ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಪುಸ್ತಕ ಸಂಗಾತಿ

ಪುಸ್ತಕ ಪರಿಚಯ

ಬೌದ್ಧ ಮದ್ಯಮಮಾರ್ಗ ( ಬುದ್ಧ ನಡೆ-೧)             ಪ್ರಜ್ಞಾಪಾರಮಿತ ಹೃದಯ ಸೂತ್ರ(ಬುದ್ಧ ನಡೆ-೨)       ಲಾವ್ ತ್ಸು ದಾವ್ ದ ಜಿಂಗ್ ಸೂತ್ರಗಳು ( ಬುದ್ಧನಡೆ-೩)      ಮನಮಗ್ನತೆ( ಬುದ್ದನಡೆ -೪) ರೇಶ್ಮಾಗುಳೇದಗುಡ್ಡಾಕರ್  ಬೌದ್ಧ ಮದ್ಯಮಮಾರ್ಗ ( ಬುದ್ಧ ನಡೆ-೧)              ಪ್ರಜ್ಞಾಪಾರಮಿತ ಹೃದಯ ಸೂತ್ರ(ಬುದ್ಧ ನಡೆ-೨)             ಲಾವ್ ತ್ಸು ದಾವ್ ದ ಜಿಂಗ್ ಸೂತ್ರಗಳು ( ಬುದ್ಧನಡೆ-೩)       ಮನಮಗ್ನತೆ( ಬುದ್ದನಡೆ -೪) ಬೆಲೆ : 170 ರೂ. ನೆಮ್ಮದಿಯ ಆಗರ ಬುದ್ಧ ಗುರುವಿನ ಮಾತು ,ಬರಹಗಳು .ಇಂದಿನ ಅಂತರ್ಜಾಲದ ತಾಣದಲ್ಲಿ‌ಯೂ ಬುದ್ಧಗುರುವಿನ ಕೋಟ್ಗಳು ಒಂದು ಪವರ್ ಫುಲ್ tonic ನಂತೆ ಓದುಗರಿಗೆ ಎದುರಾಗುತ್ತದೆ . ಬದುಕಿನ ಒತ್ತಡ,ನಿರಾಸೆ ,ನೋವಿಗೆ  ಸಮಾಧಾನ ನೀಡುತ್ತವೆ, ಇಂತಹ ಬುದ್ಧಗುರುವಿನ ಅಂಗಳ ತಣ್ಣನೆಯ ತಂಪಿನದು ಇಲ್ಲಿ ಉನ್ಮಾದ,ಉದ್ವೇಗ ದ್ವಂದ್ವಗಳಿಗೆ ತಾವಿಲ್ಲ , ಏನಿದ್ದರೂ ಸದೃಢವಾದ ಸಮಚಿತ್ತ  ಮಾತ್ರ ಇಲ್ಲಿ‌ ವಿಹರಿಸುತ್ತದೆ ! ಅದು ಯಾವಕಾಲ ,ಯಾವ ಜಾಗವಾದರೂ ಸರಿಯೇ . ಇಲ್ಲಿ‌ ಯಾವುದೇ ಅಡ್ಡಿ ಆತಂಕ‌ಗಳು ಚಿಗುರೂಡೆಯುವದಿಲ್ಲ. ಬುದ್ಧ ಯುಗ ಯುಗಗಳ ಬೆಳಕು,  ಧ್ಯಾನದ  ಬುದ್ಧ ನೋಡುಗರನ್ನು ಸೆಳೆದರೆ, ಬರಹಗಳು ಓದುಗರನ್ನು ಸೆಳೆಯುತ್ತವೆ. ಹೊಸ ಆಲೋಚನೆಗೆ ಕೊಂಡ್ಯೊಯುತ್ತವೆ.     ಈ ಬುದ್ಧದೇವನ ಅಂಗಳಕ್ಕೆ ಬುದ್ಧ ಮಾರ್ಗದ ನಾಲ್ಕು ರೈನಾ ಪರಿಮಾಣ ಪುಸ್ತಕಗಳು ನಮ್ಮನ್ನು ನೇರ ಕರೆದೊಯ್ಯುತ್ತವೆ . ನಮ್ಮೊಳಗಿನ ಬುದ್ಧಗುರುವನ್ನು ಅನಾವರಣಗೊಳಿಸುವ ಮೂಲಕ ..! ನಮಗೆ ಹತ್ತಿರವಾದ ಭಾಷಾ ಶೈಲಿಯಲ್ಲಿ , ಇಲ್ಲಿ ಬರುವ ಉದಾಹರಣೆ ಪ್ರತಿಯೊಬ್ಬರಿಗೂ ಸರಳವಾಗಿ ಬುದ್ಧ ಗುರುವಿನ ಮಾರ್ಗವನ್ನು ಅರ್ಥೈಸಿಕೊಳ್ಳಲು ನೆರವಾಗುತ್ತವೆ . ಬುದ್ಧ ಗುರುವಿನ ಸಂದೇಶದ ಹೂರಣಕ್ಕೆ ಜೊತೆಯಾಗಿ ಈ ಹೊತ್ತಿಗೆಯಲ್ಲಿ  ಸಂಧರ್ಭಕ್ಕೆ ಅನುಗುಣವಾಗಿ ಬರುವ ಸರಹಪಾದರ ನುಡಿಗಟ್ಟು ,ಅಲ್ಲಮ ಪ್ರಭುಗಳ ವಚನಗಳು ಬುದ್ಧ ಗುರುವಿನ ತಾತ್ವಿಕ ಚಿಂತನೆ , ಬದುಕಿನ ಅರಿವನ್ನು ಮತ್ತಷ್ಟು ಆಳವಾಗಿ ಅರ್ಥೈಸಿಕೊಳ್ಳಲು ನೆರವಾಗುತ್ತವೆ. ಬೌದ್ಧ ಮದ್ಯಮ ಮಾರ್ಗ   ನಿರಂತರ ಬದಲಾಗುತ್ತಿರುವ ಬದುಕಿನ ಪ್ರವಾಹವನ್ನು ಗ್ರಹಿಸಲು ಮಿಥ್ಯದ ಪರದೆ ಕಳಚಲು ನಮಗೆ ಸಹಾಯ ಮಾಡುತ್ತದೆ . ಪೂರ್ವಾಗ್ರಹ ಪೀಡಿತ ದೃಷ್ಟಿ ಕೋನವನ್ನು ನಿವಾರಿಸಿಕೊಂಡು ಹೊಸ ಆಶಾಭಾವನೆಯ ಮುನ್ನೊಟ ಹೊಂದುವದು ,ಸಾಂಧರ್ಭಿಕ ಜಗತ್ತಿನ ಮಹತ್ವ ತಿಳಿಯುವದು ಪ್ರತಿ ಮನದ ಸವಾಲೇ ಸರಿ . ಇದನ್ನು ಬುದ್ಧಗುರುವಿನ ಸಂದೇಶಗಳು ನಮಗೆ ನೆನಪು ಮಾಡುತ್ತವೆ , ಬದಲಾಗುತ್ತಿರುವ ಜಗತ್ತಿನಲ್ಲಿ  ಕಾಡುವ ಆಡಚಣೆ ,ಒತ್ತಡ , ನಿರಾಶೆ ,ಹತಾಷೆ ಭಾವಗಳು ಒಂದೆಡೆಯಾದರೆ ನಮಗರಿವಿಲ್ಲದೆ ಮನದೂಳಗೆ ಹೆಮ್ಮರವಾಗಿರುವ ಈರ್ಷ್ಯೆ ಹಲವಾರು ಸಮಸ್ಯೆಗೆ ದಾರಿಯಿರುತ್ತದೆ ಈ  ಮರವನ್ನು ಬುಡಸಮೇತ ಕಿತ್ತೊಸೆಯಲು ಬುದ್ಧ ಗುರುವಿನ ಚಿಂತನೆಗಳು ನಮಗೆ ಅಗತ್ಯ . ಮೃಗತ್ವದ ಸೆರಗಲ್ಲಿಯು ಮಮತೆಯ ಮಡಿಲು ಇರುತ್ತದೆ ಆ ಮಡಿಲಿಗೂ ಹೃದಯದ ಅಗತ್ಯವಿದೆ ಎಂಬುದನ್ನು  ಹೇಳುವ  ಪ್ರಜ್ಞಾಪಾರಮಿತ ಹೃದಯ ಸೂತ್ರ , ಲೋಕವನ್ನು ಕರುಣೆ ,ವಾತ್ಸಲ್ಯದಿಂದ ಕಣ್ಣುಗಳಿಂದ ಕಾಣಿರಿ ಎಂಬುದನ್ನು ಮನವರಿಕೆ ಮಾಡುತ್ತದೆ ಬುದ್ಧ ಸೂತ್ರ ,ಪಠಣದ ವಿಷಯವಲ್ಲ ಪಾಲನೆಯಲ್ಲಿ ಮೇಳೈಸಿ ಬದುಕಿನಲ್ಲಿ ನೆಮ್ಮದಿಯ ಕಾಣಬೇಕು . ಎಚ್ಚರದ ಪ್ರಜ್ಞೆ ನಮ್ಮ ಮನೋಕೋಶವನ್ನು ತುಂಬಬೇಕು ಅದೃಶ್ಯ ಲೋಕದ ಹಂಬಲ , ಅದರ ಆರಾಧನೆ ವರ್ತಮಾನದ ಅಮೋಘ ಕ್ಷಣಗಳನ್ನು ಕಾಣದಂತೆ ಮಾಡುತ್ತದೆ .ಇಂತಹ ಮನದಿಂದ ಹಗುರಾಗುವ, ಭಾರಗಳನ್ನು ಇಳಿಸುವ ಕಾರ್ಯ ಸುಲಭವಲ್ಲ . ಇದನ್ನು ಬುದ್ಧ ಮಾರ್ಗ  ಓದುಗರ ಮುಂದೆ ಇಡುತ್ತದೆ ಪರ್ಯಾಯ ದಾರಿ ತೋರುತ್ತದೆ . ಭೂತ ,ಭವಿಷ್ಯದ ಚಿಂತೆಯಲ್ಲಿ ವರ್ತಮಾನ ಸದ್ದಿಲ್ಲದೆ ಸರಿದು ವ್ಯರ್ಥವಾಗಿ ಹರಿದು ಹೊಗುತ್ತದೆ ,ಮತ್ತೆ ಇದೇ ವರ್ತಮಾನ ಭೂತವಾಗಿ ಕಾಡುತ್ತದೆ ..! ಮನದ ಬಹುಪಾಲು ಶಕ್ತಿ ಹೀಗೆ  ಕಳೆದು ರಾಶಿ ರಾಶಿ ಚಿಂನೆಗಳನ್ನು ಒಟ್ಟುಮಾಡುವ ಮನಕ್ಕೆ ಮಗ್ನತೆಯಿಂದ ನಿರಂತರ ಚಲನಶೀಲವಾದ ಮನಕ್ಕೆ ಏಕಾಗ್ರತೆಯ ನಿರಾಳತೆನ್ನು ನೀಡಬೇಕಾಗಿದೆ . ಮನಮಗ್ನತೆಗೆ ಇರುವ ವಿವಿಧ ರೂಪಗಳು ಓದುಗರಿಗೆ ಹೊತ್ತಗೆಯಲ್ಲಿ ಸಿಗುತ್ತವೆ .ನಾಗಾಲೋಟದಲ್ಲಿ ಓಡುವ ಮನ ಅದರ ವೇಗ ವನ್ನು ನಿಂಯತ್ರಿಸಲು ಅದು ಹೋಗುತ್ತಿರುವ ದಾರಿಯನ್ನು  ಗಮನಿಸಿ ಸೂಕ್ತವಾದ ದಾರಿಗೆ ತರಲು ಮಾರ್ಗದರ್ಶನ ಅಗತ್ಯ ಈ ಮಾರ್ಗದರ್ಶನಗಳೇ ಬುದ್ಧ ಗುರುವಿನ ಸಂದೇಶಗಳು ಮನಮಗ್ನತೆ ಎಂಬುದು ಕಣ್ಣು ಮುಚ್ಚಿ ಅರಿಯುವದಲ್ಲ ಎಚ್ಚರದ ತಿಳಿವಿದು .ಜಗವನ್ನು ಇಲ್ಲಿರುವ ದೃಶ್ಯಗಳನ್ನು ಕಾಣಲು ದೃಷ್ಟಿ ಒಂದೇ ಸಾಲದು ಆ ದೃಷ್ಟಿಯಲ್ಲಿ ಎಚ್ಚರ ,ಪ್ರಜ್ಣೆ ಇರಲೇ ಬೇಕು .ನಿರಂತರ ಚಲಿಸುವ ಜಗದ ಪ್ರವಾಹದಲ್ಲಿ ನೋಡಿದ್ದು ಬದಲಾಗಿರುತ್ತದೆ ,ಅಥವಾ ಬದಲಾದದ್ದನ್ನೆ ನಾವು ಒಪ್ಪದೆ ಹಾಗೆ ಇದೆ ಎಂದು ನಾವು ಗ್ರಹಿಸುವಲ್ಲಿ ಎಡವಿ ಸಮಸ್ಯಯ ಸರಮಾಲೆಗ ತುತ್ತಾಗುತ್ತೇವೆ . ಈ ತೊಳಲಾಟ , ತಲ್ಲಣಗಳು ಸುದೀರ್ಘವಾಗಿ ಕಾಡಿ ಮನವನ್ನು ಸಂತಸದಿಂದ ದೂರ ಮಾಡುತ್ತವೆ . ಈ ಸಂದರ್ಭದಲ್ಲಿ ಬುದ್ಧಗುರುವಿನ  ತತ್ವಗಳು ನಿಜದ ಅರಿವನ್ನು ತಿಳಿಸುತ್ತವೆ . ಬುದ್ಧಗುರುವಿನ ಸಂದೇಶಗಳು ತಕ್ಷಣ ಬಂದುದಲ್ಲ ,ಅವು ತೋರಿಕೆ,ವೈಭವಕ್ಕೆ ಶರಣಾಗುವದಿಲ್ಲ ಶಾಂತ ಸದೃಢ ಚಿತ್ತ ಹೊಂದಲು ಸಹಕಾರಿಯಾಗುತ್ತವೆ  ಈ ಚಿತ್ತವೆ ನಮ್ಮೊಳಗಿನ ಬುದ್ಧನ ಕಾಣಲು ಸಾದ್ಯ ವಾಗುವಂತೆ ಮಾಡುತ್ತವೆ . ನಮ್ಮೂಳಗಿರು ಬುದ್ಧ ಗುರುವಿನ ದರ್ಶನಕ್ಕೆ ಮನಮಗ್ನತೆ ಅಗತ್ಯವಿದೆ , ನಮ್ಮ ಬದುಕಿಗೆ ನಮ್ಮೊಳಗಿರುವ ಬುದ್ಧನ ಅನಿವಾರ್ಯ ತೆ ಇದೆ , ಬುದ್ಧ ಗುರು ಸತ್ಯದ ಬೆಳಕು ಹೌದು ,ಪ್ರಜ್ಞೆಯ ಪ್ರತೀಕವು ಹೌದು , ದೀರ್ಘ ಕಾಲ ಕಾಡುವ ಋಣಾತ್ಮಕ ಚಿಂತನೆಗಳಿಂದ ಮುಕ್ತರಾಗಿ ಜ್ಞಾನದ ಬೆಳಕಾದ ನಮ್ಮೊಳಗಿನ‌ ಬುದ್ಧನನ್ನು ನಾವು ಆಹ್ವಾನಿಸ ಬೇಕಾಗಿದೆ ಈ ಪುಸ್ತಕಗಳು  ಶಾಂತ ಚಿಂನೆಗಳನ್ನು ಓದುಗರಲ್ಲಿ ಹರಿಸುತ್ತವೆ ಇಡಿಯಾದುದನ್ನು ಬಿಡಿಯಾಗಿ ನೀಡುತ್ತವೆ ಬಿಡಿಯಾದ ವಿಚಾರವನ್ನು ಇಡಿಯಾಗಿಸುತ್ತವೆ . ಈ ಜೀವನ ದುಃಖದ ಸರಮಾಲೆ ಎಂದು ಬುದ್ಧ ಗುರು ಎಲ್ಲಿಯೂ ಹೇಳಿಲ್ಲ , ಈ ಜಗದಲ್ಲಿ ಪ್ರತಿಯೊಂದು ಘಟನೆಗಳು ಕಾರಣವಿಲ್ಲದೆ ಜರುಗವದಿಲ್ಲ , ಮಾಯೆಇಲ್ಲ , ತಂತ್ರಗಳು ಇಲ್ಲ ನಮ್ಮ ನೋಟದ ವೈಫಲ್ಯತೆಯೇ ದುಃಖದ ಮಡುವಿಗೆ ಜಾರಿಸುತ್ತದೆ , ಮಮತೆಯನ್ನು ಮರೆಸಿ ರೋಷ ,ಆವೇಶ ಗಳನ್ನು ಮನ ತುಂಬಿಕೊಂಡು ಸಹಜ ಮಾನವ ಗುಣಗಳಾದ  ಪ್ರೀತಿ ,ಕರುಣೆ , ವಾತ್ಸಲ್ಯ ಸ್ನೇಹ , ಮಾಯವಾಗಿವೆ . ಎಂಬ ತಿಳಿವನ್ನು ಬುದ್ಧ ಗುರುವಿನ ಸಂದೇಶಗಳು  .ಓದುಗರಿಗೆ  ಎರಕಮಾಡುತ್ತವೆ . ಬುದ್ಧ ಗುರುವಿನ ಮಾರ್ಗವೇ ಒಂದು ಬೆಳಕು .ಮಿಥ್ಯದ ವೈಭವತೆಯನ್ನು ಓಡಿಸಿ ಸರಳ ಜೀವನಕೆ ದಾರಿ ಮಾಡುತ್ತದೆ . ದಾವ್ ದ ಜಿಂಗ್ ಸೂತ್ರಗಳು ತತ್ವ ರಸಾನುಭವದಂತೆ ಗೋಚರಿಸುತ್ತವೆ ಬುದ್ಧ ಗುರುವಿನ‌ ಸಂದೇಶದ ಅನುಭವಗಳ ಸಾರದಂತೆ ಓದುಗರ ಮನದಲ್ಲಿ .ಬುದ್ಧ ಮಾರ್ಗವು ಸರಕುಳನ್ನು ಇಳಿಸಿ ನಮ್ಮ ಪಯಣವನ್ನು ಸರಳಗೊಳಿಸುತ್ತದೆ . ಸದಾ ಚಲಿಸುವ ಜಗದಲ್ಲಿ ಬುದ್ಧಗುರುವಿನ ಅಗತ್ಯ ಒಂದು ದಿನಕ್ಕೆ ಸೀಮಿತವಾಗಲು ಸಾದ್ಯವಿಲ್ಲ .ಅದು ನಿರಂತರ ವನಿತ್ಯ ಜೀವನದ ಸಂಜೀವಿನಿ . **************************

ಪುಸ್ತಕ ಪರಿಚಯ Read Post »

ಪುಸ್ತಕ ಸಂಗಾತಿ

ಮಲ್ಲಿಕಾರ್ಜುನ ಕಡಕೋಳ ಅವರ ‘ಯಡ್ರಾಮಿ ಸೀಮೆ ಕಥನಗಳು’ ಪುಸ್ತಕಕ್ಕೆ ಕಲ್ಯಾಣ ಕರ್ನಾಟಕ ಪ್ರಶಸ್ತಿ

ಮಲ್ಲಿಕಾರ್ಜುನ ಕಡಕೋಳ ಅವರ ‘ಯಡ್ರಾಮಿ ಸೀಮೆ ಕಥನಗಳು’ ಪುಸ್ತಕಕ್ಕೆ ಕಲ್ಯಾಣ ಕರ್ನಾಟಕ ಪ್ರಶಸ್ತಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕಲಬುರ್ಗಿ ವಿಶ್ವವಿದ್ಯಾಲಯ ನೀಡುವ ಕಲ್ಯಾಣ ಕರ್ನಾಟಕ ಪ್ರದೇಶದ ಪುಸ್ತಕ ಬಹುಮಾನ ಹಾಗೂ ಲೇಖಕ/ ಪ್ರಕಾಶಕರ ಗೌರವ ಪ್ರಶಸ್ತಿಯನ್ನು ಇಂದು ಘೋಷಿಸಲಾಗಿದೆ. ಹಿರಿಯ ಸಾಹಿತಿ ಮಲ್ಲಿಕಾರ್ಜುನ ಕಡಕೋಳ ಅವರ ‘ಯಡ್ರಾಮಿ ಸೀಮೆ ಕಥನಗಳು’ ಪುಸ್ತಕಕ್ಕೆ ಕಲ್ಯಾಣ ಕರ್ನಾಟಕ ಪ್ರಶಸ್ತಿಯ ಗೌರವಕ್ಕೆ ಪಾತ್ರವಾಗಿದೆ ಎಂದು ಕಲಬುರ್ಗಿ ವಿಶ್ವವಿದ್ಯಾಲಯದ ಪ್ರಸಾರಾಂಗದ ನಿರ್ದೇಶಕರಾದ ಎಚ್ ಟಿ ಪೋತೆ ಅವರು ತಿಳಿಸಿದರು. ಕಡಕೋಳ ಅವರೊಡನೆ ಅವಧಿ’ಯ ಲೇಖಕ ವಿಜಯಭಾಸ್ಕರ ರೆಡ್ಡಿ ಅವರ ‘ನೆನಪಿನ ಪಡಸಾಲೆ’ ಕವನ ಸಂಕಲನ, ಕಪಿಲ ಪಿ ಹುಮನಾಬಾದೆ ಅವರ ‘ಹಾಣಾದಿ’ ಕಾದಂಬರಿಯೂ ಕೂಡ ಪ್ರಶಸ್ತಿಗೆ ಅಯ್ಕೆ ಆಗಿದೆ ಎಂದು ಪೋತೆ ತಿಳಿಸಿದರು. ಕನ್ನಡ ಸೃಜನ, ಸೃಜನೇತರ ಲೇಖಕರ ಕೃತಿಗಳಿಗೆ, ಜೀವನ ಕಥನ ಹಾಗೂ ಕನ್ನಡ ಪುಸ್ತಕ ಪ್ರಕಾಶಕರಿಗೆ, ಅನುವಾದ ಲೇಖಕರ ಕೃತಿಗೆ, ಸಮಾಜ ವಿಜ್ಞಾನ, ಜನಪದ ಕಲಾವಿದರಿಗೆ, ಚಿತ್ರ/ಶಿಲ್ಪಕಲಾವಿದರಿಗೆ, ಹಿಂದಿ, ಮರಾಠಿ, ಇಂಗ್ಲಿಷ ಹಾಗೂ ಉರ್ದು ಭಾಷಾ ಲೇಖಕರಿಗೆ ಈ ಗೌರವ ನೀಡಲಾಗುತ್ತದೆ. ನವೆಂಬರ್ ಕೊನೆಯ ವಾರದಲ್ಲಿ ವಿಶ್ವವಿದ್ಯಾಲಯದ ಕಾರ್ಯಸೌಧದ ‘ಮಹಾತ್ಮಾಗಾಂಧಿ ಸಭಾಂಗಣದಲ್ಲಿ’ ಆಚರಿಸಲಿರುವ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಕುಲಪತಿಗಳಾದ ಪ್ರೊ. ಚಂದ್ರಕಾಂತ ಯಾತನೂರ ಅವರು ಸಮಾರಂಭದ ಅಧ್ಯಕ್ಷತೆ ವಹಿಸುವರು ಎಂದು ಪ್ರೊ ಪೋತೆ ಅವರು ತಿಳಿಸಿದರು **************************************

ಮಲ್ಲಿಕಾರ್ಜುನ ಕಡಕೋಳ ಅವರ ‘ಯಡ್ರಾಮಿ ಸೀಮೆ ಕಥನಗಳು’ ಪುಸ್ತಕಕ್ಕೆ ಕಲ್ಯಾಣ ಕರ್ನಾಟಕ ಪ್ರಶಸ್ತಿ Read Post »

