ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ಜಾನಪದ

ಗರ್ದಿ ಗಮ್ಮತ್ತು ಅಳಿದು ಹೋದ ಜಾನಪದ ಕಲೆ ನಮ್ಮ ಎಳೆಯ ಕಾಲದ ‘ಗರ್ದಿ ಗಮ್ಮತ್ತು’..! ವಿಧಾನಸೌಧ ನೋಡ… ಹೇಮಾ ಮಾಲಿನಿ ನೋಡ… ದುರ್ಗಪ್ಪನ; ‘ಗರ್ದಿ ಗಮ್ಮತ್ತು’ ನೋಡ..!! 1970 ಮತ್ತು 1980ರ ಆಸುಪಾಸಿನಲ್ಲಿ ಮನರಂಜನೆ ಎಂಬುದೇ ವಿರಳವಾಗಿತ್ತು. ಆಗ ಸಿನೆಮಾಗಳು ಹಾಗೂ ವರ್ಷಕ್ಕೊಮ್ಮೆ ಜರುಗುವ ಜಾತ್ರೆ, ಹಬ್ಬಹರಿದಿನಗಳು ಇವುಗಳೇ ಮನರಂಜನೆಯಾಗಿದ್ದವು… ಆ ಸಮಯದಲ್ಲಿ ಪ್ರತಿ ಜಾತ್ರೆಯಲ್ಲಿ ತಪ್ಪದೇ ಕಾಣುತ್ತಿದ್ದ ಒಂದು ವಿಶೇಷ ಅಂದರೆ ‘ಗರ್ದಿ ಗಮ್ಮತ್ತು’. ಮೊಬೈಲ್, ವಾಟ್ಸ್ ಅಪ್‌ನಲ್ಲಿ ಕಳೆದುಹೋದ ಇಂದಿನ ಬಹುತೇಕ ಮಕ್ಕಳಿಗೆ ‘ಗರ್ದಿ ಗಮ್ಮತ್ತು’ ಅಂದರೇನು ಎಂಬುದೇ ಗೊತ್ತಿಲ್ಲ. ಗರ್ದಿ ಗಮ್ಮತ್ತು ಎಂದರೆ, ಒಂದು ಡಬ್ಬಾದಂತಹ ಪೆಟ್ಟಿಗೆಯು ಫೋಟೊಗಳ ನೆಗಟಿವ್ ಗಳನ್ನು ಬಳಸಿಕಂಡು ಚಿಕ್ಕ ಕಿಂಡಿಯಿಂದ ಅಂದರೆ, ಒಂದೇ ಕಣ್ಣಿನಿಂದ ಇಣುಕಿ ನೋಡುವಷ್ಟು ಕಿಂಡಿಯಿಂದ 2 ರಿಂದ 3 ನಿಮಿಷಗಳ ಚಿತ್ರಗಳ ಸರಣಿಗಳನ್ನು ತೋರಿಸುವ ವೈವಿಧ್ಯಮಯ ಸಾಧನ… ಈ ಸಾಧನವನ್ನು ಹಿಡಿದುಕೊಂಡಿರುವ ವ್ಯಕ್ತಿಯು ಚಿಣ್ಣರಿಂದ ವೃದ್ಧರವರೆಗೆ ಎಲ್ಲರನ್ನೂ ಆಕರ್ಷಿಸುವ ಪರಿ ವಿಶಿಷ್ಟ. ಏನಿದೆ ಆ ಚಿಕ್ಕ ಡಬ್ಬಾದಲ್ಲಿ ಎಂದು ಕಿಂಡಿಯಲ್ಲಿ ಕಣ್ಣು ಹಾಯಿಸಿದೊಡನೆಯೇ ಆ ವ್ಯಕ್ತಿ ಒಂದು ಕಾಲಿಂಗ್ ಬೆಲ್ ತರಹ ಚಿಕ್ಕ ಘಂಟೆಯನ್ನು ಬಾರಿಸುತ್ತ, “ವಿಧಾನ ಸೌಧ ನೋಡ… ಹೇಮಾ ಮಾಲಿನಿ ನೋಡ… ಅಮಿತಾಭ ಬಚ್ಚನ್ ನೋಡ… ರಾಜಕುಮಾರ ನೋಡ…” ಎಂದು ಹಾಡುತ್ತಿದ್ದನು. ಆ ಹಾಡಿಗೂ ಆ ಡಬ್ಬಾದಲ್ಲಿ ಬರುವ ಚಿತ್ರಗಳಿಗೂ ಸರಿಹೊಂದುವಂತಹ ಪಕ್ಕಾ ಟೈಮಿಂಗ್ ಪ್ರಕಾರ ಮನರಂಜಿಸುವ ಪರಿ ಎಲ್ಲರಿಗೂ ಆಪ್ತ ಮತ್ತು ಇಷ್ಟವಾಗಿರುತ್ತಿತ್ತು… ಜಾಗತೀಕರಣ, ತಂತ್ರಜ್ಞಾನ ಕ್ಷೇತ್ರದ ಕ್ಷಿಪ್ರ ಬೆಳವಣಿಗೆ ಇಂದು ನಮಗೆಲ್ಲ ಹೊಸ ಜಗತ್ತನ್ನೇ ತೋರಿಸಿತು ನಿಜ. ಆದರೆ, ನಮ್ಮದೇ ಎನ್ನುವಂತಹ ನಮ್ಮಿಷ್ಟದ ಹಲವು ಪುರಾತನ ಸಾಂಪ್ರದಾಯಿಕ ಜಾನಪದ ವೈಶಿಷ್ಟ್ಯಗಳನ್ನು ರೂಢಿಗಳನ್ನು ಮತ್ತು ಮನರಂಜನಾ ವಿಧಾನಗಳನ್ನು ನಮಗರಿವಿಲ್ಲದೇ ದೂರ ಕರೆದುಕೊಂಡು ಹೋಯಿತು ಎನ್ನುವುದು ವಿಷಾದನೀಯ… ಅವುಗಳಲ್ಲಿ ‘ಗರ್ದಿ ಗಮ್ಮತ್ತು’ ಒಂದು. ಇಂದು 40ರ ವಯಸ್ಸಿನ ಮೇಲೆ ಇರುವ ಬಹುತೇಕ ಜನರು ‘ಗರ್ದಿ ಗಮ್ಮತ್ತ’ನ್ನು ತಮ್ಮೂರ ಜಾತ್ರೆಯಲ್ಲಿ ನೋಡಿಯೇ ನೋಡಿರುತ್ತಾರೆ. ಆದರೆ, ಇಂದಿನ ಕೆಲವು ಯುವಕರಿಗೆ ಹಾಗೂ ಹಲವು ಮಕ್ಕಳಿಗೆ ಇದರ ಬಗ್ಗೆ ಗೊತ್ತೇ ಇಲ್ಲದಂತಾಗಿದೆ… ಉತ್ತರ ಕರ್ನಾಟಕದ ಎಲ್ಲ ಜಿಲ್ಲೆಗಳ ಪ್ರತಿ ಜಾತ್ರೆಗಳಲ್ಲೂ ಕಂಡುಬರುತ್ತಿದ್ದ ‘ಗರ್ದಿ ಗಮ್ಮತ್ತು’ ಇಂದು ಮಾಯವಾಗಿದೆ. ಅಂಗೈನಲ್ಲಿರುವ ಮೊಬೈಲ್ ತೆಗೆದು ಆನ್‌ಲೈನ್‌ನಲ್ಲೇ ಬೇಕಾದ ಚಲನಚಿತ್ರಗಳನ್ನು ನೋಡುವ ಈಗಿನ ಜಮಾನಾದಲ್ಲಿ ‘ಗರ್ದಿಯ ಗಮ್ಮತ್ತು’ ಕಿಮ್ಮತ್ತಿಲ್ಲದೇ ಮೂಲೆಗುಂಪಾಗುತ್ತಿದೆ. ಡಬ್ಬಾ ಟಾಕೀಸ್‌ನಿಂದ ದಿನಕ್ಕೆ ಬೇಕಾದ ಕನಿಷ್ಠ ಗಳಿಕೇನೂ ಆಗಲ್ಲ ಎಂದು ಇದನ್ನು ಬಿಟ್ಟು ಬೇರೆ ಉದ್ಯೋಗ ಅರಸಿ ಹೋಗಿದ್ದಾರೆ. ಈ ಪೆಟ್ಟಿಗೆಗಳು ಎಷ್ಟೋ ಮನೆಗಳ ಮೂಲೆಯಲ್ಲಿ ಹಾಳಾಗುತ್ತಿವೆ ಹಾಗೂ ಇದರ ನೆನಪುಗಳ ಎಷ್ಟೋ ಮನಗಳ ಮೂಲೆಯಲ್ಲಿ ಹಳೆಯದನ್ನು ನೆನಯುತ್ತ ಮೆಲುಕು ಹಾಕುತ್ತ ಕುಳಿತಿವೆ… ‘ಗರ್ದಿ ಗಮ್ಮತ್ತ’ನ್ನು ಇಂದಿನ ಚಿಣ್ಣರಿಗೂ ಪರಿಚಯಿಸಬೇಕೆಂಬ ಇರಾದೆಯಿಂದ ಗದಗ ಜಿಲ್ಲೆಯ ಅಬ್ಬಿಗೇರಿ ಗ್ರಾಮದ ವೃದ್ಧರೊಬ್ಬರು ಇಂದಿಗೂ ಅದಮ್ಯ ಉತ್ಸಾಹದಿಂದ ಓಣಿ ಕೇರಿಗೆ ಭೇಟಿ ನೀಡುತ್ತಿದ್ದಾರೆ, :ಗರ್ದಿ ಗಮ್ಮತ್ತ’ನ್ನು ಪರಿಚಯಿಸುತ್ತಿದ್ದಾರೆ. ಅವರ ಹೆಸರು ದುರ್ಗಪ್ಪ ಅಂತ, ಇವರು ಕೊಪ್ಪಳದವರು. 65 ವರ್ಷದ ದುರ್ಗಪ್ಪ ಇಂದಿಗೂ ಹಳ್ಳಿ ಹಳ್ಳಿಗಳಿಗೆ ಹಾಗೂ ಪಟ್ಟಣಗಳಿಗೆ ತೆರಳಿ ‘ಗರ್ದಿ ಗಮ್ಮತ್ತ’ನ್ನು ಪರಿಚಯಿಸುತ್ತಿದ್ದಾರೆ. ಮೊದಲು ಗದಗ ಹತ್ತಿರದ ಅಬ್ಬಿಗೇರಿಯಲ್ಲಿ ವಾಸಿಸುತ್ತಿದ್ದ ಇವರು ಈಗ ರೋಣ ಪಟ್ಟಣದಲ್ಲಿ ವಾಸವಾಗಿದ್ದಾರೆ. ಇವರಿಗೆ ಇಬ್ಬರು ಮಕ್ಕಳು. ಇಬ್ಬರೂ ರೋಣದಲ್ಲಿ ಪ್ಲಾಸ್ಟಿಕ್ ಅಂಗಡಿ ಇಟ್ಟುಕೊಂಡಿರುವುದರಿಂದ ಇವರು ವಾಸಸ್ಥಳ ಬದಲಾಯಿತು. ರೋಣ ಪಟ್ಟಣಕ್ಕೆ ಬಂದ ಮೇಲೆಯೂ ದುರ್ಗಪ್ಪ ಸುಮ್ಮನೇ ಕೂಡಲಿಲ್ಲ. ಇಲ್ಲಿಯೂ ಪ್ರತಿದಿನ ಬಿಸಿಲು, ಮಳೆ ಲೆಕ್ಕಿಸದೇ ‘ಗರ್ದಿ ಗಮ್ಮತ್ತು’ ಅನ್ನು ತೆಗೆದುಕೊಂಡು ಹಾಡುತ್ತ ಓಣಿ ಓಣಿ ಅಲೆಯುವ ದುರ್ಗಪ್ಪ ಅವರಿಗೆ ದಣಿವೆಂಬುದು ಗೊತ್ತಿಲ್ಲ. ಇವರು ಕಳೆದ 45 ವರ್ಷಗಳಿಂದಲೂ ‘ಗರ್ದಿ ಗಮ್ಮತ್ತ’ನ್ನು ಜಾತ್ರೆಗಳಲ್ಲಿ ಕೊಂಡೊಯ್ದು ಮಕ್ಕಳ ಮನ ತಣಿಸುತ್ತಲೇ ಇದ್ದಾರೆ. ಈಗಲೂ ಪ್ರತಿದಿನ ಬಸ್ಸಿನಲ್ಲಿ ಆಸುಪಾಸಿನ ಊರುಗಳಿಗೆ ಹೋಗಿ :ಗರ್ದಿ ಗಮ್ಮತ್ತ:ನ್ನು ಪರಿಚಯಿಸುತ್ತಿದ್ದಾರೆ. ದುರ್ಗಪ್ಪ ಅವರನ್ನು ನೋಡಿ ಕೆಲವರು ಸೆಲ್ಫಿ ಅಂತ ಕೇಳಿದ್ದೂ ಇದೆ, ತೆಗೆದುಕೊಳ್ಳಿ ಅಂತಾರೆ, ಆದರೆ ಮೊಬೈಲ್ ನೋಡಿ ಇವರು ನಗುವುದಿಲ್ಲ, ಯಾಕೆ ಅಂತೀರಾ, ಇದು ಇವರ ‘ಗಮ್ಮತ್ತು’… ದುರ್ಗಪ್ಪ ಕೊಪ್ಪಳ ‘ಪ್ರತಿಧ್ವನಿ’ ಪ್ರತಿನಿಧಿ ಜೊತೆ ತಮ್ಮ ಅನುಭವ ಹಂಚಿಕೊಂಡಿದ್ದು ಹೀಗೆ– “ನಾನು 20 ವರ್ಷದವನಿದ್ದಾಗಲೇ ಸ್ವತಂತ್ರವಾಗಿ ‘ಗರ್ದಿ ಗಮ್ಮತ್ತು’ ತೋರಿಸಲು ಸಜ್ಜಾದೆ. ಆಗ ಒಂದು ಕುಟುಂಬದಲ್ಲಿ ಎರಡು ಅಥವಾ ಮೂರು ಪೆಟ್ಟಿಗೆಗಳು ಇರುತ್ತಿದ್ದವು. ನಾವು ಜಾತ್ರೆಗೆ ಹೋದರೆ ಸಾಕು, ಮಕ್ಕಳು ದುಂಬಾಲು ಬೀಳುತ್ತಿದ್ದರು. ಆಗ ಕೆಲವರು 5 ಪೈಸೆ ಅಥವಾ 10 ಪೈಸೆ ಕೊಡುತ್ತಿದ್ದರು. ಜಾತ್ರೆ ಇಲ್ಲದ ಸಮಯದಲ್ಲಿ ನಾವು ಓಣಿ ಕೇರಿಗಳಿಗೆ ಹಾಗೂ ಪಟ್ಟಣಗಳಿಗೆ ಹೋಗುತ್ತಿದ್ದೆವು. ಅಲ್ಲಿಯೂ ಕೆಲವು ಜನರು 5 ಪೈಸೆ ಕೊಡುತ್ತಿದ್ದರು. ಇಲ್ಲವಾದರೆ ಒಂದು ಲೋಟ ಜೋಳ ಅಥವಾ ಗೋದಿ ನೀಡುತ್ತಿದ್ದರು. ಆಗ ಅದೇ ನಮ್ಮ ಜೀವನ. ಈ ಪೆಟ್ಟಿಗೆಯು ನಮ್ಮ ಕುಟುಂಬದ ಹಸಿವು ನೀಗಿಸುವಲ್ಲಿ ಮುಖ್ಯ ಪಾತ್ರ ವಹಿಸಿವೆ. ಈಗ ನಾವು ಮೊಬೈಲ್ ಬಂದೈತಿ ಅದು-ಇದು ಬಂದೈತಿ ಅಂತ, ನಮ್ಮನ್ನು ಸಾಕಿ ಸಲುಹಿದ ಈ ಕಲೆಯನ್ನು ಬಿಡಬಾರದು ಎಂದು ಪ್ರತಿದಿನ ಈ ಪೆಟ್ಟಿಗೆಯನ್ನು ತೆಗೆದುಕೊಂಡು ಹೋಗುತ್ತಿದ್ದೇನೆ. ಇವತ್ತೂ ಈ ಪೆಟ್ಟಿಗೆ ನನಗೆ ದೇವರಿದ್ದಂತೆ. ಹಣವೇ ಮುಖ್ಯವಲ್ಲ ಇಲ್ಲಿ, ಮಕ್ಕಳು ಇದ ನೋಡಿ ಕೇಕೆ ಹೊಡಿಯುವುದನ್ನು ನೋಡಿದರೆ ನನ್ನ ಹೊಟ್ಟೆ ತುಂಬಿದಂತಾಗುತ್ತದೆ.”..! ಎಂದು ‘ಗರ್ದಿ ಗಮ್ಮತ್ತಿ’ನ ದುರ್ಗಪ್ಪ ತಮ್ಮ ಕಲೆಯ ವಾರಸುದಾರನಾಗಿ ಹೇಳಿಕೊಳ್ಳುತ್ತಾರೆ… ರೊಕ್ಕಾ ಬರೂದ ಕಷ್ಟ ಆದರೂ…– ಮೊಬೈಲ್ ಕ್ರಾಂತಿ ‘ಗರ್ದಿ ಗಮ್ಮತ್ತಿ’ನ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಬೀರಿದರೂ, ಅದರಲ್ಲೇ ಹೊಸತನದಿಂದ ಮಕ್ಕಳನ್ನು ನಗಸ್ತಿನಿ ಅಂತ ಮತ್ತೆ ಮಾತು ಶುರು ಹಚ್ಚಿಕೊಂಡರು ದುರ್ಗಪ್ಪ. “ಹೌದು ಸಾರ್, ಒಪ್ಪತಿನಿ, ಇಂದು ಮೊಬೈಲ್ ಎಲ್ಲಾ ಇವೆ. ಆದರೂ ನಾವು ಈಗ ಹೊಸದನ್ನೇನಾದರೂ ತೋರಿಸಬೇಕು, ಅದಕ್ಕಾಗಿ ಬಾಹುಬಲಿ, ರೋಬೋಟ್, ಅವತಾರ, ಕ್ರಿಶ್ ಹೀಗೆ ಹೊಸ ಹೊಸ ಹೀರೋಗಳ ಫೋಟೊಗಳನ್ನು ಸಂಗ್ರಹಿಸಿ ಡಬ್ಬಾ ಟಾಕೀಸ್‌ನಲ್ಲಿ ತೋರಿಸಿದಾಗ ಚಿಕ್ಕ ಮಕ್ಕಳು ಕೇಕೆ ಹೊಡೆಯುತ್ತ ನಕ್ಕು ನಲಿಯುತ್ತಾರೆ. ನಿಮಗೆಲ್ಲ ‘ಗರ್ದಿ ಗಮ್ಮತ್ತು’ ಹಳೆಯದು. ಆದರೆ ಈಗಿನ ಮಕ್ಕಳಿಗೆ ಇದು ಹೊಸದೇ ಅಲ್ಲವೇ. ಕೆಲವರಂತೂ ಮತ್ತೆ ಮತ್ತೆ ನೋಡಲು ಮುಗಿಬೀಳುತ್ತಾರೆ.”… ನಿಜ, ಇಂದಿನ ಮಕ್ಕಳಿಗೆ ಈ ಡಬ್ಬಾ ಟಾಕೀಸ್ ಹೊಸದು. ತಾವು ಚಿಕ್ಕಂದಿನಿಂದ ರೂಢಿಸಿಕೊಂಡ ಬಂದ ಈ ಪಾರಂಪರಿಕ ಮನರಂಜನಾ ವಿಧಾನವನ್ನು ಇಂದು ಹಲವರಿಗೆ ಮತ್ತೆ ಪರಿಚಯಿಸುತ್ತಿರುವ ದುರ್ಗಪ್ಪ, ಎಷ್ಟೋ ಜನರ ಮನದಲ್ಲಿ ಕಳೆದುಹೋದ ಪುಸ್ತಕಗಳ ಮರೆತ ಪುಟಗಳನ್ನು ಮತ್ತೇ ತಿರುವಿಹಾಕುವಂತೆ ಮಾಡಿ ಅವರ ಬಾಲ್ಯ ನೆನಪಿಸುತ್ತಿದ್ದಾರೆ… ಗದಗ ಜಿಲ್ಲೆಯ ರೋಣದ ಸಾಧು ಅಜ್ಜ ನಗರದ ಆರು ವಯಸ್ಸಿನ ಪುಠಾಣಿ ಪ್ರಶಾಂತ ಕುರಿ ಡಬ್ಬಾ ಟಾಕೀಸ್ ನೋಡಿ ಹೇಳಿದ್ದು ಹೀಗೆ– “ಆ ಅಜ್ಜನ ಹಾಡು, ಆ ಹಾಡಿಗೆ ತಕ್ಕ ಹಾಗೆಯೇ ಸಣ್ಣ ಟಾಕೀಸಿನಲ್ಲಿರುವ ಫೋಟೊಗಳು ಬರುತ್ತಿರುತ್ತವೆ. ಬಾಹುಬಲಿ ಶಿವಲಿಂಗವೆತ್ತಿ ಬರುತ್ತಿದ್ದ ಹಾಗೂ ಛೋಟಾ ಭೀಮನ ಚಿತ್ರ ಸೇರಿ ಎಲ್ಲ ಚೆನ್ನಾಗಿವೆ. ಇದೊಂಥರ ಮಜಾ. ಈ ಅಜ್ಜ ಮತ್ತೆ ಮತ್ತೆ ಬರಲಿ.”