ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಥಾಗುಚ್ಛ

ಅಲೀಕತ್ತು

ಅಲೀಕತ್ತು ಕಥೆ ಕೆ. ಎ. ಎಂ. ಅನ್ಸಾರಿ “ನಮ್ಮ ಮಗಳು ಆಮಿನಾ ಳಿಗೆ ವಯಸ್ಸು ಹನ್ನೆರಡು ಆಯಿತಲ್ಲವೇ…? ಇನ್ನು ಒಂದೆರಡು ವರ್ಷ ಆದ್ರೆ ಮದುವೆ ಗಂಡು ಹುಡುಕಬೇಕು… ಅದಕ್ಕಿಂತ ಮೊದಲು ಅವಳಿಗೆ ಅಲೀಕತ್ತು ತೊಡಿಸಬೇಕಲ್ಲಾ…” ಪೋಕರ್ ಹಾಜಿ ಮಡದಿ ಪಾತುವಿನಲ್ಲಿ ಹೇಳುವುದು  ಆಮಿನಾಳಿಗೆ ಕೇಳಿಸುತ್ತಿತ್ತು ಅಲೀಕತ್ತು ಎಂಬ ಪದ ಕೇಳುತ್ತಿದ್ದಂತೆಯೇ ಅಪ್ಪನ ಮಂಚದ ಕೆಳಗೆ ಮಲಗಿದ್ದ ಅಮಿನಾ ನಾಚಿ ನೀರಾದಳು… ಅವಳಿಗೆ ಬಂಗಾರವೆಂದರೆ ಪ್ರಾಣ. ಆಮಿನಾ ಕೇಳಿಸಿಕೊಂಡವಳಂತೆ ನಟಿಸಲಿಲ್ಲ.. ಅವಳಷ್ಟಕ್ಕೆ ಚಾಪೆಯಲ್ಲಿ ಹೊರಳಾಡುತ್ತಿದ್ದಳು… … ರಾತ್ರಿ ಸುಮಾರು ಗಂಟೆ 12 ಕಳೆದಿರಬಹುದು.. ಆಮಿನಾಳಿಗೆ ನಿದ್ದೆಯಿಲ್ಲ. ಅಪ್ಪನ ಗೊರಕೆ ಸದ್ದು ಕೇಳಿಸುತ್ತಿತ್ತು.. ಅಮ್ಮ  ತನ್ನ ಪಕ್ಕದಲ್ಲಿ ಗಾಢ ನಿದ್ದೆಯಲ್ಲಿದ್ದಳು.. ಆಮಿನಾ ಎದ್ದು ಮೆಲ್ಲಗೆ ಸದ್ದು ಮಾಡದೆ ಬಚ್ಚಲು ಮನೆಯತ್ತ ನಡೆದಳು… ಬಚ್ಚಲು ಮನೆಗೆ ಹೊರಡುವಾಗ ಅಪ್ಪ ಮೀಸೆ ಕತ್ತರಿಸುವಾಗ ಬಳಸುತ್ತಿದ್ದ ಕನ್ನಡಿ ಒಯ್ಯಲು ಮರೆಯಲಿಲ್ಲ. ಬಚ್ಚಲು ಮನೆಯಲ್ಲಿ ಚಿಮಿಣಿ ದೀಪದ ಬೆಳಕು ಏರಿಸುತ್ತಾ ತನ್ನ ಮೊಗವನ್ನೊಮ್ಮೆ ನೋಡಿದಳು. ಕನ್ನಡಿ ನೋಡಿ ನಕ್ಕಳು… ಕನ್ನಡಿಯಲ್ಲಿ ಕಿವಿಯನ್ನು ನೋಡುತ್ತಾ ಸಂಭ್ರಮಿಸಿದಳು.. ಕತ್ತಲ್ಲಿ ಇದ್ದ ಬೆಳ್ಳಿಯ ಸರವನ್ನು ಸರಿಪಡಿಸಿ ತನ್ನ ಎದೆಯನ್ನೊಮ್ಮೆ ನೋಡಿ ನಾಚಿದಳು. … ಅಪ್ಪನ ಕೆಮ್ಮುವ ಸದ್ದು ಕೇಳಿಸುತ್ತಿದ್ದಂತೆ ಭಯದಿಂದ ಚಿಮಿಣಿ ದೀಪ ಮತ್ತು ಕನ್ನಡಿಯೊಂದಿಗೆ ಜಾಗ ಖಾಲಿ ಮಾಡಿ ಏನೂ ಅರಿಯದವಳಂತೆ ಸ್ವಸ್ಥಾನದಲ್ಲಿ ಬಂದು ಮಲಗಿದಳು.. ನಾಳೆ ಬಟ್ಟೆ ಒಗೆಯಲು ಹೋಗುವಾಗ ಈ ವಿಷಯ ಗೆಳತಿ ಗುಬ್ಬಿಯಲ್ಲಿ ಮತ್ತು ಅತೀಕಾ ಳಲ್ಲಿ ಹೇಳಬೇಕು ಎಂದು ತೀರ್ಮಾನಿಸಿದಳು… .. ರಾತ್ರಿಯ ನಿದ್ದೆ ಕೈಕೊಟ್ಟ ಕಾರಣ ಎಂದಿನ ಸಮಯಕ್ಕೆ ಆಮಿನಾ ಎಚ್ಚರಗೊಳ್ಳಲಿಲ್ಲ. ಅಮ್ಮ ನಮಾಜು ಮಾಡಿ ಬಂದ ನಂತರ ಕರೆದಳು.. ಗಂಟೆ 6 ಕಳೆಯಿತು. ನಮಾಜು ಮಾಡಿ ನಂತರ ಬೇಕಿದ್ದರೆ ಮಲಗು… ಆಮಿನಾ ಥಟ್ಟನೆ ಎದ್ದು ಬಚ್ಚಲು ಕೋಣೆಗೆ ಓಡಿದಳು.. ವುಜೂ ಮಾಡಿ ನಮಾಜಿಗೆ ನಿಂತಳು… ನಮಾಜಿಗೆಂದು ನಿಂತಿದ್ದರೂ ಮನಸ್ಸು ಮಾತ್ರ ನಿನ್ನೆ ರಾತ್ರಿಯ ಸಂಭಾಷಣೆಯ ಪ್ರತಿಫಲನ.. .. “ಅಮ್ಮಾ ಅಪ್ಪ ಎಲ್ಲಿ… ?” “ಅಪ್ಪ ಬೆಳಗ್ಗೆ ಮಸೀದಿ ಹೋದವರು ಬಂದಿಲ್ಲ. ನಿನಗೆ ಅಲೀಕತ್ತು ತೋಡಿಸಬೇಕು. ಉಸ್ತಾದರಲ್ಲಿ ಸಮಯ ನಿಶ್ಚಯಿಸಿ ಅಕ್ಕ ಸಾಲಿಗನ ಹತ್ತಿರ ಹೋಗಿ ಬರುತ್ತಾರೆ…” ಅಮ್ಮ ಪಾತು ದೋಸೆ ಹುಯ್ಯುತ್ತಾ ಉತ್ತರಿಸುತ್ತಿದ್ದಳು. ತನಗೆ ಏನೂ ಅರಿವಿಲ್ಲದಂತೆ ಆಮಿನಾ ದೋಸೆಯ ತುಂಡೊಂದನ್ನು ತೆಗೆದು ತಿನ್ನ ತೊಡಗಿದಳು. .. ಇನ್ನೇನು ಚಹಾ ಕುಡಿದು ಮುಗಿಯಲಿಲ್ಲ.. ಅಷ್ಟ್ಹೊತ್ತಿಗೇ ಆಮಿನಾ ಎಂಬ ಕೂಗು ಕೇಳಿಸಿತು.. ಕೂಗು ಕೇಳಿಸುತ್ತಿದ್ದಂತೆ ಬಕೆಟ್ ತುಂಬಾ ಬಟ್ಟೆ ತುಂಬಿಸುತ್ತಾ.. “ಹಾಂ ಬಂದೆ ಗುಬ್ಬಿ”  ಎನ್ನುತ್ತಾ ಗೇಟು ತೆಗೆದು ಹೊರ ನಡೆದಳು. ಇಬ್ಬರೂ ಕೂತು ಬಕೆಟಿನಿಂದ ಬಟ್ಟೆ ತೆಗೆಯುತ್ತಾ ಹೊಳೆದಡದಲ್ಲಿ ಮಾತಿಗಾರಂಭಿಸಿದರು.  ರಾತ್ರಿ ನಡೆದ ಸಂಭಾಷಣೆಯನ್ನು ಎಳೆ ಎಳೆಯಾಗಿ ವಿವರಿಸತೊಡಗಿದಳು. ಅಂದ ಹಾಗೆ ಗುಬ್ಬಿ ಈಕೆಯಿಂದ ಎರಡು ವರ್ಷ ದೊಡ್ಡವಳು… ಅಷ್ಟ್ಹೊತ್ತಿಗೆ  ಅತೀಕಾ ಕೂಡಾ ಹೊಳೆ ಪಕ್ಕದಲ್ಲಿ ಬಂದು ಸೇರಿದಳು. ಅತೀಕಾ ಮೆತ್ತಗೆ ಆಮಿನಾಳ ಕೆನ್ನೆಗೆ ಚಿವುಟುತ್ತಾ .. “ಹಾಂ ಮದುವೆಗೆ ಮುನ್ನುಡಿ ಆಯ್ತು ಅಂತ ಹೇಳು.. ಅಲೀಕತ್ತು ಬಂದ್ರೆ ಬರುವ ಒಂದೆರಡು ವರ್ಷಗಳಲ್ಲಿ ಮದುವೆ ಗ್ಯಾರಂಟಿ .. ಅನ್ನು.” ಆಮಿನಾ ನಾಚಿ ನೀರಾದಳು.. …. ಮಧ್ಯಾಹ್ನ ಒಗೆದು ತಂದಿದ್ದ ಬಟ್ಟೆಯನ್ನೆಲ್ಲಾ ಒಣಗಲು ಹಾಕುತ್ತಿದ್ದ ಆಮಿನಾಳಿಗೆ ಅಪ್ಪನ ಕೂಗು ಕೇಳಿಸಿತು… ಆಮಿನಾ … ಅಪ್ಪ ಹತ್ತಿರ ಕರೆದು ಬುದ್ದಿ ಮಾತು ಹೇಳತೊಡಗಿದ.  ‘ನೀನು ಈಗ ದೊಡ್ಡವಳಾಗಿದ್ದಿಯಾ .. ಮುಂಚಿನ ಹಾಗೆಲ್ಲಾ ಹೊಳೆ ಬದಿಯಲ್ಲಿನ ಬಟ್ಟೆ ಒಗೆತ ಕಡಿಮೆ ಮಾಡಬೇಕು. ನಾಡಿದ್ದು ಗುರುವಾರ ನಿನಗೆ ಅಲೀಕತ್ತು ತೊಡಿಸಲು ದಿನ ನಿರ್ಧರಿಸಲಾಗಿದೆ. ಹಾಂ ಬಾಪಾ … ಮರು ಮಾತನಾಡದೆ ಆಮಿನಾ ತನ್ನ ಕಾಯಕ ಮುಂದುವರಿಸಿದಳು.. … ಆಮಿನಾಳ ಖುಷಿ ಏನೋ ಮಾಯವಾದಂತೆ ಕಂಡಿತು ತಾಯಿ ಪಾತುವಿಗೆ. ಸದ್ಯ ಏನೂ ಕೇಳುವುದು ಬೇಡವೆಂದು ಸುಮ್ಮನಿದ್ದಳು. ಮಧ್ಯಾಹ್ನ ಊಟ ಮಾಡಿ ಮಲಗಿದ ಆಮಿನಾಳಿಗೆ ವಿಪರೀತ ಹೊಟ್ಟೆನೋವು…. ಅಮ್ಮ ಬಂದು ಹೊಟ್ಟೆ ಒತ್ತಿ ನೋಡಿಯಾಯಿತು… ಕಿಬ್ಬೊಟ್ಟೆಯ ಹತ್ತಿರ ಒತ್ತಿ ನೋಡುತ್ತಾ.. ಈಗ ನೋವಿದೆಯಾ ಅಮ್ಮ ಕೇಳಿದಾಗ ಹಾಂ.. ಎಂದು ಉತ್ತರಿಸಿದಳು. ಸರಿ ನೀ ಮಲಗಿರು. ಸ್ವಲ್ಪ ಹೊತ್ತಾದ ಮೇಲೆ ಎಲ್ಲಾ ಸರಿಯಾಗಬಹುದು ಎನ್ನುತ್ತಾ ಮುಗುಳ್ನಕ್ಕು ಪಾತು ಹೊರನಡೆದಳು. ಆಮಿನಾಳಿಗೆ ಒಂದೂ ಅರ್ಥವಾಗಲಿಲ್ಲ. ನಾನಿಲ್ಲಿ ಹೊಟ್ಟೆನೋವಿನಿಂದ ಸಾಯುತ್ತಿದ್ದರೂ ಅಮ್ಮನಿಗೆ ನಗು ಎಂದು ಮನಸ್ಸಲ್ಲೇ ಕೋಪಿಸಿದಳು. ನಂತರ ಕಿಟುಕಿಯಿಂದ ನೋಡಲು ಅಮ್ಮ,  ಅಪ್ಪನನ್ನು ಕರೆದು ಕಿವಿಯಲ್ಲಿ ಏನೋ ಪಿಸುಗುಟ್ಟುವುದು ಕಾಣಿಸಿತು. ಆಮಿನಾ ಮಲಗಿಯೇ ಇದ್ದಳು. ಅಮ್ಮ ಬಂದು ಕಿವಿಯಲ್ಲಿ..,”ನೀನು ದೊಡ್ಡವಳಾಗಿದ್ದಿ ಅಷ್ಟೇ.. ಭಯವೇನೂ ಬೇಡ. ಒಂದೆರಡು ದಿನ ಹೀಗೆ ಇರುತ್ತೆ’ ಎಂದು ಸಮಾಧಾನಪಡಿಸಿದಳು. ಥಟ್ಟನೆ ಅವಳಿಗೆ ಗುಬ್ಬಿ ಮತ್ತು ಅತೀಕಾ ಇದರ ಬಗ್ಗೆ ಹೇಳಿದ್ದು ನೆನಪಿಗೆ ಬಂತು. ಆಮಿನಾ ನಾಚಿ ನೀರಾದಳು. ಜೊತೆಗೆ ಮನಸ್ಸಿಗೆ ಏನೋ ಒಂದು ರೀತಿಯ ಖುಷಿ. ದಿನಗಳು ಓಡತೊಡಗಿತು.. ಅಕ್ಕಸಾಲಿಗ ಬಂದು ಕಿವಿ ಚುಚ್ಚಿ ಅಲೀಕತ್ತು ತೊಡಿಸಿ ಚೀಲದಲ್ಲಿ  ವೀಳ್ಯದೆಲೆ, ಅಕ್ಕಿ, ಅಡಿಕೆ ತುಂಬಿಸಿ ದಕ್ಷಿಣೆ ತಗೊಂಡು ಎಲೆ ಅಡಿಕೆ ಜಗಿಯುತ್ತಾ ಹೊರಹೋದ.. ಆಮಿನಾಳಿಗೆ ದಿನಕ್ಕೆ ಹತ್ತು ಹದಿನೈದು ಸಲ ಕನ್ನಡಿ ನೋಡುತ್ತಾ ತನ್ನ ಸೌಂದರ್ಯ ನೋಡುವುದೇ ಅಭ್ಯಾಸವಾಗಿ ಹೋಗಿತ್ತು. ಅಡಿಯಿಂದ ಮುಡಿವರೆಗೆ ತನ್ನನ್ನೇ ಕನ್ನಡಿಯಲ್ಲಿ ನೋಡುತ್ತಾ ಖುಷಿ ಪಡುತ್ತಿದ್ದಳು. ವರುಷ ಒಂದು ಕಳೆಯಿತು. ಒಂದು ದಿನ ರಾತ್ರಿ ಅಪ್ಪ ಪಾತುವಿನಲ್ಲಿ ಹೇಳುತ್ತಿದ್ದ. ಮಗಳಿಗೆ ವರ್ಷ 14 ಆಯಿತು. ಸಯ್ಯದ್ ಬ್ಯಾರಿ ಒಬ್ಬ ಒಳ್ಳೆಯ ಸಂಬಂಧ ಇದೆ ಅಂತ ಹೇಳಿದ್ದಾನೆ. ನಮಗಾದರೆ ಗಂಡಾಗಿ ಹೆಣ್ಣಾಗಿ ಇರುವುದು ಒಂದೇ ಕುಡಿ. ಇನ್ನು ತಡ ಮಾಡುವುದು ಬೇಡ ಎಂದು ತೀರ್ಮಾನಿಸಿ ನಾಡಿದ್ದು ಆದಿತ್ಯವಾರ ಹುಡುಗನ ಕಡೆಯವರನ್ನು ಬರಲು ಹೇಳಿದ್ದೇನೆ. ಅವನೂ ಒಬ್ಬನೇ ಒಬ್ಬ ಮಗನಂತೆ. ಒಳ್ಳೆಯ ತರವಾಡು.. ನಾವು ಹತ್ತಿರದ ಒಂದಿಬ್ಬರು ಸಂಬಂಧಿಕರನ್ನು ಮಾತ್ರ ಕರೆಯೋಣ… ಶನಿವಾರ ಸಂಜೆ ಹೊತ್ತಿಗೆ ಅತೀಕಾ ಮತ್ತು ಗುಬ್ಬಿ ಆಮಿನಾಳ ಮನೆಗೆ ಬಂದರು. ಕೈಗಳಿಗೆ ಮೆಹಂದಿ ಹಚ್ಚುತ್ತಾ ಕೀಟಲೆ ಮಾಡತೊಡಗಿದರು.. “ಹೋಗೇ” ಎಂದು ಬೈದರೂ ಮನಸ್ಸಿನಲ್ಲಿ ಪ್ರಕಟಿಸಲಾಗದ ಖುಷಿಯನ್ನು ಅವಳ ಮುಖಭಾವ ಹೇಳುತ್ತಿತ್ತು. ಆದಿತ್ಯವಾರ ಬೆಳಿಗ್ಗೆಯೇ ಪೋಕರ್ ಹಾಜಿಯ ಇಬ್ಬರು ಅಣ್ಣಂದಿರು ಮತ್ತು ಅವರ ಮಡದಿಯರು ಹಾಜರಾದರು. ತುಪ್ಪದ ಊಟ, ಕೋಳಿ ಸಾರು ಎಲ್ಲಾ ತಯಾರಾಯಿತು. ಮಧ್ಯಾಹ್ನದ ಹೊತ್ತು ಅಂಬಾಸಿಡರ್ ಕಾರಿನಲ್ಲಿ ಮದುಮಗನೊಂದಿಗೆ ಆತನ ಅಪ್ಪ ಅಮ್ಮ ಮತ್ತು ಒಂದಿಬ್ಬರು ಹೆಂಗಸರು ಇಳಿದು ಬಂದರು. ಆಮಿನಾ ಕಿಟುಕಿಯಿಂದ ಇಣುಕಿ ನೋಡುತ್ತಿದ್ದಳು… ಬಿಳಿ ಮೈಬಣ್ಣ, ತಲೆಗೊಂದು ಟೋಪಿ .. ಅಚ್ಚುಕಟ್ಟಾಗಿ ಟ್ರಿಮ್ ಮಾಡಿದ ಗಡ್ಡ…. ಮೊದಲ ನೋಟದಲ್ಲೇ ಇಷ್ಟವಾಯಿತು. ಚಾ ತಿಂಡಿ ಕಳೆದು ಪೋಕರ್ ಹಾಜಿ…. ,, ‘ಪಾತೂ.. ಹುಡುಗನಿಗೂ ನಮ್ಮ ಮಗಳನ್ನೊಮ್ಮೆ ತೋರಿಸು.. ಅವನಿಗೆ ಇಷ್ಟ ಆದ್ರೆ ಅಲ್ಲವೇ ಮುಂದಿನ ಮಾತು…” ನಗುತ್ತಾ ಹೇಳಿದ. ಹುಡುಗನೊಂದಿಗೆ ಬಂದ ಹೆಂಗಸರು ಒಳಗೆ ಕರೆದಾಗ ಹುಡುಗ ಅದನ್ನೇ ಕಾಯುತ್ತಿದ್ದವನಂತೆ ಬೇಗನೆ ಒಳ ನಡೆದ. ತಲೆಗೆ ಮಿನುಗುವ ಶಾಲು. ಆ ಶಾಲನ್ನು ಬೇಕೆಂತಲೇ ಕಿವಿ ಕಾಣುವಂತೆ ತಲೆಗೆ ಹಾಕಿದ್ದಳು. ಕಿವಿ ಮುಚ್ಚಿದರೆ ಅಲೀಕತ್ತು ದರ್ಶನವಾಗದು ಅಲ್ವೇ…? ಹುಡುಗ ಕೊಠಡಿಗೆ ಕಾಲಿಡುತ್ತಿದ್ದಂತೆಯೇ ತನ್ನೆರಡೂ ಕೈಗಳಿಂದ ಮುಖ ಮುಚ್ಚಿದಳು. ಮುಚ್ಚಿದ ಕೈಗಳ ಎಡೆಯಿಂದ ಹೊಳೆವ ಎರಡು ಕಣ್ಣುಗಳು ಕಾಣಿಸುತ್ತಿತ್ತು.. ಹುಡುಗನೊಂದಿಗೆ ಬಂದಿದ್ದ ಹೆಂಗಸರು ಆಕೆಯ ಕೈ ಯನ್ನು ಹಿಂದಕ್ಕೆ ಸರಿಸಿ ಹುಡುಗನಿಗೆ ಮುಖ ದರ್ಶನಕ್ಕೆ ಅನುಕೂಲ ಮಾಡಿಕೊಟ್ಟರು. ಆಮಿನಾಳ ಕಣ್ಣು ಹೊಳೆಯುತ್ತಿತ್ತು.. ಜತೆಗೆ ಮೈಯೆಲ್ಲಾ ಬೆವರಿತ್ತು…. ಮುಖ ದರ್ಶನದ ನಂತರ .. “ನನಗೆ ಇಷ್ಟವಾಯಿತು” ಎಂಬ ಒಂದೇ ಒಂದು ಮಾತು ಹೊರಬಂತು. ಆಮಿನಾಳಿಗೆ ದೇಹವೆಲ್ಲಾ ವಿದ್ಯುತ್ ಸಂಚಾರವಾದ ಅನುಭವ. ಸಂತಸವ ವಿವರಿಸಲು ಪದಗಳಿಲ್ಲ.  ಊಟದ  ನಂತರ ಮಾತುಕತೆ.. ಎಲ್ಲವೂ ಮುಗಿದು ಎರಡು ವಾರದೊಳಗೆ ಮದುವೆ ಎಂದು ದಿನವೂ ನಿಶ್ಚಯಿಸಲಾಯಿತು. ಆಮಿನಾಳಿಗೆ ನಿದ್ದೆಯಿಲ್ಲದ ರಾತ್ರಿಗಳು. ಕೈ ಬೆರಳಿನಿಂದ ದಿನಗಳನ್ನು ಎಣಿಸುತ್ತಿದ್ದಳು. ಅಪ್ಪನಿಗೂ ಚಿಂತೆ ಇಲ್ಲ ಎಂದಲ್ಲ. ಮದುವೆ ಅಂದಮೇಲೆ ಒಡವೆ ವಸ್ತ್ರಗಳು ಬೇಕು.. ಅಪ್ಪ ಹಣದ ಬಗ್ಗೆ ಲೆಕ್ಕ ಹಾಕುತ್ತಿದ್ದ.. ಅಮ್ಮನಿಗೂ ಬಿಡದ ಚಿಂತೆ.. 14 ವರ್ಷ ಸಾಕಿ ಸಲುಹಿದ ಒಬ್ಬಳೇ ಒಬ್ಬಳು ಮಗಳನ್ನು ಕಳುಹಿಸಿಕೊಡಬೇಕು. ಜೊತೆಗೆ ನಾಲ್ಕು ಹಸುಗಳು.. ಅವುಗಳಿಗೆ ಸರಿಯಾದ ಸಮಯಕ್ಕೆ ಹುಲ್ಲು ಹಾಕಬೇಕು.. ಸಂಜೆ ಹೊತ್ತಿಗೆ ಹಟ್ಟಿಯಲ್ಲೂ ಕಟ್ಟಬೇಕು… ಆಮಿನಾಳು ಗಂಡನ ಮನೆ ಸೇರಿದರೆ ಹಸುವಿನ ಆರೈಕೆಯೂ ಬೇರೆ ಪಾತುವಿನ ಹೆಗಲಿಗೆ ಬರುತ್ತದೆ. ಪಾಲನೆ ಕಷ್ಟ ಆಗುವುದು ಎಂದು ಹಸುವನ್ನು ಮಾರಲೂ ಆಗದು. 20 ಲೀಟರ್ ಹಾಲು.. ಇದೊಂದು ಪ್ರಮುಖ ಆದಾಯ ಮಾರ್ಗ. ಚುಟುಕಾಗಿ ಹೇಳುವುದಿದ್ದರೆ ಮೂವರಿಗೂ ಬೇರೆ ಬೇರೆ ರೀತಿಯ ಚಿಂತೆಗಳು. ಬೆಳಿಗ್ಗೆ ಅಮ್ಮ ಮಗಳ ಮಾತಿನ ನಡುವೆ ಅಮ್ಮಳ ಒಂದು ಚಿಕ್ಕ ಪ್ರಶ್ನೆ… “ಆಮಿನಾ ನಿನಗೆ ಯಾವ ರೀತಿಯ ಒಡವೆ ಇಷ್ಟ ?”  ಒಲ್ಲದ ಮನಸ್ಸಿನಿಂದಲೇ ಅಮ್ಮನಲ್ಲಿ ಒಂದು ವಿಷಯ ಹೇಳಿದಳು. “ಅಮ್ಮಾ .. ಒಡವೆ ರೂಪದಲ್ಲಿ ನನಗೆ ಇಷ್ಟವಾಗಿರೋದು ಅಲೀಕತ್ತು ಮಾತ್ರ.  ಇರುವ ಅಲೀಕತ್ತು ಚಿಕ್ಕದು. ಮಾಲೆ ಸರ ಏನೂ ಬೇಡ.. ಸ್ವಲ್ಪ ಗಟ್ಟಿಯುಳ್ಳ ಅಲೀಕತ್ತು ಮಾತ್ರ ಸಾಕು.” ಅವಳ ಅಲೀಕತ್ತು ಪ್ರೀತಿಯನ್ನು ಕಂಡು ಆಶ್ಚರ್ಯ ಪಟ್ಟರೂ ತೋರ್ಪಡಿಸದೆ.. ಹಾಗೇ “ಆಗಲಿ. ಅಪ್ಪನಲ್ಲಿ ಹೇಳಿ ಹೊಸದು ಮಾಡಿಸೋಣ” ಎಂದು ಸಮ್ಮತಿ ಸೂಚಿಸಿದಳು. ಮದುವೆ ಅದ್ದೂರಿಯಾಗಿ ನಡೆಯಿತು. ಗಂಡು-ಹೆಣ್ಣಿನ ಕಡೆಯವರಿಂದ ಒಂದೇ ಮಾತು. ಮದುಮಗಳ ಅಲೀಕತ್ತು ಸೂಪರ್… ಈ ಮಾತು ಕೇಳಿಸುತ್ತಿದ್ದಂತೆ ಆಮಿನಾಳಿಗೆ ಮಾತ್ರವಲ್ಲ ಅಮ್ಮನಿಗೂ ಖುಷಿಯಾಗುತ್ತಿತ್ತು. ಅಮೀನಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಳು. ಸುಮಾರು ಒಂದುವಾರ ಮದುಮಗ ಮನೆಯಲ್ಲಿಯೇ ಇದ್ದ. ಆಮಿನಾಳಿಗೆ ಸ್ವರ್ಗ ಸುಖದ ಅನುಭವ. ದಿನಗಳುರುಳುತ್ತಿತ್ತು. ಪೇಟೆಯಲ್ಲಿ ಅಂಗಡಿ ಇಟ್ಟಿದ್ದ ಗಂಡ ಇಬ್ರಾಹಿಂ ವಾಪಸ್ ಬರುವಾಗ ರಾತ್ರಿ ಗಂಟೆ ಹತ್ತು ಕಳೆಯುತ್ತಿತ್ತು. ಮೊದ ಮೊದಲು ಕಷ್ಟವಾದರೂ ಕ್ರಮೇಣ ಅಭ್ಯಾಸವಾಗಿ ಹೋಗಿತ್ತು. ಈ ನಡುವೆ ಆಮಿನಾ ಕುಟುಂಬಕ್ಕೆ ಮೊದಲ ಶಾಕ್ ಉಂಟಾಯಿತು. ಅಪ್ಪ ಪೋಕರ್ ಹಾಜಿಯ ಅಕಾಲಿಕ ಮರಣ. ಇಡೀ ಕುಟುಂಬವೇ ಕಣ್ಣೀರಲ್ಲಿ ಮುಳುಗಿತು. ಹೇಗೋ ಸುಧಾರಿಸಿ ಜೀವನ ಚಕ್ರ ನಡೆಯುತ್ತಿತ್ತು. ವಾರಕ್ಕೊಂದು ಸಲ ಆಮಿನಾ ಳು ಕೂಡಾ ಅಮ್ಮನ ಮನೆಗೆ ಬಂದು ಹೋಗುತ್ತಿದ್ದಳು. ಪ್ರತಿ ತಿಂಗಳೂ ಅಮ್ಮ ಹಾಗೂ ಅತ್ತೆ ಮನೆಯಿಂದ ಒಂದೇ ಪ್ರಶ್ನೆ… “ಹೀಗೆ ಇಬ್ಬರು ಮಾತ್ರ ಇದ್ದರೆ ಸಾಕಾ…? ಒಂದು ಮಗುವಿನ ಬಗ್ಗೆ ಇನ್ನೂ ಚಿಂತಿಸಿಲ್ಲವೇ ?”. “ದೇವರು ಯಾವಾಗ ಕೊಡುತ್ತಾನೋ ಆವಾಗ ಸಂತೋಷದಲ್ಲಿ ಸ್ವೀಕರಿಸೋಣ” ಎಂದು ಹೇಳಿ ಎಲ್ಲರ ಬಾಯಿ ಮುಚ್ಚಿಸುತ್ತಿದ್ದ ಇಬ್ರಾಹಿಂ. ಜೀವನ ರಥ ಸಾಗುತ್ತಿತ್ತು. ಒಂದು ದಿನ ರಾತ್ರಿ ಗಂಟೆ ಹತ್ತು ಕಳೆದರೂ ಇಬ್ರಾಹಿಂ ಬರಲಿಲ್ಲ. ಚಾವಡಿಯಲ್ಲಿ ಕೂತು ಸುಸ್ತಾದ ಆಮಿನಾಳ ಮೈಯೆಲ್ಲಾ ಬೆವರ ತೊಡಗಿತು. ಗಂಟೆ ಹನ್ನೊಂದು ದಾಟಿತು.. ಇಲ್ಲ… ಇನ್ನೂ ಬರದೇ ಇದ್ದಾಗ  ಆಮಿನಾ ಆಗಲೇ ನಿದ್ದೆಗೆ ಜಾರಿದ್ದ ತನ್ನ ಅತ್ತೆ ಮಾವನವರನ್ನು ಕೂಗಿ ಎಬ್ಬಿಸಿದಳು… “ಏನು ಮಾಡುವುದು…?” “ಎಲ್ಲಿ ಹೋಗಿರಬಹುದು..?” “ಇದುವರೆಗೂ ಹೇಳದೆ ಎಲ್ಲೂ ಹೋದವನಲ್ಲ.  ಇನ್ನೂ ಸ್ವಲ್ಪ ಕಾಯೋಣ…” ಮೂವರೂ

ಅಲೀಕತ್ತು Read Post »

