ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ಅನಿಸಿಕೆ

ಬರೆಯುವ ಕಷ್ಟ ಮತ್ತು ಬರೆಯದೇ ಇರುವ ಕಷ್ಟ ರಾಮಸ್ವಾಮಿ ಡಿ.ಎಸ್. ಬರೆಯುವ ಕಷ್ಟ ಮತ್ತು ಬರೆಯದೇ ಇರುವ ಕಷ್ಟ . . . . ‘ನಾನೇಕೆ ಬರೆಯುತ್ತೇನೆ?’ ಎನ್ನುವ ಪ್ರಶ್ನೆಗೆ ಉತ್ತರ ಕೊಡುವುದು ಎಣಿಸಿದಷ್ಟು ಸುಲಭವಲ್ಲವಲ್ಲವೆಂಬುದು ಎಲ್ಲ ಬರಹಗಾರರಿಗೂ ಅರಿವಾಗುವುದೇ ಅವರು ಇಂಥ ಪ್ರಶ್ನೆಗೆ ಉತ್ತರ ಕೊಡಲು ಕೂತಾಗ ಮಾತ್ರ! ಹೇಗೆ ಬರೆದರೆ ತನ್ನ ಬರಹಗಳಿಗೂ ಪತ್ರಿಕೆಗಳಲ್ಲಿ ಒಂದಿಷ್ಟು ಜಾಗ ಸಿಕ್ಕಬಹುದೆನ್ನುವ ಯೋಚನೆಯಲ್ಲೇ ಬರೆಯುತ್ತಿದ್ದ ದಿನಗಳು ಹೋಗಿ ಅನ್ನಿಸಿದ್ದೆಲ್ಲವನ್ನೂ ಫೇಸ್ಬುಕ್ಕಲ್ಲೋ ವಾಟ್ಸಪ್ಪಿನ ಗುಂಪಲ್ಲೋ ಬರೆದು ಬಿಸಾಕುತ್ತಿರುವ ಈ ಹೊತ್ತಿನ ಬರಹಗಾರ ಹೊಳೆದದ್ದನ್ನು ಬರೆಯುವದಕ್ಕಿಂತಲೂ ಅನ್ಯರನ್ನು ಮೆಚ್ಚಿಸಲು ಬರಹದ ಹಿಂದೆ ಬಿದ್ದ ಅಕ್ಷರ ಬೇಟೆಗಾರನ ಹಾಗೆ ನನಗೆ ಕಾಣುತ್ತಿದ್ದಾನೆ. ಇದರ ಜೊತೆಗೇ ನಾವು ಮೆಚ್ಚಿದ ಹಿರಿಯ ಬರಹಗಾರರನ್ನು ಕೇಳಹೋದರೆ ಅವರೂ ನಮ್ಮದೇ ಗೊಂದಲದಲ್ಲಿ ಬಿದ್ದವರ ಹಾಗೇ ಮಾತಾಡ ತೊಡಗುತ್ತಾರೆ. ಜೊತೆಗೇ ಇತರ ಮಾಧ್ಯಮಗಳಲ್ಲಿ ಸಿಕ್ಕಾಪಟ್ಟೆ ಮಿಂಚುತ್ತಿರುವ ತಮ್ಮ ಸಮಕಾಲೀನರ ಬಗ್ಗೆ ಫೇಸ್ಬುಕ್ಕಲ್ಲಿ ಪಟ ಹಾಕಿ ಗಂಟೆಯಲ್ಲಿ ಸಾವಿರ ಲೈಕು ಪಡೆದವರ ಬಗ್ಗೆ ಕೊಂಚ ಹೊಟ್ಟೆಕಿಚ್ಚಿನ ಮಾತೇ ಸೇರಿಸುತ್ತಾರೆ. ಹೇಗೆ ಹೇಗೆ ಬರೆಯಬೇಕೆಂದು ಹೇಳುವವರ ಹಿಂದೆ ಅವರು ಮೆಚ್ಚಿಕೊಂಡ ಬರಹಗಳ ಹಿನ್ನೆಲೆ ಇದ್ದೇ ಇರುತ್ತದೆ. ಆದರೆ ಸದ್ಯೋವರ್ತಮಾನದ ತವಕ ತಲ್ಲಣಗಳನ್ನು ‘ಹೀಗೇ’ ಬರೆಸುವುದರಿಂದ ಹಿಡಿದಿಡುವುದು ಸಾಧ್ಯವೇ ಎನ್ನುವುದು ಇಲ್ಲಿ ಪ್ರಶ್ನೆ. ನಮ್ಮ ತಲೆಮಾರಿಗೆ ಬರಹದ ಮಾಧ್ಯಮವೇ ಮೊದಲ ಸಮಸ್ಯೆಯಾಗಿದೆ. ವಿವಿಧ ಕಾಲಘಟ್ಟಗಳಲ್ಲಿ ಉಜ್ವಲವಾಗಿ ಬೆಳಗುತ್ತಿದ್ದ ಸಾಹಿತ್ಯ ಪ್ರಕಾರಗಳು ಆಯಾ ಕಾಲದ ಲೇಖಕರ/ಕವಿಗಳ ಪಾಲಿಗೆ ವರದಾನವಾಗಿದ್ದವು. ಆದರೆ ಯಾವುದೇ ಚಳುವಳಿಗಳ ಹಂಗಿಲ್ಲದ ಆದರೆ ಎಲ್ಲೆಲ್ಲೂ ಅತೃಪ್ತಿಗಳೇ ತಾಂಡವವಾಡುತ್ತಿರುವ ಈ ದಿನಗಳಲ್ಲಿ ಎಲ್ಲ ಕ್ಷೇತ್ರಗಳಂತೆ ಕಾವ್ಯಕ್ಷೇತ್ರವನ್ನೂ ‘ವೇಗ’ ಮತ್ತು ‘ಸ್ಪರ್ಧೆ’ಗಳೇ ಆಳುತ್ತಿವೆ. ಮೊದಲ ಸಂಕಲನದಲ್ಲಿ ಹುಬ್ಬೇರಿಸುವಂತೆ ಬರೆದವರೆಲ್ಲ ಏಕೋ ಎರಡನೆಯ ಸಂಕಲನ ತರುವ ಹೊತ್ತಿಗೆ ಮತ್ತದೇ ಸವೆದ ಜಾಡುಗಳಲ್ಲಿ ತಮ್ಮ ರೂಪಕ, ಪ್ರತಿಮೆಗಳನ್ನು ನೆಡಲು ತಹತಹಿಸುತ್ತಿರುವುದರ ಕಾರಣಗಳೂ ಸ್ಪಷ್ಟವಾಗುತ್ತಿವೆ. ಸರಿಯಾಗಿ ಉಸಿರಾಡಲೂ ಪುರುಸೊತ್ತಿಲ್ಲದ ದಿನಗಳಲ್ಲಿ ‘ಟೈಮ್ ಮ್ಯಾನೇಜ್’ ಮಾಡುತ್ತಿರುವ ನಾವೆಲ್ಲ ಕಛೇರಿಯ ಕಡತಗಳಲ್ಲಿ, ಆನ್ ಲೈನ್ಗಂಟಿದ ಮೋಹದ ಬಲೆಗಳಲ್ಲಿ ನಮ್ಮನ್ನೇ ತೆತ್ತುಕೊಳ್ಳುತ್ತಿದ್ದೇವೆ. ಈ ನಡುವೆ ಓದು ಬರಹ ತಿಳಿದವರೆಲ್ಲ ಅವಸರದಲ್ಲಿ ಬರೆದೋ, ಅನ್ಯರದ್ದನ್ನು ಕದ್ದು ತಮ್ಮದೆಂದು ಹಾಕಿ ಕೊಳ್ಳುವ ಫೇಸ್ಬುಕ್ಕಿನಲ್ಲಂತೂ ಬರಹಗಳಿಗಿಂತಲೂ ಸ್ಟೆಟಸ್ಸಿನ ಪಟಗಳೇ ಭಾರೀ ಸದ್ದು ಮಾಡುತ್ತಿವೆ.  ಏಕಾಂತದಲ್ಲಿ ಮತ್ತು ಶಾಂತ ಮನಸ್ಥಿತಿಯಲ್ಲಿ ಸೃಜಿಸಬೇಕಾದ ಕಾವ್ಯವೂ ಕೂಡ ತಕ್ಷಣದ ಕ್ಷಿಪ್ರ ‘ದರ್ಶಿನಿ ಸಂಸ್ಕೃತಿ’ಯಂತಾಗುತ್ತಿದ್ದರೂ, ಬರೆಯಲೇಬೇಕೆಂದು ಹಟತೊಟ್ಟವರಿಗೆ, ಸಾಹಿತ್ಯ ರಚನೆ ಎಂಬುದು ಘನಸ್ತಿಕೆಯ ಕೆಲಸವೆಂದು ನಂಬಿದವರಿಗೆ  ಈ ಬಗೆಯ ಚಟುವಟಿಕೆಗಳಿಂದಾದ ಪರಿಣಾಮ ಘೋರವಾದುದು. ಕವಿತೆಗಳ ಬಗ್ಗೆ ಚರ್ಚಿಸುವವರಿಲ್ಲ ಎಂಬ ಮಾತು ಆಗೀಗ ತೂರಿ ಬರುತ್ತಲೇ ಇರುತ್ತದೆ. ಈಗ ಬರೆಯುತ್ತಿರುವವರ ಆತ್ಮ ವಿಶ್ವಾಸ ಕೂಡ ಪ್ರಶ್ನಾರ್ಹವೇ ಆಗಿದೆ. ಹಾಗೆಂದು ಸದ್ಯ ಬರೆಯುತ್ತಿರುವವರೆಲ್ಲ ತಮ್ಮ ಸಮಕಾಲೀನರನ್ನು ಓದಿಕೊಳ್ಳುತ್ತಿದ್ದಾರೆಯೇ ಎನ್ನುವುದೂ ಇಲ್ಲಿ ಬಹು ಮುಖ್ಯ ವಿಚಾರವಾಗಿದೆ. ಸಣ್ಣ ಪುಟ್ಟ ವಿಷಯಗಳಿಗೂ ಒಳಗಿರುವ ‘ಗಿಲ್ಟ್’ನ್ನು ತಟ್ಟೆಬ್ಬಿಸುವ ವ್ಯವಸ್ಥೆಯಲ್ಲಿ ಆತ್ಮ ವಿಶ್ವಾಸ ಶ್ವಾಸ ಕಳೆದುಕೊಳ್ಳುವುದೂ ಮಾಮೂಲಿ ಖಾಯಿಲೆಯೇ ಆಗುತ್ತಿದೆ. ಆದರೂ ನಮ್ಮ ಪುಣ್ಯಕ್ಕೆ ಸಾಕಷ್ಟು ಕಿರುಪತ್ರಿಕೆಗಳಲ್ಲಿ ಬ್ಲಾಗುಗಳಲ್ಲಿ ಈ ಕೆಲಸ ನಡೆಯುತ್ತಿರುವುದನ್ನು ನಾವು ಗಮನಿಸಿಲೇ ಬೇಕು. ಈವತ್ತು ಬರೆಯುತ್ತಿರುವವರೆಲ್ಲ ತಾವು ನಿಜಕ್ಕೂ ಮೆಚ್ಚಿಕೊಂಡಿದ್ದರ ಬಗ್ಗೆಯೇ ಬರೆಯುತ್ತಿದ್ದಾರೆ. ಇನ್ನು ಈ ಹೊತ್ತಿನ ಪದ್ಯಗಳನ್ನು ಹಾಡಲು ಸಾಧ್ಯವಿಲ್ಲವಲ್ಲ ಎಂಬ ಕ್ಯಾತೆಯ ಮಾತು ಆಗೀಗ ಪ್ರತಿಧ್ವನಿಸುತ್ತಲೇ ಇರುತ್ತದೆ. ಆದರೆ ಕವಿತೆ ಹಾಡಾದಾಗ ರಾಗ ಸಂಯೋಜನೆಯಷ್ಟೇ ಮುಖ್ಯವಾಗುತ್ತದೆ. ಅಡಿಗರ ‘ಮೋಹನ ಮುರಳಿ’ ಓದಿದಾಗ ದಕ್ಕುವ ತಾತ್ವಿಕ ದರ್ಶನ ಅದನ್ನೇ ಭಾವಗೀತೆಯಾಗಿ ಕೇಳಿದಾಗ ಮೈಸೂರು ಅನಂತ ಸ್ವಾಮಿಗಳು ವಿರಹಗೀತೆಯೊಂದಕ್ಕೆ ರಾಗ ಜೋಡಿಸಿದಂತೆಯೇ  ಕೇಳಿಸುತ್ತದೆ. ಆಕಾಶವಾಣಿ ಕೆಂದ್ರಗಳ ‘ತಿಂಗಳ ಹೊಸ ಹಾಡು’ ನವಸುಮಗಳ ಕೊಡುಗೆ ಎಂಬುದು ನಿತ್ಯ ರೇಡಿಯೋ ಕೇಳುವವರಿಗಷ್ಟೇ ಗೊತ್ತಿರುವ ಸಂಗತಿ. ಅಂತೆಯೇ ಸುಗಮ ಸಂಗೀತದ ಕ್ಯಾಸೆಟ್ಟುಗಳಿಗೂ ನಮ್ಮ ಯುವಕವಿಗಳ ಕೊಡುಗೆಯೂ ಇದೆ. ಭಾಷೆ ಬದಲಾಗಿದೆ. ಬದುಕಿನ ರೀತಿ ಬದಲಾಗಿದೆ. ಹಾಗೆಯೇ ಇವೆರಡರ ನಡುವೆ ಹುಟ್ಟಿ ಉಳಿಯಬೇಕಾದ ಸಾಹಿತ್ಯಕ-ಸಾಂಸ್ಕೃತಿಕ ಸಂಗತಿಗಳೂ ಬದಲಾಗುತ್ತಿವೆ. ಆಧುನಿಕ ಸಂದರ್ಭದಲ್ಲಿ ಸಾಹಿತ್ಯದ ಓಟ ಎತ್ತಕಡೆಗಿದೆ ಎಂದು ಗಮನಿಸಬೇಕಾದ ಮೀಮಾಂಸಕರು ತಮ್ಮ ಕರ್ತವ್ಯವನ್ನೇ ಮರೆತು ಓಟಕ್ಕೊಂದು ದಿಕ್ಕು ತೋರಿಸುವ ಸಲುವಾಗಿ ಮತ್ತದೇ ಪರಂಪರೆಯೆಂಬ ಕಾಗದದ ಹುಲಿಯನ್ನು ನಮ್ಮ ಮುಂದಕ್ಕೆ ಚಾಚುತ್ತಿದ್ದಾರೆ. ಅಂಥವರೇ ಕಾವ್ಯ ಈ ಕಾಲದ ಮಾಧ್ಯಮವಲ್ಲವೆಂದೂ ಘೋಷಿಸಿಯೂ ಬಿಡುತ್ತಾರೆ. ಯಾವುದನ್ನೂ ಪರಿಪೂರ್ಣ ಅರಿಯಲು ಬಿಡದ ಆದರೆ, ಎಲ್ಲವನ್ನೂ ತಿಳಿದಿರಲೇಬೇಕೆಂದು ಒತ್ತಾಯಿಸುವ ನಮ್ಮ ಶಿಕ್ಷಣ ವ್ಯವಸ್ಥೆಯೇ ‘ಕಿಚಡಿ’ಯಾಗಿರುವುದನ್ನು ಅವಸರದಲ್ಲಿ ಮರೆತೂ ಬಿಡುತ್ತಾರೆ. ಜೀ.ಪಿ.ರಾಜರತ್ನಂ, ಪಂಜೆ, ಹೊಯ್ಸಳರೇ ಗೊತ್ತಿಲ್ಲದ ಪೀಳಿಗೆ ಹೇಗೆ ತಾನೆ ಸಾಹಿತ್ಯ ಚರಿತ್ರೆಯನ್ನು ಅಭ್ಯಸಿಸಿ ಬರೆಯಲು ಸಾಧ್ಯ? ಜ್ಞಾನವೆಂಬುದು ಆಳವಾಗಿ ಉಳಿಯದೇ ಬರಿಯ ಮೇಲ್ನೋಟದ ತಿಳುವಳಿಕೆಯಾಗುತ್ತಿರುವ ಹೊತ್ತಲ್ಲಿ ಹೊಸಕವಿಗಳು ಕಟ್ಟಿಕೊಡುತ್ತಿರುವ ರೂಪಕ, ಪ್ರತಿಮೆಗಳು ಅವರ ಕವಿಮನದ ವ್ಯುತ್ಪತ್ತಿಯಿಂದಲೇ ಮೂಡಿದವೆಂಬುದನ್ನು ಏಕೋ ಯಾರೂ ಗಮನಿಸುತ್ತಿಲ್ಲ. ಹೆಸರಾಂತ ಪತ್ರಿಕೆಗಳು ಕಂಡರಿಯದ ಮೊತ್ತದ ನಗದು ಬಹುಮಾನಗಳನ್ನು ಕಥಾ ಸ್ಪರ್ಧೆಗಳಿಗೆ ಕೊಡುತ್ತಿವೆ, ನಿಜ. ದುರಂತವೆಂದರೆ ಬಹುಮಾನ ಗಿಟ್ಟಿಸುತ್ತಿರುವವರೆಲ್ಲ ಅದೇ ಅದೇ ಕತೆಗಾರರು. ಬಿಗಿ ಬಂಧ, ಪರಂಪರೆ ತುಂಬಿದ ಸಾಂದ್ರತೆ, ಸಾಂಸ್ಕೃತಿಕ ತಲ್ಲಣಗಳ ಮೆರವಣಿಗೆ ಎಂಬೆಲ್ಲ ತೀರ್ಪುಗಾರರ ಷರಾ ಪಡೆದ ಈ ಕತೆಗಾರರು ಸುತ್ತಿದಲ್ಲೇ ಸುತ್ತುತ್ತಿದ್ದಾರೆ. ಹೇಳಿದುದನ್ನೇ ಮತ್ತೆ ಮತ್ತೆ ತಂತ್ರ ಪೂರ್ವಕವಾಗಿ ಪಠಿಸುತ್ತಿದ್ದಾರೆ. ಏಕೆಂದರೆ ಪತ್ರಿಕೆಗಳು ತೀರ್ಪುಗಾರರೆಂದು ನೇಮಿಸಿದವರೆಲ್ಲ ಈಗಾಗಲೇ ಈ ರಂಗದಿಂದ ಕಡ್ಡಾಯ ನಿವೃತ್ತಿ ಪಡೆಯಬೇಕಾಗಿದ್ದೂ ಇನ್ನೂ ವಯಾಗ್ರ ಸೇವಿಸಿ ತಾವಿನ್ನೂ ಫಾರಂನಲ್ಲಿ ಇದ್ದೇವೆಂದು ಬೀಗುತ್ತಿರುವವರು. ಈ ಎಲ್ಲದರ ನಡುವೆ ಅಪವಾದವೆಂಬಂತೆ ಕ್ರೈಸ್ಟ್ ಕಾಲೇಜು, ಸಂಚಯ ಸಾಹಿತ್ಯ ಪತ್ರಿಕೆಯ ಸಾಹಿತ್ಯ ಸ್ಪರ್ಧೆಗಳು, ಸಾಹಿತ್ಯ ಅಕಾಡೆಮಿಯ ಕಮ್ಮಟಗಳು ಹೊಸಬರನ್ನು ಗುರುತಿಸಿವೆ, ಪೋಷಿಸಿವೆ ಮತ್ತು ಸಂರಕ್ಷಿಸಿವೆ. ಎಂ.ಎನ್.ಜಯಪ್ರಕಾಶ್, ವಿಭಾ ತಿರಕಪಡಿ, ಕಾ.ಸು.ರಾಮಚಂದ್ರ ಸತ್ತ ನಂತರವೂ ನಮಗೆ ಸಿಗುವ ಹಾಗೆ ಮಾಡಿವೆ. ಕಾವ್ಯ ಯಾವತ್ತೂ ಕೆಲವೇ ಜನರಿಗೆ ಬೇಕಾದದ್ದು. ಸಂಪೂರ್ಣ ಹಸಿದಿರುವವರಿಗೆ ಮತ್ತು ಪೂರ್ಣ ಹೊಟ್ಟೆ ತುಂಬಿದವರಿಗೆ-ಹಸಿವನ್ನು, ಅವಮಾನವನ್ನು ಕಾವ್ಯ ಮರೆಸಬಲ್ಲ ಶಕ್ತಿಯುಳ್ಳದ್ದು. ಹಾಗೆಯೇ ಮೆರೆಸಬಲ್ಲ ತಾಕತ್ತಿರುವಂಥದು. ಈ ಎರಡೂ ಅತಿಗಳ ನಡುವೆ ಇರುವ ಕಂದಕದೊಳಗೇ ಹೆಚ್ಚಿನ ಜನಸಮುದಾಯ ಇರುವುದರಿಂದ ಕಾವ್ಯ ಯಾವತ್ತೂ ಸಾಮಾನ್ಯರಿಗೆ ಸಹ್ಯವಾಗುವುದೇ ಇಲ್ಲ. ಹಾಗಾಗಿ ಕಾವ್ಯ ಈ ಕಾಲದ ಮಾಧ್ಯಮವಲ್ಲ ಎಂಬ ಹೇಳಿಕೆ ಅವಸರದ್ದಾಗುತ್ತದೆ, ರದ್ದಾಗುತ್ತದೆ. ನೆಲವೇ ಕಾಣದ ಹಾಗೆ ತಲೆ ಎತ್ತಿರುವ ಕಟ್ಟಡಗಳು, ಭೂಮಿಯಗೆದು ಅದಿರ ತರುವ ಕೆಲಸ ತಪ್ಪಿಸಿವೆ. ಹಗಲು ಇರುಳುಗಳ ವ್ಯತ್ಯಾಸವೇ ತಾಕದ ಹಾಗೆ ವಿಜೃಂಬಿಸುತ್ತಿರುವ ಬೆಳಕು ತನ್ನ ಮೂಲವನ್ನೇ ಮರೆಮಾಚಿ ವಂಚಿಸುತ್ತಿದೆ. ಲೋಹ ತಂದು ಇಷ್ಟ ದೇವತೆಯ ವಿಗ್ರಹಕ್ಕೆ ಒಗ್ಗಿಸುವ ಅಸಲು ಅಕ್ಕಸಾಲಿಯ ಗುಣ ನೆಲದ ಸ್ಪರ್ಶವೇ ಸಿಕ್ಕದಿರುವ ಹೊತ್ತಲ್ಲಿ, ಪರಿತಪಿಸುತ್ತಿದೆ. ಇದರ ಮೂಲ ಕಾರಣವಾದ ಬದುಕಿನ ವೇಗವನ್ನು ನಿಯಂತ್ರಿಸಲು ಸಾಧ್ಯವಿದೆಯೇ?  ಇದು ನಮ್ಮ ಮುಂದಿರುವ ಸವಾಲೆಂದರೆ ಹೌದು. ಇಲ್ಲವೆಂದರೆ ಇಲ್ಲ. ದೂರದಲ್ಲೆಲ್ಲೋ ಕೂತು ತಾಯ್ನೆಲದ ಬಗ್ಗೆ ಬರೆಯುವವರು, ಆತ್ಮ ವಂಚಿಸಿಕೊಂಡು ಮೌಲ್ಯಗಳ ಬಗ್ಗೆ ಕೊರೆಯುವವರು, ಸಂಸ್ಕೃತಿಯೆಂದರೆ ಕ್ಯಾಸೆಟ್ಟುಗಳ ಸಂಗೀತಕ್ಕೆ ಕೈ, ಕಾಲು ಕುಣಿಸುವವರು, ಅನ್ಯರ ಮೇಲಣ ದ್ವೇಷವನ್ನೇ ಸಂವೇದನೆಯೆಂದು ವಾದಿಸುವವರೂ ಇರುವ ಕಾಲದಲ್ಲಿ ಕಾವ್ಯದ ಶುದ್ಧತೆಯ ಕುರಿತು ಮಾತನಾಡುವುದೇ ವ್ಯಂಗ್ಯವಾಗುತ್ತದೆ. ಬರೆಯುವವರೆಂದರೆ ವಿಶ್ವ ವಿದ್ಯಾಲಯಗಳಲ್ಲಿ ಪಾಠಹೇಳುವವರೆನ್ನುವ ಹುಸಿಯನ್ನಳಿಸುವಂತೆ ಈ ಹೊತ್ತಿನ ಬರಹಗಾರರು ಜ್ಞಾನದ ಹಲವು ಸೆಲೆಗಳಿಂದ, ಜೀವನ ದರ್ಶನದ ಹಲವು ಸ್ತರಗಳಿಂದ ಬಂದವರಾಗಿದ್ದಾರೆನ್ನುವುದೇ ಅತಿ ಖುಷಿಯ ಸಂಗತಿಯಾಗಿದೆ. ಬಹು ವಿಸ್ತಾರವಾದ ಬಟಾಬಯಲಿನಲ್ಲಿ ಹಿಂದಿನವರಿಗೆ ಇದ್ದಂಥ ಸ್ಪಷ್ಟ ದಾರಿಗಳೂ, ಸಿದ್ಧಾಂತಗಳ ಗೋಜಲುಗಳೂ ಇಲ್ಲದ ಗಾಢ ಆತಂಕದ ಸನ್ನಿವೇಶದಲ್ಲಿ ಇವತ್ತಿನ ಕವಿ ಇದ್ದಾನೆ. ತೀರ ಯಾಂತ್ರಿಕವೂ, ಕೃತಕವೂ, ವೇಗವೂ ಆಗುತ್ತಿರುವ ನಿತ್ಯ ಬದುಕಿನ ಒತ್ತಡಗಳನ್ನು ಕಡಿಮೆ ಮಾಡಿಕೊಳ್ಳುವ ಸಲುವಾಗಿ ಓದು, ಬರಹ, ಚರ್ಚೆ ಅತ್ಯಗತ್ಯವೆಂದು ನಂಬಿದ್ದಾನೆ.ಅದು ಪತ್ರಿಕೆಗಳ ಅಂಕಣದ ಮೇಲಣ ಸಂವಾದವೋ, ಪರಸ್ಪರರ ಈ-ಮೇಲೋ, ಅಥವ ಬ್ಲಾಗೋ, ಎಸ್.ಎಂ.ಎಸ್ಸೋ, ತನ್ನ ಅನ್ನಿಸಿಕೆಗಳನ್ನು ಹಂಚಿಕೊಳ್ಳುತ್ತಲೇ ಇದ್ದಾನೆ. ಅದು ಬದುಕಿಗೆ ಕೊಂಚ ನೆಮ್ಮದಿಯನ್ನು ಕೊಡುತ್ತಿರುವುದರಿಂದ, ಬರೆಯದಿದ್ದರೆ ತಲೆ ಸಿಡಿದು ಹೋಳಾಗಬಹುದೆಂಬ ಭಯದಿಂದ, ಒತ್ತಡಗಳಿಂದ ಕೊಂಚಕಾಲವಾದರೂ ದೂರವಾಗುವ ಆಸೆಯಿಂದ, ತನ್ನ ಸುತ್ತಣ ಒತ್ತಡಗಳಿಗೇ ಕಾವ್ಯದ ಪೋಷಾಕು ತೊಡಿಸುತ್ತಿದ್ದಾನೆ. ಆದುದರಿಂದಲೇ ‘ಇದಮಿಥ್ಥಂ’ ಪಂಡಿತರಿಂದ ಮೂತಿಗಿಕ್ಕಿಸಿಕೊಳ್ಳುತ್ತಿದ್ದಾನೆ. ಹಾಗಾಗಿಯೇ ಇಂದು ಬರೆಯುವುದು ಕಷ್ಟವಾಗಿದೆ. ಬರೆಯದೇ ಇರುವುದು ಅದಕ್ಕಿಂತ ಹೆಚ್ಚಿನ ಯಾತನೆಗೆ ದೂಡುತ್ತಿದೆ. ಹೊರಬಂದ ಮಾತುಗಳಿಗೆ ಒಂದೆರೆಡಾದರೂ ಕಿವಿಗಳಿರಬಹುದೆಂಬ ಆಶಾವಾದದಲ್ಲಿ ಬರೆಯುತ್ತಿದ್ದಾನೆ. ಅಷ್ಟೆ! *********

