ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅನುವಾದ

ಅನುವಾದ ಸಂಗಾತಿ

ಹಸಿವು ಮತ್ತು ಬಾಯಾರಿಕೆ ಮೂಲ: ಖಲೀಲ್ ಗಿಬ್ರಾನ್ ಕನ್ನಡಕ್ಕೆ:ಡಾ.ಬೆಳ್ಳೂರು ವೆಂಕಟಪ್ಪ ಧರ್ಮಛತ್ರದ ಕಾವಲುಗಾರನಾಗಿದ್ದ ವೃದ್ದನೊಬ್ಬ ಕೇಳಿದ: ಹಸಿವು ಮತ್ತು ಬಾಯಾರಿಕೆ ಬಗ್ಗೆ ತಿಳಿಸಿ: ಪ್ರವಾದಿ ನಗುತ್ತಾ ಹೀಗೆ ಹೇಳಿದ: ಬೆಳಕನ್ನು ಹೀರಿ ಬೆಳೆವ ಮರಗಿಡಗಳ ರೀತಿ ತಂಗಾಳಿಯ ಜತೆ ಸುಗಂಧ ಬಿರಿವ ಭೂಮಿಯ ಮೇಲೆ ನಿಮಗೆ ಬದುಕುವುದಕ್ಕೆ ಸಾಧ್ಯವೇ? ಆದರೆ ಕೊಂದು ತಿನ್ನುತ್ತೀರಿ ಪ್ರಾಣಿಗಳ ಹಾಲನ್ನು ಕದ್ದು ಕುಡಿಯುತ್ತೀರಿ ಹಸಿವು ಮತ್ತು ಬಾಯಾರಿಕೆ ನೀಗಿಸಿಕೊಳ್ಳುವುದಕ್ಕೆ ಅವಕಾಶ ಕಲ್ಪಿಸಿರುವ ಈ ಪ್ರಕೃತಿ ನಿಯಮ ಪೂಜನೀಯವಾಗಿದೆ ನಿಮ್ಮ ವಾಸದ ಮನೆಗಳನ್ನು ಕಟ್ಟಲು ಆ ಮುಗ್ಧ ಕಾಡಿನ ಮರಗಳನ್ನು ಬಲಿ ಕೊಡುತ್ತೀರಿ ಇನ್ನೂ ಮುಗ್ಧತೆಯ ಪ್ರತಿಕವಾಗಿರುವ ನಿಮಗೆ ಪರಿಶುದ್ಧ ಗುಣದ ಕಾಡು ಎಲ್ಲವನ್ನೂ ತ್ಯಾಗ ಮಾಡಿದೆ. ಆಡು ಕುರಿ ಕೋಳಿ ಇತರೆ ಯಾವುದಾದರೂ ಜೀವಿಗಳನ್ನು ಕೊಲ್ಲುವಾಗ ನೀವು ನಿಮ್ಮ ಹೃದಯಕ್ಕೆ ಹೀಗೆ ಹೇಳಿ “ಯಾವ ನಿಯಮ ನಿಮ್ಮನ್ನು ಕೊಲ್ಲುವಂತೆ ಮಾಡಿದೆಯೊ ಅದೇ ನಿಯಮ ನನ್ನನ್ನೂ ಕೊಂದು ನನ್ನ ದೇಹದ ಮಾಂಸವನ್ನು ಬೇರೆ ಜೀವಿಗಳು ಸೇವಿಸುತ್ತವೆ” “ಕೊಂದು ತಿನ್ನಲು ಯಾವ ಪ್ರಕೃತಿ ನಿಮ್ಮನ್ನು ನನ್ನ ಕೈಲಿರಿಸಿದೆಯೊ ಅದೇ ಪ್ರಕೃತಿ ನನ್ನನ್ನು ಇನ್ನೊಂದು ಕಾಣದ ಕೈಯಲ್ಲಿ ಇರಿಸಿದೆ” “ನನ್ನ ರಕ್ತ ಮತ್ರು ನಿಮ್ಮ ರಕ್ತ ಬೇರೇನೂ ಅಲ್ಲ ಸ್ವರ್ಗದ ಮರಗಳ ಬೇರುಗಳಿಗೆ ಜೀವರಸ ಮಾತ್ರ” ಹಾಗೆಯೇ ಸೀಬೆಯ ಹಣ್ಣನ್ನು ಕಚ್ಚಿ ತಿನ್ನುವಾಗ ನಿಮ್ಮ ಹೃದಯಕ್ಕೆ ಕೇಳಿಸುವಂತೆ ಹೀಗೆ ಹೇಳಿ: “ನಿಮ್ಮ ಬೀಜಗಳು ನನ್ನ ಹೊಟ್ಟೆಯಲ್ಲಿ ಸೇರಿದ್ದು ಅವು ಮುಂದೆ ನಳನಳಿಸುವ ಹೂವಾಗಿ ನನ್ನ ಹೃದಯದಲ್ಲಿ ಅರಳುತ್ತವೆ “ “ನಿನ್ನ ಸುಗಂಧ ನನ್ನ ಉಸಿರಾಗಲಿ ಎಲ್ಲ ಋತುಗಳಲ್ಲಿ ಕೂಡಿ ಬಾಳೋಣ” ಅದೇ ತರ ಶರತ್ಕಾಲದ ದ್ರಾಕ್ಷಿತೋಟದಿಂದ ಕಿತ್ತು ತಂದ ಹಣ್ಣುಗಳನ್ನು ತುಳಿದು ವೈನ್ ತಯಾರಿಸುವಾಗ ಕೂಗಿ ಹೇಳಿ ನಿಮ್ಮ ಹೃದಯಕ್ಕೆ: “ನಾನೂ ಕೂಡ ಒಂದು ದ್ರಾಕ್ಷಿತೋಟ ನನ್ನ ಎಲ್ಲ ರಕ್ತ ಮಾಂಸ ದ್ರಾಕ್ಷಿ ಹಣ್ಣುಗಳ ರೀತಿ ತುಳಿಯಲ್ಪಟ್ಟು ದ್ರಾಕ್ಷಾರಸವಾಗುತ್ತವೆ” “ನಾನು ಹೊಸ ವೈನ್ ಅಗಿ ಅನಂತ ಕಾಲದ ಪಾತ್ರೆಗಳಲ್ಲಿ ಬಂಧಿಯಾಗುತ್ತೇನೆ” “ಚಳಿಗಾಲಕ್ಕೆ ನೀವು ಕುಡಿವ ಆ ವೈನಿನ ಪ್ರತಿ ಕಪ್ಪಿನಲ್ಲೂ ಸೇರಿ ನಿಮ್ಮ ಹೃದಯದ ಹಾಡಾಗುತ್ತೇನೆ” “ಆ ಹಾಡಿನಲ್ಲಿ ಶರತ್ಕಾಲದ ದ್ರಾಕ್ಷಿ ತೋಟ ಮತ್ತು ವೈನ್ ಮತ್ತೆ ನೆನೆಪಾಗಲಿ” ***********

ಅನುವಾದ ಸಂಗಾತಿ Read Post »

