ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕವಿತೆ ಕಾರ್ನರ್

ಕವಿತೆ ಕಾರ್ನರ್

ಬಾ ಮಗುವೆ! ಬಾ ಮಗುವೆ ಬಾ ನನ್ನ ಹತ್ತಿರಕೆ! ನಾನೇನೂ ಅಲ್ಲ ಮೊನ್ನೆ ಮೂರುವರ್ಷದ ಮಗುವೊಂದು ನೀನ್ಯಾರೆಂದು ಕೇಳಿದಾಗ ಹೇಳಲಾಗದೆ ಏನನ್ನೂ ತಡವರಿಸಿದಾಗ ಮೊದಲಬಾರಿ ಯೋಚಿಸಿದೆ ನಾನ್ಯಾರು ಮತ್ತು ನಾನೇನು? ಯಾವ ದಾರಿಯೂ ನನ್ನದಾಗಲಿಲ್ಲ ಅಥವಾ ನನ್ನದಾಗಿ ಮಾಡಿಕೊಳ್ಳಲಾಗಲಿಲ್ಲ. ಸೋತಿದ್ದೇನೊ ಗೊತ್ತಾಯಿತಾದರು ಆಟ ಆಡಿದ್ದೆನಾ ಇಲ್ಲ ಆಡಿದಂತೆ ನಟಿಸಿದ್ದೆನಾ ಗೊತ್ತಿಲ್ಲ. ಎಲ್ಲರೂ ಇತಿಹಾಸದ ಭಾಗವಾಗಲು ಸಾದ್ಯವಿಲ್ಲವಾದರು ಅದರದೊಂದು ಅದ್ಯಾಯದ ಅಂಚಿನಲ್ಲಿಯಾದರು ಏನಾದರು ಆಗಿರುತ್ತಾರೆ. ಕನಸುಗಳು ನನಗೂ ಇದ್ದವು ಸಾಕಾರಗೊಳಿಸಿಕೊಳ್ಳುವ ಅನೇಕ ಅಡ್ಡ ದಾರಿಗಳೂ ನನಗೆ ಗೊತ್ತಿದ್ದವು ಆದರಾ ಎಲ್ಲ ದಾರಿಗಳು ನನ್ನ ಆತ್ಮಸಾಕ್ಷಿಯ ವಿರುದ್ದವಾಗಿದ್ದವು. ಆತ್ಮದ ಮಾತಿಗಿಂತ ಸುಖವೇ ಮುಖ್ಯ ಎಂದು ನಾನಂದುಕೊಂಡಿದ್ದರೆ ಇವತ್ತು ಮದ್ಯದಂಗಡಿಯ ಹೊಸಿಲಲಿ ಇಳಿಸಂಜೆಗಳ ನೀಳ ರಾತ್ರಿಗಳ ಕಳೆಯಬೇಕಿರಲಿಲ್ಲ. ದೇವರೆಂದೂ ನನಗೆ ಸಹಾಯ ಮಾಡುವನೆಂದು ನಾನೆಂದೂ ನಂಬಲಿಲ್ಲ ನಂಬಿದ್ದರೂ ಪಾಪ ಅವನಿಗೆಷ್ಟು ಜನ ಗ್ರಾಹಕರೋ ಸಮಯವಾದರೂ ಹೇಗೆ ಸಿಕ್ಕೀತು ನನ್ನಂತ ಪಾಪಿಯ ಬಗ್ಗೆ ಯೋಚಿಸಲು. ನನ್ನ ಸುತ್ತ ತೀರಾ ದೇವರಂತ ಮನುಷ್ಯರಾರು ಇರಲಿಲ್ಲ. ನನ್ನ ಸರಿದಾರಿಯಲ್ಲಿ ನಡೆಸಲು. ನಾನು ಶಾಲೆಗೆ ಹೋಗಿದ್ದು ಒಂದಷ್ಟು ಅಕ್ಷರಗಳನ್ನು ಕಲಿಯಲು ಮಾತ್ರ ಅವರು ನೀತಿಪಾಠ ಹೇಳಲು ಶುರು ಮಾಡಿದೊಡನೆ ನಾನು ನಿದ್ದೆಗೆ ಜಾರುತ್ತಿದ್ದೆ. ಅನೀತಿಯಲ್ಲೇ ಮುಳುಗಿದವರು ನೀತಿಯ ಬಗ್ಗೆ ಮಾತಾಡುವುದು ತಪ್ಪೆಂದು ಅವರಿಗೂ ಗೊತ್ತಿತ್ತು. ಹಾಗಂತ ನಾನು ಕಡುಪಾಪಿಯೇನು ಆಗಿರಲಿಲ್ಲ ಹಸಿದು ಬಂದವರಿಗೆ ನನ್ನ ತಟ್ಟೆಯಲಿದ್ದ ಅನ್ನದಲ್ಲೆ ಒಂದಿಷ್ಟು ತೆಗೆದು ನೀಡಿದ್ದೇನೆ. ಬಾರವಾದ ಮೂಟೆ ಹೊತ್ತು ಹೋಗುತ್ತಿದ್ದ ವಯಸ್ಸಾದ ಹಮಾಲಿಯೊಬ್ಬನಿಗೆ ಅವನ ಬಾರ ಹೊತ್ತು ಸಹಾಯ ಮಾಡಿದ್ದೇನೆ ಹಾಗೆಯೇ ಅಕ್ಕಪಕ್ಕದವರಿಗೆ ಕಿರಿಕಿರಿಯಾಗದಂತೆ ರಾತ್ರಿಗಳಲ್ಲಿ ಕಂಠಮಟ್ಟ ಕುಡಿದರೂ ಗದ್ದಲಮಾಡದೆ ತೆಪ್ಪಗೆ ಮಲಗಿ ಉಪಕಾರವನ್ನೂ ಮಾಡಿದ್ದೇನೆ! ಇವತ್ತಿಗೂ ನನಗೆ ಆಶ್ಚರ್ಯ ಅನಿಸುವುದು ಕಾನ್ವೆಂಟಿಗೆ ಹೋಗುವ ಆ ಎಳೆಯ ಕಂದಮ್ಮಗಳನ್ನು ಕಂಡಾಗ ತಮ್ಮ ಪೂರ್ವೀಕರೆಲ್ಲ ಸೇರಿ ಮಾಡಿದಷ್ಟೂ ಪಾಪಗಳ ಮೂಟೆಯನ್ನು ಬೆನ್ನಿನ ಚೀಲಕ್ಕೇರಿಸಿಕೊಂಡು ನಡುಬಾಗಿಸಿ ನಡೆಯುವ ಮಕ್ಕಳನ್ನು ನೋಡಿದಾಗೆಲ್ಲ ಗಾಣದ ಎತ್ತುಗಳು ನೆನಪಾಗಿ ಕಣ್ಣಲ್ಲಿ ನೀರು ಸುರಿಸುತ್ತೇನೆ. ತಮಗೆ ವಯಸ್ಸಾದ ಮೇಲೆ ಅನ್ನ ಹಾಕಲೆಂದು ಅವರ ಬಾಲ್ಯವನ್ನು ಕಿತ್ತುಕೊಂಡು ಶಾಲೆಯೆಂಬ ನರಕಕ್ಕೆ ಕಳಿಸುವ ಅಪ್ಪಅಮ್ಮಂದಿರನ್ನು ಹಿಡಿದು ಒದೆಯಬೇಕೆಂದು ಸಾವಿರ ಸಾರಿ ಅನಿಸಿದರೂ ಸುಮ್ಮನಾಗಿದ್ದೇನೆ! ಬಾ ಮಗುವೆ ಇಲ್ಲಿ ಬಾ ನಿನ್ನ ಹೆಗಲ ಮೇಲಿನ ಬ್ಯಾಗನ್ನು ಇಲ್ಲಿ ಇಳಿಸಿ ಇಡು ಬಾ ನನ್ನ ಜೊತೆ ಊರಂಚಿನ ಕಾಡಿಗೆ ಹೋಗೋಣ. ಅಲ್ಲಿ ನಿನ್ನಂತೆಯೇ ಮುದ್ದಾಗಿರುವ ಚಿಟ್ಟೆಗಳಿವೆ ಹೂ ಹುಡುಕಿ ಹಾರುವ ಅವನ್ನು ಹಿಡಿಯೋಣ ಪಕ್ಕದಲ್ಲಿ ಹರಿಯುವ ನದಿಯ ದಂಡೆಯಲ್ಲಿ ಕೂತು ಮರಿಮೀನುಗಳಿಗೆ ಗಾಳ ಹಾಕಿ ಕಾಯೋಣ. ಮದ್ಯಾಹ್ನ ಹೊಟ್ಟೆ ಹಸಿದಾಗ ಅಲ್ಲೇ ಸಿಗುವ ಕಾಡಿನ ಹಣ್ಣುಗಳ ಕಚ್ಚಿ ತಿನ್ನೋಣ ಒಂದು ಹೇಳುತ್ತೇನೆ ಕೇಳು ಮಗು ನಿಸರ್ಗ ಕಲಿಸುವುದಕ್ಕಿಂತ ಹೆಚ್ಚಾದ ಪಾಠವನ್ನು ಯಾವ ಶಾಲೆಗಳು ಯಾವ ಶಿಕ್ಷಕರುಗಳೂ ಕಲಿಸಲಾರರು. ನಾಗರೀಕತೆಯ ಮುಖವಾಡ ಹೊತ್ತ ಜಗತ್ತಿನಲ್ಲಿ ಯಾರೂಕಲಿಸದೆ ಕಲಿಯಬಹುದಾದದ್ದು ವಂಚನೆ ದ್ರೋಹಗಳು ಮಾತ್ರ ಬಾ ಮಗುವೆ ಬಂದುಬಿಡು ನಾನು ಸಾಯುವುದರೊಳಗಾಗಿ ನಿನಗೆ ಮೀನು ಹಿಡಿಯುವುದ ನದಿಯೊಳಗ ಈಜುವುದ ಬೆಣಚುಕಲ್ಲು ಗೀಚಿ ಬೆಂಕಿ ಹೊತ್ತಿಸಿ ಮೀನು ಬೇಯಿಸುವುದ ಕಲಿಸುವೆ. ಬಾ ಮಗುವೆ ನಾನು ನಿನ್ನ ಅಪ್ಪನಾಗಲಾರದ ಅಪ್ಪ! ******* ಕು.ಸ.ಮದುಸೂದನ

