ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕಾರ್ಮಿಕ ದಿನದ ವಿಶೇಷ-ಕವಿತೆ

ಬೆವರ ಹನಿಗಳು ಚೈತ್ರಾ ಶಿವಯೋಗಿಮಠ ಬೆವರ ಹನಿಗಳು ದುಡಿಯುವ ಕೈಗಳು, ದೇವರ ಕೈಗಳು ಹೊಲದಲಿ ಕೃಷಿಕ ಗಡಿಯಲಿ ಸೈನಿಕ ದುಡಿಯಲು ಕಾರ್ಮಿಕ ಕಾಯಕ ಯೋಗದ ಹರಿಕಾರರು ಬಸವಾದಿ ಪ್ರಮಥರು ದುಡಿಮೆ, ಶ್ರಮದ ಮಹತ್ವ ಸಾರಿದ ಜಗದ ಶ್ರೇಷ್ಠ ಕಾರ್ಮಿಕರು ದುಡಿಯುವ ಜೀವಗಳಿಗೆ ಸದಾ ಸಮೃದ್ಧಿಯಿರಲಿ ದುಡಿಸುವವರಿಗೆ, ಶ್ರಮಿಕರಿಗೆ ಪ್ರೀತಿ-ಗೌರವ ನೀಡುವ ಬುದ್ಧಿ ಸರ್ವದಾ ಇರಲಿ ಕಠಿಣ ಪರಿಶ್ರಮ ದುಡಿಮೆಯೇ ರಾಮನಾಮ. ಕಾರ್ಮಿಕನಿಗಿಲ್ಲ ವಿರಾಮ! ಇವರಿಗೆ, ದುಡಿಮೆಯೆ ದೈವ ಸ್ವಾಭಿಮಾನವೆ ಭವ-ಭಾವ ಪರಿಶ್ರಮವೆ ವಿಭವ! ಬೇಕು, ಚಿಪ್ಪಿಗೆ ಸ್ವಾತಿ ಮುತ್ತಾಗಲು ದೇಶಕೆ ಕಾರ್ಮಿಕ ಅಭಿವೃದ್ಧಿಯಾಗಲು ಮನೆಯ ಗೃಹಿಣಿ ರಜೆಯೇ ಇರದ ಕಾರ್ಮಿಕ ಗುಡಿಸಿ, ಸಾರಿಸಿ, ಬೇಯಿಸಿ ಎಲ್ಲರ ಹೊಟ್ಟೆ ಹೊರೆಯುವ ಶ್ರಮಿಕ ಅರೆಬರೆ ತುಂಬಿದರೂ ಹೊಟ್ಟೆ ದುಡಿಯಲು ಸದಾ ಸಿದ್ಧ ರಟ್ಟೆ ಬಲ ಒಂದೆಯಲ್ಲ, ಮತಿಯೂ ಅಸ್ತ್ರ ಮಾತು, ಬುದ್ಧಿಮತೆಯೆ ದುಡಿಯುವ ಸಾಫ್ಟ್ ಕಾರ್ಮಿಕರ ಶಸ್ತ್ರ ********

ಕಾರ್ಮಿಕ ದಿನದ ವಿಶೇಷ-ಕವಿತೆ Read Post »