ಅಂಕಣ ಸಂಗಾತಿ, ಅನುವಾದಿತ ಕೃತಿ ಪ್ರಪಂಚ ಪ್ರವೇಶ

ಅಂಕಣ ಬರಹ ಹುಣಿಸೆ ಮರದ ಕತೆ ಹುಣಿಸೆ ಮರದ ಕತೆತಮಿಳು ಮೂಲ : ಸುಂದರ ರಾಮಸ್ವಾಮಿಅನುವಾದ : ಕೆ.ನಲ್ಲತಂಬಿಪ್ರ : ಲಂಕೇಶ್ ಪ್ರಕಾಶನಪ್ರಕಟಣೆಯ ವರ್ಷ : ೨೦೧೭ಬೆಲೆ : ರೂ.೧೫೦ಪುಟಗಳು : ೧೯೨   ಪರಿಸರ ಕಾಳಜಿಯನ್ನು ಹೊಂದಿದ ಒಂದು ವಿಶಿಷ್ಟ ಕಾದಂಬರಿಯಿದು. ಅದೊಂದು ಪುಟ್ಟ ಹಳ್ಳಿಯಲ್ಲಿ, ಮೂರು ರಸ್ತೆ ಕೂಡುವ ಸ್ಥಳದಲ್ಲಿ  ಆ ಹುಣಿಸೆ ಮರವಿತ್ತು.  ಆ ಜಾಗ ಜನರ ಓಡಾಟ-ಗಿಜಿ ಗಿಜಿಗಳಿಂದ ತುಂಬಿ ಲವಲವಿಕೆಯಿಂದ ಕೂಡಿತ್ತು. ತನ್ನಷ್ಟಕ್ಕೆ ಹುಟ್ಟಿಕೊಂಡ ಆ ಹುಣಿಸೆ  ಮರವು ಮಾನವನ ಲೆಕ್ಕವಿಲ್ಲದ ಆಟಗಳಿಗೆ ಮೂಕ ಸಾಕ್ಷಿಯಾಗಿ  ಮನುಷ್ಯನ ಸುಖ-ದುಖ, ಸ್ವಾರ್ಥ-ತ್ಯಾಗ, ಪ್ರೀತಿ-ದ್ವೇಷ-ಅಸೂಯೆಗಳನ್ನು ಮೌನವಾಗಿ ಗಮನಿಸುತ್ತಿತ್ತು. ಮನುಷ್ಯರಿಗಾಗಿ ಎಲೆ ಚಿಗುರಿಸಿ, ಹೂ ಬಿಟ್ಟು, ಕಾಯಿಗಳನ್ನು ಕೊಡುತ್ತಿತ್ತು. ಎತ್ತರೆತ್ತರಕ್ಕೆ ಬೆಳೆಯುತ್ತ ಹೋದ ಅದರ ಕೊಂಬೆಗಳು ಬಾನಿಗೂ ಬೇರುಗಳು ಮಣ್ಣಿನೊಳಗಣ ಆಳಕ್ಕೂ ಚಾಚಿಕೊಂಡವು.  ಆದರೆ, ದೇಶವನ್ನೂ ಹಣವನ್ನೂ ಸ್ತ್ರೀ ಯರನ್ನೂ  ಅಧಿಕಾರವನ್ನೂ ಹಿರಿಮೆಯನ್ನೂ ಅಂಕೆಯಲ್ಲಿರಿಸಿಕೊಂಡು ಆಟ ಆಡಿದ ಮನುಷ್ಯ ಅದನ್ನು ಪಗಡೆಯ ಕಾಯಿಯಾಗಿಸಿ ಉರುಳಿಸಿದ ಪರಿಣಾಮವಾಗಿ ಆ ವೃಕ್ಷ ನಾಶವಾಯಿತು. ದಾಮೋದರ ಆಸಾನ್ ಎಂಬ ತತ್ವಜ್ಞಾನಿಯು ವೇದಾಂತಿಯಂತೆ ಮಾತನಾಡುತ್ತ ಆ ಹುಣಿಸೆ ಮರದ ಕಥೆಯನ್ನು ಕಾದಂಬರಿಯ ನಿರೂಪಕನಿಗೆ ಹೇಳುತ್ತ ಹೋಗುತ್ತಾನೆ.  ಹುಣಿಸೆ ಮರ ಹಿಂದೆ ಇದ್ದದ್ದು ಒಂದು ದೊಡ್ಡ ಕೊಳದ ನಡುವೆ. ಜನರು ಅದನ್ನು ಪುಳಿಕೊಳ ಅನ್ನುತ್ತಿದ್ದರು. ಅದರ ಸುತ್ತ ಹುಟ್ಟಿಕೊಂಡಿದ್ದ ಕಥೆಯನ್ನು ದಾಮೋದರ ಆಸಾನ್ ನಿರೂಪಕನಿಗೆ ಹೇಳುತ್ತಾನೆ. ಸೆಲ್ಲತ್ತಾಯಿ ಎಂಬವಳು ಆ ಕೊಳದಲ್ಲಿ ಸ್ನಾನ ಮಾಡುತ್ತಿದ್ದಾಗ ಯಾರೋ ಒಬ್ಬ ಅತಿಮಾನುಷ ಶಕ್ತಿಯನ್ನು ಹೊಂದಿದ್ದ ವ್ಯಕ್ತಿ ಅವಳನ್ನು ಎತ್ತಿಕೊಂಡು ಕಾಡೊಳಗೆ ಒಯ್ದಿದ್ದ.  ಅವನನ್ನು ಹಿಡಿಯಲು ಯಾರಿಂದಲೂ ಸಾಧ್ಯವಾಗಿರಲಿಲ್ಲ.  ಆ ವ್ಯಕ್ತಿಯಿಂದ ಸೆಲ್ಲತ್ತಾಯಿ ವಶೀಕರಣಕ್ಕೊಳಗಾಗಿ ಆತನ ಧ್ಯಾನದಲ್ಲೇ ಕಳೆಯುತ್ತ ಕೊನೆಗೆ ಅದೇ ಹುಣಿಸೆಮರಕ್ಕೆ ನೇತಾಡಿ ಸತ್ತು ಹೋದಳು. ಆಸಾನ್ ಹೇಳಿದ ಇನ್ನೊಂದು ಕಥೆ ಒಬ್ಬ ರಾಜನದ್ದು. ರಾಜ ಆ ಊರನ್ನು ಸಂದರ್ಶಿಸುತ್ತಾನೆಂದು ಇಡೀ ಊರನ್ನು ಅಲಂಕರಿಸಿ ಸಿದ್ಧ ಪಡಿಸಿದ ಜನರು ಪುಳಿಕ್ಕೊಳವನ್ನು ಮಾತ್ರ ಸ್ವಚ್ಛಗೊಳಿಸದೆ ಹಾಗೆಯೇ ಬಿಟ್ಟರು.  ಪರಿಣಾಮವಾಗಿ ಅದರೊಳಗಿಂದ ಬಂದ ದುರ್ವಾಸನೆಯು ರಾಜನನ್ನು ಅಸಮಾಧಾನಗೊಳಿಸುತ್ತದೆ. ಅದನ್ನು ಗಮನಿಸಿದ ಅಧಿಕಾರಿಗಳು ಭಯಗೊಂಡು ರಾಜನ ಕ್ಷಮೆ ಬೇಡುತ್ತಾರೆ.  ಆದರೆ ರಾಜನು ಅವರನ್ನು ಕ್ಷಮಿಸದೆ ಕೆಲಸದಿಂದ ವಜಾ ಮಾಡುತ್ತಾನೆ. ಆದರೆ ರಾಜನು ತನ್ನ ಅರಮನೆಗೆ ಮರಳುವ ಯಾತ್ರೆಯ ಸಂದರ್ಭದಲ್ಲಿ ಊರವರೆಲ್ಲ ಒಟ್ಟಾಗಿ ಆ ಪುಳಿಕ್ಕೊಳದ ಪಕ್ಕವಿದ್ದ ಎತ್ತರದ ಪರೈಯನ್ ಗುಡ್ಡವನ್ನು ಕಡಿದು ನೆಲಸಮ ಮಾಡಿ ಆ ಮಣ್ಣನ್ನು ಪುಳಿಕ್ಕೊಳಕ್ಕೆ ತುಂಬಿಸಿ, ಕೊಳವನ್ನು ಮುಚ್ಚಿ, ಆ ಜಾಗದಲ್ಲಿ, ಉದ್ಯಾನವನ್ನು ನಿರ್ಮಿಸಿ ಅಲಂಕರಿಸಿ ಸುಂದರವಾಗಿಸುತ್ತಾರೆ. ಮುಂದೆ ಊರು ಒಂದು ಪಟ್ಟಣವಾಗಿ ಹುಣಸೆ ಮರವಿದ್ದ ಜಾಗದಲ್ಲಿ ಮೂರು ರಸ್ತೆಗಳು ಕೂಡಿ, ಅದಕ್ಕೆ ಹುಣಸೆಮರ ಜಂಕ್ಷನ್ ಎಂದು ಹೆಸರಾಗುತ್ತದೆ. ಮುಂದೊಂದು ದಿನ ಆ ಹುಣಿಸೆ ಬುಡಕ್ಕೂ ಕೊಡಲಿ ಹಾಕಿ ’ಒಬ್ಬ ಸುಮಂಗಲಿಯ ತಿಲಕವನ್ನು ಅಳಿಸಿದಂತೆ’ ಆ ಜಾಗವನ್ನು ಬೋಳಾಗಿಸುತ್ತಾರೆ. ಸ್ವಾರ್ಥಿಯಾದ ಮನುಷ್ಯನು ತನ್ನ ಸ್ವಂತ ಲಾಭಕ್ಕೋಸ್ಕರ ಆಧುನಿಕತೆ-ಅಭಿವೃದ್ಧಿ- ಪ್ರಗತಿಗಳ ಹೆಸರಿನಲ್ಲಿ ಪರಿಸರ ನಾಶ ಮಾಡುವ ವೈರುದ್ಧ್ಯದತ್ತ ಈ ಕಾದಂಬರಿಯು ಬೊಟ್ಟು ಮಾಡಿ ತೋರಿಸುತ್ತದೆ.  ಹುಣಿಸೆ ಮರದ ರೂಪಕದ ಮೂಲಕ ಆಡಳಿತಾರೂಢ ಅಧಿಕಾರಿಗಳ ರಾಜಕೀಯದ ವ್ಯಂಗ್ಯ ಚಿತ್ರಣವನ್ನು ಕಾದಂಬರಿ ನೀಡುತ್ತದೆ.  ಒಂದು ಒಳ್ಳೆಯ ಕಾದಂಬರಿಯನ್ನು ಕನ್ನಡಕ್ಕೆ ನೀಡಿದ ಹಿರಿಮೆ ನಲ್ಲತಂಬಿಯವರದ್ದಾಗಿದೆ. *********************************** ಡಾ.ಪಾರ್ವತಿ ಜಿ.ಐತಾಳ್ ಕುಂದಾಪುರದ ಭಂಡಾರ್ ಕಾರ್ಸ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಇದೀಗ ನಿವೃತ್ತಿ ಜೀವನವನ್ನು ಸಾಹಿತ್ಯದಲ್ಲಿ ಪ್ರವೃತ್ತರಾಗಿ ಕಳೆಯುತ್ತಿದ್ದಾರೆ. ಕನ್ನಡ, ಇಂಗ್ಲಿಷ್, ಹಿಂದಿ, ತುಳು ಮತ್ತು ಮಲೆಯಾಳ ಭಾಷೆಗಳ ಮೇಲೆ ಹಿಡಿತ ಸಾಧಿಸಿರುವ ಇವರು ಈ ಎಲ್ಲ ಭಾಷೆಗಳ ನಡುವೆ ೪೦ಕ್ಕೂ ಹೆಚ್ಚು ಸಾಹಿತ್ಯಕ ಮೌಲ್ಯಗಳುಳ್ಳ ಕಾದಂಬರಿ, ಸಣ್ಣ ಕಥೆ, ನಾಟಕ, ವೈಚಾರಿಕ ಕೃತಿಗಳನ್ನು ಅನುವಾದಿಸಿದ್ದಾರೆ. ಸ್ವತಂತ್ರವಾಗಿಯೂ ಇಂಗ್ಲಿಷ್, ಕನ್ನಡ,ತುಳು ಮತ್ತು ಮಲೆಯಾಳಗಳಲ್ಲಿ ೨೭ಕೃತಿಗಳನ್ನು ಪ್ರಕಟಿಸಿದ್ದಾರೆ. ಕುವೆಂಪು ಭಾಷಾ ಭಾರತಿಯಿಂದ ಶ್ರೇಷ್ಠ ಅನುವಾದಕಿ ಎಂಬ ನೆಲೆಯಲ್ಲಿ ಗೌರವ ಪ್ರಶಸ್ತಿ ಪಡೆದಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಸಾಹಿತ್ಯಶ್ರೀ ಪ್ರಶಸ್ತಿಯನ್ನೂ ಕೇರಳದಿಂದ ಕಾಳಿಯತ್ತ್ ದಾಮೋದರನ್ ಪ್ರಶಸ್ತಿಯನ್ನೂ ಪಡೆದಿದ್ದಾರೆ. A Comparative Study of the Fictional Writings of Shivaram Karanth and Thakazhi Shivashankara Pillai from a Feminist Perspective ಎಂಬ ಇವರ ಪಿ.ಹೆಚ್.ಡಿ ಮಹಾಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾ ನಿಲಯವು ಡಾಕ್ಟರೇಟ್ ಪದವಿ ನೀಡಿದೆ

Read Post »