..! ದುರ್ಗಪ್ಪ ಅವರನ್ನು ಬಲ್ಲವರಾದ ಗದಗದ ಪರಮೇಶಪ್ಪ ಹಳ್ಳಿ ಹೇಳುವುದು ಹೀಗೆ– “ನಾವು ದುರ್ಗಪ್ಪ ಅವರನ್ನು ಕಳೆದ ಮೂವತ್ತು ವರ್ಷಗಳಿಂದ ನೋಡುತ್ತಿದ್ದೇವೆ. ಅವರು ಪ್ರತಿ ಜಾತ್ರೆಯಲ್ಲಿರುತ್ತಾರೆ. ಮುಂಜಾನೆಯಿಂದ ಸಂಜೆವರೆಗೂ ದಣಿಯದೇ ಹಾಡುತ್ತ ಮಕ್ಕಳನ್ನು ರಂಜಿಸುತ್ತಾರೆ. ಇಂಥವರನ್ನು ಸರ್ಕಾರ ಅಥವಾ ಸರ್ಕಾರೇತರ ಸಂಸ್ಥೆಗಳು ಗುರುತಿಸಬೇಕು. 3-4 ನಿಮಿಷಗಳವರೆಗೆ ಇರುವ ಒಂದು ಡಬ್ಬಾ ಟಾಕೀಸ್ ನೋಡುವುದಕ್ಕೆ ಈಗ 5 ರೂಪಾಯಿಗಳು ಮಾತ್ರ. ಪ್ರತಿದಿನ 120-150ರವರೆಗೆ ದುಡಿಯುವ ದುರ್ಗಪ್ಪ, ಇಂದಿನ ತಲೆಮಾರಿನ ಜನರಿಗೆ ‘ಗರ್ದಿ ಗಮ್ಮತ್ತಿ’ನ ಪರಿಚಯ ಮಾಡುತ್ತಿರುವುದು ಸ್ತುತ್ಯಾರ್ಹವಾಗಿದೆ…” ಗರ್ದಿ ಗಮ್ಮತ್ತಿನಲ್ಲಿ ಮೊದಲೇನಿರುತ್ತಿದ್ದವು?– 70ರಿಂದ 80ರ ದಶಕ– 70 ಹಾಗೂ 80ರ ದಶಕದಲ್ಲಿ ಅಮಿತಾಭ್ ಬಚ್ಚನ್, ಹೇಮಾ ಮಾಲಿನಿ, ರಾಜ್ ಕಪೂರ್, ದೇವಾನಂದ, ನೂತನ, ಶಮ್ಮಿ ಕಪೂರ್, ವಿಧಾನ ಸೌಧ, ತಾಜಮಹಲ್, ಇಂಡಿಯಾ ಗೇಟ್, ಗೇಟ್‌ವೇ ಆಫ್ ಇಂಡಿಯಾ ಇವೆಲ್ಲ ಫೋಟೊಗಳು ಚಿರಪರಿಚಿತವಾಗಿದ್ದವು..! 90ರ ದಶಕದ ನಂತರ– ಸಂಜಯ ದತ್, ಶಾರೂಖ್ ಖಾನ್, ಸಲ್ಮಾನ್ ಖಾನ್, ಆಮಿರ್ ಖಾನ್, ರವೀನಾ ಟಂಡನ್, ಶಕ್ತಿಮಾನ್, ರಾಮಾಯಣ ಮತ್ತು ಮಹಾಭಾರತದ ಪಾತ್ರಗಳು, ರಾಜೀವ್ ಗಾಂಧಿ ಮತ್ತು ಕಾರ್ಟೂನ್ ಹೀರೋಗಳಾದ ಮೋಗ್ಲಿ, ಹೀ-ಮ್ಯಾನ್, ಲಾಲ್‌ಬಾಗ್, ಕಬ್ಬನ್ ಪಾರ್ಕ್ ಇವೆಲ್ಲ ಸಾಮಾನ್ಯವಾಗಿರುತ್ತಿದ್ದವು..! 2010ರ ನಂತರ: 2010ರಲ್ಲಿ ‘ಗರ್ದಿ ಗಮ್ಮತ್ತು’ ಕಾಣೆಯಾದರೂ, 90ರ ದಶಕದ ಚಿತ್ರಗಳನ್ನಿಟ್ಟಕೊಂಡೇ ತೋರಿಸುತ್ತಿದ್ದ ದುರ್ಗಪ್ಪ, 2015ರ ನಂತರ ಹೊಸ ಚಿತ್ರಗಳನ್ನು ಸೇರಿಸತೊಡಗಿದರು. ಈ ಹೊಸ ಚಿತ್ರಗಳಲ್ಲಿ ಬಾಹುಬಲಿ, ಕಟ್ಟಪ್ಪ, ಬಲ್ಲಾಳದೇವ, ರೋಬೊ, ಅವತಾರ್, ಕ್ರಿಶ್, ಕೊಚ್ಚಾಡಿಯನ್, ಯಶ್, ದರ್ಶನ, ಪುನೀತ್ ರಾಜಕುಮಾರ, ಶಿವರಾಜಕುಮಾರ್, ಸುದೀಪ್ ಮತ್ತು ಕಾರ್ಟೂನ್ ತಾರೆಗಳಾದ ಛೋಟಾ ಭೀಮ್ ಹಾಗೂ ಬಾಲವೀರ್ ಸೇರ್ಪಡೆಯಾಗಿವೆ… ನಿಮಗೂ ನೆನಪುಂಟೇ?– ‘ಗರ್ದಿ ಗಮ್ಮತ್ತಿ’ನಿಂದ ಜೀವನ ನಡೆಸುತ್ತಿದ್ದ ಕೆಲವು ಸಮುದಾಯಗಳ ಜನರು ಇದೀಗ ಪರ ಊರುಗಳತ್ತ ಉದ್ಯೋಗ ಅರಸಿ ಹೋಗಿದ್ದಾರೆ. ಮೊದಲು ಮಳೆ-ಬೆಳೆ ಚೆನ್ನಾಗಿದ್ದ ಕಾರಣ, ರೈತಾಪಿ ಜನರು ಇವರಿಗೆ ಅಕ್ಕಿ, ಜೋಳ, ಗೋಧಿಯನ್ನು ಕೊಡುತ್ತಿದ್ದರು. ಈಗ ಬರ ತಾಂಡವವಾಡುತ್ತಿದೆ. ಇಲವೇ ಅತಿವೃಷ್ಟಿ ತಾಂಡವ ಆಡುತ್ತದೆ. ಆದ್ದರಿಂದ ಇವರೆಲ್ಲ ಇಂದು ತಮ್ಮ ಕುಲಕಸುಬುಗಳನ್ನು ಬಿಟ್ಟು ಹೊಸದನ್ನು ಹುಡುಕುತ್ತ ಬದುಕಲೆತ್ನಿಸುತ್ತಿದ್ದಾರೆ. ಇಂದಿನ ತಲೆಮಾರಿನ ಜನರು, ಅಂದರೆ ‘ಗರ್ದಿ ಗಮ್ಮತ್ತ’ನ್ನೇ ಕುಲಕಸುಬಾಗಿ ಜೀವನ ನಡೆಸುತ್ತಿದ್ದವರು ಇಂದು ಇದೇ ‘ಗರ್ದಿ ಗಮ್ಮತ್ತಿ’ನಿಂದ ಕೈ ತುಂಬಾ ಸಂಪಾದಿಸಲು ಆಗಲ್ಲ ಎಂಬ ಕಾರಣದಿಂದ ಹಂದಿ ಸಾಕಾಣಿಕೆ ಹಾಗೂ ಪ್ಲಾಸ್ಟಿಕ್ ಮಾರಾಟ ವ್ಯವಹಾರಗಳಲ್ಲಿ ತೊಡಗಿಕೊಂಡಿದ್ದಾರೆ. ಗದಗ, ಬಾಗಲಕೋಟೆ, ಧಾರವಾಡ, ಬಳ್ಳಾರಿ ಜಿಲ್ಲೆಯಲ್ಲಿ ಹೆಚ್ಚಾಗಿರುವ ಈ ಜನರಲ್ಲಿ ಹಲವರು ಗುಳೆ ಹೋಗಿ, ಗೋವಾ, ಮಂಗಳೂರು ಹಾಗೂ ಸೊಲ್ಲಾಪುರಗಳಲ್ಲಿ ನೆಲೆಸಿದ್ದಾರೆ. ಹೀಗಾಗಿ ಇದು ಕಡಿಮೆಯಾಗುತ್ತ ಇಂದು ಕಣ್ಮರೆಯಾಗುವಂತಹ ದುಸ್ಥಿತಿಗೆ ಬಂದಿದೆ ‘ಗರ್ದಿ ಗಮ್ಮತಿ’ಗೆ. ಇಂದಿನ ಚಿಣ್ಣರು ಇದರ ಬಗ್ಗೆ ತಿಳಿಯಲಿ ಎಂಬುದು ನಮ್ಮ ಆಶಯವಾಗಿದೆ..! *********************************** ಕೆ.ಶಿವು.ಲಕ್ಕಣ್ಣವರ