ಕಾವ್ಯಯಾನ

ಕಾವ್ಯಯಾನ

ಕಾಮಿ೯ಕರ ದಿನ ಎನ್. ಆರ್ .ರೂಪಶ್ರೀ ಕಾಮಿ೯ಕರ ದಿನ ತುತ್ತು ಅನ್ನಕ್ಕಾಗಿ ಬಾಳನ್ನು ತೆತ್ತು ತೆತ್ತು ಹಗಲಿರುಳು ದುಡಿತದ ನೆರಳಿನಲಿ ಸಾಗುತಿದೆ ಕಾಮಿ೯ಕನ ಹೊತ್ತು. ದಿನ ದಿನವೂ ಅನುದಿನವೂ ನೋವು ನರಳಾಟ ಅರಳುವುದು ಕಣ್ಣಿನಲ್ಲಿ ಕುಡಿಮಿಂಚು ನಗೆಯಾಟ ಬಲ್ಲಿದರ ಬಂಧನದಿ ಸದಾ ಶೋಷಣೆಯ ಸೆರಗು ಇದೇ ಏನೋ ಕಾಮಿ೯ಕನ ಜೀವನಕೆ ಸಂತಸದ ಮೆರಗು. ತಾನು ತನ್ನದೆನ್ನುವ ಹಕ್ಕಿನ ಹಂದರ ಹಸಿದು ಬಸವಳಿದಿದೆ ಆಸೆ ಆಮಿಷಗಳ ದೂರದ ಬಯಕೆಗಳ ಗೋಪುರದ ಗುಮ್ಮಟ ತಲೆಯೆತ್ತಿ ನಿಂತಿದೆ. ದು:ಕ ದುಗುಡ ದುಮ್ಮಾನಗಳಿಗೆ ತಂಪೆರೆಯುವ ಸಿಂಚನದ ಮಿಂಚಾಗಿ ಬಂದಿರುವುದು ಕಾಮಿ೯ಕರ ದಿನವೆಂಬ ಶುಭ ಶಕುನದ ಒಸಗೆ *******

ಕಾವ್ಯಯಾನ Read Post »

