ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕಾರ್ಮಿಕ ದಿನದ ವಿಶೇಷ-ಕವಿತೆ

ಕವಿತೆ ಕಾರ್ಮಿಕರು ನಾವು ಡಾ.ಪ್ರಸನ್ನ ಹೆಗಡೆ ಕಾರ್ಮಿಕರು ನಾವು ಕಾರ್ಮಿಕರು ನಾವು ಯಂತ್ರದ ವೀಣೆಯ ತಂತಿಯ ಮೀಟುವ ವೈಣಿಕರು ನಾವು ಕಾರ್ಮಿಕರು ನಾವು ಆರ್ಥಿಕ ದೋಣಿಯ ಚಂದದಿ ನಡೆಸುವ ನಾವಿಕರು ನಾವು ಕಾರ್ಮಿಕರು ನಾವು ಒಡೆಯನ ಕನಸಿನ ಬೀಜವ ಬಿತ್ತುವ ಜೀವಿಗಳು ನಾವು ಕಾರ್ಮಿಕರು ನಾವು ಹಗಲಿರುಳೆನ್ನದೆ ನಿಲ್ಲದೆ ನಡೆಯುವ ಕಾಲನ ಕಾಲುಗಳು ನಾವು ಕಾರ್ಮಿಕರು ನಾವು ಮಳೆಬಿಸಿಲೆನ್ನದೆ ಕಾರಣ ಒಡ್ಡದೆ ದುಡಿಯುವ ಜನ ನಾವು ಕಾರ್ಮಿಕರು ನಾವು ಗಣಿಯೊಳಗಿಳಿದು ಕುಲುಮೆಯೊಳ್ಬೆಂದು ಹೊನ್ನಾಗುವ ಜನ ನಾವು ಕಾರ್ಮಿಕರು ನಾವು ಹೊಗೆಯಂಗಳದೊಳಗೆ ಹಗೆಯನು ಎಣಿಸದೆ ಹೂ ನಗೆ ಬೀರುವ ಜನ ನಾವು *********

ಕಾರ್ಮಿಕ ದಿನದ ವಿಶೇಷ-ಕವಿತೆ Read Post »

ಕಾವ್ಯಯಾನ

ಕಾವ್ಯಯಾನ

ಸುರಿಮಳೆ ವೀಣಾ ರಮೇಶ್ ಧೋ ಎಂದಿದೆ ನಗುಮಳೆ ಮನಸಿನ ಸುಂದರ ನಗರಿಯಲಿ ನಿನ್ನ ನಸುನಗುವಿನ ಸಿಹಿ ಸಿಂಚನದ ಕಳೆ ಬಿಸಿಯೇರಿದ ವಿರಹದ ಕಾವಿಗೆ ಒಂದಷ್ಟು ತಂಪು ನೀಡಿದೆ,,ಎಡಬಿಡದೆ ಸುರಿವ ನಿನ್ನ ನಗುವಿನ ನರ್ತನದಲಿ ಮನದ ಇಳೆ ನನ್ನ ಮೈ ಮನಗಳು ಒದ್ದೆಯಾಗಿವೆ ತುಸು ಮೆಲ್ಲ ಬೀಸಿದೆ ನೆನಪಿನ ತಂಗಾಳಿ ಕತ್ತಲೆಯ ಮೌನವಷ್ಟೇ ಸೀಳಿದೆ ತಬ್ಬಿ ಈ ಸುಳಿಗಾಳಿ ಮತ್ತದೇ ಸಿಹಿ ಹನಿಗಳು ಆಳಕೆ ಸುರಿದಿದೆ, ನಾ ತೇಲಿ ಹೋಗುವಷ್ಟು ಹರ್ಷ ಧಾರೆಯಲಿ ನೆನೆಯದಂತೆ ಬಚ್ಚಿಟ್ಟು ಕೊಂಡಿರುವೆ ನೆನಪುಗಳು ನನ್ನೊಳಗೆ ತೋಯದಂತೆ ********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಸ್ವರ ಮಾಧುರ್ಯ ಬಿ ಅರುಣ್ ಕುಮಾರ್ ಹೃದಯ ವೀಣೆ ನಾದ ಅಲೆ ಅಲೆಯಾಗಿ ಮನ ಕಡಲಿಗೆ ತಾಕುತಿದೆ ನೋಡು ಒಳಗೆ ಒಮ್ಮೆ ಕಡಲತೀರ ತೆರೆ ತಾಕಲಾಟ ಭಾವಕೋಶ ಪತಂಗದಾಟ ಬಾನುಲಿ ದಿಗಂತ ಮುಟ್ಟಲು ಹಕ್ಕಿಗಳುಲಿಯುತ ಪುಟ ನೆಗೆತ ಪಂಚ ಇಂದ್ರಿಯ ನಿಗ್ರಹಿಸಿ ಒಂದೊಮ್ಮೆ ಕೇಳಿ ನೋಡು ಕರ್ಣಾನಂದ ಉಕ್ಕಿ ಹರಿದು ಆನಂದಬಾಷ್ಪ ಹೊಮ್ಮುವುದು ಒಲವಿನಾಲಿಂಗನ ಮಿಲನ ನಿಸರ್ಗ ಸ್ತನಪಾನ ಚೈತನ್ಯ ಏಳು ಸಾಗರಗಳ ಎಲ್ಲೆ ಮೀರಿ ಕೋಗಿಲೆ ಕಳಕಂಠ ಬೆರೆಸಿದೆ ನಾಕು ತಂತಿಯಲಿ ಹುಟ್ಟಿದ ಸಪ್ತ ಸ್ವರಗಳ ಮಾಧುರ್ಯ ಮಧುರ ರಾಗ ಸಂಭವಿಸಿ ಅಂತರಂಗ ಗಂಗೆ ಹರಿದಿದೆ ಜಗದ ಜಂಜಾಟ ಜರಿದು ಬಾಳಿನ ಸಂಕಟ ಹಿಸುಕಿ ನೋಡು ಒಳಗೆ ಒಮ್ಮೆ ನಾದಮಯ ದೇಹ ದೇಗುಲ. ********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಗಝಲ್ ತೇಜಾವತಿ ಹೆಚ್.ಡಿ. ಮೌನದ ಮಾತು ಅರ್ಥವಾಯಿತು ನಿನ್ನಿಂದ ಕಾಣದ ಕನಸು ಗೋಚರವಾಯಿತು ನಿನ್ನಿಂದ ಹದವಾದ ಭೂಮಿ ಬಂಜರಾಗಿತ್ತು ನೀನಿಲ್ಲದೆ ಉತ್ತುವ ಕಾರ್ಯ ಅರ್ಥವಾಯಿತು ನಿನ್ನಿಂದ ಪ್ರೀತಿ ಹೃದಯದಿಂದ ಒಸರುತ್ತಿತ್ತು ರಸಜೇನಾಗಿ ಸವಿಯ ಸವಿವುದು ಶುರುವಾಯಿತು ನಿನ್ನಿಂದ ನೆರಳೂ ಹಿಂಬಾಲಿಸಲು ಅದುರುತ್ತಿತ್ತು ನನ್ನನ್ನು ಕಣ್ಣಲ್ಲಿ ಬೆಳಕು ಒಮ್ಮೆಲೇ ಪ್ರಜ್ವಲಿಸಿತು ನಿನ್ನಿಂದ ಕಾಯಕ್ಕೂ ಆತ್ಮಕ್ಕೂ ಹೊಂದಿಕೆ ಇರಲಿಲ್ಲ ಎನ್ನಲ್ಲಿ ಮನದೊಳಗೆ ತೇಜಸ್ಸಿರುವುದು ತಿಳಿಯಿತು ನಿನ್ನಿಂದ *******