ಅಂಕಣ ಸಂಗಾತಿ, ಚಿತ್ತ ಜನ್ಯ

ಅಂಕಣ ಬರಹ ಅಸಾಮಾನ್ಯದ ವ್ಯಕ್ತಿ ಚಿತ್ರ ಇವನು… ಬಾಲ್ಯದಲ್ಲಿ ಅಜ್ಜನ ಊರು ಮತ್ತು ಅಜ್ಜನ ಮನೆ ಎನ್ನುವ ಆ ಜಾಗ ಎಷ್ಟೊಂದು ಆಸ್ಥೆಯ ಆಕರ್ಷಣೆಯ  ಜಾಗವಾಗಿತ್ತು… ಅದೆಷ್ಟು ಖುಷಿಯಿಂದ ಅಜ್ಜನ ಮನೆಗೆ ಬರುತ್ತಿದ್ದೆವು… ಅಜ್ಜನ ಮನೆಯ ಮಾಳಿಗೆ, ಪಡಸಾಲೆ, ನೆಲಾಗಾಣೆ, ಅಟ್ಟ, ಗಣಿಗೆ, ಬಾದಾಳ, ಸಗಣಿ ನೆಲ, ಮಣ ಗಾತ್ರದ ಒಂಟಿ ತಲೆ ಬಾಗಿಲು, ಪಡಸಾಲೆಯ ನಾಲ್ಕು ಕಂಬಗಳು, ಅಡುಗೆ ಮನೆಯ ಮಜ್ಜಿಗೆ ಕಡೆಯುವ ಕಂಬ,  ದನಾಕ್ಕೆ, ತಿಪ್ಪೆ, ಬಾರುಕೋಲು, ಹಗೇವಿನ, ಸಗಣಿ, ಗಂಜಲ…. ಇನ್ನೂ ಅಸಂಖ್ಯ ಯಾವುದನ್ನೂ ಮರೆಯಲು ಸಾಧ್ಯವಾಗದೆ ಇನ್ನು ಮರೆತು ಹೋಗಿಬಿಟ್ಟರೆ?! ಎಂದು ಮನಸ್ಸು ಅತ್ತಿಂದಿತ್ತ ತೊನೆಯುತ್ತಿದ್ದಾಗ ಮತ್ತೆ ಮತ್ತೆ ಅಜ್ಜನೂರನ್ನು ಕಣ್ತುಂಬಿಕೊಳ್ಳಲು ಹೊರಟದ್ದಿದೆ. ಅಜ್ಜನ ಮನೆಯಲ್ಲಿ ನಾನು ಹುಟ್ಟಿದಾಗ ಮನೆಯಲ್ಲಿ ಮೂರು ಮೂರು ಬಾಣಂತನಗಳಂತೆ. ನನ್ನ ಅತ್ತೆಯ ಮಗ, ದೊಡ್ಡಪ್ಪನ ಮಗ ಮತ್ತು ನಾನು ಒಟ್ಟಿಗೆ ಒಂದೇ ಮನೆಯಲ್ಲಿ ಒಂದೇ ತಿಂಗಳಲ್ಲಿ ಹುಟ್ಟಿದ್ದೆವಂತೆ. ಪಡಸಾಲೆಯ ನಾಲ್ಕು ಕಂಬಗಳನ್ನು ಬಳಸಿ ಮೂರು ಜೋಲಿ ಕಟ್ಟಿದ್ದರಂತೆ. ಪರದೆಗಳನ್ನು ಇಳಿ ಬಿಟ್ಟು ಮೂರು ಬಾಣಂತಿ ಕೋಣೆಗಳನ್ನು ನಿರ್ಮಿಸಿದ್ದರಂತೆ. ಅತ್ತೆಯ ಮಗ ಮತ್ತು ದೊಡ್ಡಪ್ಪನ ಮಗ ಬೆಳ್ಳ ಬೆಳ್ಳಗೆ ಗುಂಡು ಗುಂಡಗೆ ಮುದ್ದು ಮುದ್ದಾಗಿದ್ದರಂತೆ. ಆದರೆ ನಾನು ಕಪ್ಪಗೆ,ತೆಳ್ಳಗೆ ಇಷ್ಟೇ ಇಷ್ಟು ಇದ್ದೆನಂತೆ. ಮನೆಗೆ ಯಾರೇ ಬರಲಿ ಅವರಿಬ್ಬರನ್ನೇ ಹೆಚ್ಚು ಮುದ್ದು ಮಾಡುತ್ತಿದ್ದರಂತೆ. ನನ್ನನ್ನು ಯಾರೂ ಎತ್ತಿಕೊಳ್ಳುತ್ತಿರಲಿಲ್ಲವಂತೆ. ನಾನು ನನ್ನಮ್ಮನಿಗೆ ಮೊದಲ ಮಗು. ಮೇಲಾಗಿ ಅಮ್ಮ ಹದನೈದಕ್ಕೆ ಹಸೆ ಏರಿದವರು, ಹದಿನೇಳಕ್ಕೆ ನನ್ನನ್ನು ಹೆತ್ತವರು. ಅವರಿಗೆ ಅದೇನೇನು ಕನಸುಗಳಿತ್ತೋ… ನನ್ನಿಂದಾಗಿ ಅದೆಷ್ಟು ನಿರಾಸೆಯಾಗಿತ್ತೋ ಅವರಿಗೆ… ಯಾರಾದರೂ ಮಗುವನ್ನು ಜರಿದರೆ ಸಾಕು ನನ್ನ ಮಗು ಹೀಗಿದೆಯಲ್ಲ ಎಂದು ಅಳುತ್ತಿದ್ದರಂತೆ. ಈಗಲೂ ಒಮ್ಮೊಮ್ಮೆ ನನಗೆ ಆ ಮನೆಯ ಜಂತೆಗಳು ಬಿಕ್ಕಳಿಸಿದಂತೆ ತೋರುತ್ತದೆ. ನಾನು ನಾಲ್ಕೂವರೆ ವರ್ಷದವಳಿದ್ದಾಗ ನನ್ನ ತಮ್ಮ ಹುಟ್ಟಿದ. ಅಜ್ಜನ ಮನೆಯಲ್ಲಿಯೇ ಅಮ್ಮನ ಹೆರಿಗೆಯಾದದ್ದು. ಆ ದಿನದ ಅಮ್ಮನ ನೋವು, ರಕ್ತಸ್ರಾವ, ನೆಲದ ಮೇಲೆ ಚೆಲ್ಲಿದ್ದ ರಕ್ತ , ತಮ್ಮ ಹುಟ್ಟಿದ ಸಂಭ್ರಮ ಎಲ್ಲವೂ ಇನ್ನೂ ನೆನಪಿದೆ ನನಗೆ. ಆಗ ಇಡೀ ಊರಿಗೇ ತತ್ತಕ್ಷಣದ ಸೂಲಗಿತ್ತಿ, ದಾದಿ, ಹೆರಿಗೆವಮಾಡಿಸುವ ವೈದ್ಯೆ ಎಂದರೆ ಅದು ಕುಂಬಾರಜ್ಜಿ ಮಾತ್ರ. ಅವಳ ಹಸ್ತಗುಣದ ಮೇಲೆ ಇಡೀ ಊರಿಗೇ ನಂಬಿಕೆ ಇತ್ತು. ಮೇಲಾಗಿ ಯಾವ ದಿಕ್ಕಿನಿಂದ ಹೊರಟರು ಮುಖ್ಯ ರಸ್ತೆ ಸೇರಿಕೊಳ್ಳಲು ಎರೆಡು ಮೂರು ಕಿಲೋಮೀಟರ್ ನಡೆಯಬೇಕಿದ್ದ ಆ ಕುಗ್ರಾಮದ ಜನರಿಗೆ ಹೀಗೆ ಆಕೆಯನ್ನು ಅವಲಂಬಿಸದೆ ವಿಧಿಯೂ ಇರಲಿಲ್ಲ. ಅಂದೂ ಸಹ ಕುಂಬಾರಜ್ಜಿ ಬಂದು ಅಮ್ಮನ ನೋವಿನಲ್ಲಿ ಭಾಗಿಯಾಗಿದ್ದಳು. ಪಡಸಾಲೆಗೆ ಪಡಾಸಾಲೆಯೇ ನೋವಿನಿಂದ ಅನುರಣಿಸುತ್ತಿತ್ತು. ರಕ್ತಸ್ರಾವದ ನಡುವೆಯೇ ಅಮ್ಮನ ಉಪಚಾರ ಮಾಡುತ್ತಾ ಸಮಾಧಾನಿಸುತ್ತಾ ಮಗು ಹೊರಬರುವ ದಾರಿಯನ್ನು ಸಲೀಸುಗೊಳಿಸಲು ಕುಂಬಾರಜ್ಜಿ ತೊಡಗಿದ್ದಳು. ಆದರೆ ಯಾರ ನೋವನ್ನು ಯಾರೂ ಕಡ ಪಡೆಯಲು ಸಾಧ್ಯವಿಲ್ಲವಲ್ಲ. ಇದೆಲ್ಲವನ್ನೂ ಅಚ್ಚರಿಯಿಂದ ನೋಡುತ್ತಿದ್ದ ನನಗೆ ಅಮ್ಮನ ಅಳುವನ್ನು ಮಾತ್ರ ಸಹಿಸಿಕೊಳ್ಳಲು ಸಾಧ್ಯವಿರಲಿಲ್ಲ. ಮತ್ತೆ ಸರಹೊತ್ತಿನ ನಿದ್ದೆ ತಡೆಯಲಾಗದೆ ಮಲಗಿಬಿಟ್ಟಿದ್ದೆ. ಅಂತೂ ಇಂತೂ ರಾತ್ರಿ ಪೂರಾ ತ್ರಾಸು ಕೊಟ್ಟು ಬೆಳಗಿನ ಏಳರ ಹೊತ್ತಿಗೆ ಮಗು ಭೂಮಿಗೆ ಬಂದಿತ್ತು. ಆ ಮುದ್ದು ಮಗು ನನ್ನ ತಮ್ಮನಾಗಿದ್ದ. ಒಮ್ಮೆ ದೊಡ್ಡಪ್ಪನ ಮಗನಿಗೆ ಅಪರಾತ್ರಿಯಲ್ಲಿ ಎಚ್ಚರ ತಪ್ಪಿಬಿಟ್ಟಿತ್ತು. ಮನೆಯಿಡೀ ಗದ್ದಲ… ದೊಡ್ಡಪ್ಪ ದೊಡ್ಡಮ್ಮನ ಜೋರು ಅಳು… ಮನೆಮಂದಿಯೂ ಚಡಪಡಿಸುತ್ತಿದ್ದಾರೆ. ಐದಾರು ವರ್ಷದ ನನಗೆ ಏನು ಮಾಡಲೂ ತಿಳಿಯುತ್ತಿಲ್ಲ. ಕಾಲುಗಳು ನಡುಗುತ್ತಿವೆ. ಹೊಟ್ಟೆ ಚುಳ್ ಎನ್ನುತ್ತಿದೆ. ಅಳು ಗಂಟಲಲ್ಲೆ ಸಿಕ್ಕಿ ಹಾಕಿಕೊಂಡಂಥ ಅನುಭವ. ವಿಪರೀತ ಭಯದಿಂದ ಒಳಕ್ಕೆ ಹೊರಕ್ಕೆ ಕುಣಿಯುತ್ತಾ ಕೊನೆಗೆ ಗಣಿಗೆಯ ಸಂದಿಯಲ್ಲಿ ಹೋಗಿ ನಿಂತಿದ್ದೆ. ಎಷ್ಟು ಹೊತ್ತು ನಿಂತಿದ್ದೆನೋ.. ಮುಂದೆ ಏನಾಯಿತೋ.. ಒಂದೂ ನೆನಪಿಲ್ಲ. ಅಂದು ಕೆಂಪು ಫ್ರಾಕ್ ತೊಟ್ಟಿದ್ದನೆಂಬ ನೆನಪು. ಎಲ್ಲ ಅಸ್ಪಷ್ಟ ನೆನಪುಗಳು. ಈಗ ಕೇಳಿದರೆ ನಿಜವೋ ಸುಳ್ಳೋ ಎನ್ನುವ ಗೊಂದಲವೇ ಹೆಚ್ಚು ಕಾಡುತ್ತದೆಯೇನೋ… ಮತ್ತು ನಿಜವೆಂದು ಹೇಳಲಾರೆನೇನೋ… ಅಜ್ಜನ ಮನೆ ಅರಮನೆಯಂತದ್ದಲ್ಲದಿದ್ದರೂ ತೀರಾ ಚಿಕ್ಕದ್ದೇನೂ ಆಗಿರಲಿಲ್ಲ. ತಾನು ಮದುವೆಯಾಗಿ ಬೇರೆ ಸಂಸಾರವಂತ ಹೂಡಿಕೊಂಡು ಬಂದಾಗ ಅಜ್ಜಯ್ಯನಲ್ಲಿ ಸ್ವಂತ ಮನೆಯಾಗಲೀ ಎತ್ತಾಗಲೀ ಬಿತ್ತಿ ಬೆಳೆಯುವ ಅಂಗೈ ಅಗಲ ಭೂಮಿಯಾಗಲೀ ಇರಲಿಲ್ಲವಂತೆ. ಆದರೆ ಕಷ್ಟಧಾರಿ ಅಜ್ಜಯ್ಯ ತನ್ನ ಸ್ವಂತ ಸಾಮರ್ಥ್ಯದಿಂದ ಮನೆ, ದನ, ಕರ, ಮೂವತ್ತೆರೆಡು ಎಕರೆ ಹೊಲ ಅಂತ ಸಂಪಾದಿಸಿಕೊಂಡಿದ್ದ ಮತ್ತು ಅನುವು ಆಪತ್ತಿಗಿರಲೆಂದು ಒಂದಷ್ಟು ಹಣವನ್ನೂ ಕೂಡಿಟ್ಟುಕೊಂಡಿದ್ದ. ಅದಕ್ಕೆ ಮೊಮ್ಮೊಕ್ಕಳ ಮದುವೆಗೆ ಎನ್ನುವ ಹೆಸರಿಟ್ಟು ಹೋಗಿದ್ದ. ಪೂರ್ವದಿಕ್ಕಿನ ಅಜ್ಜಯ್ಯನ ಆ ಮನೆಯೂ ಅಜ್ಜಯ್ಯನಂತೆಯೇ ಬೆಳಗ್ಗೆ ಐದರ ನಂತರ ಯಾರನ್ನೂ ಮಲಗಲು ಬಿಡುತ್ತಿರಲಿಲ್ಲ. ಬೆಳ್ಳಂಬೆಳಗಿನ ಎಲ್ಲಾ ಪ್ರಖರ ಪ್ರಭೆಯೂ ಮನೆ ಹೊಕ್ಕುತ್ತಿತ್ತು. ಅಜ್ಜನಿಗಂತೂ ನಾಲ್ಕರ ನಂತರ ಮಲಗಿ ಅಭ್ಯಾಸವೇ ಇರಲಿಲ್ಲ. ಮತ್ತೆ ಮನೆ ಮಂದಿಯೂ ಸಹ ಐದರ ನಂತರ ಮಲಗುವಂತಿರಲಿಲ್ಲ. ರಜೆಗೆ ಹೋದಾಗ ಹೊತ್ತು ಆರಾದರೂ ಕುಂಬಕರ್ಣರಂತೆ ಮಲಗಿರುತ್ತಿದ್ದ ನಮ್ಮನ್ನು ಬೈದು ಎಬ್ಬಿಸುತ್ತಿದ್ದ ಅಜ್ಜನ ಆಜ್ಞೆಯಿಂದ ತಪ್ಪಿಸಿಕೊಳ್ಳಲಿಕ್ಕಾಗಿ ಊರು ತುಂಬ ಇದ್ದ ಚಿಕ್ಕಪ್ಪ ದೊಡ್ಡಪ್ಪಂದಿರ ಮನೆಗಳನ್ನು ಹುಡುಕಿ ಹೋಗುತ್ತಿದ್ದದ್ದು ಇನ್ನು ಚೆನ್ನಾಗಿ ನೆನಪಿದೆ. ಆಗಲೂ ಕಳ್ಳಬೀಳುತ್ತಿದ್ದೇವೆಂದು ಅಜ್ಜ ಬೈಯ್ಯುತ್ತಿದ್ದ ಅದು ಬೇರೆ ಮಾತು. ಚಿಕ್ಕವಳಿದ್ದಾಗ  ನನಗೆ ಎಷ್ಟೋ ಬಾರಿ ಅಜ್ಜನ ಮನೆಯ ಪಡಸಾಲೆಯ ಕಂಬಗಳನ್ನು ನೋಡುತ್ತಾ ಇದರ ಮೇಲಿರುವ ಬೆವರಿನಂಟು, ಎಣ್ಣೆಯ ಕಮಟು, ಎಂಥದೋ ಜಿಡ್ಡು ಯಾರ್ಯಾರದಿರಬಹುದು… ವಾಸನೆಯಿಂದೇನಾದರೂ ಅವರ ಗುರುತು ಹತ್ತುತ್ತದಾ? ಯಾರ ಸ್ಪರ್ಷದ ವಾಸನೆ ಇಲ್ಲಿದೆ…. ಎಂದೆಲ್ಲ ಅನಿಸಿ ಹೊಟ್ಟೆ ಚುಳ್ ಎನ್ನುತ್ತಿತ್ತು. ನನ್ನಜ್ಜ ಅವುಗಳಲ್ಲೆ ಒಂದು ಕಂಬಕ್ಕೆ ತನ್ನ ಜಂಪರ್ ನೇತು ಹಾಕುತ್ತಿದ್ದರು. ಅದೇ ಕಂಬದ ಮೇಲ್ಭಾಗದಲ್ಲಿ ರೇಡಿಯೋ ಪೆಟ್ಟಿಗೆಯೊಂದನ್ನು ಇಡಲಾಗಿತ್ತು. ಬೆಳ್ಳಂ ಬೆಳಗ್ಗೆ ಅದು ಹೊರಡಿಸುತ್ತಿದ್ದ “ಟ್ಯೂ ಟ್ಯುಡುಡುಡೂ.. ಟ್ಯುಡುಡುಡೂ… ಟ್ಯುಡೂ…” ಎಂಬ ನಾದವೇ ನಮಗೆಲ್ಲ ಬೆಳಗಿನ ಸುಪ್ರಭಾತ. ಅಡುಗೆ ಮನೆಯ ಪುಟ್ಟ ಕಂಬಕ್ಕೆ ಹಗ್ಗ ಕಟ್ಟಿ ಅಜ್ಜಿ ಮಜ್ಜಿಗೆ ಕಡೆಯುತ್ತಿದ್ದರು. ಹೊರಗಿನ ಹಾಲಿನಲ್ಲಿದ್ದ ಕತ್ರಿ ಗೂಟ ಎನ್ನುವ ಕಂಬದಲ್ಲಿ ಜಾನುವಾರುಗಳಿಗಾಗಿ ಜೋಳದ ಸೊಪ್ಪೆ ಕತ್ತರಿಸಲಾಗುತ್ತಿತ್ತು. ಪಡಸಾಲೆಯ ಕಂಬಗಳನ್ನು ಬಳಸಿ ನಾವೆಲ್ಲ ಮನೆ ಮಕ್ಕಳು ಉಪ್ಪಿನಾಟ ಆಡುತ್ತಿದ್ದೆವು. ಅಜ್ಜನ ಮನೆಯ ಕಂಬಗಳ ಮೇಲ್ಭಾಗದಲ್ಲಿ ನವಿಲಿನ ಚಿತ್ರಗಳಿದ್ದವು. ಆದರೆ ಅಜ್ಜಯ್ಯ ಮನೆಯೊಳಗೆ ಉಪ್ಪಿನಾಟ ಆಡಲು ಬಿಡುತ್ತಿರಲಿಲ್ಲ. ಮನೆಯೊಳಗೆ ಉಪ್ಪಿನಾಟ ಆಡಿದರೆ ಸಾಲ ಹೆಚ್ಚಾಗುತ್ತದೆ ಎನ್ನುತ್ತಿದ್ದ. ಹಾಗಾಗಿ ಮನೆಯ ಪಕ್ಕದಲ್ಲಿ ಮನೆಗೆ ಆತುಕೊಂಡಂತೆ ಇದ್ದ ಬಸವಣ್ಣನ ಗುಡಿಯಲ್ಲಿ ನಾವೆಲ್ಲ ಉಪ್ಪಿನಾಟ ಆಡುತ್ತಿದ್ದೆವು. ಉಪ್ಪಿನಾಟ ಎಂದರೆ ಆಟವಾಡಲು ಎಷ್ಟು ಜನ ಆಟಗಾರರಿತ್ತೇವೋ ಅಷ್ಟು ಜನ ಒಂದೊಂದು ಕಂಬ ಹಿಡಿದಿಟ್ಟುಕೊಳ್ಳಬೇಕು. ಒಬ್ಬರು “ಉಪ್ಪಮ್ಮೊ ಉಪ್ಪು…..” ಎಂದು ರಾಗವಾಗಿ ಹಾಡುತ್ತಾ ಉಪ್ಪು ಮಾರುತ್ತಾ ಬರಬೇಕು. ರಾಗವಾಗಿ ಹಾಡಬೇಕೆನ್ನುವ ನಿಯಮವೇನೂ ಇಲ್ಲ. ಆದರೆ ಆಡುತ್ತಿದ್ದವರೆಲ್ಲರೂ ಹುಡುಗಿಯರೇ ಹೆಚ್ಚಾಗಿರುತ್ತಿದ್ದರಿಂದ ಅದು ಹಾಡಿನ ಒನಪು ವಯ್ಯಾರವನ್ನು ಪಡೆದುಕೊಳ್ಳುತ್ತಿತ್ತಿರಬೇಕು. ಉಪ್ಪಿನವಳು ಮುಂದೆ ಹೋದ ತಕ್ಷಣ ಕಂಬ ಹಿಡಿದುಕೊಂಡಿರುತ್ತಿದ್ದ ಆಟಗಾರ್ತಿಯರು ಉಪ್ಪಿನವಳ ಹಿಂದೆ ಅದಲು ಬದಲಾಗಬೇಕು. ಹೀಗೆ ಅದಲು ಬದಲಾಗುವಾಗ ಅಚಾನಕ್ ಉಪ್ಪಿನವಳು ಕಂಬವನ್ನು ಆಕ್ರಮಿಸಿಕೊಂಡುಬಿಟ್ಟರೆ ಕಂಬವನ್ನು ಕಳೆದುಕೊಂಡವಳು ಔಟ್ ಎಂದು ಅರ್ಥ. ಈಗ ಅವಳು ಉಪ್ಪು ಮಾರುತ್ತಾ ಹೊರಡಬೇಕು. ಹೀಗೆ ಆಟ ಮುಂದುವರಿಯುತ್ತಿತ್ತು. ಬಸವಣ್ಣನ ಗುಡಿಯಲ್ಲಿ ನಾವೆಲ್ಲ ಸಮಯದ ಪರಿವೆಯಿಲ್ಲದೇ ಉಪ್ಪಾಟ ಆಡಿದ್ದಿದೆ. ಆದರೀಗ ಆ ಮರದ ಕಂಬಗಳು ಮತ್ತು ಮಣ್ಣಿನಿಂದ ನಿರ್ಮಿಸಿದ್ದ ಗುಡಿಯನ್ನು ಕೆಡವಿ ಹೊಸ ಕಾಂಕ್ರೀಟ್ ಕಟ್ಟಡವನ್ನು ಕಟ್ಟಲಾಗಿದೆ. ಕಂಬಗಳೆಲ್ಲ ಎಲ್ಲೋ ಮಾಯವಾಗಿವೆ. ಅಸಲಿಗೆ ಅದೊಂದು ಗುಡಿ ಅಂತಲೇ ಅನಿಸುತ್ತಿಲ್ಲ. ಹಿಂದೆಲ್ಲಾ ಗುಡಿಯಲ್ಲಿ ಸಣ್ಣ ಗೌರಿ ಮತ್ತು ದೊಡ್ಡ ಗೌರಿ ಹಬ್ಬಕ್ಕೆ ಗೌರಿ ಮಣ್ಣನ್ನು ತಂದು ಹಾಕಲಾಗುತ್ತಿತ್ತು. ಗುಡಿಯ ಪಕ್ಕದಲ್ಲಿದ್ದ ಬುಡ್ಡೆ ಕಲ್ಲೂ ಸಹ ಗೌರಿ ಮಣ್ಣಿನೊಟ್ಟಿಗೆ ಕಾಡು ಹೂಗಳ ಪೂಜೆ ಪಡೆಯುತ್ತಿದ್ದ. ಆದರೀಗ ಗುಡಿಯೇ ಅನ್ನಿಸದ ನೆನಪುಗಳ ಸಮಾಧಿ ದಿಬ್ಬದ ಮೇಲೆ ಗೌರಿಯ ಗದ್ದುಗೆಯನ್ನು ಸಿದ್ಧಮಾಡಿ ಕೂರಿಸುತ್ತಾರೆ ಹೇಗೆ… ಅವಳನ್ನು ದೇವತೆ ಎಂದು ಕಲ್ಪಿಸಿಕೊಳ್ಳುತ್ತಾರೆ ಹೇಗೆ… ಎಂದು ಕಳವಳವಾಗುತ್ತದೆ. ಹಿಂದೆ ಆಚರಿಸಿದ್ದ ಗೌರಿ ಹಬ್ಬಗಳು, ದೀಪ ಹಿಡಿದು ಓಡಾಡಿದ್ದ ಹೆಜ್ಜೆ ಗುರುತುಗಳು, ಜೋಕಾಲಿ ಕಟ್ಟಿ ಜೀಕಿದ ಎಲ್ಲ ನೆನಪುಗಳೂ ಸುಮ್ಮನೇ ಕಾಡುತ್ತವೆ. ಒಂಥರಾ ಸಂಕಟ…. ಅಜ್ಜಯ್ಯ ಒಂಥರಾ ಶಿಸ್ತಿನ ಸಿಪಾಯಿ.  ಬಿಳಿ ಪಂಚೆಯ ಕಚ್ಚೆ ಹಾಕಿ, ಮೇಲೊಂದು ತಾನೇ ಹೇಳಿ ಹೊಲೆಸಿಕೊಂಡಿರುತಿದ್ದ ದೊಡ್ಡ ಬೊಕ್ಕುಣದ ಜಂಪರ್ ತೊಟ್ಟು ಪೂರ್ಣ ಕತ್ತಲು ಕಳೆದು ಬೆಳ್ಳಗಾಗುವುದರೊಳಗೆ ತನ್ನ ಜೋಡೆತ್ತುಗಳನ್ನು ಬಿಟ್ಟುಕೊಂಡು ಕಣದ ಕಡೆ ಹೊರಟು ಬಿಡುತ್ತಿದ್ದ. ಮನೆಯಲ್ಲಿ ಯಾರೊಬ್ಬರೂ ಅವನ ಮುಂದೆ ಸುಮ್ಮನೆ ಕಾಲಾಯಾಪನೆ ಮಾಡುವುದು ಸಾಧ್ಯವಿರಲಿಲ್ಲ. ಅಸಲಿಗೆ ಅವನಾದರೂ ಎಲ್ಲರಿಗೂ ಮಾದರಿಯಂತಿರುತ್ತಿದ್ದ. ಎಂದೂ ಮೈಮುರಿದು ದುಡಿಯದೆ ಕೂತು ಉಂಡವನಲ್ಲ. ಭಾವುಕತೆಯನ್ನು ಕಳೆದುಕೊಂಡವನಂತೆ ವರ್ತಿಸುತ್ತಿದ್ದ ಅಜ್ಜಯ್ಯ,  ಇಂದಿಗೂ ನಮ್ಮ ಮನಸ್ಸಿನಲ್ಲಿ ಹೇಗಿಷ್ಟು ಆಳದ ಬೇರಿನಂತೆ ನಾಟಿಕೊಂಡುಳಿದನೆಂಬುದು ನಿಜಕ್ಕೂ ಅಚ್ಚರಿಯೇ. ಅಜ್ಜಯ್ಯ ದಿನದಿಪತ್ನಾಲ್ಕು ತಾಸೂ ಕೃಷಿಯಲ್ಲೇ ಮುಳುಗಿರುವವನೆನಿಸಿದರೂ ಅವನ ಧಾರ್ಮಿಕ ಸ್ವಭಾವದ ಬಗ್ಗೆ ಅಪ್ಪ ಅತ್ತೆಯರಿಂದ ಸಾಕಷ್ಟು ಅರಿತಿದ್ದೆ. ಕೃಷಿಕನಾದರೂ ಅಕ್ಷರಸ್ತನಾಗಿದ್ದ ಅಜ್ಜಯ್ಯ ರಾಮಾಯಣವನ್ನು, ಶನಿ ಮಹಾತ್ಮೆ ಕಥನವನ್ನ ಬಹಳ ಇಷ್ಟ ಪಟ್ಟು ಓದುತ್ತಿದ್ದನಂತೆ. ತನ್ನ ಅಕ್ಷರ ಪ್ರೀತಿಯಿಂದಾಗಿಯೇ ಅಪ್ಪ ದೊಡ್ಡಪ್ಪಂದಿರನ್ನು ಅಕ್ಷರವಂತರನ್ನಾಗಿ ಮಾಡಿ ನೌಕರಿಗೆ ಸೇರುವಂತೆ ಮಾಡಿದ್ದನಂತೆ. ಅಜ್ಜಯ್ಯ ಸತ್ತಾಗ ನಾನು ಮಾಡಿದ ಮೊದಲ ಕೆಲಸವೇ ಅವನ ಖಾಸಗಿ ಪೆಟ್ಟಿಗೆಯನ್ನು ತೆರೆದು ನೋಡಿದ್ದು. ಅಲ್ಲಿಯವರೆಗೂ ಅದನ್ನು ಕಿರುಬೆರಳಿಂದ ಮುಟ್ಟಲೂ ಭಯಪಡುತ್ತಿದ್ದೆ. ಕಾರಣ ಅಜ್ಜಯ್ಯ ಎಂದೂ ಆ ಪೆಟ್ಟಿಗೆಯನ್ನು ಜನರಿರುವಾಗ ತೆರೆಯುತ್ತಿರಲಿಲ್ಲ. ಮತ್ತೆ ಯಾರಿಗೂ ಅದನ್ನು ಮುಟ್ಟಲೂ ಬಿಡುತ್ತಿರಲಿಲ್ಲ. ಯಾರಾದರೂ ಅಪ್ಪಿ ತಪ್ಪಿ ಮುಟ್ಟಲು ಪ್ರಯತ್ನಿಸಿಬಿಟ್ಟರೆ ಗುಡುಗಿಬಿಡುತ್ತಿದ್ದ. ಅದಕ್ಕೆ ಹೆದರಿ ನಾವೆಂದೂ ಅದರ ತಂಟೆಗೆ ಹೋಗುತ್ತಿರಲಿಲ್ಲ. ಅದನ್ನವನು ತನ್ನ ಪ್ರಾಣಕ್ಕು ಮಿಗಿಲಾಗಿ ಜೋಪಾನ ಮಾಡಿಟ್ಟುಕೊಂಡಿದ್ದ. ಎಷ್ಟೊಂದು ಕುತೂಹಲ ಅದನ್ನು ತೆರೆದು ನೋಡುವಾಗ. ಅದರೊಳಗೆ ಏನೇನೋ ಚಿತ್ರ ವಿಚಿತ್ರ ವಸ್ತುಗಳು, ಯಾವುದೋ ಬೀಗದ ಕೈಗಳು, ಒಂದಷ್ಟು ದೇವರ ಪಟಗಳು, ಶಿಥಿಲಾವಸ್ಥೆಯಲ್ಲಿದ್ದ ಪರ್ಸುಗಳು, ಜೊತೆಗೆ ಶನಿ ಮಹಾತ್ಮೆ, ರಾಮಾಯಣ, ಮಹಾಭಾರತದ ಅತ್ಯಂತ ಪುರಾತನ, ಬಣ್ಣ ಮಾಸಿದ, ಬ್ಯಾಗಡಿ ಕವರಿನ ಬೈಂಡ್ ಹಾಕಲಾಗಿದ್ದ ಪುಸ್ತಕಗಳು. ಧೂಳಿನ ಘಮದೊಟ್ಟಿಗೆ ಅಜ್ಜಯ್ಯನ ಬೆವರಿನ ಗಮಲು ಬೆರತಿದ್ದಿರಬೇಕು. ಎಂಥದೋ ಮಧುರಾನುಭೂತಿ. ನಾನು ಆ ಪುಸ್ತಕಗಳನ್ನು ಮನೆಗೆ ತಂದಿಟ್ಟುಕೊಂಡಿದ್ದೆ. ಅಜ್ಜಯ್ಯನ ಮೇಲಿನ ಪ್ರೀತಿಯಿಂದಾಗಿ. ಈಗಲೂ ಆ ಪುಸ್ತಕಗಳು ಅಜ್ಜಯ್ಯನನ್ನು ನೆನಪಿಸುತ್ತ ನನ್ನ ಬಳಿ ಇವೆ. ಅಜ್ಜ ಸತ್ತಾಗ ನಾವು ಬಹಳ ದೂರದಿಂದ ಮಣ್ಣಿಗೆ ಬಂದಿದ್ದೆವು. ಊರನ್ನು ಪ್ರವೇಶಿಸಲು ಎಂಥದೋ ಹಿಂಜರಿಕೆ. ಅಜ್ಜನನ್ನು ಆ ಸ್ಥಿತಿಯಲ್ಲಿ ನೋಡುವುದು ನನ್ನಿಂದ ಸಾಧ್ಯವಾ ಎನಿಸಿತ್ತು. ಮನೆ ಹತ್ತಿರವಾದಂತೆ ಮನೆ ಮುಂದಿನ ಹೊಗೆ, ಒಳಗಿನ ಅಳು, ಸುತ್ತುಗಟ್ಟಿದ್ದ ಜನ ನನ್ನನ್ನು ಅಧೀರಳಾಗಿಸಿದ್ದವು. ನಾನೀಗ ಬಾಗಿಲಿಗೆ ಬಂದು ನಿಂತಿದ್ದೆ. ಅಜ್ಜನನ್ನು ಅವನು ಸದಾ ಮಲಗುತ್ತಿದ್ದ ಕಟ್ಟೆಯ ಮೇಲೆ ಇಂಟು ಮಾರ್ಕಿನ ರೀತಿಯಲ್ಲಿ ಕೋಲುಗಳ ಆಧಾರ ಕೊಟ್ಟು ಕೂರಿಸಲಾಗಿತ್ತು. ಹಣೆ ತುಂಬ ಮೂರು ಪಟ್ಟೆ ವಿಭೂತಿ, ಕತ್ತಲ್ಲಿ ದೊಡ್ಡ ಕರಡಿಗೆ, ಅವನ ಇಷ್ಟದ ಬಿಳಿ ಪಂಚೆ ಮತ್ತು ಹೊಚ್ಚ ಹೊಸ ಬಿಳಿ ಜುಬ್ಬ… ಈ ಎಲ್ಲ ಪೋಷಾಕಿನಲ್ಲಿ ಅವ ಈಗಿನ್ನು ಸ್ನಾನ ಮಾಡಿ ಸಂತೆಗೆ ಹೊರಟವನಂತೆ ಕಾಣುತ್ತಿದ್ದ.