ಅನಿಸಿಕೆ Read Post »

ಇತರೆ

ಪ್ರಸ್ತುತ

ಬಸವಣ್ಣನವರು ಉಮೇಶ ಮುನವಳ್ಳಿ ಶಿಕ್ಷಿತರಲ್ಲಿ ಅನೇಕರು ನಾವು ಬಸವಣ್ಣನವರನ್ನು ಕೇವಲ ಸಮಾಜ ಸುಧಾರಕ, ಕ್ರಾಂತಿಕಾರಿ, ದಾರ್ಶನಿಕ ಇದೇ ಪರಿಧಿಗೆ ಸೀಮಿತಗೊಳಿಸಿದ್ದೇವೆ. ಇದರಾಚೆ ಅವನನ್ನು ಕಂಡುಕೊಳ್ಳುವ ಒಳಗಣ್ಣಿನ ಕೊರತೆ ನಮ್ಮಲ್ಲಿ ಎದ್ದುಕಾಣುತ್ತದೆ. ಅದೇ ನಮ್ಮ ಗ್ರಾಮೀಣ ಜನಕ್ಕೆ ಬಸವಣ್ಣ ಒಬ್ಬ ದೇವ, ದೈವ, ಕೇಳಿದ್ದನ್ನು ಕೊಡುವ ಕಲ್ಪವೃಕ್ಷ! ಕೇವಲ ಶಬ್ದಗಳಲ್ಲಿ ಹಿಡಿದಿಡಲಾಗದ ‘ಅಗಮ್ಯ, ಅಗೋಚರ, ಅಪ್ರತಿಮ’ ವ್ಯಕ್ತಿತ್ವ ಅವನದು. ಅವನ ಆ ಘನ ವ್ಯಕ್ತಿತ್ವವನ್ನು ಒಳಗೊಳ್ಳದಷ್ಟು ಚಿಕ್ಕವಾದವೇ ನಮ್ಮ ಮನಸ್ಸಿನ ಪಾತ್ರೆಗಳು? ದೋಷ ನಮ್ಮ ಪಾತ್ರೆಯಲ್ಲಿದೆ. ಮೇಲಾಗಿ ಅವನನ್ನು ವಿಶ್ಲೇಷಿಸಿ ನಾವು ದೊಡ್ಡವರಾಗಹೊರಟಿದ್ದೇವೆ. ಅವನನ್ನು ಬಂಡವಾಳವಾಗಿಸಿಕೊಂಡು ಬದುಕುತ್ತಿದ್ದೇವೆ. ಯಾವಾಗಲೂ ಯಾವ ಮಹಾಪುರುಷನ ಆಶಯವು ಅದಾಗಿರುವುದಿಲ್ಲವೋ ಅದರ ತದ್ವಿರುದ್ಧದ ಕಾರ್ಯ ಅವನ ಅನುಯಾಯಿಗಳಿಂದ ನಡೆಯುತ್ತದೆ. ಬಸವಣ್ಣ, ‘ಲಿಂಗವನ್ನು ಪೂಜಿಸಿ ಲಿಂಗವೇ ಆದ’ ಮಹಾಮಹಿಮ. ಆದರೆ ‘ಎನಗಿಂತ ಕಿರಿಯರಿಲ್ಲ, ಶಿವಭಕ್ತರಿಗಿಂತ ಹಿರಿಯರಿಲ್ಲ’ ಎನ್ನುವ ಕಿಂಕರ ಭಾವ. ದೇಹವೇ ದೇವಾಲವಾದ ಪರಿ: “ಎನ್ನ ಕಾಲೇ ಕಂಬ, ದೇಹವೇ ದೇಗುಲ”. “ಅಂಬುದಿಯೊಳಗೆ ಬಿದ್ದ ಆಲಿಕಲ್ಲಂತೆ” ಜೀವ ಶಿವರಾದ ಪರಿ. “ಭಿನ್ನಭಾವವರಿಯದೇ ‘ಶಿವ ಶಿವಾ’ ಎನುತಿರ್ದೆನಯ್ಯ.” “ಕೂಡಲ ಸಂಗಮದೇವರಲ್ಲಿ ತಾನೇ ಪ್ರಸಾದಿ” “ಬೆಳಗಣೊನಳಗಣ ಬೆಳಗು ಮಹಾಬೆಳಗು” “ಪರಮಾನಂದವನೇನೆಂದುಪಮಿಸುವೆನಯ್ಯ” ಎನ್ನುವ ನುಡಿಯಲ್ಲಿ ಪರಬ್ಬಹ್ಮ ಸ್ಥಿತಿ ತಲುಪಿದ ಭಾಸವಾಗುತ್ತದೆ. ಬಸವಣ್ಣನವರು ವಚನ ಸಾಹಿತ್ಯವನ್ನು ದಾಸೋಹ ಭಾವನೆಯಿಂದ ರಚಿಸಿದ್ದಾರೆ. ಲೋಕೋದ್ಧಾರಕ್ಕೆಂದು ರಚಿಸಿದ್ದಾರೆ ಇಲ್ಲದೇ ಹೋದರೆ ಅವುಗಳನ್ನು ರಚಿಸುವ ಅಗತ್ಯತೆ ಅವರಿಗಿರಲಿಲ್ಲ. ಅವರು ಮೌನಸ್ಥಿತಿಯನ್ನು ಯಾವಾಗಲೋ ಧರಿಸಿದ್ದರು. ಕೃಷ್ಣ ಅರ್ಜುನನಿಗೆ ಭಗವದ್ಗೀತೆ ಬೋಧಿಸುವ ಅನಿವಾರ್ಯತೆ ಬಂದೊದಗಿದಂತೆ ಅವರಿಗೂ ಲೋಕದ ಜನರ ಉದ್ಧಾರ ಪ್ರಮುಖವೆನಿಸಿತು. ಎಲ್ಲ ಮಹಾತ್ಮರ ವಿಷಯದಲ್ಲೂ ಇದು ಸತ್ಯ. ಬುದ್ಧನಿಗೆ ಕಾಡಿನಿಂದ ಮರಳಿ ಬರುವ ಅವಶ್ಯಕತೆ ಇರಲಿಲ್ಲ, ಆದರೆ ಜನರು ದುಃಖದಲ್ಲಿ ತೊಳಲಾಡುವುದನ್ನು ಅವನಿಂದ ನೋಡಲಾಗಿಲ್ಲ. ಆತ್ಮಮೋಕ್ಷಾರ್ತಂ ಜಗತ್ ಹಿತಾಯಚ ಎಂಬ ಮಾತಿದೆ: ಆತ್ಮ ಸಾಕ್ಷಾತ್ಕಾರಗೊಂಡಮೇಲೆ ಜಗತಿನ ಹಿತಚಿಂತನೆ ಮಾಡುವುದು. ‘ಭಾವದಲ್ಲಿ ವೃತಗೆಟ್ಟುದಾಗಿ, ಆ ಭಾವದಲ್ಲಿ ಜೀವಸಂಹಾರಿ ಕೂಡಲ ಸಂಗಮದೇವ ಸರ್ವನಿವಾಸಿಯಾಗಿ”.” ಸ್ವಯಂ ಲಿಂಗದನುಭಾವ ದೊರಕೊಂಡ ಬಳಿಕ” “ಏನೆಂಬೆ, ಏನೆಂಬೆ ಒಂದೆರಡಾದುದ, ಏನೆಂಬೆ ಏನೆಂಬೆ ಎರಡೊಂದಾದುದ” ಜೀವ-ಶಿವ ಒಂದಾದ ಜೀವನ್ಮುಕ್ತ ಸ್ಥಿತಿ. “ಭಾವ ಭಾವಿಸಲು ನಿರ್ಭಾವ” ಸ್ಥಿತಿ. ಘನಗಂಭೀರ ಮಹಾಘನದೊಳಗಿನ ಘನಕ್ಕೆ ಘನವಾಗಿದ್ದೆನಯ್ಯಾ. ಕೂಡಲ ಸಂಗಮದೇವಯ್ಯನೆಂಬ ಮಹಾಬೆಳಗಿನ ಬೆಳಗಿನೊಳಗಿದ್ದೇನೆಂಬ ಶಬ್ದ ಮುಗ್ಧವಾದುದೇನೆಂಬೆನಯ್ಯ. ” ಆರೂಢದ ಕೂಟದ ಸುಖವ ಕೂಡಲ ಸಂಗಯ್ಯ ತಾನೇ ಬಲ್ಲ ” ಲಿಂಗಾಂಗ ಸಾಮರಸ್ಯವನ್ನು ಸಾಧಿಸಿ, ಜೀವ-ಶಿವನಾದ ಶಿವೈಕ್ಯ ಸ್ಥಿತಿ. ಬಸವಣ್ಣನು ನಮಗೆ ಮುಕ್ತಿದಾತ, ಶಕ್ತಿದಾತ, ಅವನು ನೆಲೆಸಿದ ಕ್ಷೇತ್ರ, ಅವಿಮುಕ್ತ ಕ್ಷೇತ್ರ. ಕಲ್ಯಾಣ ಕ್ಷೇತ್ರ.” ಬಸವನ ಆರಾಧಕರೆಷ್ಟೋ ಜನ ದೈವೀ ಪುರುಷರಾದದ್ದನ್ನು ನಾವು ಕಣ್ಣಾರೆ ನೋಡಿದ್ದೇವೆ. ಆದರೆ ಬಸವಣ್ಣನವರ ವಿಶ್ಲೇಷಣೆಯಲ್ಲಿ ನಮಗೆ ಮಿತಿ ಮೀರಲಾಗಲಿಲ್ಲ. ಇದು, ನಮ್ಮ ಇತಿಮಿತಿ. ಹನ್ನೊಂದು ಜನ ಅಂಧರು ಆನೆಯನ್ನು ವಿಶ್ಲೇಷಿಸಿದಂತೆ. *********

ಪ್ರಸ್ತುತ Read Post »

ಇತರೆ

ಪ್ರಸ್ತುತ

ಮಾತಾಡುವ ಮರಗಳು ಮೋಹನ್ ಗೌಡ ಹೆಗ್ರೆ ಬೆಳವಣಿಗೆ ಮತ್ತು ಬದಲಾವಣೆ ಪ್ರಕೃತಿ ನಿಯಮಗಳಲ್ಲೊಂದು. ಈ ಬೆಳವಣಿಗೆ ಮತ್ತು ಬದಲಾವಣೆಯನ್ನು ದೈಹಿಕವಾಗಿಯೂ, ಮಾನಸಿಕವಾಗಿಯೂ ಕಂಡುಕೊಳ್ಳಬಹುದಾಗಿದೆ. ಈ ಪ್ರಕ್ರಿಯೆ ಕೇವಲ ಮನುಷ್ಯನಿಗೆ ಮಾತ್ರ ಸಂಬಂಧಿಸಿದ್ದಲ್ಲ. ಮನುಷ್ಯನೊಡಗೂಡಿ ಬದುಕುವ ಚರಾಚರ ಜೀವರಾಶಿಗಳು ಬೆಳವಣಿಗೆ ಮತ್ತು ಬದಲಾವಣೆಯ ಪ್ರಕ್ರಿಯೆಯಲ್ಲಿ ಒಳಗೊಳ್ಳಲೇಬೇಕು. ಪಿಳಿಪಿಳಿ ಕಣ್ಣುಬಿಟ್ಟು ತಾಯಿಯ ತೊಡೆ ಮೇಲೆ ಮಲಗಿದ ಮಗು ಬೆಳವಣಿಗೆಯಾಗಿ, ಮಗುವಿನ ತೊದಲು ಮಾತಿಗೆ ಕೈತಟ್ಟಿ ಕುಣಿದ ಮುದಿ ಜೀವಗಳು ಮಗು ಬೆಳವಣಿಗೆಯಾದ ನಂತರದಲ್ಲಿ ಅಂತಹದೇ ಮಗ್ದ ಪ್ರೇಮದ ನುಡಿಗಳ ಕೇಳಿರಬಹುದು ಅಥವಾ ಕೇಳಲಾಗದ ಮಾತು ವರ್ತನೆಗಳ ನಡುವೆ ಅನಿವಾರ್ಯವಾಗುವಷ್ಟು ಹೊಂದಾಣಿಕೆಯನ್ನು ಅನುಸರಿಸಿಕೊಳ್ಳಲೂಬಹುದು. ಹಕ್ಕಿಯ ಕೊಕ್ಕಿನಲಿ ಹೆಕ್ಕಿ ತಂದ ಹಣ್ಣೊಂದು ಜಾರಿಬಿದ್ದೊ, ಅದು ತಿಂದುಬಿಟ್ಟದ್ದೋ, ಹಿಕ್ಕೆಯಿಂದಲೋ ಇಲ್ಲವೇ ಬೇಕೆಂದೇ ತಂದು ಹಿತ್ತಲಿನಲ್ಲಿ ನೆಟ್ಟ ಗಿಡಗಳು ಬೆಳೆಯುತ್ತಾ ಮನುಷ್ಯನೊಂದಿಗೆ ಭಾವನಾತ್ಮಕ ಸಂಬಂಧಗಳನ್ನು ಬೆಳೆಸಿಕೊಳ್ಳುತ್ತಾ ಮನುಷ್ಯ ಸಂಬಂಧದಂತೆ ಭಾಸವಾಗಬಹುದಾದ ಸಂದರ್ಭಗಳು ನನ್ನ ಪಾಲಿನ ಅವಿನಾಭಾವಿ ಅನುಭವವಾಗಿ ನನ್ನ ಆವರಿಸಿಕೊಂಡ ಕ್ಷಣವೇ ರೋಮಾಂಚನಕಾರಿಯಾದಂತದ್ದು. ಅಂದು ಮನೆ ಹಿತ್ತಲಿನಲ್ಲಿ ಚಿನ್ನಿದಾಂಡು ( ಹಾಣೆ – ಗೆಂಡೆ ) ಪ್ಲಾಸ್ಟಿಕ್ ಬಾಲ್, ಕ್ರಿಕೆಟ್, ಒಡ್ಲಮುಂಡೆ, ಗೇರುಬೀಜದ ಆಟ, ಗೋಲಿ, ಕಣ್ಣಮುಚ್ಚಾಲೆ, ಶಾಲೆ ಆಟ, ಅಡುಗೆಮನೆ ಆಟ ಮುಂತಾದವುಗಳೆಲ್ಲ ಸಲೀಸಾಗಿ ಆಡುವಷ್ಟು ಅವಕಾಶಗಳಿದ್ದವು. ಸಾವಕಾಶವಾಗಿ ಆ ಅವಕಾಶದ ಸ್ಥಳಗಳಲ್ಲಿ ಅಕ್ಕ ನೆಟ್ಟ ತೆಂಗು, ಅಡಿಕೆ ಸಸಿಗಳು ಬೆಳೆದು ಈಗ ಎತ್ತರವಾಗಿ ಆಡಿದ ಬಾಲ್ಯದ ಆಟಗಳಿಗೆ ಏಣಿಹಾಕಿದಂತೆ ಖುಷಿಗೊಳಿಸುತಿವೆ. ಮುಂದೆ ಆ ಜಾಗ ಖಾಲಿಯೇ ಇದ್ದರೂ ಅಲ್ಲಿ ಟಿ.ವಿ, ಮೊಬೈಲ್‌ ಗಳ ದಾಸರಾದ ಮಕ್ಕಳು ಆ ಜಾಗವ ಕಿಂಚಿತ್ತೂ ತುಂಬಲಾರರೆಂಬ ಮುನ್ಸೂಚನೆಯಲ್ಲೋ ಅಥವಾ ಶ್ರಮೀಕ ಬದುಕಿನ ಅಲ್ಪ ಗಳಿಕೆಗೋ, ಆತ್ಮಸಂತೃಪ್ತಿಗೋ ಅಕ್ಕ ಹಿತ್ತಲ ತುಂಬಾ ಅಡಿಕೆ, ಬಾಳೆ, ತೆಂಗಿನ ಸಸಿಗಳ ನೆಟ್ಟಿದ್ದಿರಬೇಕು. ಇವುಗಳ ಹೊರತಾಗಿ ನನ್ನ ವಂಶದವರ ಕಂಡ ಆ ಹಿತ್ತಲಲ್ಲಿ ಅಂದು ಇದ್ದ ಮೂರು ಮರಗಳೊಂದಿಗೆ ಮಾತಾಡುವ ಅವಕಾಶ ನನ್ನದೀಗ… ಬುಡದಿಂದ ಮರವನ್ನು ಏರುವುದು ವಾಡಿಕೆ. ಆದರೆ ತನ್ನ ಕೊಂಬೆಯನ್ನು ತಲೆಕೆಳಗೆ ಇಳಿಬಿಟ್ಟ ಹಿತ್ತಲಿನ ಗೇರು ಮರವನ್ನು ಏರಿ ಅದರಲ್ಲಿರುವ ಉದ್ದುದ್ದದ ಗೇರು ಹಣ್ಣು ಕೊಯ್ದು ಅದನ್ನು ಸರಿಯಾಗಿ ಕತ್ತರಿಸಿ ಉಪ್ಪು ಹಾಕಿ ತಿನ್ನುವ ಮಜವೇ ಬೇರೆ. ದಿನಕ್ಕೆ ಏನಿಲ್ಲವೆಂದರೂ ಮೂರು ನಾಲ್ಕು ಬಾರಿಯಾದರೂ ಏರುವುದು ದಿನಚರಿಯಂತೆ. ಕೆಳಗಡೆ ನಿಂತಾಗ ಕಾಣುವ ಹಣ್ಣುಗಳು ಮರವೇರಿದ ನಂತರ ಅಡಗಿಕೊಂಡಂತೆ ಅನಿಸುತ್ತಿತ್ತು. ಕೂಲಿಗೆ ಹೋದ ನನ್ನವ್ವ ಮನೆಗೆ ಬಂದಾಗ ನನ್ನನ್ನು ಕರೆಯಬೇಕೆಂದರೆ ಮೊದಲು ಮರದಲ್ಲಿ ನಾನು ಇರುವೆನೇ ಎಂಬುದನ್ನು ಖಾತ್ರಿಪಡಿಸಿಕೊಂಡೇ, ನಮ್ಮೂರ ಬಯಲ ಕಡೆ ಮುಖಮಾಡಿ ಕರೆಯುತ್ತಿದ್ದರೆ, ನಮ್ಮೂರ ಹಳ್ಳದಲ್ಲಿ ಸಟ್ಲೆಯೋ, ಕಂಯ್ ಜಬ್ಬೋ, ಏಡಿಯೋ ಹಿಡಿಯುತ್ತಿರುವ ನಾವುಗಳು ಒಂದೇ ಕೂಗಿಗೆ ಉದ್ದುದ್ದದ ದಾಪು ಹಾಕಿ ಮನೆ ಸೇರುತ್ತಿದ್ದದ್ದು ಮಜದ ಸಂಗತಿ. ಈ ಮರ ಅಕ್ಷಯಪಾತ್ರೆಯಂತೆ ಎಂದರೆ ತಪ್ಪಾಗದೇನೋ, ಏಕೆಂದರೆ ದಿನಕ್ಕೆ ಮೂರ್ನಾಲ್ಕು ಸಲ ಮರವೇರಿ ಹಣ್ಣು ಕೊಯ್ಯುವುದು, ಕಲ್ಲಿನಿಂದ ಹೊಡೆದು ಹಣ್ಣು ಬೀಳಿಸುವುದು, ಕೊಕ್ಕೆಯಿಂದ ಕೊಯ್ದರೂ ಮತ್ತೆ ಗೇರುಬೀಜಕ್ಕಾಗಿ ಬೆಳ್ಳಂಬೆಳಗ್ಗೆ ಮರದ ಹತ್ತಿರ ಹುಡುಕಾಟ ನಡೆಯುವುದು ಕೂಡಾ ಸ್ಪರ್ದೆಯಂತೆ ನಡೆಯುತಲೇ ಇತ್ತು‌. ಕನ್ನಡ ( ಪ್ರಾಥಮಿಕ) ಶಾಲೆ ಮತ್ತು ಹೈಸ್ಕೂಲ್ ಗಳಲ್ಲಿ ಒಂದಕ್ಕೆ ಮತ್ತು ಊಟಕ್ಕೆ ಬಿಟ್ಟಾಗ ಶಾಲೆಯ ಹತ್ತಿರವಿರುವ ಇಬ್ಬರ ಬೇಣದಲ್ಲಿ ಗೇರು ಬೀಜವನ್ನು ಕಳ್ಳತನ ಮಾಡಿ ಶಾಲೆ ಗಂಟೆ ಬಾರಿಸಿದರೆ ಅರೆಬರೆ ಸುಲಿದ ಬೀವವನ್ನೂ ಚಡ್ಡಿಕಿಸೆಗೆ ಹಾಕಿಕೊಂಡು ಗೇರುಬೀಜದ ಸೋನೆಯಿಂದ ಸದಾ ತೊಡೆಮೇಲೆ ಸುಟ್ಟಗಾಯಗಳು ಇರುತ್ತಿದ್ದದ್ದೂ ನೆನಪು ಮಾತ್ರ. ಈ ಗೇರು ಮರದ ನಂಟು ನನ್ನೊಬ್ಬನದಲ್ಲ. ಓಣಿಯ, ಶಾಲೆಯ ಎಲ್ಲಾ ವಾನರ ಸೇನೆಯ ಸ್ನೇಹಿತರ ಖುಷಿಯೂ ಕೂಡಾ. ಇಂದಿಗೂ ಎಂದಿಗೂ ದಾರಿ ಮದ್ಯ ಆದರೂ ಗೇರು ಗಿಡಗಳು ಹಣ್ಣು ತುಂಬಿಕೊಂಡರೆ ಹಾಗೇ ನೆನಪುಗಳ ಹಸಿಗೊಳಿಸಿ ನಗಿಸಿ ಕಳಿಸುತ್ತವೆ. ರಸ್ತೆಯಂಚಿನ ಪಾಗರದ ಮಧ್ಯದಿಂದ ಹುಟ್ಟಿ ಬೆಳೆದು ನಿಂತ ಹಿರಿಯ ಹಲಸಿನ ಮರಕ್ಕೆ ಮೈತುಂಬಾ ಅಂಬಲಿಯ ಹಣ್ಣುಗಳು. ಸುಮಾರು ೨ ಮೀಟರ್ ಗಿಂತ ಹೆಚ್ಚಿನ ಘೇರಿ ಇರುವ ಈ ಮರವನ್ನು ಏರಲು ಕಷ್ಟ. ಕಷ್ಟಪಟ್ಟು ಏರಿದರೂ ಸುಲಭವಾಗಿ ಹಣ್ಣುಗಳನ್ನು ಕೊಯ್ಯಲಾಗದು. ಜೊತೆಗೆ ವಿದ್ಯೂತ್ ತಂತಿಗಳ ಭಯ. ಈ ಕಾರಣಕ್ಕಾಗಿಯೇ ಹಲಸಿನ ಮರವನ್ನು ಯಾರೂ ಗುತ್ತಿಗೆಯನ್ನೇ ಪಡೆಯುತ್ತಿರಲಿಲ್ಲ. ಹಲಸಿನ ಮರದಲ್ಲಿ ಹಣ್ಣು ಆಯಿತೆಂದರೆ ಓಣಿ ತುಂಬಾ ಪರಿಮಳ. ಅಷ್ಟೇ ಅಲ್ಲ ಮರದಲ್ಲೇ ಹಣ್ಣಾಗಿ ಬೀಳುತ್ತಿದ್ದುದರಿಂದ ಓಣಿಯ ಬಹುತೇಕರ ದನಕರುಗಳು ರಾತ್ರಿ ಅಲ್ಲಿಯೇ ಠಿಕಾಣಿ ಹೂಡುತ್ತಿದ್ದವು. ಮನೆಯಲ್ಲಿ ನಾವಿರುವಾಗ ಹಣ್ಣು ಬಿದ್ದರೆ ಗೋಣಿಚೀಲವನ್ನು ತೆಗೆದುಕೊಂಡು ಹೋಗಿ, ಕೆಮ್ಮಣ್ಣಿನ ರಸ್ತೆಯಲ್ಲಿ ಹಾಸಿ, ಬಿರಿದು ಬಿದ್ದ ಹಣ್ಣನ್ನ ತುಂಬಿ ಅಕ್ಕ ನಾನು ಅವ್ವೆ ಅಂಗಳದಲ್ಲಿ ಕುಳಿತು ಹಲಸಿನ ಹಣ್ಣು ತಿನ್ನುವಾಗ ಓಣಿಯಲ್ಲಿ ಯಾರಿಗಾದರೂ ತಿರುಗಾಡಿದರೂ ಅವರನ್ನೂ ಕರೆದು ಎಲ್ಲಾ ಸೇರಿ ಹಣ್ಣು ತಿಂದು ಸಣ್ಣ ಪಾರ್ಟಿಯೇ ಆದಂತಾಗುತ್ತಿತ್ತು. ಅಷ್ಟೇ ಅಲ್ಲ ಹಣ್ಣು ತಿಂದು ಅದರ ಬೀಜವನ್ನು ಚೆನ್ನಾಗಿ ತೊಳೆದು ಒಣಗಿಸಿ, ಶಾಲಾ ವಾರ್ಷಿಕೋತ್ಸವಕ್ಕೆ, ಪಕ್ಕದೂರಿನ ನಾಟಕ, ಯಕ್ಷಗಾನಕ್ಕೂ ಮತ್ತು ಊರ ಒಂದೆರಡು ಮನೆಗಳಲ್ಲಿ ಮಾತ್ರ ಟಿವಿ ಇರುವ ಆ ದಿನಗಳಲ್ಲಿ ಊರಲ್ಲಿ ಕೇಲವು ಧಾರ್ಮಿಕ ಕಾರ್ಯ ಹಬ್ಬದ ದಿನಗಳಲ್ಲಿ ಯಕ್ಷಗಾನ ಗಳಂತೆ ಟಿವಿ ತೋರಿಸುವುದು ಕೂಡ ನಡೆಯುತ್ತಿತ್ತು. ಚಂದದ ಸಿನಿಮಾದ ಕ್ಯಾಸೆಟ್ಟುಗಳನ್ನು ಹಾಕುತ್ತಿದ್ದರು ಅದನ್ನು ನೋಡಲು ಹೋಗುವಾಗ ಬಿಸಿ ಕೆಂಡ ಬೂದಿಯಲಿ ಸುಟ್ಟ ಹಲಸಿನ ಬ್ಯಾಳೆ ( ಬೀಜ ) ಯನ್ನೇ ಸ್ನ್ಯಾಕ್ಸ್ ಗಳಂತೆ ತಿನ್ನುವ ರುಚಿಯೇ ಬೇರೆ. ಮಳೆಗಾಲದಲ್ಲಂತೂ ಇದರ ರುಚಿಯೇ ಇಮ್ಮಡಿ. ಇಂದು ಆ ಮರವಿಲ್ಲ ಆದರೆ ಹಲಸಿನ ಮರದ ಬುಡದ ಚಕ್ಕೆಯನ್ನು ಪೂಜಾಕಾರ್ಯಕ್ಕೆ ಯಾರಾದರೂ ಒಡೆದು ಒಯ್ಯಲು ಬರುತ್ತಿದ್ದು ಅವರು ಮರದ ಹಣ್ಣಿನ ಗುಣಗಾನ ಮಾಡಿದ ನಂತರ ಅದರೊಂದಿಗಿನ ಅವಿನಾಭಾವತೆ ಕಣ್ತೆರೆದುಕೊಳ್ಳುತ್ತದೆ. ಈ ಎರಡು ಮರಗಳ ಆಚೆ ನಿಂತ ಹಿತ್ತಲಿನ ಶೀರ್ಷಿಕೆಯಂತಿರುವ ಮರ ಮುರುಗಲ ಮರ. ಕೇಲವು ಕಡೆ ಕೋಕಂ ಮರ ಎನ್ನುವ ಇದರ ಸಸ್ಯ ವೈಜ್ಞಾನಿಕ ಹೆಸರು ಗಾರ್ಸಿನಿಯಾ ಇಂಡಿಕಾ. ಅತ್ಯಂತ ಪ್ರೀತಿ ಮತ್ತು ವಿಶ್ವಾಶದಾಯಕವಾಗಿದೆ. ಹಿತ್ತಲಿನ ಎಲ್ಲಾ ಮರಗಳಿಗಿಂತ ಅತಿ ಎತ್ತರಕ್ಕೆ ತಲೆಯೆತ್ತಿ ನಿಂತ ಈ ಮರದ ವಿಶೇಷವೆಂದರೆ ಎಲ್ಲಾ ಮುರುಗಲ ಮರದಂತೆ ಇದು ಕಡಿಮೆ ಎತ್ತರ ಇದ್ದು, ಕೊಂಬೆಗಳನ್ನು ಅಗಲವಾಗಿ ಹರಡಿಕೊಳ್ಳದೇ ತೀರಾ ಎತ್ತರಕ್ಕೆ ಏರಿ ನಿಂತಿತ್ತು. ಮುರುಗಲು ಹಣ್ಣು ಕಾಯಿಗಳನ್ನು ಸೂಕ್ತ ಸಮಯದಲ್ಲಿ ಕೊಕ್ಕೆಯಿಂದ ಬಡಿದು ಅದರ ಕಾಯಿ ಹಣ್ಣುಗಳಿಂದ ಹುಳಿಸೊಪ್ಪು ( ಹುಳಿ ) ತಯಾರಿಸಿ ಅದನ್ನು ಮೀನು ಸಾರಿಗೆ ಬಳಸುವುದು ವಾಡಿಕೆ. ಆದರೆ ಆಯುಷ್ಯದಲ್ಲಿಯೇ ತನ್ನ ಮೈಗೆ ಕೊಕ್ಕೆಯನ್ನು ತಾಗಿಸಿಕೊಳ್ಳದ ಈ ಮರ ನನಗಂತೂ ಹೆಚ್ಚು ವಿಶೇಷವೇ ಸರಿ. ಆಟ ಆಡಿದ ನಂತರ ಎತ್ತರದಲ್ಲಿ ಹಣ್ಣು ಬಿಟ್ಟಿರುವ ಮರಕ್ಕೆ ನಾವೆಲ್ಲ ಕಲ್ಲು ಹೊಡೆದು ಹಣ್ಣು ಬಿಳಿಸಿ ಅದರ ಪಾನಕ ಮಾಡಿ ಕುಡಿಯುತ್ತಿದ್ದದ್ದು ಇವತ್ತಿನ ಯಾವ ನಿರುಪಯುಕ್ತ ಕೋಲ್ಡ್ ಡ್ರಿಂಕ್ಸ್ ಗೂ ಸಾಟಿಯಾಗಲಾರದು. ಇನ್ನೊಂದು ವಿಶೇಷವೇನೆಂದರೆ ಶಾಲಾ ಸಹಪಠ್ಯ ಚಟುವಟಿಕೆ,ಪ್ರತಿಭಾಕಾರಂಜಿ ಕಾರ್ಯಕ್ರಮಗಳಿಗೆ ಹೋಗುವ ಮುನ್ನಾದಿನಗಳಲ್ಲಿ ಆ ಸಮಯದಲ್ಲಿ ಮುರುಗಲ ಹಣ್ಣು ಬಿಡುವ ಸೀಜನ್ ಆಗಿದ್ದರೆ ಪ್ರತಿ ಸ್ಪರ್ಧೆಯ ಹೆಸರು ಹೇಳಿ ಮೂರು ಕಲ್ಲುಗಳನ್ನು ಆಯ್ದು ಯಾವ ಕಲ್ಲಿಗೆ ಹಣ್ಣು ಬೀಳುತ್ತದೆಯೋ ಆ ಕಲ್ಲಿನ ಸ್ಥಾನ ಅಂದರೆ ಮೊದಲನೇ ಕಲ್ಲಿಗೆ ಹಣ್ಣು ಬಿದ್ದರೆ ಪ್ರಥಮ, ಎರಡನೇ ಕಲ್ಲಿಗಾದರೆ ದ್ವಿತಿಯ, ಮೂರನೆಯದಕ್ಕೆ ಆದರೆ ತೃತೀಯ, ಹಾಗೇ ಈ ಮೂರು ಕಲ್ಲಿಗೂ ಹಣ್ಣು ಬೀಳದಿದ್ದರೂ ನಿರಾಶೆಯಾಗುತಿರಲಿಲ್ಲ ಯಾಕೆಂದರೆ ಈ ಆಟ ಮೂರು ಕಲ್ಲುಗಳಿಂದ ಹಣ್ಣು ಕಾಯಿ ಬೀಳೋವರೆಗೂ ಪುನರಾವರ್ತನೆ ಆಗುತ್ತಲೇ ಇತ್ತು‌. ಇದು ಬಹುಪಾಲು ಸತ್ಯವೇ ಆಗುತ್ತಿತ್ತು. ಎಸೆಸೆಲ್ಸಿ ಫಲಿತಾಂಶದ ದಿನ ಶಾಲೆಗೆ ಪ್ರಥಮ ಸ್ಥಾನ ಪಡೆದು ಆ ಮರದ ಫಲಿತಾಂಶದ ಕುರಿತಾದ ಭವಿಷ್ಯ ಸತ್ಯವಾದಾಗ ಮರವನ್ನು ಅಪ್ಪಿ ಮುತ್ತಿಟ್ಟು ಅದರ ಬುಡದಲ್ಲಿ ಮೈಸೂರುಪಾಕು ಇಟ್ಟು “ನಿನಗೆ ಮೊದಲು ಕೊಟ್ಟಿದ್ದು ಹಾ ” ಅಂತ ಹೇಳಿ ಬಂದದ್ದು ನೆನಪಾಗುವಾಗ ಈಗ ಕೆನ್ನೆಗಳು ಅರಳುತ್ತವೆ. ಆದರೆ ನಿಷ್ಕಪಟ ಈ ಜ್ಯೋತಿಷಿ ಮರ ವಯಸ್ಸಾಗಿ ನಿಂತಾಗ ಜೋರಾದ ಮಳೆಗೆ ಗಾಳಿಗೆ ತನ್ನ ಎತ್ತರಕ್ಕೆ ತೂರಾಡುವುದು ಭಯಾನಕವಾಗುತ್ತಿತ್ತು. ಮರ ಬಿದ್ದರೆ ವಿದ್ಯುತ್ ತಂತಿ , ಕಂಬಗಳಿಗೆ , ಪಕ್ಕದ ಮನೆಯ ಕೊಟ್ಟಿಗೆಗೆ, ಹಾನಿಯಾಗುವ ಸಂಭವವು ಹೆಚ್ಚಾಗಿರುವ ಕಾರಣಕ್ಕೆ ಅದನ್ನು ಕಡಿಯುವಂತೆ ಹೆಚ್ವಿನ ಒತ್ತಡಗಳು ಬಹುದಿನದಿಂದ ಇದ್ದರೂ ಆ ಮರದೊಂದಿಗಿನ ಆಪ್ತತೆಯಿಂದ ಅದನ್ನು ಮುಂದೂಡುತ್ತಲೇ ಬರಲಾಗುತ್ತಿತ್ತು. ನನ್ನೆಲ್ಲಾ ಶಾಲಾ-ಕಾಲೇಜಿನ ಸ್ಪರ್ಧೆ, ಫಲಿತಾಂಶಗಳು, ಸ್ನೇಹ ಆತ್ಮೀಯತೆಗಳು ಕುರಿತಾದ ನಂಬಿಕೆಗಳು, ನೋವು-ನಲಿವುಗಳು, ಕೊನೆಗೆ ನೌಕರಿಯಂತಹ ವಿಷಯಗಳಲ್ಲಿ ಕೂಡಾ ಸತ್ಯ ಭವಿಷ್ಯವನ್ನೇ ನುಡಿದ ಈ ಮರ ನನ್ನೆದುರೇ ಕೊಡಲಿ ಪೆಟ್ಟು ತಿನ್ನುವುದನ್ನು ನೆನಪಿಸಿಕೊಂಡು ರಾತ್ರಿ ಅಪ್ಪಿ ಮುತ್ತಿಟ್ಟು ಮಾತಾಡಿ ಕ್ಷಮೆ ಕೇಳಿ ಬಂದೆ. ಬೆಳ್ಳಂಬೆಳಿಗ್ಗೆ ಮರ ಕಡಿಯುವವರು ಬಂದರು. ಯಾವುದೋ ಭಾವುಕತೆ. ಆಂತರ್ಯದಲ್ಲಿ ಈಜಲಾಗದೆ ಮುಳುಗುತ್ತಿರುವಂತೆ ಹಾದು ಹೋದಂತಾಯಿತು. ಕೇಲವೇ ತಾಸುಗಳಲ್ಲಿ ಹಲವಾರು ದಶಕಗಳನ್ನು ಕಂಡ ನನ್ನ ಪ್ರೀತಿಯ ಮುರುಗಲ ಮರ ನೆಲಕ್ಕುರುಳಿತು. ಇರುವಾಗ ಯಾರ ಶಾಪಕ್ಕೂ ಗುರಿಯಾಗದೇ, ನಾನು ನಿನ್ನೆದುರೇ ಈಗಲೂ ಯಾರಿಗೂ ತೊಂದರೆ ಕೊಡಲಾರೆನೆಂದು ಹೇಳುವಂತೆ ತನ್ನ ಬುಡದ ಕೆಳಗಿರುವ ಚಿಕ್ಕ ತೆಂಗಿನ ಸಸಿಗಳಿಗೂ ನೋವು ಕೊಡದೆ ನೆಲಕ್ಕುರುಳಿದ ಮರವನ್ನು ಕಿಟಕಿಯಲ್ಲಿ ಕಣ್ಣೀರಿಡುತ್ತಾ ನೋಡುತ್ತಿದ್ದ ನನಗೆ ಅದೇ ಅಚ್ಚಳಿಯದ ಮೊದಲ ಕಳೆದುಕೊಂಡ ನೋವಾಗಿ ಉಳಿಯಿತು. ಕತ್ತರಿಸಿದ ಮರದಿಂದ ಉದುರಿದ ಕಾಯಿ ಹಣ್ಣುಗಳನ್ನು ಆಯ್ದು ಅಕ್ಕಪಕ್ಕದ ಮನೆಯವರಿಗೆ ಪಾನಕ ಮಾಡಲು ನೀಡಿ ನಾವು ಪಾನಕ ಮಾಡಿ ಕುಡಿದೆವು. ವಿಷಾದದ ಅಲೆಯೊಂದು ಹಾಗೆ ಸುಳಿದಾಡುತ್ತಲೇ ಸಂಜೆಯವರೆಗೆ ಅದರ ಸ್ವಚ್ಛತೆ ಕಾರ್ಯ ಮುಂದುವರಿಯಿತು. ಆದರೂ ಇಂದಿಗೂ ತುಂಬಾ ನೋವಾದಾಗ ಅದು ನಿಂತ ಜಾಗದಲ್ಲೇ ನಿಂತು ಇಂದಿಗೂ ಕಣ್ಣೀರಿಡುವ ರೂಢಿ ಇದೆ. ಅಕ್ಕನ ಮದುವೆ ಮಾಡಿ ಕೊಟ್ಟು ಗಂಡನ ಮನೆತನಕ ಕಳಿಸಿಕೊಟ್ಟು ಬಂದ ನಂತರ ಒಮ್ಮೇಲೆ ಉಕ್ಕಿ ಬಂದ ಕಣ್ಣೀರಿಗೆ ಅವ್ಯಕ್ತವಾಗಿ ಆಪ್ತವಾಗಿ ಮರ ತಲೆನೇವರಿಸಿದಂತ ಅನಾಮಿಕ ಅನುಭವ ಆದದ್ದೂ ಇದೆ. ನಾವು ಎಷ್ಟೇ ಎತ್ತರಕ್ಕೆ ಇರುತ್ತೇವೆ ಎಂಬುದು ಮುಖ್ಯವಲ್ಲ ಎತ್ತರ ಏರಿದಾಗಲೂ ನಮ್ಮೊಡನೆ ನಾವು ನಮ್ಮವರೊಡನೆ ಹೇಗಿರಬೇಕು ಎಂದು ಪ್ರತ್ಯಕ್ಷ ಪರೋಕ್ಷವಾಗಿ ಪಾಠ ಬೋಧಿಸಿದ ಈ ಮರಗಳು ನೆನಪಿನ ಬದುಕಿನ ಸಂಚಾರದಲ್ಲಿ ಸಹಪಾಠಿಗಳಂತೆ ನಡೆದ ದಾರಿಯೇ ಒಳ್ಳೆಯದು ಅಂತ ಅಂದುಕೊಳ್ಳುವುದೊಂದೇ ಅಂತಿಮ ನಿರ್ಧಾರ.

