ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕಾವ್ಯಯಾನ

ಹೂ ಕವಿತೆಗಳು. ರಂಗಮ್ಮ ಹೊದೇಕಲ್ ಗಂಧವಾಗಲು ಬೇರು ಎಷ್ಟು ನೋಯಬೇಕೋ.. ಘಮ ವಾಗಲು ದಾರಿ ಎಷ್ಟು ಸವೆಯಬೇಕೋ.. ನೆಲದಲ್ಲಿ ಭದ್ರ ಬೇರೂರಿ ಆಕಾಶಕ್ಕೆ ಕಣ್ಣು ನೆಟ್ಟು ಪರಿಮಳದ ಬೆಡಗ ಹಾಡುವ ಸೋಜಿಗವ ಹೂಗಳೇ ತೆರೆದಾವು ನೋಡಾ…….!! ಸೋತ ಮಾತು ಹುಗಿದು ಗಿಡ ನೆಡಬೇಕು ಅರಳಿದ ಹೂವಾದರೂ ಮಾತ ಕಲಿಸಿಯಾತು!! ಒಲವೂ ವಿಷವಾಗುವ ಕಾಲದಲ್ಲಿ ಹೂವೂ ಕೆರಳುವುದು ಅಚ್ಚರಿಯೇನಲ್ಲ!! ಬೇರಿನ ನೋವು..ಹೂವಿನ ನಗೆಯು! ನೊಂದೆನೆಂದು ಡಂಗೂರ ಸಾರದ ಬೇರು ಹೂ ನಗೆಯಲ್ಲಿ  ಲೋಕ ಸೆಳೆಯುತ್ತದೆ! ಬೇರಿನ ಕಣ್ಣೀರು ಗುರುತಾದವರು ಹೂವಿನ ಘಮಕ್ಕೆ ಕೃತಜ್ಞತೆ ಸಲ್ಲಿಸುತ್ತಾರೆ-ಮೌನದಲ್ಲಿ! ಹೂವಿನ ಸೌಂದರ್ಯ ಬೇರಿನ ಕಣ್ಣಲ್ಲಿದೆ ಬೇರಿನ ನಗು ಅರಳಿದ ಹೂವಿನಲ್ಲಿ!! ತುಳಿಯುತ್ತಾರೆಂದು ಗೊತ್ತಿದ್ದೂ ನೆಲಕೆ ಹೂ ಚಲ್ಲುವ ಮರ ನಮಗೆ ಮಾದರಿಯಾಗುವುದೇ ಇಲ್ಲ!! ಮತ್ತೇನಿಲ್ಲ… ನನ್ನ ಶಕ್ತಿಯ ಗುಟ್ಟು ನನ್ನನ್ನೆತ್ತಿ ನಿಲ್ಲಿಸಿದ ಅದೃಶ್ಯ ಬೇರಿನದು! ಈ ಹೂ ನಗು ಬೇರಿನ ಅಂತಃಕರಣಕ್ಕೆ ಕೃತಜ್ಞತೆಯು..! ನೆಲದಲ್ಲಿ ಭದ್ರ ಬೇರೂರಿ ಆಕಾಶಕ್ಕೆ ಕಣ್ಣು ನೆಟ್ಟು ಪರಿಮಳದ ಬೆಡಗ ಹಾಡುವ ಸೋಜಿಗವ ಹೂಗಳೇ ತೆರೆದಾವು ನೋಡಾ…….!! ಮತ್ತೇನು? ಹೂ ಅರಳುತ್ತದೆ ಉರುಳುತ್ತದೆ..!! ಅಷ್ಟರಲ್ಲೇ ಬದುಕೂ ಇದೆ!! ಹೂ ಬೆಡಗ ಹಾಡುತ್ತಾ ನಿಲ್ಲಬೇಡ! ಬೆನ್ನ ಹಿಂದೆ ಚೂರಿ ಇದ್ದಾತು! ಹೂ ಗಂಧದ ಹಾಗೆ ಮೌನ ತೇಲಿಬರುತ್ತದೆ ಎಲ್ಲರಿಗೂ ತಲುಪಲಾಗದು! ರಂಗಮ್ಮ ಹೊದೇಕಲ್ ಕವಿಪರಿಚಯ: ಶಾಲಾ ಶಿಕ್ಷಕಿಯಾದ ಇವರು ಶೈನಾ ಕೈಬರಹದ ಪತ್ರಿಕೆಯ ಕೈಬರಹಗಾರ್ತಿ.ಒಳದನಿ,ಜೀವಪ್ರೀತಿಯ ಹಾಡು ಇವರ ಕವನಸಂಕಲನಗಳು.

