ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ಶಿಶು ಗೀತೆ

ಪುಟ್ಟನ ಮನೆ ತೇಜಾವತಿ ಹೆಚ್.ಡಿ. ಒಮ್ಮೆ ಪುಟ್ಟಅಮ್ಮನೊಡನೆಸಾಗರ ನೋಡಲೋದರಾಶಿ ರಾಶಿಉಸುಕು ಕಂಡುಕುಣಿದು ಕುಣಿದು ಹಿಗ್ಗಿದ || ಪುಟ್ಟ ನುಣುಪುಉಸುಕಿನಲ್ಲಿಚಂದ ಮನೆಯ ಕಟ್ಟಿದಅಲೆಯು ಬಂದುಕೊಚ್ಚಿ ಹೊಯ್ದುಅಮ್ಮಾ! ಎಂದು ಕೂಗಿದ || ಅಮ್ಮ ಬಂದುಹೇಳು ಕಂದಏಕೆ ಅಳುವೆ ಎನ್ನಲುನೋವಿನಿಂದಉರುಳಿ ಬಿದ್ದಮನೆಯ ತೋರಿ ಹಲುಬಿದ || ಕೇಳು ಮಗನೆಏಕೆ ಅಳುವೆಮರಳ ಮನೆಯು ಕ್ಷಣಿಕವುನೀನು ಕಟ್ಟುಮನದ ಮನೆಯಆತ್ಮ ಛಲವು ಜೊತೆಗಿದೆ || ಒಡನೆ ಪುಟ್ಟಎದ್ದು ನಿಂತುಅಮ್ಮನಪ್ಪಿ ಹೇಳಿದಬಿಡೆನು ನಾನುನಿನ್ನ ಮಾತಒಪ್ಪಿಕೊಂಡೆ ಎಂದನು || ಮಗನ ನುಡಿಯಕೇಳಿ ಅಮ್ಮಪ್ರೀತಿ ಧಾರೆ ಎರೆದಳುಮಿಂದ ಪುಟ್ಟಮಡಿಲ ಸುಖದಿಹೊಸತು ಕನಸ ಕಂಡನು || ಊರಿನಲ್ಲಿಗೆಳೆಯರೊಡನೆಜೀವ ಭಾವ ಹುಡುಕಿದತಂದು ಎಲ್ಲಕೂಡಿ ಕಳೆದುಮನದ ಮನೆಯ ಕಟ್ಟಿದ || ಅಮ್ಮ ನೀನುಬಂದು ನೋಡುಎಂದು ಮುದದಿ ಓಡಿದನೋಡಿ ಅವಳುಶ್ರಮದ ಫಲವು  ದೊರೆವುದೆಂದು ನುಡಿದಳು || ಅಂದಿನಿಂದಪುಟ್ಟ ತಾನುಕೋಟಿ ಕನಸ ಕಂಡನುಬಿಡದೆ ಹಿಡಿದುತನ್ನ ಛಲವದೊಡ್ಡ ಜಾಣನಾದನು || ***********

ಶಿಶು ಗೀತೆ Read Post »

ಇತರೆ

ಪ್ರಬಂಧ

ಸ್ವಚ್ಛ ಭಾರತ ನಂದಿನಿ ಹೆದ್ದುರ್ಗ ಇದು ಸುಮಾರು ಮುವ್ವತ್ತು-ಮುವ್ವತ್ತೈದು ವರ್ಷಗಳ ಹಿಂದಿನ ಮಾತು.ಆಗೆಲ್ಲಾ ಹಳ್ಳಿಗೊಂದು ಪ್ರಾಥಮಿಕ ಶಾಲೆ ಇರುತ್ತಿದ್ದೇ ಹೆಚ್ಚು . ಇನ್ನೂ ಶೌಚಾಲಯ, ಬಿಸಿಯೂಟ ಕನಸಲ್ಲೂ ಯೋಚಿಸುವ ಹಾಗಿಲ್ಲ.ನಾವು ಮೂರೂ ಮಕ್ಕಳು ನಾಲ್ಕನೆ ತರಗತಿ ಮುಗಿದಾಗ ಹತ್ತು ಕಿಮಿ ಆಚೆ ಇರುವ ಸಣ್ಣ ಪಟ್ಟಣಕ್ಕೆ ಮಿಡಲ್ ಸ್ಕೂಲ್ ಗೆ ಹೊಗುತ್ತಿದ್ದೇವೆ.ನಾವು ಮಾತ್ರವಲ್ಲ..ಪ್ರತಿ ಜಿಲ್ಲೆಯ ಸಣ್ಣಸಣ್ಣ ಹಳ್ಳಿಗಳಮಕ್ಕಳದ್ದೂ ಇದೇ ಪಾಡು.ಆಗೆಲ್ಲಾ ದಾರಿಯಲ್ಲಿ ಅವಸರವಾದರೆ ಗಂಡು ಹುಡುಗರನ್ನ ಕಾವಲಿಗೆ ನಿಲ್ಲಿಸಿ ನಾವು ಪಕ್ಕದ ಕಾಫಿ ತೋಟದಲ್ಲಿ ನೀರಾವರಿ ಮುಗಿಸಿ ಬರ್ತಿದ್ದೆವು.ವ್ಯವಸ್ಥೆ ಇರದಿದ್ದರೂ ಸಂಕೀರ್ಣತೆ ಇರಲಿಲ್ಲ.ಯಾವ ಆನೆ ಚಿರತೆಗಳೂ ಆಗ ದಾಳಿ‌ಮಾಡುತ್ತಿರಲಿಲ್ಲ.ಕಾಮದ ಹಸ್ತಗಳು ಪುಟ್ಟ ಮಕ್ಕಳನ್ನು ಮುಟ್ಟುತ್ತಿರಲಿಲ್ಲ.ಯಾವ ರೋಗಗಳೂ ಅಷ್ಟು ಹರಡುತ್ತಿರಲಿಲ್ಲ.ಅಥವಾ ಈಗಿನಷ್ಟು ವಿಪರೀತ ಆಗಿರಲಿಲ್ಲ.ಹಾಗಾಗಿಯೇ ಕಾಡಹಾದಿಯಲ್ಲಿ ಒಬ್ಬಿಬ್ಬರು ಮಕ್ಕಳೂ ಧೈರ್ಯವಾಗಿ ಶಾಲೆಗೆ ಹೋಗಿಬರುತ್ತಿದ್ದರು.ಬಿಡಿ.ಅದಲ್ಲ ವಿಷಯ. ಇಡೀ ದೇಶಾದ್ಯಂತ ಸ್ವಚ್ಚತೆಯೇ ಪರಮೋಚ್ಚ ಗುರಿ ಎನ್ನುವ ಗುರಿಯೂ ದೊರೆಯೂ ಬಂದ‌ಮೇಲೆ ಪ್ರತಿ ಪುಟ್ಟ ಹಳ್ಳಿಯ ಶಾಲೆಗಳಿಗೂ ಒಂದೋ ಎರಡೋ ಶೌಚಾಲಯ, ನೀರಿನ ವ್ಯವಸ್ಥೆ, ಬಿಸಿಯೂಟ ವ್ಯವಸ್ಥೆ ಎಲ್ಲವೂ ಆಗಿ ಇನ್ನೇನು ಹಳ್ಳಿಯ ಮಕ್ಕಳು ಕೆರೆ ಬದಿಗೆ,ಪೊದೆಯ ಹಿಂದುಗಡೆ, ಮರೆ ಅರಸಿ ಶೌಚಕ್ಕೆ ಕೂರುವ ಕರ್ಮ ಕೊನೆಯಾಗಿ ಹೆಣ್ಣುಮಕ್ಕಳ ಆರೋಗ್ಯವೂ ಮರ್ಯಾದೆಯೂ ಸುಧಾರಿಸಿತೆಂಬ ಭರವಸೆಯಲಿದ್ದಾಗಲೇ ಪಕ್ಕದ ತಾಲೂಕಿನ ಪುಟ್ಟ ಹಳ್ಳಿಯ ಶಾಲಾ ಕಾರ್ಯಕ್ರಮವೊಂದಕ್ಕೆ ಆಹ್ವಾನ ಬಂತು. ಹೋದೆ. ಸಣ್ಣ ಕುರುಚಲು ಕಾಡಿನಂತ ಒಂದು ಸರಕಾರಿ ಜಮೀನಿನ ಮಧ್ಯಭಾಗವನ್ನು ಸಪಾಟು ಗೊಳಿಸಿ ಶಾಲಾ ಕಟ್ಟಡ ನಿರ್ಮಾಣವಾಗಿತ್ತು.ಶಾಲೆ ಪಕ್ಕದಲ್ಲೇ ಶೌಚಾಲಯ, ಗಂಡು ಹೆಣ್ಣು ಮಕ್ಕಳಿಗೆ ಬೇರೆ ಬೇರೆ ವ್ಯವಸ್ಥೆ. ನೀರಿನ ತೊಟ್ಟಿ, ಬಿಸಿಯೂಟದ ಕೋಣೆ ಎಲ್ಲವೂ ವ್ಯವಸ್ಥಿತವಾಗಿತ್ತು. ಹಳೆಯ ಶಾಲೆಗಳನ್ನು ‌ನೆನಪಿಸಿಕೊಂಡು ಹೊಸ ವ್ಯವಸ್ಥೆಗಳ ಅಚ್ಚುಕಟ್ಟುತನ ಪ್ರಸ್ಥಾಪಿಸುವಾಗಲೇ ಪುಟ್ಟ ಹುಡುಗಿಯೊಂದು ತನ್ನ ಕಿರುಬೆರಳ ಮೇಲಕ್ಕೆತ್ತಿ ನಿಂತುಕೊಂಡಳು.ಮೇಷ್ಟ್ರು ಗದರುತ್ತಲೇ ದೊಡ್ಡ ಹುಡುಗಿ ಜೊತೆಮಾಡಿ ಕಳಿಸಿದರು. ಅವರಿಬ್ಬರೂ ಶಾಲೆಯ ಹಿಂಬದಿಯ ಸಣ್ಣ ಪೊದೆಯ ಬಳಿ ಹೋದರು..ಅಚ್ಚರಿಯಾಯ್ತು.ಕಾರ್ಯಕ್ರಮ ‌ಮುಗಿಸಿ ಊಟಮಾಡುವ ಮೊದಲು ಕೈ ತೊಳೆಯಲು ಟ್ಯಾಂಕಿನ ನಲ್ಲಿ ತಿರುಗಿಸ ಹೋದವಳಿಗೆ ಅದು ಬಹಳ‌ ಪುರಾತನ ಕಾಲದಲ್ಲೇ ಚಲನೆ ನಿಲ್ಲಿಸಿ ಸ್ತಬ್ಧವಾಗಿರುವುದರ ಕುರುಹು ಅಲ್ಲೆಲ್ಲ ಗೋಚರಿಸಿದ್ದು‌ ನೋಡಿ ಸುತ್ತ ನೋಡಿದೆ. ಮಕ್ಕಳು ಸಣ್ಣಸಣ್ಣ ಗುಂಪಿನಲ್ಲಿ ಶಾಲೆಯ ಹಿಂಬದಿಯ ಕುರುಚಲು ಕಾಡಿಗೆ ಹೋಗಿ‌ಬರ್ತಿರೋದು ನೋಡಿದಾಗ ಏನೋ ಸರಿಯಿಲ್ಲವೆನಿಸಿತು.ಆಗಲೆ ಅಲ್ಲಿ ಬಂದ ಟೀಚರಮ್ಮ ‘ಅಲ್ಲಿ‌ನೀರು ಬರ್ತಿಲ್ಲ .ಬನ್ನಿ. ಇಲ್ಲೇ ಬಾಟಲಿ ನೀರಿನಲ್ಲಿ ಕೈ ತೊಳೆಯಿರಿ ಎಂದಾಗ ಅಚ್ಚರಿ ಯಿಂದಹಾಗಾದರೆ ಟಾಯಲೆಟ್ ಗೆ‌ ನೀರು.?ಎಂದೆ.ಇಲ್ಲಿ ಯಾವುದಕ್ಕೂ ನೀರಿಲ್ಲ ಮೇಡಮ್.ಕೇವಲ ಟ್ಯಾಂಕಿದೆ ಅಷ್ಟೆ.ಮೊದಮೊದಲು ಸ್ವಲ್ಪ ಬಿಡ್ತಿದ್ರು .ಈಗ ಅದೂ ಇಲ್ಲ.ಹಾಗಾಗಿ‌‌ ಮಕ್ಕಳು ಹಿಂಬದಿಯ ಪೊದೆಗೇಹೋಗ್ತಾರೆ.ಇದೂ ಒಂಥರ ಸರಿಯೇಆಯ್ತು.ಸ್ವಲ್ಪ ನೀರು ಬಿಡ್ತಿದ್ದಾಗಟಾಯ್ಲೆಟ್ ಬಳಸಿ ಸರಿಯಾಗಿ ಸ್ವಚ್ಛ ವಾಗದೇ ಶಾಲೆಯ ಪರಿಸರವೇ ಹಾಳಾಗಿತ್ತು.ಹಳ್ಳಿ ಮಕ್ಕಳು.ಎಷ್ಟೇ ಹೇಳಿಕೊಟ್ಟರೂ ಶೌಚಾಲಯ ಬಳಕೆ ಅವರಿಗೆ ಕಷ್ಟವೂ ಆಗಿತ್ತು..ಇನ್ನೇನು ಈ ಅಭ್ಯಾಸ ರೂಢಿಸಿಕೊಳ್ತಾರೆ ಎನ್ನುವಾಗ ನೀರು‌ ಬಂದ್ ಆಯ್ತು.ಹೆಣ್ಣಮಕ್ಕಳನ್ನ ದೂರಕ್ಕೆ ಕಳಿಸುವಾಗ ತುಸು ಭಯವೂ ಇರ್ತದೆ.ಆದರೆ ಏನ್ಮಾಡೋದು‌ ಹೇಳಿ.ಯಾರನ್ನೂ ದೂರಿ ‌ಫಲವಿಲ್ಲ.ಇಲ್ಲಿನ ಸ್ಥಳೀಯ ಜನ ಪ್ರತಿನಿಧಿ ಬೇರೆ ಪಕ್ಷ .ಸರ್ಕಾರಕ್ಕೆ ಸಮಸ್ಯೆ ತಲುಪಿಸುವುದರಲ್ಲಿ ಅಂತಹ ಆಸಕ್ತಿಯೂ ಇಲ್ಲ. ತಲುಪಿಸಿದರೂ ಪಕ್ಷ ಬೇರೆ ಇರುವುದರಿಂದ ಈಡೇರುವ ಭರವಸೆಯೂ ಇಲ್ಲ.ಒಮ್ಮೆ ಇಲ್ಲೇ ಬೋರವೆಲ್ ತೆಗೆಸುವುದಕ್ಕೆ ಬಂದ ಫಂಡ್ ಯಾವ ಯಾವುದೋ ಕಾರಣಕ್ಕೆ ಸದುಪಯೋಗ ಆಗಲೇ ಇಲ್ಲ.ಶಾಲೆ, ಮೀಟಿಂಗು,ಓಡಾಟದಲ್ಲೇ ನಾವು ಕಳೆದುಹೋಗುವುದರಿಂದ ನೀರಿಗಾಗಿ ಅಧಿಕಾರಿಗಳನ್ನು ಸಂಪರ್ಕಿಸುವುದು ಕಷ್ಟವಾಗ್ತಿದೆ.ಈಗ ಊಟ ತಯಾರಿಸಲು ಸಹ ಕೊಡದಲ್ಲಿ ತರಬೇಕು ಅಂತ ಅಸಹಾಯಕತೆ ಹೇಳಿಕೊಂಡರು.ಅಷ್ಟರಲ್ಲಿ ಶೌಚ ಮುಗಿಸಿ ಮಕ್ಕಳು ಬಂದರು.ಮನೆಯಿಂದ ತಂದಿದ್ದ ಬಾಟಲಿ ನೀರು ತಟ್ಟೆ ತೊಳೆಯಲೂ ಬೇಕಿರೋದ್ರಿಂದ ಕೈ ತೊಳೆಯದೇ ಊಟಕ್ಕೆ ಕುಳಿತರು. ಶೌಚಾಲಯದ ‌ಮೇಲೆ ಸ್ವಚ್ಛ ಭಾರತ ಅನ್ನುವ ಪದಗಳಿದ್ದವು.ಯಾಕೊ ಸ್ವಚ್ಛವೊಂದು ಕಡೆ,ಭಾರತವೊಂದು ಕಡೆ ಇರಬೇಕಾ ಅನಿಸಿತು. ************

ಪ್ರಬಂಧ Read Post »

