ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com


 ಮಳೆಯಿಂದಲೇ ಕೊಚ್ಚಿ ಹೋಗುವುದು ಕೊಳೆ
 ಮಳೆಯಿಂದಲೇ ಹೊಳೆಯುವುದು ಇಳೆ
 ಮಳೆಯಿಂದಲೇ ಹುಲುಸಾಗಿ ಬೆಳೆಯುವುದು ಬೆಳೆ
 ಮಳೆಯಿಂದಲೇ ರೈತನ ಮೊಗದಲ್ಲಿ ಇನ್ನಿಲ್ಲದ ಕಳೆ

 ಮಳೆ ಬೇಕು ಇಳೆಯ ಜನರ ಬದುಕಿಗೆ
 ಮಳೆ ಬೇಕು ಪಶು ಪಕ್ಷಿ ಪ್ರಕೃತಿ ಸಂಪತ್ತಿನ ಉಳಿವಿಗೆ
 ಮಳೆ ಬೇಕು  ಆರಿಸಲು ಭೂಮಿಯ ಧಗೆ
 ಮಳೆ ಬೇಕು ತಣಿಸಲು ಜೀವ ಸಂಕುಲದ ಬಾಯಾರಿಕೆಗೆ

 ಆದರೆ ಏನು?
 ಇತ್ತೀಚಿಗೆ ಸುರಿಯುತ್ತಿದೆ ಒಂದೇ ಸಮ  ಮಳೆ
 ತೋಯ್ದು ಕೊಳೆಯುತ್ತಿವೆ ಚಿಗುರಿ ನಿಂತ ಬೆಳೆ
 ಅಂದು ಬೇಡುತ್ತಿದ್ದ ರೈತ ಸುರಿಯಲೆಂದು ಮಳೆ
 ಇಂದು ಶಪಿಸುತ್ತಿರುವ ರೈತ ನಿಲ್ಲಲೆಂದು ಮಳೆ


 ಎಲ್ಲಿ ನೋಡಿದಲ್ಲಿ ಮಳೆಯ ಅವಾಂತರ
 ರೈತನ ಬದುಕಿಗಾಯಿತು ಗಂಡಾಂತರ
 ಕೊಂಚವೂ ಇಲ್ಲ ರೈತನ ಬದುಕಿನಲ್ಲಿ ಸ್ಥಿತ್ಯಂತರ
 ಸಾಯಲಾರದೆ ಬದುಕಿಹರು ಇರದೇ ಗತ್ಯಂತರ

 ಹೊರಗೆ ಧೋ ಎಂದು ಭೋರ್ಗರೆವ ಮಳೆ
 ಆಗಾಗ ಹೊರಪಾಗಿ ನಿಲಬಹುದು ಒಂದು ವೇಳೆ
 ಮನೆಯೊಳಗಿನ ಟಿವಿಯ ಉದ್ಘೋಷಕರ ಬೊಗಳೆ
 ನಿತ್ಯ ನಿರಂತರ ಕೇಳಲಾರೆ ನಾನು ಇನ್ನು ತಾಳೆ

ಬಾ ಎಂದಾಗ ಬಾರದೆ ಹೋಗುವ ಮಳೆ
 ಇದೀಗ ಬೇಡವೆಂದರೂ ನಿಲ್ಲದಾ ಮಳೆ
 ಮಿತಿಮೀರಿ ಸುರಿದು ತುಂಬಿಹುದು ಹಳ್ಳ ಹೊಳೆ
 ಸಾಕಪ್ಪ ಸಾಕು ಎರವಾಗದಿರಲಿ ಇಳೆಗೆ ಈ ಮಳೆ

 ಹಬ್ಬವೊ ಹಬ್ಬ ಹಿತಮಿತವಾಗಿ ಸುರಿದರೆ ಮಳೆ
 ಅಯ್ಯೋ! ಅಯ್ಯಯ್ಯೋ ಅತಿಯಾಗಿ ಸುರಿದರೆ ಮಳೆ
 ರೈತನ ಶ್ರಮವನೆಲ್ಲ ಕೊಚ್ಚಿ ಕೊಂಡೊಯ್ದ ಮಳೆ
 ಇದೀಗ ಎಲ್ಲೆಡೆ ಯುದ್ಧಾನಂತರದ  ಕುರುಕ್ಷೇತ್ರದ ಕಳೆ

 ಮಳೆ ಬಾರದಿದ್ದರೆ ಬದುಕೆಲ್ಲ ಬವಣೆ
 ಮಳೆ ಬಂದು ಕೂಡ ಬದುಕಲು ಎಲ್ಲಿದೆ ಎಣೆ
 ಯಾರು ಈ ವಿಕೃತಿಗೆ ವೈಫರೀತ್ಯಕೆ ಹೊಣೆ
 ಬುದ್ಧಿಜೀವಿಗಳಾದ ನಾವಲ್ಲದೇ ಇನ್ನಾರನೂ ನಾ ಕಾಣೆ


About The Author

Leave a Reply

You cannot copy content of this page

Scroll to Top