ಕಾವ್ಯಯಾನ Read Post »

ಅಂಕಣ ಸಂಗಾತಿ

ಮುಚ್ಚಿದ ಬಾಗಿಲು-ತೆರೆಯದ ಕಿಟಕಿ

ಮಾಲತಿಹೆಗಡೆಯವರ ಹೊಸ ಅಂಕಣ, ಪ್ರತಿನಿತ್ಯ ಪ್ರಕಟವಾಗಲಿದೆ ಮುಚ್ಚಿದ ಬಾಗಿಲು-ತೆರೆಯದ ಕಿಟಕಿ ಭಾಗ-10 ಆತ್ಮಾವಲೋಕನಕ್ಕಿದು ಸಕಾಲ.. ಉಳಿದೆಲ್ಲ ಕ್ಷೇತ್ರಗಳಲ್ಲಿಯೂ ದುಡಿಮೆ ನಿಂತರೂ ಕೃಷಿಕ್ಷೇತ್ರದಲ್ಲಿ ದುಡಿಮೆ ನಿಂತಿಲ್ಲ. ಅದನ್ನು ನಿಲ್ಲಿಸುವಂತಿರುವುದೂ ಇಲ್ಲ.ದಾಸ್ತಾನು ಮಾಡಬಹುದಾದ ಬೆಳೆ ಬೆಳೆಯುವ ರೈತರು ಈಗ ಅಷ್ಟಾಗಿ ಚಿಂತೆ ಮಾಡುತ್ತಿಲ್ಲ. ಈ ಬಿಡುವನ್ನು ಸ್ವಲ್ಪ ರಜೆಮೂಡಿನಲ್ಲಿ ಅನುಭವಿಸುತ್ತಿದ್ದಾರೆ. ತೋಟದ ಕೆಲಸವನ್ನು ನಿರ್ವ ಹಿಸುತ್ತಿದ್ದಾರೆ. ಆದರೆ ತರಕಾರಿ ಹೂವು, ಹಣ್ಣು ಬೆಳೆದವರು ಸಂಕಷ್ಟಕ್ಕೆ ಸಿಲುಕಿದ್ದಾರೆ ಅಲ್ಪಾವಧಿಯಲ್ಲಿ ಬರುವ ಬೆಳೆಗೆ ಬೇಸಿಗೆಯಲ್ಲಿ ಉತ್ತಮ ಧಾರಣೆ ದೊರೆಯುತ್ತಿತ್ತು ( ಜಾತ್ರೆ ,ತೇರು ಸಮಾರಂಭಗಳು ಈ ಸಮಯದಲ್ಲಿ ನಡೆಯುತ್ತಿದ್ದವು) ಲಾಕ್ ಡೌನ್ ಅವರ ಎಲ್ಲ ಲೆಕ್ಕಾಚಾರವನ್ನು ತಲೆಕೆಳಗಾಗಿಸಿದೆ. ಬಳಕೆದಾರ ರಿಗೆ ಕೊರತೆಯಾಗದಷ್ಟು ಹಣ್ಣು ತರಕಾರಿಗಳು ಮಾರುಕಟ್ಟೆಗೆ ಬರುತ್ತಿವೆ. ಆದರೆ ಅಗ್ಗದ ಬೆಲೆಯಲ್ಲಿಯೇ ದೊರಕುತ್ತಿರುವ ತರಕಾರಿ ಹಣ್ಣುಗಳನ್ನು ಕೊಳ್ಳುವಾಗ ಬೆಳೆದವರಿಗೆ ಸಿಕ್ಕುವುದೆಷ್ಟು ಎಂಬ ಪ್ರಶ್ನೆ ಪ್ರಜ್ಞಾವಂತರ ಮನದಲ್ಲಿ ಏಳುತ್ತಿದೆ. ಕೆಲವು ಧೈರ್ಯಸ್ಥ ರೈತರು ತಾವು ಬೆಳೆದ ಹಣ್ಣು ತರಕಾರಿಗಳನ್ನು ವಿಡಿಯೋ ಮಾಡಿ ಆನ್ಲೈನ್ ಮೂಲಕವೇ ಮಾರಿ ಲಾಭಗಳಿಸಿಕೊಂಡರೆ ಕೆಲವು ರೈತರು ವಾಹನಗಳಲ್ಲಿ ಹಣ್ಣು ತರಕಾರಿ ತುಂಬಿಕೊಂಡು ಮಾರುತ್ತಿದ್ದಾರೆ. ಕೆಲವರು ಬೆಳೆ ವಿನಿಮಯದ ಮೂಲಕ ಸಮಸ್ಯೆ ಗೆ ಪರಿಹಾರ ಹುಡುಕಲೆತ್ನಿಸುತ್ತಿದ್ದಾರೆ. ಹಲವರು ಹತಾಶೆಯಿಂದ ಬೆಳೆದ ಬೆಳೆಯನ್ನು ಬುಲ್ಡೊಜರ್ ಹಚ್ಚಿ ನೆಲಸಮ ಮಾಡುತ್ತಿದ್ದಾರೆ. ಈಗ ಕೃಷಿಕರು ಆತ್ಮ ವಿಮರ್ಶೆ ಮಾಡಿಕೊಳ್ಳಲು ಸಕಾಲ. ಈಗ ಬೆಳೆದ ಒಂದು ಬೆಳೆಗೆ ಸೂಕ್ತ ಬೆಲೆ ದೊರೆಯದಿದ್ದರೂ ಮತ್ತೆ ಬೆಳೆಯಲು ಬೇಕಾದ ಭೂಮಿ ನಿಮ್ಮ ಬಳಿ ಇದ್ದೇ ಇದೆ.( ನಿರುದ್ಯೋಗದ ಭೀತಿ ಇಲ್ಲ) ನಿಮ್ಮ ಊರಿನ ಹವಾಮಾನಕ್ಕೆ ಸೂಕ್ತವಾದ, ಲಭ್ಯವಿದ್ದ ನೀರು ಗೊಬ್ಬರದಲ್ಲಿ ಬೆಳೆಯಬಹುದಾದ ಬೆಳೆಯನ್ನು ಬೆಳೆಯಲು ವಿಚಾರ ಮಾಡಿ.ಅದಕ್ಕೆ ಸ್ಥಳೀಯವಾದ ಮಾರುಕಟ್ಟೆಯೂ ಇದ್ದರೆ ಅನುಕೂಲ. ಇರುವ ಜಮೀನಿನಲ್ಲಿ ಆಹಾರ ಧಾನ್ಯ ತೋಟಗಾರಿಕೆ ಬೆಳೆ, ವಾಣಿಜ್ಯ ಬೆಳೆ… ಹೀಗೆ ಎಲ್ಲವುಗಳನ್ನೂ ಬೆಳೆಯಲೆತ್ನಿಸಿ. ಒಂದು ಬೆಳೆ ಕೈಕೊಟ್ಟರೆ ಇನ್ನೊಂದು ಬೆಳೆ ಕೈಹಿಡಿಯಬಹುದು. ಪ್ರತಿ ಊರಿನಲ್ಲಿರುವ ರೈತರು ಬಗ್ಗಟ್ಟಾಗಿ ಯಾರ ಹೊಲದಲ್ಲಿ ಏನೇನು ಬೆಳೆದರೆ ಒಟ್ಟಾಗಿ ಮಾರುಕಟ್ಟೆ ಹುಡುಕಬಹುದು ಎನ್ನುವುದನ್ನು ವಿಚಾರ ಮಾಡಿ. ಪ್ರತಿ ಬೆಳೆಯನ್ನು ಉತ್ತಮ ಬೆಳೆ ಬರುವವರೆಗೆ ಸಂಸ್ಕರಿಸಿ ದಾಸ್ತಾನು ಇಡುವುದು ಹೇಗೆ, ಮೌಲ್ಯವರ್ಧನೆ ಮಾಡುವುದು ಹೇಗೆ? ಮಧ್ಯವರ್ತಿಗಳ ಕಾಟವಿಲ್ಲದೇ ಬೆಳೆದ ಬೆಳೆಯನ್ನು ಗ್ರಾಹಕರಿಗೆ ತಲುಪಿಸುವುದು ಹೇಗೆ? ಎಂಬುದನ್ನು ಊರ ಜನರು ಒಟ್ಟಾಗಿ ವಿಚಾರ ಮಾಡಿ ಉತ್ತರ ಕಂಡುಕೊಳ್ಳಬೇಕಿದೆ.. ಬೆಳೆ ಬೆಳೆಯಲು ಖರ್ಚು ಕಡಿಮೆ ಮಾಡಿಕೊಂಡರೆ ಬಂದಿದ್ದೆಲ್ಲವೂ ಲಾಭವೇ ಎನ್ನುವ ರೈತರನ್ನು ನಾಳೆ ಪರಿಚಯಿಸುತ್ತೇನೆ… ಮುಂದುವರಿಯುವುದು. ******** ಮಾಲತಿ ಹೆಗಡೆ