ಇತರೆ, ಜೀವನ

ಇತರೆ

ಮರುಕ ಹುಟ್ಟುತ್ತದೆ ವಿದ್ಯಾ ಶ್ರೀ ಎಸ್ ಅಡೂರ್ ಕೆಲವು ಸಮಯದ ಹಿಂದೆ ನಾನು ಪಟ್ಟಣದಲ್ಲಿರುವ ನನ್ನ ಗೆಳತಿಯ ಮನೆಗೆ ಹೋಗಿದ್ದೆ. ಬಾಲ್ಯದ ಗೆಳತಿ.ನಾನು ಮದುವೆಯಾಗಿ ಒಂದು ಹಳ್ಳಿಯಿಂದ ಇನ್ನೊಂದು ಹಳ್ಳಿಗೆ ಶಿಫ್ಟ್ ಆಗಿದ್ದರೆ, ಆಕೆಯೋ ನನ್ನೊಂದಿಗೆ ಹಳ್ಳಿಯಲ್ಲಿ ನನ್ನೆಲ್ಲ ತುಂಟತನಗಳಿಗೆ ಜತೆಯಾಗಿದ್ದವಳು, ಮದುವೆಯಾಗಿ ಮಹಾನಗರವನ್ನು ಸೇರಿ “ಸಿಟಿವಂತ“ಳಾಗಿದ್ದಳು. ಅನೇಕ ವರ್ಷಗಳಿಂದ ಭೇಟಿಯಾಗಿರದಿದ್ದ ನನಗೆ ಮಜಬೂತು ಖಾತರ‍್ದಾರಿಯ ಪ್ಲಾನ್ಮಾಡಿಕೊಂಡಿದ್ದಳು.ಆತ್ಮೀಯತೆಯಿಂದ ನನ್ನನ್ನು ಬರಮಾಡಿಕೊಂಡು ಮಾತಿನಲ್ಲಿ ಮೈಮರೆತಿದ್ದವಳು ಅಚಾನಕ್ಕಾಗಿ ನಾಲಿಗೆ ಕಚ್ಚಿಕೊಂಡು ತನ್ನ ಏಳೆಂಟು ವರ್ಶದ ಮಗಳನ್ನು ಬಳಿಗೆ ಕರೆದು ಕಿವಿಯಲ್ಲಿ ಏನೋ ಪಿಸುಗುಟ್ಟಿದಳು. ಮರುಕ್ಷಣವೇ ಆ ಹುಡುಗಿ ಮನೆಯಿಂದ ಹೊರಗೋಡಿ ಸ್ವಲ್ಪ ಹೊತ್ತಿಗೆ ವಾಪಾಸಾಗಿದ್ದನ್ನು ನಾನು ಕಡೆಗಣ್ಣಿನಲ್ಲಿ ಗಮನಿಸಿದೆ. ಇಡೀದಿನ ಗೆಳತಿಯ ಆದರಾಥಿತ್ಯವನ್ನು ಸ್ವೀಕರಿಸಿ ದಣಿದಿದ್ದ ನಾನು, ಸ್ವಲ್ಪ ಹೊತ್ತು ಆರಾಮಾಗಿ ಕೂತಿರುವಾಗ ಆಕೆಯ ಮಗಳು ನನ್ನ ಜತೆಗೆ ಬಂದು ಕುಳಿತಳು.ನನಗೋ ತಡೆಯದೆ, “ಆಗ ಅಮ್ಮ ನಿನ್ನ ಬಳಿ ಏನು ಹೇಳಿದುದಕ್ಕೆ ನೀನು ಹೊರ ಹೋಗಿಬಂದೆ?” ಎಂದು ಕೇಳಿದೆ. ಮಾತು ತಪ್ಪಿಸಲರಿಯದ ಮುಗ್ಧಮಗು ”ನಮ್ಮ ಮನೆಯ ಫ್ರಿಜ್ಜಿನಲ್ಲಿ ಹಾಲು ಖಾಲಿಯಾಗಿ ಅಮ್ಮನಿಗೆ ತರುವುದು ಮರೆತಿತ್ತು. ಅದಕ್ಕೆ ಪಕ್ಕದ ಮನೆಯ ಆಂಟಿಯ ಫ್ರಿಜ್ಜಿನಿಂದ ಹಾಲು ಇಸಿದುಕೊಂಡು ಬರಲು ಅಮ್ಮ ಕಳಿಸಿದ್ಲು“ ಎಂದು ಹೇಳಿತು. ನಾನು ಪುನಃ ಕುತೂಹಲ ತಡೆಯದೆ ಫ್ರಿಜ್ಜಿಗೆ ಹಾಲು ಎಲ್ಲಿಂದ ಬರುತ್ತೆ ಎಂದು ಕೇಳಿದೆ. ಅದಕ್ಕೆ ಮಗು ”ರಾತ್ರಿ ಮಲಗುವಾಗ ಬಾಗಿಲು ಹತ್ರ ಚೀಟಿ ಹಾಕಿದ್ರೆ, ಬೆಳಿಗ್ಗೆ ಬಾಗಿಲು ತೆಗೆಯುವಷ್ಟರಲ್ಲಿ ಹಾಲು ಬಂದಿರುತ್ತೆ “ಎಂದು ಹೇಳಿತು. ಮನದಲ್ಲಿ ಇನ್ನೂ 2-3 ಪ್ರಶ್ನೆಗಳಿದ್ದರೂ,ಅವುಗಳು ಆ ಮಗುವಿನ ಜ್ಞಾನಕ್ಕೆ ನಿಲುಕದ್ದು ಎಂದು ಸುಮ್ಮನಾದೆ. ಗೆಳತಿಯ ಜತೆ ಬಾಲ್ಯದ ನೆನಪುಗಳನ್ನು ಪುನಃ ಒಮ್ಮೆ ಹಸಿರಾಗಿಸಿ ಸಂಜೆಗೆ ನಮ್ಮೂರಿನ ಬಸ್ಸು ಹತ್ತಿದವಳಿಗೆ “ಫ್ರಿಜ್ಜಿನಹಾಲಿನಮೂಲ” ಮನದಾಳದಲ್ಲಿ ದಾರಿ ಹುಡುಕತೊಡಗಿತ್ತು. ಸರಿಯಾಗಿ ನೆನಪಿಲ್ಲವಾದರೂ ಅಂದಾಜು ನಾನು 2-3ನೇ ತರಗತಿಯಲ್ಲಿರುವಾಗಲೊಮ್ಮೆ ನಮ್ಮ ತಾತ ನಮ್ಮ ಮನೆಗೆ ಬಂದಿದ್ದಾಗ,ಅವರಿಗೆ ಕಾಫಿ ಮಾಡಲೂ ನಮ್ಮ ಮನೆಯಲ್ಲಿ ಹಾಲಿರಲಿಲ್ಲ. ಬಡತನದ ಅಂದಿನ ದಿನಗಳಲ್ಲಿ ಮೂರು ಮಕ್ಕಳ ತಾಯಿಯಾದ ನಮ್ಮಮ್ಮ, ಕೊಂಡು ತಂದು ನಮಗೆ ಹಾಲು ಕುಡಿಸುವಷ್ಟು ಸಿರಿವಂತೆಯಾಗಿರಲಿಲ್ಲ. ಪರಿಸ್ಥಿತಿಯನ್ನು ಅರ‍್ಥ ಮಾಡಿಕೊಂಡ ನಮ್ಮ ತಾತ ಅಮ್ಮನಿಗೆ “ನೀನು ಮದುವೆಗೂ ಮುಂಚೆ ಹಟ್ಟಿ ತುಂಬಾ ದನಕರುಗಳನ್ನು ಕಟ್ಟಿ, ಸಾಕಿ,ಹಾಲನ್ನುಮಾರಿ,ಮನೆಯಲ್ಲಿ ಹಾಲು, ಮಜ್ಜಿಗೆ, ತುಪ್ಪ ಎಂದು ಸಮೃದ್ಧಿಯನ್ನು ಉಂಟುಮಾಡಿದ್ದವಳು. ಈಗ ನಿನ್ನ ಮಕ್ಕಳಿಗೆ ಹಾಲಿಲ್ಲವೆಂದು ಕೊರಗಬೇಡ. ನಿನ್ನಿಷ್ಟದ ಕರು ಈಗ ಹಸುವಾಗಿ ಯಥೇಚ್ಚ ಹಾಲನ್ನು ನೀಡುತ್ತಿದೆ. ಅದನ್ನು ನಿನ್ನಲ್ಲಿಗೆ ಕಳಿಸಿಕೊಡುತ್ತೇನೆ. ಮಕ್ಕಳು ಹಾಲು, ಮಜ್ಜಿಗೆಯ ಬಣ್ಣ ನೋಡಲಿ ಎಂದಾಗ ಅಮ್ಮ ಮತ್ತು ಅಜ್ಜನ ಕಣ್ಣಾಲಿಗಳು ತುಂಬಿದ್ದವು. ಮಾತಿಗೆ ತಪ್ಪದೇ ಅಜ್ಜ ಹಸುವನ್ನೂ ಅದರ ಕರುವನ್ನೂ ನಮ್ಮಲ್ಲಿಗೆ ಕಳುಹಿಸಿಯೇಬಿಟ್ಟರು .ಅನೇಕ ವರ‍್ಷಗಳಿಂದ ಅಮ್ಮನನ್ನು ನೋಡಿರದಿದ್ದ ಅಮ್ಮನೇ ಸಾಕಿದ್ದಹಸು, ಅಮ್ಮನನ್ನು ನೋಡಿ ಬಾಲ ನಿಮಿರಿಸಿ ಕುಣಿದು ಕುಪ್ಪಳಿಸಿತು .”ಬಂದೆಯಾ ಕುಂಟಿಮಾಚಕ್ಕ” ಎಂದು ಅಮ್ಮ ಹಸುವನ್ನು ಸ್ವಾಗತಿಸಿದಾಗ., ಇದೆಂತ ಹೆಸರು ಎಂಬ ನಮ್ಮ ಪ್ರಶ್ನೆಗೆ, ಕುಳ್ಳಗಿನ ಮಾಚಕ್ಕ ಎಂಬ ಹಸು ಕೊಂಡಾಟದಲ್ಲಿ ಕುಂಟಿಮಾಚಕ್ಕ ಎಂದಾಗಿದೆ ಎಂದರು.ನಮಗಂತೂ ಅದಕ್ಕಾಗಿ ಕಟ್ಟಿದ ಸಣ್ಣ ಹಟ್ಟಿಗೆ ದಿನಕ್ಕೊಂದು ಐವತ್ತು ಸಲ ಹೋಗಿ ಹಸು ಕರುವನ್ನು ನೋಡಿಕೊಂಡು ಬರುವುದೇ ಒಂದು ಸಂಭ್ರಮವಾಯಿತು .ಅಲ್ಲಿಂದ ಮುಂದೆ ನಮಗೆ ಕುಡಿಯಲು ಮಾತ್ರವಲ್ಲದೆ ಮಾರಾಟ ಮಾಡುವುದಕ್ಕೂ ಹಾಲು ಒದಗತೊಡಗಿತು. ಅನಂತರ ಹುಟ್ಟಿದ ಕರುಗಳಿಗೆ ಹೆಸರಿಡುವುದೇ ನಮಗೊಂದು ಸಂಭ್ರಮ. ಮೊದಲು ಹುಟ್ಟಿದವಳೇ ”ಚಿನ್ನಿ”. ಹೆಸರಿಗೆ ತಕ್ಕಂತೆ ಚಿನ್ನದಂತಹ ಹಸು. ನಮ್ಮಿಂದ ಹೆಚ್ಚಿನ ಕೊಂಡಾಟವನ್ನು ಅಪೇಕ್ಷಿಸದ ಅವಳಿಗೆ ತನ್ನ ಕಣ್ಣುಗಳಲ್ಲಿ ಉಕ್ಕುವ ಪ್ರೀತಿಯನ್ನು ಮರೆಮಾಚಲು ಗೊತ್ತಿರಲಿಲ್ಲ. ಅನಂತರ ಪುಟ್ಟಿ…ಬಂಗಾರಿ …ಹೀಗೆ ಸುಮಾರು ಕರುಗಳಾದವು. ಮೊದಲ ಎರಡು ತಿಂಗಳು ಕರುಗಳೆಲ್ಲ ಮನೆಯ ಒಳಗೇ ವಾಸ. ಮನೆಯೊಳಗೆ ಅವಕ್ಕೆ ಬೇಕಾದಲ್ಲಿ ಹೋಗಿ ಕೂರುವುದು, ಮಲಗುವುದು ಮಾಡುತ್ತಿದ್ದವು. ಮುಸ್ಸಂಜೆಗೆ ಎಲ್ಲರೂ ಕೂತು ದೇವರ ಭಜನೆ, ಶ್ಲೋಕ ಹೇಳುವಾಗ ನಮ್ಮ ಬಳಿಯೇ ಬಂದು ಅಂಟಿ ಕೂರುತ್ತಿದ್ದವು. ರಾತ್ರಿ ಚಾಪೆ ಹಾಸಿ ಮಲಗುವಾಗ ನಮ್ಮ ಚಾಪೆಯಲ್ಲೇ ಬಂದು ಮಲಗುತ್ತಿದ್ದವು. ಆದರೆ ಅಸಲಿ ಆಟ ಶುರುವಾಗಿದ್ದೇ ಚಿನ್ನಿ ಕರು ಹಾಕಿದ ನಂತರ.ಆವರೆಗಿನ ಎಲ್ಲಾ ಕರುಗಳೂ ಊರಿನ ತಳಿಯವಾಗಿದ್ದರೆ, ಚಿನ್ನಿ ಹಾಕಿದ ಕರು ಬೇರೆ ತಳಿ. ಉದ್ದಉದ್ದ ಕೈ..ಕಾಲಿನ, ದೊಡ್ಡ ದೊಡ್ಡ ಕಿವಿಯ, ನೀಲಿಕಣ್ಣಂಚಿನ, ಇಟ್ಟಿಗೆಬಣ್ಣದ, ಹಣೆಯ ಮೇಲೆ ಎರಡು ಬಿಳಿಯ ಬೊಟ್ಟುಳ್ಳ, ಬೆಣ್ಣೆಯಂತೆ ನುಣುಪಾದ ಕೂದಲಿನ, ಮುದ್ದು ಮುದ್ದಾಗಿ ಓಡಾಡುತ್ತ ನಮ್ಮ ಮಡಿಲಿನಲ್ಲೇ ಎಂಬಂತೆ ಬಂದು ಕೂರುತ್ತಿದ್ದ ಸುಂದರಿ ಕರುವಿಗೆ ನಾವೆಲ್ಲರೂ ಒಮ್ಮತದಿಂದ ಇಟ್ಟ ಹೆಸರು “ಸಿಂಗಾರಿ”.ನಾವೆಲ್ಲರೂ ಆಕೆ ಧರೆಗಿಳಿದ ಶಾಪಗ್ರಸ್ತ ಅಪ್ಸರೆಯೇನೋ ಎಂಬಂತೆ ಅವಳ ಮೋಹಕ್ಕೆ ಒಳಗಾಗಿದ್ದೆವು. ಸಂಜೆ ಶಾಲೆ ಬಿಟ್ಟಾಗ ಎಲ್ಲಿಯೂ ನಿಲ್ಲದೆ ಓಡೋಡಿ ಬಂದು ಅವಳ ಜೊತೆ ಆಟಕ್ಕೆ ಬೀಳುತ್ತಿದ್ದೆವು. ಸ್ವಲ್ಪ ಸಮಯದ ನಂತರ ಮನೆ ಬಿಟ್ಟು ಆಕೆ ಹಟ್ಟಿಗೆ ಶಿಫ್ಟ್ ಆದಮೇಲೆ ನಾವೆಲ್ಲ ನಮ್ಮ ನಮ್ಮ ಕೆಲಸಗಳಲ್ಲಿ ತೊಡಗಿಸಿಕೊಳ್ಳತೊಡಗಿದರೆ ಕೊನೆಯವನಾದ ನನ್ನ ತಮ್ಮ, ಅವಳ ಜೊತೆ ಹಟ್ಟಿಗೇ ಶಿಫ್ಟ್ ಆಗಿಬಿಟ್ಟಿದ್ದ. ಸಂಜೆ ಹೊತ್ತು ಶಾಲೆ ಮುಗಿಸಿ ಬಂದು, ತಿನ್ನಲು ಹಾಳುಮೂಳುಗಳೆಲ್ಲಾ ಇರದ ಆ ದಿನಗಳಲ್ಲಿ, ಬೆಲ್ಲ ತಿನ್ನುವುದು ಅಭ್ಯಾಸ ಮಾಡಿಕೊಂಡಿದ್ದ ಆತ,ತನ್ನ ಅಂಗಿಯ ಕಿಸೆ ತುಂಬಾ ಬೆಲ್ಲದ ಚೂರುಗಳನ್ನು ತುಂಬಿಕೊಂಡು ಹೋಗಿ ದನಗಳಿಗೆ ಹುಲ್ಲು ಹಾಕುವ ಬೈಪಣೆಯಲ್ಲಿ ಮಲಗಿಬಿಡುತ್ತಿದ್ದ. ಅವನ ಕೆನ್ನೆ,ಮುಖ, ಕೈಯನ್ನೆಲ್ಲಾ ನೆಕ್ಕುತ್ತಿದ್ದ ಚಿನ್ನಿ ಮತ್ತು ಸಿಂಗಾರಿ ಬೆಲ್ಲದ ಪರಿಮಳಕ್ಕೆ ಕಿಸೆಯೊಳಗೇ…… ನಾಲಿಗೆ ಹಾಕಿ ಬೆಲ್ಲ ಖಾಲಿ ಮಾಡುತ್ತಿದ್ದವು. ಕಾಲ ಸರಿದಂತೆ ಕರುವಾಗಿದ್ದ ಸಿಂಗಾರಿ ದನವಾಗಿ ತಾನೇ ಕರು ಹಾಕತೊಡಗಿದಾಗ, ನಮಗೋ ಅವುಗಳಿಗೆ ಹೆಸರಿಡುವುದೇ ಒಂದು ಸಂಭ್ರಮ. ರಾಜ…ಭೋಜ ಇನ್ನೂ ಏನೇನೋ.. ನಮ್ಮ ಮೂರು ಜನ ಮಕ್ಕಳ ಬದುಕು ರೂಪಿಸುವ ಜವಾಬ್ದಾರಿ ಹೊತ್ತ ನಮ್ಮ ಅಮ್ಮನ ಹೊರೆ ಹೆಚ್ಚಾಗಿದ್ದುದರಿಂದ ಖರ್ಚಿನ ನಿರ‍್ವಹಣೆಗೂ ನಾವು ಜಾನುವಾರುಗಳನ್ನು ಅವಲಂಬಿಸಿದ್ದೆವು. ಮೂರು ಹೊತ್ತೂ ಹುಲ್ಲು ಹೆರೆದು ಹಾಕಿ ಸಾಕಲು ಕಷ್ಟವಾಗುತ್ತಿದ್ದರಿಂದ ಹಗಲು ಹೊತ್ತು ಗುಡ್ಡೆಗೆ ಹೋಗಿ ತಾವೇ ಮೇಯಲು ಬಿಟ್ಟುಬಿಡುತ್ತಿದ್ದೆವು. ದಿನವಿಡೀ ಮೇದು ಸಂಜೆಗೆ ಮನೆಗೆ ಮರಳುತ್ತಿದ್ದವು. ನಮ್ಮ ಚಿನ್ನಿ ನಾಯಕತ್ವದ ದನಗಳ ಗುಂಪು. ಆದರೆ ಎಲ್ಲರಂತಲ್ಲದ ನಮ್ಮ ಸಿಂಗಾರಿ ಈ ವಿಷಯದಲ್ಲಿ ಹೇಗೆ ಎಲ್ಲರಂತೆ ಆದಾಳು?ಹಗಲು ಮೇಯುವಾಗ ಅವಳಿಗೆ ಹೊಟ್ಟೆತುಂಬುತ್ತಿರಲಿಲ್ಲವೋ,..ಅಲ್ಲ ಬೇಕೆಂದೇ ಚೇಷ್ಟೆ ಮಾಡುತ್ತಿದ್ದಳೋ…..?ಕೆಟ್ಟಬುಧ್ಧಿಯೊಂದು ಕಲಿತುಬಿಟ್ಟಳು. ಸಂಜೆ ಎಲ್ಲರೊಂದಿಗೆ ಮನೆಗೆ ಬರದೆ, ಎಲ್ಲಾದರೂ ಮರೆಯಲ್ಲಿ ಕಾದಿದ್ದು, ಹಗಲು ಗುರುತು ಮಾಡಿಕೊಂಡಿರುವ ಜಾಗಕ್ಕೆ ರಾತ್ರಿ ಹೋಗಿ ಮೇದು,ನಡುರಾತ್ರಿಯಲ್ಲಿ ವಾಪಾಸಾಗುತ್ತಿದ್ದಳು.ಅದೂ ಇಡೀ ಊರಿಗೇ ಕೇಳುವಂತೆ ಶಂಖ ಊದಿದಂತೆ ಕೂಗಿಕೊಂಡು. ಕ್ರಮೇಣ ದಿನ ಕಳೆದಂತೆ ಫಸಲು ಕಳೆದುಕೊಂಡ ಒಬ್ಬೊಬ್ಬರೇ ಬಂದು ಅಮ್ಮನಲ್ಲಿ ದೂರು ಹೇಳಲು ಸುರುಮಾಡಿದರು. ಕಟ್ಟಿ ಹಾಕಿ ಸಾಕುವ ಸಾಧ್ಯತೆಗಳೇ ಇಲ್ಲದೆ ಅಮ್ಮ ಒಳಗಿಂದೊಳಗೇ ಪೇಚಾಡತೊಡಗಿದರು. ಕಡೆಗೂ ಅವಳನ್ನು ಯಾರಾದರೂ ಸಾಕಿಕೊಳ್ಳುವವರಿಗೆ ಕೊಡುವುದು ಎಂದು ತೀರ‍್ಮಾನವಾದಾಗ ಹೊಟ್ಟೆಯೊಳಗೆ ಆದ ಸಂಕಟವನ್ನು ನಾನು ಇವತ್ತಿಗೂ ಅನುಭವಿಸಬಲ್ಲೆ. ಪೇಟೆಯಲ್ಲಿ ಅಪ್ಪನ ಅಂಗಡಿ ಸಮೀಪದ ಮನೆಯವರು ಬಂದು ಅವಳನ್ನು ಕರೆದೊಯ್ಯುವಾಗ ನಾವು ಮನೆಯಲ್ಲಿರಲಿಲ್ಲಮರುದಿನ ಅಂಗಡಿಗೆ ಹೋದ ಅಪ್ಪ ರಾತ್ರಿ ಮರಳುವಾಗ ಮಾಮೂಲಿನಂತಿರಲಿಲ್ಲ. ಏನೆಂದು ವಿಚಾರಿಸಿದಾಗ ಅವರು ಹೇಳಿದ್ದು, “ಸಿಂಗಾರಿ ಅಂಗಡಿ ಬಳಿ ಬಂದವಳು ಸಂಜೆವರೆಗೂ ಹೋಗಲೇಇಲ್ಲ. ಅಂಗಡಿ ಬಾಗಿಲಲ್ಲೇ ಮಲಗಿದ್ದಳು”ಎಂದು.ನಮಗೆಲ್ಲ ಹೃದಯ ಗಂಟಲಲ್ಲಿ ಸಿಕ್ಕಿಹಾಕಿಕೊಂಡ ಅನುಭವ. ಹೊಟ್ಟೆಯಲ್ಲಿ ಅದೇನೋ ಕಿಚಿಪಿಚಿ.ಮರುದಿನ ಅಪ್ಪ ಅಂಗಡಿಗೆಹೊರಟಾಗ, ಆವತ್ತಿನ ತಿಂಡಿಯದೊಂದು ಪೊಟ್ಟಣ ಕಟ್ಟಿ ಅಮ್ಮ, ಅಪ್ಪನ ಕೈಗಿತ್ತು”ಸಿಂಗಾರಿಗೆ ತಿನ್ನಿಸಿ “ಎಂದಾಗ ಆಕೆಯ ಕಣ್ಣಂಚಿನಲ್ಲಿ ನೀರು ಜಿನುಗಿದ್ದನ್ನು ಆಕೆಗೆ ನಮ್ಮಿಂದ ಮರೆಮಾಚಲಾಗಲಿಲ್ಲ ಎಂಬುವುದು ನನಗೆ ಇಂದಿಗೂ ನೆನಪಿದೆ. ಇವತ್ತಿನ ಆಧುನಿಕತೆಯ ನಾಗಾಲೋಟದ ನಡುವೆಯೂ ಹಟ್ಟಿಯಲ್ಲಿರುವ ಹಸುಕರುಗಳಿಗೆ ಹೆಸರಿಟ್ಟು, ಅವುಗಳ ಜೊತೆಗೆ ಕುಣಿದು ಸಂಭ್ರಮಿಸುವ ನನ್ನ ಮಗಳನ್ನು ನೋಡಿದರೆ, ಸಧ್ಯ ನಾನೂ ನನ್ನ ಗೆಳತಿಯಂತೆ ಸಿಟಿವಂತಳಾಗದೇ ಉಳಿದೆನಲ್ಲಾ ಎಂದು ಸಮಾಧಾನವಾದರೂ…….ಕಾಮನ್ಸೆನ್ಸ್ ಇಲ್ಲದ, ಹಳ್ಳಿಗರು ಎಂದರೆ ತಾತ್ಸಾರ ಮಾಡುವ ಸಿಟಿಯವರನ್ನು ನೆನೆದರೆ ಮರುಕ ಹುಟ್ಟುತ್ತದೆ.*************