ಕಥಾಗುಚ್ಛ

ನಾಯಿ ಮತ್ತು ಬಿಸ್ಕತ್ತು

ಕಿರು ಕಥೆ ನಾಗರಾಜ ಹರಪನಹಳ್ಳಿ ಆತ ದಂಡೆಗೆ ಬಂದು ಕುಳಿತ. ಎಲ್ಲಾ ಕಡೆ ಬಂಧನಗಳಿಂದ ಬಿಗಿದ‌ ಜಗತ್ತು ಸಾಕೆನಿಸಿತ್ತು.‌ ರಸ್ತೆಗಳೆಲ್ಲೆ ಮಕಾಡೆ ಮಲಗಿದ್ದವು. ಜನರ ಸುಳಿವಿಲ್ಲ.‌ಮುಚ್ಚಿದ  ಹೋಟೆಲ್ಲು, ಲಾಡ್ಜು, ಅಂಗಡಿ ಬಾಗಿಲು. ಗೂಡಂಗಡಿಗಳು ಬಲವಾದ ಹಗ್ಗಗಳಿಂದ ಬಂಧಿಸಲ್ಪಟ್ಟಿದ್ದವು.‌‌ ಇಡೀ ನಗರ ಸತ್ತು ಹೋಗಿತ್ತು. ಬಿಕೊ ಅನ್ನುತ್ತಿದ್ದ ಬಸ್ ಸ್ಟ್ಯಾಂಡ್. ‌ಬಿಕ್ಷುಕುರ ಸುಳಿವು ಸಹ ಇಲ್ಲ.ಮನುಷ್ಯರ ಸುಳಿವಿಲ್ಲ. ಪ್ರತಿ ಸರ್ಕಲ್ ‌ನಲ್ಲಿ ಸುರಿವ ಉರಿ ಬಿಸಿಲಲ್ಲಿ ಖಾಲಿ ರಸ್ತೆಗಳನ್ನು ಪೊಲೀಸರು ಕಾಯುತ್ತಿದ್ದರು. ಭೀತಿ ಮತ್ತು ಭಯ ಸ್ಪರ್ಧೆಗೆ ಬಿದ್ದಂತೆ ರಸ್ತೆಯ ಇಕ್ಕೆಲಗಳಲ್ಲಿ ಕುಣಿದಾಡುತ್ತಿದ್ದವು .ಜನರಿಲ್ಲದೇ ಆಸ್ಪತ್ರೆಗಳು ಸಹ ದುಃಖಿಸುತ್ತಿದ್ದವು. ಔಷಧಿ ಅಂಗಡಿ ಮಾತ್ರ ತೆರೆದು ಕೊಂಡಿದ್ದು ಕೌಂಟರ್ ನಲ್ಲಿ ಒಬ್ಬ ಪೇಪರ್ ಹಿಡಿದು ಆದ್ಹೇನೋ‌ ಜಗತ್ತು ತಲೆ ಮೇಲೆ ಬಿದ್ದಂತೆ ತದೇಕ ಧ್ಯಾನಸ್ಥನಾಗಿ ಅಕ್ಷರದತ್ತ ದೃಷ್ಟಿ ನೆಟ್ಟಿದ್ದ .‌ಇದನ್ನೆಲ್ಲಾ ಕಣ್ತುಂಬಿ‌ ಕೊಂಡ ರಾಮನಾಥ ದಂಡೆಯಲ್ಲಿ ಧ್ಯಾನಿಸುತ್ತಿದ್ದ. ಆಗ ತಾನೇ ಕೋವಿಡ್ ಲ್ಯಾಬ್ ನಲ್ಲಿ ಅ ದಿನ ಬಂದ ಐವತ್ತು ಜನರ ಗಂಟ ದ್ರವ ಪರೀಕ್ಷೆ ಮಾಡಿ, ಜೀವವನ್ನು ಕೈಯಲ್ಲಿ ಹಿಡಿದು ಬಂದಿದ್ದ.‌ ಅಂದು ಬಂದ ಐವತ್ತು ಸಂಶಯಿತ ಕರೋನಾ ಗಂಟಲು ದ್ರವದಲ್ಲಿ ಹದಿನೆಂಟು ಜನರ ಗಂಟಲು ದ್ರವದಲ್ಲಿ ಕೋವಿಡ್ ೧೯ ವೈರಸ್ ಇರುವುದು ದೃಢಪಟ್ಟಿತ್ತು.‌ ತನ್ನ ಜೀವಮಾನದಲ್ಲಿ ಮನುಷ್ಯರು, ವೈದ್ಯರು, ಅಧಿಕಾರಿಗಳು…. ಎಲ್ಲರೂ ಗಡಿಬಿಡಿ , ಒಂಥರಾ ಅವ್ಯಕ್ತಭಯದಲ್ಲಿ ಇದ್ದುದ ರಾಮನಾಥ ಮೊಟ್ಟ ಮೊದಲ ಬಾರಿಗೆ ನೋಡಿದ್ದ.‌ತನ್ನ ಕೆಲಸವನ್ನು ನಿರ್ಲಿಪ್ತತೆಯಿಂದ‌ ಮುಗಿಸಿ ಬಂದಿದ್ದ ಆತ ಜೀವನದ ನಿರರ್ಥಕ ‌ಕ್ಷಣಗಳಿಗೆ ಸಾಕ್ಷಿಯಾಗಿದ್ದೇನೋ ಅಥವಾ ವರ್ತಮಾನ ಕುಸಿಯುವುದನ್ನು ಕಣ್ಣಲ್ಲಿ ತುಂಬಿಕೊಳ್ಳುತ್ತಿದ್ದೇನೋ ಎಂದು ತರ್ಕಿಸುತ್ತಾ ಕುಳಿತಿದ್ದ. ಇದ್ದಕ್ಕಿದ್ದಂತೆ ಓರ್ವ ವ್ಯಕ್ತಿ ದುತ್ತನೇ ಎದುರಾಗಿ ಮಾತಿಗಿಳಿದ.‌ “ಏನ್ ಸರ್ ಸರ್ಕಾರ ಮಾಡಿದ್ದು ಸರಿಯಾ? ನಾ ಕುಡಿಯದೇ ಬದುಕಲಾರೆ.‌ ಲಿಕ್ಕರ್ ಶಾಪ್ ಮುಚ್ವಿದ್ದು ಸರಿಯೇ” ಎಂದು ಪ್ರಶ್ನಿಸಿದ.‌ ರಾಮನಾಥಗೆ  ಕಸಿವಿಸಿಯಾಯ್ತು.‌ಬಗೆಹರಿಸಲಾಗದ ಇವನ ಪ್ರಶ್ನೆಗೆ ಉತ್ತರ ಎಲ್ಲಿಂದ ತರುವುದು ಎಂದು? ಸರಿಯಲ್ಲ ಎಂದು ತಲೆ ಅಲ್ಲಾಡಿಸಿ ಮತ್ತೆ ನಿರ್ಲಿಪ್ತನಾದ.‌ ಹಠಾತ್ ಎದುರಾದ ವ್ಯಕ್ತಿ ಅಲ್ಲಿಂದ ನಡೆದು‌‌ಹೋದ.‌ಅವನನ್ನು‌ ನಾಯಿಯೊಂದು ಹಿಂಬಾಲಿಸಿತು.‌ ಮನ ತಣಿಯುವಷ್ಟು ದಂಡೆಯಲ್ಲಿ ಕುಳಿತ ರಾಮನಾಥ ಎದ್ದು ಮನೆ ಕಡೆ ನಡೆದ . ಅವನು ಒಬ್ಬಂಟಿ ಬೇರೆ. ಸಾಂಬರು ಕಟ್ಟಿಸಿಕೊಳ್ಳಲು‌ ಹೋಟೆಲ್ ‌ಗಳು  ಬೇರೆ ಬಂದ್ ಆಗಿವೆ.‌ ಅನ್ನ ಸಾರು ಅವನೇ ಬೇಯಿಸಿ ತಿನ್ನುವುದು ರೂಢಿಯಾಗಿತ್ತು ಲಾಕ್ ಡೌನ್ ಸಮಯದಲ್ಲಿ.‌ಮೊದಲಾದರೆ ಅನ್ನ ಮಾತ್ರ ಬೇಯಿಸಿಕೊಳ್ಳುತ್ತಿದ್ದ. ಇದೇ ಧಾವಂತದಲ್ಲಿ ಹೆಜ್ಜೆ ಹಾಕಿದವನಿಗೆ ದಾರಿಯಲ್ಲಿ ಹಠಾತ್ತನೇ ದಂಡೆಯಲ್ಲಿ ಪ್ರಶ್ನೆ ಎಸೆದ ವ್ಯಕ್ತಿ ಸಿಕ್ಕ. ಆತ ರಸ್ತೆ ಪಕ್ಕ ನಾಯಿಯೊಂದಿಗೆ ಮಾತಾಡುತ್ತಿದ್ದ. ಅದನ್ನೆ  ತನ್ನ ಜೀವದ ಭಾಗವೆಂಬಂತೆ ಅದಕ್ಕೆ ಬಿಸ್ಕತ್ತು ಹಾಕುತ್ತಾ …ತನ್ನ ದುಃಖವನ್ನೆಲ್ಲಾ  ನಾಯಿಯ ಕಣ್ಣಿಗೆ ವರ್ಗಾಯಿಸುತ್ತಾ ಅದ್ಹೇನೋ ಅದಕ್ಕೆ ಅರ್ಥವಾಗುವ ಭಾಷೆಯಲ್ಲಿ ಹೇಳುತ್ತಿದ್ದ. ಪ್ರತಿ ಮಾತಿಗೂ ಒಂದೊಂದೇ ಬಿಸ್ಕತ್ತಿನ‌ ತುಂಡುಗಳನ್ನು ಅದಕ್ಕೆ ಹಾಕುತ್ತಿದ್ದ.‌ ಮರದ ಕೆಳಗೆ ಈ‌ ಸಂಭಾಷಣೆ ನಡೆದಿತ್ತು. ಕುತೂಹಲದಿಂದ ರಾಮನಾಥ ಇದನ್ನು ಆಲಿಸತೊಡಗಿದ. ಲಿಕ್ಕರ್ ಹುಡುಕಿ ಹೊರಟ ಆ ಸಾಮಾನ್ಯ ಮೊದಲ ನೋಟಕ್ಕೆ ಕುಡುಕ ಅನ್ನಿಸಿದ್ದ. ಈಚೀಚೆಗೆ ಕೆಲಸವೂ ಇಲ್ಲದೇ, ಉಳಿಯಲು ಸೂರು ಇಲ್ಲದೇ ಅಂದಂದೆ ದುಡಿಯುವವರ  ಆಹಾರಕ್ಕೆ ಅಲೆದ‌ ಈ ಸತ್ತ ನಗರದಲ್ಲಿ‌ ;   ನಾಯಿ‌ ಹಸಿವಿಗೂ ಮಿಡಿವ, ಮನುಷ್ಯನ ಕಂಡು ಮನಸಲ್ಲೇ ಸಮಾಧಾನಿಯಾದ. ಅಷ್ಟರಲ್ಲಿ ಹಸಿದವರಿಗೆ ಊಟದ ಜೀಪ್ ನಲ್ಲಿ ಅನ್ನ ಸಾರು ತುಂಬಿದ ಪಾತ್ರೆ ಇಟ್ಟುಕೊಂಡು  ಹಸಿದವರಿಗೆ‌ ಹುಡುಕುವ  ಮದರ್  ಥೆರೇಸಾ ಟ್ರಸ್ಟನ ಸ್ಯಾಮಸನ್  ಎದುರಾದರು. ರಾಮನಾಥನನ್ನ ಕಂಡವರೇ   ಕೈ ಬೀಸಿದರು. ಅತ್ತ ನಾಯಿ‌ ಮತ್ತು ಕುಡುಕ ಮನುಷ್ಯ  , ಸ್ಯಾಮಸನರ  ಅನ್ನ ನೀಡುವ  ಜೀಪ್ ಬಂದ ದಿಕ್ಕಿ ನತ್ತ ಹೆಜ್ಜೆ ಹಾಕಿದರು. ಅದೇ‌ ಬೀದಿಯ ಪಿಡಬ್ಲುಡಿ ಕ್ವಾಟರ್ಸನಲ್ಲಿ ಕೊನೆಯ ಮೂಲೆಯ ಮನೆಯಲ್ಲಿದ್ದ ‌ಮೇರಿ  ಥಾಮಸ್  ಎಂಬ ಚೆಲುವೆ  ಬಾಗಿಲ  ಮರೆಯಲ್ಲಿ ನಿಂತು, ಎಂದಿನಂತೆ ರಾಮನಾಥನ ಕಂಡು ತಣ್ಣಗೆ ಮುಗುಳ್ನಕ್ಕಳು….. *****  

ನಾಯಿ ಮತ್ತು ಬಿಸ್ಕತ್ತು Read Post »

ಕಥಾಗುಚ್ಛ

ಅಮ್ಮಿಣಿ

ಕಿರುಗಥೆ ಕೆ. ಎ. ಎಂ. ಅನ್ಸಾರಿ ಅಮ್ಮಿಣಿಗೆ ಒಂದೇ ಚಿಂತೆ… ಸೂರ್ಯೋದಯಕ್ಕೆ ಮೊದಲೇ ಹೊರಡುವ ಗಂಡ ಸುಂದ ವಾಪಸ್ಸು ಬರುವಾಗ ಕತ್ತಲೆಯಾಗುತ್ತದೆ. ಖಂಡಿತಾ ಅವನು ಹೆಚ್ಚಿನ ಸಮಯ ಲಚ್ಚಿಮಿ ಯ ಗುಡಿಸಲಲ್ಲೇ ಕಳೆಯುತ್ತಿರಬಹುದು.  ರಾತ್ರಿ ತನ್ನ ಗುಡಿಸಲು ಸೇರಿದರೆ ಗದ್ದಲ ಬೇರೆ. ಸಾರಾಯಿ ಏರಿಸದೆ ಒಂದು ದಿನವೂ ಬಂದದ್ದಿಲ್ಲ. ಹಾಗೆಂದು ಮನೆ ಖರ್ಚಿಗೆ ಕೊಡುವುದಿಲ್ಲ ಎಂದಲ್ಲ. ಮಕ್ಕಳ ಮೇಲೆ ಪ್ರೀತಿಯಿದೆ .. ಆದರೂ ಆ ಲಚ್ಚಿಮಿ ಯ ಗುಡಿಸಲಲ್ಲಿ ಅವನಿಗೆ ಏನು ಇಷ್ಟು ಕೆಲಸ .. ? ಸೌಂದರ್ಯ ದಲ್ಲಿ ನಾನು ಅವಳಿಗಿಂತ ಕಮ್ಮಿಯೂ ಇಲ್ಲ ಅವಳಾದರೂ ಕರ್ರಗೆ ಕೋಲು ಮುಖದವಳು… ಗಂಡ ಸತ್ತ ಮೇಲೆ ಕೂಲಿ ನಾಲಿ ಮಾಡಿ ಜೀವಿಸುವವಳು. ಇರುವ ಚಿಕ್ಕ ಮಕ್ಕಳನ್ನು ನೋಡಿಕೊಳ್ಳಲು ಆ ಸಂಪಾದನೆ ಸಾಕೇ ..? ತನ್ನ ಗಂಡ ಸುಂದ ಅವಳಿಗೂ ಖರ್ಚಿಗೆ ಕೊಡುತ್ತಿರಬಹುದೋ…  ?ಅಮ್ಮಿಣಿ ಹೊಸ್ತಿಲಲ್ಲಿ ಕೂತು ಚಿಂತಿಸುತ್ತಲೇ ಇದ್ದಳು. ಅಂಗಳದಲ್ಲಿ ಹಾಸಿದ್ದ ಓಲೆಬೆಲ್ಲವನ್ನು ಕೋಳಿ ಬಂದು ತಿನ್ನದೊಡಗಿದ್ದು ಅಮ್ಮಿಣಿಗೆ ಗೊತ್ತೇ ಆಗಲಿಲ್ಲ. ಪಕ್ಕದ ಮನೆ  ಜಾನಕಿ ಬಂದು ಕೋಳಿಯನ್ನು ಸುಯ್ ಸುಯ್ ಎಂದು ಓಡಿಸುತ್ತಲೇ .. ಅಮ್ಮಿಣಿ  ನೀನು ಏನು ಯೋಚನೆ ಮಾಡ್ತಾ ಇದ್ದೀಯಾ … ಓಲೆ ಬೆಲ್ಲ ಅರ್ಧವೂ ಕೋಳಿ ತಿಂದಾಯಿತು ಎನ್ನುವಾಗಲೇ ಎಚ್ಚರಗೊಂಡು ಎದ್ದು ಬಂದಳು. ಇಬ್ಬರೂ ಮಣೆ ಹಾಕಿ ಕುಳಿತು ಮಾತಿಗೆ ತೊಡಗಿದರು. ಅಲ್ಲ ಜಾನಕಿ .. ಈ ಸುಂದ ಹೋಗಿ ಹೋಗಿ ಆ ಮುಂಡೆ ಲಚ್ಚಿಮಿಯ ಹತ್ತಿರ ಕೂರುತ್ತಾನಲ್ಲ .. ಇದನ್ನು ಹೇಗೆ ತಡೆಯುವುದು  ಎನ್ನುವ ಪ್ರಶ್ನೆಗೆ ಈ ಮೊದಲೇ ವಿಷಯ  ಗೊತ್ತಿದ್ದ ಜಾನಕಿ ಏನೂ ಉತ್ತರಿಸಲಿಲ್ಲ. ಲಚ್ಚಿಮಿ  ಏನೂ ಅಪರಿಚಿತೆಯಲ್ಲ . ಜಾನಕಿಗೆ ದೂರದ ಸಂಬಂದಿ ಕೂಡಾ ಹೌದು.  ಸುಂದ ಮತ್ತು ಲಚ್ಚಿಮಿಯ ನಡುವಿನ ಸಂಬಂಧ ಊರಲ್ಲಿ ಕೂಡಾ ಎಲ್ಲರಿಗೂ ಗೊತ್ತಿರೋ ವಿಷಯವೇ.. ಬೆಳ್ಳಂಬೆಳಿಗ್ಗೆ ತಾಳೆಗೆ ಏರಲೆಂದು ಸುಂದ ಕತ್ತಿ, ಕೊಡ ತೋಳಿಗೇರಿಸಿ ನಡೆದರೆ ವಾಪಸಾಗುವುದು ಸಂಜೆ ಆರರ ನಂತರವೇ.. ಮಧ್ಯಾಹ್ನದ ಊಟ ಕೂಡಾ ಅಲ್ಲಿಯೇ .. “ಅಮ್ಮಿಣಿ … ನಾನೊಂದು ವಿಷಯ ಹೇಳುತ್ತೇನೆ. ನಿನಗದು ಬೇಜಾರು ಆಗಬಹುದು ಆದರೆ ನಾಳೆಯಾದರೂ ನಿನಗೆ ತಿಳಿದೇ ತಿಳಿಯುತ್ತದೆ ಮಾತ್ರವಲ್ಲ ತಿಳಿದಿರಲೇ ಬೇಕು ” …  ತಾ ಕೂತಿದ್ದ ಮಣೆಯನ್ನು ಎಡಗೈಯಿಂದ  ಲಚ್ಚಿಮಿಯ ನೂಕಿ ಇನ್ನೂ ಹತ್ತಿರ ಕುಳಿತಳು ಜಾನಕಿ. ಅಮ್ಮಿಣಿಗೂ  ಕುತೂಹಲ … ಆಕೆ ಮೆತ್ತಗೆ ಕಿವಿಯಲ್ಲಿ .. “ಆ ಲಚ್ಚಿಮಿಗೆ ಈಗ ತಿಂಗಳು ಒಂಭತ್ತು ಅಂತೆ. ನಿನ್ನೆ ಸರ್ಕಾರಿ ಆಸ್ಪತ್ರೆಗೆ ಹೋಗಿದ್ದಳಂತೆ. ಈ ತಿಂಗಳ ಕೊನೆಗೆ ಹೆರಿಗೆಯ ತಾರೀಕು ಕೊಟ್ಟಿದ್ದಾರಂತೆ … “ ಅಮ್ಮಿಣಿಗೆ ದುಃಖ ಉಮ್ಮಳಿಸಿ ಬಂತು. ದಿನವೂ ರಾತ್ರಿ ಜಗಳ ಮಾಡುವುದೊಂದೇ ಬಂತು. ತನ್ನ ಯಾವ ಮಾತನ್ನೂ ಕೇಳಿಸಿಕೊಳ್ಳುವ ಗೋಜಿಗೂ ಹೋಗದ ನೀಚ ನನ್ನ ಸುಂದ ಎನ್ನುತ್ತಾ ಕಣ್ಣೀರು ಹಾಕಿದಳು. ಇಂದು ರಾತ್ರಿ ತೀರ್ಮಾನಕ್ಕೆ ಒಂದು ಬರಲೇ ಬೇಕು … ಒಂದೋ ನಾನು ಇಲ್ಲ ಅವಳು .. ಮಧ್ಯಾಹ್ನ ದ ಊಟವೂ ಹೊಟ್ಟೆಗೆ ಹತ್ತಲಿಲ್ಲ …. ಅಂಗಳದಲ್ಲೇ ತಾಳೆಬೆಲ್ಲ ಒಣಗಿಸುತ್ತಾ ಕೂತಿದ್ದಳು .  ಮುಸ್ಸಂಜೆಯ ಹೊತ್ತು ಸುಂದ ಅಂಗಳಕ್ಕೆ ಕಾಲಿಟ್ಟ .. ಸಾರಾಯಿ ವಾಸನೆ ಮೂಗಿಗೆ ಬಡಿಯುತ್ತಲೇ ಇತ್ತು. ಸುಂದನನ್ನು ಒಮ್ಮೆಲೇ ಪ್ರಶ್ನಿಸುವಷ್ಟು ಧೈರ್ಯ ಅಮ್ಮಿಣಿಗೆ ಇರಲಿಲ್ಲ. ಅಮ್ಮಿಣಿ .. ನಾಳೆ 250 ಬೆಲ್ಲ ಪೇಟೆಯ ನಾಯ್ಕರ ಅಂಗಡಿಗೆ ಬೇಕು.. ಕಟ್ಟ ಒಂದಕ್ಕೆ ಹತ್ತರಂತೆ 25 ಕಟ್ಟ ಮಾಡಿಡು. 500 ರೂಪಾಯಿ ಕೊಟ್ಟಿದ್ದಾನೆ. ಉಳಿದದ್ದು ಅಂಗಡಿಯಲ್ಲಿ ಕೊಡುತ್ತಾನೆ. ಈ ಐನೂರು ನೀನೇ ಇಟ್ಟುಕೋ ನನ್ನಲ್ಲಿ ಇಟ್ಟರೆ ಖರ್ಚಾಗಬಹುದು ಎನ್ನುತ್ತಾ ಐನೂರರ ಗರಿ ನೋಟು ಅಮ್ಮಿಣಿಯ ಕೈಗಿಟ್ಟ … ಅಮ್ಮಿಣಿಯ ಕೋಪ ಒಮ್ಮೆಲೇ ಇಳಿಯಿತು. ಇಂದು ಕೇಳುವುದು ಬೇಡ ಎಂದು ತೀರ್ಮಾನಿಸಿ ರಾತ್ರಿಯ ಊಟಕ್ಕೆ ತಯಾರಿ ಮಾಡಲು ಅಡುಗೆ ಮನೆಯತ್ತ ಹೊರಟಳು. ಅಮ್ಮಿಣಿಯ ಚಿಂತೆ ಇನ್ನೂ ದೂರವಾಗಲಿಲ್ಲ. ರಾತ್ರಿ ಊಟವೂ ಆಯಿತು. ಮಕ್ಕಳಿಬ್ಬರೂ ಉಂಡು ಮಲಗಿಯೂ ಆಯಿತು… ಅವನಾಗಿ ಕರೆಯದೆ ಎಂದೂ ಅಮ್ಮಿಣಿ ಆತನ ಬಳಿ ಹೋದವಳಲ್ಲ. ಇಂದು ಸುಂದ ಕರೆಯದಿದ್ದರೂ ಮೆಲ್ಲನೆ ಆತನ ಬಳಿ ಮಲಗಿದಳು ಅಮ್ಮಿಣಿ. ಆತ ಗೊರಕೆ ಹೊಡೆಯುತ್ತಲಿದ್ದ. ಹೇಗೆ ಆರಂಭಿಸುವುದು ಎಂದು ತಿಳಿಯದೆ ಮೆತ್ತಗೆ ಆತನ ಎದೆಯನ್ನು ಸವರತೊಡಗಿದಳು. ಥಟ್ಟನೆ ಎದ್ದು ಕೂತ ಸುಂದ… ಆಹಾ.. ಇವತ್ತೇನು ವಿಷ್ಯಾ… ಸೂರ್ಯ ಪಶ್ಚಿಮದಲ್ಲಿ ಮೂಡಿದ್ದಾನೋ.. ಅಥವಾ ಐನೂರಕ್ಕೆ ಋಣವೋ… ಎಂದು ಮೆತ್ತಗೆ ನಕ್ಕ. “ಅಲ್ಲ ಸುಂದ .. ನನಗೂ ತಾಳೆ ಮರ ಏರುವುದು ಗೊತ್ತು.. ನಾಳೆಯಿಂದ ನಾನೂ ನಿನ್ನೊಂದಿಗೆ ಬರಲಾ …” ಕೂತಿದ್ದ ಸುಂದ ಒಮ್ಮೆಲೇ ನಿಂತು… ನೀ ನನ್ನೊಟ್ಟಿಗೆ ಬಂದ್ರೆ ಮಕ್ಕಳನ್ನು ನಿನ್ನಪ್ಪ ಬಂದು ನೋಡ್ತಾನಾ ಎಂದು ಗುಡುಗಿದ. ಅಮ್ಮಿಣಿ ಶಾಂತವಾಗಿ… “ಮಕ್ಕಳನ್ನು ಸಂಜೆ ತನಕ ನೋಡಿಕೊಳ್ಳುವೆ ಎಂದು ಅಮ್ಮ ಒಪ್ಪಿದ್ದಾಳೆ,,”. ಎಂದಾಗ ಕೋಪ ಇನ್ನೂ ನೆತ್ತಿಗೇರಿತ್ತು. ಅಮ್ಮಿಣಿ ಯನ್ನು ತಳ್ಳಿ ಹಾಕಿ ಚಾವಡಿಯಲ್ಲಿ ಕೂತು ಬೀಡಿಗೆ ಬೆಂಕಿ ಹಚ್ಚಿ ಬಯ್ಯುತ್ತಾ ಕುಳಿತ.. ಅಮ್ಮಿಣಿ ಒಬ್ಬಳೇ ಮಕ್ಕಳ ಬಳಿ ಹೋಗಿ ಮಲಗಿ ಅಳುತ್ತಲೇ ನಿದ್ದೆಗೆ ಜಾರಿದಳು. ಬೆಳಗ್ಗೆ ಸುಂದ ಚಾವಡಿಯಲ್ಲೇ ಮಲಗಿದ್ದ. ಆತನ ಕೋಪ ಇಳಿದಿತ್ತು. ಬೆಳಗ್ಗಿನ ತಿಂಡಿ ತಿನ್ನುತ್ತಲೇ ಮಕ್ಕಳನ್ನು ತನ್ನ ಹತ್ತಿರ ಕುಳ್ಳಿರಿಸಿ ಅವರಿಗೂ ತಿನ್ನಿಸುತ್ತಾ … ಅಮ್ಮಿಣಿ ಎಂದು ಪ್ರೀತಿಯಿಂದ ಕರೆದ. ಅಮ್ಮಿಣಿಗೂ ಆಶ್ಚರ್ಯ.. ಎಂದೂ ಹೀಗೆ ಪ್ರೀತಿಯಿಂದ ಕರೆದವನೋ ಮಾತನಾಡಿಸಿದವನೋ ಅಲ್ಲ. ಸಂಜೆಯಾದರೆ ಬೈಗುಳ. ಮಕ್ಕಳೊಡನೆ ಮಾತ್ರ ಮಾತುಕತೆ.. ಅಮ್ಮಿಣಿ ಒಲೆಗೆ ನಾಲ್ಕು ಸೌದೆ ತುರುಕಿಸಿ ಸೆರಗನ್ನು ಸರಿಮಾಡುತ್ತಾ… ” ಹಾ ಬಂದೆ”  ಎಂದು ಆತನ ಬಳಿ ಹೋಗಿ ಕುಳಿತಳು. ಸುಂದ ಏನೋ ಖುಷಿಯಲ್ಲಿದ್ದ. “ಅಮ್ಮಿಣಿ…  ನೋಡು ಕುಟ್ಟಿಗೌಡ ತನ್ನ ಎಂಟು ತಾಳೆಗಳನ್ನು ನನಗೆ ಕೆತ್ತಲು ವಹಿಸಿಕೊಟ್ಟಿದ್ದಾನೆ. ಬರುವ ವಾರದಿಂದ ಕೆಲಸ ಜಾಸ್ತಿ ಇರಬಹುದು. ಎಲ್ಲಾ ತಾಳೆಗೂ ಇವತ್ತಿಂದಲೇ ಬಿದಿರ ಏಣಿ ಕಟ್ಟಲು ತೊಡಗುತ್ತೇನೆ. ಪೇಟೆಯಲ್ಲೂ ತಾಳೆ ಬೆಲ್ಲಕ್ಕೆ ಡಿಮಾಂಡು ಈಗೀಗ ಜಾಸ್ತಿ ಆಗುತ್ತಿದೆ. ಬರುವ ವಾರದಿಂದ ನಿನ್ನನ್ನೂ ಕರಕೊಂಡು ಹೋಗುತ್ತೇನೆ..”. ಅಮ್ಮಿಣಿ ನಕ್ಕಳು… ಅವಳ ಉತ್ತರಕ್ಕೂ ಕಾಯದೆ ಚಾ ಹೀರುತ್ತಾ ಸುಂದ ಹೊರಡಲು ನಿಂತ. ಲೋಟ ಖಾಲಿಯಾಗುತ್ತಲೇ ಗೋಡೆಯಲ್ಲಿ ತೂಗು ಹಾಕಿದ್ದ ಕತ್ತಿ, ಕೊಡವನ್ನು ಎತ್ತಿ ಹೆಗಲಿಗೇರಿಸಿ ಸುಂದ ಅಂಗಳ ದಾಟಿ ಹೊರಟೇ ಬಿಟ್ಟ. ಅಮ್ಮಿಣಿ ಚಾವಡಿಯಲ್ಲಿ ಕೂತು ಆತನ ನಡಿಗೆಯನ್ನೇ ನೋಡುತ್ತಾ ಕುಳಿತಳು. ದಿನಗಳುರುಳಿತು… ಸುಂದನೊಂದಿಗೆ ಅಮ್ಮಿಣಿಯೂ  ಕೆಲಸಕ್ಕೆ ಹೋಗಲು ಶುರುಮಾಡಿದ್ದಳು. ಹೋಗುವ ದಾರಿಯಲ್ಲೇ ಲಚ್ಚಿಮಿಯ ಮನೆ.  ಅಮ್ಮಿಣಿಯ ಕಣ್ಣು ಆ ಕಡೆ ನೋಡುತ್ತಲೇ ಇತ್ತು. ಗುಡಿಸಲಿಗೆ ಬೀಗ ಜಡಿದಿತ್ತು. ಸಂಜೆಯ ಒಳಗಡೆ ಇಬ್ಬರೂ ಜೊತೆಯಾಗಿ ವಾಪಸ್ಸಾಗುತ್ತಿದ್ದರು. ಸಂಜೆ ಬಂದು ಬಾಣಲೆಗೆ ಹಾಕಿ ಕಳ್ಳು ಬೇಯಿಸತೊಡಗಿದರೆ ಮಧ್ಯರಾತ್ರಿಯ ವರೆಗೂ ಮುಂದುವರಿಯುತ್ತಿತ್ತು. ಅಮ್ಮ ಬಂದು ಸಹಾಯಕ್ಕೆ ನಿಂತಿದ್ದ ಕಾರಣ ಬೆಲ್ಲ ಒಣಗಿಸುವ ಮತ್ತು ಮಕ್ಕಳನ್ನು ನೋಡುವ ಜವಾಬ್ದಾರಿ ಆಕೆಯೇ ವಹಿಸಿಕೊಂಡಂತಾಗಿತ್ತು. ಅದೊಂದು ದಿನ ಬೆಳಿಗ್ಗೆ ಹೊರಟಾಗ ಲಚ್ಚಿಮಿಯ ಗುಡಿಸಲು ತೆರೆದಿತ್ತು. ಮನೆಯಲ್ಲಿ ಪುಟ್ಟ ಮಗುವಿನ ಅಳುವೂ ಕೇಳಿಸುತ್ತಿತ್ತು. ಸುಂದ ಒಂದು ನಿಮಿಷ ಅಲ್ಲೇ ನಿಂತ. ಅಮ್ಮಿಣಿ ಕೋಪದಿಂದ ನಡೀರಿ ಮುಂದೆ ಎನ್ನುತ್ತಾ ದೂಡಿದಳು. ಸುಂದ ಮನಸ್ಸಿಲ್ಲದ ಮನಸ್ಸಿನಿಂದ ಮುಂದೆ ನಡೆಯುತ್ತಿದ್ದ. ಸುಂದ ಮಂಕಾಗಿದ್ದ. ನಾಲ್ಕು ತಾಳೆಮರಕ್ಕೆ ಏರಿದವನು ಸುಸ್ತಾಗಿ ಕೆಳಗೆ ಮಲಗಿದ್ದ. ನಂತರ ಈಗ ಬರುತ್ತೇನೆ ಎಂದು ಹೋದವ ಒಂದು ಗಂಟೆ ಕಾದರೂ ವಾಪಸ್ಸಾಗಲಿಲ್ಲ. ಅಮ್ಮಿಣಿಯ ಕೋಪ ನೆತ್ತಿಗೇರಿತ್ತು… ನೇರವಾಗಿ ಲಚ್ಚಿಮಿಯ ಮನೆಗೆ ಹೆಜ್ಜೆ ಹಾಕಿದಳು. ಸುಂದ ಅದೇ ಗುಡಿಸಲಲ್ಲಿದ್ದ… !!!. ಒಂದುವಾರದ ಹಾಲುಗಲ್ಲದ  ಮಗು ತೊಟ್ಟಿಲಲ್ಲಿ ನಿದ್ರಿಸುತ್ತಿತ್ತು. ಬಾಣಂತಿ ಲಚ್ಚಿಮಿ ಕೂತಿದ್ದಳು. ಅಮ್ಮಿಣಿ ಜೋರಾಗಿ ಕಿರುಚಲು ಪ್ರಾರಂಭಿಸಿದಳು. ಮುಂಡೆ.. ನಿನಗೆ ಇಟ್ಟುಕೊಳ್ಳಲು ನನ್ನ ಗಂಡ ಮಾತ್ರ ಸಿಕ್ಕಿದ್ದಾ… ಹಿಡಿಶಾಪ ಹಾಕುತ್ತಾ ಸುಂದನ ಕೈ ಹಿಡಿದು ಎಳೆಯುತ್ತಾ ಕರೆತಂದಳು. ಲಚ್ಚಿಮಿ ಮಾತನಾಡಲಿಲ್ಲ. ಆದರೆ ಅಳುತ್ತಲೇ ಇದ್ದಳು. ಬಾಣಂತಿ ಹೆಣ್ಣು.. ತನ್ನವರೆಂದು ಆಕೆಗೆ ಯಾರೂ ಇರಲಿಲ್ಲ. ಸುಂದನ ಸಾರಾಯಿ ಹುಚ್ಚು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇತ್ತು. ಅಮ್ಮಿಣಿಗೆ ಈಗ ಇದೊಂದು ಚಿಂತೆ ಬೇರೆ. ಜೊತೆಯಾಗಿ ಹೋಗುವುದೇನೋ ಸರಿ ಆದರೆ ಮಾತಿಲ್ಲ. ಎಲ್ಲವೂ ಕಳೆದುಕೊಂಡವನಂತೆ ಆಲೋಚನೆ ಮಾಡುತ್ತಲೇ ಇರುತ್ತಿದ್ದ. ಒಂದು ಬೆಳಿಗ್ಗೆ ಸುಂದ ಏಳಲೇ ಇಲ್ಲ… !. ಮಾತಿಲ್ಲ. ಎದ್ದೇಳಲೂ ಆಗುತ್ತಿಲ್ಲ.. ಬಲಗೈ ಮತ್ತು ಬಲಗಾಲು ಸ್ವಾಧೀನವನ್ನೂ ಕಳೆದುಕೊಂಡಿತ್ತು.. !. ವೈದ್ಯರು ಬಂದು ಪರೀಕ್ಷೆ ಮಾಡಿಯಾಯಿತು. ದಿನ ಮೂರಾಯಿತು…. ಸುಂದ ಏನನ್ನೋ ಹೇಳಲು ಪ್ರಯತ್ನಿಸುತ್ತಿದ್ದ ಎಂದು ಆತನ ಕಣ್ಣುಸನ್ನೆಯಿಂದ ಅರ್ಥವಾಗುತ್ತಿತ್ತು. ಗಂಡ ಮಲಗಿದ್ದಾನೆ.. ತಾನೂ ಮನೆಯಲ್ಲಿ ಕೂತರೆ ಜೀವನ ರಥ ಸಾಗುವುದಾದರೂ ಹೇಗೆ.. ? ಇಂದಿಗೆ ದಿನಗಳು ನಾಲ್ಕಾಯಿತು… ಅಮ್ಮಿಣಿ ನೇರ ತಾಳೆ ಮರದತ್ತ ಹೊರಟಳು. ದಾರಿಯಲ್ಲಿ ನಡೆವಾಗ ಲಚ್ಚಿಮಿಯ ಮನೆಯತ್ತ ನೋಡಲು ಮರೆಯಲಿಲ್ಲ. ಬಾಣಂತಿ ಹೆಣ್ಣು ಅಂಗಳದಲ್ಲಿ ಭತ್ತ ಕುಟ್ಟುತ್ತಲಿದ್ದಳು. ಅಮ್ಮಿಣಿ ಕಂಡೂ ಕಾಣದವಳಂತೆ ಮುಂದೆ ನಡೆದಳು. ಮುಸ್ಸಂಜೆಯಾಯಿತು. ಪೇಟೆಯಿಂದ ಸಾಮಾನು ಮತ್ತು ಒಂದಿಷ್ಟು ಬಟ್ಟೆ ಬರೆಗಳನ್ನೂ ಖರೀದಿಸಿ ಮನೆಗೆ ವಾಪಸ್ಸಾದಳು. ಅಮ್ಮನಲ್ಲಿ ನಾಟಿಕೋಳಿಯೊಂದನ್ನು ಸಾರುಮಾಡಲು ತಿಳಿಸಿ ಹೋಗಲು ಮರೆಯಲಿಲ್ಲ. ಸುಂದ ಅಸಹಾಯಕನಾಗಿ ಅಮ್ಮಿಣಿಯನ್ನೇ ನೋಡುತ್ತಲಿದ್ದ. ಮುಸ್ಸಂಜೆಯಾಯಿತು. ಅಮ್ಮಿಣಿ ಸುಂದನ ಬಳಿ ಬಂದು ಚಿಮಿಣಿ ದೀಪದ ಬೆಳಕು ಏರಿಸುತ್ತಾ… “ಸುಂದ… ನೋಡು ಯಾರು ಬಂದಿದ್ದಾರೆ…,,,” ಎಂದಳು. ಇವರೆಲ್ಲಾ ಇನ್ನು ನಮ್ಮೊಂದಿಗೇ ಇರುತ್ತಾರೆ ಎನ್ನುತ್ತಾ ಹಾಲುಕಂದನನ್ನು ಎದೆಗಪ್ಪಿ ಮುದ್ದಿಸುತ್ತಾ ಸುಂದನ ಮಡಿಲಲ್ಲಿಟ್ಟು ನಗತೊಡಗಿದಳು. ನಗುವಿನ ಹಿಂದೆ ನೂರಾರು ನೋವುಗಳಿತ್ತು. ಸುಂದನ ಕಣ್ಣಿಂದ ಹರಿವ ನೀರು ಲಚ್ಚಿಮಿಗೂ ಸಮಾಧಾನ ಹೇಳುವಂತಿತ್ತು. ********