ಪ್ರಸ್ತುತ Read Post »

ಇತರೆ

ಸಂತಾಪ

ಕನ್ನಡದ ಪ್ರಮುಖ ಕಥೆಗಾರ್ತಿ ಶಾಂತಾದೇವಿ ಕಣವಿಯವರು ಕನ್ನಡ ನಾಡಿನ ಪ್ರಮುಖ ಕಥೆಗಾರ್ತಿ,ಶುದ್ಧ ಕನ್ನಡ ಜನಪದ ಹೃದಯ ಶ್ರೀಮಂತಿಕೆಯ ಸಹಕಾರ ಮೂರ್ತಿ, ಲೇಖಕಿ,⁣ಹಿರಿಯ ಕವಿ, ವಾತ್ಸಲ್ಯಮಯಿ, ಸಮರಸವೇ ಜೀವನ ಎಂದು ಬಾಳು ಬದುಕಿದ ಕವಯಿತ್ರಿ. ಉತ್ತರ ಕರ್ನಾಟಕದ ದೇಸಿ ಸೊಬಗು, ಧ್ವನಿಪೂರ್ಣ ಭಾಷೆ, ತಂತ್ರಗಾರಿಕೆ, ಕಸರತ್ತಿಲ್ಲದ ಬರವಣಿಗೆ ವೈಶಿಷ್ಟ್ಯ ಸಾಕ್ಷಿಕರಿಸಿದ್ದ ಸಾಹಿತಿ ಶಾಂತಾದೇವಿ ಕಣವಿಯವರು.ಹಾಗಾಗಿ ಕನ್ನಡ ಸಾಹಿತ್ಯ ಲೋಕದ ಅನುಪಮ ದಂಪತಿಗಳಲ್ಲಿ ಪ್ರಮುಖವಾಗಿ ಬಂದು ನಿಲ್ಲುವ ಹೆಸರು ಶಾಂತಾದೇವಿ ಕಣವಿ ಮತ್ತು ಚನ್ನವೀರ ಕಣವಿಯವರು ಬಂಧುಗಳೆ. ಜನನ/ಜೀವನ : ವಿಜಾಪುರದಲ್ಲಿ 12-01-1933 ರಂದು ಸಿದ್ಧಬಸಪ್ಪ ಮತ್ತು ಭಾಗೀರಥಿದೇವಿ ದಂಪತಿಗಳ ಮಗಳಾಗಿ ಶಾಂತಾದೇವಿಯರು ಜನಿಸಿದರು. ಇವರ ಶಿಕ್ಷಣ ಪ್ರಾಥಮಿಕ ವಿದ್ಯಾಭ್ಯಾಸ ವಿಜಾಪುರದಲ್ಲಿ, ಮಾಧ್ಯಮಿಕ ವಿದ್ಯಾಭ್ಯಾಸ ರೋಣ ಹಾಗೂ ರಾಣಿ ಬೆನ್ನೂರು, ಬೈಲಹೊಂಗಲಗಳಲ್ಲಿ ಆಗಿರುತ್ತಿದೆ. ಶಾಂತಾದೇವಿಯವರಿಗೆ ಮನೆಯಲ್ಲಿದ್ದ ಸಾಂಸ್ಕೃತಿಕ ವಾತಾವರಣದಿಂದ ಸಹಜವಾಗೆಂಬಂತೆ ಸಾಹಿತ್ಯದ ಹುಚ್ಚು ಹೆಚ್ಚತೊಡಗಿತ್ತು. ಹಾಗಾಗಿ ಸಾಹಿತ್ಯದ ಹೆಚ್ಚಿನ ಒಲವು ಇದ್ದ ಕಾರಣದಿಂದ. ಮನೆಯಲ್ಲಿ ಇಂಗ್ಲಿಷ್, ಕನ್ನಡ ಪುಸ್ತಕಗಳ ದೊಡ್ಡ ಭಂಡಾರವನ್ನೇ ಹೊಂದಿದ್ದರು ಮತ್ತು ಶಾಂತಾದೇವಿ ಅವರಿಗೆ ತಂದೆಯಿಂದಲೇ ‘ಜೇನ್ ಆಸ್ಟಿನ್’ಳ ಕಾದಂಬರಿ ಕುರಿತು ಓದು – ಬರವಣಿಗೆಯ ಪರಿಚಯ ಬಹಳ ಆಗಿತ್ತು ಹಾಗೂ ಸಾಹಿತ್ಯ ಮತ್ತು ಅಧ್ಯಾತ್ಮ ಕೃತಿಗಳಿಗೆ ಮೊದಲ ಪ್ರಾಶಸ್ತ್ಯ ನೀಡುವ ಜೊತೆಗೆ ಹಿರಿಯ ಸಾಹಿತಿಗಳ ಮಾರ್ಗದರ್ಶನ ಸಹ ಇವರಿಗೆ ಲಭಿಸಿತು. ಹೀಗಾಗಿ ಸಾಹಿತ್ಯ ಕ್ಷೇತ್ರದಲ್ಲಿ ಅಪ್ರತಿಮ ಸಾಧನಾ ಸೇವೆ ಮಾಡಲು ಉತ್ತೇಜನ ಪಡೆದರು ಎನ್ನಬಹುದು. ಇದಲ್ಲದೆ ಚಿಕ್ಕವರಿದ್ದಾಗ ತಂದೆ ತಾಯಿಯರಂತೆ ಭಾವಗೀತೆಗಳನ್ನು ಹಾಡುತ್ತಿದ್ದರು. ಧಾರವಾಡಕ್ಕೆ ಬಂದ ಮೇಲೆ ಆಕಾಶವಾಣಿಯಲ್ಲಿಯೂ ಹಾಡಿದರು. “ಭಾವಗೀತೆಯನ್ನು ಹಾಡಿದರೂ ಭಾವಜೀವಿಯಲ್ಲ ನಾನು ಎನ್ನುತ್ತಿದ್ದರು. ಹೀಗಾಗಿ ಕಥೆ ಬರೆಯುವುದನ್ನು ರೂಢಿಸಿಕೊಂಡೆ” ಎಂಬುದು ಅವರ ಸ್ವಯಂ ನುಡಿಯಾಗಿತ್ತು.ಇದೆ ಸಮಯದಲ್ಲಿ ಚನ್ನವೀರ ಕಣವಿಯವರೊಡನೆ ಮದುವೆ ನಿಶ್ಚಯ. ಓದಿಗೆ ವಿರಾಮ ನೀಡಿದರು.1952ರಲ್ಲಿ ಮದುವೆಯಾದ ನಂತರ ಪ್ರೇರಣೆ-ಬರವಣಿಗೆ. ಶಾಂತಾದೇವಿಯವರು ಬರೆದ ಹಲವಾರು ಕಥೆಗಳು ಪ್ರಕಟಿತ. ಓದುಗರಿಂದ ಪ್ರಶಂಸೆ, ಕಥೆಗಾರ್ತಿಯ ಉದಯ. ಉತ್ತರ ಕರ್ನಾಟಕದ ದೇಸಿ ಸೊಬಗು, ಧ್ವನಿಪೂರ್ಣ ಭಾಷೆ, ತಂತ್ರಗಾರಿಕೆ, ಕಸರತ್ತಿಲ್ಲದ ಬರವಣಿಯಲ್ಲಿ ವೈಶಿಷ್ಟ್ಯಕಾಣುತ್ತೇವೆ. ಹಾಗೆ ಜಿ.ಬಿ. ಜೋಶಿಯವರ ಮನೋಹರ ಗ್ರಂಥಮಾಲೆಯ ‘ನಡೆದು ಬಂದ ದಾರಿ’ ಸಂಪುಟಕ್ಕಾಗಿ ಕೀರ್ತಿನಾಥ ಕುರ್ತಕೋಟಿಯವರು ಶಾಂತಾದೇವಿ ಅವರನ್ನು ಕಥೆ ಕೇಳಿದರು. ‘ಮಂಜು ಕರಗಿತು’ ಎಂದು ಕಥೆ ಕಳಿಸಿದರು. ದೊಡ್ಡ ದೊಡ್ಡ ಲೇಖಕರ ಜೊತೆಗೆ ತಮ್ಮ ಫೋಟೊ ಸಮೇತ ಕಥೆ ಪ್ರಕಟಗೊಂಡಾಗ ಶಾಂತಾದೇವಿ ಅವರಿಗೆ ಆದ ಆನಂದಕ್ಕೆ ಲಕ್ಕವಿಲ್ಲ. ಇದು ಅವರ ಪ್ರಥಮ ಹೆಜ್ಜೆ. ಅದೇ ಕಥೆಯನ್ನು ಮೈಸೂರು ವಿಶ್ವವಿದ್ಯಾಲಯದ ಹಿಂದಿ ವಿಭಾಗದ ಡಾ.ಎನ್. ನಾಗಪ್ಪ ಅವರು ಹಿಂದಿಯಲ್ಲಿ ‘ಹಿಮ್ ಚಲ್ ಗಯಾ’ ಎಂದು ಅನುವಾದಿಸಿದ್ದು ಕೊಲ್ಕತ್ತದ ‘ಅಣಿಮಾ’ ಪತ್ರಿಕೆಯ ಪ್ರೇಮಾಂಕ ಎಂಬ ವಿಶೇಷ ಸಂಚಿಕೆಯಲ್ಲಿ ಫೋಟೊ ಸಹಿತ ಪ್ರಕಟಗೊಂಡಿತ್ತು. ಹೀಗೆ ಪ್ರಥಮ ಹೆಜ್ಜೆಯಲ್ಲೇ ಅವರ ಸಾಹಿತ್ಯ ಸೇವೆ ವಿಶಾಲವ್ಯಾಪ್ತಿ ಹರಡಿತ್ತು ಎಂದರೆ ತಪ್ಪಾಗಲಾರದು. ಸಾಹಿತ್ಯ ಸೇವೆ : ಸಾಮಾನ್ಯ ಮಹಿಳೆಯರ ಬದುಕನ್ನು ಕಥೆಗಳಲ್ಲಿ ಅನಾವರಣಗೊಳಿಸುತ್ತ, ಉತ್ತರ ಕರ್ನಾಟಕದ ಆಡುಭಾಷೆಯನ್ನು ಹಿಡಿದಿಟ್ಟವರು ಶಾಂತಾದೇವಿ ಕಣವಿರವರು.ಹಿಂದೆ ಮಹಿಳಾ ಸಾಹಿತ್ಯ ಎಂದು ಪ್ರತ್ಯೇಕಿಸುತ್ತಿದ್ದರು. ಈಗ ಪುರುಷರ ಸಮಾನವಾಗಿ ಲೇಖಕಿಯರು ಬರೆಯುತ್ತಿದ್ದಾರೆ. ಹೀಗಾಗಿ ಮಹಿಳಾ ಸಾಹಿತ್ಯ ಎನ್ನಬೇಕಿಲ್ಲ. ಜೊತೆಗೆ ಪ್ರತ್ಯೇಕವಾಗಿ ನೋಡಬೇಕಾದ ಅಗತ್ಯವಿಲ್ಲ ಎಂಬುದು ಶಾಂತಾದೇವಿ ಅವರ ಖಚಿತ ದೃಡ ನಿಲುವಾಗಿತ್ತು.ಸಾಹಿತ್ಯ ಕ್ಷೇತ್ರದಲ್ಲಿ ಶಾಂತಾದೇವಿ ಅವರ ಮೊದಲ ಕಥಾ ಸಂಕಲನ ‘ಸಂಜೆಮಲ್ಲಿಗೆ’ 1967ರಲ್ಲಿ ಪ್ರಕಟವಾಯಿತು. ಆಮೇಲೆ ‘ಬಯಲು ಆಲಯ’, ‘ಮರುವಿಚಾರ’, ‘ಜಾತ್ರೆ ಮುಗಿದಿತ್ತು’, ‘ಕಳಚಿ ಬಿದ್ದ ಪೈಜಣ’, ‘ನೀಲಿಮಾ ತೀರ’, ‘ಗಾಂಧಿ ಮಗಳು’ ಹಾಗೂ ‘ಈಚಿನ ಕಥೆಗಳು’ ಸಂಕಲನ ಪ್ರಕಟಗೊಂಡವು. ಸಮಗ್ರ ಕಥೆಗಳು ‘ಕಥಾಮಂಜರಿ’ (2002) ಹಾಗೂ ‘ಇನ್ನೊಂದು ಸಂಪುಟ’ (2005) ಎರಡು ಸಂಪುಟಗಳಲ್ಲಿ ಪ್ರಕಟಗೊಂಡವು. ಧಾರವಾಡ ಆಕಾಶವಾಣಿಯಲ್ಲಿ ಅವರ ಕಥೆ, ರೂಪಕ, ಕಿರುನಾಟಕ, ಹಾಸ್ಯ, ಕಥೆಗಳು ಪ್ರಸಾರಗೊಂಡವು. ಜೊತೆಗೆ ಹರಟೆಗಳ ಸಂಕಲನ ‘ಅಜಗಜಾಂತರ’ ಪ್ರಕಟಗೊಂಡಿತು. ನಿಜಗುಣ ಶಿವಯೋಗಿ ಮಕ್ಕಳ ಪುಸ್ತಕವಾಗಿ ಪ್ರಕಟಿತಗೊಂಡಿತು. ಹಾಗಾಗಿ ಅವರ ಕಥೆಗಳಲ್ಲಿ ತುಂಬ ಇಷ್ಟವಾದ ಕಥೆಗಳು, ಅವರು ಬರಹದಲ್ಲೂ ಕೂಡ ಕಾಣಬಹುದಾಗಿದೆ, ಪ್ರತಿ ಪಾತ್ರ, ಹಳ್ಳಿಯ ಹೆಣ್ಣು ಮಕ್ಕಳ ನೈಜ ಮುಗ್ಧತೆ, ಕಷ್ಟ, ಸಂಕಷ್ಟ, ಹೆಚ್ಚು ಕನಸಿರದ ಇದ್ದೊಂದು ಕನಸೂ ಕೈಗೂಡದ, ಈಗಲೂ ಜೀವಂತ ಪ್ರಸ್ತುತ ಅನ್ನುವ ಕಥೆಗಳಾಗಿವೆ ಜೊತೆಗೆ ಹಲವಾರು ಕಥೆಗಳು ಹಿಂದಿ, ಇಂಗ್ಲಿಷ್, ಮಲೆಯಾಳಂಗಳಿಗೆ ಭಾಷಾಂತರಗೊಂಡಿವೆ. ಪ್ರಮುಖ ಕೃತಿಗಳು ಹೀಗಿವೆ : ಕಥಾಸಂಕಲನ – ಸಂಜೆಮಲ್ಲಿಗೆ,ಬಯಲು—ಆಲಯ, ಮರುವಿಚಾರ,ಜಾತ್ರೆ ಮುಗಿದಿತ್ತು,ಕಳಚಿ ಬಿದ್ದ ಪೈಜಣ, ನೀಲಿ ಮಾ ತೀರ,ಗಾಂಧೀ ಮಗಳು. ಲಲಿತ ಪ್ರಬಂಧ – ಅಜಗಜಾಂತರ,ಮಕ್ಕಳ ಸಾಹಿತ್ಯ ನಿಜಗುಣಿ ಶಿವಯೋಗಿ. ಸಂಪಾದನೆ – ಪ್ರಶಾಂತ ಎನ್ನುವ ಕೃತಿಗಳು ನಾಡಿಗೆ ಅರ್ಪಣೆ ಮಾಡಿದ್ದಾರೆ. ಸಂಧ ಪ್ರಶಸ್ತಿ /ಗೌರವಗಳು : ಶಾಂತಾದೇವಿ ಕಣವಿ ಅವರ ‘ಬಯಲು-ಆಲಯ’ ಕಥಾಸಂಕಲನಕ್ಕೆ 1974ರ ಸಾಹಿತ್ಯ ಅಕಾಡಮಿ ಬಹುಮಾನ. 1987ರಲ್ಲಿ ಅಕಾಡಮಿ ಪ್ರಶಸ್ತಿ ಪುರಸ್ಕಾರ, ದಾನಚಿಂತಾಮಣಿ ಅತ್ತಿಮಬ್ಬೆ ಪುರಸ್ಕಾರವೂ ಸೇರಿದಂತೆ ಇನ್ನೂ ಇವರ ಸಾಹಿತ್ಯ ಸೇವೆಗೆ ಅನೇಕ ಗೌರವ ಸನ್ಮಾನಗಳು ದೊರಕಿವೆ. ಕೊನೆಯದಾಗಿ : ಶಾಂತದೇವಿಯವರ ಸಾಹಿತ್ಯದಲ್ಲಿ ಪ್ರಖರವಾಗಿ ಗುರುತಿಸಿಕೊಳ್ಳಬಹುದಾದ ಮೌಲ್ಯಾಧಾರಿತ ವೈಜ್ಞಾನಿಕ ವೈಚಾರಿಕ ಚಿಂತನೆಗಳ ವಿಚಾರಗಳು ಅವರ ಕೃತಿಗಳಲ್ಲಿ ನಾವೆಲ್ಲರೂ ಕಾಣಬಹುದಾಗಿದೆ.ಹೀಗಾಗಿ ಅವರ ಕೃತಿಗಳು ಇಂದಿನ ಸಮಾಜಕ್ಕೆ ಅತಿ ಅವಶ್ಯ ಹಾಗೂ ಮಾರ್ಗದರ್ಶನವಾಗಿವೆ. ಭಕ್ತಿಯ ನಮನ : ಕನ್ನಡ ಸಾಹಿತ್ಯ ಲೋಕಕ್ಕೆ ಶಾಂತಾದೇವಿ ಕಣವಿಯವರು ಬಹು ದೊಡ್ಡ ಶಕ್ತಿಯಾಗಿದ್ದರು.ಶಾಂತಾದೇವಿ ಕಣವಿಯವರ ಅಗಲಿಕೆ ದುಃಖ ತಂದಿದೆ. ಈ ದುಃಖವನ್ನು ತಾಳಿಕೊಳ್ಳುವ ಶಕ್ತಿ ಹಿರಿಯ ಸಾಹಿತಿ ಚೇತನರಾದ ಚನ್ನವೀರ ಕಣವಿಯವರಿಗೂ ಮತ್ತು ಕುಟುಂಬಕ್ಕೆ ಬರಲಿ. ಅಗಲಿದ ಮಹಾನ್ ಚೇತನಕ್ಕೆ ಅಂತರಾಳದ ಭಕ್ತಿಯ ನಮನಗಳು ಸಲ್ಲಿಸುತ್ತೇವೆ. ******** ಸಂಗಮೇಶ ಎನ್ ಜವಾದಿ

