ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಏನ ಮಾಡಲಿ ಹೇಳು

ವಿನಯಚಂದ್ರ

ಚಾಚಿರುವ ನಿನ್ನ ಕೈಯ
ಹಿಡಿಯಲೇ ಬಿಡಲೇ

ಹರಿವು ಕಡಿಮೆಯಾಗಿ ದಡದಲಿ ಹೂಳು
ತುಂಬಿರುವ ಹೊಳೆ
ನಾಲ್ಕು ಹೆಜ್ಜೆ ದಾಟಿದರೆ
ತಿಳಿನೀರ ತೊರೆ
ಇದಾವ ಹಿರಿದೆಂದು ದಾಟುವ ಉತ್ಸಾಹದಲಿ
ನಡೆದು ಬಿಟ್ಟಿದ್ದೇನೆ
ಕಲ್ಲುಗಳ ಕೊರಕಿನಲಿ
ಸಿಲುಕಿದೆ ಪಾದ, ಹೊರಳಿದಷ್ಟೂ ಗೀರು ಗಾಯ
ಹೆಜ್ಜೆಯೆತ್ತಿಡಲಾರದೆ ಪರಿತಪಿಸುತ್ತಿರುವೆ
ಮುಂದಡಿಯಿರಲಿ, ಹಿಂದಡಿಯಿಡಲೂ ಸಿಗದ ಅವಕಾಶ

ಅದೆಲ್ಲಿಂದಲೋ ರೆಕ್ಕೆ ಪಟಪಟಿಸುತ್ತ
ಹಗುರಾಗಿ ಹಾರಿ ಬಂದಿಹೆ ನೀನು
ಆಗಸದಲ್ಲೆ ನಿಂತು ಕೈಯ ಚಾಚಿರುವೆ
ಹಿಡಿಯಲೇ ಬಿಡಲೇ
ನನ್ನ ಭಾರವ ಹೊತ್ತು ಹಾರಬಲ್ಲೆಯಾ ನೀನು
ಹಾರುವ ನಿನ್ನನೂ
ನೆಲಕಪ್ಪಳಿಸಿಬಿಡುವೆನೇ ನಾನು..

ಕದ ತಟ್ಟುವುದು ವಿಧಿ
ಕದ ತೆರೆಯುವುದು ವಿಧಿ
ಕೊರಕಲಲಿ ಕಾಲ ಸಿಲುಕಿಸಿರುವುದು ವಿಧಿ
ನಾನೇನು ಮಾಡಲಿ ಹೇಳು ನೀನು


About The Author

2 thoughts on “ಏನ ಮಾಡಲಿ ಹೇಳು- ವಿನಯಚಂದ್ರ ರವರ ಕವಿತೆ”

Leave a Reply

You cannot copy content of this page

Scroll to Top