ಕವಿತೆ ಕಾರ್ನರ್ Read Post »

ಕಾವ್ಯಯಾನ

ಕಾವ್ಯಯಾನ

ಬಚ್ಚಿಟ್ಟ ನೆನಪುಗಳು ವೀಣಾ ರಮೇಶ್ ನೀ ಬರುವೆಯೆಂದು ಕಾಯುತ್ತಿದ್ದೆ……. ಒಡಲಸೆರಗಲಿ ಅದುಮಿಟ್ಟ ಬಯಕೆಗಳು ತಬ್ಬಲಿಯಾದ ನಿನ್ನ ಕನಸುಗಳ ಜೊತೆ ನನ್ನ ಕನಸುಗಳು ಕಾಡುವುದು ಬಸಿರಾಗದ ಆಸೆಯ ಕುಡಿಗಳು, ,ಹಸಿಯಾಗಿ, ಹುಲ್ಲುಜಾಡಿನಲಿ ಕಳೆಗೂಡಾದ ಬದುಕು ಹೊಸಕಿ.. ನೀ ಬರುವೆಯೆಂದು ಕಾಯುತ್ತಿದ್ದೆ …… ಹಾಕಿದ ಏಳು ಹೆಜ್ಜೆಗಳು ಬಿಸಿಯ ಕೆಂಡದ ಮೇಲಿನ ಅವಳ ತಪ್ಪಿನ ನಡೆಗಳು ಹೊಸಿಲ ಮೇಲೆ ಜಾಡಿಸಿ ಒದ್ದ ಸೇರಿನ ಜೊತೆ ಕನಸುಗಳ ಒದ್ದೋಡಿಸಿದೆ ಸರಕಾಗಿದೆ ನಿನ್ನ ಮೌಲ್ಯಗಳು, ಬಿಕರಿಯಾಗುತ್ತಿದೆ ಕನಸುಗಳು,…. ಬೆತ್ತ ಲಾಗಬೇಡ ಬತ್ತಿದ ಕನಸುಗಳಿಗೆ, ಮನಸು ಹರಿದ ಪುಟಗಳ ಮತ್ತೆ ಸೇರಿಸಿ ಸಂಬಂಧಗಳ ದಾರದಿಂದ ಬಿಗಿದು,ನಿನ್ನ ಕನಸುಗಳ ಬಸಿರಿಗೆ ಮೆಲುವಂಗಿ ಹೊದಿಸು ,ನೀ ಕಟ್ಟುವ ಕನಸಿಗೆ ಪ್ರೀತಿಯ ದೇಣಿಗೆ ನಾ ನೀಡುವೆ, ಮಾತು ಮೌನದಲ್ಲೆ ಅಡಗಿಸಿ ಪದಗಳು ಸ್ಪರ್ಶ ವಿಲ್ಲದೆ ಎದೆಯಲಿ ಬಚ್ಚಿಟ್ಟು ನೆನಪುಗಳು ನೀ ಇಲ್ಲದೆ ಒದ್ದಾಡಿವೆ….. ಅಲ್ಲೊಂದು ಇಲ್ಲೊಂದು ಕರಗಿಬಿದ್ದ ನೀರಹನಿಯೊಂದು ಚಿಗುರೊಡೆದ ಹಸಿರೊಂದು ಬಸಿರಾಗುವ ಕನಸಿಗೆ, ನೀಳಗೆನ್ನೆಯ ಮೇಲೆ ತುಸು ಹರಿದು ಎದೆಯ ತಂಪಾಗಿಸಿದ ಕಣ್ಣೀರ ಹನಿ ತಂದು, ಹೊಸ ಮನ್ವಂತರದ ಪರ್ವದಲ್ಲೊಂದು ಬದಲಾಯಿಸಿದ ಬದುಕಿನ ಗತಿ ಹಚ್ಚಿದ ಕನಸಿನ ಹಣತೆಗೆ ಬಾಳ ಸಮತೆಯಲಿ ಉರಿವ ದೀಪವಾಗಿ, ನಿನ್ನೊಡಲ ಕಾಂತಿಗೆ ಬೆಳಕಾಗುವೆ ನಾ ಕಾಯುತ್ತಿರುವೆ. ನೀ …ಬಂದೆ ಬರುವೆಯೆಂದು….. ********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಹೇಳಿದ್ದೆಲ್ಲಾ ಕವಿತೆಯಾಗುವುದಿಲ್ಲ ಜಹಾನ್ ಆರಾ ಎಚ್. ಕೋಳೂರು ಹೇಳಿದ್ದೆಲ್ಲಾ ಕವಿತೆಯಾಗುವುದಿಲ್ಲ ಹೇಳಿದ್ದೆಲ್ಲಾ ಕವಿತೆಯಾಗುವುದಿಲ್ಲ ನೇರಭಾವಕ್ಕೆ ತೂಕ ಕಡಿಮೆ ಸಾಗರದ ಆಳಗಲವಂತೆ ಆಗಸದ ಅನೂಹ್ಯವಂತೆ ನಾಜೂಕಂತೆ, ಸುಲಭವು ಅಲ್ಲವಂತೆ ಬಿಡಿ ಬಿಡಿ ಹೇಳಿದ್ದೆಲ್ಲಾ ಕವಿತೆಯಾಗುವುದಿಲ್ಲ ನಾನು ಬರೆದದ್ದು ಅವನೊಪ್ಪನು ಇವ ಬರೆದದ್ದು ಮತ್ತೋರ್ವನೊಪ್ಪನು ಅವರು ಬರೆದದ್ದು… ನಾ ಒಪ್ಪಬೇಕಂತೆ!!! ಭಾವ ಭಕುತಿ ಅವರಿಗೆ ಬಿಟ್ಟದು. ಇಲ್ಲಿ ಜರೂರಾಗಿ ಹೇಳಬೇಕಾದ ನಿಯಮ ಕಡಿಮೆ ಪದಗಳ ಪೋಣಿಕೆ ಹೆಚ್ಚು ಭಾವ ಭಾರ ತುರುಕುವಿಕೆ ಶಬ್ಧ ಮಣಿಗಳ ದರ್ಪಣದಲಿ ನಿಂತರೂ ಪಾಶ್ಚಾತ್ಯ ಸಿಂಗಾರದ ಪ್ರತಿಬಿಂಬ ಬಿಡಿ ಬಿಡಿ ಹೇಳಿದೆಲ್ಲಾ ಕವಿತೆಯಾಗುದಿಲ್ಲ ನೇರ ಭಾವಕ್ಕೆ ತೂಕ ಕಡಿಮೆ ತಕ್ಕಡಿಯಲ್ಲಿ ಒದ್ದಾಡುತ್ತಿದ್ದ ಕವಿತೆಯಿಂದ ಅವ ಕವಿತ್ವ ಹೊರಹಾಕಿದ ಅರೆ! ತೂಕ ಸರಿಯಾಗಬೇಕು ಸತ್ವಕ್ಕೆ ಸ್ವಲ್ಪ ಮೇಕಪ್ ಬೇಕು ನಾನು ಮಾಡಿದರಾಗದು ಅವರಾದರೆ ಮಾಡಬಹುದಂತೆ ಈಗ ಭಾವವೂ ಕಸದಬುಟ್ಟಿ ಸೇರಿತು ‘ವ್ಹಾ! ಎಂತಹ ಕವಿತೆ’ ಎಂದವನೆ ಮತ್ತೆ ಮತ್ತೆ ತೂಕಕಿರಿಸಿದ ತಡಕಾಡಿ ತಮ್ಮಿಸಿ ಅತ್ತಿತ್ತ ಕಲಿತಿದ್ದನ್ನು ಸ್ಮರಿಸಿ ನನ್ನ ಮುಂದೆ ವಾಂತಿ ಮಾಡಿ “ಕ್ಷಮಿಸಿ, ಹೇಳಿದೆಲ್ಲಾ ಕವಿತೆಯಾಗುದಿಲ್ಲ” ಎಂದು, ಗುಜರಿ ಅಂಗಡಿಯವ ಬಾಗಿಲು ಹಾಕಿಕೊಂಡ ತನ್ನತನವೇ ಕಳಚಿ ಉಸಿರುಗಟ್ಟಿದ ಕವಿತೆ ರಕ್ತಸಿತವಾಗಿ ಚೂರಿಯಿಂದಾದ ಗಾಯಗಳನ್ನು ನಾಲಿಗೆಯಿಂದ ನೆಕ್ಕಿದಂತೆ ಕುಂಯ್ಯಿ ಎನ್ನದೆ ನನ್ನ ಕಡತ ಸೇರಿತು. ಮತ್ತದೇ ಗುಡುಗು “ಬಿಡು ಬಿಡು ಬರೆದದ್ದಲ್ಲಾ ಕವಿತೆಯಾಗುದಿಲ್ಲ” *********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಅರಿವು ಶಿವಲೀಲಾ ಹುಣಸಗಿ ಚಿಂತೆಯನು ಬಿಡುಮನವೇ ಕಾಯ್ವನೊಬ್ಬನಿಹನೆಮಗೆ! ಕಲ್ಲರಳಿ ಹೂವಾಗಿ ನಿಂತಿಹುದಿಲ್ಲಿ ಕಂಬನಿಯ ಮಿಡಿಯದೆ ಮೌನದಲಿ ಸ್ವೀಕರಿಸು ನಿನ್ನಾಸೆ ಬಳ್ಳಿ ಚಿಗುರೊಡೆದು ಹಬ್ಬಲಿ ಕರಳ ಬಳ್ಳಿ…….. ದೇಹವಿದು ನಶ್ವರವು ಬಾಳಿಕೆ ಬರದು ಆತ್ಮವಿದು ಶಾಶ್ವತವು ಕಂಗಳಿಗೆ ಕಾಣದು ಎಲುಬಿನಹಂದರದಲ್ಲಿ ವ್ಯಾಮೋಹ ಇಲ್ಲ ಬದಿಗೊತ್ತಿ ಚಿತ್ತವಿರಿಸು ಮುಕ್ತಿಯಲಿ…… ಉಸಿರಿನಲ್ಲೊಂದಾಗಿ ಕಾಯಕದಿ ನೆಲೆಸಿ ಕರ್ಮವೊಂದೇ ನಮಗೆ ಕೈಲಾಸ ಫಲಾಫಲಗಳು ನಿನ್ನಲ್ಲೇ ನೆಲೆಸಿ ಭಿಕ್ಷೆ ನೀಡೆಮಗೆ ಮುಕ್ತಿಯ ಕರುಣಿಸಿ…… ಜೀವಿಗಳೆದೆಯಲಿ ಕಿರಣಚಿಮ್ಮಿಸಿ ನಲಿವೆಂಬ ಹೂವನರಳಿಸಿ ಕಂಗಳೆದೆಯಲಿ ಬಿಂಬವಿರಿಸಿ ಭಾವದಾಚೆಯೆನ್ನ ಮುಕ್ತ ಗೊಳಿಸಿ…… *********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಭಾವ ರಂಗವಲ್ಲಿ ಶಾಲಿನಿ ಆರ್. ಬೆರಳೊಳಿಡಿದ ಮರುಳಿಗೆ ಹುಡಿ ಒಡಮೂಡಿ ಅಂಗಳದಲಿ ನಲವಿಸುತಿದೆ, ಮನದ ಭಾವವೆಲ್ಲ ಮುದದಿ ಮೂಡಿ ಅರಳಿ ಮೆಲ್ಲಗೆ ರಂಗವಲ್ಲಿ ಇಲ್ಲಿ, ಎಳೆದ ಪ್ರತಿ ಗೆರೆ ಗೆರೆಯಲು ಅವನದೆ ಪ್ರೇಮದಮಲು ಅಂಕುಡೊಂಕಿನ ವೈಯಾರದಲು ಗೆರೆ ಬಿಂಕ ತೋರಿ ಅಣಕಿಸಲು ಅರಳಿತ್ತು ಮೋಡಿಗಾರ ರಂಗವಲ್ಲಿ ಇಲ್ಲಿ, ಗೆರೆಯಿಂದ ಗೆರೆಯ ಬಳಸಿ ಒಲವನೆಲ್ಲ ಸುತ್ತಿ ಬಳಸಿ ಮನವದು ಸೃತಿಸಿ ಶೃತಿಸಿ ಸ್ಪುರಿಸಿತಾಗ ನಗೆಯ ರಂಗವಲ್ಲಿ ಇಲ್ಲಿ, ನೀಲನಲಿ ನೀಲವಾಗಿ ತೇಲುತಿದೆ ಮನ ಪರಿಮಳಿಪ ಗಂಧವಾಗಿ ತೀಡುತಿದೆ ಭಾವ ಇಟ್ಟ ಪ್ರತಿ ಗೆರೆಗಳು ಸರಸದಿ ಬೆಸೆವ ಪರಿಗೆ ಲಜ್ಜೆವರಿತು ನಾಚುತಿದೆ ರಂಗವಲ್ಲಿ ಇಲ್ಲಿ, ಕ್ಷಣದ ಕಣ್ಣ ನೋಟಕೆ ಸರಸರನೆ ಹರಿದು ಮನದ ಎಲ್ಲ ಭಾವಕೆ ಬಂಧಿಯಾಗಿ ಬೇಡಿದಷ್ಟು ನಿಂದು ಗಾಢವಾಗಿ ಮೂಡುತಿದೆ ರಾಗದೊಲವ ರಂಗವಲ್ಲಿ ಇಲ್ಲಿ, ಆತ್ಮಕೊಲಿದವನ ನೇಹಕೆ ಬೆರಳ ಸ್ಪರ್ಶ ಮಾಟಕೆ ಕವನವಾಗಿ ಪದದೊಳಗೆ ಒಂದಾಗಿ ಮೂಡಿದೆ ಭಾವಲಹರಿ ರಂಗವಲ್ಲಿ ಇಲ್ಲಿ, ಮನ ಮನಗಳ ದ್ವಂದ್ವಗಳನಳಿಸಿ ಸುಸಂಬಂಧಗಳ ಉಳಿಸಿ ಮರೆಸಿ ಬೆಸೆವ ಸಾಂಸ್ಕೃತಿಕ ಪರಿಕಾರದ ಪ್ರತೀಕ ಶುಭಕೋರುವ ಸಿರಿ ರಂಗವಲ್ಲಿ ಇಲ್ಲಿ… ******

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಜಗದ ಜ್ಯೋತಿ ರೇಮಾಸಂ ದಂಡಿ ಕಟ್ಟದೇ ಮಾಡಿಕೊಂಡೆಯಲ್ಲ ಕೊರಳಿಗೆ ತಾಳಿಯನೂ ಬಿಗಿಯಲಿಲ್ಲ ಮೈಗೆ ಅರಿಶಿಣ ಮೆತ್ತಿಕೊಳ್ಳಲಿಲ್ಲ ಮದುವೆಯ ಹಂದರವು ಹರಿವಿರಲಿಲ್ಲ ಹೊಸ ಇತಿಹಾಸವ ಸೃಷ್ಟಿಸಿಬಿಟ್ಟೆಯಲ್ಲ ಸಮಾನತೆಗಾಗಿ ಧರಣಿ ಹೂಡದೆ ಹೆಣ್ಣೆಂದು ಅವಕಾಶವಾದಿಯಾಗದೆ ಅಲ್ಲಮರ ಮಂಟಪದ ಜ್ಯೋತಿಯಾದೆ ಉಡತಡಿ ಉಡುಗೊರೆಯಾಗಿ ಉದಯಿಸಿದೆ ಕದಳಿಗೆ ಕರ್ಪುರದಂತೆ ಅರ್ಪಿತಳಾದೆ ನೀ ಶರಣ ಚಳುವಳಿಯ ಚೇತನ ಅಲ್ಲಮರ ಸಮ ಸಂವೇದನಶೀಲಳು ಅನುಭಾವಿಯುಕ್ತ ಮೇರು ಸಾಹಿತಿ ವಿಶಿಷ್ಟ ವೈಚಾರಿಕ ಮೌಲಿಕ ವಚನಗಾರ್ತಿ ಕನ್ನಡದ ಪ್ರಥಮ ಬಂಡಾಯ ಕವಯತ್ರಿ ಸಾರಿದೆ ಜಗದ ಕಣ್ಣು