ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ಮೊದಲ ಕವನ

ಮೊದಲ ಕವಿತೆಯ ರೋಮಾಂಚನ ಡಾ.ಪ್ರೇಮಲತ ಬಿ. ತುಮಕೂರಿನ ಮಾಧ್ಯಮಿಕ ಶಾಲೆಯಲ್ಲಿದ್ದೆ. ಅತ್ಯಂತಗಟ್ಟಿ  ಚರ್ಚಾಪಟು ಅಂತ ಹೆಸರಾಗಿದ್ದೆ. ಆದಾಗ  ಧಾರವಾಡದಲ್ಲಿ ನಡೆಯಲಿದ್ದ ಎರಡನೇ ರಾಜ್ಯಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನದ ಮಕ್ಕಳ ಗೋಷ್ಠಿಯ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ನಡೆಯುತ್ತಿತ್ತು. ಆಯ್ಕೆದಾರರು ಇಡೀ ಕರ್ನಾಟಕದ ಎಲ್ಲ ನಗರಗಳಿಗೂ ಭೇಟಿ ಕೊಟ್ಟು ಮಕ್ಕಳನ್ನು ಹುಡುಕುತ್ತಿದ್ದರು. ಜಗದೀಶ ಮಳಗಿ ಎನ್ನುವವರು ನಮ್ಮ ಶಾಲೆಗೂ ಬಂದರು.ಕೊಟ್ಟ ವಿಚಾರದ ಬಗ್ಗೆ ಪ್ರಭಂದವನ್ನು ಬರೆದು ದೊಡ್ಡದೊಂದು ಭಾಷಣ ಮಾಡಿದ್ದೆ. ಅದಾದ ನಂತರ ಏನೂ ಹೇಳದೆ ಅವರು ಹೊರಟುಹೋದರು.ಒಂದೆರಡು ವಾರದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರು ನನ್ನನ್ನೇ ಅಧ್ಯಕ್ಷಳನ್ನಾಗಿ  ಮಾಡಲು ಆಯ್ಕೆದಾರರ ಸಮಿತಿ ನಿರ್ಧರಿಸಿದ್ದಾರೆಂದು ತಿಳಿಸಿದರು. ಧಾರವಾಡದ ಕಲಾಮಂದಿರದಲ್ಲಿ ನಡೆದ ಸಮ್ಮೇಳನದಲ್ಲಿಸಿದ್ದಯ್ಯ ಪುರಾಣಿಕರು, ಶಿವರಾಮ ಕಾರಂತರು,ಸಿಸು ಸಂಗಮೇಶರು, ಮುಖ್ಯಮಂತ್ರಿ ಬೊಮ್ಮಾಯಿ ಹೀಗೆ ದೊಡ್ಡ ದೊಡ್ಡ ಹೆಸರಿನ ಜನರು ಭಾಗವಹಿಸಿದ್ದರು.ಅವರೆಲ್ಲರ ಎದುರು ಭರ್ಜರಿ ಭಾಷಣ ಮಾಡಿ ಎರಡೆರಡು ಬಾರಿ ಕರತಾಡನ ಗಿಟ್ಟಿಸಿಕೊಂಡೆ. ಮಕ್ಕಳ ಸಾಹಿತ್ಯದ ಮಹತ್ವ ಮತ್ತು ಅದನ್ನು ಗಂಗಾನದಿಗೆ ಹೋಲಿಸಿ ಅದು ಕಲುಷಿತಗೊಂಡರೆ ಆಗುವ ಅನಾಹುತಗಳ ಬಗ್ಗೆಯೆಲ್ಲ ಮಾತಾಡಿದ್ದ ನೆನಪು. ಈ ಅನುಭವದ ಮತ್ತು ಒಡನಾಟದ ಕಾರಣ ಬರೆಯಬೇಕೆನ್ನುವ ಹುನ್ನಾರ ಮೂಡಿತು. ಆ ಹೊತ್ತಿಗೆ ಹಲವು  ಪ್ರಭಂದ ಸ್ಪರ್ಧೆಗಳಲ್ಲಿ ಬಹುಮಾನ ಗಳಿಸಿದ್ದನ್ನು ಬಿಟ್ಟರೆ ಸ್ವತಃ ನಾನು ಬರೆದ ಸಾಹಿತ್ಯ ಸೊನ್ನೆಯಾಗಿತ್ತು. ನಂತರ ಕೊಟ್ಟ ಹಲವಾರು ಪತ್ರಿಕಾ ಸಂದರ್ಶನಗಳಲ್ಲಿ ಹಾಗಂತಲೇ ಹೇಳಿಕೊಂಡೆ. ೧೩ ವರ್ಷದ ನನ್ನ ಪ್ರಕಾರ ಅಲ್ಲಿ ಭಾಗವಹಿಸಿದ್ದ ಬೇರೆ ಮಕ್ಕಳೆಲ್ಲ ಬರೆದಿರುತ್ತಾರೆ ಎಂದೇ ಆಗಿತ್ತು. ಆದರೆ, ಅದು ಸತ್ಯವಾಗಿರಲಿಲ್ಲ. ಅದೇ ಗೀಳಿನಲ್ಲಿ ಏನಾದರೂ ಬರೆಯುವ ಉತ್ಸಾಹ ನನ್ನಲ್ಲಿ ಮೂಡಿತು. ನನ್ನ ವಯಸ್ಸಿನ ಕಾರಣ ಸೀರಿಯಸ್ಸಾದದ್ದೇನಾದರೂ ಬರೆದರೆ ಪ್ರಕಟಿಸುವುದಿಲ್ಲ ಎನ್ನುವ ಗುಮಾನಿಯೂ ಇತ್ತು.ದೊಡ್ಡವರಿಗಾಗಿ ಬರೆಯುವ ಪ್ರಭುದ್ಧತೆಯಿರಲಿಲ್ಲ. ನನ್ನ ವಯಸ್ಸಿನವರಿಗೆ ಅಂತ ಮಕ್ಕಳ ಬರಹದ ನಿಗಧಿತ ಪತ್ರಿಕಾ ವಿಭಾಗಗಳಿರಲಿಲ್ಲ. ಅಥವಾ ನನಗೆ ತಿಳಿದಿರಲಿಲ್ಲ. ಚೆನ್ನಾಗಿ ಬರೆದಿದ್ದೇನೆಯೋ ಇಲ್ಲವೋ ಎನ್ನುವ ಬಗ್ಗೆ ತಿಳಿಹೇಳಲು ಯಾವ ಮಾರ್ಗದರ್ಶಕರಿರಲಿಲ್ಲ. ಈ ಕಾರಣಕ್ಕೆ ನನಗಿಂತ ಚಿಕ್ಕ ಮಕ್ಕಳಿಗೆಂದು ’ ತಿಂಡಿ’ ಎನ್ನುವ ಪದ್ಯ ಬರೆದು ತರಂಗ ವಾರಪತ್ರಿಕೆಗೆ ಕಳಿಸಿದೆ. ಬಗೆ ಬಗೆಯ ತಿಂಡಿಗಳನ್ನು ಆಸ್ವಾದಿಸುತ್ತ ಸಂತೋಷಿಸುವಾಗ ತಟ್ಟನೆ ಅಮ್ಮನ ಕೂಗಿನಿಂದ ಕೊನೆಯಾಗುವ ಕನಸಿನ ಬಗೆಗಿನ ಪದ್ಯ.ನಂತರ ಮರೆತೂ ಬಿಟ್ಟೆ. ಆದರೆ ಕೆಲ ವಾರಗಳಲ್ಲಿ ಅದು ಪ್ರಕಟವಾಗಿ ಬಿಟ್ಟಿತು. ಮಕ್ಕಳಿಗಾಗಿ ಸಾಹಿತ್ಯದ ಒಂದು ಪುಟ್ಟ ತುಣುಕನ್ನು ಸೃಷ್ಟಿಸಿಬಿಟ್ಟಿದ್ದೆ! ನಿಜಕ್ಕೂ ನನ್ನ ಪಾತ್ರವನ್ನು ನಿಭಾಯಿಸಿದ ಗೆಲುವು ಮೂಡಿತು.  ಅದು ನನ್ನ ಪ್ರಥಮ ಪದ್ಯವಾದರೂ ನಾನು ಕವಿಯಾಗಿದ್ದು ಸುಳ್ಳು.ನಂತರ ಬರೆಯಲೂ ಇಲ್ಲ. ಕಾಲೇಜಿಗೆ ಬಂದಾಗ ಬರೆದ ಕವನಗಳು ಕನ್ನಡ ಪ್ರಭದಲ್ಲಿ, ವಾರ್ಷಿಕೋತ್ಸವ ಪತ್ರಿಕೆಗಳಲ್ಲಿ ಪ್ರಕಟವಾದವು. ತುಷಾರದ  ಚಿತ್ರಕವನ ಸ್ಪರ್ಧೆಯಲ್ಲಿ ಬಹಮಾನ ಗಳಿಸಿದವು.ಆದರೆ,ಆಗೆಲ್ಲ ಹೆಚ್ಚಾಗಿ ತೊಡಗಿಸಿಕೊಂಡಿದ್ದು ಲೇಖನಗಳ ಬರವಣಿಗೆಯಲ್ಲಿ. ಇಂಗ್ಲೆಂಡಿಗೆ ಬಂದ ನಂತರ ಮತ್ತೆ ಹತ್ತಾರು ವರ್ಷ ಎಲ್ಲ ನಿಂತಿತು. ಇತ್ತೀಚೆಗಿನ ಹಲವಾರು ಕವನಗಳನ್ನು ಬರೆದು ಪ್ರಕಟಿಸಿದ್ದೇನಾದರೂ ನನ್ನನ್ನು ನಾನು ಕವಿಯೆಂದು ಕರೆದುಕೊಳ್ಳಲಾರೆ. ನಾನು ಸಾಹಿತ್ಯದ ವಿದ್ಯಾರ್ಥಿಯಲ್ಲ.ಭೋದಕಳಲ್ಲ. ಆದರೆ ಸ್ವಚ್ಚ , ಸರಳ ಕವಿತೆಗಳನ್ನು ಬರೆದಾಗ ಸಿಗುವ ಸೃಜನಾತ್ಮಕ ಆನಂದ ಅಷ್ಟಿಷ್ಟಲ್ಲ.ಅದರಲ್ಲೂ ನನ್ನಂತ ಎಳಸು, ಸರಳ ಕವಿಗಳ ಆನಂದ ಅತ್ಯಂತ ನವಿರಾದದ್ದು. ಬೃಹತ್ತಾದದ್ದು ಕೂಡ. ಪ್ರಥಮ ಪದ್ಯ ಕೊಟ್ಟ ನವಿರು ಕಚಗುಳಿ, ಹೆಮ್ಮೆ, ಅಲ್ಪ-ಸ್ವಲ್ಪ ಆತ್ಮವಿಶ್ವಾಸ ಇವಕ್ಕೆಲ್ಲ ನಾನು ಅತ್ಯಂತ ಋಣಿ.ಅಲ್ಲಿಂದ ಮುಂದಕ್ಕೆ ಹವ್ಯಾಸೀ ಬರಹಗಾರಳಾಗಲು ಆ ಸಾಹಿತ್ಯ ಸಮ್ಮೇಳನ ಮತ್ತು  ತರಂಗದ ಪುಟ್ಟ ಪದ್ಯಗಳೇ ಕಾರಣಗಳಾಗಿವೆ. *****************************

ಮೊದಲ ಕವನ Read Post »