ಮುಚ್ಚಿದ ಬಾಗಿಲು-ತೆರೆಯದ ಕಿಟಕಿ Read Post »

ಕಾವ್ಯಯಾನ

ಕಾವ್ಯಯಾನ

ನನ್ನೂರಿನಲ್ಲಿ ಎಸ್.ಕಲಾಲ್ ನೀ ಬರಲೆಂದೆ ಮರುಭೂಮಿ ಹಸಿರಾಗಿದೆ ನನ್ನೂರಿನಲ್ಲಿ.. ನೀ ನೋಡಲೆಂದೆ ಕಲ್ಲು-ಕಗ್ಗಲ್ಲು ಶಿಲೆಯಾಗಿದೆ ನನ್ನೂರಿನಲ್ಲಿ. ಪಾಳು ಮಸಣದ ಮಲ್ಲಿಗೆಯರಳಿ ಪಾವನವಾಗಿದೆ ನಿನ್ನ ಮುಡಿ ಸೇರಲೆಂದೆ ನನ್ನೂರಿನಲ್ಲಿ.. ಇತಿಹಾಸದ ರಾಜ-ಮಹಾರಾಜರು ಮೆರೆದ ನೆಲ ನಿನ್ನ ಹೆಜ್ಜೆಗೆ ಕಾಯುತ್ತಿದೆ ನನ್ನೂರಿನಲ್ಲಿ.. ಆ ಆಗಸದ ಚಂದಿರನನ್ನು ಗಲ್ಲಿಗೆರಿಸಿದ್ದೇನೆ ನಿನ್ನ ಕದಿಯದಿರಲೆಂದು ನನ್ನೂರಿನಲ್ಲಿ.. ನನ್ನ ಸಾವಿರ ಕನಸಿನ ಹೆಬ್ಬಾಗಿಲು ನೆಟ್ಟಿದ್ದೇನೆ ಬಲಗಾಲಿಟ್ಟು ಬಂದುಬಿಡು ನನ್ನೂರಿನಲ್ಲಿ.. ನೀ ಬರುವ ಹಾದಿಯ ಕಾದು ಕಾದು ಬೀದಿಯಲ್ಲಿ ಹೆಣವಾಗಿವೆ ಮೈಲುಗಲ್ಲುಗಳು ನನ್ನೂರಿನಲ್ಲಿ.. ನಿನ್ನ ಗೆಜ್ಜೆಯ ನಾದವ ಕೇಳಲು ಸಿಟ್ಟಾಗಿ ಮಳೆಯೆ ಸುರಿಸಿಲ್ಲ ಮೋಡ ನನ್ನೂರಿನಲ್ಲಿ.. ಶತ-ಶತಮಾನದ ಶಾಸನ ತಾಮ್ರಪಟಗಳು ಕೂಗುತ್ತಿವೆ ನಿನ್ನ ಹೆಸರು ನನ್ನೂರಿನಲ್ಲಿ.. ತಾಯಿಯಿಲ್ಲದ ಕಂದಮ್ಮಗಳು ಹಸಿದಿವೆಯಂತೆ ನಿನ್ನ ಕೈ ತುತ್ತಿಗೆ ನನ್ನೂರಿನಲ್ಲಿ.. ಮತ್ತೆ ಮರಳಿ ಮರುಗಿ ನಾ ಸಾಯಲಾರೆ ನನಗಾಗಿ ಅಳುವವರಿಲ್ಲ ನನ್ನೂರಿನಲ್ಲಿ.. ಮುರಿದ ಜೋಪಡಿಯ ಜಗುಲಿಯಲಿ ಒಲವಿನ ದೇವತೆಯಾಗಿ ನಿಲ್ಲು ನನ್ನೂರಿನಲ್ಲಿ.. **********

ಕಾವ್ಯಯಾನ Read Post »

