ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ನವಂಬರ್ ತಿಂಗಳು
ಬಂತಂದ್ರೆ ಪುಟ್ಟ ಪುಟ್ಟ ಮಕ್ಕಳಿಗೆಲ್ಲ ಹಿಗ್ಗೋ ಹಿಗ್ಗು. ಚಾಚಾ ನೆಹರೂ ಜನ್ಮ ದಿನದಂದು ತಮ್ಮದೇ ಹಬ್ಬ ಆಚರಿಸಿಕೊಳ್ಳುವ ಸಂಭ್ರಮ. ನವಂಬರ್ ೧೪ ಬರುವುದನ್ನೇ ಕಾತುರತೆಯಿಂದ ಕಾಯುತ್ತಿರುತ್ತಾರೆ. ಅಂದು ದೇಶದ ಎಲ್ಲ ಮಕ್ಕಳ ಸಡಗರ ಸಂಭ್ರಮ ಕಣ್ತುಂಬಿಸಿಕೊಳ್ಳುವಂತಿರುತ್ತದೆ.  ಮಕ್ಕಳಿಗೆಲ್ಲ ಚಿರ ಪರಿಚಿತರು ಚಾಚಾ ನೆಹರು. ಸ್ವತಂತ್ರ ಭಾರತದ ಪ್ರಥಮ ಪ್ರಧಾನಿ ನಮ್ಮ ಮುದ್ದಿನ ಚಾಚಾ ನೆಹರು  ಎಂದು ತೊದಲ್ನುಡಿಗಳಲ್ಲಿ  ಭಾಷಣ ಮಾಡುವ ಮುದ್ದು ಮಕ್ಕಳನ್ನು ಕಂಡರೆ ಎಂಥವರಿಗೂ ಖುಷಿ ಆಗುತ್ತದೆ. ಪುಟ್ಟ ಪುಟಾಣಿಗಳೆ, ನಿಮಗಾಗಿ ಇಲ್ಲಿದೆ ನಿಮ್ಮ ಮುದ್ದಿನ ಚಾಚಾ ನೆಹರು ಅವರ ಅಗಾಧ ಜೀವನ ಸಾಧನೆ ಪುಟ್ಟ ರೂಪದಲ್ಲಿ.ತಿಳಿದುಕೊಳ್ಳಲು ಕುತೂಹಲವೇ? ಹಾಗಾದರೆ ಮುಂದಕ್ಕೆ ಓದಿ.

ಜವಾಹರ ಲಾಲ ನೆಹರು ಉತ್ತರ ಪ್ರದೇಶದ ಅಲಹಾಬಾದ್‌ನಲ್ಲಿ ೧೮೮೯ ನವಂಬರ್ ೧೪ ರಲ್ಲಿ ಆಗರ್ಭ ಶ್ರೀಮಂತ ಕುಟುಂಬದಲ್ಲಿ ಜನಿಸಿದರು. ತಂದೆ ಮೋತಿಲಾಲ ನೆಹರು, ತಾಯಿ ಸ್ವರೂಪರಾಣಿ. ಮೋತಿಲಾಲ ಸುಪ್ರಸಿದ್ದ ನ್ಯಾಯವಾದಿಗಳಾಗಿದ್ದರು.ಅವರಿಗೆ  ಹಿಂದಿ ಮತ್ತು ಸಂಸ್ಕೃತ ಭಾಷೆಯ ಮೇಲೆ ಹಿಡಿತವಿತ್ತು. ನೆಹರು ಕುಟುಂಬದ ಉಡುಗೆ ತೊಡುಗೆ ನಡುವಳಿಕೆಗಳು ಪಾಶ್ಚಾತ್ಯರನ್ನು ಅನುಸರಿಸುತ್ತಿರುವಂತೆ ಭಾಸವಾಗುತ್ತಿತ್ತು. ನೆಹರು ತಮ್ಮ ಹದಿನೈದನೇ ವಯಸ್ಸಿನಲ್ಲಿ  ಇಂಗ್ಲೆಂಡಿಗೆ ತೆರಳಿ ಟ್ರಿನಿಟಿ ಕಾಲೇಜಿನಲ್ಲಿ ಮತ್ತು ಕೆಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ತಮ್ಮ ವಿದ್ಯಾಭ್ಯಾಸ ಪೂರೈಸಿದರು.ಈ ಅಧ್ಯಯನ ಅವರಿಗೆ ಜಾಗತಿಕ ಮಟ್ಟದ ರಾಜಕೀಯದ ಪರಿಚಯ ಮಾಡಿಸಿತು.
ಮೋತಿಲಾಲರು ತಮ್ಮ ಮಗ ಜವಾಹರ ತಮ್ಮಂತೆಯೇ ನ್ಯಾಯವಾದಿಗಳಾಗಬೇಕೆಂದು ಪಟ್ಟು ಹಿಡಿದು ನ್ಯಾಯಶಾಸ್ತ್ರ
ಕಲಿಯಲು ಪ್ರೇರಣೆ ನೀಡಿದರು. ಅದರ ಫಲವಾಗಿ ೧೯೧೨ ರಲ್ಲಿ ಬ್ಯಾರಿಸ್ಟರ್ ಪದವಿಯನ್ನು ಪಡೆದರು. ವಿದ್ಯಾಭ್ಯಾಸ ಮುಗಿಸಿ ನ್ಯಾಯವಾದಿ ವೃತ್ತಿ ಪ್ರಾರಂಭಿಸಲು ಭಾರತಕ್ಕೆ ಮರಳಿದಾಗ ಗಾಂಧೀಜಿಯವರ ನೇತೃತ್ವದಲ್ಲಿ ಸ್ವಾತಂತ್ರ್ಯ ಹೋರಾಟವು ನೆಹರೂ ಅವರನ್ನು ಇನ್ನಿಲ್ಲದಂತೆ ಸೆಳೆಯಿತು. ಹೀಗಾಗಿ ವಕೀಲಿ ವೃತಿ ಆರಂಭಿಸದೇ ಸ್ವಾತಂತ್ರ್ಯ
 ಹೋರಾಟದಲ್ಲಿ ಧುಮುಕಿದರು. ಗಾಂಧೀಜಿಯವರು ಕೈಗೊಂಡ ಅನೇಕ ಚಳುವಳಿಗಳಲ್ಲಿ ಭಾಗವಹಿಸಿದರು.

