ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯಸಂಗಾತಿ

ಪರವಾನಿಗೆ ಬೇಕಿಲ್ಲ

ದೇವರಾಜ್ ಹುಣಸಿಕಟ್ಟಿ

tree that fights for life on a rock

ನಿನ್ನಂತೆಯೇ ಅದೆಷ್ಟು
ಬಾದಶಾಗಳು ಹುಟ್ಟಿಸತ್ತಿದ್ದಾರೆ
ಗಾಯಗಳು ಮಾಯಲು
ಪರವಾನಿಗೆ ಬೇಕಿಲ್ಲ
ಹರಿವ ನದಿ ಕಡಲು ಕೂಡಲು
ಶಿರ ಬಾಗಿಸಿ ಕೈ ಚಾಚಿ
ಜಗದೊಡೆಯನ ಜೊತೆ
ಪಿಸುಮಾತನಾಡಲು
ಪರವಾನಿಗೆ ಬೇಕಿಲ್ಲ……!!

ನಿನ್ನಂತೆಯೇ ಅದೆಷ್ಟು ರಕ್ಕಸರು
ಜನರ ರಕ್ತವನೆ ಬಸಿದವರು
ಮಣ್ಣಲ್ಲಿ ಮಣ್ಣಾಗಿದ್ದಾರೆ
ಹಕ್ಕಿ ರೆಕ್ಕೆಬಿಚ್ಚಿ ಮುಗಿಲೆತ್ತರಕೆ ಹಾರಲು
ಎದೆಯ ನೋವ ಬಿಕ್ಕಲು
ನನ್ನವರು ಉಂಡುಟ್ಟು
ಬೆವರ ಹರಿಸಿ ದುಡಿಯಲು
ಒಂದು ದಿನ ನಿನ್ನಂತಯೇ ಮಡಿಯಲು…!
ಪರವಾನಿಗೆ ಬೇಕಿಲ್ಲ….!!

ನಿನ್ನಂತೆಯೇ
ಅದೆಷ್ಟು ಬಣ್ಣಹಚ್ಚಿ
ನಟಿಸಿರಬೇಕು ಹಗಲು
ವೇಷದಾರಿಗಳು……
ನೆಲದಿಂದ ಬೀಜ
ಮೊಳೆಕೆಯೊಡೆದು ಚಿಗುರಾಗಲು
ತಟ್ಟೆ ತುಂಬಿ ಹಸುವ ನೀಗಲು…
ಪೇರೆದಾರರ ಪರವಾನಿಗೆ ಬೇಕಿಲ್ಲ..!!

ಸುರಿವ ಮಳೆಗೆ…..!
ಸುಳಿವ ಗಾಳಿಗೆ…..!
ಬಿರಿವ ಹೂವಿಗೆ….!
ಸೂಸುವ ಬೆಳಕಿಗೆ…!
ಯಾರಪ್ಪನ ಪರವಾನಿಗೆ ಬೇಕಿಲ್ಲ…!!
ಎದೆಯ ಕರುಣ ರಸಕೆ
ಪರವಾನಿಗೆಯ ಜರೂರತ್ತು ಇಲ್ಲಾ…!!


About The Author

Leave a Reply

You cannot copy content of this page

Scroll to Top