ಕಾವ್ಯಯಾನ

ಕಾವ್ಯಯಾನ

ಮರಳಿ ಕಟ್ಟಬೇಕಲ್ಲವೇ ಸಂಮ್ಮೋದ ವಾಡಪ್ಪಿ ಹದವಾದ ಮಣ್ಣ ಅಡಿಯಿಂದ ತೇವವಾದ ಕಣ್ಣು, ನೋವುಂಡ ಒಡಲಿಂದ ಎದ್ದು‌‌ನಿಲ್ಲುತಿದೆ ಒಂದು ಮೊಳಕೆ ಚಿಗುರೊಡೆದು ಟಿಸಿಲಾಗಿ ಹರಡಿದೆ ಬೆಂದ‌ ಧರೆಗೆ ಆಗಸದ ಮುತ್ತು ಈ ಕೂಸಿಗಾಗಿಯೆ‌ ಮೇಲೇಳಲೆಂದು ಕೂಸು ನಗುನಗುತ ಉದರದಿ ಸರಿದು ಕಾಲಿಗೆ ಶಕ್ತಿ ಅಲ್ಪ, ಅಂಬೆಗಾಲಲಿ ಎದ್ದು ಹಗಲಿರುಳು ಓಟ ಕಲಿಸುತಿದೆ ಜೀವನ ಪಾಠ ತಾಯ ಸೆರಗಲಿ ಧೈರ್ಯ, ವಸುದೇವನ ಮೌಲ್ಯ ಎತ್ತರವಾಗುತಿದೆ ಬಾಳು, ಧ್ಯೇಯಗಳ ತುಂಬಿ ಕೌಶಲ್ಯಲ ಅತ್ತ ಇತ್ತ, ಕಲಿಕೆ ಅನುಭವಗಳು, ನವ್ಯ‌ಗ್ರಹಿಕೆ ನಡೆಯು ನುಡಿಯು,ಹೊಸ ಆಯಾಮಗಳು ಓಟದಿ‌ ಗೆಲುವಿನ‌ ರುಚಿ, ಹಸಿವು ಹೆಚ್ಚಾಯಿತು ಗೆಳೆತನ, ಪ್ರೀತಿ, ಹಗೆ, ಆಸೆ, ದುರಾಸೆ ಬಾಗದಂತೆ ಆಗಿದ್ದು ಹೆಮ್ಮರ, ನೆಲದಿ ಮಹಾ ಸಮರ ಮೇಲೆದ್ದು‌ ಕಾಣದೇ ಹೋಯಿತು ಕೆಳಗಿನ‌ ಬದುಕು ಮೌಲ್ಯ ಬಚ್ಚಿಟ್ಟು, ಕಾಂಚಾಣಕ್ಕೆ ಚೀಲ ಒಡ್ಡಿ ನಿಂತದ್ದು ಮಗುವೆ ಅರಿ, ತಿಳಿಯಾಗಿಸು‌ ಮನವ ಬಾಗು, ಬೀಗುವುದೇಕೆ? ಅಂತರಾತ್ಮದಿ‌ ಮಾತೆಯ ಸಂಸ್ಕಾರದ ಕೂಗು..‌ಪ್ರತಿದ್ವನಿ ಕತ್ತಲಲಿ ಜೋರಾದ ಓಟದಿ ಬಿದ್ದಾಗ, ಸುತ್ತಲೂ ಅಪಹಾಸ್ಯದ‌ ನಗುವಿನ‌ ದ್ವನಿ ಇರಲಿ, ತಾಳು ಸರಿ ತಪ್ಪುಗಳ ಶೋಧನೆಯಲಿ ಚಲನೆ ಓಡುವಾಗ ಕಲಿಯಲೇ ಬೇಕು‌‌‌ ಪಾಠಗಳ, ತತ್ವಗಳ ಬಿದ್ದ ನೋವಿಗೆ ಕುಗ್ಗದೆ,‌‌‌ ಭದ್ರವಾಗಿ ಹಿಡಿದ ಕೈಗಳ ಬಲವಿಹುದು ಕಟ್ಟಡಗಳು ಕುಸಿದು ಬೀಳಬಹುದು ಬದುಕಿನ ಬಿರುಗಾಳಿಯಲಿ ಆತ್ಮಬಲದ, ಸಂಕಲ್ಪದಲಿ‌ ಕಟ್ಟಲೇ‌ಬೇಕಲ್ಲವೇ ಎತ್ತರಕೆ ಏರಲು ಮರಳಿ ಮರಳಿ…. ******