 ಮಹಾನ್ ದೇಶಾಭಿಮಾನಿಗಳಾಗಿದ್ದ ಇವರು ಮೇಲಿಂದ ಮೇಲೆ  ಜೈಲುವಾಸವನ್ನೂ ಅನುಭವಿಸಬೇಕಾಯಿತು. ಭಾರತೀಯ ರಾಜಕೀಯ ಕ್ಷಿತಿಜದಲ್ಲಿ ಪ್ರತ್ಯಕ್ಷರಾದರು.
ತಮ್ಮ ರಾಜಕೀಯ ಗುರು ಗಾಂಧೀಜಿಯವರೊಡನೆ ಸಂಪರ್ಕ ಪಡೆದಿದ್ದರು. ಮಗನ ರಾಜಕೀಯ ಪ್ರವೇಶಕ್ಕೆ ಮೋತಿಲಾಲರು ಆರಂಭದಲ್ಲಿ ಅತೃಪ್ತಿಯನ್ನು ವ್ಯಕ್ತಪಡಿಸಿದರು. ಮದುವೆ ಮಾಡಿದರೆ ಮಗ ಬದಲಾಗಬಹುದೆಂದು ತಿಳಿದು  ೧೯೧೬ ರಲ್ಲಿ ಕಮಲಾ  ಎಂಬ ಯುವತಿಯೊಂದಿಗೆ  ಮದುವೆ ಮಾಡಿದರು. ಆದರೆ ಮೋತಿಲಾಲರು ಅಂದುಕೊಂಡ ಹಾಗೆ ನೆಹರು ಅವರು ಬದಲಾಗಲಿಲ್ಲ. ಬದಲಾಗಿ ಸ್ವಾತಂತ್ರ್ಯ
 ಹೋರಾಟದಲ್ಲಿ ಮತ್ತಷ್ಟು ತೊಡಗಿಸಿಕೊಂಡರು.  ನೆಹರುರವರ ದೃಢ ಸಂಕಲ್ಪಕ್ಕೆ ಮನ ಸೋತ ಮೋತಿಲಾಲರು ಆವರನ್ನು ಪ್ರೋತ್ಸಾಹಿಸಿದ್ದಷ್ಟೇ ಅಲ್ಲದೇ ತಾವೂ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಸಿಕೊಂಡರು. ಇದರಿಂದ ಮತ್ತಷ್ಟು ಪ್ರೇರಣೆ ಪಡೆದ ನೆಹರು ಅನೇಕ ಯುವಕರನ್ನು ಸ್ವಾತಂತ್ರ್ಯ
 ಆಂದೋಲನದಲ್ಲಿ ಭಾಗವಹಿಸುವಂತೆ ಪ್ರೇರೇಪಿಸಿದರು. ಇಂಡಿಯನ್ ನ್ಯಾಶನಲ್ ಕಾಂಗ್ರೆಸ್ ೫ ಬಾರಿ ಅಧ್ಯಕ್ಷರಾಗಿ ಆಯ್ಕೆಯಾದರು.