Read Post »

ಅಂಕಣ ಸಂಗಾತಿ, ಹೊಸ ದನಿ-ಹೊಸ ಬನಿ

ಅಂಕಣ ಬರಹ ಹೊಸ ದನಿ ಹೊಸ ಬನಿ-೧೨. ಚದುರಿದ ಚಿತ್ರಗಳಲ್ಲೇ ಅರಳುವ ಹೂವುಗಳಂಥ ನರಸಿಂಹ ವರ್ಮ ಕವಿತೆಗಳು ವಿಟ್ಲದ ನರಸಿಂಹ ವರ್ಮ “ಆಕಾಶದ ಚಿತ್ರಗಳು” ಹೆಸರಿನ ಕವನ ಸಂಕಲನವನ್ನು ೨೦೧೯ರಲ್ಲಿ ಪ್ರಕಟಿಸುವುದರ ಮೂಲಕ ಈಗಾಗಲೇ ಸಾಹಿತ್ಯ ಲೋಕಕ್ಕೆ ಪರಿಚಿತರಾಗಿದ್ದಾರೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಕಾನೂನು ಅಧಿಕಾರಿಯಾಗಿ ಕೆಲಸ ಮಾಡುತ್ತಿರುವ ಅವರ ಕವಿತೆಗಳಲ್ಲಿ ಹುಡುಕಿದರೂ ವಾದ ವಿವಾದಗಳಾಗಲೀ, ವ್ಯವಸ್ಥೆಯ ಪರ ಅಥವ ವಿರೋಧದ ನಿಲುವಾಗಲೀ ಇಲ್ಲದೇ ಇರುವುದು ವಿಶೇಷ. ಜೊತೆಗೇ ವರ್ತಮಾನದ ಸಂಗತಿಗಳಿಗೆ ಥಟ್ಟನೆ ಪ್ರತಿಕ್ರಯಿಸಿ ಪದ್ಯವೊಂದನ್ನು ಹೊಸೆಯುವ ಅವಸರದ ಧಾವಂತ ಮತ್ತು ಸಾಮಾಜಿಕ ಜಾಲ ತಾಣಗಳಲ್ಲಿ ಸಾಮಾನ್ಯವಾಗಿ ಕಾಣುವ ವಿಚಾರವೊಂದನ್ನು ಮೇಲೆತ್ತುವ ಅಥವ ಇನ್ನಿಲ್ಲದಂತೆ ಅದನ್ನು ಆಕ್ಷೇಪಿಸುವ ರೀತಿಯಿಂದಲೂ ಅವರು ಮುಕ್ತರು. ಮತ್ತು ಆ ಕಾರಣದಿಂದಲೇ ಅವರು ಪ್ರಕಟಿಸುವ ಕವಿತೆಗೆ ಚಿದ್ವಿಲಾಸದ ಬಗ್ಗೆ ಅನನ್ಯ ಕಕ್ಕುಲತೆ ಮತ್ತು ಇಬ್ಬಂದಿತನದ ಬಗ್ಗೆ ವಿಶೇಷ ಕಾಳಜಿ. ಪ್ರಾಯಶಃ ಈ ಕಾರಣಕ್ಕೇ ನರಸಿಂಹ ವರ್ಮರ ಕಾವ್ಯ ಕೃಷಿಗೆ ವರ್ತಮಾನದ ಸಂಗತಿಗಳಿಗಿಂತಲೂ ಪೌರಾಣಿಕ ಮತ್ತು ಐತಿಹಾಸಿಕ ವ್ಯಕ್ತಿಗಳೂ ಘಟನೆಗಳೂ ಸಾದೃಶ ಪ್ರತಿಮೆಗಳಾಗಿ ಅವರ ಕವಿತೆಗಳ ವಕ್ತಾರಿಕೆಯನ್ನೂ ನಿಭಾಯಿಸುತ್ತವೆ.‌ ಮತ್ತು ಈ ಇದೇ ಕಾರಣಕ್ಕಾಗಿ ಜನ್ಮತಃ ಇರುವ ರಾಜಮನೆತನದ ಪ್ರಭಾವಳಿಯನ್ನು ಕಳಚಿಟ್ಟು ಸಾಮಾನ್ಯನಾಗಿ ನಡೆದು ಹೋದ ತಥಾಗತ ಬುದ್ಧನ ಹಾದಿ ಇವರಿಗೆ ಪ್ರಿಯವಾದುದಾಗಿದೆ. ಅವರ ಕವಿತೆಗಳು ಒಂದು ಸಾಮಾಜಿಕ ಚೌಕಟ್ಟು ಅಥವ ಬಂಧಗಳಿಂದ ದೂರ ಇರುವ ಕಾರಣ ಅವರ ಕವಿತೆಗಳಲ್ಲಿ ಅಧ್ಯಯನಶೀಲತೆ ಮತ್ತು ಪ್ರಾಮಾಣಿಕ ದರುಶನಗಳು ಪ್ರಕಟವಾಗುತ್ತವೆ. ಯಾವ ಕವಿ ಸತತ ಅಧ್ಯನಶೀಲನಾಗಿ ಇರುತ್ತಾನೆಯೋ ಅವನು ಯಾವತ್ತೂ ಯಾರನ್ನಾಗಲೀ ಅಥವ ಯಾವ ಒಂದು ನಿರ್ದಿಷ್ಟ ವಾದಕ್ಕಾಗಲೀ ಕಟ್ಟು ಬೀಳದೇ ಸ್ವತಃ ಸೃಜಿಸಿದ ಅನುಭವದ ಮೂಸೆಗಳಲ್ಲಿ ತನ್ನ ಅನಿಸಿಕೆಗಳನ್ನು ಬೆರೆಸಿ ಲೋಕದ ಕಣ್ಣಿಗೆ ಹಿಡಿಯುತ್ತಾನೆ. ಆ ಲೋಕವು ಹೀಗೇ ಇದೆ ಎಂದಾಗಲೀ ಹೀಗೇ ಇರಬೇಕು ಎಂಬ ವಾದವಾಗಲೀ ಆ ಅಂಥ ಜಿಜ್ಞಾಸುವಿಗೆ ಇರುವುದಿಲ್ಲ. ನನಗೆ ಅನಿಸಿದ್ದನ್ನು ಹೇಳಿದ್ದೇನೆ, ಒಪ್ಪುವುದು ಬಿಡುವುದು ಲೋಕದ ಸಂಗತಿ ಎಂದು ಮುಂದುವರೆಯುತ್ತಾನೆ. ಲೋಕ ಒಪ್ಪಿದರೂ ಅಷ್ಟೆ, ಒಪ್ಪದೇ ಇದ್ದರೂ ಅಷ್ಟೆ. ಲೋಕಾಂತದ ಅಗ್ನಿದಿವ್ಯಗಳನ್ನು ಅನುಲಕ್ಷಿಸದೇ ತನ್ನ ಪಾಡಿಗೆ ತಾನಿರುವ ನರಸಿಂಹ ವರ್ಮರಂತೆಯೇ ಅವರ ಪದ್ಯಗಳಲ್ಲೂ ಅಂಥದೇ ವಿವೇಕ ಸದಾ ಸರ್ವದಾ ಜಾಗೃತವಾಗಿರುವುದನ್ನು ಓದುಗ ಗಮನಿಸಬಹುದು. ಈ ಮಾತಿಗೆ ಉದಾಹರಣೆಯಾಗಿ ಅವರ ಈ ಕವಿತೆಯನ್ನು ನೋಡಬಹುದು. ಬಾಣಲೆಗೆ ಸುರಿವಾಗ ಸಾಸಿವೆಯೊಂದು ಪುಟಿದು ಹಾರಿ ಹೋಯಿತು ಛಲವಿಟ್ಟು ಹುಡುಕಿದರೆ ಸಾಸಿವೆಯೂ ದೊರಕೀತು : ಸೂಕ್ಷ್ಮವನೂ ಶೋಧಿಸಿದೆನೆಂದು ಬೀಗಿದೆ ಬುದ್ಧ ನಕ್ಕ : ನೀನು ಹುಡುಕಿದ್ದು ಬರಿಯ ಸಾಸಿವೆ , ಸಾವಿಲ್ಲದ ಮನೆಯ ಸಾಸಿವೆಯಲ್ಲ ಬಾಣಲೆಮನದ  ನೆಲೆಯಿಲ್ಲೀಗ ಸಾಸಿವೆಯ ಚಟಪಟ ಮತ್ತು ಒಗ್ಗರಣೆಯ ಘಮ . ಪದ್ಯದ ನೇಯ್ಗೆಯಲ್ಲಿ ವಿಶೇಷ ಇರದಿದ್ದರೂ ಸಾಸುವೆಯ ಪ್ರತಿಮೆಯ ಮೂಲಕ ಸಾವನ್ನು ಧೇನಿಸುವ ಕವಿ, ಕಾದ ಬಾಣಲೆಯಾದ ಮನದಲ್ಲಿ ಚಟಪಟಿಸುತ್ತಲೇ ಒಗ್ಗರಣೆಯ ಘಮಕ್ಕೆ ಅಂದರೆ ಬದುಕಿನ ಸಾರವನ್ನೂ ಗ್ರಹಿಸುತ್ತಾನಲ್ಲ ಅದು ವಿಶೇಷವೇ. ಕವಿತೆಯ ಎರಡನೆಯ ಪ್ಯಾರ “ದೊರಕೀತು” ದೊರಕಿತು ಆದರೆ ಮಾತ್ರ ಪದ್ಯಕ್ಕೆ ಮತ್ತಷ್ಟು ಝಳ ಬಂದೀತು‌. ಸದ್ಯಕ್ಕಿಲ್ಲಿ ಯಾವುದೂ ಸರಾಗವಲ್ಲ : ಹಳೆಯ ರಾಗ ಬದಲಾಗಿಲ್ಲ , ಅಬ್ಬರಿಸಿ ಬೊಬ್ಬಿರಿಯುವುದನ್ನು ರಾಗವೆನ್ನಲಾಗುವುದಿಲ್ಲ. ಎಂದು ಕೊನೆಯಾಗುವ ಅವರ ಕವಿತೆಯೊಂದು ನಮ್ಮನ್ನು ಆಕರ್ಷಿಸುವ ವಿವಿಧ ಇಸಂಗಳನ್ನು ಕುರಿತು ಹೇಳುತ್ತಲೇ ಕಡೆಗೆ ಯಾವ ಸಿದ್ಧಾಂತವೂ ಸರಾಗ ಒಲಿಯದು ಮತ್ತು ಎಲ್ಲ ವಾದ ಮತ್ತು ಸಿದ್ಧಾಂತಗಳಲ್ಲೂ ಮತ್ತದೇ ಹಳೆಯದೇ  ರಾಗದ ಛಾಯೆ ಇರುವಾಗ ಅಬ್ಬರಿಸಿ ಕೂಗಿದ ಮಾತ್ರಕ್ಕೆ ಅದನ್ನು ಹೊಸ ರಾಗ ಎನ್ನಲಾಗುವುದಿಲ್ಲ ಎಂಬ ತೀರ್ಮಾನ ಕೂಡ ಎಲ್ಲ ಸಿದ್ಧಾಂತಗಳ ತಲಸ್ಪರ್ಶೀ ಅಧ್ಯಯನದಿಂದ ಪಡೆದ ಕಾಣ್ಕೆಯೇ ಆಗಿದೆ. ಈ ‍ಸ್ತಬ್ಧಗೊಂಡ ‍‌‌ಅನಾಥ ಬೀದಿಗಳಲ್ಲಿ ಯಾವ ಕವಿತೆಗೂ ಜಾಗವಿಲ್ಲ : ಒಂಟಿ ‍ಅರಮನೆಯಲ್ಲೂ ತಕ್ಷಕನ ನೆನಪು ಯಾವ ಫಲದಲ್ಲಿ ಯಾವ ಹುಳವೋ ಪರೀಕ್ಷಿತನಿಗಿಲ್ಲಿ ನಿದ್ದೆಯಿಲ್ಲ. ಎನ್ನುವ ಸಶಕ್ತ ಅಂತ್ಯವಿರುವ ಕವಿತೆಯಲ್ಲಿ ಕರೋನಾದ ಭೀತಿಯನ್ನು ಪದ್ಯವಾಗಿಸಿರುವ ರೀತಿಗೆ ಕೂಡ ತಕ್ಷಕ ಮತ್ತು ಪರೀಕ್ಷಿತರು ಇಣುಕುವುದರಿಂದ ನಮ್ಮೊಳಗೇ ಇರುವ ಯಯಾತಿ ಕೂಡ ಭಯದಿಂದ ನಡುಗುತ್ತಾನೆ. ನೀವು ನನ್ನತ್ತ ಎಸೆದ  ಕಲ್ಲುಗಳನ್ನು ಆಯ್ದು ಜೋಪಾನವಾಗಿ  ಕಾಯ್ದಿರಿಸಿದ್ದೇನೆ ತುಕ್ಕು ಹಿಡಿಯುತ್ತಿದೆಯೇನೋ ಬದುಕಿಗೆ ಎಂದೆನಿಸಿದಾಗಲೆಲ್ಲ‌ಾ ಬಾಳುವ ಹೊನ್ನಛಲವೀಯುವ ಪರುಷಮಣಿಗಳವು ಕಲ್ಲೆಸವ ಕೈಗಳಿಗೂ ಒಂದು ಸಲಾಮ್ ಇದೊಂದು ಮುಂಗಾಣ್ಕೆಯ ಕವಿತೆ. ಕವಿತೆಗಳು ಕೂಡ ಬದುಕಿನ ಭಾಷ್ಯ ಎಂದು ಲಾಕ್ಷಣಿಕರು ಹೇಳಿದ ಮಾತು ಈ ಇಂಥ ಸಾಲುಗಳಲ್ಲಿ ಜೀವಂತವಾಗಿದೆ. ಯಾರು ಯಾರೋ ಯಾವುದೋ ಕಾರಣಕ್ಕೆ ಹೊಡೆದ ಕಲ್ಲುಗಳನ್ನು ಸಂಗ್ರಹಿಸಿ ಇಟ್ಟು ಕೊಂಡ ಕವಿ ಬದುಕು ಉಧ್ವಸ್ತಗೊಂಡಾಗಲೆಲ್ಲ ಆ ಪರುಷಮಣಿಯಂಥ ಮುಟ್ಟಿಸಿದೊಡನೆಯೇ ಬಂಗಾರವಾಗಿ ಬದಲಾಗುವ ಸರಕಾಗಿಸುವುದು ಕೂಡ ಕೌತುಕವೇ ಹೌದು. ಹೀಗೆ ಕಣ್ಣು ಕೆಂಪಾಗಿಸಿ ‌ಅವಳು ಸುಳಿದಾಡುವುದು ಹೊಸತೇನಲ್ಲ ಕವಿಗೆ : ಆದರೂ ವಾಡಿಕೆಯಂತೆ ಕೇಳಿದ ‘ಏನಾಯಿತು’ ಎಂದು ‘ ಕಣ್ಣಿಗೆ ಯಾವುದೋ ಹುಳ ಬಿದ್ದಿರಬೇಕು ‘ ಅಂದಳು ನೋಡಿದರೆ ಏನೂ ಇಲ್ಲ ‘ನಿನ್ನ  ತಲೆಯೊಳಗಿರುವ ಹುಳ ಕಣ್ಣಿಗೆ ಹೊಕ್ಕಿರಬಹುದು’ ‌ಎಂದದ್ದು ಕವಿಯ ಕಾವ್ಯಾತ್ಮಕ ಪ್ರಯೋಗ ‘ನಿಮ್ಮ ಕವಿತೆಯ ಹಾಗೆ ‘ಅಂದಳು ನಿಟ್ಟುಸಿರ ನಂತರ ಮತ್ತೆ ಉಸುರಿದಳು : ‘ನಿನ್ನೆ ಇಡೀ ದಿನ ಇಡೀ ರಾತ್ರಿ ಕಾದೆ ನಮ್ಮ ಮದುವೆಯ ದಿವಸ ನಿಮಗೆ ನೆನಪಾಗುವುದೇ ಎಂದು , ನಿಮ್ಮ ತಲೆಯೊಳಗಿನ  ಕವಿತೆ ಹುಳದಂತೆ ಕಣ್ಣಿಗಿಳಿದಿದ್ದರೂ ಪರವಾಗಿರಲಿಲ್ಲ ಪೊರೆಯಂತೆ  ಕಣ್ಣನ್ನೇ ಕಾಡಿತು ‘ ಅಂದಳು ಕವಿತೆಯ ಪೊರೆ ಒಮ್ಮೆಲೇ ಕಳಚಿತು. ಪ್ರಾಯಶಃ ಈ ಕವಿತೆಯ ಯಾವುದೇ ಸಾಲನ್ನು ಕತ್ತರಿಸಿ ಇಲ್ಲಿ ಕೋಟ್ ಮಾಡಿದ್ದಿದ್ದರೆ ಇಡಿಯ ಪದ್ಯದ ಮೂಲಕ ಕವಿ ಹೇಳ ಹೊರಟದ್ದೇನು ಎನ್ನುವುದು ಶೃತಪಡಿಸಲಿಕ್ಕೆ ಆಗದ ಕಾರಣ ಇಡೀ ಪದ್ಯವನ್ನು ಇಲ್ಲಿ ಓದಿಸಿದ್ದೇನೆ. ಏಕೆಂದರೆ ಇದು ಈ ಕವಿಯೊಬ್ಬನ ತಪ್ಪಲ್ಲ, ಬಹಳಷ್ಟು ಜನ ನಾವು ನಮ್ಮದೇ ಜರೂರುಗಳಲ್ಲಿ ಕಳೆದು ಹೋಗುತ್ತ ನಿಜಕ್ಕೂ “ಶುಭಾಷಯ” ಹೇಳಲೇ ಬೇಕಾದ ಕನಿಷ್ಠ ಸಂತೈಸಬಹುದಾದ ಸಂಗತಿಗಳನ್ನ ಮರೆತು ಬಿಡುತ್ತೇವಲ್ಲ ಅದರ ಅಭಿವ್ಯಕ್ತಿ ಇಲ್ಲಿ ಸಲೀಸಾಗಿ ಬಂದಿದೆ‌. ಒಂದು ಸಣ್ಣಕತೆಯೇ ಆಗಿ ಬದಲಾಗಿದೆ. ಬಯಲಲ್ಲಿ ಬಯಲೆನಿಸಿಕೊಂಡ ಜಂಗಮ ಬೆಳಕು ಎಲ್ಲಿ  ಹೋಯಿತು ? ಎಂದು ಎಲ್ಲವೂ ವ್ಯಾಪಾರವೇ ಆಗಿ ಬದಲಾಗಿರುವ ವರ್ತಮಾನದ ಬದುಕನ್ನು ಪ್ರಶ್ನಿಸುವ ಕವಿಯ ಈ ಪ್ರಶ್ನೆ ನಮ್ಮೆಲ್ಲರದ್ದೂ ಆಗ ಬೇಕಾದ ತುರ್ತು ಸಮಯ ಇದಾಗಿದೆ. “ಆಕಾಶದ ಚಿತ್ರಗಳು” ಶೀರ್ಷಿಕೆಯ ಪದ್ಯದ ಈ ಸಾಲುಗಳು ಅಲ್ಲೊಬ್ಬಳು ಹಳೇ ನೈಟಿಯ ಆಂಟಿಗೆ ಗೊರಕೆ ಗಂಡನ ಪಕ್ಕದಲ್ಲಿ ಮಲಗಿ ನೂರು ನಿಟ್ಟುಸಿರುಗಳ ಕಾದ ನಟ್ಟಿರುಳಲ್ಲೂ ಇಂದ್ರಚಾಪದ ಬೆನ್ನೇರಿ ಆಗಸಕ್ಕೇರುವ ಕನವರಿಕೆ, ಬೆಚ್ಚೆದ್ದ ಗಂಡನ ಸಂಶಯದ ಕಂಗಳಲ್ಲಿ ಗೌತಮನ ಶಾಪದ ಪಳೆಯುಳಿಕೆ ಎನ್ನುವ ಅದ್ಭುತ ರೂಪಕವಾಗಿದೆ. ಒಂದೇ ಒಂದು ಹೊಸ ರೂಪಕವೊಂದನ್ನು ಒಬ್ಬ ಹೊಸ ಕವಿ ಸೃಷ್ಟಿಸಿದರೆ ಆ ಕವಿ ಬಹಳ ಕಾಲ ಉಳಿಯುತ್ತಾನೆ ಎಂಬ ಮಾತಿದೆ. ಹಾಗಾಗಿ ಶ್ರೀ ನರಸಿಂಹ ವರ್ಮನೆಂಬ ಈ ಕವಿ ಬಹುಕಾಲ ಉಳಿಯುವರು ಎಂಬುದಕ್ಕೆ ಸಾಕ್ಷಿಯೂ ಆಗಿದೆ ಈ ಸಾಲುಗಳು. ತಮ್ಮದೇ ಓದಿನಿಂದ ಕಂಡುಕೊಂಡ ದಾರಿಯಲ್ಲೇ ಸಾಗುವ ಈ ಕವಿ ಅಪರೂಪಕ್ಕೆ ಎಂಬಂತೆ “ಸ್ಪರ್ಶವೆಂದರೆ ಮುಟ್ಟುವಿಕೆಯಲ್ಲ ತಟ್ಟುವಿಕೆ” ಎಂದೂ ಕಾಣಿಸಬಲ್ಲ ಛಾತಿ ಉಳ್ಳವರು. ದೂರದ ಬೆಟ್ಟವನ್ನು ಕಣ್ಣ ಮುಂದೆ ಹಿಡಿಯ ಬಲ್ಲಂತೆಯೇ ತಮ್ಮೊಳಗಿನ ದೇವರನ್ನೂ ಕಾಣಿಸ ಬಲ್ಲವರು‌‌. ಶ್ರೀ ನರಸಿಂಹ ವರ್ಮರು ಕಾನೂನು ಕಟ್ಟಳೆ ಅರಿತ ಕಾರಣ ಅವರಿಗೆ ಯಾವುದು ತಪ್ಪು ಯಾವುದು ಸರಿ ಎಂಬ ಸೈದ್ಧಾಂತಿಕ ಕಾರಣಗಳಾಚೆಯ ಅವರವರ ಲೋಕದ ಅರಿವು ಸಿದ್ಧಿಸಿದೆ‌. ಪ್ರಾಯಶಃ ಆ ಅರಿವೇ ಅವರೆಲ್ಲ ಕವಿತೆಗಳಿಗೂ ಹೊದಿಸಿದ ಅರಿವೆಯೂ ಆಗಿದೆ. ಆದರೆ ನಾವು ಹೊದ್ದ ಅರಿವೆಗಳನ್ನು ಕಳಚದೇ ನಿಜದ ನಗ್ನತೆಗೆ ಇರುವ ಚೆಲುವು ಮತ್ತು ಗಟ್ಟಿತನ ಅಲಂಕಾರದಲ್ಲಿ ಮರೆವೆಯಾಗಿ ಬದಲಾಗಬಾರದು. ಅವರ ಮುಂದಿನ ಪದ್ಯಗಳ ಬಗ್ಗೆ ಭರವಸೆ ಮತ್ತು ಅಪರೂಪದ ತಿಳುವಳಿಕೆಯ ಗಂಧದ ಪರಿಮಳ ಸೂಸುತ್ತಲೇ ಆಳದಾಳದ ತಿಳಿವನ್ನು ಪುನರ್ಮನನ ಮಾಡಿಸುವ ಅವರ ಕಾವ್ಯ ಕೃಷಿಗೆ ಶುಭಾಷಯ ಹೇಳುತ್ತ ಅವರ ಆಯ್ದ ಕವಿತೆಗಳನ್ನು ನಿಮ್ಮ ಓದಿಗೆ ಶಿಫಾರಸು ಮಾಡುತ್ತ ಈ ಟಿಪ್ಪಣಿ ಮುಗಿಸುತ್ತೇನೆ. ನರಸಿಂಹ ವರ್ಮರ ಆಯ್ದ ಕವಿತೆಗಳು. 1. ಹೊರಗೆ ‌ಅಡ್ಡಾಡುವುದಿಲ್ಲ ಈಗ ಕವನ : ಹಾಳೆಯಲ್ಲೇ ತೆವಳುತ್ತದೆ ಕದಲದಂತೆ ಕದಲಿ ಕದಲಿಸುತ್ತಿದೆ ‍‌‍ಅವ್ಯಕ್ತ ‌‌ಹುಳದ ಧ್ಯಾನ ‌ಕವಿತೆಗೂ ಬೇಕು ಮಾರುಕಟ್ಟೆ ‍‌ಅಕ್ಷರಗಳಿಗೆ ಮೆರವಣಿಗೆ : ಈಗ ಮ‌ಾತ್ರ ಬೇಡವೇ ಬೇಡ ವಿಮರ್ಶೆ, ಹೊಗಳಿಕೆ ಕೋವಿದ ಎಂದು ಬಣ್ಣಿಸಿದರೆ ಕೋವಿಡ ಎಂದಂತೆ  ಭಾಸವಾಗಿ ಭಾಷೆ  ಭಯ ಹುಟ್ಟಿಸುತ್ತಿದೆ ಈ ‍ಸ್ತಬ್ಧಗೊಂಡ ‍‌‌ಅನಾಥ ಬೀದಿಗಳಲ್ಲಿ ಯಾವ ಕವಿತೆಗೂ ಜಾಗವಿಲ್ಲ : ಒಂಟಿ ‍ಅರಮನೆಯಲ್ಲೂ ತಕ್ಷಕನ ನೆನಪು ಯಾವ ಫಲದಲ್ಲಿ ಯಾವ ಹುಳವೋ ಪರೀಕ್ಷಿತನಿಗಿಲ್ಲಿ ನಿದ್ದೆಯಿಲ್ಲ. 2. ಟ್ರಾಫಿಕ್ ಜಂಜಾಟದಲ್ಲಿ ಕಾರು ಚಲಾಯಿಸುತ್ತಾ ಅವನು ಧ್ಯಾನಕೇಂದ್ರದ ಬಗ್ಗೆ ಧ್ಯಾನಿಸುತ್ತಾನೆ : ಧ್ಯಾನ ಕೇಂದ್ರದೊಳಗೆ ಕಾಲಿಟ್ಟೊಡನೆ ಧ್ಯಾನ ಮಾಯವಾಗುತ್ತದೆ ಬಣ್ಣಬಣ್ಣದ ದಿರಿಸುಗಳ    ಸಾಲಿನಿಂದ ತೇಲಿ ಬಂದ ಲಘು ಅತ್ತರಿಗೆ ತತ್ತರಿಸಿ ಅವನು ಮಾಯೆಯ ಬಗ್ಗೆ ಗಾಢವಾಗಿ ಚಿಂತಿಸುತ್ತಾನೆ : ಧ್ಯಾನಕೇಂದ್ರದೊಳಗೆ ನಿಧಾನವಾಗಿ ಮಾಯೆ ಆವರಿಸತೊಡಗುತ್ತದೆ ಹೊರಗೆ ಕಾರಿನಲ್ಲಿ ಎಸಿಯಿಂದ ಬೇಸತ್ತ ಶ್ವಾನ ಅತಂತ್ರಗೊಂಡು ಹಣಕಲು ಹವಣಿಸುತ್ತಿದೆ  : ರಸ್ತೆಯ ‌ಆಚೆ ಬದಿಯಲ್ಲಿ ಹೆಣ್ಣುಸೊಣಗವೊಂದು ಸ್ವತಂತ್ರವಾಗಿ ಸಂಚರಿಸುತ್ತಿದೆ ಜಗದೊಳಗಿನ ಎಲ್ಲಾ ಮಾಯೆಗಳೂ ಉದರಂಭರಣಕ್ಕೆ ಪ್ರವಚನಗಳಾಗಿ ಗೋಡೆಗಳೊಳಗೆ ಪ್ರವಹಿಸುತ್ತಿವೆ “ಮನದ ಮುಂದಣ ಆಸೆಯೇ ಮಾಯೆ ಕಾಣಾ” ಎಂಬ ಸರಳ ಅಧ್ಯಾತ್ಮ ಅಲ್ಲೇ ಪಕ್ಕದ ಸೆಕೆಂಡ್ ಹ್ಯಾಂಡ್ ಪುಸ್ತಕದಂಗಡಿಯಲ್ಲಿ ಬಯಲಾಗಿ ಬಿದ್ದಿದೆ. 3. ಬಯಲೊಳಗಿದ್ದ ಯೋಗದ ಬಟ್ಟಲುಗಳೀಗ ‌ಅಂಗಡಿಯೊಳಗೆ ದೊರೆವುದೆಂದು ದಾಂಗುಡಿಯಿಡುವ ಜನರು ಎಲ್ಲೆಡೆಗೂ ಹುಯಿಲೋ ಹುಯಿಲು ಬಯಲೊಳಗಿದ್ದ ಬಟ್ಟಲುಗಳೊಳಗೆ ಬೆಟ್ಟದಷ್ಟು ಕುತೂಹಲಗಳು ಒಂದು ನಂಬಿಕೆಗೆ ಹಲವು ನಾಮರೂಪಗಳು ಬಸಿರುಸಿರ ಬಿಗಿ ಹಿಡಿದು ಜಗದುಸಿರೊಳಗೊಂದಾಗುವ ಕನಸ ಸಾಹಸಗಳು ತನುವಿನೊಳಗೊಂದು ಹಾವು ಹಾವಿನೊಳಗೆ ಹೂವುಗಳನಿಟ್ಟು ತಲೆ ದಾಟಬಲ್ಲ ನರ ಕಲ್ಪನಾ ವ್ಯೂಹಗಳು ಬದಲಾದ ಕಾಲದಲಿ ಅಂಗಡಿ ಮುಂಗಟ್ಟುಗಳಲಿ ಮೂಟೆ ಮೂಟೆ ಹಣ ಸುರಿದು ನಕಲಿ ಬಟ್ಟಲುಗಳನೂ ಕೊಳ್ಳಬಲ್ಲ  ಭೋಗಿಗಳು : ಕೊಳ್ಳೆ ಹೊಡೆವ ವ್ಯಾಪಾರಕ್ಕಿಳಿದ ನಕಲಿ ಯೋಗಿಗಳು ಬಯಲಲ್ಲಿ ಬಯಲೆನಿಸಿಕೊಂಡ ಜಂಗಮ ಬೆಳಕು ಎಲ್ಲಿ  ಹೋಯಿತು ? 4. ಕರೆ ಶೂನ್ಯದಲ್ಲೇ ದೃಷ್ಟಿ ನೆಟ್ಟು ಕಂಗೆಟ್ಟು ಕಣ್ಣ ಬೆಳಕನ್ನೇ ಕಳಕೊಂಡವರ ಕಡೆಗೆ ಕಡೆಗಣ್ಣನಾದರೂ ಹಾಯಿಸು; ಕಣ್ಣಿಂದ ಕಣ್ಣಿಗೆ ಸುಳಿಯಲಿ ಭರವಸೆಯ ಮಿಂಚು ಹರಿಸು ಭರವಸೆಯ ಬೆಳಕು! ಸಕಲ ಸ್ನಾಯುಗಳನ್ನೂ ಬಿಗಿಗೊಳಿಸಿ ಹುಬ್ಬುಗಂಟಿಕ್ಕಿ ಬೊಬ್ಬಿರಿಯುವ ಸದಾ ಉದ್ವಿಗ್ನ ಮಂದಿಯೂ ಬಿದ್ದು ಬಿದ್ದು ನಗುವಂತೆ ಖುದ್ದು ನಗು, ನಗಿಸು, ನಗುತ ಬಾಳು ಹಬ್ಬಿಸು ನಗೆಯ ಬೆಳಕು! ಜಡ್ಡುಗಳೂ ಗೊಡ್ಡುಗಳೂ ಬಡ್ಡಾದ ಹೆಡ್ಡುಗಳೂ ಸಿಡಿದು ಚೂರಾಗುವಂತೆ ಹೊಡೆದೊಡೆಯುವ ವಿವೇಚನೆಯ ಪಟಾಕಿಗಳ ಹಂಚು ಜನ ಮಾನಸಕೆ ಉಬ್ಬಿಸು ಸ್ವಾಭಿಮಾನದ ಬೆಳಕು! ತಮಸೋಮ‌ಾ ಜ್ಯೋತಿರ್ಗಮಯ ಎಂಬ ಚಿಂತನೆಯ ಬೆಳಕು ಜಾತಿ ಮತ ಕಾಲ ದೇಶಗಳ ಮೀರಿ ದಿಸೆದಿಸೆಗಳಿಗೂ ಹರಿದಾಗ ಜಗದ ತುಂಬೆಲ್ಲ ನಿತ್ಯ ದೀಪಾವಳಿ! ಅದಕ್ಕಾಗಿ ನೀನು ದಯವಿಟ್ಟು ಬೆಳಕು ಹಚ್ಚು ಕಿಚ್ಚು ಹಚ್ಚಬೇಡ! 5. ಆಕಾಶದ ಚಿತ್ರಗಳು  ಯಾವುದೋ