ಜಾನಪದ Read Post »

ಕಾವ್ಯಯಾನ

ಕಾವ್ಯಯಾನ

ಗೆರೆಗಳು ಎನ್.ಆರ್.ರೂಪಶ್ರೀ, ಬದುಕಿನ ಗೆರೆಗಳು ಒಂದೊಂದಾಗಿ ಮೂಡುತ್ತಲೇ ಹೋಗುತ್ತವೆ ಅಳಿಸಲಾಗದ ಗೆರೆಗಳು ಅಳಿಸಿದರೂ ಅಳಿಸಲಾಗದ ಗೆರೆಗಳು ಗೆರೆಗಳು ಗೆರೆಗಳಾಗಿಯೇ ಇರಬೇಕಾದ್ದು ಇರದೇ ಇರುವುದು ಗೆರೆಗಳ ನಡುನಡುವೆ ಚುಕ್ಕಿಚಿತ್ತಾರಗಳು ಜೀವನದ ಗೆರೆಗಳಲ್ಲಿ ಎಲ್ಲವೂ ಎಲ್ಲರದ್ದಾಗಿದ್ದರೂ ಯಾರದ್ದು ಯಾವುದು ಆಗಿರುವುದಿಲ್ಲ. ಗೆರೆಗಳೇ ಹಾಗೆ ಬದುಕಿನಲ್ಲಿ ಎಳೆಎಳೆಯಾಗಿ ಬಂದು ಎಳೆಯುತ್ತವೆ ಗೆರೆಗಳಿಲ್ಲದ ಬದುಕು ಬದುಕು ಅಲ್ಲ ಬದುಕಿನಲ್ಲಿ ಗೆರೆಗಳು ಇರಬೇಕೆಂದೇನಿಲ್ಲ ಬದುಕು ಬದುಕೇ ಗೆರೆಗಳು ಗೆರೆಗಳೇ ತಾನೇ. ******

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಬಂಧಿ ಎನಿಸಿಲ್ಲ ಬಂಧನದಲ್ಲಿ ಜಿ.ಲೋಕೇಶ್ ನಿನ್ನ ನೆನಪುಗಳಲ್ಲಿ ಬಂಧಿಯಾದ ನನಗೆ ಗೃಹ ಬಂಧನವು ಕಷ್ಟವೇನು ಅನಿಸುತ್ತಿಲ್ಲ ಏಳಿ, ಮಲಗಲು,.ನಾಲಿಗೆ ಎದೆಯ ಹೆಸರನ್ನು ಸಾರಿ ಸಾರಿ ಹೇಳುವಾಗ ಬಂಧನವು ಬಂಧಿ ಎನಿಸಿಲ್ಲ ಪ್ರತಿ ಮೂಲೆ ಮೂಲೆಯಲ್ಲಿ ನಿನ್ನೂರಿನ ನೆನಪುಗಳು ಜೊತೆಯಿರುವಾಗ ಬಂಧನವು ಬಂಧಿ ಎನಿಸಿಲ್ಲ ***** ಕೊಡಿಸಿದ ಅಷ್ಟು ವಸ್ತುಗಳು ಹೋದ ಪ್ರತಿ ಜಾಗಗಳಿಗೆ ಕರೆದೊಯ್ಯುತಿರುವಾಗ ಬಂಧನವು ಬಂಧಿ ಎನಿಸಿಲ್ಲ ಎಷ್ಟೋ ಭಾವಗಳನ್ನು ಪದಗಳಲ್ಲಿ ಕವಿತೆಯಾಗಲು ಪೋಣಿಸುತಿರುವಾಗ ಬಂಧನವು ಬಂಧಿ ಎನಿಸಿಲ್ಲ ****

ಕಾವ್ಯಯಾನ Read Post »

ಅಂಕಣ ಸಂಗಾತಿ

ಮುಚ್ಚಿದ ಬಾಗಿಲು-ತೆರೆಯದ ಕಿಟಕಿ

ಮಾಲತಿಹೆಗಡೆಯವರ ಹೊಸ ಅಂಕಣ, ಪ್ರತಿನಿತ್ಯ ಪ್ರಕಟವಾಗಲಿದೆ ಮುಚ್ಚಿದ ಬಾಗಿಲು-ತೆರೆಯದ ಕಿಟಕಿ ಭಾಗ-3 ಮಾಲತಿಹೆಗಡೆಯವರ ಹೊಸ ಅಂಕಣ, ಪ್ರತಿನಿತ್ಯ ಪ್ರಕಟವಾಗಲಿದೆ ಅರಿವು ವಿಸ್ತರಿಸಲಿ.. ಮನೆ ಬಾಗಿಲು ದಾಟಬೇಡಿ.. ಮನೆಯೊಳಗೇ ಸುರಕ್ಷಿತವಾಗಿರಿ ಎಂದಕೂಡಲೇ ಮನಸ್ಸು ತರಾವರಿ ಚಿಂತಿಸುತ್ತದೆ. ಇಷ್ಟಪಟ್ಟು ಸಾಲ ತೆಗೆದು, ಕಷ್ಟಬಿದ್ದು ಕಟ್ಟಿಸಿದ ನಮ್ಮ ಮನೆಯೂ ನಮಗೆಸೆರೆಮನೆಯೆನಿಸುತ್ತದೆ. ಯಾಕೆ ಹೀಗೆ? ಯಾವುದು ಬೇಡ ಎಂದು ಹೇಳುತ್ತಾರೆಯೋ ಅದನ್ನು ಮೀರುವುದು ಸಾಹಸ… ಆದರೆ ಈಗ ಅದು ದುಃಸ್ಸಾಹಸ. ವಿವೇಚನೆ ಇಲ್ಲದ ನಡೆ. ಸುರಕ್ಷಿತತೆಯ ಪ್ರಶ್ನೆ ಎದ್ದಾಗ ಅದಕ್ಕೇ ನಮ್ಮ ಮೊದಲ ಆದ್ಯತೆ. ಮನೆ ಬಾಗಿಲು ದಾಟುವುದು ಹಾಗಿರಲಿ ನಮ್ಮ ಮುಖವನ್ನೇ ನಾವು ಬೇಕಾದಷ್ಟು ಸಲ ಮುಟ್ಟುವಂತಿಲ್ಲ! ಕೈ ತೊಳೆದು ಮುಖ ಮುಟ್ಟಬೇಕೋ, ಮುಖ ಮುಟ್ಟಿದ ನಂತರ ಕೈ ತೊಳೆಯಬೇಕೋ ಗೊಂದಲ! ಒಂದರ್ಥದಲ್ಲಿ ನಮಗೆ ನಾವೇ ಅಸ್ಪ್ರಶ್ಯರಾಗೋದು. ಇನ್ನು ರೋಗಿಗಳಾದರೆ ಅಥವಾ ಕ್ವಾರಂಟೇನ್ ಅನುಭವಿಸಿದರೆ ಸಮಾಜವೇ ( ವೈದ್ಯರು, ಆರೋಗ್ಯ ಇಲಾಖೆ ಹೊರತುಪಡಿಸಿ)ಒಂದು ಹಂತಕ್ಕೆ ಅಂತವರನ್ನು ದೂರವಿಡುತ್ತದೆ…ಇದನ್ನು ತಪ್ಪು ಎನ್ನುವಂತೆಯೂ ಇಲ್ಲ… ಬದುಕಿನಲ್ಲಿ ಇಂತವುಗಳನ್ನೆಲ್ಲ ಎದುರಿಸದ ಅನೇಕ ಜನರಿಗೆ ವ್ಯಥೆ, ನೋವು ಆಗಬಹುದು. ಆದರೆ ಇದು ಕೆಲ ದಿನಗಳು ಮಾತ್ರ ನೆನಪಿರಲಿ. ಆದರೆ ಇಡೀ ಬದುಕನ್ನು ಅಸ್ಪೃಶ್ಯತೆಯ ನೋವಿನಲ್ಲಿ ಕಳೆದ, ಅದರ ವಿರುದ್ಧ ಹೋರಾಡುವುದರಲ್ಲಿಯೇ ಬದುಕನ್ನು ಎದುರಿಸಿದ ಅಂಬೇಡ್ಕರ ಅವರ ಕಷ್ಟ ಎಷ್ಟಿರಬಹುದು? ಇಂದಿಗೂ ಎಷ್ಟೋ ಊರುಗಳಲ್ಲಿ ದಲಿತರನ್ನು ಅಸ್ಪೃಶ್ಯರೆಂಬಂತೆಯೇ ಕಾಣುವುದಿದೆ. ಕೊರೋನಾ ಸಂಕಷ್ಟ ನಮ್ಮ ಮಾನವೀಯತೆಯ ಅರಿವನ್ನು ವಿಸ್ತರಿಸುವಂತಾಗಲಿ. ಮನೆಯ ಬಾಗಿಲು ಮುಚ್ಚಿದರೂ ಮನದ ಬಾಗಿಲು ಎಂದೂ ಮುಚ್ಚದಿರಲಿ. ******* ಮುಂದುವರಿಯುವುದು…. ಮಾಲತಿ ಹೆಗಡೆ

