ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅಂಕಣ ಸಂಗಾತಿ, ಸ್ವಾತ್ಮಗತ

ಸ್ವಾತ್ಮಗತ

ಬಂಡಾಯ ಸಾಹಿತ್ಯದ ವಿವಿಧ ಮಜಲುಗಳು..! ಶಿವು ಲಕ್ಕಣ್ಣವರ ಬಂಡಾಯ ಸಾಹಿತ್ಯ ಆಧುನಿಕ ಕನ್ನಡ ಸಾಹಿತ್ಯದ ಈಚಿನ ಹಂತ… ನವೋದಯ, ಪ್ರಗತಿಶೀಲ, ನವ್ಯಗಳ ಅನಂತರದ ಸಾಹಿತ್ಯ ಚಳವಳಿ ಇದು. ಇದನ್ನು ನವೋತ್ತರ ಸಾಹಿತ್ಯವೆಂದೂ ಕರೆಯಲಾಗಿದೆ. ಎಪ್ಪತ್ತರ ದಶಕದ ಉತ್ತರಾರ್ಧದಲ್ಲಿ ಕನ್ನಡ ಸಾರಸ್ವತ ಪ್ರಪಂಚದಲ್ಲಿ ಕೇಳಿಬರುತ್ತಿರುವ, ಎಲ್ಲ ಪ್ರಗತಿಪರ ಹಾಗೂ ದಲಿತ ಬರಹಗಾರರಿಂದ ಸೃಷ್ಟಿಯಾದ ಮತ್ತು ಸೃಷ್ಟಿಗುತ್ತಿರುವ ಸಾಹಿತ್ಯವಿದು. ಬಂಡಾಯ ಸಾಹಿತ್ಯದ ಉಗಮ– 1970 ರ ದಶಕದಲ್ಲಿ ಅನೇಕ ಸಾಮಾಜಿಕ, ರಾಜಕೀಯ ಘಟನೆಗಳು ಜನಸಾಮಾನ್ಯರ ಬದುಕಿನಲ್ಲಿ ಬದಲಾವಣೆಗಳನ್ನು ತಂದವು. ಬದುಕಿನಲ್ಲಿ ಉಂಟಾದ ಕೋಲಾಹಲದಿಂದಾಗಿ ಸಾಹಿತ್ಯದಲ್ಲೂ ಬದಲಾವಣೆ ಅನಿವಾರ್ಯವೆನಿಸಿ ಬಂಡಾಯದ ದನಿ ಮೊಳಗಿತು. ಶತಶತಮಾನದಿಂದ ಸಾಮಾಜಿಕವಾಗಿ, ಆರ್ಥಿಕವಾಗಿ, ಶೋಷಣೆಗೆ, ಅಪಮಾನಕ್ಕೆ, ಕ್ರೌರ್ಯಕ್ಕೆ ಬಲಿಯಾದ ಪ್ರಜ್ಞಾವಂತ ಲೇಖಕರು ಬರೆದ ಪ್ರತಿಭಟನಾ ಸಾಹಿತ್ಯವೇ ನಿಜವಾದ ದಲಿತ ಸಾಹಿತ್ಯವೆನಿಸಿತು. ದಲಿತ ಸಾಹಿತ್ಯವನ್ನು ಒಳಗೊಂಡುದೇ ಬಂಡಾಯ ಸಾಹಿತ್ಯ. ಸಾಹಿತ್ಯ ಸೃಷ್ಟಿ ಖುಷಿಗಾಗಿ ಅಲ್ಲ. ಸಾಂಸ್ಕೃತಿಕ ಬದಲಾವಣೆಗಳಿಗಾಗಿ ಸಂಸ್ಕೃತಿಯಲ್ಲಿ ಪ್ರತಿಷ್ಠಾಪಿತ ಮೌಲ್ಯಗಳು ಜಡವಾದಾಗ, ಪ್ರತಿಗಾಮಿಯಾದಾಗ ಅವುಗಳ ವಿರುದ್ಧ ಹೋರಾಡುವುದೇ ಬಂಡಾಯವಾಗಿದೆ. ಅದು ಸಾಹಿತ್ಯದಲ್ಲಿ ಅಭಿವ್ಯಕ್ತಗೊಂಡಾಗ ಬಂಡಾಯ ಸಾಹಿತ್ಯವೆನಿಸಿದೆ. ಈ ದಿಸೆಯಲ್ಲಿ ಸಂಘಟನೆಗೊಂಡ ಬಂಡಾಯ ಸಾಹಿತಿಗಳ ಸಮ್ಮೇಳನ ಕನ್ನಡ ಸಾಹಿತ್ಯ ಸಮ್ಮೇಳನವನ್ನು ವಿರೋಧಿಸುತ್ತ, 1979 ಮಾರ್ಚ್ 10-11ರಂದು ಬೆಂಗಳೂರಿನಲ್ಲಿ ಸಮಾವೇಶಗೊಡು ಈ ಚಳವಳಿಗೆ ಒಂದು ಸ್ಪಷ್ಟರೂಪ ಕೊಡಲು ಯತ್ನ ನಡೆಸಿತು. ಪ್ರಜಾಪ್ರಭುತ್ವದ ರಕ್ಷಣೆಗೆ ಹಾಗೂ ವಿಸ್ತರಣೆಗೆ ಮತ್ತು ಶೋಷಣೆಯನ್ನು ಸಮರ್ಥಿಸುವ ಯಜಮಾನ ಸಂಸ್ಕೃತಿಯ ವಿರುದ್ಧ ಹೋರಾಟಕ್ಕೆ ಮತ್ತು ಶೋಷಿತ ಜನತೆಯ ಪರವಾದ ಹೋರಾಟದ ಸಾಹಿತ್ಯ ಸೃಷ್ಟಿಗಾಗಿ ಖಡ್ಗವಾಗಲಿ ಕಾವ್ಯ ಎಂಬ ಘೋಷಣೆಗಳನ್ನು ಮೊಳಗಿಸಿತು. ಇವರಲ್ಲಿ ಪ್ರಮುಖರಾದವರು ಪಿ.ಲಂಕೇಶ್ ರು. ಹೀಗಂದರೆ ತಪ್ಪಾಗಲಿಕ್ಕಿಲ್ಲ. ಇದರ ಗುರಿ , ನಿಲುವು– ಎಲ್ಲಿ ರಮ್ಯ-ನವ್ಯ ಪಂಥಗಳು ಸೋತಿವೆಯೋ ಅಲ್ಲಿ ಬಂಡಾಯ ಸಾಹಿತ್ಯ ತನ್ನ ಹೊಣೆಗಾರಿಕೆಯನ್ನು ಗುರುತಿಸಲು ಹೊರಟಿದೆ. ಬಂಡಾಯ ಸಾಹಿತ್ಯವೆಂದರೆ ಕೇವಲ ಸೌಂದರ್ಯೋಪಾಸನೆಯಲ್ಲ ಅಥವಾ ಬೌದ್ಧಿಕ ತುಡಿತವೂ ಅಲ್ಲ, ಅದೊಂದು ಸಾಮಾಜಿಕ ಹೊಣೆಗಾರಿಕೆಯಾಗಿದೆ. ಇಂದು ಸಮಾಜವನ್ನು ಕಿತ್ತು ತಿನ್ನುತ್ತಿರುವ ಅಧೋಗತಿಗೆ ತಳ್ಳಿರುವ ಯಜಮಾನ ಸಂಸ್ಕೃತಿಯ ಮುಖ್ಯ ಅಂಶಗಳಾದ ಜಾತಿ ಮತ್ತು ವರ್ಗಗಳ ವಿರುದ್ಧ ಮತ್ತು ಶೋಷಣೆಯ ವಿರುದ್ಧ ಶ್ರಮ ಜೀವಿಗಳನ್ನು ಬಂಡಾಯಕ್ಕೆ ಅನುಗೊಳಿಸುವುದೇ ಬಂಡಾಯ ಸಾಹಿತ್ಯದ ಗುರಿಯಾಗಿದೆ. ಕನ್ನಡ ಸಾಹಿತ್ಯ ಪರಿಷತ್ತಿನಂಥ ಸಂಸ್ಥೆ ಸಾಂಪ್ರದಾಯಕ ಜಡತ್ವವನ್ನು ತೋರಿಸಿದಾಗ ಅದನ್ನು ವಿರೋಧಿಸುವ ಸಂಘಟನಾತ್ಮಕ ಹೋರಾಟ ಬಂಡಾಯದ್ದು. ಶೋಷಿತ ಜನತೆಯ ಪರವಾದ ನಿಲವನ್ನು ಸಾಂಸ್ಕೃತಿಕ ಕ್ಷೇತ್ರದಲ್ಲಿ ಭದ್ರವಾಗಿ ನೆಲೆಗೊಳಿಸುವುದು ಮತ್ತು ಸಾಹಿತಿ ತನ್ನ ಸಾಮಾಜಿಕ ರಾಜಕೀಯ ಪ್ರಜ್ಞೆಯಿಂದ ಅಸ್ಪೃಶ್ಯತೆ, ಜಾತಿಪದ್ಧತಿ, ಲಿಂಗಭೇದ, ವರ್ಗಭೇದ ನೀತಿಯನ್ನು ವಿರೋಧಿಸುವುದು ಎಂದು ತಿಳಿಸಿ ಬಂಡಾಯ ಸಾಹಿತ್ಯಕ್ಕೆ ತನ್ನದೇ ಆದ ಒಂದು ತಾತ್ವಿಕ ನೆಲೆಯಿದೆಯೆಂದು ಹೇಳಲಾಯಿತು. ಈ ಸಾಹಿತ್ಯ ಪರಂಪರೆಯನ್ನು ಒಟ್ಟಾಗಿ ವಿರೋಧಿಸುವುದಿಲ್ಲವಾದರೂ ಸಂಪ್ರದಾಯದ ಸ್ಥಗಿತತೆಯನ್ನೂ ಮಾನವ ವಿರೋಧಿ ನೀತಿಯನ್ನೂ ವಿರೋಧಿಸುತ್ತದೆ. ಪರಂಪರೆಯ ಜೊತೆಗೆ ಸಂಬಂಧ ಮತ್ತು ಮುಂದುವರಿಕೆ ಬಂಡಾಯದ ನಿಲುವಾಗಿದೆ. ಬಂಡಾಯ ಸಾಹಿತ್ಯ ಎಡಪಂಥೀಯ ವಿಚಾರಧಾರೆಗೆ, ಕಲಿತ ಕಾಳಜಿಗಳಿಗೆ ಬದ್ಧವಾದ ಸಾಹಿತ್ಯವೂ ಆಗಿದೆ. ಸಾಮಾಜಿಕ ಜವಾಬ್ದಾರಿ ಲೇಖಕನಿಗೆ ಇರಬೇಕು ಮತ್ತು ಕಾಲಕ್ಕೆ ಅವನು ಬದ್ಧನಾಗಿರಬೇಕಾಗಿರುವುದು ಮುಖ್ಯವಾಗಿದೆ ಎಂಬುದು ಬಂಡಾಯದ ಬಹು ಮುಖ್ಯ ಗುರಿಯಾಗಿದೆ. ಇದರಿಂದಾಗಿ ಲೇಖಕ ಆಯಾಕಾಲದ ಧೋರಣೆಗೆ ಪ್ರತಿಕ್ರಿಯಿಸುತ್ತಾನೆ. ಅಭಿವ್ಯಕ್ತಿಯಲ್ಲಿ ಯಾವ ಮಾರ್ಗವನ್ನೇ ಅನುಸರಿಸಲಿ ಕ್ರೂರ ವ್ಯವಸ್ಥೆಯ ವಿರೋಧಿ ನೆಲೆಯೊಂದು ಈ ಸಾಹಿತ್ಯದ ಹಿನ್ನೆಲೆಯಲ್ಲಿರುತ್ತದೆ. ‘ಬಂಡಾಯ ಸಾಹಿತಿಗಳು ಯಥಾಸ್ಥಿತಿವಾದದ ವಿರೋಧಿಗಳು ಸಮಾಜ ಬದಲಾವಣೆಯ ಧೋರಣೆಗೆ ಬದ್ಧರು. ಇದಲ್ಲದೇ ಜನಪರ ಹೋರಾಟಗಳೊಂದಿಗೆ ಕ್ರಿಯಾತ್ಮಕ ಸಂಬಂಧ ಬೆಳೆಸಲು ಮತ್ತು ಪ್ರಧಾನವಾಗಿ ಸಾಂಸ್ಕೃತಿಕ ಕ್ಷೇತ್ರದಲ್ಲಿ ಎಡಪಂಥೀಯ ವಿಚಾರಧಾರೆಯನ್ನು ನೆಲೆಗೊಳಿಸಲು ಬದ್ಧರಾದವರು. ಇಷ್ಟಾಗಿಯೂ ಈ ಸಾಹಿತ್ಯ ಯಾವೊಬ್ಬ ನಿರ್ದಿಷ್ಟ ವ್ಯಕ್ತಿಯ ಸಿದ್ಧಾಂತಗಳನ್ನು ನೆಚ್ಚಿ ನಿಂತಿಲ್ಲವೆಂದು ಹೇಳಲಾಗುತ್ತದೆ. ಕಾರ್ಲ್ ಮಾಕ್ರ್ಸ್, ಲೋಹಿಯಾ, ರಾಮಸ್ವಾಮಿ ನಾಯ್ಕರ್, ಅಂಬೇಡಕರ್, ಜಯಪ್ರಕಾಶ ನಾರಾಯಣ್ ಇನ್ನೂ ಅನೇಕವರೆಲ್ಲ ಈ ಸಾಹಿತ್ಯದ ವ್ಯಕ್ತಿ ಶಕ್ತಿಗಳು ಆಗಿದ್ದಾರೆ ಎನ್ನಲಾಗಿದೆ ಅನ್ನುವುದುಕಿಂತಲೂ ಹೌದು ಎಂಬುದೇ ಹೆಚ್ಚು ಸೂಕ್ತ. ಬಂಡಾಯ ಸಾಹಿತಿ ಸಾಮಾಜಿಕ ಸಂಬಂಧಗಳ ಹಿಂದಿರುವ ಮೋಸಗಳನ್ನು, ಅಮಾನವೀಯತೆಯನ್ನು ಗುರುತಿಸಿ ಸಮಾಜ ವ್ಯವಸ್ಥೆಯ ವಿರುದ್ಧ ಸ್ಫೋಟಿಸುತ್ತಾನೆ. ಈ ಸ್ಫೋಟನೆಯ ಆಳದಲ್ಲಿ ಹೊಸ ಸಮಾಜ ರಚನೆಯ ಕಳಕಳಿ, ಅಸ್ತಿತ್ವದಲ್ಲಿ ಇರುವ ಅಸಮಾನ ಸಮಾಜವನ್ನು ಕುರಿತು ಉಗ್ರವಾದ ಅಸಹನೆವು ಇದರೊಂದಿಗೆ ಒಂದರೊಡನೊಂದು ಬೆಸೆದುಕೊಂಡಿರುತ್ತವೆ. ಅಸಮಾನತೆ, ಅನ್ಯಾಯ, ಶೋಷಣೆಗಳನ್ನೇ ಮೂಲಧನ ಮಾಡಿಕೊಂಡು ಯುಗಯುಗಗಳಿಂದ ಬಡವರನ್ನು ಮತ್ತು ಜಾತಿಯ ದೃಷ್ಟಿಯಿಂದ ಹೀನರಾದವರನ್ನು ತುಳಿಯುತ್ತ ಬಂದ ಯಜಮಾನ ಸಂಸ್ಕೃತಿಯ ವಿರುದ್ಧ ಬಂಡೇಳುವ ಕೆಚ್ಚು ಮತ್ತು ಅಂಥ ಪ್ರತಿಭಟನೆಯ ಹಿಂದಿರುವ ಪ್ರಾಮಾಣಿಕತೆಯೇ ಬಂಡಾಯ ಸಾಹಿತ್ಯದ ಮೂಲ ನೆಲೆ ಎಂದೇ ಹೇಳಬೇಕು. ಈ ಮೇಲಿನ ಅಂಶಗಳು ಬಂಡಾಯ ಸಾಹಿತ್ಯದ ನೆಲೆ ಬೆಲೆಯನ್ನು ಸ್ಥೂಲವಾಗಿ ತಿಳಿಸುತ್ತವೆ. ಪ್ರಾಚೀನ ಸಾಹಿತ್ಯದಲ್ಲಿ ಬಂಡಾಯ– ಪ್ರಾಚೀನ ಸಾಹಿತ್ಯದಲ್ಲೂ ಬಂಡಾಯದ ದನಿಯನ್ನು ಗುರುತಿಸಲಾಗಿದೆ. ದಾಸ ಸಾಹಿತ್ಯ, ವಚನ ಸಾಹಿತ್ಯ, ನವೋದಯ ಸಾಹಿತ್ಯಗಳೂ ಅವುಗಳ ಮಿತಿಯಲ್ಲಿ ಸಾಮಾಜಿಕ ಪ್ರಜ್ಞೆಯನ್ನು ಬಂಡಾಯದ ಆಶಯವನ್ನು ವ್ಯಕ್ತಪಡಿಸಿರುವುದನ್ನು ಈ ಸಾಹಿತ್ಯ ಗಮನಿಸುತ್ತದೆ. ಮತ್ತು ಗಮನಿಸುತ್ತದೆ. ವಚನ ಸಾಹಿತ್ಯ– ವಚನ ಸಾಹಿತ್ಯ ಯಜಮಾನ ಸಾಹಿತ್ಯದ ವಿರುದ್ಧ ಬಂಡೆದ್ದ ಸಾಹಿತ್ಯ ಚಳವಳಿಯಾಗಿದೆ. ಹೊಸ ಬದುಕಿನ ತುಡಿತಕ್ಕೆ ಹಾತೊರೆದ ವಚನಕಾರರು ಇದ್ದ ವ್ಯವಸ್ಥೆಯನ್ನು ಸೀಳಿ ಅದರ ಒಡಲಲ್ಲೇ ಹೊಸ ವ್ಯವಸ್ಥೆಯನ್ನು ನಿರ್ಮಿಸಿದ್ದು ಸಾಮಾನ್ಯವಾದ ಸಾಧನೆಯಲ್ಲ. ಏಕದೇವೋಪಾಸನೆಯ ತಳಹದಿಯ ಮೇಲೆಯೇ ಎಲ್ಲರೂ ಸಂಘಟಿತರಾಗಿ ಜಾತಿ ಪದ್ಧತಿ, ಅಸಮಾನತೆ ಮತ್ತು ಮೂಢ ನಂಬಿಕೆಗಳನ್ನು