ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕವಿತೆ

ವಿಭಾ ಪುರೋಹಿತ್

ಚತುರ್ಮುಖ ಬ್ರಹ್ಮ
ಅವನೊಳಗೊಂದು ಕಾಣ್ದ
ಅಗೋಚರ ಮೈವೆತ್ತ ಹಾಗೆ
ಅವನಿಯೊಳಗಿನ ಜ್ಞಾನ
ಕಣ್ತೆರೆದಂತೆ
ಸುಡುವ ನೋವಿದ್ದರೂ ಎದೆಯೊಳಗೆ
ಉತ್ಸಾಹ ಉತ್ತುವದು ನಗೆಯ ಬಿತ್ತುವುದು
ಮಹಾತ್ಮ ನ ಲೀಲೆ
ನಾರಾಯಣನಿಲ್ಲದೇ ಅವನಿಯುಂಟೇ?
ಅದೃಶ್ಯದಲ್ಲಿ ಸದೃಶನಾಗಿ
ಸೋಫಾಮೇಲೆ ಕುಳಿತಿದ್ದಾನೆ
ರೇಡಿಯೋ ಕೇಳುತ್ತಿದ್ದಾನೆ
ಎರಡುತಾಸಿಗೊಮ್ಮೆ ಕಪ್ಪು ಕಾಫಿ
ಸೋಮರಸ ಸದಾ ಥರ್ಮಾಸಿನೊಳಗೆ
ಕಾಲುಮೇಲೆಕಾಲಿಟ್ಟು
ಅನುಭವದ ರೇಖೆಗಳನ್ನೆಲ್ಲ ಒತ್ತಿ
ಹಿಡಿದ ಹಸ್ತ ಊರುಗೋಲಿನ ಮೇಲೆ
ಊರಿನ ತಗಾದೆಗೆಲ್ಲ ಕಿವಿಗೊಟ್ಟು
ಎದೆಗವುಚಿ ಎಲ್ಲರಿಗೂ
ಬೀರಬಲ್ಲನ ಪರಿಹಾರ ಮಂತ್ರ
ರೆಡಿಯಾಗುತಿತ್ತು.
ಊರುಗೋಲಿನ ಸುತ್ತ ಫಿರ್ಯಾದಿಗಳು
ವಿನಂತಿಗಳು ಅಹವಾಲುಗಳಿಗೆ
ಹೊಸದಾಗಿ ತಂದ ಕಂಪ್ಯೂಟರ್
ಕೀಲಿಮಣೆ ಕಿಲಕಿಲನೆ ಬಡಿದು
ಬರೆದುಕೊಂಡೇ ಮತ್ತೆ ಕಾಫಿಗೆ
ಕೈಚಾಚುತ್ತಿತ್ತು
ಯಾರೇ ಬಂದರೂ ಯಾವಾಗ ಬಂದರೂ
ಬಿಸಿಕಾಫಿ ಜೊತೆ ಆತ್ಮೀಯತೆ ಬಿಸ್ಕತ್ತು ಗಳು
ಮನದಾಳದಿಂದ ಸಮಸ್ಯೆಗಳನು
ಹೊತ್ತು ತಂದವರ ಪಾತಾಳಗರಡಿಯಾಗುತ್ತಿತ್ತು
ನೆನಪಿನಲ್ಲಿ ಮುಳುಗಿದರೆ
ಏನೋ ಗೊತ್ತಿರದ ಕೊರಗು
ಪ್ರವರದ ಪರಿವೆಯಿಲ್ಲದಿದ್ದರೂ
ಪೂರ್ವಜನ್ಮದ ಪ್ರಪಿತಾಮಹನಂತೆ
ಧರ್ಮಕೋವಿ ಹಿಡಿದವರೂ ಬೆರಗಾಗುವಂತೆ
ಅವರ ಜನಸೇವೆ
ಸದ್ದಿಲ್ಲದೆ ಸುಮ್ಮನಾಗಿದ್ದವು
ಅವರೊಂದು ಪೂರ್ಣ ಕುಂಭ
ಜ್ಞಾನ ಗಂಗೆಯ ಅವತಾರ ಪುರುಷ


(ಧಾರವಾಡದವರೆಲ್ಲರಿಗೂ ಅಪ್ಪನೆಂದೇ ಆಪ್ತನಾಗಿದ್ದ ದಿವಂಗತ ಎನ್.ಪಿ.ಭಟ್ಟ ಅವರ ಕುರಿತು ಬರೆದಿದ್ದು)

About The Author

1 thought on “ಊರುಗೋಲು ಕಾಫಿ ಮತ್ತು ಅಪ್ಪ”

Leave a Reply

You cannot copy content of this page

Scroll to Top