Read Post »

ಕಾವ್ಯಯಾನ

ಮೋಹದ ಕಡಲಲ್ಲಿ…

ಕವಿತೆ ಮೋಹದ ಕಡಲಲ್ಲಿ… ಜಯಲಕ್ಷ್ಮೀ ಎನ್ ಎಸ್ ಕೋಳಗುಂದ ಅಂಗ ಸಂಗವ ಜರೆದುಅರಿವೆ ಹಂಗನು ತೊರೆದುಬೆತ್ತಲಾದ ಅಕ್ಕಯ್ಯನಿಗೂಆತ್ಮ ಸಂಗಾತದ ಮೋಹ..! ಮಾಯೆಯ ಜಗದೊಳಗೆಈಸಿ ಗೆದ್ದ ಅಲ್ಲಮನಿಗೂಲಿಂಗದಾಲಿಂಗನದ ಮೋಹ…! ಕಾನನದ ಕಾರ್ಪಣ್ಯಗಳಅರಿವಿದ್ದೂ ಸೀತೆಯ ಬಿಡದಬಂಗಾರದ ಮೋಹ…! ಬಸುರಿ ಹೆಂಡತಿಯಕಾಡಿಗಟ್ಟಿದ ಪುರುಷೋತ್ತಮನಜನಪದದ ಮೋಹ..! ಮಡದಿಯ ಅಡವಿಟ್ಟೂಮಾತುತಪ್ಪದ ಹರೀಶ್ಚಂದ್ರನಸತ್ಯನಿಷ್ಠೆಯ ಮೋಹ..! ಗೆದ್ದ ರಾಜ್ಯವ ಒದ್ದುತಪೋನಿರತನಾದವನಿಗೂಜಿತನಾಗುವ ಮೋಹ…! ಸಾವಿನ ಬಾಗಿಲಿನಲಿ ನಿಂತಅರಿವಿದ್ದೂ ಫಣಿಕೇತನನಿಗೆಛಲಮೆರೆವ ಮೋಹ..! ತುಂಡು ಅರಿವೆಯ ಮಂಡಿಯ ಮೇಲೆಸುತ್ತಿಕೊಂಡ ಫಕೀರನಿಗೆಮುಕ್ತಿ ಕೊಡಿಸುವ ಮೋಹ…! ಮೋಹವ ಗೆದ್ದೂ ಗೆಲ್ಲದನಿರ್ಮೋಹಿಗಳೂಮೋಹದ ಕಡಲೊಳಗಿನಆಣಿಮುತ್ತುಗಳಾದರು….!! **************************************

ಮೋಹದ ಕಡಲಲ್ಲಿ… Read Post »

ಕಾವ್ಯಯಾನ

ಅವ್ಯಕ್ತ

ಕವಿತೆ ಅವ್ಯಕ್ತ ಡಾ.ಪ್ರೀತಿ. ಕೆ. ಎ  ಹೇಳಿಬಿಡಬಹುದಿತ್ತು ನಾನುನಿನ್ನ ಪ್ರತಿಯೊಂದು ಮಾತುನನ್ನಲ್ಲಿ ಅನುರಾಗದ ಅಲೆಗಳನ್ನುಎಬ್ಬಿಸುವುದೆಂದು ನಿನ್ನ ಸಾಮೀಪ್ಯವು ನನಗೆಎಷ್ಟೊಂದು ಮುದನೀಡುವುದೆಂದು ಹೇಳಿಬಿಡಬಹುದಿತ್ತು ನಾನುನಿನ್ನ ಹೊಗಳಿಕೆಯೊಂದುಇಂದಿಗೂ ಕೂಡನನ್ನ ಕೆನ್ನೆಯ ರಂಗೇರಿಸುವುದೆಂದು ನನ್ನ ನಗೆಯ ಹಿಂದಿನಕಾರಣವು ನೀನಷ್ಟೇಆಗಿರುವೆಯೆಂದು ಹೇಳಿಬಿಡಬಹುದಿತ್ತು ನಾನುನಿನ್ನ ಒಂದೇ ಒಂದು ಸ್ಪರ್ಶನನ್ನೊಳಗಿನ ಭಾವ ತಂತಿಯನ್ನುಮೀಟುವುದೆಂದು ನಿನ್ನ ಬಾಹುಗಳಲ್ಲಿನನ್ನನ್ನೇ ನಾನುಕಳೆದುಕೊಳ್ಳುತ್ತೇನೆಂದು ಹೇಳಿಬಿಡಬಹುದಿತ್ತು ನಾನುನೀನು ನನ್ನೊಡನಿದ್ದ ಕ್ಷಣನನಗೆ ಮತ್ತೇನೂನೆನಪಾಗುವುದಿಲ್ಲವೆಂದು ಎದೆ ಬಡಿತ ನಿಲ್ಲುವ ತನಕನನ್ನ ಹೃದಯ ನಿನ್ನ ಹೆಸರನ್ನಷ್ಟೇಕೂಗುವುದೆಂದು ಆದರೂ ಹೇಳಲಿಲ್ಲಏಕೆಂದರೆ ನನಗೆ ಗೊತ್ತುನಿನ್ನೆಡೆಗಿನ ನನ್ನ ಪ್ರೀತಿಹೇಳಿದರಷ್ಟೇ ನಿನಗೆ ಗೊತ್ತಾಗುವಷ್ಟುಬಲಹೀನವಲ್ಲವೆಂದು ! **********************************

ಅವ್ಯಕ್ತ Read Post »