ವಿರೋಧಿಸಿ ದುಡಿಯುವ ವರ್ಗಕ್ಕೊಂದು ಹೊಸ ಜಾಗೃತಿಯನ್ನು ತಂದುಕೊಟ್ಟರು. ಅಂದಿನ ಸಂದರ್ಭದ ಈ ಸಾಧನೆ ವಚನಕಾರರ ಬಂಡಾಯದ ಫಲವೇ ಆಗಿದೆ ಎನ್ನುತ್ತಾರೆ ನಮ್ಮ ಸಾಹಿತಿಗಳು. ದಾಸ ಸಾಹಿತ್ಯ– ದಾಸ ಸಾಹಿತ್ಯ ಪ್ರಗತಿ ಮನೋಭಾವದಿಂದ ರಚಿತವಾದುದು. ಸಾಮಾಜಿಕ ವಿಡಂಬನೆ, ಮಡಿವಂತಿಕೆಯ ವಿರೋಧಗಳನ್ನು ಪ್ರಕಟಿಸಿ ಸಾಮಾನ್ಯರ ಬದುಕನ್ನು ಹಸನು ಮಾಡಿದೆ. ಸರ್ವಜ್ಞ ತನ್ನ ತ್ರಿಪದಿಗಳಲ್ಲಿ ಬದುಕಿನ ಜಡತ್ವಕ್ಕೆ ಚಾಟಿ ಎಸೆದು, ಮೂಢನಂಬಿಕೆ, ಜಾತಿ ಪದ್ಧತಿಗಳನ್ನು ವೈಯಕ್ತಿಕ ನೆಲೆಯಲ್ಲೇ ವಿರೋಧಿಸಿ ಪ್ರಗತಿಪರ ಎನಿಸಿದ್ದಾನೆ. ನವೋದಯ, ನವ್ಯ ಸಾಹಿತ್ಯ– ಇತ್ತೀಚಿನ ನವೋದಯ, ನವ್ಯ ಸಾಹಿತ್ಯ ಚಳವಳಿಗಳೂ ತಮ್ಮ ಮಿತಿಯಲ್ಲೇ ಶೋಷಣೆ, ಜಡ ಸಂಪ್ರದಾಯಗಳ ವಿರೋಧಿ ನಿಲುವನ್ನು ಪ್ರಕಟಿಸಿವೆ. ನವೋದಯದ ಜೊತೆಯಲ್ಲೇ ಬಂದ ಪ್ರಗತಿಶೀಲ ಚಳವಳಿ ಜನತೆ ಸಾಮಾಜಿಕ ಹೊಣೆಗಾರಿಕೆಯ ಕಡೆ ಮುಖ ಮಾಡುವಂತೆ ಮಾಡಿದೆ. ಇಷ್ಟು ದೀರ್ಘ ಪರಂಪರೆಯನ್ನು ಪಡೆದ ಈ ಸಾಹಿತ್ಯ ಹೊಸ ಸಾಂಸ್ಕೃತಿಕ ಪರಂಪರೆಯ ನಿರ್ಮಾಣದ ಜವಾಬ್ದಾರಿಯನ್ನು ಹೊತ್ತಿದೆ. ಪ್ರಮುಖ ಸಾಹಿತಿಗಳು ಮತ್ತು ಅವರ ಕೃತಿಗಳು– ಈ ಸಾಹಿತ್ಯದಲ್ಲಿ ಕೃಷಿ ನಡೆಸಿದ ಮತ್ತು ನಡೆಸುತ್ತಾ ಬಂದಿರುವ ಅಲ್ಲದೇ ನಡೆಸುತ್ತಿರುವ ಪ್ರಮುಖರಲ್ಲಿ ಬರಗೂರು ರಾಮಚಂದ್ರಪ್ಪನವರು ಒಬ್ಬರು. ನವ್ಯದ ಕಡೆಗಾಲದಲ್ಲಿ ಬರವಣಿಗೆ ಆರಂಭಿಸಿ ನವ್ಯದ ಪ್ರಭಾವಕ್ಕೆ ಒಳಗಾಗದ ಸ್ವಂತಿಕೆಯನ್ನು ಮೆರೆದರು. ನವ್ಯವೆಂದೇ ಹೇಳಬಹುದಾದ ‘ಮರಕುಟಿಗ’ ಎನ್ನುವ ಅವರ ಕವನ ಸಂಕಲನದಲ್ಲಿ ಸಾಮಾಜಿಕ ನಿಷ್ಠೆತೆಯ ಕುರಿತಂತೇ ಕವಿತೆಗಳಿವೆ. ತಮ್ಮ ಅಭಿವ್ಯಕ್ತಿಯ ಮಾಧ್ಯಮವಾಗಿ ಸಣ್ಣ ಕಥಾ ಕ್ಷೇತ್ರವನ್ನು ಆರಿಸಿಕೊಂಡ ಇವರು ‘ಸುಂಟರಗಾಳಿ’, ‘ಕಪ್ಪು ನೆಲದ ಕೆಂಪು ಕಾಲು’ ಕಥಾ ಸಂಕಲನಗಳನ್ನೂ, ಸೂತ್ರ ‘ಹುತ್ತ’, ‘ಒಂದು ಊರಿನ ಕಥೆ’, ‘ಸೀಳು ನೆಲ’ ಎಂಬ ಕಾದಂಬರಿಗಳನ್ನು ಪ್ರಕಟಿಸಿದ್ದಾರೆ. ಬಡತನ, ಶೋಷಣೆ, ಮೂಢನಂಬಿಕೆ ಇವಗಳನ್ನು ಕೇಂದ್ರವಾಗಿಟ್ಟುಕೊಂಡೇ ಸುಂಟರಗಾಳಿಯ ಕತೆಗಳು ರಚಿತವಾಗಿವೆ. ಸಾಮಾಜಿಕ ಮತ್ತು ಸಾಂಸ್ಕೃತಿಕ ವೈರುಧ್ಯಗಳು ಇವುಗಳ ಜೊತೆ ಮಾನವ ಸಂಬಂಧಗಳು ಇವುಗಳಿಂದ ಮೂಡಿ ಬರುವ ಬಂಡಾಯದ ವಿವಿಧ ಮಜಲುಗಳನ್ನು ‘ಕಪ್ಪು ನೆಲದ ಕೆಂಪು ಕಾಲು’ ಕಥಾ ಸಂಕಲನದಲ್ಲಿ ನಾವು ಕಾಣಬಹುದು. ಬರಗೂರರ ಕಾದಂಬರಿಗಳು ಸ್ವಾತಂತ್ರ್ಯೋತ್ತರ ಹಳ್ಳಿಗಳನ್ನೂ, ನಗರಗಳನ್ನೂ ಕೇಂದ್ರವಾಗಿರಿಸಿಕೊಂಡ ಪ್ರಯತ್ನಗಳಾಗಿವೆ. ಅವರು ತಮ್ಮ ಕಾದಂಬರಿಗಳಲ್ಲಿ ಸಮಾಜದ ಕೊಳಕುಗಳನ್ನು ತೋರಿಸಿ. ಶೋಷಣೆ ದಬ್ಬಾಳಿಕೆಗಳ ಮುಖಾಮುಖಿ ಸಂಘರ್ಷವನ್ನು ಕಲಾತ್ಮಕವಾಗಿ ಮುಂದಿಡುತ್ತಾರೆ. ‘ಒಂದು ಊರಿನ ಕತೆ’ ಅವರೇ ಹೇಳುವಂತೆ ಜೀವನಾನುಭವ ಮತ್ತು ವಾಸ್ತವದ ಗ್ರಹಿಕೆಗಳ ಆಧಾರದ ಮೇಲೆಯೇ ನಿಂತಿದೆ. ತ್ರಿಕೋನಾಕಾರದ ಜಾತಿ ವ್ಯವಸ್ಥೆ ಪಂಚಾಯ್ತಿಯ ಅಧಿಕಾರ ಗ್ರಹಣಕ್ಕಾಗಿ ಒಳಗೊಳಗೇ ತಿಕ್ಕಾಡುವುದು. ಶ್ರೀಮಂತವರ್ಗ ಪಂಚಾಯ್ತಿಯಲ್ಲಿ ಸ್ಥಾನ ಗಿಟ್ಟಿಸಲು ಹೆಣಗಾಡುವುದು. ಅದಕ್ಕಾಗಿ ಮುಗ್ಧ ಹಾಗೂ ದರಿದ್ರ ದಲಿತರನ್ನೇ ಬಲಿಕೊಡಲು ಮುಂದಾಗುವುದು ಈ ಇದು ಸ್ವತಂತ್ರ ಭಾರತದ ಹಳ್ಳಿಗಳ ದೊಡ್ಡದುರಂತವೇ ಆಗಿದೆ. ಈ ದುರಂತದ, ಹೊಲಸು ರಾಜಕೀಯದ ನೈಜ ಚಿತ್ರಣ ಈ ಕಾದಂಬರಿಯಲ್ಲಿ ದಟ್ಟವಾಗಿ ಮೂಡಿಬಂದಿದೆ. ವ್ಯವಸ್ಥೆಯ ಒಳತಿಕ್ಕಾಟಗಳು ಇವರ ಕಾದಂಬರಿಗಳಲ್ಲಿ ತಮ್ಮಷ್ಟಕ್ಕೆ ತಾವೇ ವ್ಯಕ್ತವಾಗುವ ಬಗೆ ಕನ್ನಡದಲ್ಲಿ ಹೊಸದು ಎಂದೇ ಹೇಳಬಹುದು. ಬಂಡಾಯ ಸಾಹಿತಿಗಳಲ್ಲಿ ಮುಖ್ಯರಾದ ಇನ್ನೊಬ್ಬ ಲೇಖಕರೆಂದರೆ ದೇವನೂರು ಮಹಾದೇವ ಅವರು. ‘ದ್ಯಾವನೂರು’ ಎಂಬ ಕಥಾ ಸಂಕಲನ ಮತ್ತು ‘ಒಡಲಾಳ’ ಎಂಬ ಕಿರು ಕಾದಂಬರಿಯನ್ನು ಪ್ರಕಟಿಸಿರುವ ಇವರು ಅಸಮಾನತೆ. ಶೋಷಣೆ, ಅಮಾನವೀಯತೆಗಳ ಬಗ್ಗೆ ವಿಷಾದದಿಂದ ಮತ್ತು ನೋವಿನಿಂದ ತಮ್ಮ ಪ್ರತಿಭಟನೆಯ ಧ್ವನಿ ಎತ್ತಿದ್ದಾರೆ. ಇವರು ತಾತ್ತ್ವಿಕವಾಗಿ ಶೋಷಣೆಯ ವಿರೋಧಿ ಎಂಬುದು ನಿಜವಾದರೂ ಇವರ ಕತೆಗಳಲ್ಲಿ ಸಂಘರ್ಷಕ್ಕಿಂತ ಶೋಷಣೆಗೀಡಾದವರ ಅಸಹಾಯಕ ಸ್ಥಿತಿಗತಿಗಳನ್ನು ಹೇಳುವ ಕಾಳಜಿ ಹೆಚ್ಚು. ‘ಅಮಾಸ’ ‘ಮಾರಿಕೊಂಡವರು’ ‘ಮೂಡಲಸೀಮೇಲೆ ಕೊಲೆಗಿಲೆ’ ಮುಂತಾದ ಕತೆಗಳು ಕಲೆಗಾರಿಕೆ, ವಸ್ತುವಿನ ದೃಷ್ಟಿಯಿಂದ ಉತ್ತಮ ಕತೆಗಳಾಗಿವೆ. ‘ಒಡಲಾಳ’ ಅದರ ವಿವರಣೆಯ ಸಮಗ್ರ ರೂಪ ಹಾಗೂ ತಂತ್ರದಿಂದಾಗಿ ಹೆಚ್ಚು ಗಮನಾರ್ಹ ಕೃತಿಯಾಗಿದೆ. ಕ್ರೌರ್ಯ ಹಾಗೂ ಅಧಿಕಾರಿಶಾಹಿಯಿಂದ ಒಂದು ಕುಟುಂಬದ ಮೇಲಾಗುವ ಪರಿಣಾಮವನ್ನು ಅತ್ಯಂತ ಪರಿಣಾಮಕಾರಿಯಾಗಿ ಈ ಕೃತಿ ಚಿತ್ರಿಸುತ್ತದೆ. ಮೇಲಿನ ಲೇಖಕರಷ್ಟೇ ಪ್ರಮುಖರಾದ ಮತ್ತೊಬ್ಬ ಬರಹಗಾರರೆಂದರೆ ಕವಿ ಸಿದ್ಧಲಿಂಗಯ್ಯನವರು, ‘ಹೊಲೆಮಾದಿಗರ ಹಾಡು’, ‘ಸಾವಿರಾರು ನದಿಗಳು’, ‘ಪಂಚಮ’, ‘ನೆಲಸಮ’ ಮುಂತಾದ ಕೃತಿಗಳನ್ನು ಪ್ರಕಟಿಸಿರುವ ಈ ಕವಿ ಆವೇಶದಿಂದ ಕಾವ್ಯ ಕ್ರಿಯೆಯಲ್ಲಿ ತೊಡಗುತ್ತಾರೆ. ಹೋರಾಟದ ಸಾಗರಕ್ಕೆ ಸಾವಿರಾರು ನದಿಗಳು ಎಂಬ ಸಂಘಟನಾತ್ಮಕ ಧೋರಣೆಯುಳ್ಳ ಈ ಕವಿಯ ಕಾವ್ಯದ ಛಂದೋ ವೈವಿಧ್ಯ ಅಪೂರ್ವವಾದುದು. ‘ಅಲ್ಲೇ ಕುಂತವರೆ’ ಖಂಡ ಕಾವ್ಯ ವಿಶೇಷವಾಗಿ ಉಲ್ಲೇಖಾರ್ಹವಾದುದು. ನವ್ಯ ಸಾಹಿತ್ಯದಲ್ಲಿ ಯಶಸ್ಸು ಪಡೆದು ಪರಂಪರೆಯ ಜೊತೆ ಜೊತೆಯಲ್ಲೇ ಚಿಂತನ ಶೀಲತೆಯನ್ನು ದಕ್ಕಿಸಿಕೊಂಡ ಕವಿ ಚಂದ್ರಶೇಖರ ಪಾಟೀಲರು. ತುರ್ತುಪರಿ ಸ್ಥಿತಿಯನ್ನು ವಿರೋಧಿಸಿ ಜೈಲನ್ನೂ ಕಂಡು ಇವರು ವರ್ತಮಾನಕ್ಕೆ ತೆರೆದ ಹೃದಯದವರಾಗಿ ಹೊಸ ಸಾಹಿತ್ಯ ಚಳವಳಿಯಲ್ಲಿ ತಮ್ಮನ್ನು ಗುರುತಿಸಿಕೊಂಡು ‘ಗಾಂಧೀಸ್ಮರಣೆ’, ‘ಓ ಎನ್ನ ದೇಶಬಾಂಧವರೆ’ ಮುಂತಾದ ಕವನ ಸಂಕಲಗಳನ್ನು ಪ್ರಕಟಿಸಿದರು. ಅಲ್ಲದೇ ಇವರೇ ಸಂಪಾದಿಸಿದ ‘ಗಾಂಧಿ’ ಮತ್ತು ‘ಜೂನ್ 24 ಮಾರ್ಚ್ 22’ ಎಂಬ ಕವನ ಸಂಕಲನಗಳು ರಾಜಕೀಯ ಜಾಗೃತಿಯ ಪ್ರತೀಕಗಳಾಗಿವೆ. ಸಮಾಜದ ಕೆಡಕುಗಳತ್ತ ಕಣ್ಣು ಹಾಯಿಸಿ, ಅವನ್ನು ಗೇಲಿಗೆಬ್ಬಿಸಿ ವಿಡಂಬನೆಗಳ ಮೂಲಕ ಚುಚ್ಚುವುದನ್ನು ಇವರ ಕೃತಿಗಳಲ್ಲಿ ಕಾಣಬಹುದು. ಅಲ್ಲದೇ ಮುಖ್ಯವಾಗಿ ಬೆಸಗರಹಳ್ಳಿ ರಾಮಣ್ಣ ಮತ್ತು ಕಾಳೇಗೌಡ ನಾಗವಾರ  ಇವರು ಬಂಡಾಯ ಸಾಹಿತ್ಯದ ಬಹು ಸತ್ತ್ವಶಾಲೀ ಲೇಖಕರು. ರಾಮಣ್ಣನವರ ‘ಒಂದು ಹುಡುಗನಿಗೆ ಬಿದ್ದ ಕನಸು’ ಶೋಷಣೆಯ ವಿವಿಧ ಮುಖಗಳನ್ನು ಚಿತ್ರಿಸುತ್ತದೆ. ಜನಪದ ಭಾಷೆಯನ್ನು ದುಡಿಸಿಕೊಳ್ಳುವುದರಲ್ಲಿ ಇವರ ಕತೆಗಳು ಯಶಸ್ವಿಯಾಗಿವೆ. ಗಾಂಧಿ, ಪ್ರಜಾಪ್ರಭುತ್ವ, ಗರ್ಜನೆ, ಕತೆಗಳು ತಮ್ಮ ಪ್ರತಿಭಟನೆಯ ಧೋರಣೆಯನ್ನು ವ್ಯಕ್ತಮಾಡಿವೆ. ಇನ್ನೂ ಕಾಳೇಗೌಡ ನಾಗವಾರರ ‘ಬೆಟ್ಟಸಾಲು ಮಳೆ’, ‘ಕರಾವಳಿಯಲ್ಲಿ ಗಂಗಾಲಗ್ನ’ ಎಂಬೆರಡು ಕೃತಿಗಳು ಸೃಜನಶೀಲ ಕೃತಿಗಳು. ಕಾಳೇಗೌಡ ನಾಗವಾರರು ಗ್ರಾಮೀಣ ಪರಿಸರದಿಂದ ಬಂದವರಾದ್ದರಿಂದ ಅಸಮಾನತೆಯ ವಿರುದ್ಧ ದನಿ ಎತ್ತಿದವರಾಗಿದ್ದಾರೆ. ‘ಬೆಟ್ಟಸಾಲು ಮಳೆ’ ಗ್ರಾಮೀಣ ಹಾಗೂ ನಗರ ಪರಿಸರಗಳೆರಡರ ಪ್ರಭಾವದಿಂದ ರಚಿತವಾಗಿರುವ ಕೃತಿಯಾಗಿದೆ. ಇದರಲ್ಲಿ ಬಂಡಾಯದ ಆಶಯಗಳನ್ನು ಹೊಂದಿರುವ ಕತೆಗಳಿರುವುದರಿಂದ ಈ ಕೃತಿಗೆ

