ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಖಾಲಿ ದೀಪ ಮತ್ತು ಕತ್ತಲು

ಬಿದಲೋಟಿ ರಂಗನಾಥ್

ಕಟ್ಟಿದ ಮಣ್ಣಗೋಡೆಯು

ತಪ ತಪನೆ ಬೀಳುತ್ತಿದೆ

ನಿದ್ದೆಯಿಲ್ಲದ ರಾತ್ರಿಗಳ ಕನಸು ಮನೆ

 ಪ್ರತಿ ಇಟ್ಟಿಗೆಯ ಮೇಲೂ

 ನಿನ್ನ ಶ್ರಮದ ಬೆವರ ವಾಸನೆ

ನೀನು ಮಲಗೆದ್ದ ಜಾಗದ ನಿಟ್ಟುಸಿರು

ಕಣ್ಣೀರಾಕುತ್ತಿದೆ

ನೀನೆ ನೆಟ್ಟ ನಂಬಿಕೆಯ ಗಿಡದ ಬುಡಕ್ಕೆ

ಪಾದರಸ ಸುರಿದ ಅವಳು

 ಇವತ್ತು ಬೀದಿ ನಾಯಿಯ ಬಾಲ

ಅವಮಾನದ ಗಾಯ ನಂಜಾಗಿ ನಸಿರಾಡಿ

ಬದುಕುವ ಭರವಸೆಯು ಕುಂದಿ

ನೆಲದ ಮೇಲಿಟ್ಟ ಅಷ್ಟೂ ಹೆಜ್ಜೆಗಳು

ಕೆಂಡಗಳಾಗಿ ಧಗ ಧಗಿಸಿ ಉರಿದು

ಜೀವವನ್ನೇ ಸುಟ್ಟ

ನರಳುವಿಕೆಯ ಧ್ವನಿಯಲ್ಲಿ

ಮಕ್ಕಳ ಮೇಲಿನ ಪ್ರೀತಿ ಹಸಿ ಹಸಿಯಾಗಿತ್ತು

ಮಣ್ಣು ತಿನ್ನುತ್ತಿರುವ

ನಿನ್ನದೆ ದೇಹದ ಮೂಳೆಯನ್ನು ಒರಸಿ ನೋಡಿದೆ

ಎಷ್ಟೊಂದು ಕನಸುಗಳು ಜೀವಂತವಾಗಿದ್ದವು

ರೆಕ್ಕೆ ಪುಕ್ಕ ಎತ್ತಿಕೊಂಡು

ಮುಚ್ಚಿದ ರೆಪ್ಪೆಗಳಡಿಯಲ್ಲಿ

ಸವೆಯದ ಹಾದಿ ತೆರೆದೇ ಇತ್ತು

 ಮಾತಾಡಿಸಿದೆ

ತಮ್ಮನೆಂಬ ಹೆಸರು ಎದೆಯೊಳಗೆ ಬಿರಿದು

ಮೌನದ ಗುಂಡಿಯಲಿ

ಮಾತುಗಳು ಸತ್ತಿರುತ್ತವೆಂಬ ಸಣ್ಣ ಅರಿವೂ ಇಲ್ಲದೆ.

ಅಲ್ಲಿಂದ ಎದ್ದು ಮಾರು ದೂರ ನಡೆದೆ

 ಬಂದ ದಾರಿಗೆ ಸುಂಕವಿಲ್ಲದೆ.

ತಡೆಯದ ಮನಸು

ಮತ್ತೆ

ತಿರುಗಿ ನೋಡಿತು

ಮಣ್ಣ ಹೊದಿಕೆಯಮಾಡಿನೊಳಗೆ

ಎಷ್ಟೊಂದು ಶಾಂತತೆಯಲಿ ಮಲಗಿದೆ

ಹಾರಿ ಹೋದ ಪ್ರಾಣ ಪಕ್ಷಿಯ ದೇಹ

ತಲೆದೆಸೆಯ ಗೂಡ ದೀಪದೊಳಗಿನ ಬತ್ತಿ

ಎಣ್ಣೆ ಇರುವವರೆಗೆ ಮಾತ್ರ ಉರಿಯುತ್ತದೆ.

ನಂತರ ಉಳಿಯುವುದು ಕೇವಲ

ಖಾಲಿ ದೀಪ ಮತ್ತು ಕತ್ತಲು.

***********************************

About The Author

Leave a Reply

You cannot copy content of this page

Scroll to Top