ಅಂಕಣ ಸಂಗಾತಿ
ಅನುಭಾವ
ಡಾ.ಸಾವಿತ್ರಿ ಮಹಾದೇವಪ್ಪ ಕಮಲಾಪುರ
ಅಕ್ಕಮಹಾದೇವಿ ವಚನ

ಅನುತಾಪದೊಡಲಿಂದೆ ಬಂದನೋವ ನುಂಬವರು
ಒಡಲೊ ಪ್ರಾಣವೊ ಆರು ಹೇಳಾ
ಎನ್ನೊಡಲಿಂಗೆ ನೀನು ಪ್ರಾಣವಾದ ಬಳಿಕ
ಎನ್ನಒಡಲ ಸುಖ ದುಃಖವಾರತಾಗುವುದು ಹೇಳಯ್ಯಾ?
ಚೆನ್ನಮಲ್ಲಿಕಾರ್ಜುನ ಎನ್ನನೊಂದ ನೋವು ಬೆಂದ ಬೇಗೆ
ನಿಮ್ಮ ತಾಗದೆ ಹೋಹುದೆ ಅಯ್ಯಾ
ಅಕ್ಕಳ ಭಾವ ಮತ್ತು ಅರಿವು ಜ್ಞಾನದ ಪ್ರತಿಕ ಚೆನ್ನಮಲ್ಲಿಕಾರ್ಜುನನೇ ಆಗಿರುವನು ವ್ಯಕ್ತಿಯ ನೆಲೆಯಲ್ಲಿ ಅಕ್ಕನ ಈ ವಚನದ ಭಾವ ಅಭಿವ್ಯಕ್ತಗೊಂಡಿದೆ ಇಲ್ಲಿ ಮಕ್ಕಳ ಭಾವ ಮತ್ತು ಚೆನ್ನಮಲ್ಲಿಕಾರ್ಜುನನ ಮೇಲೆ ಇಟ್ಟಿರುವ ಭಕ್ತಿಯ ಭಾವ ಎರಡು ಒಂದೇ ಎಂದು ಹೇಳುವರು ಅಕ್ಕ.
*ಅನುತಾಪದೊಡಲಿಂದೆ ಬಂದ ನೋವ ನುಂಬುವರು*
ಸಾಮಾನ್ಯ ಅರ್ಥದಲ್ಲಿ ಅನುತಾಪ ಎಂದರೆ ಮಾಡಿದ ತಪ್ಪನ್ನು ಒಪ್ಪಿಕೊಂಡು, ತೀವ್ರವಾಗಿ ಪಶ್ಚಾತ್ತಾಪ ಪಟ್ಟು ದುಃಖಿಸುವುದು.ಈ ದುಃಖ ಅಂದರೆ ಅನುತಾಪ ಕೊನೆಯವರೆಗೂ, ಕಾಡುತ್ತಲೇ ಇರುವುದು .
ಮನುಷ್ಯರ ಸ್ವಭಾವವೇ ಒಂದೊಂದು ರೀತಿ ಕೆಲವರು ಇನ್ನೊಬ್ಬರ ನೋವಿಗೆ ಸ್ಪಂದಿಸುವರು .ಮತ್ತೊಬ್ಬರು ಅವರದೇ ತಪ್ಪು ಇದು ಎಂದು ಅಣಕಿಸುವರು
ಇನ್ನು ಕೆಲವೊಬ್ಬರು ಇನ್ನೊಬ್ಬರ ಮನಸಿಗೆ ನೋವಾಗಿತು ,ಎಂದು ತಿಳಿದು ಮೌನವಾಗಿಯೇ ಇದ್ದು, ಏನಾದರೂ ಅಂದಿದ್ದಕ್ಕೆ ತಮ್ಮ ಮನದಲ್ಲೇ ಪಶ್ಚಾತ್ತಾಪ ಪಟ್ಟು, ಕ್ಷಮೆ ಯಾಚಿಸುವ ದೊಡ್ಡ ಮನದವರು ಇದೇ ಭೂಮಿಯಲ್ಲಿಯೇ ಆಗಿ ಹೋಗಿದ್ದಾರೆ .ಈಗಲೂ ಕೂಡಾ ಸಮಾಜದಲ್ಲಿ ಇರುವರು. ಕೆಲವೊಬ್ಬರು ತಾವು ಮಾಡಿದ ತಪ್ಪನ್ನು ಒಪ್ಪಿಕೊಳ್ಳದೆ, ಅದಕ್ಕೆ ಕತೆ ಕಟ್ಟಿ, ಸುಳ್ಳನ್ನೇ ಸತ್ಯ ಎಂದು ವಾದಿಸುವವರು ಇದ್ದಾರೆ.