ಇತರೆ

ಬಾಲ್ಯ ಮರುಕಳಿಸಿದಂತೆ

ಮೊದಲ ಕವಿತೆಯ ರೋಮಾಂಚನ ಶಿವಲೀಲಾ ಹುಣಸಗಿ .   ಅದೊಂದು ಸಂಜೆ ನಮ್ಮ ಹೈಸ್ಕೂಲ್ ನ ಸಭಾಭವನದಲ್ಲಿ ಒಂದು ಕಾರ್ಯಕ್ರಮ.ಚುಟುಕು ಬ್ರಹ್ಮ ದಿನಕರ ದೇಸಾಯಿ  ಯವರ ಸಾಹಿತ್ಯ ವಿಮರ್ಶೆ ಹಾಗೂ ಕವಿಗೋಷ್ಠಿ ಎರ್ಪಡಿಸಿದ್ದರು.ಆಸಕ್ತಿ ಇರುವವರು ಭಾಗವಹಿಸಲು ತಿಳಿಸಲಾಗಿತ್ತು.ನಾನು ಆಗ ಎಂಟನೇ ತರಗತಿ ವಿದ್ಯಾರ್ಥಿ. ನನ್ನ ತರಗತಿ‌ಯ ಗೆಳತಿಯರಿಗೆ ಪ್ರಾರ್ಥನೆ ಮಾಡಲು ಕರೆದಿದ್ದರು.ನನಗೆ ಹೊಸ ಅನುಭವ.ಹೇಗೆ ನಡೆಯುತ್ತದೆ ? ಎಂಬ ಕುತೂಹಲ.‌ಸಭಾಭವನದಲ್ಲಿ ಹಿರಿಯರು,ಕಿರಿಯರ ಇರುವುದನ್ನು ಖಾತ್ರಿಪಡಸಿಕೊಂಡು.ಒಳಹೋಗಲು ಧೈರ್ಯವಿರದೆ ಬಾಗಿಲ ಸಂದಿಯಿಂದ ನೋಡುತ್ತಿದ್ದೆ. ಆಗ ಯ್ಯಾರೋ ಏನಮ್ಮಾ…ಎನ್ ಮಾಡತಿದ್ದಿಯಾ? ಒಳಗೆ ಹೋಗಿ ಕುತಗೋ..ಸಾಹಿತ್ಯದ ವಿಚಾರ ತಿಳಿದುಕೋ ನಿನಗೆ ಓದಲು ಆಸಕ್ತಿ ಇದೆಯಾ? ಅಂದಾಗ ನಾನು ಒಂದು ಕ್ಷಣ ಹೆದರಿದ್ದೆ. ತಲೆಯೆತ್ತಿ ನೋಡಿದೆ ಅವರ ಪರಿಚಯ ನನಗಿಲ್ಲ. ನೀಳಕಾಯದ ವ್ಯಕ್ತಿ ನೀಳಕೂದಲು ಅಜಾನುಬಾಹು ಹೆದರಿಕೆಯಾಗಿತ್ತು.ಅವರು ಆಡಿದ ಮೃದು ಮಾತುಗಳಿಗೆ ತಲೆದೂಗಿ ಹೌದು ಸರ್ ಎಂದೆ.ನಡಿ ಒಳಗೆ ಹೊರಗೆ ನಿಂತು ಎನ್ಮಾಡತಿಯಾ? ಎಂದಾಗ ತಲೆಯಲ್ಲಾಡಿಸಿ ಮಾಸಿದ ಬಣ್ಣದ ಲಂಗ ಕುಪ್ಪುಸ ಧರಿಸಿದ್ದರಿಂದ ಒಳಬರಲು ಸಂಕೋಚವೆನಿಸಿ.ಹಿಂದಿನ ಬೆಂಚಲ್ಲಿ ಮೆಲ್ಲಗೆ ಕುಳಿತೆ.ನನ್ನೊಟ್ಟಿಗೆ ಬಂದ ವ್ಯಕ್ತಿಯನ್ನು ಎಲ್ಲರೂ ಬಲು ಪ್ರೀತಿಯಿಂದ ಸ್ವಾಗತಿಸಿ ಅವರನ್ನು ವೇದಿಕೆಗೆ ಆಹ್ವಾನ ನೀಡಿದ್ದನ್ನು ಕಂಡು ಇನ್ನು ಭಯವಾಯಿತು.ನಾನು ಹೊಸ ಅಂಗಿ ಹಾಕಿ ಬರಬಹುದಿತ್ತು ಅನ್ನಿಸಿತು. ಕಾರ್ಯಕ್ರಮ ಸುಂದರವಾಗಿ ನಡೆಯುತ್ತಿತ್ತು.ಕವಿಗೋಷ್ಠಿಗೆ ಬಂದ ಎಲ್ಲರ ಕವಿತೆಗಳನ್ನು ಆಸಕ್ತಿಯಿಂದ ಕೇಳುತ್ತ.ನಾನು ಅಲ್ಲೆ ಒಂದು ಕವನ ಗೀಚಿದ್ದೆ.ನಾನು ಬರೆಯುವುದನ್ನು ಆವ್ಯಕ್ತಿ ಗಮನಿಸುತ್ತಿದ್ದರು.ಅವರು ನಮ್ಮೂರಿನ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಶ್ರೀ ಮೋಹನ ಕುರುಡಗಿ ಅಂತ ಗೊತ್ತಾಯಿತು.ಅವರ ಮಾತುಗಳು ನನ್ನ ಮನದ ಮೇಲೆ ತುಂಬಾನೆ ಪ್ರಭಾವ ಬೀರಿತ್ತು.ಅವರ ಪ್ರೇರಣೆಯ ಮೂಲಕ ನನ್ನ ಭಾವನೆಗಳನ್ನು ಕವಿತೆಯಾಗಿಸುವ ಪ್ರಯತ್ನ ಮಾಡಲು ಹುರಿದುಂಬಿಸಿದ ವ್ಯಕ್ತಿ ಮೊದಲ ಗುರು ಎಂದರೆ ತಪ್ಪಾಗಲಾರದು.ನಾ ಬರೆದ ಮೊದಲ ಕವಿತೆಯನ್ನು ಅವರ ಮುಂದೆ ಹಿಡಿದಾಗ,ನನ್ನನ್ನೊಮ್ನೆ ನೋಡಿ ನಕ್ಕು ಓದಿ ಅವರು ಖುಷಿ ಪಟ್ಟಿದ್ದರು. ಅಡ್ಡಿಯಿಲ್ಲ ಪ್ರಯತ್ನ ಮಾಡಿರುವೆ.ಇನ್ನು ಚೆನ್ನಾಗಿ  ಬರಿಯಲು ಹೆಚ್ಚು ಓದು ಎಂದರು. ನನಗೆ ಹಿಗ್ಗೊಹಿಗ್ಗು ನಾ ಬರೆದ ಸಾಲುಗಳು ಕವಿತೆಯಾದವಲ್ಲವೆಂದು ಮನಸಾರೆ ಅವರಿಗೆ ನಮಸ್ಕರಿಸಿ ಮನೆಕಡೆ ಓಡಿದ್ದೆ.ಅಪ್ಪ ಅಮ್ಮರಿಗೆ ಹೇಳಿದಾಗ ಅವರು ಹಿರಿಯರು ಹೇಳಿದ ಹಾಗೆ ಬರಿ ಮಗಾ ಅಂತ ಅಮ್ಮ ಮುದ್ದಿಸಿದ್ದ ಮರೆಯಲಾರೆ.ಆ ಕವಿತೆಯ ಹಾಳೆಯನ್ನು ದೇವರ ಮುಂದಿರಿಸಿ ನಮಿಸಿದ್ದೆ ಹುರುಪು. ಆ ಕವಿತೆ ಇನ್ನು ನನ್ನ ಸ್ಮೃತಿ ಪಟಲದಲ್ಲಿ…ಬಾಲ ಭಾಷೆಯ ಕವಿತೆ… ಖಾಲಿ ಕುರ್ಚಿ ಹೂವ ನೀಡುತಲಿ ಬಂದವರು ಹಾಡಿ ಹೊಗಳಿ ಹೋದರು ನಿಂತು ನುಡಿದವರೆಲ್ಲರ ಮಾತಿಗೆ ಮುಂದೆ ಕುಂತವರು ತೂಕಡಿಸಿದರು ಹಿಂದಿದ್ದವರೆಲ್ಲ ಮರೆಯಾದರು ಮುಂದೆ ಖಾಲಿ ಕುರ್ಚಿಗಳು ವೇದಿಕೆಯ ತುಂಬ ಜನರು ಕೇಳುಗರಿಲ್ಲದೆ ವಾಚಿಸಿದರು ನನ್ನದೊಂದು ಸಾಲು ಹೇಳಲೋ ಬಿಡಲೋ ಗೊತ್ತಿಲ್ಲ ಖಾಲಿ ಕುರ್ಚಿಗಳು ಹೇಳಿಬಿಡು ಕೇಳುವೆ ಅನ್ನುತ್ತವಲ್ಲ.. ಈ ಕವನವನ್ನು ಮೊದಲ ಬಾರಿ ವಾಚಿಸುವಾಗೆಲ್ಲ ನನಗೆ ನಡುಕ.ಬೆವರು,ನೀರಡಿಕೆ,ಮೈಕಿನ ಮುಂದೆ ಪ್ರಥಮ ಬಾರಿ ನಿಂತು ಗಟ್ಟಿಯಾಗಿ ಮುಂದಿದ್ದವರನ್ನು ನೋಡಲು ಧೈರ್ಯ ಸಾಲದೇ ಬಡಬಡ ‌ಓದಿದಾಗ ಸುಸ್ತೊಸುಸ್ತು…ನನ್ನ ಗುರುಗಳು ನಿಧಾನವಾಗಿ ಓದು,ಗಡಿಬಿಡಿ ಮಾಡಬಾರದು.ಮೊದಲಿಗೆ ಹೀಗಾಗುತ್ತೆ ಎಂದು ಬೆನ್ನು ಚಪ್ಪರಿಸಿ ಚೆನ್ನಾಗಿ ಓದಿದೆ ಎಂದು ನೀರಿನ ಬಾಟಲಿ ನನ್ನ ಕೈಗೆ ನೀಡಿದರು. ನನಗೋ ನೆಮ್ಮದಿ ಓದಿದೆ ಎಂದು ಮನದಲ್ಲಿ ಖುಷಿಪಟ್ಟೆ. ಕವಿತೆಗಳ ಭಾವಗಳು ಚಿಗುರೊಡೆದಿದ್ದು,ಹೊಸ ಅಲೆಗೆ ದಾರಿ ತೋರಿದಂತಾಗಿತ್ತು.ನನ್ನ ಇನ್ನೊರ್ವ ಗುರುಗಳು ಶ್ರೀ ನಾ.ಸು.ಭರತನಳ್ಳಿ ಯವರು ನನ್ನ ಕವನ ವಾಚನಗಳಿಗೆ ಹಾಗೂ ಹೀಗೆ ಬರಿಯೆಂದು ಮಾರ್ಗದರ್ಶನ ನೀಡುತ್ತಿದ್ದರು.ಅದೇ ಸಂದರ್ಭದಲ್ಲಿ ದಿವಂಗತ ಶ್ರೀ ರಾಜಶೇಖರ ಹೈಸ್ಕೂಲ್ ಮುಖ್ಯಾಧ್ಯಾಪಕರು ನನಗೆ ಗೊತ್ತಿಲ್ಲದಂತೆ ಗಮನಿಸುತ್ತಿದ್ದರು.ಒಂದು ದಿನ ನನ್ನ ಕರೆದು ಪುಟ್ಟಾ ಮಂಚಿಕೇರಿಯಲ್ಲಿ ಕಾವ್ಯ ಶಿಬಿರವಿದೆ ಅದರಲ್ಲಿ ನೀನು ಭಾಗವಹಿಸು ನಾಡಿನ ಹೆಸರಾಂತ ಕವಿಗಳು ನಿನಗೆ ಮಾರ್ಗದರ್ಶನ ನೀಡುವರು.ಎಂದಾಗ ನನಗಾದ ಸಂತೋಷಕ್ಕೆ ಕೊನೆಯೇ ಇಲ್ಲ.ಆ ಗುರುಗಳೇ ಶಿಬಿರದ ಶುಲ್ಕ ಪಾವತಿಸಿ,ಅಲ್ಲಿ ಉಳಿದು ಕೊಳ್ಳಲು ವಸತಿ ವ್ಯವಸ್ಥೆ ಕೂಡ ಮಾಡಿ,ನಮ್ಮ ಮನೆಯಲ್ಲಿ ತಂದೆ ತಾಯಿಗೆ ಹೇಳಿ ಕರೆತಂದು ಶಿಬಿರಕ್ಕೆ ಬಿಟ್ಟಿದ್ದರು. ನನ್ನ ಪುಣ್ಯವೋ ಗೊತ್ತಿಲ್ಲ,ಅಲ್ಲಿ ಶ್ರೀ ಜಯಂತ ಕಾಯ್ಕಿಣಿ, ಎಚ್.ಎಸ್ ರಾಘವೆಂದ್ರರಾವ್…ದುಂಡಿ.ಹೀಗೆ ಹಲವಾರು ಗಣ್ಯರ ಪರಿಚಯದ ಜೊತೆ ಕಲಿಯಲು ಅವಕಾಶ ದೊರೆಯಿತು.ಪುಟ್ಟ ತಲೆ,ಎಳೆ ಮನಸು, ಮೆದುಳು, ಬಲಿಯದ ಹೃದಯ ಎಷ್ಟು ಸ್ವೀಕರಿಸಲು ಸಾಧ್ಯವೋ ಅಷ್ಟು ಮನಬಿಚ್ಚಿ ಸ್ವೀಕರಿಸಿದೆ.ನಿಂತು ಕವಿತೆ ವಾಚಿಸುವ ಕಲೆ ಅರಿತೆ.ವಸ್ತು, ವಿಷಯಗಳ ಮೇಲೆ ಹೇಗೆ ಕವಿತೆ ಕಟ್ಟಬೇಕು ಎಂಬುದನ್ನು ತಿಳಿಯಪಟ್ಟೆ.ನನ್ನ ಗುರುಗಳಿಗೊಂದು ಭರವಸೆ,ನನ್ನ ಮೇಲೆ. ಕವಿತೆ ಬರೆಯುವುದನ್ನು ನಿನ್ನದೇ ಆದ ಶೈಲಿಯಲ್ಲಿ ಪ್ರತಿಬಿಂಬಿಸೆಂದು ಪ್ರೋತ್ಸಾಹ. ಗುರು ಬಯಲಾದ ಬಾನಿಗೆ ಗುರುವೆ ಸರ್ವಸ್ವ ಮನವೆಂಬ ಬಾನಿಗೆ ಗುರುವೆಂಬ ಸಾರಥಿ ನಮ್ಮಂಥ ಶಿಷ್ಯರಿಗೆ ನಿಮ್ಮಂಥ ಗುರುವೆ ಮಾಣಿಕ್ಯ. ತಪ್ಪುಒಪ್ಪುಗಳ ಅಪ್ಪಿ ಬೆನ್ನ ತಟ್ಟುವವರು ನೀವಲ್ಲವೆ ಕವಿತೆ ಓದುವಾಗ ನನಗರಿವಿಲ್ಲದೇ ಕಣ್ಣೀರು ಜಾರಿದ್ದು,ಅಲ್ಲಿದ್ದ ನನ್ನ ಗುರುಗಳು ಕಣ್ಣೀರ ಒರೆಸಿದ್ದು‌. ಒಂದು ಕ್ಷಣ ನನ್ನ ನಾ ಮರೆತಂತೆ….ಮೊದಲಿನ ಅನುಭವಗಳು ನಿಜವಾಗಲೂ ಮರೆಯಲಾರದಂತಹ ಸವಿ ನೆನನಪುಗಳು.ಬಾಲ್ಯದ ಬರವಣಿಗೆಗಳು ಈಗಲೂ ಮನಸಿಗೆ ಆನಂದ ತರುತ್ತವೆ.ಮರೆಯಾದ ಜ್ಯೋತಿಗಳು ಅಂದು ನನ್ನ ಮನದಲ್ಲಿ ಹಚ್ಚಿದ ಹಣತೆ ಇಂದಿಗೂ ಅವರು ಬಿತ್ತಿದ ವಿಚಾರ ಧಾರೆಗಳು ನನ್ನ ಕವಿತ್ವಕ್ಕೆ ಪೂರಕವೆಂದರೆ ತಪ್ಪಾಗದು. ತಪ್ಪಲಿಲ್ಲ ನಮ್ಮ ಬೀದಿ ಹುಚ್ಚಣ ಬಳಿತಾನ್ರಿ ಬಣ್ಣ ನೋಡಿನಗತಾನ ಹುಚ್ಚನಾಂಗ ಅವ ಹಿಂದ ಇದ್ದನಂತ್ರಿ ರಾಜಾನಾಂಗ ರಾಜಕೀಯ ಪಕ್ಷದಾಗ ಹೀರೋ ಹಾಂಗ ಕಿತ್ತ ತಿನ್ನೊರಿಗೆ ಕುಡಿದು ಕುಪ್ಪಳಿಸೋರಿಗೆ ಹೊಲ ಮನಿ ಮಾರಿ ರಾಜಕೀಯದ ಪೋಷಾಕದಾಗ ಮರೆದಿದ್ದ ಬಂತು ಕೊನೆಗೂ ಟಿಕೇಟ್ ಸಿಕ್ಕಿಲ್ಲ ಬೀದಿಗೆ ಬೀಳೊದಂತು ತಪ್ಪಲಿಲ್ಲ… ಈ ಕವನ ನೈಜ ವ್ಯಕ್ತಿಯ ಬದುಕ ಕುರಿತಾಗಿತ್ತು.ಇದನ್ನು ಓದುವಾಗ ನನ್ನಲ್ಲಿ ಗಟ್ಟಿ ಮನಸ್ಸು ಬಂದಿತ್ತು.ಕೆಲವರಿಗೆ ಚೂರಿಚಿಚ್ಚಿದಾಂಗ ಆಗಿತ್ತು.ದಿವಂಗತ ಮೋಹನ ಕುರುಡಗಿ ಗುರುಗಳು ಮೆಚ್ಚಿ ಹೊಗಳಿದ್ದರು.ಬಂಡಾಯದ ಚಿಗುರು,ಚಿಗುರಿ ಹೆಮ್ಮರವಾಗಿ ಬೆಳೆಯಲೆಂದು ಆಶೀರ್ವದಿಸಿದ್ದು ಇಂದಿಗೂ ಕಣ್ಣಿಗೆ ಕಟ್ಟಿದಂತಿದೆ.ಇಂತಹ ಮಧುರ ನೆನಪುಗಳನ್ನು ಪುನಃ ಮೆಲುಕು ಹಾಕುವುದ ರೊಂದಿಗೆ.ಅಂತಹ ಹಿರಿಚೇತನಗಳನ್ನು ನೆನಪಿಸುವ ಸುಸಂದರ್ಭ ಒದಗಿದ್ದು ಸಂತಸ ತಂದಿದೆ.ಅಲ್ಲದೆ ಮೊದಲ ಕವಿತೆಗಳು ನೀಡಿದ ಖುಷಿ ಮರೆಯಲು ಸಾಧ್ಯವಿಲ್ಲ. ಸಾಹಿತ್ಯದ ಗಂಧ ತೇದಷ್ಟು ಪರಿಮಳ ಸೂಸುವುದು. ಮನಸ್ಸನ್ನು ಪುನಃ ಬಾಲ್ಯದತ್ತ ಹಿಂತಿರುಗಿದ್ದು ಕಾಮನ ಬಿಲ್ಲು ಮೂಡಿದಂತೆ. ************************

ಬಾಲ್ಯ ಮರುಕಳಿಸಿದಂತೆ Read Post »