ಅಮ್ಮಿಣಿ Read Post »

ಕಥಾಗುಚ್ಛ

ಕಾದ್ರಿಯಾಕ ಮತ್ತು ನಾಡ ದೋಣಿ

ಕಿರು ಕಥೆ ಕೆ.ಎ. ಎಂ. ಅನ್ಸಾರಿ ಪಕ್ಕದ  ಮಸೀದಿಯ ಬಾಂಗು(ಅಜಾನ್) ಕೇಳಿದಾಗ ಎದ್ದೇಳುವ ಕಾದ್ರಿಯಾಕನ ದಿನಚರಿ ಮಗ್ರಿಬ್ (ಮುಸ್ಸಂಜೆ) ವರೆಗೂ ಮುಂದುವರಿಯುತ್ತಿತ್ತು. ಬೆಳಗ್ಗೆ ಎದ್ದಕೂಡಲೇ ದೋಣಿಯ ಹತ್ತಿರ ಹೋಗಿ ದೋಣಿಯ ಸುತ್ತ ಒಂದು ಪ್ರದಕ್ಷಿಣೆ ಹಾಕಿ ಅದರ ಪ್ರತಿ  ಭಾಗಕ್ಕೆ ಒಂದು ಚಿಕ್ಕ ಏಟು. ನಂತರ ದೋಣಿಯ ಒಳಗಡೆ  ಕುಳಿತುಕೊಳ್ಳುವ ಆಸನದ ಪರಿಶೀಲನೆ… ಎಲ್ಲೂ ಹಲಗೆ ಅಲುಗಾಡುತ್ತಿಲ್ಲ… ಎಂಬುದನ್ನು ಖಾತ್ರಿಪಡಿಸುವಿಕೆ. ನಂತರ ಕಂಗಿನ ಹಾಳೆಯಿಂದ ಮಾಡಿದ ಚಿಳ್ಳಿ (ನೀರೆತ್ತಲು ಮಾಡಿದ ದೇಸಿ ಪರಿಕರ)ಯಿಂದ ದೋಣಿಯೊಳಗಿನ ನೀರನ್ನು ಹೊರಚೆಲ್ಲುವುದು. ದೋಣಿಗೆ ಸುಮಾರು ಇಪ್ಪತ್ತು-ಮೂವತ್ತು ವರುಷದ ಚರಿತ್ರೆಯಿದೆ. ಅಷ್ಟೂ ಹಳೆಯದಾದ ಚಿಕ್ಕ ನಾಡ ದೋಣಿ. ಅಲ್ಲಲ್ಲಿ ತೂತಾಗಿದ್ದರೂ ಡಾಂಬರು ಹಾಕಿ ಪ್ಯಾಚ್ ವರ್ಕ್ ನಡೆಸಲು ಕಾದ್ರಿಯಾಕ ಮರೆಯುತ್ತಿರಲಿಲ್ಲ. ಹೊಳೆಯ ಆ ಬದಿಯಿಂದ ಕೂಯ್ ಎಂಬ ದನಿಯೊಂದು ಕೇಳಿದರೆ ಸಾಕು.. ಈ ದಡದಿಂದ ಕೂಯ್ ಕೂಯ್ ಎಂದು ಪ್ರತಿದ್ವನಿ ಕೊಟ್ಟು ಹುಟ್ಟು (ತುಡುವು) ಹಾಕುತ್ತಾ ಆ ದಡಕ್ಕೆ ಯಾತ್ರೆ. ಈ ದಡದಿಂದ ಆ ದಡಕ್ಕೆ ಮೈಲಿಯ ದೂರವೇನೂ ಇಲ್ಲ. ಐದು ನಿಮಿಷದ ದಾರಿ. ಅವರ ಭಾಷೆಯಲ್ಲಿ ಹೇಳುವುದಾದರೆ ಒಂದು ಬೀಡಿ ದೂರ. ಅಂದ್ರೆ ಹುಟ್ಟು ಹಾಕುವಾಗ ಬೀಡಿ ಹೊತ್ತಿಸಿ ಬಾಯಲಿಟ್ಟರೆ ನಾಲ್ಕು ಸಲ ಹೊಗೆ ಬಿಟ್ಟಾಗ ಆ ದಡದಲ್ಲಿ ಹಾಜರ್. ಎಲ್ಲರ ಹಾಗೆ ಕಾದ್ರಿಯಾಕನಿಗೂ ಒಂದು ಕನಸಿತ್ತು. ಒಂದು ಹೊಸ ದೋಣಿ ಖರೀದಿಸಬೇಕು. ಅದೇನೂ ಈ ಜನ್ಮದಲ್ಲಿ ಸಾಧ್ಯವಿಲ್ಲ ಎಂದು ತನಗೇ ಗೊತ್ತಿತ್ತು. ಹೊಳೆದಾಟಲು ಊರವರು ಕೊಡುತ್ತಿದ್ದ  ಒಂದೋ ಎರಡೋ ರೂಪಾಯಿಗಳು ಸೇರಿದರೆ ಐವತ್ತೋ ನೂರೋ ಆಗುತ್ತಿತ್ತು ಅಷ್ಟೇ… ಅದರಿಂದ ಆತನ ದಿನದ ಖರ್ಚಿಗೇ ಸಾಕಾಗುತ್ತಿರಲಿಲ್ಲ. ಖಾದ್ರಿಯಾಕನಿಗೆ ವಯಸ್ಸಾಗುತ್ತಾ ಬಂತು. ಗಂಡು ಮಕ್ಕಳೆಲ್ಲಾ ಪೇಟೆಗೆ ಕೆಲಸಕ್ಕೆ ಹೋಗಲು ಶುರುಮಾಡಿದರು. ದೋಣಿಗೆ ಹುಟ್ಟು ಹಾಕಿ ಹಾಕಿ ಆತನ ರಟ್ಟೆ ಬಲವೂ ಕ್ಷೀಣಿಸುತ್ತಾ ಬಂದಿತ್ತು. ಈ ನಡುವೆ ಪೇಟೆಗೆ ಹೋಗಲು ಇನ್ನೊಂದು ಭಾಗದಿಂದ ಸೇತುವೆಯೂ ನಿರ್ಮಾಣವಾಯಿತು. ಅದರೊಂದಿಗೆ ಪ್ರತಿ ಮನೆಯಲ್ಲೂ ದ್ವಿಚಕ್ರ ವಾಹನದ ಆಗಮನವೂ ಆಯಿತು. ಸಾಧಾರಣ ಲುಂಗಿ, ಲಂಗ, ಸೀರೆಯುಡುತ್ತಿದ್ದ ಊರವರ ಜೀವನ ಶೈಲಿಯೂ ಬದಲಾಯಿತು. ಒಂದು ಕಯ್ಯಲ್ಲಿ ಚಪ್ಪಲಿಯನ್ನು ಇನ್ನೊಂದು ಕಯ್ಯಲ್ಲಿ ಲುಂಗಿಯನ್ನೋ ಲಂಗವನ್ನೂ ತುಸು ಮೇಲಕ್ಕೆತ್ತಿ ದೋಣಿಯೇರುವ ಜನರ ಜೀವನದಲ್ಲಿ ಬೂಟು, ಪೈಜಾಮ, ಪ್ಯಾಂಟುಗಳು ಬಂದಮೇಲೆ ನೀರಲ್ಲಿ/ಕೆಸರಿನಲ್ಲಿ ತುಸು ದೂರ ನಡೆಯಲು ಯಾತ್ರಿಕರಿಗೆ ಕಷ್ಟವಾಗತೊಡಗಿತು. ತುಸು ದೂರವಾದರೂ ವಾಹನಗಳಲ್ಲಿ ಸೇತುವೆ ದಾಟಿ ಹೋಗಲು ಜನರು ಉತ್ಸುಕರಾದಾಗ ಕಾದ್ರಿಯಕರ ಸಂಪಾದನೆಗೂ ಕತ್ತರಿ ಬಿತ್ತು. ಅಂಗಳದಲ್ಲಿ ದೋಣಿ ಅಂಗಾತ ಮಲಗಿತು. ಮನೆಯೊಳಗೆ ಕಾದ್ರಿಯಾಕಾನೂ. ಕೋವಿಡ್ 19 ಎನ್ನೋ ಮಹಾಮಾರಿ ಭಾರತಕ್ಕೆ ಲಗ್ಗೆಯಿಟ್ಟ ವಿಷಯ ದೊಡ್ಡ ದೊಡ್ಡ ಅಕ್ಷರಗಳಲ್ಲಿ ಬರೆದು ಮಾಧ್ಯಮಗಳಲ್ಲಿ ಕಾಣಿಸುತ್ತಿತ್ತು. ಎಲ್ಲರೂ ಭಯಭೀತರಾಗಿ ಮನೆಯಲ್ಲೇ ಕುಳಿತುಕೊಂಡಿರುವ ಸಮಯ. ಲಾಕ್ಡೌನ್ ಶುರುವಾಗಿದೆ… ಎಲ್ಲಾ ಕಡೆ ರಸ್ತೆಗಳು ಮುಚ್ಚಿವೆ… !! ಈ ಪರಿಸ್ಥಿತಿಯಲ್ಲಿ ರಾತ್ರಿ ಸುಮಾರು ಹನ್ನೆರಡು ಗಂಟೆಗಯ ಹೊತ್ತಲ್ಲಿ ಐದಾರು ಜನರ ಗುಂಪು ಕಾದ್ರಿಯಾಕನ ಮನೆಬಾಗಿಲು ತಟ್ಟತೊಡಗಿದರು. ಕಾದ್ರಿಯಾಕನಿಗೆ ಎದ್ದು ನಡೆಯಲಾಗುತ್ತಿಲ್ಲ. ಕಾಕನ ಮಡದಿ ಬಾಗಿಲು ತೆರೆದಾಗ ಅಲ್ಲಿ ಕಂಡದ್ದು ಶಂಕರ ಭಟ್ರ ಮಗ,  ತುಂಬು ಗರ್ಭಿಣಿ ಸೊಸೆ…. ನಾಲ್ಕೈದು ಊರ ಭಾಂಧವರು. ಗುಂಪಿನಿಂದ ಹೇಗಾದರೂ ಮಾಡಿ ಹೊಳೆದಾಟಿಸಿಕೊಡಬೇಕೆಂಬ ನಿವೇದನೆ. ಊರಲ್ಲಿ  ಯಾವೊಬ್ಬನೂ ಕರೆದರೆ ಬರುತ್ತಿಲ್ಲ. ಎಲ್ಲರಿಗೂ ಕೊರೊನಾದ ಭಯ. ಪೊಲೀಸರು ಯಾರನ್ನೂ ಪೇಟೆಗೆ ಬಿಡುತ್ತಿಲ್ಲ. ಆಸ್ಪತ್ರೆ ಸೇರಬೇಕಾದರೆ ಇನ್ನೊಂದು ರಾಜ್ಯದ ಗಡಿ ದಾಟಬೇಕು… ಎಲ್ಲಾ ಕಡೆ ಪೊಲೀಸರ ಸರ್ಪಗಾವಲು. ಆಂಬುಲೆನ್ಸ್ ಕೂಡಾ ರಾಜ್ಯದ ಗಡಿ ದಾಟಲು ಬಿಡುತ್ತಿಲ್ಲ. ಹೇಗಾದರೂ ಮಾಡಿ ಹೊಳೆ ದಾಟಿಸಿ ಕೊಡಬೇಕು… ಕಾದ್ರಿಯಾಕನಿಗೆ ಏನುಮಾಡಬೇಕೆಂದು ತೋಚಲಿಲ್ಲ. ದೋಣಿ ಹಳೆಯದಾಗಿದೆ. ಅಂಗಾತ ಮಲಗಿದೆ ಎಂದು ಹೇಳುವ ಹಾಗೆಯೂ ಇಲ್ಲ. ರಾತ್ರೋ ರಾತ್ರಿ ಎಲ್ಲರೂ ಸೇರಿ ದೋಣಿಯನ್ನು ಹೊಳೆಗಿಳಿಸಿದರು. ಕಾದ್ರಿಯಾಕನ ಗೈರು ಹಾಜರಿಯಲ್ಲಿ ಮಡದಿ ಪಾತುಮ್ಮ ಹುಟ್ಟು ಹಾಕಿ ಇನ್ನೊಂದು ದಡಸೇರಿಸಿ ವಾಪಸ್ ಬಂದಾಗ ಕಾದ್ರಿಯಾಕನ ಕಣ್ಣುಗಳು ತೇವಗೊಂಡಿತ್ತು.

ಕಾದ್ರಿಯಾಕ ಮತ್ತು ನಾಡ ದೋಣಿ Read Post »

ಕಥಾಗುಚ್ಛ

ಹಿ ಈಸ್ ಅನ್ಲೈನ್..ಬಟ್ ನಾಟ್ ಫಾರ್ ಯೂ. …..