ಬೆತ್ತಲಾಗಿದೆ ಮನವು ಚಂಚಲದಿ ಬೆತ್ತಲಾಗಿದೆ ಇಷ್ಟ ಕಾಮ್ಯಗಳಡಿ ಸಿಕ್ಕಿಕೊಂಡಿದೆ ಭೌತಿಕ ಭೋಗದ ಬಂಧನದಲಿದೆಯಂದೆ ಜಗದ ಬೆತ್ತಲ ನೀ ಸ್ವತಃ ತೋರಿದೆ ಭೋಗ ಜೀವನದ ಬಲಿದಾನ ಕರ್ಮಠ ಯೋಗಿಣಿಯಾಗಿ ಸಾಧನ ಯೋಗಾಂಗ ತ್ರಿವಿಧಿಯ ಅನುಷ್ಠಾನ ಅಲ್ಲಮರಿಂದ ಧೀರ ನುಡಿಯ ತಾಯಿಯ ನಮನ ಅಕ್ಕ ನೀ ವೈರಾಗ್ಯ ನಿಧಿ ಜ್ಞಾನ ಘನ ವಿರತಿ ಘನ ಚನ್ನಮಲ್ಲಿಕಾರ್ಜುನೊಬ್ಬನೇ ಪುರುಷನೆಂದವಳು ಮಿಕ್ಕವರೆಲ್ಲ ಎನಗೆ ಸ್ತ್ರೀ ಸಮಾನರೆಂದವಳು ಕೇಶಾಂಬರವು ಜಗದ ಜನರ ಹಂಗಿಗೆಂದವಳು ಗಟ್ಟಿಗಿತ್ತಿ ಸಾದ್ವಿ ಅಕ್ಕಮಹಾದೇವಿಯಾದಳು ಅಕ್ಕ ವಿಶ್ವ ಸ್ತ್ರೀ ಕುಲದ ಜ್ಯೋತಿಯಾಗಿಹಳು ***********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಅಪ್ಪಣ್ಣನಿಗೊಂದು ಮನವಿ ಎ.ಎಸ್. ಮಕಾನದಾರ ಗದಗ ಅಪ್ಪಣ್ಣ ಎಷ್ಟೊಂದು ಕತ್ತಿಗಳು ಸೇರಿಕೊಂಡಿವೆ ನಿನ್ನ ಹಸಬಿಯೊಳು ಆ ಕತ್ತಿಗಳೇ ಮಾಡಿದ ಕ್ಷೌರ ಹೇಗೆ ಸೂಚಿಸಿ ಬಿಡುತ್ತವೆ. ಆ ಚಾಂದ ದಾಡಿ ಮುಸ್ಲಿಮನದೆಂದು ಆ ಜುಟ್ಟು ಬ್ರಾಹ್ಮಣನನದೆಂದು ಆ ಕೆಳದಾಡಿ ಸಿಖ್ಖನದೆಂದು ಆ ಫ್ರೆಂಚ್ ದಾಡಿ ಕ್ರಿಶ್ಚಿಯನನದೆಂದು ಮೀಸೆ ಬಿಟ್ಟರೊಂದು ಜಾತಿ ಕೇಶ ಬಿಟ್ಟರೊಂದು ಜಾತಿ ಮುಡಿ ಕಟ್ಟಿ ದಾಡಿ ಬಿಟ್ಟರೊಂದು ಜಾತಿ ಎಲ್ಲವನು ಬೋಳಿಸಿಟ್ಟು ಹೊಸದೊಂದು ವ್ಯವಸ್ಥೆ ನಿರ್ಮಿಸಬಾರದಿತ್ತೇ ಅಪ್ಪಣ್ಣ ನೀನು ಅಣ್ಣ ಅಕ್ಕ ಅಲ್ಲಮರೊಂದಿಗೆ ಅನುಭವ ಮಂಟಪದ ಚುಕ್ಕಾಣಿಯಾಗಿದ್ದಿ ಯಾಕಣ್ಣ ಈ ವ್ಯವಸ್ಥೆಗೆ ಕಡಿವಾಣ ಹಾಕದೆ ಸುಮ್ಮನಾದೆ ಗಂಡಲ್ಲದೆ-ಹೆಣ್ಣಲ್ಲದೆ ಒಳಗಿರುವ ಆತ್ಮಕ್ಕೆ ಅನುಭವ ಮಂಟಪದಲಿ ಅಂತರಂಗ ಶುದ್ಧಿ ಮಾಡಿದ ನೀನೇ ಬಹಿರಂಗ ಶುದ್ಧಿಗಾಗಿ ಮಾಡಿದ ಈ ಕ್ಷೌರದಿಂದ ಅದ್ಹೇಗೆ ಅಶಾಂತಿ ತಾಂಡವವಾಡುತ್ತಿದೆ ? ಅಪ್ಪಣ್ಣ ನಿನಗೆ ನೆನಪಾಗಲಿಲ್ಲವೇ ಶೂನ್ಯನಾದ ಅಣ್ಣ ಬೆತ್ತಲಾದ ಅಕ್ಕ ಜಗದ ಕೊಳೆ ತೊಳೆಯುವ ಮಾಚಿದೇವ ತನ್ನ ಚರ್ಮವನೇ ಕತ್ತರಿಸಿ ಚಡಾವು ಮಾಡಿದ ಹರಳಯ್ಯ ಕಲ್ಯಾಣಮ್ಮ ಯುದ್ಧಕ್ಕೆ ವಿದಾಯವಿತ್ತ ಅಶೋಕ ಬುದ್ಧನಾದ ಸಿದ್ಧ ಅಂತೆಯೇ ಎಸೆದು ಬಿಡಲು ಹೇಳು ಎಲ್ಲ ಸಹೋದರರಿಗೆ ಈ ಜಾತಿ ಸೂಚಕ ಕತ್ತಿಗಳನು…….. ********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಗಝಲ್ ಕಾಫಿ಼ಯಾನಾ…………. ಎ.ಹೇಮಗಂಗಾ ಮಧುಪಾನದ ನಶೆಯಲ್ಲಿ ಭೂತವನ್ನು ಮರೆಯಬೇಕಿದೆ ಬೆಂಬಿಡದೇ ಕಾಡುವ ಕಹಿಕ್ಷಣಗಳಿಗೆ ಗೋರಿ ಕಟ್ಟಬೇಕಿದೆ ಮರೆಯಲಾಗದ ನೋವ ಮರೆವುದಾದರೂ ಹೇಗೆ ಸಾಕಿ? ಅಂತರಂಗದ ಬಿಕ್ಕುಗಳನ್ನು ಅಲ್ಲಲ್ಲಿಯೇ ಹೂಳಬೇಕಿದೆ ನೋವು, ಯಾತನೆಗಳು ಹೊಸದಲ್ಲ ಎಲ್ಲ ಅವಳಿತ್ತ ಕೊಡುಗೆ ಅವಳಿಗೆಂದೇ ಪ್ರತಿಕ್ಷಣ ಮಿಡಿದ ಧಮನಿಗಳ ಸಂತೈಸಬೇಕಿದೆ ಬಾಳು ಪಾಳು ಬಿದ್ದ ಮನೆಯಂತೆ ಭಣಗುಡುತ್ತಲೇ ಇದೆ ಸಾಕಿ ಅವಳನ್ನೇ ಬಯಸುವ ಹುಚ್ಚುಮತಿಗೆ ಅರಿವಳಿಕೆ ನೀಡಬೇಕಿದೆ ಗರಿ ಚಾಮರಗಳು ತೊನೆದಂತೆ ಕಂಡಿವೆ ಮಧುಪಾತ್ರೆಯಲ್ಲಿ ಭ್ರಮೆಯನ್ನೇ ನಿಜವೆಂದು ನಂಬಿದ ಮನಕೆ ತಿಳಿಹೇಳಬೇಕಿದೆ ಕಾಣದ ಕೈ ಕದಡುತ್ತಲೇ ಇದೆ ಜೊಂಡಾದ ಎದೆಗೊಳವನ್ನು ಮೊರೆಯಿಡುವ ಹೃದಯಕೆ ಮೌನಪಾಠವನು ಕಲಿಸಬೇಕಿದೆ ಮಧುಶಾಲೆಯ ಪ್ರತಿ ಭೇಟಿಯೂ ಸಾವಿನ ಮನೆಗಲ್ಲವೇ ಸಾಕಿ? ನೆನಪುಗಳೇ ವಿಷವಾಗಿರೆ ಕೊನೆಗೊಮ್ಮೆ ಉಸಿರು ನಿಲ್ಲಿಸಬೇಕಿದೆ *********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಗಝಲ್ ಉಮೇಶ ಮುನವಳ್ಳಿ ನೀನು ಬಯಸಿದಂತೆ ಬದಲಾಗಿರುವೆ, ಅದಲುಬದಲಾದದ್ದು