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಅವಳು ನಾಗರೇಖಾ ಗಾಂವಕರ ಅವಳು -1 ಬಿಂಬಕ್ಕೆ ಸರಿಯಾಗಿ ಪ್ರತಿಬಿಂಬ ಮೂಡಿಸುವ ಕನ್ನಡಿಯ ನಾಜೂಕಿನಿಂದಲೇ ಕಾಯ್ದಿರಿಸಿದ್ದಾಳೆ ಅವಳು ಕನ್ನಡಿ ಹೇಳುತ್ತಲೇ ಇರುವ ಬಿಂಬ ಪ್ರತಿಬಿಂಬದ ಸರಳ ಸೂತ್ರ ಆಕೆಗೇನೂ ಅರ್ಥವಾಗುವುದಿಲ್ಲ. ತಲ್ಲಣಗಳ ತಕ್ಕಡಿ ಹಿಡಿದೇ ಎದುರು ಬದುರಾಗುವ ಮುಖಗಳು ಬಿಂಬ ಪ್ರತಿಬಿಂಬವಾದರೂ ಒಂದನ್ನೊಂದು ಬೆಂಬಲಿಸುವುದೇ ಇಲ್ಲ ಬಿಂಬದ ಎಡಕೈ ಎತ್ತಿದರೆ ಕನ್ನಡಿಯಲ್ಲಿ ಏರುವ ಬಲಗೈ ಕನ್ನಡಿಯ ಬೆನ್ನಿಗಂಟಿದ ಪಾದರಸದ ಲೇಪನ ಅಲ್ಲಲ್ಲಿ ಕಿತ್ತು ಹೋಗಿದೆ ಈಗೀಗ ಬಿಂಬ ಪ್ರತಿಬಿಂಬ ಮೂಡಿಸುವುದು ಕನ್ನಡಿಗೂ ಕಷ್ಟವಾಗಿದೆ. ಆದರೂ ಆ ಕನ್ನಡಿಯಲ್ಲಿಯೇ ಮೂಡುವ ಮುಖವನ್ನು ದಶರ್ಿಸಿಕೊಳ್ಳುತ್ತ ಹಣೆಬೊಟ್ಟನ್ನು ನಿಧಾನಕ್ಕೆ ಬೆರಳಿಂದ ಒತ್ತಿ ಲೇಪಿಸಿಕೊಳ್ಳುತ್ತ ಮುಗುಳ್ನಗುತ್ತಾಳೆ ಅವಳು ಅವಳು- 2 ಅವನ ಬಿಂಬವನ್ನು ಪ್ರತಿಬಿಂಬವನ್ನು ಹಗಲೂ ಇರುಳು ಕೊರೆದು, ಕೆತ್ತಿ ತಿವಿದು ಮೊನೆದು ತನ್ನದನ್ನಾಗಿಸಿಕೊಂಡಿದ್ದಾಳೆ ಅವಳು ಬರೀ ಗದ್ದಲದ ನಡುವೆ ಕಳೆದುಹೋಗುತ್ತಿರುವ ಅವನನ್ನು ಮಾನಸ ಲೋಕದಲ್ಲೇ ಜಪಿಸಿ ಸಿದ್ದಿ ಮಾಡಿಕೊಂಡವಳ ಮರೆತು ಹೋಗುವ ಬಣ್ಣ ಬಣ್ಣದ ಸೆರಗ ಮರೆಯಲ್ಲಿ ಮುದುಡಿ ಬಿದ್ದವನ ನಿರಾಕರಣಕ್ಕೆ ಮುನಿಯುವುದಿಲ್ಲ ಅವಳು ಸ್ಪರ್ಷಕ್ಕೆ ಸಿಗದ ಮುತ್ತುಗಳು ಹವಳದ ದಂಡೆಗಳಂತೆ ಸಾಲಾಗಿ ಹೆಣೆದು ಕೂತಿವೆ ಮನದ ಮೂಲೆಯಲ್ಲಿ ನಿಯತ ಭೋರ್ಗರೆವ ಕಡಲಿನ ಆರ್ಭಟಕ್ಕೆ ಕಿವುಡಾದ ಅವನನ್ನು ಶಪಿಸುವುದಿಲ್ಲ ಅವಳು ದಹಿಸಬೇಕು ಒಳಗಿನ ಉರಿ ಉಕ್ಕಿ ಚೆಲ್ಲದಂತೆ ಸ್ಪೋಟಗೊಳ್ಳದಂತೆ, ಹದವಾಗಿ ಬೇಯಬೇಕು,ಕೆನೆಗಟ್ಟಬೇಕು ಪ್ರೀತಿ ಎನ್ನುವವನ ಧಿಕ್ಕರಿಸುವುದಿಲ್ಲ ಅವಳು ದೇಹವೊಂದು ಪದಾರ್ಥವಾಗದೇ ಕಲ್ಪಿತ ಭ್ರಮೆಗಳಲ್ಲಿ ಹುಟ್ಟುವ ಅವನನ್ನು ಆವಾಹಿಸಿಕೊಳ್ಳುತ್ತಾಳೆ ಆಘ್ರಾಣಿಸುತ್ತಾಳೆ, ಬಿಚ್ಚಿ ಹರಹಿದ ಹೆರಳುಗಳ ನಡುವೆ ಬಂಧಿಸುತ್ತಾಳೆ ಪರವಶಳಾಗುತ್ತಾಳೆ ಅವಳು ಅವನಿಲ್ಲದೇ ಅವಳ ದೇವರು ಇರುವುದಾದರೂ ಹೇಗೆ? ಆ ದೇವನಿಗಾಗಿ ಕಾಯುತ್ತಾಳೆ ಅವಳು ಕಾಯತ್ತಲೇ ಇರುತ್ತಾಳೆ ಅವಳು. **********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ವರ್ಕ್ ಫ್ರಂ ಹೋಂ ಸುಜಾತಾಗುಪ್ತ ವರ್ಕ್ ಫ್ರಂ ಹೋಂ ವರ್ಕ್ ಫ್ರಂ ಹೋಂ ಕೇಳಲು ಖುಷಿಯಾಯಿತು ಕರೋನ ಬಿಸಿಯಲು ಮನ ತಂಪಾಯ್ತು ಪತಿರಾಯನ ಸಾಂಗತ್ಯಕೆ ವಾರಾಂತ್ಯವೇ ಬೇಕಿಲ್ಲ ಅಹಾ..ಎನಿಸಿತು ಆ ಕ್ಷಣ. ಮನೆಯಲ್ಲೇ ಇದ್ದರೂ ಕಂಪ್ಯೂಟರ್ ಸಂಗ ಉಷೆ ಸಂಧ್ಯೆಯ ಸ್ವಾಗತಿಸೋತನಕ ತಪ್ಪದ ಬವಣೆ.. ಆಯ್ತು ಮನೆಯೇ ಕಛೇರಿ.. ಕರೋನ ಬೆನ್ನಲೆ ಬಂತು ಮಕ್ಕಳಿಗೆ ಬೇಸಿಗೆ ರಜೆ ಶಾಲೆಯು ಸ್ವೇಚ್ಛೆಯ ನೀಡಿತ್ತು ಕರೋನ ಅದ ನುಂಗಿತ್ತು ರಜೆಯ ಮಜದ ಮೂಡಲ್ಲಿದ್ದ ಮಕ್ಕಳಿಗೆ ಗೃಹ ಬಂಧನ… ಅದೆಂಥ ವಿಪರ್ಯಾಸ.. ಮೌನದೆ ಕೂರಲು ಗೊಂಬೆಗಳಲ್ಲ ಸ್ವಾಮಿ.. ಅವರು ಚಿನ್ನದಂತ ಚಿಣ್ಣರು ಆಡಿ ಕುಣಿದು ಕಿರುಚಾಡಿದರೆ ಪತಿರಾಯರಿಗೆ ಕಿರಿಕಿರಿ ಬಾಯ್ಮುಚ್ಚಿ ಕೂರಲು ಪುಟಾಣಿಗಳಿಗೆ ಕಸಿವಿಸಿ ಎಲ್ಲಿಯದು ಈ ಪರಿತಾಪ.. ಗಂಟೆಗೊಮ್ಮೆ ಬಿಸಿ ಕಾಫಿ- ಚಹ ಇಲ್ಲದಿರೆ ಪತಿಗೆ ತಲೆ ಬಿಸಿಯಂತೆ ಮಾಡು ತೊಳೆ ಮಾಡು ತೊಳೆ ನಂಗೆ ಮೈಯೆಲ್ಲಾ ಬಿಸಿ ಬಿಸಿ .. ಬೇಸರ ಕಳೆಯೆ ಅಪ್ಪಮಕ್ಕಳಿಗೆ ಕುರುಕುಲು ತಿಂಡಿ ಬೇಕಂತೆ ರೇಷನ್ನೇ ಮುಗಿದಿರೆ ನಾ ತರಲಿ ಎಲ್ಲಿಂದ ನೀವು ಹೇಳಿ ಸ್ವಾಮಿ.. ವರ್ಕ್ ಫ್ರಾಂ ಹೋಂ ಲಿ ನಾ ಅಡುಗೆ ಮನೆಯಲ್ಲಿ ಬಂಧಿ ಅಪ್ಪ ಮಕ್ಕಳನಡುವೆ ಬಡವಾದೆ ಟಿ.ವಿ ಬಂದ್ ಆಯ್ತು ಮೊಬೈಲ್ ಪೂರ್ತಿ ಕಟ್ ಆಯ್ತು ಗೆಳತಿಯರ ಸಂಗ ಮರೆತೋಯ್ತು ವರ್ಕ್ ಫ್ರಂ ಹೋಂಸಾಕಾಯ್ತು.. ಶ್ರೀ ರಘುರಾಮ ನಿನಗೆ ಶರಣು ಮಹಾಮಾರಿಯ ಸಂಹರಿಸು ಜಗಕೆ ಆರೋಗ್ಯ ನೀಡು ಪತಿಯ ಕಛೇರಿಗೆ ಕಳುಹಿಸು ಮಕ್ಕಳ ಶಾಲೆಗೆ ಕಳುಹಿಸು ನಂಗೆ ನೆಮ್ಮದಿ ನೀಡೋ ಕರುಣಾಮಯಿ ಶ್ರೀ ರಾಮ.. **********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಪದ್ಯ ಸೌತೇಕಾಯಿ ಅಶ್ವಥ್ ಪದ್ಯ ಸೌತೇಕಾಯಿ ರಾಮನವಮಿಗೆಂದೇ ಪೋಷಿಸಿ ಪಾಲಿಸಿ ಬೆಳೆಯಿಸಿದ ಸೌತೇಬಳ್ಳಿ ನೀರುಣಿಸಿ ಹೂವರಳಿ, ಈಚು ಕಾಯಾಗಿ ಹೊರಳಿ ಮರಿ ಮುನ್ನೂರೆಣಿಸುವ ಉದ್ದ ಬಳ್ಳಿ ರುಚಿಯಲ್ಲೆಣೆಯಿಲ್ಲ ಹೋಲಿಕೆಯೆಲ್ಲಾ ಸಣ್ಣ ಹೇಳತೀರದ ಹೊಳಪು, ಕೆನೆಯಂಥಾ ಬಣ್ಣ ಬಾಯಿ ತಾಕಿದರಾಗ ಗರಿಗರಿಯಾದ ಸದ್ದು ನಾಲಗೆಯು ಬಾಚಿ ಮಾಡುವುದು ಮುದ್ದು ತಣ್ಣನೆಯ ಆ ಅನುಭವ ತರಿಸುವುದು ಮುಗುಳ್ನಗೆ ಹೊತ್ತ ಮುಖವನ್ನೊಂದು ಎಂಥಾ ಬದಲಾವಣೆ , ಮನ ಧಿಮ್ಮಗೆ ಸಾಧ್ಯವುಂಟೇ ಒಂದು ಸೌತೇಕಾಯಿಗೆ ನುಂಗಿಯಾದ ಮೇಲೆ ರುಚಿಯೆಲ್ಲ ಮಾಯ ಆದರೂ ಮುಗಿದೇ ಹೋಯಿತೆನ್ನುವ ಗಾಯ ಬಾಯಿರುಚಿಗೆ ಕಚ್ಚಿದ ಈ ಕಾಯಿಪಲ್ಯ ಇದಕೂ ಬೇಕೇ ಒಂದು ದಿಟವಾದ ಪದ್ಯ? ಎಲ್ಲ ಸರಿಯಿದ್ದರೆ ಆಗಬೇಕಿತ್ತು ಇಂದು ಹೆಸರುಬೇಳೆ ಜೊತೆಗೆ ಕೊತ್ತಂಬರಿ ತಂದು ಹಣ್ಣು ಹೊಳೆಸಿದ ಬಣ್ಣ ಕನಕಾಂಬರಿ ಪಾನಕದ ಜೊತೆಗೆ ಕೊಡುವ ಕೋಸಂಬರಿ! ಸೀತಾಪತಿ ಹೆಸರಲಿ ಎಂಥಾ ಯೋಜನೆಯಿತ್ತು ಕಿತಾಪತಿಯ ಜೊತೆ ಅಮಲು ಏರಿಸಲಿತ್ತು ರಾಮನವಮಿಗೆಂದೆಣಿಸಿದ್ದ ಕೋಸಂಬರಿ ಬುಸುಗುಡುತಲಾಯ್ತು ದುಷ್ಟ ಕಾದಂಬರಿ! ***********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಮಾರ್ಕೆಟ್ಟು, ಮಾತು ಮತ್ತು ಶಬರಿ ಅಂಜನಾ ಹೆಗಡೆ ಬ್ರ್ಯಾಂಡೆಡ್ ಶರ್ಟು ತೊಟ್ಟು ಸರ್ವಾಲಂಕೃತನಾದ ರಾಮ ಮಾರ್ಕೆಟ್ಟಿನಲ್ಲಿ… ಇದೇ ಮೊದಲಭೇಟಿ!! ಕಣ್ಣಗಲಿಸಿ “ಹೌ ಆರ್ ಯೂ” ಎಂದು ಕೈ ಕುಲುಕಿದೆ ಥಟ್ಟನೆ ಪ್ರತ್ಯಕ್ಷನಾಗಿದ್ದಕ್ಕೆ ಒಂದು ಪ್ರೀತಿಯ ಆಲಿಂಗನ… ಬಿಲ್ಲು ಬಾಣಗಳೆಲ್ಲಿ ಎಂದೆ… ಉತ್ತರವಿಲ್ಲ ಕಣ್ಣು ಮಿಟಕಿಸಿದ ಥೇಟು ಕಮರ್ಷಿಯಲ್ ಸಿನೆಮಾವೊಂದರ ನಾಯಕನಂತೆ… ಕಣ್ತಪ್ಪಿಸಿಕೊಂಡಿದ್ದ ಟೀನೇಜಿನ ಕನಸೊಂದು ವನವಾಸದಿಂದ ಮಾರ್ಕೆಟ್ಟಿಗೆ… ಮಿಟಕಿಸಿದ್ದು ಎಡಗಣ್ಣೋ ಬಲಗಡೆಯದೋ ಗೊಂದಲ… ಕೌಸಲ್ಯೆ ಸುಮಿತ್ರೆ ಅಹಲ್ಯೆ ಸೀತೆ…. ಎಲ್ಲರ ಪ್ರೀತಿಯ ರಾಮ ಅದ್ಯಾರ ಹಂಬಲಗಳ ಉತ್ಸವಮೂರ್ತಿ ಯಾರ ಕಳವಳಗಳ ಉತ್ತರ ಯಾವ ಯುಗಕ್ಕೆ ಯಾರು ಕೊಟ್ಟ ಜನ್ಮ… ದಪ್ಪಮೀಸೆಯ ದೇವಮಾನವ!! ನಾನಿವತ್ತು ಉದ್ದನೆಯ ಮೀಸೆಯ ಜಿರಲೆಯೊಂದನ್ನು ಬಾತ್ರೂಮಿನಲ್ಲಿ ಸಾಯಿಸಿಬಿಟ್ಟೆ “ನಡಿ ಕಾಫಿ ಕುಡಿಯೋಣ” ಎಂದವನ ಮಾತನ್ನೇ ಹಿಂಬಾಲಿಸಿದೆ ಮಾರ್ಕೆಟ್ಟಿನ ತುಂಬೆಲ್ಲ ಮಾತುಗಳು… ಕೊನೆಯಿಲ್ಲದ ಗುರಿಯೂ ಇಲ್ಲದ ಬರಿದೇ ಮಾತುಗಳ ವಿಧವಿಧ ಅವತಾರದ ಒಂದೊಂದು ಮುಖಕ್ಕೂ ಒಂದೊಂದು ರೂಪ… ಸುತ್ತ ಕಣ್ಣಾಡಿಸಿದೆ… ಮೌನಕ್ಕೆ ಶರಣಾಗಿ ನಿಂತಲ್ಲೇ ಶಬರಿಯಾದೆ!! **********

