ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯಸಂಗಾತಿ

ಡಾ ಸುರೇಶ ನೆಗಳಗುಳಿ

ಗಜ಼ಲ್

ಸುರಿದು ಮಣ್ಣು ಸೇರಿದ ಬೆವರಿನ ಲೆಕ್ಕ ನನಗೆ ಗೊತ್ತಿಲ್ಲ
ಉರಿದ ಕಣ್ಣಿನ ಕೆಂಪು ಮೊಹರಿನ ಲೆಕ್ಕ ನನಗೆ ಗೊತ್ತಿಲ್ಲ

ಮೆರೆದ ಜನರು ಮೆರೆಯುತ್ತಲೇ ಮರೆಯುತ್ತಾರೆ ಏಕೆ
ಸುರಿದು ಜನತೆಗುಣಿಸಿದ ಅಗುಳಿನ ಲೆಕ್ಕ ನನಗೆ ಗೊತ್ತಿಲ್ಲ

ಗರಿಗರಿಯಾದ ಉಡುಪೇಕೆ ತೊಗಲಂಗಿ ಸಾಕಲ್ಲವೇ
ಹೊರ ಪ್ರಾಂಗಣದಲುಂಡ ಉಣಿಸಿನ‌ ಲೆಕ್ಕ ನನಗೆ ಗೊತ್ತಿಲ್ಲ

ಬರಿಯ ಬೊಗಳೆಗಳೇಕೆ ದೇಶದ ಬೆನ್ನೆಲುಬು ಕಾರ್ಮಿಕನೆಂದು
ಮರೆತೆಲ್ಲ ದುಡಿದ ಹಗಲಿರುಳ ದಣಿವಿನ ಲೆಕ್ಕ ನನಗೆ ಗೊತ್ತಿಲ್ಲ

ಹರಿದಂಗಿ ಬರಿಗಾಲು ಸಾಕೆಂಬ ಧಣಿಯ ನಿರ್ಣಯವೇಕೆ
ಒರಗಿ ಆರಾಮದಲಿ ಹಳಿದ ಮಾತಿನ ಲೆಕ್ಕ ನನಗೆ ಗೊತ್ತಿಲ್ಲ

ಕುರಿಗಿರದು ಮತಿಯೆಂಬರು ಲೋಗರು ದಂಡಿಸುತ್ತಾ ನಿತ್ಯ
ಜರಿದರೂ ಬಾಗಿ ಮಾಡಿದ ನಮನ ಲೆಕ್ಕ ನನಗೆ ಗೊತ್ತಿಲ್ಲ

ಇರುವುದೇ ಕಾಲಕ್ಕೆ ನಿಲುಗಡೆಯೆನುವ ಸತ್ಯ ತಿಳಿ ಸುರೇಶ
ಕೊರಗಿ ಸೊರಗಿ ಉಪವಾಸವಿದ್ದ ದಿನ ಲೆಕ್ಕ ನನಗೆ ಗೊತ್ತಿಲ್ಲ.


ಡಾ ಸುರೇಶ ನೆಗಳಗುಳಿ

About The Author

3 thoughts on “ಡಾ ಸುರೇಶ ನೆಗಳಗುಳಿ ಕವಿತೆ ಗಜ಼ಲ್”

  1. ವಾಸ್ತವ ಪರಿಸ್ಥಿತಿ ಬಿಂಬಿಸುವ ಗಜ಼ಲ್…ತುಂಬಾ ಮಾರ್ಮಿಕ ಸಾಲುಗಳು ಸರ್..
    ಹಮೀದಾ ಬೇಗಂ .ಸಂಕೇಶ್ವರ.

Leave a Reply

You cannot copy content of this page

Scroll to Top