ನಿನಗೆ ನೆಮ್ಮದಿಯೇ? ನೀನು ಅಂದುಕೊಂಡಂತೆ ಸಾಕಾರಗೊಂಡಿರುವೆ, ಗುರಿ ನೆರವೇರಿದ್ದು ನಿನಗೆ ನೆಮ್ಮದಿಯೇ? “ನಿನ್ನ ಜೊತೆಗಿನ ಕೆಲಸ ಮುಗಿದು ಹಳೆಮಾತಾಗಿದೆ ಮತ್ತೆ ಪೀಡಿಸದಿರು” ಇದು ನಿನ್ನ ಕೋರಿಕೆ ದುಃಖ ಉಮ್ಮಳಿಸಿ ಕತ್ತು ಹಿಸುಕುತಿದೆ, ಹನಿಯಾಗಿಸದೆ ನಕ್ಕಿದ್ದು ನಿನಗೆ ನೆಮ್ಮದಿಯೇ? “ಪ್ರೀತಿ ಎಂದರೆ ಇದು ಮಾರುಕಟ್ಟೆಯಲ್ಲ, ನನ್ನಲ್ಲಿ ನಿನಗೆ ನಿರೀಕ್ಷೆ ಬೇಡ” ಇದು ನಿನ್ನ ಅಳಲು ಪ್ರೀತಿಯಲಿ ಒಂದಿಷ್ಟು ಸಲುಗೆ ಬೇಡವೆ, ನಾನು ಪರಿಷ್ಕರಣಗೊಂಡಿದ್ದು ನಿನಗೆ ನೆಮ್ಮದಿಯೇ? “ಮಾತು ಮಿತವಾಗಿರಲಿ ಹಿತವಾಗಿರಲಿ, ಬುದ್ದಿವಾದ ನನಗೆ ಇಷ್ಟವಿಲ್ಲ” ಇದು ನಿನ್ನ ಸಂಕಷ್ಟ ತಿದ್ದಿ ಹೇಳಿದ್ದು ಇಷ್ಟವಾಗದಿದ್ದರೆ, ನಾನೇ ತಿದ್ದಿಕೊಂಡಿದ್ದು ನಿನಗೆ ನೆಮ್ಮದಿಯೇ? “ಸೈರಣೆ ಇರಲಿ, ನಾನು ಹೇಳುವುದನ್ನು ಸಮಾಧಾನದಿಂದ ಕೇಳು” ಇದು ನಿನ್ನ ಆಜ್ಞೆ ನನ್ನ ಭಾವನೆ ವ್ಯಕ್ತಪಡಿಸಲಾಗದೇ, ಬಯಕೆ ಬಚ್ಚಿಟ್ಟುಕೊಂಡಿದ್ದು ನಿನಗೆ ನೆಮ್ಮದಿಯೇ? “ಬಂದಿರುವ ಅತಿಥಿಗಳಿಗೆ ಸಮಯಕೊಡಬೇಕಿದೆ ಸಹನೆಯಿಂದಿರು” ಇದು ನಿನ್ನ ಅಹವಾಲು ಇಚ್ಛೆಗಳ ಸಹಿಸಿ ದಹಿಸಿಕೊಂಡಿರುವೆ, ಬೂದಿಯಾಗಿ ಬಿದ್ದಿದ್ದು ನಿನಗೆ ನೆಮ್ಮದಿಯೇ? “ಆರಾಮವಾಗಿರಿ, ಯೋಚಿಸದಿರಿ, ನಿಮ್ಮ ಪಾಡಿಗೆ ನೀವು ಇದ್ದುಬಿಡಿ” ಇದು ನಿನ್ನ ಸವಾಲು ‘ಉಮಿ’ಗೆ ದಿಗಿಲು, ಭುಗಿಲೆದ್ದ ಜ್ವಾಲೆ, ಉರಿ ನಂದಿಸಿ, ವಂದಿಸಿ ನಿಂತದ್ದು ನಿನಗೆ ನೆಮ್ಮದಿಯೇ? ******

ಕಾವ್ಯಯಾನ Read Post »

ಇತರೆ

ನೆನಪು

ವಿ.ಕೆ.ಮೂರ್ತಿ ದಾದಸಾಹೇಬ್ ಫಾಲ್ಕೆ ಪ್ರಶಸ್ತಿ ವಿಜೇತ   ಬೆಳಕು ನೆರಳುಗಳ ಚಮತ್ಕಾರಕ್ಕಾಗಿ ದಾದಸಾಹೇಬ್ ಫಾಲ್ಕೆ ಪ್ರಶಸ್ತಿ  _   ವಿ.ಕೆ.ಮೂರ್ತಿ         ಪ್ಯಾಸಾ, ಕಾಗಜ್ ಕೆ ಫೂಲ್, ಸಾಹಿಬ್ ಬೀಬಿ ಔರ್ ಗುಲಾಮ್, ಜುಗ್ನು, ಸೂರಜ್, ಲವ್ ಇನ್ ಟೋಕಿಯೊ, ಜಿದ್ದಿ, ಇನ್ನೂ ಅನೇಕ ಹಿಂದಿ ಚಲನಚಿತ್ರಗಳ ಛಾಯಾ ಗ್ರಾಹಕ ವಿ.ಕೆ ಮೂರ್ತಿಯವರ ಹೆಸರನ್ನು ಕೇಳದೆ ಇರುವವರು ಯಾರು ಇಲ್ಲ ಎಂದು ಖಂಡಿತವಾಗಿ ಹೇಳಬಹುದು. ಬಹಾರೋ ಫೂಲ್ ಬರ್ಸಾವೊ, ಚೌದವೀಂ ಕಾ ಚಾಂದ್  ಹೊ, ವಕ್ತ್ ನೇ ಕಿಯಾ,  ಸಾಯೊನಾರ, ಹಾಡುಗಳ ರಮ್ಯ ದೃಶ್ಯಗಳು ಇಂದಿಗೂ ಕಣ್ಣಿಗೆ ಕಟ್ಟಿದಂತಿದೆ. ಮತ್ತೆ ಮತ್ತೆ ನೋಡಿದಷ್ಟೂ ಇನ್ನೂ ನೋಡಬೇಕೆಂಬ ಹಂಬಲ, ಇದರ ರಹಸ್ಯ ಗುರುದತ್ ಫಿಲಮ್ಸ್ .ವಿ.ಕೆ ಮೂರ್ತಿ ಯವರ ಅಧ್ಭುತ ಛಾಯಾಗ್ರಹಣ ಚಮತ್ಕಾರ.      ಇತ್ತೀಚೆಗೆ ದಾದಾ ಸಾಹೇಬ್ ಫಾಲ್ಕೆ ಪುರಸ್ಕಾರ ಪಡೆದ ವಿ.ಕೆ. ಮೂರ್ತಿಯವರ ಪರಿಚಯ ಎಲ್ಲರಿಗೂ ಇರುವ ಸಂಗತಿ. ಇಷ್ಟು ಪ್ರಸಿದ್ದವಾದ ದೊಡ್ಡ ಪುರಸ್ಕಾರವನ್ನು ಗಳಿಸಿರುವ ಇವರಿಗೆ  ಸಿಂಗಾರಿ ಪರವಾಗಿ ನಮ್ಮ ಅಭಿನಂದನೆಗಳನ್ನು ಸಲ್ಲಿಸೋಣ.  ಈ ಸಣ್ಣ ಲೇಖನವನ್ನು ಬರೆಯುವ ಮುನ್ನ ವಿ.ಕೆ. ಮೂರ್ತಿಯವರ ಮನೋರಂಜಕ, ಸರಳ,  ಆದರ್ಶ ಜೀವನ ಚರಿತ್ರೆಯನ್ನು ಪುಸ್ತಕದ ರೂಪದಲ್ಲಿ ಕನ್ನಡಿಗರಿಗೆ ನೀಡಿರುವ ಶ್ರೀಮತಿ ಉಮಾರಾವ್ ಅವರಿಗೆ ವಂದನೆಗಳನ್ನು ಅರ್ಪಿಸೋಣ.  –ಬಿಸಿಲು ಕೋಲು– ಎಂಬ ಹೆಸರಿನಲ್ಲಿ ಪ್ರಕಟವಾಗಿರುವ ಈ ಪುಸ್ತಕವನ್ನು ವಿ.ಕೆ.ಮೂರ್ತಿಯವರ ಕೈನಿಂದಲೇ ಪಡೆದದ್ದು ನನ್ನ ಭಾಗ್ಯ.  “ಕುಟ್ಟಿ ” ಇದು ಬಂಧು ಮಿತ್ರರು ಇವರನ್ನು ಪ್ರೀತಿಯಿಂದ ಕರೆಯುವ ಹೆಸರು.  ಪಾರ್ಥನಾರಾಯಣ ಪಂಡಿತರ ಮಗಳಾದ ಸಂಧ್ಯ ಇವರ ಪತ್ನಿ, ನನ್ನ ಸೋದರತ್ತೆಯ ಮಗಳೆಂದು ಹೇಳಲು ಹೆಮ್ಮೆಯಾಗುತ್ತದೆ. ಇವರ ಏಕಮಾತ್ರ ಪುತ್ರಿ ಛಾಯಾ.    ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವ ಹಾಗೆ ವಿ.ಕೆ. ಮೂರ್ತಿಯವರ ವ್ಯಕ್ತಿತ್ವ.  ಈ ಕೆಳಗಿನ ಸಾಲುಗಳು ಅವರ ಲೇಖನ ದಿಂದ ಸೃಷ್ಠಿಯಾಗಿರುವ  ಸರ್ವಜ್ಞನ ಶೈಲಿ ಯಲ್ಲಿ ಬರೆದಿರುವ ಪದ್ಯ, ಇದೇ ಅವರ ಜೀವನದ ಶೈಲಿ. ಈ ಅರ್ಥ ತುಂಬಿದ ಪದ್ಯ  ಅವರು ಕವಿಗಳೂ ಹೌದು ಎಂದು ಸಾರುತ್ತದೆ.           ಸಾರು ಸಾರೆಂದೇಕೆ ಸೊರಗುವೆ         ಸಾರಿದರೆ ಸಿರಿ ಸೊರಗುವುದೇ ಸರಿ         ಸಾರದೆಯೆ ಸಲ್ಲಿಸೊ ಸೇವೆ ಸರ್ವಗ್ನ    ನನಗೆ ಕುಟ್ಟಿಯವರ ಪರಿಚಯ ನಾನು ಮದುವೆ ಯಾದ ಮೇಲೆ ಮುಂಬಯಿಗೆ ಬಂದಾಗಿಂದ,  “ಸಿಂಪಲ್ ಲಿವಿಂಗ್ ಅಂಡ್  ಹೈ ಥಿಂಕಿಂಗ್” ,  ತತ್ವದ ನನ್ನ ಪತಿ ವೆಂಕಟೇಶ್ ಅವರು ಮುಂಬೈ ನಲ್ಲಿ ಕೆಲಸಕ್ಕೆ ಸೇರಿದಾಗಿನಿಂದ ಅಂದರೆ ೩೦ ವರ್ಷಗಳಿಂದ ಇವರ ಸಂಗದಲ್ಲೆ ಬೆಳೆದವರು. ಏಕೆಂದರೆ ಇಬ್ಬರೂ  ಒಂದೆ  ನಾವೆಯ ಪಯಣಿಕರು, ಹೆಚ್ಚು ಮಾತಿಲ್ಲದ, ಬೂದಿ ಮುಚ್ಚಿದ ಕೆಂಡದಂತಹ ಸ್ವಭಾವದವರು.  ಹೆಸರಾಂತ ನಟ ನಟಿಯರ, ಚಲನಚಿತ್ರ ರಂಗದ ಮಿತ್ರರ ಹುಟ್ಟಿದ ಹಬ್ಬಕ್ಕೆ ಕೊಡಬೇಕಾಗಿದ್ದ ಗಿಫ್ಟ್ ಪ್ಯಾಕೆಟ್ಗಳನ್ನು  ವೆಂಕಟೇಶ್ ಅವರು ತಯಾರಿಸಿದಾಗಲೆ ಕುಟ್ಟಿಗೆ ಸಮಾಧಾನವಾಗುತ್ತಿತ್ತಂತೆ!        ‘ದೇವಿನಿವಾಸ’ ಇವರ ಮುಂಬಯಿ ಮನೆ ಅತಿಥಿ ಸತ್ಕಾರ ಗಳ ದೇಗುಲವಾಗಿತ್ತೆಂದರೆ ಅತಿಶಯೋಕ್ತಿಯಲ್ಲ.  ೧೯೬೮ ರಲ್ಲಿ ನಾವು ಮದುವೆಯಾಗಿ ಮುಂಬಯಿಗೆ ಬಂದಾಗ ಮೈಸೂರಿನಲ್ಲಿ ಹುಟ್ಟಿ ಬೆಳೆದ  ನನಗಂತೂ ಎರಡು ಊರುಗಳ ಅಂತರ ಅಜಗಜಾಂತರವಾಗಿತ್ತು. ಮುಂಬಯಿಗೆ ಬಂದ ದಿನ ಮೊದಲು ನಾವು ಹೋಗಿದ್ದು ಸಂಧ್ಯ ಕುಟ್ಟಿ ಯವರ ಮನೆಗೆ . ಆಲ್ಲಿ ನಮಗೆ ದೊರಕಿದ ಅತಿಥಿ ಸತ್ಕಾರ ಇಂದಿಗೂ ಮರೆತಿಲ್ಲ.                               ಮುಂದೆ ಕೊಲಾಬ ಮನೆಯಲ್ಲಿ ಇದ್ದಾಗಲೂ ವಾರಕ್ಕೊಮ್ಮೆ ಕುಟ್ಟಿ, ಸಂಧ್ಯಾ ಅವರನ್ನು ನೋಡಲು ತಪ್ಪದೆ ಹೋಗುತ್ತಿದ್ದೆವು. ಕುಟ್ಟಿಯವರು ಸಂಗೀತ ಪ್ರಿಯರು,  ವಯಲಿನ್, ಸಿತಾರ್ ವಾದ್ಯಗಳನ್ನು ಲೀಲಾಜಾಲವಾಗಿ  ನುಡಿಸುತ್ತಾರೆ. ಸಂಗೀತ ಪ್ರೇಮಿ ಯಾದ ವೆಂಕಟೇಶ್, ಇವರು ನುಡಿಸುತ್ತಿದ್ದ ಸಿತಾರ್ ವಾದ್ಯದಿಂದ ಅಲೆಗಳಂತೆ  ಹೊರಬರುತ್ತಿದ್ದ  ಸ್ವರ, ಸಾಹಿತ್ಯವನ್ನು ಅವರ ಜೊತೆ ಆನಂದವಾಗಿ ಕೇಳುತ್ತಿದ್ದರು. ಛಾಯ, ಆಶ್ವಿನಿ, ಭಾರತಿ, ರಾಘು, ಮಾನಸ ಅವರ ವಿಶ್ವಾಸ ಪೂರ್ವಕ, ಹಾಸ್ಯದ ಹೊನಲ  ಮಾತುಕತೆಗಳೊಂದಿಗೆ, ಸಂಧ್ಯಾರವರ ರಸದೌತಣದ ಸವಿ ನೋಡುತ್ತಾ ಕಳೆದ ಗಳಿಗೆಗಳು ಇಂದಿಗೂ ಅಚ್ಚಿನಂತಿದೆ.                                 ಒಂದು ಸಾರಿ  ನಾನು ಶೂಟಿಂಗ್ ನೋಡಬೇಕೆಂದು ಆಸೆಪಟ್ಟಾಗ ಕುಟ್ಟಿ ನಮ್ಮನ್ನು ಸ್ಟುಡಿಯೊ ಗೆ ಕರೆದುಕೊಂಡು ಹೋದರು. ಶಿಕಾರ್ ಹಿಂದಿ ಚಿತ್ರಕ್ಕಾಗಿ ಇಡೀ ರಾತ್ರಿ ಚಿತ್ರೀಕರಣ. ಪ್ರಸಿದ್ಧ ನಟ ಧರ್ಮೇಂದ್ರ, ಪ್ರಸಿದ್ಧ ನಟಿ ಆಶಾಪರೇಖ್ ಅವರನ್ನು ನೋಡಿದ ನಾವೇ ಧನ್ಯರು. ಆಗಿನ ಕಾಲದಲ್ಲಿ ಧರ್ಮೇಂದ್ರ ಎಂದರೆ ನಮ್ಮ ಅಚ್ಚುಮೆಚ್ಚಿನ ನಟ.. ಅವರ ಸಿನಿಮಾ ಬಿಡುಗಡೆಯಾದ ಮೊದಲನೆ ದಿನ ನೋಡುವುದೆಂದರೆ ಜೇವನದಲ್ಲಿ ಏನನ್ನೊ ಸಾಧಿಸಿದಷ್ಟು ಸಂತೋಷ.  ಕಾಲೇಜ್ ತಪ್ಪಿಸಿ ಮಾರ್ನಿಂಗ್ ಶೋ ಗೆ ಓಡುತ್ತಿದ್ದುದು ಇಂದಿಗೂ ನೆನಪು.   ಶೂಟಿಂಗ್ ನೋಡಿದ ಮೇಲೆ  ಹತ್ತಿರ ನಟ ನಟಿಯರನ್ನು ನೋಡಿದ ಅವಕಾಶ, ಅಬ್ಬಾ ಯಾರಿಗುಂಟು ಯಾರಿಗಿಲ್ಲ, ಈ ಸುವರ್ಣಾವಕಾಶ  ಕಲ್ಪಿಸಿದ  ಕುಟ್ಟಿಯವರಿಗೆ ಇಂದಿಗೂ ಚಿರಋಣಿ.   