ಆದರೆ ಅಕ್ಕಳಲ್ಲಿ ಸಾಮಾನ್ಯ ಮಾನವರಂತೆ ವಿಚಾರವಿಲ್ಲ. ಅನುಮಾನವಿಲ್ಲ, ಗೊಂದಲವಿಲ್ಲ, ದ್ವಂದ್ವವಿಲ್ಲ, ಅಕ್ಕಳಿಗೆ ಇರುವುದು ಒಂದೇ ಭಾವ .ಉನ್ನತವಾದ ವಿಚಾರದ ವ್ಯಕ್ತಿತ್ವ ಮನೋಭಾವ. ಅಕ್ಕಳ ಲಿಂಗಾಂಗ ಸಾಮರಸ್ಯಭಾವ . ಲಿಂಗ ಹಾಗೂ ಅಂಗ ಬೇರೆ ಅಲ್ಲ ಎನ್ನುವ ಮನೋ ನಿರ್ಧಾರ ಅಕ್ಕಳಲ್ಲಿ ಸ್ವಯಂ ಲಿಂಗಿಯಾಗಿ ಕಂಡುಬರುವರು.
*ಒಡಲೋ ಪ್ರಾಣವೊ ಆರು ಹೇಳಾ*
*ಎನ್ನೊಡಲಿಂಗೆ ನೀನು ಪ್ರಾಣವಾದ ಬಳಿಕ*
ಹೇ ಪರಮಾತ್ಮ ಪ್ರಭು ಚೆನ್ನಮಲ್ಲಿಕಾರ್ಜುನಾ ಎನ್ನ ಪ್ರಾಣವೇ ನೀವು ಆದ ಬಳಿಕ.ಎನ್ನ ಒಡಲು ಹಾಗೂ ಪ್ರಾಣ ಬೇರೆಯಾಗಲು ಹೇಗೆ ಸಾಧ್ಯ ಪರಮಾತ್ಮ.
ಅಕ್ಕನವರ ಭಾವ ನಮಗೆ ಪ್ರಾಣ ಮತ್ತು ಶರೀರ ಎರಡು ಒಂದೇ ಆದಂತೆ, ಆಗುವ ಅನುಭವದ ಅನುಭಾವ .
ಇಲ್ಲಿ ಅಕ್ಕಮಹಾದೇವಿಯವರು ಒಡಲು ಮತ್ತು ಪ್ರಾಣ ಎರಡೂ ಒಂದೇ ಆದಾಗ ಮಾಡಿದ ಅನಂತ ಕೋಟಿ ತಪ್ಪುಗಳನ್ನೆಲ್ಲ ಮಣ್ಣಿಸುವ ವಿಶ್ವಾಸ ಮತ್ತು ನಂಬಿಕೆ .ಇದೇ ಒಂದು ವಿಶ್ವಾಸ ಮತ್ತು ನಂಬಿಕೆಯಿಂದ ಅಕ್ಕಳ ಮನ ಘಾಸಿಗೊಂಡಂತಿದೆ .