ಅಂಕಣ ಸಂಗಾತಿ

ಗಝಲ್ ಲೋಕ

ಗಝಲ್ ಲೋಕ’ ಬಸವರಾಜ್ ಕಾಸೆಯವರ ಅಂಕಣ. ಗಝಲ್ ಪ್ರಕಾರದ ಬಗ್ಗೆ ಸಂಪೂರ್ಣ ಮಾಹಿತಿನೀಡಬಲ್ಲ ಮತ್ತು ಹಲವರಿಗೆ ತಿಳಿದಿರದ ಗಝಲ್ ರಚನೆಯ ಹಿಂದಿರುವ ನಿಯಮಗಳನ್ನುತಿಳಿಸುವಪ್ರಯತ್ನ ಇಲ್ಲಿದೆ ಗಝಲ್ ಲೋಕ ಐದನೇ ಅದ್ಯಾಯ ಮನಸೂರೆಗೊಳ್ಳುವ ಗಜಲ್ ಗಜಲ್ ಗದ್ಯ ಮಿಶ್ರಿತ ಪದ್ಯವೇ ಗಜಲ್ ಗದ್ಯವೇ, ಪದ್ಯವೇ ಅಥವಾ ಗದ್ಯ ಮಿಶ್ರಿತ ಪದ್ಯವೇ ಎಂಬುದು ಇತ್ತೀಚಿನ ಕನ್ನಡ ಗಜಲಗಳನ್ನು ನೋಡಿದಾಗ ಸಾಕಷ್ಟು ಗೊಂದಲವಾಗುತ್ತದೆ. ಯಾಕೆಂದರೆ ಹೆಚ್ಚಿನ ಗಜಲಗಳು ಗದ್ಯ ಮಿಶ್ರಿತ ಪದ್ಯಗಳಾಗಿ ಕಂಡು ಬರುತ್ತವೆ. ಆದರೆ ಮೂಲತಃ ಗಜಲ್ ಎನ್ನುವುದು ಲಯಬದ್ಧವಾಗಿದ್ದೂ ಗೇಯತೆಯನ್ನು ಹೊಂದಿರಬೇಕು… ಪ್ರತಿಮೆ, ರೂಪಕ, ಉಪಮಾನ, ಉಪಮೇಯ, ಅಲಂಕಾರ ಮೊದಲಾದ ಕಾವ್ಯಾತ್ಮಕ ಅಂಶಗಳನ್ನು ಅತ್ಯಂತ ಕಲಾತ್ಮಕವಾಗಿ ದುಡಿಸಿಕೊಂಡು ಸುಮಧುರ ಪದಗಳೊಂದಿಗೆ ಛಂದೋಬದ್ದವಾಗಿ ಕಟ್ಟಿ ಕೊಟ್ಟು ಸುಲಭವಾಗಿ ಹಾಡಲು ಬರುವಂತಿರಬೇಕು. ಆದರೆ ಮುಖ್ಯವಾದ ಗಜಲನ ಈ ಲಕ್ಷಣವನ್ನೇ ಮರೆತಿರುವ ಕನ್ನಡದ ಖ್ಯಾತ ಗಜಲಕಾರರು ಹೆಸರು ಬಂದಂತೆ ತಾವು ರಚಿಸಿದ್ದೆಲ್ಲಾ ಗಜಲ್ ಎನ್ನತೊಡಗುತ್ತಾರೆ. ಅವರನ್ನು ಅನುಸರಿಸುವ ಉದಯೋನ್ಮುಖ ಗಜಲಕಾರರು ಇನ್ನೂ ಕೆಳ ಹಂತಕ್ಕೆ ಹೋಗಿ ಅತ್ಯಂತ ಕಳಾಹೀನ ಬರಹಗಳನ್ನು ಕೊಟ್ಟು ಬಿಡುತ್ತಾರೆ.. ಅದರಲ್ಲಿ ಸಾರವೂ ಇರುವುದಿಲ್ಲ ಮತ್ತು ಸತ್ವವೂ ಇರುವುದಿಲ್ಲ. ಇದರಿಂದ ಕಳೆಗುಂದುವ ಗಜಲ್ ಹಂತಹಂತವಾಗಿ ಸೊರಗಿ ಮೂಲ ಲಕ್ಷಣಗಳನ್ನು ಮತ್ತು ತನ್ನ ಮೌಲ್ಯವನ್ನು ಕಳೆದುಕೊಳ್ಳುವ ಅಪಾಯವಿದೆ. ಗಜಲ್ ಗಾಯನ ಹಾಗಿದ್ದರೆ ಗಜಲ್ ಹಾಡಲು ಮಾತ್ರವೇ ಎಂದೆನಿಸಿದರೆ ಖಂಡಿತ ಸರಿ ಹೋಗುವಂತಿಲ್ಲ. ಬರೆದಿದ್ದೂ ಎಲ್ಲಾ ಗಜಲ್ ಆಗಲ್ಲ, ಅಂತೆಯೇ ಗಜಲ್ ಆದವು ಎಲ್ಲಾ ಹಾಡುವಂತೆ ಇರುವುದಿಲ್ಲ. ನಾವು ಹಾಡುವಂತೆ ಬರೆದರೆ ಅದನ್ನು ಆಗ ಕನಿಷ್ಠ ಪಕ್ಷ ಮನಸೂರೆಗೊಳ್ಳುವಂತೆ ವಾಚಿಸುವ ಮೂಲಕ ವಿಶಾಲ ಅವಕಾಶಗಳನ್ನು ತೆರೆದಿಡಬಹುದಾಗಿದೆ. ರಾಗ ತಾಳ ಭಾವಗಳನ್ನು ಹೊಂದುವುದು ಆ ಗಜಲನ ನಿಜವಾದ ಸಾಮರ್ಥ್ಯವಾಗಿರುತ್ತದೆ. ಅದರಿಂದಲೇ ಉರ್ದು ಮತ್ತು ಹಿಂದಿ ಗಜಲಗಳು ಯಶಸ್ಸು