ಸ್ವಾತ್ಮಗತ Read Post »

ಅಂಕಣ ಸಂಗಾತಿ, ಮೂರನೇ ಆಯಾಮ

ಮಗುವಾಗಿಸುವ ಸುಂದರ ಹೂ ಮಾಲೆ

ಪುಟ್ಟಲಕ್ಷ್ಮಿ ಕಥೆಗಳುಲೇಖಕರು- ರಘುನಾಥ ಚ ಹಬೆಲೆ-೮೦/-ಪ್ರಕಾಶನ-ಅಂಕಿತ ಪುಸ್ತಕ ಚಿಕ್ಕ ಮಕ್ಕಳ ಲೋಕವೇ ಬೇರೆ ರೀತಿಯದ್ದು. ಕಂಡಿದ್ದೆಲ್ಲವೂ ಅಚ್ಚರಿಯ ವಿಷಯವೇ. ನಾನು ಮೂರನೇ ತರಗತಿಯಲ್ಲಿದ್ದಾಗ ನನ್ನ ಪಕ್ಕದ ಮನೆಯಲ್ಲಿ ದೀಪಾ ಕೊಡ್ಲೆಕೆರೆ ಎನ್ನುವ ನಾಲ್ಕನೆ ತರಗತಿಯ ಗೆಳತಿಯೊಬ್ಬಳಿದ್ದಳು. ಅವಳ ತಂದೆ ಅಲ್ಲೇ ಸಮೀಪದ ಮತ್ತೊಂದು ಪ್ರಾಥಮಿಕ ಶಾಲೆಯ ಶಿಕ್ಷಕರಾಗಿದ್ದರು. ಅವರು ನಮ್ಮ ಹೆಸರಾಂತ ಕಥೆಗಾgರಾಗಿರುವ ಚಿಂತಾಮಣಿ ಕೊಡ್ಲೆಕೆರೆ ಹಾಗೂ ಮಹಾಬಲಮೂರ್ತಿ ಕೊಡ್ಲೆಕೆರೆಯವರ ಚಿಕ್ಕಪ್ಪ. ನಾನು ದೀಪಾ ಆಗಲೇ ಕವನ ಬರೆಯುತ್ತೇವೆಂದು ಏನೇನೋ ಬರೆಯುತ್ತಿದ್ದೆವು. ಆಗ ನಾವಿದ್ದ ಅಮ್ಮಿನಳ್ಳಿ ಎಂಬ ಪುಟ್ಟ ಊರಿನ ಹೊರಗಿರುವ, ಗಣಪತಿ ಮೂರ್ತಿಯನ್ನು ಮುಳುಗಿಸುವ ದೊಡ್ಡ ಹಳ್ಳದ ಸಂಕದ ಮೇಲೆ ದೆವ್ವಗಳು ಓಡಾಡುತ್ತವೆ ಎಂಬ ಪ್ರತೀತಿಯಿತ್ತು. ಅಥವಾ ನಮ್ಮ ಹುಡುಗಾಟವನ್ನು ಕಡಿಮೆ ಮಾಡಲು ನಾವು ವಾಸವಾಗಿದ್ದ ಮನೆಯ ಓನರ್ ತೇಜಕ್ಕ ನಮ್ಮನ್ನು ಹೆದರಿಸಲೆಂದು ಹೇಳಿದ್ದಳೋ ಗೊತ್ತಿಲ್ಲ. ಅಂತೂ ನಾವಿಬ್ಬರೂ ಅದನ್ನು ನಂಬಿಕೊಂಡು ಸಂಕದ ಮೇಲಿರಬಹುದಾದ ದೆವ್ವದ ಕುರಿತು ಒಂದು ಕವಿತೆ ಬರೆದ ನೆನಪು. ನನ್ನ ಅಪ್ಪ ‘ನನ್ನ ಮಗಳೂ ಕವಿತೆ ಬರಿತಿದ್ದಾಳೆ’ ಎಂದು ಹೆಮ್ಮೆ ಪಟ್ಟರೂ ನಂತರ ನಿಧಾನವಾಗಿ ದೆವ್ವವನ್ನು ನಂಬ್ತೀಯಾ ನೀನು ಎಂದು ಕೇಳಿದ್ದರು. ಅವರೇ ಕಲಿಸಿಕೊಟ್ಟ ಪಾಠ. ಇಲ್ಲ ಎಂದಿದ್ದೆ. ಹಾಗಿದ್ದರೆ ನಂಬದ ವಿಷಯಗಳ ಬಗ್ಗೆ ಬರೆದು ಮೂಢನಂಬಿಕೆ ಪ್ರದರ್ಶಿಸಬಾರದು’ ಎಂದಿದ್ದರು ಅಲ್ಲಿಗೆ ನನ್ನ ಮೊದಲ ಕವಿತೆ ಎಲ್ಲೋ ಕಳೆದು ಹೋಯ್ತು. ಆದರೂ ಈ ದೆವ್ವದ ಕುರಿತಾದ ಕಥೆಗಳು ನಂಬದೇ ಹೋದರೂ ಯಾವತ್ತೂ ನನಗೆ ಅತ್ಯಾಸಕ್ತಿಯ ವಿಷಯವೇ. ಹೀಗಾಗಿ ಪುಟ್ಟಲಕ್ಷ್ಮಿಯ ಮೊದಲ ಕಥೆ ಓದುತ್ತಲೇ ಖುಷಿಯಾಗಿಬಿಟ್ಟಿತು. ದುಬಾಕು ದೆವ್ವ ಚಿಕ್ಕ ಮಕ್ಕಳ ತಿಂಡಿಯನ್ನೆಲ್ಲ ತಿಂದು ಟಿಫಿನ್ ಬಾಕ್ಸ್‌ಗೆ ಕಲ್ಲು ಮಣ್ಣು ತುಂಬಿಸಿ, ನಂತರ ಪುಟ್ಟಲಕ್ಷ್ಮಿಯ ಪೋಚರ್ ಘೋಚರ್‌ಗೆ ಹೆದರಿ ಜೆಸಿಬಿಯಾದ ದೆವ್ವದ ಕಥೆಷ್ಟು ಖುಷಿಕೊಟ್ಟಿತೆಂದರೆ ನನಗೆ ಮತ್ತೊಮ್ಮೆ ಬಾಲ್ಯಕ್ಕೆ ಜಿಗಿದ ಅನುಭವವಾಯಿತು.     ಎರಡನೇ ಕಥೆ ಕಾಗೆ ಮರಿಯ ಹೊಟ್ಟೆ ನೋವು ಕೂಡ ಕಾಗೆಯ ಮರಿಯೊಂದು ಶಾಲೆಗೆ ಹೋಗುವ, ದಾರಿಯಲ್ಲಿ ಕೋಕಾ ಕುಡಿದು ಹೊಟ್ಟೆ ನೋವು ಬರಿಸಿಕೊಳ್ಳುವ ವಿಶಿಷ್ಟ ಕಥೆಯುಳ್ಳದ್ದು. ಬುಸ್ ಬುಸ್ ಹೆದ್ದಾರಿಯಂತೂ ಹಾವಿನ ರೂಪದ ಹೆದ್ದಾರಿಯ ಕಥೆ. ಪುಟ್ಟಲಕ್ಷ್ಮಿಯನ್ನು ತಿನ್ನಲು ಬಂದ ದೆವ್ವದ ಹೊಟ್ಟೆಯೊಳಗೆ ಸೋಪಿನ ಗುಳ್ಳೆಗಳು ರಕ್ತದ ಕುದಿತವನ್ನು ಕಡಿಮೆ ಮಾಡಿ ಅದನ್ನು ಹೆದ್ದಾರಿಯನ್ನಾಗಿಸಿದ ಕಥೆ ಇದು. ಗಿಬಾಕು ಮತ್ತು ಕು ಬೇಂ ಶಿ ಮಾ ಗೋ ಅಗಿ ಚಂ ಕಥೆಯಲ್ಲಿ ಜೆಸಿಬಿ ಆಗಿ ಬದಲಾಗಿದ್ದ ದುಬಾಕು ದೆವ್ವದ ಅಣ್ಣ ಗಿಬಾಕು ಮನೆಗಳನ್ನೆಲ್ಲ ನುಂಗುವುದರಿಂದ ಈಗಿನ ಅಪಾರ್ಟಮೆಂಟ್‌ಗಳಾಗಿ ಬದಲಾಗುವ ಚಿತ್ರವಿದೆ. ಗಾಂಧಿ ತಾತನ ಕಾಡಿನ ಮಕ್ಕಳು ಕಥೆ ಎಷ್ಟೊಂದು ಕಾಲ್ಪನಿಕ, ಆದರೆ ಎಷ್ಟೊಂದು ವಾಸ್ತವ. ಇಲ್ಲಿ ಬರುವ ಹುಲಿ, ಆನೆ, ಜಿರಾಳೆಗಳು ಅದೆಷ್ಟು ಮನುಷ್ಯ ಲೋಕಕ್ಕೆ ಹೊಂದಿಕೊಂಡಂತಿದ್ದರೂ ಅವುಗಳು ಕಾಡಿನಲ್ಲಿ ಸ್ವತಂತ್ರವಾಗಿರುವುದೇ ಸಮಂಜಸವಾದುದು. ಈ ಕಥೆಯ ಪಾತ್ರವಾಗಿರುವ ಗಾಂಧಿತಾತ ಕೂಡ ಎಷ್ಟೊಂದು ಸಹಜ ಎನ್ನಿಸುವಂತಿದೆ. ತೀರಾ ಸಹಜವಾಗಿ ಫೋಟೊದಿಂದ ಎದ್ದು ಪ್ರಾಣಿಗಳಿರುವ ಮೂರು ಪೆಟ್ಟಿಗೆಯನ್ನು ಕೊಡುವುದು ಎಲ್ಲೂ ಅತಿರೇಖ ಅನ್ನುಸುವುದಿಲ್ಲ. ಇದೆಲ್ಲಕ್ಕಿಂತ ಹೆಚ್ಚಾಗಿ ಭಯವಾದರೆ, ಕೆಟ್ಟ ಕನಸುಗಳೇನಾದರೂ ಬಿದ್ದರೆ ಗಾಂಧಿತಾತನನ್ನು ನೆನಪಿಸಿಕೊಂಡು ನಿದ್ದೆ ಮಾಡು ಎನ್ನುವ ಪುಟ್ಟಲಕ್ಷ್ಮಿಯ ತಂದೆತಾಯಿಯರ ಮಾತು ನಿಜಕ್ಕೂ ದೊಡ್ಡ ಸಂದೇಶವನ್ನು ಹೇಳುತ್ತದೆಯೆಂದೇ ನನಗನ್ನಿಸುತ್ತದೆ. ಕಾಡುಪ್ರಾಣಿಗಳನ್ನು ಪಂಜರದಲ್ಲಿಟ್ಟು ಪ್ರದರ್ಶನದ ಗೊಂಬೆಗಳಂತೆ ಆಡಿಸುವ ನಾವು ಪುಟ್ಟಲಕ್ಷ್ಮಿಯ ಕನಸಿನಂತೆ ನಮ್ಮನ್ನೆಲ್ಲ ಪಂಜರದಲ್ಲಿಟ್ಟುಬಿಟ್ಟರೆ ಏನಾಗಬಹುದು ಎಂದು ಯೋಚಿಸಿದರೆ ಭಯವಾಗುತ್ತದೆ. ಹೀಗಾಗಿ ಪುಟ್ಟಲಕ್ಷ್ಮಿ ಎಲ್ಲ ಪ್ರಾಣಿಗಳನ್ನು ಕಾಡಿಗೆ ಬಿಟ್ಟುಬಿಡುವ ನಿರ್ಧಾರ ಮಾಡುತ್ತಾಳೆ. ಕಥೆಯ ದೃಷ್ಟಿಯಿಂದ ಹಾಗೂ ಅದರ ಒಳತಿರುಳಿನ ದೃಷ್ಟಿಯಿಂದ ಈ ಕಥೆ ತುಂಬಾ ಮಹತ್ವದ್ದೆನಿಸುತ್ತದೆ. ಕರೀಮಿಯ ಚುಕ್ಕಿಗಳ ಚೆಂಡಾಟ ಕಥೆಯಲ್ಲಿ  ತನ್ನನ್ನು ಕರೀಮಿ ಎಂದ ನಕ್ಷತ್ರವನ್ನು ಹೊಡೆಯಲೆಂದು ಚೆಂಡು, ಕಲ್ಲುಗಳನ್ನೆಲ್ಲ ಎಸೆದು ನಂತರ ಕಪ್ಪು ಕಸ್ತೂರಿ ಕನ್ನಡ ಕಸ್ತೂರಿ ಮಂತ್ರ ಹೇಳಿ ಚುಕ್ಕಿಗಳನ್ನೆಲ್ಲ ಚುಚ್ಚಿ ಗಾಯ ಮಾಡಿದ ಪುಟ್ಟಲಕ್ಷ್ಮಿಯ ಕತೆ ಖಂಡಿತವಾಗಿಯೂ ನಿಮಗೆ ನಿಮ್ಮ ಬಾಲ್ಯವನ್ನು ನೆನಪಿಸದಿದ್ದರೆ ಹೇಳಿ. ಅಪ್ಪನ ಹಾಗೆ ಕಪ್ಪು ಬಣ್ಣ ಹೊತ್ತುಕೊಂಡ ನನಗೆ ಅಮ್ಮನ ಹಾಗೆ ಬೆಳ್ಳಗಿರುವ ಅಣ್ಣನನ್ನು ಕಂಡರೆ ಅಸೂಯೆ. ಕಪ್ಪು ಬಣ್ಣವೇ ಚಂದ ಎಂದು ಪದೇ ಪದೇ ವಾದಿಸುತ್ತ, ದೇವರ ಶಿಲೆ ಕೂಡ ಕಪ್ಪು ಗೊತ್ತಾ? ಎಂದು ನನ್ನ ಮೇಲೆ ನಾನೇ ದೈವತ್ವವನ್ನು ಆರೋಪಿಸಿಕೊಳ್ಳುತ್ತಿದ್ದೆ. ಬಿಳಿಬಣ್ಣ  ಸ್ವಲ್ಪ ಕೂಡ ಚಮದ ಅಲ್ಲ ಅಂತಿದ್ದೆ. ನಿನ್ನ ಮುಖದ ಮೇಲೆ ಒಂದು ಕಪ್ಪು ಮಚ್ಚೆ ಇದ್ದರೆ ಎಷ್ಟು ಚಂದ ಕಾಣ್ತದೆ, ಅದೇ ನನ್ನ ಮುಖದ ಮೇಲೆ ನಿನ್ನ ಬಿಳಿಬಣ್ಣದ ಮಚ್ಚೆ ಇಟ್ಟರೆ ಅಸಹ್ಯ ಎಂದಾಗಲೆಲ್ಲ ಅಣ್ಣ ನನ್ನ ಮುಗ್ಧತೆಗೆ ನಗುತ್ತಿದ್ದ. ಇಲ್ಲಿ ಪುಟ್ಟಲಕ್ಷ್ಮಿ ಕೂಡ ಹೊಟ್ಟೆಕಿಚ್ಚಿನಿಂದ ಸುಟ್ಟುಕೊಂಡೇ ನೀನು ಹೀಗೆ ಬಿಳುಚಿರೋದು ಎನ್ನುತ್ತಾಳೆ. ಬಣ್ಣಗಳ ತಾರತಮ್ಯವನ್ನು ವಿರೋಧಿಸುವ ಕಥೆ ಖುಷಿ ನೀಡುತ್ತದೆ.  