ಕಾವ್ಯಯಾನ

ಕಾರ್ಮಿಕ ದಿನದ ವಿಶೇಷ-ಕವಿತೆ

ಕವಿತೆ ಕಾವಲಿಯಿಂದ_ಕೆಂಡಕ್ಕೆ ಲಕ್ಷ್ಮಿಕಾಂತಮಿರಜಕರ ಕಾವಲಿಯಿಂದ_ಕೆಂಡಕ್ಕೆ ಚರಂಡಿ ಬದಿಯ ಮುರುಕಲು ಶೆಡ್ ಗಳಲ್ಲಿ ಸಹಿಸುತ್ತ ಕಚ್ಚುವ ಸೊಳ್ಳೆಗಳ ನೋವು ನಾಳೆಯೂ ಕೆಲಸಕ್ಕೆ ಹೋಗದಿದ್ದರೆ ಹೊಟ್ಟೆಗೇನೂ ಸಬೂಬು ಹೇಳುವುದೆಂದು ಚಿಂತಾಮಗ್ನದಲ್ಲಿ ನಾವಿರುವಾಗ ನೀವಾಗಲೇ ಚಪ್ಪಾಳೆ ತಟ್ಟುವ ಸಂತೋಷದಲ್ಲಿ ಮೈಮರೆತು ಮೀಯುತ್ತಿದ್ದಿರಿ ನಿಮ್ಮ ನಿಮ್ಮ ಅರಮನೆಗಳ ಬಾಲ್ಕನಿಗಳಲ್ಲಿ ನಿಂತು ನಿಮ್ಮ ಚಪ್ಪಾಳೆಯ ಲಯಬದ್ಧ ಸದ್ದಿಗೆ ಸಮವಲ್ಲ ಬಿಡಿ ನಮ್ಮ ಹಸಿದ ಹೊಟ್ಟೆಗಳ ತಾಳ ತಿಂಗಳಪೂರ್ತಿ ಸಾಕಾಗುವಷ್ಟು ದಿನಸಿಗೋದಾಮು ಪೇರಿಸಿಡಲು ನೀವು ನಗುತ್ತಲೇ ಹೆಣಗಾಡುತ್ತಿದ್ದ ಸಮಯದಲ್ಲಿ ನಮ್ಮ ಬದುಕು ಪೇರಿಕಿತ್ತಿತ್ತು ಬಿಸಿಲಿಗೆ ಕಾದು ಬೆಂಕಿಯಾಗಿದ್ದ ರಸ್ತೆ ಮೇಲೆ ಹೊತ್ತು ತಲೆಮೇಲೊಂದು ಕೈಯಲ್ಲೊಂದು ಗಂಟುಮೂಟೆ ಸೋತಕಾಲುಗಳಿಗೆ ಸಾಂತ್ವನ ಹೇಳುತ್ತ ಭಾರವಾದ ಹೆಜ್ಜೆಗಳನ್ನು ಕಿತ್ತಿಡುತ್ತ ಹಲ್ಲಿಯ ಬಾಯಿಯ ಸಿಕ್ಕಿ ಬಿದ್ದಿದ್ದ ಕೀಟದಂತೆ ತಲೆಮೇಲಿಂದ ಆಗಷ್ಟೇ ಹಾರಿಹೋಗಿತ್ತು ದೂರದೇಶಗಳಿಂದ ರಾಜರಾಣಿಯರನ್ನು ಹೊತ್ತು ತಂದಿದ್ದ ವಿಶೇಷ ವಿಮಾನ ನಮ್ಮ ಬರಿಗಾಲುಗಳ ಮೆರವಣಿಗೆಯನ್ನು ಅಣುಕಿಸುತ್ತ ಇಡಿ ದೇಶಕ್ಕೆ ದೇಶವೇ ಮನೆ ಮುಂದೆ ದೀಪ ಬೆಳಗಿಸಿ ಸೆಲ್ಫಿ ತೆಗೆಸಿಕೊಳ್ಳುವ ಸಂಭ್ರಮದ ಮುಂದೆ ಹಸಿವಿನಿಂದ ರಸ್ತೆಬದಿಯಲ್ಲಿ ನಂದಿಹೋದ ಎಷ್ಟೋ ಬಡಜ್ಯೋತಿಗಳ ಪ್ರಾಣ ಯಾರಿಗೂ ಮಹತ್ವವೆನಿಸಲೇ ಇಲ್ಲ ಬೆನ್ನಿಗಂಟಿದ ಬಡತನದ ಶಾಪಕ್ಕೆ ಉಳ್ಳವರ ದೌರ್ಜನ್ಯ, ಅತ್ಯಾಚಾರದ ಕಾಟಕ್ಕೆ ಜಾತಿ ಶೋಷಣೆಯ ಅವಮಾನಕ್ಕೆ ಬೇಸತ್ತು ನಗರಕ್ಕೆ ಗುಳೆ ಬಂದಿದ್ದು ನಮ್ಮದೇ ತಪ್ಪು ಪುರಾತನ ಕಾಲದಿಂದಲೇ ನಮ್ಮಿಂದ ಅಂತರ ಕಾಪಾಡಿಕೊಂಡೇ ಬದುಕಿದ್ದ ದೇವಾನುದೇವತೆಗಳ ಮಕ್ಕಳು ನೀವು ಅಗೋಚರ ವೈರಾಣು ಕೃಪೆಯಿಂದ ನಮ್ಮ ನಡುವಿನ ಅಂತರಕ್ಕೆ ಈಗಂತೂ ಅಜಗಜಾಂತರ ವ್ಯತ್ಯಾಸ ನಿಮಗಷ್ಟೇ ಸಿಗಲಿ ಚಂದಿರನೂರಿನ ದಾರಿ ಜೊತೆಗೆ ಹರುಷ,ಸಂತೃಪ್ತಿ ಖುಷಿ,ಸುಗ್ಗಿ,ಸುಖದ ಸಂತೆಯೂ ನಮ್ಮೂರಿನ ಬತ್ತಿದ ಹೊಳೆಬದಿಯ ಮುಳ್ಳು ಕಂಟಿಗಳ ಜಾಗವೇ ನಮಗಿರಲಿ ಇದ್ದೇಇರುತ್ತವೆ ಜೊತೆಗೆ ಬೇಡವೆಂದರೂ ಕಷ್ಟ,ದುಃಖ, ನಿರಾಸೆ ನಿಲ್ಲದ ನಿಟ್ಟುಸಿರು,ಬಿಕ್ಕಳಿಕೆಯೂ ನಮಗೀಗ ಖಾತರಿಯಾಗಿದೆ ಬಡವರ ಬದುಕು ಕಾವಲಿಯಿಂದ ಕೆಂಡಕ್ಕೆ ಬಿದ್ದಿರುವುದು ********

ಕಾರ್ಮಿಕ ದಿನದ ವಿಶೇಷ-ಕವಿತೆ Read Post »

