ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕಾವ್ಯಯಾನ

ಈ ಯುದ್ಧ ಗೆಲ್ಲಲು ಡಾ .ಪ್ರಸನ್ನ ಹೆಗಡೆ ಈ ಯುದ್ಧ ಗೆಲ್ಲಲು ಶಸ್ತ್ರಾಸ್ತ್ರ ಬೇಕಿಲ್ಲ ಮುಖಗವಚವಷ್ಟೆ ಸಾಕು ಈ ಯುದ್ಧ ಗೆಲ್ಲಲು ಹೊರ ನಡೆಯ ಬೇಕಿಲ್ಲ ಒಳಗಿದ್ದರಷ್ಟೆ ಸಾಕು ಈ ಯುದ್ಧ ಗೆಲ್ಲಲು ಬೊಬ್ಬಿರಿಯಬೇಕಿಲ್ಲ ಮೌನಾಸ್ತ್ರವಷ್ಟೆ ಸಾಕು ಈ ಯುದ್ಧ ಗೆಲ್ಲಲು ಕಿತ್ತುಕೊಳ್ಳುವುದು ಬೇಕಿಲ್ಲ ಹಂಚಿ ತಿಂದರಷ್ಟೆ ಸಾಕು ಈ ಯುದ್ಧ ಗೆಲ್ಲಲು ಮಲ್ಲ ಶಾಸ್ತ್ರ ಬೇಕಿಲ್ಲ ಉಸಿರ್ವಿದ್ಯೆ ಯಷ್ಟೆ ಸಾಕು ಈ ಯುದ್ಧ ಗೆಲ್ಲಲು ಅಂತರಿಕಿಕ್ಷಕ್ಹಾರ ಬೇಕಿಲ್ಲ ಅಂತರದ ಮಂತ್ರ ಸಾಕು ಈ ಯುದ್ಧ ಗೆಲ್ಲಲು ಸೈನ್ಯವೇ ಬೇಕಿಲ್ಲ ಆತ್ಮಬಲ ಒಂದೇ ಸಾಕು. *******

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಶಾಯರಿ ಮರುಳಸಿದ್ದಪ್ಪ ದೊಡ್ಡಮನಿ (೧) ಹರೇ ಬಂದ್ರ ಅದು ಖರೇನ ಹೇಳತೈತಿ ಯಾವಾಗ್ಲೂ ನಕ್ಕೊಂತನ ಇರತೈತಿ ಹರೇ ಅನ್ನುದು ಹುಚ್ಚು ಕೊಡಿಯಾಗಿರತೈತಿ ಬೇಕಾದವರನ್ನ ಬೇಕಾದಂಗ ತಿರುಗುಸತೈತಿ. (೨) ಪ್ರೀತಿ ಅನ್ನು ವಿಷ ಕುಡದೇನಿ ಸಾಯಾಕ ಒದ್ದ್ಯಾಡಕ ಹತ್ತೇನಿ ನೀ ಬಂದ್ರ ನಾಕು ದಿನ ಬದುಕತೇನಿ ಇಲ್ಲಂದ್ರ ಸಾವಿನ ಕೂಡ ಮಲಗತೇನಿ. (೩) ಪ್ರೀತಿ ಮಾಡವರ ಮೂಗಿನ ತುದಿ ಮ್ಯಾಲ ಸಿಟ್ಟಿರತೈತಿ ಅವರಿಗೆ ಅದೇ ತಾನೇ ಪ್ರೀತಿ ಹುಟ್ಟಿಗೊಂಡಿರತೈತಿ ಮಾತಾಡವ್ರನ್ನ ಕಂಡ್ರ ಸಿಟ್ಟುಬರತೈತಿ. (೪) ಪ್ರೀತಿ ಸಮುದ್ರ ಒಡಿತೇಂದ್ರ ಅದು ತಡಿಯಾಂಗಿಲ್ಲ ಅದರ ತೆರಿ ಒತ್ತಿ ಬಂದ್ರ ಕಾಡವರು ಉಳಿಯಾಂಗಿಲ್ಲ. (೫) ಸಾವು ದಿವಸ ಮುಗಿಯದ ಬರಂಗಿಲ್ಲ ಪ್ರೀತಿ ಮಾಡಿದ ಹುಡುಗಿ ಕೈ ಕೊಟ್ಟರ ಪ್ರೀತಿಸಿದವ್ರು ಸಾವಿನ ಮನಿ ಮುಂದ ನಿಂದ್ರುದು ಬಿಡಲ್ಲ. *********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ನನ್ನ ಸಖ ಮಧು ವಸ್ತ್ರದ್ ನೀಲಾಗಸದಿ ಹೊಳೆವ ತಾರೆಯ ಕಂಡನು ಸಖ.. ಸಖನ ಮತ್ತೇರಿಸುವ ಕಂಗಳಲಿ ನನದೇ ನಗು ಮುಖ.. ನಗುಮುಖದ‌ ಪ್ರೀತಿಯರಿತು ಕೈ ಹಿಡಿದು ನೀಡಿದ ಸ್ನೇಹಸುಖ.. ಸ್ನೇಹಸುಖದ ಎರಕ ಜೀವನದಲಿ ದೂರಾಗಿಸಿದೆ ದುಃಖ.. ದುಃಖ ದುಗುಡವ ಬೇರು ಸಹಿತ ಕಿತ್ತೆಸೆದಿದೆ ನಿನ್ನೊಲವು.. ನಿನ್ನೊಲವ ಮಹಲಿನೊಳಕರೆದು ಬರಸೆಳೆದು ನೀಡಿದೆ ನೀ ನಲಿವು.. ನಲಿವುನೋವಿನಬಾಳಪಯಣದಿ ನಮ್ಮದಾಯ್ತು ಗೆಲುವು.. ಗೆಲುವ ಮಾಲೆಯ‌ಪ್ರೇಮಪುಷ್ಪ ಗಳಿಗೆ ಅದೆಂಥಾ ಚೆಲುವು.. ಚೆಲುವಾದ ಕಂಗಳಲಿ ಅರಸುತ ನಿನ್ನರಸಿಯ.. ನಿನ್ನರಸಿಯ ಮನದ ಹಿರಿಯ ಧ್ಯೇಯವ ಹರಸುವೆಯ.. ಹರಸುತವಳ ಕಾರ್ಯದಕ್ಷತೆಯ ಎಲ್ಲಡೆ ಮೆರೆಸುವೆಯ.. ಮೆರೆಯುತಿರಲಿ ನಮ್ಮ ಉನ್ನತ ಧ್ಯೇಯವೆಂದೂ ನೀಲಾಗಸದಲಿ ***********