ಇತರೆ Read Post »

ಇತರೆ, ಜೀವನ

ಪ್ರಸ್ತುತ

ಮತ್ತೆ ಕಾಣಬಲ್ಲೆವೇ ಆ ದಿನಗಳನು..? ಮಲ್ಲಿಕಾರ್ಜುನ ಕಡಕೋಳ ದುರಿತಕಾಲ ಎಂಬ ಪದ ನಾವೆಲ್ಲ ಬರಹಗಳಲ್ಲಿ ಸೂಕ್ಷ್ಮತೆಯಿಂದ ಬಳಕೆ ಮಾಡಿದ ಪರಿಚಯವಿತ್ತು. ಪ್ರಸ್ತುತ ನಾವು ಅನುಭವಿಸುತ್ತಿರುವ ಖರೇ, ಖರೇ ದುರಿತಕಾಲದ ಈ ದಿನಗಳಿಗೆ ಕೊನೆಯೆಂಬುದು ಯಾವಾಗ ಎಂಬ ದುಗುಡ ನಮ್ಮನ್ನೀಗ ಘೋರವಾಗಿ ಬಾಧಿಸುತ್ತಿದೆ. ಅಷ್ಟಕ್ಕೂ ಕೊರೊನಾದ ಈ ಕಾಲಘಟ್ಟಕ್ಕೆ ಕೊನೆಯೆಂಬುದು ಇದೆಯೋ, ಇಲ್ಲವೋ ಎಂಬ ಕ್ರೂರ ಆತಂಕ. ಹಗಲು ರಾತ್ರಿಗಳೆನ್ನದೇ ಕಿವಿ, ಕಣ್ಣು, ಬಾಯಿ, ಮೂಗು, ಮನಗಳ ತುಂಬೆಲ್ಲ ಸೋಂಕಿತರು, ಶಂಕಿತರು, ರೆಡ್ ಝೋನ್, ಎಲ್ಲೋ ಝೋನ್, ಪೋಲಿಸರು, ವೈದ್ಯರಿಗೇ ಸೋಂಕು ಪದಗಳ ರಕ್ಕಸ ಕುಣಿತ. ಇವುಗಳ ಜೊತೆಗೆ ಜಾಗತಿಕ ಮಟ್ಟದ ಲಕ್ಷ ಲಕ್ಷ ಸಂಖ್ಯೆಯ ಸಾವು ನೋವಿನ ಅಂಕಿ ಅಂಶಗಳ ರುದ್ರನರ್ತನ. ಹುಟ್ಟೂರಿಗೆ ಹೋಗಿಯೇ ಸಾಯಬೇಕೆಂಬ “ಬದುಕಿಗಾಗಿ” ರಹದಾರಿಗಳಿಲ್ಲದೇ ಸಾವಿರಾರು ಮಂದಿ ನೂರಾರು ಹರದಾರಿ ನಡಕೊಂಡೇ ಹೋದವರು. ಹಾಗೆ ನಡಕೊಂಡು ಹೋಗುವ ನಡುದಾರಿಯಲ್ಲೇ ನೀರು – ಕೂಳಿಲ್ಲದೇ ಪ್ರಾಣಬಿಟ್ಟ ಬಸುರಿ – ಬಾಣಂತಿ, ತಾಯಿಮಕ್ಕಳ ಸಂಕಟದ ಸಾಲು ಸಾಲು ಸರಗಥೆಗಳು. ಹೀಗೆ ಅರಣ್ಯ ರೋದನವಾಗುತ್ತಿರುವ ಒಂದೆರಡಲ್ಲ ನಿತ್ಯವೂ ನೂರಾರು ಸಂಕಟಗಳ ಕರುಳು ಹಿಂಡಿ ಹಿಪ್ಪೆಮಾಡುವ ದೃಶ್ಯಗಳಿಗೆ ಕೊನೆಯೆಂಬುದಿದೆಯೇ ? ಇದ್ದರೆ ಯಾವಾಗ..? ಕೊರೊನಾ ಸಂದರ್ಭದಲ್ಲಿ ಮನುಷ್ಯ, ಮನುಷ್ಯರ ನಡುವಿನ ದೈಹಿಕ ದೂರ ಕಾಪಾಡಬೇಕೆಂಬುದು ವೈಜ್ಞಾನಿಕ ಸತ್ಯ. ವಿದೇಶಗಳಲ್ಲಿ ಸೋಶಿಯಲ್ ಗ್ಯಾದರಿಂಗ್ ಹಿನ್ನೆಲೆಯಲ್ಲಿ ಸೋಶಿಯಲ್ ಡಿಸ್ಟನ್ಸ್ ಎಂದು ಕರೆದಿರಬಹುದು. ಆದರೆ ಬಹುತ್ವ ಭಾರತದ ಸಂದರ್ಭದಲ್ಲಿ ಅದನ್ನು ಸಾಮಾಜಿಕ ಅಂತರ ಎಂಬ ಹೆಸರಿಂದ ಕರೆಯುವ ಮೂಲಕ ಅದು ಭಯ ಮೂಲದ್ದು ಎಂಬುದು ಮಾತ್ರವಲ್ಲದೇ ಜನಸಂಸ್ಕೃತಿ ವಿರೋಧಿಜನ್ಯ ಭಾವಕ್ಕೆ ಹತ್ತಿರವಾಗಿದೆ. ಅದು ವ್ಯಕ್ತಿಗತ ಅಥವಾ ದೈಹಿಕ ಅಂತರ – ದೂರ ಎಂಬುದು ವಾಸ್ತವವೇ ಆದರೂ ಹಾಗೇಕೆ ಕರೆಯುತ್ತಿಲ್ಲ.? ಮಡಿ – ಮೈಲಿಗೆ ಎಂಬಂತೆ ಸಾಮಾಜಿಕ ಅಂತರ ಎಂದು ಕರೆಯುವ ಮೂಲಕ ಅದು ಹುಟ್ಟುಹಾಕುತ್ತಿರುವ ಭಯ ಮಾತ್ರ ಭಯಂಕರ. ಕೊರೊನಾಗಿಂತ ಕೊರೊನಾ ಕುರಿತು ಹುಟ್ಟಿಕೊಂಡಿರುವ ಈ ತೆರನಾದ ಆತಂಕಕಾರಿ ಜೈವಿಕ ಸಂಸ್ಕೃತಿ (Bio Culture) ಬಣ್ಣಿಸಲಸದಳ. ಈ ಕೊರೊನಾಮಾರಿ ಮನುಷ್ಯ ಮನುಷ್ಯರ ನಡುವಿನ ಜೀವ ಸಂಬಂಧಗಳನ್ನು ನಿರ್ನಾಮಗೊಳಿಸುತ್ತಿದೆ. ಜೀವ ಕಕುಲಾತಿಯ ಸಹಬಾಳ್ವೆ, ಸಹಿಷ್ಣುತೆ, ಸಮಷ್ಟಿ ಪ್ರಜ್ಞೆಯ ಸಾಮೂಹಿಕ ಬದುಕು ಮತ್ತೆ ಮರಳಿ ಬರುವುದೇ ಎಂಬ ಶಂಕೆ. ಒಡೆದು ಹೋಗುತ್ತಿರುವ ಸಹಮತದ ಜೀವಗನ್ನಡಿ ಹರಳು ಮತ್ತೆ ಬೆಸೆದೀತೇ.? ಎಲ್ಲವೂ ಸರಿಯಾಗುವವರೆಗೆ ಲಾಕ್ ಡೌನ್, ಸೀಲ್ ಡೌನ್ ಪ್ರಕ್ರಿಯೆಗಳು ಮುಂದುವರೆದರೆ ನಾವೆಲ್ಲ ಬದುಕುಳಿಯಬಹುದೇ.? ಹೀಗೆ ಏನೇನೋ ಜೀವದುಸಿರು ಸೂತಕದ ಆಲೋಚನೆಗಳು. ಸಣ್ಣದೊಂದು ಸಮಾಧಾನದ ಸಂಗತಿಯೆಂದರೆ ಟೀವಿಗಳಲ್ಲಿ ಗಂಟೆಗಟ್ಟಲೇ ಕೊರೆಯುತ್ತಿದ್ದ, ಮನುಕುಲದ ಉದ್ದಾರಕ್ಕಾಗಿಯೇ ಹುಟ್ಟಿ ಬಂದವರಂತೆ ತರಹೇವಾರಿ ಫೋಸು ಕೊಡುತ್ತಿದ್ದ ದೇವಮಾನವ ನಾಮಾಂಕಿತ ಜೋತಿಷಿಗಳು ನಾಪತ್ತೆಯಾಗಿದ್ದಾರೆ. ಕೊರೊನಾ ಹೋದಮೇಲೂ ಅವರು ಮತ್ತೆ ಬಾರದಿರಲಿ. ಆಯುರ್ವೇದ, ಅಲೋಪತಿ, ಸಿದ್ಧ, ಹೋಮಿಯೋಪಥಿ ಯಾವುದರಲ್ಲಿ ಇದಕ್ಕೆ ನೆಟ್ಟಗಾಗುವ ಮದ್ದಿದೆ ? ದಿನಕ್ಕೊಂದಲ್ಲ ಹತ್ತಾರು, ನೂರಾರು ತರಹೇವಾರಿ ಸುದ್ದಿಗಳಿಂದ ಬದುಕು ಅಕ್ಷರಶಃ ಗದ್ಗದಿತವಾಗಿದೆ. ಸಾವಿಗಿಂತಲೂ ಸಾವಿನ ಕುರಿತಾದ ಸಾವಿನಪ್ಪನಂತಹ ಸುದ್ದಿಗಳನ್ನು ಜೀರ್ಣಿಸಿಕೊಳ್ಳುವುದು ಸಾಧ್ಯವಾಗುತ್ತಿಲ್ಲ. ಇದೆಲ್ಲವೂ ತಿಂಗಳೊಪ್ಪತ್ತಿನಿಂದ ನಾಗಾಲೋಟದಲ್ಲಿ ನೂರಿನ್ನೂರನೇ ಪ್ರಯೋಗದಲ್ಲಿ ಮುನ್ನುಗ್ಗುತ್ತಿರುವ ಪ್ರಸಿದ್ಧ ಕಂಪನಿ ನಾಟಕಗಳ ಪ್ರಯೋಗಗಳಂತೆ. ಆದರಿದು ಕುಪ್ರಸಿದ್ಧವಾಗುತ್ತಿರುವ ಕೊರೊನ ಎಂಬ ಮಹಾರಾಕ್ಷಸತ್ವದ ಕರಾಳ ಕಥೆ. ಮನುಷ್ಯರ ಬದುಕು ಬರ್ಬರಗೊಳ್ಳುತ್ತಿರುವ ದುಃಖಸಾಗರದ ಕಥೆ. ಜನರ ಜೀವನ ಅಕ್ಷರ ಅಕ್ಷರಶಃ ತತ್ತರಿಸಿ ಹೋಗಿದೆ. ಆದರೆ ಇಂತಹ ಸಂಕಟಗಳನ್ನು ಹಾಡು, ರೂಪಕ, ಸಣ್ಣಾಟ, ಜಾನಪದ, ಪ್ರಹಸನ, ಕವನ ಮುಂತಾದ ಪ್ರಕಾರಗಳಲ್ಲಿ ಜನಕಲಾವಿದರು ತೋರಿಸುವ ಕ್ರಿಯಾಶೀಲತೆ ಮಾತ್ರ ತುಂಬಾ ಚುರುಕಾಗಿದೆ. ಬಡವರು ಸತ್ತಾರ ಸುಡಲಾಕ ಸೌದಿಲ್ಲ ! ಶಿವನೇ ಬಡವರಿಗೆ ಸಾವು ಕೊಡಬೇಡ !! ಸಾವಿನ ಘನಘೋರ ಸಂದರ್ಭದಲ್ಲೂ ನಮ್ಮ ಜನಪದರ ಕರುಳಿನ ಸಂಕಟ ಕೊರಳ ಸಿರಿಕಂಠದ ಮೂಲಕ ಜೀವದ ಹಾಡಾಗಿ, ಪಾಡಾಗಿ ಹೊರಹೊಮ್ಮುತ್ತದೆ. ಅದು ನಮ್ಮ ಜೀವಪರ ಜನಸಂಸ್ಕೃತಿ. ಅದು ಶಿವಸಂಸ್ಕೃತಿ. ಸಾವಿನ ಬಗ್ಗೆ ಅವರಿಗೆ ಭಯವಿಲ್ಲ. ಆದರೆ ಸತ್ತರೆ ಸುಡಲು ಸೌದೆಇಲ್ಲ. ಅದಕ್ಕೆಂದೇ ಶಿವನೆ ಬಡವರಿಗೆ ಸಾವು ಕೊಡಬೇಡವೆಂದು, ಅವರು ಬಡತನದ ಬೇಗೆಯಲ್ಲೇ ಬೆಂದುಹೋಗುವ ಸತ್ಯದ ಮೊರೆತ ಅವರದು. ಒಡಲುಗೊಂಡವ ಹಸಿವ, ಒಡಲುಗೊಂಡವ ಹುಸಿವ, ಒಮ್ಮೆ ನೀನು ಒಡಲುಗೊಂಡು ನೋಡಾ ರಾಮನಾಥ., ಎಂದು ದೇವರ ದಾಸಿಮಯ್ಯ ದೇವರಿಗೆ ಹಾಕುವ ಒಡಲಿನ ಸವಾಲು, ಪ್ರಪಂಚದ ಯಾವ ವೇದಾಂತ, ಸಿದ್ದಾಂತ, ಸಾಹಿತ್ಯ ಹೇಳಿಲ್ಲ. ಇಂತಹ ಪರಮಸತ್ಯದ ಸವಾಲು ನಮ್ಮ ಸಂಸ್ಕೃತಿ. ಈಗ ಅವುಗಳಿಗೆ ಸಾಮಾಜಿಕ ಜಾಲತಾಣಗಳೇ ಬಹುದೊಡ್ಡ ಮಾಧ್ಯಮ. ಜನಸಮೂಹದ ನೆಲೆದಾಣಗಳಲ್ಲಿ ಸಾರ್ವತ್ರಿಕ ಅವಕಾಶಗಳಿಲ್ಲವಾದ್ದರಿಂದ ಸಧ್ಯಕ್ಕೀಗ ಸಾಮಾಜಿಕ ಅಂತರ ಕಾಪಾಡಿಕೊಂಡಿರುವ ಸಾಮಾಜಿಕ ಜಾಲತಾಣಗಳೇ ಏಕೈಕ ಸಂವಹನ ಸಾಧನಗಳು. ನಾಕೈದು ತಿಂಗಳುಕಾಲ ಅಂದರೆ ಬೇಸಿಗೆಯ ಆರಂಭದ ಒಂದೆರಡು ವಾರ ಮೊದಲೇ ಆರಂಭಗೊಂಡು ಮಿರುಗ (ಮೃಗಶಿರ)ದ ಮಳೆಯವರೆಗೂ ನಾಡಿನ ತುಂಬಾ ಜರುಗುವ ಜಾತ್ರೆ, ಸಾಂಸ್ಕೃತಿಕ ಹಬ್ಬ ಹರಿದಿನಗಳದ್ದೇ ಸಂಭ್ರಮ, ಸಡಗರ. ಜನವರಿ ತಿಂಗಳು ಬಹುಪಾಲು ಸಂಕ್ರಮಣಕ್ಕೆ ಮೊದಲೇ ಆರಂಭಗೊಳ್ಳುವ, ಜನಜೀವಾಳವೇ ಆಗಿರುವ ರೈತಾಪಿ ಬದುಕಿನ ಸುಗ್ಗಿ, ದೇವರು ದಿಂಡರ ಪರಿಷೆ, ಜನಪದರ ಜಾತ್ರೆ, ಸಾರ್ವಜನಿಕ ಪ್ರೀತಿ ಹುಟ್ಟಿಸುವ ಹತ್ತು ಹಲವು ಮಹೋತ್ಸವಗಳ ಸಾಂಸ್ಕೃತಿಕ ಸುಗ್ಗಿಯಕಾಲ. ಜನವರಿಯಿಂದ ಮೇ, ಜೂನ್ ಮುಗಿಯೋಮಟ ಜನಸಂಸ್ಕೃತಿಯ ಕಲಾಪ್ರದರ್ಶನಗಳಿಗೆ ಹೇಳಿ ಮಾಡಿಸಿದ ಕಾಲ. ರೈತಾಪಿ ಕೆಲಸಗಳು ಮುಗಿದು ಜನರ ಬದುಕಿನ ಸಾಹಿತ್ಯ, ಹಾಡು, ಕುಣಿತ ಒಟ್ಟು ಎಲ್ಲ ಕಲಾಪ್ರಕಾರ ಪ್ರದರ್ಶನಗಳ ಸಂಭ್ರಮಕಾಲ. ಸಡಗರದ ಕಾಲ. ಈ ಸಡಗರ ಸಂಭ್ರಮಗಳಿಗೆ ಈ ಬಾರಿ ಅವಕಾಶವೇ ಇಲ್ಲವಾಯಿತು. ಕೊರೊನಾ ಇಲ್ಲದಿದ್ದರೆ ಇದು ತಿಂಗಳುಗಳ ಕಾಲ ಜಾತ್ರೆಗಳು ಜರುಗುವ ಸಮಯ. ಜಾತ್ರೆಗಳಲ್ಲಿ ನಾಟಕ ಕಂಪನಿಗಳಿಗೆ ರಂಗನಾಟಕಗಳ ಬಂಪರ್ ಸುಗ್ಗಿಯ ಸಂಭ್ರಮ. ಪುಣ್ಯಕ್ಕೆ ನಾಟಕಗಳ ಜಾತ್ರೆಯೆಂದೇ ಪ್ರಸಿದ್ದವಾದ ಬನಶಂಕರಿ ಜಾತ್ರೆಯ ಸದುಪಯೋಗ ಹನ್ನೊಂದು ನಾಟಕ ಕಂಪನಿಗಳು ಮಾಡಿಕೊಂಡವು. ಆ ನಂತರ ಮಾರ್ಚ್ ಮೊದಲ ವಾರದಿಂದ ಜಾತ್ರೆಯ ಕ್ಯಾಂಪುಗಳದ್ದು ನೋವಿನ ಮಜಕೂರ. ಕಲಾವಿದರ ನಿತ್ಯದ ಬದುಕಿಗೂ ತತ್ವಾರ. ನಾಟಕ ಕಂಪನಿಗಳ ಕಲಾವಿದರೆಲ್ಲ ಮನೆ ಸೇರಿದ್ದಾರೆ. ಹಳ್ಳಿಯ ಜಾತ್ರೆಗಳಲ್ಲಿ ಜರುಗುವ ವೃತ್ತಿರಂಗ ನಾಟಕಗಳಲ್ಲಿ ಅಭಿನಯಿಸುವ ನೂರಾರು ಮಂದಿ ಹವ್ಯಾಸಿ ಕಲಾವಿದೆಯರು ನಿರುದ್ಯೋಗದ ನಿಟ್ಟುಸಿರು ಬಿಡುತ್ತಿದ್ದಾರೆ. ಮುಖ್ಯವಾಗಿ ಮದುವೆಗಳ ಸೀಜನ್ ಇದಾಗಿತ್ತು. ಮಂಗಳವಾದ್ಯ ನುಡಿಸುವ ಕಲಾವಿದರಿಗೆ ಅಗ್ನಿಪರೀಕ್ಷೆಯಂತಹ ಬದುಕಿನ ಪ್ರಶ್ನೆಯ ಸಮಯ. ಅವರ ಕುಟುಂಬ ನಿರ್ವಹಣೆ ಅಕ್ಷರಶಃ ಸಂಕಟಮಯ. ಸಿನೆಮಾ, ಧಾರಾವಾಹಿಗಳಲ್ಲಿ ಕೆಲಸ ಮಾಡುವ ಕಲಾವಿದರು, ತಂತ್ರಜ್ಞರ ಜೀವನ ಸಂಕಷ್ಟಕ್ಕೀಡಾಗಿದೆ. ಪುಸ್ತಕಗಳ ಪ್ರಕಟಣೆ ಸ್ಥಬ್ಧಗೊಂಡಿದೆ. ಹೀಗೆ ವಿರಮಿಸಿರುವ ಸಂಸ್ಕೃತಿ ಸಂಬಂಧಿತ ಬಹುದೊಡ್ಡ ಪಟ್ಟಿಯೇ ಇದೆ. ಹಳ್ಳಿ, ಪಟ್ಟಣ, ನಗರಗಳೆನ್ನದೇ ಬೇಸಿಗೆ ಶಿಬಿರಗಳು ಸಂಸ್ಕೃತಿಯ ಸಮೃದ್ಧತೆಯನ್ನು ಮಕ್ಕಳಿಗೆ ಉಣ ಬಡಿಸುತ್ತಿದ್ದವು. ಮಕ್ಕಳಿಗೆ ಅಭಿನಯ, ಸಂಗೀತ, ಅಜ್ಜಿಹೇಳುವ ಕಥೆ, ಚಿತ್ರಕಲೆ ಕಲಿಕೆ ಹೀಗೆ ಹೊಸತನದ ಸೃಜನಶೀಲತೆಗಳಿಗೆ ಮಕ್ಕಳನ್ನು ಸಿದ್ಧಗೊಳಿಸುವ ಎಲ್ಲಕ್ಕೂ ಕೊರೊನಾ ಕಲ್ಲು ಬಿದ್ದಿದೆ. ಸರಕಾರದ ರಂಗಾಯಣಗಳು ಮಕ್ಕಳಿಗೆ ಬೇಸಿಗೆ ಶಿಬಿರಗಳನ್ನು ನಡೆಸುತ್ತಿದ್ದವು. ಖಾಸಗಿಯಾಗಿ ಸಂಘ ಸಂಸ್ಥೆಗಳು ಅಲ್ಲಲ್ಲಿ ಜರುಗಿಸುತ್ತಿದ್ದ ಇಂತಹ ನೂರಾರು ಶಿಬಿರಗಳು ಸಂಸ್ಕೃತಿಯ ವಿವಿಧ ಮಜಲುಗಳ ಬೃಹತ್ ಕಾರ್ಯಾಗಾರ, ಕಮ್ಮಟ, ಸಮಾವೇಶಗಳು ನಾಡಿನ ಸಂಸ್ಕೃತಿ ಬಿಂಬಿಸುವ ಅವಕಾಶಗಳಾಗಿದ್ದವು. ಅಲ್ಲದೇ ಸರಕಾರದ ಹತ್ತು ಹಲವು ಸಂಸ್ಕೃತಿ ಉತ್ಸವಗಳು ಜರುಗುತ್ತಿದ್ದವು. ಅವೆಲ್ಲವುಗಳನ್ನು ಕೊರೊನಾ ಎಂಬ ಕರಾಳ ಕಾಳಿ ನುಂಗಿ ನೊಣೆಯುತ್ತಿದೆ. ಲಾಕ್ ಡೌನ್ ಮತ್ತು ಸೀಲ್ ಡೌನ್ ಗಳಿಂದ ಸಾಂಸ್ಕೃತಿಕ ಲೋಕವಿರಲಿ ಸಾಮಾನ್ಯ ಜನಜೀವನ ಸಹಜಸ್ಥಿತಿಗೆ ಮತ್ತೆ ಮರುಳತ್ತದೆಯಾ.? ಮತ್ತೆ ಕಾಣಬಲ್ಲೆವೇ ಆ ದಿನಗಳನು ಎಂಬ ಸಹಸ್ರಮಾನದ ನಿರೀಕ್ಷೆ ನಿತ್ಯವೂ ನಮ್ಮೆಲ್ಲರನ್ನು ಕಾಡುತ್ತಿದೆ. ***********

ಪ್ರಸ್ತುತ Read Post »