ಮತ್ತೂ ವಿಶಿಷ್ಟವೆಂದರೆ ಇಲ್ಲಿ ನಾವೆಲ್ಲ ಚಂದಮಾಮ ಎಂದು ಕರೆಯುವ ಚಂದ್ರ ಚಂದ್ರಮ್ಮನಾಗಿರುವುದು. ಗುಡಾಣ ಹೊಟ್ಟೆಯ ಸೋಮಾರಿ ಮೊಲ ತೀರಾ ಆಸಕ್ತಿದಾಯಕವಾಗಿದೆ. ಆಹಾರ ಹುಡುಕುವ ಸೋಮಾರಿತನಕ್ಕೆ ಸಾರ್ವಜನಿಕ ಸ್ಥಳಗಳಲ್ಲಿ ಕಸದ ಬುಟ್ಟಿಯಾಗಿ ನಿಂತ ಮೊಲಗಳ ಕಥೆ ಇದು. ಆದರೆ ಕೊನೆಯಲ್ಲಿ ಆ ಮೊಲ ಕಾಡನ್ನೆಲ್ಲ ಕಡಿದು ಬಿಟ್ಟಿದ್ದೀರಿ, ತಿನ್ನಲು ಏನೂ ಸಿಗದು ಎನ್ನುವ ಮಾತು ಮನಮುಟ್ಟುತ್ತದೆ. ಸ್ವಯಂವರ ಕಥೆಯಲ್ಲಿರಾಜನನ್ನು ಆರಿಸಲು ಪಟ್ಟದಾನೆಯ ಸೊಂಡಿಲಿಗೆ ಮಾಲೆ ನೀಡಿ ಅದು ಯಾರ ಕೊರಳಿಗೆ ಹಾಕುತ್ತದೋ ಅವನನ್ನು ರಾಜ ಎನ್ನಲಾಗುತ್ತಿತ್ತಂತೆ. ಅದು ರಾಜ್ಯಲಕ್ಷ್ಮಿಯ ಜೊತೆಗಾದ ಸ್ವಯಂವರ. ಆದರೆ ರಾಜನಾಗಬೇಕೆಂದು ಬಯಸಿದವರೆಲ್ಲ, ಮಾವುತನಿಗೆ, ಅವನ ಹೆಂಡತಿ ಮಗನಿಗೆ ಆಮಿಷ ಒಡ್ಡಿ ತನಗೇ ಮಾಲೆ ಹಾಕಬೇಕು ಎಂದು ಕೇಳಿಕೊಳ್ಳುತ್ತಿದ್ದರಂತೆ. ಕೊನೆಗೆ ಮಾವುತನನ್ನೂ ಅವನ ಪಟ್ಟದಾನೆಯನ್ನು ಕೊಲ್ಲುವುದಾಗಿ ಬೆದರಿಕೆಯನ್ನೂ ಹಾಕುತ್ತಿದ್ದರಂತೆ. ಆದರೆ ಆನೆ ಮಾತ್ರ ಕಾರಣಿಕನೊಬ್ಬನಿಗೆ ಮಾಲೆ ಹಾಕಿತಂತೆ. ಈ ಕಥೆಯನ್ನು ಹೇಳಿದ ಪುಟ್ಟಲಕ್ಷ್ಮಿಯ ಅಜ್ಜಿ ಈಗ ಚುನಾವಣಾ ಕಣದಲ್ಲಿರುವವರೂ ಅಂತಹುದ್ದೇ ಅಭ್ಯರ್ಥಿಗಳು ಎನ್ನುತ್ತಾರಲ್ಲದೇ ಆನೆಯಂತೆ ಒಳ್ಳೆಯವನನ್ನು ಆರಿಸಿ ಎನ್ನುತ್ತಾರೆ. ಆದರೆ ಕೊನೆಯ ಮಾತು ನಮ್ಮೆಲ್ಲರನ್ನೂ ನಾಚಿಕೆ ಪಡುವಂತೆ ಮಾಡುತ್ತದೆ. ಹಿರಿಯರು ಮಾಡುವ ಗಲೀಜನ್ನೆಲ್ಲ ಚಿಕ್ಕ ಮಕ್ಕಳು ತೊಳೆಯುವಂತಹ ಕಾಲ ಬಂತಪ್ಪಾ ಎಂದು ಪುಟ್ಟ ಲಕ್ಷ್ಮಿ ಹೇಳುತ್ತಾಳೆ. ನಾವು ಹಾಳು ಮಾಡಿ ಅದರ ಫಲವನ್ನು ಕಿರಿಯರು ಅನುಭವಿಸುವಂತೆ ಮಾಡುವ ನಮ್ಮ ದುರಾಸೆಗೆ, ಲಾಲಸೆಗೆ ಧಿಕ್ಕಾರವಿರಲಿ. ಲೈಟು ಕಂಬದ ಬೆಳಕಿನಲ್ಲಿ ಕಥೆಯಲ್ಲಿ ಶಾಲೆಗೆ ಹೋಗದ ರಾಜುವನ್ನು ಕನಸಿನಲ್ಲಿ ಬಂದ ಲೈಟ್‌ಕಂಬ ವಿಶ್ವೇಶ್ವರಯ್ಯನವರ ಕಥೆ ಹೇಳಿ ಶಾಲೆಗೆ ಹೋಗುವಂತೆ ಮನ ಒಲಿಸುತ್ತದೆ. ಮಾರನೆಯ ದಿನ ಶಾಲೆಗೆ ಬಂದವನನ್ನು ಪುಟ್ಟಲಕ್ಷ್ಮಿ ಅಕ್ಕರೆಯಿಂದ ಕರೆದುಕೊಂಡು ಹೋಗುತ್ತಾಳೆ. ಮಳೆರಾಯನ ವಿರುದ್ಧದ ದೂರಲ್ಲಿ ಕಾಲಕಾಲಕ್ಕೆ ಮಳೆ ಸುರಿಸದ ವರುಣನನ್ನು ದೇವಲೋಕದ ಕಟಕಟೆಯಲ್ಲಿ ನಿಲ್ಲಿಸಿ ವಿಚಾರಣೆ ಮಾಡುವ, ಭೂಲೋಕದ ಜನ ಮರ ಕಡಿದು, ಪರಿಸರವನ್ನು ಮಾಲಿನ್ಯ ಮಾಡಿದ್ದರಿಂದ ಮಳೆಯಾಗುತ್ತಿಲ್ಲ ಎಂದು ತೀರ್ಮಾನಿಸುವ ಚಿತ್ರಣವಿದೆ. ಚುಕ್ಕಿ ಬೇಕಾ ಚುಕ್ಕಿಯಲ್ಲಿ ವೀಕೆಂಡ್‌ನಲ್ಲಿ ಭೂಲೋಕಕ್ಕೆ ಬರುವ ದೇವತೆಗಳ ಕಥೆ ನಗು ತರಿಸಿದರೂಮಳೆ ಸುರಿಸಲಾಗದಂತೆ ಎಡವಟ್ಟು ಮಾಡಿಕೊಂಡ ವರುಣ ದೇವಲೋಕದ ಬರಗಾಲಕ್ಕೂ ಕಾರಣನಾಗುತ್ತಾನೆ. ಇತ್ತ ಮಕ್ಕಳನ್ನು ಸಾಕಲಾಗದ ಚಂದ್ರಮ್ಮ ಚಿಕ್ಕಿಗಳನ್ನೆಲ್ಲ ಭೂಲೋಕಕ್ಕೆ ತಂದು ಮಾರಲು ಪ್ರಯತ್ನಿಸುತ್ತಾಳಾದರೂ ಗಾಜಿನ ಚೂರೆಂದು ಯಾರೂ ಕೊಳ್ಳುವುದಿಲ್ಲ. ನೂರು ರೂಪಾಯಿ ತಳ್ಳು ಎನ್ನುತ್ತ ಬಂದ ಪೋಲೀಸರು ಚಂದ್ರಮ್ಮನ ಕೈ ಎಳೆದಾಗಲೇ ಧೋ ಎಂದು ಮಳೆ ಸುರಿದು ಬುಟ್ಟಿ ಚಲ್ಲಾಪಿಲ್ಲಿಯಾಗುತ್ತದೆ, ಚುಕ್ಕಿಗಳು ಮಳೆಯಲ್ಲಿ ಕೊಚ್ಚಿ ಹೋಗುತ್ತದೆ. ತಪ್ಪಿಸಿಕೊಳ್ಳಲು ಯತ್ನಿಸಿದ ಚಂದ್ರಮ್ಮನಿಗೆ ಫೋಲೀಸರು ಬೆತ್ತ ಬೀಸಿ ಎಚ್ಚರ ತಪ್ಪುವಂತಾಗುತ್ತದೆ. ಕಣ್ಣು ಬಿಟ್ಟರೆ ಗಾಳಿ ಮಳೆ ಬೆಳಕಿಂದ ಆಕಾಶ ಸೇರಿದ ಚಿಕ್ಕಿಗಳು ಹಾಗೂ ಚಂದ್ರಮ್ಮ ಖುಷಿಯಲ್ಲಿರುತ್ತವೆ. ಎಷ್ಟೊಂದು ತೀವ್ರತೆಯನ್ನು ಹೊಂದಿದೆ ಈ ಕಥೆ. ದೇವತೆಗಳೂ ಮನುಷ್ಯರಂತೆ ವೀಕೆಂಡ್ ಪಾರ್ಟಿ ಮಾಡುವುದು, ಕಲಬೆರಿಕೆ ಅಮೃತ, ಮೂಲಿಕೆಗಳು, ಮಕ್ಕಳನ್ನು ಮಾರಲೆತ್ನಿಸುವುದು ಮನಸ್ಸನ್ನು ತಟ್ಟುತ್ತದೆ. ಮಂಚದ ಕಾಲು ಕಥೆ ಹೇಳಿತು ಕಥೆಯಲ್ಲಿ ಅಪ್ಪ ಅಮ್ಮ ಕಥೆ ಹೇಳದಿದ್ದಾಗ ಮುನಿಸಿಕೊಂಡಿದ್ದ ಪುಟ್ಟ ಲಕ್ಷ್ಮಿಗೆ ಮಂಚದ ಕಾಲು ಕಾಡು ಕಡಿದು ನಾಡು ಮಾಡಿಕೊಂಡ ಮನುಷ್ಯನ ದುರ್ವತನೆಯನ್ನು ತಿಳಿಸುವ ಕಥೆ ಹೇಳುತ್ತದೆ. ಸೂರ್ಯನ ದೀಪದಲ್ಲಿ ವಿಶ್ರಾಂತಿ ಇಲ್ಲದೇ ದುಡಿದ ಸೂರ್‍ಯನಿಗೆ ದೇವಲೀಕದವರೆಲ್ಲ ಸನ್ಮಾನ ಮಾಡಿ ದೀಪದ ಕಾಣಿಕೆ ಕೊಟ್ಟರೆ ದಿನವಿಡೀ ಬೆಳಗುವ ಅದರಿಂದ ಕಿರಿಕಿರಿಯಾಗಿ ಸೂರ್‍ಯನ ಹೆಂಡತಿ ಅದನ್ನು ಒಡೆದು ಆ ಚೂರುಗಳೆಲ್ಲ ಚಂದ್ರ ಚುಕ್ಕಿಗಳಾದ ಕಥೆಯನ್ನು ರತ್ನಮ್ಮಜ್ಜಿ ಪುಟ್ಟಲಕ್ಷ್ಮಿಗೆ ಹೇಳುತ್ತಾಳೆ. ಚಾಕಲೇಟು ತಿಂದ ಟ್ಯೋಮಾಟೊ ಕಥೆಯಲ್ಲಿ ಗಿಡದಲ್ಲಿ ಬೆಳೆದ ಟೊಮಾಟೋ ಎಲ್ಲೆಲ್ಲಿಂದಲೋ ಬಂದು ತರಕಾರಿ ಅಂಗಡಿಯಿಂದ ಅಮ್ಮನ ಮುಖಾಂತರ ಪುಟ್ಟಲಕ್ಷ್ಮಿ ಮನೆಗೆ ಬರುತ್ತದೆ. ಗಾಯಗೊಂಡ ಟೋಮಾಟೋ ಸತ್ತೇ ಹೋಗುತ್ತೇನೆ, ಅದಕ್ಕೂ ಮೊದಲು ಒಂದು ಚಾಕಲೇಟು ತಿನ್ನಬೇಕು ಎಂದು ಪುಟ್ಟಲಕ್ಷ್ಮಿಯ ಬಳಿ ಕೇಳಿಕೊಳ್ಳುತ್ತದೆ.. ಚಕಲೇಟು ತಿಂದ ಟೋಮೇಟೊವನ್ನು ಪುಟ್ಟಲಕ್ಷ್ಮಿ ತೋಟದಲ್ಲಿ ಹುಗಿಯುತ್ತಾಳೆ. ಅದರಿಂದ ಎಷ್ಟೆಲ್ಲಾ ಟೋಮೇಟೋ ಗಿಡಗಳು… ಅವೆಲ್ಲ ಟೋಮೇಟೋ ಹಣ್ಣಿನಂತಹ ಚಾಕಲೇಟುಗಳನ್ನು ಬಿಡುತ್ತವೆ.    ಇಡೀ ಪುಸ್ತಕದ ಕಥೆಗಳು ಆಸಕ್ತಿದಾಯಕವಾಗಿ ಓದಿಸಿಕೊಳ್ಳುತ್ತವೆ. ದೆವ್ವದ ಕಥೆ ಬಂದರೂ ಆ ದೆವ್ವವನ್ನು ಓಡಿಸುವ ಮಂತ್ರ ಎಷ್ಟೊಂದು ಸುಲಭದ್ದು. ಬರೀ ಘಾಚರ್ ಘೋಚರ್ ಎಮದರಾಯಿತು. ಆಕಾಶ ಸೇರಬೇಕೆಂದರೆ ಕಪ್ಪು ಕಸ್ತೂರಿ ಕನ್ನಡ ಕಸ್ತೂರಿ ಮಂತ್ರ ಪಟಿಸಿದರಾಯಿತು. ಹೀಗಾಗಿ ಇಲ್ಲಿ ಯಾವುದೂ ಅತಿರೇಕ ಎನ್ನಿಸಿಕೊಳ್ಳುವುದಿಲ್ಲ. ಎಲ್ಲವೂ ಸೀದಾಸಾದಾ ನಮ್ಮ ಮನೆಯಲ್ಲಿಯೇ ನಡೆಯುತ್ತಿರುವಷ್ಟು ಆತ್ಮೀಯ. ಪರಿಸರದ ಕುರಿತಾಗಿ, ಗಿಡಮರಗಳ ಕುರಿತಾಗಿ, ಶಾಲೆಗೆ ಹೋಗುವುದಕ್ಕಾಗಿ ಹೀಗೆ ಎಲ್ಲದಕ್ಕೂ ರಘುನಾಥ ಚ.ಹಾ ತುಂಬ ಚಂದದ ಅಷ್ಟೇ ಸರಳವಾದ, ಓದಲು ಒಂದಿಷ್ಟೂ ಬೇಸರವೆನಿಸದ ಕಥೆಗಳನ್ನು ಹೆಣೆದಿದ್ದಾರೆ. ಬುಟ್ಟಿಯಲ್ಲಿ ತುಂಬಿರುವ ಹತ್ತಾರು ಹೂಗಳನ್ನು ಹಣೆದು ಮಾಲೆ ಮಾಡಿದಂತೆ ಈ ಕಥೆಗಳಲ್ಲಿ ಪುಟ್ಟಲಕ್ಷ್ಮಿ ದಾರವಾಗಿ ಎಲ್ಲ ಕಥೆಗಳನ್ನು ಬೆಸೆದಿರುವ ರೀತಿಯೇ ಅಮೋಘವಾದ್ದು. ಇಲ್ಲಿನ ದೇವರುಗಳೂ ಕೂಡ ಅದ್ಭುತವನ್ನು ಸೃಷ್ಟಿಸುವುದಿಲ್ಲ. ನಮ್ಮಂತೆ ಸಹಜವಾಗಿದ್ದು ಆತ್ಮೀಯವಾಗುವವರು. ಅದಕ್ಕೂ ಹೆಚ್ಚಾಗಿ ಭಯಗೊಂಡಾಗ ಜಪಿಸುವ ಗಾಂಧಿತಾತನ ಹೆಸರು ತೀರಾ ಕುತೂಹಲ ಹುಟ್ಟಿಸುತ್ತದೆ. ಗಾಂಧಿಯನ್ನು ಕೊಂದವರನ್ನು ಪೂಜಿಸುವ ಈ ಕಾಲಘಟ್ಟದಲ್ಲಿ ಇಂತಹ ಕಥೆಗಳು ಇನ್ನಷ್ಟು ಬೇಕಿದೆ. ನಿಜ, ಪುಟ್ಟಲಕ್ಷ್ಮಿಯ ಗೆಳೆತನ ಬೇಕೆಂದರೆ ಈ ಕಥೆಗಳನ್ನು ಓದಲೇ ಬೇಕು, ಓದಿ ಮಗುವಾಗಲೇ ಬೇಕು.                             ************************ ಲೇಖಕರ ಬಗ್ಗೆ ಎರಡು ಮಾತು:ಕವಯತ್ರಿ ಶ್ರೀದೇವಿ ಕೆರೆಮನೆ ಪ್ರೌಢಶಾಲೆಯಲ್ಲಿ ಆಂಗ್ಲ ಭಾಷಾ ಶಿಕ್ಷಕಿ. ಇವರ ಹದಿಮೂರು ಪುಸ್ತಕಗಳು ಪ್ರಕಟಗೊಂಡಿವೆ. ಓದು ಮತ್ತು ಬರಹ ಇವರ ಹವ್ಯಾಸಗಳು