ಕಾವ್ಯಯಾನ Read Post »

ಇತರೆ

ಪ್ರಸ್ತುತ

ಬಸವಣ್ಣನವರು ಉಮೇಶ ಮುನವಳ್ಳಿ ಶಿಕ್ಷಿತರಲ್ಲಿ ಅನೇಕರು ನಾವು ಬಸವಣ್ಣನವರನ್ನು ಕೇವಲ ಸಮಾಜ ಸುಧಾರಕ, ಕ್ರಾಂತಿಕಾರಿ, ದಾರ್ಶನಿಕ ಇದೇ ಪರಿಧಿಗೆ ಸೀಮಿತಗೊಳಿಸಿದ್ದೇವೆ. ಇದರಾಚೆ ಅವನನ್ನು ಕಂಡುಕೊಳ್ಳುವ ಒಳಗಣ್ಣಿನ ಕೊರತೆ ನಮ್ಮಲ್ಲಿ ಎದ್ದುಕಾಣುತ್ತದೆ. ಅದೇ ನಮ್ಮ ಗ್ರಾಮೀಣ ಜನಕ್ಕೆ ಬಸವಣ್ಣ ಒಬ್ಬ ದೇವ, ದೈವ, ಕೇಳಿದ್ದನ್ನು ಕೊಡುವ ಕಲ್ಪವೃಕ್ಷ! ಕೇವಲ ಶಬ್ದಗಳಲ್ಲಿ ಹಿಡಿದಿಡಲಾಗದ ‘ಅಗಮ್ಯ, ಅಗೋಚರ, ಅಪ್ರತಿಮ’ ವ್ಯಕ್ತಿತ್ವ ಅವನದು. ಅವನ ಆ ಘನ ವ್ಯಕ್ತಿತ್ವವನ್ನು ಒಳಗೊಳ್ಳದಷ್ಟು ಚಿಕ್ಕವಾದವೇ ನಮ್ಮ ಮನಸ್ಸಿನ ಪಾತ್ರೆಗಳು? ದೋಷ ನಮ್ಮ ಪಾತ್ರೆಯಲ್ಲಿದೆ. ಮೇಲಾಗಿ ಅವನನ್ನು ವಿಶ್ಲೇಷಿಸಿ ನಾವು ದೊಡ್ಡವರಾಗಹೊರಟಿದ್ದೇವೆ. ಅವನನ್ನು ಬಂಡವಾಳವಾಗಿಸಿಕೊಂಡು ಬದುಕುತ್ತಿದ್ದೇವೆ. ಯಾವಾಗಲೂ ಯಾವ ಮಹಾಪುರುಷನ ಆಶಯವು ಅದಾಗಿರುವುದಿಲ್ಲವೋ ಅದರ ತದ್ವಿರುದ್ಧದ ಕಾರ್ಯ ಅವನ ಅನುಯಾಯಿಗಳಿಂದ ನಡೆಯುತ್ತದೆ. ಬಸವಣ್ಣ, ‘ಲಿಂಗವನ್ನು ಪೂಜಿಸಿ ಲಿಂಗವೇ ಆದ’ ಮಹಾಮಹಿಮ. ಆದರೆ ‘ಎನಗಿಂತ ಕಿರಿಯರಿಲ್ಲ, ಶಿವಭಕ್ತರಿಗಿಂತ ಹಿರಿಯರಿಲ್ಲ’ ಎನ್ನುವ ಕಿಂಕರ ಭಾವ. ದೇಹವೇ ದೇವಾಲವಾದ ಪರಿ: “ಎನ್ನ ಕಾಲೇ ಕಂಬ, ದೇಹವೇ ದೇಗುಲ”. “ಅಂಬುದಿಯೊಳಗೆ ಬಿದ್ದ ಆಲಿಕಲ್ಲಂತೆ” ಜೀವ ಶಿವರಾದ ಪರಿ. “ಭಿನ್ನಭಾವವರಿಯದೇ ‘ಶಿವ ಶಿವಾ’ ಎನುತಿರ್ದೆನಯ್ಯ.” “ಕೂಡಲ ಸಂಗಮದೇವರಲ್ಲಿ ತಾನೇ ಪ್ರಸಾದಿ” “ಬೆಳಗಣೊನಳಗಣ ಬೆಳಗು ಮಹಾಬೆಳಗು” “ಪರಮಾನಂದವನೇನೆಂದುಪಮಿಸುವೆನಯ್ಯ” ಎನ್ನುವ ನುಡಿಯಲ್ಲಿ ಪರಬ್ಬಹ್ಮ ಸ್ಥಿತಿ ತಲುಪಿದ ಭಾಸವಾಗುತ್ತದೆ. ಬಸವಣ್ಣನವರು ವಚನ ಸಾಹಿತ್ಯವನ್ನು ದಾಸೋಹ ಭಾವನೆಯಿಂದ ರಚಿಸಿದ್ದಾರೆ. ಲೋಕೋದ್ಧಾರಕ್ಕೆಂದು