ಕಥೆ ನಂದಿನಿ ವಿಶ್ವನಾಥ ಹೆದ್ದುರ್ಗ. “ನಾಡಿದ್ದು ಒಂದು ಇಂಟರವ್ಯೂ ಮಾಡೋಕಿದೆ.ಅವರ ಫೋನ್ ನಂಬರ್ ಜೊತೆಗೆ ಉಳಿದ ಡೀಟೈಲ್ಸ್ ಕಳಿಸ್ತಿನಿ.ಪ್ಲಾಂಟೇಷನ್ ನಲ್ಲಿ ಅವರು ಮಾಡಿರೋ ಸಾಧನೆಯ ಸಣ್ಣ ವಿವರವನ್ನೂ ಕಳಿಸ್ತೀನಿ.ಡೇಟ್ ನೆನಪಿರ್ಲಿ” ಅಂತ ಒಂದೇ ಉಸುರಿಗೆ ಹೇಳಬೇಕಾದ್ದನ್ನೆಲ್ಲಾ ಹೇಳಿ ಮುಗಿಸಿದ. ಅವನ ಸಮಯ ಅವನಿಗೆ ಬಹಳ ಮಹತ್ವದಂತೆ.ಹಾಗಂತ  ಪದೇಪದೇ ಹೇಳ್ತಾನೆ ಇರ್ತಾನೆ. ಅದೂ ಇತ್ತೀಚಿಗೆ. ಅವನ ಜೊತೆಗೆ  ಮಾತಾಡುವಾಗ ಸ್ವರ ಆದಷ್ಟೂ ಸಹಜವಾಗಿರೋದಿಕ್ಕೆ ಪ್ರಯತ್ನಿಸ್ತೀನಿ. ಅವನಿಗೆ ಕಾಲ್ ಮಾಡಿ ಆ ಕಡೆಯಿಂದ ಬರುವ ಮೊದಲ ಹಲೋಗೆ ಎದೆ ಮೂರು ಪಟ್ಟು ಮಿಡಿತ ಏರಿಸಿಕೊಂಡು ಕುಡಿದ ಕುದುರೆ ಥರ ಆಡೋದನ್ನ ಮುಚ್ಚಿಡ್ಲಿಕ್ಕೆ ಮಾಡೋ ಹರಸಾಹಸಕ್ಕೆ ಒಂದೊಂದು ಸರಿ ಬೇಸತ್ತು ಹೋಗಿ ಬಿಡುತ್ತೆ . ‘Okay.ಯೂ ಕ್ಯಾರಿ ಆನ್.ಇಫ್ ಯು ವಾಂಟ್ ವೆಹಿಕಲ್ ,ಐ ವಿಲ್ ಅರೆಂಜ್  ಫಾ ಇಟ್”ಅಂದ ತೀರ ಗಂಭೀರವಾಗಿ. ಅವನ ಪತ್ರಿಕೆಗಾಗಿ ಕೆಲಸ ಮಾಡೋ ಯಾರೋ ಹತ್ತರಲ್ಲೊಬ್ಬ ವರದಿಗಾರ್ತಿಯ ಜೊತೆ ಮಾತಾಡುವಂತೆ. ಎದುರಿಗಿದ್ದಿದ್ದರೆ ನನ್ನ ಉಗುರು ಅವನ ಕುತ್ತಿಗೆಯ ಮೇಲೆ ಮೂಡಿರ್ತಿದ್ವು.ಫೋನ್ ತೆಗೆದು ಬಿಸಾಡುವಷ್ಟು ಅಸಹನೆ ಅನಿಸ್ತು. ನನ್ನ ಹುಡುಗ…! ನನಗಾಗಿಯೇ ಇದ್ದವನು. ಆ ದಿನಗಳಲ್ಲಿ ನನ್ನ ಜೊತೆಗೆ ಕಳೆಯೋ ಹತ್ತೇ ಹತ್ತು ನಿಮಿಷಕ್ಕಾಗಿ ಅವನ ಆ ಹಾತೊರೆಯುವಿಕೆ, ನನ್ನ ಕಂಡೊಡನೆ ಬೆಳಕು ಚೆಲ್ಲುತ್ತಿದ ಅವನ ನೋಟದ ಪರಿ,ಅವನ ಇಡೀ ದೇಹ ನನ್ನ ಭೇಟಿಯನ್ನು ಸಂಭ್ರಮಿಸುತ್ತಿದ್ದದ್ದನ್ನ ನೋಡಿದಾಗೆಲ್ಲಾ ನನಗೆ ನನ್ನ ಬಗ್ಗೆ ಹೆಮ್ಮೆ ಅನಿಸ್ತಿತ್ತು. ಅವನ ಆ ಒಲವು,ಕಾವು ,ನನಗಾಗಿ ‌ಮೀಸಲಿಡುತ್ತಿದ್ದ ಸಮಯ ಎಲ್ಲವೂ ನನ್ನೊಳಗೆ ಉದ್ದೀಪಿಸುತ್ತಿದ್ದ ಆತ್ಮವಿಶ್ವಾಸವನ್ನು ಪದಗಳಲ್ಲಿ ಕಟ್ಟಿಕೊಡಲು ಸಾಧ್ಯವೇ.? ಅಂತಹ ಅವನು..?? ಹೀಗೆ…ಹೇಗೆ ಸಾಧ್ಯ.? ಇದೇನಾಯಿತು‌ ನಮ್ಮಿಬ್ಬರ ನಡುವೆ.? ಎಷ್ಟು ಯೋಚಿಸಿದರೂ ಒಂದೇ ಒಂದು ಬಿರುಕು ಮೂಡುವಂತ ಘಟನೆ ನೆನಪಿಗೆ ಬರತಿಲ್ಲ. ಅಥವಾ ನಡೆಯಲೂ ಇಲ್ಲ. ಎರಡು ವರ್ಷಗಳ ಕಾಲ ನಿತ್ಯದ ಸಂಜೆಗಳನ್ನ ನನಗಾಗಿಯೇ ಮೀಸಲಿಡುತ್ತಿದ್ದ ಅವ ನಿಧಾನವಾಗಿ ಕಾಲದ ಮಹತ್ವದ ಕುರಿತು ಭಾಷಣ ಶುರು‌ಮಾಡಿದ. ಮೊದಮೊದಲು ನನಗಿದಾವುದೂ ತಿಳಿಯಲೇ ಇಲ್ಲ. ಬರುಬರುತ್ತಾ  ನಿತ್ಯದ ಫೋನುಗಳು ಮೂರುದಿನಕ್ಕೋ,ವಾರಕ್ಕೋ ಬದಲಾಯಿಸಿಕೊಂಡಾಗ ನನ್ನ ದಿನಚರಿಯ ಭಾಗವೇ ಆಗಿಹೋಗಿದ್ದ ಸಂಭ್ರಮದ ಸಂಜೆಗಳಿಲ್ಲದೆ ದಿಗಿಲೆದ್ದು ಹೀಗೇಕೆ ಎಂದು ಗಾಬರಿ ಬಿದ್ದದ್ದು,ಮನೆಯಲ್ಲೇನಾದರೂ ಸಮಸ್ಯೆಯಾ ಅಂತ ದೇವರಿಗೆ ಮುಡುಪಿಟ್ಟದ್ದೆಲ್ಲ ಮುಗಿದು ನಾನೇ ಮಾತಾನಾಡಿಸುವ ಎಂದರೆ ಅವನ ಫೋನ್ ಲಾಂಗ್ ಟೈಮ್ ಎಂಗೇಜು. ಇಂಪಾರ್ಟೆಂಟ್ ಕೆಲಸ ಇತ್ತು,ಡೆಲಿಗೇಟ್ಸ್ ಇದ್ರು,ಕಾನ್ ಕಾಲ್ ಇತ್ತು ಅಂತ ಅವ ಹೇಳುವಾಗ  ‘ಛೆ.ಇದೇನು ಸಂಪಾದಕನ ಕೆಲಸ ಬಿಟ್ಟು ಯಾವುದಾದರೂ ಬಿಸಿನೆಸ್ ಶುರು ಮಾಡಿದ್ನಾ ಅಂತ ಅನುಮಾನವಾಗಿ ಕೇಳಿದ್ರೆ ”ಹಾ ಒಂದು ಪೆಯಿಂಟ್ ಏಜೆನ್ಸಿ ತಗೊಂಡಿದೀನಿ..ಶಾಪ್ ಮೊನ್ನೆ ಓಪನ್ ಆಯ್ತು..ಇಲ್ಲೇ ಥಿಯೆಟರ್ ಪ್ರಿಮಿಸಿಸ್ ನಲ್ಲೆ” ಅಂದ..ಶಾಕ್ ಆಯ್ತು…ಫೋಟೊ ಕಳಿಸಲಿಲ್ಲ,ಕರೀಲಿಲ್ಲ ಎಂದೆ. ತಕ್ಷಣ ಹತ್ತಿಪ್ಪತ್ತು ಫೋಟೋ ಬಂದ್ವು.  ಕಳಿಸಿದ ಫೋಟೊದಲ್ಲಿ  ದೂರದವರು ಅಂದುಕೊಂಡವರೆಲ್ಲ ಇದಾರೆ. ನಾನಿಲ್ಲ. ಹಾಗೆ ನೋಡಿದ್ರೆ ಅವರ ತಂದೆಗೆ ನನ್ನ ಕಂಡರೆ ಅಚ್ಚುಮೆಚ್ಚು. ನನ್ನ ಸೊಸೆ ಅಂತ ರೇಗಿಸ್ತಾನೆ ಇರ್ತಾರೆ. ಹಾಗಾದ್ರೆ ಇಲ್ಲೇನೋ ನಡೀತಿದೆ. ಪರಿಹರಿಸಿಕೊಳ್ಳಣಾಂದ್ರೆ ಅವ‌ ಮಾತಿಗೆ ಸಿಗೋದೇ ಇಲ್ಲ.. ಸಿಕ್ಕರೂ ಫಾರ್ಮಾಲಿಟೀಸ್ ಮಾತಿನಿಂದ ಮುಂದಕ್ಕೆ ಸಂಭಾಷಣೆ ಮುಂದುವರಿಯಲೇ ಇಲ್ಲ. “ರವೀಂದ್ರ,ದಯವಿಟ್ಟು ಕಟ್ ಮಾಡಬೇಡ ಕಾಲ್ .ಸರಿಯಾಗಿ ಕೇಳಿಸ್ಕೊ.ನಾನು ಈ ಇಂಟರ್ ವ್ಯೂ ಮಣ್ಣು ,ಮಸಿ ಅಂತ ಎಲ್ಲ ಮಾಡ್ತಿರೋದು ಹಣಕ್ಕಾಗಿ ಹೆಸರಿಗಾಗಿ ಅಲ್ಲ .ನಿನ್ನ ಜೊತೆ ಒಂದಷ್ಟು ಸಮಯ ಕಳೆಯಬಹುದಲ್ಲಾ ಅಂತ.as usual ಒಂದಷ್ಟು ರಫ್ ಪ್ತಶ್ನೆಗಳನ್ನ ತಯಾರಿ ಮಾಡಿದ್ದೀನಿ.ಅದನ್ನ ಫೈನ್ ಮಾಡಿಕೊಂಡು ನಾಡಿದ್ದು ನನ್ನನ್ನ ಮನೆಯಿಂದ ಪಿಕ್ ಮಾಡು.ನಿನ್ನ ವೃತ ಭಂಗ ಮಾಡೋದಿಲ್ಲೋ ಮಾರಾಯಾ ಜೊತೆಗಿರಬೇಕು ಅನ್ನೋದಷ್ಟೆ ನನ್ನಾಸೆ..ಏನು.?” ಅಂದೆ. ಮೊದಲಾದರೆ’ಆಹಾ ನಿನ್ನ ಸ್ವರವೇ!’ ಅಂತ ಮುದ್ದುಗರೆಯುತ್ತಿದ್ದವ ‘ಸರಿ’ ಎಂದಷ್ಟೇ ಹೇಳಿದಾಗ ಪಿಚ್ಚೆನಿಸಿತು. ಎಷ್ಟೋ ದಿನಗಳ ನಂತರ ಅವನ ಬೇಟಿ. ಸಂದರ್ಶನದ ದಿನ ಸಮಯಕ್ಕೂ ಮೊದಲೇ ತಯಾರಾಗಿ ಅವನಿಗಿಷ್ಟದ ನೀಲಿ ಬಿಂದಿಯಿಟ್ಟು ಕಾಯುತ್ತಿದ್ದವಳ ಕಣ್ಣಿಗೆ ಬಿದ್ದದ್ದು ಆಫೀಸಿನ ‌ಕಾರು. ತಲೆಸುತ್ತಿ ಬಂದ ಹಾಗಾಯ್ತು. ಹಾಗೆಲ್ಲ ನಾನು ಯೋಚಿಸಿದ ಹಾಗೆ ಇರಲಾರದು. ಅದು ಅವನೇ ಇರಬೇಕು. ಆಫೀಸ್ ಕಾರು ಅವನು ಬಳಸಬಾರದು ಅಂತೇನೂ ಇಲ್ಲವಲ್ಲ ಅಂತ ಮನಸಿಗೆ ಸಮಜಾಯಿಷಿ ಹೇಳಿಕ್ಕೊಳ್ಳುವಾಗಲೇ ಡ್ರೈವರ್ ಬಂದು’ಸರ್ ಹೇಳಿದ್ರು..ಅವರಿಗೆ ಬರೋದಿಕ್ಕೆ ಆಗಲ್ವಂತೆ.ನಿಮ್ ಫೋನು ಕನೆಕ್ಟ್ ಆಗ್ತಿಲ್ವಂತೆ..ತೋಟದ ಮಾಲೀಕರಿಗೆ ಫೋನ್ ಮಾಡಿದಾರೆ.ಬನ್ನಿ‌ಮೇಡಮ್ ‘ಅಂದ. ಇದೇನಾಗ್ತಿದೆ ನನ್ನ ಜೀವನದಲ್ಲಿ.! ನನ್ನ ಹುಚ್ಚು ಹತ್ತಿಸಿಕೊಂಡು ಕಾದುಕಾದು ಕರಗಿ ಹೋಗ್ತಿದ್ದವ ನನ್ನನ್ನುಅವಾಯ್ಡ್ ಮಾಡ್ತಿದ್ದಾನೆ.! ಕಾರಣ..?? ಇವತ್ತೇ.ಇದೇ ಕೊನೆ.ಮತ್ತೆಂದೂ‌ ಫೋನ್ ಅಥವಾ ಮೆಸೇಜ್ ಮಾಡಲಾರೆ ಅವನಿಗೆ. ಆದರೆ.? ಹೀಗಂತ ಎಷ್ಟು ದಿವಸ ಅಂದುಕೊಂಡಿಲ್ಲ ನಾನು.? ಬೆಳಗಾಗುವಷ್ಟರಲ್ಲಿ ನಿರ್ಧಾರ ಬದಲಾಗಿ ಇನ್ನೊಮ್ಮೆ.. ಒಮ್ಮೆ.. ಪ್ರಯತ್ನಿಸಬಹುದಲ್ಲಾ ಅನಿಸಿ ಮರಳಿ ಯತ್ನವ ಮಾಡಿದಾಗೆಲ್ಲಾ ಮತ್ತದೆ ಉಡಾಫೆ ಉತ್ತರ. ಅದೂ ಗಂಟೆ ಕಳೆದ ಮೇಲೆ. ” ಹಿ ಈಸ್ ಆನ್ಲೈನ್.ಬಟ್ ನಾಟ್ ಫಾರ್ ಯೂ”  ಅಂತ ಬೇರೆ ಸ್ಟೇಟಸ್ ಹಾಕಿದಾನೆ.. ನಾ ಈ ಮಟ್ಟಿಗೆ ಹಚ್ಚಿಕೊಳ್ಳೊ ಮುನ್ನ ಯೋಚಿಸಬೇಕಿತ್ತಾ..? ಆದರೆ ಅಳೆದು ಸುರಿದು ಮುಂದುವರೆಯಲು ಇದು ಭಾವಕೋಶದ ಮಾತು . ಯಾಕೆ ಅವನಿಗಾಗಿ ಅಳ್ತಿದ್ದೀನಿ ನಾನು.? ಅದೂ ಈ‌ ಮಟ್ಟಿಗೆ.? ಒಲಿಯುವವರೆಗೆ ನಡುರಾತ್ರಿ ತನಕ ನೋವು ಪ್ರಲಾಪಗಳ ಕವಿತೆ ಹಾಡಿದ್ದೇ ಹಾಡಿದ್ದು. ಛೀ ಅನಿಸುತ್ತೆ ಈಗ ಯೋಚಿಸಿದ್ರೆ. ಅತ್ತು‌ಮುಗಿದ ಮೇಲೆ  ಯೋಚಿಸುತ್ತೇನೆ.? ಯೋಗ್ಯತೆ ಇಲ್ಲದವನಿಗಾಗಿ ನನ್ನ ಕಣ್ಣೀರೇ.? ಈಗಿಂದೀಗಲೇ ಅವನನ್ನು ನನ್ನ ಮನಸಿಂದ ತೆಗೆದು ಹಾಕ್ತೀನಿ. ಹೀಗಂತ ಪದೇಪದೇ ಹೇಳಿಕೊಂಡಿದ್ದೂ ಆಯ್ತು. ಚಕ್ಕಳಮಕ್ಕಳ ಹಾಕಿ ಕೂತುಬಿಟ್ಟಿದ್ದಾನೆ. ಇಲ್ಲಿ.. ಈ ಎದೆಯೊಳಗೆ. ಹೊರಗೆ ಕಳಿಸೋದು ಅಷ್ಟು ಸುಲಭವಲ್ಲ. ‘ರವೀ…ನಿನ್ನ ಹೆಸರಿಗೆ ಅಂಟಿರುವ ಇಂದ್ರನ ಕುರಿತು ‌ನಂಗೆ ಮೊದಲಿಂದಲೂ ಅನುಮಾನ ಇದೆ’. ಅಂತಿದ್ದೆ ನಾನು ಆಗಾಗ. ಹಾಗಂದಾಗೆಲ್ಲಾ  ‘ ನನ್ನ ಪ್ರೇಮಕ್ಕೆ ,ಪಟ್ಟಕ್ಕೆ ಚಾರುದೇವಿಯೊಬ್ಬರೆ  ರಾಣಿ ‘ ಅಂದ‌ಮಾತಿಗೆ ಆಕಾಶಕ್ಕೆ ತಲೆ ಹೊಡಿಸಿಕೊಂಡು ಪೆಟ್ಟಾದ ಹಾಗೆ. ಮತ್ತೆ ಹಳೆ ನೆನಪುಗಳೆ. ಇವತ್ತು..ಇವತ್ತೇ ಕೊನೆ ಬಾರಿ. ಇನ್ನೆಂದೂ ನಿನಗೆ ಫೋನ್ ಮಾಡಲಿಕ್ಕೆ  ಮೆಸೇಜಿಗೆ ಪ್ರಯತ್ನಿಸೊಲ್ಲ.ಇದೊಂದು ಪರೀಕ್ಷೆ ನಡೆದೇ ಹೋಗಲಿ. “ರವಿ.ಮುಂದಿನ ಭಾನುವಾರ ಮಂಡ್ಯಕ್ಕೆ ಹೋಗ್ತಿದ್ದೀನಿ. ಮೈಸೂರಿನಿಂದ ಗೆಳತಿ ಪಿಕ್ ಮಾಡ್ತಾಳೆ. ಲಗೇಜಿದೆ.ಬಸ್ಸು ಪ್ರಯಾಣ “ ಅಂತ ಟೈಪಿಸಿ ಸೆಂಡ್ಒತ್ತಿದೆ. ಬಿದ್ದೇ ಹೋಗುವ ಎದೆಯ ಹಿಡಿದು ಅರ್ದ ಗಂಟೆ ಕಾಯ್ದ ಮೇಲೆ ಓಕೆ ಅಂತ ಮೆಸೇಜು ಬಂತು. ಇಷ್ಟೇನಾ..? ದೂರ ಹೋಗುವಾಗ ಹೇಳು. ಒಟ್ಟಿಗೆ ಪ್ರಯಾಣ ಮಾಡೋಣ. ನಿನ್ನ ಪ್ರಭಾವಳಿಯೊಳಗೆ ಸ್ವಲ್ಪ ಹೊತ್ತು ಇದ್ದ ಖುಷಿ ನನದಾಗುವ ಸಂಭ್ರಮವನ್ನು ಕೊಡೆ ಅಂತ ಗೋಗರೆಯುತ್ತಿದ್ದವ ಇವನೇನಾ.? ಇಲ್ಲ.. ಏನೋ ವ್ಯತ್ಯಾಸ ಆಗ್ತಿದೆ.ಅವನು ಮಾಡಿರಲಾರ ಮೆಸೇಜು.. ಒಪ್ಪಲಿಲ್ಲ ವಾಸ್ತವವನ್ನು ಮನಸ್ಸು. ಅನುಮಾನ, ಬೇರೆಯವರ ಬಳಿಯಲ್ಲಿ ಫೋನಿದ್ದರೆ..? ಕಾಲ್ ಒತ್ತಿದೆ..ಅವನದ್ದೇ ಧ್ವನಿ.ಕೇಳಿದೊಡನೆ ಕುಣಿಯೋ ನವಿಲಾಗೋ ಈ ಹಾಳು ಜನ್ಮ ಸಾಕು ಇನ್ನು. ಘನ ಗಂಭೀರವಾಗಿ ‘ಬಿಡುವಿದೆಯಾ’.ಎಂದೆ. ‘ಹಾ ಹೇಳು.’ ‘ಮಂಡ್ಯಕ್ಕೆ ಹೊರಟಿದ್ದೀನಿ’ ಮುಗಿದೇ ಇಲ್ಲ ಮಾತು. ‘ಸರಿಯಾಗಿ ಒಂಬತ್ತೂ ಕಾಲಿಗೆ ಮಾಡ್ತೀನಿ. ಪ್ಲೀಸ್ ಬಿಟ್ ಬ್ಯುಸಿ’ ಕರೆ ಕತ್ತರಿಸಿದ ಫೋನು ಹಿಡಿದವಳ ಮನಸಿಗೆ ಅವನ ಧ್ವನಿಯಲ್ಲಿ ಪ್ರಾಮಾಣಿಕತೆ ಇದೆ ಅನಿಸಿತೊ ಅಥವಾ ಈ ಸಂದರ್ಭಕ್ಕೆ ನಂಗೆ ಹಾಗೆ ಅನಿಸ್ತಿದೆಯಾ  ತಿಳಿಲಿಲ್ಲ. ಒಂಬತ್ತು ಮುಗಿದ ಮೇಲಿನ ಒಂದೊಂದು ನಿಮಿಷವೂ ಆ ಮಟ್ಟಿಗೆ ದೀರ್ಘ ಎನಿಸಿದ್ದು ಅದೇ ಮೊದಲು.. ಗಡಿಯಾರದ ಶೆಲ್ ಸರಿಗಿದೆಯಾ…ಚೆಕ್ ಮಾಡಬೇಕಿತ್ತು.. ಛೆ..ಫೋನ್  ನೆಟ್ವರ್ಕ್ ಲಿ ಇದೆಯಾ ಇಲ್ಲವೇ ಅಂತ ಚೆಕ್ ಮಾಡಿ… 9.15ಆಯ್ತು.ಓ ಮೈ ಗಾಡ್. ಇವನು…!! ಇವನು ಅವಾಯ್ಡ್ ಮಾಡ್ತಿದ್ದಾನೆ ನನ್ನ.! ಆನ್ ಲೈನ್‌ ಚೆಕ್ ಮಾಡಿದ್ರೆ ಮುಕ್ಕಾಲು ಗಂಟೆ ಹಿಂದೆ ಲಾಸ್ಟ್ ಸೀನ್ ಇದೆ. ‘ಹೈ ‘ಕಳಿಸಿದೆ. ಸಿಂಗಲ್  ರೈಟುಮಾರ್ಕು. ಅಂದರೆ. ಅಂದರೆ ಬೇರೆಯವರ ಜೊತೆಗೆ ಸಂಭಾಷಣೆ ನಡೀತಿದೆ.ಮಾತಾಡುವಾಗ ಅವ ನೆಟ್ ಆಫ್ ಇಡೋದು ಗೊತ್ತಿರೊ ವಿಚಾರವೇ. ಹೀಗೇಕಾಯ್ತು. ಸಂಬಂಧದಲ್ಲಿ ಏನೊಂದು  ಇಲ್ಲದೆ ಹೀಗೆ ದೂರಾಗಲು ಸಾಧ್ಯವೇ? ನನ್ನ ಪ್ರೀತಿಯಲ್ಲಿ ಇದ್ದ ಕೊರತೆಯಾದರೂ ಏನು? ಛೆ.ಅಲ್ಲದ್ದನ್ನೇ ಯೋಚಿಸ್ತೀನಿ. ಅಂತವನಲ್ಲ ಅವ. ಕ್ಷಣ ನಿರಾಳವಾದರೂ ಮತ್ತೆ ಎದೆಯೊಳಗೆ ಅನಂತವಾಗುತ್ತಿದ್ದ ನೋವು. ರಾತ್ರಿ ಹನ್ನೊಂದು ಕಾಲಿಗೆ ಸರಿಯಾಗಿ ಅವನಿಂದ ಮೆಸೇಜು ಬಂತು. ಜೊತೆಗೆ ಅನ್ಲೈನಿಗೂ ಬಂದ  ‘ಸಾರಿ..ಆಗಲಿಲ್ಲ.ಕಾಲ್ ಮಾಡೋದಿಕ್ಕೆ. ಫಾರ್ ಮಂಡ್ಯ, ಯೂ ಪ್ಲೀಸ್ ಕ್ಯಾರಿ ಆನ್. ಹ್ಯಾವ್ ಎ ನೈಸ್ ಟೈಮ್.ಬೈ.’ ಗಳಗಳನೆ ಅಳಬಹುದಾದ ಮಾತುಗಳು. ಆದರೆ…ಹೇಗೋ ಈ ಎದೆ ಗಟ್ಟಿಯಾಗಿದೆ.! ಒಂದೇ ಒಂದು ತೊಟ್ಟು ಕಣ್ಣೀರು ಬರಲಿಲ್ಲ . ಕಳೆದುಕೊಂಡಿದ್ದ ಆತ್ಮವಿಶ್ವಾಸವನ್ನೆಲ್ಲಾ ತುಸು ಹೊತ್ತು ಧ್ಯಾನಿಸಿ ಆವಾಹಿಸಿಕೊಂಡೆ. ಮತ್ತೆಂದೂ. ಎಂದೆಂದೂ ಅವನಿಗಾಗಿ ಕಾಯಲಾರೆ. ತಿರುಗಿ ಬಂದರೆ ಸ್ವೀಕರಿಸಲಾರೆ. ಮುಂದೆ ಯಾರಿಗಾಗಿಯೂ ಕಾಯಲಾರೆ.! ಕನ್ನಡಿ ನೋಡಿಕೊಂಡೆ. ಹಣೆಯ  ನೆರಿಗೆಗಳೆಲ್ಲ ಸಡಿಲಾಗಿ ಮುಖ ಪ್ರಸನ್ನವಾಗಿತ್ತು. ನೆಮ್ಮದಿಯ ಒಂದು ಕಿರುನಗು ತುಟಿಯ ಮೇಲೆ. ಎಂದೂ ನಿದ್ರಿಸದ ರೀತಿಯಲ್ಲಿ ಆ ರಾತ್ರಿ ಮಲಗಿ ನಿದ್ರಿಸಿದೆ. —– ಸುದೀರ್ಘವಾದ ನಿಟ್ಟುಸಿರಿನೊಂದಿಗೆ  ಮಾತು ಮುಗಿಸಿ ಅವಳು ನನ್ನ ಮುಖ ನೋಡಿದಳು. ಯಾಕೋ ಅಪ್ಪಿಕೊಳ್ಳಬೇಕು ಅನಿಸಿತು. ಸಮಾನ ದುಃಖಿಗಳು. ಇದೇ ಕಥೆ ನನ್ನ ಜೀವನದಲ್ಲಿ. ಎರಡು ವರ್ಷ ಮೊದಲು. ಆಗ ನನ್ನ ತಪ್ಪಿಸಿ ಮಾತಿಗೆ ತೊಡಗಿದ್ದು ಅವ ಇವಳ ಜೊತೆ.. ಈಗ …!!! ಹೆಸರು ಗೊತ್ತಿಲ್ಲ.. ಯಾವುದೋ ಹೆಣ್ಣು ಎದೆ… ಮೊಹರೊತ್ತಿಕೊಂಡಿದೆ ಇವನ ಹೆಸರನ್ನ.! ಮತ್ತದೇ ನೋವಿನ ಪ್ರಲಾಪಗಳ ಹಾಡು ಹೇಳ್ತಿರಬಹುದು. ನಡುರಾತ್ರಿವರೆಗೆ..!! ಹೆಣ್ಣು ಜನ್ಮ..’ಅಯ್ಯೋ’ ಅನ್ನೋದು ಜನ್ಮ ಸಿದ್ಧ.! ಎಲ್ಲ ಹೇಳಿ ಹಗುರಾಗಿ ಹೊಸದಾಗಿ ಹೊಳೆಯುತ್ತಿದ್ದ ಅವಳ ಅಕ್ಕರೆಯಲಿ ಕರೆದು ಒಂದು ಸಣ್ಣ ವಾಕಿಂಗ್ ಹೋಗಲಿಕ್ಕೆ ಹೊರಟೆ. ಅವಳೂ ಅಡ್ಡಿಯಿಲ್ಲದೆ  ಎದ್ದಳು. **********************

ಹಿ ಈಸ್ ಅನ್ಲೈನ್..ಬಟ್ ನಾಟ್ ಫಾರ್ ಯೂ. ….. Read Post »