ಸಂತಾಪ Read Post »

ಇತರೆ

ಪ್ರಸ್ತುತ

ಸಾಂಸ್ಕೃತಿಕ ಲೋಕದ ದಲ್ಲಾಳಿಗಳು. ಮಲ್ಲಿಕಾರ್ಜುನ ಕಡಕೋಳ ಬೆಂಗಳೂರು, ಒಂದಾನೊಂದು ಕಾಲಕ್ಕೆ ಗುಲಾಬಿ ನಗರ ಎಂದು ಪ್ರಸಿದ್ದವಾಗಿತ್ತು. ಗುಲಾಬಿಯ ಆರಂಭದ ಅಕ್ಷರ “ಗು” ಎಂಬುದೆಲ್ಲೋ, ಎಂದೋ ಉದುರಿ ಬಿದ್ದು ಅದು ಲಾಬಿ ನಗರವಾಗಿ ಬಹಳೇ ವರ್ಷಗಳು ಉರುಳುತ್ತಿವೆ. ಆಗಿನ ಕಾಲದಲ್ಲಿ “ಲಾಬಿ” ಅನ್ನಲಾಗದಿದ್ದರೂ ನಿತ್ಯ ಜೀವನಾಗತ್ಯದ ಸಣ್ಣಪುಟ್ಟ ಕೆಲಸ ಕಾರ್ಯಗಳಿಗೆ ಬಲ್ಲವರ ಮೂಲಕ ಹೇಳಿಸಿ ಈಡೇರಿಸಿಕೊಳ್ಳುವ ತುರ್ತುಅಗತ್ಯದ ಶಿಫಾರಸು ಅವಾಗಿರ್ತಿದ್ದವು. ಹಳ್ಳಿಗಳಲ್ಲಿ ಚೆಂದಗೆ ಹಾರ್ಮೋನಿಯಂ ನುಡಿಸಿ, ಸಂಗೀತ, ನಾಟಕ ಕಲಿಸುವ ಮಾಸ್ತರ, ಬಯಲಾಟ, ಕೋಲಾಟ ಆಡುವ ಹಿರೀಕ ಕಲಾವಿದರು, ದಿನಗಟ್ಟಲೇ ಸೋಬಾನೆ ಪದ, ಬೀಸುವಕಲ್ಲು ಪದಹಾಡುವ ಮಹಿಳೆಯರು ಇರ್ತಿದ್ರು. ಪ್ರತಿಭಾಶಾಲಿಗಳಾದ ಅಂಥವರನ್ನು ಸ್ಥಳೀಯ ಶಾಲಾ ಮಾಸ್ತರನೋ, ಮಠದ ಅಯ್ಯನವರೋ ಬೆಂಗಳೂರಿನ ಸರಕಾರದ ಗಮನಕ್ಕೆ ತಂದು ಅಂಥವರನ್ನು ಗುರುತಿಸಿ ಗೌರವಿಸುವ, ಸಾಧ್ಯವಾದರೆ ಅಂಥವರಿಗೆ ಮಾಸಾಶನ ಕೊಡಿಸುವ ಸತ್ಕಾರ್ಯಗಳು ಮುಗ್ದತೆಯಿಂದ ಜರುಗುತ್ತಿದ್ದವು. ಎಲ್ಲಿ ಹೋದವೋ ಜವಾರಿತನದ ಮತ್ತು ಯತಾರ್ಥ ಪ್ರೀತಿಯ ಆ ದಿನಗಳು ಎಂದು ವರ್ತಮಾನದಲ್ಲಿ ಹಳಹಳಿಸುವಂತಾಗಿದೆ. ಅಷ್ಟೇ ಯಾಕೆ ಅದಕ್ಕಾಗಿ ಅಂದು ಅಧಿಕಾರಿ ಮತ್ತು ರಾಜಕೀಯ ವಲಯಗಳಲ್ಲಿ ಸುಮಧುರ ಸಂಸ್ಕೃತಿ ಬೆಸೆಯುವ, ನಿಸ್ವಾರ್ಥದ ಶುದ್ಧಜವಾರಿ ಕಾಲಮಾನ ಅದಾಗಿತ್ತು. ಸಂಸ್ಕೃತಿ ಕುರಿತು ಮಾತನಾಡುವುದೆಂದರೆ ಪಾವಿತ್ರ್ಯತೆಯ ಸಂಬಂಧಗಳ ಕುರಿತು ಮಾತನಾಡುವ ಗೌರವಭಾವ ತುಂಬಿ ತುಳುಕುತ್ತಿತ್ತು. ಹಾಗೇನೇ ಸಾಹಿತಿ, ಕಲಾವಿದರೆಂದರೆ ಆಗ ನಮಗೆಲ್ಲ ಲೈವ್ ಕ್ಯಾರಕ್ಟರುಗಳು. ಎಂಥವರಲ್ಲೂ ಅನನ್ಯತೆ ಉಕ್ಕಿಸುವ, ಸಾತ್ವಿಕತೆ ಸೂಸುವ ಆದರದ ಭಾವ ತುಂಬಿ ತುಳುಕುತ್ತಿದ್ದವು. ಬರಬರುತ್ತಾ ಅದೆಲ್ಲ ಕ್ಷೀಣಿಸಿ ಅದರ ಸಾಧ್ಯತೆಯ ಕ್ಷಿತಿಜಗಳು ಯದ್ವಾತದ್ವಾ ಹರಡಿಕೊಳ್ಳುತ್ತಾ ಅದರ ಹಿಡಿತಗಳು ಸಾಂಸ್ಕೃತಿಕ ಲೋಕವನ್ನೂ ಬಿಡದೇ ಅಕ್ಟೋಫಸ್ ತರಹ ಆವರಿಸಿಕೊಂಡು ಬಿಟ್ಟಿವೆ. ನೋವಿನ ಸಂಗತಿಯೆಂದರೆ ಅದೊಂದು ರಿಯಲ್ ಎಸ್ಟೇಟ್ ಬಿಜಿನೆಸ್ಸಿನಂತೆ ಹೆಸರು ಮತ್ತು ಆಮದಾನಿ ತರುವಂತಾಗಿದೆ. ನೇರವಾಗಿ ರಿಯಲ್ ಎಸ್ಟೇಟ್ ಎಂದು ಕರೆದು ಬಿಟ್ಟರೆ ಸಹಜವಾಗಿ “ದಲ್ಲಾಳಿಗಳೆಂದೇ” ಅರ್ಥೈಸಿ, ಸಾರ್ವಜನಿಕವಾಗಿ ಉತ್ತಮ ಅಭಿಪ್ರಾಯ ಮೂಡುವುದಿಲ್ಲ. ಅಂತೆಯೇ ಲಾಬಿಕೋರರು ಅದರ ಬದಲು ಸಾಂಸ್ಕೃತಿಕ ಲೋಕದಸೇವೆ ಎಂದು ಕರೆದುಕೊಂಡಿದ್ದು. ಅವರದು ಕಲ್ಚರಲ್ ಎಸ್ಟೇಟ್ ದಂಧೆ ಎಂಬ ಬನಾವಟಿ ಯಾರಿಗೂ ತಿಳಿಯಲ್ಲ. ಎಷ್ಟಾದರೂ ಸಾಹಿತ್ಯ, ಸಂಗೀತ, ಕಲೆ, ಪರಂಪರೆ, ಜಾನಪದ, ನಾಡು, ನುಡಿ, ಇವುಗಳನ್ನೊಳಗೊಂಡ ಸಂಸ್ಕೃತಿ ದಿಗ್ಗಜರ ಒಡನಾಟದ ಲೋಕವದು. ಅದರಿಂದಾಗಿ ಯಾರಿಗಾದರೂ ಎಳ್ಳರ್ಧ ಕಾಳಿನಷ್ಟೂ ಅಪಾರ್ಥ ಮಾಡಿಕೊಳ್ಳದ ಒಂದು ಗೌರವಯುತವಾದ ಸ್ಟೇಟಸ್. ಲೋಕದ ಕಣ್ಣಲ್ಲಿ ಕನ್ನಡ ಸಂಸ್ಕೃತಿಯ ಪರಿಚಾರಿಕೆ. ಯಾವುದೇ ರಿಸ್ಕ್ ಇಲ್ಲದೇ ಹಣ, ಹೆಸರು, ಕೀರ್ತಿ ವಗೈರೆಗಳು ಸಲೀಸಾಗಿ ಸಿಗುವ ಬಂಡವಾಳರಹಿತ ಹೈಟೆಕ್ ಬಿಜಿನೆಸ್. ಇದು ಕೆಲವರ ಪಾಲಿಗೆ ಪ್ರತಿಷ್ಠಿತ ಉದ್ದಿಮೆಯೇ ಆಗಿದೆ. ಆದರೆ ಮೇಲ್ನೋಟದಲ್ಲಿ ಇದೊಂದು ಲಾಬಿ ಮತ್ತು ಲಾಭಕೋರತೆಯ ಕಲ್ಚರಲ್ ಟ್ರೇಡಿಂಗ್ ಟ್ರೆಂಡ್ ಅಂತ ಅನ್ನಿಸೋದೇ ಇಲ್ಲ. ಅದೊಂಥರ ಕಾರ್ಪೊರೇಟ್ ವ್ಯವಹಾರ. ಅದರ ನೇಪಥ್ಯ ಹುನ್ನಾರ ಯಾರಿಗೂ ತಿಳಿಯುವುದೇ ಇಲ್ಲ. ಹಾಂಗಂತ ಸಾಂಸ್ಕೃತಿಕ ಲೋಕಿಗರಿಗೆ ರಾಜಕೀಯಪ್ರಜ್ಞೆ ಬೇಡವೆಂಬುದು ಖಂಡಿತವಾಗಿಯೂ ನನ್ನ ಅಭಿಪ್ರಾಯವಲ್ಲ. ಸಂಸ್ಕೃತಿ ಚಿಂತಕರಿಗೆ ಪರಿಪೂರ್ಣವಾದ ರಾಜಕೀಯ ಮತ್ತು ಸಾಮಾಜಿಕಪ್ರಜ್ಞೆ, ಪರಿಜ್ಞಾನ ಇರಬೇಕು. ಆದರೆ ಚಾಲ್ತಿಯಲ್ಲಿರುವ ಭಟ್ಟಂಗಿಗಳ ಒಳಹೇತು, ಕೊಳಕು ಹುನ್ನಾರದ ದ್ರಾಬೆ ರಾಜಕಾರಣದಿಂದ ಸಂಸ್ಕೃತಿ ಚಿಂತಕರು ದೂರವಿರಬೇಕಿದೆ. ದುರಂತದ ಸಂಗತಿ ಎಂದರೆ ಇಲ್ಲಿ ಯಾವುದಕ್ಕೆ ದೂರ, ಯಾವುದಕ್ಕೆ ಹತ್ತಿರ ಇರಬೇಕಾಗಿದೆ ಎಂಬುದರ ತದ್ವಿರುದ್ಧದ ವೈರುಧ್ಯಗಳದ್ದೇ ಅಟ್ಟಹಾಸ. ಸರಕಾರ ಯಾವುದೇ ಪಕ್ಷದ್ದಿರಲಿ, ಅವಕಾಶವಾದಿ ದಲ್ಲಾಳಿಗಳದ್ದೇ… ಕ್ಷಮಿಸಿ, ಕ್ಷಮಿಸಿ ಲಾಬೀಕೋರರದ್ದೇ ಯಾವಾಗಲೂ ಮೇಲುಗೈ. ವಿಧಾನಸೌಧದ ಮೂರನೇ ಮಹಡಿಯಲ್ಲಿ ‘ಅಂಥವರು’ ಎಲ್ಲಪಕ್ಷಗಳ ಸರಕಾರಗಳಲ್ಲೂ ಸಲ್ಲುತ್ತಲೇ ಇರ್ತಾರೆ. ಯಾಕಂದರೆ ಅವರು ಎಲ್ಲ ಕಾಲಕ್ಕೂ ಸಲ್ಲುವಂತಹ ಚಾಲಾಕಿತನದ ರಕ್ಷಾಕವಚ ಧರಿಸಿರುತ್ತಾರೆ. ಇಂಥವರ ನೆರವಿಗೆ ಜಾತಿ, ಮತ, ಮಠ, ಐಭೋಗ ಎಲ್ಲವೂ ಮೇಳೈಸಿರುತ್ತವೆ. ಜತೆಗೆ ಸಾಂಸ್ಕೃತಿಕ ಲೋಕಜ್ಞಾನವು ರವಷ್ಟಿದ್ದರೆ ಸಾಕು. ರಾಜಕೀಯ ಪಕ್ಷಗಳ ಪಾಲಿಗೆ ಇಂತಹ ಲಾಬಿಕೋರರು ಇವನಾರವ, ಇವನಾರವ ಎಂದೆನಿಸದೇ ಎಂದಿಗೂ ಇವ ನಮ್ಮವನೆಂದೆನಿಸಯ್ಯ ಎಂಬ ಅನುಕೂಲಸಿಂಧು ಪ್ರಮಾಣಪತ್ರ ಪಡಕೊಂಡಿರುತ್ತಾರೆ. ಹೀಗೆ ಇವರು ವಿಧಾನಸೌಧದ ಮೂರನೇ ಮಹಡಿಯ ಬೃಹಸ್ಪತಿಗಳನ್ನು ತಲೆದೂಗಿಸುತ್ತಾರೆಂದರೆ ಅರೆ ಸರಕಾರಿ, ಸರಕಾರಿ ಇಲಾಖೆಗಳ ಮಹಡಿ, ಬಹುಮಹಡಿ ಕಟ್ಟಡಗಳವರದ್ದು ಇನ್ಯಾವಲೆಕ್ಕ.? ಅಷ್ಟಕ್ಕೂ ಇವರು ಅದೆಂಥ ಚಾಲಾಕಿಗಳೆಂದರೆ ಆಯಕಟ್ಟಿನ ಇಲಾಖೆಗಳಲ್ಲಿ ಅಂತಸ್ತಿಗನುಗುಣವಾಗಿ ಸಾಹೇಬ್ರೇ, ಧಣಿ, ಅಕ್ಕಾ, ಅಣ್ಣಾ ಅನ್ನುತ್ತಲೇ ಕೈ ಬಿಸಿ ಮಾಡುತ್ತಾ ಕೆಲಸ ಮಾಡಿಸಿಕೊಳ್ಳುವ ಮಹಾ ಬೆರಕಿಗಳು. ಇವರ ಚಾಲಾಕಿತನಕ್ಕೆ ಸರ್ಕಾರದ ಅನುದಾನಗಳು ಮಾತ್ರ ಗುರಿಯಲ್ಲ. ಸಾಂಸ್ಕೃತಿಕ ಲೋಕದ ಉತ್ಸವ, ವಿಶ್ವಮೇಳ, ಪರಿಷೆ, ಪ್ರಾಧಿಕಾರ, ಪ್ರತಿಷ್ಠಾನ, ಅಕಾಡೆಮಿಗಳ ನೇಮಕಾತಿ, ರಾಜ್ಯ, ರಾಷ್ಟ್ರ ಮಟ್ಟದ ಪ್ರಶಸ್ತಿಗಳನ್ನು ಪಡಕೊಳ್ಳುವ ಇಲ್ಲವೇ ಹೊಡಕೊಳ್ಳುವಲ್ಲಿ ಇವರದು ಎತ್ತಿದ ಕೈ. ಸರಕಾರದ ವಿಶೇಷ ಸೌಲಭ್ಯ, ಸವಲತ್ತುಗಳನ್ನು ಕೊಡಿಸುವಲ್ಲೂ, ಪಡೆಯುವಲ್ಲೂ ಇವರದು ಮುಂಚೂಣಿ ನಾಯಕತ್ವ. ಒಮ್ಮೊಮ್ಮೆ ವಂದಿಮಾಗಧರಾಗಿ, ಮತ್ತೊಮ್ಮೆ ಪ್ರತಿಭಟನೆಯ ಪೋಷಾಕು ಧರಿಸುವ ಇವರು ಯಾವುದೇ ಸಾಂಸ್ಕೃತಿಕ ಬದ್ಧತೆ ಹೊಂದಿರಲಾರರು. ಸಮಯಕ್ಕೆ ತಕ್ಕವೇಷ, ಸಭೆಗೆ ತಕ್ಕರಾಗ ಹಾಡುವ ನಿಪುಣಕಲೆ ರೂಢಿಸಿ ಕೊಂಡಿರುತ್ತಾರೆ. ಎಡಚ, ಎಬಡನಂತಹ ಮಂತ್ರಿಯೇನಾದರು ಸಿಕ್ಕರೆ ಸಾಕು ಅವನನ್ನು ಆಟ ಆಡಿಸುವಲ್ಲಿ ಇವರನ್ನು ಮೀರಿಸುವವರೇ ಇರಲ್ಲ. ಅಷ್ಟಕ್ಕೂ ಈ ಹೊಲಬುಗೇಡಿಗಳು ಅಡ್ಡಕಸುಬಿಗಳೇನಲ್ಲ. ಎಲ್ಲ ಕಲೆಗಳ ತಟಕು ತಟಕು ಪರಿಚಯವುಳ್ಳ ಸಕಲಕಲಾ ಪರಾಕ್ರಮಿ ಗೋಸುಂಬೆಗಳು. ಆದಾಗ್ಯೂ ಎಮರ್ಜೆನ್ಸಿಗೆ ಇರಲೆಂದು ಕಲೆಯ ಯಾವುದಾದರೊಂದು ಪ್ರಕಾರದಲ್ಲಿ ಸಣ್ಣದೊಂದು ಸಾಧನೆಯ ಸರ್ಟಿಫಿಕೆಟ್, ಆಧಾರ್ ಕಾರ್ಡಿನಂತೆ ಇಟ್ಟುಕೊಂಡಿರುತ್ತಾರೆ. ಒಂದೆರಡು ಸಂಘ ಸಂಸ್ಥೆ, ಟ್ರಸ್ಟ್, ಪ್ರತಿಷ್ಠಾನಗಳ ಅಧಿಕೃತ ನೊಂದಣಿ ಮಾಡಿಟ್ಟುಕೊಂಡು ತಪ್ಪದೇ ಅವುಗಳ ಹೆಸರಲ್ಲಿ ಇಲ್ಲಿಯ ಮತ್ತು ದಿಲ್ಲಿಯ ಸರಕಾರದ ಖಜಾನೆಗಳಿಂದ ಬಳಬಳ ಅಂತ ಅನುದಾನ ಉದುರಿಸಿ ಕೊಳ್ಳುತ್ತಾರೆ. ಅದಕ್ಕೆಲ್ಲ ಜಿಎಸ್ಟಿ ಸಮೇತವಾದ ಬಿಲ್ಲು ಬಾಣಗಳನ್ನು ಅತ್ಯಂತ ವ್ಯವಸ್ಥಿತವಾಗಿ ತಯಾರಿಸಿ ಕೊಡುವಲ್ಲಿ ಇವರು ಸಿಕ್ಕಾಪಟ್ಟೆ ಶ್ಯಾಣೇರು. ಈ ಕಠಿಣ ಪರಿಶ್ರಮವನ್ನು ಸಾಂಸ್ಕೃತಿಕ ಸಂಘಟನೆ ತಮಗೆ ದಶಕಗಳಿಂದ ಕಲಿಸಿ ಕೊಟ್ಟಿದೆಯೆಂದು ವಿಧಾನಸೌಧದ ಕಾರಿಡಾರುಗಳಲ್ಲೂ ಪುಂಗಿ ಊದುತ್ತಾರೆ. ಮೊದ ಮೊದಲು ಬೆಂಗಳೂರಿನಲ್ಲಿ ಕಾಣಿಸಿಕೊಂಡ ಈ ರೋಗ ಬೆಂಗಳೂರಿಗಷ್ಟೇ ಸೀಮಿತಗೊಳ್ಳಲಿಲ್ಲ. ಇದು ಕೊರೊನಾ ವೈರಾಣು ತರಹ ಎಲ್ಲ ಕಡೆಗೂ ಸಾಂಕ್ರಾಮಿಕ ರೋಗವಾಗಿ ಹಬ್ಬಿದೆ. ಕೆಲವರು ತಮ್ಮ ಸಾರಿಗೆ ಸಂವಹನದ ಅನುಕೂಲ ಸರಳಗೊಳ್ಳಲೆಂದು ಅಂಥವರು ಬೆಂಗಳೂರಿಗರಾಗಿದ್ದು, ಮತ್ತೆ ಕೆಲವರು ಅನಿವಾಸಿ ಬೆಂಗಳೂರಿಗರು. ರಾಜಧಾನಿಯ ಈ ಲಾಬಿಕೋರರು ಜಿಲ್ಲೆ, ತಾಲೂಕುಗಳಲ್ಲೂ ಶಾಖಾಮಠಗಳಂತೆ (ಗೆಳೆಯರೊಬ್ಬರ ಪ್ರಕಾರ ಅಲಿಬಾಬಾ ಮತ್ತು ೪೦…) ತಮ್ಮ ಶಿಷ್ಯಬಳಗ ಸಾಕಿ ಕೊಂಡಿರುತ್ತಾರೆ. ಆ ಮೂಲಕ ಅವರ ಬಿಜಿನೆಸ್ ನಾಡಿನ ತುಂಬೆಲ್ಲ ಹರಡಲು ಅನುಕೂಲ. ಸಿರಿಗನ್ನಡದ ಪ್ರಾಂಜಲ ಕಲೆ, ಸಂಸ್ಕೃತಿಗೆ, ಬೋಳೆತನದ ಕಲಾವಿದರಿಗೆ ಇಂಥವರಿಂದ ಬಿಡುಗಡೆಯೇ ಇಲ್ಲ ಎನ್ನುವಷ್ಟು ಇವರ ಕಬಂಧ ಬಾಹುಗಳು ಬಲಾಢ್ಯಗೊಂಡಿವೆ. ಕೆಲವು ಮಠಾಧೀಶರು, ಪತ್ರಕರ್ತರು ಇಂತಹ ಲಾಬಿಕೋರರ ಪರನಿಂತು ಲಾಬಿಮಾಡುವುದು, ಆಶೀರ್ವದಿಸುವುದು ಅಷ್ಟೇನು ನಿಗೂಢವಲ್ಲದ ಸಾಂಸ್ಕೃತಿಕ ದುರಂತ. ಅನರ್ಹರಿದ್ದೂ ತಮ್ಮ ಪಾಲಿನ ಸಂಘ, ಸಂಸ್ಥೆಗಳ ಅನುದಾನ, ಪ್ರಶಸ್ತಿ ಹೊಡಕೊಂಡಿದ್ರೆ ಮುಂಡಾ ಮೋಚಲೆನ್ನಬಹುದಿತ್ತು. ಆದರೆ ರಾಜ್ಯ ಮತ್ತು ಕೇಂದ್ರ ಸರಕಾರಗಳಿಂದ ಅನುದಾನ, ಸಹಾಯಧನ, ಆಪದ್ಧನ, ಪ್ರಶಸ್ತಿಗಳನ್ನು ಇತರೆ ಅನರ್ಹರಿಗೇ ಕೊಡಿಸುವ ದಲ್ಲಾಳಿತನದಲ್ಲಿ ಇವರದು ಹೆಸರಾಂತ ಹೆಸರು. ಕೆಲವರ ಪಾಲಿಗದು ಕಾಯಕವೇ ಆಗಿಬಿಟ್ಟಿದೆ. ಸರಕಾರದ ಎಲ್ಲ ಮಜಲುಗಳ ಒಳಕೀಲು, ಕೀಲಿಕೈಗಳ ದಟ್ಟಪರಿಚಯ ಇವರಿಗೆ ಕರತಲಾಮಲಕ. ಏನೊಂದು ಅನುಮಾನಕ್ಕೆಡೆ ಇಲ್ಲದಂತೆ, “ಪುಣ್ಯಾತ್ಮರಿವರು” ಎಂಬ ತಮ್ಮ ಇಮೇಜಿಗೆ ಧಕ್ಕೆ ಬಾರದಂತೆ ಹವಾ ಮೇನ್ಟೇನ್ ಮಾಡುವಲ್ಲಿ ಇವರನ್ನು ಮೀರಿಸುವವರೇ ಇಲ್ಲ. ಸಂಸ್ಕೃತಿಯ ಗಂಧಗಾಳಿಯಿಲ್ಲದ ಭ್ರಷ್ಟ ಅಧಿಕಾರಿಗಳು, ಕೀರ್ತಿಕಾಮುಕ ರಾಜಕಾರಣಿಗಳಿಗೆ ಸಹಜವಾಗಿ ಇಂತಹ ಕಲರ್ಫುಲ್ ಪುಂಗೀದಾಸರೇ ಬೇಕು. ಇಂಥವರ ಪುಂಗಿದಾಸನಿಷ್ಠೆ ಮೆಚ್ಚಿ ಯಾವನಾದರು ಹುಚಪ್ಯಾಲಿ ಮಂತ್ರಿ ಮಹಾಶಯ ಇವರನ್ನು ವಿಧಾನ ಪರಿಷತ್ತಿಗೋ, ರಾಜ್ಯಸಭೆಗೋ ನೇಮಕ ಮಾಡುವ ಸಾದೃಶ್ಯ ಪವಾಡಗಳು ಜರುಗಿದರೇನು ಅಚ್ಚರಿ ಪಡಬೇಕಿಲ್ಲ.! ಆಗ ಜೈ ಹೋ ಲಾಬಿ, ಜೈಹೋ..! ಎನ್ನವುದೊಂದೇ ಬಾಕಿ. ಜೋಕಲ್ಲ ಇವರನ್ನು ದಲ್ಲಾಳಿಗಳು ಅನ್ನುವಂಗಿಲ್ಲ ಜೋಕೆ…!! *******