ಮುಚ್ಚಿದ ಬಾಗಿಲು-ತೆರೆಯದ ಕಿಟಕಿ Read Post »

ಕಾವ್ಯಯಾನ

ಕಾವ್ಯಯಾನ

ಗಝಲ್ ತೇಜಾವತಿ ಹೆಚ್. ಡಿ. ಸರಿರಾತ್ರಿಯ ನಿದಿರೆಯನ್ನು ಕಸಿದು ಮನವು ಕೇಳುತ್ತದೆ ನಿನ್ನನ್ನೆ ಒತ್ತಿದರು ಮುಚ್ಚದ ರೆಪ್ಪೆಯೊಳಗೆ ಕಂಗಳು ಅರಸುತ್ತವೆ ನಿನ್ನನ್ನೆ ಸಂತೆಯೊಳಗಿದ್ದರು ಏಕಾಂತದ ಭಾವ ಕವಿದು ವಿರಹ ಕಾಡಿದೆ ಬಂದಪ್ಪಿ ಬಿಡು ದಾಹ ತೀರುವಷ್ಟು ಬೆಳಗೊಳಗೆ ಬೇಡುತ್ತದೆ ನಿನ್ನನ್ನೆ ಹೃದಯದೊಳಗೆ ಅಡಗಿಸಿಟ್ಟ ಒಲವು ಹೊರಗಿಣುಕಿ ನೋಡುತ್ತಿದೆ ಎಲ್ಲಾದರು ಮಿಡಿಯಬಹುದೇ ಅಂತರಂಗ ತುಡಿತ ಕಾಯುತ್ತದೆ ನಿನ್ನನ್ನೆ ಸೆರೆಮನೆಯ ಬದುಕು ಸ್ವಚ್ಛಂದ ಹಾರಾಡಲು ಹಾತೊರೆಯುತ್ತಿದೆ ವಂಚನೆಯಿಂದ ನ್ಯಾಯ ಬಯಸಿ ನಂಬಿಕೆಯಲ್ಲಿ ಹಂಬಲಿಸುತ್ತದೆ ನಿನ್ನನ್ನೆ ಪ್ರತಿ ಇರುಳು ಹೊಂಗನಸಿನೊಡನೆ ಹತಾಶೆಗೊಳ್ಳುತ್ತಿವೆ ಭಾವನೆಗಳು ಅನುಕ್ಷಣವು ತೇಜಾಳ ಹೃದಯ ಭಕ್ತಿಯಿಂದ ಪ್ರಾರ್ಥಿಸುತ್ತದೆ ನಿನ್ನನ್ನೆ **********

ಕಾವ್ಯಯಾನ Read Post »

ಕವಿತೆ ಕಾರ್ನರ್

ಕವಿತೆ ಕಾರ್ನರ್

ಇರುಳ ಹೊಕ್ಕುಳ ಸೀಳಿ ಸುಡುಕೆಂಡದ ಪಾದಗಳ ಮೆಲ್ಲನೂರಿ ಅಂಬೆಗಾಲಿಟ್ಟವನ ಸ್ವಾಗತಕೆ ಊರಕೇರಿಯ ಕೋಳಿಗಳು ಕೂಗು ನಿಲ್ಲಿಸಿ ಹಸಿದ ನಾಯಿಗಳು ಊಳಿಟ್ಟು ಮಲಗಿದ್ದ ಕಂದಮ್ಮಗಳು ಕಿಟಾರನೆ ಕಿರುಚಿದಂತೆ ಅಳತೊಡಗಿ ಊರೂರೇ ತೆರೆದ ಮಶಾಣದಂತೆ ಬಾಸವಾಗಲು ಮಾರ್ಚುರಿಯೊಳಗೆ ಕೊಯಿಸಿಕೊಂಡ ಹೆಣಗಳು ವಾರಸುದಾರರಿರದೆ ಪೋಲಿಸರ ಕಾವಲಲಿ ಬೇಯುತ್ತ ಹೆರಿಗೆ ವಾರ್ಡಿನ ನರ್ಸಮ್ಮಗಳು ಅತ್ತಿಂದಿತ್ತ ಇತ್ತಿಂದತ್ತ ಓಡಾಡುವ ತರಾತುರಿಯಲ್ಲಿ ಎಂತ ಮಗು ಕಣ್ಣರಳಿಸುವ ಗಂಡಸಿನ ಕಣ್ಣೊಳಗೆ ಬೆಳಕೊಂದು ಮೂಡಿದಂತಾಗಿ ಗುಳೆಹೊರಟ ಪರದೇಸಿ ಗುಂಪಿನಲ್ಲಿನ ಹರಯದ ಹೆಣ್ಣುಗಳ ಬೇಟೆಯಾಡಲು ಹವಣಿಸುವ ತಲೆಹಿಡುಕರ ಹಿಂದೆ ಸಾಲುಗಟ್ಟಿನಿಂತ ದುಡ್ಡಿದ್ದ ವಿಟಪುರುಷರು ಇವರುಗಳ ಕಾಯಲು ನೇಮಿಸಿದ ಮೇಸ್ತ್ರಿಗಳ ಕಣ್ಣಲ್ಲೂ ಕಮೀಷನ್ನಿನ ದುರಾಸೆಯ ಚಿತ್ರ ಇದೀಗ ಉರುಳುತ್ತಿರುವುದು ದಿನಗಳಷ್ಟೆ ಒಳ್ಳೆಯವೊ ಕೆಟ್ಟವೊ? ಹೇಳಬೇಕಾದ ಬಲ್ಲವರೆಲ್ಲ ಸೆಮಿನಾರುಗಳ ಕೊಠಡಿಯೊಳಗೆ ಮಾತುಕತೆಯೊಳಗೆ ಮುಳುಗಿ ಆಳುವ ಪ್ರಭುಗಳ ಪರವಿರೋಧಿಗಳೆಲ್ಲ ರಸ್ತೆಯ ನಟ್ಟನಡೂವೆ ಮದ್ಯೆ ಪ್ರತಿಕೃತಿಗಳ ಸುಡುತ್ತ ಮದ್ಯಾಹದೂಟಕ್ಕೆ ಕಾಯುತ್ತ ಇಳಿ ಮದ್ಯಾಹ್ನ ಸಣ್ಣ ನಿದ್ದೆ ಮಗಿಸೆದ್ದ ಗೃಹಿಣಿ ಮಕ್ಕಳಿಗಾಗಿ ಕಾಯುತ್ತ ಗೇಟಿನಂಚಲ್ಲಿ ನಿಂತಾಗ ದಿನದ ಚಕ್ರದ ಕೊನೆಯ ಸುತ್ತು ಉರಿಯುತ್ತಿದ್ದ ಕೆಂಡದವನು ಕೊಂಡದೊಳಗೆ ಹಾದಂತೆ ಕತ್ತಲೊಳಗೆ ಸರಿದು ನಡೆಯುತ್ತಾನೆ ಕು.ಸ.ಮಧುಸೂದನ

ಕವಿತೆ ಕಾರ್ನರ್ Read Post »

