ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಜುಗಲ್ ಬಂದಿ

ಖಾಲಿತನದ ಗಳಿಗೆಯ ಕವಿತೆಗಳು

ಬದುಕಿನ ಖಾಲಿತನದ ಕುರಿತಾಗಿ ಕವಯತ್ರಿ ಶ್ರೀಮತಿ ವೀಣಾ ಪಿ. ಹಾಗೂ ಮಾಧವ ‘ತನ್ನ ಗುರುತನ್ನು ಹೊರಜಗತ್ತಿಗೆ ತೋರಿಸಿಕೊಳ್ಳಲಿಚ್ಛಿಸದ ಕವಿ’ – ಇವರಿಬ್ಬರ ಕಾವ್ಯ ಜುಗಲ್ ಬಂದಿ ಸಂಗಾತಿ ಓದುಗರಿಗಾಗಿ

ಖಾಲಿತನದ ಗಳಿಗೆಯ ಕವಿತೆಗಳು

ಗಳಿಗೆ- ೪

ಹಗೆಯಾಡುವ ಜಗವ ಜರೆ
ಮೆದುವಿರದ ಮನವ ಮರೆ

ಜರೆಯದಿರು ಶಬ್ದಗಳ
ಎದೆಯ ಬಗೆಯುವವೆಂದು
ಮರೆಯದಿರು ಮಾತುಗಳ
ಮನವ ಸುಡುವವೆಂದು

ಎತ್ತಿನ ಜ್ವರಕ್ಕೆ ಎಮ್ಮೆಗೇಕೆ ಬರೆ..!!??

ನುಡಿಯೆಂಬುದೊಂದು ಕಿಡಿ
ಬೇಡವೆಂದರಾಗದು
ಹೊತ್ತಿಸದಿದ್ದರೊದಗದು
ಭಾವಗವಳ..
ಮತಿ-ಮನಗಳ ಹೊಟ್ಟೆಗೆ
ತಣ್ಣೀರು ತಟ್ಟಿ
ಮಲಗಿಸಲಾದೀತು ಎಷ್ಟು
ಕಾಲ?!

ಮೌನದ ಜಿದ್ದು ಬೇಡ;
ಮಾತಿಗೊಲಿ…
ಮಾತೇ ಮಹಾದೇವ
ಮಾಧವ..

ವೀಣಾ ಪಿ.

ಜಗವ ಜರೆಯ ಬಲ್ಲೆ
ಹಗೆಯ ಗೆಲ್ಲಬಲ್ಲೆ
ಜೊತೆ ನೀಡಿದರೆ ನೀನು

ಒಲವ ಶಬುದಗಳ
ಉಸುರುವೆ
ಉರಿವ ಬೆಂಕಿಯ
ಹಣತೆಯಾಗಿಸುವೆ
ಹೇಳು ಎನ್ನೊಡನೆ ಹೆಜ್ಜೆ
ಹಾಕುವೆಯೇನು

ಜಿದ್ದು ಕುದ್ದುಗಳ
ಮೀರಿನಿಂತಿಹೆ
ನಿನ್ನ ಸಮ್ಮತಿಗಾಗಿ ಕಾದಿಹೆ

ಮಾತು ಮೌನ
ಜಿದ್ದು ಹಗೆಗಳ
ವಾದವಿವಾದಗಳ ದಾಟಿ
ಬದುಕೋಣ

ನನ್ನೆದೆಗೆ ಅಡಿಯಿಡು
ಖಾಲಿ ಮನವ ಪ್ರೇಮದಿ
ತುಂಬಿಸಿಬಿಡು
ಕಾಯುತಿಹನೀ ಮಾಧವ
ಬೊಗಸೆಯಲಿ ತುಂಬಿ
ಒಲವ..

ಮಾಧವ

———-ಮುಂದುವರೆಯುವುದು ———


ವೀಣಾ ಪಿ

ಶ್ರೀಮತಿ ವೀಣಾ ಪಿ., ಹರಿಹರ …
ಇತಿಹಾಸ ಉಪನ್ಯಾಸಕಿ, ಸಂಶೋಧಕಿ, ಕವಯಿತ್ರಿ ಹಾಗೂ ಬರಹಗಾರ್ತಿಯಾಗಿದ್ದು, ಕನ್ನಡ ಸಾಹಿತ್ಯ ಹಾಗೂ ಐತಿಹಾಸಿಕ ಸಂಶೋಧನಾ ಕ್ಷೇತ್ರದಲ್ಲಿ ಅತೀವ ಆಸಕ್ತಿಯಿಂದ ತೊಡಗಿಸಿಕೊಂಡಿದ್ದು, ಇವರ ಚೊಚ್ಚಲ ಕೃತಿ “ಭಾವೋದ್ದೀಪ್ತಿ”ಯು ಕನ್ನಡ ಪುಸ್ತಕ ಪ್ರಾಧಿಕಾರದ ಪ್ರೋತ್ಸಾಹ ಧನ ಯೋಜನೆಯಡಿ ಆಯ್ಕೆಗೊಂಡು ಪ್ರಕಟಗೊಂಡಿದೆ. ಬದುಕಿನಲ್ಲಿ ಭರವಸೆಗಳ ಬೆಂಬತ್ತುವಿಕೆ ಇವರ ಬರವಣಿಗೆಯ ಮೂಲ ಆಶಯವಾಗಿದೆ.

About The Author

Leave a Reply

You cannot copy content of this page

Scroll to Top