ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯಸಂಗಾತಿ

ವಿಜಯಪ್ರಕಾಶ್ ಸುಳ್ಯ

ಅಕ್ಷರಗಳ ಆರಾಧನೆ

ಅಕ್ಷತೆಯಲಿ ಮೂಡಿದಾಗಿಂದ ಸ್ವರಗಳು ಸದ್ದು ಮಾಡುತ್ತಿವೆ ಜೋರು
ಅಕ್ಷರದ ಆಕಾರವನು ಕೊಡುವ ಬಯಕೆಯಿದೆಯದಕೆನಗೆ ನಿತ್ಯ ಚೂರು
ಅಕ್ಷಯವಾಗಲೆನ್ನುವ ಹರಕೆಯಲಿ ಹಚ್ಚಿಡುತಿರುವೆನು ನುಡಿಯ ಸೊಡರು
ಅಕ್ಷಮಾಲೆಯ ಹಿಡಿದು ಜಪಿಸುತ್ತಿದೆ ಕನ್ನಡವೆಂದು ನನ್ನೀ ಉಸಿರು

ಅರಗಿಸಲಾಗದ ನೋವು ಮೈಕೊಡವಿ ನಿಂದಿರಲು ನಲುಗಿ ಹೋಗಿತ್ತು ಬಾಳು
ಅರಿವಿನ ಆಯುಧವ ಕೈಗಿತ್ತ ಕನ್ನಡಮ್ಮನಿಗೆ ಮನವೆನ್ನುತಿದೆ ಜೈಕಾರ ಹೇಳು
ಸರಿ ತಪ್ಪುಗಳ ಸಮರದಲಿ ಸಿಲುಕಿ ಹೃದಯ ಮಂದಿರವು ಬಿದ್ದಿತ್ತು ಪಾಳು
ಅರಿವನರಸುತಲಿರಲು ವೇದ್ಯವಾಯಿತು ಸಹಜವೆಂದು ಬದುಕಲ್ಲಿ ಏಳುಬೀಳು

ಕುಣಿಸುತಿರುವಳವಳು ಪದಗಳನು ಥರ ಥರದ ಭಾವದಲಿ
ಮಣಿಸಿದೆನು ದುಗುಡವನು ಮನದ ಮಾತುಗಳ ಇಳಿಸಿ ಹಾಳೆಯಲಿ
ತಣಿಯದ ಜ್ಞಾನದ ಹಸಿವನುಳಿಸಿದಳು ಹಸಿರಾಗಿ ಎದೆಯಲಿ
ಋಣಿಯಾಗಿರುವೆನು ಅವಳಿಗೆ ನಾ ಇರುವ ತನಕ ಈ ಮಣ್ಣಲಿ.


About The Author

Leave a Reply

You cannot copy content of this page

Scroll to Top