ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಜಯಶ್ರೀ ಭ ಭಂಡಾರಿ

ಹಗುರಾಗುವ ಭಾವ

ದಿನವೂ ದಿಟ್ಟಿಸಿ ನೋಡುತ್ತಾ
ಮುಗುಳು ಮೊಗ್ಗಾಗುವುದ ಕಾಯ್ದೆ
ಹಸಿರೆಲೆ ನಡುವೆ ಉಸಿರು ಬಿರಿದು
ಅಲ್ಲಲ್ಲಿ ಚೂಪಾದ  ಮೊಗ್ಗುಗಳು 

ಕಾಂಪೌಂಡ್ ಗೋಡೆಗೆ ಕುಂಡದಲ್ಲಿ
ಏನೇನು ಕೇಳದೆ ನೀರಿಗೆ ಒಲಿದು
ಸುಡುವ ಬಿಸಿಲಿನ ಬೇಗೆಗೆ ನಲಿದು
ಏಳು ಸುತ್ತಿನ ಮಲ್ಲಿಗೆ ಅರಳಿತಲ್ಲಾ.

ನೀರು ಹಾಕುವಾಗೊಮ್ಮೆ ಮುದದಿ
ಮಾತಾಡಿ ಮನದ ನೋವು ಮರೆತು
ಹೇ ಮಲ್ಲಿಗೆ ನಿನ್ನ ಧ್ಯಾನಸ್ಥ ಸ್ಥಿತಿ ಕೊಡು
ಹಂಗಿಲ್ಲದೆ ಅರಳುವ ಸುಕೋಮಲೆಯು

ದೇವನಿಗೂ ಸೈ ಮುಡಿಗೂ ಸೈ
ನಿಶ್ಚಲತೆಯ ಪರಿ ಕಂಡು ದಂಗಾಗುವೆ
ಆ ನಿನ್ನ ತನ್ಮಯತೆ ಬೇಕಿದೆ ನನಗೆ
ಬೆಳ್ಮುಗಿಲ ಬೆಳಕಲಿ ಘಮಿಸಿ ನಿಲುವೆ

ಬಿಳಿಯ ಬಣ್ಣವು ಶಾಂತಿಯ ಪ್ರತೀಕ
ಆ ನಿನ್ನ ಪ್ರಶಾಂತ ಪ್ರೇಮ ಕಲಿಸು ಬಾ
ಜಂಜಡದ ನೋವುಗಳ ನೀಗು ಬಾರೆ
ತಲ್ಲಣಿಸಿದ ಹೃದಯಕೆ ತವರಾಗುವೆಯಾ.

ಮನಸಿನ  ಹುಸಿಯಾದ ಆಶೆಗಳು 
ಅತಿಯಾದ ಯೋಚನೆಗೆ ಕಂಗೆಟ್ಟು
ನಿನ್ನ ಬಾಗಿಲಿಗೆ ಬಂದಿರುವೆ ಮಲ್ಲಿಗೆ
ನಿನ್ನಂತಾಗುವ ದಾರಿಯ ಹೇಳು ಸಖಿ

ನಂಬಿಕೆ ಇಂಬು ಕಳೆದುಕೊಂಡಿದೆ
ಮಾತು ಮೌನವಾಗಿ ನರಳಿ ಅಳುತ್ತಿದೆ
ತಾಳ್ಮೆಯು ಸಾಕಾಗಿ ತಗಾದೆ ತೆಗೆದಿದೆ 
ನನ್ನದಾವುದು ಈಗ ನನ್ನದಾಗಿ ಉಳಿದಿಲ್ಲ.

ಬದುಕಿನ ಪ್ರತಿ ಕ್ಷಣವು ಹಂಗಿಸುತಿದೆ
ಎದೆಯ ಭಾರ ಹೆಚ್ಚಾಗಿ ಹುಚ್ಚಾಗಿದೆ
ಒಂಟಿ ಭಾವ ಹೆದರಿಸಿ ನಗುತಿದೆ ಮಲ್ಲಿಗೆ.
ಎಲ್ಲವನು ಹೇಳಿ ಹಗುರಾದೆ ನಾನೀಗ.


ಜಯಶ್ರೀ ಭ ಭಂಡಾರಿ

About The Author

Leave a Reply

You cannot copy content of this page

Scroll to Top