ಇತರೆ

ಮೈಲಿಗಲ್ಲಾದ ಮೊದಲ ಕವಿತೆ

ಮೊದಲ ಕವಿತೆಯ ರೋಮಾಂಚನ ಸುಜಾತಾ ರವೀಶ್ ಶಾಲೆಯಲ್ಲಿ ಪ್ರಬಂಧ ಸ್ಪರ್ಧೆಗಳಲ್ಲಿ ಬರೆಯುತ್ತಿದ್ದರೂ ಕವಿತೆ ಅಂತ ಬರೆದದ್ದು ಹತ್ತನೇ ತರಗತಿಯಲ್ಲೇ.  ಅದಕ್ಕೆ ಮುಂಚೆ ಗದ್ಯರೂಪದಲ್ಲಿ ಸಾಕಷ್ಟು ಮನಸ್ಸಿಗೆ ಬಂದದ್ದನ್ನು ಗೀಚಿ ನನ್ನ ಪ್ರೌಢ ಶಾಲಾ ಕನ್ನಡ ಶಿಕ್ಷಕಿ ಪುಷ್ಪಾ ಮೇಡಂ ಅವುಗಳನ್ನು ಲಂಕೇಶ್ ಪತ್ರಿಕೆಗೆ ಕಳಿಸುವ ಅಂದಿದ್ದರೂ ಕಳಿಸಿದರಾ ಬಿಟ್ಟರಾ ನೆನಪಿಲ್ಲ.  ಆಗ ಬರೆದದ್ದು ಯಾವುದೂ ಬಳಿಯಲ್ಲಿಲ್ಲ . ಅದೊಂದು ದಿನ ಒಂದು ಪುಟ್ಟ ಆಟೋಗ್ರಾಫ್ ಸೈಜಿನ ಪುಸ್ತಕವೊಂದನ್ನು ನನ್ನ ತಂದೆ ಕೊಟ್ಟರು ಅಂಗೈ ಅಗಲದ ಆ ಪುಸ್ತಕದಲ್ಲಿ ದೊಡ್ಡ ಪ್ರಬಂಧಗಳನ್ನು ಬರೆಯಲಾಗುತ್ತಿರಲಿಲ್ಲ . ಅದರಲ್ಲಿ ಬರೆಯಬೇಕೆಂಬ ಆಸೆಗೆ ಪುಟ್ಟ ಕವನಗಳನ್ನು ಬರೆಯತೊಡಗಿದೆ.  ಆ ಪುಟ್ಟ ಪುಸ್ತಕಕ್ಕೆ ಗುಲಾಬಿ ಹೂವಿನ ರಟ್ಟು ಹಾಕಿ ಜೋಪಾನದಲ್ಲಿ ಪ್ಲಾಸ್ಟಿಕ್ ರಕ್ಷಾ ಕವಚವನ್ನು ಹಾಕಿಟ್ಟಿದ್ದೆ. ಆ ಪುಸ್ತಕ ಭರ್ತಿಯಾದ ನಂತರ ನನ್ನ ಕವನ ಬರೆಯುವಾಟವೂ ನಿಂತಿತ್ತು ಮರೆತೂ ಬಿಟ್ಟಿದ್ದೆ. ಪುಸ್ತಕವೂ ಇಷ್ಟು ವರ್ಷ ಎಲ್ಲಿತ್ತೋ ಸಿಕ್ಕಿರಲೂ ಇಲ್ಲ . ಇತ್ತೀಚೆಗೆ ಆ ಪುಸ್ತಕ ಸಿಕ್ಕಿದ್ದೂ ಅದಕ್ಕೆ ಸರಿಯಾಗಿ ಸಂಗಾತಿಯಲ್ಲಿ ಈ ವಿಷಯದ ಬಗ್ಗೆ ಬರೆಯಲು ಹೇಳಿದ್ದೂ ಕಾಕತಾಳೀಯವಾಯಿತು.ಆಗಿನ ಭಾವಗಳು ಈಗ ಮರೆತು ಹೋಗಿದೆ ಆದರೆ ಓದಿದಾಗ ಪರವಾಗಿಲ್ಲ ಸುಮಾರಾಗಿ ಬರೀತಿದ್ದೆ ಅನ್ನಿಸುತ್ತೆ (ಅಥವಾ ಈಗಲೂ ಸುಧಾರಿಸಿಲ್ಲವೋ ಗೊತ್ತಿಲ್ಲ).  ಈಗ ಅದೆಷ್ಟೋ ಕವನಗಳನ್ನು ಬರೆದಿದ್ದರೂ ೧೪_೧೫ ವಯಸ್ಸಿನ ಪುಟ್ಟ ಮನದ ಭಾವಗಳು ಈಗ ಅಚ್ಚರಿ ಮೂಡಿಸುತ್ತದೆ. ಪ್ರಪಂಚವೇ ಗೊತ್ತಿರದ ಪುಟ್ಟ ಜಗತ್ತಿನ ವಿಷಯಗಳು ವಸ್ತುವಾದ ಬಗ್ಗೆ ಖುಷಿಯೂ ಆಗುತ್ತದೆ ಆ ಪುಟ್ಟ ಪುಸ್ತಕದ ಮೊದಲ ಕವನ ಪ್ರಾಯಶಃ ನನ್ನ ಮೊದಲ ಕವನವೂ ಅದೇ ಇರಬಹುದು. ನಿಮ್ಮ ಓದಿಗಾಗಿ……. ಮುಂಜಾವು ಬೆಳಗಿನ ಮೊದಲ ಜಾವದಲ್ಲಿ ಎದ್ದು  ಸವಿನಿದ್ದೆಗೆ ವಿದಾಯ ಹೇಳಿ ಹೊರ ಬಂದಾಗ ಕಂಡದ್ದು ನೀಲಿ ಆಗಸ  ಮರೆಯಾಗುತ್ತಿದ್ದ ಚಂದ್ರ ತಾರೆ  ಮತ್ತೆ ಕೆಲ ನಿಮಿಷಗಳಲ್ಲಿ  ಪೂರ್ವ ದಿಗಂತದಲ್ಲಿ  ರಾಗ ರಂಗು ಪಸರಿಸಿತು  ಬಾನಿನಲ್ಲಿ ಸೂರ್ಯ ಉದಯಿಸಿದ್ದ  ಇದ ಕಂಡ ಕವಿಗಳು ವರ್ಣಿಸಬಹುದು ನೂರು  ಆದರೇನು ಆ ನಿಸರ್ಗ ಸೌಂದರ್ಯದ  ರಮಣೀಯತೆಯಾಳವನು ಬರಡು  ಮಾತುಗಳೆಷ್ಟು ತಾನೇ ವರ್ಣಿಸಬಹುದು? ಅದರಿಂದೊದಗುವ ಶಾಂತ ಸುಖದ  ಅನುಭವವನ್ನು ಹೇಗೆ ತಾನೇ ಹೇಳಬಹುದು? ಸುಮಾರು ಮೂವತ್ತು ವರ್ಷಗಳ ಸುದೀರ್ಘ ವಿದಾಯದ ಬಳಿಕ ಬರವಣಿಗೆಯ ರೈಲು ಈಗ ಎರಡು ವರ್ಷದಿಂದೀಚೆಗೆ ಹಳಿ ಹತ್ತಿದೆ ಒಂದು ಕವನ ಸಂಕಲನ ಬಿಡುಗಡೆ,  ಪಠ್ಯಪುಸ್ತಕಕ್ಕೆ ಒಂದು ಕವನ ಆಯ್ಕೆಯಾದದ್ದು ಇವೆಲ್ಲಾ ಈಗಿನ ಮೈಲಿಗಲ್ಲುಗಳು . ಆದರೆ ಆ ಹಳೆಯ ಕವನಗಳನ್ನು ನಾನು ಯಾರಿಗೂ ತೋರಿಸಿಲ್ಲ ಎನ್ನುವುದು ವಿಚಿತ್ರ ಆದರೂ ಸತ್ಯ .    ***************

ಮೈಲಿಗಲ್ಲಾದ ಮೊದಲ ಕವಿತೆ Read Post »

ಇತರೆ

ಗಾಂಧಿಯೇ ಮೊದಲ ಕವಿತೆ

ಮೊದಲ ಕವಿತೆಯ ರೋಮಾಂಚನ ರೇಶ್ಮಾಗುಳೇದಗುಡ್ಡಾಕರ್ ಅಂದು ಮಧ್ಯಾಹ್ನ ಕಾಲೇಜು ಮುಗಿಸಿಕೊಂಡು ಮನೆಯ ಕಡೆ ಪಯಣ ಬೆಳಸಿದ್ದೆ . ನನ್ನ ಪ್ರೀತಿಯ ಲೇಡಿ ಬರ್ಡ ನೊಂದಿಗೆ.   ಮತ್ತೆ ಒಂದು ಘಂಟೆ ಕಳೆದು ಲ್ಯಾಬ್ ಗೆ ಹೋಗ ಬೇಕಾಗಿತ್ತು . ಸರ ಸರ ಮನೆಗೆ ಬಂದು ನನ್ನ ಸೈಕಲ್ ಅಂಗಳದಲ್ಲೆ ಬಿಟ್ಟು ಒಳಗೆ ಬಂದೆ “ಬಾಬಾ ರೇಶ್ಮಾ ಹೊಸತು ಪತ್ರಿಕೆ ಎರಡು ಬಂದಿದೆ ನೋಡು “.ಎಂದು ನನಗೆ ತಂದು ಕೊಟ್ಟರು .ತಂದೆಯವರಿಗೂ ಪತ್ರಿಕೆ ನೋಡಿ ಅಚ್ಚರಿಯಾಗಿದೆ .ನಾನು ಕವಿತೆ ಕಳಿಸಿರುವ ವಿಚಾರ ಅವರಿಗೆ  ತಿಳಿಸಿರಲಿಲ್ಲ ನಂತರ ಅಣ್ಣನಿಂದ ವಿಚಾರ ತಿಳಿದು ನಾನು ಬಂದ ಮೇಲೆ ನನ್ನ ಕೈಗೆ ಪತ್ರಿಕೆ ನೀಡಿದರು . ಎಲ್ಲರೂ ಪತ್ರಿಕೆಯನ್ನು ಓದಿ ಖುಷಿಯಾಗಿದ್ದಾರೆ ನನಗೆ ಆಶ್ಚರ್ಯ ಯಾಕೆ ,ಏನು ,ಎಂದು ತಿಳಿಯಲಿಲ್ಲ .ತೆಗೆದುಕೊಂಡು ನನ್ನ ಕೊಠಡಿಗೆ ಬಂದೆ ಅಣ್ಣಾ ನಗುತ್ತಾ ನಿನ್ನ ಕವನ ‘ಗಾಂಧಿ ‘ ಪ್ರಕಟವಾಗಿದೆ ನೋಡು ಎಂದು ಹೇಳಿದರು .ನನಗೆ   ಅಚ್ಚರಿ  ಸಂತಸವೋ ಸಂತಸ ಜೊತೆ ಗೌರವ ಧನ ೨೫ ರೂಗಳು ಬಂದಿತ್ತು .ಅಗ ನಾನು ಪದವಿಯ ಮೊದಲ ವರ್ಷದಲ್ಲಿದ್ದೆ .ಮಯೂರ, ಹೊಸತು ,ಸಂಕ್ರಮಣ ಪತ್ರಿಕೆಗಳು ಮನೆಗೆ ಬರುತ್ತಿದ್ದವು .ಹೊಸತು ಪತ್ರಿಕೆಯಲ್ಲಿ ಗಾಂಧಿ ಕುರಿತ ಚಿಂತನೆ ,ಬರಹಗಳು ಅವರ ಅನುಯಾಯಿಗಳ ಸಂದರ್ಶನಗಳು ನನಗೆ ಅತೀವ ಕುತೂಹಲಕಾರಿಯಾಗಿದ್ದವು  . ಅವೆಲ್ಲ ನನ್ನೊಳಗೆ ಗಾಂಧಿ ಕುರಿತ ಒಂದು ಸಂವೇದನೆಯನ್ನು  ಹುಟ್ಟುಹಾಕಿದವು.  ಹಾಗೂ ಒಳನೋಟವನ್ನು ನೀಡಿದ್ದವು. ಹೊಸತು ಪತ್ರಿಕೆಯಿಂದ ಅಗ ನನಗೆ ಹೊಸ ತಿಳಿವಿನ ಜಗತ್ತು ಕಾಣುತ್ತಿತ್ತು ಮತ್ತು ವಾಸ್ತವದ ಬಗ್ಗೆ ಒಂದು ಮಾನವೀಯ ಎಚ್ಚರದ ಅರಿವನ್ನು ಕಾಣುವ ಬರಹಗಳು ಇದ್ದವು.ಇದೆಲ್ಲ ಒಂದು ಧನಾತ್ಮಕ ಸಂಘರ್ಷವಾಗಿ ನನ್ನಲ್ಲಿ ಗಾಂಧಿ ಕವಿತೆ ರೂಪುಗೊಂಡಿತು . ನಾನು ಬರೆದ ಕವಿತೆ ಅಣ್ಣನೆ ಹೋಗಿ ಅಂಚೆ ಮಾಡಿ ಬಂದಿದ್ದರು .ಕಳಿಸಿ ಎರಡು ತಿಂಗಳಾದರೂ ಉತ್ತರವಿಲ್ಲ ಪ್ರತಿ ತಿಂಗಳು ಪತ್ರಿಕೆಯಲ್ಲಿ ಹುಡುಕಾಟ ನಡೆಸಿ ಸುಮ್ಮನಾದರೆ. ಆದರೆ ಅಕ್ಟೋಬರ್‌ ಸಂಚಿಕೆಯಲ್ಲಿ ನನಗೆ  ಅಚ್ಚರಿ ಕಾದಿತ್ತು .ಕವನ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ತದನಂತರ ನನ್ನ ಕವನದ ಮೆಚ್ಚುಗೆ ಕುರಿತು ನನಗೆ ಹಲವು ಪತ್ರಗಳು ಮನೆಗೆ ಬರತೊಡಗಿದವು . ಜೊತೆಗೆ   ಡಾ||. ಶ್ರೀಧರ್ ಪಿಸ್ಸೆ ಅವರ ಪತ್ರವು ಬಂತು.  ಕರ್ನಾಟಕ ಸಾಹಿತ್ಯ ಅಕಾಡೆಮಿ ವಾರ್ಷಿಕ ಕವಿತೆಗೆ ನನ್ನ ಕವಿತೆ ಆಯ್ಕೆ ಅಗಿದೆ ಎಂಬ ಸಂಗತಿ ಹೊತ್ತು .ಇದನ್ನು ನಾನು ಊಹಿಸಿ ಇರಲಿಲ್ಲ  ಈ ವಿಶೇಷ ಅನುಭೂತಿಯನ್ನು ಬದುಕಿನುದ್ದಕ್ಕೂ ಮರೆಯಲು ಸಾದ್ಯವಿಲ್ಲ .ಅವರ ಸಂಪಾದಕತ್ವದಲ್ಲಿ ನನ್ನ ಕವಿತೆ 2006 ರ ವಾರ್ಷಿಕ ಕವಿತೆ  ಹೊತ್ತಿಗೆ ಯಲ್ಲಿ ಪ್ರಕಟವಾಯಿತು . ನನಗೆ ಓದು ನೀಡಿದ ಉಡುಗೊರೆ ನನ್ನ ಬದುಕಿಗೆ ಎಂದು ನಾನು ಭಾವಿಸಿದ್ದೇನೆ .ಹೊಸತು ಪತ್ರಿಕೆ ಸಂಪಾದಕ ಬಳಗಕ್ಕೆ ಈ ವೇದಿಕೆ ಮೂಲಕ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ. ತುಂಬ ದಿನಗಳ ನಂತರ ಬಾಲ್ಯದಿಂದಲೂ ಓದಿನ ಗೀಳು ನನಗೆ ಹೆಚ್ಚು ಬಾಲಮಂಗಳ,ಚಂಪಕ,ಚಂದಮಾಮಾ, ಮನೋರಮಾ ನನಗೆ ಆಗಿನ ಒಡನಾಡಿಗಳು .ತದನಂತರ ದಿನಗಳಲ್ಲಿ ತೇಜಸ್ವಿ, ಕಾರಂತರು, ಜಿಎಸ್ಎಸ್ ,ಲಂಕೇಶ್ , ನೇಮಿಚಂದ್ರ ,ಎಂ.ಕೆ.ಇಂದಿರಾ , ಗೊರೂರು ,ಅವರ ಕೃತಿಗಳು ಮನಸೆಳೆದವು ತ್ರಿವೇಣಿ ಅವರ ಕಾದಂಬರಿಗಳು ಮನೋವಿಜ್ಞಾನ ವನ್ನು ನನಗೆ ಅರ್ಥೈಸಿಕೊಳ್ಳಲು ಬಹುವಾಗಿ ಸಹಾಯವಾಯಿತು ,ವೈಜ್ಞಾನಿಕ ಬರಹಗಳ ಓದು ನನಗೆ ವಿಜ್ಞಾನದ ಕುತೂಹಲ ತಣಿಯಲು ಸಹಾಯವಾದವು ಜೊತೆಗೆ ತೇಜಸ್ವಿ ಅವರ ಕಾಡಿನ ಕತೆಗಳು ವಿಜ್ಞಾನ ಬರಹ ಅಚ್ಚುಮೆಚ್ಚು .ಪದವಿಯಲ್ಲಿ ವಿಷಯ ಪುಸ್ತಕಗಳಿಗಿಂತ ಸಾಹಿತ್ಯದ ಓದೇ ಹೆಚ್ಚಾಗಿತ್ತು ಮನೆಯಲ್ಲಿ ತಂದೆಯವರು ಪುಸ್ತಕ ಪ್ರೇಮಿಯಾಗಿದ್ದರು ಹಲವು ಕೃತಿಗಳು ಇದರಿಂದ ಪರಿಚಯವಾಯಿತು . ಸಾಹಿತ್ಯದ ಕಣ್ಣಲ್ಲಿ ಜಗವನ್ನು ನೋಡಿದ್ದಲ್ಲಿ ಯಾವುದು ಕಷ್ಟ ವಾಗಲಾರದು ಎಂಬದು ನನ್ನ ಬಲವಾದ ನಂಬಿಕೆ. ಓದು ಎಂಬುದು ಬದುಕಿಗೆ ಮದ್ದು. ಸೃಜನಾತ್ಮಕ ದೃಷ್ಟಿ ಕೋನ ಹಾಗೂ ಧನಾತ್ಮಕ ಸಂಚಲನ ನೀಡುತ್ತದೆ.ನಮ್ಮೊಳಗಿರುವ ಕಾಣದ ಲೋಕವನ್ನು ಸಾಹಿತ್ಯ ಅನಾವರಣಗೋಳಿಸುತ್ತದೆ .ವರ್ತಮಾನದ ಆಪಾರ ಕಾಳಜಿಯನ್ನು ಸೂಕ್ಷ್ಮ ಅವಲೋಕನವನ್ನು ನೀಡುತ್ತದೆ ಕನ್ನಡದಲ್ಲಿ ಬಹಳಷ್ಟು ಮೌಲ್ವಿಕ ಕೃತಿಗಳು ಇವೆ ಅದು ನನಗೆ ಹೆಮ್ಮೆ .ಮತ್ತಷ್ಟು ಓದುವ ಬಯಕೆ ಇದೆ. ಇಂದಿನ ಸಾಮಾಜಿಕ ತಾಣ ಒಂದು ಅದ್ಭುತ ವೇದಿಕೆ ಉತ್ತಮ ಬರಹಗಳು ಸುಲಭವಾಗಿ ಓದಲು ಸಿಗುತ್ತಿವೆ. ಇದು ನನಗೆ ಓದಿನ ಖುಷಿ ಇಮ್ಮಡಿ ಮಾಡಿದೆ. ಈ ವೇದಿಕೆಯನ್ನು ಗುಣಾತ್ಮಕವಾಗಿ ಬಳಸಿಕೊಂಡು ಮತ್ತಷ್ಟು ಉತ್ಕೃಷ್ಟ ಸಾಹಿತ್ಯ ಕೃಷಿಯಾಗಲಿ ಎಂಬುದು ನನ್ನ  ಮನದಾಳದ  ಬಯಕೆ.                        **************************