ಇತರೆ

ಅವಲಕ್ಕಿ ಪವಲಕ್ಕಿ

ಮಕ್ಕಳ ಕಥೆ ಅವಲಕ್ಕಿ ಪವಲಕ್ಕಿ ಗಿರೀಶ ಜಕಾಪುರೆ –                       ಅವಲಕ್ಕಿ ಪವಲಕ್ಕಿ             ಕಾಂಚಣ, ಮಿಣಮಿಣ             ಡಾಮ್ ಡೂಮ್ ಟಸ್ ಪುಸ್ಸ             ಕೋಯ್ ಕೊಟಾರ್             ಅವಲಕ್ಕಿ ಪವಲಕ್ಕಿ             ‘ಸಿರಿ ಟೀಚರ್ ಬಹಳ ಚೆಂದ ಹಾಡು ಹೇಳ್ತಾರೆ’ ಎಂದ ಚಿಂಟೂ ರಮಿಯತ್ತ ನೋಡುತ್ತ.             ‘ಅಷ್ಟೇ ಅಲ್ಲ ಮಾರಾಯಾ, ಎಷ್ಟು ಚೆಂದ ಡಾನ್ಸ್ ಹೇಳಿಕೊಡ್ತಾರೆ, ನೋಡು’ ಎಂದ ರಮಿ. ವಿಷಯ ಉತ್ಸಾಹದ್ದಾಗಿದ್ದರೂ ಅವನ ದನಿ ಏಕೋ ಸಪ್ಪಗಿತ್ತು.             ಚಿಂಟೂಗೆ ಅವಲಕ್ಕಿ ಅಂದರೆ ತುಂಬ ಇಷ್ಟ. ಬೇರೆ ಯಾವ ತಿಂಡಿಯೂ ಅವನಿಗೆ ಸೇರಲ್ಲ, ಅವಲಕ್ಕಿ ಇದ್ದರೆ ಅವನು ಬೇರೇನೂ ಬೇಡಲ್ಲ. ಈಗ ಸಿರಿ ಮೇಡಂ ಅವಲಕ್ಕಿ ಹಾಡು ಹೇಳಿಸಿದ್ದೂ ಅವನಿಗೆ ಇನ್ನಷ್ಟು ಖುಷಿ ಕೊಟ್ಟಿತ್ತು.             ಮೂರನೇ ಕ್ಲಾಸಿನ ಮಕ್ಕಳಿಗೆ ಅವರ ಕ್ಲಾಸ್‌ಟೀಚರ್ ಶ್ರೀದೇವಿ ಮೇಡಂ ಅವರು ವಾರ್ಷಿಕ ಸ್ನೇಹಸಮ್ಮೇಳನಕ್ಕಾಗಿ ಅವಲಕ್ಕಿ ಪವಲಕ್ಕಿ ಹಾಡಿನ ಪ್ರದರ್ಶನಕ್ಕೆಂದು ಮಕ್ಕಳಿಂದ ಅಂತಿಮ ರಿಹರ್ಸಲ್ ಮಾಡಿಸಿಕೊಳ್ಳುತ್ತಿದ್ದರು. ಊಟದ ಬಿಡುವಿತ್ತು. ಮಕ್ಕಳು ತಮ್ಮ ತಮ್ಮ ಟಿಫನ್ ಬಾಕ್ಸ್ ತೆರೆದು ತಿಂಡಿ ತಿನ್ನುತ್ತ ಮಾತಾಡುತ್ತಿದ್ದರು. ಚಿಂಟೂನ ಅಮ್ಮ ಅವನ ಫೆವ್ಹರಿಟ್ ಅವಲಕ್ಕಿ ಕೊಟ್ಟಿದ್ದರು. ರಮಿ ಮಾತ್ರ ಶಾಲೆಯ ಬಿಸಿಯೂಟದ ಅನ್ನ ತಿನ್ನುತ್ತಿದ್ದ. ಚಿಂಟೂ ಅವನಿಗೂ ಸ್ವಲ್ಪ ಅವಲಕ್ಕಿ ಕೊಟ್ಟು, ಅವನಿಂದ ತಾನೂ ಸ್ವಲ್ಪ ಅನ್ನ ಪಡೆದಿದ್ದ.             ‘ಯಾಕೋ ರಮಿ, ಸಪ್ಪಗಿದ್ದೀಯಾ?’ ಚಿಂಟೂ ಕೇಳಿದ.             ‘ನಾಳೆಯೇ ಗ್ಯಾದರಿಂಗ್ ಅಲ್ವಾ?’             ‘ಹೌದು, ಅದಕ್ಕೇನಾಯ್ತು?’             ‘ಸಿರಿ ಮೇಡಂ, ಗ್ಯಾದರಿಂಗ್ ಫೀಸ್ ಕೊಡಲು ಹೇಳಿದ್ರು. ನನ್ನಪ್ಪ ಇನ್ನೂ ಫೀಸ್ ಕಟ್ಟಿಲ್ಲ. ಫೀಸ್ ಕಟ್ಟದಿದ್ದರೆ ಗ್ಯಾದರಿಂಗ್‌ನಲ್ಲಿ ಭಾಗವಹಿಸಲು ಅವಕಾಶ ಇಲ್ಲ ಅಂತ ಹೇಳಿದ್ದಾರೆ’ ಎಂದ. ಮುಖ ಇನ್ನಷ್ಟು ಚಿಕ್ಕದಾಗಿತ್ತು.             ‘ಹೌದಲ್ವ? ಮತ್ತೆ, ಈಗ ಏನು ಮಾಡೋದು?’ ಚಿಂಟೂ ಕೇಳಿದ.             ‘ಅದೇ ತಿಳೀತಿಲ್ಲ, ಇವತ್ತು ಹೋಗಿ ಅಪ್ಪನಿಗೆ ಮತ್ತೆ ಫೀಸ್ ಕಟ್ಟಲು ಹೇಳುವೆ’ ಎಂದ. ಆಶಾಕಿರಣ ಮೂಡಿತು.             ಅವರು ತಿಂಡಿ ಮುಗಿಸಿ ಕೈತೊಳೆಯುವ ಹೊತ್ತಿಗೆ ಬೆಲ್ ಆಯ್ತು.             ಕ್ಲಾಸ್‌ನಲ್ಲಿ ಸಿರಿ ಟೀಚರ್ ‘ನೋಡಿ ಮಕ್ಕಳೆ, ನಾಳೆ ಎಲ್ಲರೂ ಸಾಯಂಕಾಲ ಗ್ಯಾದರಿಂಗ್ ಸಿದ್ಧತೆಯೊಂದಿಗೆ ಬರಬೇಕು, ನಿಮ್ಮ ತಂದೆ-ತಾಯಿ, ಅಕ್ಕ, ಅಣ್ಣ, ತಮ್ಮ, ತಂಗಿ ಎಲ್ಲರನ್ನೂ ಕರೆತರಬೇಕು. ನೀವು ಹಾಡೋದು, ಡಾನ್ಸ್ ಮಾಡೋದು ಅವರು ನೋಡಬೇಕು ತಾನೆ? ಸಂಜೆಯ ಟಿಫನ್ ತರೋದು ಮರೀಬಾರದು’ ಎಂದು ಸೂಚಿಸಿದರು.             ಮಕ್ಕಳೆಲ್ಲ ‘ಹೋ.. ಎಸ್ ಟೀಚರ್..’ ಎಂದರು ಹಿಗ್ಗಿನಿಂದ. ರಮಿಯ ದನಿ ಮಾತ್ರ ಕೇಳಿಸಲಿಲ್ಲ.             ಟೀಚರ್ ಮುಂದುವರಿದು ‘ಫೀಸ್ ಕೊಟ್ಟವರಿಗೆಲ್ಲ ಡಾನ್ಸ್ ಯುನಿಫಾರಂ ಕೊಡುತ್ತೇವೆ. ನಿಮ್ಮ ಕ್ಲಾಸ್‌ನಲ್ಲೇ ನೀವು ರೆಡಿ ಆಗಬೇಕು, ಹಾಂ, ಇನ್ನೊಂದು ಮಾತು ಫೀಸ್ ಕೊಡದಿರೋರಿಗೆ ಚಾನ್ಸ್ ಇಲ್ಲ, ತಿಳೀತಾ?’ ಎಂದರು.             ಮತ್ತೆ ಮಕ್ಕಳು ಕೇಕೇ ಹಾಕಿದರು. ರಮಿಯ ಕಣ್ಣು ತುಂಬಿ ಬಂದಿದ್ದವು.             ಶಾಲೆ ಬಿಟ್ಟು ಮರಳಿದ ಕೂಡಲೇ ಚಿಂಟೂ ತಾಯಿಯ ಬಳಿಗೆ ಹೋಗಿ ‘ಅಮ್ಮ, ಇವತ್ತು ನೀನು ಕೊಟ್ಟಿದ್ದ ಅವಲಕ್ಕಿ ತುಂಬಾ ಸಕತ್ತಾಗಿತ್ತು. ಚೂರೂ ಬಿಡದೇ ತಿಂದುಬಿಟ್ಟೆ, ಅಷ್ಟೇ ಅಲ್ಲ ರಮಿಗೂ ಸ್ವಲ್ಪ ಕೊಟ್ಟೆ. ನನ್ನಂತೆ ಅವನಿಗೂ ಅವಲಕ್ಕಿ ತುಂಬಾ ಇಷ್ಟ’ ಎಂದ.              ರಮಿ ವಿಷಯ ಬಂದ ಕೂಡಲೇ ಅವನ ದನಿಯಲ್ಲಿನ ಉತ್ಸಾಹ ಕಡಿಮೆಯಾಗಿತ್ತು, ಅವನ ಕಣ್ಣಲ್ಲಿನ ನೀರು ನೆನಪಾಗಿ ಪಾಪ ಅನಿಸಿತು.             ‘ಹೌದಾ, ಗುಡ್, ಜಾಣ ನೀನು. ದಿನಾಲೂ ಟಿಫನ್ ಬಾಕ್ಸ್ ಖಾಲಿ ಮಾಡಬೇಕು, ಚೆನ್ನಾಗಿ ತಿಂಡಿ ತಿನ್ನಬೇಕು, ಆಗ ನೀನು ಸ್ಟ್ರಾಂಗ್ ಆಗೋದು’ ಎಂದಳು ಅಮ್ಮ.             ಚಿಂಟೂ ‘ಹಾಗಿದ್ದರೆ ನೀನು ದಿನಾಲೂ ನನಗೆ ಅವಲಕ್ಕಿ ಕೊಡು. ಒಂದಲ್ಲ ಎರಡು ಬಾಕ್ಸ್ ಕೊಡು, ಎಲ್ಲ ಖಾಲಿ ಮಾಡುವೆ’ ಎಂದ.             ‘ಹಾಗಲ್ಲ ಮರಿ, ಇಷ್ಟ ಎಂದು ಒಂದೇ ಪದಾರ್ಥ ಹೆಚ್ಚು ತಿನ್ನಬಾರದು, ಹೊಟ್ಟೆ ಕೆಟ್ಟುಹೋಗುತ್ತದೆ, ಹೊಟ್ಟೆ ನೋವು ಪ್ರಾರಂಭ ಆದರೆ ನಿನಗೆ ಓದ್ಲಿಕ್ಕೂ ಆಗಲ್ಲ, ಬರೀಲಿಕ್ಕೂ ಆಗಲ್ಲ, ಡಾನ್ಸ್ ಮಾಡ್ಲಿಕ್ಕೂ ಆಗಲ್ಲ..’ ಎಂದರು.             ‘ಇಲ್ಲಮ್ಮ, ಏನೂ ಆಗಲ್ಲ, ನೀನು ಸುಮ್ಮನೆ ಹೇಳ್ತಿಯಾ. ನಾಳೆ ನೋಡು ನಾನು ಹೊಸ ಬಟ್ಟೆ ತೊಡ್ಕೊಂಡು ಹೇಗೆ ಡಾನ್ಸ್ ಮಾಡ್ತೀನಿ ಅಂತ. ಆದರೆ, ಪಾಪ ರಮಿ’             ‘ಏನಾಯ್ತು ಅವನಿಗೆ?’             ‘ಅಮ್ಮ, ಅವರು ಬಹಳ ಬಡವರು. ಅವನಪ್ಪ ಇನ್ನೂ ಗ್ಯಾದರಿಂಗ್ ಫೀಸ್ ಕಟ್ಟಿಲ್ಲ. ಸಿರಿ ಟೀಚರ್ ಫೀಸ್ ಕಟ್ಟಿಲ್ಲ ಅಂದ್ರೆ ಡಾನ್ಸಿಗೆ ಚಾನ್ಸ್ ಇಲ್ಲ ಅಂದ್ರು. ಗೊತ್ತಾ ಅಮ್ಮ, ಅವನಿಗೂ ನನ್ನಂತೆ ಅಲವಕ್ಕಿ ಅಂದರೆ ತುಂಬ ಇಷ್ಟ. ಆದರೆ ಅವನಮ್ಮ ಅವನಿಗೆ ಟಿಫನ್ ಬಾಕ್ಸ್ ಕೊಡಲ್ಲ. ಅವ ಶಾಲೆಯಲ್ಲಿ ಬಿಸಿಯೂಟ ತಿಂತಾನೆ..’ ಎಂದ ಉದಾಸೀನತೆಯಿಂದ.             ‘ಹೌದಾ? ಪಾಪ. ಇರಲಿ, ಈಗ ನೀನು ಓದ್ತಾ ಕೂತ್ಕೋ, ನಾನು ಅಡುಗೆ ಮಾಡಬೇಕು’ ಎನ್ನುತ್ತ ಅಮ್ಮ ಒಳಕ್ಕೆ ಹೋದರು. ಅವರ ಹಿಂದೆಯೇ ಚಿಂಟೂ ‘ಅಮ್ಮ, ಪ್ಲೀಸ್ ಅವಲಕ್ಕಿ ಮಾಡು’ ಎಂದ. ಅವನ ದ್ವನಿಯೂ ಅಡುಗೆ ಮನೆ ಸೇರಿತು. ‘ಇಲ್ಲ, ಪಾಪು, ಅವಲಕ್ಕಿ ಬೇಡ, ಪಪ್ಪಾ ಬಂದ್ಮೇಲೆ ಊಟ ಮಾಡುವಿಯಂತೆ’ ಎಂದಳು ಅಮ್ಮ ಒಳಗಿನಿಂದ.             ಚಿಂಟೂನ ತಂದೆ ಬಂದ ಮೇಲೆ ಊಟ ಮಾಡುವಾಗ ಆತ ‘ಪಪ್ಪಾ, ನಾಳೆ ಗ್ಯಾದರಿಂಗ್ ಇದೆ. ನೀವು ಬರಬೇಕೆಂದು ಸಿರಿ ಟೀಚರ್ ಹೇಳಿದ್ದಾರೆ’ ಎಂದ. ‘ಓಹ್, ಹೌದಾ, ನಾಳೆ ಡಾನ್ಸ್ ಮಾಡ್ತಿಯಾ? ಯಾವ ಹಾಡಿಗೆ?’ ಎಂದು ತಂದೆ ಕೇಳಿದರು. ಚಿಂಟೂ ಅವನ ಫೆವ್ಹರಿಟ್ ‘ಅವಲಕ್ಕಿ ಪವಲಕ್ಕಿ..’ ಹಾಡು ಶುರು ಮಾಡಿದ. ಹಾಡುತ್ತ ‘ಪಪ್ಪಾ, ರಮಿ ನನಗಿಂತ ಚೆಂದ ಡಾನ್ಸ್ ಮಾಡ್ತಾನೆ, ಬಹಳ ಚೆಂದ ಹಾಡ್ತಾನೆ. ಆದರೆ ಪಾಪ..’ ಎಂದ.  ಅಷ್ಟರಲ್ಲಿ ಅವನಮ್ಮ ‘ಈಗ ಹಾಡಿದ್ದು ಸಾಕು, ಊಟ ಮಾಡು’ ಎಂದು ಗದರಿಸಿದರು. ಚಿಂಟೂ ‘ಅಮ್ಮ, ಮರೆತೇ ಹೋಗಿತ್ತು ನೋಡು, ನಾಳೆ ಸಾಯಂಕಾಲದ ತಿಂಡಿಗೆ ಟಿಫನ್ ತರಬೇಕು ಅಂತ ಟೀಚರ್ ಹೇಳಿದಾರೆ, ಅವಲಕ್ಕಿ ಮಾಡು..’ ಎಂದ. ‘ಮತ್ತೆ ಶುರು ಮಾಡಿದಿಯಾ, ಒಂದು ಕೊಡ್ತೀನಿ ನೋಡು ಈಗ’ ಎಂದು ಅಮ್ಮ ಸ್ವಲ್ಪ ಸಿಟ್ಟಾದರು. ಚಿಂಟೂ ಸುಮ್ಮನೆ ಊಟ ಮಾಡಿ ಎದ್ದ. ಮಲಗಿದರೆ ನಿದ್ರೆ ಬರುತ್ತಿಲ್ಲ. ಪದೇ ಪದೇ ಸಿರಿ ಟೀಚರ್ ಮಾತು ನೆನಪಾಗ್ತಿವೆ, ಮತ್ತೆ ಮತ್ತೆ ರಮಿಯ ಕಣ್ಣೀರೂ ಕೂಡ ಕಣ್ಮುಂದೆ ಬರುತ್ತಿವೆ. ಪಾಪ, ರಮಿ..! ನಾಳೆ ಅವನು ಡಾನ್ಸ್ ಮಾಡುವಂತಿಲ್ಲ, ಅವನಿಗೆ ಹೊಸ ಯುನಿಫಾರಂ ಇಲ್ಲ..! ಮರುದಿನ, ಚಿಂಟೂ ತನ್ನ ತಂದೆ ತಾಯಿಯೊಂದಿಗೆ ಗ್ಯಾದರಿಂಗ್ ಶುರುವಾಗುವದಕ್ಕೂ ಅರ್ಧ ಗಂಟೆ ಮೊದಲು ಶಾಲೆ ತಲುಪಿದ. ಭರ್ಜರಿ ವೇದಿಕೆ ಸಿದ್ಧವಾಗಿತ್ತು. ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮಕ್ಕಳು ಡ್ರೆಸ್ ಮಾಡಿಕೊಂಡು ಸಿದ್ಧರಾಗುತ್ತಿದ್ದರು. ಇವರು ಬಂದಿದ್ದನ್ನು ಗಮನಿಸಿದ ಸಿರಿ ಟೀಚರ್ ಬಳಿಬಂದು ‘ಬೇಗ ಬಾ ಚಿಂಟೂ, ನೀನು ರೆಡಿಯಾಗಬೇಕು. ಪ್ಯಾರೆಂಟ್ಸ್ ನೀವು ಹೋಗಿ ಹಾಲ್‌ನಲ್ಲಿ ಕುಳಿತುಕೊಳ್ಳಿ’ ಎಂದು ಅವರು ಚಿಂಟೂನನ್ನು ಕರೆದುಕೊಂಡು ಹೋದರು. ಅಪ್ಪ-ಅಮ್ಮಳತ್ತ ಕೈಬೀಸಿ ಚಿಂಟೂ ಡ್ರೆಸಿಂಗ್ ರೂಂನೊಳಗೆ ಹೋದ. ಅವನ ಕಣ್ಣುಗಳು ರಮಿಯನ್ನು ಹುಡುಕುತ್ತಿದ್ದವು. ಎಲ್ಲರೂ ಬಂದಿದ್ದರು. ಆದರೆ ರಮಿ ಮಾತ್ರ ಕಾಣಲಿಲ್ಲ. ಚಿಂಟೂ ಅಲ್ಲಿಂದ ಹೊರಬಂದು ಶಾಲೆಯ ಆವರಣದಲ್ಲೆಲ್ಲ ಹುಡುಕಿದ. ರಮಿ ಎಲ್ಲೂ ಇರಲಿಲ್ಲ. ಮರಳಿ ಡ್ರೆಸಿಂಗ್ ರೂಂಗೆ ಹೊರಟ. ವಾಟರ್ ಟ್ಯಾಂಕ್ ಹಿಂಬದಿಯಲ್ಲಿ ಯಾರೋ ಬ್ಯಾಗ್‌ಗೆ ತಲೆಯಿಟ್ಟು ಕುಳಿತಂತೆ ಅನಿಸಿತು. ಹೋಗಿ ನೋಡಿದ. ‘ಅರೆ, ರಮಿ, ಇಲ್ಯಾಕೆ ಕುಳಿತಿರುವೆ? ಬಾ ಒಳಗೆ’ ‘ಬೇಡ ಚಿಂಟೂ, ನನಗೆ ಹೊಟ್ಟೆ ನೋಯ್ತಿದೆ’ ‘ಸುಮ್ಮನೆ ಏನೇನೋ ಹೇಳಬೇಡ, ನಡೀ’ ‘ಇಲ್ಲ, ನಿಜಕ್ಕೂ ಹೊಟ್ಟೆ…’ ಎಂದ. ಅವನ ಕಣ್ಣು ತುಂಬಿದ್ದವು. ಚಿಂಟೂ ಅವನ ಕೈಹಿಡಿದುಕೊಂಡು ಒತ್ತಾಯದಿಂದ ಡ್ರೆಸಿಂಗ್ ರೂಂನೊಳಗೆ ಕರೆದುಕೊಂಡು ಹೋದ. ಎದುರಿಗೆ ಸಿರಿ ಟೀಚರ್ ನಿಂತಿದ್ದರು. ರಮಿಯ ಕಣ್ಣುಗಳು ನೆಲವನ್ನೇ ನೋಡುತ್ತಿದ್ದವು. ಚಿಂಟೂ ‘ಟೀಚರ್, ಟೀಚರ್, ನನಗೆ ಹೊಟ್ಟೆ ನೋವಾಗ್ತಿದೆ. ಬಹಳಷ್ಟು ಅವಲಕ್ಕಿ ತಿಂದಿದ್ದೆ. ಈ ನೋವಲ್ಲಿ ನನಗೆ ಡಾನ್ಸ್ ಮಾಡೋಕೆ ಆಗಲ್ಲ. ನೀವು ನನ್ನ ಯುನಿಫಾರಂ ರಮಿಗೆ ಕೊಡಿ. ಅವನು ಡಾನ್ಸ್ ಮಾಡಲಿ. ನಾನು ಮುಂದೆ ಕೂತು ನೋಡ್ತೆನೆ’ ಎಂದ. ಟೀಚರ್‌ಗೆ ಏನೋ ವಿಷಯ ಇದೆ ಎಂಬುದು ಅರ್ಥ ಆಯ್ತು. ‘ಏನಾಯ್ತು ಚಿಂಟೂ, ನಿಜಕ್ಕೂ ಹೊಟ್ಟೆ ನೋವಾ?’ ಎಂದು ಕೇಳಿದರು. ರಮಿಯ ಕಣ್ಣಲ್ಲೂ, ಚಿಂಟೂನ ಕಣ್ಣಲ್ಲೂ ನೀರೂರಿದ್ದವು. ‘ಇಲ್ನೋಡು, ರಮಿಯ ತಂದೆ ಫೀಸ್ ಕೊಡದಿದ್ದರೂ ಪರವಾಗಿಲ್ಲ. ಅವನಿಗಾಗಿಯೂ ನಾನು ಯುನಿಫಾರಂ ತಂದಿದ್ದೇನೆ. ಅವನೂ ತೊಟ್ಟುಕೊಂಡು ರೆಡಿಯಾಗಲಿ, ನೀನು ರೆಡಿಯಾಗು. ಬನ್ನಿ ಬೇಗ, ಬೇಗ’ ಎನ್ನುತ್ತ ಇಬ್ಬರನ್ನೂ ಸೆಳೆದು ಅಪ್ಪಿಕೊಂಡರು. ಮೂವರ ಕಣ್ಣು ತುಂಬಿದ್ದರೂ ತುಟಿಗಳಲ್ಲಿ ನಗು ಅರಳಿತ್ತು.   ವೇದಿಕೆ ಕಾರ್ಯಕ್ರಮ ಪ್ರಾರಂಭವಾಯ್ತು. ಒಂದೊAದಾಗಿ ಪ್ರದರ್ಶನ ಜರುಗಿದವು. ಮೂರನೇ ಕ್ಲಾಸಿನ ಸರದಿ ಬಂತು. ಮಕ್ಕಳೆಲ್ಲ ವೇದಿಕೆಗೆ ಬಂದರು. ಹಾಡಿನ ಯುನಿಫಾರಂನಲ್ಲಿ ಮಕ್ಕಳು ತುಂಬ ಮುದ್ದಾಗಿ ಕಾಣುತ್ತಿದ್ದರು. ಹಾಡು ಶುರುವಾಯ್ತು. ಅವಲಕ್ಕಿ ಪಲವಲಕ್ಕಿ             ಕಾಂಚಣ, ಮಿಣಮಿಣ             ಡಾಮ್ ಡೂಮ್ ಟಸ್ ಪುಸ್             ಕೋಯ್ ಕೊಟಾರ್             ಅವಲಕ್ಕಿ ಪವಲಕ್ಕಿ ಮಕ್ಕಳು ಬಲು ಉತ್ಸಾಹದಿಂದ ಕುಣಿದರು. ರಮಿ ಎಲ್ಲರಿಗಿಂತ ಚೆಂದ ಕುಣಿದ. ಅವನಿಗಿಂತ ಚೆಂದ ಎನ್ನುವಂತೆ ಚಿಂಟೂ ಕುಣಿದ. ಅವರ ಹರ್ಷಕ್ಕೆ ಪಾರವೇ ಇರಲಿಲ್ಲ. ಮಕ್ಕಳ ಕುಣಿತ ಕಂಡು ಸಿರಿ ಟೀಚರ್‌ಗೂ ಆನಂದ. ಹಾಡು ಮುಗಿದ ಕೂಡಲೇ ಎಲ್ಲರೂ ವೇದಿಕೆಯಿಂದ ನಿರ್ಗಮಿಸಿದರು. ರಮಿ ಬಹಳ ಹಿಗ್ಗಿನಲ್ಲಿದ್ದ. ಅಷ್ಟರಲ್ಲಿ ಅವನಿಗೆ ತಾನು ಮನೆಯಿಂದ ಬರುವಾಗ ಅಮ್ಮ ಕೊಟ್ಟಿದ್ದ ಟಿಫನ್ ಬಾಕ್ಸ್ ನೆನಪಾಯ್ತು. ‘ಏಯ್ ಚಿಂಟೂ, ಬಾ ಇಲ್ಲಿ. ಇವತ್ತು ನನ್ನಮ್ಮ ಟಿಫನ್ ಕಟ್ಟಿದ್ದಾಳೆ, ಬಾ ತಿನ್ನೋಣ’ ಎನ್ನುತ್ತ ಕೂಗಿದ. ಕೂಡಲೇ ಚಿಂಟೂ ಅವನ ಬಳಿ ಬಂದ. ಟಿಫನ್ ತೆರೆದು ನೋಡಿದರೆ ಅದರಲ್ಲಿಯೂ ‘ಅವಲಕ್ಕಿ..’..ಓಹ್…!! ಮತ್ತೆ ಶುರುವಾಯ್ತು… ಅವಲಕ್ಕಿ, ಪವಲಕ್ಕಿ             ಕಾಂಚಣ, ಮಿಣಮಿಣ             ಡಾಮ್ ಡೂಮ್ ಟಸ್ ಪುಸ್

ಅವಲಕ್ಕಿ ಪವಲಕ್ಕಿ Read Post »