*ಎನ್ನ ಒಡಲ ಸುಖ ದುಃಖವಾರತಾಗುವುದು ಹೇಳಯ್ಯಾ*
ಹೇ ಚೆನ್ನಮಲ್ಲಿಕಾರ್ಜುನಯ್ಯ ನಾನು ಪಡುವ ಈ ದುಃಖ,ಈ ಸಂಕಟ, ಈ ನೋವು , ಯಾರಿಗೆ ತಾಗುವುದು ಹೇಳಯ್ಯಾ? .ಅದಾವ
ಸುಖವನ್ನು ನಾನು ಬಯಸಲಿಲ್ಲ .ಅದಾವ ಸುಖವನ್ನು ಕೊಡು ಎಂದು ನಾನೆಂದೂ ಕೇಳಲಿಲ್ಲ ಪರಮಾತ್ಮ . ದುಃಖದಲ್ಲಿ ಕಳೆಯುವ ಈ ದಿನಗಳನ್ನು ನಾನು ಹೇಗೆ? ಕಳೆಯಲಿ .ನೋವಿನಿಂದ ಹೇಗೆ? ಪಾರಾಗಲಿ ಹೇಳಯ್ಯಾ ಚೆನ್ನಮಲ್ಲಿಕಾರ್ಜುನಯ್ಯ .
*ಎನ್ನ ನೊಂದ ನೋವು ಬೆಂದ ಬೇಗೆ* *ನಿಮ್ಮ ತಾಗದೆ ಹೋಹುದೆ* *ಅಯ್ಯಾ*
ಉಂಡ ಈ ನೋವು, ಬೆಂದ ಗಳಿಗೆ, ದುಃಖಿಸಿದ ಪರಿ, ಹಸಿವು ನಿದ್ರೆಯಿಲ್ಲದೇ ಬಳಲಿದ ಜೀವ, ಈ ಶರೀರ ಸುರಿಸಿದ ಕಂಬನಿಯು ಅದು ನನಗಷ್ಟೇ ಅಲ್ಲ ಚೆನ್ನಮಲ್ಲಿಕಾರ್ಜುನಾ ನಿನಗೂ ಕೂಡಾ ತಟ್ಟೆ ತಟ್ಟುವುದು.
ಎನ್ನುವರು. ಏಕೆಂದರೆ ಅಕ್ಕನ ಭಾವವೇ ಚೆನ್ನಮಲ್ಲಿಕಾರ್ಜುನ ಚೆನ್ನಮಲ್ಲಿಕಾರ್ಜುನ ಮತ್ತು ಅಕ್ಕ ಬೇರೆ ಅಲ್ಲ .ಎಂದು ಹೇಳುವ ಅಕ್ಕನವರು , ಮತ್ತು ಹೇಗೆ ದುಃಖ ಬೇರೆ ಆಗುತ್ತದೆ.ನನಗೆ ದುಃಖ ಆದರೆ ಚೆನ್ನಮಲ್ಲಿಕಾರ್ಜುನನಿಗೂ ಹೇಗೆ ?ದುಃಖ ಆಗದಿರಲು ಸಾಧ್ಯ? ಎನ್ನುವರು ಅಕ್ಕ.
ಒಟ್ಟಿನಲ್ಲಿ ಈ ವಚನದ ಅರ್ಥ ಇಷ್ಟೇ.ಯಾರಿಗಾದರು ನಾವು ನೋವು ಮಾಡಿದರೆ ಆಗ ನೋವು ನಮಗೂ ತಟ್ಟೆ ತಟ್ಟುವುದು .ಯಾರಿಗಾದರೂ ತೊಂದರೆ ಮಾಡಿದರೆ ನಮಗೂ ತೊಂದರೆ ಆಗುವುದು. ಯಾರಿಗಾದರೂ ಅವಮಾನಿಸಿದರೆ ನಮಗೂ ಅವಮಾನ ಆಗುವುದು ,
ಅದಕ್ಕೆಂದೇ ಬಸವಣ್ಣನವರು ಧರ್ಮದಿಂದ ನಡೆ ಧರ್ಮ ನಿನ್ನನ್ನು ಕಾಪಾಡುವುದು ಎಂದಿರುವುದು . ಇದನ್ನೇ ನಮ್ಮ ತಂದೆಯವರು ನನಗೆ ಪದೇ ಪದೇ ಹೇಳುತ್ತಿದ್ದರು.
ಡಾ ಸಾವಿತ್ರಿ ಕಮಲಾಪೂರ