ಕಾವ್ಯಯಾನ Read Post »

ಕಾವ್ಯಯಾನ

ಗಝಲ್

ಗಝಲ್ ವಿನಿ ಬೆಂಗಳೂರು ಒಲವ ಬಂಧದಲಿ ಮನವು ಉಲ್ಲಾಸದಿ ತೇಲುತಿದೆಯಲ್ಲ ಗೆಳತಿ ಬಾಳ ಪಯಣದಲಿ ಸಂತಸವೆ ತುಂಬುತಿದೆಲ್ಲ ಗೆಳತಿ ಪ್ರಕೃತಿಗೆ ಮತ್ತೆ ಚೈತ್ರ ಮೂಡಿಸಿ ವಸಂತ ನಗುತಿದೆಯಲ್ಲ ನೋಡು ಕವಿ ಮನದಲಿ ಶೃಂಗಾರ ಕಾವ್ಯಕೆ ಮುನ್ನುಡಿ ಬರೆದಿದೆಯಲ್ಲ ಗೆಳತಿ ಮೊದಲ ಮಳೆಗೆ ಹೂಗಳರಲಿ ಸುಗಂಧವನು ಬಿರುತಿದೆಯಲ್ಲ ಇಲ್ಲಿ ಭೃಂಗವದು ಮಕರಂದ ಬಯಸಿ ಹೂಗಳಲಿ ಮಧುವ ಹೀರುತಿದೆಯಲ್ಲ ಗೆಳತಿ ಬೀಸುವ ಗಾಳಿಯಲಿ ಮಾಧುರ್ಯ ತುಂಬಿ ಸೆಳೆಯುತಿದೆಯಲ್ಲ ತಂಪಾದ ಮನದಲಿ ಹೊಸ ಕನಸುಗಳು ಮೂಡುತಿದೆಯಲ್ಲ ಗೆಳತಿ ಕಣ್ಗಳು ತುಂಬಿ ಬಯಕೆಗಳನು ಹೇಳಲಾರದೆ ತವಕದಲಿ ಕಾಯುತಿದೆಯಲ್ಲ ಇನಿಯನಾಗಮನವು ವಿಜಯಳ ಬಾಳಿಗೆ ಬೆಳಕಾಗಿ ಚಿಮ್ಮಿದೆಯಲ್ಲ ಗೆಳತಿ *********