ಅಂಕಣ ಸಂಗಾತಿ, ಮುಖಾಮುಖಿ

ಅಂಕಣ ಬರಹ ಕತೆಗಾರ್ತಿ ಆಶಾ ಜಗದೀಶ್ಮುಖಾಮುಖಿಯಲ್ಲಿ “ಹೆಣ್ಣು ನನ್ನ ಬರಹದ ಮೂಲ ಕಾಳಜಿ” ಕವಿತೆಗಳನ್ನು ಯಾಕೆ ಬರೆಯುತ್ತೀರಿ ? ಉತ್ತರ: ಕವಿತೆಯನ್ನು ನಾನು ಬರೆಯುತ್ತೇನೆ ಎನ್ನುವುದು ತಪ್ಪಾಗುತ್ತದೆ. ಕವಿತೆಗಳೇ ನನ್ನಿಂದ ಬರೆಸಿಕೊಳ್ಳುತ್ತವೆ ಎನ್ನುವುದು ಸರಿ. ನನ್ನೊಳಗೆ ಅಂತಹುದೊಂದು ತೀವ್ರತೆಯನ್ನು ಇಟ್ಟುಕೊಳ್ಳದೆ ಬರೆಯುವುದು ನನಗೆ ಕಷ್ಟ. ಕವಿತೆ ಹುಟ್ಟುವ ಕ್ಷಣ ಯಾವುದು ? ಉತ್ತರ: ಯಾವ ಕ್ಷಣವಾದರೂ ಸರಿ ಅದು ನನ್ನನ್ನು ಕಾಡಬೇಕು. ಸತಾಯಿಸಬೇಕು. ಇನ್ನು ಬರೆಯದೆ ಉಳಿಯಲಾರೆ ಅನ್ನಿಸುವಂತೆ ಮಾಡಬೇಕು. ಆಗ ಮಾತ್ರ ಕವಿತೆ ಹುಟ್ಟುತ್ತದೆ. ಹಾಗಾಗಿ ಕವಿತೆಯ ರಚನೆಯಲ್ಲಿ ನಿರಂತರತೆಯನ್ನು ಕಾಪಾಡಿಕೊಳ್ಳುವುದು ಕಷ್ಟಸಾಧ್ಯ. ನಿಮ್ಮ ಕವಿತೆಗಳ ವಸ್ತು, ವ್ಯಾಪ್ತಿ ಹೆಚ್ಚಾಗಿ ಯಾವುದು ? ಪದೇ ಪದೇ ಕಾಡುವ ವಿಷಯ ಯಾವುದು ? ಉತ್ತರ: ವಸ್ತು ಇಂಥದ್ದೇ ಇರಬೇಕು ಅಂತೇನೂ ಇಲ್ಲ ನನಗೆ. ಸುತ್ತಲಿನ ಆಗುಹೋಗುಗಳೆಲ್ಲಕ್ಕೂ ಸೂಕ್ಷ್ಮವಾಗಿ ಸ್ಪಂದಿಸುವವಳು ನಾನು. ಯಾರದೋ ಸಾವು ಮತ್ಯಾರದೋ ಕಷ್ಟ ಎಲ್ಲವೂ ನನ್ನನ್ನು ಅಳಿಸುತ್ತವೆ. ಒಂದು ಆರ್ಟ್ ಮೂವಿ ಚಾಲು ಆಯಿತೆಂದರೆ ನನ್ನ ಕಣ್ಣೀರು ಕೋಡಿ ಬೀಳುವುದು ಗ್ಯಾರೆಂಟಿ ಎಂದು ಮೊದಲೇ ಹೇಳಿಬಿಡಬಹುದು. ಮತ್ತೆ ಅದರ ಬಗ್ಗೆ ನನಗೆ ಮುಜುಗರವಿಲ್ಲ. ಇನ್ಫ್ಯಾಕ್ಟ್ ಎಷ್ಟೋ ಹೊತ್ತು ಅಥವಾ ಕೆಲ ದಿನಗಳೂ ಅದೇ ಹ್ಯಾಂಗೋವರಿನಲ್ಲಿ ಇರಲು ಬಯಸ್ತೇನೆ ನಾನು. ಆಗ ನನ್ನಲ್ಲಿ ಕವಿತೆಯೊಂದು ಮೊಳಕೆಯೊಡೆಯಬಹುದು. ನೋವು, ಸಂತೋಷ, ಸಿಟ್ಟು, ಅಸಹನೆ, ಕೋಪ….. ಇತ್ಯಾದಿ ಯಾವ ಭಾವವೇ ಆಗಿರಲಿ ಅದರ ಶಿಖರ ಮುಟ್ಟುವ ತೀವ್ರತೆ ನನ್ನನ್ನಾವರಿಸಿದಾಗ ನನ್ನೊಳಗೆ ಕವಿತೆ ಮೊಟ್ಟೆ ಇಡುತ್ತದೆ. ಮತ್ತೆ ಕವಿಯಾದವನು ಅಂತರಂಗದ ದನಿಯಾಗುತ್ತಲೇ ಬಹಿರಂಗದ ಕಿವಿಯಾಗಲೂ ಬೇಕಿರುತ್ತದೆ. ಹಾಗಾಗಿ ಅವನ ಕಾವ್ಯ ಅದೆರಡರಿಂದಲೂ ಪ್ರಭಾವಿಸಲ್ಪಟ್ಟಿರುತ್ತದೆ. ಅದಕ್ಕೆ ನಾನೂ ಹೊರತಲ್ಲ. ಹೆಣ್ಣು ನನ್ನ ಬರಹದ ಮೂಲ ಕಾಳಜಿ ಕಾರಣ ಹೆಣ್ಣು ಹೊರಗಿನಿಂದಷ್ಟೇ ಅಲ್ಲ ಒಳಗಿನಿಂದಲೂ ಹೆಚ್ಚು ಗೊತ್ತಿರುವ ಕಾರಣ ಇರಬಹುದು. ಕವಿತೆಗಳಲ್ಲಿ ಬಾಲ್ಯ, ಹರೆಯ ಇಣುಕಿದೆಯೇ ? ಉತ್ತರ: ಖಂಡಿತಾ. ಬಾಲ್ಯದ ನೆನಪುಗಳಿಲ್ಲದೇ ನಮ್ಮ ಯಾವ ಪ್ರಕಾರದ ಬರಹವೂ ಸಂಪೂರ್ಣವಾಗಲಿಕ್ಕೇ ಸಾಧ್ಯವಿಲ್ಲ ಎನಿಸುವಷ್ಟು ಅದು ನಮ್ಮ ಬರಹಗಳಲ್ಲಿ ಹಾಸು ಹೊಕ್ಕು. ಇನ್ನು ಹರೆಯ ಎನ್ನುವುದು ಕಲ್ಲನ್ನೂ ಕವಿಯನ್ನಾಗಿಸಿಬಿಡುವ ಕಾಲ. ಅದಕ್ಕೆ ಯಾರೂ ಹೊರತಾಗಲು ಸಾಧ್ಯವಿಲ್ಲ. ಇದೇ ಹಂತದಲ್ಲಿಯೇ ನಮ್ಮ ದೇಹ ಮತ್ತೊಂದು ಹಂತದ ಬೇಳವಣಿಗೆಯನ್ನು ಪಡೆದುಕೊಳ್ಳುತ್ತದೆ. ಹಾರ್ಮೋನುಗಳ ವ್ಯತ್ಯಯ ವೈಪರಿತ್ಯ ನಮ್ಮ ಭಾವಕೋಶವನ್ನು ನಾನಾಥರದ ಪರೀಕ್ಷೆಗೆ ಒಳಗಾಗುವಂತೆ ಮಾಡುತ್ತದೆ. ಇವೆಲ್ಲವೂ ಒಂದಿಡೀ ಬದುಕಿಗೆ ಅಗತ್ಯವಿರುವ ಅನುಭವಗಳು. ನಾವವನ್ನು ಅಗತ್ಯವಾಗಿ ಕಟ್ಟಿಟ್ಟುಕೊಳ್ಳಲೇ ಬೇಕು. ಅದು ಪ್ರೇಮ ಮತ್ತು ಕಾಮದ ಭಾವಗಳು ಬಲಗೊಳ್ಳುವ ಕಾಲವೂ ಹೌದು. ಪ್ರೇಮ ಮತ್ತು ಕಾಮ ನಮ್ಮನ್ನು ಅತ್ಯಂತ ತೀವ್ರವಾಗಿ ತಲ್ಲಣಿಸುವಂತೆ ಕಾಡಬಲ್ಲ ಭಾವಗಳು. ಕವಿಯಾದವನಿಗೆ ಅವು ವರದಾನವೇ ಸರಿ. ಮತ್ತೆ ಪ್ರತಿಯೊಬ್ಬರೂ ಅವಕ್ಕೆ ಈಡಾಗದೇ ಪಾರಾಗುವುದು ಸಾಧ್ಯವಿಲ್ಲ. ಪ್ರಸ್ತುತ ರಾಜಕೀಯ ಸನ್ನಿವೇಶದ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು ? ಉತ್ತರ : ಹಿಂದಿನಿಂದಲೂ ರಾಜಕೀಯದ ಅಂಗಳದಲ್ಲಿಯೇ ಸಾಹಿತ್ಯ ಪೋಷಣೆ ಪಡೆದು ಬೆಳೆದು ಬಂದಿರುವುದನ್ನು ಕಾಣಬಹುದು. ರಾಜಾಶ್ರಯವಿಲ್ಲದೇ ಕವಿಗಳು ಕಾವ್ಯವನ್ನಷ್ಟೇ ನಂಬಿ ಬದುಕುವ ಸ್ಥಿತಿ ಆಗ ಇರುತ್ತಿರಲಿಲ್ಲ. ಅದರ ನಡುವೆಯೂ ಯಾವ ಆರ್ಥಿಕ ಸಹಾಯವಿಲ್ಲದೆಯೂ ಬರೆದ ಕೆಲವರು ಸಿಗುತ್ತಾರೆ. ಆದರೆ ತಮ್ಮ ಜೀವಿತಾವಧಿಯಲ್ಲಿ ಅವರಿಗೆ ಸಿಗಬೇಕಾದ ಮಾನ ಮನ್ನಣೆ ಸಿಗದೆ ಹೋಗಿರುವುದು ಕಂಡುಬರುತ್ತದೆ. ಇದು ರಾಜಾಶ್ರಯದ ಬೆಂಬಲವಿಲ್ಲದ್ದು ಕಾರಣ ಎನ್ನುವುದೂ ತಿಳಿದುಬರುತ್ತದೆ. ಆದರೆ ಈಗ ಹಾಗಿಲ್ಲ. ಬಹಳಷ್ಟು ಬರಹಗಾರರು ಆರ್ಥಿಕವಾಗಿ ಸ್ವತಂತ್ರರಿದ್ದಾರೆ ಮತ್ತು ಮುಖ್ಯವಾಗಿ ಬರಹವನ್ನೇ ನಂಬಿ ಬದುಕುತ್ತಿಲ್ಲ. ಇದು ಒಂದು ರೀತಿಯಲ್ಲಿ ಒಳ್ಳೆಯದೇ ಆಗಿದೆ. ಇಲ್ಲಿ ಸಾಹಿತ್ಯವನ್ನು ಪ್ರೀತಿಯಿಂದ ಓದುವ ಮತ್ತು ಬರೆಯುವ ಕಾರಣಕ್ಕಾಗಿ ಸಾಹಿತ್ಯವನ್ನು ಆಯ್ಕೆ ಮಾಡಿಕೊಳ್ಳುವುದು ಸಾಧ್ಯವಾಗಿದೆ. ಈಗ ಆಮಿಷಗಳಿಲ್ಲ, ಹೊಗಳು ಭಟ್ಟಂಗಿಗಳಾಗುವ ಅವಶ್ಯಕತೆ ಅಥವಾ ಅನಿವಾರ್ಯತೆ ಯಾರಿಗೂ ಇಲ್ಲ. ಆದರೆ ಇಂದಿನ ರಾಜಕೀಯ ಪ್ರಭಾವವೇ ಬೇರೆ. ಮತ್ತದು ಸಾಹಿತ್ಯದ ಮಟ್ಟಿಗೆ ಪೂರಕವಾಗಿದೆ ಅಂತನ್ನಿಸುವುದಿಲ್ಲ ನನಗೆ. ಧರ್ಮ ,ದೇವರು ವಿಷಯದಲ್ಲಿ ನಿಮ್ಮ ನಿಲುವೇನು ? ಉತ್ತರ : ಧರ್ಮ ನಮ್ಮನ್ನು ಸರಿಯಾದ ದಾರಿಯಲ್ಲಿ ನಡೆಸುವ ಮಾರ್ಗ. ದೇವರು ಎಂದರೆ ನಾವು ತಪ್ಪು ಮಾಡದಂತೆ ಸದಾ ನಮ್ಮನ್ನು ಎಚ್ಚರಿಸುವ ಅರಿವು. ಇದು ನನ್ನ ಸರಳ ನಂಬಿಕೆ. ದೇವರನ್ನು ನಾನು ನಂಬುವುದು ಹೀಗೆ. ತೋರಿಕೆಗೆ ದೇವರ ಮುಂದೆ ಕೂತು ಭಜನೆ ಮಾಡುವುದು ನನ್ನಿಂದ ಸಾಧ್ಯವಿಲ್ಲ. ಹಸಿದವನನ್ನ “ಮುಂದೆ ಹೋಗು…” ಎಂದು ಹೇಳಿ ದೇವರ ಮುಂದೆ ನೈವೇದ್ಯಕ್ಕಿಡುವುದು ನನ್ನಿಂದಾಗದ ಕೆಲಸ. ಮನಸ್ಸು ಶುದ್ಧಾವಗಲ್ಲದೆ ಸ್ನಾನ ಮಾಡಿರುವೆ ಎನ್ನುವ ಕಾರಣಕ್ಕೆ ದೇವರ ಎದುರು ಕೂರುವುದು ನನ್ನಿಂದ ಸಾಧ್ಯವಿಲ್ಲ. ದೇವರ ಭಾವಚಿತ್ರವೇ ಒಂದು ಅಗ್ನಿದಿವ್ಯವಿದ್ದಂತೆ. ಅದರ ಕಣ್ಣಿಗೆ ಕಣ್ಣು ಸೇರಿಸಲು ನಿಜಾಯಿತಿ, ಪ್ರಾಮಾಣಿಕತೆ ಮತ್ತು ಆತ್ಮಸಾಕ್ಷಿಗೆ ನಿಯತ್ತಾಗಿರಬೇಕು. ಹಾಗಿಲ್ಲದೇ ಹೋಗಿ ಕೂತು ಕಣ್ಣುತಪ್ಪಿಸಿ ಕೂತು ಎದ್ದುಬರುವುದು ನನಗಂತೂ ಕಷ್ಟ. ನಾನು ಆಸ್ತಿಕಳು. ಆದರೆ ನನ್ನನ್ನು ಹತ್ತಿರದಿಂದ ನೋಡುವವರು ನಾಸ್ತಿಕಳೆಂದು ತಿಳಿಯಬಹುದು. ಕಾರಣ ಅವರ ನಂಬಿಕೆಗೂ ನನ್ನ ನಂಬಿಕೆಗೂ ಸಾಕಷ್ಟು ವ್ಯತ್ಯಾಸವಿದೆ. ನನ್ನ ದೇವರಿಗೊಂದು ಹೆಸರಿರಬೇಕು ಎಂದು ನಾನು ಬಯಸುವುದಿಲ್ಲ. ನನ್ನ ದೇವರಿಗೆ ಜಾತಿ, ಧರ್ಮದ ಹಂಗಿಲ್ಲ. ಅದೊಂದು ಶಕ್ತಿ, ಅದೊಂದು ಬೆಳಕು… ಹಚ್ಚಿಟ್ಟ ದೀಪದ ಜ್ಯೋತಿಯೇ ದೇವರು. ಪ್ರಸ್ತುತ ಸಾಂಸ್ಕೃತಿಕ ವಾತಾವರಣದ ಬಗ್ಗೆ ನಿಮಗೆ ಏನನ್ನಿಸುತ್ತಿದೆ ? ಉತ್ತರ: ಇವತ್ತಿನ ಸಾಂಸ್ಕೃತಿಕ ಪ್ರಪಂಚ ಜಾಗತಿಕ ಮಟ್ಟದಲ್ಲಿ ವೈವೀಧ್ಯಮಯ ಅವಕಾಶಗಳನ್ನು ನಮಗೆ ಮಾಡಿಕೊಡುತ್ತಿದೆ. ಇವತ್ತು ಬರಹಗಾರನಿಗೆ ಸಾಕಷ್ಟು ಸ್ಪೂರ್ತಿ ಇದೆ ಬರೆಯಲಿಕ್ಕೆ. ಯಾವುದೇ ಒತ್ತಡವಿಲ್ಲ. ಆದರೆ ಆಧುನಿಕತೆಯ ವೇಗ ಅವನಲ್ಲಿ ವಿಚಿತ್ರ ಧಾವಂತವನ್ನು ಸೃಷ್ಟಿಸುತ್ತಿದೆ. ಎಲ್ಲವೂ ಇನ್ಸ್ಟಂಟ್ ಆಗುತ್ತಿರುವ ಈ ಹೊತ್ತಿನಲ್ಲಿ ಇನ್ಸ್ಟಂಟ್ ಹೆಸರು, ಪ್ರಸಿದ್ಧಿ, ಗುರುತಿಗಾಗಿ ಅರೆಬೆಂದ ಪದಾರ್ಥವನ್ನು ಬಡಿಸುವ ತರಾತುರಿಯೂ ಬೆಳೆಯುತ್ತಿದೆ. ಸ್ವಾರ್ಥ, ಅಸಹನೆ, ಮೇಲರಿಮೆ, ಕೀಳರಿಮೆ… ಮುಂತಾದ ಕಾರಣಕ್ಕೆ ತಮ್ಮ ಜಾಗಟೆಯನ್ನು ತಾವೇ ಹೊಡೆದುಕೊಳ್ಳುವುದು ಹೆಚ್ಚಾಗುತ್ತಿದೆ. ಅದರಿಂದ ಪಾರಾಗಿ ಬರೆಯಬೇಕಾಗಿರುವುದು ಸಧ್ಯದ ತುರ್ತು. ಸಾಹಿತ್ಯ ವಲಯದ ರಾಜಕಾರಣದ ಬಗ್ಗೆ ನೀವು ಹೇಗೆ ಪ್ರತಿಕ್ರಿಯಿಸುವಿರಿ? ಉತ್ತರ: ಸಾಂಸ್ಕೃತಿಕ ಕ್ಷೇತ್ರದ ಒಳಗಿನ ರಾಜಕಾರಣ ಭಯ ಹುಟ್ಟಿಸುತ್ತದೆ. ಅರಣ್ಯದ ಯಾವ ಮರವೂ ಒಂದನ್ನೊಂದು ತುಳಿದು ಬೆಳೆಯುವುದಿಲ್ಲ. ಅಲ್ಲಿ ಒಂದು ಸಣ್ಣ ಪೊದೆ ಹೇಗೆ ಸ್ವತಂತ್ರವಾಗಿ ಹಬ್ಬಿ ಬೆಳೆಯುತ್ತದೋ ಹಾಗೆಯೇ ತೇಗ, ಹೊನ್ನೆ, ದೇವದಾರುವಿನಂತಹ ಮರಗಳೂ ಬೆಳೆಯುತ್ತವೆ. ಅಲ್ಲಿನ ಪ್ರತಿಯೊಂದು ಪ್ರಾಣಿಯೂ ಸ್ವಾಭಾವಿಕ ಆಹಾರ ಸರಪಣಿಯನ್ನು ಅನುಸರಿಸಿ ತಮ್ಮ ಬದುಕನ್ನು ತಾವು ಸಾಗಿಸುತ್ತವೆ. ಹಾಗೆ ಬೆಳೆಯಬೇಕು ನಾವು. ಆದರೆ ಇಲ್ಲಿ ಹಾಗಾಗುವುದಿಲ್ಲ. ನಕಾರಾತ್ಮಕ ಬಾಹ್ಯ ಪ್ರೇರಣೆಗಳು, ಪ್ರಭಾವಗಳು ನಮ್ಮನ್ನು ಹಾದಿ ತಪ್ಪಿಸುತ್ತವೆ. ಅವುಗಳಿಂದ ಪಾರಾಗಿ ಬರಹವನ್ನು ಮಾಡಬೇಕಾದ ಸವಾಲು ನಮ್ಮ ಮುಂದಿದೆ. ಈ ದೇಶದ ಚಲನೆಯ ಬಗ್ಗೆ ನಿಮ್ಮ ಮನಸು ಏನು ಹೇಳುತ್ತಿದೆ? ಉತ್ತರ: ಸಧ್ಯದ ಕರೋನಾ ಪರಿಸ್ಥಿತಿಯಲ್ಲಿ ಯಾವುದನ್ನೂ ಅರ್ಥೈಸುವುದು, ನಿರ್ಧರಿಸುವುದು ಅಷ್ಟು ಸುಲಭವಿಲ್ಲ. ಆದರೂ ವಿಶ್ವದ ಮುಂದೆ ಭಾರತದ ಚಲನೆ ಆಶಾದಾಯಕವೆನಿಸುತ್ತಿದೆ. ಸಾಹಿತ್ಯದ ಬಗ್ಗೆ ನಿಮ್ಮ ಕನಸುಗಳೇನು ? ಉತ್ತರ: ಖಂಡಿತ ನನಗೆ ಕನಸುಗಳಿಲ್ಲ. ಬರೆಯುವುದು ನನ್ನ ಜರೂರತ್ತು. ಯಾರನ್ನೂ ಮೆಚ್ಚಿಸಲಿಕ್ಕಲ್ಲ. ಯಾರಾದರೂ ಹೊಗಳಿದರೆ ನನಗೆ ವಿಪರೀತ ಮುಜುಗರವಾಗುತ್ತದೆ. ಇನ್ನೊಂದೇ ಒಂದು ಮಾತನ್ನೂ ಕೇಳಿಸಿಕೊಳ್ಳಲು ಸಾಧ್ಯವಿಲ್ಲ ನನ್ನಿಂದ ಎನ್ನಿಸುವಷ್ಟು. ನಾನು ನನ್ನ ತುಡಿತ, ತುಮುಲ, ಒಳ ಒತ್ತಡವನ್ನ ತಡೆಯಲಾಗದೆ ಬರೆದದ್ದನ್ನು ಸೌಜನ್ಯದಿಂದ ಓದಿ ಪ್ರೀತಿಸುವವರ ಬಗ್ಗೆ ಅಪಾರ ಪ್ರೀತಿ ಮತ್ತು ಗೌರವವಿರುತ್ತದೆ. ಅವರು ನಿಜವಾಗಲೂ ಹೊಗಳಿಕೆಗೆ ಅರ್ಹರು. ಇನ್ನು ಇದುವರೆಗೂ ನಾನೇನು ಬರೆದಿರುವೆನೋ ಅದೆಲ್ಲ ನಾನು ಕನಸುಕಟ್ಟಿ ಬರೆದದ್ದಲ್ಲ. ಹಾಗಾಗಿ ಇನ್ನು ಮುಂದೆಯೂ ಅದು ಹಾಗೇ ನಡೆದುಕೊಂಡು ಹೋಗುತ್ತದೆ. ನನಗೆ ನಿರೀಕ್ಷೆಗಳು ಕಡಿಮೆ. ಹಾಗಾಗಿ ನೋವೂ ಕಡಿಮೆ. ಯಾರಾದರೂ ನ್ಯಾಯವಾಗಿ ಟೀಕಿಸಿದರೆ ಖುಷಿಯಾಗುತ್ತದೆ. ಮತ್ತು ಅನಗತ್ಯ ಟೀಕೆಗಳನ್ನು ತಳ್ಳಿಹಾಕಿ ಮುನ್ನಡೆಯುವುದೂ ಗೊತ್ತು. ನೆನ್ನೆ ನಾಳೆಗಳಿಗಿಂತ ವರ್ತಮಾನದಲ್ಲಿ ಬದುಕುವವಳು ನಾನು. ಈ ಕ್ಷಣ ನಾನೇನು ಮಾಡುತ್ತಿರುತ್ತೇನೋ ಅದನ್ನು ನೂರು ಪ್ರತಿಶತ ನನ್ನ ಸಾಮರ್ಥ್ಯ ಸುರಿದು ಚೊಕ್ಕವಾಗಿ ಮಾಡಿ ಮುಗಿಸಬೇಕು, ಅಷ್ಟೇ ನನ್ನ ಗುರಿಯಾಗಿರುತ್ತದೆ. ಕನ್ನಡ ಹಾಗೂ ಆಂಗ್ಲ ಭಾಷೆಯ ಸಾಹಿತ್ಯದಲ್ಲಿ ನಿಮ್ಮ ಇಷ್ಟದ ಹಾಗೂ ಕಾಡಿದ ಕವಿ, ಸಾಹಿತಿ ಯಾರು ? ಉತ್ತರ: ಒಬ್ಬರೇ ಅಂತ ಹೇಳುವುದು ಕಷ್ಟ. ಬಹಳಷ್ಟು ಮಂದಿ ಇದ್ದಾರೆ. ಓ.ಹೆನ್ರಿ, ಎಮಿಲಿ ಡಿಕಿನ್ಸನ್, ಶೇಕ್ಸ್‌ಪಿಯರ್, ವಿಲಿಯಮ್ ಬ್ಲೇಕ್, ಕೀಟ್ಸ್, ಮಾಯಾ ಏಂಜೆಲೋ… ಮುಂತಾದವರು. ಮತ್ತೆ ಭಾರತೀಯ ಇಂಗ್ಲೀಷ್ ಬರಹಗಾರರಲ್ಲಿ ಅರವಿಂದ್ ಅಡಿಗ, ಚೇತನ್ ಭಗತ್, ಕಮಲಾದಾಸ್, ಎ.ಕೆ.ರಾಮಾನುಜನ್, ರಸ್ಕಿನ್ ಬಾಂಡ್… ಮತ್ತು ಹೆಸರಿಸಲಾದಷ್ಟು ಮಂದಿ ಒಂದೇ ಒಂದು ಕವಿತೆ, ಒಂದೇ ಒಂದು ಕತೆ ಅಥವಾ ಒಂದೇ ಒಂದು ಬರಹವಾಗಿ ನನ್ನ ಓದಿಗೆ ದಕ್ಕಿ ನನ್ನ ಅರಿವನ್ನು ವಿಸ್ತರಿಸಿರುತ್ತಾರೆ. ಅವರೆಲ್ಲರೂ ನನಗೆ ಇಷ್ಟವೇ. ಮತ್ತೆ ಕನ್ನಡದಲ್ಲಿ ನನ್ನನ್ನು ಬಹಳ ಕಾಡಿದವರೆಂದರೆ ಕುವೆಂಪು ತೇಜಸ್ವಿ, ಅನಂತಮೂರ್ತಿ, ಕುಂ. ವೀರಭದ್ರಪ್ಪ, ಜಯಂತ್ ಕಾಯ್ಕಿಣಿ….. ಇವರೆಲ್ಲ ಈಗಲೂ ನನ್ನನ್ನು ಕಾಡುವವರೇ. ಇತ್ತೀಚೆಗೆ ಬರೆಯುತ್ತಿರುವ ಬಹಳಷ್ಟು ಮಂದಿ ಬರಹಗಾರರು ತಮ್ಮ ಗಟ್ಟಿ ಬರಹದಿಂದಾಗಿ ನನಗೆ ಬಹಳ ಇಷ್ಟ. ಈಚೆಗೆ ಓದಿದ ಕೃತಿಗಳಾವವು? ಉತ್ತರ: ಇತ್ತೀಚೆಗೆ ಆಲ್ಕೆಮಿಸ್ಟ್ (poulo coelho) ಓದಿದೆ. ಬಹಳ ಇಷ್ಟವಾಯ್ತು. ಈ ಕಾದಂಬರಿಯ ಮೊದಲಲ್ಲಿ ಒಂದು ಸಣ್ಣ ಕತೆ ಬರುತ್ತದೆ. ಅಲ್ಲೊಬ್ಬ ಸಣ್ಣ ವಯಸ್ಸಿನ ಹುಡುಗನಿರುತ್ತಾನೆ. ಅವನು ಬಹಳ ಸುಂದರವಾಗಿರುತ್ತಾನೆ. ಪ್ರತಿನಿತ್ಯ ಅವನೊಂದು ತಿಳಿಗೊಳಕ್ಕೆ ಬರುತ್ತಿರುತ್ತಾನೆ. ಅದರಲ್ಲಿ ತನ್ನ ಪ್ರತಿಬಿಂಬ ನೋಡಿಕೊಂಡು ಖುಷಿಪಡುತ್ತಿರುತ್ತಾನೆ. ಆದರೆ ಅದೊಂದು ದಿನ ಅವ ಅದೇ ಕೊಳದಲ್ಲಿ ಜಾರಿ ಬಿದ್ದು ಸತ್ತು ಹೋಗುತ್ತಾನೆ. ಕೊಳ ದುಃಖಿತವಾಗುತ್ತದೆ. ಅವನು ಬಿದ್ದ ಜಾಗದಲ್ಲಿ ಸುಂದರವಾದ ಕಮಲವೊಂದು ಹುಟ್ಟಿ ಅರಳುತ್ತದೆ. ಒಮ್ಮೆ ಅತ್ತ ಹೋಗುತ್ತಿದ್ದ ದೇವತೆಗಳು ಕೊಳವನ್ನು ಕೇಳುತ್ತಾರೆ, “ನಿನಗೀಗ ದುಃಖವಾಗುತ್ತಿರಬಹುದಲ್ಲವಾ, ಅವ ಅದೆಷ್ಟು ಸುಂದರವಾಗಿದ್ದ, ಪ್ರತಿನಿತ್ಯ ನಿನ್ನ ಸಮತಲದ ಮೇಲೆ ಬಹಳ ಹತ್ತಿರದಿಂದ ತನ್ನ ಮುಖದ ಪ್ರತಿಬಿಂಬವನ್ನು ನೋಡಿಕೊಂಡು ಆನಂದಿಸುತ್ತಿದ್ದ ” ಎಂದು ಕೇಳುತ್ತಾರೆ. ಆಗ ಕೊಳ “ಹುಡುಗ ಸುಂದರನಿದ್ದನಾ? ನಿಜಕ್ಕೂ ನನಗೆ ಗೊತ್ತಿಲ್ಲ. ಅವನು ಪ್ರತಿಬಾರಿ ಕಣ್ಣರಳಿಸಿ ಬಹಳ ಹತ್ತಿರದಿಂದ ನನ್ನನ್ನು ನೋಡುವಾಗ ನಾನು ಅವನ ಕಣ್ಣಲ್ಲಿ ನನ್ನದೇ ಸೌಂದರ್ಯವನ್ನು ಕಂಡು ಬೆರಗಾಗುತ್ತಿದ್ದೆ. ಈಗ ಅದು ಸಾಧ್ಯವಾಗುತ್ತಿಲ್ಲ, ಅದು ನನ್ನ ನೋವು” ಎನ್ನುತ್ತದೆ. ಈ ಕತೆ ಅದೆಷ್ಟು ನನ್ನನ್ನು ಕಾಡಿತೆಂದರೆ, ಹೌದಲ್ಲವಾ ನಾವು ಯಾವ ಮಟ್ಟಿಗೆ ತಯಾರಾಗಿದ್ದೇವೆ ಎಂದರೆ ನಮಗೆ ನಮ್ಮನ್ನು ನಾವು ಪ್ರೀತಿಸಿಕೊಳ್ಳುವುದನ್ನು ಬಿಟ್ಟು ಬೇರೆ ಏನೂ ಗೊತ್ತಿಲ್ಲ. ಬೇಕಾಗೂ ಇಲ್ಲ. ನಿಮಗೆ ಇಷ್ಟವಾದ ಕೆಲಸ ಯಾವುದು? ಉತ್ತರ: ಹಾಡುವುದು, ಬಣ್ಣಗಳ ಜೊತೆ ಆಟ ಆಡುವುದು, ಚಿತ್ರ ಬರೆಯುವುದು, ಕ್ರಾಫ್ಟ್ ಮಾಡುವುದು, ಸುಮ್ಮನೆ ಗೊತ್ತು ಗುರಿ ಇಲ್ಲದೇ ಓದುತ್ತಾ ಕೂರುವುದು, ಮಕ್ಕಳೊಂದಿಗೆ ಬೆರೆಯುವುದು, ಅವರಿಗೆ ಏನಾದರೂ ಕಲಿಸುವುದು, ಅವರಲ್ಲಿ ಸ್ಪೂರ್ತಿ ತುಂಬುವುದು…. ಹೀಗೆ ಒಟ್ಟಿನಲ್ಲಿ ಸುಮ್ಮನೆ ಕೂರಲಿಕ್ಕಂತೂ ನನಗೆ ಸಾಧ್ಯವಿಲ್ಲ. ಏನಾದರೂ ಸರಿ ಮಾಡುತ್ತಲೇ ಇರಬೇಕು ನಾನು. ಜೊತೆಗೆ ಕೌಟುಂಬಿಕ ಜವಾಬ್ದಾರಿಗಳಂತೂ ಇದ್ದೇ ಇರುತ್ತವೆ. ನಿಮಗೆ ಇಷ್ಟವಾದ ಸ್ಥಳ ಯಾವುದು ? ಉತ್ತರ: ಸಮುದ್ರ ತೀರ ಮತ್ತು ದಟ್ಟ ಕಾಡು. ನಾನು ಹುಟ್ಟಿ ಬೆಳೆದದ್ದು ಮಲೆನಾಡಿನಲ್ಲಿ. ಚಿಕ್ಕಂದಿನ ಟ್ರಿಪ್ಪುಗಳಲ್ಲಿ ಬಹಳಷ್ಟು