ರಚಿಸಿದ್ದಾರೆ ಇಲ್ಲದೇ ಹೋದರೆ ಅವುಗಳನ್ನು ರಚಿಸುವ ಅಗತ್ಯತೆ ಅವರಿಗಿರಲಿಲ್ಲ. ಅವರು ಮೌನಸ್ಥಿತಿಯನ್ನು ಯಾವಾಗಲೋ ಧರಿಸಿದ್ದರು. ಕೃಷ್ಣ ಅರ್ಜುನನಿಗೆ ಭಗವದ್ಗೀತೆ ಬೋಧಿಸುವ ಅನಿವಾರ್ಯತೆ ಬಂದೊದಗಿದಂತೆ ಅವರಿಗೂ ಲೋಕದ ಜನರ ಉದ್ಧಾರ ಪ್ರಮುಖವೆನಿಸಿತು. ಎಲ್ಲ ಮಹಾತ್ಮರ ವಿಷಯದಲ್ಲೂ ಇದು ಸತ್ಯ. ಬುದ್ಧನಿಗೆ ಕಾಡಿನಿಂದ ಮರಳಿ ಬರುವ ಅವಶ್ಯಕತೆ ಇರಲಿಲ್ಲ, ಆದರೆ ಜನರು ದುಃಖದಲ್ಲಿ ತೊಳಲಾಡುವುದನ್ನು ಅವನಿಂದ ನೋಡಲಾಗಿಲ್ಲ. ಆತ್ಮಮೋಕ್ಷಾರ್ತಂ ಜಗತ್ ಹಿತಾಯಚ ಎಂಬ ಮಾತಿದೆ: ಆತ್ಮ ಸಾಕ್ಷಾತ್ಕಾರಗೊಂಡಮೇಲೆ ಜಗತಿನ ಹಿತಚಿಂತನೆ ಮಾಡುವುದು. ‘ಭಾವದಲ್ಲಿ ವೃತಗೆಟ್ಟುದಾಗಿ, ಆ ಭಾವದಲ್ಲಿ ಜೀವಸಂಹಾರಿ ಕೂಡಲ ಸಂಗಮದೇವ ಸರ್ವನಿವಾಸಿಯಾಗಿ”.” ಸ್ವಯಂ ಲಿಂಗದನುಭಾವ ದೊರಕೊಂಡ ಬಳಿಕ” “ಏನೆಂಬೆ, ಏನೆಂಬೆ ಒಂದೆರಡಾದುದ, ಏನೆಂಬೆ ಏನೆಂಬೆ ಎರಡೊಂದಾದುದ” ಜೀವ-ಶಿವ ಒಂದಾದ ಜೀವನ್ಮುಕ್ತ ಸ್ಥಿತಿ. “ಭಾವ ಭಾವಿಸಲು ನಿರ್ಭಾವ” ಸ್ಥಿತಿ. ಘನಗಂಭೀರ ಮಹಾಘನದೊಳಗಿನ ಘನಕ್ಕೆ ಘನವಾಗಿದ್ದೆನಯ್ಯಾ. ಕೂಡಲ ಸಂಗಮದೇವಯ್ಯನೆಂಬ ಮಹಾಬೆಳಗಿನ ಬೆಳಗಿನೊಳಗಿದ್ದೇನೆಂಬ ಶಬ್ದ ಮುಗ್ಧವಾದುದೇನೆಂಬೆನಯ್ಯ. ” ಆರೂಢದ ಕೂಟದ ಸುಖವ ಕೂಡಲ ಸಂಗಯ್ಯ ತಾನೇ ಬಲ್ಲ ” ಲಿಂಗಾಂಗ ಸಾಮರಸ್ಯವನ್ನು ಸಾಧಿಸಿ, ಜೀವ-ಶಿವನಾದ ಶಿವೈಕ್ಯ ಸ್ಥಿತಿ. ಬಸವಣ್ಣನು ನಮಗೆ ಮುಕ್ತಿದಾತ, ಶಕ್ತಿದಾತ, ಅವನು ನೆಲೆಸಿದ ಕ್ಷೇತ್ರ, ಅವಿಮುಕ್ತ ಕ್ಷೇತ್ರ. ಕಲ್ಯಾಣ ಕ್ಷೇತ್ರ.” ಬಸವನ ಆರಾಧಕರೆಷ್ಟೋ ಜನ ದೈವೀ ಪುರುಷರಾದದ್ದನ್ನು ನಾವು ಕಣ್ಣಾರೆ ನೋಡಿದ್ದೇವೆ. ಆದರೆ ಬಸವಣ್ಣನವರ ವಿಶ್ಲೇಷಣೆಯಲ್ಲಿ ನಮಗೆ ಮಿತಿ ಮೀರಲಾಗಲಿಲ್ಲ. ಇದು, ನಮ್ಮ ಇತಿಮಿತಿ. ಹನ್ನೊಂದು ಜನ ಅಂಧರು ಆನೆಯನ್ನು ವಿಶ್ಲೇಷಿಸಿದಂತೆ. *********

