ಕಾವ್ಯಯಾನ
ಗಝಲ್ ಸಹದೇವ ಯರಗೊಪ್ಪ ಗದಗ ಹೊಲದ ಇಳಿಜಾರಿಗೆ ಅಡ್ಡ ನೇಗಿಲ ಸಾಲುಗಳ ತೆರೆದ ಮಣ್ಣಿನ ಮಗ| ಅಂಬರದ ಎದೆ ಸೀಳಿ ಮುಗಿಲ್ವನಿಗಳ ಗೂಡು ಕಟ್ಟಿದ ಮಣ್ಣಿನ ಮಗ|| ಒಕ್ಕಲುತನ ಕಲೆ ವಿಜ್ಞಾನ ವಾಣಿಜ್ಯಗಳ ಸಂಗಮ ಎಂದು ತೋರಿಸಿದ ಜಂಗಮ| ನೆಲದ ಜ್ವರದ ಪರಿಗೆ ವಲಸೆ ಹೋಗುವ ತಥಿಗಳಿಗೆ ಲಗಾಮ ಜಡಿದ ಮಣ್ಣಿನ ಮಗ|| ಆಗಮೆ ಮಾಡಿದರೂ ಬೀಯಕ್ಕೆ ಭತ್ತವಿಲ್ಲದೆ ಅಗುಳು ಅನ್ನಕ್ಕಾಗಿ ಚೀರಾಟ| ಮೋಡಗಳ ಮೈಥುನವನ್ನು ಕೆರೆ ಕಟ್ಟೆ ಬಾವಿಗಳಲ್ಲಿ ಸಂಗ್ರಹಿಸಿದ ಮಣ್ಣಿನ ಮಗ|| ಗಡಿಯಾರದಂತೆ ತಿರುಗುವ ಋತುಗಳ ಹಿಂದೆ ಮೇಟಿ ಹಿಡಿದು ತಿರುಗಿದವನು| ಕುದಿವ ಬರಡು ನೆಲಕೆ ಹಸಿರು ಕುಸುರಿ ಸೀರೆ ಉಡಿಸಿದ ಮಣ್ಣಿನ ಮಗ|| ಹಂಗಾಮುಗಳ ಜೂಜಾಟಕ್ಕೆ ಬೇಸತ್ತು ಹಳ್ಳಿಗಳಿಗೆ ಬೆನ್ನು ಮಾಡಿ ಅಲೆದವನು| ಆಧುನಿಕ ಕೃಷಿಯ ಕವಲುದಾರಿಗಳನ್ನು ಬೇಧಿಸಿ ಸಾಧಿಸಿದ ಮಣ್ಣಿನ ಮಗ|| ಬೆನ್ನಿಗೆ ಬೆನ್ನು ಹಚ್ಚಿ ಹಗಲಿರುಳು ದುಡಿದು ಮಣ್ಣಿಗೆ ಬೆವರು ಹನಿಗಳ ಹಿಂಡಿದವನು| ಬರ ನೆರೆಗೆ ತಾನೇ ತುತ್ತಾದರೂ ಜಗದ ತುತ್ತಿನ ಚೀಲ ತುಂಬಿದ ಮಣ್ಣಿನ ಮಗ|| ಮಣ್ಣಿಗೆ ವಿಷ ಬೆರೆಸಿ ಜಗಕೆಲ್ಲ ವಿಷವುಣಿಸುವ ಸಾಚಿ ಕೃಷಿಗೆ ದಿಕ್ಕಾರವಿರಲಿ| ಬಂಡಿ ಬಂಡಿ ಕುಂಡಿ ಗೊಬ್ಬರವ ಉಣಿಸಿ ಖಂಡುಗದ ರಾಶಿ ಬೆಳೆದ ಮಣ್ಣಿನ ಮಗ|| ***********