ಪ್ರಸ್ತುತ Read Post »

ಇತರೆ

ಪ್ರಸ್ತುತ

೧೯೭೫ ರ ತುರ್ತು ಪರಿಸ್ಥಿತಿ ಮತ್ತು ಇಂದಿನ ಲಾಕ್ ಡೌನ್…   ಅಂದಿಗೆ ಹೋಲಿಸಿದರೆ ಇಂದಿನ ಸ್ಥಿತಿ ಭೀಕರ, ಭಯಾನಕ. ಅಂದಿನ ಪ್ರಧಾನಿಯ ಖುರ್ಚಿ ಅಲುಗಾಡ ತೊಡಗಿದಾಗ ತುರ್ತು ಪರಿಸ್ಥಿತಿ ಹೇರಲಾಗಿತ್ತು. ರಾಜಕೀಯ ವಿರೋಧಿಗಳನ್ನು ಜೈಲಿಗೆ ಹಾಕಲಾಯಿತು, ಸರ್ಕಾರದ ವಿರುಧ್ಧ ಯಾರೂ ಮಾತನಾಡುವಹಾಗಿರಲಿಲ್ಲ. ಆದರೆ, ಜನಸಾಮನ್ಯರ ಬದುಕು ಎಂದಿನಂತೆ ಸಾಗಿತ್ತು, ಆರ್ಥಿಕ ಚಟುವಟಿಕೆಗಳನ್ನು ನಡೆಸಲು ಯಾವುದೇ ತೊಂದರೆ ಇರಲಿಲ್ಲ;  ಬದುಕಿನ ಆರ್ಥಿಕ ಅಭದ್ರತೆ ಯಾರನ್ನೂ ಕಾಡಿರಲಿಲ್ಲ.  ಇಂದಿನ ಸ್ಥಿತಿಯ ಹೆಸರು ಲಾಕ್ ಡೌನ್, ಜನರ ಜೀವ ಉಳಿಸಲು ಅನುಸರಿಸುವ ವಿಧಾನವೆಂದು ಹೇಳಿ ನಂಬಿಸಲಾಗುತ್ತಿದೆ.ಜನರ ವೈಯುಕ್ತಿಕ ಬದುಕನ್ನೂ ನಿಯಂತ್ರಿಸುತ್ತಿರುವ ಇದು ಅಂತರಾಷ್ಟ್ರೀಯ ಸಂಚಿನ ಒಂದು ಭಾಗ ಎಂಬುದು ಜನಸಾಮನ್ಯರಿಗೆ ತಿಳಿಯದ ರೀತಿಯಲ್ಲಿ ಭಯ ಸೃಷ್ಟಿಸಲಾಗಿದೆ. ದಿಕ್ಕೆಟ್ಟಿರುವ ದೇಶದ ಆರ್ಥಿಕ ಪರಿಸ್ಥಿತಿ, ನುಚ್ಚು ನೂರಾಗಿರುವ ವೈಯುಕ್ತಿಕ ಅರ್ಥಿಕ ಬದುಕು, ಕೋಟ್ಯಾಂತರ ಕಾರ್ಮಿಕರ ವಲಸೆಯ ಮಹಾಪರ್ವ ಮುಂತಾದ ಸಂಕಷ್ಟಗಳಿಗಿಂತ ಬೆರಳೆಣೆಕಿಯ ಶ್ರೀಮಂತರ ಹಿತರಕ್ಷಣೆಯೇ ಸರ್ಕಾರದ ಆದ್ಯತೆಯಾಗಿದೆ. ಎರಡು ತಿಂಗಳಿನಿಂದ ಸ್ಥಗಿತಗೊಂಡಿರುವ ಆರ್ಥಿಕ ಚಟುವಟಿಕೆಗಳು  ಮಧ್ಯಮ ವರ್ಗದವರನ್ನು ನಾಳಿನ ಬದುಕಿನ ಕುರಿತು ಭಯ ಭೀತರಾಗುವಂತೆ ಮಾಡಿದೆ. ಹಳ್ಳಿಗಳಿಂದ ನಗರಗಳಿಗೆ ವಲಸೆ ಬಂದ ಕಾರ್ಮಿಕರು ಉದ್ಯೋಗವಿಲ್ಲದೇ, ಆದಾಯದ ಮೂಲವೂ ಇಲ್ಲದೇ ಬಳಲುತ್ತಿದ್ದಾರೆ. ಅಂದು ಉತ್ತರ ಭಾರತದ ಕೆಲೆವೆಡೆ ಜನಸಾಮನ್ಯರ ಮೇಲೆ ಸಂತಾನ ನಿಯಂತ್ರಣದ ಬಲತ್ಕಾರದ ಹೇರಿಕೆ ನಡೆದಿತ್ತು, ಇಂದು   ಮಿತಿಮೀರಿರುವ ಅಧಿಕಾರಿಗಳ ದರ್ಪ, ಭ್ರಷ್ಟಾಚಾರಗಳನ್ನು ತಮ್ಮ ಜೀವ ರಕ್ಷಣೆಯ ಕಸರತ್ತು ಎಂದು  ಜನರು ನಂಬುವಂತೆ ಮಾಡಲಾಗಿದೆ. ತಮ್ಮ ಆರೋಗ್ಯ ರಕ್ಷಣೆಗಾಗಿ ಶುದ್ಧ ವಾಯು ಸೇವನೆಗೂ ಅವಕಾಶ ನೀಡದೇ ವಯಸ್ಕರನ್ನು, ಮಕ್ಕಳನ್ನು ಅಮಾನವಿಯ ರೀತಿಯಲ್ಲಿ ಗೃಹಬಂಧಿಯಾಗಿಸಲಾಯಿತು. ಮನೆಯಿಂದ ಹೊರಬಂದರೆ ಕೊರೊನಾ ಪೀಡಿತರಾಗುತ್ತರೆಂಬ ಅತಾರ್ಕಿಕ, ಅನಗತ್ಯ ಭಯ ಪ್ರಚಾರ ಮಾಡಲು ಮಾಧ್ಯಮಗಳೂ ಕೈ ಜೋಡಿಸಿವೆ.  ಅಂದು ಮಾಧ್ಯಮಗಳನ್ನು ಬೆದರಿಸಿ ನಿಯಂತ್ರಿಸಲಾಗಿತ್ತು; ಇಂದು  ಅವರನ್ನು ಖರೀದಿಸಲಾಗದಿದ್ದರೆ ಬೆದರಿಕೆ ಒಡ್ಡಲಾಗುತ್ತಿದೆ,ಸಾಮಾಜಿಕ ಜಾಲತಾಣಗಳ ಮೂಲಕ ಅಪಹಾಸ್ಯ, ಬೆದರಿಕೆಯ ತಂತ್ರದ ಬಳಕೆ ನಡೆದಿದೆ.  ಅಂದು ಉದ್ಯಮಿಗಳಿಗೆ ಭೂಮಿ ನೀಡುವ ಸಲುವಾಗಿ ಜನರಿಂದ ಒತ್ತಾಯದಿಂದ ಕಸಿದುಕೊಳ್ಳಲಾಯಿತು; ಇಂದು ನೊಂದ ಜನರಿಗೆ ಸಹಾಯ ಮಾಡುವ ಸೋಗಿನಲ್ಲಿ ದೇಶದ ಅರ್ಥ ವ್ಯವಸ್ಥೆಯ ಹಿಡಿತವನ್ನು ಕೆಲವೇ ವ್ಯಕ್ತಿಗಳ ಹತೋಟಿಗೆ ನೀಡಲು ಅಗತ್ಯವಾದ ಕಾನೂನು ತಿದ್ದುಪಡಿಗಳನ್ನು, ಘೋಷಣೆಗಳನ್ನು ಈ ಅವಧಿಯಲ್ಲೇ ಮಾಡಲಾಗುತ್ತಿದೆ.     ಬ್ಯಾಂಕುಗಳಿಂದ ಸಾಲನೀಡಿಕೆಯ ಹೆಚ್ಛಳವೇ ಸರ್ಕಾರದ ಸಹಾಯ, ಸ್ವಾವಲಂಬನೆಯ ಕನಸನ್ನು ಘೋಷಣೆಗೆ ಸೀಮಿತಗೊಳಿಸಿ, ವಿದೇಶಿ ಕಂಪನಿಗಳಿಗೆ ಸ್ವಾಗತ ಕೋರುತ್ತಾ, ದೇಶದ ಸಂಪತ್ತನ್ನು ಲೂಟಿ ಹೊಡೆಯುವ ಅವಕಾಶವನ್ನು ಬೆರೆಳೆಣಿಕೆಯ ವ್ಯಕ್ತಿಗಳಿಗೆ ನೀಡುತ್ತಿರುವದನ್ನು ಕಂಡೂ ಜೈಕಾರ ಹಾಕುತ್ತಿರುವವರು ತಮ್ಮ ಬುದ್ಧಿಗೂ ಲಾಕ್ ಡೌನ್ ವಿಧಿಸಿಕೊಡಿದ್ದರೆನೋ?   ಅಂದು ಅಧಿಕಾರಿಗಳ ದರ್ಪ ಮತ್ತು ಕಾಂಗ್ರೆಸ್ ಪುಢಾರಿಗಳ ಹಾರಟದ ಹೊರತಾಗಿ ಹೆಚ್ಚಿನ ಬಿಸಿ ದಕ್ಷಿಣ ಭಾರತದಲ್ಲಿ ತಗಲಲೇ ಇಲ್ಲ. ಇಂದು ದೇಶದ ಪ್ರತಿಯೋರ್ವ ವ್ಯಕ್ತಿಯೂ ಲಾಕ್ ಡೌನ್ ನಿಂದ ಪೀಡಿತನಾಗಿದ್ದಾನೆ.   ಕೊರೊನಾದೊಂದಿಗೆ ಬದುಕಲು ಕಲಿಯಬೇಕೆಂಬ ಉಪದೇಶ ನೀಡಲು ಇಷ್ಟೊಂದು ಅನಾಹುತ ಘಟಿಸಬೇಕಿತ್ತೇ?    ಇದೂ ಕೂಡಾ ಬಂಡವಾಳಶಾಹಿ ಶೋಷಣೆಯ ಒಂದು ವಿಧ;ಯಾಕೆಂದರೆ, ಭಾರತದ ಸರ್ಕಾರವನ್ನು ಇಂದು ನಡೆಸುತ್ತಿರುವವರು ಕೆಲವೇ ಕೆಲವು ಉದ್ಯಮಿಗಳು /ಬಂಡವಾಳಶಾಹಿಗಳು ಹಾಗೂ ಅವರಿಂದ ಖರೀದಸಲ್ಪಟ್ಟ ಅಧಿಕಾರಿಗಳು; ಎದುರಿಗೆ ಕಾಣುವ ರಾಜಕಾರಣಿಗಳು ಸೂತ್ರದ ಗೊಂಬೆಗಳು ಹಾಗೂ ಲೂಟಿಯ ಚಿಕ್ಕ ಪಾಲುದಾರರು. *************** ಗಣೇಶ ಭಟ್ ಶಿರಸಿ

ಪ್ರಸ್ತುತ Read Post »

ಇತರೆ

ನಾನೇಕೆ ಬರೆಯುತ್ತೇನೆ?