ಕಥಾಗುಚ್ಛ

ನಡಿ ಕುಂಬಳವೇ ಟರಾ ಪುರಾ

ಕಥೆ ಪ್ರಜ್ಞಾ ಮತ್ತಿಹಳ್ಳಿ             ಇನ್ನೇನು ಈ ಬಸ್ಸು ಇಳಿದಿಳಿದು ಕೆರೆಯೊಳಗೇ ನುಗ್ಗಿ ಬಿಡುತ್ತದೆ ಎಂಬ ಭಾವ ಬಂದು ಮೈ ಜುಂ ಎನ್ನುವಷ್ಟರಲ್ಲಿ ರೊಯ್ಯನೆ ಎಡಕ್ಕೆ ತಿರುಗಿ ದಟ್ಟ ಕಾಡಿನ ಏರಿ ಶುರುವಾಗುತ್ತದೆ. ಅಂದರೆ ಇದರರ್ಥ ಇಳಿಯೂರು ಎಂಬ ಊರು ದಾಟಿತು ಹಾಗೂ ತಲೆಯೂರಿಗೆ ೧೫ ಕಿ.ಮೀ ಉಳಿದಿದೆ ಅಂತ. ಮೂರು ಜನರ ಸೀಟಿನ ಎಡತುದಿಗೆ ಕೂತಿದ್ದ ಬಸವರಾಜ ಎಡಬದಿಯ ಕಂಬಿಯನ್ನು ಗಟ್ಟಿಯಾಗಿ ಹಿಡಿದುಕೊಂಡು ಬೀಳುವುದನ್ನು ತಪ್ಪಿಸಿಕೊಳ್ಳುತ್ತಿದ್ದಾನೆ. ಇಕ್ಕೆಲದ ಎತ್ತೆತ್ತರದ ಮರಗಳು, ಅವುಗಳ ದಟ್ಟ ನೆರಳಿನಲ್ಲಿ ಬಿಸಿಲೇ ಕಾಣದ ಆಕಾಶ, ಬೈತಲೆಯಂಥ ಸಣ್ಣ ದಾರಿಯಷ್ಟೇ ಕಾಣುವ ಸ್ಟಾಪುಗಳು, ಅಲ್ಲಲ್ಲಿಳಿದುಕೊಂಡು ನಿರ್ಭಯವಾಗಿ ಸರಸರ ನಡೆಯುತ್ತ ಮಾಯವಾಗಿಬಿಡುವ ಜನರು. ಒಂದಿಷ್ಟು ಭತ್ತದ ಗದ್ದೆ, ಅಡಿಕೆ-ತೆಂಗಿನ ಮರಗಳಿರುವ ಒಂಟಿ ಮನೆಗೆ ಜನ ಒಂದು ಊರು ಎಂದು ಕರೆಯುವುದು ನಾಲ್ಕೈದು ದನ-ಕರು ಸಾಕಿಕೊಂಡು ೫-೬ ಜನರ ಕುಟುಂಬವೊಂದು ಆರಾಮವಾಗಿ ಸದ್ದಿಲ್ಲದೇ ಬದುಕುವ ರೀತಿ ಇವನ್ನೆಲ್ಲ ಈಗೊಂದು ೫-೬ ತಿಂಗಳಿಂದ ನೋಡುತ್ತಿದ್ದಾನೆ.  ಬೆಳಗಿನಿಂದ ರಾತ್ರಿಯವರೆಗೆ ಬಾಯ್ತುಂಬ ಎಲೆ-ಅಡಿಕೆ ತುಂಬಿಕೊಂಡು ಓಡಾಡುವ ಗಂಡಸರು, ತುರುಬು ಕಟ್ಟಿಕೊಂಡು ಅಬ್ಬಲ್ಲಿಗೆ ದಂಡೆ ಮುಡಿವ ಹೆಂಗಸರು. ಮೊದಮೊದಲು ಅವನಲ್ಲಿ ಭಯ ಹುಟ್ಟಿಸುತ್ತಿತ್ತದ್ದರು. ಪುಳು-ಪುಳು ಕುಣಿಯುವ ಮೀನು ಹಿಡಿದು ಅಡಿಗೆ ಮಾಡುವ ಸಂಗತಿಯೆ  ಅವನಿಗೆ ಎದೆ ಝಲ್ಲೇನ್ನಿಸುವಂತೆ ಮಾಡಿತ್ತು. ಬಿಜಾಪೂರ ಜಿಲ್ಲೆಯ ಬಸವನಬಾಗೇವಾಡಿಯ ಬಸವಣ್ಣನವರು ಹುಟ್ಟಿದೂರಿನಲ್ಲಿ ಹುಟ್ಟಿದ, ಬಿಜಾಪುರವೆಂಬ ಗುಮ್ಮಟಗಳ ಊರಿನಲ್ಲಿ ಓದಿದ, ಈ ಬಸವರಾಜ ಉಳ್ಳಾಗಡ್ಡಿಯೆಂಬ ಸಂಭಾವಿತ ಹುಡುಗ ಅರ್ಥಶಾಸ್ತ್ರದಲ್ಲಿ ಎಂ.ಎ. ಮಾಡುವಾಗ ಡಿಪಾರ್ಟಮೆಂಟಿನ ಹುಡುಗರ ಜೊತೆ ಟೂರು ಹೋಗುವಾಗ ತಲೆಯೂರಿನ ಮಾರಿಕಾಂಬಾ ದೇವಸ್ಥಾನವನ್ನು ನೋಡಿದ್ದ. ತನ್ನ ಕುಟುಂಬದ ಸದಸ್ಯರು ಧರ್ಮಸ್ಥಳದ ಶ್ರೀ ಮಂಜುನಾಥಸ್ವಾಮಿಯ ದರ್ಶನಕ್ಕೆ  ಕರೆದೊಯ್ಯುವಾಗ, ಇಲ್ಲಿಯ ಬಸ್ ಸ್ಟಾö್ಯಂಡಿನಲ್ಲಿಳಿದು, ಕೆ.ಎಸ್.ಆರ್.ಟಿ.ಸಿ., ಕ್ಯಾಂಟೀನಲ್ಲಿ ಚಾ ಕುಡಿದಿದ್ದ. ಅಷ್ಟು ಬಿಟ್ಟರೆ, ಅವನಿಗೆ ಈ ಊರು ಅಪರಿಚಿತವೆ. ನೆಟ್ ಪರೀಕ್ಷೆ ರಿಝಲ್ಟ ಬರುತ್ತಿದ್ದಂತೆ, ಕೆ.ಪಿ.ಎಸ್.ಸಿ.ಯ ಇಂಟರವ್ಯೂ ನಡೆಸಿ, ಸೆಲೆಕ್ಟ್ ಆದವರಿಗೆ ಪೋಸ್ಟಿಂಗ್ ಕೊಡುವಾಗ ಕೌನ್ಸೆಲಿಂಗ್ ಮಾಡಿದ್ದರು. ಲಿಸ್ಟಿನಲ್ಲಿ ಮೊದಲು ಹೆಸರಿದ್ದವರೆಲ್ಲ ಬೆಂಗಳೂರು, ಮೈಸೂರು, ಇತ್ಯಾದಿ ಊರುಗಳನ್ನು ಆಯ್ದುಕೊಂಡಿದ್ದರು. ಬಸವರಾಜನ ಪಾಳಿ ಬರುವಷ್ಟರಲ್ಲಿ ಇದ್ದವೆಲ್ಲ ಸಣ್ಣ-ಸಣ್ಣ ಊರುಗಳು, ಶಿವಮೊಗ್ಗ, ಉಡುಪಿ ಜಿಲ್ಲೆಯ ಊರುಗಳನ್ನು ಆಯ್ಕೆ ಮಾಡಿಕೊಳ್ಳಲು ಮನಸ್ಸು ಬರದೇ, ಇದ್ದುದರಲ್ಲೇ ವಿಜಾಪೂರ, ಬಾಗಲಕೋಟೆಗಳಿಂದ ಡೈರೆಕ್ಟ್ ಬಸ್ಸು ಇರುವ ಇದೇ ಅನುಕೂಲ ಎನ್ನಿಸಿತು. ಆದರೆ, ಕೆ.ಪಿ.ಎಸ್.ಸಿ., ಬಿಲ್ಡಿಂಗ್‌ನ ಹೊರಗಿನ ಕ್ಯಾಂಟೀನಿನಲ್ಲಿ ಚಾ ಕುಡಿಯುತ್ತ ನಿಂತಾಗ, ಯಾರೋ ಕುಮಟಾ ಕಡೆ ಹುಡುಗಿಯಂತೆ ಕಣ್ಣಲ್ಲಿ ನೀರು ತುಂಬಿಕೊAಡು ಮತ್ತೊಬ್ಬರಿಗೆ ಹೇಳುತ್ತಿದ್ದಳು. “ಇದೇ, ಇವ್ರೆಯಾ ತಲೆಯೂರು ತಗೊಂಬಿಟ್ರು. ಇವ್ರ ನೆಕ್ಸಟ್ ನಂದೇ ಇತ್ತು. ಸಾಯ್ಲಿ ತಪ್ಪೋಯ್ತು ಒಂದ್ ನಿಮಿಷ್ದಲ್ಲಿ ಕೈ ಬಿಟ್ ಹೋಯ್ತು”.  ಕುಡಿಯುತ್ತಿರುವ ಚಾ ನೆತ್ತಿಗೇರಿದಂತಾಗಿ, ಕೆಮ್ಮು ಬಂದಿತ್ತು. ಜೊತೆಗಿದ್ದ ವೀರೇಶ ಬಳಿಗಾರ ಅವಳನ್ನೇ ನೇರವಾಗಿ ಕೇಳಿಬಿಟ್ಟ. “ಯಾಕ್ರಿ ಮೇಡಮ್ಮರೆ ಏನಾಯ್ತ್ರೀ?  ಯಾರಿಗ್ಯಾವ್ದು ಬೇಕೋ ತಗೋತರ‍್ರಿ, ನಿಮ್ಗೇನ್ ಮಾಡ್ಯಾನಿಂವ?” “ಅಯ್ಯೋ ನಾ ಎಂತ ಹೇಳ್ದೆ? ನಮಗೆ ಲೇಡಿಸಿಗೆ ದೂರ ಹೋಗೋದು ತ್ರಾಸಲ.  ನೀವು ಜಂಟ್ಸ್ ಬೇಕಾರ ಹೋಗ್ಬಹ್ದು .ಕುಮ್ಟಾ, ಇಲ್ಲದಿದ್ರೆ ತಲೆಯೂರು ಸಿಗ್ತದೆ ಹೇಳಿ ಆಸೆ ಇತ್ತು” ಎಂದೇನೋ ಗಳಗಳ ಹೇಳಿದಳು. “ಯಾವ್ಯಾವ ಊರಿನ ನೀರಿನ ಋಣ ಯಾರ‍್ಯಾರಿಗೆ ಇರ್ತೈತಿ ಹೇಳಾಕ ಬರೂದಿಲ್ರಿ. ಇಷ್ಟಕ್ಕೂ ಪ್ರತಿವರ್ಷ ಟ್ರಾನ್ಸಫರ್ ಮಾಡಿ ಒಗಿತಿರ‍್ತಾರ. ನೀವು ಮುಂದಿನ್ವರ್ಷ ಟ್ರಾನ್ಸಫರ್ ಕೌನ್ಸೆಲಿಂಗ್‌ಗೆ ರ‍್ರಿ. ಎಕ್ಸಚೇಂಜ್ ಮಾಡಿಕೊಳ್ಳೋಣ”, ವೀರೇಶ ಅಕ್ಕಿಆಲೂರು ತೆಗೆದುಕೊಂಡಿದ್ದ. ಅದೊಂದು ಸಣ್ಣ ಹಳ್ಳಿ. ತಾನು ಪ್ರತಿ ಶನಿವಾರ ತಲೆಯೂರಿಗೆ ಬಂದುಬಿಡುತ್ತೇನೆ ಎಂದು ಹೇಳಿದ್ದ.             ಬಸವರಾಜ ಜಾಯ್ನ ಆಗಲು ಬಂದಾಗ ಅಕ್ಟೋಬರ್ ತಿಂಗಳು. ಸೆಮಿಸ್ಟರ್ ಮುಗಿಯಲು ಇನ್ನೊಂದೇ ತಿಂಗಳು ಬಾಕಿ ಇತ್ತು.  ಎಂ.ಎ. ಮಾಡುವಾಗ ಹಾಸ್ಟೇಲಲ್ಲಿ ಪರಿಚಯವಿದ್ದ ರಾಮಚಂದ್ರ ನಾಯ್ಕ ಸಮಾಜಶಾಸ್ತ್ರಕ್ಕೆ ಜಾಯ್ನ ಆಗಲು ಬಂದಿದ್ದ. ಅವನು ಭಟ್ಕಳದವನಾದ ಕಾರಣ, ಊರಿನ ಪರಿಚಯ ಚೆನ್ನಾಗೇ ಇತ್ತು. ಅವನು ತಾನು ಮನೆ ಬಾಡಿಗೆಗೆ ಹಿಡಿಯುತ್ತೇನೆ, ನೀನು ಶೇರ್ ಮಾಡು ಎಂದಾಗ ಬಸವರಾಜನಿಗೆ ಅನುಕೂಲವೇ ಆಯ್ತು. ದೊಡ್ಡ ಕಂಪೌಂಡಿನ ಮಹಡಿ ಮನೆಯ ಕೆಳಗಿನ ಭಾಗದಲ್ಲಿ ಮಾಲಕರು ಇದ್ದರು. ಮೇಲ್ಬಾಗದ ಮೂರು ರೂಮುಗಳ ಮನೆ ಇವ್ರದ್ದು. ಮಾಲಕ ವಿಶ್ವನಾಥ ಕಿಣಿಯದು ಪೇಟೆಯಲ್ಲಿ ಅಂಗಡಿ ಇತ್ತು. ಹೆಂಡತಿ ದೊಡ್ಡ ಧ್ವನಿಯ ಜೋರುಮಾತಿನ ಸಂಧ್ಯಾಬಾಯಿ. ಮಕ್ಕಳು ಹುಬ್ಬಳ್ಳಿಯಲ್ಲಿ ಇಂಜನಿಯರಿಂಗ್ ಓದುತ್ತಿದ್ದರು. ಜನಿವಾರ ಹಾಕಿಕೊಂಡು ಸಂಧ್ಯಾವಂದನೆ ಮಾಡುವ ಕಿಣಿ ಮೀನು ತಿನ್ನುವುದು ನೋಡಿ ಬಸವರಾಜ ಕಕ್ಕಾಬಿಕ್ಕಿಯಾಗಿದ್ದ.  ಅವರು ಸಾರಸ್ವತ ಬ್ರಾಹ್ಮಣರೆಂದೂ, ಕೊಂಕಣಿ ಮಾತಾಡುತ್ತಾರೆ ಹಾಗೂ ಮತ್ಸ್ಯಾಹಾರ ಸೇವಿಸುತ್ತಾರೆಂದೂ ರಾಮಚಂದ್ರನಾಯ್ಕ ವಿವರಣೆಯಿತ್ತಾಗ, ಬಸವರಾಜ ತಲೆಯಾಡಿಸಿದ. ಕೊಂಕಣಿ ಮಾತೃಭಾಷೆಯ ಕಿಣಿ ದಂಪತಿಗಳು ರಾಗವಾಗಿ ಮಾತನಾಡುವ ಕನ್ನಡ ಇವನಿಗೆ ಅರ್ಥವೇ ಆಗುತ್ತಿರಲಿಲ್ಲ. ಒಂದು ಸಲ ಸಂಧ್ಯಾ ಮನೆ ಬಾಗಿಲ ಮೆಟ್ಟಿಲ ಮೇಲೆ ಕುಳಿತು ಚಾ ಕುಡಿಯುತ್ತಿರುವಾಗ ಕಾಲೇಜು ಮುಗಿಸಿ ಬಂದ ರಾಮಚಂದ್ರ ಬಸವರಾಜರಿಗೆ “ಚಾ ಕುಡಿವಾ ರ‍್ರಿ” ಎಂದು ಕರೆದಳು. ಮುಖ ತೊಳೆದು ಕುಡಿದರಾಯ್ತು ಎಂದು ಬಸವರಾಜ “ಹಿಂದಾಗಡೆ ಕುಡಿತೀನ್ರಿ ಅಕ್ಕಾರೆ” ಎಂದ. “ಇಶ್ಯಿಶ್ಯಿ ನಾವು ಜಾತಿಬೇಧ ಮಾಡೋದಿಲ್ಲ. ಹಿತ್ಲಲ್ಲೆಲ್ಲ ಕೂತ್ಕೊಂಡು ಕುಡ್ಯುದೆಂತಕೆ, ಇಲ್ಲೇ ಕುಡೀರಿ” ಎಂದಳು.  ಬಸವರಾಜನ ಭಾಷೆಯನ್ನು ಕೆಲಮಟ್ಟಿಗೆ ಬಲ್ಲ ರಾಮಚಂದ್ರ ಹಿಂದಾಗಡೆ ಅಂದ್ರೆ ಆಮೇಲೆ ಅಂತ ಎಂದು ಕನ್ನಡವನ್ನು ಕನ್ನಡಕ್ಕೆ ಭಾಷಾಂತರ ಮಾಡಬೇಕಾಯ್ತು. ರಾಮಚಂದ್ರನ ಅನ್ನ, ಕರಾವಳಿಯ ತೆಂಗಿನ ಕಾಯಿ, ಮಸಾಲೆ ಸಾರಿನ ಅಡುಗೆ, ಬಸವರಾಜನಿಗೆ ರೂಢಿಸಲಿಲ್ಲ. ಊರಿಂದ ದೊಡ್ಡ ಗೋಣೀಚೀಲದಲ್ಲಿ ಕಟಕರೊಟ್ಟಿ, ಚಟ್ನಿಪುಡಿ, ತಂದಿಟ್ಟುಕೊಳ್ಳುತ್ತಿದ್ದ.  ಯಾವುದಾದರೂ ತರಕಾರಿಯ ಪಲ್ಯ ಅಥವಾ ಸಾಂಬಾರ್ ಮಾಡಿಕೊಂಡು ಅನ್ನ-ರೊಟ್ಟಿಗಳ ಜೊತೆ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ. ಬೆಳಗಿನ ತಿಂಡಿಗೆ ರಾಮಚಂದ್ರ ದೋಸೆ-ಇಡ್ಲಿ ಮಾಡುವುದು ಮಾತ್ರ ಬಸವರಾಜನಿಗೆ ಬಹಳ ಇಷ್ಟವಾಗುತ್ತಿತ್ತು. “ಮುಂಜಾನೆ ನಸಿಕ್ಲೆ ನಾಷ್ಟಾ ಮಾಡ್ತೀರಿ. ನೋಡಪ್ ನೀವೆಲ್ಲ. ನಮ್ಮೂರಾಗೆ ಬರೇ ಚಾ ಕುಡ್ದು ಮಂದಿ ಅಡ್ಡಾಡತೇವಿ. ಒಂದು ತುತ್ತು ಉಪ್ಪಿಟ್ಟು ಇಲ್ಲಾ, ಚುಮ್ಮರಿ ಒಗ್ಗರಣಿ ಕಾಣ್ಬೇಕಂದ್ರೆ ಹತ್ತು ಹೊಡೀತೇತಲೆ. ಅದು ಹ್ಯಾಂಗ ಏಳಕ್ಕೆ ತಿಂತಿರೋ ಮಾರಾಯ” ಎಂದು ಆಶ್ಚರ್ಯ ಪಡುತ್ತಿದ್ದ. ಎಂಟು ಗಂಟೆಯೆಂದರೆ, ಅಕ್ಕ-ಪಕ್ಕದ ಹೆಂಗಸರು ಒಬ್ಬರಿಗೊಬ್ಬರು “ಆಸ್ರಿ ಕುಡಿದ್ರಿ?” ಎಂದು ಕೇಳುತ್ತ ಚೊಂಯ್ ಚೊಂಯ್ ಎಂದು ದೋಸೆ ಎರೆವ ಸದ್ದಿನ ಹಿನ್ನೆಲೆ ಸಂಗೀತದೊಂದಿಗೆ ಓಡಾಡುತ್ತಿದ್ದರು.             ಬಸ್ಸಾಗಲೇ ತಲೆಯೂರಿನ ಬಸ್ ಸ್ಟಾö್ಯಂಡಲ್ಲಿ ನಿಂತು ಕಂಡಕ್ಟರ್ ಮುಖ ಹೊರಹಾಕಿ “ಡೈರೆಕ್ಟ ಕುಮ್ಟಾ, ಹೊನ್ನಾವರ್, ಭಟ್ಕಳ್ ಯರ‍್ರಿ” ಎಂದು ಕೂಗುತ್ತಿದ್ದ. ಪಕ್ಕದಲ್ಲಿ ಗೊರಕೆ ಹೊಡಿಯುತ್ತ ಮಲಗಿದ್ದ ಮಾವನನ್ನು ಅಲುಗಾಡಿಸಿ ಎಬ್ಬಿಸಿದ ಬಸವರಾಜ “ಏಳೋ ಮಾವಾ  ಊರ‍್ಬಂತು” ಸೀಟಿನ ಕೆಳಗಿನ ರೊಟ್ಟಿ ಚೀಲ, ಮೇಲಿಟ್ಟ ಬ್ಯಾಗುಗಳನ್ನು ತೆಗೆದುಕೊಂಡು ಇಬ್ಬರೂ ಇಳಿದರು. ಅವ್ನೌವ್ನ ಎಂಥಾ ನಿದ್ದೇಲೆ ಬಸು, ಹುಬ್ಬಳ್ಳಿ ದಾಟಿದ್ದೊಂದೇ ಗೊತ್ನೋಡೊ” ಎನ್ನುತ್ತ ಮಾಮಾ ಇಳಿದ. ಈ ಬಾರಿ ಊರಿಗೆ ಹೋದಾಗ ಅಕ್ಕನ ಗಂಡ ಮಲ್ಲಿಕಾರ್ಜುನ ತಾನೂ ಬರುವುದಾಗಿ ಬೆನ್ನು ಹತ್ತಿ ಬಂದಿದ್ದ.  ಬಸವರಾಜನ ಒಬ್ಬಳೇ ಅಕ್ಕ ನೀಲಾಂಬಿಕಾಳನ್ನು ಖಾಸಾ ಸೋದರ ಮಾವ ಮಲ್ಲಿಕಾರ್ಜುನನಿಗೆ ಕೊಟ್ಟಿದ್ದರು. ಬಸವನಬಾಗೇವಾಡಿಯ ಮಗ್ಗುಲಲ್ಲೇ ಇರುವ ನಿಡಗುಂದಿಯಲ್ಲಿ ಹೊಲ-ಮನೆ ಮಾಡಿಕೊಂಡು ಅನುಕೂಲವಾಗಿರುವ ಮಲ್ಕಾಜಿ ಮಾಮಾಗೆ ಹಿರಿಮಗಳು ಅಕ್ಕಮಹಾದೇವಿ.  ಅವಳನ್ನು ವಾಡಿಕೆಯಂತೆ, ತಮ್ಮನಿಗೇ ಕೊಡಬೇಕೆನ್ನುವ ಆಸೆ ನೀಲಕ್ಕನದು. ನೌಕರಿ ಸಿಕ್ಕಿದ್ದೇ ಮದುವೆ ಪ್ರಸ್ತಾಪ ಶುರುವಿಟ್ಟುಕೊಂಡರು. ಆದರೆ, ಅರ್ಥಶಾಸ್ತ್ರದ ಜೊತೆಗೆ ಒಂದಿಷ್ಟು ಸಾಹಿತ್ಯ, ವೈಚಾರಿಕತೆ ಅಂತೆಲ್ಲಾ ಓದುತ್ತ ಬೆಳೆದು ಇದೀಗ ನೌಕರಿಗೆ ಸೇರಿಕೊಂಡ ಬಸವರಾಜ ಉಳ್ಳಾಗಡ್ಡಿಗೆ ಅಕ್ಕನ ಮಗಳನ್ನು ಮದುವೆಯಾಗಲು ಎಳ್ಳಷ್ಟೂ ಮನಸ್ಸಿಲ್ಲದೇ ಒಲ್ಲೆನೆಂದು ಜಗಳ ತೆಗೆದಿದ್ದ. ಮೊದಲೇ ಈ ದೂರದ ಮಲೆನಾಡಿನ ಊರುಗಳನ್ನು ಸರಿಯಾಗಿ ನೋಡಿರದ ಬಾಗೇವಾಡಿಯ ಜನರಿಗೆ ಆತಂಕ ಶುರುವಾಗಿತ್ತು. ತಮ್ಮ ಬಸೂನನ್ನು ಅಲ್ಲಿ ಯಾರಾದರೂ ಬುಟ್ಟಿಗೆ ಹಾಕಿಕೊಂಡಿರುವರೇ, ಹೇಗೆಂದು  ತನಿಖೆ ಮಾಡುವ ಸಲುವಾಗಿ ಬಸೂನ ತಾಯಿ ಗೌರವ್ವ ತಮ್ಮನನ್ನು ಕಳಿಸಿದ್ದಳು. ಆಗಾಗ ಅಲ್ಲಿ-ಇಲ್ಲಿ ಊರು ನೋಡಿ ಬರುವ ಚಟವಿದ್ದ ಮಲ್ಕಾಜಿ ಮಾವ ತನ್ನ ಜೊತೆ ಬರುತ್ತೇನೆಂದಾಗ ಕಾರಣ ಗೊತ್ತಿರದ ಬಸೂ ಸಹಜವೇ ಇರಬೇಕೆಂದುಕೊಂಡು ಒಪ್ಪಿ ಕರೆತಂದಿದ್ದ. ಎರಡು ದಿನದ ರಜೆಗೆ ಊರಿಗೆ ಹೋಗಿದ್ದ ರಾಮಚಂದ್ರನಾಯ್ಕ ಮರುದಿನ ಬರುವವನಿದ್ದ ಕಾರಣ ರೂಮಿಗೆ ಬೀಗ ಹಾಕಿತ್ತು.  ಮೆಟ್ಟಿಲಮೇಲೆ ಕುಳಿತು ಪಕ್ಕದ ಮನೆ ಹೆಂಗಸಿನ ಜೊತೆ ಹರಟುತ್ತಿದ್ದ ಸಂಧ್ಯಾ,“ಏನು ಉಳ್ಳಾಗಡ್ಡಿ ರ‍್ರು, ಯಾರೋ ನೆಂಟ್ರಿಗೆ ಕಕ್ಕೊಂಬಂದಾರಲ್ಲ”ಎಂದಳು. “ಹೌದ್ರಿ ಅಕ್ಕಾರೆ, ಇವ್ರು ನಮ್ಮ ಮಾಮರ‍್ರಿ” ಎಂದ. “ಇನ್ ನಾಳೆ ಬೆಳಿಗ್ಗೇನೆ ನೀರು ಮ್ಯಾಲೇರ‍್ಸೋದು. ಹನಿ ಸಣ್ಣಕೆ ಬಿಟ್ಕಳ್ರಿ ಹಂ” ಎಂದಳು.  “ಯಕ್ಲೆ ಬಸ್ಯಾ ಈ ಊರಾಗೂ ನೀರಿನ ತ್ರಾಸೈತಿ” ಎಂದು ಭಯಂಕರ ಆಶ್ಚರ್ಯದಿಂದ ಕೇಳಿದ ಮಾವನಿಗೆ “ಇಲ್ಲೋ ಮಾರಾಯ ಈ ಮಾಲಕರು ಕೆಟ್ಟ ಜುಗ್ಗ ಅದಾರ. ದಿನಕ್ಕೊಮ್ಮೆ ಮುಂಜಾನೆ ನಳ ಬಿಟ್ಟಾಗ ನೀರು ಏರ‍್ಸತಾರ. ಕರೆಂಟು ಉಳ್ಸಾಕಂತ ಲೈಟು ರ‍್ಸಿ, ಅಂಗಳದಾಗ ಕೂಡೊ ಮಂದಿ ಐತಿ ಬಾ ಇಲ್ಲೆ” ಎಂದು ನಕ್ಕ.             ಅವ್ವ ಮಾಡಿಕೊಟ್ಟ ಮಾಡ್ಲಿ ಉಂಡಿ, ಚಕ್ಕುಲಿಗಳನ್ನು ಸಂಧ್ಯಾಗೆ ಕೊಡಲೆಂದು ಕೆಳಗೆ ಹೋದ.  “ಇದೇನು ರೇತಿ ಕಂಡಾಂಗೆ ಕಾಣ್ತದಲ್ಲ” ಎಂದು ಆಶ್ಚರ್ಯಪಟ್ಟಳು. ಹ್ಹೆ ಹ್ಹೆ ಹ್ಹೆ ಎಂದು ನಕ್ಕು ಮೇಲೆ ಬಂದ.  ರಾಮಚಂದ್ರನ ಫೋನು ಬಂದಾಗ ರೇತಿ ಎಂದರೇನೆಂದು ಕೇಳಿದ. ಅವನು ‘ಮರಳು’ ಅಂದಾಗಲೇ ಅರ್ಥವಾಗಿ ನಗು ಬಂದಿತು. ಮಾವನಿಗೆ ಊರು ತೋರಿಸಲು ಕರಕೊಂಡು ಹೊಂಟ.  ಅವರ ಮನೆಯಿದ್ದ ಅಯ್ಯಪ್ಪ ನಗರದಿಂದ ನಡೆಯುತ್ತ ಕೋಟೆಕರೆಗೆ ಬಂದರು. ಕೆರೆ ಏರಿ ಮೇಲೆ ನಡೆಯುತ್ತ ಹೊರಟಾಗ ಒಂದಿಬ್ಬರು ಹುಡುಗರು ಬಸವರಾಜನಿಗೆ “ನಮಸ್ಕಾರ ಸರ್, ವಾಂಕಿಗು?” ಎಂದು ಮಾತಾಡಿಸಿದರು. “ನಮ್ಮ ಮಾಮಾಗೆ ಊರು ತೋರಿಸ್ಬೇಕು’’ ಎಂದ. ಹಾಗಿದ್ರೆ ಮಾರಿಗುಡಿಗೆ ಹೊಗೋದು ಚೊಲೊ. ಈ ಬದಿಗೆ ಗಣಪತಿ ದೇವಸ್ಥಾನ ಮತ್ತೆಂತ ಉಂಟು ಈ ಊರಲ್ಲಿ.  ಆ ಹುಡುಗರಿಗೆ ತಮ್ಮ ಊರು ಎಂದರೆ, ಮಹಾಬೋರು. ಎರಡು ದೇವಸ್ಥಾನ-ಕೆರೆ ಇರುವ ಈ ಊರಲ್ಲಿ ಎಂತಾ ನೋಡ್ತಾರೆ ಅಂತ ಆಶ್ಚರ್ಯಪಟ್ಟರು. ಬನವಾಸಿಗೆ, ಜೋಗಕ್ಕೆ ಆಥ್ವಾ ಸಹಸ್ರಲಿಂಗಕ್ಕೆ ಹೋಗ್ಬಹುದು ಸರ್ ಎಂದ ಒಬ್ಬ. ಆಯ್ತು ಎಂದು ತಲೆಯಾಡಿಸುತ್ತ ಹೊರಟರು. “ಇವ್ರು ಹ್ಯಾಂಗ್ ಮಾತಾಡ್ತರ‍್ಲೆ, ಮಾಸ್ತರು ಅಂತ ಕಿಮ್ಮತ್ತಿಲ್ಲೇನಲ್ಲೆ? ರಿ ಹಚ್ಚಂಗಿಲ್ಲಲ್ಲ?” ಸಿಟ್ಟಿನಿಂದ ಕೇಳಿದ ಮಾವನಿಗೆ, “ನಂಗೂ ಹೀಗ ಅಗಿತ್ತಪ್ಪ ಶುರುವಿಗೆ. ಆಮೇಲೆ ಗೊತ್ತಾಯ್ತು.  ಇಲ್ಲಿ ಮಂದಿ ಕನ್ನಡ ಬ್ಯಾರೇನೇ ಐತಿ. ಯಾರಿಗೂ ರಿ ಹಚ್ಚಂಗಿಲ್ಲ. “ವಿಚಿತ್ರ ಊರು ಬಿಡಪ” ಎಂದು ಮಲ್ಕಾಜಿ ಪಾನಂಗಡಿ ಕಡೆ ನಡೆದು ಸಿಗರೇಟು ಹಚ್ಚಿಕೊಂಡ. ಬಾಳೆಹಣ್ಣು ಕೊಂಡ ಬಸೂ ಸಿಪ್ಪೆ ಸುಲಿದು ತಿನ್ನತೊಡಗಿದ.  “ಅರೆ ಸರ್, ನೀವು ಊರಿಂದ ಯಾವಾಗ ಬಂದ್ರಿ?” ಧ್ವನಿ ಕೇಳಿ ತಿರುಗಿದರೆ, ಫ್ಯೆನಲ್ ಬಿ.ಎ. ಹುಡುಗಿ ವರದಾ. ಇಡೀ ಕಾಲೇಜಿನಲ್ಲೇ ಹೆಚ್ಚು ಮಾತಾಡುವ ಐದೂ ಕಾಲಡಿ ಎತ್ತರದ ಕಟ್ಟುಮಸ್ತಾದ ಹುಡುಗಿ. ಆಟ-ಭಾಷಣ-ರಂಗೋಲಿ-ಡ್ಯಾನ್ಸು ಎಲ್ಲಾ ಸ್ಫರ್ಧೆಗಳಲ್ಲೂ ಬಹುಮಾನ ಗಳಿಸುತ್ತ ಉಪನ್ಯಾಸಕರ ಮುಖ ಕಂಡಾಗಲೊಮ್ಮೆ “ಇಂಟರ‍್ನಲ್ಸಗೆ ಇಪ್ಪತ್ತಕ್ಕೆ ಇಪ್ಪತ್ತು ಕೊಡ್ಬೇಕು ಹಂ ಈ ಸಲ ನಾವು ಫ್ಯೆನಲ್ ಇಯರ್. ಜೀವನದ ಪ್ರಶ್ನೆ ಮತ್ತೆ” ಎಂದು ತಾಕೀತು ಮಾಡುತ್ತ ತಿರುಗುತ್ತಿದ್ದಳು. ಹಾಂಗಂತ ಅಭ್ಯಾಸದಲ್ಲಿ ಅವಳು ತೀರಾ ಸಾಧಾರಣವಾದ ಅಂಕ ಪಡೆಯುವ ಹುಡುಗಿ. ಅವಳ ಭಯಕ್ಕೆ ಉಪನ್ಯಾಸಕರು ಅಂಕ ಕೊಡಬೇಕಾಗಿತ್ತು. ತೀರಾ ಕಟ್ಟುನಿಟ್ಟಿನ ಕಾಮತ್

ನಡಿ ಕುಂಬಳವೇ ಟರಾ ಪುರಾ Read Post »