ಮಗುವಾಗಿಸುವ ಸುಂದರ ಹೂ ಮಾಲೆ Read Post »

ಕಾವ್ಯಯಾನ

ಎರಡು ಕವಿತೆಗಳು

ಶೋಭಾ ನಾಯ್ಕ ಹಿರೇಕೈ ಅವರ ಎರಡು ಕವಿತೆಗಳು ಶೋಭಾ ನಾಯ್ಕ ಹಿರೇಕೈ ಕವಿತೆ – ೧…ಹೆಚ್ಚೆಂದರೇನು ಮಾಡಿಯೇನು? ಅವರಂತೆ ತಣ್ಣೀರಲ್ಲಿ ಮಿಂದುನಲವತ್ತೆಂಟನೆಯ ದಿನದವ್ರತ ಮುಗಿಸಿ,ಆ ಕೋಟೆ ಕೊತ್ತಲಗಳ ದಾಟಿಬೆಟ್ಟವೇರಿ ಗುಡ್ಡವಿಳಿದು, ಕಣ್ಗಾವಲ ತಪ್ಪಿಸಿನಿನ್ನ ಬಳಿ ನಡೆದೇ….ಬಂದೆನೆಂದು ಇಟ್ಟುಕೋಹೆಚ್ಚೆಂದರೆ ನಾನಲ್ಲಿಏನು ಮಾಡಿಯೇನು? ‘ಬಾಲಕನಾಗಿಹೆ ಅಯ್ಯಪ್ಪ’ ಈಹಾಡು ಹಾಡು ಕೇಳಿ ಕೇಳಿಇತ್ತೀಚೆಗೆ ನಿನ್ನ ಹಳೆಯದೊಂದುಪಟ ನೋಡಿದ ಮೇಲೆನನ್ನ ಮಗನಿಗೂ..ನಿನಗೂ..ಯಾವ ಪರಕ್ಕೂ ..ಉಳಿದಿಲ್ಲ ನೋಡು ಎಷ್ಟೋ ವರ್ಷ ನಿಂತೇ ಇರುವೆಬಾ ಮಲಗಿಕೋ ಎಂದುಮಡಿಲ ಚೆಲ್ಲಿನನ್ನ ಮುಟ್ಟಿನ ಕಥೆಯನಡೆಯುತ್ತಿರುವ ಒಳ ಯುದ್ಧಗಳ ವ್ಯಥೆಯನಿನಗೆ ಹೇಳಿಯೇನು ಹುಲಿ ಹಾಲನುಂಡ ನಿನಗೆತಾಯ ಹಾಲ ರುಚಿ ನೋಡುಹುಳಿಯಾಗಿದೆಯೇನೋ ..ಎನ್ನುತ್ತಲೇತೇಗಿಸಲು ಬೆನ್ನ ನೀವಿಯೇನು ದೃಷ್ಟಿ ತೆಗೆದು ನಟಿಗೆ ಮುರಿದುಎದೆಗೊತ್ತಿಕೊಂಡು,ಹಣೆಗೊಂದು ಮುತ್ತಿಕ್ಕಿಥೇಟ್ ನನ್ನ ಮಗನಂತೆ ಎನ್ನುತ್ತಹದಿನೆಂಟನೆಯ ಕೊನೆಯ ಮೆಟ್ಟಿಲ ಕೆಳಗಿಳಿದ ಮೇಲೂ….ಮತ್ತೊಮ್ಮೆ ಮುಗುದೊಮ್ಮೆ ನಿನ್ನತಿರುತಿರುಗಿ ನೋಡಿಯೇನು ಈಗ ಹೇಳುನನ್ನ ಮುಟ್ಟು ನಿನಗೆ ಮೈಲಿಗೆಯೇನು?…………….. ಕವಿತೆ -೨ ಗುರ್ ಮೆಹರ್ ಅಂತರಂಗ ಅವರಿವರ ಬಂದೂಕ ತುದಿಯಲ್ಲಿಹೂವಿನ ಮೊನಚಿತ್ತೇ?ಇಲ್ಲವಲ್ಲಮತ್ತೇಯುದ್ಧವನ್ನು ಯುದ್ಧವಲ್ಲದೆಇನ್ನೇನನ್ನಲಿ? ಯಾವ ಕಣಿವೆ ಬದುಕಿಸುವುದುನಾ ಕಳಕೊಂಡವಾತ್ಸಲ್ಯವನ್ನು ?ಯಾವ ಕುರ್ಚಿಯ ಬಳಿಕೇಳಲಿ ನ್ಯಾಯ? ಬೇಕೇ?ನಮ್ಮ ಬಿಸಿ ರಕ್ತಕೂಕೊಳಚೆಯ ಗಬ್ಬುಕಪ್ಪು -ಕೇಸರಿಗಳ ಜಿದ್ದಾ ಜಿದ್ದು ಬಣ್ಣದ ಮೇಲೂ ರಾಡಿಯಎರಚುತಿರುವವರಾರೋ?ಈಚೆಗಿರುವುದೇ ಅಚೆಆಚೆಗಿರುವುದೇ ಈಚೆಈಚೆ ಅಚೆಗಳಾಚೆಅದೇ ಮಣ್ಣು ,ಅದೇ ನೀರುಅದೇ ಗಂಧ, ಅದೇ ಗಾಳಿರಕ್ತ ಬೇರೆಯೇ ಮತ್ತೆ? ಬೇಕೆ ಯುದ್ಧ?ನನ್ನಂಥ ತಬ್ಬಲಿಗಳ ಕೇಳಿ ಹೇಳು ಅಶೋಕ‘ಕಳಿಂಗ’ ನಿನ್ನ ಕಾಡಿದಂತೆ‘ಕಾರ್ಗಿಲ್ ‘ ನನ್ನ ಕಾಡುತ್ತಿದೆಯುದ್ಧವನ್ನು ಯುದ್ಧವೆನ್ನದೆಇನ್ನೇನನ್ನಲಿ?…….(ಗುರ್ ಮೆಹರ್: ಕಾರ್ಗಿಲ್ ಯುದ್ಧದಲ್ಲಿ ತಂದೆಯನ್ನು ಕಳೆದುಕೊಂಡು ಅನಾಥಳಾದ ಮಗಳು) ****************

ಎರಡು ಕವಿತೆಗಳು Read Post »

