನು ಸಮರ್ಥಿಸಿತು, ಮಾತ್ರವಲ್ಲದೇ ಪ್ರಸಿದ್ಧ ತತ್ವಜ್ಞಾನಿಯಾಗಿದ್ದ ಮ್ಯಾಕ್ಸ್ ಮುಲ್ಲರ್ ರುಕ್ಮಾಭಾಯಿಯ ಆಂಗ್ಲ ಶಿಕ್ಷಣವು ಆಕೆಗೆ ತನ್ನ ಆಯ್ಕೆಗಳ ಕುರಿತು ಸ್ಪಷ್ಟ ನಿಲುವನ್ನು ಹೊಂದಲು ಮತ್ತು ನಿರ್ಣಯಗಳನ್ನು ಕೈಗೊಳ್ಳಲು ಅತ್ಯುತ್ತಮ ನ್ಯಾಯಾಧೀಶನಂತೆ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿಕೆ ನೀಡಿದರು.
ಇದೇ ಸಮಯದಲ್ಲಿ ರುಕ್ಮಾ ಬಾಯಿ ಅನಾಮಿಕವಾಗಿ
ದಿ ಹಿಂದೂ ಲೇಡಿ ಎಂಬ ಹೆಸರಿನಲ್ಲಿ ಟೈಮ್ಸ್ ಆಫ್ ಇಂಡಿಯಾ ನಿಯತಕಾಲಿಕಕ್ಕೆ ಬಾಲ್ಯ ವಿವಾಹವನ್ನು ವಿರೋಧಿಸುವ ನಿಟ್ಟಿನಲ್ಲಿ ಲೇಖನಗಳನ್ನು ಬರೆಯಲು ಆರಂಭಿಸಿದ್ದಳು. ತನ್ನ 14ನೇ ಹುಟ್ಟುಹಬ್ಬಕ್ಕೆ ಮುನ್ನವೇ ಮಕ್ಕಳನ್ನು ಪಡೆಯಲು ಹೆಣ್ಣು ಮಕ್ಕಳನ್ನು ಒತ್ತಾಯಿಸುವ ಸಂಪ್ರದಾಯವನ್ನು ವಿರೋಧಿಸಿ ಆಕೆ ಬರೆದಳು. ಕನಸುಗಳ ಸಾವಿನ ಕುರಿತು ಹೆಣ್ಣು ಮಕ್ಕಳ ಅಂತಃಸತ್ವವನ್ನು ಹೀರಿ ಎಸೆಯುವ, ಅವರ ಬಾಲ್ಯವನ್ನು ಕಸಿಯುವ ಕುರಿತು ಆಕೆ ಬರೆದ ಲೇಖನಗಳು ಬುದ್ಧಿವಂತರ, ವಿಚಾರ ಜೀವಿಗಳ ಮನಸ್ಸನ್ನು ತಾಕಿದವು.
