ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಅಕ್ಕಮಹಾದೇವಿ ಜಯಂತಿ ವಿಶೇಷ

ಗಜಲ್

ಸಾವಿಲ್ಲದ ರೂಹಿಲ್ಲದ ಚೆಲುವನಿಗೆ ಒಲಿದೆಯಲ್ಲ ಅಕ್ಕ
ಸಾವು ರೂಪಿನ ಲೌಕಿಕ ಗಂಡನೆ ದೈವ ನಮಗೆ ಎಂದರಲ್ಲ ಅಕ್ಕ

ಕುಹುಕಿನ ಮಾತುಗಳಿಗೆ ಅಂಜಿ ನಡೆಯುತ್ತಿದ್ದೆವೆ ನಾವೆಲ್ಲ ಇಂದು
ಬೆಟ್ಟದಲ್ಲಿ ಮನೆಮಾಡಿ ಮೃಗಗಳಿಗೆ ಅಂಜಿಕೆ ಏಕೆ ಎಂದೆಯಲ್ಲ ಅಕ್ಕ

ತುಂಬಿದುದು ತುಳುಕದು ನಂಬಿದುದು ಸಂದೇಹಿಸದು ಸತ್ಯ
ಹೆದರದೆ ಬೆದರದೆ ನಿಜವನರಿತು ನಿಶ್ಚಿಂತನಾಗಿರು ಎಂದೆಯಲ್ಲ ಅಕ್ಕ

ನಿದ್ರೆಗೆ ಸುಪತ್ತಿಗೆ ಹಾಸಿದರೂ ನಿದ್ದೆಯಾಗುತ್ತಿಲ್ಲ ಇಂದಿನವರಿಗೆ
ನಿರ್ಭಯದಿ ಶಯನಕೆ ಹಾಳು ದೇಗುಲಗಳುಂಟು ಎಂದೆಯಲ್ಲ ಅಕ್ಕ

ಯಾವ ಕ್ಷಣಕೆ ಏನು ಬರುವುದೊ ಏನಾಗುವುದೋ ಎಂಬ ಚಿಂತೆ
ನಾಳೆ ಬರುವುದು ಇಂದೇ, ಇಂದು ಬರುವುದು ಈಗಲೇ ಬರಲಿ ಎಂದೆಯಲ್ಲ ಅಕ್ಕ

ಕ್ಷಣಿಕ ಸುಖದ ಬೆನ್ನತ್ತಿ ಏನೇನೊಇ ಮಾಡುತಿರುವರಿಲ್ಲಿ ಮನುಜರು
ಶರಣರ ಅನುಭಾವ ಸಂಗದಿಂದ ಪರಮ ಸುಖಿಯಾದೆನು ಎಂದೆಯಲ್ಲ ಅಕ್ಕ

ನಾನಾ ತಾಣಗಳನ್ನು ಸುತ್ತಿ ಬಂದರೂ ತೃಪ್ತಿ ಸಿಗುತ್ತಿಲ್ಲ ಇಂದು
ಒಡಲ ಕಳವಳಕ್ಕಾಗಿ ಅಡವಿಯ ಪೊಕ್ಕೆನು ಎಂದೆಯಲ್ಲ ಅಕ್ಕ

ಎಲ್ಲವೂ ನನಗೆ ಗೊತ್ತು ಎಂದು ಅಹಂಕಾರದಲಿ ಬೀಗುವವರೆ ಹೆಚ್ಚಿರುವರು
ಎಲ್ಲವನರಿದು ಫಲವೇನು ತನ್ನ ತಾನರಿಯಬೇಕಲ್ಲ ಎಂದೆಯಲ್ಲ ಅಕ್ಕ

ದೇವನೊಬ್ಬನನ್ನು ಕಾಣಲು ತವಕಿಸಿ ಎಲ್ಲೆಲ್ಲೊ ಸುತ್ತುತಿಹರಿಲ್ಲಿ ಎಲ್ಲರೂ
ದೇಹಭಾವದ ಮೂಲಕ ಶಿವನನ್ನು ಕಾಣುವ ತವಕ ಎಂದೆಯಲ್ಲ ಅಕ್ಕ

ಜಡತೆಯ ಕಳೆಯಲು ಅನುಭಾವಗಳ ಸಂಗಕ್ಕೆ ಹಾತೊರೆಯುತಿಹೆವು ಅನುಭಾವಿಗಳ ಸಂಗದಲ್ಲಿ ಎನ್ನ ತನು ಶುದ್ದವಾಯಿತು ಎಂದೆಯಲ್ಲ ಅಕ್ಕ

ಎನ್ನಂತರಂಗದ ಸಾಕ್ಷಿಪ್ರಜ್ಞೆ ನೀನೇ ಎಂದಿರುವೆ ಅಕ್ಕ ನಾನು
ಆತ್ಮ ಸಂಗಾತಕೆ ನೀನೆನಗುಂಟು ಮಲ್ಲಿಕಾರ್ಜುನ ಎಂದೆಯಲ್ಲ ಅಕ್ಕ

ಹನ್ನೆರಡು ತಿರುವುಮುರುವಾದರೂ ಇನ್ನೊಬ್ಬ ಅಕ್ಕ ಹುಟ್ಟಲಿಲ್ಲವೆಂದಳು ರೋಹಿ
ಲೋಕದಲ್ಲಿ ಸ್ತುತಿ ನಿಂದೆಗಳು ಬಂದರೆ ಸಮಾಧಾನಿಯಾಗಿರಬೇಕು ಎಂದೆಯಲ್ಲ ಅಕ್ಕ.


ರೋಹಿಣಿ ಯಾದವಾಡ

About The Author

1 thought on “”

Leave a Reply

You cannot copy content of this page

Scroll to Top