ಇತರೆ

ಪ್ರಸ್ತುತ

ವಾಟ್ಸ್ಯಾಪ್ ಮತ್ತು ಫೇಸ್ ಬುಕ್ ಗುಂಪುಗಳು ಗಂಗಾಧರ ಬಿ ಎಲ್ ನಿಟ್ಟೂರ್ ವಾಟ್ಸ್ಯಾಪ್ ಮತ್ತು ಫೇಸ್ ಬುಕ್ ಗುಂಪುಗಳು ಅವಲೋಕಿಸಲೇಬೇಕಾದ ಕೆಲ ಅಂಶಗಳು  //    ಪರಸ್ಪರ ಪರಿಚಯ, ವಿಚಾರ ವಿನಿಮಯ, ಆರೋಗ್ಯಕರ ಚರ್ಚೆ, ಪ್ರತಿಭೆಯ ಅನಾವರಣ ಹಾಗೂ ಹೊಸ ಕಲಿಕೆಯ ಮೂಲ ಉದ್ದೇಶದಿಂದ ಇಂದು ಎಲ್ಲ ಕ್ಷೇತ್ರದಲ್ಲೂ ಸಾಮಾಜಿಕ ಜಾಲತಾಣವನ್ನು ಮಾಧ್ಯಮವನ್ನಾಗಿಸಿಕೊಂಡು ಒಂದಲ್ಲ ಒಂದು ವಾಟ್ಸಾಪ್ ಅಥವಾ ಫೇಸ್‌ಬುಕ್ ಗುಂಪು ರಚನೆಯಾಗಿರುವುದು ಸರ್ವರಿಗೂ ತಿಳಿದ ಸಾಮಾನ್ಯ ಸಂಗತಿ. ಯಾರು ಯಾರಿಗೆ ಯಾವ ಕ್ಷೇತ್ರದಲ್ಲಿ ಆಸಕ್ತಿ, ಅಭಿರುಚಿ ಇದೆಯೋ ಅಂಥವರು ತಮ್ಮಿಷ್ಟದ ಆಯಾ ಕ್ಷೇತ್ರದ ಒಂದು ಅಥವಾ ಹಲವು ಗುಂಪುಗಳಲ್ಲಿ ಸಕ್ರಿಯ ಸದಸ್ಯರಾಗಿ ಗುಂಪಿನ ಸದ್ಭಳಕೆಯಲ್ಲಿ ತೊಡಗಿದ್ದಾರೆ.       ಸದಾ ಒಂದಿಲ್ಲೊಂದು ಕ್ರಿಯಾತ್ಮಕ ಚಟುವಟಿಕೆ ರೂಪಿಸಿ ಸರ್ವ ಸದಸ್ಯರನ್ನು ಹುರಿದುಂಬಿಸಿ ಸೃಜನಶೀಲತೆ ಮತ್ತು ಕ್ರಿಯಾಶೀಲತೆಗೆ ವೇದಿಕೆ ಕಲ್ಪಿಸುತ್ತಿರುವ ವಿವಿಧ ಬಳಗಗಳ ಸಂಚಾಲಕರು ಅಥವಾ ಅಡ್ಮಿನ್ ಗಳ ಕಾರ್ಯವೈಖರಿ ನಿಜಕ್ಕೂ ಶ್ಲಾಘನೀಯ.    ಆಯಾ ಕ್ಷೇತ್ರದ ಬಳಗಗಳು ತಮ್ಮ ಬಳಗದ ಸದಸ್ಯರನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಆಯಾ ಕ್ಷೇತ್ರಕ್ಕೆ ಸಂಬಂಧಿಸಿದ ನಾನಾ ಪ್ರಕಾರಗಳನ್ನು ಪರಿಚಯಿಸುವ ಮತ್ತು ಅದರಲ್ಲಿ ತೊಡಗಿಸುವ ವಿವಿಧ ಸ್ಪರ್ಧೆಗಳನ್ನು ನಡೆಸಿ ಸಲಹೆ ಸೂಚನೆಗಳೊಂದಿಗೆ ಜ್ಞಾನಾರ್ಜನೆಗೆ ಇಂಬು ನೀಡುತ್ತಿರುವುದಲ್ಲದೆ ಸ್ಪರ್ಧೆಯಲ್ಲಿ ಭಾಗವಹಿಸುವ ಸ್ಫರ್ಧಾಥಿಗಳಿಗೆ ಪುಸ್ತಕ ಅಥವಾ ನಗದು ರೂಪದ ಪುರಸ್ಕಾರ ಇಲ್ಲವೇ 3 ಬಹುಮಾನಗಳ ಘೋಷಣೆ ಮಾಡುವ ಮೂಲಕ ಪ್ರೋತ್ಸಾಹಿಸುತ್ತಿವೆ. ಕೆಲವೇ ಕೆಲ ಬಳಗಗಳು ಮಾತ್ರ ಭಾಗವಹಿಸುವ ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಸ್ಥಾನ ನೀಡಿ ಉತ್ತೇಜಿಸುವ ಜತೆ ಅಭಿನಂದನಾ ಪತ್ರ ನೀಡಿ ಗೌರವಿಸುವ ಸಂಪ್ರದಾಯ ರೂಢಿಸಿಕೊಂಡಿವೆ. ಇದು ಸ್ತುತ್ಯಾರ್ಹ ಮತ್ತು ಮಾದರಿ ಕಾರ್ಯ. ಇತರೆ ಗ್ರೂಪ್ ಗಳ ಚಟುವಟಿಕೆಗಳಿಗಿಂತಲೂ ವಿಭಿನ್ನ, ವಿಶೇಷ ನಡೆ ಎಂದು ಬಣ್ಣಿಸುವ ಜತೆ ಇದು ಆಯಾ ಬಳಗದ ಮುಖ್ಯಸ್ಥರ ಸಹೃದತೆಗೆ ಸಾಕ್ಷಿಯೂ ಸಹ ಆಗಿದೆ ಎಂದರೂ ಅತಿಶಯೋಕ್ತಿ ಏನಲ್ಲ.        ಆದಾಗ್ಯೂ ಈ ಪ್ರೋತ್ಸಾಹ – ಪ್ರೇರಣೆಗೆ ಮೌಲ್ಯ – ಘನತೆ ಇಮ್ಮಡಿಸುವ ನಿಟ್ಟಿನಲ್ಲಿ, ಬಳಗದ ಚಟುವಟಿಕೆಗಳು ಮತ್ತು ನಿರ್ವಾಹಕ ಮಂಡಳಿಯ ಬಗ್ಗೆ ಈಗಾಗಲೇ ಸದಸ್ಯರಲ್ಲಿರುವ ಅಭಿಮಾನವನ್ನು ಚಿರಕಾಲ ಕಾಯ್ದುಕೊಳ್ಳುವ ಹಿನ್ನೆಲೆಯಲ್ಲಿ ಹಾಗೂ ಬಳಗದ ಸರ್ವ ಸದಸ್ಯರ ಸೌಹಾರ್ದತೆಯನ್ನು ಸದಾ ಕಾಪಾಡುವ ದಿಸೆಯಲ್ಲಿ ವಾಟ್ಸಾಪ್ ಗುಂಪು / ಬಳಗದ ಅಡ್ಮಿನ್ ಗಳು ಅಥವಾ ಸಂಚಾಲಕರು ತಂತಮ್ಮ ಗುಂಪಿನ ಚಟುವಟಿಕೆಗಳನ್ನು ಮತ್ತು ಸ್ಪರ್ಧೆಯನ್ನು ಆಯೋಜಿಸುವ ವೇಳೆ ಈ ಕೆಳಕಂಡ ಕೆಲ ಅಂಶಗಳನ್ನು ಅವಶ್ಯವಾಗಿ ಅವಲೋಕಿಸುವುದು ಅಥವಾ ಪಾಲಿಸುವುದು ಅವಶ್ಯ  ಎನಿಸುತ್ತದೆ …. * ಸಾಮಾನ್ಯವಾಗಿ ಯಾವುದೇ ಬಳಗಗಳಲ್ಲಿ ಪ್ರಮುಖವಾಗಿ ಆಯಾ ಕ್ಷೇತ್ರಕ್ಕೆ ಸಂಬಂಧಿಸಿದ ಹಳೆಯ ಮತ್ತು ಹೊಸ ಹೊಸ ಆವಿಷ್ಕಾರ – ಸಂಶೋಧನೆಗಳ ಕುರಿತು ಹಾಗೂ ಆಯಾ ಕ್ಷೇತ್ರದ ಸಾಧಕರುಗಳ ಕುರಿತು ಪರಸ್ಪರ ವಿಚಾರ ವಿನಿಮಯ, ಮಾಹಿತಿಯ ಹಂಚಿಕೆಯ ಕಾರ್ಯವಾಗಬೇಕು ಎಂಬುದು ಹಿರಿಯರ, ಅನುಭವಿ ಪರಿಣಿತರ ಮತ್ತು ತಜ್ಞರ ಅಭಿಪ್ರಾಯ. * ಎರಡನೆಯದಾಗಿ ಆಯಾ ಬಳಗದ ಸದಸ್ಯರ ಪ್ರತಿಭೆ, ಸಾಧನೆ, ಸಂಶೋಧನೆ, ಆರೋಗ್ಯಕರ ಚರ್ಚೆ, ಜ್ಞಾನಾನುಭವಗಳ ಅನಾವರಣಕ್ಕೆ ಅವಕಾಶ ಕಲ್ಪಿಸುವ ಕಾರ್ಯ ನಡೆಯಬೇಕು. * ವಾಟ್ಸಾಪ್ ಅಥವಾ ಫೇಸ್ ಬುಕ್ ಗುಂಪು ಎಂಬುದು ಒಂದು ರೀತಿ ಸಾರ್ವಜನಿಕ ವಲಯವಿದ್ದಂತೆ. ಅಲ್ಲಿ ಕೇವಲ ನಮ್ಮ ಪರಿಚಿತರಷ್ಟೇ ಅಲ್ಲ, ನಮಗೆ ಪರಿಚಯವಿಲ್ಲದ ನಮ್ಮ ಸ್ನೇಹಿತರ ಸ್ನೇಹಿತರು, ವಿವಿಧ ವಯೋಮಾನದವರು, ಹೊಸಬರು, ಕಲಿಕಾರ್ಥಿಗಳು ಮತ್ತು ಪರಿಣಿತರು ಸಹ ಇರುತ್ತಾರೆ. ಹಾಗಾಗಿ ವೈಯಕ್ತಿಕ / ವ್ಯಕ್ತಿಗತ ವಿಚಾರಗಳ ವಿನಿಮಯ, ಅನಗತ್ಯ ಚರ್ಚೆ, ಹಾಯ್ ಬಾಯ್ ಮೆಸೆಜ್, ವೈಯಕ್ತಿಕ ಅಥವಾ ಸಾಮುದಾಯಿಕವಾಗಿ ಯಾವುದೇ ರೂಪದ ಅವಮಾನ, ನಿಂದನೆ, ಅವಹೇಳನ, ಮನಸ್ತಾಪಕ್ಕೆ ಕಾರಣವಾಗುವಂತಹ ಸಂದೇಶಗಳ ರವಾನೆ ಮಾಡದೆ ಜ್ಞಾನ ವೃದ್ಧಿ, ಪರಸ್ಪರ ಪ್ರೀತಿ, ವಿಶ್ವಾಸ, ಗೌರವಾದರ ಮೂಲಕ ಬಾಂಧವ್ಯ ಬೆಸೆಯುವುದಕ್ಕೆ ಮಾತ್ರ ಆದ್ಯತೆ ನೀಡಬೇಕು. *  ಸುಲಭವಾಗಿ ವಿವಿಧ ರೂಪದಲ್ಲಿ ಹಣ ವಸೂಲಿ, ವೈಯಕ್ತಿಕ ಲಾಭ ಇತ್ಯಾದಿ ಸ್ವಾರ್ಥ ಪರ ಧೋರಣೆಯ / ದುರುದ್ದೇಶದಿಂದ ಕೂಡಿದ ಕೆಲವು ಬಳಗಗಳು ಸಹ ರಚನೆಯಾಗುತ್ತಿವೆ. ಸದಸ್ಯರು ಇಂತಹ ಬಳಗಗಳ ಬಗ್ಗೆ ಎಚ್ಚರದಿಂದಿರಬೇಕು. * ಸಾಮಾನ್ಯವಾಗಿ ಶಿಕ್ಷಣ, ಸಾಹಿತ್ಯ, ಸಂಗೀತ, ವಿಜ್ಞಾನ, ಕಲೆ ಮತ್ತು ಸಾಂಸ್ಕೃತಿಕ ಬಳಗಗಳಲ್ಲಿ ಸ್ಪರ್ಧೆಗಳನ್ನು ನಡೆಸುವ ಪರಂಪರೆ ಅತಿ ಹೆಚ್ಚು ರೂಢಿಯಲ್ಲಿದೆ. ಸ್ಪರ್ಧೆಗಳನ್ನು ನಡೆಸುವುದು ಅತ್ಯಂತ ಸೂಕ್ಷ್ಮ ಕಾರ್ಯ. ಹಾಗಾಗಿ ಅನಿವಾರ್ಯ ಮತ್ತು ತೀರಾ ಅಗತ್ಯ ಎಂದಾದಲ್ಲಿ ಮಾತ್ರ ಸ್ಪರ್ಧೆಗಳನ್ನು ಆಯೋಜಿಸಬೇಕು. ಯಾವುದೇ ಕ್ಷೇತ್ರಕ್ಕೆ ಸಂಬಂಧಿಸಿದ ಅಥವಾ ಆಯಾ ಕ್ಷೇತ್ರದ ಒಳ ಪ್ರಕಾರಗಳ ಸ್ಪರ್ಧೆ ನಡೆಸುವಾಗ ಆಯಾ ಪ್ರಕಾರದಲ್ಲಿ ಆಳವಾಗಿ ಅಧ್ಯಯನ ನಡೆಸಿರುವ ಅಥವಾ ಈಗಾಗಲೇ ಆ ಕ್ಷೇತ್ರದಲ್ಲಿ ಕೃಷಿ ಮಾಡಿ ಹೆಸರಾಗಿರುವ ಬಳಗದ ಸದಸ್ಯರಲ್ಲದ ಹೊರಗಿನ ಪರಿಣಿತರನ್ನು  ಮಾತ್ರವೇ ತೀರ್ಪುಗಾರರನ್ನಾಗಿ ನೇಮಿಸುವುದು ಸೂಕ್ತ. * ಸ್ಪರ್ಧೆಗಳನ್ನು ನಡೆಸುವ ವೇಳೆ ಯಾವುದೇ ಕಾರಣಕ್ಕೂ ಆಯಾ ಬಳಗದ ಸದಸ್ಯರನ್ನು ತೀರ್ಪುಗಾರರನ್ನಾಗಿ ನೇಮಿಸಲೇಕೂಡದು. ಇದರಿಂದಾಗಿ ಸದಸ್ಯರ ನಡುವಿನ ಸೌಹಾರ್ದತೆಗೆ ಧಕ್ಕೆ ಉಂಟಾಗಬಹುದು. ಇಲ್ಲವೇ ಒಬ್ಬೊಬ್ಬರೇ ಆ ಗುಂಪಿನಿಂದ ವಿದಾಯ ಹೇಳುವ ಪ್ರಸಂಗ ಸೃಷ್ಟಿಯಾದರೂ ಅಚ್ಚರಿಯೇನಿಲ್ಲ. ಆರಂಭದಲ್ಲಿ ತುಂಬಾ ವೇಗವಾಗಿ ಚಟುವಟಿಕೆಗಳು ನಡೆದು ಕ್ರಮೇಣ ಕ್ಷೀಣಿಸಬಹುದು ಅಥವಾ ನಿಂತೇ ಹೋಗಬಹುದು. ಇದು ಕಟ್ಟು ಕಥೆಯಲ್ಲ. ಯೋಚಿಸಲೇಬೇಕಾದ ವಾಸ್ತವ ಸಂಗತಿ * ಪ್ರಥಮ, ದ್ವಿತೀಯ, ತೃತೀಯದ ಹೊರತಾಗಿ ಉತ್ತಮ, ಅತ್ಯುತ್ತಮ ಎಂಬ ಬಹುಮಾನಗಳ ಘೋಷಣೆ ಇರಲೇಕೂಡದು. ಎಲ್ಲರಿಗೂ ಒಂದಲ್ಲ ಒಂದು ಬಹುಮಾನ ನೀಡಲೇಬೇಕೆಂಬ ಔದಾರ್ಯ ತೋರುವುದಾದಲ್ಲಿ ಅದೇ 3 ಬಹುಮಾನಗಳ ಪಟ್ಟಿಯಲ್ಲೇ ಎಲ್ಲರನ್ನೂ ಸೇರಿಸಬಹುದಲ್ಲವೇ. * ಪ್ರಥಮ, ದ್ವಿತೀಯ ಎಂಬಿತ್ಯಾದಿ ಬಹುಮಾನ ಘೋಷಣೆ ಬದಲು ಭಾಗವಹಿಸುವ ಎಲ್ಲರಿಗೂ ಅಭಿನಂದನಾ ಪತ್ರ ನೀಡಿ ಸುಮ್ಮನಿರುವುದು ಒಳಿತು ಅಥವಾ ಪ್ರತಿಭೆಗೆ ಅನುಗುಣವಾಗಿ ಅದಕ್ಕೊಪ್ಪುವ ಗೌರವ ಸೂಚಕ ವಿಶೇಷಣ ಪದ ನೀಡುವ ಮೂಲಕ ಅಭಿನಂದನಾ ಪತ್ರ ವಿತರಿಸಬಹುದು. ಹೇಗೂ ಭಾಗವಹಿಸದೆ ಇರುವ ಸದಸ್ಯರಿಗಂತೂ ಅಭಿನಂದನಾ ಪತ್ರ ವಿತರಿಸುವುದಿಲ್ಲವಲ್ಲ. ಹಾಗಾಗಿ ಭಾಗವಹಿಸುವ ಆಯಾ ಬಳಗದ ಸದಸ್ಯರಿಗೆ ಇದೇ ಒಂದು ದೊಡ್ಡ ಪ್ರೋತ್ಸಾಹ – ಪುರಸ್ಕಾರವೆಂದು ಪರಿಗಣಿಸಲ್ಲಡುತ್ತದೆ ಅಲ್ಲವೆ. * ಪ್ರತಿಭೆಗೆ ಬಹುಮಾನವೇ ಎಂದಿಗೂ ಮಾನದಂಡವಾಗಲಾರದು. ಅದರಲ್ಲೂ ಸರ್ಕಾರಿ ಸಂಸ್ಥೆಗಳ ಹೊರತಾಗಿ ಅನ್ಯ ಖಾಸಗಿ ಸಂಸ್ಥೆಗಳು ನೀಡುವ ಪ್ರಶಸ್ತಿ – ಪುರಸ್ಕಾರ ಅಥವಾ ಅಭಿನಂದನಾ ಪತ್ರಗಳು ಯಾವುದೇ ರೀತಿಯ ಸರ್ಕಾರಿ ಆಯ್ಕೆ ಪ್ರಕ್ರಿಯೆಯಲ್ಲಿ ಪರಿಗಣನೆಗೆ ಬಾರದಿರುವುದರಿಂದ ಅವು ಕೇವಲ ಪ್ರೋತ್ಸಾಹದ ಉದ್ದೀಪನಗಳು ಮಾತ್ರ. ಭಾಗವಹಿಸುವ ಸ್ಪರ್ಧಾರ್ಥಿಗಳು ಸಹ ಇದನ್ನು ಮನಗಂಡು ಅವುಗಳ ಬೆನ್ನ ಹಿಂದೆ ಬೀಳುವುದಾಗಲಿ ಅಥವಾ ಬಹುಮಾನ ದೆಸೆಯಿಂದಲೇ ಭಾಗವಹಿಸಲು ಮುಂದಾಗುವುದು ತರವಲ್ಲ. * ಎಲ್ಲಾ ಬಳಗಗಳಲ್ಲಿ ಅಲ್ಲದೆ ಇದ್ದರೂ ಸಾಮಾನ್ಯವಾಗಿ ಬಹುತೇಕ ಬಳಗಗಳಲ್ಲಿ ನಡೆಯುವ ಎಲ್ಲರನ್ನೂ ಓಲೈಸುವ ತಂತ್ರಗಾರಿಕೆಯ ಪರಿಣಾಮವಾಗಿ ಬಹುಮಾನಗಳ ಘೋಷಣೆಯಲ್ಲಿಯೂ ಸಹಜವಾಗಿಯೇ ವೈರುದ್ಯಗಳು ಸಂಭವಿಸುತ್ತವೆ. ಇದರಿಂದಾಗಿ ನೈಜ ಪ್ರತಿಭೆಗೆ ಧಕ್ಕೆ ಉಂಟಾಗಬಹುದು, ನಿರಾಸಕ್ತಿ ಮೂಡಬಹುದು, ಕಮರಬಹುದು, ತುಳಿತಕ್ಕೆ ಒಳಗಾಗಬಹುದು ಅಥವಾ ವಾಮಮಾರ್ಗದ ಹಾದಿ ತುಳಿಯಲು ಕಾರಣವಾಗಬಹುದು ಇಲ್ಲವೇ ನಿಜ ಪ್ರತಿಭೆ ಸತ್ತು ಹೋಗಲೂಬಹುದು. * ಸ್ಪರ್ಧೆಯಲ್ಲಿ ಭಾಗವಹಿಸುವ ಸದಸ್ಯರಲ್ಲೇ ಒಬ್ಬರು ಮತ್ತೊಬ್ಬರ ರಚನೆ ಕುರಿತು ಅಭಿಪ್ರಾಯ, ಅನಿಸಿಕೆ ಹಂಚಿಕೊಳ್ಳಲು ಸೂಚಿಸುವುದು ಮತ್ತೊಂದು ಎಡವಟ್ಟಿಗೆ ಕಾರಣ. ಅದರ ಬದಲು ತೀರ್ಪುಗಾರರೇ ಬಹುಮಾನಿತ ರಚನೆಗಳ ಆಯ್ಕೆಯ ಕುರಿತು ತಮ್ಮ ಅನಿಸಿಕೆ ಬರೆಯುವಂತೆ ವ್ಯವಸ್ಥೆ ಮಾಡುವುದು ಹೆಚ್ಚು ಸೂಕ್ತ. * ಸಾಹಿತ್ಯ ಬಳಗಗಳಲ್ಲಿ ಒಬ್ಬರು ಮತ್ತೊಬ್ಬರ ರಚನೆಯ ಕುರಿತು ಅಭಿಪ್ರಾಯಿಸುವ ಅನಿಸಿಕೆಯನ್ನು “ವಿಮರ್ಶೆ” ಎಂದು ಕರೆಯಲೇಬಾರದು. ಏಕೆಂದರೆ ವಿಮರ್ಶೆ ಎಂಬ ಶಬ್ಧದ ಅರ್ಥ, ವ್ಯಾಪ್ತಿ, ವಿಸ್ತಾರ ಪರಿಧಿ ಮತ್ತು ಹಿರಿಮೆ – ಗರಿಮೆ ಬಹಳವೇ ದೊಡ್ಡದು. ಕಲಿಕಾರ್ಥಿಗಳ ಅನಿಸಿಕೆ ಎಂದಿಗೂ ವಿಮರ್ಶೆಯಾಗಲಾರದು. ಅದು ವಿಮರ್ಶಾ ಲೋಕದಲ್ಲಿ ಪಳಗಿದ ಬಹು ದೊಡ್ಡ ದೊಡ್ಡ ವಿದ್ವಾಂಸರು ಮಾಡುವ ಕಾರ್ಯ. ಹಾಗಾಗಿ ” ವಿಮರ್ಶೆ ” ಎಂಬ ಪದ ಬಳಕೆ ಸರ್ವಥಾ ಸಲ್ಲದು.     ಗುಂಪುಗಳು ಮೂಲ ಸ್ವರೂಪ ಮತ್ತು ಮೂಲ ಉದ್ದೇಶ ಮರೆತಲ್ಲಿ ಪರಿಶ್ರಮ ನೀರಿನಲ್ಲಿ ಹುಣಸೆ ಹಣ್ಣು ತೊಳೆದಂತಾಗಿ ದಿಕ್ಕು ದೆಸೆಯಿಲ್ಲದೆ ಮೂಲ ಅಸ್ತಿತ್ವವನ್ನೇ ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಬಹುದು ಅಥವಾ ಕಳಂಕಕ್ಕೆ ತುತ್ತಾಗಬಹುದು.         ಹಾಗಾಗಿ ಇಂತಹ ಹತ್ತು ಹಲವು ಸೂಕ್ಷ್ಮ ಸಂಗತಿಗಳ ಕುರಿತು ಬಳಗಗಳ ಅಡ್ಮಿನ್ ಗಳು / ಸಂಚಾಲಕರು ಎಚ್ಚರಿಕೆ ವಹಿಸಿ ಗುಂಪುಗಳ ರಚನೆ ಮತ್ತು ಚಟುವಟಿಕೆಗಳ ಆಯೋಜನೆ ಮಾಡಲು ಮುಂದಾಗಬೇಕು. ಆಗ ಮಾತ್ರ ಅಂತಹ ಬಳಗಗಳು ಚಿರಕಾಲ ಉಳಿಯುತ್ತವೆ, ಬೆಳೆಯುತ್ತವೆ, ಮಾದರಿಯಾಗುತ್ತವೆ ಮತ್ತು ಜನಮಾನಸದಲ್ಲಿ ಹೆಸರಾಗಿ ಹಸಿರಾಗುತ್ತವೆ. ಆ ದಿಕ್ಕಿನಲ್ಲಿ ಗುಂಪುಗಳ ರಚನೆಯಾಗಲಿ ಎಂಬುದಷ್ಟೇ ಈ ಲೇಖನದ ಆಶಯ. ********** –

