ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕಾವ್ಯಯಾನ

ನನ್ನ ಕವಿತೆ ಅಮೃತಾ ಮೆಹಂದಳೆ ನನ್ನ ಕವಿತೆ,ರಾಗ ತಾಳ ಭಾವವಿಲ್ಲದ ಮೂಕ ಗೀತೆವೀಣೆಗೆ ತ೦ತಿ ಮೀಟದಮುರಳಿಗೆ ಕುಹೂ ಹಾಡದ ಶೋಕಗೀತೆಆದರೊಮ್ಮೊಮ್ಮೆ ಹಿಡಿದಿಟ್ಟರೆ ನಿಲ್ಲುವುದುನಗಿಸಿದರೆ ನಕ್ಕು ಅಳಿಸಿದರೆ ಅಳುವುದುಏಕಾ೦ತಕೆ ಜೊತೆ ಹಾಡಿದರೆ ಭಾವಗೀತೆನನ್ನ ಭಾವದ೦ತೆ… ನನ್ನ ಕವಿತೆ,ಬರಿದಾದ ಬಿಳಿಯಾದ ಹಾಳೆಯ೦ತೆನಡುನಡುವೆ ಕಪ್ಪು ಚುಕ್ಕೆಯಾಗುವುದು ಚಿ೦ತೆಚೆಲ್ಲಿದರೆ ಕಣ್ಣುಕುಕ್ಕುವುದು ಬಣ್ಣಬರಿದು ಮನ ಬಿ೦ಬಿಸುವುದು ಬರೀ ಸೊನ್ನೆಹರಿದರೆ ಚೂರು ಮುಚ್ಚಿಟ್ಟರೆ ನೆನಪುಎಚ್ಚರದಿ ಬಿಡಿಸಿದರೆ ಸೆಳೆವ ಚಿತ್ರದ೦ತೆನನ್ನ ಚಿತ್ತದ೦ತೆ… ನನ್ನ ಕವಿತೆ,ಆಗಸದಿ ತೇಲುವ ಮೋಡದ೦ತೆಕೆಲವೊಮ್ಮೆ ಮೈದು೦ಬಿ ಸುರಿಯುವುದು ವರ್ಷದ೦ತೆಒಮ್ಮೆ ಬಿಳುಪು, ಇನ್ನೊಮ್ಮೆ ಕಪ್ಪುಬಣ್ಣ ಬಣ್ಣ ಹೊಳಪು, ತಾರೆಗಳ ನು೦ಗಿದ೦ತೆಮತ್ತೊಮ್ಮೆ ಕಪ್ಪುಕತ್ತಲೆ ಇದ್ದಕ್ಕಿದ್ದ೦ತೆನನ್ನ ಕನಸಿನ೦ತೆ… ನನ್ನ ಕವಿತೆ,ಮನದ ಕನ್ನಡಿಯ೦ತೆ,ದು:ಖದಲಿ ವಿರಹಗೀತೆಸ೦ತಸದಿ ನಲಿವ ಪ್ರೇಮಗೀತೆಇದಿ೦ದು ಹುಚ್ಚಿ, ನಾಳೆ ವಿರಾಗಿನಾಡಿದ್ದು ನಾಚುವ ಮದುಮಗಳುಆಮೇಲೆ ಪ್ರೌಢೆನೋವಿಗೆ ಜೊತೆಗಾತಿನಲಿವಿನಲ್ಲಿ ಸ೦ಗಾತಿನನ್ನ೦ತೆ… ********

ಕಾವ್ಯಯಾನ Read Post »