ಕಂಡಿದವು. ಗಜಲ್ ಹಾಡಿನ ರೂಪ ಪಡೆಯದಿದ್ದರೆ ಇಂದು ಗಜಲ್ ಕಂಡ ಗೆಲುವು, ಜನಪ್ರಿಯತೆ ಅದಕ್ಕೆ ನಿಜವಾಗಿಯೂ ದಕ್ಕುತ್ತಿರಲಿಲ್ಲ. ಗೀತೆಯ ಮಹೋನ್ನತ ಧಾಟಿಯನ್ನು ಹೊಂದಿದ್ದರಿಂದಲೇ ಬಹುತೇಕ ಹಿಂದಿ ಮತ್ತು ಉರ್ದು ಗಜಲಗಳು ಗೀತೆಗಳಾಗಿ ಜನಮಾನಸದಲ್ಲಿ ಅಚ್ಚಳಿಯದಂತೆ ನೆಲೆ ನಿಂತವು. ಅದು ಎಂತಹ ಮೋಡಿ ಆಹಾ!! ಎಂತಹ ಅದ್ಬುತ ಗೀತೆ ಎಂದು ಮೈ ದಡವಿ ಮೆಲ್ಲಗೆ ಮನ ಸ್ಪರ್ಶಿಸುವ ಹಳೆಯ ಹೆಚ್ಚಿನ ಹಿಂದಿ ಗೀತೆಗಳು ಗಜಲಗಳೇ ಎಂದರೆ ಗಜಲನ ರಸಸ್ವಾದ ಸರಳವಾಗಿ ಅರ್ಥವಾದೀತು. ಆ ಭಾಷೆ ಬಲ್ಲದವನು ಸಹ ತಲೆ ತೂಗಿ ಆಸ್ವಾದಿಸುವಂತೆ ಮಾಡುವ ತಾಕತ್ತು ಗಜಲನ ಗೇಯತೆಗೆ ಇರಬೇಕು. ಭಾವಗೀತೆಯ ಗುಣಗಳನ್ನು ಹೊಂದಿರುವ ಗಜಲಗಳು ಅದಕ್ಕಿಂತ ಗಾಢವಾದ ಭಾವ ತೀವ್ರತೆ ಮತ್ತು ಅಗಾಧವಾದ ಗಾಂಭೀರ್ಯದ ಮೂಲಕ ಹಿಡಿದಿಡುವ ಕೌಶಲ್ಯವೇ ಗಜಲಗಳ ಮೆರುಗಾಗಿ ಬೆರಗು ಹುಟ್ಟಿಸುತ್ತದೆ. ಸನಿಹ ವಿರಹಗಳ ವಿಕಾಸ ಮತ್ತು ತಲ್ಲಣಗಳು ಹೀಗೆ ಇನ್ನೂ ಯಾವುದೇ ವಿಷಯ ವಸ್ತುವಾದರೂ ಸಹ ಜೀವ ಪಡೆದಂತೆ ಭಾಸವಾಗಿ ನಮ್ಮನ್ನೇ ಆವರಿಸಿಕೊಳ್ಳುವ ಗಜಲ್ ಎಂಬ ಪ್ರೇಮ ಕಾವ್ಯ ಆ ಮೂಲಕ ಮತ್ತೆ ಮತ್ತೆ ತನ್ನ ಲಕ್ಷಣಗಳನ್ನು ಪ್ರಖರವಾಗಿ ಸಾಬೀತು ಮಾಡುತ್ತಲೇ ಬಂದಿದೆ. ಗಜಲ್ ಮಾಂತ್ರಿಕರು ಈ ಸಮಯದಲ್ಲಿ ಗಜಲ್ ಗಾಯನದ ಮೂಲಕ ಎಲ್ಲರ ಮನ ತಟ್ಟಿ ಗಜಲ್ ಮಾಂತ್ರಿಕರೆಂದೆ ಇತಿಹಾಸದಲ್ಲಿ ಉಲ್ಲೇಖಿಸಲ್ಪಡುವ ಕೆಲವು ಮಹಾನ್ ವ್ಯಕ್ತಿಗಳ ಕುರಿತು ಹೇಳಲೇಬೇಕಾಗುತ್ತದೆ. ಅಂತಹವರಲ್ಲಿ ಮೊದಲಿಗರೆಂದರೆ ಅದು ವಿಶ್ವವಿಖ್ಯಾತ ಗಜಲ್ ಚಕ್ರವರ್ತಿ ಎಂದೇ ಹೆಸರಾದ ಜಗಜೀತ್ ಸಿಂಗ್. ಅವರದೇ ಆದ ಶೈಲಿಯಲ್ಲಿ ಗಜಲ್ ಗೀತೆಗಳನ್ನು ಪ್ರಸ್ತುತಪಡಿಸಿ ದೇಶ ವಿದೇಶಗಳ ಕೋಟಿ ಕೋಟಿ ಜನರ ಹೃದಯ ತಟ್ಟಿ ಒಂದು ತಲೆಮಾರಿನ ಅಭಿಮಾನವನ್ನೇ ಪಡೆದ ಜಗಜೀತ್ ಸಿಂಗ್ ಅವರು ಗಜಲ್ ಗಾಯನಕ್ಕೆ ಕೀರ್ತಿ ಶಿಖರವಾಗಿದ್ದಾರೆ. ಪದೇ ಪದೇ ಮೆಲುಕು ಹಾಕುವಂತೆ ಹಾಡಿ ವಿಭಿನ್ನ ವಿನೂತನವಾಗಿ ಗಜಲ್ ಸವಿ ಸ್ವಾದ ಉಣಬಡಿಸಿ ಒಂದು ಅತ್ಯುತ್ತಮ ಸಂಗೀತ ಪರಂಪರೆಯನ್ನೇ ಪ್ರತಿಪಾದಿಸಿದ ಇವರ ಗಜಲ್ ಗಾಯನಕ್ಕೆ ಮರುಳು ಆಗದವರೇ ಇಲ್ಲ ಎಂದರೆ ಅದು ಅತಿಶಯೋಕ್ತಿಯಲ್ಲ. “ದಿ ಅನ್ಪರ್ಗೆಟಬಲ್ಸ”, “ಸಮ್ ವನ್ ಸಮ್ ವೇರ್” “ವಕ್ರತುಂಡ ಮಹಾಕಾಯ” ಮೊದಲಾದ ಗಜಲ್ ಆಲ್ಬಮಗಳ ಮೂಲಕ ಜಗದ ಮನ್ನಣೆ ಗಳಿಸಿದ ಅವರು ಹಿಂದಿ ಚಿತ್ರರಂಗದ ಬಹು ಮುಖ್ಯ ಗಾಯಕರಾಗಿದ್ದರು. ಮೋಹಕ ರೂಪದ ಸುಂದರಿ ಸುರಯ್ಯಾ ನಟಿಯಾಗಿ ಮಾತ್ರವಲ್ಲದೆ ಗಜಲ್ ಗಾಯನಗಳ ಮೂಲಕ ಮಾಧುರ್ಯದ ರಾಣಿ ಎಂದೇ ಖ್ಯಾತರಾದರು. ಎಲ್ಲ ತರಹದ ಗೀತೆಗಳನ್ನು ಹಾಡಿದ ಮಹಮ್ಮದ್ ರಫೀ ಅವರು ಗಜಲಗಳಿಗೆ ಮತ್ತು ಖವ್ವಾಲಿಗಳಿಗೂ ಹೊಸ ರೂಪ ನೀಡಿದರು. ಭಾರತೀಯ ಗಜಲ್ ಪರಂಪರೆಯ ಮತ್ತೋರ್ವ ಬಹು ದೊಡ್ಡ ಗಾಯಕಿಯಾದ ಬೇಗಂ ಅಕ್ತರ್ ತಮ್ಮ ಸುಮಧುರ ಕಂಠದಿಂದ ಅಕ್ಷರಶಃ ರಾಣಿಯ ಹಾಗೆ ಮೆರೆದರು. ಈ ಯಾದಿಯಲ್ಲಿ ಇನ್ನೂ ಹೇಳಲೇಬೇಕಾದ ಗಜಲ್ ಮಾಂತ್ರಿಕ ಗಾಯಕರೆಂದರೆ ಅದು ಗಜಲ್ ಕಿಂಗ್ ಮೆಹದಿ ಹಸನ್, ಗಜಲ್ ಉಸ್ತಾದ ಗುಲಾಂ ಅಲಿ, ಆಶಾ ಭೋಸ್ಲೆ, ಹರಿಹರನ್ ಇತರರು.. ಇಂದಿಗೂ ಸಹ ಗಜಲ್ ಗೀತೆಗಳು ಹಿಂದಿ ಚಿತ್ರರಂಗವನ್ನು ಆಳುತ್ತಲ್ಲಿವೆ ಕನ್ನಡದಲ್ಲಿ ಗಜಲ್ ಗೀತೆಗಳು ಕನ್ನಡದಲ್ಲಿ ಗಜಲ್ ಗೀತೆಗಳನ್ನು ಸಂಗೀತಕ್ಕೆ ಅಳವಡಿಸಿದ ಮೊದಲಿಗರೆಂದರೆ ಅದು ಗವಾಯಿಗಳು. ಅವರ ನಂತರ ರವಿ ಹಂದಿಗನೂರ ಅವರು ಗಜಲ್ ಗಾಯನದ ಕಾರ್ಯಕ್ರಮಗಳನ್ನು ನೀಡುವ ಮೂಲಕ ಗಜಲ್ ಗಾಯನದ ಛಾಪನ್ನು ಕನ್ನಡದಲ್ಲಿ ಮೂಡಿಸಿದರು. ಆದರೂ ಸಹ ಕನ್ನಡದಲ್ಲಿ ಗಜಲ್ ಗಾಯನ ಪ್ರಭಾವಿಸುವಷ್ಟು ಮಟ್ಟಿಗೆ ಇದುವರೆಗೂ ಬೆಳೆದೇ ಇಲ್ಲ. ಇನ್ನೂ ಕನ್ನಡ ಚಿತ್ರರಂಗವಂತೂ ಇದನ್ನು ಇನ್ನೂ ಸಮರ್ಥವಾಗಿ ಬಳಸಿಕೊಳ್ಳುವ ಪ್ರಯತ್ನವನ್ನು ಸಹ ಮಾಡಿಲ್ಲ. ಅಪರೂಪಕ್ಕೆ ಎಂಬಂತೆ ಉದಾಹರಣೆಗೆ ಒಂದೋ ಎರಡೋ ಅಷ್ಟೇ ಗಜಲಗಳು ಕನ್ನಡ ಚಿತ್ರರಂಗದಲ್ಲಿ ಗೀತೆಗಳಾಗಿ ಮೂಡಿ ಬಂದಿವೆ. ಅಂತಹ ಒಂದು ಅತ್ಯಂತ ಜನಪ್ರಿಯ ಗೀತೆ ಎಂದರೆ ವಿ. ಲಕ್ಷ್ಮಣರಾವ್ ರಚಿತ ರಮೇಶ ಅರವಿಂದ ಅವರ ಆಕ್ಸಿಡೆಂಟ್ ಚಿತ್ರದ ಗೀತೆ “ಬಾ ಮಳೆಯೇ ಬಾ”. ಇನ್ನೂ ಮೇಲಾದರೂ ಹೆಚ್ಚಿನ ಗಜಲಗಳು ಗೀತೆಗಳಾಗಿ ಚಾಲ್ತಿಗೆ ಬಂದು ಆ ಮೂಲಕ ಕಮರ್ಷಿಯಲ್ ಯಶಸ್ಸನ್ನು ಸಹ ಸಾಧಿಸಬೇಕಿದೆ, ಅಂತೆಯೇ ಗಜಲಕಾರರು ತಮ್ಮ ಗಜಲಗಳಿಗೆ ಗುಣಮಟ್ಟದ ಲಯ ಗೇಯತೆಗಳನ್ನು ಒದಗಿಸಬೇಕಿದೆ ****** ಬಸವರಾಜ ಕಾಸೆ