ಬದುಕಿನ ಉತ್ಸಾಹ ಕಾಪಿಟ್ಟುಕೊಳ್ಳಲು ನಾನೇಕೆ ಬರೆಯುತ್ತೇನೆ? ಈ ಪ್ರಶ್ನೆಗೆ ನನಗಿನ್ನೂ ಸಮಾಧಾನಕರ ಉತ್ತರ ದೊರೆತಿಲ್ಲ.  ಯಾಕೆಂದರೆ ನಾನು ಬರೆಯುವಾಗ ಯಾವುದೇ ಉದ್ದೇಶವನ್ನಿಟ್ಟುಕೊಂಡು ಬರೆಯುವುದಿಲ್ಲ. ನನ್ನಬರವಣಿಗೆಯಿಂದಸಮಾಜದಲ್ಲಿಮಹತ್ತರಬದಲಾವಣೆ ತರಬಹುದೆಂಬ ಭ್ರಮೆ ನನಗಿಲ್ಲ.  ನನ್ನ ಬರವಣಿಗೆಗಳಿಂದ ರಾತ್ರಿ ಕಳೆದು ಬೆಳಗಾಗುವುದರಲ್ಲಿ ನಾನೊಬ್ಬ ಮಹಾನ್ ಲೇಖಕ ನಾಗ ಬೇಕೆಂಬ ಮಹತ್ವಾಕಾಂಕ್ಷೆ ನನಗಿಲ್ಲ.ನನ್ನ ಜ್ಞಾನದ, ಪ್ರತಿಭೆಯ ಪರಿಮಿತಿಯಲ್ಲಿ ಬರೆಯುವ ನಾನು ಯಾವುದೆ ಇಸಂ ಗಳಿಗೆ,ರಾಜಕೀಯಸಿಧ್ಧಾಂತಗಳಿಗೆ, ಜಾತಿ ಮತಗಳಿಗೆ ಬದ್ಧನಾಗಿ ಬರೆಯುವುದಿಲ್ಲ. ವೈಶಾಖದುರಿಬಿಸಿಲಮಧ್ಯಾಹ್ನ ಸುರಿವ ಮಳೆಹನಿಗಳ ಸ್ಪರ್ಷಕ್ಕೆ ಅರಳುವ ಮಣ್ಣಿನ ಕಣಗಳ ಕಂಪು ನನ್ನಲ್ಲಿ ಕಾವ್ಯ ಸ್ಪಂದನೆಯನ್ನುಂಟುಮಾಡುತ್ತದೆ.ನಮ್ಮೂರ ಮಲ್ಲಿಕಾರ್ಜುನ ಬೆಟ್ಟದೆತ್ತರದಲ್ಲಿ ಕಾಡು ಹೂವುಗಳ ಕಂಪನ್ನು ಹೊತ್ತು ಬೀಸುವ ತಂಗಾಳಿ ನನ್ನಲ್ಲಿ ಪುಳಕವೆಬ್ಬಿಸುತ್ತದೆ.  ಮುಂಜಾನೆ ಅಂಗಳದಲ್ಲರಳಿದ ಮಲ್ಲಿಗೆ, ಗುಲಾಬಿ, ದಾಸವಾಳ, ಮಂದಾರ ಹೂವುಗಳ ಮೇಲೆ ಮೃದುವಾಗಿ ಕುಳಿತು ನೇಸರನ ಎಳೆಕಿರಣಗಳನ್ನು ಪ್ರತಿಫಲಿಸುವ ಮಂಜು ನನಗೆ ಆನಂದ ನೀಡುತ್ತದೆ. ನನ್ನ ಸುತ್ತಲಿನ ಪರಿಸರದ, ಹಾಗೂ ವಿಶ್ವದ ಆಗು ಹೋಗುಗಳು ನನ್ನಲ್ಲಿ ಸ್ಪಂದನೆಯುಂಟುಮಾಡುತ್ತವೆ. ನನಗೇ ಅರಿವಾಗದಂತೆ ನನ್ನೊಳಗಿನೊಳಗೆಲ್ಲೋ ಈ ಎಲ್ಲವೂ ತುಂಬಿಕೊಂಡು ಬಿಡುತ್ತವೆ.. ಸುಖ ದುಃಖಗಳ ಬದುಕಿನ ಚಕ್ರ, ಅದನ್ನುರುಳಿಸುವ ಕಾಲ, ಮಾನವೀಯ ಸಂಬಂಧಗಳ ನಿಗೂಢಜಾಲ,ನನ್ನನ್ನು ಸದಾ ಕಾಡುತ್ತವೆ.  ವೃತ್ತಿ ಜೀವನದ ಬೆನ್ನು ಹತ್ತಿ ಹಲವು ಹತ್ತು ಊರುಗಳ ಸುತ್ತಿ ಬರುವಾಗ ದಕ್ಕಿದ ಅನುಭವಗಳ ಸರಕು ನನ್ನೊಳಗಿನ ಗೊಡೋನಿನಲ್ಲಿ ಭದ್ರವಾಗಿವೆ.ಸೂಕ್ಷ್ಮ ಸಂವೇದಿ ಮನಸ್ಸಿನ ಸ್ನೇಹಿತರೊಂದಿಗಿನ ಮಾತು ಕತೆ, ಚರ್ಚೆ, ಜತೆಗೆ ಉತ್ತಮ ಸಾಹಿತ್ಯ ಕೃತಿಗಳ ಓದು ನನ್ನೊಳಗೊಬ್ಬಕವಿಯನ್ನು ಸೇರಿಸಿವೆ.ಕೆಲವೊಮ್ಮೆ ಮನಸ್ಸು ತಳಮಳದಬೀಡಾದಾಗ , ಬದುಕು ದುರ್ಭ್ಹರವೆನಿಸಿದಾಗ ನನ್ನೊಳಗಿನ ಕವಿಯನ್ನು ಕರೆಯುತ್ತೇನೆ.  ಶಿಥಿಲ ಗೊಂಡ ಮನಸ್ಸನ್ನು ಪುನಹ ಕಟ್ಟಿಕೊಳ್ಳಲು , ಕಾಲದ ಉರುಳಿಗೆ ಸಿಕ್ಕು ಸವೆದು ಹೋದ ಬದುಕನ್ನು ಪುನರ್ನಿರ್ಮಿಸಿಕೊಳ್ಳಲು, ಬದುಕಿನಉತ್ಸಾಹವನ್ನು ಸದಾ ಕಾಪಿಟ್ಟುಕೊಳ್ಳಲು, ಮತ್ತು ಕಾವ್ಯ ನಿರ್ಮಿತಿಯಿಂದ ದೊರಕುವ ಆನಂದವನ್ನು ಅನುಭಿಸಲು – ನಾನು ಕವಿತೆಗಳನ್ನು ಬರೆಯುತ್ತೇನೆ. ******* ಮೇಗರವಳ್ಳಿ ರಮೇಶ್   RA

ನಾನೇಕೆ ಬರೆಯುತ್ತೇನೆ? Read Post »

ಇತರೆ

ಲಹರಿ

ಎಮ್ಮೆ ಮತ್ತು ಜೋತಿಷ್ಯ ಅನುಸೂಯ ಎಂ.ಆರ್. ನಮ್ಮ ಅಮ್ಮ ಗಟ್ಟಿ ಮುಟ್ಟಾಗಿರುವ ತನಕ ನಾವು ಹಾಲು ಕೊಂಡು ಕೊಳ್ಳುತ್ತಿರಲಿಲ್ಲ.ನಮ್ಮ ಮನೆಯಲ್ಲಿ ಹಾಲು ಕರೆಯುವ ಒಂದು ಎಮ್ಮೆ ಸದಾ ಇದ್ದೇ ಇರುತ್ತಿತ್ತು. ಬೆಳಿಗ್ಗೆ ನಾಲ್ಕೈದು  ಲೀಟರ್ ಮತ್ತು ಸಂಜೆ ಅಷ್ಟೇ ಪ್ರಮಾಣದಹಾಲು ಕೊಡುವಂತಹವು.ಆಗ ನಮ್ಮ ಮನೆಯಲ್ಲಿ ಸದಾಹಾಲು,ಮೊಸರು,ತುಪ್ಪಗಳ ಸಮೃದ್ಧಿಯ ಸುವರ್ಣಯುಗ. ನಮ್ಮಮ್ಮ ಹಸುಗಳನ್ನು ಸಾಕುತ್ತಿರಲಿಲ್ಲ,ಹಸು ನಮಗೆ ಆಗಿ ಬರುವುದಿಲ್ಲ ಎಂದು ಹೇಳುತ್ತಿದ್ದರು. ನಮ್ಮಮ್ಮನ ದಿನಚರಿ ಆರಂಭವಾಗುವುದೆ,  ಹಾಲು ಕರೆಯುವುದರಿಂದ ಸೌದೆ ಒಲೆಯ ಸಣ್ಣ ಉರಿಯಲ್ಲಿ ಹಾಲು ಕಾಯಿಸುತ್ತಿದ್ದ ಕಾರಣ ರೊಟ್ಟಿಯಂತೆ ಕೆನೆ ಕಟ್ಟುತ್ತಿತ್ತು.ನಂತರ ಮಜ್ಜಿಗೆ ಕಡೆಯುವುದು.ಪ್ರತಿದಿನ ಒಂದು ಮುದ್ದೆ ಗಾತ್ರದ ಬೆಣ್ಣೆ ತೆಗೆಯುತ್ತಿದ್ದರು.ನಮ್ಮ ಅಕ್ಕ ಪಕ್ಕದ ಮನೆಯವರಿಗೆಲ್ಲಾ ಮಜ್ಜಿಗೆ ದಾನ. ನಮ್ಮ ಮನೆಯಲ್ಲಿ ಇಡ್ಲಿ, ರೊಟ್ಟಿ, ಚಟ್ನಿ ಯೊಂದಿಗೆ ಬೆಣ್ಣೆಸಹಾ.ಬೆಣ್ಣೆ ಕಾಯಿಸುವಾಗ ಮನೆಯೆಲ್ಲಾ ಘಮಘಮ. ಬೆಣ್ಣೆ ಕಾಸುವಾಗ ಹಾಕುವ ವೀಳ್ಯದೆಲೆಗೆ  ಭಾರಿ ಬೇಡಿಕೆ. ಹಾಗಾಗಿ ನಮ್ಮ ಮನೆಯಲ್ಲಿ ತುಪ್ಪವಿಲ್ಲದೆ  ತುತ್ತು ಎತ್ತುತಿರಲಿಲ್ಲ.ನಮ್ಮಮನೆಯಲ್ಲಿದ್ದ ಮಹಿಷಿಯರು ಸದಾ ಹೆಣ್ಗರುಗಳನ್ನೇ ಕೊಡುತ್ತಿದ್ದುದ್ದು ನಮ್ಮಮ್ಮನಿಗೆ ಒಂದು ರೀತಿಯ ಹೆಮ್ಮೆ. ನಮ್ಮಮನುಷ್ಯ ಜಾತಿಯ ಲೆಕ್ಕಚಾರವೇ ಹಾಗೆ,ಹಸು, ಎಮ್ಮೆಗಳಲ್ಲಿ ಮಾತ್ರ ಹೆಣ್ಗರು ಬೇಕು.ಏಕೆಂದರೆ ಅದರಿಂದ ಹಾಲು ತುಪ್ಪಗಳ ಜೊತೆಗೆ ಕರುಗಳ ಲಾಭ.ಆದರೆ ಇದನ್ನು ಮಾನವ ಕುಲಕ್ಕೆಅನ್ವಯಿಸುವಾಗ ಗಂಡೇ ಬೇಕು ! ನನ್ನ ಮಗ ಹುಟ್ಟುವ ಮುಂಚೆ ಅಂದರೆ ಒಂದು ವಾರದ ಮುಂಚೆ ಕೊಟ್ಟಿಗೆಯಲ್ಲಿ ಎಮ್ಮೆ ಹೆಣ್ಗರು ಹಾಕಿತ್ತು. ಆಗ ನಮ್ಮತೋಟದ ಕೆಲಸಗಾರ ಹಟ್ಟೀಲಿ ಹೆಣ್ಣು ಮನೇಲೀ ಗಂಡು ಹುಟ್ಟುತ್ತೆ ಅಂದಿದ್ದರು. ಅದು ನಿಜವಾದರೂ ಕಾಕತಾಳೀಯವಿರಬಹುದು. ಇಷ್ಟೆಲ್ಲ ಸಮೃದ್ಧವಾದ  ಕ್ಷೀರಧಾರೆ  ಹರಿಸುತ್ತಿದ್ದ ನಮ್ಮ ಮನೆಯ ಮಹಿಷಿಯರು  ಮತ್ತೇರಿದಾಗ ಕೆಲವೊಮ್ಮೆ ನಮಗೆ ತಲೆ ನೋವಾಗುತ್ತಿದ್ದ ಪ್ರಸಂಗಗಳೇನು ಕಡಿಮೆಯಿಲ್ಲ. ನಮ್ಮಮನೆ ಪಕ್ಕದ ತೋಟದಲ್ಲೆ ಮೇಯಲು ಬಿಡುತ್ತಿದ್ದು ದರಿಂದ ಅವುಗಳ ಹಸಿರು ಮೇವಿಗೇನು ಕೊರತೆಯಿಲ್ಲ. ಆದರೂ ಈ ಮಹಿಷಿಯರು  ಒಮ್ಮೊಮ್ಮೆಅದ್ಯಾವ ಮಾಯದಲ್ಲೋ ತೋಟದಿಂದ ಪರಾರಿಯಾಗುತ್ತಿದ್ದವು. ಕೆಲವೂಮ್ಮೆ ಸಂಜೆ ಆದರೂ ಸುಳಿವಿರುತ್ತಿರಲಿಲ್ಲ. ರಾತ್ರಿ ಕಳೆದು ಬೆಳಗಾದರೂ ಬರದಿದ್ದರೆ ನಮ್ಮಮ್ಮ ಮೊರೆ ಹೋಗುತ್ತಿದ್ದುದು ಕೇವಲ ಇಬ್ಬರಲ್ಲಿ ಮಾತ್ರ. ಒಬ್ಬರು ಧರ್ಮಸ್ಥಳದ ಮಂಜುನಾಥಸ್ವಾಮಿ. ಆ ದೇವರಲ್ಲಿ ನಮ್ಮಮ್ಮನಿಗೆ ವಿಶೇಷ ನಂಬಿಕೆ. ಇನ್ನೊಬ್ಬರು ಸಂಗೀತ ಮೇಷ್ಟ್ರು ಅಂದ್ರೆ ಅವರು ಹೇಳುವ ಜ್ಯೋತಿಷ್ಯ.ಅವರು ಸ.ಹಿ. ಪ್ರಾ. ಶಾಲೆಯಲ್ಲಿ ಸಂಗೀತ ಮೇಷ್ಟ್ರಾಗಿದ್ದರಿಂದ ಅದೇ ಅವರ ಅನ್ವರ್ಥನಾಮವಾಗಿತ್ತು. ಅವರಲ್ಲಿ ತುಂಬಾ ಜನರು ಜೋತಿಷ್ಯ ಕೇಳಲು, ಜಾತಕ ಬರೆಸಲು ಹೋಗುತ್ತಿದ್ದರು. ಸದಾ ಗಿಜಿಗುಡುವ ಜನರು. ನಮ್ಮ ತಾಯಿ ಎಮ್ಮೆ ಓಡಿ ಹೋದಾಗಲೆಲ್ಲಾ  ಎಲೆ,ಅಡಿಕೆ . ಬಾಳೆ ಹಣ್ಣು ದಕ್ಷಿಣೆಯನ್ನು ಕೊಟ್ಟು  ಯಾರನ್ನಾದರೂ ನಂಬಿಕಸ್ಥರನ್ನು ದೂತನನ್ನಾಗಿಸಿ  ಎಮ್ಮೆಯ ಅನ್ವೇಷಣಾ  ಕಾರ್ಯಕ್ಕೆ ಕಳಿಸುತ್ತಿದ್ದರು.  ಸಂಗೀತ ಮೇಷ್ಟ್ರು ನಮಗೆ ಗುರುಗಳಾಗಿದ್ದವರು.  ಮನೆ ಬಿಟ್ಟು  ಓಡಿಹೋಗುತ್ತಿದ್ದ ಮಹಿಷಿಯನ್ನು ಪತ್ತೆ ಹಚ್ಚುವಲ್ಲಿ ಅವರು ಹೇಳುತ್ತಿದ್ದ ಶಾಸ್ತ್ರ 90 % ನಿಖರವಾಗಿರುತ್ತಿತ್ತು. ಒಮ್ಮೆ ಅವರು ಒಂದು ನಿರ್ದಿಷ್ಟವಾದ ದಿಕ್ಕನ್ನು ಸೂಚಿಸಿ ಆ ಕಡೆ ಹೋದರೆ ನಿಮ್ಮ ಎಮ್ಮೆ ಸಿಗುತ್ತದೆ ಎಂದು ಹೇಳಿದಾಗ ನಮ್ಮ ದೂತರು ಆ ಜಾಡನ್ನಿಡಿದು ಹೊರಟಾಗ ಅಲ್ಲಿದ್ದ ದೊಡ್ಡಿಯೊಂದರಲ್ಲಿ ಕೂಡಿ ಹಾಕಿದ್ದರು. ದೂತರು ದಂಡ ಕಟ್ಟಿ ಬಿಡಿಸಿಕೊಂಡು ಸೆರೆವಾಸದಿಂದ  ಮುಕ್ತಗೊಳಿಸಿದರು. ಮಹಿಷಿ ಮರಳಿ ಮನೆಗೆ ಬಂದಳು. ಮತ್ತೊಮ್ಮೆ ಮಹಿಷಿ ಮನೆ ಬಿಟ್ಟಾಗ ಸಂಗೀತ ಮೇಷ್ಟ್ರು ಹೇಳಿದ  ಶಾಸ್ತ್ರ ನಿಜವಾಯಿತು. ನಿರ್ದಿಷ್ಟ ದಿಕ್ಕಿನಲ್ಲಿರುವ ಹಳ್ಳಿಯ ರೈತರೊಬ್ಬರ ತೋಟದ ಮನೆಯಲ್ಲಿದೆಯೆಂದು ಹೇಳಿದರು. ಹಳ್ಳಿ ಹಾಗೂ ರೈತರಹೆಸರಿನ ಪ್ರಸ್ತಾಪವಿರಲಿಲ್ಲ. ಈ ಬಾರಿ ನಮ್ಮ ದೂತರು ಬಾತ್ಮಿದಾರರೊಂದಿಗೆ ಬೇಹುಗಾರಿಕೆ ನಡೆಸಿ  ಹಳ್ಳಿಯ ತೋಟದ  ಮನೆಯಲ್ಲಿದ್ದ ಮಹಿಷಿಯನ್ನು ಅಶೋಕ ವನದಲ್ಲಿದ್ದ ಸೀತೆಯನ್ನು ಕರೆತರುವಂತೆ ಕರೆತರಲಾಯಿತು ಆ ರೈತರು ಹೊಟ್ಟೆ ತುಂಬಾ ಮೇವನ್ನು ಹಾಕಿ ಹಾಲನ್ನು ಕರೆದು ಕುಡಿದಿದ್ದರು. ಕಟ್ಟಿ ಹಾಕಿ ಮೇಯಿಸುವಂತೆ ಬಿಟ್ಟಿ ಸಲಹೆ ನೀಡಿ ಬೀಳ್ಕೊಟ್ಟಿದ್ದರು. ಮಗದೊಮ್ಮೆ ಮಹಿಷಿ ಕಣ್ಮರೆಯಾದಾಗ ಯಥಾ ಪ್ರಕಾರ ಸಂಗೀತ ಮೇಷ್ಕ ಮನೆ ಬಾಗಿಲಿಗೆ ಹೋದಾಗ ಎಲ್ಲಿ ಹುಡುಕಿದರೂ ಸಿಗುವುದಿಲ್ಲ.ತಾನೆ ತಾನಾಗಿ ಮನೆಗೆ ಮರಳುವುದೆಂದು ಹೇಳಿದರು.  ಮನಸ್ಸು ತಡೆಯದೆ ನಮ್ಮಮ್ಮ ಮಂಜುನಾಥ ಸ್ವಾಮಿಗೆ ಹರಕೆ ಕಟ್ಟಿಕೊಂಡಿದ್ದು ಆಯ್ತು. ಎರಡು ದಿನ ಕಳೆದರೂ ಬಾರದಿದ್ದಾಗ ಈ ಬಾರಿ ಸಿಕ್ಕಿದರೆ ಮಾರಾಟ ಮಾಡಿ  ಕೈತೊಳೆದುಕೊಳ್ಳಬೇಕು ಅನ್ನುವಷ್ಟರ ಮಟ್ಟಿಗೆ ಮಾತುಕತೆ ನಡೆಯಿತು. ಮೂರನೆ ದಿನ ಮಹಿಷಿ ಸೋತು ಸುಣ್ಣವಾಗಿ ಮೇವಿಲ್ಲದೆ ಸೊರಗಿ ಬಂದಿದ್ದಳು. ಕದ್ದು ಓಡಿ ಹೋಗಿದ್ದ ಕಾರಣ ಒಂದು ವಾರ ಗೃಹ ಬಂಧನದಲ್ಲಿದ್ದಳು. ಆಗಲೇ ಧರ್ಮಸ್ಥಳದ  ಮಂಜುನಾಥ ಸ್ಟಾಮಿಗೆ ಹರಕೆಯ ಹಣ ಸಂದಾಯವಾಯಿತು. ವರ್ಷಕ್ಕೆರಡು ಮೂರು ಬಾರಿ ಮನೆ ಬಿಡುವ ಚಾಳಿ ಅವಳದು. ಕರು ದೊಡ್ಡವಾದ ಮೇಲೆಯೇ ಇಂತಹ ಪ್ರಸಂಗಗಳು ಹೆಚ್ಚು   ಎಳೆಗರುವನ್ನು ಬಿಟ್ಟು ಹೋಗುವಂಥ ಕೆಟ್ಟ ತಾಯಿ  ಅವಳಂತೂ ಅಲ್ಲ ! ಕರು ಹಾಕಿದ ಎರಡನೆ ದಿನದ  ಹಾಲಿನಿಂದ ಮಾಡುವ ಗಿಣ್ಣು ಈಗ ನಮಗೆ  ಅಪರೂಪ.  ಹಾಲು ಕರೆಯುವ ಮುನ್ನ ಎಳೆಗರುವಿಗೆ ಕುಡಿಸಿ, ತಾಯಿ ಮುಂದೆ ಕರುವನ್ನು ಕಟ್ಟಿದಾಗ  ಕರುವಿನ ಮೈಯನ್ನು ನಾಲಿಗೆಯಿಂದ ನೆಕ್ಕುವ ಆ ಮಮತೆಗೆ ಸಾಟಿ ಇಲ್ಲವೇ ಇಲ್ಲ.  ಹಾಲು ಕರೆದ ನಂತರ ಕರುವಿಗಾಗಿ ಬಿಡುವ  ಹಾಲನ್ನು ಇನಿತೂ ಬಿಡದೆ ಕುಡಿದ  ಆ ಎಳೆಗರುವಿನ  ನೆಗೆದಾಟ, ಕುಣಿದು ಕುಪ್ಪಳಿಸುವಾಟ ಓಡುವ  ಚಿನ್ನಾಟದ ಸೊಗಸನ್ನು ಕಂಡವರು ಮರೆಯಲು ಸಾಧ್ಯವೇ !  ಕರು  ಕುಡಿಯುವ ತನ್ನ ತಾಯಿ  ಹಾಲಲ್ಲೂ ಪಾಲು ಕೇಳುವ ನಾವು ನಮ್ಮ ಮಕ್ಕಳಿಗೆ ಸ್ತನ್ಯ ಪಾನ ಅತಿ ಶ್ರೇಷ್ಟವೆಂದೂ ಸಾರಿ ಸಾರಿ ಹೇಳುತ್ತೇವೆ !   ಅಮ್ಮನಿಗೆ ಶಕ್ತಿಗುಂದಿದ ಮೇಲೆ  ತೋಟದ ಕೆಲಸಗಾರರ ಕೊರತೆಯ ನಂತರ  ಎಮ್ಮೆಗಳ ಪಾಲನೆಗೆ ಪೂರ್ಣ ವಿರಾಮ ಬಿತ್ತು *********