Read Post »

ಇತರೆ, ವರ್ತಮಾನ

ಬರಗೂರರೆಂಬ ಬೆರಗು

ಲೇಖನ ಬರಗೂರರೆಂಬ ಬೆರಗು ಮಮತಾ ಅರಸೀಕೆರೆ ಪ್ರೊ.ಬರಗೂರು ರಾಮಚಂದ್ರಪ್ಪನವರ ಬಗ್ಗೆ ಬರೆಯುವುದೆಂದರೆ ಸಾಗರಕ್ಕೆ ಸೇರುವ ನದಿಗಳನ್ನು ಎಲ್ಲೋ ಕುಳಿತು ಎಣಿಸಿದಂತೆ.ಯಾವುದೇ ಉತ್ಪ್ರೇ  ಕ್ಷೆಯಿಲ್ಲದ ಮಾತುಗಳಿವು ಎಂದು ಅವರನ್ನು ಸನಿಹದಿಂದ ಬಲ್ಲವರಿಗೆಲ್ಲಾ ಚಿರಪರಿಚಿತ.ಅವರ ಹತ್ತು ಹಲವು ಮಜಲುಗಳ ವೈವಿಧ್ಯ ಚಟುವಟಿಕೆಗಳನ್ನು ಸಾಮಾನ್ಯವಾಗಿ ಎಲ್ಲರೂ ಬಲ್ಲರು.ನಾನಿಲ್ಲಿ ಬರಗೂರು ಸರ್ ಬಗ್ಗೆ ಅಕಾಡೆಮಿಕ್‌ ಅಲ್ಲದ ಕೆಲವೇ ಸರಳ ಮಾತುಗಳಲ್ಲಿ ಬರೆಯಲು ಪ್ರಯತ್ನಪಡುವೆ. ಬರಗೂರರನ್ನ ಕಂಡಿದ್ದು ಪತ್ರಿಕೆಗಳಲ್ಲಿ ಅಂಕಣಗಳ ಮೂಲಕ.ಸಾಮಾನ್ಯವಾಗಿ ಆಯ್ದ ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಲೇಖನ, ಅಂಕಣಗಳನ್ನು ತಪ್ಪದೇ ಓದುತ್ತಿದ್ದೆ.ಬಿ.ಆರ್.ಬರಹಗಳನ್ನು ಮೆಚ್ಚುತ್ತಿದ್ದೆ.ನಂತರ ಅಲ್ಲಿಲ್ಲಿ ಜರುಗುವ ಕಾರ್ಯಕ್ರಮಗಳಲ್ಲಿ ದೂರದಿಂದ ಗಮನಿಸಿ ಭಾಷಣಗಳನ್ನು ಆಲಿಸುತ್ತಿದ್ದೆ.ನನ್ನ ವೈಚಾರಿಕ ಗುರುಗಳು ಸ್ವಾಮಿಯವರು ಒಮ್ಮೆ ಬಿ.ಆರ್.ರನ್ನು ತಮ್ಮ ಗುರುಗಳೆಂದೂ, ತಮ್ಮ ಅಧ್ಯಯನದ ಸಲುವಾಗಿ ಅವರು ವಹಿಸುತ್ತಿದ್ದ ವಿಶೇಷ ಆಸಕ್ತಿಯನ್ನು, ಪ್ರೀತಿ ಕಾಳಜಿಯನ್ನೂ ವರ್ಣಿಸಿ ತುಂಬು ಮೆಚ್ಚುಗೆಯಿಂದ ಸ್ಮರಿಸುವಾಗ ಸರ್ ಬಗ್ಗೆ ಮತ್ತಷ್ಟು ಅಭಿಮಾನವಾಯ್ತು. ಸ್ವಾಮಿ ಗುರುಗಳ ದೃಷ್ಟಿಯಲ್ಲಿ ಬರಗೂರರಿಗೆ ವಿಶೇಷ ಸ್ಥಾನಮಾನ. ಅದೇ ಭಾವದ ಮುಂದುವರಿಕೆ ನನ್ನಲ್ಲೂ. ಬಿ.ಆರ್.ಸರ್‌ನ ತೀರಾ ಹತ್ತಿರದಿಂದ ಕಂಡದ್ದು ಶ್ರವಣಬೆಳಗೊಳದಲ್ಲಿ. ನಮ್ಮ ಪರಿಚಯದ ಸ್ನೇಹಿತರೊಬ್ಬರು ಶ್ರವಣಬೆಳಗೊಳದಲ್ಲಿ ಸಿನೆಮಾ ಶೂಟಿಂಗ್ ನೋಡಲು ಆಹ್ವಾನಿಸಿದ್ದರು.ಬರಗೂರರು ಸಿನೆಮಾ ನಿರ್ದೇಶಕರು. ಸ್ನೇಹಿತರೊಂದಿಗೆ ತೆರಳಿ, ಕೆಲವು ಹೊತ್ತು ಅಲ್ಲಿದ್ದು ಸರ್‌ನ ಕೂಡ ಕ್ಲುಪ್ತವಾಗಿ ಮಾತನಾಡಿಸಿ ವಾಪಸ್ ಬಂದ ನೆನಪು. ನಂತರ ಮಾತನಾಡಲು ಸಿಕ್ಕಿದ್ದು ತೀರಾ ಕಡಿಮೆ.ಒಂದೆರಡು ಕಾರ್ಯಕ್ರಮಗಳಲ್ಲಿ ಪರಿಚಯಿಸಿಕೊಂಡಾಗ ಆತ್ಮೀಯವಾಗಿಯೇ ಮಾತನಾಡಿಸಿದರು. ಸಾಂಸ್ಕೃತಿಕ ವಿಷಯಗಳಿಗಾಗಿ ಆಗಾಗ ನಾನು ಮೆಸೇಜ್ ಮಾಡಿದಾಗ ತಪ್ಪದೇ ಉತ್ತರಿಸುವರು.ಶಿಕ್ಷಣ ಇಲಾಖೆಯ ಸುಧಾರಣೆಗೆ ಸಂಬಂಧಿಸಿದಂತೆ ಕೆಲವು ಅಹವಾಲು ಹೊತ್ತು ಡಿ ಎಸ್ ಈ ಆರ್ ಟಿ ಗೆ ತೆರಳಿದ್ದಾಗ ಪುಸ್ತಕ ಕಮಿಟಿ ಅಧ್ಯಕ್ಷರಾಗಿದ್ದ ಅವರು ಸುಮಾರು ಅವಧಿಯ ಕಾಲ ನಮ್ಮೊಂದಿಗೆ ಮಾತನಾಡಿ ಸಹನೆಯಿಂದ ಆಲಿಸಿ ಸೂಕ್ತ ಪ್ರತಿಕ್ರಿಯೆ ನೀಡಿದಾಗ ಅವರ ಸರಳತೆ, ಸಹೃದಯತೆ ಕಾಳಜಿ ಬಗ್ಗೆ ಖುಷಿಯಾಗಿತ್ತು.ಕೆಲವು ದಿನಗಳ ನಂತರ ಡಿ.ಎಸ್.ಈ.ಆರ್.ಟಿಯಲ್ಲಿಯೇ ಒಂದು ಕಾರ್ಯಕ್ರಮ ಆಯೋಜಿಸಿ ಪಠ್ಯಪುಸ್ತಕಕ್ಕೆ ಸಂಬಂಧಿಸಿದಂತೆ, ಗ್ರಂಥಾಲಯ ಸುಧಾರಣೆ ಕುರಿತಂತೆ ಸಲಹೆ ಸೂಚನೆ ನೀಡಲು ಬರಹಗಾರ ಶಿಕ್ಷಕರನ್ನು ಆಹ್ವಾನಿಸಿದ್ದರು.ಪಠ್ಯಪುಸ್ತಕ ಕಮಿಟಿಯಲ್ಲಿ ಬರಹಗಾರರಿದ್ದರೆ ಅದರ ಸ್ವರೂಪ ಮತ್ತಷ್ಟು ಉತ್ತಮವಾಗುತ್ತಿತ್ತೇನೋ ಎಂದ ಅವರ ದೂರದರ್ಶಿತ್ವದ ಮಾತಿನ್ನೂ ನನಗೆ ನೆನಪಿದೆ. ಸಾಂಸ್ಕೃತಿಕ ನೀತಿಯ ವರದಿಯನ್ನು ಸಿದ್ದಪಡಿಸಿದ್ದು, ಅದರ ಜಾರಿಗೆ ಸಾಂಸ್ಕೃತಿಕ ವಲಯ ಒತ್ತಾಯಿಸುತ್ತಿದ್ದುದನ್ನು ಗಮನಿಸುತ್ತಿದ್ದೆ. ಮತ್ತು ಆ ಸಂಬಂಧ ಕೆಲವು ಸಂದೇಶ ಕಳಿಸಿದ್ದು ಬಿಟ್ಟರೆ ನಂತರ ಅವರ ಸಿನೆಮಾ ಆರಂಭವಾಗುವಾಗ ಮತ್ತೆ ಮೆಸೇಜ್‌ಗಳು. ಸಾಂಸ್ಕೃತಿಕ ವಲಯದ ಕೆಲವು ಅಸಂಬದ್ಧ ನಿರ್ಣಯಗಳಿಂದ ನಮಗೆ ಹತಾಶೆಯಾದಾಗ ಪುನಃ ಸಂಪರ್ಕ ಮಾಡಿದ್ದೆ.ತಡಮಾಡದೇ ಪ್ರತಿಕ್ರಿಯಿಸುತ್ತಿದ್ದ ಅವರ ಸಂವಹನ ಗುಣ ಭರವಸೆ ತುಂಬುತ್ತಿತ್ತು. ತೀರಾ ಇತ್ತೀಚೆಗೆ ಲಾಕ್‌ಡೌನ್‌ ಆರಂಭವಾದಾಗ ಎಲ್ಲರೂ ಭೀತಿಯಿಂದ ಗೃಹಬಂಧನದ ರುಚಿ ನೋಡುವಂತಾಯಿತು. ಏಕತಾನತೆ ಹಾಗೂ ಕ್ಲೇಷಗಳನ್ನು ತಾತ್ಕಾಲಿಕವಾಗಿ ಮರೆಸುವ ಸಾಧನವಾಗಿ ಬರಹ ನೆರವಿಗೆ ಬಂದು ಒಂದಷ್ಟು ಕವಿತೆ ಬರೆದು ಹಿರಿಯ ಲೇಖಕರಿಗೆ ಕಳಿಸುವಾಗ ಬಿ.ಆರ್.ಸರ್ ಗು ಕಳಿಸಿದೆ. ಸಕಾರಾತ್ಮಕ ಸ್ಪಂದನೆಯಿಂದ ಹುರಿಗೊಂಡೆ.ಅದೇ ವೇಳೆಗೆ ಕೋಲಾರದ ಗೆಳೆಯರ ಯೋಜನೆಯೊಂದಕ್ಕೆ ಬರಗೂರರನ್ನ ಯೂಟ್ಯೂಬ್  ಚಾನಲ್ ಗೆ ಮೌಖಿಕವಾಗಿ ಪರಿಚಯಿಸುವ ಸದಾವಕಾಶ ದಕ್ಕಿತು. ಆ ಸಂದರ್ಭದಲ್ಲಿ ಅವರ ಕುರಿತು ಮತ್ತಷ್ಟು ತಿಳಿಯುವ ಸಲುವಾಗಿ  ಅಂತರ್ಜಾಲ ತಡಕಾಡುವಾಗ ದಕ್ಕಿದ್ದು ಅಪಾರ ಸಾಮಗ್ರಿ . ಅಲ್ಲಿಂದ ಶುರುವಾಯಿತು ನನ್ನ ಹುಡುಕುವಿಕೆ.ಅದೆಷ್ಟೊಂದು ದಾಖಲೆಗಳು.ಯೂಟೂಬ್ , ಪತ್ರಿಕೆ, ವಿಕಿಪಿಡಿಯಾದಲ್ಲೆಲ್ಲೆಲ್ಲಾ ಬಹಳಷ್ಟು ಮಾಹಿತಿಗಳು. ಓದುತ್ತಾ, ನೋಡುತ್ತಾ ಅವುಗಳಲ್ಲಿ ಕೆಲವು ತಪ್ಪಿಹೋದಾವೆಂದು ಎಚ್ಚರ ವಹಿಸುವಾಗ ಎಫ್.ಬಿ. ಪೇಜ್‌ ತೆರೆದು ಅಲ್ಲಿ ಸಂಗ್ರಹಿಸುತ್ತಾ ಹೋದೆ. ಅವರ ಸಾಮಾಜಿಕ ತುಡಿತ, ಸ್ಪಂದನೆ ಇಷ್ಟವಾಗುತ್ತ ಮತ್ತಷ್ಟು ಮಗದಷ್ಟು ಅಭಿಮಾನಿಯಾದೆ. ಸಮಾಜವನ್ನು,ತನ್ನ ಸುತ್ತಲಿನ ಪ್ರತೀ ಸಂದರ್ಭವನ್ನು ಕುರಿತು ಅವರ ಅಪೂರ್ವ ಒಳನೋಟವುಳ್ಳ ಗ್ರಹಿಕೆ, ಆ ಅರಿವಿನ ವಿಸ್ತಾರ, ಓದಿನ ವ್ಯಾಪ್ತಿ, ಮುಂದ್ಗಾಣಿಕೆ, ಮುಂದಾಲೋಚನೆ ದೂರದೃಷ್ಟಿಯ ಮಾತುಗಳು ನನಗೆ ಬೇರೆಯದೇ ವಿಶ್ವವನ್ನು ಮನಗಾಣಿಸತೊಡಗಿದವು. ಪ್ರತೀ ಕದಲಿಕೆಯನ್ನು ಅವರು ಕಾಣುವ ರೀತಿ, ವಿಮರ್ಶಿಸುವ ಪರಿ, ವಿಶಿಷ್ಟ ಆಯ್ಕೆ, ವಸ್ತು, ಘಟನೆ, ವಾತಾವರಣ, ಮೊದಲಾದವನ್ನ ಕಾಣಬೇಕಾದ ನೋಟದ ಪರಿಚಯ, ಮೊದಲಾದವುಗಳಲ್ಲಿ ಅವರಿಗೆ ಅವರೇ ಸಾಟಿ. ಸೂಕ್ಷ್ಮಾತಿಸೂಕ್ಷ್ಮ ಸ್ವಭಾವದ ಮೇಷ್ಟ್ರು ಎಳೆ ಗರಿಕೆಯ ಚಲನೆಯಲ್ಲೂ ಅದ್ಭುತವನ್ನು ಕಾಣಬಲ್ಲರು.ಕೂದಲು ಸೀಳಿದಂತಹ ಆಂತರಿಕ ಅವಲೋಕನದ ತಾಕತ್ತು ಅವರ ಅಗಾಧ ಶಕ್ತಿ.ಇಷ್ಟೆಲ್ಲ ವಿಷಯವನ್ನ ಅಂತರ್ಜಾಲದ ಮೂಲಕ ಮಾತ್ರ ಪಡೆದ ನನಗೆ ಅವರ ಶಿಷ್ಯ ವರ್ಗದವರ ಮೇಲೆ ಅಸೂಯೆಯಾಗಿದ್ದಂತೂ ಖರೆ.ಯುವ ಸಮುದಾಯವನ್ನು, ಯುವ ಪೀಳಿಗೆಯನ್ನು ಬಿ.ಆರ್.ಸರ್ ಪ್ರೋತ್ಸಾಹಿಸುವ ಪರಿಯ ಬಗ್ಗೆ ಅವರ ಆತ್ಮೀಯರಿಂದಲೇ ತಿಳಿಯಬೇಕು.ಅವರಿಂದ ಸಹಾಯ ಸಹಕಾರ ಪಡೆದಿರುವ ಅಪಾರ ಶಿಷ್ಯ ಬಳಗದ ದಂಡೇ ಇದೆ. ಯೂಟೂಬಿನಲ್ಲಿ ಅವರ ಹಾಗೂ ಅವರ ಪತ್ನಿಯವರ ಆತಿಥ್ಯ ಸತ್ಕಾರಗಳ ಬಗ್ಗೆ ತಿಳಿದು ಅಚ್ಚರಿಯಾಗಿತ್ತು. ಚಳುವಳಿ, ಸಂಘಟನೆ ಸಾಮಾಜಿಕವಾಗಿ ತೊಡಗಿಸಿಕೊಂಡವರಿಗೆ ಸೃಜನಾತ್ಮಕತೆ ಸಾಧ್ಯವಿಲ್ಲ ಎಂಬುದೊಂದು ಮಾತಿದೆ.ಅದನ್ನ ಸಾರಾಸಗಟಾಗಿ ಸುಳ್ಳು ಎಂದು ಪ್ರತಿಪಾದಿಸಿದವರು ಮೇಷ್ಟ್ರು.ಸಂವೇದನಾಶೀಲ ಬರಹಗಳ ಮೂಲಕ ಎಲ್ಲವನ್ನೂ ಸಮತೂಗಿಸಿ ತೋರಿಸಿದವರು. ಪದ್ಯಗಳ ಮೂಲಕವೂ ನವಿರುತನವನ್ನು ಸೊಗಸಾಗಿ ನಿರೂಪಿಸಿದವರು.ಒಂದು ವಿಷಯವನ್ನು ವಿಂಗಡಿಸಿ ವಿಶ್ಲೇಷಿಸುವುದರ ಮೂಲಕ ಆವಾಹಿಸಿಕೊಳ್ಳುವ ಮಾರ್ಗಗಳನ್ನು ಪರಿಚಯಿಸಿದವರು. ನಾಣೊಂದು ಪದ್ಯದಲ್ಲಿ ಕೊಂಚ ಸಂಘರ್ಷವನ್ನು ಅಡಕಗೊಳಿಸಿದಾಗ ‘ ಸಂವಹನ ಬೀದಿಯಲ್ಲಿ ನಿಂತು ಜಗಳವಾಡಿದಂತಿರಬಾರದು’ಎಂಬ ಮಾತಿನ ಮೂಲಕ ನಯವಾದ ಮಾತಿನ ಪೆಟ್ಟು ಕೊಟ್ಟು ತಿದ್ದಿದವರು.ಸಿನೆಮಾ ಮಾಧ್ಯಮದ ಮೂಲಕ ಅವರು ಸಾಧಿಸಿದ್ದು ಬಹಳ.ಕಲಾತ್ಮಕತೆ ಮೂಲಕ ಸದಭಿರುಚಿಯನ್ನು ಯಥೇಚ್ಚವಾಗಿ ಹಂಚಿದವರು. ಒಂದೊಂದು ಸಿನೆಮಾವು ಕ್ಲಾಸಿಕ್.ಸಾಹಿತ್ಯ ಅಕಾಡೆಮಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಅವರ ಸಾಕಷ್ಟು ಕೆಲಸಗಳು ಇಂದಿಗೂ ಜನಜನಿತ.ಅವರ ಕತೆಗಳು, ಕವನಗಳು, ಅಂಕಣ ಬರಹಗಳು, ಕಾದಂಬರಿಗಳನ್ನು ಓದುವಾಗಅವರ ಸಂಪೂರ್ಣ ನಿಲುವು ಖಚಿವಾಗುತ್ತದೆ.ಬದ್ಧತೆ, ತಲ್ಲೀನತೆಗೆ ಅವರೇ ಮಾದರಿ.ವಿವಿಧ ಕ್ಷೇತ್ರಗಳಲ್ಲಿ ವೈವಿಧ್ಯತೆಯನ್ನು ಕಾಣಿಸಿದ ಅವರು ತೊಡಗಿಕೊಳ್ಳದ ಕ್ಷೇತ್ರಗಳೇ ಇಲ್ಲವೆನ್ನುವಷ್ಟು ಸಾಧಿಸಿದವರು. ಸ್ವತಃ ಪ್ರಾಧ್ಯಾಪಕರಾಗಿದ್ದು, ಈಗಲೂ  ಶೈಕ್ಷಣಿಕ ಸವಾಲುಗಳಿಗೆ ಸಕಾಲದಲ್ಲಿ ಧಾವಿಸಿ ನೀಡುವ ಸಲಹೆಗಳು, ರಾಜಕೀಯವಾಗಿ ಒದಗಿಸುವ ಮಾರ್ಗದರ್ಶನಗಳು ಮುತ್ಸದ್ದಿಯ ಅಸಾಧಾರಣಗುಣದವು. ಇಷ್ಟೆಲ್ಲಾ ಜ್ಞಾನ ದಕ್ಕಿದ್ದೂ ಕೂಡ ಪತ್ರಿಕೆ ಮತ್ತು ಅಂತರ್ಜಾಲದಲ್ಲಿಯೇ.ಇಷ್ಟೆಲ್ಲ ಹೇಳಲು ಅರ್ಹತೆಯಿದೆಯೋ ಇಲ್ಲವೋ,  ಸಂಕೋಚ ಮುಜುಗರದಿಂದಲೇ ಹೇಳಬೇಕಾಯಿತು. ಗ್ರಾಮೀಣ ಹಿನ್ನೆಲೆಯಿಂದ ಬದುಕನ್ನು ರೂಪಿಸಿಕೊಂಡು, ಸತತ ಪ್ರಯತ್ನ ಹಾಗೂ ನಿರಂತರ ಬದ್ಧತೆಯ ಛಲದ ಮೂಲಕ ಅಸಾಮಾನ್ಯ ಚಿಂತಕರಾದ, ಸಾಂಸ್ಕೃತಿಕ ಚಾಲಕರಾದ ಬಿ.ಆರ್.ಮೇಷ್ಟು ಜನ್ಮದಿನ ಅಕ್ಟೋಬರ್ ತಿಂಗಳಿನಲ್ಲಿಯೇ ಬರುತ್ತದೆ. ಈ ಹಿಂದೆ ಅವರ ಬಳಗ ಏರ್ಪಡಿಸಿದ್ದ ‘ಬರಗೂರು-೭೦, ವಿಚಾರ ಸಂಕಿರಣ’ ದಲ್ಲಿ ಪಾಲ್ಗೊಂಡ ಖುಷಿ ನನ್ನದು.ಈಗಲೂ ಇದೇ ಅಕ್ಟೋಬರ್ ೨೯ ರಂದು ಬೆಳಗ್ಗೆ ಅವರ ಶಿಷ್ಯವರ್ಗ ರಾಷ್ಟ್ರೀಯ ವೆಬಿನಾರ್‌ ಆಯೋಜಿಸಿ ಗುರುಗಳ ಬಗ್ಗೆ ಹಿರಿಯ ಲೇಖಕರಿಂದ ಮಾತನಾಡಿಸಲಿದ್ದಾರೆ.ಶೀರ್ಷಿಕೆ- ನಮ್ಮ ಮೇಷ್ಟ್ರು, ನಮ್ಮ ಹೆಮ್ಮೆ. ಹೆಮ್ಮೆಯ ಸಂಗತಿಯೇ. ಬರಗೂರರ ಬಳಗ, ಅಭಿಮಾನಿಗಳು, ಅವರ ಅನುಯಾಯಿಗಳ ಸಂಖ್ಯೆ ಅಪಾರ. ಅವರ ಕುರಿತು ಅದೆಷ್ಟೋ ಪಿ.ಎಚ್.ಡಿ.ಗಳಾಗಿವೆ. ಬರಹಗಳು, ಲೇಖನಗಳು ಬಂದಿವೆ. ಆ ಮಟ್ಟಕ್ಕಲ್ಲದಿದರೂ ಕಿರು ಅಭಿಮಾನಿಯಾಗಿ ಅಕ್ಷರಗಳಲ್ಲಿ ಹಿಡಿಯಲು ಸಾಧ್ಯವಾಗದೆ ಕೆಲವೇ ಪದಗಳಲ್ಲಿ ಗ್ರಹಿಕೆಗೆ ದಕ್ಕಿದಂತೆ ದಾಖಲಿಸಲು ಯತ್ನಿಸಿರುವೆ. ************************************** ಫೋಟೊ ಆಲ್ಬಂ

ಬರಗೂರರೆಂಬ ಬೆರಗು Read Post »

You cannot copy content of this page

Scroll to Top