ಕಥಾಗುಚ್ಛ

ಉದಾಹರಣೆ

ಕಥೆ ಮಧುರಾ ಕರ್ಣಮ್ ಎಲ್ಲ ಸರಿ ಇದ್ದವರು ಸುಮ್ಮನಿರಲಾಗದೇ ಮೈಮೇಲೆ ಇರುವೆ ಬಿಟ್ಕೊಂಡು ತುರಸ್ಕೋತಾರಂತೆ. ಹಾಗಾಗಿದೆ ನನ್ನ ಕತೆ. ನೀವು ಹೇಳಿದ್ರೆ ನಂಬ್ತೀರೋ ಇಲ್ಲವೋ, ಜನಕ್ಕೆ ನೂರೆಂಟು ತಾಪತ್ರಯಗಳು. ವೃದ್ಧರಿಗಂತೂ ಸಾವಿರದೆಂಟಂದ್ರೂ ಪರವಾಗಿಲ್ಲ. ಅಪರೂಪಕ್ಕೆ ನನಗೆ ತೊಂದರೆಗಳೇ ಇಲ್ಲದಂತಿದ್ದೆ. ‘ತೊಂದರೆಗಳು ನಾವು ನೋಡುವ ದೃಷ್ಟಿಯಲ್ಲಿರುತ್ತವೆ ಬಿಡಿ. ಆದ್ರೂನೂ ನನಗೆ ಒಂದೇ ಒಂದು ಕೊರತೆ ಅನಿಸಿದ್ದು ನನ್ನ ಪತ್ನಿ ಜಾನ್ಹವಿ, ಜಾನೂ ಇಲ್ಲದ್ದು. ಕೈಹಿಡಿದವಳು ಕೈಬಿಟ್ಟು ನಡೆದು ಆಗಲೇ ಹತ್ತು ವರ್ಷಗಳಾಗಿದ್ದವು. ಅದನ್ನು ಬಿಟ್ಟರೆ ಮೂರು ಜನ ಮಕ್ಕಳು ತಮ್ಮ ಪತ್ನಿಯರು, ಮಕ್ಕಳೊಂದಿಗೆ ಆರಾಮವಾಗಿದ್ದಾರೆ. ಮುವರೂ ಸಾಫ್ಟವೇರೇ. ಹಿರಿಯವ ಮುಕುಲ್ ಕಂಪನಿಯೊಂದರಲ್ಲಿ ಎ.ವಿ.ಪಿ. ಆಗಿದ್ದಾನೆ. ಎರಡನೆಯವ ನಕುಲ್ ಸಾಫ್ಟವೇರ್ ಜೊತೇನೆ ಅಮೆರಿಕಾ ಸೇರಿದ್ದಾನೆ. ಕೊನೆಯವ ಬಕುಲ್ ಮುಂಬಯಿ ಸೇರಿಕೊಂಡಿದ್ದಾನೆ. ಸೊಸೆಯಂದಿರು ಮೂವರು ಚಿಕ್ಕ ಪುಟ್ಟ ಭಿನ್ನಾಭಿಪ್ರಾಯಗಳನ್ನು ಬಿಟ್ಟರೆ ಒಳ್ಳೆಯವರೇ. ನನ್ನ ತಂಟೆಗೇನೂ ಬರುವದಿಲ್ಲ. ನಾನು ಎಂದಿಗೂ ಅವರು ಧರಿಸುವ ಬಟ್ಟೆ, ಮಾಡುವ ಖರ್ಚು ಶಾಪಿಂಗ್ಗಳ ಉಸಾಬರಿ ಮಾಡುವದಿಲ್ಲ.             ಎಲ್ಲೋ ಹುಟ್ಟಿ ಎಲ್ಲೋ ಹರಿದು ಎಲ್ಲೋ ಸೇರುವಂತೆ, ಧಾರವಾಡದಲ್ಲಿ ಹುಟ್ಟಿ ಬೆಳೆದು ಕರ್ನಾಟಕ ಕಾಲೇಜಿಗೆ ಮಣ್ಣು ಹೊತ್ತು ಪೋಸ್ಟಲ್ ಡಿಪಾರ್ಟಮೆಂಟಿಗೆ ಸೇರಿದ್ದೆ. ಮಕ್ಕಳ ಓದಿಗೆಂದು ಪುಣೆಗೆ ಬಂದವರು ಅಲ್ಲೇ ನೆಲೆ ನಿಂತೆವು. ಜೀವನವೂ ನಿಧಾನವಾಗಿ ಪುಣೇರಿ ಧಾಟಿಯಲ್ಲೇ ಬದಲಾಗತೊಡಗಿತ್ತು. ಅವಶ್ಯಕ ವಿಷಯಗಳ ಬಗ್ಗೆ ಮಾತ್ರ ಮಾತು, ಚರ್ಚೆ ಇತ್ಯಾದಿ. ಮಕ್ಕಳು ತಮ್ಮ ಆಸಕ್ತಿಯ ಕ್ಷೇತ್ರ ಆರಿಸಿಕೊಂಡರು. ಹಾಗೇ ಪತ್ನಿಯರನ್ನೂ. ಒಂದು ರೀತಿಯಲ್ಲಿ ಒಳ್ಳೆಯದೇ ಆಯಿತೆಂದಳು ಜಾನ್ಹವಿ. ಯಾವಾಗಲೋ ಒಮ್ಮೆ ಹೋಗಿ ಬರುತ್ತಿದ್ದ ಧಾರವಾಡದ ನಂಟು ಪೂರ್ತಾ ಕಡಿಮೆಯಾಯಿತು.             ಲಕ್ಷ್ಮಿ ರೋಡಿನ ಈ ಚಾಳದಲ್ಲಿ ನಲವತ್ತು ವರ್ಷಗಳ ಹಿಂದೆ ನಾವು ಹೊಸದಾಗಿ ಬಂದಾಗ ವಾಸಿಸಲಾರಂಭಿಸಿದ ಮನೆಯಲ್ಲೇ ಇಂದಿಗೂ ನಮ್ಮ ವಾಸ. ಹಳೆಯ ಮನೆಗಳು. ಅರವತ್ತು ರೂಪಾಯಿಗಳ ಬಾಡಿಗೆ. ಆಗಲೋ ಈಗಲೋ ಎನ್ನುವಂತಿದ್ದರೂ ಇನ್ನೂ ಏನೂ ಆಗಿಲ್ಲ. ನನ್ನ ಹಣೆಬರಹದಂತೆ ಗಟ್ಟಿಮುಟ್ಟಾಗಿವೆ. ಹಿಂದೆಯೇ ತುಳಸಿ ಬಾಗ. ಪುಣೆಯ ಖ್ಯಾತ ಮಾರುಕಟ್ಟೆ. ಅಲ್ಲಿ ಸದಾ ಸಂತೆಯೇ. ರಾತ್ರಿ ಹನ್ನೊಂದು ಗಂಟೆಯಲ್ಲೂ ಬೇಕಾದ್ದು ಸಿಗುತ್ತಿತ್ತು. ಆದರೆ ವ್ಯಾಪಾರಿಗಳ ಗಲಾಟೆ, ಚಿಕ್ಕ ಚಿಕ್ಕ ಖೋಲಿಗಳ ಮನೆ ಮಕ್ಕಳು ದೊಡ್ಡವರಾದಂತೆ ಅವರಿಗೆ ಹಿಡಿಸಲಿಲ್ಲ. ಮುಕುಲ್ ‘ಸಾರ್ಗೇಟ್’ನಲ್ಲಿ ದೊಡ್ಡ ಮನೆ ಮಾಡಿದ. ನಮ್ಮನ್ನೂ ಅಲ್ಲಿಗೇ ಕರೆದ. ಯಾಕೋ ಚಾಳ ಬಿಟ್ಟು ಹೋಗಲು ಮನಸ್ಸೊಪ್ಪಲಿಲ್ಲ. ಆದರೆ ಮೂರೂ ಮಕ್ಕಳ ಮದುವೆ, ಹೆಂಡಿರ ಸೀಮಂತ, ಮೊಮ್ಮಕ್ಕಳ ಜಾವಳ ಇತ್ಯಾದಿಗಳು ಈ ಗುಬ್ಬಿಗೂಡಿನಲ್ಲೇ ನಡೆದವು. ನಕುಲ್ ಹೆಂಡತಿಯೊಂದಿಗೆ ಅಮೆರಿಕಾ ಸೇರಿದವ ಆಗಾಗ್ಗೆ ಬಂದು ಹೋಗುತ್ತಾನೆ. ಬಕುಲ್ ಮುಂಬೈನಲ್ಲೇ ಓನರ್ಶಿಪ್ ಮೇಲೆ ಫ್ಲಾಟ್ ಕೊಂಡು ಆರಾಮವಾಗಿದ್ದಾನೆ.             ಮೊಮ್ಮಕ್ಕಳನ್ನು ಕಂಡ ಕೆಲವೇ ದಿನಗಳಲ್ಲಿ ಜಾನು ಹೋಗಿಬಿಟ್ಟಳು. ಕುಳಿತವಳು ಎದ್ದು ಹೋದಂತೆ. ಒಂದು ದಿನವೂ ಮಲಗಲಿಲ್ಲ. ‘ಎದೆನೋವು’ ಎಂದವಳು ನನ್ನ ಕೊಂಡಿಯಿಂದ ಕಳಚಿಕೊಂಡುಬಿಟ್ಟಳು. ಆಗಿನಿಂದಲೇ ನಾನು ಒಬ್ಬಂಟಿ. ಹತ್ತು ವರ್ಷಗಳು ಯಾಂತ್ರಿಕವಾಗಿ ಸಾಗಿದ್ದವು. ಶುಗರ್, ಬಿ.ಪಿ. ಇದ್ದರೂ ತೊಂದರೆ ಕೊಡಲಿಲ್ಲ. ನಿತ್ಯ ಒಂದು ಡಯಾನಿಲ್, ಒಂದು ಲೋಸಾರ್ ನುಂಗಿದರಾಯಿತು. ಹೀಗಾಗಿ ಚಾಳಿನ ಮನೆಯನ್ನೇನೂ ಬಿಟ್ಟಿರಲಿಲ್ಲ. ನಿತ್ಯ ಸಾರ್ಗೇಟ್ನಲ್ಲಿರುವ ಮಗನ ಮನೆಗೆ ವಾಕಿಂಗ್ ಮಾಡುತ್ತಾ ಹೋಗಿ ತಿಂಡಿ, ಊಟ ಮುಗಿಸಿ ಒಂದಿಷ್ಟು ಓಡಾಡಿ, ನಿವೃತ್ತರೊಂದಿಗೆ ಕಾಲ ಕಳೆದು, ದೇವಸ್ಥಾನ, ಲೈಬ್ರರಿಗಳಿಗೆ ಭೇಟಿ ನೀಡಿ ರಾತ್ರಿ ಊಟ ಮುಗಿಸಿಯೇ ಮನೆ ಸೇರುವದಿತ್ತು. ಮನೆ ಕೀಲಿ ಹಾಕಿಕೊಂಡು ಮುಂಬೈಗೆ ಹೋದರೆ ಮೂರು ತಿಂಗಳು ಪುಣೆಯತ್ತ ಹೊರಳುತ್ತಿರಲಿಲ್ಲ. ನಕುಲ್ ಎರಡು ಬಾರಿ ಅಮೆರಿಕೆಗೆ ಕರೆಸಿಕೊಂಡಿದ್ದ. ನಯಾಗರ ನೋಡಿಕೊಂಡು ಬಂದಿದ್ದೆ. ಪಾಪ, ಜಾನು ಏನೂ ನೋಡಲಿಲ್ಲ. ಅವಳ ಜೀವನವೆಲ್ಲ ಕತ್ತೆಯಂತೆ ದುಡಿದು ಗಂಡ, ಮಕ್ಕಳಿಗೆ ಚಪಾತಿ, ಪಲ್ಯದ ಡಬ್ಬಿ ಕಟ್ಟಿದ್ದೇ ಬಂತು. ಮಕ್ಕಳ ಶ್ರೀಮಂತಿಕೆ, ಕಾರುಗಳು, ಚಿನ್ನ ಏನೂ ಕಾಣಲಿಲ್ಲ. ಅವಳಿಗೊಂದೆರೆಡು ಒಡವೆ  ಕೂಡ ಕೊಡಿಸಲಾಗಲಿಲ್ಲ. ಹೇಗೆ ಕೊಡಿಸುತ್ತಿದ್ದೆ? ಮೂರು ಮಕ್ಕಳ ಶಿಕ್ಷಣ, ಪುಣೆಯಲ್ಲಿ ಜೀವನ ಎಂದರೆ ಹುಡುಗಾಟವೇ? ಹಾಸಿದರೆ ಹೊದೆಯಲಿಲ್ಲ, ಹೊದ್ದರೆ ಹಾಸಲಿಲ್ಲ ಎಂಬಂಥ ಪರಿಸ್ಥಿತಿ. ಹೊಂದಾಣಿಕೆ ಮಾಡಿಕೊಳ್ಳುತ್ತಲೇ ನಮಗಾಗಿ ಬದುಕು ಕಳೆದುಬಿಟ್ಟಳು. ಏನೇ ಆದರೂ ನಾವಿಬ್ಬರೂ ಸಂಕಷ್ಟಿಯಂದು ‘ಪರ್ವತಿ’ಯಲ್ಲಿದ್ದ ಗಣಪತಿಯ ದರ್ಶನ ತಪ್ಪಿಸುತ್ತಿರಲಿಲ್ಲ. ಇಬ್ಬರೂ ಸೇರಿ ದರ್ಶನ ಮಾಡಿಕೊಂಡು ಎದುರಿನ ಹೊಟೆಲ್ನಲ್ಲಿ ಸಂಕಷ್ಟಿಯ ಸ್ಪೆಶಲ್ ಸಾಬೂದಾಣೆಯ ವಡೆ, ಬಟಾಟೆಯ ಹಪ್ಪಳ ತಿಂದು ಬರುತ್ತಿದ್ದೆವು. ಈಗ ಯಾಂತ್ರಿಕವಾಗಿ ಒಬ್ಬನೇ ಹೋಗುತ್ತೆನೆ.             ಆ ಬಾರಿ ಅಂಗಾರಕ ಸಂಕಷ್ಟಿ ಬೇರೆ. ಪರ್ವತಿಯಲ್ಲಿ ಗಣಪತಿಯ ದರ್ಶನಕ್ಕೆ ಉದ್ದಾನುದ್ದ ಸಾಲು. ಸರತಿಯ ಸಾಲಿನಲ್ಲಿ ಯಾವುದೋ ಪರಿಚಿತ ಮುಖ ಕಂಡಂತಾಯಿತು. ನನ್ನಿಂದ ಅನತಿ ದೂರದಲ್ಲೇ. ತಲೆ ಕೆರೆದುಕೊಂಡು ಯೋಚಿಸಿದಾಗ ಚಿತ್ತಭಿತ್ತಿಯಲ್ಲಿ ಮೀನಾ ಕಂಡುಬಂದಳು. ಹೌದು, ಅವಳೇ ನನ್ನ ತಂಗಿ ಸುರೇಖಾಳ ಗೆಳತಿ ಮೀನಾ. ಸುರೇಖಾ ಮತ್ತು ಮೀನಾ ಆಟ್ರ್ಸ ತೆಗೆದುಕೊಂಡು ಧಾರವಾಡದ ಜೆ.ಎಸ್.ಎಸ್. ಕಾಲೇಜಿಗೆ ಹೋಗುತ್ತಿದ್ದರು. ಆಗ ನನ್ನದೂ ಹದಿ..ಹದಿ..ಹರಯ. ಅವಳ ಜಿಂಕೆಗಂಗಳ ಮೋಡಿಗೆ ಸಿಲುಕಿದ್ದೆ. ತೊಡುತ್ತಿದ್ದ ಲಂಗ, ದಾವಣಿ, ಸೀರೆ ಅವಳ ಮೈಮಾಟಕ್ಕೊಪ್ಪುತ್ತಿದ್ದವು. ಮಾತನಾಡಿಸಬೇಕೆಂಬ ಬಯಕೆ ತೀವ್ರವಾಗಿತ್ತು. ಆದರೆ ಅಪ್ಪನ ಹೆದರಿಕೆ. ಅಲ್ಲದೇ ಸುರೇಖಾ ಸದಾ ಅವಳ ಜೊತೆಯಲ್ಲೇ ಇರುತ್ತಿದ್ದಳು. ಕೊನೆಗೆ ಧಾರವಾಡ ರೆಸ್ಟೋರೆಂಟ್ ಪಕ್ಕ ಅವಳು ಟೈಪಿಂಗ್ ಕ್ಲಾಸಿಗೆ ಹೋಗುವದನ್ನು ತಿಳಿದುಕೊಂಡು ಅಲ್ಲೇ ಹೋಗಿ ಮಾತನಾಡಿಸಿದೆ. ಬಹುಶ: ಅವಳಿಗೂ ನನ್ನ ಮೇಲೆ ಆಕರ್ಷಣೆ ಇತ್ತು. ಹೀಗಾಗಿ ಹೆದರದೇ ಮುಗುಳ್ನಗುತ್ತ ಮಾತನಾಡಿದಳು. ಇಬ್ಬರೂ ಮೊದಲೇ ನಿಶ್ಚಯಿಸಿಕೊಂಡು ಒಮ್ಮೆ ನುಗ್ಗೀಕೇರಿಗೆ ಹೋಗಿದ್ದೆವು. ಹನುಮಪ್ಪನ ದರ್ಶನ ಪಡೆದು ಮುಂದೆ ಮರದ ನೆರಳಿನಲ್ಲಿ ಕುಳಿತು ಪ್ರೇಮ ನಿವೇದನೆ ಮಾಡುತ್ತಾ ಅವಳ ಮುಂಗೈಯನ್ನು ತುಟಿಗೊತ್ತಿಕೊಂಡಿದ್ದೆ. ರೋಮಾಂಚನವಾಗಿತ್ತು. ತಕ್ಷಣ ಅವಳು ನಾಚಿಕೊಂಡು ಕೈ ಕೊಸರಿಕೊಂಡು ಓಡಿಹೋಗಿದ್ದಳು. ಮಾತಿಗೆ ನಿಲುಕದ ಸುಖ. ಜನ್ಮಪೂರ್ತಾ ಮರೆಯಲಾಗಿರಲಿಲ್ಲ.             ಮುಂದೆ ನಾನು ಅಂಚೆ ಇಲಾಖೆ ಸೇರುತ್ತಿದ್ದಂತೆ ಸುರೇಖಾಳ ಮದುವೆಯಾಗಿತ್ತು. ಅವಳ ಮದುವೆಯಲ್ಲಿ ನಮ್ಮಿಬ್ಬರ ಓಡಾಟ ಕಂಡು ಕೆಲವರ ಕಣ್ಣು ಕೆಂಪಾಗಿದ್ದವು. ಮದುವೆ ಗಲಾಟೆ ಮುಗಿಯುತ್ತಿದ್ದಂತೆ ಅಪ್ಪ ಗುಡುಗಿದ್ದರು. ಅವರದು ಬ್ಯಾರೇ ಜಾತಿ. ನಿನಗ ಹುಡುಗಿನ್ನ ನಾವು ನೋಡೇವಿ ಎಂದಿದ್ದರು. ಅತ್ತ ಮೀನಳ ಮನೆಯಲ್ಲೂ ವಾಸನೆ ಬಡಿದಿತ್ತು. ವಾರದೊಳಗೇ ಅವಳ ಮದುವೆ ಗೊತ್ತಾಗಿತ್ತು. ನನಗೊಂದು ಭೇಟಿಗೂ ಅವಕಾಶವಾಗದಂತೆ ಮದುವೆ ಮುಗಿದು ಹೋಯಿತು. ರಾತ್ರಿ ಹೊದಿಕೆಯ ಒಳಗೇ ದು:ಖಿಸಿದ್ದೆ. ಮುಂದೆ ಜಾನು ನನ್ನ ಕೈಹಿಡಿದಳು. ಎಲ್ಲ ತೆರೆಯ ಮೇಲೆ ಸರಿಯುವ ರೀಲಿನಂತೆ. ಹಾಗೇ ಇದ್ದಾಳೆ. ಹೆಚ್ಚೇನೂ ಬದಲಾಗಿಲ್ಲ. ಮುಖದ ಮೇಲಿನೊಂದೆರಡು ಸುಕ್ಕುಗಳು, ಕಣ್ಣಸುತ್ತ ಕಪ್ಪು ವರ್ತುಲ , ನೋವಿನ ಗೆರೆಗಳನ್ನು ಬಿಟ್ಟು.. ..             ಗಣೇಶನ ದರ್ಶನ ಮಾಡಿಕೊಂಡು ಹುಡುಕುತ್ತ ಬಂದಾಗ ದೇವಾಲಯದ ಆವರಣದಲ್ಲೇ ಅವಳು ಪ್ರಸಾದದೊಂದಿಗೆ ಕುಳಿತಿರುವದು ಕಂಡಿತು. ತಟಕ್ಕನೇ ಮುಂದೆ ನಿಂತು  ಹೆಂಗಿದ್ದೀ ಮೀನಾ? ಎಂದೆ. ಅವಳು ಕಣ್ಕಣ್ಣು ಬಿಟ್ಟು ನೋಡಿದಳು. ನನ್ನ ಅರ್ಧ ಸಪಾಟಾದ ತಲೆ ಗುರುತು ಸಿಗಲು ತೊಡಕಾಗಿತ್ತು. ನಂತರ ಪ್ರ..ಕಾ..ಶ ? ಎಂದಳು ಪ್ರಶ್ನಾರ್ಥಕವಾಗಿ. ಹೌದು ಎನ್ನುತ್ತ ಕತ್ತಾಡಿಸಿದೆ. ನೀ ಹೆಂಗೋ ಇಲ್ಲೇ? ಎಂದಳು. ಅಲ್ಲೆ ಹೋಗೋಣ ಎಂದು ಕೊಂಚ ದೂರದ ಪಾರ್ಕ್ ಗೆ ಹೋಗಿ ಕುಳಿತೆವು. ನಾನು ನನ್ನ ಪ್ರವರವನ್ನೆಲ್ಲಾ ಹೇಳಿದೆ. ಕೇಳಿಸಿಕೊಂಡು ತನ್ನದನ್ನೂ ಹೇಳಿದಳು. ಹೇಳ್ಲಿಕ್ಕೆ ಭಾಳೇನಿಲ್ಲೋ ಪ್ರಕಾಶ. ಅವರದು ಸರ್ಕಾರಿ ಆಫೀಸಿನ್ಯಾಗ ಸ್ಟೆನೋ ಕೆಲಸಿತ್ತು. ಎರಡು ಮಕ್ಕಳು. ಮಗಳು ಮದಿವ್ಯಾಗಿ ‘ನಾಸಿಕ’ನ್ಯಾಗಿದ್ದಾಳ. ಮಗ ಭಾಸ್ಕರ ಪುಣೇದಾಗ ಬ್ಯಾರೇ ಮನಿ ಮಾಡಿಕೊಂಡು ಹೆಂಡ್ತಿ ಜೋಡಿ ಇದ್ದಾನ. ಅವರು ಹೋಗಿ ಹತ್ತು ವರ್ಷಾತು. ನಾ ಒಬ್ಬಾಕಿನ ಸಾರ್ಗೇಟ್ ಕಡೆ ಖೋಲಿ ಬಾಡಿಗಿಗೆ ತೊಗೊಂಡಿದ್ದೇನಿ. ಎಂದು ಮೌನವಾದಳು .             ಅಂದು ಮನೆಗೆ ಹಿಂತಿರುಗಿ ಬಂದರೂ ಮೀನಳ ಗುಂಗು ಆವರಿಸಿತ್ತು. ನಾವಿಬ್ಬರೂ ಸಮದು:ಖಿಗಳಿದ್ದಂತೆ. ಹೆಚ್ಚು ಕಡಿಮೆ ಜಾನು ಹೋದಾಗಲೇ ಅವಳ ಗಂಡನೂ ಹೋಗಿದ್ದು. ಅವಳದೂ ಒಂಟಿ ಜೀವ. ರಾತ್ರಿಯೆಲ್ಲ ಏಕೋ ಧಾರವಾಡದ ನುಗ್ಗಿಕೇರಿಯ ನಮ್ಮ ಭೇಟಿಯ ನೆನಪು ಮೂಡಿ ಬಂದಿತ್ತು. ಮುಂದಿನ ದಿನಗಳಲ್ಲಿ ನಾನು ಅನೇಕ ಬಾರಿ ಸಾರ್ಗೇಟ್ನ ಅವಳ ಮನೆಗೆ ಭೇಟಿ ಇತ್ತಿದ್ದೆ. ಅವಳೂ ನನ್ನ ಮನೆಗೆ ಬಂದು ಹೋಗಿದ್ದಳು. ಹಾಗೇ ನಮ್ಮ ಒಡನಾಟ ಬೆಳೆದು ವಾರಕ್ಕೆ ಎರಡು ಮೂರು ಬಾರಿಯಾದರೂ ನಾವು ಭೇಟಿಯಾಗುವಂತಾಯಿತು. ಹೆದರಿಸಲು ಇಲ್ಲೇನು ಅಪ್ಪನ ಕಣ್ಣುಗಳಿರಲಿಲ್ಲ. ಅಮ್ಮನ ನೊಂದ ಮುಖವಿರಲಿಲ್ಲ.             ಈ ಮನಸ್ಸಿನ ಕಥೆಯನ್ನೇ ನಾನು ಹೇಳಿದ್ದು. ಎಷ್ಟು ವಿಚಿತ್ರ ನೋಡಿ. ಹೆಂಡತಿ ಎಂಬ ಚೌಕಟ್ಟಿದ್ದರೆ ಒಳಗೇ ಹರಿದಾಡಿಕೊಂಡಿರುತ್ತದೆ. ಇಲ್ಲವಾದರೆ ಎಲ್ಲೆಲ್ಲೋ ನುಗ್ಗಿ ಒಡ್ಡು ಮೀರಿ ಹರಿಯುತ್ತ.. ..ಮೊರೆಯುತ್ತದೆ. ನನಗೀಗ ಅರವತ್ತೆರಡು ವರ್ಷಗಳು. ಇತ್ತೀಚೆಗೆ ನನಗೆ ‘ಮೀನಳನ್ನೇಕೆ ಮದುವೆಯಾಗಬಾರದು?’ ಎನಿಸಿತ್ತು. ಅಂದು ಅಪ್ಪನ ಹೆದರಿಕೆಯಿಂದ ನಿಂತು ಹೋದ ಪ್ರೀತಿ ಮತ್ತೆ ಮುಂದುವರೆಯಬಹುದಲ್ಲ. ನನ್ನ ಮಕ್ಕಳಂತೂ ಬೇಡವೆನ್ನಲಿಕ್ಕಿಲ್ಲ. ‘ಫಾರ್ವರ್ಡ’ಹುಡುಗರು. ಬೇರೆ ಏನೂ ಜಂಜಡವಿಲ್ಲ. ಇಬ್ಬರೂ ಸಮದು:ಖಿಗಳು. ಜೋಡಿಯಾಗಿ ವೃದ್ಧಾಪ್ಯ ಕಳೆಯಬಹುದು. ಈ ವಯಸ್ಸಿಗೆ ಅವಶ್ಯಕವಾಗಿ ಬೇಕಾಗುವದು ‘ಸಾಂಗತ್ಯ.’ ಇಬ್ಬರೂ ಒಬ್ಬರಿಗೊಬ್ಬರು ಆಸರೆಯಾಗಿ ಹೆಜ್ಜೆ ಹಾಕಿದರೆ.. ಅನೇಕ ‘ರೇ..ಳು ಮನದಲ್ಲಿ ಸುಳಿದವು. ನುಗ್ಗೀಕೇರಿಯ ಆಲದ ಮರದಡಿಯ ಚಿತ್ರ ಮುಂದೋಡಿ ಉತ್ತುಂಗ ಸುಖ ತಂದಿಡುವಂತೆ ಭಾಸವಾಯಿತು. ವಿಷಯ ಪ್ರಸ್ತಾಪಿಸಿದಾಗ ಮೀನಳಿಗೆ ಅಚ್ಚರಿಯೇನೂ ಆಗಿರಲಿಲ್ಲ. ಬದಲಿಗೆ ನಿರೀಕ್ಷಿಸುತ್ತಿದ್ದವಳಂತೆ ಸಮ್ಮತಿಸಿದ್ದಳು. ನನಗ ಇಬ್ಬರು ಮಕ್ಕಳಿದ್ದಾರಂತ ಹೇಳಿದೆನಲ್ಲ ಪ್ರಕಾಶ. ನೀ ಬೇಕಾದರೆ ಅವರಿಬ್ಬರನ್ನೂ ಒಮ್ಮೆ ಭೆಟ್ಟಿ ಮಾಡು ಎಂದಿದ್ದಳು. ನಾನು ಹೀರೋನ ಪೋಸು ಕೊಟ್ಟು ಬೇಕಾಗಿಲ್ಲ ಮೀನಾ. ನಿನ್ನ ಮಕ್ಕಳಂದ್ರ ನನ್ನ ಮಕ್ಕಳಿದ್ದಂಗ. ನನಗಂತೂ ಹೆಣ್ಣು ಮಕ್ಕಳಿಲ್ಲ. ಹಿಂಗರೆ ಒಬ್ಬಾಕಿ ಮಗಳು ಸಿಕ್ಕಂಗಾತು. ಎಂದಿದೆ.್ದ             ನನ್ನ ಮಕ್ಕಳಿಗೆ ವಿಷಯ ತಿಳಿಸಿದಾಗ ಅಚ್ಚರಿಯಿಂದ ಹುಬ್ಬೇರಿಸಿದರು. ಸೊಸೆಯಂದಿರೂ ಆಶ್ಚರ್ಯಚಕಿತರಾದರೂ ಬದಲು ಹೇಳಲಿಲ್ಲ. ಎಲ್ಲರ ಪರವಾಗಿ ಮುಕುಲ್ ಮಾತನಾಡಿದ್ದ. ದಾದಾ, ನಿಮ್ಮ ಇಚ್ಛಾಕ್ಕ ನಾವು ಅಡ್ಡ ಬರಂಗಿಲ್ಲ. ಆದ್ರ ನಮ್ಮವ್ವನ್ನ ನಾವು ಮರೀಲಿಕ್ಕಾಗೂದಿಲ್ಲ… .. ಎಂದಿದ್ದ. ಹೌದಲ್ಲ, ಇಷ್ಟೂ ದಿನಗಳೂ ಮೀನಳ ಭೇಟಿಯಾದಾಗಿನಿಂದ ನನ್ನ ಜಾನ್ಹವಿಯ ನೆನಪೇ ಬರದಷ್ಟು ಮರೆತು ಹೋಗಿದ್ದೆ. ‘ಈ ವಯಸ್ಸಿನಲ್ಲಿ..  ಮದುವೆಯಾಗಿ.. ಜಾನ್ಹವಿಗೇನಾದರೂ ಮೋಸ ಮಾಡುತ್ತಿದ್ದೇನಾ?’ ಎಂಬ ವಿಚಾರ ಒಳಹೊಕ್ಕು ತಲೆಯೆಲ್ಲ ಚಿಟ್ಟೆಂದಿತು. ‘ಉಹ್ಞೂಂ, ನಾನು ಜಾನ್ಹವಿಗೇನೂ ಅನ್ಯಾಯ ಮಾಡುತ್ತಿಲ್ಲ. ಒಮ್ಮೆ ನಿರ್ಧರಿಸಿ ಆಗಿದೆ. ಇನ್ನು ಮುಂದುವರೆದೇ ಸೈ’ ಎಂದು ತೀರ್ಮಾನಿಸಿದೆ. ಅಕ್ಕ ಪಕ್ಕದ ಒಂದೆರೆಡು ಮನೆಯವರಿಗೆ ವಿಷಯ ತಿಳಿಸಿದೆ. ಕೆಲವರು ಕಣ್ಣರಳಿಸಿದರು. ಹಲವರು ಸಂತೋಷದಿಂದ ಕಂಗ್ರಾಚುಲೇಷನ್ಸ ಎಂದರು. ಹಿಂದೆ ಆಡಿಕೊಂಡು ನಕ್ಕವರೂ ಇದ್ದರೆನ್ನಿ. ಏನೋ ಸಂತೋಷ, ಹುರುಪು.. ಮಹಾಬಲೇಶ್ವರದಲ್ಲಿ ಒಂದು ವಾರ ಮಜವಾಗಿ ಕಳೆದು ಬಂದು ಸಂಸಾರ ಆರಂಭಿಸಬೇಕು. ಏನೇನೋ ಕನಸುಗಳು, ಕನವರಿಕೆಗಳು…             ನಿರೀಕ್ಷಿಸಿದಂತೆ ದೇವಸ್ಥಾನದಲ್ಲಿ ಹಾರ ಬದಲಾವಣೆ ಮಾಡಿಕೊಂಡು ಸರಳವಾಗೇ ಮದುವೆಯಾದೆವು. ಬಕುಲ್ ಗ್ರೀಟಿಂಗ್ಸ ಕಳಿಸಿದ್ದ. ನಕುಲ್ನಿಂದ ಶುಭಾಷಯದ ಸಂದೇಶ ಬಂದಿತ್ತು. ಮುಕುಲ್ ಒಬ್ಬನೇ ಬಂದು ಶುಭ ಹಾರೈಸಿದ. ಹೆಂಡತಿ, ಮಕ್ಕಳು ಬೇಸಿಗೆ ರಜಕ್ಕೆ ತವರಿಗೆ ಹೋಗಿದ್ದರಂತೆ. ಶಿಷ್ಟಾಚಾರದಂತೆ ನನಗೆ ಮೀನಳಿಗೆ ನಮಸ್ಕರಿಸಿ ಆಫೀಸಿಗೆ ಹೊರಟು ಹೋದ. ನಾವೇ ನವದಂಪತಿಗಳು ಪಾಂಚಾಲಿ ಹೋಟೆಲ್ನಲ್ಲಿ ಊಟ ಮಾಡಿಕೊಂಡು ಮನೆಗೆ ಬಂದೆವು. ಚಾಳದ ಕಣ್ಣುಗಳೆಲ್ಲ ಆನಂದಾಶ್ಚರ್ಯಗಳಿಂದ ನೋಡಿ ಶುಭ ಹಾರೈಸಿದರು. ಮೊದಲು ಬಂದು ಜಾನ್ಹವಿಯ ಫೋಟೋಕ್ಕೆ ಕೈ ಮುಗಿದೆ.

ಉದಾಹರಣೆ Read Post »