ಬಾಲ್ಯವಿವಾಹದಂತಹ ಕೆಟ್ಟ ಸಂಪ್ರದಾಯವು ನನ್ನ ಜೀವನದ ಎಲ್ಲಾ ಸಂತೋಷಗಳನ್ನು ಕಸಿದುಕೊಂಡಿತ್ತು ಎಂದು ಆಕೆ ಬರೆದಳು. ನನ್ನ ಬದುಕಿನಲ್ಲಿ ವಿವಾಹವು ನನ್ನ ವಿದ್ಯೆ ಮತ್ತು ಮಾನಸಿಕ ಬೆಳವಣಿಗೆಗೆ ಅಡ್ಡ ಬಂದಿತು ಎಂದು ಹೇಳಿದ ಆಕೆ ಅಂದು ಬ್ರಿಟನ್ ಸಾಮ್ರಾಜ್ಯವನ್ನು ಆಳುತ್ತಿದ್ದ ರಾಣಿ ವಿಕ್ಟೋರಿಯಾಗೆ ಪತ್ರ ಬರೆದು ತನಗೆ ನ್ಯಾಯ ದೊರಕಿಸಿಕೊಡಲು ಕೇಳಿಕೊಂಡಳು. ಹಿಂದೂ ಕಾನೂನಿನಲ್ಲಿ ವೈವಾಹಿಕ ವಯಸ್ಸನ್ನು ಹೆಣ್ಣು ಮಕ್ಕಳಿಗೆ 15 ವರ್ಷ ಮೇಲ್ಪಟ್ಟು ಹಾಗೂ ಗಂಡು ಮಕ್ಕಳಿಗೆ 20 ವರ್ಷ ಮೇಲ್ಪಟ್ಟ ವಯಸ್ಕರಿಗೆ ಮಾಡುವ ಮೂಲಕ ಬಾಲ್ಯ ವಿವಾಹವನ್ನು ನಿಷೇಧಿಸಲು ಕೋರಿಕೊಂಡಳು.ಬಾಲ್ಯ ವಿವಾಹವನ್ನು ನಿಷೇಧಿಸುವ ಮೂಲಕ ಹಿಂದೂ ಯುವತಿಯರಿಗೆ ಮಹದುಪಕಾರ ಮಾಡಿ ಎಂದು ಕೇಳಿಕೊಂಡಳು.
1888 ರಲ್ಲಿ ಅಂತಿಮವಾಗಿ ಒಂದು ಒಪ್ಪಂದಕ್ಕೆ ಬರಲಾಯಿತು.2 ಸಾವಿರ ರೂ ಹಣವನ್ನು ದಾದಾಜಿಗೆ ನೀಡುವ ಮೂಲಕ ಮದುವೆಯನ್ನು ರದ್ದುಗೊಳಿಸುವ ಹಾಗೂ ರುಕ್ಮಾಭಾಯಿಯ ಮೇಲೆ ಹೊರಿಸಿರುವ ಎಲ್ಲ ಮೊಕದ್ದಮೆಗಳನ್ನು ಹಿಂತೆಗೆದುಕೊಳ್ಳುವ ಒಪ್ಪಂದವಾಗಿತ್ತದು. ಅಂತಿಮವಾಗಿ ಆಕೆ ಪಂಜರದಿಂದ ಹೊರ ಬಿಟ್ಟ ಪಕ್ಷಿಯಾದಳು.ಇಲ್ಲಿಗೆ ಆಕೆಯ ಕಥೆ ಮುಗಿಯಲಿಲ್ಲ.
ಇಂಗ್ಲೆಂಡಿನ ಡಾಕ್ಟರ್ ಎಡಿತ್ ಪೆಚ್ಚಿ ಎಂಬ ತಜ್ಞ ವೈದ್ಯರ ಸಹಾಯ ಮತ್ತು ಸಹಕಾರದಿಂದ 1894 ರಲ್ಲಿ ಆಕೆ ವೈದ್ಯಕೀಯ ಪದವಿ ಪಡೆಯಲು ಇಂಗ್ಲೆಂಡಿಗೆ ತೆರಳಿದಳು. ಮಹಿಳೆಯರಿಗಾಗಿಯೇ ಇದ್ದ ಲಂಡನ್ ಸ್ಕೂಲ್ ಆಫ್ ಮೆಡಿಸಿನ್ ನಲ್ಲಿ ಆಕೆ ಓದಿ ವೈದ್ಯಕೀಯ ಪದವಿಯನ್ನು ಪಡೆದಳು. ಮುಂದೆ ಮರಳಿ ಭಾರತಕ್ಕೆ ಬಂದ ಆಕೆ ವೈದ್ಯಕೀಯ ಚಿಕಿತ್ಸಕಳಾಗಿ ಕರ್ತವ್ಯ ನಿರ್ವಹಿಸುವ ಮಹಿಳಾ ವೈದ್ಯೆ ಎಂದು ರಾಷ್ಟ್ರದ ಇತಿಹಾಸದಲ್ಲಿ ದಾಖಲಾದಳು.