ಕಾವ್ಯಯಾನ

ಕಾರ್ಮಿಕ ದಿನದ ವಿಶೇಷ-ಕವಿತೆ

ಕೂಲಿಯವನ ಮಗ ನಾನು ವಾಯ್.ಜೆ.ಮಹಿಬೂಬ ಕೂಲಿಯವನ ಮಗ ನಾನು ಬಡವನಾದರೇನಂತ ಇಲ್ಲೆನಗ ಬ್ಯಾಸರ ಕಣ್ಣತುಂಬ ನಿದ್ದೀಗಿ ಗುಡಿಸಲೆಮಗೆ ಆಸರ !!ಪ!! ಕೂಲಿಯವನ ಮಗನಾನು ಬಿಸಿಲೆಮಗೆ ಸಹೋದರ ನಮ್ಮಪ್ಪ ಅಂತಾನ ಮುಗಿಲೆ ನಮಗೆ ಹಂದರ !!೧!! ಅವ್ವನ ಸೀರಿ ಶೆರಗೇ ಒರಿಸೇತಿ ಬೆವರ ಹಾಸಿಗೆ ಆಗತೈತಿ ಅಪ್ಪನ ಹರಕ ಧೋತರ!!೨!! ಹಬ್ಬಕವರು ಕಾಣಲಿಲ್ಲ ಹೊಸ ಸೀರಿ-ದೋತರ ಸತ್ತಾಗ ಕಟ್ಟತೀರಿ ಅರವಿ ಐದು ಮೀಟರ್ !!೩! ******

ಕಾರ್ಮಿಕ ದಿನದ ವಿಶೇಷ-ಕವಿತೆ Read Post »

ಕಾವ್ಯಯಾನ

ಕಾರ್ಮಿಕ ದಿನದ ವಿಶೇಷ-ಕವಿತೆ

ಕಾರ್ಮಿಕ-ಶ್ರಮಿಕ ಪ್ರೊ.ಕವಿತಾ ಸಾರಂಗಮಠ ಕಾರ್ಮಿಕ-ಶ್ರಮಿಕ ದೇವನಿತ್ತ ಭೂಮಿಯಲ್ಲಿ ಶ್ರಮಿಕ ಪ್ರಾಮಾಣಿಕತೆಯ ಧನಿಕ ಸಮಯದ ಪರಿಪಾಲಕ ನಿತ್ಯ ದುಡಿದು ತಿನ್ನುವ ಕಾಯಕ! ಕರ್ಮದಿಂದ ಜಗವೆಲ್ಲ ಸುಗಮ ಕರ್ಮದಿಂದಲೇ ಸಂತಸದ ಉಗಮ ಹರಿಸುತ ನಿತ್ಯ ಬೆವರ ಸುಮ ಜಗವೆಲ್ಲ ಹರಡುವ ಶ್ರಮದ ಕುಸುಮ! ಶ್ರಮದೊಂದಿಗೆ ದಿನಚರಿ ಆರಂಭ ಅವಿರತ ದುಡಿದ ಬೆವರಲವನ ಬಿಂಬ ಸಹಿಸುವ ಧನಿಕರ ದಬ್ಬಾಳಿಕೆ ಆದರೂ ಇವನ ಕೆಲಸಕಿಲ್ಲ ಹೋಲಿಕೆ! ಕಟ್ಟುವ ನಿತ್ಯ ಕಾಯಕದ ಕಟ್ಟೆ ಕೈಯಲ್ಲಿ ಹಿಡಿದು ಉಣ್ಣುವ ಕರ್ಮದ ತಟ್ಟೆ ತೊಟ್ಟರೂ ಚಿಂದಿ ಬಟ್ಟೆ ಎಂದು ಬಿಡದವ ಕಾಯಕ ನಿಷ್ಠೆ! ವೃತ್ತಿ ಭೇದಗಳಿಲ್ಲ ನಾ ಮೇಲೆಂಬ ಭಾವವಿಲ್ಲ ಪ್ರಾಮಾಣಿಕತೆಯೆ ಇವನಿಗೆಲ್ಲ ದುಡಿದು ತಿಂದು ಬದುಕಾಗಿಸಿಕೊಂಡಿರುವ ಬೆಲ್ಲ! *******

ಕಾರ್ಮಿಕ ದಿನದ ವಿಶೇಷ-ಕವಿತೆ Read Post »

ಕಾವ್ಯಯಾನ

ಕಾರ್ಮಿಕ ದಿನದ ವಿಶೇಷ-ಕವಿತೆ

ಸನ್ಮಾನ ಸಂಮ್ಮೋದ ವಾಡಪ್ಪಿ ಸನ್ಮಾನ ಗಳಿಕೆಗೆ ಸ್ವಾಭಿಮಾನದ ದಿಟ್ಟ ಹೆಜ್ಜೆ ಇಡುತ ಬೆವರ‌ ಹನಿಗಳ ಸುರಿಸಿ ದುಡಿಮೆಯಲಿ ನಗುತ ಭವ್ಯ ದೇಶದ ಏಳಿಗೆಯ ಬೆನ್ನೆಲಬು ನಾವು ಶ್ರಮದ ದಾರಿ ಜೀವನದುದ್ದಕ್ಕೂ ನಡೆಯುತಿಹೆವು ಒಗ್ಗಟ್ಟಿನಲಿ ಒಕ್ಕೊರಲಿನ ಶಿಸ್ತಿನ ನಡೆಯು ದಣಿವಿಲ್ಲದ‌ ಚಲನೆ ನಿಲ್ಲಬೇಕು ಮನೆಯು ಸಹಿಷ್ಣುತೆಯಿಂದ ಸದಾ‌ ಕಾರ್ಯೋನ್ಮುಖ ಆತ್ಮವಿಶ್ವಾಸದ ಪಡೆ ಆಗನೆಂದು ವಿಮುಖ ಕಾರ್ಮಿಕರು ಒಂದೇ‌ ಸೂರಿನಲಿ ಬಂಧುಗಳು ಸಮಯ‌‌ ಪಾಲನೆ, ಶ್ರದ್ಧೆಯೇ ಪ್ರಮಾಣಗಳು ತಂತ್ರಜ್ಞಾನ ಕಾರ್ಯತಂತ್ರದಲ್ಲಿ‌ಯೂ ಪರಿಣಿತರು ಆರ್ಥಿಕತೆಯ ಬುನಾದಿ ನಿರಂತರ ಸಾಧಕರು ದಿನ‌‌ ವಾರ ಮಾಸ ವರುಷ ದಿಟ್ಟ ದುಡಿಮೆ ವಿವಿಧ ಕಾರ್ಯ ಅನೇಕ‌ ಕ್ಷೇತ್ರದ ಹಿರಿಮೆ ಕಾರ್ಮಿಕರ ಬಲ ದಕ್ಷತೆ ದೇಶದ ಹೆಮ್ಮೆ ಶಕ್ತಿ ಯುಕ್ತಿ ಕಾರ್ಯದಿ ಇವರೇ ರಾಷ್ಟ್ರದ ಗರಿಮೆ ಮೇ ದಿನವು ಕಾರ್ಮಿಕರಿಗಾಗಿ ಒಂದು ದಿನ ಪ್ರತಿಯೊಬ್ಬರ ಶ್ರಮಕೆ ಈ ಕವನದಿ ಸನ್ಮಾನ *******

ಕಾರ್ಮಿಕ ದಿನದ ವಿಶೇಷ-ಕವಿತೆ Read Post »