ಕಥಾಗುಚ್ಛ

ಬಣ್ಣದ ವೇಷ

ಕಥೆ ಪ್ರಜ್ಞಾ ಮತ್ತಿಹಳ್ಳಿ ನೀಲಕಮಲವೆಂದು ಚೆಂದನೆಯ ಸ್ಟಿಕ್ಕರ್ ಅಂಟಿಸಿಕೊಂಡು ಫಳಫಳ ಹೊಳೆಯುತ್ತಿದ್ದ ಸ್ಟೀಲು ತಾಟು ಢಮಾರ್ ಎಂಬ ದೊಡ್ಡ ಸಪ್ಪಳದೊಂದಿಗೆ ಗೋಡೆಗೆ ಮುಖ ಗುದ್ದಿಕೊಂಡು ನೆಲಕಪ್ಪಳಿಸುವುದು, ಅದೇ ಗೋಡೆಯ ಮೇಲೆ ನೇತಾಡುವ ಬಂಗಾರ ಬಣ್ಣದ ಗುಂಡು ಮೋರೆಯ ಗಡಿಯಾರ ಢಣ್ ಢಣ್ ಎಂದು ಒಂಭತ್ತು ಸಲ ಹೊಡೆದುಕೊಳ್ಳುವುದೂ ಏಕಕಾಲದಲ್ಲಿಯೇ ಘಟಿಸುವ ಮೂಲಕ ತಗ್ಗಿನಕೇರಿಯೆನ್ನುವ ಊರಿನಲ್ಲೇ ಹೆಚ್ಚು ತಗ್ಗಾಗಿರುವ ಆ ಕೇರಿಯಲ್ಲೊಂದು ಯುದ್ಧ ಘೋಷಣೆಯಾಗಿತ್ತು. ದುರವೀಳ್ಯವನ್ನು ತನ್ನ ಕುದಿಯುವ ಮನಸ್ಸಿನಲ್ಲಿಯೇ ತಯಾರಿಸಿಕೊಂಡ ನಾಗಲಕ್ಷ್ಮಿ ಹೆಡೆಯಾಡಿಸುವ ಘಟಸರ್ಪದಂತೆ ಧುಸ್ ಧುಸ್ ಉಸಿರು ಬಿಟ್ಟಳು. ಆದರೆ ರಣವೀಳ್ಯವನ್ನು ಇಸಿದುಕೊಳ್ಳಬೇಕಾಗಿದ್ದ ಆಕೆಯ ಎದುರು ಪಕ್ಷದ ಸೇನಾನಿ ಪದುಮಣ್ಣ ಅಂದರೆ ಆಕೆಯ ಗಂಡ ಆಸುಪಾಸಿನಲ್ಲೆಲ್ಲೂ ಇಲ್ಲದಿದ್ದ ಕಾರಣ ಬೋರಲು ಬಿದ್ದ ತಾಟಿನಿಂದ ಹೊರಬಿದ್ದು ಚೆಲ್ಲಾಪಿಲ್ಲಿಯಾದ ಅನ್ನದಗುಳಿನಷ್ಟೇ ಅನಾಥಳು ತಾನೆಂಬ ಭಾವ ಮೂಡಿದ್ದೇ ತಡ, ಅಳುಮಿಶ್ರಿತ ಕ್ರೋಧದ ಅಲೆಯೊಂದು ಅವಳ ನಾಭಿಯಾಳದಿಂದ ಹೊರಟು ಗಂಟಲಿನವರೆಗೆ ಬಂದಿತು. ಆಗ ಅವಳ ಧುಸ್ ಧುಸ್ ಸದ್ದು ಕೆಲವು ಬಿಕ್ಕುಗಳನ್ನು ಸೇರಿಸಿಕೊಂಡು ಹುಂ ಕ್ಕು ಕ್ಕು ಹುಂ ಕ್ಕು ಕ್ಕು ಎಂಬಂತಹ ವಿಚಿತ್ರ ಸಪ್ಪಳವಾಗಿ ಪರಿವರ್ತನೆ ಹೊಂದಿತು. ಅವಳ ಕೈಯಿಂದ ಬೀಸಿ ಒಗೆಯಲ್ಪಡುವ ಮೊದಲು ಪುಟ್ಟ ಪುಟ್ಟ ತುತ್ತುಗಳು ತುಂಬಿದ್ದ ತಾಟನ್ನು ಆವರೆಗೆ ಹೊತ್ತುಕೊಂಡಿದ್ದ ಟೀಪಾಯಿಯ ಮೇಲೆ ಕೂತಿದ್ದ ಮೊಬೈಲು ಈಗಷ್ಟೇ ಮುಗಿದ ಕರೆಯ ಸಲುವಾಗಿ ತನ್ನೊಳಗೆ ಹಚ್ಚಿಕೊಂಡಿದ್ದ ಬೆಳಕನ್ನು ಆರಿಸಿ ಕಪ್ಪಾಯಿತು.        ಎಂದೂ ಯಾವ ಕಾರಣಕ್ಕೂ ಅಳು ಎಂಬ ಕ್ರಿಯೆಯನ್ನೇ ಇಷ್ಟ ಪಡದ, ಅಳುವವರ ಸಮೀಪಕ್ಕೆ ಹೋಗಲಿಕ್ಕೂ ಇಚ್ಛೆಪಡದ, ತಾನೆಂಬೋ ತಾನು ತನ್ನ ಮನೆ, ಸಂಸಾರಗಳನ್ನು ತನ್ನಿಚ್ಛೆಯಂತೆಯೇ ನಡೆಸಬಲ್ಲ ಭಯಂಕರ ತಾಕತ್ತಿನವಳೆಂದು ಬಲವಾಗಿ ನಂಬಿಕೊಂಡಿದ್ದ ನಾಗಲಕ್ಷ್ಮಿಗೆ  ತನ್ನೊಳಗೆ ಉಕ್ಕುತ್ತಿರುವ ಭಾವನೆಯನ್ನು ಹೇಗೆ ನಿರ್ವಹಿಸಬೇಕೆಂದೇ ತಿಳಿಯದಂತಾಗಿ ಆವೇಶದ ನಡುಕ ಬರತೊಡಗಿತು. ತಾನೀಗ ಸೋತಿದ್ದೇನೆಂಬ ನಿರಾಶೆ, ಗೆಲ್ಲಲಾಗಲಿಲ್ಲವೆಂಬ ಹತಾಶೆ, ತನ್ನ ಸೋಲನ್ನು ತಾನೆಂದೂ ಸ್ವೀಕರಿಸಬಾರದೆಂಬ ಹಠ ಇವೆಲ್ಲ ಕೂಡಿದ ಪ್ರಳಯಾಗ್ನಿಯಂತಹ ಬೆಂಕಿಯೊಂದು ಒಡಲಲ್ಲಿ ಹುಟ್ಟಿದ್ದೇ ತಡ, ಹಲ್ಲು ಕಡಿಯುತ್ತ, ಚಪ್ಪಲಿ ಮೆಟ್ಟಿಕೊಂಡು ಬಾಗಿಲನ್ನು ಹಾಗೇ ಮುಂದಕ್ಕೆಳೆದುಕೊಂಡು ಹೊರಟುಬಿಟ್ಟಳು. ಕೆಂಡ ಕಾರುತ್ತಿದ್ದ ಅವಳ ಕಣ್ಣೊಳಗೆ ಗಂಡ ಪದುಮಣ್ಣನ ಚಿತ್ರ ಗಿರಿಗಿರಿ ತಿರುಗುತ್ತಿತ್ತು. ಅಲ್ಲೇ ಪಕ್ಕದ ಬೀದಿಯಲ್ಲಿ ಅಟ್ಟದ ಮೇಲಿರುವ ಅವನ ಆಫೀಸಿಗೆ ನುಗ್ಗಿ, ಕೇಸಿನ ಫೈಲುಗಳನ್ನು ಸುತ್ತಲೂ ರಾಶಿ ಹಾಕಿಕೊಂಡು ಕೂತಿರುವ ಅವನನ್ನು ಹಿಡಿದು ತನ್ನ ಸಿಟ್ಟಿಳಿಯುವ ತನಕ ಬಡಿಯಲೇಬೇಕೆಂದು ರೋಷದಿಂದ ಹೆಜ್ಜೆಗಳನ್ನು ಎತ್ತೆತ್ತಿ ಇಡತೊಡಗಿದಳು. ತನ್ನನ್ನು ಕಂಡ ಕೂಡಲೇ “ಅಕ್ಕಾ ಆರಾಮಾ” ಎಂದು ಹಲ್ಲು ಕಿರಿಯುತ್ತ, “ಯಾಕಕ್ಕ ಇಷ್ಟು ಮೈ ಬಂದದಲ್ಲ, ವಾಕಿಂಗೂ ಮಾಡೂದಿಲ್ವಾ ಹೆಂಗೆ, ಡಾಕ್ಟ್ದ್ರಿಗಾದರೂ ತೋರಸ್ಕಳಿ” ಎಂದೆಲ್ಲ ಬೊಗಳೆ ಬಿಡುತ್ತ ತನ್ನ ಬಳ್ಳಿ ಮೈಯನ್ನು ವಾಲಾಡಿಸುವ ವಲ್ಲರಿಯನ್ನು ಇವತ್ತು ಬಿಡಬಾರದು. ಕತೆ ಹೇಳಲು ಭೂಮಿಗಿಳಿದ ನೀಲಿ ಮೋಡದಂತೆ ಗಾಳಿಗೆ ಹಾರಾಡುವ ಅವಳ ಅಲೆಗೂದಲನ್ನು ಮುಷ್ಟಿಯಲ್ಲಿ ಹಿಡಿದು ದರದರ ಎಳೆಯಬೇಕು. ಎಷ್ಟು ಸೊಕ್ಕು ಆ ಚೋದಿಗೆ, ತಾನು ತೆಳ್ಳಗೆ ಬೆಳ್ಳಗೆ ಸುಂದರಿಯಾಗಿದ್ದೇನೆ ಅಂತಲೇ ಇಷ್ಟು ಉರಿಯುವುದಲ್ವ ಅವಳು. ಪಟಪಟ ಇಂಗ್ಲೀಷು ಮಾತಾಡ್ತೇನೆ ಅಂತ, ರೊಯ್ಯನೆ ಗಾಡಿ ಬಿಟ್ಟುಕೊಂಡು ಬೇಕೆಂದಲ್ಲಿ ಹೋಗಬಲ್ಲೆ ಅಂತ ಪೊಗರು ತುಂಬಿಕೊಂಡಿದೆ. ಆದ್ದರಿಂದಲೇ ನನ್ನ ಗಂಡ ರಾತ್ರಿ ಒಂಭತ್ತು ಹೊಡೆದರೂ ಕೇಸು, ಕೇಸು ಅಂತ ಅವಳ ಮಗ್ಗುಲಲ್ಲಿ ಕೂತೇ ಇರಲಿಕ್ಕೆ ಸಾಯ್ತಾನೆ. ತಾನು ಫೋನು ಮಾಡಿದರೆ ಆಂ, ಊಂ ಕೇಳ್ತಾ ಇಲ್ಲ, ನೆಟ್ ವರ್ಕ ಇಲ್ಲ ಅಂತ ಫೋನು ಇಡ್ತಾನೆ, ಬೋಳಿಮಗ, ಇವತ್ತು ಅವನ ಗ್ರಾಚಾರ ಬಿಡಿಸದಿದ್ರೆ ನಾನು ಆಟಕ್ಕೊಂದೇ ವೀರಭದ್ರ ಎಂದೆನಿಸಿಕೊಳ್ಳುವ ಗಪ್ಪತಿಯ ಮಗಳೇ ಅಲ್ಲ. ಹೀಗೆಂದು ಉರಿಯುತ್ತ, ಮತ್ತೆ ಮತ್ತೆ ಕೆದರಿ ಉರಿ ಹೆಚ್ಚಿಸಿಕೊಳ್ಳುತ್ತ ಸೀರೆ ಉಟ್ಟ ಅಗ್ನಿಕುಂಡದ ಹಾಗೆ ಹೊರಟ ನಾಗಲಕ್ಷ್ಮಿ ಉರುಫ್ ನಾಗಕ್ಕ ಮೊದಲಿನಿಂದಲೂ ಸಿಟ್ಟಿನ ಸ್ವಭಾವದವಳೇ.           ಗುಡ್ಡೇಮಠದ ಮಹಾಲಿಂಗೇಶ್ವರ ಯಕ್ಷಗಾನ ಮೇಳದಲ್ಲಿ ವೀರಭದ್ರನ ಪಾತ್ರ ಹಾಕುತ್ತಿದ್ದ ಗಪ್ಪತಿಯ ಏಕೈಕ ಮಗಳೇ ನಾಗಲಕ್ಷ್ಮಿ. ವರ್ಷದ ಎಂಟು ತಿಂಗಳು ಮೇಳದೊಂದಿಗೆ ತಿರುಗುತ್ತ ಉಳಿದ ನಾಕು ತಿಂಗಳಲ್ಲಿ ಕೊಟ್ಟೆ ಕೊನೆ, ಸೊಪ್ಪು-ಮಣ್ಣು ಎಂದು ಗೇಯುತ್ತ ಸಂಸಾರ ಮಾಡುತ್ತಿದ್ದ ಗಪ್ಪತಿಯ ಹೆಂಡತಿ ಗಂಗೆ ಮೂರು ಮಕ್ಕಳನ್ನು ಹೆತ್ತಿದ್ದಳಾದರೂ ಒಂದೂ ಉಳಿದಿರಲಿಲ್ಲ. ಕಡೆಗೆ ಯಾರೋ ಹಿರಿಯರು ನಾಗದೋಷವಿರಬಹುದೆಂದು ಸಲಹೆ ಕೊಟ್ಟ ಮೇಲೆ ಕುಕ್ಕೆ ಸುಬ್ರಮಣ್ಯಕ್ಕೆ ಹೋಗಿ ಹರಕೆ ಹೇಳಿಕೊಂಡ ಮೇಲೆ ನಾಗಲಕ್ಷ್ಮಿ ಹುಟ್ಟಿದ್ದು. ಅಪರೂಪದ ಮಗಳು ಅಂತ ಅಪ್ಪ-ಅಮ್ಮ ಮುದ್ದು ಮಾಡಿದ್ದೇ ಮಾಡಿದ್ದು. ಅವಳು ಹೇಳಿದ ಮಾತನ್ನು ತೆಗೆದು ಹಾಕುತ್ತಲೇ ಇರಲಿಲ್ಲ. ಅಪ್ಪನ ಜೊತೆ ಆಟಕ್ಕೂ ಹೋಗಿ ಅವನ ವೀರಭದ್ರನ ಪಾತ್ರ ನೋಡಿ ಬರುತ್ತಿದ್ದ ನಾಗಲಕ್ಷ್ಮಿ ಮನೆಯಲ್ಲಿ ಅದೇ ಸಿಟ್ಟು-ಕೋಪ-ತಾಪಗಳನ್ನು ಅನುಕರಣೆ ಮಾಡುತ್ತಿದ್ದಳು. ತಮ್ಮ ಮಗಳು ದೈವಾಂಶ ಸಂಭೂತೆ ಅಂತಲೇ ಭಾವಿಸಿಕೊಂಡಿದ್ದ ಗಂಗೆ-ಗಣಪರು ಮಗಳಿಗೆ ಏನೆಂದರೆ ಏನೂ ಹೇಳುತ್ತಿರಲಿಲ್ಲ. ಅವರ ಕೊಂಡಾಟಗಳನ್ನೂ, ನಾಗಿಯ ಮೊಂಡಾಟ-ಭಂಡಾಟಗಳನ್ನು ಹತ್ತಿರದಿಂದ ಬಲ್ಲವರೆಲ್ಲ ಈ ನಮೂನಿ ಮಗಳನ್ನು ಬೆಳೆಸಿದ್ರೆ ನಾಳೆ ಆ ಕೂಸು ಸಂಸಾರ ಮಾಡದಾರೂ ಹೌದಾ? ಎಂದು ಮಾತಾಡಿಕೊಂಡರು. ಆಸುಪಾಸಿನಲ್ಲೆಲ್ಲೂ ಗಂಡು ಸಿಗದೇ ಗಪ್ಪತಿ ತನ್ನ ಮಗಳಿಗಾಗಿ ದೂರದ ಊರಿನ ಗಂಡುಗಳ ತಲಾಶೆಗೆ ಇಳಿದ. ಆಗ ಅವನ ಮೇಳದ ಭಾಗವತರೊಬ್ಬರು ಪದುಮಣ್ಣನ ಬಗ್ಗೆ ಹೇಳಿ ಗೋವಿನಂಥಾ ಸಾಧು ಮನುಷ್ಯ, ನಿನ್ನ ಮಗಳು ಹೇಳ್ದಾಂಗೆ ಕೇಳ್ಕಂಡು ಇರ್ತ ನೋಡು ಅಂತ ಶಿಫಾರಸು ಮಾಡಿದರು.             ನಮ್ಮ ಪದುಮಣ್ಣ ಇದ್ದಾನಲ್ಲ ಈತ ಶಾಲೆಗೆ ಕಾಲಿಟ್ಟ ಕ್ಷಣದಿಂದ ಅಂದರೆ ತನ್ನ ನಾಲ್ಕನೆಯ ವಯಸ್ಸಿನಿಂದಲೇ ದುಡಿಯಲಾರಂಭಿಸಿದ್ದಾನೆಂದರೆ ನೀವು ನಂಬಲೇಬೇಕು. ಅವನು ಶಾಲೆಗೆ ಹೋಗುವ ಕಾಲದಲ್ಲಿ ಅಂದರೆ ಈಗೊಂದು ಮೂವತ್ತು ವರ್ಷದ ಹಿಂದೆ ಸರ್ಕಾರಿ ಶಾಲೆಗಳಲ್ಲಿ ಸರ್ಕಾರದ ವತಿಯಿಂದ ಪ್ರತಿ ಮದ್ಯಾಹ್ನ ಉಪ್ಪಿಟ್ಟು ಕೊಡುತ್ತಿದ್ದರು. ದೊಡ್ಡಗಾತ್ರದ ಕಾಳಿನ ಜವೆಗೋಧಿಯಿಂದ ತಯಾರಿಸಿದ ಉಪ್ಪಿಟ್ಟು ಬಿಸಿಬಿಸಿಯಾಗಿ ರುಚಿಯಾಗಿರುತ್ತಿತ್ತು. ಹಾಜರಿ ಪುಸ್ತಕದಲ್ಲಿ ನಮೂದಿಸಿದ ಹುಡುಗರ ಸಂಖ್ಯೆಗನುಗುಣವಾಗಿ ಉಪ್ಪಿಟ್ಟು ಬರುತ್ತಿತ್ತು. ಆದರೆ ನಿಜವಾಗಿಯೂ ಹಾಜರಿರುತ್ತಿದ್ದವರು ಅದರ ಅರ್ಧದಷ್ಟು ಹುಡುಗರು ಮಾತ್ರ. ಆದ್ದರಿಂದ ಹುಡುಗರು ತಮಗೆ ಸಾಕೆನ್ನಿಸುವಷ್ಟು ಉಪ್ಪಿಟ್ಟು ಹಾಕಿಸಿಕೊಳ್ಳಬಹುದಿತ್ತು. ಪದುಮಣ್ಣ ಶಾಲೆಗೆ ಕಾಲಿಟ್ಟ ದಿನವೇ ದೊಡ್ಡದೊಂದು ಪ್ಲಾಸ್ಟಿಕ್  ಕವರಿನಲ್ಲಿ ಉಪ್ಪಿಟ್ಟು ಹಾಕಿಸಿಕೊಂಡ. ಸೀದಾ ಶಾಲೆಯ ಹೊರಗೆ ಬಂದ. ಅಲ್ಲಿ ರಸ್ತೆಯ ಪಕ್ಕದ ಕಾಲುವೆಗಳನ್ನು ಅಗೆಯುವ ಕೆಲಸದಲ್ಲಿ ತೊಡಗಿರುವ ಜನರು ಕೂತಿದ್ದರು. ಅವರೆದುರು ಘಮಘಮಿಸುವ ಉಪ್ಪಿಟ್ಟು ತೋರಿಸಿದ. ತಮ್ಮ ಡಬ್ಬಿಗಳಲ್ಲಿರುವ ತಂಗಳಿಗಿಂತ ಈ ಉಪ್ಪಿಟ್ಟು ತಿನ್ನುವುದು ಬಹಳ ಉತ್ತಮವೆಂದು ಭಾವಿಸಿದ ಅವರು ಎರಡು ರೂಪಾಯಿ, ಮೂರು ರೂಪಾಯಿ ಮುಂತಾಗಿ ಹಣ ಕೊಟ್ಟು ಉಪ್ಪಿಟ್ಟು ಕೊಂಡರು. ಹೀಗೆ ಶಾಲೆಗೆ ಹೋಗತೊಡಗಿದಂದಿನಿಂದಲೇ ಗಳಿಕೆ ಮಾಡಲಾರಂಭಿಸಿದ ಅದ್ಭುತ ಪ್ರತಿಭಾರತ್ನ ಆತ. ತನಗೆ ಅಯಾಚಿತವಾಗಿ ದೊರಕಿದ ಆಹಾರದ ಗಿರಾಕಿಗಳನ್ನು ಹಲವಾರು ವ್ಯಾಪಾರಗಳಿಗೆ ಆತ ಬಳಸಿಕೊಂಡ. ಅಂದರೆ ಅವನ ಮನೆಯಲ್ಲಿ ಮಾಡಿದ ದೋಸೆ, ರೊಟ್ಟಿ, ಕಡುಬು, ಪಲ್ಯಗಳೇನಾದರೂ ಆತನಿಗೆ ಇಷ್ಟವಾಗದಿದ್ದರೆ ಬೇರೆ ಹುಡುಗರಂತೆ ಆತ ರಗಳೆ ಮಾಡುತ್ತಿರಲಿಲ್ಲ. ಸುಮ್ಮನೆ ಒಂದು ಕವರಿನಲ್ಲಿ ಹಾಕಿಕೊಂಡು ಪಾಟಿಚೀಲದಲ್ಲಿರಿಸಿಕೊಂಡು ಶಾಲೆಗೆ ಬಂದು ಮಾರಿಬಿಡುತ್ತಿದ್ದ. ಕೆಲವು ಸಲ ತನ್ನ ಪಾಲಿನ ತಿಂಡಿಗಳು ಸಾಲದೆಂದು ಅನ್ನಿಸಿದಾಗ ಅಂದರೆ ಮಾರುಕಟ್ಟೆಯ ಬೇಡಿಕೆ ಹೆಚ್ಚಿದ್ದಾಗ ಅಡಿಗೆ ಮನೆಯಲ್ಲಿ ಹರಿದ ದೋಸೆ, ಉಳಿದ ರೊಟ್ಟಿ ಇತ್ಯಾದಿಗಳನ್ನು ಎಮ್ಮೆಗೆ ಹಾಕುವುದಕ್ಕಾಗಿ ತೆಗೆದಿರಿಸುವ ಅಕ್ಕಚ್ಚು ಪಾತ್ರೆಯಿಂದ ಎಗರಿಸಿಕೊಂಡು ತನ್ನ ಸ್ಟಾಕ್ ಶಾರ್ಟೇಜು ಸರಿಪಡಿಸಿಕೊಳ್ಳುತ್ತಿದ್ದ. ಇಂತಹ ಮಾರಾಟದಿಂದ ಗಳಿಸಿದ ಹಣವನ್ನು ಅವನೆಂದೂ ಪೋಲು ಮಾಡುತ್ತಿರಲಿಲ್ಲ. ಮನೆಯ ಪುರುಷ ಸದಸ್ಯರಿಗೆ ತಿಳಿಯದಂತೆ ಮಹಿಳೆಯರು ಕೈಗೊಳ್ಳುವ ಸಾಹಸಗಳಿಗೆ ಬಂಡವಾಳದಂತೆ ಕೈಕಡ ಕೊಡುತ್ತಿದ್ದ. ಅದಕ್ಕೆ ಬದಲಾಗಿ ಆ ಹೆಂಗಸರು ತಮಗೆ ಅನುಕೂಲವಾದಾಗ ಹೆಚ್ಚಿನ ಹಣವನ್ನು ಕೊಡುವುದಲ್ಲದೇ ಹಲವು ಬಗೆಯ ತಿಂಡಿ-ತೀರ್ಥಗಳನ್ನು ಬಡ್ಡಿಯಂತೆ ಕೊಡುತ್ತಿದ್ದರು. ಹೀಗೆ ಪದುಮಣ್ಣನ ವ್ಯಾಪಾರ-ವಹಿವಾಟುಗಳು ಬಾಲ್ಯದಲ್ಲೇ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದ್ದವು. ವಿಷಯ ಇಷ್ಟೇ ಆಗಿದ್ದರೆ ಪದುಮಣ್ಣನ ಬಗ್ಗೆ ಬರೆಯಬೇಕಾಗಿರಲಿಲ್ಲ. ಅವನು ತನ್ನ ಮಾರಾಟಪ್ರತಿಭೆಯನ್ನು ಮುಂದುವರೆಸಿಕೊAಡು ಅಪ್ರತಿಮ ವ್ಯವಹಾರಸ್ಥನಾಗಿ ಟಾಟಾ, ಅಂಬಾನಿಗಳಿಗೇ ಸೆಡ್ಡು ಹೊಡೆದು ಪದ್ಮವಿಭೂಷಣ ಇತ್ಯಾದಿ ಪಡೆದುಕೊಂಡು ಸುಖವಾಗಿ ಇರಬಹುದಿತ್ತು. ಆದರೆ ಪ್ರಾಥಮಿಕಶಾಲೆ ಬಿಟ್ಟು ಹೈಸ್ಕೂಲಿಗೆ ಬರುವಷ್ಟರಲ್ಲಿ ಪದುಮಣ್ಣ ದುಡಿಮೆಯ ದಾರಿಯನ್ನೇ ಬದಲಾಯಿಸಿಕೊಂಡಿದ್ದ. ಸರಕಿನಿಂದ ಸೇವಾ ಕ್ಷೇತ್ರಕ್ಕೆ ಶಿಫ್ಟ್ ಆಗಿದ್ದ. ಅಂದರೆ ಗೂಡ್ಸ್ ಟು ಸರ್ವಿಸ್ ಸೆಕ್ಟರ್.             ಪದುಮಣ್ಣನಿಂದ ಹಣಕಾಸಿನ ನೆರವು ತೆಗೆದುಕೊಳ್ಳುತ್ತಿದ್ದ ಹೆಂಗಸರು ಅವನನ್ನು ತಮ್ಮ ಒಳಗುಟ್ಟಿನ ಸಂಗತಿಗಳಿಗೆ ಆಪ್ತ ಸಲಹೆಗಾರನನ್ನಾಗಿ ಬಳಸಿಕೊಳ್ಳುತ್ತಿದ್ದರು. ಗಂಡಸರ ಗಮನಕ್ಕೆ ಬರದಂತೆ ಗುಟ್ಟಾಗಿ ಶೇಖರಿಸಿಕೊಂಡ ಗೋಡಂಬಿ, ದಾಲ್ಚಿನ್ನಿ, ಮುರುಗಲ ತುಪ್ಪ, ಆರಾರೋಟು, ಅರಿಶಿಣ ಪುಡಿ ಇತ್ಯಾದಿಗಳಿಗೆ ಸೂಕ್ತ ಗಿರಾಕಿಯ ಹೆಸರು ಸೂಚಿಸುವುದು, ಹೆಂಗಸರು ಮದುವೆಯಂತಹ ಕಾರ್ಯಗಳಿಗೆ ಹೋಗುವಾಗ ಎರವಲು ಚಿನ್ನ ಧರಿಸುವ ಆಸೆಪಟ್ಟರೆ ಯಾವ ಆಭರಣ ಯಾರ ಬಳಿಯಿದೆಯೆಂಬ ಮಾಹಿತಿ ನೀಡುವುದು, ಅವರ ಗುಪ್ತಧನಕ್ಕೆ ನಂಬಿಗಸ್ತ ಗಿರಾಕಿ ಹುಡುಕುವುದು ಹೀಗೆ ತನ್ನ ಹಳ್ಳಿಯ ಮಹಿಳಾ ಆರ್ಥಿಕತೆಯ ಕ್ಷೇತ್ರಕ್ಕೆ ಪದುಮಣ್ಣನದು ದೊಡ್ಡ ಕೊಡುಗೆಯಿದೆ. ಆದರೆ ಅವನ ಅಮೂಲ್ಯ ಸೇವೆಯ ಮಹತ್ವ ಅರ್ಥವಾಗದ ಅವನ ಶಿಕ್ಷಕರು ಅವನನ್ನು ಅಡ್ಡಕಸುಬಿಯೆಂದು ಅಪಮಾನಿಸಿ ಶಿಕ್ಷೆ ನೀಡುತ್ತಿದ್ದರು.           ಕಾಲೇಜು ಮೆಟ್ಟಿಲು ಹತ್ತುವಷ್ಟರಲ್ಲಿ ಪದುಮಣ್ಣನ ಕಾರ್ಯಕ್ಷೇತ್ರ ಮತ್ತಷ್ಟು ವಿಸ್ತಾರಗೊಂಡಿತು. ಇನ್ನೂ ಮೊಬೈಲುಗಳು ಬಂದಿರದ ಆ ಕಾಲದಲ್ಲಿ ಮಲೆನಾಡಿನ ಕೊಂಪೆಗಳಿAದ ಸುತ್ತುವರೆದ ಪಟ್ಟಣದಲ್ಲಿ ವಾಸಿಸುತ್ತಿದ್ದ ಆತ ಯಾವುದೇ ವ್ಯಕ್ತಿಯ ಯಾವುದೇ ರೀತಿಯ ಕೆಲಸಕ್ಕೆ ಒದಗಬಲ್ಲ ಸರ್ವೀಸ್ ಪ್ರೊವೈಡರ್ ಆಗಿದ್ದ. ತಾನು ಕಾಲೇಜಿಗೆ ಹೋಗುವ ದಾರಿಯಲ್ಲಿಯೇ ಕರೆಂಟು ಬಿಲ್ಲು ಕಟ್ಟುವುದು, ಔಷಧಿ ಗುಳಿಗೆ ತರುವುದು, ಬ್ಯಾಂಕಿನಿಂದ ದುಡ್ಡು ತಂದು ಕೊಡುವುದು, ಯಾರಿಗಾದರೂ ಮನಿಯಾರ್ಡರು ಮಾಡುವುದು, ದಿನಸಿ ಸಾಮಾನು ತಂದು ಕೊಡುವುದು ಇಂತಹ ನೂರಾರು ಕೆಲಸಗಳನ್ನು ತಕರಾರೆತ್ತದೆ ಮಾಡುತ್ತಿದ್ದ. ಪ್ರತಿ ಕೆಲಸಕ್ಕೂ ಪ್ರತಿಫಲವಾಗಿ ಏನಾದರೂ ಸಿಕ್ಕೇ ಸಿಗುತ್ತಿತ್ತು. ಇಂತಿಪ್ಪ ಪದುಮಣ್ಣ ವಕೀಲಿ ಪದವಿ ಪಡೆದುಕೊಂಡು ವೃತ್ತಿ ಆರಂಭಿಸಿದ. ದಿನದ ಇಪ್ಪತ್ನಾಲ್ಕು ತಾಸು ಕೂಡ ಕಕ್ಷಿದಾರರ ಮನೆಯ ಕಡೆಗೆ ಕಾಲಾಡಿಸುತ್ತ ಇರುವ ಪ್ರವೃತ್ತಿಯಿಂದಾಗಿ ಕೇಸುಗಳು ಜೋರಾಗೇ ಸಿಗುತ್ತಿದ್ದವು. ಅವನಿಂದ ಉಪಕೃತರಾದವರೊಬ್ಬರು ತಮ್ಮ ನೆಂಟರ ಪೈಕಿಯ ಭಾಗವತರಿಗೆ ಶಿಫಾರಸು ಮಾಡಿ ಮದುವೆ ಮಾಡಿಸಿದರು. ಹಾಗೆ ಅವನ ಜೀವನದಲ್ಲಿ ಪ್ರವೇಶ ಪಡೆದುಕೊಂಡವಳು ನಾಗಲಕ್ಷ್ಮಿ. ಅರ್ಥಾತ್ ನಾಗಕ್ಕ. ಆದರೇನು ಮಾಡೋಣ. ಆ ಮದುವೆ ಮಾಡಿಸಿದವರು ಅವರಿಬ್ಬರ ಸ್ವಭಾವಗಳನ್ನು ಹೋಲಿಕೆ ಮಾಡಿ ವಿಚಾರ ಮಾಡಿರಲೇ ಇಲ್ಲ. ಹೀಗಾಗಿ ಪದುಮಣ್ಣನ ವಿರುದ್ಧ ಸ್ವಭಾವದ ನಾಗಕ್ಕ ಅವನ ಕೈ ಹಿಡಿದು ಬಂದಳು. ಅವಳೋ ಪಕ್ಕಾ ಒಂಟಿಗೂಬೆ. ಜನರ ತಲೆ ಕಂಡರೇ ಅವಳಿಗಾಗದು. ಹೊರತಿರುಗಾಟವೆಂದರೆ ಮುಖ ಸಿಂಡರಿಸುತ್ತಾಳೆ. ಸದಾಕಾಲ ಬಾಗಿಲು ಹಾಕಿಕೊಂಡು ಒಳಗೇ ಇರುವ ಮನೆಗುಬ್ಬಿ. ತಾನು-ತನ್ನ ಗಂಡ ಇಬ್ಬರೇ ರಾಜ-ರಾಣಿಯರ ಹಾಗೆ ಬದುಕಬೇಕೆಂದು ಕನಸು ಕಂಡವಳು. ಅವಳಿಗೆ ಪದುಮಣ್ಣನ ವಿಶ್ವಕುಟುಂಬಿತನ ಕಂಡು ದಿಗಿಲಾಗಿಬಿಟ್ಟಿತು. ಅವನ ಹಿಂದೆ ಹಿಂಡುಗಟ್ಟಿಕೊಂಡು ಬರುವ ಕಕ್ಷಿದಾರರನ್ನು ಗೌ ಗೌ ಎಂದು ಕೂಗಿ ಓಡಿಸಿಬಿಟ್ಟಳು. ಯಕ್ಷಗಾನ, ತಾಳಮದ್ದಲೆ, ದೇವಕಾರ್ಯ, ಊರ ಸಮಾರಾಧನೆ ಅಂತೆಲ್ಲ ಊರೊಟ್ಟಿನ ಕೆಲಸಕ್ಕಾಗಿ ದಿನಾಲೂ ಹುಡುಕಿಕೊಂಡು ಬರುವ ಪುರಬಾಂಧವರಿಗೂ ಅವಳಿಂದ ಮಂಗಳಾರತಿ ಸಿಕ್ಕಿತು. ಆದರೆ ಪದುಮಣ್ಣನ ಪಾಡು ನೋಡಿ. ಈಗ ಬಂದ ಹೆಂಡತಿಗಾಗಿ ಲಾಗಾಯ್ತಿನಿಂದ ಮಾಡಿಕೊಂಡು ಬಂದ ಜೀವನವನ್ನು ಬದಲಾಯಿಸಿಕೊಳ್ಳಲಿಕ್ಕೆ ಸಾಧ್ಯವೆ? ಅದಕ್ಕಾಗಿ ಪದುಮಣ್ಣ ಮನೆಯಿಂದಾಚೆಗೆ ಇರುವುದೇ ಜಾಸ್ತಿಯಾಯಿತು. ಹೆಂಡತಿ ಬೈಯುತ್ತಾಳೆ

ಬಣ್ಣದ ವೇಷ Read Post »

ಕಥಾಗುಚ್ಛ

ಕಡಲಲೆಗಳ ಲೆಕ್ಕ

ಕಥೆ ಸುಧಾ ಹೆಚ್.ಎನ್ ರುಕ್ಮಿಣಮ್ಮ  ಕಡಲಿನ ಮಗಳು.  ಹುಟ್ಟಿದ್ದು, ಬೆಳೆದದ್ದು, ಪ್ರತಿ ಬೆಳಗು, ಪ್ರತಿರಾತ್ರಿ  ಕಳೆದದ್ದು  ಸಮುದ್ರದ ಜೊತೆಗೇ. ಮೀನುಗಳ ವ್ಯಾಪಾರ ಮಾಡುತ್ತಿದ್ದ ತಂದೆಯ, ಜೀವನದ ಜೊತೆಗಾರನಾದ  ಪಾಂಡುರಂಗನ ಮನೆಯಿದ್ದದ್ದು ಕಡಲತೀರದಲ್ಲೇ.  ತಮ್ಮ ಸುಮಾರು ಎಂಬತ್ತು ವರ್ಷದ ಜೀವಮಾನವನ್ನು     ಕಣ್ಣಳತೆಯಲ್ಲಿದ್ದ  ಅಗಾಧ ಸಮುದ್ರ,  ಅವಿರತವಾಗಿ  ಕೇಳಿಬರುತ್ತಿದ್ದ ಅಲೆಗಳ ಮೊರೆತ,  ಮೀನು….ಇತರೆ    ವಾಸನೆಯ ಜೊತೆಗೆ ಜೀವನ  ಸವೆಸಿದ್ದರು  ರುಕ್ಮಿಣಮ್ಮ.   ರುಕ್ಮಿಣಮ್ಮ ಮತ್ತು ಪಾಂಡುರಂಗಪ್ಪ   ಐವರು ಮಕ್ಕಳಿಗೆ ತಮ್ಮ ಕೈಲಾದ ಮಟ್ಟಿಗೆ ವಿದ್ಯಾಭ್ಯಾಸ ಕೊಡಿಸಿ, ಮದುವೆ ಮಾಡಿದ್ದರು. ಎಲ್ಲಾ ಮಕ್ಕಳು ದೂರ ದೂರದ ಊರುಗಳಲ್ಲಿ   ತಮ್ಮ,  ತಮ್ಮ ನೆಲೆ  ಕಂಡುಕೊಂಡಿದ್ದರು.      ಎಂಟು ವರ್ಷಗಳ ಹಿಂದೆ ಪಾರ್ಶ್ವವಾಯು ಪೀಡಿತರಾಗಿ,  ದೇಹದ ಒಂದು ಭಾಗದ  ಸ್ವಾಧೀನ ಕಳೆದುಕೊಂಡಿದ್ದರು  ಪಾಂಡುರಂಗಪ್ಪ.   ಗಂಡನ ಅನಾರೋಗ್ಯದ  ಸಮಯದಲ್ಲಿ  ಅನಾವರಣಗೊಂಡ ಮಕ್ಕಳ   ನಡವಳಿಕೆ,  ಅಸಹಕಾರ, ಅಸಹನೆ,  ಲೆಕ್ಕಾಚಾರಗಳಿಂದ  ಬಹಳವಾಗಿ  ನೊಂದಿದ್ದರು ರುಕ್ಮಿಣಮ್ಮ.  ತಂದೆ-ತಾಯಿಯರ  ಕಷ್ಟಕಾಲದಲ್ಲಿ  ಹಡೆದ ಮಕ್ಕಳು ತಮ್ಮ  ಕರ್ತವ್ಯ ನಿರ್ವಹಿಸುವಾಗ ತಮ್ಮತಮ್ಮಲ್ಲೆ   ಸ್ಪರ್ಧೆ, ಜಿದ್ದಿಗೆ ಬಿದ್ದು ತೋರಿಸಿದ ಅನಾದರ, ಮಾಡಿದ ಅವಮಾನ   ರುಕ್ಮಿಣಮ್ಮನವರಿಗೆ ಜೀವನ ಕಲಿಸಿದ ಹೊಸ ಪಾಠವಾಗಿತ್ತು.       ಹಾಗೂ,  ಹೀಗೂ  ಪರಿಪಾಟಲು ಪಟ್ಟು ಆಸ್ಪತ್ರೆಯಿಂದ ಗಂಡನನ್ನು  ಮನೆಗೆ ಕರೆತಂದಿದ್ದರು  ರುಕ್ಮಿಣಮ್ಮ. ನಂತರ ವೈದ್ಯರ ಸಲಹೆಯಂತೆ ಪ್ರತಿ ದಿನ  ಮುಂಜಾನೆ , ಸಂಜೆ ಗಂಡನ  ಕೈ ಹಿಡಿದು  , ಸಮುದ್ರದ  ದಂಡೆಗೆ  ಕರೆದೊಯ್ದು ಬೆಚ್ಚಗಿನ ಮರಳಿನಲ್ಲಿ  ಮಲಗಿಸಿ, ಹಿತವಾಗಿ ಕೈ ಕಾಲು  ತಿಕ್ಕಿ , ಕಡಲ ಅಲೆಗಳಿಂದ ಸ್ನಾನ ಮಾಡಿಸುತ್ತಿದ್ದರು.   ಗಂಡನ ಬಗಲಲ್ಲಿ ಕುಳಿತು  ಸಮುದ್ರದಲೆಗಳ  ಲೆಕ್ಕ ಹಾಕುತ್ತಿದ್ದಾಗ,  ಪಾಂಡುರಂಗಪ್ಪ  ನಗುತ್ತಾ ” ಹುಚ್ಚು ರುಕ್ಮಿ”   ಎಂದು   ಪ್ರೀತಿಯಿಂದ ತಲೆಗೆ  ಮೊಟಕುತ್ತಿದ್ದರು.     ಮಕ್ಕಳೆಲ್ಲಾ   ಕಳುಹಿಸುತ್ತಿದ್ದ  ಅಷ್ಟಿಷ್ಟು ಹಣದಿಂದ  ಎಂಟು ವರ್ಷಗಳು ಜೀವನ ದೂಡಿದ್ದ  ಪಾಂಡುರಂಗಪ್ಪನವರು ತೀರಿಕೊಂಡಿದ್ದರು.       ಪಾಂಡುರಂಗಪ್ಪ ಸತ್ತು ಹನ್ನೊಂದು  ದಿನಗಳು  ಕಳೆದಿದ್ದವು.  ಐವರು ಮಕ್ಕಳು, ಹನ್ನೆರಡು  ಮೊಮ್ಮಕ್ಕಳು ಒಟ್ಟಿಗೆ ಕುಳಿತು ಎಂಟು  ವರ್ಷಗಳಿಂದ , ತಂದೆಯ  ಆಸ್ಪತ್ರೆ ಖರ್ಚು ,  ಇದುವರೆಗೆ  ತಾಯಿಗೆ ನೀಡಿದ ಹಣ,    ತಂದೆಯ ಮಣ್ಣು ,  ಶ್ರಾದ್ಧ,  ಮಾಡುವವರೆಗೆ ಆದ ಖರ್ಚುವೆಚ್ಚಗಳನ್ನು ಲೆಕ್ಕ ಹಾಕುತ್ತಾ ಕುಳಿತಿದ್ದರು.   ಪ್ರತಿಯೊಬ್ಬರು ತಾವು  ಮಾಡಿದ ವೆಚ್ಚಕ್ಕೆ ಸಾಕ್ಷಿಗಳನ್ನು  ನೀಡುತ್ತಿದ್ದರು.  ತಾಯಿಯಾದ ರುಕ್ಮಿಣಮ್ಮ   ಮಕ್ಕಳಿಗೆ   ತಾನೇನು ನೀಡಿದ್ದೇನೆ  ಎಂಬುದಕ್ಕೆ ಯಾವ ಲೆಕ್ಕ , ಸಾಕ್ಷಿ ನೀಡಲಾಗದೆ ಕುಳಿತಿದ್ದರು.      ಗಂಡನನ್ನು ಕಳೆದುಕೊಂಡು ಒಂಟಿಯಾಗಿದ್ದ ರುಕ್ಮಿಣಮ್ಮನನ್ನು ಯಾರ್ಯಾರು ಎಷ್ಟೆಷ್ಟು ದಿವಸ ಯಾರ್ಯಾರ ಮನೆಗಳಲ್ಲಿ ಇಟ್ಟುಕೊಳ್ಳಬೇಕು ಎಂಬುದರ  ಕುರಿತು   ಚರ್ಚೆಯಾಗತೊಡಗಿತ್ತು.  ಅವರುಗಳೆಲ್ಲಾ ವೇಳಾಪಟ್ಟಿಯನ್ನು ತಯಾರಿಸುತ್ತಾ ಪರಸ್ಪರರ ಅನುಕೂಲ, ಅನಾನುಕೂಲಗಳನ್ನು    ಹೇಳಿ ಕೊಳ್ಳತೊಡಗಿದ್ದರು.  ರುಕ್ಮಿಣಮ್ಮ ಬದುಕಿರುವ  ಜೀವಿ ಎಂದು ಅವರ್ಯಾರೂ ಭಾವಿಸಿದಂತೆ ಕಾಣಲಿಲ್ಲ.       ರುಕ್ಮಿಣಮ್ಮನವರಿಗೆ ಆ ಕ್ಷಣದಲ್ಲಿ ಅಗಾಧವಾದ , ಆಳವಾದ ,  ಲೆಕ್ಕ ಮಾಡಲಾಗದ   ಅಲೆಗಳ  ಕಡಲು ನೆನಪಾಯಿತು.   ಕುಳಿತಲ್ಲಿಂದ ಮೆಲ್ಲನೆ ಎದ್ದು  ಮನೆಯಿಂದ  ಹೊರಬಂದು ಕಡಲ ಕಡೆ ಹೆಜ್ಜೆ ಹಾಕಿದರು. ಕಡಲ ಮರಳು ತನ್ನ  ಆತ್ಮೀಯತೆಯ  ಸ್ಪರ್ಶದಿಂದ   ನೊಂದ ಮನಸ್ಸನ್ನು  ಸಂತೈಸಿತು. ರುಕ್ಮಿಣಮ್ಮ  ಕಡಲ ಅಲೆಗಳ ಲೆಕ್ಕ ಹಾಕುತ್ತಾ…… ಹಾಕುತ್ತಾ ………ಕಡಲೆಡೆಗೆ ಹೆಜ್ಜೆ ಹಾಕತೊಡಗಿದ್ದರು. *********   

