ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕವಿತೆ

ಅರಣ್ಯ ರೋಧನ

ಗಂಗಾಧರ ಬಿ ಎಲ್ ನಿಟ್ಟೂರ್

kiwi,Brazil,Brasil,fruit

ಪಾಳು ಭೂಮಿಯೊಳು ನಿಂತು
ಫಸಲಿಗೆ ಆಸೆ ಪಡುತ
ತಮ್ಮ ಸೊಂಡಿಲ ಮುಸುರೆ ತಾವೇ ಕುಡಿಯುತ
ಕರೆದರೂ ಕರ್ಮಕೆ ಬಾರದೆ
ಊಟದ ತಕರಾರು ತೆಗೆದು
ಪಂಕ್ತಿ ಭೋಜನ ಬಯಸಿದರೆ
ಕರೆದು ಮಣೆ ಹಾಕಿ
ಭೂರೀ ಭೋಜನ ಬಡಿಸಿ
ಕಿರೀಟವಿಟ್ಟು ಮೆರೆಸುವರೆ ಮಂದಿ

ಭದ್ರ ಕೋಟೆ ತಮದೆಂಬ
ಭ್ರಮೆಯೊಳು ಮುಳುಗಿ
ತಾವೂ ಶೂರ ಧೀರರು
ತಮಗೂ ಪಟ್ಟಗಟ್ಟಿರೆಂದು
ಬೊಬ್ಬೆ ಹೊಡೆವ
ಸ್ವಘೋಷಿತ ಬುದ್ಧಿಜೀವಿಗಳ
ಸೊಲ್ಲೆಂದಿಗೂ ಅರಣ್ಯರೋದನ

ಆಟಾಳು ಮೋಟಾಳು ಕಟ್ಟಾಳು
ಬಿಟ್ಟಾಳುವ ಜಟ್ಟಿಗರಿಗಂಜಿ
ಬಾಣ ಹೂಡಿ ಬತ್ತಳಿಕೆ ಬೀಸದೆ
ತಂತ್ರ ಕುತಂತ್ರಕೆ ರಣವೀಳ್ಯವೀಯದೆ
ರಣಾಂಗಣವನೆಂದೂ ಮೆಟ್ಟದೆ
ಸುಲಭ ಜಯ ಬಯಸಿದವರಿಗಾವ ಹಕ್ಕು

ಗುಳ್ಳೆನರಿ ಬುದ್ಧಿ ತ್ಯಜಿಸದೆ
ಹಮ್ಮು ಬಿಮ್ಮಿನ ಪದ ತ್ಯಾಗ ಮಾಡದೆ
ನಾಡಿನೇಳ್ಗೆಯ ಕೈಂಕರ್ಯಕೆ ಮೈಗೊಳದೆ
ಸೋಲು ಗೆಲುವಿಗೆ ಎದೆಗೊಡದೆ
ಜನಮನವಾದರೂ ಸೂರೆಗೊಳದೆ
ಮೋಡದ ಮರೆಯ ನುಡಿ ವೀರರಾಗಿ
ಪುಕ್ಕಟೆ ಪಾರುಪತ್ಯಕೆ ತವಕಿಸಿ
ಹತಾಶೆ ನಿರಾಸೆಯ ಸೋಗಿನಲಿ
ಸಂಧಿ ಗೊಂದಿಯಲಿ ಸೆಡ್ಡು ಹೊಡೆದು
ತೊಡೆ ಮುರಿದುಕೊಳುವ ಸಡ್ಡಾಳಿಗೆ
ಪರಮವೀರ ಚಕ್ರದ ಹಗಲುಗನಸೇ

ಅಹಮಿಕೆಯ ಕೋಟೆಯಲಿ ಜಗವೇ ಬಂಧಿ
ಮೈ ಕೊಡವಿ ನಿಲ್ಲದವಗ್ಯಾಕೆ ನಾಕಾಬಂಧಿ

********************************************

About The Author

2 thoughts on “ಅರಣ್ಯ ರೋಧನ”

Leave a Reply

You cannot copy content of this page

Scroll to Top