ಲಹರಿ Read Post »

ಇತರೆ

ಪ್ರಸ್ತುತ

ಲಾಕ್ಡೌನ್ ತೆರವಿನ ಪರಿಣಾಮಗಳು ರೇಶ್ಮಾ ಗುಳೇದಗುಡ್ಡಾಕರ್ ಕೊರೊನಾ ಸಾವಿರದ ಗಡಿದಾಟಿದೆ ಇಂತ ಆತಂಕದ ಸ್ಥಿತಿ ಯಲ್ಲಿ ಸರ್ಕಾರ ಲಾಕ್ಡೌನ್ ಹಂತ ಹಂತವಾಗಿ ತೆರವು ಗೊಳಿಸುವದು ಎಷ್ಟು ಸರಿ? ಸಾರಿಗೆ ಸಂಚಾರ ಆರಂಭವಾದರೆ ಸಾಮಾಜಿಕ ಅಂತರ ಸಾದ್ಯವೆ ನಮ್ಮ  ಜನರ ಇಗಿನ ಮನಸ್ಥಿತಿ ಯಲ್ಲಿ  ರಾಜ್ಯದ ಲ್ಲಿ ?ಶಾಲೆ ಪುನಾರಂಭ ಎರಡು ಪಾಳಿಯಲ್ಲಿ ಮಾಡಲು ಸಚಿವರು ಹೇಳಿದರು ಇಂತಹ ಸಂಧರ್ಭದಲ್ಲಿಕೊರೊನಾ ತಡೆಗಟ್ಟಲು ಸೂಕ್ತ ವ್ಯವಸ್ಥೆ ಇದೆಯೇ ಶಾಲೆಯಲ್ಲಿ  ಎಂಬುದನ್ನು ಪರೀಶೀಲಸ ಬೇಕು . ಶಾಲಾ ಅವರಣದಲ್ಲಿ ಮಕ್ಕಳು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸಾದ್ಯವೇ ಎಂಬ ಪ್ರಶ್ನೆ ಉದ್ಬವಾಗುತ್ತದೆ . ಪೂರ್ವ ಪ್ರಾಥಮಿಕ ಮಕ್ಕಳ ಆರೋಗ್ಯ ಭದ್ರತೆಗೆ ಸ್ಯಾನಿಟೈಸರ್ ಬಳಕೆ ನೆಚ್ಚಿಕೊಂಡು ಮಕ್ಕಳನ್ನು ಕಾಪಾಡಲು ಸಾದ್ಯವಿಲ್ಲ ಇಷ್ಟು ದಿನ ಕಷ್ಟ ಪಟ್ಟು ಹಿಡಿದಿಟ್ಟ ಮಕ್ಕಳು ಒಮ್ಮೆಲೆ ಶಾಲೆಗೆ ಪ್ರವೇಶಿಸುತ್ತವೆ.ಅಲ್ಲಿ ಅವರದ್ದೆ ಆದ ಪ್ರಪಂಚ ರಚನೆಯಾಗುತ್ತದೆ ಮಕ್ಕಳು ಆಟ ಆಡುವಾಗ ,ಊಟಮಾಡುವಾಗ ತಮ್ಮದೇ ಆದ ಗುಂಪನ್ನು ರಚಿಸಿಕೊಂಡು ನಲಿಯುವ ಮಕ್ಕಳು ಬ್ರೇಕ್ ಸಮಯದಲ್ಲಿ ಒಬ್ಬರಿಗೊಬ್ಬರು ಕೈಹೀಡಿದು ಎಳೆದಾಡುತ ಓಡಾಡುವ ಚಿಣ್ಣರನ್ನು ಸಾಮಾನ್ಯ ಸಮಯದಲ್ಲೇ  ನಿಗ್ರಹಿಸುವದು ಶಿಕ್ಷಕರಿಗೆ ಸವಾಲಿನ ಸಂಗತಿ . ಇನ್ನು ಇಂತಹ ಕಠಿಣ ಸಂದರ್ಭದಲ್ಲಿ ಪಾಲನೆ ಸಾದ್ಯವೇ ಎಂಬುದನ್ನು ಅವಲೋಕಿಸ ಬೇಕಿದೆ .   ಕೊಠಡಿಯಲ್ಲಿ ಅಂತರ ಸಾದ್ಯ ಆದರೆ ಆವರಣದಲ್ಲಿ ಪಾಲಿಸುವದು ಕಷ್ಟ ದ ಸಂಗತಿ . ಇಂತಹ ಸಮಯದಲ್ಲಿ ಶಾಲೆ ಪುನರಾರಂಭವಾದರೆ .ವೈದ್ಯಕೀಯ ಸಿಬ್ಬಂದಿಯ ಅಗತ್ಯ ಮತ್ತುಪ್ರತಿ ತಾಲೂಕಿನಲ್ಲಿ ಮಕ್ಕಳ ತಜ್ಞ ವೈದ್ಯರು ಇದ್ದರಾಯೇ? ಎಂಬುದನ್ನು ಸರ್ಕಾರ ಪರೀಕ್ಷಸ ಬೇಕು .ಇಷ್ಟುದಿನ ನಮ್ಮನ್ನು ಕಾದ ಪೋಲಿಸ್  ಸಿಬ್ಬಂದಿ, ವೈದ್ಯಕೀಯ ಸಿಬ್ಬಂದಿಗಳು ಕೊರೊನಾ ಪೀಡಿತರಾದರು! .ಹೀಗಿರುವಾಗ ಇನ್ನು ಈ ಸರದಿ ಶಿಕ್ಷಕರು ,ಮಕ್ಕಳು,ಶಾಲಾ ಸಿಬ್ಬಂದಿದಾಗುತ್ತದೆ ಹೊರತು ಶೈಕ್ಷಣಿಕ ಆರಂಭವಾಗುವದಿಲ್ಲ . ಕೊರೊನಾ ದೆಸೆಯಿಂದ ಕೆಲಸ ಕಳೆದುಕೊಂಡು  ನಗರಗಳಿಂದ ಆಗಾಧ ಪ್ರಮಾಣದಲ್ಲಿ ಜನರು ತಮ್ಮ ಸ್ವಗ್ರಾಮಗಳಿಗೆ ತೆರಳಿದ್ದಾರೆ.ಈ ಗ್ರಾಮಗಳಲ್ಲಿಯೂ ಶಾಲೆಗಳಿವೆ,ಹೊಸ  ಹೊಸ ದಾಖಲಾತಿಯೂ ಶೈಕ್ಷಣಿಕ ವರ್ಷದಲ್ಲಿ  ಅಗುತ್ತದೆ  ಮಕ್ಕಳ ಸಂಖ್ಯೆ ಸಾಮಾನ್ಯ ವಾಗಿ ಏರುತ್ತದೆ .ಅಗ ಇಲ್ಲಿನ ಮಕ್ಕಳ, ಶಿಕ್ಷಕರ ಆರೋಗ್ಯ ವು .ನಾವು ಗಮನಿಸಬೇಕು ಈಗ ನಗರಗಳಿಗಿಂತ ಜನರ , ಪ್ರಮಾಣ ಗ್ರಾಮದಲ್ಲಿ ಹೆಚ್ಚಿದೆ .ಇಗ ಅಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳು ,ಅವುಗಳ ಸಾಮರ್ಥ್ಯ, ಅಲ್ಲಿ ವೈದ್ಯಕೀಯ ಸೌಲಭ್ಯ ಎಲ್ಲವು ಮುಖ್ಯ ಪಾತ್ರ ವಹಿಸುತ್ತವೆ .ಇಗಿನ ಪರಿಸ್ಥಿತಿ ಯಲ್ಲಿ ತಾಲೂಕು ಆಸ್ಪತ್ರೆಗಳಲ್ಲೆ ವೈದ್ಯ ರು ಲಭ್ಯವಿಲ್ಲ ಕೊರೊನಾ ಕಾರಣದಿಂದ ಇಂತಹ ಸಂದರ್ಭಗಳಲ್ಲಿ ಗ್ರಾಮೀಣ ಮಕ್ಕಳ ಆರೋಗ್ಯ ಕಾಪಾಡುವದು ಹೇಗೆ? > ಇದನ್ನು ಗಂಭಿರವಾಗಿ ಯೋಚಿಸ ಬೇಕಿದೆ. ಲಾಕ್ಡೌನ್ ತೆರವಿಗೆ ಚಿಂತಿಸುವದಕ್ಕಿಂತ .ಕೊರೊನಾ ಬಗ್ಗು ಬಡಿಯಲುಚಿಂತಿಸ ಬೇಕು .ದಿನೆ ದಿನೆ ವ್ಯಾಪಕವಾಗಿ ಹರಡುತ್ತಿರುವ ಸೋಂಕು,ಒಂದೆಡೆ ಸಾಮಾಜಿಕ ಅಂತರ ಕಾಯ್ದು ಕೊಳ್ಳದೆ ಮಾರ್ಕೇಟ್, ಅಂಗಡಿ, ಯಲ್ಲಿ ಮುಗಿ ಬಿದ್ದ ಜನ . ಇಂತಹ ಸೂಕ್ಷ್ಮ  ಪರಿಸ್ಥಿತಿಯಲ್ಲಿ ಲಾಕ್ಡೌನ್   ಪರಿಣಾಮಕಾರಿ ಯಾಗಿ ಜಾರಿಗೊಳಿಸುವ ಅಗತ್ಯವಿದೆ.    ತೆರವು ಮತ್ತಷ್ಟು ಕೊರೊನಾ ಅಟ್ಟಹಾಸಕ್ಕೆ ದಾರಿ ಮಾಡಿದಂತಾಗುತ್ತದೆ.ಮುಂದಾಗುವ ಅಪಾಯವನ್ನು ಗಮನದಲ್ಲಿ ಇಡ್ಟುಕೊಂಡು ನಿಯಮ ರೂಪಿಸಿ ಜನರ ಬದುಕನ್ನು ಉಳಿಸ ಬೇಕದ ತುರ್ತು ಅಗತ್ಯವಿದೆ ಇಲ್ಲವಾದಲ್ಲಿ ರಾಜ್ಯದ ಲ್ಲಿ ಮಹಾ ಮರಣ ಮೃದಂಗ ಬಾರಿಸುವದರಲ್ಲಿ ಸಂಶಯವಿಲ್ಲ . ( ಬರಹವನ್ನು ನೀವು ಓದುವ ಸಮಯದಲ್ಲಿ ರಾಜ್ಯದಾದ್ಯಂತೆಕೊರೋನಾ ಸೋಂಕಿತರ ಸಂಖ್ಯೆ ಮಮತ್ತಷ್ಟು ಏರಿಕೆಯಾಗಿದೆ) *****************************

ಪ್ರಸ್ತುತ Read Post »

ಇತರೆ

ಪ್ರಸ್ತುತ

ಗ್ರಾಮಮಟ್ಟದಿಂದ ರಾಜ್ಯ ಮಟ್ಟದವರೆಗೂ ಸ್ವಾವಲಂಬನೆ ಗಣೇಶಭಟ್ ಮಾನ್ಯ ಪ್ರಧಾನಿಯವರು ಸ್ವಾವಲಂಬಿ ಭಾರತ, ಗ್ರಾಮಮಟ್ಟದಿಂದ ರಾಜ್ಯ ಮಟ್ಟದವರೆಗೂ ಸ್ವಾವಲಂಬನೆಯ ಕುರಿತು ಟ್ವೀಟಿಸಿದ್ದಾರೆ. https://twitter.com/PMOIndia/status/1253562403544915970 ಇಂದು ದೇಶ ಅನುಸರಿಸುತ್ತಿರುವ ಬಂಡವಾಳವಾದ ನೀತಿಯಿಂದ ಈ ಉದ್ದೇಶ ಈಡೇರಲು ಸಾಧ್ಯವಿಲ್ಲ.ಲಕ್ಷ ಲಕ್ಷ ಕೋಟಿ ಹಣ ಸುರಿದರೂ ಅಷ್ಟೇ. ಮಿಶ್ರ ಆರ್ಥಿಕನೀತಿ, ಗಾಂಧೀವಾದ,ಸರ್ವೋದಯ,ಜೆಪಿ ಚಿಂತನೆ,ಸಮಾಜವಾದ ಮುಂತಾದವುಗಳೆಲ್ಲವೂ ಬಂಡವಾಳವಾದದ ವಿವಿಧ ರೂಪಗಳು. ಕಮ್ಯೂನಿಸಮ್ ಎಂಬುದು state capitalism. ಪ್ರಾದೇಶಿಕ ಸ್ವಾವಲಂಬನೆಗೆ ಬೇಕಾದುದು ನವ ಆರ್ಥಿಕ ಚಿಂತನೆ, ಸ್ಥಳೀಯವಾಗಿ ಲಭ್ಯವಿರುವ ಸಂಪನ್ಮೂಲಗಳನ್ನು ಆಧರಿಸಿ ರೂಪುಗೊಳ್ಳುವ ತಳ ಮಟ್ಟದ ಯೋಜನೆಗಳು. ಕಳೆದ ಹಲವು ವರ್ಷಗಳಿಂದಲೂ ಪ್ರಾದೇಶಿಕ ಆರ್ಥಿಕ ಸ್ವಾವಲಂಬನೆಯ ಕುರಿತು ಪ್ರಉತ(ಪ್ರಗತಿಶೀಲ ಉಪಯೋಗ ತತ್ವ)ದ ಅಧಾರದ ಮೇಲೆ ಬರೆಯುತ್ತಿದ್ದೇನೆ. ಒಂದೆರಡು ಸ್ಯಾಂಪಲ್ ಗಳು: ಆಗಸ್ಟ್ 10, 2018 · ಪ್ರಾದೇಶಿಕ ಅಸಮಾನತೆ ದೂರೀಕರಿಸುವ ಪರಿ ಪ್ರತಿಯೊಂದು ಪ್ರದೇಶದ ಭೌಗೋಳಿಕ ಪರಿಸ್ಥಿತಿ, ನದಿ ಕೊಳ್ಳಗಳ ಸ್ಥಿತಿ, ಪರಿಸರ, ಮಣ್ಣಿನ ಗುಣ ಲಕ್ಷಣ, ಮಳೆ, ಹವಾಮಾನ ಮುಂತಾದವುಗಳ ಜೊತೆಗೆ ಜನರ ಮಾನಸಿಕತೆಯನ್ನು ಪರಿಗಣಿಸಿ ಯೋಜನೆಗಳು ರೂಪುಗೊಳ್ಳಬೇಕು. ಸ್ಥಳೀಯ ಸಂಪನ್ಮೂಲಗಳನ್ನು ಬಳಸಿ, ಸ್ಥಳೀಯರಿಗೆ ಉದ್ಯೋಗ ಸೃಷ್ಟಿಸುವ ಯೋಜನೆಗಳು ತಾಲೂಕು ವಾರು ರೂಪುಗೊಂಡು, ಜಿಲ್ಲಾ ಮತ್ತು ರಾಜ್ಯಮಟ್ಟದಲ್ಲಿ ಕ್ರೋಢೀಕೃತಗೊಳ್ಳಬೇಕು. ಪ್ರತಿಯೊಂದು ರಾಜ್ಯವೂ ತನ್ನ ಎಲ್ಲ ನಾಗರಿಕರಿಗೆ ಉದ್ಯೋಗ ಸೃಷ್ಟಿಸುವ, ತಾನು ಆರ್ಥಿಕವಾಗಿ ಸ್ವಾವಲಂಬಿಯಾಗುವಂತಹ ಪ್ರಯತ್ನ ನಡೆಸಬೇಕು. ಈ ಉದ್ದೇಶದಿಂದಲೇ ಅಭಿವೃದ್ಧಿ ಯೋಜನೆಗಳು ರೂಪುಗೊಳ್ಳಬೇಕು. 13 ಫೆಬ್ರವರಿ · ಡಾ. ಸರೋಜಿನಿ ಮಹಿಷಿ ವರದಿಯಾಚೆಗೆ .. ಈ ಸಮಸ್ಯೆಗಳಿಗೆ ಪರಿಹಾರವೆಂದರೆ ವಿಕೇಂದ್ರೀಕೃತ ಅರ್ಥವ್ಯವಸ್ಥೆಯ ಅನುಷ್ಠಾನ. ಇದರ ಮೊದಲ ಹಂತವೆಂದರೆ ಆರ್ಥಿಕವಾಗಿ ಸ್ವಯಂ ಸ್ವಾವಲಂಬಿಯಾಗಬಲ್ಲ ಭೌಗೋಳಿಕ ಕ್ಷೇತ್ರಗಳನ್ನು ಗುರ್ತಿಸುವುದು. 2 ಏಪ್ರಿಲ್ 2020 ಹೊಸ ಮನ್ವಂತರ ದಾರಿ ತೋರಲಿರುವ ಕೊರೋನಾ ಪಿಡುಗು ಕೊರೊನಾ ಭಯದಿಂದ ಹೊರಬಂದು ಪುನಃ ದೇಶದ ಹಾಗೂ ವೈಯಕ್ತಿಕ ಆರ್ಥಿಕತೆಯನ್ನು ಬಲಪಡಿಸುವುದು ಈಗ ಅನುಸರಿಸುತ್ತಿರುವ ಅಭಿವೃದ್ಧಿಯ ಮಾದರಿ ಎಂದರೆ ಬಂಡವಾಳವಾದ ಆಧಾರಿತ ಕೇಂದ್ರೀಕೃತ ಅರ್ಥನೀತಿಯನ್ವಯ ಸಾಧ್ಯವಾಗದ ಕೆಲಸ. ಈ ನಿರಾಶಾದಾಯಕ ಸ್ಥಿತಿಯಲ್ಲಿ ಅಭಿವ್ಯದ್ಧಿಯ ಪರ್ಯಾಯ ಮಾದರಿಗಳ ಕುರಿತು ಚಿಂತಿಸುವುದು ಅನಿವಾರ್ಯವಾಗಲಿದೆ. 24 ಏಪ್ರಿಲ್ ರಂದು, 10:31 ಪೂರ್ವಾಹ್ನ ಸಮಯಕ್ಕೆ · ಕೊರೊನಾ ಮುಖಾಂತರ ಪ್ರಕೃತಿ ಹೇಳಿದ ಪಾಠ ಪೃಥ್ವಿಯ ಎಲ್ಲೆಡೆ ಪ್ರಕೃತಿ ಸಂಪನ್ಮೂಲಗಳನ್ನು ಹಂಚಿದೆ. ಅವನ್ನು ಗುರ್ತಿಸಿ ಬಳಸುವ ಬುದ್ದಿಮತ್ತೆಯನ್ನು ಮಾನವನಿಗೆ ನೀಡಿದೆ. ಸ್ಥಳೀಯ ಸಂಪನ್ಮೂಲಗಳನ್ನು ಆಧರಿಸಿ ಆರ್ಥಿಕ ಚಟುವಟಿಕೆಗಳು ನಡೆದು ಜನರು ತಾವಿರುವ ಊರಿನಲ್ಲಿ ಉದ್ಯೋಗ ಪಡೆದು ಬದುಕು ಕಟ್ಟಿಕೊಳ್ಳಲು ಪ್ರಕೃತಿ ಅವಕಾಶ ಸೃಷ್ಟಿಸಿದೆ .. ಮಾನವತೆಯ ಹಿತ ಬಯಸುವವರು ಪರ್ಯಾಯ ವ್ಯವಸ್ಥೆಯ ಕುರಿತು ಚಿಂತಿಸಲೇಬೇಕಾದ ಸಂದರ್ಭವಿದು. ********

ಪ್ರಸ್ತುತ Read Post »

You cannot copy content of this page

Scroll to Top