ಇತರೆ

ಯುಗಾದಿಯ ಸೂರ್ಯಸ್ನಾನ

ಯುಗಾದಿಯ ಸೂರ್ಯಸ್ನಾನ ಸ್ಮಿತಾ ರಾಘವೇಂದ್ರ ಯುಗದ ಆದಿಯೂ ಪ್ರಕೃತಿಯ ಪ್ರೀತಿಯೂ ಯುಗ ಉರುಳಿ ಯುಗ ಬರಲು ನವ ಯುಗಾದಿ ಬಾಡುವಲ್ಲೂ ಬಿಡದೇ ಚಿಗುರುವ ಈ ಪ್ರಕೃತಿಯ ಆದಿ. ಇಡೀ ಪ್ರಕೃತಿಯೇ ಹೊಸ ಚೈತನ್ಯವೊಂದಕ್ಕೆ ತರೆದು ಕೊಳ್ಳುವ ಕಾಲ ಮರಗಳೆಲ್ಲ ಚಿಗುರೆಲೆಯ ಹೊದ್ದು ಹೂ ಹಣ್ಣು ಗೊಂಚಲುಗಳಿಂದ ನಳ ನಳಿಸಿ ಮತ್ತೊಂದು ಸೃಷ್ಟಿಗೆ ಬೀಜಗಳ ಪಸರಿಸಿ ತೃಪ್ತವಾಗುವ ಕಾಲ. ಆಗೆಲ್ಲ ಯುಗಾದಿ ಬಂತೆದರೆ ಬೆಟ್ಟಗುಡ್ಡಗಳ ತಿರುಗುವದೇ ಒಂದು ಸಂಭ್ರಮ ಗೊಂಚಲು ಗೊಂಚಲಾಗಿ ಬಾಗಿ ನಿಂತ ಸಂಪಿಗೆ, ನೇರಳೆ, ಕೌಳಿ,ಬಿಕ್ಕೆ ಹಣ್ಣು, ಮುಳ್ಳೆಹಣ್ಣು,ಇನ್ನೂ ಹಲವುಜಾತಿಯ ಹಣ್ಣುಗಳ ಕಿತ್ತು ಮಡಿಲೊಳಗೆ ತುಂಬಿಕೊಂಡು ಮನಸೋ ಇಚ್ಚೆ ಸವಿಯುತ್ತಿದ್ದೆವು.ಹುಳಿ, ಸಿಹಿ, ಕಹಿ,ಅದೆಷ್ಟು ವಿಧದ ರುಚಿಗಳು. ದೇಹಕ್ಕೂ, ಮನಸಿಗೂ, ಆರೋಗ್ಯಕ್ಕೂ, ಖುಷಿ ನೀಡುತ್ತಿತ್ತು. ಅಯಾ ಕಾಲಕ್ಕೆ ಪ್ರಕೃತಿಯ ಮಡಿಲೊಳಗೆ ಸಿಗುವ ಹಣ್ಣನ್ನು ತಂದು ಸವಿಯದೇ ಹೋದರೆ ಅದೇನೋ ಕಳೆದುಕೊಂಡ ಭಾವ ಇಗಲೂ ಕಾಡುತ್ತದೆ. ಹೊರಗೆ ಹೋದರೆ ಬೆಟ್ಟದ ಹಣ್ಣುಗಳ ತಿಂದರೆ ಇನ್ಪೆಕ್ಷನ್ ಆಗುತ್ತದೆ ಎನ್ನುವ ಕಾಲ ಬರತೊಡಗಿತು. ಮಾನವ ಪ್ರಕೃತಿಯ ಜೊತೆಗಿನ ಸಂಬಂಧ ನಿಧಾನವಾಗಿ ತೊರೆದು ಆಧುನಿಕತೆಯೆಡೆಗೆ ತೆರೆದುಕೊಳ್ಳತೊಡಗಿದ. ಸಿಟಿಯಲ್ಲಿರುವ ಮಾಲ್‌ಗಳು ತುಂಬಿ ತುಳುಕಾಡುತೊಡಗಿದವು. ಎಲ್ಲೆಡೆ ರಶ್ಯೋ ರಶ್ಯು. ಹಬ್ಬದ ಆಫರ್ಸ್ ಗಳು ಎಲ್ಲರನ್ನೂ ತನ್ನತ್ತ ಸೆಳೆದು ಹಬ್ಬವೆಂದರೆ ಖರೀದಿ ಅನ್ನುವಂತಾಯಿತು. ಈಗಿನ ಯುವಕ ಯುವತಿಯರು ರಜೆ ಇದೆ ಅಂದರೆ ಸ್ನೇಹಿತರ ಜೊತೆ ಪಾರ್ಟಿ, ಕೂಟ ಅಂತ ಮೋಜುಮಸ್ತಿಯಲ್ಲಿ ತೊಡಗುತ್ತಾರೆ. ಮಕ್ಕಳಿಗೆಲ್ಲಿ ನಮ್ಮ ಪ್ರಕೃತಿಯ ಪರಿಚಯವಾಗಲು ಸಾಧ್ಯ. ಬೆಳಗಾಗೆದ್ದು ಬೇವಿನ ಮರ ಹುಡಿಕಿಕೊಂಡು ಹೋಗಿ ತೆಕ್ಕೆಯತುಂಬಾ ಸೊಪ್ಪು ಕಿತ್ತು ತರುತ್ತುದ್ದ ದಿನಗಳವು. ಅದನ್ನು ಬಚ್ಚಲುಮನೆಯ ನೀರಿನ ಹಂಡೆಗೆ ಹಾಕಿ ಚೆನ್ನಾಗಿ ಕುದಿಸುತ್ತುದ್ದರು ಅಪ್ಪ. ಅದರ ಘಮವೇ ಇಂದಿಗೂ ಒಂತರ ಅಪ್ಯಾಯಮಾನ,ಹಬ್ಬದ ದಿನ ಆರಂಭ ವಾಗುವ ಈ ಪ್ರಕ್ರಿಯೆ ಆಗಾಗ ನಡೆಯುತ್ತಲೇ ಇತ್ತು. ಅದರ ಸೊಪ್ಪುಗಳನ್ನು ಕುದಿಸಿ ಪ್ರತಿಯೊಬ್ಬರಿಗೂ ಒಂದೊಂದು ಲೋಟ ಕುಡಿಯಲು ನೀಡುತ್ತಿದ್ದಳು ಅಮ್ಮ. ಕಹಿ ಎಂದು ತಕರಾರು ತೆಗೆದರೆ ಮುಗಿತು, ಮೂಗು ಹಿಡಿದು ಕುಡಿಸುತ್ತಿದ್ದಳು.ಕಹಿಯ ಒಗರನ್ನು ನೀಗಿಸಿಕೊಳ್ಳಲು ಕೈಲೊಂದು ಹುಣಸೇ ಹಣ್ಣಿನ ಚೂರು ಹಿಡಿದು ಗಟ ಗಟನೇ ಕುಡಿದು ಗಬಕ್ಕನೇ ಹುಣಸೇಹಣ್ಣು ಬಾಯಿಗೆ ಹಾಕಿಕೊಳ್ಳುತ್ತಿದ್ದೆವು. ಪ್ರತೀ ರವಿವಾರ ಕಹಿ ಕುಡಿಯಲೇಬೇಕಾಗಿತ್ತು ಅಂತಹ ಆರೋಗ್ಯ ಪೂರ್ಣ ನಿಯಮಗಳೆಲ್ಲ ಇಂದು ಜಿಮ್,ಆಸ್ಪತ್ರೆ,ಸೇರಿಕೊಂಡಿವೆ. ಸಹಜವಾಗಿ ಎಟುಕುವ ಯಾವ ಸವಲತ್ತುಗಳೂ ಬೇಡ,ಅದಕ್ಕೆ ಹಣತೆತ್ತು ಆಹ್ವಾಹನೆ ಮಾಡಿದರೆನೇ ಖುಷಿ ಮತ್ತು ಅದು ಸತ್ಯ ಅನ್ನುವ ನಂಬಿಕೆ. ವಸಂತ ಋತುವಿನ ಆಗಮನವೆಂದರೆ ಸಂಭ್ರಮ ಪಲ್ಲವಿಸುವ ಸಮಯ. ಈ ಋತುರಾಜನ ಆಗಮನದೊಂದಿಗೆ ಯುಗಾದಿ ಹಲವು ಆರೋಗ್ಯ ಸೂತ್ರಗಳನ್ನು ಹೊತ್ತು ತರುತ್ತದೆ. ಧರ್ಮಸಿಂಧು, ಅಥರ್ವವೇದ, ಶತಪಥ ಬ್ರಾಹ್ಮಣ ಇನ್ನೂ ಮುಂತಾದ ಧಾರ್ಮಿಕ ಗ್ರಂಥಗಳಲ್ಲಿ ಯುಗಾದಿಯ ವೈಶಿಷ್ಟ್ಯದ ಉಲ್ಲೇಖವಿದೆ. ‘ಯುಗ’ ಎಂದರೆ- ನೂತನ ವರ್ಷ; ‘ಆದಿ’ ಎಂದರೆ- ಆರಂಭ. ಈ ಋತುವಿನಲ್ಲಿ ಹೊಸ ಚಿಗುರಿನ ಹಸಿರು ವಸ್ತ್ರವನ್ನುಟ್ಟು ರಾರಾಜಿಸುವ ನಿಸರ್ಗವನ್ನು ಕಂಡಾಗ, ಕೋಗಿಲೆಗಳ ಇಂಚರವನ್ನು ಆಲಿಸಿದಾಗ, ‘ಆನಂದಮಯ ಈ ಜಗ ಹೃದಯ’ ಎಂಬ ಕವಿ ವಾಣಿಯ ಸತ್ಯದ ದರ್ಶನವಾಗುತ್ತದೆ. ಪ್ರತಿಯೊಂದು ಪ್ರಾಣಿ ಪಕ್ಷಿಗಳಿಗೂ ವಸಂತ ಋತುವೆಂದರೆ ಸಂಭ್ರಮದ ಹೊನಲು.ಹಣ್ಣು ಚಿಗುರೆಲೆಗಳ ತಿಂದು ತೃಪ್ತವಾಗಿ ವಿಹರಿಸುತ್ತವೆ. ಅದಕ್ಕಾಗಿಯೆ ಸರ್ವ ಋತುಗಳಲ್ಲಿ ವಸಂತ ಋತು ಶ್ರೇಷ್ಠ ಕೂಡ. ಉಸ್ ಉಸ್ ಎಂದು ಎ ಸಿ ಯೊಳಗೆ ಕೂತರೂ ಬೆವರಿಳಿಸಿ ಬಾಡುತ್ತಿರುವ ಮನುಷ್ಯ,ರಣ ರಣ ಸೂರ್ಯನ ಕಿರಣಕ್ಕೂ ಸೆಡ್ಡು ಹೊಡೆದು ಬದುಕುವ ಕಲೆಯ ತಣ್ಣಗೆ ಕಲಿಸುತ್ತಿರುತ್ತದೆ ಪ್ರಕೃತಿ. ಆದರಿಂದು ಪ್ರಕೃತಿಗೇ ಸೆಡ್ಡು ಹೊಡೆದು ಸಾಗುತ್ತಿದ್ದಾನೆ ಮನುಜ. ಅದರ ಪರಿಣಾಮವನ್ನೂ ಜೊತೆ ಜೊತೆಗೇ ಅನುಭವಿಸಿದರೂ ಕಿಂಚಿತ್ತೂ ಬದಲಾಗದ ಮಾನವ. ಹೌದು,ವಿಕಾರಿ ನಾಮದ ಯುಗಾದಿ ತನ್ನ ವಿಕಾರ ರೂಪವನ್ನು ಇಡೀ ಜಗತ್ತಿಗೇ ತೋರಿಸುತ್ತಿದೆ. ಇಂದು,ಮನುಷ್ಯನ ಮಿತಿಮೀರಿದ ಆಸೆಗಳು ಮನುಜಕುಲವನ್ನೇ ನಾಶಮಾಡುತ್ತಿವೆ. ಪ್ರತಿಯೊಂದನ್ನೂ ಸಮತೋಲನದಲ್ಲಿ ಇರಿಸಿಕೊಳ್ಳುವ ಕಲೆ ಮಾನವನಿಗಿಂತ ಪ್ರಕೃತಿಗೇ ಚೆನ್ನಾಗಿ ಗೊತ್ತಿದೆ. ಅದಕ್ಕಾಗಿಯೇ ಕಾಲ ಕಾಲಕ್ಕೆ ತನ್ನ ನಿಲುವನ್ನು ಚಾಚುತಪ್ಪದೇ ತೋರಿಸುತ್ತದೆ,ಪಾಲಿಸುತ್ತದೆ, ಯುಗಾದಿಕೂಡ ಅಂತಹದ್ದೊಂದು ಪ್ರಕೃತಿ ಪಾಲನೆ ಮತ್ತು ನಿಲುವಿನ ಸಂಕೇತವೇ ಹಿಂದೂ ಸಂಪ್ರದಾಯದಂತೆ ಒಂದು ಸಂವತ್ಸರ ಕಳೆದು ಇನ್ನೊಂದು ಸಂವತ್ಸರದ ಆರಂಭ. ಆರಂಬದಲ್ಲಿಯೇ ಪ್ರಕೃತಿ ಬೀಜೊತ್ಪತ್ತಿಯನ್ನು ಮಾಡಿ ಬರುವ ಮಳೆಗಾಲಕ್ಕೆ ಮೊಳಕೆಯೊಡೆಯಲು ತನ್ನ ಸೃಷ್ಟಿಯ ಸಮತೋಲನ ಕಾಯ್ದುಕೊಳ್ಳಲು ಸಿದ್ಧವಾಗುತ್ತದೆ. ಅಂತೆಯೇ ಬರಲಿರುವ ಬದುಕು ಹೇಗೂ ಇರಬಹುದು ಕಹಿಯಾಗಲಿ ಸಿಹಿಯಾಗಲೀ ಎಲ್ಲದಕ್ಕೂ ಸಿದ್ದರಾಗಿ ಮುನ್ನಡೆಯಬೇಕು ಎಂದು ಹಿರಿಯರು ಬೇವು ಬೆಲ್ಲವನ್ನು ತಿನ್ನುವ ಮೂಲಕ ಒಲವು, ನಲಿವು, ಸಹಬಾಳ್ವೆಯ,ದ್ಯೋತಕವೆಂದು ಯುಗಾದಿಯನ್ನು ಬರಮಾಡಿಕೊಳ್ಳುತ್ತಾರೆ. ಶತಾಯು:ವಜ್ರದೇಹಾಯ ಸರ್ವಸಂಪತ್ಕರಾಯಚ| ಸರ್ವಾರಿಷ್ಟ ವಿನಾಶಾಯ ನಿಂಬಕಂದಳ ಭಕ್ಷಣಂ|| ಎನ್ನುವಂತೆ– (ನೂರು ವರುಷಗಳ ಆಯುಷ್ಯ, ಸದೃಢ ಆರೋಗ್ಯ, ಸಕಲ ಸಂಪತ್ತುಗಳ ಪ್ರಾಪ್ತಿಗಾಗಿಯೂ, ಸಕಲ ಅರಿಷ್ಟ ನಿವಾರಣೆಗಾಗಿಯೂ ಬೇವು ಬೆಲ್ಲ ಸೇವನೆ ಮಾಡುತ್ತೇನೆ.) ಆರೋಗ್ಯದ ದೃಷ್ಟಿಯಿಂದಲೂ ಬೇವು ದೇಹಕ್ಕೆ ಬಹಳ ಒಳ್ಳೆಯ ದಿವ್ಯ ಔಷಧ ನಮ್ಮೊಳಗಿನ ಕಲ್ಮಶಗಳನ್ನು ಹೊರದೂಡುತ್ತದೆ. ಅಲ್ಲದೇ ಬೇಸಿಗೆ ಕಾಲಕ್ಕೆ ರೋಗ ರುಜಿನಿಗಳು ಅಧಿಕ ಮತ್ತು ಬಹಳಬೇಗ ವ್ಯಾಪಿಸುತ್ತದೆ. ಬೇವಿನ ಎಲೆ, ಚಿಗುರು, ಹೂವು, ಕಾಯಿ, ಬೀಜ, ಎಣ್ಣೆ, ಕಾಂಡ, ತೊಗಟೆ, ಬೇವಿನ ಬೇರುಗಳೆಲ್ಲವೂ ಮದ್ದಿಗೊದಗುತ್ತವೆ. ಆದರೆ ಬಳಸಲು ವ್ಯವಧಾನ ಬೇಕು. ಕಾಯಿಲೆ ಎಷ್ಟೆ ಗಂಭೀರವಿರಲಿ, ಯಾವ ಚಿಕಿತ್ಸೆಗೂ ಗಾಂಧೀಜಿ ಒಪ್ಪುತ್ತಿರಲಿಲ್ಲವಂತೆ. ಬೇವಿನ ಎಲೆಯ ಕಷಾಯ ಮತ್ತು ಆಡಿನ ಹಾಲು ಕುಡಿದು,ಮೈಗೆ ಆಗಾಗ ಬೇವಿನ ಎಣ್ಣೆ ಬಳಿದುಕೊಂಡು ಮರದ ಹಲಗೆಗಳ ಮೇಲೆ ಮಲಗಿ ಸೂರ್ಯಸ್ನಾನ ಮಾಡುತ್ತಿದ್ದರಂತೆ. ನಾವಿಂದು ಶಾಸ್ತ್ರಕ್ಕೆ ಒಂದು ಎಲೆ ತಿಂದು ಹಬ್ಬದ ಆಚರಣೆಯಿಂದ ಬೀಗುತ್ತಿದ್ದೇವೆ. ಈ ಹಬ್ಬವನ್ನು ಭಾರತ ಪರ್ವದಲ್ಲಿ ಬೇರೆ-ಬೇರೆ ಹೆಸರಿನಿಂದ, ಸಾಮಾನ್ಯವಾಗಿ ಎಲ್ಲರೂ ಆಚರಿಸುವರು. ಹಬ್ಬಗಳಲ್ಲಿ ಶ್ರೇಷ್ಠವಾದ ಪ್ರಸಿದ್ಧ ವಾದ ಯುಗಾದಿ ಹಬ್ಬ ಚ್ಯೆತ್ರ ಮಾಸದ ಶುಕ್ಲ ಪಕ್ಷದ ಪಾಡ್ಯದಂದು ಬರುತ್ತದೆ. ಯುಗಾದಿ ಹಬ್ಬವು ಹಿಂದುಗಳ ದೃಷ್ಟಿಯಲ್ಲಿ ವರ್ಷಾರಂಭದ ಪವಿತ್ರ ದಿನ ಕೂಡಾ. ಒಟ್ಟಾರೆ ಯುಗಾದಿಯು ಸಾಂಪ್ರದಾಯಿಕ ಆಚರಣೆಯೊಂದಿಗೆ , ಪ್ರಕೃತಿಯೊಂದಿಗಿನ ನಮ್ಮ ಅವಿನಾಭಾವ ಸಂಬಂಧದ ಪ್ರತೀಕವೆಂದರೆ ತಪ್ಪಾಗಲಾರದು. ಅದೆಷ್ಟು ರೋಗ ನಿರೋಧಕಗಳನ್ನು ನಮಗೆ ಪ್ರಕೃತಿ ಕೊಡುಗೆಯಾಗಿ ನೀಡಿದೆ.ನಾವದನ್ನು ಗಮನಿಸುತ್ತಲೇ ಇಲ್ಲ ಹಳೆಯ ಪದ್ದತಿಗಳೆಲ್ಲ ಜೊಳ್ಳು. ವಿಜ್ಙಾನವೇ ಹೆಚ್ಚೆಂದು ಅಹಂಕಾರದಿಂದ ಸಾಗುತ್ತಿದ್ದೇವೆ. ಆದರೆ ನೆನಪಿರಲಿ ಹಳೆಯಬೇರಿನ ಭದ್ರತೆಯೇ ಹೊಸ ಚಿಗುರಿಗೆ ನಾಂದಿ. ಇಂದು ಜಗತ್ತೇ ಎದುರಿಸುತ್ತಿರು ಕೊರೋನಾ ಎಂವ ವೈರಾಣುವಿನ ಆಟಾಟೋಪ ನಮ್ಮ ಹಿಂದೂ ಸಂಪ್ರದಾಯ ಮಡಿ ಯೆಂಬ ಸ್ವಚ್ಚತೆ.ಅಪ್ಪುಗೆ ಗಿಂತ ನಮಸ್ಕಾರದ ಗೌರವ. ಹಬ್ಬಗಳ ಶಿಸ್ತುಬದ್ಧ ಸಂಪ್ರದಾಯಗಳು, ಪ್ರತೀ ಘಟ್ಟವನ್ನು ನೆನಪಿಸುತ್ತಿರುವದೇ ಇದಕ್ಕೆ ಸಾಕ್ಷಿ ಆದರೆ ಕಳೆದ ಕಾಲ ಮತ್ತೆ ಬರಲಾರದು. ಇರುವ ಬರುವ ದಿನಗಳನ್ನು ಜಾಗರೂಕವಾಗಿ ಬದುಕುವದು ಬಹಳ ಮುಖ್ಯ ಪ್ರತಿಯೊಂದು ಹಬ್ಬ ಹರಿದಿನಗಳಿಗೂ ಅದರದೇ ಆದ ಸಂಪ್ರದಾಯ ಶಾಸ್ತ್ರ ಆಚರಣೆಗಳು ನಮ್ಮ ಅರೋಗ್ಯ ಸ್ವಚ್ಚತೆಯೊಂದಿಗೆ ಜೋಡಣೆಯಾಗಿದೆ ಆದರೆ ಕೇವಲ ಅದನ್ನು ಆಡಂಭರವಾಗಿಮಾತ್ರ ನಾವಿಂದು ನೋಡುತ್ತಿದ್ದೇವೆ. ಈಗ ಸಧ್ಯದ ಪರಿಸ್ಥಿತಿಯಲ್ಲಿ ಬಂದಿರುವ ಮಹಾ ಮಾರಿ ರೋಗದ ವಿಕಾರತೆಯು ತೊರೆದು ಹೊಸ ಶಾರ್ವರಿಯ, ಶಕ್ತಿ ಯುಗ ಎಲ್ಲರ ಕಾಯಾ ವಾಚಾ ಮನಸಾ ಆರಂಭವಾಗಲಿ. ********