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಲೆಕ್ಕ ಇಡುವುದನ್ನು  ನಿಲ್ಲಿಸಿದ್ದೇನೆ ಚಂದ್ರಪ್ರಭ.ಬಿ ಅದೊಂದು ದಿನ ಅಪ್ಪ ನನ್ನ ಅವಸರಿಸಿ ಬರ ಹೇಳಿದ ಶಾಲೆಯಿಂದ ಓಡೋಡಿ ಬಂದ ನನ್ನ ತೆಕ್ಕೆಯಲ್ಲಿ ಬಿಗಿದು ಒಂದೇ ಸಮ ರೋಧಿಸಿದ ಅವನೂ ಅನಾಥನಾಗಿದ್ದ ನನ್ನಂತೆ ತನ್ನವ್ವನ ಕಳಕೊಂಡು ಆಡು ಕುರಿ ದನ ಮೇಯಿಸುತ್ತ ಅಪ್ಪನ ಕೂಗಿಗೆ ಓಗೊಡುತ್ತ ಆಗಾಗ ಶಾಲೆಗೂ ಮುಖ ತೋರಿಸುತಿದ್ದೆ ವರ್ಷದ ಕೊನೆಗೆ ಗೆಳೆಯರೆಲ್ಲ ಮುಂದಿನ ತರಗತಿಗೆ ನಾನು ಮಾತ್ರ ಹಿಂದೆ ಮೇಷ್ಟ್ರು ಹೇಳಿದರು – ‘ಗಣಿತದಲ್ಲಿ ನೀ ಎಲ್ಲ ಕಳಕೊಂಡೆ’ ವಸಂತ ಲಗ್ಗೆಯಿಟ್ಟುದು ಅರಿವಾದುದೇ ಅವಳ ರಾಗ ನನ್ನ ಕವಿತೆ ಸಂಧಿಸಿದಾಗ ನಮ್ಮ ನಡುವೆ ಗೋಡೆ ಎಳೆದವು ಅಂತಸ್ತಿನ ಇಟ್ಟಿಗೆ ನಾ ಬರಿಗೈಯಾಗಿದ್ದೆ ಒಲವ ಕಳಕೊಂಡು ಜೀವನ ನಾಟಕದ ಅಗಾಧ ರಂಗಸ್ಥಲ ಅಗಣಿತ ಪಾತ್ರ ಒಂದೊಂದು ಅಂಕದಲೂ ತಿರುವುಗಳ ರೋಚಕತೆ ತಿರುವು ತಿರುವಿನಲೂ ಬಗೆ ಬಗೆಯ ಲೆಕ್ಕ ಎಟುಕುತ್ತಲೇ ಕೈ ಜಾರುವ ಕೈಚೆಲ್ಲಿ ಕೂತಾಗ ತೆಕ್ಕೆಗೆ ಬಂದು ಬೀಳುವ ಸಂಗತಿಗಳ ವಿಸ್ಮಯ ಬದುಕಿನಲ್ಲಿ ಈಗ ಎಲ್ಲವೂ ಇದೆ ಕಳೆದುಕೊಳ್ಳುವುದು ನಿತ್ಯದ ಪರಿಪಾಠವಾದಂದಿನಿಂದ ಲೆಕ್ಕ ಇಡುವುದನ್ನು  ನಿಲ್ಲಿಸಿದ್ದೇನೆ. ಚಂದ್ರಪ್ರಭಾ ಕವಿ ಪರಿಚಯ: ಕಾಲೇಜಿನಲ್ಲಿ ಉಪನ್ಯಾಸಕರು. ಸಾಹಿತ್ಯದ ಓದು, ಬರವಣಿಗೆಯಲ್ಲಿ ಆಸಕ್ತಿ. ಕವಿತೆ, ಲೇಖನ ಬರೆಯುವ ಹವ್ಯಾಸ. ಪ್ರಕಟಿತ ಕೃತಿಗಳಿಲ್ಲ

ಕಾವ್ಯಯಾನ Read Post »

You cannot copy content of this page

Scroll to Top