ನನ್ನ ಅಭಿಮಾನ  ಕುಟ್ಟಿಯವರ ಜೀವನದ ಬಗ್ಗೆ, ಅವರ ಚಿತ್ರ ರಂಗದ ಪ್ರವೇಶ, ಕಡಲ ಉಬ್ಬರವಿಳಿತಗಳಂತೆ ಹಾಸು ಹೊಕ್ಕಾಗಿ ಬಂದ ಇವರ ಪ್ರವೃತ್ತಿಯ ಬಗ್ಗೆ ಬರೆಯಲು ಆಶಿಸುತ್ತಿದೆ. ಈ ಕೆಳಗಿನ ಸಾಲುಗಳನ್ನು ಬರೆಯಲು ಆಧಾರ ಉಮಾರಾವ್ ಅವರ ಬಿಸಿಲು ಕೋಲು ಪುಸ್ತಕ. ಶ್ರೀ ವೆಂಕಟರಾಮ್ ಪಂಡಿತ್ ಕೃಷ್ಣ ಮೂರ್ತಿಯವರ ಜನನ ೧೯೨೨ ನೇ ಇಸವಿ ನವೆಂಬರ್ ೨೬ ನೇ ತೇದಿ. ಹುಟ್ಟಿದ ಊರು ಗಂಧದ ಗುಡಿ ಮೈಸೂರು. ತಂದೆ ವೆಂಕಟರಾಮ ಪಂಡಿತ್ ಆಯುರ್ವೇದ ದ ವೈದ್ಯರಾಗಿದ್ದರು. ತಾಯಿಯವರ ಹೆಸರು ನಾಗಮ್ಮ.  ಐದು ಜನ ಮಕ್ಕಳ ಈ  ದಂಪತಿಗಳಿಗೆ ವಿ.ಕೆ. ಮೂರ್ತಿ ಯವರು ಮೂರನೆ ಮಗ. ಇವರ ಬಾಲ್ಯ ಸಂಪಿಗೆ ಮರಗಳ ನಡುವೆ ಇದ್ದ ಒಂದು ಸುಂದರ ಮನೆಯ ವಾತಾವರಣದಲ್ಲಿ. ಒಬ್ಬರು ಆಣ್ಣ ಮೂರು ಜನ ತಂಗಿಯರ ಜೊತೆ ತಂದೆ ತಾಯಿಯ ಅಕ್ಕರೆಯಲ್ಲಿ. ಬೆಳೆಯುತ್ತಿದ್ದಂತೆ ಬರಸಿಡಿಲು ಬಡಿದಂತೆ ಇವರ ತಾಯಿ ಚಿಕ್ಕವಯಸ್ಸಿನಲ್ಲೆ ಸಾವನ್ನೊಪ್ಪಿದರು. ಅವರ ತಂಗಿಯರು ದೊಡ್ಡಮ್ಮನ ಮನೆ ಸೇರಿದರು.  ಹೀಗಾಗಿ ಕುಟ್ಟಿ ತಂದೆಯ ಆಸರೆಯಲ್ಲೆ ಬೆಳೆದವರು. ಪುಟ್ಟ ಮೂರ್ತಿಯವರಿಗೆ ಮನೆಯಲ್ಲಿ ಹೆಂಗಸರಿಲ್ಲದಿದ್ದ ಕಾರಣ ದೊಡ್ಡ ಅಡುಗೆ ಜವಾಬ್ದಾರಿ. ಬೆಳೆಯುವ ಸಸಿ ಮೊಳಕೆಯಲ್ಲೆ ಎಂಬಂತೆ ತಾವೆ ಪ್ರೆಶರ್ ಕುಕರ್ ತಯಾರಿಸಿ ಕೊಂಡಿದ್ದರಂತೆ!   ಚಿತ್ರರಂಗದ ಕಡೆ ಮನಸ್ಸು ಹರಿಯಲು ಕಾರಣ ಅವರ ನೆಂಟರೊಬ್ಬರಾದ ಸುಬ್ಬರಾಮಯ್ಯ ಅನ್ನುವವರಿಂದ. ಆಗಿನ ಕಾಲದಲ್ಲಿ ಮೂಕಿ ಚಿತ್ರಗಳು ಇದ್ದಿದ್ದರಿಂದ ಸಿನಿಮ ಸನ್ನಿವೇಶಗಳಿಗೆ ಕಳೆ ತುಂಬಲು ತೆರೆಯ ಹಿಂದೆ ವಾದ್ಯ ಸಂಗೀತ ನುಡಿಸುತ್ತಿದ್ದರಂತೆ.  ಇದರಲ್ಲಿ ಸುಬ್ಬ ರಾಮಯ್ಯ ವಾದ್ಯಗಳನ್ನು ನುಡಿಸುತ್ತಿದ್ದವರು.  ಚಿತ್ರ ನೋಡಲು ಇವರ ಆಹ್ವಾನ ಕುಟ್ಟಿಯವರಿಗೆ ಬಹಳ ಸಂತಸದ ಸುದ್ದಿ. ಈ ಆಹ್ವಾನವೆ ಇವರ ಜೀವನದ ಹಾದಿಗೆ ನಾಂದಿಯಾಯಿತೇನೊ!  ಚಿತ್ರರಂಗ, ಮೂಕಿಯಿಂದ ಟಾಕಿಗೆ ಬದಲಾಯಿಸಿದಾಗ ರಾಜಕೀಯ, ಸಾಮಾಜಿಕ, ಆಕ್ಶನ್ ಸಿನಿಮಾಗಳನ್ನು ನೋಡುವ ಅವಕಾಶ ಬಾಲಕ ಕುಟ್ಟಿಯವರಿಗೆ ಲಭಿಸುತ್ತಿತ್ತಂತೆ.     ಇವರ ವಿದ್ಯಾಭ್ಯಾಸ ಬನುಮಯ್ಯ ಮಾಧ್ಯಮಿಕ ಶಾಲೆ ಮತ್ತೆ ಶಾರದಾವಿಲಾಸ ಹೈಸ್ಕೂಲಿನಲ್ಲಿ. ಕ್ರಿಕೆಟ್, ಫುಟ್ ಬಾಲ್, ಚಿಣ್ಣೀ ದಾಂಡು ಇವರ ಮೆಚ್ಚಿನ ಆಟಗಳು. ಜೊತೆಗೆ ಈಜು ಕೂಡ ಇವರಿಗೆ ಪ್ರಿಯ. ಹೆಂಗಸರ ಜೊತೆ ಮಾತಾಡುವುದಕ್ಕೆ ನಾಚುತ್ತಿದ್ದ ಮೂರ್ತಿ ಯವರು ಮುಂದೆ ಪ್ರಸಿದ್ಧ ಹೆಸರಾದ ನಟಿಯರ ಜೊತೆ ಕೆಲಸ, ಅಬ್ಬ ಇದಕ್ಕೆ ಹೇಳುವುದು –ಲೈಫ್ ಈಸ್ ಎ ಮಿಸ್ಟರಿ– ಅಂತ.   ಕಲಾವಿದ ಮೂರ್ತಿಯವರಿಗೆ ಸಂಗೀತ ಕಲಿಯಲು ಆಸೆ ಮೂಡಿದ್ದರಿಂದ ಪಿಟೀಲು ವಾದ್ಯ ಕಲಿಯಲು ಆರಂಭ, ಮತ್ತೆ ಸ್ನೇಹಿತರನ್ನೆಲ್ಲ ಕೂಡಿಸಿ ಆರ್ಕೆಸ್ಟ್ರಾ ಆರಂಭ ಮಾಡಿದರಂತೆ. ಒಂದು ಸಾರಿ ಪ್ರಸಿದ್ಧ ವಿಜ್ಞಾನಿ ಸರ್ ಸಿ.ವಿ. ರಾಮನ್ ಅವರ ಇರುವಿನಲ್ಲಿ ವಾದ್ಯ ಸಂಗೀತ ನುಡಿಸುವ ಅವಕಾಶ, ರಾಮನ್ ಅವರ ಹೊಗಳಿಕೆ ಇವರ ಸಂಗೀತದ ಆಸಕ್ತಿಯನ್ನು ಇಮ್ಮಡಿಸಿತ್ತು.   ಮುಂದೆ ಒಂದು ಪತ್ರಿಕೆಯ ಸಣ್ಣ ಜಾಹೀರಾತು ಇವರನ್ನು ಮುಂಬಯಿ ಕಡೆಗೆ ಸೆಳೆಯಿತಂತೆ.  