ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕವಿತೆ

ತಿಮಿರ

ಡಾ. ಅಜಿತ್ ಹರೀಶಿ

Night, Light, The Fog, Park, Forest

ಸೂಡಿ ಹಿಡಿದು ಓಡಾಡುವ ಕಾಲದಲ್ಲಿ
ಕೊಳ್ಳಿ ದೆವ್ವಗಳು ಕಾಲಿಗೊಂದು ತಲೆಗೊಂದು
ಹರದಾರಿ ನಡೆದು ಸಾಗುವ ದಿನಗಳಲ್ಲಿ
ಅವುಗಳ ಜಾತ್ರೆ ರಸ್ತೆ ಪಕ್ಕದಲ್ಲಿ

ಕಳೆದ ಬಾಯಿ ಮುಚ್ಚದಂತೆ ಲಾಟೀನು
-ಬೆಳಕಿನಲ್ಲಿ ಕೇಳಿ ಸುದ್ದಿ ಹೆದರಿಕೆ ಬೇಜಾನು
ತಿರುಚಿದ ಪಾದ ಗುರುತರವಾದ ಗುರುತು
ದೆವ್ವ ಕಂಡವನಿಂದ ಇತರರಿಗೆ ತರಬೇತು!

ಕತ್ತಲಿನಲ್ಲಿ ಇಣುಕುವ ಬೆಳಕು, ಬರುವ ಶಬ್ದ
ಎಂತಹವರನ್ನೂ ಮಾಡುವುದು ಸ್ತಬ್ಧ
ಎಲ್ಲರೊಳಗೊಬ್ಬ ಕವಿ, ಆಗ ರವಿಯಿಲ್ಲ
ಕಲ್ಪನೆಗೆ ಕಾಲು ಬಾಲ

ಗಲ್ ಗಲ್, ಸರ ಪರ
ಚಿತ್ತದಲ್ಲಿ ಮೂಡುವ ಚಿತ್ರ
ಗುಂಡಿಗೆಯಲ್ಲಿ ನಡುಕ
ಆಕ್ರಮಿಸುವ ಆತಂಕ

ಅಕ್ರಮಕ್ಕೆ ಸೂಕ್ತ ಅಮಾವಾಸ್ಯೆ
ವಿದ್ಯುತ್ ಕಡಿತಗೊಳಿಸಿಯೂ
ಹುಟ್ಟಿಸುವರು ಅಮಾಸೆಯ ಸಮಸ್ಯೆ
ಚುನಾವಣೆಯ ಹಿಂದಿನ ದಿನ
ಗಂಧದ ಮರ ನಾಪತ್ತೆಯಾದ ಕ್ಷಣ

ಕತ್ತಲು ಬಗ್ಗೆ ಅಜ್ಜಿ ಹೆದರಿಸಿದ್ದು
ಹುಳ ಹುಪ್ಪಟೆ ತುಳಿಯದಿರಲೆಂದು
ಕೂರುತ್ತದೆ ಮಗುವಿನ ಮಿದುಳೆಂಬ
ಹಸಿ ಗೋಡೆಯಲ್ಲಿ ಮಣ್ಣಾಗಿ
ಕತ್ತಲು ಭಯಾನಕ

ಕಪ್ಪಾದಾಗ ನೆರಳು ಮಂದಬೆಳಕಿನಾಟ
ಆಕೃತಿಗಳಿಗೆ ಜೀವ, ಪಿಶಾಚಿ ಕಾಟ
ಆತ್ಮಸ್ಥೈರ್ಯದ ಅಗ್ನಿಪರೀಕ್ಷೆ
ಪಾಪ ಪ್ರಜ್ಞೆ ಭೂತವಾಗಿ ಶಿಕ್ಷೆ

ರಕ್ತ ಕಾರಿ, ಬೆನ್ನಮೇಲೆ ಮೂಡಿ ಬೆರಳು
ಮುರಿದು ಗೋಣು, ಧ್ವನಿಯಡಗಿ
ಸತ್ತವರ ಕತೆಯೆಲ್ಲ ಎದ್ದು ಬಂದು
ಅಂತರ್ಪಿಶಾಚಿಯಾಗಿ ಅಲೆದಾಡಿ

ಮುಗಿಯದ ಕತೆ; ಹೆದರಿ
ಮೂತ್ರ ವಿಸರ್ಜನೆ ಮಾಡಿದವರದು
ಅದನ್ನೇ ದಿಗ್ಬಂಧನದ ವೃತ್ತವಾಗಿಸಿದವರದು

ಕತ್ತಲು ಮಾತ್ರ ದಿಗಿಲು ಸೃಷ್ಟಿಸುವುದಾದರೆ
ಕುರುಡನ ಜೀವನ ಹೇಗೆ?

ಬೆಳಕ ಕಂಡವಗೆ ಕತ್ತಲ ಭಯ
ಬಾಳ ಅನುಭವಿಸಿದವಗೆ ಸಾವ ಭಯ
ಹಗ್ಗ ಹಾವಾಗಿ ಹತನಾಗುವ ಉಪಮೆ
ಅರಿವ ಹಣತೆ ಆರದಿರೆ ನಿತ್ಯ ಹುಣ್ಣಿಮೆ.
**************************************************************

About The Author

2 thoughts on “ತಿಮಿರ”

  1. ಕಾವ್ಯಾ ಹೆಗಡೆ

    ಅರಿವಿನ ಹಣತೆ ಹಚ್ಚುವ ಕವನ, ಚಂದವಿದೆ. ❤️

Leave a Reply

You cannot copy content of this page

Scroll to Top