ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯಸಂಗಾತಿ

ಇದ್ದೂ ಇಲ್ಲದಂತಿರಬೇಕು

ಅನ್ನಪೂರ್ಣ ಸು ಸಕ್ರೋಜಿ

ಇರಬೇಕು ಎಲ್ಲರೊಳಗೊಂದಾಗಿ
ತನ್ನಾಳದೊಳಗಿಳಿದಿರಬೇಕು
ಇದ್ದೂ ಇಲ್ಲದಂತಿರಬೇಕು

ಜಗದ ಜಂಜಡದಲಿ ಸಿಕ್ಕಿದ್ದರೂ
ಜಗದ ನಂಟಿಗೆ ಅಂಟಿಕೊಳ್ಳದೇ
ಉಂಟಾಗುವ ಭಾವವಿರಬೇಕು

ಹೊಗಳಿಕೆ ತೆಗಳಿಕೆಗಳನ ಇದ್ದಂತೆ
ಸ್ವೀಕರಿಸುತ ಮುಗುಳ್ನಗುವ ಕಲೆ
ಕರಗತವಾಗಿರಬೇಕು ಮನುಜಾ

ಭೋಗದಲಿ ತ್ಯಾಗವಿರಬೇಕು
ತ್ಯಾಗದಲಿ ತಾ ವಿರಾಗಿಯಾಗಿ
ಮಹಾ ಶಿವಯೋಗಿಯಾಗಿರಬೇಕು

ನಮ್ಮೊಳಗಿದ್ದೂ ಕಾಣದಂತಿರುವ
ಜೀವನದ ಆಧಾರವಾಗಿರುವ
ಪಂಚತತ್ವಗಳನರಿತುಕೊ ಜೀವ

ಬೆಳಗುವ ಸಾಕ್ಷಿರೂಪ ಸೂರ್ಯ
ಸಂದಿಗೊಂದಿಗಳಲಿಯ ಕತ್ತಲು
ಕೊಳಕು ತೆಗೆದರೂ ತಾ ನಿರ್ಲಿಪ್ತ

ಜೀವಿಗಳ ಇರುವಿಕೆಗೆ ಮರುತ
ದುರ್ಗಂಧ ಸುಗಂಧಗಳೆರಡನೂ
ಪಸರಿಸುವನಾದರೂ ತಾ ನಿರ್ಲಿಪ್ತ

ವ್ಯಷ್ಟಿಯಲಿ ಹಸಿವಿನ ರೂಪದಿ
ಸಮಷ್ಟಿಯಲಿ ವೈಶ್ವಾನರ ಅಗ್ನಿ ಎಲ್ಲ ನುಂಗಿದರೂ ತಾ ನಿರ್ಲಿಪ್ತ

ಮೈ ಮನಗಳ ಸ್ವಚ್ಛಗೊಳಿಸುವ
ಗಂಗೆ ತುಂಗೆಯರು ಸತ್ತ ದೇಹ
ಜೀವಂತ ದೇಹ ಸಮಗಾಣುವರು

ಕ್ಷಮಯಾ ಧರಿತ್ರಿಯ ನಿಶ್ಚಿಂತತೆ
ಸ್ಥಿರತೆ ನಿಶ್ಚಲತೆ ಬೇಕು ಮನಕೆ
ಸ್ಥಿತಪ್ರಜ್ಞ ಭಾವ ಜಾಗೃತವಿರಬೇಕು

ಧ್ಯಾನ ಮೌನದಿ ಕಂಡುಂಡ ಜೀವ
ಅನುಭೂತಿಯಿಂದ ಅರಳುವದು
ಇದ್ದೂ ಇಲ್ಲದಂತಾಗಿರುವದು ಜಗದಿ


About The Author

Leave a Reply

You cannot copy content of this page

Scroll to Top