ಅಂಕಣ ಸಂಗಾತಿ, ಸಂಪ್ರೋಕ್ಷಣ

ಉತ್ತಮರ ಸಂಗ ಎನಗಿತ್ತು ಸಲಹೊ

ಸಂಬಂಧಗಳು ಹುಟ್ಟಿಕೊಳ್ಳುವುದು ಅಂಥ ವಿಶೇಷವಾದ ಸಂಗತಿಯೇನಲ್ಲ. ಹುಟ್ಟಿಕೊಂಡ ಸಂಬಂಧಗಳು ಎಲ್ಲಿಯವರೆಗೆ ಬಾಳುತ್ತವೆ, ನಮ್ಮ ಬದುಕಿನ ಚಲನೆಯಲ್ಲಿ ಅವುಗಳ ಮಹತ್ವವೇನು, ಅವು ಯಾವ ಬಗೆಯ ಹೊಸತನವನ್ನು ನಮ್ಮ ಯೋಚನೆಗಳಿಗೆ ಒದಗಿಸಬಲ್ಲವು ಎನ್ನುವ ಆಧಾರದ ಮೇಲೆ ಸಂಬಂಧಗಳ ಗುಣಮಟ್ಟದ ನಿರ್ಧಾರವಾಗುತ್ತದೆ. ಈ ಗುಣಮಟ್ಟದ ಮೌಲ್ಯಮಾಪನ ಯಾವುದೇ ರೂಪ, ಆಕಾರ ಅಥವಾ ಹೆಸರುಗಳ ಪ್ರಾಪಂಚಿಕ ಚೌಕಟ್ಟಿನೊಳಗೆ ನಡೆಯುವಂಥದ್ದಲ್ಲ. ತಲೆದಿಂಬಿನ ಪಕ್ಕದಲ್ಲಿ ನೆಮ್ಮದಿಯಿಂದ ನಿದ್ರಿಸಿರುವ ಮೊಬೈಲ್ ನಲ್ಲಿ ಪಾಪ್ ಅಪ್ ಆಗುವ ಗುಡ್ ಮಾರ್ನಿಂಗ್ ಮೆಸೇಜುಗಳಲ್ಲಿ ಹದಿನೈದು ವರ್ಷಗಳ ನಂತರ ಮತ್ತೆ ಜೊತೆಯಾದ ಸ್ನೇಹದ ಬಳಗವೊಂದಿರಬಹುದು; ಫೇಸ್ ಬುಕ್ ನಲ್ಲಿ ಹುಟ್ಟಿ, ವಾಟ್ಸಾಪ್ ನಲ್ಲಿ ಬೆಳೆದು ಸುಖ-ದುಃಖಗಳಿಗೆ ಜೊತೆಯಾದ ಸ್ನೇಹಿತೆಯ ನಗುವೊಂದಿರಬಹುದು; ಹೆಸರು-ಭಾವಚಿತ್ರಗಳಿಲ್ಲದ ಅಪರಿಚಿತ ಹೃದಯವೂ ಇರಬಹುದು. ಪಕ್ಕದ ರಸ್ತೆಯಲ್ಲಿ ಹೋಮ್ ವರ್ಕ್ ಮಾಡುತ್ತಲೇ ಹಾಲು ಮಾರುವ ಹುಡುಗ ಕಾಫಿಯೊಂದಿಗಿನ ಸಂಬಂಧವನ್ನು ನಂಬಿಕೆಯಾಗಿ ಕಾಯುತ್ತಿರಬಹುದು. ಅರ್ಥವಾಗದ ಭಾಷೆಯೊಂದನ್ನು ನಗುವಿನಲ್ಲೇ ಕಲಿಸಿಕೊಡುವ ಜಪಾನಿ ಸಿನೆಮಾವೊಂದರ ಪುಟ್ಟ ಹುಡುಗಿ ಭಾವನೆಗಳೊಂದಿಗಿನ ಸಂಬಂಧವನ್ನು ಸಲಹಿದರೆ, ಫ್ರೆಂಚ್ ವಿಂಡೋವೊಂದರ ಕರ್ಟನ್ನುಗಳ ಮೇಲೆ ಹಾರುವ ಭಂಗಿಯಲ್ಲಿ ಕೂತೇ ಇರುವ ನೀಲಿಬಣ್ಣದ ಹಕ್ಕಿ ಮೌನದೊಂದಿಗೆ ಹೊಸ ಸಂಬಂಧವೊಂದನ್ನು ಹುಟ್ಟುಹಾಕಬಹುದು.           ಹೀಗೆ ಎಲ್ಲೋ ಹುಟ್ಟಿ, ಇನ್ಯಾರೋ ಬೆಳಸುವ ಸಂಬಂಧಗಳಿಗೆಲ್ಲ ಅವುಗಳದೇ ಆದ ಉದ್ದೇಶವಿರುವಂತೆ ನನಗೆ ಅನ್ನಿಸುತ್ತದೆ. ಹೈಸ್ಕೂಲಿನ ದಾರಿಯಲ್ಲಿದ್ದ ಬಸ್ ಸ್ಟಾಪಿನಲ್ಲಿ ಕಾಲೇಜಿಗೆ ಹೋಗಲು ಬಸ್ಸಿಗಾಗಿ ಕಾಯುತ್ತಿದ್ದ ಹುಡುಗ, ನಗುವಿನಿಂದಲೇ ಕಾಲ್ನಡಿಗೆಯ ಕಷ್ಟವನ್ನೆಲ್ಲ ಕಣ್ಮರೆಯಾಗಿಸುತ್ತಿದ್ದ ನೆನಪೊಂದು ಹೈಸ್ಕೂಲಿನ ಮಾರ್ಕ್ಸ್ ಕಾರ್ಡುಗಳೊಂದಿಗೆ ಯಾವ ನಿರ್ಬಂಧವೂ ಇಲ್ಲದೇ ಸಂಬಂಧವನ್ನು ಬೆಳಸಿಕೊಳ್ಳುತ್ತದೆ. ಡೆಂಟಲ್ ಕುರ್ಚಿಯ ಕೈಮೇಲೆ ಆತಂಕದಿಂದಲೇ ಕೈಯಿಟ್ಟು ಸಂಬಂಧ ಬೆಳೆಸಿಕೊಳ್ಳುವ ಹಲ್ಲಿನ ಒಟ್ಟೆಯೊಂದು ಹುಳುಕು ಮರೆತು ಹೂನಗೆಯ ಚಲ್ಲಿದ ಫೋಟೋವೊಂದು ಗೋಡೆಗಂಟಿದ ಮೊಳೆಯೊಂದಿಗೆ ನಂಟು ಬೆಳಸಿಕೊಳ್ಳುತ್ತದೆ. ಚಾದರದ ಮೇಲಿನ ಹೂವೊಂದು ಸೆಕೆಂಡುಗಳಲ್ಲಿ ಹಣ್ಣಾಗಿ ಡೈನಿಂಗ್ ಟೇಬಲ್ಲಿನ ಮೇಲೆ ಏಕಾಂಗಿಯಾಗಿ ಕುಳಿತಿದ್ದ ಬುಟ್ಟಿಯೊಂದಿಗೆ ನಂಟು ಬೆಳಸಿ, ಬುಟ್ಟಿಯ ಬದುಕಿಗೊಂದಿಷ್ಟು ಬಣ್ಣಗಳನ್ನು ದೊರಕಿಸುತ್ತದೆ. ಟಿವಿ ಸ್ಟ್ಯಾಂಡ್ ನೊಳಗೆ ಬೆಚ್ಚಗೆ ಕುಳಿತ ಸಿಡಿಯೊಂದರ ಹಾಡು ಅಡುಗೆಮನೆಯೊಂದಿಗೆ ಬೇಜಾರಿಲ್ಲದೇ ಸಂಬಂಧವನ್ನು ಬೆಳಸಿಕೊಂಡು, ಏಕತಾನತೆಯ ಮರೆಸುವ ಹೊಸ ರಾಗವೊಂದನ್ನು ಹುಟ್ಟಿಸುತ್ತದೆ. ಹೀಗೇ ಅಸ್ತಿತ್ವದ ಮೋಹಕ್ಕೆ ಬೀಳದೆ ಬದುಕಿನ ಭಾಗವಾಗಿಬಿಡುವ ಸಂಬಂಧಗಳೆಲ್ಲವೂ ಅವಕಾಶವಾದಾಗಲೆಲ್ಲ ಅರಿವಿಗೆ ದೊರಕುತ್ತ, ನಿತ್ಯವೂ ಅರಳುವ ಪುಷ್ಪವೊಂದರ ತಾಳ್ಮೆಯನ್ನು ನೆನಪಿಸುತ್ತವೆ.            ತಾಳ್ಮೆ ಎಂದಾಗಲೆಲ್ಲ ನನಗೆ ನೆನಪಾಗುವುದು ಡೈನಿಂಗ್ ಟೇಬಲ್ಲು. ಹಳ್ಳಿಯಲ್ಲಿ ಹುಟ್ಟಿ ಬೆಳೆದ ನನಗೆ ಡೈನಿಂಗ್ ಟೇಬಲ್ ಎನ್ನುವುದು ಐಷಾರಾಮದ ಸಂಗತಿಯಾಗಿತ್ತು. ವರ್ಷಕ್ಕೊಮ್ಮೆ ಹೊಟೆಲ್ ಗಳಿಗೆ ಹೋದಾಗಲೋ ಅಥವಾ ಪಟ್ಟಣಗಳಲ್ಲಿ ವಾಸಿಸುತ್ತಿದ್ದ ಸಂಬಂಧಿಕರ ಮನೆಗಳಿಗೆ ಹೋದಾಗಲೋ ಕಾಣಸಿಗುತ್ತಿದ್ದ ಡೈನಿಂಗ್ ಟೇಬಲ್ಲುಗಳ ಬಗ್ಗೆ ವಿಶೇಷವಾದ ಪ್ರೀತಿಯಿತ್ತು. ಮರದ ಡೈನಿಂಗ್ ಟೇಬಲ್ಲಿನ ಮೇಲೆ ಬಿಸಿ ಕುಕ್ಕರನ್ನೋ, ಸಾಂಬಾರಿನ ಪಾತ್ರೆಯನ್ನೋ ಇಡಲು ಉಪಯೋಗಿಸುತ್ತಿದ್ದ ಸ್ಟೀಲಿನ ಸ್ಟ್ಯಾಂಡುಗಳೆಲ್ಲ ನನ್ನಲ್ಲಿ ವಿಚಿತ್ರ ಕಂಪನಗಳನ್ನು ಉಂಟುಮಾಡುತ್ತಿದ್ದವು. ಅಜ್ಜ-ಅಜ್ಜಿ, ಅಪ್ಪ ಇವರೆಲ್ಲ ಹೇಳುತ್ತಿದ್ದ ಪುರಾಣದ ಕಥೆಗಳನ್ನು ಕೇಳುತ್ತಾ ಬೆಳೆದ ನನಗೆ ಸಾಂಬಾರಿನ ಪಾತ್ರೆಯೊಂದು ಡೈನಿಂಗ್ ಟೇಬಲ್ಲಿನ ಜೀವ ಸೆಳೆದೊಯ್ಯುವ ಯಮರಾಜನಂತೆಯೂ, ಸ್ಟೀಲಿನ ಸ್ಟ್ಯಾಂಡೊಂದು ಸತಿ ಸಾವಿತ್ರಿಯಾಗಿ ಪ್ರಾಣ ಉಳಿಸಿದಂತೆಯೂ ಭಾಸವಾಗುತ್ತಿತ್ತು. ಊಟದ ಪ್ಲೇಟಿನಡಿಯ ಮ್ಯಾಟ್ ಗಳ ಮೇಲಿನ ಗುಲಾಬಿ ಹೂವುಗಳೆಲ್ಲ ಸಾಂಬಾರಿನ ಬಿಸಿಗೆ ಕೊಂಚವೂ ಬಾಡದೇ ನಮ್ಮೆಲ್ಲರೊಂದಿಗೆ ಕೂತು ಊಟ ಮಾಡುತ್ತಿರುವಂತೆ ಸಂಭ್ರಮವಾಗುತ್ತಿತ್ತು. ಊಟ-ತಿಂಡಿಯ ನಂತರ ಡೈನಿಂಗ್ ಟೇಬಲ್ಲಿನ ಮೇಲೆ ಬಂದು ಕೂರುತ್ತಿದ್ದ ಹಣ್ಣಿನ ಬುಟ್ಟಿಯೊಂದು ಸಕಲ ಬಣ್ಣ-ರುಚಿಗಳನ್ನು ಡೈನಿಂಗ್ ಟೇಬಲ್ಲಿಗೆ ಒದಗಿಸಿದಂತೆನ್ನಿಸಿ, ಹಣ್ಣಿನ ಬುಟ್ಟಿಯ ಮೇಲೂ ವಿಶೇಷ ಪ್ರೀತಿಯೊಂದು ಹುಟ್ಟಿಕೊಳ್ಳುತ್ತಿತ್ತು.           ಬದುಕಿನ ಯಾವುದೋ ಕ್ಷಣದಲ್ಲಿ ಅರಿವಿಗೇ ಬಾರದಂತೆ ಹುಟ್ಟಿದ ಪ್ರೀತಿಯೊಂದು ಬದುಕಿನುದ್ದಕ್ಕೂ ನಮ್ಮೊಂದಿಗೇ ಅಂಟಿಕೊಂಡು, ತಾನು ಕಟ್ಟಿಕೊಂಡ ಸಂಬಂಧಗಳೊಂದಿಗೆ ನಮ್ಮನ್ನೂ ಬಂಧಿಸಿಬಿಡುತ್ತದೆ. ಬಾಲ್ಯದ ಆ ಸಮಯದಲ್ಲಿ ಐಷಾರಾಮದೆಡೆಗಿನ ಪ್ರೀತಿಯಿಂದ ಹುಟ್ಟಿಕೊಂಡ ಡೈನಿಂಗ್ ಟೇಬಲ್ಲಿನೊಂದಿಗಿನ ಸಂಬಂಧ ಈಗಲೂ ಹಾಗೆಯೇ ಉಳಿದುಕೊಂಡಿದೆ. ಯಮರಾಜನ ಭಯವಿಲ್ಲದ ಕಲ್ಲಿನ ಡೈನಿಂಗ್ ಟೇಬಲ್ಲಿನ ಮೇಲೆ ಚಿಪ್ಸ್ ಪ್ಯಾಕೆಟ್ಟಿನಿಂದ ಹಿಡಿದು ಮಲ್ಲಿಗೆ ಮಾಲೆಯವರೆಗೂ ಹೊಸಹೊಸ ಅವಕಾಶಗಳು ಸೃಷ್ಟಿಯಾಗಿವೆ. ಈಗಷ್ಟೇ ಮರಿಹಾಕಿದ ಬೆಕ್ಕಿನ ಸುತ್ತಲೂ ಕಣ್ಣುಮುಚ್ಚಿ ಮಲಗಿರುವ ಮರಿಗಳಂತೆಯೇ ಭಾಸವಾಗುವ ಡೈನಿಂಗ್ ಟೇಬಲ್ಲಿನ ಕುರ್ಚಿಗಳು ಅಗತ್ಯಬಿದ್ದಾಗಲೆಲ್ಲ ಮೊಬೈಲ್ ಸ್ಟ್ಯಾಂಡಾಗಿ, ಹ್ಯಾಂಗರುಗಳಾಗಿ, ಲ್ಯಾಡರ್ ಆಗಿ ರೂಪಾಂತರಗೊಂಡು ಮನೆಯ ಎಲ್ಲ ವಸ್ತುಗಳೊಂದಿಗೂ ಸ್ನೇಹಸಂಬಂಧವೊಂದನ್ನು ಬೆಸೆದುಕೊಂಡಿವೆ. ಊಟ-ತಿಂಡಿಯನ್ನು ಬಿಟ್ಟು ಉಳಿದೆಲ್ಲ ಕೆಲಸ-ಕಾರ್ಯಗಳಿಗೂ ಬಳಕೆಯಾಗುತ್ತಿರುವ ಡೈನಿಂಗ್ ಟೇಬಲ್ಲಿನ ಮೂಲ ಉದ್ದೇಶವನ್ನೇ ನಾನು ಮರೆತುಹೋಗಿದ್ದರ ಬಗ್ಗೆ ಡೈನಿಂಗ್ ಟೇಬಲ್ಲಿಗೆ ನನ್ನ ಮೇಲೆ ಬೇಸರವೇನೂ ಇದ್ದಂತಿಲ್ಲ. ಅದರ ಮೈಮೇಲೆ ಧೂಳು ಬಿದ್ದಾಗಲೆಲ್ಲ, ವೆಟ್ ಟಿಶ್ಯೂ ಬಳಸಿ ನಾಜೂಕಾಗಿ ಕ್ಲೀನ್ ಮಾಡುವ ನನ್ನ ಮೇಲೂ ಅದಕ್ಕೊಂದು ವಿಶೇಷವಾದ ಪ್ರೀತಿಯಿರುವಂತೆ ಆಗಾಗ ಅನ್ನಿಸುವುದುಂಟು. ನನ್ನೆಲ್ಲ ಭಾವಾತಿರೇಕಗಳನ್ನು ಅಲ್ಲಾಡದೇ ಸಹಿಸಿಕೊಳ್ಳುವ ಡೈನಿಂಗ್ ಟೇಬಲ್ಲಿನ ತಾಳ್ಮೆಯನ್ನು ನೋಡುವಾಗಲೆಲ್ಲ ಸಂಬಂಧಗಳೆಡೆಗಿನ ನಂಬಿಕೆಯೊಂದು ಬಲವಾಗುತ್ತ ಹೋಗುತ್ತದೆ.           ಈ ನಂಬಿಕೆ ಎನ್ನುವುದು ಇರದೇ ಇದ್ದಿದ್ದರೆ ಸಂಬಂಧಗಳಿಗೊಂದು ಗಟ್ಟಿತನ ದೊರಕುತ್ತಿರಲಿಲ್ಲ. ನಂಬಿಕೆಯೆನ್ನುವುದು ಶಕ್ತಿಯ ರೂಪ ತಳೆದು ಸಂಬಂಧಗಳಿಗೊಂದು ಸಕಾರಾತ್ಮಕತೆಯನ್ನೂ, ಆಯುಷ್ಯವನ್ನೂ ಒದಗಿಸುತ್ತದೆ. ನಂಬಿಕೆ ಇಲ್ಲದೇ ಇದ್ದಿದ್ದರೆ ಮೊಬೈಲಿಗೆ ಬಂದ ಅಪರಿಚಿತ ಗುಡ್ ಮಾರ್ನಿಂಗ್ ಮೆಸೇಜು ಸ್ನೇಹವಾಗಿ ಬದಲಾಗುತ್ತಲೇ ಇರಲಿಲ್ಲ; ಹಾಲು ಮಾರುವ ಹುಡುಗ ಕಾಫಿಯ ಮೇಲಿನ ಪ್ರೀತಿಯನ್ನು ಉಳಿಸುತ್ತಿರಲಿಲ್ಲ; ಭಾಷೆ-ಸಂಸ್ಕೃತಿಗಳ ಪರಿಚಯವಿಲ್ಲದ ದೇಶದ ಸಿನೆಮಾ ನಮ್ಮೊಳಗೊಂದು ಜಗತ್ತನ್ನು ಸೃಷ್ಟಿಸುತ್ತಿರಲಿಲ್ಲ; ಕರ್ಟನ್ನನ್ನು ದಾಟಿ ಮನೆಸೇರುವ ಬೆಳಕು ನೀಲಿಹಕ್ಕಿಯ ಮೌನಕ್ಕೆ ಜೊತೆಯಾಗುತ್ತಿರಲಿಲ್ಲ. ಬಸ್ ಸ್ಟಾಪಿನಲ್ಲಿ ಕಾಯುವ ನಗೆಯೊಂದರ ನಂಬಿಕೆಯನ್ನು ಬಸ್ಸು ಉಳಿಸಿದರೆ, ಗೋಡೆಯ ಮೇಲಿನ ಹೂನಗೆಯ ನಂಬಿಕೆಯನ್ನು ಡೆಂಟಲ್ ಕುರ್ಚಿಯೊಂದು ಕಾಪಾಡುತ್ತದೆ; ಕನಸಿನ ನಂಬಿಕೆಯನ್ನು ಹೂವಿನ ಬುಟ್ಟಿ ಸಲಹಿದರೆ, ಅಡುಗೆಮನೆಯನ್ನು ತಲುಪಿದ ಹಾಡಿನ ರಾಗದ ನಂಬಿಕೆಯನ್ನು ಗಾಯಕ ಉಳಿಸಿಕೊಳ್ಳುತ್ತಾನೆ. ಡೈನಿಂಗ್ ಟೇಬಲ್ ಮೇಲಿನ ಮಲ್ಲಿಗೆಮಾಲೆಯ ನಂಬಿಕೆಯನ್ನು ಪ್ರೀತಿ-ಸಹನೆಗಳು ರಕ್ಷಿಸುತ್ತವೆ. ಹುಟ್ಟಿದ ಸಂಬಂಧಗಳೆಲ್ಲವೂ ನಂಬಿಕೆಯ ಬಲದ ಮೇಲೆ ಬೆಳೆಯುತ್ತ, ಉತ್ತಮರ ಒಡನಾಟದಿಂದ ಹೊಸ ಹೊಳಹು-ಸಾಧ್ಯತೆಗಳಿಗೆ ಎದುರಾಗುತ್ತ, ಬದುಕೊಂದರ ಸಾರ್ಥಕತೆಯ ಮೂಲಕಾರಣಗಳಾಗುತ್ತವೆ. ******* ಲೇಖಕರ ಬಗ್ಗೆ ಎರಡು ಮಾತು: ಮೂಲತ: ಉತ್ತರ ಕನ್ನಡದವರಾದ ಅಂಜನಾ ಹೆಗಡೆಯವರು ಸದ್ಯ ಬೆಂಗಳೂರಲ್ಲಿ ನೆಲೆಸಿರುತ್ತಾರೆ. ‘ಕಾಡ ಕತ್ತಲೆಯ ಮೌನ ಮಾತುಗಳು’ ಇವರು ಪ್ರಕಟಿಸಿದ ಕವನಸಂಕಲನ.ಓದು ಬರಹದ ಜೊತೆಗೆ ಗಾರ್ಡನಿಂಗ್ ಇವರ ನೆಚ್ಚಿನ ಹವ್ಯಾಸ