ಗಝಲ್ Read Post »

ಕಾವ್ಯಯಾನ

ಕಾವ್ಯಯಾನ

ಬರಿಗಾಲಿನ ಭಾರತ ಶಿವಶಂಕರ ಸೀಗೆಹಟ್ಟಿ. ಹಸಿವು ಇವರ ಹೊಟ್ಟೆಗಿದೆ ಬಟ್ಟೆ ಜೋಳಿಗೆಗಳು ಇವರ ಹೆಗಲಿಗಿವೆ ಅರಸಿ ಹೊರಟಿದ್ದಾರೆ ಊರ ಹಾದಿ ದಾರಿ ಸಾಗುತ್ತಿಲ್ಲ ದಿನವೂ ಮೂರು ಮೈಲಿ ಕಾಲಿಗೂ ಕಾಲಕ್ಕು ಹೊಂದಾಣಿಕೆ ತಪ್ಪಿ ಹೋಗಿದೆ ನಡೆಯುವವರ ಕಾಲುಗಳು ಬಿಗಿಯುತ ರಕ್ತ ಸುರಿಸುತ್ತಿವೆ ಅಲ್ಲಲ್ಲಿ ಕಂಡು ಕೇಳುವ ಬೂಟುಗಾಲಿನ ಸದ್ದುಗಳು ಗಾಬರಿ ಹುಟ್ಟಿಸುತ್ತಿವೆ ಹಸಿವು ಕಾಣದವರು ಆಹಾರದ ಉಸ್ತುವಾರಿಗಳಾಗಿದ್ದಾರೆ ದೂರದೂರಿಗೆ ಹೊಟ್ಟೆ ಹೊರೆಯಲು ಬಂದವರು ಒಟ್ಟಿಗೆ ನಡೆಯುತ್ತಿದ್ದಾರೆ ಹೊತ್ತು ಹೊತ್ತಿಗೂ ಇಲ್ಲಿ ಹೊಟ್ಟೆ ಸಾಕದವರು ಈಗ ನಿಟ್ಟುಸಿರು ಬಿಟ್ಟಿದ್ದಾರೆ ನಡೆಯುವರಿಗೆ ಕಾಲು ಸೋತು ದೇವರ ಕರೆಯುತ್ತಿದ್ದಾರೆ ಹಿಟ್ಟು ಇರದೆ ಹೊರಟ ಜನ ಹಟ್ಟಿ ಕಡೆಗೆ ಹೊರಟಿದ್ದಾರೆ ಕಟ್ಟಿದ ಕಟ್ಟಡಗಳೆಲ್ಲ ಇವರನ್ನೆ ನೋಡುತಿವೆ ಹಾಕಿದ ಟಾರು ಮಾಡಿದ ರೋಡುಗಳಲ್ಲ ಇವರಿಗಾಗಿ ಕಾಯುತ್ತಿವೆ ಬೀದಿ ಬದಿಯ ಜನರು ಕರಗಿ ಬಡಕಲಾಗಿದ್ದಾರೆ ಬದುಕಿನ ಏರು ಪೇರುಗಳು ಇವರ ಲೆಕ್ಕಕ್ಕೆ ಸಿಗುತಿಲ್ಲ ಹೊಟ್ಟೆ ತುಂಬಿದವರು ಕೂಸಿಗೆ ಕುಲಾಯಿ ಹೊಲಿಸುವ ತಯಾರಿಯಲ್ಲಿದ್ದಾರೆ ಸಾವು ನೋವುಗಳ ನಗಾರಿ ತನ್ನನ್ನೆ ಬಡಿದುಕೊಳ್ಳುತ್ತಿದೆ ಬದುಕಿರುವ ಮನುಷ್ಯರೀಗ ಭೂಮಿಗಿಳಿದ್ದಿದ್ದಾರೆ ಎಲ್ಲಾ ಸಾಂತ್ವನದ ಕೂಗುಗಳು ಮೂಕವಾಗಿವೆ ಇದು ಬರಿಗಾಲಿನ ಭಾರತ ಇಲ್ಲಿ ಬವಣೆಗಳು ಸದಾ ಶಾಶ್ವತ. *********

ಕಾವ್ಯಯಾನ Read Post »

