ಕಾವ್ಯಯಾನ
ಒಳದನಿ ಶಹನಾಜ್ ಬಿ. ಸಿರಿವ್ಯಾಲ ಒಳದನಿ ಅಂದು ನೀನು ನೆಟ್ಟಿದ್ದ ಜಾತ್ಯತೀತತೆಯ ವೃಕ್ಷ ಇಂದು ರಾಜಕೀಯ ವಿಷ ಗಾಳಿಗೆ ಸಿಲುಕಿ ನಿತ್ಯವೂ ನರಳುತ್ತಿದೆ. ನೀಲಿ , ಕೆಂಪು ಕ್ರಾಂತಿಗಳ ನಡುವೆಯೂ ದಮನಿತರ ಕಣ್ಣುಗಳಲ್ಲಿ ನೋವು ಮಡುಗಟ್ಟಿದೆ. ಅದ್ಯಾಕೋ ನಿನ್ನ ಬುದ್ಧನಿಂದಲೂ ಈ ಸಮಾಜವನ್ನು ತಿದ್ದಲಾಗಲಿಲ್ಲ. ವೇಮುಲನ ಮುಖ ಪ್ರತಿ ಬಾರಿ ನೆನೆದಾಗಲೂ , ಎಲ್ಲೋ ಬಾಪುವಿನ ನಾಡಲ್ಲಿ ಕೃಶ ದೇಹಗಳಿಂದ ರಕ್ತ ಒಸರಿದಾಗಲೂ , ಮತ್ತೆಲ್ಲೋ ಅವಳ ತಿಂದುಂಡ ದೇಹಕ್ಕೆ ಬಲವಂತದ ಬೆಂಕಿ ಹಚ್ಚಿದಾಗಲೂ , ನಿನ್ನ ಆಳೆತ್ತರದ ಸದ್ಗ್ರಂಥವ ಹಿಡಿದ ದಾರಿ ತೋರುತ್ತಿರುವ ಪ್ರತಿಮೆ ಧುತ್ತೆಂದು ಸ್ಮೃತಿಪಟಲದಲ್ಲಿ ಮಿಂಚಿ ಮಾಯವಾಗುತ್ತದೆ. ನೀ ಮತ್ತೆ ಹುಟ್ಟಿ ಬಾ ಎಂದು ಹೇಳಲಾರೆ. ನಿನ್ನ ಚಿಂತನೆಗಳು ನಿನ್ನವರನ್ನ ಮಾತ್ರ ಆವರಿಸಿಲ್ಲ ಈ ಧರಣಿಯ ಎಲ್ಲ ಶೋಷಿತರ ನೋವಿಗೆ ಮುಲಾಮಾಗಿವೆ. ನವ ಸಮಾಜ ಸಮ ಸಮಾಜ ಕಟ್ಟುವ ಕನಸಿಗೆ ರಂಗು ಹಚ್ಚಿವೆ . ಇದ್ಯಾಕೆ ‘ಈ’ ಜನ ಹೀಗೆ ಎಂದು ಪ್ರತಿ ಬಾರಿ ಕುಸಿದಾಗಲೂ ಶಕ್ತಿ ಕೊಡುವ ಮಹಾ ಚೇತನವೇ ನಿನಗೊಂದು ನನ್ನ ಸಲಾಮು. *************