ಗಾಂಧಿಯೇ ಮೊದಲ ಕವಿತೆ Read Post »

ಇತರೆ

ಮೊದಲ ಕವನ

ಮೊದಲ ಕವಿತೆಯ ರೋಮಾಂಚನ ಎ ಎಸ್. ಮಕಾನದಾರ 80ರ ದಶಕದ ಕೊನೆ ಅಂಚಿನಲಿ ನಿರಂತರ ಸಾಹಿತ್ಯ ವೇದಿಕೆ ಗಜೇಂದ್ರಗಡ ದಲ್ಲಿ ಹುಟ್ಟಿಕೊಂಡಿತು. ಹುಬ್ಬಳ್ಳಿ ಗುಂಡಪ್ಪ ಪುಂಡಲೀಕ ಕಲ್ಲಿಗನೂರ್  ಇಬ್ಬರೂ ಹಿರಿಯರು ಕವನ ಕುಂಜ ಸಂಪಾದಿತ ಕವನ ಸಂಕಲನ ಪ್ರಕಟಿಸಿದರು. ಹುಬ್ಬಳ್ಳಿ ಗುಂಡಪ್ಪ ಗುಂಡಿನ ಗಿರಾಕಿ. ನಾನಾಗ ವೈನ್ ಶಾಪ್ ನಲ್ಲಿ ಕೆಲಸ ಮಾಡುತ್ತಿದ್ದೆ. ಅಂಗಡಿ ಬಾಗಿಲು ತೆರೆದೊಡನೆ ಮೊದಲ ಗಿರಾಕಿ ಗುಂಡಪ್ಪ. ಬಗಲಲ್ಲಿ ಹತ್ತಾರು ಪತ್ರಿಕೆ ತರುತ್ತಿದ್ದರು. ಗುಂಡಿನ ಮತ್ತು ಏರಿದಂತೆ ಕಾವ್ಯಝರಿ ಸರಾಗವಾಗಿ ಬರುತ್ತಿತ್ತು. ಬೆಳಿಗ್ಗೆ ಗಿರಾಕಿಗಳು ಇಲ್ಲದಿದ್ದಾಗ ಸ್ನ್ಯಾಕ್ಸ್ ಜೊತೆಗೆ ಪತ್ರಿಕೆ ಓದಲು ಕೊಡುತ್ತಿದ್ದರು. ಸೇಂಗಾ ಕಾಳು ಒಂದೊಂದೇ ಮೆಲ್ಲುತ್ತ ಪೇಪರ್ ವಾರಪತ್ರಿಕೆ ತಿರುವಿ ಹಾಕುತ್ತ ಟೇಪ್ ರೆಕಾರ್ಡ್ ನಲ್ಲಿ ಸಣ್ಣಗೆ ಹಿಂದಿ ಹಾಡು ಬೇಷಾಕ್ ಮಂದಿರಮೆ ಬೈಠಕೆ ನ ರೂನಾ ಹಾಡು ಕೇಳುವುದೇ ಒಂದು ಸಂಭ್ರಮ ವಾಗಿತ್ತು. ನಾನಾಗ 8ನೆ ತರಗತಿ ಪಾಸ್ ಆಗಿದ್ದೆ. ಮುಂದೆ ಶಾಲೆಗೆ ಓದಲು ಹೋಗಲು ಮನೆಯಲ್ಲಿ ಬಡತನವೆಂಬ ಬೇತಾಳ ನನ್ನ ಪಾಟಿ ಚೀಲ ಕಸೆದು ಕೊಂಡು ಮೂಲೆಗೆ ಎಸೆದಿತ್ತು. ನನ್ನ ಎಳೆ ಹೆಗಲ ಮೇಲೆ ಬೇತಾಳನ ಸವಾರಿ ಭಾರ ವಾಗಿದ್ದರೂ ತೆವಳುತ್ತ ತೆವಳುತ್ತ ಸಾಗ ಬೇಕಿತ್ತು. ಮಕಾನದಾರ ನೀವೂ ಕವಿತ ಬರೀರಿ. ನಾ ಬರೆದ ಈ ಕವಿತೆ ಹೆಂಗೆ ಅದೆ ನೋಡ್ರಿ ಈ ಕವಿತಾ ಓದಿ ಅಂತಾ ತಾವು ಬರೆದ ಕವಿತೆ ಗಳ ಡೈರಿ ಕೊಡುತ್ತಿದ್ದರು. ನಮ್ಮೂರಲ್ಲಿ ಕುಡಿಯುವ ನೀರಿನ ಬವಣಿ ಹೇಳತೀರದ್ದು. ಆ ಸಂದರ್ಭದಲ್ಲಿ ಉಪಮೆ ನಮ್ಮೂರ ನಲ್ಲಿಯನೀರು ನಲ್ಲೆಯ ಕಣ್ಣೀರಿನ ಹನಿ ಯಂತೆ ಹನಿ ಹನಿ ಜಿನುಗಿತು ಈ ಚುಟುಕು ಬರೆದು ತೋರಿಸಿದೆ ಗುಂಡಪ್ಪ ಲಂಕೇಶ್ ಪತ್ರಿಕೆ ಅಂಕಣ ಕಾರ ಪುಂಡಲೀಕಶೇಟ್ ಅವರ ಪುಂಡಲೀಕ್ ವಾರ ಪತ್ರಿಕೆ ಗಾಗಿ ನನಗೆ ಗೊತ್ತಿಲ್ಲ ದಂತೆ ಪೋಸ್ಟ್ ಮಾಡಿದ್ದರು. ಮರು ವಾರ ಪತ್ರಿಕೆ ಯಲ್ಲಿ ಪ್ರಕಟಣೆ ಯಾಯ್ತು. ನನಗೆ ಮುಗಿಲು ಮೂರೇ ಗೇಣು ಅಷ್ಟು ಖುಷಿ ಯಲಿ ಸಂತಸ ಪಟ್ಟಿದ್ದೆ. ಮತ್ತೆ ಬರೆಯಿರಿ ಅಂತಾ ಒತ್ತಾಯ ಮಾಡಿದರು ಮುತ್ತು ಮುಖದ ಮೇಲೆ ಮುತ್ತಿನಂತೆ ಮೂಡಿದ್ದ ಬೆವರಹನಿಗಳು ನಾ ಮುತ್ತಿಟ್ಟಾಗ ಅಲ್ಲವೇ ಗೆಳತಿ ಮೂಡಿದ್ದು #### ಮುಖವಾಡ ಯತಿ ಆಶ್ರಮದಲ್ಲಿ ಸನ್ಯಾಸಿ ವೇಷದಲಿ ಸಂಸಾರಿ ! ರತಿ ಆಶ್ರಮದಲಿ ಸಂಸಾರಿ ವೇಷದಲಿ ಸನ್ಯಾಸಿ ! ವಿಮರ್ಶೆ ನಿಮ್ಮ ಸಾಹಿತ್ಯ ಪಕ್ವವಾಗಿ ಬೆಂದಿಲ್ಲವೆಂದ ವಿಮರ್ಶಕ ! ಸಾಹಿತ್ಯಕ್ಕೆ ಸೀಮೆ ಎಣ್ಣಿ ಸುರುವಿ ಬೆಂಕಿ ಹಚ್ಚಿ ಬೇಯಿಸಿದ ಸಾಹಿತಿ ಮುಂತಾದ ಚುಟುಕು ಕಾವ್ಯ ಬರೆಯಲು ತೊಡಗಿದೆ. ನನ್ನ ಬಾಲ್ಯದ ಗೆಳೆಯ ರಾಘವೇಂದ್ರ ಕೊಡಗಾನೂರ ಅವರು ಗಜೇಂದ್ರ ಪ್ರಭಾ ವಾರ ಪತ್ರಿಕೆ ಆರಂಭಿಸಿದರು ದ್ರೋಣಪುರ ವಾರ್ತೆ. ನೂತನ ರಾಜಕೀಯ ಚಕ್ರವರ್ತಿ. ಸ್ಫೂರ್ತಿ. ನವೋದಯ ಮುಂತಾದ ಪತ್ರಿಕೆ ಗಳಲ್ಲಿ ಕವಿತೆ ಗಳು ಪ್ರಕಟಣೆ ಯಾಗ ತೊಡಗಿದವು. 1987ರಲ್ಲಿ ಬೆಂಗಳೂರು ಈ ಸಿ ಸಿ ಸೆಂಟರ್ ನಲ್ಲಿ ಹಿರಿಯ ಸಾಹಿತಿ ಗಳಾದ ದುಂಡಿರಾಜ್ ಅವರ ನೇತೃತ್ವದಲ್ಲಿ ಕಾವ್ಯ ಕಮ್ಮಟ ದಲ್ಲಿ ಪಾಲ್ಗೊಂಡಿದ್ದೆ. ಜೊತೆಗೆ ನಿರಂತರ ವೇದಿಕೆ ಸಂಘಟನೆ ಗಳ ಕವಿಗೋಷ್ಠಿ ನನಗೆ ಸಾಹಿತ್ಯ ದಲ್ಲಿ ಕ್ರಿಯಾಶೀಲವಾಗಿ ತೊಡಗಿ ಕೊಳ್ಳಲು ಹೆಗಲೇಣಿ ಯಾದವು ಕಳೆದ 33 ವರುಷಗಳಿಂದಲೂ ಸಾಹಿತ್ಯದ ಚೈತ್ರ ಯಾತ್ರೆ ನಿರಂತರ ವಾಗಿ ನಡೆದು ಕೊಂಡು ಬಂದಿದೆ. 90ರ ದಶಕ ದಲ್ಲಿ ಕಿರಣ ವೈನ್ ಶಾಪ್ ಮಾಲೀಕರಿಗೆ ಅಂಗಡಿ  ಹಾನಿ ಯಾಗಿ ಸೀಜ್ ಮಾಡಿದಾಗ ಹುಬ್ಬಳ್ಳಿ ಇಂದಿರಾ ಗಾಜಿನ ಅರಮನೆಗೆ ಆತ್ಮ ಹತ್ಯೆ ಮಾಡಿ ಕೊಳ್ಳಲು ಟಿಕ್ 20 ಬಾಟಲ್ ಒಯ್ದಿದ್ದೆ.. ಆಗ ನನ್ನ ನಡುವಳಿಕೆ ಆತಂಕ ಗುರುತಿಸಿದ ಪತ್ರಕರ್ತ ಪುಂಡಲೀಕ್ ಶೇಟ್ ತರಾಟೆಗೆ ತೆಗೆದುಕೊಂಡು ಬುದ್ಧಿ ವಾದ ಹೇಳಿ ಟೀ ಕುಡಿಸಿ ಸಿನೆಮಾ ತೋರಿಸಿ ಊರಿಗೆ ಬಸ್ ಹತ್ತಿಸಿ ಕಳಿಸಿದ್ದು ಇನ್ನೂ ನನ್ನ ಸ್ಮತಿ ಪಟಲದಲ್ಲಿ ಅಚ್ಚಳಿಯದೆ ಉಳಿದಿದೆ. ನಮ್ಮಿಬ್ಬರ ಗೆಳೆತನ ಇನ್ನಷ್ಟು ಗಾಢ ವಾಗಲು ಕಾರಣವಾಯ್ತು ಜೊತೆಗೆ ನನ್ನ ಸಾಹಿತ್ಯ ಬರವಣಿಗೆ ಗೆ ಮಾರ್ಗದರ್ಶನ ಕೂಡ ಅವರಿಂದ ದೊರೆಯಿತು ನನ್ನ ಅಂತರಂಗದ ಸಖಿ ಕಾವ್ಯ ನನ್ನ ಪ್ಯಾರಿ ಕಾವ್ಯ. ನನ್ನ ಸಾಂಸ್ ಕೂಡ ಕಾವ್ಯವಾಗಿದೆ. ನನ್ನ ಮನದ ನೋವಿಗೆ ಮುಲಾಮು ಕೂಡ ಕಾವ್ಯವೇ ಎಂಬುದರಲ್ಲಿ ಎರಡು ಮಾತಿಲ್ಲ ,

ಮೊದಲ ಕವನ Read Post »