ಉತ್ತಮರ ಸಂಗ ಎನಗಿತ್ತು ಸಲಹೊ Read Post »

ಕಾವ್ಯಯಾನ

ಕೊಡುವುದಾದರೂ ಯಾರಿಗೆ ?

ಚಿತ್ರ ಮತ್ತು ಕವಿತೆ : ವಿಜಯಶ್ರೀ ಹಾಲಾಡಿ. ಹೌದುಈ ಪ್ರೀತಿಯನ್ನುಮೊಗೆಮೊಗೆದುಕೊಡುವುದಾದರೂ ಯಾರಿಗೆ ? ನೇರಳೆಮರಕ್ಕೆ ಅಳಿಲಿಗೆಬೆಚ್ಚನೆ ಗೂಡಿನ ಹಕ್ಕಿಗೆ ? ಹೆಣ್ತನದ ಪರಿಧಿಗೆ ಎಂದೂ ದಕ್ಕದಮುಖ –ಮುಖವಾಡಗಳು …ರಾತ್ರಿ -ಹಗಲುಗಳನ್ನುಗೆಜ್ಜೆಕಾಲಿನಲ್ಲಿ ನೋಯಿಸಲೆ …ಯಾತನೆಯನ್ನು ನುಂಗುತ್ತಿರುವೆಸಂಜೆಯ ಏಕಾಂತಗಳಲ್ಲಿಹೆಪ್ಪುಗಟ್ಟಿದ ಇರುಳುಗಳಲ್ಲಿ .. ಬೊಗಸೆಯೊಡ್ಡಿದ್ದೇನೆಮಂಡಿಯೂರಿದ್ದೇನೆಹಟಮಾರಿ ಕಡಲಾಗಿದ್ದೇನೆ..ತರ್ಕಕ್ಕೆ ನಿಲುಕದ ಗಳಿಗೆ-ಗಳಲ್ಲಿ ಒಂಟಿಹೂವಂತೆನಿಂತುಬಿಟ್ಟಿದ್ದೇನೆ .. ಲೆಕ್ಕವಿಟ್ಟಿಲ್ಲ ಕೋಗಿಲೆಹಾಡಿದ ಹಾಡುಗಳನ್ನು… ಉದುರಿಬಿದ್ದ ಗರಿಗಳನ್ನುಮತ್ತೆ ಹುಟ್ಟಿಸಿಕೊಳ್ಳಲುಸಾಧ್ಯವಾಗುವುದಾದರೆಪ್ರೀತಿಯಿಂದ ಆರ್ತಳಾಗಿದ್ದೇನೆ.

ಕೊಡುವುದಾದರೂ ಯಾರಿಗೆ ? Read Post »

ಕಾವ್ಯಯಾನ

ನಾವೀಗ ಹೊರಟಿದ್ದೇವೆ

ಕವಿತೆ ಶೀಲಾ ಭಂಡಾರ್ಕರ್ ನಾವೀಗ ಹೊರಟಿದ್ದೇವೆಒಂದೊಮ್ಮೆ ನಮ್ಮದಾಗಿದ್ದನಮ್ಮ ಊರಿಗೆ. ಯಾರೊಬ್ಬರಾದರೂತಡೆಯುವವರಿಲ್ಲವೇ!! ನಮ್ಮನ್ನುಹೋಗಬೇಡಿರೆಂದು ಕೈ ಹಿಡಿದು.ಈ ಪಟ್ಟಣ ನಿಮ್ಮದೂ ಕೂಡ ಎಂದು. ಇಟ್ಟಿಗೆ ಮರಳು ಹೊತ್ತ ತೋಳುಗಳುಸುತ್ತಿಗೆ ಉಳಿ ಹಿಡಿದ ಕೈಗಳುಗಂಟು ಮೂಟೆಗಳನ್ನುಹೊತ್ತು ಕೊಂಡು ಹೊರಟಿವೆ,ಭಾರವಾದ ಮನಸ್ಸನ್ನುಎದೆಯೊಳಗೆ ಮುಚ್ಚಿಟ್ಟು. ಯಾರಿಗೂ ನೆನಪಾಗಲಿಲ್ಲವೇ..ತಮ್ಮ ಮನೆಗಳಿಗೆಗಾರೆ ಮೆತ್ತಿದ, ಬಣ್ಣ ಹಚ್ಚಿದಕೈಗಳ ಹಿಂದೆ ಒಂದು ಉಸಿರುಹೊತ್ತ ಜೀವವಿದೆ.ನಮಗಾಗಿ ದುಡಿದ ಚೇತನವಿದೆ.ಅನಿಸಲಿಲ್ಲವೇ ಒಮ್ಮೆಯೂ. ಕಾಲೆಳೆದು ನಡೆದಿದ್ದೇವೆ.ದೇಹಕ್ಕಿಂತ ಭಾರವಾದಉಸಿರನ್ನು ಹೊತ್ತುಕೊಂಡು.ಊರು ತಲುಪುವ ಆಸೆಯಿಂದ.ನಮ್ಮದೇನಾದರೂ ಜಾಗ,ಒಂದಾದರೂ ಕುರುಹು..ಅಲ್ಲಿಯಾದರೂ..ಉಳಿದಿರಬಹುದೆಂಬ ನಿರೀಕ್ಷೆಯಿಂದ. ಹೊರಟಿದ್ದೇವೆ ಒಂದೊಮ್ಮೆನಮ್ಮದಾಗಿದ್ದ ನಮ್ಮ ಊರಿಗೆ. *******************

ನಾವೀಗ ಹೊರಟಿದ್ದೇವೆ Read Post »

ಕಾವ್ಯಯಾನ

ಮಗಳು ಹುಟ್ಟಿದ್ದಾಳೆ

ಕವಿತೆ ನಿನ್ನೆ ಯಾವನೋ ಪಾಪಿ ತ್ರಿಪುರದಲ್ಲಿ ಹೆಣ್ಣು ಹುಟ್ಟಿದೆ ಅಂತ ತಾನು ಆತ್ಮಹತ್ಯೆ ಮಾಡಿಕೊಂಡನಂತೆ ಮತ್ತು ಅವನ ಮಡದಿ ಹೃದಯಾಘಾತವಾಗಿ ಸತ್ತಳು.ಅದಕ್ಕೆ ಇದನ್ನು ನಿಮಗೆ ಒಪ್ಪಿಸಬೇಕು ಅನಿಸಿತು. ಪ್ಯಾರಿಸುತ ಮಗಳು ಹುಟ್ಟಿದ್ದಾಳೆ…ಪದಗಳಿಗೆ ಸಿಗದ ದನಿಯೊಂದುಕಿವಿಗೆ ಬಿದ್ದು ನನ್ನ ಮನವು ಹಿಗ್ಗಿದೆಮುದ್ದು ಮುದ್ದು ಮುಖವ ಹೊತ್ತುಬೆಳಗು ಮುಂಜಾನೆ ಬೆಳಕು ಚಿಮ್ಮಿಸಿಬೆಚ್ಚನೆ ಹಾಸಿಗೆಯಲ್ಲಿ ಗೊಂಬೆಯಂತೆ ಮಲಗಿದ್ದಾಳೆಅವಳ ಮುಷ್ಟಿಯಲ್ಲಿ ಅನ್ನದ,ಆಯುಷ್ಯದ,ವಿದ್ಯಾರೇಖೆಗಳುಅಡ್ಡವಾಗಿ ನದಿಯು ಹರಿಯುವ ದಾರಿಯಂತೆಗುರುತು ಮಾಡಿಕೊಂಡಿವೆಬೆಳ್ಳಿ ಮುಖದಲ್ಲಿ ಹೊಮ್ಮುವ ಪ್ರಕಾಶತೆಗೆಸುತ್ತಲೂ ಎಲ್ಲರಿಗೂ ನಗುವು ಹಂಚಿ ಹೋಗಿದೆಅವಳು ಗೊಂಬೆ,ಹೆಮ್ಮರದ ಕೊಂಬೆ ಮಗಳು ಹುಟ್ಟಿದ್ದಾಳೆ….ನನಗೂ ನನ್ನವಳಿಗೂ ಅವಳೇ ಅಧಿನಾಯಕಿಯಿನ್ನುತಡವಾಗಿ ಬರಲಾರೆ,ಸುಳ್ಳೆಂದು ಹೇಳಲಾರೆಅವಳಿರುವ ಭಯಕ್ಕೀಗ ಬಲುಬೇಗ ನಾ ಬರುವೆಅಂಬೆಗಾಲು ಬಯಸಿದ ನಮ್ಮನೆ ಅಂಗಳವೀಗಸಂತೋಷ ತುಂಬಿಕೊಂಡಿದೆಮಿತಿಯು ನಿನಗಿಲ್ಲ ಮಗಳೇ,ಭೀತಿಯ ತರಿಸಲ್ಲಚುಕ್ಕಿ,ಬೆಳದಿಂಗಳು,ಚಂದ್ರರೆಲ್ಲರೂ ರಾತ್ರಿಯಲ್ಲಿ ನಿನ್ನ ಸ್ನೇಹಿತೆಯರುಕೈ ಮಾಡಿ ನೀ ಕರೆದರೆ ತಡಬಡಿಸಿ ಬರುವರುನಾ ನಿನ್ನ ಆನೆಯುನೀ ನನ್ನ ಅಂಬಾರಿನಿನ್ನ ಹೊತ್ತು ಮೆರೆಸುವೆನುನೀನಾಗು ಜಗವಾಳು ದೊರೆಸಾನಿ ************

ಮಗಳು ಹುಟ್ಟಿದ್ದಾಳೆ Read Post »

ಕಾವ್ಯಯಾನ

ಸಂಜೆಯಾಗುತಿದೆ

ಕವಿತೆ ಶಾಂತಲಾ ಮಧು ಸಂಜೆಯಾಗುತಿದೆಆರಾಗಲಿಲ್ಲ ಸಂಜೆಯಾಗುತಿದೆಬೆಳದಿಂಗಳಾಸೆ ಚಂದ್ರನಿಗೆಕಸ್ತೂರಿ ತಿಲಕವನಿಡುವೆನೆನುತಹಾಡಿ ಓಡಿದರೆ,ಸಂಜೆಯಾಗುತಿದೆ ಬೆಟ್ಟಗಳ ತುದಿ ಏರಿಮೋಡದಲಿ ಈಜಾಡಿ..ಹಕ್ಕಿ ಜೊತೆ ಚಿಲಿಪಿಲಿಮಾತಾಡ ಹವಣಿಸಲುಹಾರಿ ಹೋಯಿತು ಹಕ್ಕಿಸಂಜೆಯಾಗುತಿದೆ ಮೊಟ್ಟೆ ಮರಿಗಳ ಸಲಹಿರೆಕ್ಕೆ ಪುಕ್ಕಗಳು ಬಲಿತುಹಾರ ಬಯಸಲು ಮುನ್ನಸಂಜೆಯಾಗುತಿದೆ ಹುಲ್ಲು ಗರಿಕೆಯ ತಂದುಎಣಿಸಿ ಪೋಣಿಸಿ ಗೂಡು ಕಟ್ಟಿಮೆರೆಯುವ ತವಕಸಂಜೆಯಾಗುತಿದೆ ಚಲಿಸುತಿದೆ ಚಿತ್ರವದುಮನಃ ಪಟಲ ಕೆದಕುತಿದೆಕೆಂಪನೆಯ ಆಗಸದಿಮರೆಯಾಗುತಿಹನವನುಸಂಜೆಯಾಗುತಿದೆ *****