ಮುಂದಿನ 35 ವರ್ಷಗಳ ಕಾಲ ರುಕ್ಮಭಾಯಿ ಸೂರತ್ ಮತ್ತು ರಾಜಕೋಟ್ಗಳಲ್ಲಿ ಮುಖ್ಯ ವೈದ್ಯಕೀಯ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ಎಲ್ಲ ಜಾತಿ, ವರ್ಗಗಳ ಜನರ ಚಿಕಿತ್ಸೆಯನ್ನು ಕೈಗೊಂಡ ಆಕೆ ಸಾಕಷ್ಟು ಹೆಣ್ಣು ಮಕ್ಕಳಿಗೆ ನರ್ಸಿಂಗ್ ಕ್ಷೇತ್ರದಲ್ಲಿ ತರಬೇತಿ ನೀಡಿದಳು. ಮತ್ತೆ ನೂರಾರು ಹೆಣ್ಣು ಮಕ್ಕಳಿಗೆ ಶುಶ್ರೂಷೆ ಮತ್ತು ಸ್ವಚ್ಛತೆಯ ಕುರಿತು ತರಬೇತಿ ನೀಡಿ ಅವರನ್ನು ಆಯಕಟ್ಟಿನ ಸ್ಥಳಗಳಲ್ಲಿ ಕಾರ್ಯನಿರ್ವಹಿಸಲು ಪ್ರೋತ್ಸಾಹಿಸಿದರು. ಮಾರಣಾಂತಿಕ ಕಾಯಿಲೆಗಳು ದೇಶದಲ್ಲಿ ತಾಂಡವವಾಡುತ್ತಿದ್ದಾಗಲೂ ಆಕೆ ಸಾವಿಗೆ ಅಂಜದೆ, ರೋಗಕ್ಕೆ ಹಿಂಜರಿದು ಧೈರ್ಯಗೆಡದೆ ತಾನೇ ಮುಂಚೂಣಿಯಲ್ಲಿ ನಿಂತು ರೋಗಿಗಳನ್ನು ತಪಾಸಿಸಿ ಸೂಕ್ತ ಚಿಕಿತ್ಸೆ ನೀಡಿ ಗುಣಮುಖರನ್ನಾಗಿಸಿದಳು.
ಹೋರಾಟ ಆಕೆಯ ಬದುಕಿನ ಅವಿಭಾಜ್ಯ ಅಂಗವಾಗಿದ್ದು ತನ್ನ ವೃತ್ತಿ ಜೀವನದಿಂದ ನಿವೃತ್ತಿಯಾದ ನಂತರವೂ ಕೂಡ ಆಕೆ ಪರ್ದಾ ಪದ್ಧತಿಯನ್ನು ವಿರೋಧಿಸಿ ಹೆಣ್ಣು ಮಕ್ಕಳಲ್ಲಿ ಜಾಗೃತಿಯನ್ನು ಮೂಡಿಸಿದರು. ಭಾರತೀಯ ಸಭ್ಯತೆಯ ಹೆಸರಿನಲ್ಲಿ ಹೆಣ್ಣು ಮಕ್ಕಳನ್ನು ಬಲವಂತದಿಂದ ಮನೆಯಲ್ಲಿ ಕೂಡಿ ಹಾಕುವುದನ್ನು ವಿರೋಧಿಸಿ ಆಕೆ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗುವಂತಹ ಶಾಲೆಯನ್ನು ತೆರೆಯಲು ತನ್ನ ಮನೆಯನ್ನೇ ಬಿಟ್ಟುಕೊಟ್ಟಳು.