ಇತರೆ

ಕಟ್ಟುವ ಮುಕ್ತತೆ

ಲೇಖನ ನೂತನ ದೋಶೆಟ್ಟಿ ೧೯೮೫ ಮಿಖೈಲ್ ಗೋರ್ಬಚೇವ್ ಸೋವಿಯತ್ ರಷ್ಯಾ ಒಕ್ಕೂಟದ ಕೊನೆಯ ಅಧ್ಯಕ್ಷರಾಗಿ ಗ್ಲಾಸ್‌ನೊಸ್ಟ್ (ಮುಕ್ತತೆ) ಹಾಗೂ ಪೆರೆಸ್ಟ್ರೋಯಿಕ ಅಂದರೆ ಅದುವರೆಗೂ ಇದ್ದ ರಾಜಕೀಯ ಹಾಗೂ ಆರ್ಥಿಕ ವ್ಯವಸ್ಥೆಯಲ್ಲಿ ಸುಧಾರಣೆ ತರುವ ಎರಡು ನೀತಿಗಳನ್ನು ಹುಟ್ಟು ಹಾಕಿದರು. ಇದರ ಫಲವಾಗಿ ೧೯೨೨ರ ಡಿಸೆಂಬರಿ ನಲ್ಲಿ ಅಧಿಕೃತವಾಗಿ ಅಸ್ತಿತ್ವಕ್ಕೆ ಬಂದಿದ್ದ ಸೋವಿಯತ್ ರಷ್ಯಾ ಒಕ್ಕೂಟ ಶಿಥಿಲವಾಗಿ ಛಿದ್ರ ಛಿದ್ರವಾಯಿತು.೬೩ ವರ್ಷಗಳವರೆಗೆ ಅಮೇರಿಕಾಕ್ಕೆ ಸೆಡ್ಡು ಹೊಡೆದು ನಿಂತಿದ್ದ ‘ಸೂಪರ್ ಪವರ್’ ರಾಷ್ಟ್ರ ಹೇಳ ಹೆಸರಿಲ್ಲದಂತಾಯಿತು. ರಷ್ಯಾ ಕ್ರಾಂತಿಯ ಹರಿಕಾರನಾಗಿದ್ದ ಲೆನಿನ್ನನ ಪ್ರತಿಮೆಯ ನ್ನು ಉತ್ಸಾಹದಿಂದ ಅಡ್ಡ ಮಲಗಿಸಿದ ಅಲ್ಲಿಯ ಜನ ಸಂಭ್ರಮಿಸಿದ್ದನ್ನು ಕಂಡು ವೈರಿ ರಾಷ್ಟ್ರವೆಂದೇ ಬಿಂಬಿತ ವಾಗಿದ್ದ ಅಮೇರಿಕ ತನ್ನ ಯೋಜನೆ ಫಲಿತವಾಗಿದ್ದಕ್ಕೆ ಹಾಗೂ ವಿಶ್ವದಲ್ಲಿ ತನ್ನ ಏಕಮೇವಾಧಿಪತ್ಯದ ಪ್ರತಿಷ್ಠಾಪ ನೆಗೆ ಇನ್ನಿಲ್ಲದಂತೆ ಬೀಗಿತು. ಆದರೆ ಭಾರತದಂತಹ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವೂ ಸೇರಿದಂತೆ ವಿಶ್ವದ ಅನೇಕ ರಾಷ್ಟ್ರ ಗಳು ಮರುಗಿದವು. ಇದಕ್ಕೆ ಕಾರಣ ಪ್ರಜಾಪ್ರಭುತ್ವ ವಿರೋಧಿ ರಾಷ್ಟ್ರದ ಅಧಃಪತನ, ಒಟ್ಟಾರೆ ಸ್ವಾತಂತ್ರ್ಯದ ಸೋಲು ಎಂಬ ಸತ್ಯದ ಅರಿವು. ಈ ಘಟನೆ ಸ್ವಾತಂತ್ರ್ಯದ ವ್ಯಾಖ್ಯಾನವನ್ನು ಹಿಗ್ಗಿಸಿದಷ್ಟೇ ಅಲ್ಲ ಅದರ ಮಹತ್ವವನ್ನು ಮತ್ತೊಮ್ಮೆ ಎತ್ತಿ ಹಿಡಿಯಿತು. ಈ ಹಿನ್ನೆಲೆಯಲ್ಲಿ ಮೂರು ದಶಕಗಳ ನಂತರ ಇಂದು ಸ್ವಾತಂತ್ರ್ಯದ ಮರು ವ್ಯಾಖ್ಯಾನ ಹಾಗೂ ಅದರ ಮಹತ್ವದ ಮರು ಚಿಂತನೆ ಅಗತ್ಯವೆನ್ನಿಸುತ್ತದೆ. ರಾಜ್ಯಶಾಸ್ತ್ರದಲ್ಲಿ ಸ್ವಾತಂತ್ರ್ಯದ ಬಗ್ಗೆ ಬಹಳ ಆಸಕ್ತಿಕರ ವ್ಯಾಖ್ಯೆಯೊಂದಿದೆ. ಅದೆಂದರೆ, ‘ ಯೂ ಹ್ಯಾವ್ ದ ಲಿಬರ್ಟಿ ಟು ಸ್ಟ್ರೆ ಚ್ ಯುವರ್ ಹ್ಯಾಂಡ್ ಅಂಟಿಲ್ ಯೂ ರೀಚ್ ಅನದರ್ ಮ್ಯಾನ್ಸ್ ನೋಸ್ ‘ ಎಂದು. ಎದುರಿನವನ/ಳ ಮೂಗಿನವರೆಗೆ ನೀನು ನಿನ್ನ ಕೈಯನ್ನು ಬೀಸುವಷ್ಟು ಸ್ವಾತಂತ್ರ್ಯ ನಿನಗಿದೆ. ಒಂದೊಮ್ಮೆ ನಿನ್ನ ಕೈ ಮೂಗಿಗೆ ಸೋಕಿತೋ ಆಗ ಅದು ಎದುರಿನವನ/ಳ ಸ್ವಾತಂತ್ರ್ಯ ಹರಣ ಹಾಗೂ ನಿನ್ನ ಸ್ವೇಚ್ಛಾಚಾರ ಎಂದು ಬಹಳ ಮಾರ್ಮಿಕವಾಗಿ ಈ ಮಾತು ಹೇಳುತ್ತದೆ. ಇಂದಿನ ಡಿಜಿಟಲ್ ಮಾಧ್ಯಮಗಳ, ಸಾಮಾಜಿಕ ಮಾಧ್ಯಮಗಳ ಯುಗದಲ್ಲಿ ಇಂತಹ ಮಾರ್ಮಿಕ ಅರ್ಥ ಸ್ವಾತಂತ್ರ್ಯಕ್ಕೆ ಇದೆಯೇ ಎಂಬುದು ಗೊಂದಲವಾಗಿಯೂ, ಪ್ರಶ್ನೆಯಾಗಿಯೂ, ಅಪ್ರಸ್ತುತವಾಗಿಯೂ ನಿಲ್ಲುತ್ತದೆ. ಇದು ಇನ್ನೊಬ್ಬರ ಮೂಗಿಗೆ ಗುದ್ದಿ ಅವರ ಸ್ವಾತಂತ್ರ್ಯವನ್ನು, ಸ್ವಾಭಿಮಾನವನ್ನು ಕೆಣಕುವ, ಅಣಕಿಸುವ ಕಾಲ.ಇದಕ್ಕೆ ಹುಟ್ಟು-ಸಾವು, ನೋವು-ನಲಿವು, ಜಾತಿ-ಮತ, ಆರ್ಥಿಕ ಮೇಲು-ಕೀಳಾಟವಾಗಲೀ,ಲಿಂಗಭೇದಗಳೇ ಆಗಲೀ ಇಲ್ಲ ! ಸಾವು-ನೋವನ್ನು ಸಂಭ್ರಮಿಸುವ ಮನೋಭಾವ ವಂತೂ ಅಮಾನವೀಯವಷ್ಟೇ ಅಲ್ಲ. ಅತ್ಯಂತ ಹೀನ ಮನಸ್ಥಿತಿ. ೨೧ನೇ ಶತಮಾನದ ಆದಿಯಲ್ಲಿ ವಿಶ್ವವೇ ಹೊಸತನಕ್ಕೆ  ಅಣಿಯಾಯಿತು. ಆಧುನಿಕತೆಯ ನಿಚ್ಚಳತೆಗೆ ಸಾಮಾಜಿಕ ಮಾಧ್ಯಮಗಳು ಹಾಗೂ ತಾಂತ್ರಿಕತೆ ಬಹಳ ಇಂಬು ಕೊಟ್ಟು ಪೋಷಿಸಿದ ಕಾಲಘಟ್ಟವಿದು. ಆದರೆ ಕೆಲವೇ ವರ್ಷಗಳಲ್ಲಿ ಈ ಆಧುನಿಕ ಮಾಧ್ಯಮಗಳು ಅಶಾಂತಿ, ದ್ವೇಷ, ಅಸೂಯೆ, ಗುಂಪುಗಾರಿಕೆ, ಸ್ವಜನ ಪಕ್ಷಪಾತದಂತಹ ದೂರ್ತತೆಗಳನ್ನು ಪೊರೆವ ತಾಣಗಳೂ, ವಾಹಕಗಳೂ ಆಗಿ ಬದಲಾದದ್ದು ಈ ಶತಮಾನದ ದುರಂತ. ಭಯೋತ್ಪಾದಕರ ಕೈಯಲ್ಲಿ ಆಧುನಿಕ ಶಸ್ತ್ರಾಸ್ತ್ರ ಗಳು ಎಷ್ಟು ಮಾರಕವಾಗಿ ಈ ಕಾಲಘಟ್ಟದಲ್ಲಿ ಪರಿಣ ಮಿಸಿದವೋ ಅದಕ್ಕಿಂತ ಘೋರ ಪರಿಣಾಮವನ್ನು ಈ ಮಾಧ್ಯಮಗಳು ಉಂಟು ಮಾಡಿವೆ. ಲೆನಿನ್ ಪ್ರತಿಮೆಯನ್ನು ಅಡ್ಡ ಮಲಗಿಸಿ ಸಂಭ್ರಮಿಸಿದಂಥ ವರ ಸಂಖ್ಯೆ ಇಂದು ಹೆಚ್ಚಿದೆ. ಸಾವಂಥ ಸಾವನ್ನು ಬಾಯಿ ಚಪ್ಪರಿಸಿ ಸವಿಯಬಲ್ಲ ಹೀನರು ಅಗಣಿತರಾಗಿದ್ದಾರೆ. ಲಂಕೇಶರ ಸಾವಿಗೆ ಕರ್ನಾಟಕದಾದ್ಯಂತ ಶೋಕ ವ್ಯಕ್ತವಾ ದಂತೆಯೇ ಅವರ ನಿರ್ಗಮನಕ್ಕೆ ಆಂತರಿಕವಾಗಿ ಸಂತಸ ಪಟ್ಟ ಮನಸ್ಸುಗಳು ಇದ್ದವು. ಅದನ್ನು ಬಹಿರಂಗವಾಗಿ ವ್ಯಕ್ತಪಡಿಸುವ, ಸಂಭ್ರಮಿಸುವ ದೂರ್ತತೆ ಆಗ ಇರಲಿಲ್ಲ. ಆದರೆ ಯೂ ಆರ್ ಅನಂತಮೂರ್ತಿಯವರ ಸಾವಿನ ಹೊತ್ತಿಗೆ ಅದಕ್ಕೆ ರೂಪ ಬಂದಿತ್ತು. ಆ ನಂತರದಲ್ಲಿ ದೇಶ ದಾದ್ಯಂತ ನಡೆದ ಅನೇಕ ಹತ್ಯೆಗಳಿಗೆ ಬಹಿರಂಗವಾಗಿ, ಘಂಟಾಘೋಷವಾಗಿ ಸಂತಸ ವ್ಯಕ್ತಪಡಿಸಿದ, ಚಪ್ಪಾಳೆ ತಟ್ಟಿ ನಕ್ಕ ಜನತೆ ಲಕ್ಷಾಂತರ. ಇದು ಮೂಲತಃ ಆದದ್ದು ಸಾಮಾಜಿಕ ಮಾಧ್ಯಮಗಳಾದ ಫೇಸ್ ಬುಕ್,ಟ್ಚಿಟರ್, ವಾಟ್ಸಾಪ್‌ಗಳ ಮೂಲಕ. ಈಗಂತೂ ಸಾವು ಮನಸ್ಸನ್ನು ಕದಡುವ, ಕಂಗೆಡಿಸುವ ವಸ್ತುವೇ ಅಲ್ಲ. ಬದಲಾಗಿ ಸಂಭ್ರಮವನ್ನು ಒಳಗೊಳ್ಳುವ ವಿಕೃತಿ.ಇದಕ್ಕೆ ಆಧುನಿಕತೆಗೆ ತೆರೆದುಕೊಂಡ, ಆಧುನಿಕ ಶಿಕ್ಷಣ ಪಡೆದ, ಆಧುನಿಕ ಚಿಂತ ನೆಯ ಪ್ರತಿಪಾದಕರೆಂದು ಬಿಂಬಿಸಿಕೊಳ್ಳುವವರೂ ಒಲಿಯುತ್ತಿರುವುದನ್ನು ಏನೆಂದು ಅರ್ಥೈಸಬೇಕು ? ಒಂದು ದಶಕದ ಹಿಂದೆ ಸಾಮಾಜಿಕ ಜೀವನದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿದೆ ಎಂಬ ಕಳವಳ, ಆತಂಕವಿದ್ದರೆ ಈಗ ಸಂವೇದನಾರಹಿತ ಸಮಾಜದತ್ತ ಧಾಪುಗಾಲಿಕ್ಕುತ್ತಿ ರುವ ಕಾಲಕ್ಕೆ ಎಲ್ಲರೂ ಸಾಕ್ಷಿಯಾಗಬೇಕಾಗಿದೆ. ಇತರರ ನೋವಿಗೆ ನಲಿಯುವ, ನಲಿವಿಗೆ ಬೇಯುವ ಈ ಆಧುನಿಕ ಸಂಸ್ಕೃತಿಯ ಹುಟ್ಟು ಹಾಗೂ ಬೆಳವಣಿಗೆಗಳನ್ನು ೨೧ನೇ ಶತಮಾನದ ಆರಂಭದಲ್ಲಿ ಆದ ಆರ್ಥಿಕ, ರಾಜಕೀಯ ಹಾಗೂ ಧಾರ್ಮಿಕ ಬೆಳವಣಿಗೆಗೆಳ ಹಿನ್ನೆಲೆಯಲ್ಲಿ ನೋಡ ಬೇಕಾಗುತ್ತದೆ. ಹಣದ ಹಪಹಪಿ ಹಾಗೂ ವರ್ಗ-ವರ್ಣ ತಿಕ್ಕಾಟಗಳು ಸಮಾಜವನ್ನು ವಿಕೃತಿಯತ್ತ ನೂಕುತ್ತಿವೆ. ಇದನ್ನು ವಿರೋಧಿಸಿ ಏಕರೂಪಿ ಸ್ವಾಸ್ಥ್ಯ ಸಮಾಜದ ಕಲ್ಪನೆಯನ್ನು ಬಿತ್ತಿದ ಶಂಕರಾಚಾರ್ಯ, ಏಸು,ಪೈಗಂಬರ್ ಬುದ್ಧ,ಬಸವರಾದಿಯಾಗಿ ಗಾಂಧಿ, ಅಂಬೇಡ್ಕರ್ ಅವರ ವರೆಗೂ ಹರಿದು ಬಂದ ಈ ಪರಂಪರೆಯ ಇಂದಿನ ತಿರುವು ಅನಿರೀಕ್ಷಿತ ಹಾಗೂ ಆಘಾತಕರ. ಏಕರೂಪತೆಯನ್ನು ಸಾರುತ್ತ, ಬಹುರೂಪತೆಯನ್ನು ಅಪ್ಪಿಕೊಂಡು,ಒಪ್ಪಿಕೊಂ ಡು ಇಂದು ಮತ್ತೆ ಛಿದ್ರ ವಿಚ್ಛಿದ್ರ ಹಾದಿಯತ್ತ ಸಾಗಿರುವ ನಮ್ಮ ಈ ಪರಂಪರೆಯ ಬಗ್ಗೆ ಅತ್ಯಂತ ಜಾಗರೂಕರಾಗ ಬೇಕಾದ ಅವಶ್ಯಕತೆ ಹಿಂದೆಂದಿಗಿಂತ ಹೆಚ್ಚಿದೆ. ವರ್ಗ-ವರ್ಣಗಳನ್ನು ರಾಜಕೀಯವಾಗಿ ದುಡಿಸಿಕೊಳ್ಳುವ, ಊರು-ಕೇರಿ, ಕಛೇರಿಗಳಲ್ಲಿ, ಕೆಲಸದ ಜಾಗಗಳಲ್ಲಿ ಬಳಸಿಕೊಳ್ಳುವ ಜಾಯಮಾನ ಇಂದು ಸಾಮಾನ್ಯವಾಗಿದೆ. ಇದರಿಂದ ಗುಂಪುಗಾರಿಕೆ ಅತಿಯಾಗುತ್ತಿದೆ. ಈ ಪಿಡುಗು ಸಾಹಿತ್ಯ,ಸಾಂಸ್ಕೃತಿಕ ಕ್ಷೇತ್ರಗಳನ್ನೂ ಬಿಟ್ಟಿಲ್ಲ.ಆದ್ದರಿಂದಲೇ ತಮ್ಮ ತಮ್ಮ ಗುಂಪುಗಳನ್ನು ಪೊರೆಯಲು, ಪ್ರಶಸ್ತಿ ಪುರ ಸ್ಕಾರಗಳನ್ನು ನೀಡಲು ಹತ್ತಾರು ಸಂಘ ಸಂಸ್ಥೆಗಳು ಹುಟ್ಟುತ್ತಿವೆ. ಇಂಥ ಪ್ರವೃತ್ತಿಯನ್ನು ಪ್ರತಿಭಟಿಸಿದವರ ಪ್ರಾಣಾರ್ಪಣೆಯೂ ನಿರಂತರವಾಗಿದೆ.ಬಸವಣ್ಣನನ್ನು ನಿಂದಸಿದರೆ ವಚನ ಚಳುವಳಿಯ ಹಿರಿಮೆಯೇನು ಕಡಿಮೆಯಾಗುವುದೇ? ಗಾಂಧೀಜಿಗೆ ಗುಂಡಿಕ್ಕಿದರೆ ಅವರ ಸ್ವಾತಂತ್ರ್ಯ ಹೋರಾಟದ ಹಾದಿಯನ್ನು ಜಗತ್ತು ಮರೆಯುವುದೇ? ಲೇಖಕರ ಸಾವನ್ನು ಸಂಭ್ರಮಿಸಿದರೆ ಅವರ ಕೃತಿಗಳ ಮಹತ್ವವೇನು ಕಡಿಮೆಯಾಗುವುದೆ? ಈ ಪ್ರಶ್ನೆಗಳು ಹಾಗೂ ಇವಕ್ಕೆ ಉತ್ತರಗಳು ಎಲ್ಲರಿಗೂ ತಿಳಿದಿರುವಂಥದ್ದೇ. ಆದರೂ ಇವು ಇನ್ನು ಮುಂದೆ ಮತ್ತೆ ಮತ್ತೆ ಮುಖಾಮುಖಿಯಾಗುವ ಸಂದರ್ಭಗಳೇ ಹೆಚ್ಚು ಎಂಬುದನ್ನು ಪ್ರತಿ ಸಾವೂ ನಿಚ್ಚಳವಾಗಿಸುತ್ತಿದೆ. ಆರಂಭದಲ್ಲಿ ಹೇಳಿದ ಗ್ಲಾಸ್‌ನಾಸ್ಟ್  ಹಾಗೂ ಪೆರೆಸ್ತೊಯಿಕಾ ವನ್ನು ಮತ್ತೊಮ್ಮೆ ನೆನಪಿಸಿಕೊಳ್ಳೋಣ. ಕಟ್ಟುವ ಮುಕ್ತತೆ ಬೇಕೇ ಹೊರತು ಕೆಡವುವ ಮುಕ್ತತೆ ಅಲ್ಲ. ಕೆಡವುವ ಮುಕ್ತತೆಗೆ ಇಂಬು ಕೊಟ್ಟರೆ ದೇಶವೇ ನಾಶವಾಗುವ ಉದಾಹರಣೆಗಳು ನಮ್ಮ ಮುಂದಿವೆ. ಅವುಗಳನ್ನು ಗಮನಿಸಿ ನಮ್ಮ ಮುಂದಿನ ನಡೆಯನ್ನು ನಾವೇ ನಿರ್ಧರಿಸಿಕೊಳ್ಳೋಣ.                           *******************************

ಕಟ್ಟುವ ಮುಕ್ತತೆ Read Post »