ಆ ಜಾಹಿರಾತು ಅಲ್ಲಿ ಮೂವೀ ಟೋನ್ ಕಾಲೇಜಿನವರು ಛಾಯಾ ಗ್ರಹಣದಲ್ಲಿ ತರಬೇತು ನೀಡುತ್ತೇವೆ  ಎಂದು  ಸಾರಿದ್ದರಂತೆ. ಚಿತ್ರರಂಗದ ಆಕರ್ಷಣೆ  ಮುಂಚಿಂದಲೆ ಇದ್ದ ಕುಟ್ಟಿ ಯವರಿಗೆ ಇದು ಕಬ್ಬಿಣ ಅಯಸ್ಕಾಂತವನ್ನು ಆಕರ್ಷಿಸಿದಂತೆ  ಎಂದು ಬೇರೆ ಹೇಳಬೇಕಿಲ್ಲ. ಮುಂಬಯಿಗೆ ಅಣ್ಣಾ ಅತ್ತಿಗೆಯವರ ಉತ್ತೇಜನದಿಂದ ಹೊರಟರೆ ಅಲ್ಲಿ ಮುಂದೆ ಆಗಿದ್ದು ದೊಡ್ಡ ನಿರಾಸೆ, ಅದು ಒಂದು ಮೋಸದ ಜಾಹೀರಾತು. ಮುಂಬಯಿನಲ್ಲಿ ನೆಂಟರ ಮನೆಯಲ್ಲಿ ಮೂರು ತಿಂಗಳು ವಾಸದ ನಂತರ ಮೈಸೂರಿಗೆ ವಾಪಸ್ಸು ಬಂದಾಗ ಆಗಲೆ ಕ್ವಿಟ್ ಇಂಡಿಯ ಚಳುವಳಿ ಆರಂಭ. ದೇಶಪ್ರೇಮದಿಂದ ಚಳುವಳಿಯಲ್ಲಿ ಭಾಗವಹಿಸಿದಾಗ ಮೂರು ತಿಂಗಳು ಜೈಲು ವಾಸದ ಅನುಭವ. ಅಲ್ಲೂ ಕೂಡ ಲೀಡರ್ ಆಗಿ ಎಷ್ಥೋ ಖೈದಿಗಳಿಗೆ ಸಹಾಯ ಮಾಡುತ್ತಿದ್ದರಂತೆ.   ಇವರ ಮುಂದಿನ ಹೆಜ್ಜೆ ಜಯಚಾಮರಾಜೇಂದ್ರ ಆಕ್ಯುಪೇಷನಲ್ ಇನ್ಸ್ಟಿಟ್ಯೂಟ್ ಗೆ ಮೈಸೂರಿಂದ ಬೆಂಗಳೂರಿಗೆ ಪಯಣ, ಕಾರಣ ಅಲ್ಲಿ ಇವರಿಗೆ ಪ್ರಿಯವಾದ ಸಿನಿಮಟೋಗ್ರಫಿಯಲ್ಲಿ ತರಬೇತು ನೀಡುತ್ತಿದ್ದರು. ಒಂದು ಸಣ್ಣ ಕ್ಯಾಮರ ಮೂಲಕ ಪಾಠ ಹೇಳುತ್ತಿದ್ದರಂತೆ. ಆ ಕ್ಯಾಮರಾನ ವಿದ್ಯಾರ್ಥಿಗಳು ದೂರದಿಂದಲೆ ನೋಡಬೇಕಾಗಿತ್ತು ಅನ್ನುತ್ತಾರೆ  ಕುಟ್ಟಿಯವರು, ಆದರೆ ಮುಂದೆ ದೊಡ್ಡ ದೊಡ್ಡ ಕ್ಯಾಮರಾ ಗಳು ಕಪ್ಪು ಬಿಳುಪು ಗಳಿಂದ ಮುಂದೆ ಸೌಂದರ್ಯ ಬಣ್ಣ ಗಳಿಂದ ಅವರ ಕೈಚಳಕದಿಂದಲೇ ಮೆರೆದವು. ಆಬ್ಬ ಆ ಕ್ಯಾಮರಗಳ ಅದೃಷ್ಟ ಯಾರಿಗಿದೆ!.   ಇಲ್ಲಿಯ ಕೋರ್ಸ್ ಮುಗಿಯುತ್ತಿದ್ದಂತೆ ಸರ್ಟಿಫಿಕೇಟ್ ಪಡೆಯಲು ಟ್ರೈನಿಂಗ್ ಗಾಗಿ ಮುಂಬಯಿಗೆ ಪ್ರಯಾಣ. ಅಲ್ಲಿ ಕೆಲಸ ಕಲಿಯಲು ಸೇರಿದ್ದು  ಪ್ರಕಾಶ್ ಸ್ಟುಡಿಯೊ. ಅಲ್ಲಿಂದ ಮುಂದಿನ ಹೆಜ್ಜೆ ಫಲಿಮಿಸ್ತ್ರಿ ಗೆ ಸಹಾಯಕರಾಗಿ ಕೆಲಸ ಮಾಡಿದ್ದು.   ಚಿತ್ರರಂಗದ ಜೊತೆಯಲ್ಲಿ ರಂಗ ಭೂಮಿ ಆಕರ್ಷಣೆ ಕೂಡ! ಇದಕ್ಕೆ ನಾಂದಿ ಮೈಸೂರ್ ಅಸೊಸಿಯೇಶನ್ ನಲ್ಲಿ ಗಗ್ಗಯ್ಯನ ಗಡಿಬಿಡಿ ನಾಟಕ ನಿರ್ದೇಶಿಸಿದ್ದು. ಹಾಗೆಯೆ ಕನ್ನಡ ಗೀತೆಗಳನ್ನು ಹಾಡುವ ಆಸಕ್ತಿ. ಒಂದು ಸಾರಿ ದ.ರ. ಬೇಂದ್ರೆ ಯವರ ಸನ್ನಿಹದಲ್ಲಿ ಮುಂಬಯಿ ಪೋದಾರ್ ಕಾಲೇಜಿನಲ್ಲಿ, ಆ ಕವಿಯೇ ಬರೆದ ಕವಿತೆ ಮೂಡಲ ಮನೆಯ ಮುತ್ತಿನ ನೀರಿನ, ಹಾಡುವ ಅವಕಾಶ. ನಿಜಕ್ಕು ಕುಟ್ಟಿಯವರು ಜಾಕ್ ಆಫ್ ಆಲ್ ಟ್ರೇಡ್ಸ್ಲ್!   ನವೆಂಬರ್ ೨೬, ೧೯೬೧ ಇಸವಿಯಲ್ಲಿ ಪಾರ್ಥನಾರಾಯಣ ಪಂಡಿತ್, ನಮ್ಮ ತಂದೆಯವರ ಸಹೋದರಿ ರತ್ನಮ್ಮ ಅವರ ಮಗಳಾದ ಸಂಧ್ಯ ಅವರೊಡನೆ ತಿರುಪತಿಯಲ್ಲಿ ವಿವಾಹ, ಮತ್ತೆ ಮುಂಬಯಿ ಯ ಗಡಿ ಬಿಡಿ ಜೀವನ. ಕುಟ್ಟಿಯವರಷ್ಟೇ ಕಲೆಯಲ್ಲಿ ಆಸಕ್ತಿ ಇದ್ದ ಸಂಧ್ಯಾಗೆ ಅವರೇ ಹೇಳಿರುವಂತೆ ಯಾವ ತರಹ ಲಕ್ಶ್ಮಣ ರೇಖೆಗಳಿಲ್ಲದ ಕಲಾಜೀವನಕ್ಕೆ ಕುಟ್ಟಿಯವರ ಉತ್ತೇಜನ ಇತ್ತಂತೆ. ಬಂಧು ಮಿತ್ರರಿಗೆಲ್ಲಾ ಸಂಧ್ಯಾ  ಎಂದರೆ ಬಹಳ ಗೌರವ ಹಾಗೂ ಪ್ರೀತಿ, ನನ್ನ ಪತಿ ವೆಂಕಟೇಶ್ ಇವರನ್ನು ಪ್ರೀತಿ ಇಂದ ದೀದಿ ಎಂದೆ ಕರೆಯುತ್ತಿದ್ದರು. ಇಬ್ಬರೂ ಕಣ್ಮರೆಯಾಗಿದ್ದು  ನಮ್ಮ ದುರಾದೃಷ್ಟ.   ೧೯೫೦ ನೆ ಇಸವಿಯಲ್ಲಿ ಗುರುದತ್ ಮತ್ತು ಕುಟ್ಟಿ ಯವರ ಮೊದಲ ಭೇಟಿ, ಅದು ಅವರು ಅಫ್ಸರ್ ಅನ್ನುವ ಚಿತ್ರದಲ್ಲಿ ಕ್ಯಾಮರಾಮನ್ ಆಗಿ ಕೆಲಸ ಮಾಡುತ್ತಿದ್ದಾಗ, ಇವರಿಬ್ಬರ ಪರಿಚಯ ಮಾಡಿಸಿದವರು ಪ್ರಸಿದ್ಧ ನಟ ದೇವಾನಂದ್ ಅವರು, ಗುರುದತ್ ಮತ್ತು  ದೇವಾನಂದ್ ಮೆಚ್ಚಿನ ಗೆಳೆಯರಾಗಿದ್ದರಂತೆ. ಕುಟ್ಟಿಯವರ ಕೆಲಸ ಗಮನಿಸುತ್ತಿದ್ದ ಹಾಗೆ ಗುರುದತ್ ಹೇಳಿದರಂತೆ, -“ಮೂರ್ತಿ ನನ್ನ ಮುಂದಿನ ಚಿತ್ರದಲ್ಲಿ ನಾವಿಬ್ಬರೂ ಸೇರಿ ಒಟ್ಟಿಗೆ ಕೆಲಸ ಮಾಡೋಣ” ಎಂದು,  ಗುರುದತ್

ನೆನಪು Read Post »

You cannot copy content of this page

Scroll to Top