ಅಂದು ತನ್ನ ಇಪ್ಪತ್ತನೇ ವಯಸ್ಸಿನಲ್ಲಿ ರುಕ್ಮಬಾಯಿ ತೆಗೆದುಕೊಂಡ ಒಂದು ದಿಟ್ಟ ನಿರ್ಧಾರದ ಪರಿಣಾಮವಾಗಿ ತಲೆ ತಲೆಮಾರುಗಳ ಹೆಣ್ಣು ಮಕ್ಕಳು ನೆಮ್ಮದಿಯ ಬಾಲ್ಯವನ್ನು ಕಳೆಯಲು ಸಾಧ್ಯವಾಗಿದೆ.
1888 ರ ರುಕುಮಾಬಾಯಿ ಮೊಕದ್ದಮೆಯ ಐತಿಹಾಸಿಕ ತೀರ್ಪಿನ ಮೂರು ವರ್ಷಗಳ ನಂತರ 1891ರಲ್ಲಿ ಬ್ರಿಟಿಷ್ ಸರ್ಕಾರವು ‘ ದ ಏಜ್ ಆಫ್ ಕನ್ಸೆಂಟ್ ಆಕ್ಟ್’ ಅನ್ನು ಜಾರಿ ಮಾಡಿತು. ನಿರ್ದಿಷ್ಟ ವಿಷಯಗಳ ಕುರಿತು ತೀರ್ಮಾನವನ್ನು ಕೈಗೊಳ್ಳುವ ಹಕ್ಕನ್ನು ನೀಡಲಾಯಿತು. ವೈವಾಹಿಕ ವಯಸ್ಸಿನ ಮಿತಿಯನ್ನು ಹೆಚ್ಚಿಸಲಾಯಿತು.
ರುಕ್ಮಾಭಾಯಿಯ ಮೊಕದ್ದಮೆಯು ಮೊಟ್ಟಮೊದಲ ಬಾಲ್ಯ ವಿವಾಹ ವಿರುದ್ಧದ ಪ್ರಕರಣ ಎಂದು ದಾಖಲಾಯಿತು, ಆದರೆ ಅದುವೇ ಕೊನೆಯ ಪ್ರಕರಣವಾಗಬೇಕಿತ್ತು… ದುರ್ದೈವವಶಾತ್ ಇಂದಿಗೂ ಕೂಡ ಬಾಲ್ಯ ವಿವಾಹ ತೆರೆ ಮರೆಯಲ್ಲಿ ನಡೆಯುತ್ತಲೇ ಇವೆ ಹಾಗೂ ಅದರ ಪರಿಣಾಮವಾಗಿ ಹೆಣ್ಣು ಮಕ್ಕಳು ಅಪ್ರಾಪ್ತ ವಯಸ್ಸಿನಲ್ಲಿ ಅನಿರೀಕ್ಷಿತ ಗರ್ಭ ಧರಿಸುವಿಕೆ, ಹೆರಿಗೆಯಲ್ಲಿ ಸಾವು, ತಾನೇ ಒಂದು ಮಗುವಾಗಿ ತನ್ನಲ್ಲಿ ಆ ಸಾಮರ್ಥ್ಯ ಇಲ್ಲದೆ ಇದ್ದಾಗಲೂ ಕೂಡ ತನ್ನದೇ ಮಗುವನ್ನು ಹೆರುವ, ಹೊರುವ ಜವಾಬ್ದಾರಿಯನ್ನು ನಿರ್ವಹಿಸುತ್ತಲೇ ಬಂದಿದ್ದಾರೆ. ಮತ್ತೆ ಕೆಲವರು ಸೋತು ಸತ್ತು ಹೋಗಿದ್ದಾರೆ. ಬದುಕಿದವರು ಸಾವನ್ನು ಗೆದ್ದರೂ ಕೂಡ ನಿರಂತರ ದೈಹಿಕ ತೊಂದರೆಗಳನ್ನು ಎದುರಿಸುತ್ತಿದ್ದಾರೆ.