ಗಝಲ್ ಲೋಕ Read Post »

ಕಾವ್ಯಯಾನ

ಕಾವ್ಯಯಾನ

ನಿಲ್ಲದ ಆಳಲು ಕವಿತಾ ಮಳಗಿ ಎನು ಮಾಡುವುದು.. ನಮ್ಮ್ದು ಬಾಳೆ ಹೀಗೇ ಹೇಗೆ ಸಾಧ್ಯ ನಿಮ್ಮಂತೆ ಇರಲೂ… ಬಿಸಿಲಿರಲಿ ಮಳೆಯಿರಲಿ ಅನುದಿನವು ಹೋರಾಟ ಬಾಳಿಗೆ ಅದುವೇ ಅಭ್ಯಾಸವು.. ಸುಖ ಇಲ್ಲ ಎನ್ನುವ ಮಾತು ನೋವಿನ ಸಂಗತಿ ಇದು ಸತ್ಯ ಎನು ಮಾಡಲು ಸಾಧ್ಯವಿಲ್ಲ…. ನೆಮ್ಮದಿ ಇಲ್ಲ ಕಟಿಬಿಟಿ ಜೀವನ ಕೊನೆ ಇಲ್ಲದ ಭವಣೆಗಳು ಹೇಳಲಿಲ್ಲ ಯಾರಿಗೂ….. ಧನಿಕ ನೀವೆಲ್ಲರೂ ಬದುಕಲ್ಲಿ ಶ್ರೀಮಂತ ನನ್ನ ರಾಜ್ಯದಲ್ಲಿ ನಾನು ನಾವಿಲ್ಲದೆ ಏನೂ ಇಲ್ಲ… ನಮ್ಮಿಂದ ಗುಡಿಗೋಪುರ ನಮ್ಮಿಂದ ಮನೆಮಠ.. ಆದ್ರೂ ನಾವಲ್ಲ ಶ್ರೀಮಂತ…. ಕಷ್ಟದ ಕೆಲಸ ಮಾಡಲು ನಾವೆಲ್ಲರೂ ನೆಮ್ಮದಿ ಬದುಕೂ ನಿಮ್ಮದು ಬೇಸರ ಕಳೆಯಲು ಹಣ ಖರ್ಚು…. ಹೊಟ್ಟೆಗೆ ಹಿಟ್ಟು ಇಲ್ಲದ ಕಾರಣ ಅನುದಿನವು ತೊಳಲಾಟ ಅನುದಿನವು ಮರುಗು… ******

ಕಾವ್ಯಯಾನ Read Post »

You cannot copy content of this page

Scroll to Top