ಕಾವ್ಯಯಾನ

ಕಾರ್ಮಿಕ ದಿನದ ವಿಶೇಷ-ಕವಿತೆ

ಭರವಸೆಯ ಬದುಕು ಪ್ರತಿಭಾ ಹಳಿಂಗಳಿ ಭರವಸೆಯ ಬದುಕು ದುಡಿಯುವ ಕೈಗಳೇ ನಿವೇನು ಬೇಡುತಿರುವಿರಿ ಹೊತ್ತು, ಹೊತ್ತಿನ ಊಟ ಇರಲೊಂದು ನೆಲೆ ಇಷ್ಟು ಸಾಕಲ್ಲವೇ? ಇಲ್ಲ ಸಾಕಾಗಲಿಲ್ಲ ನಾವೇನು ಯಂತ್ರಗಳಲ್ಲ, ನಮ್ಮ ‌ದೇಹದಲ್ಲೂ ಹರಿದಾಡುತಿದೆ ರಕ್ತ ಅದು ಕೂಡ ಕೆಂಪಲ್ಲವೇ ನಿಮ್ಮೆಲ್ಲರ‌ ಹಾಗೆ. ಬೆವರು ಸುರಿಯುತಿಹೆ ನಮ್ಮ ಹಣೆಯ ಮೇಲೆ ಅದು ಯಾರದೋ ಸಂಪತ್ತಿನ ಬಂಡವಾಳವಂತೆ ಹಗಲು, ರಾತ್ರಿ ಶ್ರಮವಹಿಸಿ ಮೈಯೆಲ್ಲ ಹಣ್ಣಾಗಿಸಿ ದುಡಿಯುತಿರೆ ನಾವು ನೀವು ಕೊಡುವ ಕಾಸು ಧರ್ಮದ್ದೇನಲ್ಲ. ಇಂದು ಬೆವರು ಹರಿಸಿದಾಗಲೇ ದೊರಕುವದು ಅನ್ನ ಸಿಗದೆ ಹೋದರೆ ಕೆಲಸ ದಿನವೂ ಉಪವಾಸವೇ. ಯಾರಿಗೂ ತಿಳಿಯದು ಈ ತಳಮಳ ನಮ್ಮ ಬದುಕು ಎಂದಿಗೂ ಹಾದಿ,ಬೀದಿಯಲ್ಲಿಯೇ ಭರವಸೆ,ಭದ್ರತೆ ,ಕನಿಷ್ಠ ಗೌರವವು ಇಲ್ಲದೆ ನಡೆಯುತಿದೆ ನಮ್ಮ ಜೀವನ. ******

ಕಾರ್ಮಿಕ ದಿನದ ವಿಶೇಷ-ಕವಿತೆ Read Post »

ಕಾವ್ಯಯಾನ

ಕಾರ್ಮಿಕ ದಿನದ ವಿಶೇಷ-ಕವಿತೆ

ಕವಿತೆ ಗಝಲ್ ಪ್ರತಿಮಾ ಕೋಮಾರ ಗಜಲ್ ಕರವೆರಡು ಕೊರಡಾದರೂ ಸೋಲುವುದಿಲ್ಲ  ಅವನು ಉಳಿ ಮೇಲೆ ಉಳಿ ಬಿದ್ದರೂ ಎದೆಗುಂದುವುದಿಲ್ಲ ಅವನು ಕತ್ತಲೇ ಮನೆಯಾದರೂ ಕೊರಗುವುದಿಲ್ಲ ಅವನು ಎಲ್ಲರಿಗೂ ಬೆಳಕನ್ನೇ ಹಂಚಿದರೂ ಬೀಗುವುದಿಲ್ಲ ಅವನು ಒಡಲಾಳದಲ್ಲಿ ಹರಿದರೂ ಲಾವಾ, ಹೇಳಿಕೊಳ್ಳುವುದಿಲ್ಲ ಅವನು ಉಳ್ಳವರು ತುಳಿಯುತ್ತಲಿದ್ದರೂ ಚಕಾರವೆತ್ತುವುದಿಲ್ಲ ಅವನು ಮಳೆ,ಬಿಸಿಲು ,ಚಳಿ ಏನೇ ಇದ್ದರೂ ಅಳುಕುವುದಿಲ್ಲ  ಅವನು ಕಾಯಕದಲ್ಲಿ ಮೇಲು ಕೀಳೆಂಬ ಭಾವ ತೋರುವುದಿಲ್ಲ ಅವನು ಆಲಸ್ಯದಿ ದುಡಿಯದೇ ಕುಳಿತು ಉಣ್ಣುವುದಿಲ್ಲ ಅವನು ಕಾಯಕವೇ ಕೈಲಾಸ ಎಂಬ ತತ್ವ ಮರೆಯುವುದಿಲ್ಲ ಅವನು ( ಶ್ರಮಿಕರಿಗೆ ನಮನ , ಮೇ ಕಾಮಿ೯ಕರ ದಿನ )

