ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಗಜಲ್

ಪ್ರಭಾವತಿ ಎಸ್ ದೇಸಾಯಿ

ಒಲವ ಹೊಳೆಯಲಿ ರಾಸಕ್ರೀಡೆ ಜೊತೆಯಾಗಿ ಆಡಲಿಲ್ಲ ಅವನು
ಹೃದಯ ಗೂಡಲಿ ಪ್ರೀತಿಯ ನಂದಾದೀಪ ಹಚ್ಚಲಿಲ್ಲ ಅವನು

ಕಲ್ಯಾಣ ಮಂಟಪದಲಿ ಬದಲಿಸಿದ ಸುಮ ಮಾಲೆಗಳು ಬಾಡಿವೆ
ಅನುರಾಗದ ಬದುಕಿಕೆ ಮುತ್ತಿನ ಹಾರವ ಹಾಕಲಿಲ್ಲ ಅವನು

ಬಾನ ತಾರೆಗಳ ಎಣಿಸುತಾ ಮಲಗಿದೆ ಬಯಲ ಹೂ ಮಂಚದಲಿ
ಹುಣ್ಣಿಮೆಯ ಚಂದಿರನಾಗಿ ಎದೆ ಕಡಲು ಉಕ್ಕಿಸಲಿಲ್ಲ ಅವನು

ಸಾಂಗತ್ಯ ಬಯಸಿದ ತನು ಮನಗಳು ನರಳುತಿವೆ ಏಕಾಂತದಲಿ
ವಿರಹದ ತಾಪಕೆ ತಂಪಿನ ಚಂದನವ ಲೇಪಿಸಲಿಲ್ಲ ಅವನು

ಮಾಗಿದ ಸಿಹಿ ಹಣ್ಣು ತಿನಿಸಿದರೂ ಕಾಣದು ತೃಪ್ತಿಯ ಭಾವ
ಮನಸು ಅರಳಿಸುವ ಮೋಹದ ಪಿಸುಮಾತು ಆಡಲಿಲ್ಲ ಅವನು

ಕಿಟಕಿಯಿಂದ ತೂರಿಬಂದ ಬೆಳದಿಂಗಳು ಇಡುತಿದೆ ಕಚಗುಳಿ
ಮೌನದಿ ನಾಚಿ ಕಂದೀಲು ನಂದಿಸಿದ್ದು ತಿಳಿಯಲಿಲ್ಲ ಅವನು

ಮರಳುಗಾಡಿನಲಿ ಬಾಳ ಬಂಡಿಯ ಎಳೆದು ದಣಿದೆ ” ಪ್ರಭೆ”
ಬಳಲಿದಾ ದೇಹಕ್ಕೆ ಒಲವಿನ ಸಿಹಿ ನೀರು ಕುಡಿಸಲಿಲ್ಲ ಅವನು


About The Author

Leave a Reply

You cannot copy content of this page

Scroll to Top