ಕಾವ್ಯಯಾನ

ಕಾವ್ಯಯಾನ

ಗಝಲ್ ಮರುಳಸಿದ್ದಪ್ಪ ದೊಡ್ಡಮನಿ ನನ್ನೆದೆಯ ಒಳಗ ನೋವು ತಂದಿರುವೆ ಹೇಳಿ ಹೋಗುಕಾರಣ ಸತ್ತ ಕನಸುಗಳ ಹೊತ್ತು ಹರದಾರಿ ನಡೆದಿರುವೆ ಹೇಳಿಹೋಗುಕಾರಣ ಜೀವ ಪ್ರೀತಿಯ ಒಡಲೊಳಗೆ ತುಂಬಿಕೊಂಡಿದ್ದೆನೆ ಗಂಜಿಯಾದರು ಕುಡಿದು ಬದುಕಿಸುವೆ ಹೇಳಿ ಹೋಗುಕಾರಣ ಸಂದುಕದಲ್ಲಿದ್ದ ಒಂಕಿ ಡಾಬು ಜೂಲ್ಪಿಹೂ ತೋಳ್ ಬಂದಿ ತೊಡಿಸಿರುವೆ ರೇಶ್ಮಿ ಇಳಕಲ್ಲ ಜರತಾರಿ ಸಿರೆ ಉಡಿಸಿರುವೆ ಹೇಳಿ ಹೋಗುಕಾರಣ ನನ್ನೊಂದಿಗೆ ಒಮ್ಮೆಯೂ ಮಾತನಾಡಲಿಲ್ಲ ಮೌನ ಮುರಿದು ನಿನ್ನೊಳಗೆ ಎನು ತುಂಬಿಕೊಂಡಿರುವೆ ಹೇಳಿ ಹೋಗುಕಾರಣ ಅನುಮಾನಗಳಿದ್ದರೆ ಬಿಡು ಅಗ್ನಿ ಪರಿಕ್ಷೆಯ ನೇಪ ಮಾತ್ರ ಬೇಡ ಮರುಳ ನಿನ್ನ ಜೊತೆಯಾಗಿ ಹೆಜ್ಜೆ ಹಾಕ ಬೇಕೆಂದಿರುವೆ ಹೇಳಿ ಹೋಗುಕಾರಣ ******

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಪ್ರಕೃತಿ ಆಚರಿಸುತಿದೆ ಹಬ್ಬ ಶಾಲಿನಿ ಆರ್. ಮಾನವನ ತಗ್ಗು ದಿಬ್ಬಗಳ ಲೀಲೆಗೆ, ನಲಿದಿದೆ  ಪ್ರಕೃತಿ ಈ ಸೋಜಿಗೆ, ಹಲವು ಜೀವನವ ಕಸಿದ ಕರೋನಾ, ಪ್ರಕೃತಿಗೆ ಇದುವೇ ವರವಾಯಿತೇನಾ? ಮನುಜನ ವಿಪರೀತಗಳನ್ನೆಲ್ಲ ಅಳಿಸಿ ಪ್ರಕೃತಿ ತನ್ನತನದ ಪ್ರೀತಿ ಉಳಿಸಿ ಹರಸಿ, ಹಾಡುವ ಹಕ್ಕಿಗಳೆಲ್ಲ ಹಾರುತಿವೆ ಮನಸಾರೆ ಖುಷಿಯಾಗಿ, ನಭದ ನೀಲಿಯಲಿ ನೀಲವಾಗಿ, ಬೀಸುವ ತಂಪೆಲರಿಗು ಬಂದಿದೆ ಅಭಿಮಾನ, ನಾ ನಾಗಿಹೆನೆಂಬ ಸಮ್ಮಾನ, ಹರಿವ ನದಿಯದು ಈಗ ಶುದ್ದ ಸ್ಪಟಿಕವಂತೆ, ಝುಳು ಝುಳು ನಿನಾದಕದು ಗೆಜ್ಜೆ ಕಟ್ಟಿ ಸಡಗರಿಸುತಿಹದಂತೆ, ಪ್ರಾಣಿ ಪಕ್ಷಿಗಳೆಲ್ಲ ಸೇರಿ ನಡೆಸಿದೆ ವನಮೋಹತ್ಸವ, ಮರೆತು  ಮಾನವನ ದಬ್ಬಾಳಿಕೆಯ ರಣೋತ್ಸವ, ಪಕೃತಿಯ ಈ ಉತ್ಸವ ನಿತ್ಯೋತ್ಸವವಾಗಲಿ, ಪರಿಸರದಲಿ ಸದಾ ಶುದ್ದತೆಯ ಹಸಿರು ತೂಗಲಿ. *****

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಕನಸು ಶ್ವೇತಾ ಮಂಡ್ಯ ದಿಟ್ಟಿಸುತ ನೀ ನನ್ನ ತುಸುವೇ ಒತ್ತರಿಸಿ ಬಂಧಿಸಿ ಬಾಹುವಿನೊಳು … ನಿನ್ನೊಲವಿನ ಗಾಳಿಯೊಳು ಸುಳಿದಾಡಿದ ಮುಂಗುರಳ ಮೆಲ್ಲನೆ ಸರಿಸಿ…. ರವಾನಿಸಿ ಎನ್ನೆದೆಗೆ ನಿನ್ನೊಲುಮೆ ನಿಂತ ನೆಲವನೆ ಮರೆಸಿ ಹರಸಿ ಅನೂಹ್ಯ ಪ್ರೀತಿ… ಭಾವದ ಮಳೆಯಲಿ ನೆನೆ ನೆನಸಿ ಅವಿಚ್ಛಿನ್ನ ಅನುಭಾವದ ಸಾಂಗತ್ಯ ಕನಸಲಷ್ಟೇ ನಿನ್ನೊಂದಿಗೆ ಒಂದಾಗಿಸಿದೆ. ******

ಕಾವ್ಯಯಾನ Read Post »