ಕಾರ್ಮಿಕ ದಿನದ ವಿಶೇಷ-ಕವಿತೆ Read Post »

ಕಾವ್ಯಯಾನ

ಕಾರ್ಮಿಕ ದಿನದ ವಿಶೇಷ-ಕವಿತೆ

ನಾವು ಮತ್ತು ಅವರು ಶೋಭಾ ನಾಯ್ಕ. ಹಿರೇಕೈಕಂಡ್ರಾಜಿ. ನಾವು ಮತ್ತು ಅವರು ಇಲಿ ಕೊರೆದ ಮನೆ ಗೋಡೆಗೆ ಮಣ್ಣ ಮೆತ್ತಿಯೇ ಬಂದಿದ್ದಾರಿಲ್ಲಿ ಮಹಡಿ ಮನೆಗೆರಡು ಕಂಬ ಎಬ್ಬಿಸಲು ಅವರ ಮೈ ಬೆವರಿಗಷ್ಟು ಕೂಡಿಸಿ, ಕಳೆದು ಲೆಕ್ಕಹಾಕಿ ಕೂಲಿ ಕೊಡುವ ನಾವುಗಳು ನಮ್ಮ ಮೈ ಬೆವರನ್ನು ಹೇಳಿದಷ್ಟು ಕಟ್ಟಿ ಇಳಿಸಿ ಬರುತ್ತೇವೆ. ಸಂಜೆ ಮೀನು ಮತ್ತು ಮಾರುದ್ದ ಜಡೆಯ ಮಗಳಿಗೆರಡು ರಿಬ್ಬನ್ನು ಒಯ್ಯುವಾಗ ನಗುತ್ತವೆ ಅವರ ಕೈಯಲ್ಲಿ ನಾವೇ ಕೊಟ್ಟ ನೋಟುಗಳು ಇಲ್ಲಿನ ಬರಕತ್ತಿನ ಬದುಕ ಕಂಡು ಕೊನೆಗೂ ಕಂಡದ್ದೇನು ಇಲ್ಲಿ? ಮುಚ್ಚಿದ ಬಾಗಿಲ ಒಳಗಡೆ ಕೋರೈಸುವ ಗ್ಲಾಸು, ಹೊಳೆಯುವ ಟೆರೇಸು ಬಿಟ್ಟರೆ, ಹಸಿರ ಕೊಂದು ಜಾರುವ ನೆಲ ಹಾಸು ದುಡಿದು ರಾತ್ರಿ ಮನೆ ಸೇರಿದ ಅವರೋ.. ಜೋಗುಳ ಕೇಳಿಸಿಕೊಂಡಂತೆ ನಿದ್ದೆ ಹೋಗುತ್ತಾರೆ ಜೋಪಡಿಯಲ್ಲಿ ನಾವೋ… ದಿಂಬಿನ ಜೊತೆಗೆ, ನಿದ್ದೆಯನ್ನೂ ಮಾರುವವರಿಗಾಗಿ ಬರ ಕಾಯುತ್ತಿದ್ದೇವೆ ಇಲ್ಲಿ ಈ ಮಹಡಿ ಮನೆಯಲ್ಲಿ. *******

ಕಾರ್ಮಿಕ ದಿನದ ವಿಶೇಷ-ಕವಿತೆ Read Post »