(Original Cap

ನೆಹರು ಒಬ್ಬ ಮಹಾನ ಸಾಹಿತಿಯಾಗಿದ್ದರು. ಕಾರಾಗೃಹದಲ್ಲಿರುವಾಗ ಡಿಸ್ಕವರಿ ಆಫ್ ಇಂಡಿಯಾ – ಭಾರತದ ಪುನರ್  ಪರಿಶೀಲನೆ ( ಪುತ್ರಿ ಇಂದಿರಾಗೆ ಬರೆದ ಪತ್ರಗಳ ಸಂಕಲನ ರೂಪ) ಮತ್ತು ಗ್ಲಿಂಪ್ಸಸ್ ಆಫ್ ವರ್ಲ್ಡ ಹಿಸ್ಟ್ರಿ
( ಪ್ರಪಂಚದ ಚರಿತ್ರೆಯ ಮರುನೋಟ) ಎಂಬ ಕೃತಿಗಳನ್ನು ರಚಿಸಿದರು. ೧೯೩೭ ರ ಪ್ರಾಂತೀಯ ಸಭೆಗಳಿಗೆ ನೆಹರೂರವರು ಪ್ರಮುಖ ಶಿಲ್ಪಿಯಾಗಿದ್ದರು.

ನೆಹರುರವರ ದೃಢ ಸಂಕಲ್ಪ, ಬದ್ಧತೆ ದೇಶ ಪ್ರೇಮ ಸಹನೆ ದೂರ ದರ್ಶಿತ್ವದಂಥ ಗುಣಗಳು ಅವರಿಗೆ ಸ್ವತಂತ್ರ ಭಾರತದ ಪ್ರಥಮ ಪ್ರಧಾನಿಯ ಪಟ್ಟವನ್ನು ಅಲಂಕರಿಸುವಂತೆ
ಮಾಡಿದವು. ರಾಷ್ಟ್ರದ
 ಸರ್ವಾಂಗೀಣ ಅಭಿವೃದ್ಧಿಗಾಗಿ ಶ್ರಮಿಸಿದರು. ಸಾಮಾಜಿಕ ಉದ್ಯಮಗಳ ಪ್ರಗತಿಗೆ ಭದ್ರವಾದ ಬುನಾದಿಯನ್ನು ಹಾಕಿದರು. ಶಾಂತಿಯ ನೀತಿ ಇತರ ರಾಷ್ಟ್ರಗಳ ಆಂತರಿಕ ವ್ಯವಹಾರದಲ್ಲಿ ಪಾಲ್ಗೊಳ್ಳದಿರುವುದು ಅಂತರಾಷ್ಟ್ರೀಯ ವಲಯದಲ್ಲಿ ನಿಶಸ್ತ್ರೀಕರಣದ ಅಗತ್ಯತೆಯ ಕುರಿತು ಗಮನ ಸೆಳೆದರು.  ಆಧುನಿಕ ಭಾರತದ ಶಿಲ್ಪಿ, ವಿಶ್ವ ಶಾಂತಿಯ ನೇತಾರ ಎಂದು ವಿಶ್ವದಾದ್ಯಂತ ಇವರಿಗೆ ಅಪಾರ ಗೌರವವಿದೆ. ಕೋಟ್ಯಂತರ ದೇಶವಾಸಿಗಳ ಮನ ಗೆದ್ದ  ನೆಹರೂ ೧೯೬೪ ರ ಮೇ ೨೭ ರಲ್ಲಿ ನಮ್ಮನ್ನು ಅಗಲಿದರು. ಕೊನೆಯುಸಿರು ಇರುವವರೆಗೂ ಅವರು ಪ್ರಧಾನಿ ಹುದ್ದೆಯನ್ನು ಅಲಂಕರಿಸಿದ್ದರು.

ಮಕ್ಕಳನ್ನು ಕಂಡರೆ,ಗುಲಾಬಿ ಎಂದರೆ ನೆಹರೂ ಅವರಿಗೆ ಎಲ್ಲಿಲ್ಲದ ಪ್ರೀತಿ ಇದನ್ನು ರುಜುವಾತು ಪಡಿಸುವ ಘಟನೆಗಳು ಅವರ ಜೀವನದಲ್ಲಿ ಕಾಣ ಸಿಗುತ್ತವೆ.  ನೆಹರೂರವರ  ಬಯಕೆಯಂತೆ ಅವರ ಜನ್ಮ ದಿನವನ್ನು ಮಕ್ಕಳ ದಿನವನ್ನಾಗಿ ಆಚರಿಸಲಾಗುತ್ತದೆ.

ಮುದ್ದು ಮಕ್ಕಳೇ, ನೀವೂ ನೆಹರೂರವರಂತೆ ದೇಶ ಭಕ್ತಿಯನ್ನು ಬೆಳೆಸಿಕೊಂಡು ದೇಶ ಸೇವೆಯಲ್ಲಿ ನಿಮ್ಮನ್ನು ತೊಡಗಿಸಿಕೊಂಡರೆ ಮಾತ್ರ ನಿಮ್ಮ ಮುದ್ದಿನ ಚಾಚಾ ನೆಹರುರವರ ಜನ್ಮ ದಿನಾಚರಣೆ ಸಾರ್ಥಕವಾಗುವುದು.


About The Author

Leave a Reply

You cannot copy content of this page

Scroll to Top