ಪ್ರಸ್ತುತ Read Post »

ಕಾವ್ಯಯಾನ

ಕಾವ್ಯಯಾನ

ನಿಶ್ಯಬ್ದ ವೀಣಾ ರಮೇಶ್ ಕತ್ತಲೆಯ ಬಿಳಿ ಮಂಚದಲಿ ಮಲಗಿರುವೆ ಕನಸುಗಳು ಬೀಳುತ್ತಿವೆ ಎಬ್ಬಿಸಬೇಡಿ ನೆನಪುಗಳೆ, ಸದ್ದು ಮಾಡದಿರಿ ಎದೆಯ ಬಡಿತದ ಸದ್ದು ಇಲ್ಲಿಗೂ ಕೇಳಿಸುತ್ತಿದೆ ಮತ್ತೆ ಬೆಳಕಾದರೆ ನನಗಿಲ್ಲ ಬಿಡುವು ಮತ್ತೆ ನೀ ನಸು ನಾಚಿ ಬಂದರೆ ಬಾವನೆಗಳ ಹರಿವು, ನನ್ನೊಳಗೂ ನೀನು ಹೊರಗೂ ನೀನು ನಿನ್ನ ಕನಸುಗಳ ಹೊದಿಕೆ ಬೇಕಾಗಿತ್ತು,ಮತ್ತೆ ನೆನಪುಗಳು ದಾಳಿ ಮಾಡದಿರಲಿ ಸೂರ್ಯೋದಯದ ಮೊದಲು ನಿನ್ನ ನಗುವಿನ ನಂದಾದೀಪ ನೋಡಬೇಕು ನಾನು ಬಂದು ಬಿಡು ಕಾರಣವಿಲ್ಲದೆ ಮತ್ತೆ ತೆರಳಬೇಡ ಸದ್ದಿಲ್ಲದೆ. ***********

ಕಾವ್ಯಯಾನ Read Post »

You cannot copy content of this page

Scroll to Top