ಪ್ರಸ್ತುತ Read Post »

ಇತರೆ, ಜೀವನ

ಪ್ರಸ್ತುತ

ಸಂವಾದ ಜ್ಯೋತಿ ಡಿ.ಬೊಮ್ಮಾ. ಹೌದು ಪಾಶ್ಚಾತ್ಯ ಸಂಸ್ಕೃತಿಯೆ ಚನ್ನ ಒತ್ತಾಯದ ಬದುಕು ಅವರಾರು ಬದುಕರು ಹೊಂದಾಣಿಕೆಯ ಪ್ರಯತ್ನವೇ ಮಾಡರವರು ನಮ್ಮಂತಲ್ಲ ಒಳಗೊಂದು ಹೊರಗೊಂದು ಇಷ್ಟವಿಲ್ಲದವನ/ಳೊಂದಿಗೆ ಏಗುವ ರಗಳೆ ಕುಡಿದು ಪೀಡಿಸುವ ಗಂಡನೊಡನೆ ಸಹಬಾಳ್ವೆ ಇಲ್ಲಿ ಮಕ್ಕಳಾಗದಿದ್ದರು ತಾನೆ ತಪಿತಸ್ಥಳು ಲೋಕಕ್ಕೆ ಅವನು ಗಂಡಸು..ಅವನಲ್ಲೆನು ಕೊರತೆ..! ಮಕ್ಕಳಾದ ಮೇಲೆ ಇನ್ನೆನಿದೆ. ಅನುಸರಿಸಿಕೊಂಡು ಹೋಗುವದೊಂದೆ. ಅವರಾದರೂ ಎಲ್ಲಿರುತ್ತಾರೆ ಕೊನೆವರೆಗೆ ನಮ್ಮವರಾಗಿ..! ಬಿಟ್ಟು ಬಿಡುವದೊಳಿತು ಮನಸ್ಸಿಗೊಪ್ಪದು ಸುಮ್ಮನಿರು ,ಮಾತು ಬೇರೆ  ಆತ್ಮ ಬೇರೆ ಎರಡು ಒಂದಾಗಬೇಕಾದರೆ ತೆರೆ ಸರಿಸಿ ಬದುಕಬೇಕು. ಬಯಸಿ ದೊರಕಿಸಿಕೊಂಡದ್ದು ಹಳತಾಗದೆ..! ಹಾಗಂತ ಹೊಂದಾಣಿಕೆಯಲ್ಲೆ ಬದುಕಬೇಕೆ.. ದೇವತೆಗಳ ನೆಲೆವೀಡು ನಮ್ಮ ನಾಡು ಸುಸಂಸ್ಕತಿ ಉಳ್ಳದ್ದು. ಪುರುಷ ದೇವರೆಲ್ಲ ಬಹುಪತ್ನಿತ್ವ ಸ್ಥರೆ ಶ್..ಕದ್ದು ಕೇಳುವ ಕಿವಿಗಳಿವೆ ಇಲ್ಲಿ. ಕದ್ದು ಏನು ಮಾಡಿದರು ನಡೆಯಬಹುದಿಲ್ಲಿ.. ಇರುವದನ್ನೆ ಒಪ್ಪಿಕೊಂಡರು ಬದುಕಿದರಾಗದೆ..? ನೀವು ಬುದ್ದಿ ಜೀವಿಗಳು ,ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಮಾತಾಡುವವರು.. ಎಡ ಬಲವೆಂದು ಎಗ್ಗಿಲ್ಲದೆ ಬಡಿದಾಡುವ ಗೊಡ್ಡು ವಾದಿಗಳು.. ನೈಜತೆ ಮರೆಮಾಚಿ ಕಲ್ಪನೆಯಲ್ಲಿ ಬದುಕುವರು.. ಯಾಕೋ..ಅಲ್ಲಗಳೆಯಲಾಗಲಿಲ್ಲ.           **********

ಪ್ರಸ್ತುತ Read Post »

ಇತರೆ, ಜೀವನ

ಪ್ರಸ್ತುತ

ಮಕ್ಕಳ ಆಯ್ಕೆಯಲ್ಲಿ ನಂಬಿಕೆ ಏಕಿಲ್ಲ….? ಅನಿತ.ಕೆ.ಬಿ.   ವಿವಾಹವೆಂಬುದು ನಮ್ಮ ಸಮಾಜದಲ್ಲಿ ಕಂಡುಬರುವಂತಹ ಒಂದು ಸಂಸ್ಥೆ. ಗಂಡಿಗೆ ಹೆಣ್ಣು,ಹೆಣ್ಣಿಗೆ ಗಂಡು ಆಸರೆಯಾಗಿರುತ್ತಾರೆಂಬ ನಂಬಿಕೆಯಿಂದ ವಿವಾಹ ಅವಶ್ಶಕ ಹಾಗೂ ಅನಿವಾರ್ಯ. ಮದುವೆಯನ್ನು ಪುರಾಣಗಳ ಕಾಲದಲ್ಲಿ ಸ್ವಯಂವರ ರೀತಿ ನಡೆಸಲಾಗಿದೆ.    ಹಾಗದರೆ ಮದುವೆ ಎಂದರೇನು…? ಎಂಬ ಪ್ರಶ್ನೆಗೆ ಸಮಾಜಶಾಸ್ತ್ರಜ್ಞರಲ್ಲಿ ಒಬ್ಬರಾದ ಮ್ಶಾಲಿನೊಸ್ಕಿರವರು “ಸ್ತ್ರೀ-ಪುರುಷರ ನಡುವೆ ಲೈಂಗಿಕ ಹಾಗೂ ಮಾನಸಿಕ ಸಂಬಂಧವನ್ನ ದೃಢಪಡಿಸುವ ಮತ್ತು ಸಂತಾನೋತ್ಪತ್ತಿಗಾಗಿ ಉದ್ದೇಶಪೂರ್ವಕವಾಗಿ ಏರ್ಪಡಿಸುವ ಒಪ್ಪಂದ” ಎಂದಿದ್ದಾರೆ.     ಮದುವೆ ಇಲ್ಲದೆ ಜೀವನ ನಡೆಸಲು ಸಾಧ್ಶವಿಲ್ಲವೇ? ಯಾಕಿಲ್ಲ,ಎಷ್ಟೋ ಮಂದಿ ತಮ್ಮ ಉದ್ದೇಶಕ್ಕಾಗಿ ವಿವಾಹವಾಗದೇ ಉಳಿದಿದ್ದಾರೆ. ಆದರೆ ಯಾರೋ ಒಬ್ಬ ವಿವೇಕಾನಂದ,ಎಲ್ಲೊ ಒಬ್ಬ ಕಲಾಂ, ಮೋದಿಯಂತವರೇ ಹೊರತು ನಮ್ಮ ಅಣ್ಣ-ತಮ್ಮ,ಅಕ್ಕ-ತಂಗಿಯರಂತು ಅಲ್ಲವೇ ಅಲ್ಲ..! ವಿವಾಹವಿಲ್ಲದೆ ಮೋಕ್ಷವಿಲ್ಲ ಎಂಬುದು ಹಿಂದೂಗಳ ನಂಬಿಕೆ ಹಾಗಾಗಿ ವಿವಾಹ ಅನಿವಾರ್ಯ. ಮದುವೆ ಎಂಬುದು ಬಂಧನವೇ? ಅಲ್ಲವೇ ಅಲ್ಲ. ಇದು ಎರಡು ಜೀವಗಳನ್ನ ಹತ್ತಿರ ತಂದು ಜೀವನವಿಡೀ ಒಂದಾಗಿ ಬಾಳಬೇಕೆಂದು ಹರಸುವಂತಹ ಒಂದು ವಿಧಿ. ವಿವಾಹದ ಕುರಿತು ಹೆಣ್ಣು-ಗಂಡುಗಳಲ್ಲಿ ಹತ್ತಾರು ಕನಸುಗಳಿರುತ್ತವೆ,ಮಾತ್ರವಲ್ಲ ಹಲವರು ತಮ್ಮ ಸಂಗಾತಿಯನ್ನ ಆಯ್ಕೆ ಮಾಡಿಕೊಂಡಿರುತ್ತಾರೆ. ಇದಕ್ಕೆ ವಿರುದ್ಧವಾದ ಸಂದರ್ಭ ಸೃಷ್ಠಿಗೊಂಡಾಗ ಮಾತ್ರ ವಿವಾಹ ಬಂಧನವಾಗುತ್ತದೆ.     ಹೌದು ಮದ್ವೆ ಒಂದೆರಡು ದಿನದ ಜವಾಬ್ದಾರಿಯಲ್ಲ, ಒಂದೆರಡು ದಿನದ ಸಂಭ್ರಮವಲ್ಲ. ಅಂದೊಂದು ಪವಿತ್ರ ಬಂಧ. ಒಂದೆರಡು ದಿನದ ಸಂಭ್ರಮ ಮುಗಿಸಿಹೋಗುವವರು ನೀವಾದರೆ, ಅವರು ಜೀವನದ ಕೊನೆಯ ಪಯಣದವರೆಗೂ ವಿವಾಹವಾದವರೊಡನೆ ನಡೆಯುವವರಾಗಿರುತ್ತಾರೆ. ಹಾಗಾಗಿ ಯಾರೋ ನೊಡುವ ಹೆಣ್ಣು-ಗಂಡನ್ನು ನಂಬುವ ನೀವೂ ನಿಮ್ಮ ಕೈಬೆರಳ ಹಿಡಿದು ಜೊತೆ ಜೊತೆ ಸಾಗಿ ಬಂದ ನಿಮ್ಮ ಮಕ್ಕಳ ಆಯ್ಕೆಯಲ್ಲಿ ನಂಬಿಕೆ ಏಕಿಲ್ಲ…? ಅವರ ಅಭಿಪ್ರಾಯಕ್ಕೂ ಮನ್ನಣೆ ಕೊಡಿ. ನೀವು ಪ್ರತಿನಿತ್ಶ ಪೂಜಿಸುವ ಆ ನಿಮ್ಮ ದೇವರುಗಳು ಕೂಡ ಸಂಗಾತಿಗಳನ್ನ ಆಯ್ಕೆಯಾಗೆ ತಾನೇ ವಿವಾಹವಾಗಿರುವುದು.    ಹೌದು ನಾವು ಸಮಾಜದ ಹೊರತಾಗಿ ಬದುಕಲು ಸಾಧ್ಶವಿಲ್ಲ. ಹಾಗಂತ ಸಮಾಜಕ್ಕಾಗಿ ಬದುಕುವುದು ಸರಿಯೇ?. ಸಂಗಾತಿಯನ್ನ ಆಯ್ಕೆ ಮಾಡಿಕೊಂಡ ಮಾತ್ರಕ್ಕೆ ಸಮಾಜ ಹದಗೆಡುವುದೇ? **********

