ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಹೀಗೆಯೇ ಬಂದು ಬಿಡುತ್ತಾರೆ ಕೆಲವರು

ಶೀಲಾ ಭಂಡಾರ್ಕರ್.

ಮೌನವಾಗಿದ್ದ, ಶೂನ್ಯವಾಗಿದ್ದ,
ಏಕಾಂಗಿ ಬದುಕಿನೊಳಗೆ,
ಒಮ್ಮೆಲೇ ಬಂದು ಬಿಡುತ್ತಾರೆ ಕೆಲವರು
ಇದ್ದಕ್ಕಿದ್ದಂತೆ ಅಕಾಲದ ಮಳೆ ಹನಿಗಳು
ರಸ್ತೆಯಲ್ಲಿ ನಡೆಯುವವರನ್ನು
ತೋಯಿಸಿದ ಹಾಗೆ.

ಛತ್ರಿಯನ್ನು ಮನೆಯಿಂದ
ತರುವುದರೊಳಗೆ
ತಂದರೂ ಬಿಚ್ಚುವುದರೊಳಗೆ
ಅಥವಾ ಹಾಗೇ ಸುಮ್ಮನೆ
ತೋಯುವುದು ಕೂಡ
ಅಪ್ಯಾಯವೆನಿಸುವ ಹಾಗೆ

ಭೋರೆಂದು ಸುರಿಸುರಿದು
ಬಟ್ಟೆಗಳ ಮೇಲೆ,
ಮುಚ್ಚದ ಅಂಗಾಂಗಗಳ ಮೇಲೆ,
ಕಣ್ಣುಗಳೊಳಗೆ, ಕಿವಿಗಳಲ್ಲಿ,
ಮುಟ್ಟಲಾಗದ ದೇಹದ
ಸಂಧಿಗೊಂದಿಗಳಲ್ಲಿ,
ದಾರಿ ಹುಡುಕುತ್ತಾ, ನುಸುಳಿದಂತೆ
ಬಂದು ಬಿಡುತ್ತಾರೆ ಕೆಲವರು
ಮೌನವಾಗಿದ್ದ ಏಕಾಂಗಿ ಬದುಕಿನೊಳಗೆ.

ಖುಷಿಯೆನಿಸುತ್ತದೆ
ರಸ್ತೆಯಲ್ಲಿ ನಡೆಯುತ್ತಿರುವಾಗ
ಅಚಾನಕ್ಕಾಗಿ ಹೀಗೆ ಒದ್ದೆಯಾಗುವುದು
ಏನೋ ಒಂದು ರೀತಿಯ
ಖುಷಿ ಕೊಡುತ್ತದೆ.

ಮಳೆ ಸಂಪೂರ್ಣ ನಿಂತ ಮೇಲೆ
ಇನ್ನೂ ನಡೆಯುತ್ತಲೇ ಇರುವಾಗಲೇ
ಮೋಡಗಳೆಡೆಯಿಂದ ಇಣುಕುವ
ಬಿಸಿಲಿಗೆ ಬಟ್ಟೆ, ನಾನು
ಮತ್ತು ನನ್ನ ಮೈಮೇಲಿನ ಹನಿಗಳು..
ಒಣಗುತಿದ್ದೇವೆ.

ಇನ್ನು ಮನೆವರೆಗಿನ ದಾರಿ
ಮಳೆ ಬರದೆ ಬಿಸಿಲು ಸುರಿದರೆ ಸಾಕು.
ಮಳೆಗೆ ತೋಯ್ದ ಎಲ್ಲವೂ ಒಣಗಿದರೆ
ಖುಷಿ ಇದೆ..ಹೀಗೆ ಒದ್ದೆಯಾಗುವುದರಲ್ಲೂ.

ಹೀಗೆಯೇ ಬಂದು ಬಿಡುತ್ತಾರೆ ಕೆಲವರು
ಇದ್ದಕ್ಕಿದ್ದಂತೆ ಅಕಾಲದ ಮಳೆ ಹನಿಗಳು
ರಸ್ತೆಯಲ್ಲಿ ನಡೆಯುವವರನ್ನು
ತೋಯಿಸುವ ಹಾಗೆ.


ಶೀಲಾ ಭಂಡಾರ್ಕರ್.

About The Author

Leave a Reply

You cannot copy content of this page

Scroll to Top