ಇತರೆ

ಇತರೆ

ಸಂಸ್ಕೃತಿ ಉಳಿಸಿ  ಶೈಲಜಾ ಹಾಸನ ಮಕ್ಕಳಿಂದ ಸಂಸ್ಕೃತಿ ಉಳಿಸಿ ಬೆಳೆಸುವ ಪೋಷಕರ ಪಾತ್ರ        ಸಾಂಸ್ಕೃತಿಕವಾಗಿ ಶ್ರೀಮಂತವಾಗಿರೋ ಈ ದೇಶದಲ್ಲಿ  ಅದನ್ನು ಉಳಿಸಿ ಬೆಳೆಸುವ, ತಲೆಮಾರಿನಿಂದ ತಲೆಮಾರಿಗೆ ಅದನ್ನು ವರ್ಗಾಯಿಸುವ ಕಾರ್ಯಗಳು  ಇಂದು ಅಗತ್ಯ ವಾಗಿವೆ. ಇಂತಹ ಕಾರ್ಯಗಳನ್ನು ನಾವು ಮಕ್ಕಳಿಂದಲೇ ಪ್ರಾರಂಭ ಮಾಡುವದು ಸಂಸ್ಕೃತಿ ಯನ್ನು ಉಳಿಸುವ ದೃಷ್ಟಿಯಿಂದ ಹೆಚ್ಚು ಸೂಕ್ತ ಅನಿಸುತ್ತದೆ.ಆದರೆ ಅದು ಹೇಗೆ  ಎಂಬ ಪ್ರಶ್ನೆ ಎಲ್ಲರ ಮನದಲ್ಲೂ ಉದ್ಭವವಾಗುವುದು  ಸಹಜ.       ಮಕ್ಕಳು ತೋಟದಲ್ಲಿ ಅರಳಿ ನಗುತ್ತಿರುವ ಸುಂದರ ಹೂವುಗಳು .ಈ ಹೂಗಳು  ಸದಾ ನಳನಳಿಸುತ್ತಾ ಇರಬೇಕು .ಒಂದು ಪೀಳಿಗೆಯಿಂದ  ಮತ್ತೊಂದು ಪೀಳಿಗೆಗೆ ಸಂಸ್ಕೃತಿ ಯನ್ನು ಹೊತ್ತೊಯ್ಯ ಬೇಕು ಅನ್ನುವುದಾದರೆ   ಆ ಮಕ್ಕಳ ಪೋಷಕರು ಹಾಗೂ ಶಿಕ್ಷಕರು ಅತ್ಯಂತ ಹೆಚ್ಚಿನ ಜವಾಬ್ದಾರಿ ತಗೊಬೇಕಾಗುತ್ತದೆ .ಪೋಷಕರು ಎಲ್ಲಾ ಜವಾಬ್ದಾರಿಯನ್ನು ಶಿಕ್ಷಕರ ಮೇಲೆಯೇ ಹೇರಿ ತಮ್ಮ ಜವಾಬ್ದಾರಿಯನ್ನು ಹಗುರ ಮಾಡಿಕೊಳ್ಳುತ್ತಿದ್ದಾರೆ . ಆದರೆ ಮಗು ಶಿಕ್ಷಕ ಹಾಗೂ ಪೋಷಕರನ್ನು ಅನುಕರಣೆ ಮಾಡುತ್ತವೆ . ಇಲ್ಲಿ ಇಬ್ಬರ ಪಾತ್ರವೂ ಅಪಾರ .            ಒಮ್ಮೆ ಒಬ್ಬಾತ ಸೈಕಲ್ ಅಂಗಡಿಯಲ್ಲಿ ಇರುವ ಸುಂದರ ಸೈಕಲ್‌ಗಳನ್ನು ಕಂಡು ಅಂಗಡಿಯಾತನನ್ನು ಕೇಳುತ್ತಾನೆ . “ಈ ಸೈಕಲ್ ಹೊಡೆಯಲು ಬರುತ್ತವೆ ಯೇ, ನನ್ನ ಮಗ ಈ ಸೈಕಲ್ ಮೇಲೆ ಕುಳಿತು ಸುಲಭವಾಗಿ ಚಲಿಸಬಲ್ಲವೇ” ಎಂದು ಕೇಳುತ್ತಾನೆ . “ಇದು ಉತ್ತಮ ಗುಣಮಟ್ಟದ ಸೈಕಲ್ ಯಾರೂ ಬೇಕಾದರೂ ಇದನ್ನು ಸುಲಭವಾಗಿ ಹೊಡೆಯಬಹುದು, ಯಾವುದೇ ಸಂಶಯವಿಲ್ಲದೆ ಕೊಂಡುಕೊಳ್ಳಿ “ಎಂದು ಹೇಳುತ್ತಾನೆ  ಅಂಗಡಿಯಾತ.        ಅತ್ಯಂತ ಆಸಕ್ತಿಯಿಂದ ಸೋಕಲ್ಕೊಂಡು ಕೊಂಡು ಹೋದ ವ್ಯಕ್ತಿ ಎರಡೇ ದಿನದಲ್ಲಿ ವಾಪಸ್ಸು ಬಂದು “ಏನಯ್ಯ  ಸೈಕಲ ಚೆನ್ನಾಗಿ ಹೊಡಿಬಹುದು ಅಂತ ಹೇಳಿ ಮೋಸ ಮಾಡಿಬಿಟ್ಟೆ . ನನ್ನ ಮಗ ಈ ಸೈಕಲಿನಿಂದ ಕೈಕಾಲು ಮುರಿದುಕೊಂಡಿದ್ದಾನೆ. ಎಂತಹ ಸೈಕಲನ್ನು ಕೊಟ್ಟು ಬಿಟ್ಟೆ. ನಿನ್ನ ಮಾತು ಕೇಳಿ ನಾನು ಕೆಟ್ಟೆ “ಎಂದು ಆ ವ್ಯಕ್ತಿ ಜೋರು ಮಾಡುತ್ತಾನೆ.   ಆಗ ಅಂಗಡಿಯ ಮಾಲಿಕ ” ಅಲ್ಲಾ  ಸ್ವಾಮಿ ನಾನು ಉತ್ತಮವಾದ  ಸೈಕಲನ್ನು ಕೊಟ್ಟಿದ್ದಿನಿ, ಒಳ್ಳೆಯ ಸೈಕಲ್ ಮಾರೋಕೆ ಸಾಧ್ಯವೇ ವಿನಃ ಸೈಕಲ್ ಹೊಡೆಯೋಕೆ ಬೇಕಾದ ಬ್ಯಾಲನ್ಸನ್ನು ಮಾರೋಕೆ ಸಾಧ್ಯ ಎನ್ರಿ. ಮೊದಲು ಸೈಕಲ್ ಬ್ಯಾಲನ್ಸನ್ನು ಕಲಿಸಿ ಕೊಡಿ ಅಂತ ದಬಾಯಿಸಿ ಕಳುಹಿಸಿ ಕೊಡುತ್ತಾನೆ .ಹೀಗೆ ಉತ್ತಮವಾದ ವಾಹನಗಳನ್ನು ಮಾರಬಹುದೇ ವಿನಾಃ ಕಲಿಯುವಿಕೆಗೆ ಬೇಕಾದ ಆಸಕ್ತಿ ಪ್ರಾವಿಣ್ಯತೆಯನ್ನು ಮಾರೋಕೆ ಸಾಧ್ಯವಿಲ್ಲ . ಅದೇ ರೀತಿ ಒಬ್ಬ ಶಿಕ್ಷಕ ಮಗುವಿಗೆ ಉತ್ತಮವಾಗಿ ಬೋಧಿಸ ಬಲ್ಲ . ಕಲಿಕೆಗೆ ಬೇಕಾದ ಎಲ್ಲಾ ಸಹಾಯವನ್ನು ಮಾಡಬಲ್ಲ. ಆದರೆ ಕಲಿಕೆ ಮಾತ್ರ ಮಗುವಿನಿಂದಲೇ ಆಗಬೇಕು , ಆ ಮಗು ಸ್ವತಃ ಕಲಿತಾಗ ಮಾತ್ರ ಅಕ್ಷರ , ಜ್ಞಾನ ವೃದ್ಧಿಯಾಗೋಕೆ ಸಾಧ್ಯ . ಇದನ್ನು ಪೋಷಕರು ಅರ್ಥ ಮಾಡಿಕೊಂಡು ತಮ್ಮ ಜವಾಾರಿಯನ್ನುಕೂಡ ಅರಿಯಬೇಕು .ಸುಂದರವಾಗಿ ಅರಳಿ ನಗುತ್ತಾ ಇರೊ ಹೂವುಗಳು , ಬಾಡೊಕ ಕಾರಣ ಇರುತ್ತೆ , ಗಿಡಕ್ಕೆ ಬೇಕಾದ ನೀರು , ಗೊಬ್ಬರ ಕಡಿಮೆ ಆದರೂ ಗಿಡ ಬಾಗುತ್ತದೆ, ಹೆಚ್ಚು ಆದರೂ ಗಿಡ ಬಾಗುತ್ತದೆ . ಇದಕ್ಕೆ ಕೂಡಬೇಕಾದಷ್ಟು ಪ್ರಮಾಣದ ನೀರು, ಗೊಬ್ಬರ ಕೊಡಬೇಕು . ಈಗಂತು ಎಲ್ಲಾ ಮನೆಗಳಲ್ಲೂ ಒಂದೊ , ಎರಡೋ ಮಕ್ಕಳಿರುತ್ತದೆ . ಮಗು ಕೇಂದ್ರೀಕೃತ ಸಂಸಾರಗಳೇ ಹೆಚ್ಚು . ಮಗುವಿನ ಬಗ್ಗೆ ವಿಪರೀತ ಕಾಳಜಿ, ಪ್ರೀತಿ , ವಾತ್ಸಲ್ಯ . ಅದು ಏನು ಹೇಳುತ್ತೊ ಅದನ್ನು ಕೊಡಿಸಿಬಿಡಬೇಕು.ಅದೆಷ್ಟೆ ದುಡ್ಡಾದ್ರು ಚಿಂತೆ ಇಲ್ಲ . ಅದರಿಂದ ಏನೇ ಹಾನಿಯಾದ್ರೂ ಪರವಾಗಿ ನಮ್ಮ ಮಗು ಬೇಸರ ಮಾಡ್ಕೊಬಾರದು ಅನ್ನೋ ಮನೋಭಾವ , ಇಂದಿನ ಹೆತ್ತವರಲ್ಲಿ ಹೆಚ್ಚು ಕಾಣ್ತಾ ಇದ್ದೇವೆ . ನಮಗಂತೂ ನಾವು ಬಯಸಿದ ಎಲ್ಲವನ್ನು ಈಡೇರಿಸಿ ಕೊಡೋ ಹೆತ್ತವರಿರಲಿಲ್ಲ . ಆಗೆಲ್ಲ ತಮಗೆಷ್ಟು ನಿರಾಶೆ ಆಗ್ತಾ ಇತ್ತು . ಬೇಸರ ಆಗ್ತ ಇತ್ತು . ಅಂತಹ ಬೇಸರ ತಮ್ಮ ಮುದ್ದು ಕಂದಮ್ಮಗಳಿಗಾಗಬಾರದು ಅನ್ನೋ ಆಲೋಚನೆ ಒಂದೆಡೆ ಆದರೆ , ತಾವು ಏನಾಗಬೇಕು ಅಂತ ಅಂದುಕೊಂಡಿದ್ದರೋ , ಅದು ತಮ್ಮ ಮಕ್ಕಳಾದ್ರೂ ಆಗಲಿ ಅನ್ನೋ ಒತ್ತಡ ತರೋದು , ಆ ಮಕ್ಕಳಿಗೆ ಆಸಕ್ತಿ ಇರಲಿ , ಬಿಡಲಿ , ತನ್ನಾಸೆಯನ್ನು ಮಗು ಈಡೇರಿಸಲೇಬೇಕು . ಉದಾಹರಣೆಗೆ ತಾನು ಡಾಕ್ಟರಾಗಲಿಲ್ಲ ಅಂತ ತನ್ನ ಮಗನಾದರೂ ಡಾಕ್ಟರಾಗಲಿ , ಮಗಳು ಇಂಜಿನಿಯರ್ ಆಗಲಿ , ನೃತ್ಯಗಾತಿ ಆಗಲಿ ಅನ್ನೋ ಒತ್ತಡ ಹೇರಿ , ಆ ಮಕ್ಕಳಿಗೆ ಅದರಲ್ಲಿ ಆಸಕ್ತಿ ಇಲ್ಲದಿದ್ದಾಗ ಅವು ಓದಿನಲ್ಲಿ ಬದುಕಿನಲ್ಲಿ ಆಸಕ್ತಿ ಕಳೊಂಡು ಏನೇನೋ ಅನಾಹುತ ಗಳಿಗೆ ಕಾರಣಕರ್ತರಾಗುತ್ತಾರೆ . ಇಂತಹ ಪರಿಸ್ಥಿತಿಯನ್ನು ನಿರ್ಮಾಣ ಮಾಡಬೇಕು . ತಮ್ಮ ಮಕ್ಕಳಿಗೆ ಯಾವುದರಲ್ಲಿ ಆಸಕ್ತಿ ಇದೆ, ಆಸೆ ಇದೆ ಅದನ್ನೆ ಓದಲು ಬಿಡಬೇಕು.