ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕವಿತೆ

ಫಾಲ್ಗುಣ ಗೌಡ ಅಚವೆ

ಚಂದ್ರ ಎಷ್ಟೇ ಕಣ್ಣು ತೆರೆಯಲು
ಪ್ರಯತ್ನಿಸಿದರೂ
ಕಿಕ್ಕಿರಿದ ಮೋಡಗಳು ಮರ ಮರಗಳ ಕತ್ತಲನ್ನೂ
ಹೊಸಕಿ ಹಾಕುತ್ತವೆ
ಇಂತಹ ಅಪರಾತ್ರಿಯಂತಹ
ಕತ್ತಲನ್ನು ನೋಡಿದರೆ
ಶಂಕ್ರ ಕೋವಿ ಹೆಗಲಿಗೆ ಹಾಕಿ
ಶಿಕಾರಿ ಹೋದನೆಂದೆ ತಿಳಿಯಬೇಕು
ಹೋಗುವುದು ದೂರವೇನಲ್ಲ
ಒಂದು ಬರ್ಕ ಹೊಡೆದೂ ಗೊತ್ತಿಲ್ಲ
ಕಳ್ಳರಗದ್ದೆ ಸುಕ್ರು ಮನೆ ಬೇಲಿ ಆಚೆ ಒಂದು ಹತ್ತು ಮಾರು ಅಷ್ಟೇ
ಹಂದಿ ಮಲಗಿದೆಯೆಂದು
ಥರಗುಟ್ಟಿದವನು ಅದರ ತಲೆಗೆ
ಗುಂಡು ಹೊಡೆದೇ ಬಿಟ್ಟವ
ಅದೆಂಗೆ ಮನೆಗೆ ಬಂದನೋ
ಮಲಗಿದನೊ ಗೊತ್ತಿಲ್ಲ

ಮರುದಿನ ಮಾದೊಡ್ ಈಡಾಗಿದೆಂದು ನಮ್ಮೂರ ಪೆಕರನಂತ ಪೊರಗೋಳು
ಹುಡುಕಾಡಿ ಏನೂ ಕಾಣದೇ
ತಿರುಗಿ ಬಂದರು
ಮುಚ್ಚಾಕಿ ಮಲಗಿದ ಶಂಕ್ರ
ಒಂಬತ್ತಾಸಾದರೂ ಎದ್ದೇ ಇರಲಿಲ್ಲ
ಭಯ ಒದ್ದುಕೊಂಡು ಬಂದು
ಎದೆ ಗಕ್ಕೆನಿಸುವಂತೆ
ಅಗಾಗ ಅವನ ಜೀವ ಬಾಯಿಗೆ
ಬರುತ್ತಿತ್ತು.
ಆಗಾಗ ತಲೆ ಸುತ್ತಿದಂತೆ ಆದಂತಾಗಿ ಸುಮ್ಮನೆ ಅಡ್ಡಾಗುತ್ತಾನೆ
ಅವನ ಚಿಂತೆ ಭಯ ಇನ್ನೇನಲ್ಲ
ತಾನು ಹೊಡೆದದ್ದು ಹಂದಿಯೋ?
ಕೊಣಮರಿಯೋ?
ಅಥವಾ ಹಂದಿ ರೂಪದ ರಾವೋ?
ಅದು ಹಂದಿಗಿರಿಯಾದರೆ
ನನ್ನ ಸಾವಿಗೆ ವಾಯಿದೆ
ಹಾಕುತ್ತದಂತೆ!
ಯಾವ ಜಡ್ಡು ಜಾಪತ್ತು
ಬರದೇ ಸಾಯಿಸುತ್ತದಂತೆ!
ಬೆಳೆದಿತ್ತು ಮನಸಲ್ಲಿಯೇ
ಅನುಮಾನದ ಹುತ್ತ!

ಇದನೆಲ್ಲಾ ನೋಡಿ ಮೂರಸಂಜಿಗೆ
ಯಾರಗೂ ಕಾಣದಂಗೆ
ಮುಕಳೇರ್ ಹಮ್ಮು ಮನೆಯಲ್ಲಿ
ನೊಟ ಹಾಕಿಸಿದರೆ..
ಮಣೆ ಕೊಟ್ಟಿನ ಮೇಲೆ ಅಕ್ಕಿ ಕಾಳು ಹಾಕಿ ಭಾರ ಬಂದಂತಾಗಿ
ಅಂವ ‘ಅದು ರಾವೇ..!’ ಎನ್ನಬೇಕೆ?
ಅವ ಕೊಟ್ಟ ಅಕ್ಕಿ ಕಾಳು
ಮನೆ ಸುತ್ತಲೂ ಸುಳಿಸಾಯ್ತು
ಅವನ ಭ್ರಾಂತಿಯೇ ಕಡಿಮೆಯಾಗಲಿಲ್ಲ

ಶಂಕ್ರ ಎದ್ದು ಕುಳಿತದ್ದು
ಮರುದಿನ ಬೆಳಿಗ್ಗೆ ನಮ್ಮದೊಂದು
ಕೊಣಮರಿ ಬಂದಿಲ್ಲ ಅಂತ
ಸಣತಮ್ ನಾಯ್ಕ ಹೇಳಿದಾಗಲೇ!

*****************

About The Author

9 thoughts on “ಶಿಕಾರಿ”

  1. Nagaraj Harapanahalli

    ಕಥನ ಕವನ ಮಾದರಿಗೆ ಹೊರಳಿದ ಪಾಲ್ಗುಣ ಗೌಡರ ಕಾವ್ಯದ ಹಾದಿ….
    ಮಲೆಗಳಲ್ಲಿ ಮದುಮಗಳು …ಕಾದಂಬರಿಯ ಒಂದು ಪುಟದ ವಿವರಣೆಗೆ ಹೋಗಿ ಬಂದಾಯ್ತು ಕಣ್ರಿ…ಗೌಡ್ರೆ..

  2. ಕಥನ ಕವಿತೆ..
    ಕೊನೆಯಲ್ಲಿ ಮಂದಹಾಸ ಮೂಡಿಸುತ್ತದೆ..

  3. ಬಾಲಕೃಷ್ಣ ದೇವನಮನೆ, ಬೆಳಂಬಾರ

    ಓದಿಸಿಕೊಂಡು ಹೋಗುವ ಕಥನ ಕವನ ಕೊನೆಯಲ್ಲಿ ಹಾಸ್ಯವಾಗಿ ಕಂಡರೂ ಇಂಥ ಅದೇಷ್ಟೋ ಕತೆಗಳು ಹಳ್ಳಿಜನರ ಬಾಳಲ್ಲಿ ನಡೆದು ಹೋಗಿವೆ. ಸುಂದರ ನಿರೂಪಣೆಯುಳ್ಳ ಕಾವ್ಯ

Leave a Reply

You cannot copy content of this page

Scroll to Top