ಇತರೆ, ಲಹರಿ

ಮಾಯಾ ಜಗತ್ತಿನ ಚಕ್ರವ್ಯೂಹದಲ್ಲಿ ಸಿಲುಕಿ

ಲಹರಿ ಡಾ. ಅಜಿತ್ ಹರೀಶಿ ವಾತಾವರಣ ಥಂಡಿಯಿಂದ ಕೂಡಿದೆ. ಮನಸ್ಸು ದುಪ್ಪಡಿ ಹೊದ್ದು ಮಲಗಿದೆ. ನಿನ್ನೆ ಒಂದೇ ದಿನಕ್ಕೆ ವಾಟ್ಸಾಪ್ ಗುಂಪೊಂದರಿಂದ ನಾಲ್ಕು ಜನ ಲೆಫ್ಟ್ ಆದರು. ಹೋದ ವರ್ಷ ಜುಲೈ ತಿಂಗಳಲ್ಲೇ ನಾನು ಎಲ್ಲ ಗ್ರೂಪ್ ಗಳಿಂದ ಹೊರಹೋಗಿದ್ದೆ. ಮತ್ತೆ ಕೆಲವು ಗ್ರೂಪ್ ಗಳಿಗೆ ಸೆಪ್ಟೆಂಬರ್ ತಿಂಗಳಲ್ಲಿ ಮರಳಿದ್ದೆ. ಅವರೂ ಮರಳಬಹುದು. ವಾತಾವರಣ, ವಾಟ್ಸಾಪು ಮತ್ತು ಮಾನಸಿಕತೆಯ ಜೊತೆಗೆ ಈ ಬಾರಿ ಕೊರೋನ ಯಾಡೆಡ್ ಫ್ಲೇವರ್ರು. ಫೇಸ್ಬುಕ್ ನಮ್ಮನೆ ದೇವರು! ಬೆಳಿಗ್ಗೆ ಫೇಸ್ಬುಕ್ ಮುಂದೆ ಕುಳಿತು ಭಜನೆ ಮಾಡುವಾಗ ಕಹಳೆಯ ವಿನಯ ಸಜ್ಜನರ ( 29 ) ಸಾವಿಗೆ ಸ್ಯಾಡ್ ಇಮೋಜಿ ಕೊಡುತ್ತೇನೆ. ಫೇಸ್ಬುಕ್ ತೋರಿಸುವ ಹುಟ್ಟುಹಬ್ಬದ ನೋಟಿಫಿಕೇಶನ್ ಗೆಳೆಯರಿಗೆ ಶುಭಾಶಯಗಳನ್ನು ಕೋರುತ್ತೇನೆ. ಹಾಗೆ ಕೋರುವಾಗ ಅವರು ಅಲ್ಲಿ ಆಕ್ಟೀವ್ ಇದ್ದಾರೋ ಇಲ್ಲವೋ ನೋಡಿ, ಇಲ್ಲದಿದ್ದರೆ ಅನ್ ಫ್ರೆಂಡ್ ಮಾಡಿ ಮತ್ಯಾರದೋ ರಿಕ್ವೆಸ್ಟ್ ಅಕ್ಸೆಪ್ಟ್ ಮಾಡುತ್ತೇನೆ. ಅಲ್ಲೊಂದು ಆಯಾ ದಿನದ ಮೆಮೊರಿ ತೋರಿಸುವ ವಿಭಾಗವೊಂದಿರುವುದು ನಿಮಗೆ ಗೊತ್ತಿಲ್ಲದ್ದೇನಲ್ಲ. ಅಲ್ಲಿ ನಾನು 2009 ರಿಂದ, ಇದೇ ದಿನ ಹಾಕಿದ ಪೋಸ್ಟ್ ಗಳನ್ನು ತೋರಿಸುತ್ತದೆ. ನೋಡಯ್ಯ ನಿನ್ನ ಅವತ್ತಿನ ಟೇಸ್ಟು, ಪಾಪ, ಪುಣ್ಯ ಎಂದು ಚಿತ್ರಗುಪ್ತನ ಪೋಸ್ ನೀಡುತ್ತದೆ. ನಾಲ್ಕೈದು ಪೋಸ್ಟ್ ಗಳಲ್ಲಿ ಮೂರನ್ನು ಅಳಿಸಿ ಪ್ರಾಯಶ್ಚಿತ್ತ ಮಾಡಿಕೊಳ್ಳುತ್ತೇನೆ. ಆಗ ಕಡಿಮೆ ಜನ ಓದುತ್ತಿದ್ದರೆಂಬ ಸಮಾಧಾನ ಒಳಗೊಳಗೇ! ಮತ್ತೆ ಹೋಂ ಗೆ ಬರುವಷ್ಟರಲ್ಲಿ ಒಂದಿಷ್ಟು ಪೋಸ್ಟ್ ಗಳಿರುತ್ತವೆ. ಅಭಿನಂದನೆಗಳನ್ನು ಕೋರುವುದು. ಆಹ್, ಓಹ್, ಚೆನ್ನಾಗಿದೆ, ಸೂಪರ್ ಇತ್ಯಾದಿ ಕಾಮೆಂಟಿಸಿ – ನಾನು ಒಂದು ಜಬರ್ದಸ್ತ್ ಸ್ಟೇಟಸ್ ಹಾಕುತ್ತೇನೆ. ಆಮೇಲೆ ಬಿಡುವಾದಾಗಲೆಲ್ಲ ಲೈಕ್, ಕಾಮೆಂಟ್ ನೋಡಿ ಒಳಗೊಳಗೇ ಖುಷಿ ಪಡುತ್ತೇನೆ. ಮುಂದಿನ ವರ್ಷ ಇದೇ ದಿನ ಅದೊಂದು ಲಟಾರಿ ಪೋಸ್ಟ್ ಅನಿಸಿ ಅಳಿಸಬಹುದು. ಒಂದಿಷ್ಟು ಪರ ನಿಂದೆ, ಆತ್ಮಸ್ತುತಿ ಮತ್ತು ಪರ ಸ್ತುತಿ, ಆತ್ಮನಿಂದನೆಯ ಪೋಸ್ಟ್ ಗಳನ್ನು ಸ್ರ್ಕೋಲ್ ಮಾಡುತ್ತ ಮುಂದುವರೆಯುತ್ತೇನೆ. ಓಹ್! ಕಳೆದೆರಡು ದಿನಗಳಿಂದ ಇನ್ಸ್ಟಾಗ್ರಾಂ, ಟ್ವಿಟ್ಟರ್ ಮತ್ತು ಟೆಲಿಗ್ರಾಂ ಓಪನ್ ಮಾಡಿಲ್ಲ. ಸಮಯವಾಯಿತು, ವೆರಿ ಹೆಕ್ಟಿಕ್ ಡೇ ಡಿಯರ್ ಫ್ರೆಂಡ್ಸ್. ನಾಳೆ ಮತ್ತೆ ಸಿಗೋಣ ಬೈ ನೌ.*****************************

ಮಾಯಾ ಜಗತ್ತಿನ ಚಕ್ರವ್ಯೂಹದಲ್ಲಿ ಸಿಲುಕಿ Read Post »