ಕಾವ್ಯಯಾನ

ಕಾರ್ಮಿಕ ದಿನದ ವಿಶೇಷ-ಕವಿತೆ

ಕವಿತೆ ನಾವು ಕಾರ್ಮಿಕರು ಸಾಯಬಣ್ಣ ಮಾದರ ನಾವು ಕಾರ್ಮಿಕರು ನಮ್ಮಗರಿವಿಲ್ಲದೆ ಹಗಲು ಇರುಳು ಚಲಿಸುತ್ತಿವೆ ಕಷ್ಟಕಾರ್ಪಣ್ಯಕೆ ಬರವಿಲ್ಲದೆ ಚಲಿಸುತ್ತಿದೆ ಜೀವ ಮುಸುಕು ಹೊದ್ದು ಹಸುರನುಟ್ಟು ನಾಳೆ ಎಂಬುವುದು ಭಯವಿಲ್ಲದೆ! ತಲೆಯೊಡೆದು ಬದಕುವವರು ನಾವಲ್ಲ ಬರಿ ದುಡಿದು ತಿನ್ನುವರು ನಾವೆಲ್ಲ ! ನಿಮ್ಮ ಗೋಪುರ ಮೀನಾರಗಳಿಗೆ ನಮ್ಮ ಎಲುಬುಗಳೆ ಹಂದರವಾಗಿ ನಿಮ್ಮ ತೆವಳುವ ಕನಸುಗಳಿಗೆ ನಮ್ಮ ಸ್ವಪ್ನದೆಲೆಗಳಾಗಿ ಚಲಿಸುತ್ತಿದ್ದೇವೆ ಮಾಸಿದ ಬಣ್ಣ ಬಳಿದುಕೊಂಡು ನಿಮ್ಮ ಭಾಷೆ-ಭಾವಗಳು ನುಂಗಿ ಹಾಕಿವೆ ಎಷ್ಟೊಂದು ಜೀವಗಳು ಉಸಿರಿನ ಸಮಾಧಿಗಳ ಮೇಲೆ ಆಕಾಶದಲ್ಲಿ ಹಾರಾಡಿ ನೀರಿನಲ್ಲಿ ತೇಲಾಡಿ ಭೂಮಿಯಲ್ಲಿ ಹುಂಕರಿಸುವವರೆ ಕಣ ಕಣದ ಕೆಂಬಣ್ಣ ಸುರಿಸಿ ದೇಶ ಕಟ್ಟಲು ಜೀವ ತೆತ್ತವರು ನಾವು ! ಚಿಗುರಿದ ಹೂವ ಮಾಲೆ ಮಾಡಿಕೊಂಡವರು ನೀವು! ಮಲಹೊತ್ತು ಚಪ್ಲಿ ಹೊಲೆದು ಚರಂಡಿ ಬಳಿದು ರೋಡಿಗೆ ಟಾರು ಹೊತ್ತವರು ನಿಮ್ಮ ಶವಕ್ಕೆ ಮುಕ್ತಿದಾತರು ನಾವು ! ಬರಿ ಸ್ವಚ್ಛ ಭಾರತ ವಾರಸದಾರರು ನೀವು ಮಳೆ ಬಿಸಿಲಿಗೆ ಮೈಯೊಡ್ಡಿ ದಬ್ಬಾಳಿಕೆ ಅವಮಾನಕ್ಕೆ ಕಲ್ಲಾಗಿ ದುಡುಮೆಯೇ ದೇವರೆಂದು ಹೊಟ್ಟೆ ತುಂಬುವ ಕನಸಿಗಾಗಿ ಕಲ್ಲಿಗು ಕಣ್ಣೀರಾದ ಬದಕು ನಮ್ಮದು ಬೆನ್ನು ಬಾಗಿಸಿ ಕಣ್ಣು ಪಿಳುಕಿಸಿ ಚರ್ಮ ಸುಟ್ಟು ನೆರಿಗೆ ಬಿದ್ದವರು ಆಸೆಗೋಪುರ ಕಳಚಿ ಆಕಾಶವೆ ಚಪ್ಪರ ಹೊದ್ದು ಭೂಮಿಯೇ ಹಾಸಿಗೆ ಮಾಡಿಕೊಂಡು ಬದುಕುವ ನಮ್ಮ ಬಾಳೆ ಬೆಂಗಾಡು ನಾವು ಇರದಿದ್ದರೆ ನಿಮ್ಮ ಬಾಳು ಬರಿ ಗೋಳು !! ******

ಕಾರ್ಮಿಕ ದಿನದ ವಿಶೇಷ-ಕವಿತೆ Read Post »

You cannot copy content of this page

Scroll to Top