ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕವಿತೆ

ಮೊನ್ನೆ ಇವರೂ
ಹಲವು ಯುದ್ದಗಳ ಗೆದ್ದಿದ್ದರು
ಗೆದ್ದ ರಾಜ್ಯದ ಹೆಣ್ನುಗಳ
ಬೇಟೆಯಾಡಿದ್ದರು
ಇದೀಗ ಸಾಂತ್ವಾನ ಕೇಂದ್ರಗಳ
ತೆರೆದು ಕೂತಿದ್ದಾರೆ!

ಮೊನ್ನೆ ಇವರೂ
ಊರೂರುಗಳಿಗೆ ಬೆಂಕಿ
ಹಚ್ಚಿದ್ದರು
ಉರಿದ ಮನೆಗಳಲ್ಲಿ ಹೆಂಗಸರು
ಮಕ್ಕಳೆನ್ನದೆ ತಲೆ ತರೆದಿದ್ದರು
ಇದೀಗ ಆನಾಥಾಶ್ರಮಗಳ
ತೆರೆದು ಕೂತಿದ್ದಾರೆ!

ಮೊನ್ನೆ ಇವರೂ
ಕೋವಿ ಖಡ್ಘಗಳ ಹಿಡಿದಿದ್ದರು
ಇದೀಗ ಧರ್ಮಗ್ರಂಥಗಳ
ಪಾರಾಯಣ ಮಾಡುತ್ತಿದ್ದಾರೆ!

ಮೊನ್ನೆಮೊನ್ನೆಯವರೆಗೂ ನಡೆದ
ಅಕಾರಣ ಯುದ್ದಗಳಿಗೀಗ
ಸಕಾರಣಗಳ ಪಟ್ಟಿ
ಮಾಡುತ್ತ ಕೂತಿದ್ದಾರೆ

ತರಿದ ತಲೆಗಳ
ಭೋಗಿಸಿದ ಯೋನಿಗಳ
ಕಚ್ಚಿದ ಮೊಲೆಗಳ
ಕಲಸಿಹಾಕಿದ ಭ್ರೂಣಗಳ
ನಿಖರ ಅಂಕಿಅಂಶಗಳಿಗಾಗಿ
ತಲೆ ಕೆರೆದುಕೊಳ್ಳುತ್ತಿದ್ದಾರೆ

ಪ್ರತಿ ಮನುಷ್ಯನಿಗೂ ಇರಬಹುದಾದ
ಮೃಗದ ಮುಖವಾಡವ
ಕಳಚಲೆತ್ನಿಸಿದಷ್ಟೂ
ಗೊಂದಲವಾಗುವುದು ಖಚಿತ

ನೋಡು ಬರೆಯುವಾಗಲೂ ಇದನು
ಕೆಕ್ಕರಿಸಿ ನೋಡುತಿದೆ ಮೃಗವೊಂದು
ರಣಹಸಿವಿನಿಂದ!
————————————–

ಕು.ಸ.ಮದುಸೂದನ ರಂಗೇನಹಳ್ಳಿ
(ದುರಿತಕಾಲದ ದನಿ)

About The Author

1 thought on “ರಣ ಹಸಿವಿನಿಂದ!”

Leave a Reply

You cannot copy content of this page

Scroll to Top