ಯುಗಾದಿಯ ಸೂರ್ಯಸ್ನಾನ Read Post »

ಕಾವ್ಯಯಾನ

ಕಾವ್ಯಯಾನ

ಕವಿತೆ ಚೈತ್ರಾ ಶಿವಯೋಗಿಮಠ ಕವಿ ಕೆ.ಎಸ್.ಎನ್ ಕ್ಷಮೆ ಕೋರುತ್ತಾ….. ಬರೆದ ಕವಿತೆಯ ಬಿಚ್ಚಿ, ತುಂಡರಿಸಿ ಕೊಯ್ವರು, ಬರೆದುದರೆಲ್ಲದರಲಿ ಬರಿ ತಪ್ಪ ಕಾಣ್ವರು ಯಾವುದೂ ಸರಿ ಇಲ್ಲ ಎಂದಿವರ ಟೀಕೆ ಇವರು ಮೆಚ್ಚುವ ಕವಿತೆ ಇಲ್ಲಿಲ್ಲ ಜೋಕೆ!! ಭಾವ ಚಂದವಿರಲು, ಈ ಪದವು ಯಾಕೆ? ಪದಗಳೆಲ್ಲವುಕೆ ಸಮ್ಮತಿಯು ಇರಲು, ಭಾವ ತೀವ್ರತೆಯು ಸಾಕೆ? ಎಲ್ಲದಕೂ ಬರಿ ಕೊಂಕು ಎಲ್ಲದಕು ಟೀಕೆ ಇವರು ಮೆಚ್ಚುವ ಕವಿತೆ ಇಲ್ಲಿಲ್ಲ ಜೋಕೆ!! ಓದೋಕೆ ಲಯವಿರೆ, ಛಂದೋಬದ್ಧ ಇಲ್ಲಂತೆ! ಪ್ರಾಸವಿಲ್ಲದಿರೆ ಓದಲು ತ್ರಾಸಂತೆ.. ಪ್ರಾಸವಿರೆ, ಪ್ರಾಸಕ್ಕೆ ತ್ರಾಸೆಂದು ಟೀಕೆ ಇವರು ಮೆಚ್ಚುವ ಕವಿತೆ ಇಲ್ಲಿಲ್ಲ ಜೋಕೆ! ಅರ್ಥವಾಗದಿರೆ, ಅರೆ ಇದೆಂಥ ಕವಿತೆ? ಅರ್ಥವಾದರೆ, ಧ್ವನಿಯಿಲ್ಲ ಅದು ಬರಿ ವಾಚ್ಯವಂತೆ! ಎಲ್ಲದಕು ಇವರದು ಅರ್ಥವಿಲ್ಲದ ಟೀಕೆ ಇವರು ಮೆಚ್ಚುವ ಕವಿತೆ ಇಲ್ಲಿಲ್ಲ ಜೋಕೆ! ಪತ್ರಿಕೆಗೆ ಕಳಿಸಿ ಪ್ರಕಟಿಸಿದರೆ, ಕೀರ್ತಿಯ ಹುಚ್ಚಂತೆ ಈಗೆಲ್ಲ ಬರೆಯುವವರ ಇವರು ಮೆಚ್ಚರಂತೆ! ಬರೆದುದೆಲ್ಲದಕು ಬರೀ ಟಿಪ್ಪಣಿ-ಟೀಕೆ ಇವರು ಮೆಚ್ಚುವ ಕವಿತೆ ಇಲ್ಲಿಲ್ಲ ಜೋಕೆ! **********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಕವಿತೆ ಹುಟ್ಟುವುದಿಲ್ಲ ಸ್ಮಿತಾ ರಾಘವೇಂದ್ರ ಆತ್ಮವೆಂಬ ಅನೂಹ್ಯ ಭಾವಗರ್ಭಗುಡಿಯ ಹೊಕ್ಕು ಹಲವು ಕವಿತೆಗಳು ತಣ್ಣಗೆ ಹೊರ ನಡೆಯುತ್ತವೆ ಕವಿತೆಯ ಹಡೆದ ಮೌನದಂತೆ! ನಭೋಮಂಡಲವ ತಿರು ತಿರುಗಿ ವಿರಮಿಸಿ ಉಸುರಿದಾಗೊಂದು- ನಿಟ್ಟುಸಿರು: ಆತ್ಮಕ್ಕೆ ದಕ್ಕಿದ್ದು ಕಾಯಕ್ಕೆ ದಕ್ಕುವದಿಲ್ಲ! ಅಣು ರೇಣುವಿನಲಿ ಪಲ್ಲವಿಸಿ ತಲೆದೂಗಿ ರಿಂಗಣಿಸಿ ಒಳಗೊಳಗೇ ಭೋರ್ಗರೆದು ಮಂಜುಗಟ್ಟಿದ ಕಣ್ಣ ತೊರೆದು ಅರಿಯದೇ ಉದುರಿದ ಕವಿತೆಯ ಕರುಣೆ- ತೊರೆದ ನಿರಾಳ ಬದುಕಿನ ಕೊನೆಯ ಕವಿತೆಗೆ ಮಾತೂ ಇರುವುದಿಲ್ಲ ಮೂಕ ಮರ್ಮರವೊಂದರ ಅಂತರಾತ್ಮ: ಸೋತ ಕಣ್ಣುಗಳಿಂದ ಸರಿದ ಸುಂದರ ನೋಟ. ಸಾವಿನ ಆಲಿಂಗನ, ಆಲಿಂದ ದಾಟಿ ತಿರುಗಿಯೂ ನೋಡದೇ ನಡೆದ ಕರುಳ ಹಿಂಡಿದ ಕವಿತೆ, ಆತ್ಮ ಸಂಗಾತ ಬಿಂದುವೊಂದಕೆ ಬಂದು ಸೇರಿದ ಭಾವ- ಬೃಹದಾಕಾರ ಚದುರಿ- ವಿವಿಧ ರೂಪಕ ಸೇರಿ ಜಗದ ತುಂಬಾ ಪುಟ್ಟ ಪುಟ್ಟ ಕವಿತೆಯ ಧಾರಣ! ಹುಟ್ಟೂ ಇಲ್ಲದ ಸಾವೂ ಇಲ್ಲದ ನಿರಂತರ ಚಲನೆ ಜಗದ ಏಕೈಕ ಕವಿತೆ ಸಕಲವನೂ ಸಹಿಸುತ್ತದೆ! ಕವಿತೆ ಹುಟ್ಟುವುದಿಲ್ಲ ಸ್ವಯಂ ಹೆರುತ್ತದೆ!! *********

ಕಾವ್ಯಯಾನ Read Post »

