ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯಯಾನ

ಶ್ರೀಕೃಷ್ಣನ ಬೀಳ್ಕೊಡುಗೆ

ಅಭಿಜ್ಞಾ ಪಿ ಎಮ್ ಗೌಡ

ಬೆರಳ ತುದಿಯಲಿ ವಂಶಿ ಜಾರಿದೆ
ಕರವ ಪಿಡಿದಿಹೆ ನಿಲ್ಲು ಮಾಧವ
ತೊರೆದು ಸಾಗುವ ಪರಿಯು ನಿನ್ನೊಳು ಬಂದಿರುವುದೇಕೆ|
ಸರಿದು ಹೋಗದ ನೆನಪ ದೋಣಿಯು
ಕರೆದು ಕೂಗಿವೆ ಕೊಳಲ ದನಿಯಲಿ
ಹರಿದು ಬರುತಿಹ ಚೆಲುವ ಗಾನದ ದಿವ್ಯ ರಾಗದಲಿ||

ಮಥುರ ನಗರವ ಬಿಟ್ಟು ಹೋಗುತ
ವಿತತಿಗೊಳ್ಳುವ ಸಾರ ಭಾವವು
ಜತನವಾಗದೆ ಹೊರಟು ನಡೆದಿದೆ ನವ್ಯ ಕಾಲದಲಿ|
ಮಿಥುನವಾಗದೆ ಗರವು ಬಡಿದಿದೆ
ಪತನಗೊಳ್ಳುವ ಯಮುನೆ ತಟವದು
ಸತತವಾಗಿಯೆ ಮನದ ನೀರಸ ಭಾವ ತುಳುಕುತಿದೆ||

ಯಮುನೆ ಸೊರಗಿದೆ ತರುವು ಬಾಡಿವೆ
ಸುಮದ ಬನವದು ಬೆಸ್ತು ಬಿದ್ದಿದೆ
ನಮನ ಮಾಡುತ ಕೃಷ್ಣನೆನೆಯುತ ನಿಂತು ಗೋಕುಲದಿ||
ಮಮತೆ ಸಲಿಲವು ಮೌನವಾಗಿದೆ
ಸಮತೆ ಬೀರುವ ಖಗವು ಕೊರಗಿವೆ
ಘಮದ ಪುಷ್ಪವು ಬಾಡಿ ತೂಗಿವೆ ಕಾಲ ಮಹಿಮೆಯಲಿ||

ರಾಧೆ ಮನದಲಿ ದುಃಖ ಮಡುವದು
ಹಾದಿಯುದ್ಧಕು ಕೂಗಿ ಕರೆದಿದೆ
ಬಾಧೆಯಿಂದಲೆ ಚೆಲುವೆ ಕಣ್ಣಿನ ನೀರ ಹರಿಸುತಲಿ|
ಕಾದು ಕುಳಿತಳು ರಾಧೆ ವನದಲಿ
ಸಾಧು ಮನವದು ಚಿಂತೆ ಗೂಡಲಿ
ವಾದ ಮಾಡದೆ ಕಳಿಸಿ ಕೊಟ್ಟಳು ಸಾಧ್ವಿ ಸಾರಿಕೆಯು|

ವೇಣು ನಾದವ ನೆನೆದು ಕರೆದಳು
ತಾಣದೊಂದಿಗೆ ಬೆರೆತು ಕಳೆದಳು
ಕಾಣದಂತೆಯೆ ಮುರುಳಿ ಲೋಲನ ಕೊಳಲ ಲೀನದಲಿ|
ಬಾಣದಂತಯೆ ಬೀಸಿ ಬಂದಿಹ
ಜಾಣ ನೆನಪಿನ ಮಾಲೆ ಹೊದ್ದುತ
ಪಾಣಿ ಪಿಡಿಯದೆ ವೇಣು ಸಡಿಲಿಸಿ ಮುಂದೆ ಸಾಗುವನು||

*********************************************

About The Author

1 thought on “ಶ್ರೀಕೃಷ್ಣನ ಬೀಳ್ಕೊಡುಗೆ”

Leave a Reply

You cannot copy content of this page

Scroll to Top