ಪ್ರಸ್ತುತ Read Post »

ಇತರೆ

ಚಿಂತನೆ

ಅರಿಷಡ್ಬರ್ಗಗಳನು  ದಾಟಿ….. ಅಶ್ವಥ್ ಕಳೆದ ವಾರ ಗೆಳೆಯನೊಬ್ಬನಿಗೆ ಏನೋ ಗೊಂದಲವಾಗಿ ಕೆಲವು ಪ್ರಶ್ನೆಗಳನ್ನು ಒಂದಕ್ಕೊಂದು ಪೋಣಿಸಿ ಪ್ರಶ್ನೆಗಳ ಒಂದು ಮಾಲೆಯನ್ನೇ ಮಾಡಿಟ್ಟುಕೊಂಡಿದ್ದ. ನಾವು ಕತೆ ಕೇಳ್ತೇವೆ, ಇತಿಹಾಸ ಅಧ್ಯಯನ ಮಾಡ್ತೇವೆ, ಪುರಾಣ ಪುಣ್ಯಕತೆಗಳನ್ನು ಓದುವುದು ಕೇಳುವುದು ನೋಡುವುದು ಇದ್ದೇ ಇದೆ. ಇಷ್ಟೇ ಅಲ್ಲದೇ ನಮ್ಮ ತಲೆಮಾರಿನವರಿಗೆ ಬಾಲ್ಯದಲ್ಲಿ ಪೌರಾಣಿಕ ನಾಟಕಗಳು, ಹರಿಕತೆಗಳು, ಬೀದಿನಾಟಕ, ಗೊಂಬೆನಾಟಕ ಹೀಗೆ ಹತ್ತು ಹಲವು ರೀತಿಯಲ್ಲಿ ನಮ್ಮ ಹೊರಗನ್ನು ತಿಳಿಯುವ ಸಾಮಾನ್ಯ ಸಾಧ್ಯತೆಗಳಿದ್ದವು. ಈಗ ಹಳೆಯ ಈ ಮಾಧ್ಯಮಗಳೆಲ್ಲ ಹಿನ್ನೆಲೆಗೆ ಸರಿದು, ಸಿನಿಮಾ, ಅಥವಾ ಕಿರುತೆರೆ (ಟಿವಿ, ಅಮೇಜಾನ್, ನೆಟ್ಫ್ಲಿಕ್ಸ್, ಯೂಟ್ಯೂಬ್ ಆದಿಯಾಗಿ ಮೊಬೈಲ್ಗಳನ್ನೂ ಸೇರಿಸಬಹುದು) ಇವೇ ವಿಜೃಂಭಿಸುವ ಕಾಲದಲ್ಲಿ ನಾವಿದ್ದೇವೆ. ಓದುವುದು ಒಂದು ಹವ್ಯಾಸ ಆಗಿರುವವರಿಗೆ ಕಾಲಾತೀತವಾಗಿ ವರ್ತಮಾನವನ್ನು ಗ್ರಹಿಸಿಕೊಳ್ಳುವುದು ಸಾಧ್ಯ. ಆದರೆ ಓದು ಅಂದರೆ ಪರೀಕ್ಷೆಯಲ್ಲಿ ಪಾಸಾಗುವುದಕ್ಕೆ, ಪುಸ್ತಕಗಳನ್ನೋ, ಅಥವಾ ಮೇಷ್ಟರು ಬರೆಸಿದ ನೋಟ್ಬುಕ್ಗಳನ್ನೋ ಓದುವುದಕ್ಕೆ ಮೀಸಲಾದರೆ ಅದರಿಂದ ಏನೂ ಪ್ರಯೋಜನವಾಗಲಾರದು. ಆ ರೀತಿಯದ್ದಲ್ಲದ ವಿಷಯ, ವಿದ್ಯಮಾನಗಳ ಗ್ರಹಿಕೆಯ ಓದು ಒಂದು ಹವ್ಯಾಸವಾದವರಿಗೆ ಯಾವ ಮಾಧ್ಯಮ ಹಿನ್ನೆಲೆಗೆ ಸರಿದರೂ, ಯಾವ ಹೊಸ ಮಾಧ್ಯಮ ಚಾಲನೆಗೆ ಬಂದರೂ ಅಂತಹವುಗಳಿಂದ ಹೆಚ್ಚಿನ ಪರಿಣಾಮ ಬೀರುವುದಿಲ್ಲ. ನಮ್ಮಂತಹವರು ಅಂದರೆ ಸಾಮಾನ್ಯವಾಗಿ ಹೈಸ್ಕೂಲು, ಆನಂತರ ಎರಡು ಮೂರು ವರ್ಷ ಕಾಲೇಜು ಅಥವಾ ಒಂದು ಪದವಿ ಮುಗಿಸಿಕೊಂಡವರು ಅತ್ತ ಹಳೇಕಾಲದ ಗ್ರಹಿಕೆಯ ಮಾಧ್ಯಮದ ಅವಕಾಶಗಳೂ ಇಲ್ಲದೇ, ಇತ್ತ ಹೊಚ್ಚ ಹೊಸ ಆಕರ್ಷಣೀಯ ಮಾಧ್ಯಮಗಳ ಕಡೆ ಹೊರಳಿಕೊಂಡು ಸಿನಿಮಾ ಹೀರೋಗಳ ಡೈಲಾಗುಗಳಿಗೋ, ಅಥವಾ ಹೆಚ್ಚು ಕಡಿಮೆ ಇದೇ ರೀತಿಯಲ್ಲೇ ಡೈಲಾಗು ಬರೆದುಕೊಂಡು (ಬಹುತೇಕ ಬರೆಯಿಸಿಕೊಂಡು) ಭಾಷಣಭೀರುಗಳ ದಾಳಿಗೆ ಒಳಪಟ್ಟು, ಅವರವರ ಅಭಿಮಾನಿ ಸಂಘಗಳಿಗೆ ಸದಸ್ಯರುಗಳಾಗಿ, ಅಂತಹ ಡೈಲಾಗುಗಳನ್ನೊಂದಿಷ್ಟು ಕರತಲಾಮಲಕ ಮಾಡಿಕೊಂಡು ನಮ್ಮ ಗ್ರಹಿಕೆ ಹಿಗ್ಗಿದೆ ಅಂದುಕೊಂಡಿರ್ತೇವೆ. ಮೊನ್ನೆ ಪ್ರಶ್ನೆ ಮಾಡಿದ ಗೆಳೆಯನನ್ನು ಕಾಡಿದ ಆ ಗೊಂದಲಗಳು ಅವನೊಬ್ಬನವೇ ಅಲ್ಲ; ಬಹುತೇಕ ನಮ್ಮೆಲ್ಲರವೂ ಹೌದು. ಅದಕ್ಕೆ ಉತ್ತರ ಹುಡುಕಲು ಹೊರಡುವುದು ಅಂದರೆ ಬದುಕೆಂದರೆ ಏನು ಅನ್ನುವುದನ್ನೆಲ್ಲ ಕ್ರೋಢೀಕರಿಸಲು ಹೊರಟಂತಹ ಸಾಹಸವಾಗಬಹುದು. ಆದರೂ ಸಂಕ್ಷಿಪ್ತವಾಗಿ ಕಡಿಮೆ ಹೊತ್ತಿನ ಆಲೋಚನೆಗೆ ಹೊಳೆದ ಕೆಲವು ಹೊಳಹುಗಳನ್ನು ಹಿಡಿದಿಡುವ ಪ್ರಯತ್ನ ಇದು. ಆ ಪ್ರಶ್ನೆಗಳ ಸರಮಾಲೆಯನ್ನು ಸಂಕ್ಷಿಪ್ತವಾಗಿ ಹೇಳುವುದಾದರೆ ಬದುಕು ಹೇಗಿರಬೇಕು. ಎಲ್ಲರಂತೆ ಬದುಕುವುದು ಅಂದರೆ ಈಗ ಕಿತ್ತಾಡಿಕೊಂಡೇ ಬದುಕಬೇಕಾದ ಅನಿವಾರ್ಯತೆಯಿದೆ. ಹೇಗೋ ಬದುಕುವುದಾದರೆ ಈ ಪ್ರಶ್ನೆಗಳು ಮೂಡುವುದೇ ಇಲ್ಲ. ಅಂತಃಕರಣದಲ್ಲಿ ಏನೋ ಸರಿಯಿಲ್ಲವೆನ್ನುವ ಭಾವನೆಯಿಂದಲೇ ಈ ಪ್ರಶ್ನೆಗಳ ಅಲೆಗಳು ಶುರುವಾಗುವಂತಹದ್ದು. ಹೈಸ್ಕೂಲಲ್ಲಿ “ಹೃದಯವಂತಿಕೆಯ ಸಮಸ್ಯೆಗಳು” (ವಿ.ಕೃಗೋಕಾಕರದ್ದು) ಅಂತ ನಮಗೊಂದು ಪಾಠ ಇತ್ತು . ಅಂತಹ ಹೃದಯವಂತಿಕೆ ಕಿಂಚಿತ್ತು ಇದ್ದಾಗ ನಮ್ಮ ತಪ್ಪುಗಳ ಬಗ್ಗೆ ನಾವೇ ಯೋಚಿಸುವ, ಪ್ರಶ್ನೆ ಮಾಡಿಕೊಳ್ಳುವ ಆ ಮೂಲಕ ಬದುಕು ಕಾಲದ ಹರಿವಿನೊಟ್ಟಿಗೇ ಕೊಚ್ಚಿಕೊಂಡು ಹೋಗಲು ಬಿಡದೇ, ಅಂಬಿಗನು ನಡೆಸುವ ಹರಿಗೋಲಿನ ಹಾಗೆ ಮುನ್ನಡೆಸುವುದು ಸಾಧ್ಯವಾಗಬಹುದು. ಮಾನವನಿಗೆ ನೆಮ್ಮದಿಯಾಗಿರುವುದಕ್ಕೆ ಅನ್ನ, ಅರಿವು, ಉಡುಪು, ಆರೋಗ್ಯಮತ್ತು ವಸತಿ (ಮನೆ) ಈ ಐದು ಮೂಲಭೂತ ಸೌಕರ್ಯಗಳು ಅತ್ಯಗತ್ಯವಾದವು. ಈ ಐದನ್ನೇ ಸಂಪಾದಿಸಲು ಅಲ್ಲವೇ ಆ ಲಕ್ಷಾಂತರ ವಲಸೆ ಕಾರ್ಮಿಕರು; ಕಾಲಿಗೆ ಚಪ್ಪಲಿಯಿಲ್ಲದೆ, ಅನ್ನ ನೀರಿನ ಏರ್ಪಾಡೂ ಇಲ್ಲದೇ ನಡೆದವರು; ತಮ್ಮ ಸ್ವಂತ ಊರುಗಳನ್ನು ಬಿಟ್ಟು ಸಾವಿರಾರು ಮೈಲಿ ದೂರದಿಂದ ಅವಕಾಶಗಳನ್ನು ಅರಸಿಕೊಂಡು ಬಂದಿದ್ದು? ಈ ಐದು ಸೌಲಭ್ಯಗಳಿಗಾಗಿಯೇ ಬಹುತೇಕ ತೊಂಭತ್ತಕ್ಕೂ ಹೆಚ್ಚು ಶೇಕಡಾ ಜನ ಹೋರಾಡುವುದು. ಇದರಲ್ಲಿ ಕೆಲವು ಶೇಕಡಾ ಜನ ಮಾತ್ರ ಈ ನೆಮ್ಮದಿಯ ಟಾನಿಕ್ಕುಗಳಾಚೆಗೆ, ಕೆಲಸದ ಸುರಕ್ಷತೆ, ಭವಿಷ್ಯಕ್ಕೆಂದು ಒಂದಿಷ್ಟು ಗಂಟು, ಸಮಾಜದಲ್ಲಿ ಅಂತಸ್ತು, ಅಸ್ವಾಭಾವಿಕ ಮನ್ನಣೆ ಗಳಿಸುವ ಸರ್ಕಸ್ಸು, ಇಂಗ್ಲೀಷಿನಲ್ಲಿ ʼಲೈಮ್ಲೈಟ್ʼನ್ನುವ ನಿಂಬೆಹುಳಿಬೆಳಕಿನಲ್ಲಿ ಹೊಳೆಯುವ ವಿಲಕ್ಷಣ ಬಯಕೆ ಇತ್ಯಾದಿಗಳ ಮೊರೆಹೋಗಿ ತಾವು ನೆಮ್ಮದಿಯ ಆಚೆ ಒದ್ದಾಡುವುದರ ಜೊತೆಜೊತೆಯಲ್ಲೇ ತಮಗೆ ಬೇಕಾದ್ದಕ್ಕೆ ಬೇರೆ ಬಡ, ಮಧ್ಯಮ ವರ್ಗದ ಒಂದಿಷ್ಟು ಮಂದಿಯನ್ನೂ ಸೇರಿಸಿಕೊಂಡು ಗೌಜಿ ಸೃಷ್ಟಿ ಮಾಡ್ತಾರೆ. ಈ ರೀತಿಯ ಗೌಜಿಯೇ ಈ ಕಾಲದ ವಿಶೇಷ. ಕಾಂಟ್ರಾವರ್ಸಿ ಎಲ್ಲಿದೆ ಅಂದರೆ ?ಎಲ್ಲಿಲ್ಲ ಅಂತ ಕೇಳಿಕೊಳ್ಳಬೇಕಾದ ಪರಿಸ್ಥಿತಿ ಈಗ ಇದೆ ಅನಿಸಲ್ವೇ? “ರಾಮನುಕಾಡಿಗೆಹೋದನು”.  