ಸಂಜೆಯಾಗುತಿದೆ Read Post »

ಅನುವಾದ

ಊರುಗೋಲು

ಅನುವಾದಿತ ಕವಿತೆ ಮೂಲ: ಬರ್ಟೋಲ್ಡ್ ಬ್ರೆಕ್ಟ್ ಕನ್ನಡಕ್ಕೆ: ವಿ.ಗಣೇಶ್ ಹತ್ತು ವರುಷಗಳ ಕಾಲ ಹೆಜ್ಜೆಯಿಡಲಾರದಲೆ ವೈದ್ಯನ ಸಲಹೆ ಪಡೆಯಲಂದು ನಾ ಬಂದೆ ‘ನಿಮಗೆ ಊರುಗೋಲೇಕೆ?’ ಎಂದವನು ಕೇಳಲು ನಾ ಹೆಳವ ಎನುತ ವಾದಿಸಿದೆನು. ಮುಗುಳು ನಗೆ ಸೂಸುತ ಆ ಹಿರಿಯ ವೈದ್ಯನು ‘ಮರಳಿ ಯತ್ನವ ಮಾಡು, ಮರಳಿ ಯತ್ನವ ಮಾಡು, ಊರುಗೋಲಿಂದಲೆ ನೀ ಹೆಳವನಾಗಿರುವೆ ತೆವಳುತ್ತ ತೆವಳುತ್ತ ನಡೆ ಮುಂದೆ’ ಎಂದ. ನನ್ನ ಪ್ರಿಯ ಸಾಧನವ ಕಸಿಯುತ್ತಲವನು ಸೈತಾನ ನೋಟವನು ಬೀರುತ್ತಲದರೆಡೆಗೆ ಆ ಪ್ರಿಯ ಸಾಧನವ ಮೆಟ್ಟಿ ತುಳಿಯುತಲಿ ಉರಿಯುತಿಹ ಬೆಂಕಿಗೆ ಎಸೆದು ಬಿಟ್ಟ ಪೂರ್ಣ ಗುಣಮುಖನಾಗಿ ನಡೆಯುತಿಹೆನಿಂದು ನಗುವಿನಿಂದಲೆ ನಾ ಗುಣವ ಪಡೆದಿರುವೆ ಕೆಲವೊಮ್ಮೆ ಕೋಲುಗಳ ನಾ ಕಂಡರೀಗಲೂ ಹೆಳವನಾ ರೀತಿಯಲೇ ನಡೆಯುತಿಹೆನು ************************************ Crutches By Burtlact Brect

ಊರುಗೋಲು Read Post »

ಕಥಾಗುಚ್ಛ

ಕಾದ್ರಿಯಾಕ ಮತ್ತು ನಾಡ ದೋಣಿ

ಕಿರು ಕಥೆ ಕೆ.ಎ. ಎಂ. ಅನ್ಸಾರಿ ಪಕ್ಕದ  ಮಸೀದಿಯ ಬಾಂಗು(ಅಜಾನ್) ಕೇಳಿದಾಗ ಎದ್ದೇಳುವ ಕಾದ್ರಿಯಾಕನ ದಿನಚರಿ ಮಗ್ರಿಬ್ (ಮುಸ್ಸಂಜೆ) ವರೆಗೂ ಮುಂದುವರಿಯುತ್ತಿತ್ತು. ಬೆಳಗ್ಗೆ ಎದ್ದಕೂಡಲೇ ದೋಣಿಯ ಹತ್ತಿರ ಹೋಗಿ ದೋಣಿಯ ಸುತ್ತ ಒಂದು ಪ್ರದಕ್ಷಿಣೆ ಹಾಕಿ ಅದರ ಪ್ರತಿ  ಭಾಗಕ್ಕೆ ಒಂದು ಚಿಕ್ಕ ಏಟು. ನಂತರ ದೋಣಿಯ ಒಳಗಡೆ  ಕುಳಿತುಕೊಳ್ಳುವ ಆಸನದ ಪರಿಶೀಲನೆ… ಎಲ್ಲೂ ಹಲಗೆ ಅಲುಗಾಡುತ್ತಿಲ್ಲ… ಎಂಬುದನ್ನು ಖಾತ್ರಿಪಡಿಸುವಿಕೆ. ನಂತರ ಕಂಗಿನ ಹಾಳೆಯಿಂದ ಮಾಡಿದ ಚಿಳ್ಳಿ (ನೀರೆತ್ತಲು ಮಾಡಿದ ದೇಸಿ ಪರಿಕರ)ಯಿಂದ ದೋಣಿಯೊಳಗಿನ ನೀರನ್ನು ಹೊರಚೆಲ್ಲುವುದು. ದೋಣಿಗೆ ಸುಮಾರು ಇಪ್ಪತ್ತು-ಮೂವತ್ತು ವರುಷದ ಚರಿತ್ರೆಯಿದೆ. ಅಷ್ಟೂ ಹಳೆಯದಾದ ಚಿಕ್ಕ ನಾಡ ದೋಣಿ. ಅಲ್ಲಲ್ಲಿ ತೂತಾಗಿದ್ದರೂ ಡಾಂಬರು ಹಾಕಿ ಪ್ಯಾಚ್ ವರ್ಕ್ ನಡೆಸಲು ಕಾದ್ರಿಯಾಕ ಮರೆಯುತ್ತಿರಲಿಲ್ಲ. ಹೊಳೆಯ ಆ ಬದಿಯಿಂದ ಕೂಯ್ ಎಂಬ ದನಿಯೊಂದು ಕೇಳಿದರೆ ಸಾಕು.. ಈ ದಡದಿಂದ ಕೂಯ್ ಕೂಯ್ ಎಂದು ಪ್ರತಿದ್ವನಿ ಕೊಟ್ಟು ಹುಟ್ಟು (ತುಡುವು) ಹಾಕುತ್ತಾ ಆ ದಡಕ್ಕೆ ಯಾತ್ರೆ. ಈ ದಡದಿಂದ ಆ ದಡಕ್ಕೆ ಮೈಲಿಯ ದೂರವೇನೂ ಇಲ್ಲ. ಐದು ನಿಮಿಷದ ದಾರಿ. ಅವರ ಭಾಷೆಯಲ್ಲಿ ಹೇಳುವುದಾದರೆ ಒಂದು ಬೀಡಿ ದೂರ. ಅಂದ್ರೆ ಹುಟ್ಟು ಹಾಕುವಾಗ ಬೀಡಿ ಹೊತ್ತಿಸಿ ಬಾಯಲಿಟ್ಟರೆ ನಾಲ್ಕು ಸಲ ಹೊಗೆ ಬಿಟ್ಟಾಗ ಆ ದಡದಲ್ಲಿ ಹಾಜರ್. ಎಲ್ಲರ ಹಾಗೆ ಕಾದ್ರಿಯಾಕನಿಗೂ ಒಂದು ಕನಸಿತ್ತು. ಒಂದು ಹೊಸ ದೋಣಿ ಖರೀದಿಸಬೇಕು. ಅದೇನೂ ಈ ಜನ್ಮದಲ್ಲಿ ಸಾಧ್ಯವಿಲ್ಲ ಎಂದು ತನಗೇ ಗೊತ್ತಿತ್ತು. ಹೊಳೆದಾಟಲು ಊರವರು ಕೊಡುತ್ತಿದ್ದ  ಒಂದೋ ಎರಡೋ ರೂಪಾಯಿಗಳು ಸೇರಿದರೆ ಐವತ್ತೋ ನೂರೋ ಆಗುತ್ತಿತ್ತು ಅಷ್ಟೇ… ಅದರಿಂದ ಆತನ ದಿನದ ಖರ್ಚಿಗೇ ಸಾಕಾಗುತ್ತಿರಲಿಲ್ಲ. ಖಾದ್ರಿಯಾಕನಿಗೆ ವಯಸ್ಸಾಗುತ್ತಾ ಬಂತು. ಗಂಡು ಮಕ್ಕಳೆಲ್ಲಾ ಪೇಟೆಗೆ ಕೆಲಸಕ್ಕೆ ಹೋಗಲು ಶುರುಮಾಡಿದರು. ದೋಣಿಗೆ ಹುಟ್ಟು ಹಾಕಿ ಹಾಕಿ ಆತನ ರಟ್ಟೆ ಬಲವೂ ಕ್ಷೀಣಿಸುತ್ತಾ ಬಂದಿತ್ತು. ಈ ನಡುವೆ ಪೇಟೆಗೆ ಹೋಗಲು ಇನ್ನೊಂದು ಭಾಗದಿಂದ ಸೇತುವೆಯೂ ನಿರ್ಮಾಣವಾಯಿತು. ಅದರೊಂದಿಗೆ ಪ್ರತಿ ಮನೆಯಲ್ಲೂ ದ್ವಿಚಕ್ರ ವಾಹನದ ಆಗಮನವೂ ಆಯಿತು. ಸಾಧಾರಣ ಲುಂಗಿ, ಲಂಗ, ಸೀರೆಯುಡುತ್ತಿದ್ದ ಊರವರ ಜೀವನ ಶೈಲಿಯೂ ಬದಲಾಯಿತು. ಒಂದು ಕಯ್ಯಲ್ಲಿ ಚಪ್ಪಲಿಯನ್ನು ಇನ್ನೊಂದು ಕಯ್ಯಲ್ಲಿ ಲುಂಗಿಯನ್ನೋ ಲಂಗವನ್ನೂ ತುಸು ಮೇಲಕ್ಕೆತ್ತಿ ದೋಣಿಯೇರುವ ಜನರ ಜೀವನದಲ್ಲಿ ಬೂಟು, ಪೈಜಾಮ, ಪ್ಯಾಂಟುಗಳು ಬಂದಮೇಲೆ ನೀರಲ್ಲಿ/ಕೆಸರಿನಲ್ಲಿ ತುಸು ದೂರ ನಡೆಯಲು ಯಾತ್ರಿಕರಿಗೆ ಕಷ್ಟವಾಗತೊಡಗಿತು. ತುಸು ದೂರವಾದರೂ ವಾಹನಗಳಲ್ಲಿ ಸೇತುವೆ ದಾಟಿ ಹೋಗಲು ಜನರು ಉತ್ಸುಕರಾದಾಗ ಕಾದ್ರಿಯಕರ ಸಂಪಾದನೆಗೂ ಕತ್ತರಿ ಬಿತ್ತು. ಅಂಗಳದಲ್ಲಿ ದೋಣಿ ಅಂಗಾತ ಮಲಗಿತು. ಮನೆಯೊಳಗೆ ಕಾದ್ರಿಯಾಕಾನೂ. ಕೋವಿಡ್ 19 ಎನ್ನೋ ಮಹಾಮಾರಿ ಭಾರತಕ್ಕೆ ಲಗ್ಗೆಯಿಟ್ಟ ವಿಷಯ ದೊಡ್ಡ ದೊಡ್ಡ ಅಕ್ಷರಗಳಲ್ಲಿ ಬರೆದು ಮಾಧ್ಯಮಗಳಲ್ಲಿ ಕಾಣಿಸುತ್ತಿತ್ತು. ಎಲ್ಲರೂ ಭಯಭೀತರಾಗಿ ಮನೆಯಲ್ಲೇ ಕುಳಿತುಕೊಂಡಿರುವ ಸಮಯ. ಲಾಕ್ಡೌನ್ ಶುರುವಾಗಿದೆ… ಎಲ್ಲಾ ಕಡೆ ರಸ್ತೆಗಳು ಮುಚ್ಚಿವೆ… !! ಈ ಪರಿಸ್ಥಿತಿಯಲ್ಲಿ ರಾತ್ರಿ ಸುಮಾರು ಹನ್ನೆರಡು ಗಂಟೆಗಯ ಹೊತ್ತಲ್ಲಿ ಐದಾರು ಜನರ ಗುಂಪು ಕಾದ್ರಿಯಾಕನ ಮನೆಬಾಗಿಲು ತಟ್ಟತೊಡಗಿದರು. ಕಾದ್ರಿಯಾಕನಿಗೆ ಎದ್ದು ನಡೆಯಲಾಗುತ್ತಿಲ್ಲ. ಕಾಕನ ಮಡದಿ ಬಾಗಿಲು ತೆರೆದಾಗ ಅಲ್ಲಿ ಕಂಡದ್ದು ಶಂಕರ ಭಟ್ರ ಮಗ,  ತುಂಬು ಗರ್ಭಿಣಿ ಸೊಸೆ…. ನಾಲ್ಕೈದು ಊರ ಭಾಂಧವರು. ಗುಂಪಿನಿಂದ ಹೇಗಾದರೂ ಮಾಡಿ ಹೊಳೆದಾಟಿಸಿಕೊಡಬೇಕೆಂಬ ನಿವೇದನೆ. ಊರಲ್ಲಿ  ಯಾವೊಬ್ಬನೂ ಕರೆದರೆ ಬರುತ್ತಿಲ್ಲ. ಎಲ್ಲರಿಗೂ ಕೊರೊನಾದ ಭಯ. ಪೊಲೀಸರು ಯಾರನ್ನೂ ಪೇಟೆಗೆ ಬಿಡುತ್ತಿಲ್ಲ. ಆಸ್ಪತ್ರೆ ಸೇರಬೇಕಾದರೆ ಇನ್ನೊಂದು ರಾಜ್ಯದ ಗಡಿ ದಾಟಬೇಕು… ಎಲ್ಲಾ ಕಡೆ ಪೊಲೀಸರ ಸರ್ಪಗಾವಲು. ಆಂಬುಲೆನ್ಸ್ ಕೂಡಾ ರಾಜ್ಯದ ಗಡಿ ದಾಟಲು ಬಿಡುತ್ತಿಲ್ಲ. ಹೇಗಾದರೂ ಮಾಡಿ ಹೊಳೆ ದಾಟಿಸಿ ಕೊಡಬೇಕು… ಕಾದ್ರಿಯಾಕನಿಗೆ ಏನುಮಾಡಬೇಕೆಂದು ತೋಚಲಿಲ್ಲ. ದೋಣಿ ಹಳೆಯದಾಗಿದೆ. ಅಂಗಾತ ಮಲಗಿದೆ ಎಂದು ಹೇಳುವ ಹಾಗೆಯೂ ಇಲ್ಲ. ರಾತ್ರೋ ರಾತ್ರಿ ಎಲ್ಲರೂ ಸೇರಿ ದೋಣಿಯನ್ನು ಹೊಳೆಗಿಳಿಸಿದರು. ಕಾದ್ರಿಯಾಕನ ಗೈರು ಹಾಜರಿಯಲ್ಲಿ ಮಡದಿ ಪಾತುಮ್ಮ ಹುಟ್ಟು ಹಾಕಿ ಇನ್ನೊಂದು ದಡಸೇರಿಸಿ ವಾಪಸ್ ಬಂದಾಗ ಕಾದ್ರಿಯಾಕನ ಕಣ್ಣುಗಳು ತೇವಗೊಂಡಿತ್ತು.

ಕಾದ್ರಿಯಾಕ ಮತ್ತು ನಾಡ ದೋಣಿ Read Post »

You cannot copy content of this page

Scroll to Top