ಕಡಲಲೆಗಳ ಲೆಕ್ಕ Read Post »

ಕಥಾಗುಚ್ಛ

ಅಬ್ಬರವಿಳಿದಾಗ

ಶೈಲಜಾ ಹಾಸನ್        ತಣ್ಣಗೆ ಗಾಳಿ ಬೀಸಿದಂತಾಗಿ ಮಾಧವಿ ನಡುಗಿದಳು. ಕೆರೆ ಏರಿ ಮೇಲೆ ಕುಳಿತಿದ್ದರಿಂದ ಕೆರೆಯ ಮೇಲಿಂದ ಹಾದು ಬರುತ್ತಿದ್ದ ಗಾಳಿ ಎದೆ ನಡುಗಿಸುವಂತಿತ್ತು. ಚಳಿ ಆಗುತ್ತಿದ್ದರೂ ಮಾಧವಿಗೆ ಮನೆಗೆ ಹೋಗುವ ಮನಸ್ಸು ಇರಲಿಲ್ಲ. ಏರಿ ಮೇಲೆ ಕುಳಿತು ಸಾಕಾದ ಮಾಧವಿ ನಿಧಾನವಾಗಿ ಕೆಳಗಿಳಿದು ನೀರಿಗೆ ಕಾಲು ಇಳಿಬಿಟ್ಟು ಚಪ್ಪಡಿ ಮೇಲೆ ಕುಳಿತಳು. ಕಾಲುಗಳೆರಡನ್ನು ನೀರಿನಲ್ಲಿ ಆಡಿಸುತ್ತಾ ಕಾಲಬೆರಳನ್ನು ಕಚ್ಚಲು ಬರುತ್ತಿದ್ದ ಮೀನುಗಳೊಡನೆ ಆಟವಾಡತೊಡಗಿದಳು. ಕೆಲವು ನಿಮಿಷಗಳಷ್ಟೆ ಆ ಆಟವೂ ಮುದ ನೀಡದೆ ಕಾಲುಗಳನ್ನು ಎತ್ತಿಕೊಂಡು ಮೇಲೆ ಇರಿಸಿಕೊಂಡಳು.      ಬಾನಿನಲ್ಲಿ ಬೆಳ್ಳಕ್ಕಿಗಳು ಸಾಲಾಗಿ ಶಿಸ್ತಿನ ಸಿಪಾಯಿಗಳಂತೆ ಹೋಗುತ್ತಿರುವುದನ್ನು ಕಂಡು ಎದ್ದು ನಿಂತವಳೇ “ಬೆಳ್ಳಿಕ್ಕಿ, ಬೆಳ್ಳಕ್ಕಿ ನನ್ನ ಉಂಗುರ ಕೊಡ್ತಿನಿ ನಿನ್ನ ಉಂಗುರ ಕೊಡು” ಎಂದು ಕೂಗಿದಳು.  ಯಾರಾದರೂ ಕೇಳಿಸಿಕೊಂಡರೇನೊ ಎಂದು ತಟ್ಟನೆ ನಾಚಿ ಸುತ್ತಲೂ ನೋಡಿದಳು. ಸ್ವಲ್ಪವೇ ದೂರದಲ್ಲಿ  ಬಟ್ಟೆಗೆ ಸೋಪು ಹಚ್ಚುತ್ತಿದ್ದ ಶಾಮಣ್ಣನ ಸೊಸೆ ” ಏನೇ ಮಾಧವಿ, ಉಂಗುರ ಕೇಳಿದಿಯಾ ಬೆಳ್ಳಕ್ಕಿಯಾ, ಸ್ವಲ್ಪ ದಿನ ಇರು, ಬೆಳ್ಳಕ್ಕಿಯಂತೆ ಮದ್ವೆ ಗಂಡು ಹಾರಿ ಬಂದು ಚಿನ್ನದುಂಗುರ ತೊಡಿಸುತ್ತಾನೆ.” ಎನ್ನುತ್ತಾ ನಕ್ಕಳು.   “ಥೂ ಹೋಗಕ್ಕ, ನಾನು ಚಿನ್ನದ ಉಂಗುರನೇ ಹಾಕಳಲ್ಲ, ಅದರಲ್ಲೂ  ಮದ್ವೆ ಗಂಡು ತೊಡಿಸುತ್ತಾನೆ ಅಂದ್ರೆ ನಂಗೆ ಬೇಡವೇ ಬೇಡಾ” ಮೂತಿ ಉಬ್ಬಿಸಿದಳು.   “ನೀನು ಬೇಡ ಅಂದ್ರೆ ನಿಮ್ಮಪ್ಪ ಕೇಳುತ್ತಾರಾ, ಆಗ್ಲೆ ಗಂಡು ಹುಡುಕುತ್ತಾ ಇದ್ದಾರೆ. ಈ ವರ್ಷವೇ ನಿಂಗೆ ಮದ್ವೆ ಕಣೇ” ಮಾಧವಿಯನ್ನು ರೇಗಿಸಿದಳು. ” ಥೂ ಎಲ್ಲಿಹೋದರೂ ಮದ್ವೆ ವಿಷಯನೇ, ಮೊದ್ಲು ನೀನು ಬಟ್ಟೆ ಒಗೆಯಕ್ಕ” ಸಿಡಾರನೇ ಸಿಡುಕಿ ಅಲ್ಲಿಂದ ಎದ್ದು ಮನೆಯತ್ತ ಹೊರಟಳು.    ಮನೆಗೆ ಹೊಗಲು ಮನಸ್ಸಾಗದೆ ಸೀದಾ ತೋಪಿನೊಳಗೆ ಹೆಜ್ಜೆ ಹಾಕಿ ಅಲ್ಲಿದ್ದ ಅವಳ ಮೆಚ್ಚಿನ ಮಾವಿನ ಮರವೇರಿ ಕುಳಿತುಕೊಂಡಳು. ಮರದಲ್ಲಿನ ಮಾವಿನ ಕಾಯಿಗಳು ಬಲಿತು ಮಾವಿನ ಸುವಾಸನೆ ಸುತ್ತಲೂ ವ್ಯಾಪಿಸಿತ್ತು. ಆ ವಾಸನೆಗೆ ಅರೆ ಕ್ಷಣ ಮೂಗರಳಿಸಿ ಕಂಪನ್ನು ಒಳಗೆಳೆದುಕೊಂಡಳು. ಮನೆಯೊಳಗೆ ರಾಶಿ ರಾಶಿ ಹಣ್ಣು ಬಿದ್ದಿದ್ದರೂ ತಿನ್ನುವ ಮನಸ್ಸಾಗಿರಲಿಲ್ಲ. ಮನದೊಳಗೆ ಕೊರೆಯುತ್ತಿದ್ದ ಸ್ಕೂಟಿ ವಿಷಯವೇ ಬೃಹದಾಕಾರವಾಗಿ ಎದ್ದು ಕುಣಿಯ ತೊಡಗಿತು. ಹೊಸ ಸ್ಕೂಟಿ ಓಡಿಸುತ್ತಾ ಕಾಲೇಜಿನ ದಾರಿ ಹಿಡಿದು ತಾನು ಹೋಗುತ್ತಿದ್ದರೆ ಎಲ್ಲರ ದೃಷ್ಟಿಯೂ ನನ್ನ ಮೇಲೆಯೇ, ಸ್ಕೂಟಿಯಿಂದ ಹೆಮ್ಮೆಯಿಂದ ಇಳಿದು ಸ್ಟಾಂಡಿನಲ್ಲಿ ನಿಲ್ಲಿಸಿ, ಬ್ಯಾಗ್ ತೆಗೆದುಕೊಂಡು ಹೆಗಲಿಗೇರಿಸಿಕೊಂಡು ಕ್ಲಾಸಿನೊಳಗೆ ಹೋಗುತ್ತಿದ್ದರೆ….ರೇ… ರಾಜ್ಯದಲ್ಲಿ ಮುಳುಗಿಹೋಗಿರುವಾಗಲೇ ಅಪ್ಪನ ಕೂಗು ” ಮಾಧವಿ, ಎಲ್ಲಿದ್ದಿಯಾ, ಕತ್ತಲೆ ಆಗ್ತಾ ಇದೆ, ಈ ತೋಪಿನಲ್ಲಿ ಕುಳಿತು ಕೊಂಡು ಏನು ಮಾಡ್ತಾ ಇದ್ದಿಯಾ,ಎದ್ದು ಬಾ ಮನೆಗೆ” ಅಪ್ಪನ ಜೋರು ಧ್ವನಿ ಕೇಳಿಸಿದಾಗ ಅತ್ತ ತಿರುಗಿ ” ಈ ಅಪ್ಪಾ ಇನ್ನೂ ಸ್ವಲ್ಪ ಹೊತ್ತು ಸುಮ್ಮನಿರಬಾರದಿತ್ತಾ, ನನ್ನ ಕನಸು ಅರ್ಧಕ್ಕೆ ನಿಂತು ಹೋಯಿತು ಎಂದು ಬೈಯ್ದುಕೊಳ್ಳುತ್ತಾ ಮರದಿಂದ  ಒಂದೇ ಸಲಕ್ಕೆ ಧುಮುಕಿದಳು.       ತೋಪಿನಿಂದ ಮನೆ ಒಂದು ಕೂಗಳತೆ ಅಂತರ. ಮಗಳು ಕೆರೆ ಏರಿ ಅಥವಾ ತೋಪು ಇವೆರಡು ಜಾಗದಲ್ಲಿಯೇ ಇರುತ್ತಾಳೆ ಅಂತ ಗೊತ್ತಿದ್ದ ಕೇಶವ ಕೆರೆ ಬಳಿ ಮಾಧವಿ ಇಲ್ಲ ಅಂತ ತಿಳಿದು ಕೊಂಡು ತೋಪಿನಲ್ಲಿಯೇ ಇರ ಬೇಕೆಂದು ಕೂಗು ಹಾಕಿದ್ದ.   ಮುಖ ದುಮ್ಮಿಸಿಕೊಂಡೇ ಮನೆಯೊಳಗೆ ಬಂದ ಮಾಧವಿ ಯಾರೊಂದಿಗೂ ಮಾತನಾಡದೆ ಕುರ್ಚಿ ಮೇಲೆ ಕುಳಿತು ಕೊಂಡಳು. ಮಗಳ ಮುದ್ದು ಮುಖ ನೋಡಿದ ವೇದಾ “ಮಾಧವಿ, ಊಟಾ ಮಾಡು ಬಾರೆ” ಕಕ್ಕುಲಾತಿಯಿಂದ ಕರೆದಳು. ಮಧ್ಯಾಹ್ನವೂ ಊಟಾ ಮಾಡದೆ ಹಸಿದಿರುವ ಮಗಳ ಬಗ್ಗೆ ಅಂತಃಕರಣದಿಂದ ಕರೆದಳು. ಮಾಧವಿ ಅಮ್ಮನ ಮುಖವನ್ನು ದುರು ದುರು ನೋಡುತ್ತಾ ತಟ್ಟನೆ ಎದ್ದವಳೇ ರೂಮಿನತ್ತ ನಡೆದು ಧಡಾರನೇ ಬಾಗಿಲು ತೆರೆದು ಒಳನಡೆದು ಬಿಟ್ಟಳು.      “ನೋಡ್ರಿ, ನೋಡ್ರಿ ಅವಳು ಹೇಗಾಡ್ತಾ ಇದ್ದಾಳೆ. ಬೆಳಗ್ಗೆಯಿಂದಲೂ ಏನೂ ತಿಂದಿಲ್ಲ. ಮಧ್ಯಾಹ್ನವೂ ಊಟಾ ಮಾಡಿಲ್ಲ.ಇವಳು ಹೀಗೆ ಹಸ್ಕೊಂಡಿದ್ರೆ ಹೇಗ್ರಿ ನನ್ನ ಗಂಟಲಲ್ಲಿ ಅನ್ನ ಇಳಿಯುತ್ತೆ” ವೇದಾ ನೊಂದುಕೊಂಡಳು.  “ನೋಡು ವೇದಾ, ಅವಳೇನೇ ಹಟ ಮಾಡಿದ್ರೂ ನಾನೂ ಅವಳನ್ನ ಕಾಲೇಜಿಗೆ ಕಳಿಸಲ್ಲ.ಸ್ಕೂಟಿಯನ್ನೂ ಕೊಡಿಸಲ್ಲ.ಅವಳು ಅಷ್ಟು ದೂರ ಗಾಡಿ ಓಡಿಸಿಕೊಂಡು ಕಾಲೇಜಿಗೆ ಹೋಗೋದನ್ನ ನನ್ನ ಕೈಲಿ ನೋಡೋಕೆ ಆಗಲ್ಲ ತಿಳಿತಾ.ನಾಳೆ ಗಂಡಿನ ಕಡೆಯವರು ಬರ್ತಾ ಇದ್ದಾರೆ. ಅವರ ಮುಂದೆ ರಾಮಾಯಣ ಮಾಡದೆ ಮರ್ಯಾದೆಯಿಂದ ಇರೋ ಹಾಗೆ ನಿನ್ನ ಮಗಳಿಗೆ ಬುದ್ದಿಹೇಳು.” ನಿರ್ಧಾರಿತವಾಗಿ ಕೇಶವ ನುಡಿದನು.      “ನಿಮ್ಮ ಅಪ್ಪ ಮಗಳ ಮಧ್ಯೆ ನನ್ನ ಸಂಕಟ ಕೇಳೊರು ಯಾರು? ಅವಳುಕಾಲೇಜಿಗೆ ಹೋಕ್ತಿನಿ ಅಂತ ಹಟ ಮಾಡ್ತಾಳೆ, ನೀವು ಮದ್ವೆ ಮಾಡ್ತಿನಿ ಅಂತ ಹಟ ಮಾಡ್ತಿರಾ, ನಾನು ಯಾರ ಕಡೆಗೆ ಹೇಳಲಿ. ಏನಾದ್ರೂ ಮಾಡಿ ಕೊಳ್ಳಿ, ನನ್ನ ಮಾತನ್ನ ಯಾರು ಕೇಳುತ್ತಿರಿ” ಜೋರಾಗಿಯೇ ಗೊಣಗಾಡುತ್ತಾ ಅಡುಗೆ ಮನೆ ಹೊಕ್ಕಳು. ಮಾಧವಿ ತನ್ನ ಹಟ ಬಿಡಲಿಲ್ಲ. ಅಂದು ಯಾರೂ ಮನೆಯಲ್ಲಿ ಊಟಾ ಮಾಡಲಿಲ್ಲ.    ಬೆಳಗ್ಗೆಯಿಂದಲೆ ಕೇಶವ ಸಡಗರದಿಂದ ಓಡಾಡುತ್ತಿದ್ದ. ಗಂಡಿನವರು ಬೆಳಗ್ಗೆ ಹನ್ನೊಂದು ಗಂಟೆಗೆ ಬರುತ್ತಾರೆ ಎಂದು ತಿಳಿಸಿದ್ದರಿಂದ ವೇದಳಿಗೆ ಬಂದವರಿಗೆ ತಿಂಡಿ ಮಾಡಿ ಸಿದ್ದವಾಗಿರಲು ತಿಳಿಸಿದ. ಮಗಳ ಕೋಪವನ್ನು ಲೆಕ್ಕಕ್ಕೆ ತೆಗೆದು ಕೊಳ್ಳದೆ ಪಾಪ ಅದು ಮಗು ಅದಕ್ಕೇನು ತಿಳಿಯುತ್ತದೆ. ಕಾಲೇಜು, ಸ್ಕೂಟಿ ಅಂತ ಕುಣಿಯುತ್ತೆ, ಬಂದ ವರ ಒಪ್ಪಿಕೊಂಡರೆ  ಮದುವೆಯಾಗಿ ಅವನ ಪ್ರೀತಿಯಲ್ಲಿ ಎಲ್ಲವನ್ನು ಮರೆಯುತ್ತಾಳೆ. ನಮಗೆ ತಾನೇ ಯಾರಿದ್ದಾರೆ, ಇರುವ ಒಬ್ಬಳೆ ಮಗಳು ಓದು, ಕಾಲೇಜು ಅಂತ ಯಾಕೆ ಕಷ್ಟ ಪಡ ಬೇಕು ಅನ್ನೋವ ಧೋರಣೆಯಲ್ಲಿ ಕೇಶವನಿದ್ದ.ವೇದಳಿಗೂ ಗಂಡನ ರೀತಿ ಸರಿ ಎನಿಸಿದರೂ ಮಾಧವಿಗೆ ಮದುವೆ ಇಷ್ಟವಿಲ್ಲವಿರುವುದು, ಅವಳಿಗೆ ಮುಂದೆ ಓದಲು ಆಸೆ ಇರುವುದು, ಬಸ್ಸಿನ ಸೌಕರ್ಯ ಇಲ್ಲದಿರುವ ಈ ಊರಿನಿಂದ ಪ್ರತಿ ದಿನ ಸ್ಕೂಟಿಯಲ್ಲಿ ಕಾಲೇಜಿಗೆ ಹೋಗಲು ಮಗಳು ಬಯಸಿರುವುದು ಗೊತ್ತಿದ್ದ ವೇದ ಮಗಳ ಮನಸ್ಸನ್ನೂ ನೋಯಿಸಲಾರಳು. ಗಂಡನನ್ನು ಎದಿರು ಹಾಕಿಕೊಳ್ಳಲಾರಳು. ಇಬ್ಬರ ಮಧ್ಯೆ ಯಾರಿಗೂ ಹೇಳಲಾರದೆ ಒದ್ದಾಡಿ ಹೋಗುತ್ತಿದ್ದಾಳೆ.    ಅಮ್ಮನ ಬಲವಂತಕ್ಕೆ ಗಂಡಿನ ಮುಂದೆ ಕುಳಿತಿದ್ದ ಮಾಧವಿಯ ಮುದ್ದು ಮುಖಕ್ಕೆ ಮದುವೆಯ ಗಂಡು ಕ್ಲೀನ್ ಬೈಲ್ಡ್ ಆಗಿಬಿಟ್ಟಿದ್ದ. ನಾಳೆನೇ  ಮದ್ವೆ  ಅಂದರೂ ತಾಳಿ ಕಟ್ಟೊಕೆ ಸಿದ್ದವಾಗಿಬಿಟ್ಟ. ಆದರೆ ಮಾಧವಿ ಮಾತ್ರಾ ಕತ್ತೆತ್ತಿಯೂ ಹುಡುಗನತ್ತ ನೋಡಿರಲಿಲ್ಲ.     ಹುಡುಗ ತಂದೆ ” ಏನಮ್ಮ ನಮ್ಮ ಹುಡುಗ ಒಪ್ಪಿಗೆಯೇ ನಿನಗೆ, ಈಗ್ಲೇ ಸರಿಯಾಗಿ ನೋಡಿಕೊಂಡು ಬಿಡು, ಆಮೇಲೆ ನೋಡಿಲ್ಲ ಅಂತ  ಹೇಳಬೇಡ” ಕತ್ತು ಬಗ್ಗಿಸಿ ಕುಳಿತಿದ್ದ ಮಾಧವಿಯನ್ನು ಕೇಳಿದರು.    ಆಗಾ ಮಾಧವಿ ತಟ್ಟನೆ ” ಒಪ್ಗೆ ಇಲ್ಲ. ನನಗೆ ಮದ್ವೆ ಆಗೋಕೆ ಇಷ್ಟ ಇಲ್ಲ. ನಮ್ಮ ಅಪ್ಪನ ಬಲವಂತಕ್ಕೆ ಇಲ್ಲಿ ಕೂತಿದೀನಿ” ಮುಖಕ್ಕೆ ಹೊಡೆದ ಹಾಗೆ ಹೇಳಿ ಬಿಟ್ಟಳು. ಮನದೋಳಗಿನ ನಿರಾಶೆ, ಆಕ್ರೋಷ ತರಿಸಿ ಮಾಧವಿಗೆ ಹಾಗೆ ನುಡಿಯುವಂತೆ ಮಾಡಿ ಬಿಟ್ಟಿತ್ತು. ಈ ಅನಿರೀಕ್ಷಿತ ಘಟನೆಯಿಂದ ತಬ್ಬಿಬ್ಬಾದ ಗಂಡಿನವರು ದುರ್ದಾನ ತೆಗೆದುಕೊಂಡವರಂತೆ ಪೆಚ್ಚಾಗಿ ಬಿಟ್ಟರು.     ಹುಡುಗನ ತಂದೆ ಎದ್ದು ನಿಂತು ಕೇಶವನತ್ತ ತಿರುಗಿ ” ಅಲ್ಲ ಸ್ವಾಮಿ, ಹುಡುಗನನ್ನು ಕರೆಸುವ ಮುಂಚೆ ನಿಮ್ಮ ಮಗಳ ಒಪ್ಪಿಗೆ ತೆಗೆದು ಕೊಳ್ಳ ಬಾರದಿತ್ತೆ. ಹುಡುಗಿಗೆ ಮದ್ವೆ ಇಷ್ಟ ಇಲ್ಲ ಅಂದ ಮೇಲೆ ಹುಡುಗಿ ನೋಡಿ ಏನು ಪ್ರಯೋಜನ, ನಮ್ಮ ಸಮಯವೂ ಹಾಳೂ, ನಿಮ್ಮ ಸಮಯವೂ ಹಾಳೂ, ನಾವಿನ್ನೂ ಹೊರಡುತ್ತೆವೆ, ಮೊದ್ಲೂ ನಿಮ್ಮ ಹುಡುಗಿಗೆ ನಡವಳಿಕೆ ಕಲಿಸಿ, ಆಮೇಲೆ ಮದುವೆ ಮಾಡುವಿರಂತೆ” ಅಂತ ವ್ಯಂಗ್ಯವಾಗಿ ನುಡಿದು ನಡೀರಿ ಹೋಗೋಣ ಅಂತ ತನ್ನವರೊಂದಿಗೆ ಹೊರಟು ನಿಂತರು.    ” ದಯವಿಟ್ಟು ಕ್ಷಮಿಸಿ ಸ್ವಾಮಿ, ನನ್ನ ಮಗಳು ಇನ್ನೂ ಚಿಕ್ಕವಳು. ಏನೋ ಗೊತ್ತಾಗದೆ ಮಾತಾಡಿ ಬಿಟ್ಟಿದ್ದಾಳೆ. ನಾನು ಆಮೇಲೆ ಅವಳಿಗೆ ಬುದ್ದಿ ಹೇಳುತ್ತೆನೆ. ನೀವು ಬೇಸರ ಮಾಡಿ ಕೊಳ್ಳ ಬೇಡಿ. ಎಲ್ಲಾ ಹೆಣ್ಣು ಮಕ್ಕಳು ಮೊದ್ಲು ಮೊದ್ಲು  ಮದ್ವೆ ಬೇಡಾ ಅಂತಾ ತಾನೇ ಹೇಳೊದು, ಅವಕ್ಕೇನು ಗೊತ್ತಾಗುತ್ತೆ. ನಾವು ಕೊಂಚ ತಿಳಿಸಿ ಹೇಳಿದ್ರೆ ಒಪ್ಪಿಕೊಂಡು ಮದ್ವೆ ಆಗಿ ಸಂಸಾರ ಮಾಡ್ತರೆ. ದಯವಿಟ್ಟು ನೀವು ಕುಳಿತು ಕೊಳ್ಳಿ. ಅನುನಯದಿಂದ ಕೇಶವ ಅವರ ಕೋಪ ಇಳಿಸಲು ನೋಡಿದ.    ಅದ್ಯಾವುದಕ್ಕೂ ಜಗ್ಗದ ಅವರು “ಯಜಮಾನ್ರೆ , ಬಲವಂತಾಗಿ ನಿಮ್ಮ ಮಗಳನ್ನ ಸೊಸೆ ಮಾಡಿಕೊಳ್ಳುವ ದರ್ದು ನಮಗೇನು ಇಲ್ಲ. ನನ್ನ ಮಗನಿಗೆ ಹೆಣ್ಣುಕೊಡಲು ಕ್ಯೂ ನಿಂತಿದ್ದಾರೆ, ಹೆಚ್ಚು ಮಾತು ಬೇಡಾ, ನಾವಿನ್ನು ಬರ್ತಿವಿ” ಅಂದವರೆ  ಮತ್ಯಾವುದಕ್ಕೂ ಅವಕಾಶ ಕೊಡದೆ ತಮ್ಮವರನ್ನು ಏಳಿಸಿಕೊಂಡು ಹೋಗಿಯೇ ಬಿಟ್ಟಾಗ ಅವಮಾನ ತಾಳದೆ ಕೇಶವ ಕುಸಿದು ಕುಳಿತರೆ, ವೇದಾ ಬಾಯಿಗೆ ಸೆರಗುಹಚ್ಚಿ ಬಿಕ್ಕಳಿಸಿದಳು.   ಮಾಧವಿ ಮಾತ್ರ ಏನೂ ಆಗದವಳಂತೆ ಎದ್ದು ರೂಮಿನೊಳಗೆ ಹೋಗಿ ಬಟ್ಟೆ ಬದಲಿಸಿ ನೈಟ್ ಡ್ರಸ್ ಧರಿಸಿದಳು. ಗಂಡಿನವರು ಹೋಗಿದ್ದು ಒಳ್ಳೆಯದೇ ಆಯಿತು ಎಂದು ಕೊಂಡು ಹಾಯಾಗಿ ಹಾಸಿಗೆ ಮೇಲೆ ಉರುಳಿಕೊಂಡಳು. ಅಲ್ಲಿವರೆಗೂ ಕಾಡದಿದ್ದ ಹಸಿವು ಈಗಾ ಧುತ್ತನೆ ಕಾಡಿತು,  ಹೊಟ್ಟೆ ಹಸಿವು ಹೆಚ್ಚಾಗಿ ನೆನ್ನೆಯಿಂದ ತಿನ್ನದೆ ಇದ್ದದ್ದು ಈಗಾ ಕಾಡಲು ತೊಡಗಿದಾಗ ಎದ್ದು ಅಡುಗೆ ಮನೆಗೆ ಹೋಗಿ ಗಂಡಿನವರಿಗೆ ಮಾಡಿದ್ದ ಉಪ್ಪಿಟ್ಟು, ಕೇಸರಿಭಾತನ್ನು ತಟ್ಟೆಗೆ ತುಂಬಿಕೊಂಡು  ಹಾಲಿಗೆ ಬಂದು ಕುಳಿತು ಗಭ ಗಭನೆ ತಿನ್ನ ತೊಡಗಿದಳು.   ಗಂಡಿನವರಿಗೆ ಅವಮಾನ ಮಾಡಿ ಏನೂ ಆಗದವಳಂತೆ ಅವರಿಗಾಗಿ ಮಾಡಿದ್ದ ತಿಂಡಿಯನ್ನು ತಿನ್ನುತ್ತಿರುವ ಮಗಳನ್ನು ನೋಡಿ ಕೇಶವನಿಗೆ ಪಿತ್ತ ಕೆರಳಿತು.ಅಷ್ಟು ಒಳ್ಳೆಯ ಸಂಬಂಧವನ್ನು ತಾನೇ ಕೈಯಾರೆ ದೂರ ತಳ್ಳಿದ ಮಗಳ ಮೇಲೆ  ಮೊದಲೆ ಕ್ರೋಧ ಉಕ್ಕಿತ್ತು. ಈಗಾ ಆ ಕ್ರೋಧ ಮತ್ತಷ್ಟು ಹೆಚ್ಚಾಗಿ ಆವೇಶದಿಂದ ಮಗಳ ಬಳಿ ಬಂದವನೇ “ಹಾಳಾದವಳೆ ನಮ್ಮ ಹೊಟ್ಟೆ ಹುರಿಸೋಕೆ ಹುಟ್ಟಿದ್ದಿಯಾ. ಒಬ್ಳೆ ಮಗಳು ಅಂತ ಮುದ್ದು ಮಾಡಿ ಬೆಳೆಸಿದ್ದಕ್ಕೆ  ಒಳ್ಳೆ ಉಡುಗರೆ ಕೊಟ್ಟು ಬಿಟ್ಟೆ ನೀನು,ಯಾಕಾದ್ರೂ ನನ್ನ ಮಗಳಾಗಿ ಹುಟ್ಟಿದ್ಯೆ” ಎಂದು ಬೈಯುತ್ತಾ ಅವಳು ತಿನ್ನುತ್ತಿದ್ದ ತಟ್ಟೆಯನ್ನು ಕಿತ್ತೆಸೆದು ಮಗಳ ಬೆನ್ನಿಗೆ ದಪ ದಪನೇ ಗುದ್ದಿದ.   ಅಪ್ಪನ ಈ ಅನಿರೀಕ್ಷಿತ ಧಾಳಿಯಿಂದ ಕಂಗೆಟ್ಟು ಮಾಧವಿ ಜೋರಾಗಿ ಅಳತೊಡಗಿದಳು. ಅಪ್ಪನ ಹೊಡೆತ ಇದೇ ಮೊದಲು, ಈ ಆವೇಶ ರೋಷವೂ ಅವಳು ಕಂಡದ್ದು ಇದೇ ಮೊದಲು. ದಿಗ್ಭ್ರಾಂತಳಾಗಿ ಹೋದಳು ಮಾಧವಿ. ಅಪ್ಪ ಕೊಟ್ಟ ಏಟಿಗಿಂತ ಮನಸ್ಸಿಗೆ ನೋವಾಗಿದ್ದು ಅವನ ಮಾತುಗಳಿಂದ. ಮತ್ತಷ್ಟು ಹೊಡೆಯುವ ಉಮೇದಿನಲ್ಲಿದ್ದ ಕೇಶವನನ್ನು ತಡೆಯುತ್ತಾ ವೇದಾ “ಏನಾಯ್ತು ನಿಮಗೆ, ಯಾಕೀಗೆ ಆಡ್ತಾ ಇದ್ದಿರಾ, ಅವಳಂತೂ ಚಿಕ್ಕವಳು, ಗೊತ್ತಾಗದೆ ಏನೋ ಮಾತಾಡಿ ಬಿಟ್ಟಳು. ಅದನ್ನೆ  ಆ ಗಂಡಿನವರು ದೊಡ್ಡದು ಮಾಡಿ ಬಿಟ್ಟರು. ಅಂಥ ಮನೆಗೆ ಮಗಳನ್ನು ಕೊಟ್ಟರೆ ಮುಂದೆ ಬಾಳಿಸುತ್ತಾರಾ, ಅವರ ನಿಜವಾದ ಬಣ್ಣ ಈಗ್ಲೆ ಗೊತ್ತಾಗಿದ್ದು ಒಳ್ಳೆಯದಾಯ್ತು. ನೀವು ಅದಕ್ಕಾಗಿ ಮಗೂನಾ   ಹೊಡಿಬೇಡಿ, ನನ್ನಾಣೆ” ಅನ್ನುತ್ತಾ ಬಂದು ಮಗಳನ್ನು ರಕ್ಷಿಸಿಕೊಂಡಳು. ಪತ್ನಿಯ ವಿರೋಧ ಕಂಡು ಹಿಮ್ಮೆಟ್ಟಿದ ಕೇಸವ ತಪ್ತನಾಗಿ “ಹಾಳಾಗಿ ಹೋಗಿ ಇಬ್ಬರೂ” ಅಂತ ಪೂತ್ಕರಿಸಿ ಹೊರನಡೆದು ಬಿಟ್ಟ.  “ಮಾಧವಿ, ನೀನ್ಯಾಕೆ ಗಂಡಿನವರ ಮುಂದೆ ಅಂಗೆಲ್ಲ ಮಾತಾಡಿದೆ. ನಿಮ್ಮಪ್ಪ ನೋಡು

ಅಬ್ಬರವಿಳಿದಾಗ Read Post »

You cannot copy content of this page

Scroll to Top