ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯಸಂಗಾತಿ

ಉನ್ಮತ್ತ ದೊರೆಯೂ ಮತ್ತು ಪಾರಿವಾಳ…!

ದೇವರಾಜ್ ಹುಣಸಿಕಟ್ಟಿ

ಗೊತ್ತೇನು ಪಾರಿವಾಳದ ಹಕೀಗತ್ತು…?

ಗೆಳೆಯ…!

ಅಜ್ಜ ಕಟ್ಟಿದ ಗೂಡಂಗಡಿಯ ಮಾಡಿನಲ್ಲಿ ಪಾರಿವಾಳದ ಗೂಡೊಂದಿತ್ತು….!
ಅದು ರೆಕ್ಕೆ ಬಿಚ್ಚಿ ಹಾರಿದಾಗಲೆಲ್ಲ
ಅಜ್ಜನಿಗೋ…!

ಬಿಡುಗಡೆಯ….
ಬಿಡುಗಡೆಯ…..
ಬಂಧನದ ಬಿಡುಗಡೆಯ…ಹಾಡಿನಲಿ
ಬಿಳಿಯ ಬಟ್ಟೆ ತೊಟ್ಟ
ಬುದ್ಧನದೇ ನೆನಪೊಂದಿತ್ತು…!!

ಗೊತ್ತೇನು ಪಾರಿವಾಳದ ಹಕೀಗತ್ತು…?

ಗೆಳೆಯ….!

ಕತ್ತಗಲಿಸಿ…
ಕಣ್ಣರಳಿಸಿ…
ಬಿಡುವಷ್ಟರಲ್ಲಿ….

ಅಪ್ಪ ಕಟ್ಟಿದ ಸೂರೊಂದಿತ್ತು…
ಸೂರಂಗಳದ ಮರದಲ್ಲಿ
ಪಾರಿವಾಳದ್ದೆ ಹಾಡಿಯೊಂದಿತ್ತು..
ಮಹಡಿಯ ಮೇಲೆಲ್ಲಾ ಹಾರಿದಾಗಲೆಲ್ಲ ಅಪ್ಪನಿಗೋ
ದಾಸ್ಯದ ಸರಳು..
ದಾಸ್ಯದ ಮುಳ್ಳು…
ದಾಸ್ಯದ ಕಡಲು……
ದಾಟಿದಂತ…..
ನಮ್ಮ ಗಾಂಧಿ ತಾತ…
ಶಾಂತಿ ದೂತ….
ನೆನಪೇ ಹಾಡಿ ತುಂಬಾ ಹರಿಡಿ ಕೊಂಡಿರುತಿತ್ತು…!!

ಗೊತ್ತೇನು ಪಾರಿವಾಳದ ಹಕೀಗತ್ತು…?

ಗೆಳೆಯ…!

ಹಿಂದೆಲ್ಲ ಪಾರಿವಾಳಗಳ
ರೆಕ್ಕೆ ಬಿಚ್ಚಿ ಹಾರಲು ಬಿಡುವುದಿತ್ತು…
ರಾಜಕಾರಣದ ಮದ್ಯೆಯೂ
ಅವರಿಗೆಲ್ಲ ಈ ಅಮನಿನ ಚಿಂತೆಯಿತ್ತು..!
ಚಮನಿನಲ್ಲಿ ಹೂವು ಅರಳುವುದು ಬೇಕಿತ್ತು….!

ಈಗಿಗೇನಿಲ್ಲ ಗೆಳೆಯ……
ಚಿತೆಯ ಹುಕಿಯಲ್ಲಿ ಮೈ ಕಾಯಿಸಿ
ಕೊಳ್ಳುವವರ ಜಮಾನಾ ಬಂದಿತ್ತು…..!
ಇಲ್ಲಿ ಬರೀ ಚಿತಾಗಳದ್ದೇ ಹಾವಳಿ ಉಳಿದಿತ್ತು….!!
ಗೊತ್ತೇನು ಪಾರಿವಾಳಗಳ ಹಕೀಗತ್ತು…!

ಗೆಳೆಯ….!
ಹಾರುವುದೆಂದರೆ ಬರೀ ಹಾರಾಟವಲ್ಲವದು….!

ಮನಕಿ ಬಾತಿದು ಕೇಳಿಸಿಕೋ….!!

ಸರಹದ್ದುಗಳ ದಾಟುವುದಿತ್ತು..!
ಸರಳುಗಳ ಮುರಿಯುವುದಿತ್ತು…!
ಬೆಸೆದ ಹೃದಯಗಳ ಪ್ರೀತಿ ಸಂದೇಶವಿತ್ತು …!!

ಉನ್ಮತ್ತ ದೊರೆಗೇನು ಗೊತ್ತು
ಪಾರಿವಾಳದ ಹಕೀಗತ್ತು…!!


About The Author

Leave a Reply

You cannot copy content of this page

Scroll to Top