ಕನ್ನಡದ ಕಾಪಿರೈಟಿಂಗ್ ಪುಸ್ತಕದಲ್ಲಿ ಸಾಮಾನ್ಯವಾಗಿ    ಇದು ಮೊದಲ ವಾಕ್ಯ. ಅಲ್ಲೊಂದು ಕುತೂಹಲ ಮೂಡಿಸುವ ಉದ್ದೇಶವಿದ್ದಿರಬಹುದು ಅನಿಸತ್ತೆ. ಪ್ರೈಮರಿ ಸ್ಕೂಲಿನ ಮಗುವೊಂದಕ್ಕೆ ರಾಮನು ಕಾಡಿಗೆ ಹೋದನು ಅಂದರೆ ರಾಮ ಯಾರು? ಕಾಡು ಅಂದರೆ ಏನು? ರಾಮ ಕಾಡಿಗೆ ಯಾಕೆ ಹೋಗಿದ್ದು? ಈ ರೀತಿಯ ಪ್ರಶ್ನೆಗಳು ಮನಸ್ಸಿನಲ್ಲಿ ಮೂಡಿದರೆ ಕಾಪಿರೈಟಿಂಗಿನ ಜೊತೆಯಲ್ಲೇ ರಾಮಾಯಣ ತಿಳಿಯುವುದಕ್ಕೆ ಮಗುವಿಗೆ ಮಾರ್ಗಸೂಚಿ ಆಯ್ತು. ಪ್ರಚಲಿತ ವಿದ್ಯಮಾನಗಳ ಬಗ್ಗೆ ಆಗ್ಗಾಗ್ಗೆ ನಾವು ಇದೇ ರೀತಿ ಪ್ರಶ್ನಿಸಿಕೊಳ್ಳುವ, ಕೆಲವು ಕುತೂಹಲಗಳನ್ನು ಮೂಡಿಸಿಕೊಳ್ಳುವ, ಅಂತಹ ಕುತೂಹಲಗಳಿಗೆ ಉತ್ತರಗಳನ್ನು ಹುಡುಕಿಕೊಳ್ಳುವ ಒಂದಿಷ್ಟು ಅಭ್ಯಾಸ ಮಾಡುತ್ತಾ ಹೋಗುವುದು ವೈಯಕ್ತಿಕ ಮಟ್ಟದಲ್ಲಿ ಆರೋಗ್ಯಕರ. ಸಧ್ಯ  ಸಮೂಹ ಮಾಧ್ಯಮಗಳಲ್ಲೆಲ್ಲ, ಬೂಟಾಟಿಕೆಗಳೇ ತುಂಬಿ ಹೋಗುವ ಮಟ್ಟಕ್ಕೆ ನಮ್ಮನ್ನು ನಾವೇ ತಂದು ನಿಲ್ಲಿಸಿಕೊಂಡಿರುವ ಈ ಕಾಲದಲ್ಲಿ ಗೆಳೆಯನ ಗೊಂದಲಗಳ್ಯಾವೂ ಬೇರೆ ಯಾರಿಗೂ ಹೊಳೆಯದ ವಿಚಾರಗಳಲ್ಲ. ಆದರೂ ಅಂತಹ ಪ್ರಶ್ನೆಗಳು ಮೂಡುತ್ತಿವೆ ಅಂದರೆ ಕನಿಷ್ಟಪಕ್ಷ ಬೂಟಾಟಿಕೆಗಳನ್ನು ಮೀರಿ ಬದುಕುವ ಸಹಜದಾರಿಯೊಂದನ್ನು ಹುಡುಕುವ ಪ್ರಯತ್ನವೊಂದು ಮನಸ್ಸಿನೊಳಗೆ ನಡೆಯುತ್ತಿದೆ ಎಂದರ್ಥ. ಸನಾತನ ಅಂತ ಕರೆಯುವ ಅನಾದಿಕಾಲದಿಂದಲೂ ಮನುಷ್ಯ ಹೀಗೇನೇ ಬದುಕಬೇಕು ಅನ್ನುವ ಚೌಕಟ್ಟು ಕಾಲಕಾಲಕ್ಕೆ ಕಟ್ಟಿಕೊಳ್ಳುತ್ತಾ ಕಾಲಾಂತರದಲ್ಲಿ ಸವೆತಕ್ಕೆ ಸಿಕ್ಕಿ ನವೀಕರಣಗೊಳ್ಳುತ್ತಾ ಬಂದಿರುವುದರಿಂದಲೇ ಸಾವಿರಾರು ವರ್ಷಗಳ ಹಿಂದೆ ಬದುಕಿದ್ದ ದಶರಥನ ಮಗ ರಾಮನೂ, ದೇವಕಿ-ಯಶೋಧೆಯರ ಮಗ ಕೃಷ್ಣನೂ, ಪಾಂಡವರೂ ಕೌರವರೂ ನಮಗೆ ಈಗಲೂ ಕತೆಗಳ ರೂಪದಲ್ಲಿ ಸಿಕ್ಕಿರುವುದು, ಸಿಗುತ್ತಿರುವುದು. ಆದರೆ ಕತೆ ಹರಿಯುವಾಗ ಯಥಾರೂಪಕ್ಕೆ ವೈಭವೀಕರಣವೆಲ್ಲ ಸೇರಿಕೊಂಡು ಅವೆಲ್ಲ ಅವತಾರಗಳು ಪೌರುಷಗಳು ಪವಾಡಗಳೆಲ್ಲ ಮಿಶ್ರಣವಾಗಿ ಮಾನವನ ಬದುಕಿಗೆ ಒಂದೊಳ್ಳೆ ಮಾರ್ಗದರ್ಶಿ ಆಗುವ ಅವಕಾಶಗಳೇ ಹೊರಟುಹೋಗಿವೆ. ಉದಾಹರಣೆಗೆ ಗಮನಿಸಿ, ಕುರುಕ್ಷೇತ್ರ ಅಂತ ಸಿನಿಮಾ ಮಾಡಿದ್ದಾರಲ್ಲ, ನಿತ್ಯದ ಬದುಕಿನಲ್ಲಿ ಆ ಸಿನಿಮಾ ಕುರುಕ್ಷೇತ್ರದ ಯಾವ ಭಾಗವನ್ನು ಅಳವಡಿಸಿಕೊಳ್ಳಲು ಸಾಧ್ಯವಾದೀತು? ಹಾಗೆ ಮಾಡಲೇಬೇಕೆಂದರೆ ನಾವೂ ಒಂದು ಸೆಟ್ ನಿರ್ಮಿಸಿಕೊಂಡು ನಾಟಕ ಆಡುವುದಾಗುತ್ತೆ ಅಷ್ಟೇ! ಅಥವಾ ಅವೆಲ್ಲ ಕೇವಲ ಮನರಂಜನೆಗೋಸ್ಕರ ಇರುವ ಪಾತ್ರಗಳೆಂದೂ, ಪಾತ್ರಗಳ ಮೂಲಕ ವರ್ಗಾವಣೆಯಾಗಬೇಕಾದ ನೀತಿ, ಮಾನವೀಯತೆಯ ಅಂಶಗಳೆಲ್ಲವೂ ಸಣ್ಣಗೆ ಸದ್ದುಮಾಡಿ ಮರೆಯಾಗಿ ಹೋಗುತ್ತವೆ. ಆಧ್ಯಾತ್ಮ ಮಾನವನ ಒಳಜಗತ್ತಿನ ಆವಿಷ್ಕಾರಕ್ಕೆ, ವಿಹಾರಕ್ಕೆ ಆ ಮೂಲಕ ಮಾನಸಿಕ ನೆಮ್ಮದಿಗೆ ಒಂದು ಸಾಧನವಾಗಬೇಕು. ಆಧ್ಯಾತ್ಮ ಪ್ರತಿವ್ಯಕ್ತಿಗೂ ವೈಯಕ್ತಿಕವಾದದ್ದು. ಪ್ರತಿಯೊಬ್ಬರೂ ತಮಗೆ ಒಪ್ಪುವ ದೈವಿಕತೆಯನ್ನು ತಾವೇ ತಮ್ಮ ವಿಚಾರವಂತಿಕೆಯಿಂದ ಸಿದ್ಧಿಸಿಕೊಳ್ಳುವ ಹಾದಿ ತೆರೆದುಕೊಳ್ಳಬೇಕು, ಈ ದಾರಿಯಲ್ಲಿ ಪರಮಹಂಸರು, ವಿವೇಕಾನಂದರೂ ಕೆಲಸ ಮಾಡಿದ್ದಾರೆ. ಅದು ಬಿಟ್ಟು ಎಲ್ಲೋ ಯಾರೋ ಗುನುಗಿದ ಮಂತ್ರಕ್ಕೆ ಕಿವಿಯೊಡ್ಡುವ, ಯಾರೋ ಕೊಡುವ ತೀರ್ಥ ಪ್ರಸಾದಗಳೊಳಗಷ್ಟೇ ಭಕ್ತಿ ತೋರಿಸಿ ಅದನ್ನೇ ಆಧ್ಯಾತ್ಮ ಅಂದುಕೊಂಡು ಭ್ರಮೆಯಲ್ಲಿರುವುದು ಸೂಕ್ತ ಅಲ್ಲ.ವ್ಯಕ್ತಿ,   ವ್ಯಕ್ತಿತ್ವಗಳ ವಿಕಸನಕ್ಕೆ ಬೇಕಾದ ಪರಿಸರವನ್ನು ರೂಢಿಸುವುದಕ್ಕಾಗಿ ಪುರಾಣದ ಪಾತ್ರಗಳಿದ್ದರೆ, ಅವುಗಳ ಉಪಯೋಗ ಮಾತ್ರ ರಾಜಕಾರಣಕ್ಕೆ, ಮುಜರಾಯಿ ಇಲಾಖೆಯ(ಮುಜರಾಯಿಗೆ ಒಳಪಡದ ಖಾಸಗಿ ಸಂಸ್ಥೆಗಳನ್ನೂ ಸೇರಿಸಿಕೊಳ್ಳಬಹುದು) ಆದಾಯಕ್ಕೆ ಸೀಮಿತವಾಗಿಬಿಟ್ಟಿವೆ. ಅಂತಹವು ಬದಲಾಗಬೇಕು ಅಂತ ಕುವೆಂಪು ತರದ ನಮ್ಮ ಕಾಲದ ದಾರ್ಶನಿಕರು ಎಷ್ಟೇ ಪ್ರಯತ್ನಪಟ್ಟರೂ ಈ ಮೊದಲು ಹೇಳಿದ ಗೌಜಿಯ ಕಾರಣದಿಂದಾಗಿ ಅವರ ದರ್ಶನ, ಮಾರ್ಗದರ್ಶನಗಳೆಲ್ಲ ಹೊಳೆಯಲ್ಲಿ ಹುಣಸೆ ಕಲಸಿದ ಹಾಗೆ. ಯಾವ ಮೂಲೆಗೂ ಸಾಲುವುದಿಲ್ಲ. ಹಾಗಾಗಿ ಗೆಳೆಯನಿಗೆ ಇಷ್ಟೇ ಹೇಳಬೇಕು ಅಂದುಕೊಂಡೆ. ನೆಮ್ಮದಿಗೆ ಬೇಕಾಗಿರುವುದನ್ನು ಸಂಪಾದಿಸಲು ಸಮಾಜದಲ್ಲಿರುವ ಸರಿಯಾದ, ನೈತಿಕವಾದ ದಾರಿ ಯಾವುದಿದೆಯೋ ಆ ಮೂಲಕ ಬದುಕು ಕಟ್ಟಿಕೊಳ್ಳಲು ಏನು ಬೇಕೋ ಅದು ಮಾಡೋಣ. ಇಲ್ಲಿ ನೆಮ್ಮದಿಯ ಅಗತ್ಯಗಳನ್ನು ಇಲ್ಲಿ ಹೇಳಿರುವ ಕ್ರಮದಲ್ಲಿಯೇ ಆದ್ಯತೆಯಾಗಿ ತೆಗೆದುಕೊಳ್ಳೋಣ.  ೧. ಅನ್ನ  ೨. ಅರಿವು .೩ಅರಿವೆ (ಬಟ್ಟೆ). ೪. ಆರೋಗ್ಯ (ದೈಹಿಕಹಾಗೂಮಾನಸಿಕ) ೫. ವಸತಿ. (ಹೇಳ್ಕಾಳಾಕ್ಒಂದೂರುತಲೆಮ್ಯಾಲೆಒಂದ್ಸೂರು). ಇದರಾಚೆಗೆ ಏನೇ ಬಂದರೂ ಬರದಿದ್ದರೂ ಅಡ್ಡದಾರಿಯ ಕಡೆ ಯೋಚನೆಯನ್ನು ಹರಿಯಗೊಡದಿದ್ದರೆ, ಇದ್ದುದ್ದರಲ್ಲಿ ನೆಮ್ಮದಿ ಕಾಣುವುದು ಸಾಧ್ಯ ಇದೆ. ಹೀಗೇ ಇದ್ದಾಗಲೂ ಗೌರವ, ಮನ್ನಣೆ, ಅಂತಸ್ತು ಇತ್ಯಾದಿಗಳೆಲ್ಲವೂ ಬಂದರೂ ಸಹ ಮತ್ತೆ ನಿಂಬೆಹುಳಿಬೆಳಕಿನ ಕಡೆ (ನನ್ನ ಪ್ರಕಾರ ಇದನ್ನ ʼಹುಸಿಬೆಳಕುʼ ಅನ್ನಬಹುದು) ಜಿಗಿಯುವ ಮಿಡತೆಯಂತಾಗದೇ ನಮ್ಮ ಸ್ವಕರ್ಮವನ್ನು ಬಿಟ್ಟುಕೊಡದೇ ಇದ್ದರೆ ಅಷ್ಟು ಸಾಕು. ಈಗಿರುವ ತಲೆಮಾರಿನವರಿಗೂ, ಮುಂದೆ ಬರುವ ತಲೆಮಾರಿನವರಿಗೂ ಇದರಿಂದ ನಾವು ಗಳಿಸಿ ಗುಡ್ಡೆಹಾಕಿದ್ದು ಏನನ್ನೂ ತೋರ್ಪಡಿಸುವುದು ಸಾಧ್ಯವಾಗದೇ ಇದ್ದರೂ, ಯಾರನ್ನೂ, ಏನನ್ನೂ ನಾಶಮಾಡಿ ನಾವು ಬದುಕು ಕಟ್ಟಿಕೊಂಡಿಲ್ಲ ಅನ್ನುವ ನೆಮ್ಮದಿಯ ಮುಂದೆ ಬೇರೆ ಯಾವ ಗುಡ್ಡೆ ಐಶ್ವರ್ಯಗಳೂ   ನಗಣ್ಯ. ಇಷ್ಟರ ಬಗ್ಗೆ ಯೋಚಿಸಿ ಮುಂದುವರಿಯುವ ಆತ್ಮಶಕ್ತಿ ಬರಲಿ. ಆತ್ಮಶಕ್ತಿಗಿಂತ ಬೇರೆ ಕಲ್ಪವೃಕ್ಷ ಎಲ್ಲಿದೆ? ಸತ್ಯವಾದ ಘನತೆ ಸೋಲೇ ಕಾಣದಂತೆ. ************