ಎಲ್ಲಾ ಮಕ್ಕಳು ಡಾಕ್ಟರ್, ಇಂಜಿನಿಯರುಗಳೇ ಆಗಬೇಕೆ. ಜಾಗತಿಕರಣದಿಂದಾಗಿ ಇಂದು ನಮ್ಮ ದೇಶ ತೆರೆದ ಕೈ ಗಳಿಂದ ವಿದೇಶಿ ಸಂಸ್ಕೃತಿಯನ್ನು ಸ್ವಾಗತಿಸುತಿದೆ. ಇದರ ಪರಿಣಾಮ ಕೂಡ ನತಮ್ಮ ಪುಟಾಣಿಗಳ ಮೇಲೆ ಆಗ್ತಾ ಇದೆ . ಯಾವುದೊ ಪಾನಿಯಾ ಕುಡಿದ ಮಾತ್ರಕ್ಕೆ ತಾನು ಸಚಿನ್ ಅಂತೆ ದೊಡ್ಡ ಕ್ರಿಕೆಟಿಗವಾಗಬಹುದು ಅನ್ನೋ ಕನಸುಗಳನ್ನು ಇಂದಿನ ಟಿವಿ ಸಂಸ್ಕೃತಿ ಜಾಹೀರಾತು ನಮ್ಮ ಕಂದಮ್ಮಗಳಿಗೆ ಮಾಡ್ತಾ ಇದೆ. ರ ಯಾವುದೋ ಕ್ರೀಮ್ ಹಚ್ಚಿದರೆ ತಾನು ಐಶ್ವರ್ಯ ರೈ ಯಂತೆ ಸುಂದರ ಹುಡುಗಿಯಾಗ ಬಹುದು ಅನ್ನೋ ಕಲ್ಪನೆ ಹುಡುಗಿಯರಿಗೆ ಇರುತ್ತೆ.ಇಂತಹ ಪೊಳ್ಳು ಕನಸುಗಳಿಗೆ ನಾವು ಮಕ್ಕಳನ್ನು ಬಿಟ್ಟು ಕೊಡುತ್ತಾ ಇದ್ದೆವೆ. ಮಕ್ಕಳು ಆಸೆ ಪಟ್ಟು ಕುಡಿಯುವ ತಂಪು ಪಾನೀಯಗಳು, ಟಾಯ್ಲೆಟ್ ತೊಳೆಯುವ ಕ್ರಿಮಿ ನಾಶಕಗಳಿಗೆ ಸಮನಾಗಿರುತ್ತವೆ ಅನ್ನೋ ಸತ್ಯವನ್ನು ನಾವೇಕೆ ಮಕ್ಕಳಿಗೆ ತಿಳಿಸೊಲ್ಲ. ಸದಾ ಕುಡಿಯುವ ಆ ಪಾನೀಯಗಳಿಂದ ದಂತಗಳು ಕರಗಿ ಹೋಗುತ್ತವೆ ಅನ್ನೋ ನೈಜ ಚಿತ್ರಣಗಳನ್ನೆಕೆ ನಾವು ಮಕ್ಕಳಿಗೆ ಕೊಡುತ್ತಿಲ್ಲ . ಮಕ್ಕಳು ಕೇಳಿದ ಕೂಡಲೇ ಪಾನೀಗಳನ್ನು ಕೊಡಿಸಿಬಿಡುತ್ತೇವೆ . ಇವತ್ತು ಎಷ್ಟೋ ಮಕ್ಕಳಿಗೆ ಎಳನೀರು ಬೇಡದ ವಸ್ತು. ಮಜ್ಜಿಗೆ ಬೇಕಾಗಿಯೇ ಇಲ್ಲಾ ಮಕ್ಕಳಿಗೆಲ್ಲಾ ಟಿ ವಿಯಲ್ಲಿ ಬರುವ ಸಚಿನ್ ಕುಡಿಯುವ, ಐಶ್ವರ್ಯ ಋತ್ವಿಕ್ ರೋಷನ್ ಕುಡಿಯುವ ಪಾನೀಯಗಳೇ ಬೇಕು .ಇಂಥ ಹವ್ಯಾಸಗಳನ್ನು ಬೆಳಿಸುತ್ತಾ ನಾವು ವಿದೇಶಿ ಕಂಪನಿಗಳಿಗೆ ಮಣೆ ಹಾಕುತ್ತಾ ಸ್ವದೇಶಿ ಮೂಲಕ್ಕೆ ಕಂಠಕಪ್ರಾಯರಾಗಿ , ರೈತನ ಆತ್ಮಹತ್ಯೆಗೆ ಪರೋಕ್ಷವಾಗಿ ಕಾರಣವಾಗುತ್ತಾ ಇದ್ದೇವೆ . ಬೆಳಿಗ್ಗೆ ಎದ್ದ ಕೂಡಲೇ ಮಕ್ಕಳಿಗೆ ಕಾರನ್ ಪ್ಲೇಕ್ಸ್ ಬೇಕು. ರೊಟ್ಟಿ ಬೇಡ , ದೊಸೆ ಬೇಡ , ಫಿಜ್ಜಾ ಬೇಕು . ನಾವು ಕೂಡ ಯಾವುದೋ ಆಮಿಷಕ್ಕೆ ಬಲಿ ಬಿದ್ದು ಮಕ್ಕಳಿಗೆ ತಮ್ಮತನವನ್ನು ಬೆಳೆಸುವಲ್ಲಿ ,ಸ್ವದೇಶದ ಪ್ರೇಮ ಸಂಸ್ಕೃತಿಯಲ್ಲಿನ ಆಸಕ್ತಿಯನ್ನು ತುಂಬುವಲ್ಲಿ ಹಿಂಜರಿಯುತ್ತಿದ್ದೇವೆ .ಈಗಲಾದರೂ ನಾವು ಬದಲಾಗಬೇಕು . ವಿದೇಶಿಯರಿಗೆ ನಮ್ಮ ಸಂಸ್ಕೃತಿಯ ಆಸಕ್ತಿ ಬೆಳೆಯುತ್ತದೆ . ಅವರು ಆಸೆಯಿಂದ ಯೋಗವನ್ನು ಕಲಿಯುತ್ತಿದ್ದಾರೆ . ನಮ್ಮ ಆಯುರ್ವೇದಿಕವನ್ನು ಆಸಕ್ತಿಯಿಂದ ನೋಡ್ತಾ ಇದಾರೆ . ನಮ್ಮ ಭರತನಾಟ ಯಕ್ಷಗಾನ , ಆವರಿಗೂ ಪ್ರಿಯ ಅನಿಸುತ್ತದೆ . ಆದರೆ ಇದ್ಯಾವುದೂ ನಮಗೆ ಬೇಡವಾಗ್ತಾ ಇದೆ .ಇಂದಿನ ಮಕ್ಕಳಿಗೆ ಶಿವರಾಮ ಕಾರಂತ ಯಾರು ಅಂತ ಗೊತ್ತಿಲ್ಲ .ಬೇಂದ್ರೆಯವರಿಗೆ ಯಾವ ಪ್ರಶಸ್ತಿ ಬಂತು ಆನೋದು ತಿಳಿದಿಲ್ಲ. ಸಾಹಿತ್ಯದ ಯಾವ ಕೃತಿ ಇದೆ ಅಂತಲೇ ಗೊತ್ತಿಲ್ಲ . ಎಷ್ಟೋ ಮಕ್ಕಳಿಗೆ ಕಥೆ ಅಂದ್ರನೇ ಗೊತ್ತಿಲ್ಲ ಕವನ ಅಂದ್ರೆ ತಿಳಿದಿಲ್ಲ .ಆದ್ರೆ ಕಾರ್ಟೂನ್ ಅಂದರೆ ಬಹಳ ಇಷ್ಟ. ಈ ಪುಟಾಣಿಗಳಿಗೆ ಯಾಕೆ ಹೀಗಾಗುತ್ತಿದೆ. ನಾವ್ಯಾಕೆ ಸಾಹಿತ್ಯಕ ವಾತಾವರಣವನ್ನು ಮಕ್ಕಳಿಗೆ ಕೊಡ್ತಾ ಇಲ್ಲ.ದೂರದರ್ಶನದ ವ್ಯಾಮೋಹದಲ್ಲಿ ಮುಳುಗಿದ ಮಕ್ಕಳನ್ನು ಸೃಜನಾತ್ಮಕತೆಗೆ ಯಾಕೆ ನಾವು ಎಳೆಯುತ್ತಾ ಇಲ್ಲಾ .ಈ ಪುಟಾಣಿಗಳ ಸಾಹಿತ್ಯದ ವಾತಾವರಣ ಸೃಷ್ಟಿ ಮಾಡಿ , ಅವರಿಗೆ ಸಾಹಿತ್ಯದ ಕೃತಿಗಳನ್ನು ಓದುವಲ್ಲಿ ಆಸಕ್ತಿ ಬೆಳೆಸಿ , ಕವಿತೆ ಎಂದರೇನು , ಅದನ್ನು ಹೇಗೆ ಬರೆಯಬಹುದು ಅನ್ನೋ ತಿಳಿವಳಿಕೆ ಕೊಟ್ಟರೆ ,ಈ ಮಕ್ಕಳಿಂದ ಒಬ್ಬ ಕಾರಂತ, ಒಬ್ಬ ಭೈರಪ್ಪ , ಒಬ್ಬ ಅನುಪಮಾ ನಿರಂಜನ , ಒಬ್ಬ ಬೇಂದ್ರೆಯವರನ್ನು ಸೃಷ್ಟಿಸೋಕೆ ಸಾಧ್ಯ.ನಮ್ಮ ನಾಡಿನ ಬಗ್ಗೆ , ಸಂಸ್ಕೃತಿಯ ಬಗ್ಗೆ ಮಕ್ಕಳಿಗೆ ತಿಳಿಸಿ,ಗೌರವ ಬೆಳೆಸಿಕೊಳ್ಳುವಂತೆ ಮಾಡುವ ಜವಾಬ್ದಾರಿ ಶಿಕ್ಷಕರ ಮತ್ತು ಪೋಷಕರ ಮೇಲಿದೆ.ಬದುಕಿನ ಮೌಲ್ಯಗಳು, ರೀತಿ ನೀತಿಗಳು, ಪರಂಪರೆ , ಆಚಾರ ವಿಚಾರಗಳು , ನಾಡ ಹಬ್ಬ . ರಾಷ್ಟ್ರೀಯ ಹಬ್ಬಗಳು , ಶಿಲ್ಪಕಲೆ ಮುಂತಾದ ವಿಚಾರಗಳನ್ನು ಮಕ್ಕಳ ಮನದಲ್ಲಿ ಬಿಂಬಿಸುತ್ತ ಬಂದಲ್ಲಿ ಸಂಸ್ಕೃತಿ ಯನ್ನು ಉಳಿಸಿ ಬೆಳೆಸಲು ಸಾಧ್ಯ . ********************************