ಇತರೆ

ಪ್ರಸ್ತುತ

ಮಾನವನ ಮಿದುಳಿಗೇ ತಗಲಿರುವ ವೈರಸ್ ಗಣೇಶಭಟ್, ಶಿರಸಿ ಮಾನವನ ಮಿದುಳಿಗೇ ತಗಲಿರುವ ವೈರಸ್………….. ಇಡೀ ಜಗತ್ತನ್ನೇ ತಲ್ಲಣಗೊಳಿಸುತ್ತಿರುವ ವೈರಸ್ ಯಾವುದೆಂದು ಕೇಳಿದರೆ ಚಿಕ್ಕ ಮಕ್ಕಳೂ ಕೂಡಾ ಕೊರೊನಾ ಎಂದು ಹೇಳುವಷ್ಟು ಅದರ ಹೆಸರು ಜನಜನಿತವಾಗಿದೆ. ಕೊರೊನಾ ವೈರಾಣು ತಗಲದಂತೆ ಸುರಕ್ಷಾ ಕ್ರಮವಾಗಿ ಮಾಲ್‍ಗಳನ್ನು, ಸಿನಿಮಾ, ನಾಟಕಗಳನ್ನು ಬಂದ್ ಮಾಡಲಾಗಿದೆ. ಪ್ರವಾಸಿ ತಾಣಗಳಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಭಯದಿಂದಾಗಿ ಜನರ ಓಡಾಟ ಕಡಿಮೆಯಾಗಿದೆ. ಸಾರಿಗೆ ವ್ಯವಸ್ಥೆಯ ಬಳಕೆದಾರರ ಸಂಖ್ಯೆ ಕುಗ್ಗುತ್ತಿದೆ. ಮನೆಯಿಂದ ಹೊರ ಬರಲು ಜನರು ಹಿಂದೇಟು ಹಾಕುತ್ತಿರುವುದರಿಂದ ಅಂಗಡಿ, ಹೋಟೆಲ್‍ಗಳ ವ್ಯಾಪಾರ, ವ್ಯವಹಾರ ಕುಂಠಿತವಾಗಿದೆ. ಕೆಲವು ಕೃಷಿ ಉತ್ಪನ್ನಗಳ ಮಾರುಕಟ್ಟೆಗಳಲ್ಲಿ ವ್ಯವಹಾರ ಸ್ಥಗಿತಗೊಳಿಸಲಾಗಿದೆ. ಶಾಲಾ- ಕಾಲೇಜುಗಳಿಗೆ ರಜಾ ನೀಡಲಾಗಿದೆ. ಒಟ್ಟಾರೆಯಾಗಿ ಜನಜೀವನ ಸ್ತಬ್ಧಗೊಳ್ಳುತ್ತಿದೆ. ಇದಕ್ಕೆಲ್ಲಾ ಕೊರೊನಾ ವೈರಸ್ ಕುರಿತಾದ ಅತಿ ಎನ್ನುವಷ್ಟು ಭಯವೇ ಕಾರಣ. ಕೊರೊನಾ ನೆಪದಲ್ಲಿ ಜಾಗತಿಕ ಶೇರು ಮಾರುಕಟ್ಟೆಯಲ್ಲಿ ಅಲ್ಲೋಲ- ಕಲ್ಲೋಲ ಏರ್ಪಟ್ಟಿದೆ. ವ್ಯಾಪಾರ, ವ್ಯವಹಾರ, ಉದ್ದಿಮೆಗಳು ಹಿನ್ನೆಡೆ ಅನುಭವಿಸುತ್ತಿವೆ; ಜಾಗತಿಕ ಆರ್ಥಿಕ ಹಿಂಜರಿತದ ಭೀತಿ ಕಾಡ ತೊಡಗಿದೆ. ಕೇವಲ ಮೂರು- ನಾಲ್ಕು ತಿಂಗಳುಗಳಲ್ಲಿ ಇಡೀ ಜಗತ್ತಿನ ಅರ್ಥವ್ಯವಸ್ಥೆಯನ್ನು ಬುಡಮೇಲು ಮಾಡುವಷ್ಟು ಕೊರೊನಾ ವೈರಸ್ ಬಲಿಷ್ಠವಾಗಿದೆಯೇ ಎಂಬ ಪ್ರಶ್ನೆಗೆ ಇಲ್ಲವೆಂದೇ ಹೇಳಬೇಕಾಗುತ್ತದೆ. ಜಾಗತಿಕ ಅರ್ಥವ್ಯವಸ್ಥೆಯ ಇಂದಿನ ಹಿಂಜರಿತ ಹಾಗೂ ಏರುಪೇರಿಕೆ ಕೊರೊನಾಕ್ಕಿಂತ ಎಷ್ಟೋ ಪಟ್ಟು ಬಲಿಷ್ಠ ಹಾಗೂ ಅಪಾಯಕಾರಿಯಾದ ವೈರಸ್ ಕಾರಣವಾಗಿದೆ. ಈ ಅನಿಷ್ಠವನ್ನು ಕಂಡೂ ಕಾಣದಂತೆ , ಆರ್ಥಿಕ ತಜ್ಞರು ವರ್ತಿಸುತ್ತಿದ್ದಾರೆ; ರಾಜಕಾರಣಿಗಳು ತಮ್ಮ ಹಾಗೂ ತಮ್ಮ ಪಕ್ಷದ ಲಾಭಕ್ಕಾಗಿ ಈ ವೈರಸ್‍ನ್ನು ಬಳಸಲು ಪ್ರಯತ್ನಿಸುತ್ತಿದ್ದಾರೆ. ಮಾನವನ ಮಿದುಳಿಗೇ ಅಂಟಿರುವ ಇಂತಹ ಅತಿ ಅಪಾಯಕಾರಿ ವೈರಸ್‍ನ ಹೆಸರೇ ಸಂಪತ್ತು ಸಂಗ್ರಹಣಾ ಮನೋಭಾವ. ಸಂಪತ್ತನ್ನು ಗಳಿಸುವುದು ಎಲ್ಲರಿಗೂ ಅವಶ್ಯಕ. ಆದರೆ ಸಂಪತ್ತಿನ ಗಳಿಕೆ ಹಾಗೂ ಸಂಗ್ರಹಣೆಯನ್ನೇ ಜೀವನದ ಗುರಿಯಾಗಿಸಿಕೊಂಡ ಕೆಲವರು ನಡೆಸುವ ವ್ಯವಹಾರಗಳಿಂದ , ಆರ್ಥಿಕ ರೀತಿ- ನೀತಿಗಳಿಂದಾಗಿ ಇಡೀ ಸಮಾಜ ಕಷ್ಟ- ನಷ್ಟ ಅನುಭವಿಸಬೇಕಾಗುತ್ತದೆ. ಜಾಗತಿಕ ಅರ್ಥವ್ಯವಸ್ಥೆಯ ಇಂದಿನ ದುಸ್ಥಿತಿಗೆ ಇದೇ ವೈರಸ್ ಪ್ರಮುಖ ಕಾರಣವಾಗಿದೆ. ಶೇರು ಮಾರುಕಟ್ಟೆಯಲ್ಲಿ ಆಗುತ್ತಿರುವ ಏರು-ಪೇರುಗಳಿಗೆ ಕೊರೊನಾವನ್ನು ಕಾರಣವೆಂದು ಹೇಳಲಾಗುತ್ತಿದೆ. ವಾಸ್ತವ ಮಾತ್ರ ಇದಕ್ಕೆ ತೀರಾ ವ್ಯತಿರಿಕ್ತವಾಗಿದೆ. ಶೇರು ಮಾರುಕಟ್ಟೆಯೆಂದರೆ ಸರಕಾರದಿಂದ ಮಾನ್ಯತೆ ಪಡೆದ ಜೂಜುಕಟ್ಟೆ; ಸಾಮಾನ್ಯರ ಭಾಷೆಯಲ್ಲಿ ಹೇಳುವುದಾದರೆ ಇದು ಪರವಾನಿಗೆ ಪಡೆದ ಓಸಿ ಅಡ್ಡೆ. ಯಾವ ಕಂಪನಿಯ ಶೇರಿನ ಬೆಲೆ ಮುಂದಿನ ವಾರ ಹೆಚ್ಚಾದೀತು, ಯಾವುದರ ಬೆಲೆ ಇಳಿದೀತು ಮುಂತಾಗಿ ಊಹಿಸಿ, ಶೇರುಗಳ ಖರೀದಿ, ವಿಕ್ರಿ ನಡೆಯುತ್ತದೆ. ಶೇರು ಮಾರಾಟದ ಪ್ರಾರಂಭದ ಹಂತದಲ್ಲಿ ಮಾತ್ರ ಕಂಪನಿಗಳಿಗೆ ಬಂಡವಾಳ ದೊರೆಯುತ್ತದೆಯೇ ಹೊರತು, ಮುಂದಿನ ಹಂತದ ಶೇರು ಮಾರಾಟ ಅಥವಾ ಕೈ ಬದಲಾವಣೆಯಿಂದ ಆ ಕಂಪನಿಗೆ ಯಾವುದೇ ಬಂಡವಾಳ ಸಿಗುವುದಿಲ್ಲ. ಊಹಾ- ಪೋಹದ ದಂಧೆಯಲ್ಲಿ ಕೆಲವು ಶೇರುಗಳ ಬೆಲೆ ಅತಾರ್ಕಿಕ ಹೆಚ್ಚಳವನ್ನು ಅಥವಾ ಇಳಿಕೆಯನ್ನು ಕಾಣುತ್ತದೆ. ಈ ಏರಿಳಿತವನ್ನು ಉದ್ದೇಶಪೂರ್ವಕವಾಗಿ ನಿರ್ದೇಶಿಸುವ ಕಾಣದ ಕೈಗಳು ತಮ್ಮ ಲಾಭ ಗಳಿಕೆಯ ಉದ್ದೇಶವನ್ನು ಪೂರ್ತಿಗೊಳಿಸಿಕೊಳ್ಳುತ್ತಿರುತ್ತವೆ. ಆರ್ಥಿಕ ತಜ್ಞರು ಹೇಳುವಂತೆ ಶೇರು ಮಾರುಕಟ್ಟೆಯ ಊಹಾ-ಪೋಹದ ಗುಳ್ಳೆ ಅತಿಯಾಗಿ ಉಬ್ಬಿದೆ. ಯಾವುದೇ ಕ್ಷಣದಲ್ಲಿ ಈ ಗುಳ್ಳೆ ಒಡೆಯುವ ಸಾಧ್ಯತೆಯಿದೆಯೆಂದು ಎಚ್ಚರಿಕೆ ನೀಡುತ್ತಲೇ ಇದ್ದಾರೆ. ಶೇರು ಮಾರುಕಟ್ಟೆಯ ಕುಸಿತದಿಂದ ಸಂಪತ್ತಿನ ನಷ್ಟವಾಗುತ್ತಿರುವುದು ಜೂಜಾಟದಲ್ಲಿ ತೊಡಗಿಕೊಂಡವರಿಗೆ ಮಾತ್ರ. ಕಂಪನಿಗಳಿಗೆ ಆಗುತ್ತಿರುವ ನಷ್ಟವೂ ಕಾಲ್ಪನಿಕ ಮೌಲ್ಯದಲ್ಲಿಯೇ ಹೊರತು ನೈಜ ಸಂಪತ್ತಿನಲ್ಲಿ ಅಲ್ಲ. ಕೊರೊನಾ ನೆಪದಲ್ಲಿ ಶೇರು ಮಾರುಕಟ್ಟೆಯ ಗುಳ್ಳೆ ಒಡೆಯುತ್ತಿರುವುದರಿಂದ ಜನಸಾಮಾನ್ಯರಿಗೆ ಯಾವ ನಷ್ಟವೂ ಇಲ್ಲ. ನ್ಯೂಯಾರ್ಕ್‍ನಿಂದ ಮುಂಬೈ ಶೇರು ಪೇಟೆಯವರೆಗಿನ ಪ್ರಮುಖ ಕೇಂದ್ರಗಳಲ್ಲಿ ಶೇರಿನ ಮೌಲ್ಯಗಳು ಕುಸಿಯುತ್ತಿವೆ; ಆದರೆ ಕೊರೊನಾ ವೈರಸ್‍ನ ಹರಡುವಿಕೆಯ ಕೇಂದ್ರವಾದ ಚೀನಾದ ಶೇರು ಮಾರುಕಟ್ಟೆ ಮಾತ್ರ ಏರಿಕೆಯ ದಾರಿಯಲ್ಲಿದೆ. ಇದಕ್ಕೆ ಮೂಲ ಕಾರಣ ಅಮೇರಿಕಾ ಮತ್ತು ಚೀನಾ ನಡುವಿನ ವಾಣಿಜ್ಯ ಸಮರ. ಜಗತ್ತಿನ ಸಂಪನ್ಮೂಲಗಳ ಮೇಲೆ ತನ್ನ ಹತೋಟಿ ಹೊಂದುವ ಸಲುವಾಗಿ ಅಮೇರಿಕವು ಯುದ್ಧವೂ ಸೇರಿದಂತೆ ಹಲವು ವಿಧಾನಗಳನ್ನು ಬಳಸುತ್ತದೆ. ಅಮೇರಿಕಾದ ಮಾರುಕಟ್ಟೆಯ ಮೇಲಿನ ತನ್ನ ನಿಯಂತ್ರಣಗಳನ್ನು ಬಿಗಿಗೊಳಿಸಲು ಚೀನಾ ಪ್ರಯತ್ನಿಸುತ್ತಿದೆ. ಡಾಲರ್ ಮತ್ತು ಅಮೇರಿಕಾದ ಟ್ರೆಸರಿ ಬಾಂಡ್‍ಗಳಲ್ಲಿ ಹಣ ತೊಡಗಿಸಿರುವ ಜಪಾನ್‍ಗೆ ಅಮೇರಿಕಾದ ಅರ್ಥವ್ಯವಸ್ಥೆ ಬೆಳೆಯುವುದು ಅನಿವಾರ್ಯ. ಆರ್ಥಿಕ ಮುತ್ಸದ್ಧಿತನ ಹೊಂದಿಲ್ಲದ ರಾಜಕಾರಣಿಗಳನ್ನು ಹೊಂದಿರುವ ಭಾರತ ಮತ್ತು ಅಂತಹ ಕೆಲವು ದೇಶಗಳು ಅನಗತ್ಯವಾಗಿ ಅಮೇರಿಕಾದ ಪಲ್ಲಕ್ಕಿ ಹೊರುತ್ತಿವೆ. ಕಾಡುತ್ತಿರುವ ಆರ್ಥಿಕ ಹಿಂಜರಿತದಿಂದ ಪಾರಾಗಲು ಶಸ್ತ್ರಾಸ್ತ್ರಗಳ ಮಾರಾಟ ಮಾಡುವುದು ಅಮೇರಿಕಾಕ್ಕೆ ಅನಿವಾರ್ಯ. ಯಾಕೆಂದರೆ , ಶಸ್ತ್ರಾಸ್ತ್ರ ಮತ್ತು ವಿಮಾನ ತಯಾರಿಕೆಯ ಹೊರತಾಗಿ ಬೇರೆಲ್ಲಾ ವಸ್ತುಗಳ ಉತ್ಪಾದನಾ ಚಟುವಟಿಕೆ ಲಾಭದಾಯಕವಲ್ಲದ ಕಾರಣ ಅಲ್ಲಿ ಸ್ಥಗಿತಗೊಂಡಿದೆ. ಉಪ್ಪಿನಿಂದ ಉಕ್ಕು ತಯಾರಿಕಾ ಕ್ಷೇತ್ರದವರೆಗೂ ತನ್ನ ಕಂಪನಿಯೇ ಹಿಡಿತ ಹೊಂದಿರಬೇಕೆಂಬ ಉದ್ದೇಶ ಕೇವಲ ಭಾರತ ಮೂಲದ ಕಂಪನಿಗಳಿಗೆ ಮಾತ್ರ ಸೀಮಿತವಾಗಿಲ್ಲ. ಅದು ಜಗದ್ವ್ಯಾಪಿಯಾಗಿದೆ. ತನ್ನ ಸಂಪತ್ತನ್ನು ಹೆಚ್ಚಿಸಿಕೊಳ್ಳಬೇಕೆಂಬ ದಾಹಕ್ಕೆ ಬಲಿಯಾದವರಿಗೆ ಇತರರ ಕಷ್ಟ- ನಷ್ಟಗಳನ್ನು ಗಮನಿಸುವ ವ್ಯವಧಾನವೇ ಇರುವುದಿಲ್ಲ. ಆಡಳಿತ ನಡೆಸುವವರನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಚುನಾವಣಾ ನಿಧಿಯನ್ನು ನೀಡಿ, ತಮಗೆ ಬೇಕಾದಂತೆ ಕಾಯ್ದೆ ಕಾನೂನುಗಳನ್ನು ರೂಪಿಸಿಕೊಳ್ಳುತ್ತಾರೆ. ಸಂಪತ್ತು ಗಳಿಕೆಯ ವ್ಯಾಮೋಹ ಹೆಚ್ಚಿನ ಜನರಿಗೆ ಇರುತ್ತದಾದರೂ ಆ ದಾರಿಯ ಓಟದಲ್ಲಿ ಕೆಲವರು ಮಾತ್ರ ಇತರರನ್ನು ಹಿಂದಿಕ್ಕಿ ಮುಂದೆ ಬರುತ್ತಾರೆ. ಇದರ ಪರಿಣಾಮದಿಂದಾಗಿ ಜಗತ್ತಿನ ಅತಿ ಶ್ರೀಮಂತ ಶೇಕಡಾ ಒಂದರಷ್ಟು ಜನರು ಜಾಗತಿಕ ಸಂಪತ್ತಿನ ಅರ್ಧದಷ್ಟರ ಒಡೆತನ ಹೊಂದಿದ್ದಾರೆ. ಇದರ ಇನ್ನೊಂದು ಮುಖವೆಂದರೆ ಜಗತ್ತಿನ 10% ಜನರು ಸಂಪತ್ತಿನ 85% ರ ಒಡೆತನ ಹೊಂದಿದ್ದಾರೆ. ಅಂದರೆ ಜಗತ್ತಿನ 90% ಜನರ ಕೈಯಲ್ಲಿರುವುದು ಉಳಿದ 15% ಸಂಪತ್ತು ಮಾತ್ರ. ಸಂಪತ್ತಿನ ವಿತರಣೆಯಲ್ಲಿನ ಅಸಮಾನತೆಯಿಂದ ತೊಂದರೆ ಏನೆಂದು ಪ್ರಶ್ನೆ ಬರುವುದು ಸಹಜ. ವ್ಯಕ್ತಿಯ ಕೈಯಲ್ಲಿ ಸಂಗ್ರಹವಾಗುವ ಸಂಪತ್ತಿನ ಬಳಕೆಯ ರೀತಿ, ನೀತಿ ಹಾಗೂ ಉದ್ದೇಶಗಳು ಅದರ ಪ್ರಮಾಣದ ಮೇಲೆ ಅವಲಂಬಿತವಾಗುತ್ತದೆ. ಒಂದು ಸರಳ ಉದಾಹರಣೆಯಿಂದ ಈ ವಿದ್ಯಮಾನವನ್ನು ವಿವರಿಸಬಹುದು. ಒಬ್ಬ ವ್ಯಕ್ತಿಯ, ಕೈಯಲ್ಲಿರುವ ಬಂಡವಾಳವು ಸಾವಿರ ಅಥವಾ ಹತ್ತು ಸಾವಿರ ರೂಪಾಯಿಗಳಿದ್ದಾಗ, ತನ್ನ ಜೀವನ ನಿರ್ವಹಣೆಗಾಗಿ ಕಡಿಮೆ ಪ್ರತಿಫಲವಿರುವ ಉದ್ಯಮ ಅಥವಾ ವ್ಯವಹಾರವನ್ನು ಆ ವ್ಯಕ್ತಿ ಕೈಗೊಳ್ಳುತ್ತಾನೆ. ತೊಡಗಿಸಿದ ಬಂಡವಾಳದ ಮೇಲೆ 5 ಅಥವಾ 10 ಶೇಕಡಾ ಲಾಭ ಬಂದರೂ ಆತ ತೃಪ್ತಿ ಪಡುತ್ತಾನೆ. ಆದರೆ ಅದೇ ಬಂಡವಾಳದ ಪ್ರಮಾಣ ಏರುತ್ತಾ ಹೋಗಿ ಕೋಟಿಗಟ್ಟಲೇ ಆದಾಗ, ಸಣ್ಣ ಪ್ರಮಾಣದ ಲಾಭವುಳ್ಳ ವ್ಯವಹಾರದಲ್ಲಿ ಅಂತಹ ಆಸಕ್ತಿ ಇರುವುದಿಲ್ಲ. ಬದಲಿಗೆ ಅತಿ ಹೆಚ್ಚು ಲಾಭ ಬರುವ ಉದ್ಯೋಗದ ಆಯ್ಕೆಯನ್ನು ಮಾಡುತ್ತಾನೆ. ಈ ಪ್ರವೃತ್ತಿಯಿಂದಾಗಿ ಸಂಪನ್ಮೂಲಗಳನ್ನು ಲಾಭ ಗಳಿಕೆ ಹೆಚ್ಚಿರುವ ಉದ್ಧೇಶಕ್ಕೆ ಬಳಸಲಾಗುತ್ತದೆ. ಅಂದರೆ ಸಂಪನ್ಮೂಲಗಳ ದುರುಪಯೋಗವಾಗುತ್ತದೆ. ಜನರಿಗೆ ಅಗತ್ಯವಾದ ಉದ್ಧೇಶದ ಬಳಕೆ ಹಿನ್ನೆಲೆಗೆ ಸರಿಯುತ್ತದೆ. ಉದಾಹರಣೆಗಾಗಿ ಸೀಮಿತವಾಗಿರುವ ಸಿಹಿನೀರು ಕುಡಿಯಲು ಅಥವಾ ಕೃಷಿಗೆ ಬಳಕೆಯಾಗುವ ಬದಲಿಗೆ ತಂಪು ಪಾನೀಯ ಅಥವಾ ಹೆಂಡದ ಉತ್ಪಾದನೆಗೆ ಬಳಸಲ್ಪಡುತ್ತದೆ. ಉತ್ಪಾದಿತ ವಸ್ತುವಿಗೆ ಬೇಡಿಕೆ ಸೃಷ್ಟಿಸುವ ಸಲುವಾಗಿ ಅಪಾಯಕಾರಿ ವಿಧಾನಗಳನ್ನು ಹುಟ್ಟು ಹಾಕಲಾಗುತ್ತದೆ. ಸಾಮಾನ್ಯವಾಗಿ ಊಹಾ- ಪೋಹದ ದಂದೆಯಲ್ಲಿಯೇ ಅತಿ ಹೆಚ್ಚು ಲಾಭ ಗಳಿಕೆಯಾಗುತ್ತದೆ. ಅದರಿಂದಾಗಿ ಕೂಡಿಟ್ಟ ಸಂಪತ್ತನ್ನು ಶೇರು ಮಾರುಕಟ್ಟೆಯಲ್ಲಿ ಅಥವಾ ಅಕ್ರಮ ದಾಸ್ತಾನು ದಂಧೆಯಲ್ಲಿ ತೊಡಗಿಸುತ್ತಾರೆ. ಇಂತಹ ಅವಕಾಶಗಳು ದೊರೆಯದಿದ್ದಾಗ ಸಂಪತ್ತನ್ನು ಬಳಸದೇ ಹಾಗೆಯೇ ಕೂಡಿಡಲಾಗುತ್ತದೆ. ಕೆಲವೇ ವ್ಯಕ್ತಿಗಳ ಕೈಯಲ್ಲಿ ಸಂಪತ್ತು ಕ್ರೋಢೀಕೃತಗೊಂಡಾಗ ಹಲವರ ಕೈಯಲ್ಲಿ ಹಣ ಚಲಾವಣೆಯಾಗುವದಕ್ಕೆ ತಡೆ ಉಂಟಾಗುತ್ತದೆ ಮತ್ತು ಅವರ ಖರೀದಿ ಶಕ್ತಿ ಕುಂಠಿತವಾಗುತ್ತದೆ. ಹೊಸದಾಗಿ ಸೃಷ್ಟಿಯಾಗುವ ಸಂಪತ್ತು ಉಳ್ಳವರ ಕೈಗೇ ಪುನಃ ಸೇರುತ್ತದೆ ಹಾಗೂ ವ್ಯಕ್ತಿಗತ ಆದಾಯದಲ್ಲಿ ಕೂಡಾ ಅಸಮಾನತೆ ಉಂಟಾಗುತ್ತದೆ. ದೊಡ್ಡ ಕಂಪನಿಗಳು ಎಲ್ಲಾ ಕ್ಷೇತ್ರಗಳಲ್ಲಿ ಕೈಯಾಡಿಸುವುದರಿಂದಾಗಿ, ಸಣ್ಣ ಪುಟ್ಟ ಉದ್ಯಮಗಳು ಸ್ಪರ್ಧಿಸಲಾಗದೇ ಸೋಲುತ್ತವೆ. ಪ್ರತಿ ಸ್ಪರ್ಧಿಗಳನ್ನು ಮಣಿಸುವುದಕ್ಕಾಗಿ ಬೆಲೆ ಇಳಿಕೆಯ ಸಮರವನ್ನೇ ಸಾರುವ ಉಳ್ಳವರು, ಎದುರಾಳಿ ಸೋತ ನಂತರ ಬೆಲೆ ಏರಿಸಿ ಲಾಭ ದೋಚುತ್ತಾರೆ. ಭಾರತದ ಮೊಬೈಲ್ ಕ್ಷೇತ್ರದಲ್ಲಿ ಇತ್ತೀಚೆಗೆ ನಡೆದ ಘಟನೆಗಳು ಇದಕ್ಕೆ ತಾಜಾ ಸಾಕ್ಷಿ. ಸಂಪತ್ತು ಸೃಷ್ಟಿಸುವವರು ಹಾಗೂ ಉಳ್ಳವರು ತೆರಿಗೆ ಪಾವತಿಸಿ ದೇಶದ ಅಭಿವೃದ್ಧಿಗೆ ಕೊಡುಗೆ ನೀಡುತ್ತಾರೆಂದು ಹೇಳುವುದು ಬರೀ ಮಿಥ್ಯೆ. ಅಂತಹ ಉದ್ಯಮ ದೈತ್ಯರು ಪಡೆಯುವ ತೆರಿಗೆ ವಿನಾಯಿತಿಗಳು ಹಾಗೂ ಸರ್ಕಾರ ನೀಡುವ ಮೂಲ ಸೌಕರ್ಯಗಳು ಅವರು ನೀಡುವ ತೆರಿಗೆಯ ಎಷ್ಟೋ ಪಟ್ಟು ಹೆಚ್ಚಿಗೆ ಇರುತ್ತದೆ. ದೇಶದ ಸಂಪತ್ತು ಸೀಮಿತ ವ್ಯಕ್ತಿಗಳ ಕೈಯಲ್ಲಿ ಶೇಖರವಾಗುವುದರ ಪರಿಣಾಮ ಬ್ಯಾಂಕಿಂಗ್ ಕ್ಷೇತ್ರದ ಮೇಲೆ ಆಗುತ್ತಿರುವುದನ್ನು ನಮ್ಮ ದೇಶದಲ್ಲಿ ಕಾಣುತ್ತಿದ್ದೇವೆ. ಸಂಪತ್ತು ಸೃಷ್ಟಿಸುವವರು ಹಾಗೂ ಹೂಡಿಕೆದಾರರೇ ದೇಶೋದ್ಧಾರಕರು ಎಂಬ ಭ್ರಮೆಯಿಂದಾಗಿ ಬ್ಯಾಂಕ್‍ಗಳು ಅವರಿಗೆ ಮಿತಿಮೀರಿ ಸಾಲ ನೀಡುತ್ತವೆ. ಹೊಟ್ಟೆ,ಬಟ್ಟೆ ಕಟ್ಟಿ ಜನಸಾಮಾನ್ಯರು ಉಳಿಸಿದ ಹಣವನ್ನು ಸಾಲ ರೂಪದಲ್ಲಿ ಪಡೆದು ಶ್ರೀಮಂತ ಉದ್ಯಮಿಗಳು ತಮ್ಮ ವೈಯಕ್ತಿಕ ಸಂಪತ್ತನ್ನು ಹೆಚ್ಚಿಸಿಕೊಳ್ಳುತ್ತಾರೆ. ಅವರು ಪಡೆದ ಸಾಲಗಳು ರೈಟ್ ಆಪ್ ಹೆಸರಿನಲ್ಲಿ ಮನ್ನಾ ಆಗುತ್ತವೆ. ಅಂತಹ ಬ್ಯಾಂಕ್‍ಗಳ ರಕ್ಷಣೆಗೆ ಜನರಿಂದ ಸಂಗ್ರಹಿಸಿದ ತೆರಿಗೆ ಹಣವನ್ನು ಅಥವಾ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ಗಳಿಸಿದ ಲಾಭವನ್ನು ಬಳಸಲಾಗುತ್ತದೆ ಯಸ್ ಬ್ಯಾಂಕ್ ಹಗರಣ ಇತ್ತೀಚಿನ ಉದಾಹರಣೆ. ಬೇರೆ ಬ್ಯಾಂಕ್‍ಗಳಲ್ಲಿ ಸುಸ್ತಿದಾರರಾಗಿ ಪಡೆದ ಸಾಲವನ್ನು ಹಿಂದಿರುಗಿಸಿರದ ಹತ್ತು ಕಂಪನಿಗಳಿಗೆ ನೀಡಿದ ಮೂವತ್ತಾರು ಸಾವಿರ ಕೋಟಿ ರೂಪಾಯಿ ಸಾಲ ವಸೂಲಿಯಾಗದೇ ಯಸ್ ಬ್ಯಾಂಕ್ ಅಪಾಯಕ್ಕೆ ಸಿಲುಕಿದ್ದರಿಂದ , ಅದರ ರಕ್ಷಣೆಗಾಗಿ ಸರ್ಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್‍ನ್ನು ಮುಂದೆ ಮಾಡಿರುವುದನ್ನು ಕಾಣುತ್ತಿದ್ದೇನೆ. ಬ್ಯಾಂಕ್‍ನಿಂದ ಚಿಕ್ಕ ಮೊತ್ತದ ಸಾಲ ಪಡೆಯಲು ಸಾಮಾನ್ಯ ವ್ಯಕ್ತಿ ನೀಡಬೇಕಾದ ಭದ್ರತೆಯನ್ನು ಸಾವಿರಾರು ಕೋಟಿ ರೂಪಾಯಿ ಸಾಲ ಪಡೆಯುವ ವ್ಯಕ್ತಿ ನೀಡಬೇಕಾಗಿಲ್ಲ; ಅವನಿಂದ ಪಡೆಯುವುದೂ ಇಲ್ಲ. ಸಾವಿರ ರೂಪಾಯಿಗಳಲ್ಲಿ ಸಾಲ ಪಡೆಯುವಾಗ ಇತರ ಬ್ಯಾಂಕ್‍ಗಳಿಂದ ಬೇಬಾಕಿ ಪತ್ರ ತರುವುದು ಕಡ್ಡಾಯ. ಆದರೆ ಸಾವಿರಾರು ಕೋಟಿ ರೂಪಾಯಿ ಸಾಲಕ್ಕೆ ಇದು ಅನ್ವಯಿಸುವುದಿಲ್ಲ. ಯಸ್ ಬ್ಯಾಂಕ್‍ನ ಪ್ರಮುಖ ಸುಸ್ತಿದಾರ ಸಾಲಗಾರರಾದ ಅಂಬಾನಿ, ಐಎಲ್‍ಎಫ್‍ಎಸ್ ಮುಂತಾದವರು ಇತÀರ ಬ್ಯಾಂಕ್‍ಗಳಲ್ಲಿ ಈಗಾಗಲೇ ಸುಸ್ತಿದಾರರಾಗಿದ್ದುದು ಬಹಿರಂಗವಾಗಿದ್ದರೂ ಅವರಿಗೆ ಹೊಸ ಸಾಲ ಸಿಗುತ್ತದೆ. ಸಂಪತ್ತಿನ ಕೇಂದ್ರೀಕರಣವನ್ನು ತಡೆಯುವ ಪ್ರಾಮಾಣಿಕ ಪ್ರಯತ್ನವನ್ನು ಜಗತ್ತಿನ ಹಲವು ರಾಷ್ಟ್ರಗಳು ಕೈಗೊಳ್ಳಲಿಲ್ಲ. ಭಾರತದ ಅತಿ ಶ್ರೀಮಂತರಾದ 1% ಜನರು ಅಂದರೆ ಸುಮಾರು ಒಂದು ಕೋಟಿ ಮೂವತ್ತು ಲಕ್ಷ ಜನರ ಕೈಯಲ್ಲಿ 70% ಜನರ ಅಂದರೆ 90 ಕೋಟಿ ಜನರ ಕೈಯಲ್ಲಿರುವ ಸಂಪತ್ತಿನ ನಾಲ್ಕು ಪಟ್ಟು ಸಂಪತ್ತು ಶೇಖರವಾಗಿದೆ. ಈ ಪ್ರಮಾಣ ಏರುತ್ತಲೇ ಇದೆ. ಭಾರತದ ಮುಕ್ಕಾಲು ಪಾಲು ಸಂಪತ್ತು ಕೇವಲ ಹದಿಮೂರು ಕೋಟಿ ಜನರ ಕೈಯಲ್ಲಿಯೇ ಇದೆ. ಅತಿ ಶ್ರೀಮಂತ 63 ಭಾರತೀಯರ ಸಂಪತ್ತು ಸುಮಾರು 80 ಕೋಟಿ ಜನರ ಸಂಪತ್ತಿಗೆ ಸಮವಾಗಿದೆ. ಜಗತ್ತಿನ 26 ಅತಿ ಶ್ರೀಮಂತರ ಸಂಪತ್ತು ಜಗತ್ತಿನ ಅರ್ಧದಷ್ಟು ಜನರ ಅಂದರೆ ಸುಮಾರು 380 ಕೋಟಿ ಜನರ ಸಂಪತ್ತಿಗೆ ಸಮವಾಗಿದೆ. ಸಂಪತ್ತು ವಿತರಣೆಯ ಪ್ರಮಾಣ ಈಗಾಗಲೇ ಅಪಾಯಕಾರಿ ಹಂತ ತಲ್ಪಿದ್ದು,, ಅದರ ಪರಿಣಾಮದಿಂದಾಗಿ ಆರ್ಥಿಕ ಹಿಂಜರಿತ, ಸಾಮಾಜಿಕ ಸಂಘರ್ಷ, ಅಶಾಂತಿ ಕಟ್ಟಿಟ್ಟ ಬುತ್ತಿ ಎಂಬುದು ಅರ್ಥಶಾಸ್ತ್ರಜ್ಞರ ಅಭಿಮತ. ಸಂಪತ್ತು ಗಳಿಕೆಯ ವ್ಯಾಮೋಹ ಇಡೀ ಸಮಾಜವನ್ನು ಸಾಂಸರ್ಗಿಕ ರೋಗದ ರೀತಿಯಲ್ಲಿ ಆವರಿಸುತ್ತಿದೆ. ಈ