ಸಪ್ಟಂಬರ್ 25 1955 ರಲ್ಲಿ ತನ್ನ 90ನೇ ವಯಸ್ಸಿನಲ್ಲಿ ರುಕ್ಮಭಾಯಿ ವಯೋ ಸಹಜ ತೊಂದರೆಗಳಿಂದಾಗಿ ಮೃತರಾದರು. ನೂರು ಅವಮಾನಗಳನ್ನು ಸಹಿಸಿ, ವಲ್ಲದ ಗಂಡನನ್ನು ದೂರಸರಿಸಿ ತನ್ನಿಚೆಯ ಬದುಕನ್ನು
ರುಕ್ಮಾ ಬಾಯಿ ಬದುಕಿದರು. ತನ್ನ ದೇಶವನ್ನು ಆಳಿದ ಬ್ರಿಟಿಷ್ ಸಾಮ್ರಾಜ್ಯವನ್ನು ಪ್ರಶ್ನಿಸಿ ತನ್ನ ಹಕ್ಕನ್ನು ಗಳಿಸಿಕೊಂಡ ಆಕೆ ತನ್ನ ಬಾಯಿ ಮುಚ್ಚಿಸಲು ನೋಡಿದ ಭಾರತೀಯ ಸಮಾಜದ ಸನಾತನವಾದಿಗಳ ಬಾಯಿ ಮುಚ್ಚಿಸಿದರು.
2017ರಲ್ಲಿ ಗೂಗಲ್ ಸಂಸ್ಥೆಯು ರುಕ್ಮ ಬಾಯಿಯವರ ಗೌರವಾರ್ಥವಾಗಿ ಅವರ 153ನೇ ಹುಟ್ಟುಹಬ್ಬದ ದಿನದಂದು ಆಕೆಗಾಗಿ ಒಂದು ಡೂಡಲನ್ನು ಸೃಷ್ಟಿಸಿ ಪ್ರಸಾರ ಮಾಡಿತು. ಆಕೆಯದ್ದೇ ಆದ ಪರಂಪರೆಯನ್ನು ಬಿಟ್ಟು ಹೋಗಿರುವ ರುಕ್ಮ ಬಾಯಿ ಪ್ರತಿ ಭಾರತೀಯ ಶಾಲೆ ಕಾಲೇಜುಗಳ ಬಾಲಕಿಯರ ಕಣ್ಣಿನಲ್ಲಿ ಶಿಕ್ಷಣದ ಕನಸನ್ನು ತುಂಬಲು ಸಹಾಯಕವಾಗಿದೆ. ತನ್ನ ಭವಿಷ್ಯವನ್ನು ತಾನೇ ನಿರ್ಧರಿಸುವ ದಾರಿ ತೋರಿದ್ದಾಳೆ. ಕೇವಲ ವಿವಾಹ ಮಾಡಿಕೊಂಡು ವಧುವಾಗಿರಬೇಕು ಎನ್ನುವ ಸಾಮಾಜಿಕ ಭಾವವನ್ನು ಪ್ರಶ್ನಿಸುವ, ಪ್ರತಿಯೊಬ್ಬ ವಧುವು ತನ್ನ ಬಾಯಿ ಮುಚ್ಚಿಸುವ, ಸಾಮಾಜಿಕ ಸಂಪ್ರದಾಯಗಳನ್ನು ವಿರೋಧಿಸುವ ಮೂಲಕ ತನ್ನದೇ ಆದ ಛಾಪು ಮೂಡಿಸಿದ್ದಾರೆ. ತನ್ನ ಮುಂದಿನ ಬದುಕನ್ನು ಮಹಿಳೆಯರ ಮತ್ತು ಮಕ್ಕಳ ಏಳಿಗೆಗಾಗಿ ಮುಡುಪಿಟ್ಟ ಆಕೆ ಭಾರತ ದೇಶದ ಎಲ್ಲ ಯುವತಿಯರ ಪಾಲಿನ ಸ್ತ್ರೀ ಕುಲ ತಿಲಕವಾಗಿದ್ದಾರೆ