ಇತರೆ

ಮಕ್ಕಳ ವಿಭಾಗ

ಗುಬ್ಬಚ್ಚಿ ಮಲಿಕಜಾನ್ ಶೇಖ್  ಒಂದು ಸುಂದರ ಕಾಡು. ಅಲ್ಲೊಂದು ಸಿಹಿ ನೀರಿನ ಹೊಂಡ. ಅದರ ದಂಡೆಗೆ ಆಲದ ಮರ, ಅದರ ಕೆಳಗಿದ್ದ ಜಾಲಿ ಮರವು ನೀರಿನತ್ತ ಬಾಗಿತ್ತು. ಅದರ ಟೊಂಗೆಗೆ ಒಂದು ಗುಬ್ಬಚ್ಚಿ ಗೂಡು ಕಟ್ಟಿಕೊಂಡು ಮಕ್ಕಳ ಜೊತೆ ವಾಸವಿತ್ತು. ಆ ಆಲದ ಮರದ ಮೇಲೆ ಕಾಗೆಗಳ ಗ್ಯಾಂಗು. ಅವರಲ್ಲಿ ಸಭ್ಯ ಕೋಗಿಲೊಂದು ವಾಸವಿತ್ತು.            ಗುಬ್ಬಚ್ಚಿಗೆ ಶಿಸ್ತು ಮತ್ತು ಸ್ವಚ್ಛತೆ ಬಹಳ ಇಷ್ಟ. ಅರುಣೋದಯದ ಮುಂಚೆ ಗೂಡಿನ ಹೊರ ಬಂದು ದೂರ ಹೋಗಿ ಶೌಚ ಮಾಡಿ, ಚಿಲಿಪಿಲಿ ಗಾನದಿ ಮರದಿಂದ ಮರಕ್ಕೆ ಜಿಗಿಯುತ್ತಾ, ನಲಿಯುತ್ತಾ… ಹೊಂಡಕ್ಕೆ ಸ್ನಾನಕ್ಕಾಗಿ ಹೋಗುತಿತ್ತು. ಸ್ನಾನ ಮಾಡಿ ಸೂರ್ಯನ ಎಳೆಯ ಬಿಸಿಲಿನಲ್ಲಿ ಸ್ವಲ್ಪ ಹೊತ್ತು ಕೂತು, ಬುರ್ರೆಂದು ಗೂಡಿಗೆ ಬಂದು ಮಕ್ಕಳ ನೋಡಿ ತಿಂಡಿ ಹುಡುಕಲು ಭರ್ರೆಂದು ಹೋಗುತ್ತಿತ್ತು.         ಅತ್ತ ಕಾಗೆಗಳ ದಿನಚರಿ ಬೇರೇನೆ. ಎಲ್ಲರಿಗಿಂತ ತಡವಾಗಿ ಎದ್ದು ಕಾವ್ ಕಾವ್ ಗದ್ದಲ ಸುರು ಇಡುತ್ತಿದ್ದವು. ಅಲ್ಲಿ, ಇಲ್ಲಿ ಎಲ್ಲಿಯೂ ಸಿಕ್ಕ ಸಿಕ್ಕಲ್ಲಿ ಶೌಚ ಮಾಡುತ್ತಿದ್ದವು. ಗಾನವಿಲ್ಲ, ಸ್ನಾನವಿಲ್ಲ . ನೇರ ಹಳಸಿದ ಅನ್ನ ಅಥವಾ ಸತ್ತ ಪ್ರಾಣಿ ತಿನ್ನಲು ಅವರ ಗ್ಯಾಂಗು ಭರ್ರೆಂದು ರವಾನೆ ಆಗುತಿತ್ತು. ಅವೆಲ್ಲಾ ಹೋದ ನಂತರ ಕೋಗಿಲೆ ಮಾತ್ರ ಗುಬ್ಬಚ್ಚಿಯಂತೆ ಸ್ವಚ್ಛ ಸ್ನಾನ ಮಾಡಿ ಮಾವಿನ ಅಥವಾ ಹುಣಸೆ ಚಿಗುರು ತಿಂದು ಕೂಡುತ್ತಿತ್ತು.               ಒಂದು ದಿನ ಗುಬ್ಬಚ್ಚಿ ಮಕ್ಕಳ ತಿಂಡಿಗಾಗಿ ಹೋದಾಗ ಕಾಗೆಗಳೆಲ್ಲಾ ಕೂಡಿ ದೊಡ್ಡ ರಂಪಾಟವನ್ನೆ ಮಾಡಿದ್ದವು. “ಕೋಗಿಲೆ ನಮ್ಮ ಜಾತಿಯವಳಲ್ಲಾ, ಅವಳಿಗೆ ನಮ್ಮ ಪರಂಪರೆ ಗೊತ್ತಿಲ್ಲಾ..” ಎಂದು ಹೇಳಿ ಕಾಗೆ ಗ್ಯಾಂಗು ಅದಕ್ಕೆ  ಕಾಡಿ, ಕಚ್ಚಿ ಹಾರಿ ಹೋಗಿತ್ತು. ಅಷ್ಟರಲ್ಲಿ ಗುಬ್ಬಚ್ಚಿ ಚುಂಚಿನಲ್ಲಿ ತಿಂಡಿ ತಂದು ಚಿಂವ್ ಚಿಂವ್ ಎಂದು ಬಾಯಿ ತೆರೆದು ಕೂತ ಮಕ್ಕಳ ಬಾಯಿಗೆ ಹಾಕಿದಾಗ ಮಕ್ಕಳು, “ಅಮ್ಮಾ, ಛೀ.. ಥೂ ಏನೋ ವಾಸನೆ,,” ಎಂದವು. ಅದಕ್ಕೂ ವಾಸನೆ ಸಹಿಸದು, ಹೊರಬಂದು ನೋಡಿದರೆ ಅಲ್ಲಿ ಕಾಗೆ ಶೌಚ ಮಾಡಿತ್ತು. ಸಿಟ್ಟು ಬಂತು. ಆದರೆ ಅಲ್ಲಿ ಯಾರು ಇಲ್ಲ. ಸುಮ್ಮನಾಗಿ ಸ್ವತಃ ಕಡ್ಡಿಯಿಂದ ತೆಗೆದು ಹಾಕಿತು. ಆಗ ಅದರ ಗಮನ ಎಲೆಯಲ್ಲಿ ಭಯದಿಂದ ಅವಿತ ಕೋಗಿಲೆಯತ್ತ ಹೋಯಿತು. “ಏನ್ ಕೋಗಿಲಕ್ಕಾ ಹೀಗೆ ಕೂತೆಯಲ್ಲಾ ಏನಾಯಿತು..?” ಎಂದು ಕೇಳಿತು. ಆಗ ಕೋಗಿಲೆ ಅಳುತ್ತಾ, “ಗುಬ್ಬಕ್ಕಾ ಏನ್ ಹೇಳಲಿ ನನ್ನ ಪಾಡು, ಇಷ್ಟು ದಿನ ಸುಮ್ಮನಿದ್ದು ಇಂದು ಒಮ್ಮೇಲೆ ನೀನು ನಮ್ಮ ಜಾತಿಯವಳು ಅಲ್ಲಾ, ಹೋಗು ಇಲ್ಲಿಂದ ಅಂದವು. ನೀನೆ ಹೇಳು ಗುಬ್ಬಕ್ಕಾ,, ನಮ್ಮಮ್ಮಾ ಇಲ್ಲಿ ಮೊಟ್ಟೆ ಇಡುವಾಗ ಇವರ ಜಾತಿ ಕೇಳಿದಳಾ, ಇಲ್ಲವಲ್ಲ.” ಎಂದು ಹೇಳಿತು. ಆಗ “ಇರಲಿ ಬಿಡು ಕೋಗಿಲಕ್ಕಾ, ಹುಚ್ಚು ಕಾಗೆಗಳು ಅವು..” ಗುಬ್ಬಚ್ಚಿ ಸಾಂತ್ವನ ಮಾಡಲು ಕೋಗಿಲೆ, “ಇಲ್ಲ.. ನಾನಿಲ್ಲಿ ಇರುವದಿಲ್ಲಾ, ಸಂಕಟದಲ್ಲಿ ಇವರೆ ನನ್ನ ಹತ್ತಿರ ಬರುತ್ತಾರೆ..” ಹೇಳಿ ಬುರ್ರೆಂದು ಹಾರಿತು.                  ಎಲ್ಲ ಹಕ್ಕಿಗಳು ರವಿ ಮುಳುಗುತ್ತಿದ್ದಂತೆ ಗೂಡು ಸೇರುತಿದ್ದವು. ಆದರೆ ಕಾಗೆಗಳು ಮಾತ್ರ ತಡವಾಗಿ ಬಂದು ಒಂದೆರಡು ತಾಸು ಗಲಭೆ ಮಾಡಿ ಮಲಗುವ ರೂಢಿ. ಕಾಗೆಗಳು ಬಂದ ತಕ್ಷಣ ಗುಬ್ಬಚ್ಚಿ, “ಯಾರು ನನ್ನ ಗೂಡಿನ ಮೇಲೆ  ಶೌಚ ಮಾಡಿದಿರಿ, ಸ್ವಲ್ಪನಾದರೂ ಮಾನ ಮರ್ಯಾದೆ ಇದೆಯಾ ನಿಮಗೆ..?” ಎಂದು ರೇಗುತ್ತದೆ. ಈ ಮಾತು ಕೇಳಿದ ನಾಯಕ ಕಾಗೆ, “ಯಾರು ಗುಬ್ಬಿನಾ, ಲೇ ನೀನು ನನ್ನ ಕೊಕ್ಕಿನಷ್ಟು ಇದ್ದಿಯಾ..? ನನ್ನ ಮುಂದೆ ಮಾತನಾಡುವ ಧೈರ್ಯ ನಿನಗೆ. ನಿಲ್ಲು ನಿನ್ನನ್ನು..” ಅಷ್ಟರಲ್ಲಿ ಇನ್ನೊಂದು ಕಾಗೆ, “ಇರಲಿ, ಶಾಂತ ಆಗಣ್ಣಾ, ಬೇಡಾ. ಅದು ನಮಗೆಲ್ಲಿ ಸಾಲುತ್ತದೆ, ಲೇ ಗುಬ್ಬಿ ನಾನೇ ಶೌಚ ಮಾಡಿದ್ದು, ಏನು ಇವಾಗ..?” “ಅಲ್ಲಪ್ಪಾ ಕಾಗೆಗಳಿರಾ, ನೀವೆಲ್ಲಾ ಹೀಗೆ ಹೊಲಸು ತಿಂದು ಸುತ್ತಮುತ್ತ ಗಲೀಜು ಮಾಡಿದರೆ ಹೇಗೆ..? ನಿಮ್ಮ ಕ್ರೂರ ಕರ್ಮ ನಾಳೆ ನಮ್ಮ ಇಡಿ ಪಕ್ಷಿ ಸಂಕುಲಕ್ಕೆ ಸಂಕಟ ತರಬಹುದು..” ಎಂದು ಗುಬ್ಬಚ್ಚಿ ಬುದ್ಧಿ ಮಾತು ಹೇಳಲು ಹೋದಾಗ, ಕಾಗೆಗಳೆಲ್ಲಾ ಗಹ ಗಹಿಸಿ ನಗುತ್ತಾ, “ನಮಗೆ ಬುದ್ಧಿ ಮಾತು ಹೇಳಬೇಡ. ನೀನ್ಯಾರು,,? ನಮ್ಮ ರಕ್ಷಣೆಗೆ ದೇವಿ ಕಾಗಮ್ಮಾ ಇದ್ದಾಳೆ..” ಎಂದವು. ಆಗ ಗುಬ್ಬಚ್ಚಿ ಸುಮ್ಮನೆ ಹೋಗಿ ಮಕ್ಕಳೊಂದಿಗೆ ಮಲಗುತ್ತದೆ.              