ಪ್ರಸ್ತುತ Read Post »

ಕಾವ್ಯಯಾನ

ಕಾವ್ಯಯಾನ

ದಕ್ಕಿತೆಷ್ಟು ಪ್ರೀತಿ ವಿನುತಾ ಹಂಚಿನಮನಿ (ವೆಲೆಂಟಾಯಿನ್ ಡೇ’ದ ಸಂಭ್ರಮ ಮುಗಿದಾಯ್ತು ಅದರ ಉತ್ತರಾರ್ಧ ಹೀಗೂ ಇರಬಹುದೇ …….) ಲಕ್ಷ್ಮಣ ರೇಖೆ ದಾಟಿದ ಒಂದು ತಪ್ಪಿಗೆ ದಕ್ಷಿಣೆ ತೆರಬೇಕಾಯ್ತು ನೂರೊಂದು ತೆಪ್ಪಗೆ ರಕ್ಷಣೆ ಇಲ್ಲದಾಯ್ತು ಕಾಡಿನಲಿ ತಾಯ್ತನಕೆ ದಕ್ಷ ಸಹನೆ ತ್ಯಾಗದ ಮೂರುತಿ ಸೀತೆಗೆ ಅಕ್ಷಯವಾದ ವನವಾಸ ಪತಿಯ ದೇಣಿಗೆ ಶ್ರೇಷ್ಠ ರಾಧೆಯ ಪ್ರೀತಿಗೆ ಹಂಬಲಿಸಿದವ ಅಷ್ಟ ಮಹಿಷಿಯರಿಗೆ ವಲ್ಲಭನಾದ ಗೋಕುಲದ ಕೃಷ್ಣ ಗೋಪಿಲೋಲನೀತ ದ್ವಾರಕಾಧೀಶನಾಗಿ ಬಾಲ್ಯದ ಗೆಳತಿಯ ಮರೆತ ಪದ್ಮಪತ್ರದ ಜಲಬಿಂದುವಾಗಿ ರಾಧೆಗೆ ದೊರೆತ ಐವರು ಶೂರ ಪತಿಗಳ ಧರ್ಮದ ಹಠಕೆ ದ್ರೌಪದಿಯ ಎದೆಯಾಯ್ತು ಪಗಡೆಯ ಪಠ ಅವಮಾನ ವನವಾಸಗಳೇ ಕೊಡುಗೆ ಸೂರ್ಯ ಚಂದ್ರರೆ ಸಾಕ್ಷಿ ಶೋಷಣೆಗೆ ಅಗ್ನಿಪುತ್ರಿಯ ಜೀವ ಉರಿದ ಬವಣೆಗೆ ಸಲೀಮನ ಪ್ರೇಮದ ಪುತ್ಥಳಿ ಅನಾರ್ಕಲಿ ಅಕಬರನ ಅಂತಸ್ತಿಗಾದಳು ನರಬಲಿ ಜೀವಂತ ಹುಗಿಸಿದ ಅವಳ ಮಹಾಬಲಿ ಜಹಾಂಗೀರನಿಗೆ ಚಕ್ರವರ್ತಿಯ ಪಟ್ಟ ಪ್ರೀತಿಯ ಸಮಾಧಿಯ ಮೇಲೆ ಕಟ್ಟಿ ಶಹಾಜಾನನ ಪ್ರೇಮದಫಲದ ಸೊತ್ತು ಹದಿಮೂರು ಬಾರಿ ಗರ್ಭ ಹೊತ್ತು ಕೊನೆಗೆ ಮಣ್ಣಾದಳು ಹೆತ್ತು ಹೆತ್ತು ತಾಜಮಹಲ ಅವನ ಪ್ರೀತಿಯ ಕುರುಹು ಮುಮ್ತಾಜಳ ಬಲಿದಾನದ ಗುರುತು ಆದಿಲಶಾಹಿಯ ಪಿಸುಮಾತಿನ ಬಲೆಗೆ ಮೊದಲು ಮರುಳಾದ ರಂಭ ಒಲಿದು ಜೀವತೆತ್ತು ಮಲಗಿದಳು ಗೋಲಗುಮ್ಮಜದಿ ಕಾದಿಹಳು ಶತಶತಮಾನ ಗುಮ್ಮಟದಿ ಬಾದಶಹನ ಪ್ರೇಮ ನಿವೇದನೆಗೆ ಒಲವಿನ ನಾಟಕದ ಅಂಕದ ಪರದೆ ಜಾರಿ ನಲುಗಿತು ನಾರಿಯ ಸಮ್ಮಾನ ಬಾರಿಬಾರಿ ತಿಳಿಯದಾದೆಯಾ ನೀ ಜಗದ ನೀತಿ ನಿನ್ನ ಪ್ರೇಮ ತ್ಯಾಗಗಳ ಅಳೆದ ರೀತಿ ನಿನಗೆ ಇದರಲಿ ದಕ್ಕಿತೆಷ್ಟು ಪ್ರೀತಿ? *******

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ರಾತ್ರಿ ಮೆರವಣಿಗೆ ಪ್ಯಾರಿಸುತ ಹಗಲು ಸರಿದು ಇರುಳು ಕವಿದು ಕಣ್ಣು ಕನಸುಬೇಡಿದೆ ಹೃದಯ ಕಥೆ ಕೇಳಲು ತಣಿವರೆಸಿದೆ ಬೆಚ್ಚಗೆ ಹೊದಿಕೆ ಮೈಗೆ ಮುಡಿಯಲಿನ್ನು ರಾತ್ರಿ ಜೊತೆ ಮೆರವಣಿಗೆ…. ಚುಕ್ಕಿ ಚಂದ್ರನನ್ನು ಓಲೈಸುವಂತೆ ಚಂದ್ರಕಾಂತಿ ಸೂರ್ಯಪ್ರಭೆಯನ್ನು ನಂಬಿರುವಂತೆ ನಾನು ನಿನ್ನನ್ನು ಮಾತ್ರ ನಂಬಿದ್ದೇನೆ ಇಲ್ಲಿ ನನ್ನ ನಿನ್ನ ನಂಬಿಕೆ ಮುಖ್ಯವಲ್ಲ ಪ್ರೀತಿ ಜೀವಂತಿಕೆ ಅಷ್ಟೇ ಮುಖ್ಯವಾಗುವದು…! ಬಿಕೋ ಅನ್ನುತ್ತಿರುವ ರೋಡಿನಲ್ಲಿ ಬೀದಿದೀಪಗಳ ಅಲಂಕಾರ ದಟ್ಟ ವಾಹನಗಳ ವಾದ್ಯಮೇಳ ಅಕ್ಷತೆ ಹಾಕುವಂತೆ ರಪ ರಪ ಮಳೆಯ ಹನಿ ದೀಪದೂಳುಗಳ ಗುಯ್ಯಗುಟ್ಟುವ ಮಂತ್ರಘೋಷ ಅಪ್ಪಟ ಮದುವೆ ಮನೆಯಂತೆ ನೋಟಕ್ಕೆ ಸಿಗುವ ಈ ರಾತ್ರಿ ಅಧ್ಭುತ ಸೃಷ್ಟಿಸಿದೆ…! ಹೀಗೆ ಬಂದು ಹಾಗೆ ಹೋಗುವ ಕನಸುಗಳ ಮೇಲೆ ಅದೇನು ಕವಿತೆ ಬರೆಯಲಿ ಅದೇನೇ ಬರೆದರೂ ಅವಳ ಹಾಜರಾತಿ ಇರುವದು ಅಲ್ಲೊಮ್ಮೆ ಇಲ್ಲೊಮ್ಮೆ ಬರುವ ಸುಳಿವು ಕೊಡುವನೀನು , ಅದೆಂತಹ ಮಾಯಗಾತಿ…! ನನ್ನೆಲ್ಲ ರಾತ್ರಿಯನು ಧಾರೆಯರೆದರೂ ಇನ್ನೂ ಮೀನಾಮೇಷ ಮಾಡುತ್ತಿರುವೆ ******

ಕಾವ್ಯಯಾನ Read Post »