ಇತರೆ Read Post »

ಕಾವ್ಯಯಾನ

ಕಾವ್ಯಯಾನ

ನನ್ನ ದನಿ ವೀಣಾ ನಿರಂಜನ ‘ನಿನ್ನನ್ನು ಬಂಧಿಸಲು ಆಜ್ಞೆಯಾಗಿದೆ. ನೀನು ಯಾರು?’ ಕೇಳಿದರವರು ‘ನಾನು ಕವಿತೆ’ ಎಂದೆ. ಅವರೆಂದರು – ‘ಹಾಗಾದರೆ ನಿನ್ನ ನಾಲಿಗೆ ಸೀಳಬೇಕು.’ ನಾನು ತಣ್ಣಗೆ ‘ಉಸಿರು’ ಎಂದೆ. ಅವರು ಮತ್ತೆ ನಿನ್ನ ಕತ್ತು ಹಿಸುಕಬೇಕು’ ಎಂದರು ನನ್ನುಸಿರು ಗಾಳಿಯಲ್ಲಿ ಬೆರೆತು ಹೋಗಿದೆ’ ಎಂದೆ! ಅವರೀಗ ಗಾಳಿಯ ಜೊತೆ ಗುದ್ದಾಡುತ್ತಿದ್ದಾರೆ !! ಎಲ್ಲೋ ದೂರದಲ್ಲಿ ಯಾರೋ ಅಳುವ ದನಿ ನಾನು ತಟ್ಟಿ ಮಲಗಿಸುತ್ತಿದ್ದೇನೆ ನನ್ನ ಮಗುವನ್ನು ಎದೆಯ ಬೇಗುದಿಗೆ ಸಾಂತ್ವನ ಹೇಳಬೇಕಿತ್ತಲ್ಲ! ** ನಾನು ಮೌನಿಯಾಗಿದ್ದೆ. ಅವರು ನನ್ನನ್ನು ಹೇಡಿ ಎಂದರು ! ನಾನು ಮಾತಾಡ ತೊಡಗಿದೆ ಈಗ ಅವರು ನನ್ನನ್ನು ದ್ರೋಹಿ ಎನ್ನುತ್ತಿದ್ದಾರೆ !! ವೀಣಾ ನಿರಂಜನ

ಕಾವ್ಯಯಾನ Read Post »

You cannot copy content of this page

Scroll to Top