ರಾತ್ರಿ ಪೂರ್ಣ ಮಳೆ. ರವಿ ಬಂದಿದ್ದು ಕಾಣುತ್ತಿರಲಿಲ್ಲ, ಅಷ್ಟು ಧಾರಾಕಾರ ಮಳೆ. ಮಧ್ಯಾಹ್ನ ಕಾಗೆಗಳಿಗೆ ಹಸಿವೆಯಾಗಿ ಜಿಟಿ ಜಿಟಿ ಮಳೆಯಲ್ಲಿಯೆ ರಾತ್ರಿ ತಂದ ಕೊಳೆತ ಮೌಂಸವನ್ನು ತಿನ್ನಲು ಪ್ರಾರಂಭ ಮಾಡುತ್ತವೆ. ಅದರಲ್ಲಿ ಒಂದು ಕಾಗೆ ಗುಬ್ಬಚ್ಚಿಯನ್ನು ತೆಗಳುತ್ತಾ, “ಏ ಸಾಧು ಗುಬ್ಬಿ, ನಿನ್ನೆ ರಾತ್ರಿ ಬಹಳ ಮಾತನಾಡುತಿದ್ದಿಯಲ್ಲಾ ಈಗೇನು ತಿನ್ನುತ್ತೀಯಾ, ಚಳಿ ಇದೆ, ಸಾಯುತ್ತಿ ಹಿಡಿ ತಿನ್ನು” ಎಂದು ಕೊಳೆತ ಮೌಂಸದ ತುಣುಕು ಗೂಡಿನತ್ತ ಬೀಸಿತು.          ಕಾಗೆಯ ಬಾಯಿಗೆ ಏಕೆ ಸಿಕ್ಕಬೇಕೆಂದು ಗುಬ್ಬಚ್ಚಿ ಗೂಡು ಬಿಟ್ಟು ಬರಲಿಲ್ಲ. ಗೂಡಿನಲ್ಲಿದ್ದ ಸ್ವಲ್ಪ ಕಾಳು ಮಕ್ಕಳಿಗೆ ತಿನ್ನಲು ಕೊಟ್ಟು ತಾನು ಎರಡು ದಿನ ಉಪವಾಸ ಮಾಡಿತು. ಅದಕ್ಕೆ ಗೊತ್ತಿತ್ತು ಸಂಕಟ ಬಹಳ ದಿನ ಇರುವದಿಲ್ಲ. ಮಾರನೆಯ ದಿನ ಮಳೆ ನಿಂತಿತು. ಏನಾದರೂ ತಿನ್ನಲು ತರಬೇಕೆಂಬ ವಿಚಾರದಲ್ಲಿ ಹೊರಗೆ ಬಂದು ನೋಡಿದರೆ, ಕಾಗೆಗಳು ಅದರ ಗೂಡಿನ ಸುತ್ತಲೆಲ್ಲಾ ಶೌಚ ಮಾಡಿ, ಎಲುಬು ತೂಗು ಹಾಕಿದ್ದವು. ಗುಬ್ಬಚ್ಚಿಗೆ ಭಯವಾಯಿತು. ಇಲ್ಲಿಯೆ ಇದ್ದರೆ ಈ ಕಾಗೆಗಳು ಬದುಕಲು ಬಿಡುವದಿಲ್ಲ ಎಂದು ತಿಳಿದು ಮಕ್ಕಳನ್ನು  ತನ್ನ ರೆಕ್ಕೆ ಮೇಲೆ ಕೂಡಿಸಿಕೊಂಡು ಮತ್ತೊಂದು ಕಾಡಿಗೆ ಬುರ್ರನೆ ಹಾರಿತು.               ಗುಬ್ಬಚ್ಚಿ ಹೇಳುತಿತ್ತು, ಕೇಳುತಿತ್ತು ಆದರೆ ಈಗ ಮಾತ್ರ ಕಾಗೆಗಳಿಗೆ ಹೇಳುವರಿಲ್ಲಾ, ಕೇಳುವವರಿಲ್ಲಾ. ಅವುಗಳ ಕ್ರೂರತೆ ಮತ್ತಷ್ಟು ಹೆಚ್ಚಾಯಿತು. ಸಿಕ್ಕಿದೆಲ್ಲಾ, ಸತ್ತಿದೆಲ್ಲಾ ತಿನ್ನಲು ಪ್ರಾರಂಭ ಮಾಡಿದವು. ಒಮ್ಮೆ ದೂರ ದೇಶದ ಬಾವುಲಿಗಳು ಅಲ್ಲಿಗೆ ಬಂದು ಸತ್ತು ಬಿದ್ದಿದ್ದವು. ಸಂಜೆ ಹೊತ್ತು ಮನೆಯತ್ತ ಬರುವಾಗ ಕಾಗೆಗಳ ನಾಯಕನ ಕಣ್ಣು ಅತ್ತ ಬಿದ್ದಾಗ ಸಂತೋಷದಿಂದ ತಕ್ಷಣ ಎಲ್ಲ ಕಾಗೆಗಳನ್ನು ಕರೆದು ಬೇಟೆ ಎತ್ತಿಕೊಂಡು ಮರದತ್ತ ಒಯ್ಯಲು ಹೇಳಿತು. ಅಂದು ಕಾಗೆಗಳ ಸಂಭ್ರಮ ಹೇಳತೀರದು, ಅವುಗಳ ಕಿರುಚಾಟ ಕಾಡು ತುಂಬಿತ್ತು. ಇದನ್ನು ನೋಡಿದ ಎರಡು ಮುದಿ ಕಾಗೆ, “ಏ,, ಏನು ತಿನ್ನುತ್ತಿದ್ದೀರಿ.. ಛೀ, ನಾವು ಎಂದಿಗೂ ಇಂತಹ ಪ್ರಾಣಿಗಳನ್ನು ತಿಂದಿಲ್ಲಾ, ಮೂರ್ಖಗಳಿರಾ.. ನಮಗೆಲ್ಲಾ ದೊಡ್ಡ ವಿಪತ್ತು ಕಾದಿದೆ..” ಎಂದು ಹೇಳಿ ಅವು ಸಹ ಅಲ್ಲಿಂದ ಭರ್ರೆಂದು ಹಾರಿ ಹೋದವು.                        ಮರುದಿನ ನೋಡಿದರೆ ಎಲ್ಲ ಕಾಗೆಗಳು ಅಲ್ಲಲ್ಲೆ ಸಾಯಲು ಪ್ರಾರಂಭ ಮಾಡಿದವು. ಅವುಗಳಿಗೆ ಬಾವುಲಿಯ ರೋಗ ತಗಲಿತ್ತು. ಆ ಮಹಾಮಾರಿ ಅತ್ಯಂತ ವೇಗವಾಗಿ ಕಾಡಿನ ತುಂಬೆಲ್ಲಾ ಪಸರಿಸಿತು. ಎಲ್ಲ ಪಕ್ಷಿಗಳ ಪ್ರಾಣಕ್ಕೆ ಕುತ್ತು ಬಂತು. ಇಡೀ ಕಾಡು ಹಕ್ಕಿ ಇಲ್ಲದಂತೆ ಆಗುವ ಭಯಾನಕ ಪರಿಸ್ಥಿತಿ ನಿರ್ಮಾಣವಾಯಿತು. ಇದು ಆ ಮುದಿ ಕಾಗೆಗಳಿಗೆ ಗೊತ್ತಾಯಿತು. ಒಂದು ಕಾಲದಲ್ಲಿ ಇಂತಹ ಮಹಾಮಾರಿ ಬಂದಾಗ ಕೋಗಿಲೆ ತಂದ ಸಂಜೀವಿನಿ ಕಡ್ಡಿಯಿಂದ ಪಕ್ಷಿ ಸಂಕುಲ ಉಳಿದಿದ್ದು ಅವುಗಳ ನೆನಪಿಗೆ ಬಂತು. ಆದರೆ “ಕೋಗಿಲೆ ನಮ್ಮ ಮೇಲೆ ಸಿಟ್ಟಾಗಿ ಹೋಗಿದೆ ಅದನ್ನು ನಾವು ಕೇಳಿದರೆ ಕೊಡುವದಿಲ್ಲ,, ಏನು ಮಾಡುವುದೆಂದು..” ಮುದಿ ಕಾಗೆ ಚಿಂತಿಸಲು ಮತ್ತೊಂದು ಕಾಗೆ, “ಅದರ ಪ್ರೀತಿಯ ಗೆಳತಿ ಗುಬ್ಬಚ್ಚಿ ಕೇಳಿದರೆ ಇದಕ್ಕೆ ಸಹಕರಿಸಬಹುದು…” ಎಂಬ ವಿಚಾರದಲ್ಲಿ ಗುಬ್ಬಚ್ಚಿ ಹುಡುಕಿ ಮತ್ತೊಂದು ಕಾಡಿಗೆ ಹೊರಟವು.                ಕೊನೆಗೆ ಬಹಳ ಪರಿಶ್ರಮದಿಂದ ಗುಬ್ಬಚ್ಚಿಯನ್ನು ಹುಡುಕಿ, ಕ್ಷಮೆ ಕೇಳಿ, “ಗುಬ್ಬಕ್ಕಾ, ನಮ್ಮ ಕಾಗೆಗಳು ಮಾಡಿದ ತಪ್ಪಿನಿಂದ ನಾವೆಲ್ಲರೂ ದೊಡ್ಡ ಸಂಕಟದಲ್ಲಿ ಸಿಲುಕಿದ್ದೇವೆ. ದಯವಿಟ್ಟು ನಮಗೀಗ ಸಂಜೀವಿನಿ ಕಡ್ಡಿ ಬೇಕು. ನೀನು ಸಹಕರಿಸಿದರೆ ಕೋಗಿಲೆ ನಮಗೆ ಕೊಡುತ್ತದೆ. ನಮ್ಮೆಲ್ಲರ ಪ್ರಾಣ ಉಳಿಯುತ್ತದೆ..” ಎಂದು ವಿನಂತಿಸಿ ಕೊಂಡವು. ತಕ್ಷಣ ಗುಬ್ಬಚ್ಚಿ ಕೋಗಿಲಕ್ಕನ ಹತ್ತಿರ ಹೋಗಿ ಎಲ್ಲ ಪರಿಸ್ಥಿತಿಯನ್ನು ಹೇಳುತ್ತಾಳೆ. ‘ಅಯ್ಯೋ..! ದೊಡ್ಡ ಸಂಕಟವೇ ಉದ್ಭವ ಆಗಿದೆಯಲ್ಲಾ..” ಎಂದು ಜೀವ ಪರ್ವತದ ಮೇಲೆ ಹೋಗಿ ಸಂಜೀವಿನಿ ಕಡ್ಡಿಯನ್ನು ತಂದು ಆ ಮಹಾಮಾರಿಯಿಂದ ಪಕ್ಷಿ ಸಂಕುಲವನ್ನು ಬದುಕಿಸುತ್ತದೆ. ಎಲ್ಲ ಹಕ್ಕಿಗಳು ಕೋಗಿಲೆಗೆ ಧನ್ಯವಾದ ಹೇಳುತ್ತವೆ. ಮುಂದೆ ಎಲ್ಲ ಹಕ್ಕಿ ಸಭ್ಯರಾಗಿ, ಪ್ರೀತಿಯಿಂದ ಒಬ್ಬರನೊಬ್ಬರು ವಿಶ್ವಾಸದಲ್ಲಿ ಕಾಣುತ್ತಾ ಬದುಕುತ್ತವೆ. *****

ಮಕ್ಕಳ ವಿಭಾಗ Read Post »

You cannot copy content of this page

Scroll to Top