ಇತರೆ

ಜ್ಞಾನಪೀಠ ವಿಜೇತರು

ವಿ.ಕೃ. ಗೋಕಾಕ್ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ವಿ.ಕೃ. ಗೋಕಾಕ್..! ಕನ್ನಡದಲ್ಲಿ ನವ್ಯಕಾವ್ಯ ಪ್ರವರ್ತಕರಾಗಿ ‘ವಿನಾಯಕ’ ಕಾವ್ಯನಾಮದಿಂದ ಕೃತಿಗಳ ರಚನೆ ಮಾಡಿರುವ ವಿನಾಯಕ ಕೃಷ್ಣ ಗೋಕಾಕರು ಕೃಷ್ಣರಾಯ-ಸುಂದರಮ್ಮ ದಂಪತಿಗಳಿಗೆ ೯-೮-೧೯0೯ರಲ್ಲಿ ಜನಿಸಿದರು. ಸವಣೂರಿನಲ್ಲಿ ಶಾಲಾ ವಿದ್ಯಾಭ್ಯಾಸ ಮುಗಿಸಿ ಧಾರವಾಡದಲ್ಲಿ ಕರ್ನಾಟಕ ಕಾಲೇಜಿನಲ್ಲಿ ಬಿ.ಎ. ಪದವಿ ಪಡೆದು. ೧೯೩೧ರಲ್ಲಿ ಪುಣೆಯ ಫಗ್ರ್ಯುಸನ್ ಕಾಲೇಜಿನಲ್ಲಿ ಅನಂತರ ಆಕ್ಸಫರ್ಡ್ ವಿಶ್ವವಿದ್ಯಾನಿಲಯದಲ್ಲಿ ಎಂ.ಎ. ಪದವಿ ಗಳಿಸಿದರು… ಉನ್ನತ ಶಿಕ್ಷಣ ಪಡೆದು ವಿದೇಶದಿಂದ ಬಂದ ಮೇಲೆ ಸಾಂಗ್ಲಿಯ ವಿಲ್ಲಿಂಗ್‍ಟನ್ ಕಾಲೇಜಿನಲ್ಲಿ, ಅನಂತರ ಕೊಲ್ಲಾಪುರದ ರಾಜಾರಾಮ್ ಕಾಲೇಜಿನಲ್ಲಿ, ಧಾರವಾಡದ ಕರ್ಣಾಟಕ ಕಾಲೇಜಿನಲ್ಲಿ (೧೯೫೨) ಪ್ರಿನ್ಸಿಪಾಲರಾಗಿ ಕಾರ್ಯನಿರ್ವಹಿಸಿದರು… ೧೯೬೬ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿಗಳಾದರು. ೧೯೭0ರಲ್ಲಿ ಸಿಮ್ಲಾದ ಇನ್ಸ್ಟಿಟ್ಯೂಟ್ ಆಫ್ ಸ್ಟಡೀಸ್ ನಿರ್ದೇಶಕರಾದರು… ಆಂಧ್ರದ ಪುಟ್ಟಪರ್ತಿಯ ಸತ್ಯಸಾಯಿ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಗೋಕಾಕರು, ಪಿ. ಇ. ಎನ್. ಅಧಿವೇಶನಕ್ಕೆ ೧೯೫೭ರಲ್ಲಿ ಜಪಾನಿಗೆ ತೆರಳಿದರು. ಬೆಲ್ಜಿಯಂನಲ್ಲಿ ಕವಿ ಸಮ್ಮೇಳನದಲ್ಲಿ ಭಾಗವಹಿಸಿದರು, ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದರು… ಗೋಕಾಕರಿಗೆ ಹಲವಾರು ಪ್ರಶಸ್ತಿ ಗೌರವಗಳು ಸಂದಿವೆ. ಭಾರತ ಸರ್ಕಾರದ ಪದ್ಮಭೂಷಣ ಪ್ರಶಸ್ತಿ (೧೯೫೮), ಅಮೆರಿಕಾದ ಫೆಸಿಫಿಕ್ ವಿಶ್ವವಿದ್ಯಾಲಯ, ಕರ್ನಾಟಕ, ಮೈಸೂರು, ಬೆಂಗಳೂರು ವಿಶ್ವವಿದ್ಯಾಲಯಗಳು ಗೌರವ ಡಾಕ್ಟರೇಟ್ ಗಳನ್ನು ನೀಡಿವೆ… ಕನ್ನಡ ಸಾಹಿತ್ಯ ಪರಿಷತ್ತು ೧೯೫೮ರಲ್ಲಿ ಬಳ್ಳಾರಿಯಲ್ಲಿ ನಡೆದ ೪೦ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪದವಿಗೆ ಆಯ್ಕೆ ಮಾಡಿ ಗೌರವಿಸಿದೆ. ದ್ಯಾವಾ ಪೃಥಿವಿ ಖಂಡಕಾವ್ಯಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಿಕ್ಕಿದೆ ವಿ.ಕೆ.ಗೋಕಾಕರಿಗೆ… ತಮ್ಮ ‘ಭಾರತ ಸಿಂಧುರಶ್ಮಿ’ ಮಹಾಕಾವ್ಯಕ್ಕೆ ಜ್ಞಾನಪೀಠ ಪ್ರಶಸ್ತಿ ಪಡೆದಿರುವ ಗೋಕಾಕರು ಕನ್ನಡಕ್ಕೆ ಉತ್ತಮ ಕೃತಿಗಳನ್ನು ನೀಡಿದ್ದಾರೆ. ಸಮರಸವೇ ಜೀವನ (ಇಜ್ಜೋಡು) ಬೃಹತ್ ಕಾದಂಬರಿ ಇವರಿಗೆ ಹೆಸರನ್ನು ತಂದುಕೊಟ್ಟಿದೆ. ಇವರು ಭಾಷಾ ಆಯೋಗದ ಅಧ್ಯಕ್ಷರಾಗಿ ಸಲ್ಲಿಸಿದ ಗೋಕಾಕ ವರದಿ ಇತಿಹಾಸವನ್ನೇ ಸೃಷ್ಟಿಸಿತು… ನವ್ಯತೆ ಹಾಗೂ ಕಾವ್ಯ ಜೀವನ, ವಿಶ್ವಮಾನವ ದೃಷ್ಟಿ, ಸೌಂದರ್ಯ ಮೀಮಾಂಸೆ, ಆಂಗ್ಲ ಸಾಹಿತ್ಯಕ್ಕೆ ನೀಡಿದ ಸ್ಫೂರ್ತಿ ಇತ್ಯಾದಿ ವಿಮರ್ಶಾ ಗ್ರಂಥಗಳು, ಜನನಾಯಕ, ವಿಮರ್ಶಕ ವೈದ್ಯ, ಯುಗಾಂತರ, ಮುಂತಾದ ನಾಟಕಗಳು ಇವರಿಂದ ರಚಿತವಾಗಿವೆ. ಇಂಗ್ಲಿಷಿನಲ್ಲಿಯೂ ಹಲವಾರು ಕೃತಿಗಳನ್ನು ರಚಿಸಿದ್ದಾರೆ… ಅರವಿಂದ ಭಕ್ತರು, ಬೇಂದ್ರೆ ಆರಾಧಕರೂ ಆಗಿದ್ದ ಗೋಕಾಕರು ೨೮-೪-೧೯೯೨ರಲ್ಲಿ ಮುಂಬಯಿಯಲ್ಲಿ ನಿಧನರಾದರು..! ******* — ಕೆ.ಶಿವು.ಲಕ್ಕಣ್ಣವರ

ಜ್ಞಾನಪೀಠ ವಿಜೇತರು Read Post »

ಕಾವ್ಯಯಾನ

ಕಾವ್ಯಯಾನ

ಘನಿತ ಡಾ.ಗೋವಿಂದ ಹೆಗಡೆ ಘನಿತ ಇಬ್ಬನಿಯಲ್ಲಿ ತೊಯ್ದ ಪುಲಕದಲ್ಲಿ ಹೂವು ಇನ್ನೇನು ಆರಿಹೋಗುವ ಆತಂಕದಲ್ಲಿ ಇಬ್ಬನಿ ಬಿಂದು ನೋಡುತ್ತ ನಿಂತ ನಾನು-ನೀನು ಇನ್ನೇನು ಇದೇ ಇಬ್ಬನಿ ನಿನ್ನ ಕಂಗಳ ತೋಯಿಸುತ್ತದೆ ನಿನ್ನ ಮಡಿಲಿಗೆ ನನ್ನ ತಲೆಗೆ ಅವಿನಾ ಸಂಬಂಧ ಅದಕ್ಕೆ ಗೊತ್ತೇ ಈಗ ನೀನು ಸೆಳೆಯುವೆ ಮಡಿಲಿಗೆ ತಬ್ಬಿ ಮುದ್ದಿಸುವೆ ಅದುರುವ ತುಟಿಗಳಲ್ಲಿ “ನಾನಿದೀನಿ ಕಣೋ” ಹೇಳುವ ಹೇಳದಿರುವ ಸಂಭವದಲ್ಲಿ ತಾರೆಗಳು ಕಂಪಿಸಿವೆ ಅಲೆಗಳು ಮರ್ಮರ ನಿಲ್ಲಿಸಿವೆ ಎಷ್ಟೊಂದು ದೇಶಕಾಲಗಳು ಈ ಒಂದು ಕ್ಷಣಕ್ಕಾಗಿ ಮಿಡಿದಿವೆ ತುದಿಗಾಲಲ್ಲಿ, ಮೊರೆದಿವೆ ಇದೇ ಒಂದು ಚಣ ಅದೇ ಇಬ್ಬನಿಯ ಒಂದೇ ಒಂದು ಬಿಂದು ಜಾರಿ ಹನಿಯಲು ನಿನ್ನ ರೆಪ್ಪೆಯ ಅಂಚಿನಿಂದ ನನ್ನ ಎದೆಗೆ ಘನೀಭವಿಸುತ್ತದೆ ಆಗ ಕಾಲದ ಈ ಬಿಂದು ಅನಂತಕ್ಕೆ ಸಲ್ಲುವ ಚಿತ್ರವಾಗಿ ಹಾಗಲ್ಲದೆ ಮುಕ್ತಿಯೆಲ್ಲಿ ಹೂವಿಗೆ ಇಬ್ಬನಿಗೆ ನನಗೆ-ನಿನಗೆ. ********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ವಸಂತನಾಗಮನ ವಿಜಯ ನಿರ್ಮಲ ವಸಂತನಾಗಮನ ವನರಾಣಿ ನವಕನ್ಯೆಯಾಗಿಹಳು ಹರೆಯದಿ ಮೈದುಂಬಿ ನಗುತಿಹಳು ಭೂದೇವಿ ಸಂಭ್ರಮದಿ ನಲಿದಿಹಳು ವನಬನಗಳೆಲ್ಲ ಹೊಸ ಚಿಗುರು ತುಂಬಿ ಗಿಡಮರಗಳೆಲ್ಲ ಬಣ್ಣ ಬಣ್ಣದ ಹೂ ಗುಚ್ಛದಲಿ ತುಂಬಿ ತುಳುಕುತಿವೆ ಮಾವು ಬೇವು ಜೊತೆಯಾಗಿ ತೋರಣ ಕಟ್ಟಿ ವನವನೆಲ್ಲ ಸಿಂಗರಿಸುತಿದೆ ಮಾಮರದಂದಕೆ ಮನಸೋತ ಕೋಗಿಲೆ ಮಧುರವಾಗಿ ಕುಹೂ ಕುಹೂ ಎನುತಿದೆ ಕಾನನವೆಲ್ಲ ಹಚ್ಚ ಹಸುರಾಗಿ ಸೌಂದರ್ಯ ತುಂಬಿಕೊಂಡು ಹೊಸ ಗಾನಕೆ ತಲೆದೂಗಿವೆ ಹಕ್ಕಿ ಪಕ್ಷಿಗಳು ಇಂಪಾದ ದನಿಯಲಿ ಕೂಗಾಡುತ ತಮ್ಮ ಗೂಡುಗಳಲಿ ಸಂತಸದಿ ಮೆರೆಯುತ ಹಬ್ಬಕೆ ಸಜ್ಜಾಗುತಿವೆ ತಮ್ಮದೇ ಶೈಲಿಯಲಿ ಶಿಶಿರದಲಿ ಸೋತು ಹಣ್ಣೆಲೆಗಳೆಲ್ಲ ಉದುರಿ ಮರಗಳೆಲ್ಲ ಬೋಳಾಗಿ ತುಂತುರು ಹನಿಗಳ ಸಿಂಚನದಲಿ ಮತ್ತೆ ಹೊಸ ಹಸಿರು ಚಿಗುರಲು ಬಂದ ನೋಡಿ ಋತುಗಳ ರಾಜ ವಸಂತ ಹೊತ್ತು ತಂದ ಮತ್ತೆ ಚೈತ್ರ ವನು ಧರೆಗೆಲ್ಲ ನೀಡಿ ಚೈತನ್ಯವನು ವನ ಬನವೆಲ್ಲ ಚಿಗುರಿ ಸಿಂಗಾರದಲಿ ಸೆಳೆಯುತಿದೆ ನೋಡಲಿ ಪ್ರಕೃತಿಯ ಮಡಿಲು ಪ್ರತಿ ಜೀವದಲ್ಲೂ ಆರಾಧನೆ ತುಂಬುತ ರಸಿಕ ಮನಗಳಲಿ ಹೊಸ ಬಯಕೆಗಳ ಸ್ಪುರಿಸುತಿದೆ ನೋಡಲ್ಲಿ ಸೃಷ್ಟಿ ಪಾಲಕನ ಆಗಮನವೇ ವಸಂತ ನಳನಳಿಸುತಿದೆ ವನವೆಲ್ಲ ತುಂಬಿ ಹೂಗಳಿಂದ ಮಲ್ಲಿಗೆ ಸಂಪಿಗೆ ಹೂಗಳರಲಿ ಚೆಲ್ಲಿದೆ ಕಂಪನು ಹರಡುತಿದೆ ವನದ ತುಂಬೆಲ್ಲ ಜನಮನದಲಿ ತುಂಬುತ ಹೊಸ ನವೋಲ್ಲಾಸವನು ಆಸ್ವಾದಿಸುತ್ತಾ ತೊಡಗಲು ಪ್ರೇರೇಪಿಸುವಂತಿದೆ ಪ್ರೇಮೋಲ್ಲಾಸದಲಿ ಪ್ರೇಮಿಗಳನು ಮೂಡುತಿದೆ ಹೊಸ ಚಿಗುರಿನಂದದಿ ಕವಿ ಮನದಲಿ ಹೊಸ ಬಗೆಯ ನವ ಕಾವ್ಯದ ಸೃಷ್ಟಿಗೆ ಹಾಕಿ ಮುನ್ನುಡಿಯನು ವರ್ಣಿಸಿ ಪದಗಳಲಿ ವಸಂತನಾಗಮನವನು ***********

ಕಾವ್ಯಯಾನ Read Post »

You cannot copy content of this page

Scroll to Top