ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯಸಂಗಾತಿ

ಗಝಲ್

ಡಾ. ನಾಗರತ್ನ ಅಶೋಕ ಭಾವಿಕಟ್ಟಿ

ಎಳೆದರೆ ಏಳುತಿಲ್ಲ ಜಗ್ಗಿದರೆ ಹಿಗ್ಗುತಿಲ್ಲ
ಅಲ್ಲೊಂದು ಕಲ್ಲಿದೆ
ದೂಡಿದರೆ ಸರಿಯುತಿಲ್ಲ ಮುಟ್ಟಿದರೆ ನುಲಿಯುತಿಲ್ಲ
ಅಲ್ಲೊಂದು ಕಲ್ಲಿದೆ

ಮೌನದಿ ನಿಲ್ಲುತಿಲ್ಲ ಮಾತಿಗೆ ಮರುಗುತಿಲ್ಲ
ನೀರೆ ಸುರಿದರೂ ಕರಗುತಿಲ್ಲ
ನೆನೆದರೆ ಅರಳುತಿಲ್ಲ
ಕಣ್ಣ ಕರೆಗೂ ತಿರುಗುತಿಲ್ಲ
ಅಲ್ಲೊಂದು ಕಲ್ಲಿದೆ

ಸಣ್ಣ ಧ್ವನಿಗು ನೋಡುತಿಲ್ಲ
ಕಿರುಚಿ ಕೇಳುತಿರೆ ಹೇಳುತಿಲ್ಲ
ಮುದ್ದು ಮಾಡುತಿರೆ ಅರಿವಿಲ್ಲ
ಅಲ್ಲೊಂದು ಕಲ್ಲಿದೆ

ಜಪ್ಪಯ್ಯ ಎಂದರೂ ಜರಿಯುತಿಲ್ಲ
ಹೊರಟೆನೆಂದರೂ ಜಗ್ಗುತಿಲ್ಲ
ಹೊಡೆವೆನೆಂದರೂ ತಡೆಯುತಿಲ್ಲ
ಅಲ್ಲೊಂದು ಕಲ್ಲಿದೆ

ಜಜ್ಜಿದರೂ ಮುರಿಯುತಿಲ್ಲ
ಜಾಗ ಬಿಟ್ಟು ಕದಲುತಿಲ್ಲ
ಎಷ್ಟು ಬೈದರೂ ಮುನಿಯುತಿಲ್ಲ
ಅಲ್ಲೊಂದು ಕಲ್ಲಿದೆ

ಗುಡುಗು ಮಿಂಚು ಬಡಿದರೂ ಅಲ್ಲಿ
ಒಂದು ಬಿರುಕೂ ಕಾಣುತಿಲ್ಲ
ಒತ್ತಿ ಹಿಡಿದರೂ ಒಳ ಇಳಿಯುತಿಲ್ಲ
ಅಲ್ಲೊಂದು ಕಲ್ಲಿದೆ

ಒಲವ ತೋರುತಿರೆ ಒಲಿಯುತಿಲ್ಲ
ರತುನಳ ಮನವ ಅರಿಯುತಿಲ್ಲ
ಕಲ್ಲುಹೃದಯಕೇಕೋ ಚೂರು ಕರುಣೆಯಿನಿತಿಲ್ಲ
ಅದೇ ಅಲ್ಲೊಂದು ಕಲ್ಲಿದೆ


About The Author

Leave a Reply

You cannot copy content of this page

Scroll to Top