ಇತರೆ

ಕವಿತೆಯೆಂಬ ಪುಳಕದ ಧ್ಯಾನ

ಮೊದಲ ಕವಿತೆಯ ರೋಮಾಂಚನ ಸ್ಮಿತಾ ಅಮೃತರಾಜ್ ನಿಜ  ಹೇಳಬೇಕೆಂದರೆ  ನಾನೊಬ್ಬಳು ಕವಯತ್ರಿ ಆಗುತ್ತೇನೆ ಅಂತ ಕನಸು ಮನಸಿನಲ್ಲೂ ಅಂದು ಕೊಂಡವಳಲ್ಲ. ಈಗಲೂ ಹಾಗನ್ನಿಸುತ್ತಿಲ್ಲ.  ಆದರೆ ಕೆಲವೊಮ್ಮೆ ಹುಕಿ ಹುಟ್ಟಿ ಗೀಚಿದ ಎರಡು ಸಾಲು ಅಲ್ಲಿಲ್ಲಿ ಕಾಣಿಸಿಕೊಂಡು, ಕೇಳಿಸಿಕೊಂಡು, ಅದನ್ನೇ ಕವಿತೆ ಅಂತ ಭ್ರಮಿಸಿ ನನಗೆ ಕವಯತ್ರಿ ಅನ್ನುವ ಬಿರುದಾಂಕಿತವನ್ನ ಅವರಿವರು ಯಾವುದೇ ಕವಡೆ ಕಾಸಿಲ್ಲದೆ ಪುಕ್ಕಟೆ ಕೊಟ್ಟು ಗೌರವಾದರದಿಂದ ನೋಡುವಾಗ, ನಾನು ಅದನ್ನು ಸುಖಾ ಸುಮ್ಮಗೆ ಅಲ್ಲಗಳೆದರೆ ಅದು ಸಾಹಿತ್ಯ ಲೋಕಕ್ಕೇ ಮಾಡುವ ಅಪಚಾರವಲ್ಲವೇ? ಅಂತ ನನ್ನೊಳಗೆ ನಾನೇ ತರ್ಕಿಸಿಕೊಂಡು ಒಪ್ಪಿಕೊಳ್ಳುತ್ತೇನೆ. ಅಷ್ಟಕ್ಕೂ ಎಷ್ಟು ಬೇಡವೆಂದರೂ ಒಳಗೊಳಗೆ ಒಂದು ತುಡಿತ, ಗುರುತಿಸಿಕೊಳ್ಳಬೇಕೆಂಬ ಚಪಲ ನರ ಮನುಷ್ಯರಿಗೆ ಇದ್ದದ್ದೇ ತಾನೇ?. ಅದಕ್ಕೆ ನಾನೂ ಅಪವಾದವಲ್ಲ. ಹಾಗಾಗಿ ಕವಿತೆಯಂತ ನಿರಾಪಯಕಾರಿ ಅಥವಾ ನಿರುಪ್ರದವಿಯ ಪಟ್ಟ ಗಿಟ್ಟಿಸಿಕೊಂಡರೆ ಅದರಲ್ಲಿ ತಪ್ಪಿಲ್ಲ ಅನ್ನುವುದು ನನ್ನ ಧೋರಣೆ. ಅದರಲ್ಲೂ ಕವಿತೆಯ ಸಖ್ಯವನ್ನು ಬೆಳೆಸಿಕೊಂಡರೆ ಸುತ್ತಮುತ್ತಲಿನ ಜಗತ್ತೆಲ್ಲಾ ಸುಖಮಯ ಮತ್ತು ಸುಂದರ ಅಂತ ಬಲ್ಲವರೇ ಹೇಳಿದ ಮೇಲೆ ನನಗೂ ಕವಿತೆಯ ಒಡನಾಟ ಒಳ್ಳೆಯದೇ ಅನ್ನಿಸಿತು. ಅದಿರಲಿ, ನಾನೀಗ ಹೇಳ ಹೊರಟಿರುವ ವಿಷಯ ಅದಲ್ಲ. ಅದರ ಮೊದಲನೆಯ ಪೀಠಿಕಾ ಭಾಗ. ನನಗೂ ಕವಿತೆಗೂ ಅಂಟಿದ ನಂಟಿನ ಕುರಿತು. ಅದಕ್ಕೆ ಕಾರಣವಾದ ನನ್ನ ಚೊಚ್ಚಲ ಕವಿತೆಯ ಪ್ರಸವದ ಕುರಿತು, ಅದು ಕಟ್ಟಿಕೊಟ್ಟ ಪುಳಕ ಮತ್ತು ರೋಮಾಂಚನದ ಜಗತ್ತಿನ ಕುರಿತು.   ಸರಿ ಸುಮಾರು ಇಪ್ಪತ್ತು ವರುಷಗಳ ಹಿಂದಿನ ಮಾತು. ಪದವಿ ತರಗತಿಗೆ ಕಾಲಿಟ್ಟ ಹೊತ್ತದು. ಎಲ್ಲಾ ಮಕ್ಕಳು ರಂಗು ರಂಗಿನ ಉತ್ಸಾಹದ ಬುಗ್ಗೆಗಳೇ. ಪ್ರತಿಯೊಬ್ಬರಿಗೂ ಒಂದೊಂದು ರೀತಿಯ ಹವ್ಯಾಸ, ಆಸಕ್ತಿ ಇತ್ತು. ಕಾಲೇಜಿನ ಕಾರ್ಯಕ್ರಮ ಬಂತೆಂದರೆ ಎಲ್ಲರೂ ಪಾದರಸಗಳೇ. ಅಪವಾದಕ್ಕೆಂಬಂತೆ ನಾನೊಬ್ಬಳು ಯಾವುದಕ್ಕೂ ಸೇರದೇ ಮೂಲೆಯಲ್ಲಿ ಮುದುಡಿಕೊಳ್ಳುತ್ತಿದ್ದೆ. ನನಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸುವುದೆಂದರೆ ಬಲು ಪ್ರಿಯವೇ. ಆದರೆ ಈ ಹಾಳೂ ಹಿಂಜರಿಕೆ ಎಲ್ಲಿಂದ ಬಂದು ತಗುಲಿಹಾಕಿಕೊಂಡಿತೋ?, ಹರವಿ ಬಿಡಿಸ ಹೊರಟರೆ ಅದೋ ಇದೋ..?ಗೊಂದಲವಾಗುವಷ್ಟು.  ಮತ್ತೆಂತ  ಮಾಡಲು ಸಾಧ್ಯ?. ಆದರೂ ಒಳಗೊಂದು ಅಭೀಪ್ಸೆ. ನಾನು ಸೈ ಎನ್ನಿಸಿಕೊಳ್ಳಬೇಕು ಅನ್ನುವುದು. ಹೀಗಿರುವಾಗ ಕಾಲೇಜಿನ ವಾರ್ಷಿಕೋತ್ಸವದ ಪ್ರಯುಕ್ತ ಕವನ ಸ್ಪರ್ಧೆಯನ್ನು ಏರ್ಪಡಿಸಿದ್ದರು. ಕವಿತೆಯ ಎಬಿಸಿಡಿ ಗೊತ್ತಿರದ ನಾನು, ಅಲ್ಲೊಂದು ಇಲ್ಲೊಂದು ಬಾಲಮಂಗಳದ ಕವಿತೆಯನ್ನು ಓದಿದ್ದು ಬಿಟ್ಟರೆ, ಶಾಲೆಯ ಪಠ್ಯ ಪುಸ್ತಕದ ಕವಿತೆಗಳನ್ನು ಪರೀಕ್ಷೆಯ ದೃಷ್ಟಿಯಿಂದ ಕಣ್ಣಾಡಿಸಿದ್ದು  ಬಿಟ್ಟರೆ,  ಕವಿತೆ ಅಂದರೆ ಬುದ್ದಿವಂತರ ಬಂಡವಾಳ ಅನ್ನುವುದಷ್ಟೇ ಗೊತ್ತಿದ್ದರೂ ಸಣ್ಣ ತರಗತಿಯಲ್ಲಿ ದಡ್ಡಿ ಹುಡುಗಿಯೊಬ್ಬಳು ನೋಟ್ ಪುಸ್ತಕದ ಹಾಳೆಯ ನಡುವೆ ಕವಿತೆ ಗೀಚುತ್ತಿದ್ದದ್ದು ನಿಜಕ್ಕೂ ನನಗೆ ವಿಸ್ಮಯದಂತೆ ತೋರಿತ್ತು. ಅಲ್ಲಿಂದನೇ ಕವಿತೆಯ ಕುರಿತು ಒಂದು ರೀತಿಯ ಹೇಳಲಾಗದ ಅನೂಹ್ಯ ಆಕರ್ಷಣೆ ಇತ್ತೆಂಬುದು ಈಗ ಅನ್ನಿಸುತ್ತಿದೆ. ಆದರೆ ರಮ್ಯ ಕತೆಗಳನ್ನು, ಸಾಮಾಜಿಕ ಕಾದಂಬರಿಗಳನ್ನು ಸಿಕ್ಕಾಪಟ್ಟೆ ಓದುವ ಅಭ್ಯಾಸ ಇತ್ತು. ನಮ್ಮ ಕಾಲೇಜಿನಲ್ಲಿ ನಮಗೆ ಸಾಹಿತ್ಯ ಓದಲು ಬರೆಯಲು ಪ್ರೇರೇಪಿಸುವ ಅರ್ಥಶಾಸ್ತ್ರದ ಉಪನ್ಯಾಸಕರಿದ್ದರು. ಅವರು  ಆ ದಿನ ಪಾಠ ಮುಗಿಸಿ ಹೋಗುವ ಮುನ್ನ ಈ ಸಲ ನೀವು  ಈ ಸ್ಪರ್ಧೆಯಲ್ಲಿ ಭಾಗವಹಿಸಿ , ಈ ಕಾಲೇಜಿನಿಂದ  ಹೊರ ಹೋಗುವ ಮುನ್ನ  ಕವಿ ಪಟ್ಟ ಕಟ್ಟಿಕೊಂಡು ಹೋಗಿ ನೋಡುವಾ ಅಂತ ಸವಾಲೆಸೆಯುವಂತೆ, ತಮಾಷೆಗೋ, ಗಂಭೀರಕ್ಕೋ ಒಂದೂ ಗೊತ್ತಾಗದಂತೆ ಹೇಳಿ ಹೋದರೂ ನನ್ನ ತಲೆಯೊಳಗೆ ಹೌದಲ್ವಾ! ನಾನೂ ಯಾಕೆ ಪ್ರಯತ್ನಿಸಬಾರದು ?, ನಾನೂ ಯಾವುದಕ್ಕೂ ಬಾರದವಳು ಅಂತ ಅನ್ನಿಸಿಕೊಳ್ಳಬಾರದು ಅನ್ನುವ ಬಹುಕಾಲದ ಹಪಾಹಪಿಗೆ ತೀವ್ರವಾಗಿ ಕವಿತೆ ಬರೆಯಬೇಕು ಅಂತ ಅನ್ನಿಸತೊಡಗಿತು. ನನ್ನ ಹಾಸ್ಟೆಲ್ ಮೇಟ್  ಗೆಳತಿಯನ್ನು ಪುಸಲಾಯಿಸಿ, ಅವಳು ನನ್ನ ಜೊತೆ ಧೈರ್ಯಕ್ಕಿದ್ದಾಳೆಂಬುದನ್ನು ಖಾತ್ರಿ ಪಡಿಸಿಕೊಂಡ ಮೇಲೆ ನಾನೂ ಕವಿತೆ ಬರೆಯುವ ಸಾಹಸಕ್ಕೆ ಮುಂದಾಗಿದ್ದೆ. ನಾಳೆ ಕವಿತೆ ಸ್ಪರ್ಧೆ, ಎಂತ ಬರಿಯೋದು ಅಂತ ಮಂಡೆಗೆ ಹೊಳಿತಾನೇ ಇಲ್ಲ. ಕವಿತೆ ಎದೆಯೊಳಗಿನಿಂದ ಮೊಳೆಯಬೇಕೆಂಬುದು ಗೊತ್ತೇ ಇರಲಿಲ್ಲ. ಆದರೆ ಎದೆಯೊಳಗೆ ಅವಲಕ್ಕಿ ಕುಟ್ಟಲು ಶುರು ಮಾಡಿತ್ತು.  ಸ್ಥಳದಲ್ಲಿ ಕುಳಿತೇ ಬರೆಯಬೇಕು ಅಂತ ಮೊದಲೇ ಹೇಳಿದ್ದರು. ಯಾಕೆ ಬೇಕಿತ್ತು ಈ ಬೇಡದ ಉಸಾಬರಿ ಅಂತ ಸಾವಿರದ ಒಂದು ಬಾರಿ ನನಗೆ ನಾನೇ ಹೇಳಿಕೊಂಡಿರ ಬಹುದು. ಹಾಗೇ ಹೀಗೇ ಹೇಗೋ ಪಾಠ ಓದಿಕೊಂಡು, ನಡು ನಡುವೆ, ಸಾಯಿಸುತೆ,ತ್ರಿವೇಣಿ ಓದಿಕೊಂಡು ತೆಪ್ಪಗಿರಬಹುದ್ದಿತ್ತಲ್ಲ?. ಇನ್ನು ನಾನು ಕವಿತೆ ಬರೆದು ,ಅದನ್ನು ಓದಿ ಲೆಕ್ಚರ್ ನಗುವುದು.. ಇದೆಲ್ಲಾ ಬೇಕಾ?.ಇವನ್ನೆಲ್ಲಾ ತಲೆಯೊಳಗೆ ಹುಳದಂತೆ ಬಿಟ್ಟುಕೊಂಡು ಲೈಬ್ರರಿಗೆ ಹೋಗಿ ಅಲ್ಲಿ ಪುಸ್ತಕದೊಳಗಿದ್ದ ಕವಿತೆಯನ್ನೆಲ್ಲಾ ಜಾಲಾಡಿದ್ದೇ ಜಾಲಾಡಿದ್ದು. .ಇದನ್ನೆಲ್ಲಾ ನೆನಪಿಸಿಕೊಳ್ಳುವ ಈ ಹೊತ್ತಿನಲ್ಲಿ ನಗು ತಡೆಯಲಾರದಷ್ಟು ಬರುತ್ತಿದೆ. ಕವಿತೆ ಯಾಕೆ ಬರಿಯಬೇಕು? ಕವಿತೆ ಅಂದರೆ ಏನು ಅಂತನೂ ತಲೆ ಬುಡ ಗೊತ್ತಿಲ್ಲದ ಸಂಧಿಗ್ಧತೆಯಲ್ಲಿ ಕವಿತೆ ಬರೆಯಲು ಹೊರಟಿದ್ದೆ. ಆದರೆ ನನ್ನ ಜೊತೆಗ ಹೆಸರು ನೋಂದಾಯಿಸಿದ ಗೆಳತಿ ಈ ಕವಿತೆಗೂ ನನಗೂ ಯಾವುದೇ ಸಂಬಂಧವಿಲ್ಲವೆಂಬಂತೆ ಓಡಾಡಿಕೊಂಡಿರುವುದನ್ನು ನೋಡಿದಾಗ ನಿಜಕ್ಕೂ ಗಾಬರಿಯೂ ನಗುವೂ ಒಟ್ಟೊಟ್ಟಿಗೆ ಬರುತ್ತಿತ್ತು. ನನಗೊಬ್ಬಳಿಗೆ ಯಾಕೆ ಹೀಗೆ ಆಗುತ್ತಿದೆಯೆಂದು ತಲೆ ಕೆರೆದುಕೊಂಡರೂ ಉತ್ತರ ಸಿಗುತ್ತಿರಲಿಲ್ಲ. ಇನ್ನು ಅಲ್ಲಿ ಕೂತು ಎಂತ ಕವಿತೆ ಬರೆಯೋದಪ್ಪಾ ಅಂತ ಒಂದು ವಾರದಿಂದ ಕೂತು ಯೋಚಿಸಿದರೂ  ಜಪ್ಪಯ್ಯ ಅಂದರೂ ಒಂದು ಸಾಲೂ ಹೊಳೆದಿರಲಿಲ್ಲ. ನನ್ನ ಸಂಕಟವನ್ನು ಕಡಿಮೆ ಮಾಡಲೋ ಎಂಬಂತೆ ಆ ದಿನ ಎಲ್ಲರಿಗೂ   ’ ಕಾಲ ಕಾಯುವುದಿಲ್ಲ ’ ಅನ್ನೋ  ಒಂದೇ ಶೀರ್ಷಿಕೆಯನ್ನು ಕೊಟ್ಟು ಈ ಕುರಿತು ಕವಿತೆ ಮನೆಯಲ್ಲಿ ಯೋಚಿಸಿ ಬರೆದುಕೊಂಡು ಬನ್ನಿ . ಮತ್ತೆ ಅದು ನಿಮ್ಮ ಸ್ವಂತದ್ದೇ ಆಗಿರಲಿ ಅಂತ ಎಚ್ವರಿಕೆ ಬೇರೆ ಕೊಟ್ಟಿದ್ದರು. ಬಹುಷ; ಅವರಿಗೆ ನಮ್ಮ ಮೇಲೆ ಸಣ್ಣ ಗುಮಾನಿ ಇದ್ದಂತೆ ತೋರುತ್ತದೆ.     ನಮ್ಮ ಕಾಲೇಜಿನಲ್ಲಿ ಅದಾಗಲೇ ಕವಿಗಳು ಅಂತ ಪೇಟ ಧಾರಣೆ ಮಾಡಿಕೊಂಡವರ ಒಂದು ಬಳಗ ಇತ್ತು. ಅವರನ್ನೆಲ್ಲ ನೋಡುವಾಗ ಇವರ ಮಂಡೆಲಿ ಭಯಂಕರ ಬೊಂಡು ಇದೆ ಅಂತ ನಮಗೆ ನಾವೇ ಗ್ರಹಿಸಿಕೊಂಡಿದ್ದೆವು. ಅವರನ್ನು ಕಾಲೇಜಿನಲ್ಲಿ ನೋಡುವಾಗ ಇವರೇ  ಕುವೆಂಪು, ಬೇಂದ್ರೆಯವರ ನಂತರದ ವಾರಸುದಾರರು ಅಂತ  ಭಾಸವಾಗಿ ಭಯ ಭಕ್ತಿ ಹುಟ್ಟುತ್ತಿತ್ತು. ಇವರೆಲ್ಲರ ನಡುವೆ ನಾನು ಕವಿತೆ ಬರೆಯೋದುಂಟೇ?.ಇರಲಿ ಬಿಡು ಆದದ್ದು ಆಗಲಿ, ಒಂದು ಕವಿತೆ ಬರೆದು ಲಕೋಟೆಯೊಳಗೆ ಹಾಕಿ ಗೋಂದು ಅಂಟಿಸಿ ಕೊಟ್ಟರೆ ಯಾರಪ್ಪನ ಗಂಟು ಹೋಗುವುದಿಲ್ಲ ಅಂತ ನನ್ನನ್ನು ನಾನು ಸಮಾಧಾನಿಸಿಕೊಂಡು ’ಕಾಲ ಕಾಯುವುದಿಲ್ಲ’ ಕವಿತೆಯ ಕುರಿತ ಯೋಚನೆಯಲ್ಲೇ ರಾತ್ರೆಯಿಡೀ ಕಾಲ ಕಳೆಯುತ್ತಾ  ಯೋಚಿಸಿ ಯೋಚಿಸಿ ಇನ್ನೇನು ತಲೆ ಹನ್ನೆರಡಾಣೆ ಆಗುತ್ತೆ ಅನ್ನುವಾಗ ಪಕ್ಕನೆ ಹೊಳೆದೇ ಬಿಟ್ಟಿತು ನೋಡಿ ಎರಡು ಸಾಲು. ಆರ್ಕಿಮಿಡಿಸಿಗೆ ಆದ ಸಂತೋಷ ಏನು ಎಂಬುದನ್ನು ಈಗ ನಾನು ಅನುಭವಿಸಲು ಶಕ್ಯಳಾಗಿದ್ದೆ. ದಡಕ್ಕನೆ ಎದ್ದು ಎಲ್ಲಿ ಆ ಸಾಲು ಕೈ ತಪ್ಪಿ ಹೋಗುತ್ತೋ ಅಂತ ದಿಗಿಲಿನಿಂದ ಪೆನ್ನು ಪೇಪರು ಹಿಡಿದು ಕುಳಿತೇ ಬಿಟ್ಟೆ.    ’ ಕಾಲ ಕಾಯುವುದಿಲ್ಲ ಗೆಳತೀ.. ಆಗಲೇ ಬೇಕಾದುದಕೆ  ಮರುಕವನೇಕೆ ಪಡುತೀ..’ ಪ್ರೇಮ ಪ್ರಣಯದ ನವಿರು ಸಾಲುಗಳು ಹುಟ್ಟ ಬೇಕಾದ  ಆ ಪ್ರಾಯದಲ್ಲಿ ವೇದಾಂತಿಯಂತೆ ಯಾಕೆ  ಈ ಸಾಲು ಹುಟ್ಟಿಕೊಂಡಿತೋ ಅಂತ ಹಲವು ಭಾರಿ ಯೋಚಿಸಿದ್ದಿದೆ. ಈ ವರೆಗೂ ಉತ್ತರ ದಕ್ಕಲಿಲ್ಲ. ಕವಿತೆಯೆಂದರೆ ಅದೇ ತಾನೇ ಉತ್ತರಕ್ಕೆ ನಿಲುಕದ್ದು. ಸಿಕ್ಕ ಎರಡೇ ಎರಡು ಸಾಲು ಹಿಡಿದುಕೊಂಡು , ಪ್ರಾಸ ಜೋಡಿಸಲು ತ್ರಾಸ ಪಡುತ್ತಾ ಒಂದೊಂದೇ ಸಾಲು ಜೋಡಿಸುತ್ತಾ ಅದೆಂಗೆ ಇಪ್ಪತ್ತು ಸಾಲು ಕವಿತೆ ಬರೆದೆನೋ ಆ  ಪರಮಾತ್ಮನಿಗೇ ಗೊತ್ತು.  ಮೊದಲ ಪದ್ಯ ಅದು. ಬರೆದಾದ ಮೇಲೆ ಅದೆಂಥಾ ನಿರಾಳ ಅಂತೀರಾ?. ನಿಜಕ್ಕೂ ಅಂತಹ ಒಂದು ಭಾವ ನನಗೆ ಈವರೆಗೂ ದಕ್ಕಲಿಲ್ಲ.  ಬರೆದ ಒಂದು ಪುಟವನ್ನು ಅದೆಷ್ಟು ಬಾರಿ ಶ್ಲೋಕ ಪಠಿಸುವಂತೆ ಪಠಿಸಿದೆನೋ..?. ಭಗವಂತನ ನಾಮ ಸ್ಮರಣೆ ಮಾಡಿದ್ದರೆ ಬಹುಷ; ದೇವರು ಪ್ರತ್ಯಕ್ಷ ಆಗಿ ಬಿಡುತ್ತಿದ್ದನೆನೋ. ಬಹುಮಾನ ಸಿಗುತ್ತದೆ ಅಂತ ನನಗೆ ಖಾತ್ರಿಯಿರಲಿಲ್ಲ. ಆದರೆ ತುಂಡರಿಸಿದ ಗದ್ಯದ ಸಾಲುಗಳನ್ನೇ ಕವಿತೆ ಅಂತ  ಭ್ರಮಿಸಿ ಖುಷಿ ಪಟ್ಟದ್ದಕ್ಕೆ ಎಣೆಯಿಲ್ಲ. ಮಾರನೇ ದಿನ ಏನೋ ಲವ ಲವಿಕೆ. ಕವಿತೆಗೆ ಇಷ್ಟೊಂದು ದೈವಿಕವಾದ ಶಕ್ತಿ ಇದೆಯಾ?. ಅದಕ್ಕೆ ಎಲ್ಲರಿಗೂ ಕವಿತೆ ಅಂದರೆ ಅದೇನೋ ಆಕರ್ಷಣೆ , ಅದಕ್ಕೆ ಅದರ ಹಿಂದೆ ದುಂಬಾಲು ಬಿದ್ದುಕೊಂಡು ಹೋಗುವುದು ಅಂತ ಹೊಸ ಸತ್ಯವೊಂದು ಗೋಚರವಾಯಿತು.  ನಾನು ಕಾಲೇಜಿಗೆ ಹೋಗಿ ಡೆಸ್ಕಿನ ಮೇಲೆ ಬಿಳಿ ಹಾಳೆ ಇಟ್ಟು, ರಾತ್ರೆ ಬರೆದು ಉರು ಹೊಡೆದ ಪದ್ಯವನ್ನು ಮತ್ತೊಮ್ಮೆ ಬರೆದೆ. ಪಕ್ಕದಲ್ಲಿದ್ದ  ಗೆಳತಿಗೆ ದಿಗ್ಭ್ರಮೆ ಆಗಿರಬೇಕು. ನೀನು ಅದು ಹೇಗೆ ತಟ್ಟನೆ ಕೂತಲ್ಲೇ ಕವಿತೆ ಬರಿತೀಯಾ? ಅಂತ ಪ್ರಶ್ನೆ ಹಾಕಿಬಿಟ್ಟಳು. ನಾನು ರಾತ್ರೆಯಿಡೀ ಪಾರಾಯಣ ಮಾಡಿ, ಪಠಿಸಿ, ಕಂಠ ಪಾಠ ಮಾಡಿದ್ದು ಅವಳಿಗೆ ಹೇಗೆ ತಾನೇ ಗೊತ್ತಾಗಬೇಕು?.  ನಾನೋ ನಿರ್ಲಿಪ್ತತೆಯಿಂದ ಹ್ಮೂಂ, ಹೌದು! ಏನೋ ಮನಸಿಗೆ ಬರುತ್ತಿರುವುದನ್ನು ಗೀಚುತ್ತಿದ್ದೇನೆ ಅಂತ ಅವಳಲ್ಲಿ ಕುತೂಹಲ ಮೂಡಿಸಿ ಒಳಗೊಳಗೆ ನಗುತ್ತಾ ಕವಿತೆ ಬರೆದು ಮುಗಿಸಿ,ಲಕೋಟೆಯೊಳಗಿಟ್ಟು ತಲುಪಿಸ ಬೇಕಾದವರಿಗೆ ಹರ್ರಿಬಿರ್ರಿಯಲ್ಲಿ ತಲುಪಿಸಿ ಬಂದಿದ್ದೆ. ಎರಡು ದಿನ ಬಿಟ್ಟು ಕವಿತೆ ಸ್ಪರ್ಧೆಯ ಫಲಿತಾಂಶ, ಕನ್ನಡ ಉಪನ್ಯಾಸಕರೇ ತೀರ್ಪುಗಾರರು. ನಾನು ಹಿಂದಿ ತರಗತಿಯ ವಿದ್ಯಾರ್ಥಿಯಾದರೂ ಕಾರಿಡಾರಿನಲ್ಲಿ ಕನ್ನಡ ಮೇಷ್ಟ್ರ ಕಣ್ಣು ತಪ್ಪಿಸಿ ಓಡುವುದೇ ಆಯಿತು. ಅದೆನೋ ಅಳುಕು. ಒಂದು ಕವಿತೆ ಬರೆದು ಕಣ್ಣು ತಪ್ಪಿಸಿ ಓಡಾಡುವಂತಾಯಿತಲ್ಲ!,  ದೇವರೇ, ನನ್ನೊಳಗಿನ ತಳಮಳ ಹೇಗೆ ಪದಗಳಲ್ಲಿ ಹಿಡಿದಿಡುವುದು?. ಆದರೆ ಪರಮಾಶ್ಚರ್ಯವೆಂಬಂತೆ ನಮ್ಮ ಕಾಲೇಜಿನ ಕವಿವರ್ಯರನ್ನೆಲ್ಲಾ ಮೀರಿಸಿ ನನ್ನ ಗೆಳತಿ ಮೊದಲ ಬಹುಮಾನ ಪಡೆದುಕೊಂಡರೆ, ನನಗೆ ದ್ವಿತೀಯ ಬಹುಮಾನ.  ಅಬ್ಭಾ! ಆ ದಿನ ನನ್ನ ಕಾಲು ನೆಲದ ಮೇಲೆ ನಿಲ್ಲುತ್ತಲೇ ಇರಲಿಲ್ಲ. ಬಹುಷ: ನಾನು ಗಾಳಿಯಲ್ಲಿ ತೇಲಿದಂತೆ ನಡೆಯುತ್ತಿದ್ದೆನೇನೋ. ಎಲ್ಲರಿಗೂ ಹೇಳಿದ್ದೇ ಹೇಳಿದ್ದು. ನನ್ನ ಬಾಯಿ ನೋಯಿತೋ ಇಲ್ಲವೋ ಗೊತ್ತಿಲ್ಲ, ಆದರೆ ಅವರ ಕಿವಿ ನೋವಾಗಿರ ಬಹುದು.  ನನಗೆ ನಾನೇ ದೊಡ್ಡ ಜನ ಆದಂತೆ ಭ್ರಮಿಸಿಕೊಂಡೆ. ಕವಿತೆ ಬರೆಯುವುದು ಎಷ್ಟು ಸುಲಭ ಅಲ್ಲವಾ ಅಂತ ಅನ್ನಿಸಲಿಕ್ಕೆ ಶುರುವಾಗ ತೊಡಗಿತು. ಅಭ್ಭಾ ಕವಿತೆಯೇ.. ! ಮತ್ತೆ ಪ್ರಾಸ ಪ್ರಾಸ ಸೇರಿಸಿ ಕವಿತೆ ಕಟ್ಟುವುದೇ ಆಯಿತು. ಅದೇ ಹೊತ್ತಿನಲ್ಲಿ ಪ್ರತಿಷ್ಟಿತ ಪತ್ರಿಕೆಯೊಂದು ಯುವ ಬರಹಗಾರರಿಗೆ ಪ್ರೋತ್ಸಾಹ ಕೊಡುತ್ತಾ ಅವರಿಗೆ ಸ್ಪರ್ಧೆಗಳನ್ನು ಏರ್ಪಡಿಸುತ್ತಾ , ಬಹುಮಾನ ಕೊಡುತ್ತಿದ್ದರು. ವಿಜೇತರ ಫೊಟೋ ವನ್ನು ಪತ್ರಿಕೆಯಲ್ಲಿ ಹಾಕುತ್ತಿದ್ದರು. ಅಲ್ಲೂ ಅವರು ’ಗಾಂಧೀಜಿ” ಬಗ್ಗೆ ಕವಿತೆ ಬರೆಯಿರಿ ಅಂತ ಪ್ರಕಟಣೆ ಕೊಟ್ಟಿದ್ದರು. ಮೊದಲ ಬಹುಮಾನದ ಉತ್ಸಾಹ ಇನ್ನೂ ಕಡಿಮೆ ಆಗಿರಲಿಲ್ಲ. ನಾನೂ ಬರೆದು ಹಾಕಿದೆ. ಕೆಲವೇ ದಿನಗಳಲ್ಲಿ ಅಲ್ಲಿಂದ ಪ್ರತಿಕ್ರಿಯೇ. ನಿಮ್ಮ ಕವಿತೆ ಆಯ್ಕೆ ಆಗಿದೆ ಅಂತ. ನನ್ನ ಖುಷಿ ಯಾರಿಗೆ ಹೇಳಲಿ?. ಈ ಸಾರಿ ನಾನೂ ದೊಡ್ದ ಕವಿಯಾದೆನೇನೋ ಅಂತ ಬೀಗಿ ಬಿಟ್ಟೆ. ಮರುವಾರ ಆಯ್ಕೆಯಾದ ಕವಿಗಳ ಪೊಟೋ ಹಾಕಿದ್ದರು. ರಾಶಿ ರಾಶಿ ಪೊಟೊಗಳ ಮದ್ಯೆ ನನ್ನದು ಕೊನೇಗೂ ಸಿಕ್ಕಿ ಬಿಡ್ತು. ಬಹುಷ; ಬರೆದ ಎಲ್ಲಾ ಕವಿಗಳ ಪೊಟೋ ಹಾಕಿದ್ದಿರಬಹುದೆಂದು ಆಗ ಹೊಳೆದೇ ಇರಲಿಲ್ಲ. ಅಂತೂ ಇಂತೂ ಆ ಸಾರಿ ನಡೆದ ತಾಲೂಕು ಸಾಹಿತ್ಯ ಸಮ್ಮೇಳನದ ವಿದ್ಯಾರ್ಥಿ ವಿಭಾಗದ ಕವಿಗೋಷ್ಟಿಗೆ ನಾನು

ಕವಿತೆಯೆಂಬ ಪುಳಕದ ಧ್ಯಾನ Read Post »

ಕಾವ್ಯಯಾನ

ಬೇರುಗಳು

ಕವಿತೆ ಪೂರ್ಣಿಮಾ ಸುರೇಶ್ ನಸುಕಿನ ಮೌನಹಳೆಯ ಹಾದಿಗೆಹೆಜ್ಜೆ ಜೋಡಿಸಿದೆ ಅದೇಆಚೆ ಬದಿ ಅಶ್ವತ್ಥ ಈ ಬದಿ ಆಲ ಆಲದ ಜಟಿಲ ಬಿಳಲುಗಳುನೇತಾಡಿದ್ದುಮಣ್ಣ ಪಾದಗಳು ತೇಲಿ ಅಗಸವಸ್ಪರ್ಶಿಸಿಮುದಗೊಂಡಿದ್ದುಎಲೆ ಮರೆಯ ಗೂಡಿನ ಹಕ್ಕಿಗಳಗಂದರ್ವವಾಣಿಗೆ ಪ್ರತಿಧ್ವನಿಸಿದ್ದೂಗುಲಾಬಿ ಅಂಗೈ ದೊರಗು ಸೆಳೆತಕೆಕೆಂಪಾಗಿದ್ದುಪುಟ್ಟ ಉರಿ ಸುಡುತ್ತಿದ್ದರೂ ಆಕರ್ಷಣೆ ! ಮತ್ತೆಮತ್ತೆತೂಗಿ ಬಿದ್ದದ್ದುತರಚಿದ್ದು.. ಈ ಅಶ್ವತ್ಥ!ಪುಟ್ಟ ಮನಸಿಗೆ ನಿಲುಕದದೊರಗು ದೇಹಆಗಸದ ಅಖಂಡ ಮೌನಕೆತನ್ನ ಧ್ಯಾನ ತುಣುಕುಗಳ ಸಿಲುಕಿಸಿಅನುಸಂಧಾನಗೈವಎಲೆಗಳು ಸುತ್ತು ಸುತ್ತಿದ್ದುಹತ್ತಿರದ ಪುಟ್ಟಗಿಡದ ಹಸಿರಪರಪರ ಎಳೆದುಹರಿದುಮನೆಯಾಟಕೆ ಅಡುಗೆತಯಾರಾಗಿದ್ದು.. ಕೈಗೆ ಹಸಿರು ರಸಕಾಲಲ್ಲಿ ಮಣ್ಣು ತೇವ ಆಲ-ಅಶ್ವತ್ಥಆಳಕ್ಕಿಳಿಸುತ್ತವೆಬೇರುಒಳಕೂಗುಅಕ್ಷರವಾಗಲು ತುಡಿಯುತ್ತವೆ.ಬೆಳಕಾಗಿ ಪೊರೆಯುತ್ತದೆಜೀವಂತಿಕೆಯ ಜಗದಗಲ ತೆರೆಯುತ್ತದೆ. ************************************

ಬೇರುಗಳು Read Post »

ಇತರೆ

ನಾ ಬರೆದ ಮೊದಲ ಕವನ

ಮೊದಲ ಕವಿತೆಯ ರೋಮಾಂಚನ ಸಾಹಿತ್ಯದ ಕಡೆಗೆ ನನ್ನ ಒಲವು ಚಿಕ್ಕವಳಿರುವಾಗಿಂದಲೇ ಇದೆ. ಅಂದರೆ ಕಥೆ, ಕಾದಂಬರಿ ಓದುವುದು. ಕವನ ಬರೆಯುವುದಿರಲಿ ಓದುವದೂ ನನ್ನ ಅಳವಲ್ಲವೆಂದುಕೊಂಡವಳು ನಾನು. ಅಂತಹ ದರಲ್ಲಿ ಈಗ ನಾನು ಪ್ರಕಟಿಸಿದ ಎಂಟು ಕೃತಿಗಳಲ್ಲಿ, ಐದು ಕವನ ಸಂಕಲನಗಳು. ನನಗೇ ಆಶ್ಚರ್ಯವಾಗುತ್ತದೆ! ಗದ್ಯ ಓದುತ್ತಿರುವಾಗ ಸಾಮಾಜಿಕ, ಐತಿಹಾಸಿಕ,ಪತ್ತೇದಾರಿ ಕಾದಂಬರಿ, ವಿಜ್ಞಾನಕ್ಕೆ ಸಂಬಂಧಪಟ್ಟ ಪ್ರಭಂದ ಇತ್ಯಾದಿ ನನ್ನ ಓದಿನ ಪರಿಮಿತಿಯಲ್ಲಿ ಇರುತ್ತಿತ್ತು. ಸ್ನೇಹಿತರು ಕವನ ಓದಲು ಪುಸಲಾಯಿಸಿದರು. ಉಹುಂ, ಕಣ್ಣೆತ್ತಿ ನೋಡಿರಲಿಲ್ಲ. ಆದರೆ ನಿವೃತ್ತಿ ಹೊಂದಿದ ಮೇಲೆ ಬರೆಯಲು ಪ್ರಾರಂಭಿಸಿದಾಗ ಮೊದಲು ಬರೆದದ್ದು ಕವನವೇ. ಅದಕ್ಕೊಂದು ಸ್ವಾರಸ್ಯಕರ ಘಟನೆಯಿದೆ. ನಾನೊಂದು ಮಹಿಳಾಮಂಡಳದ ಸದಸ್ಯೆ. ಮಂಡಳದ ವಾರ್ಷಿಕೋತ್ಸವದ ಅಂಗವಾಗಿ ಸದಸ್ಯೆಯರು ಒಂದು ನಾಟಕ ಆಡಬೇಕೆಂದು ನಿರ್ಧರಿಸಲಾಗಿತ್ತು. ಒಬ್ಬ ಸದಸ್ಯೆ ನಾಟಕ ಬರೆದಿದ್ದರೆ, ಉಳಿದವರು ಪಾತ್ರಧಾರಿಗಳು. ನನಗೂ ಒಂದು ಪಾತ್ರವಿತ್ತು ಅದರಲ್ಲಿ. ಸಾಮಾಜಿಕ ನಾಟಕದ ಹೆಸರು ‘ಆಯುಷ್ಯಕ್ಕೆ ಒಂದಿಷ್ಟು ರೇಶನ್’. ನಾಟಕದ ರಿಹರ್ಸಲ್ ಸುರುವಾದಮೇಲೆ ಡೈರೆಕ್ಟರ್ ಹೇಳಿದರು – ಇದಕ್ಕೆ ಒಂದು ಟೈಟಲ್ ಸಾಂಗ್ ಇದ್ದರೆ ಚೆನ್ನಾಗಿತ್ತು ಅಂತ. ಒಂದೆರಡು ದಿವಸ ಅದಕ್ಕೆ ವ್ಯವಸ್ಥೆ ಆಗಲಿಲ್ಲ. ನಾನೇ ಯಾಕೆ ಬರೆಯಬಾರದು? ಅನ್ನಿಸಿತು. ಸರಿ ಮುಂದೆ ಎರಡು ದಿನದಲ್ಲಿ ಒಂದು ಕವನ ತಯಾರಾಯಿತು, ಆಯುಷ್ಯ ಬೇಕೇ ಆಯುಷ್ಯ ಶೀರ್ಷಿಕೆ ಇಟ್ಟುಕೊಂಡು. ಪ್ರಾಸಬದ್ಧವಾಗಿಯೇ ಬರೆದಿದ್ದೆ.  ಗೆಳತಿ (ಡೈರೆಕ್ಟರ್) ಗೆ ಒಯ್ದು ತೋರಿಸಿದೆ. ಆದರೆ ನಾನು ಬರೆದದ್ದು ಅಂತ ಮಾತ್ರ ಹೇಳಲಿಲ್ಲ. ನನ್ನ ಬಗ್ಗೆ ನನಗೇ ವಿಶ್ವಾಸವಿರಲಿಲ್ಲ. ನನ್ನ ಪತಿ ಮಹಾಶಯರಿಗೆ ನಾಟಕದ ಹುಚ್ಚಿತ್ತು. ಅಲ್ಲದೆ ಅಲ್ಪ ಸ್ವಲ್ಪ ಬರೆಯುವ ಅಭ್ಯಾಸವಿತ್ತು. ಹೀಗಾಗಿ, ನಾನು ಬರೆದ ಕವನವನ್ನು ಅವರು ಬರೆದು ಕೊಟ್ಟಿರುವರು ಎಂದು ಹೇಳಿಬಿಟ್ಟೆ. ಗೆಳತಿಗೆ ಒಪ್ಪಿಗೆಯಾಯಿತು. ಧಾಟಿ ಹಚ್ಚಿ ಹಾಡಿ, ನೋಡಿ, ಪಾಸ ಮಾಡಿಬಿಟ್ಟರು. ವಾರ್ಷಿಕೋತ್ಸವ ಆಚರಣೆಯಲ್ಲಿ ನಾಟಕ ಯಶಸ್ವಿಯಾಗಿ ಪ್ರದರ್ಶನಗೊಂಡಿತು. ಇದಾದಮೇಲೆ ಯಾರಿಗಾದರೂ ಇದನ್ನು ತಿಳಿಸಿ ನನ್ನ ಸಂತೋಷ ಹಂಚಿಕೊಳ್ಳಬೇಕೆಂದು ತುಡಿಯುತ್ತಿದ್ದೆ. ನನ್ನ ಗಂಡನಿಗೆ ಬಿಟ್ಟರೆ ಯಾರಿಗೂ ವಿಷಯ ತಿಳಿದಿರಲಿಲ್ಲ. ನನಗೆ ಬರೆಯುವ ಹುಮ್ಮಸ್ಸು, ವಿಶ್ವಾಸ ಉಕ್ಕೇರತೊಡಗಿತು. ತಲೆಯಲ್ಲಿರುವ ಕೆಲವು ವಿಚಾರಗಳಿಗೆ ಮನಸ್ಸಿನ ಭಾವನೆಗಳ ಪ್ರನಾಳಿಯಲ್ಲಿ ಹಾಕಿ ಮತ್ತೆರಡು ಕವನ ಬರೆದೆ. ನನ್ನಮ್ಮನಿಗೆ ನುಡಿನಮನ ಮತ್ತು ಮಹಿಳೆಯ ಶೋಷಣೆಯ ಬಗೆಗೆ. ನಾನೂ ಬರೆಯಬಹುದೆನ್ನಿಸಿತು. ಅಲ್ಲಿಂದ ಪ್ರಾರಂಭವಾದ ಕವನ ಯಾನ, ಐದು ವರ್ಷಗಳಲ್ಲಿ ೩೫೦ ಕವನ ಗಳನ್ನೊಳಗೊಂಡ ಐದು ಕೃತಿಗಳು ಹೊರಬಂದವು. ಮೊದಲ ಸಂಕಲನಕ್ಕೆ ಪ್ರಶಸ್ತಿ ಲಭಿಸಿತು. ಮತ್ತೆ ಹಲವಾರು ಕವನಗಳು ಬಹುಮಾನಕ್ಕೆ ಪಾತ್ರವಾದವು. ಮೊದಲು ಬರೆದ ಕವನ ಬಹಳ ಕಚ್ಚಾ ಇದೆ. ಈಗ ನನಗೆ ಗೊತ್ತಾಗುತ್ತದೆ. ಆದರೆ ಅದು ನನ್ನ ಮೊದಲ ಮಗು ಇದ್ದಂತೆ. ಅಪಾರ ಪ್ರೀತಿಗೆ ಪಾತ್ರವಾಗಿದೆ. **********************

ನಾ ಬರೆದ ಮೊದಲ ಕವನ Read Post »

You cannot copy content of this page

Scroll to Top