ಚಿಂತನೆ Read Post »

ಇತರೆ, ಜೀವನ

ಅನುಭವ

                      ಮನೆ……. ಹಕ್ಕಿ ಮನೆ ಅನುಪಮಾ ರಾಘವೇಂದ್ರ                       ಮನೆ……. ಹಕ್ಕಿ ಮನೆ        ಈ ಮರೆವು  ಅನ್ನೋದು ಮನುಷ್ಯರಿಗೆ ಮಾತ್ರವೋ….? ಅಲ್ಲಾ ಪ್ರಾಣಿ ಪಕ್ಷಿಗಳಿಗೂ ಇರುತ್ತೋ…..? ನನಗೀ ಸಂಶಯ ಬರಲು ಕಾರಣವೇನೋ ಇದೆ. ಕೆಲವು ದಿನಗಳ ಹಿಂದಿನ ಘಟನೆ……          ಸಂಜೆ ವೇಳೆ ಹಟ್ಟಿ ಬಳಿಗೆ ಹೋದಾಗ ಹಟ್ಟಿಯ ಒಳಗಿನಿಂದ ಹಕ್ಕಿಯೊಂದು ಪುರ್ರನೆ ಹಾರಿ ಹೋಯ್ತು. ಮರುದಿನ ಬೆಳಗ್ಗೆಯೂ ಅದೇ ರೀತಿ ಹಕ್ಕಿ  ಹಾರುವುದು ಕಂಡಿತು. ಹಕ್ಕಿಗಳ ಕಿಚ ಪಿಚ ಸುಮಧುರವಾದ ಸಂಗೀತ…… ನಾನು ಹೋದ ಕ್ಷಣದಲ್ಲಿ ನಿಂತು ಬಿಡುತ್ತದೆ. ನಾನು ಹೋಗುವುದನ್ನು ದೂರದಿಂದಲೇ ಕಂಡು  ಹಾರಿ ಹೋಗುತ್ತದೆ. ಪದೇ ಪದೇ ಘಟನೆ ಮರುಕಳಿಸಿದಾಗ ಏನೋ ಕುತೂಹಲ……. ಅಡಗಿ ನಿಂತು ಗಮನಿಸಿದೆ. ಹಟ್ಟಿಯ ಗೋಡೆಯಲ್ಲಿ ಹಲವಾರು ಕಿಂಡಿಗಳಿವೆ.  ಒಂದು ಕತ್ತಲಿನ ಮೂಲೆಯ ಕಿಂಡಿಯಲ್ಲಿ ಹಕ್ಕಿಯೊಂದು ಮನೆ ಕಟ್ಟಿಕೊಂಡಿದೆ.        ಹುಲ್ಲಿನ ಮನೆಯೋ….., ಹಂಚಿನ ಮನೆಯೋ…..,ತಾರಸೀ ಮನೆಯೋ….. ವ್ಯತ್ಯಾಸವೇ ಇಲ್ಲ. ಮಣ್ಣಿನ ನೆಲವೋ…. , ಸಿಮೆಂಟ್ ನೆಲವೋ…., ಗ್ರಾನೈಟ್ ನೆಲವೋ….. ಸಂಶಯವೂ ಇಲ್ಲ.  ಆಹಾ…… ಬೇರು ನಾರುಗಳನ್ನು ಸೇರಿಸಿ ನಿರ್ಮಿಸಿದ ಸುಂದರವಾದ ಮನೆ. ಮನೆ ಅನ್ನುವುದಕ್ಕಿಂತಲೂ ಪುಟ್ಟ ಗೂಡು ಎನ್ನುವುದೇ ಸೂಕ್ತವಲ್ಲವೇ…..  ಗೂಡಿನ ಸುತ್ತಮುತ್ತ ಸೂಕ್ಷ್ಮವಾಗಿ ಗಮನಿಸಿದೆ. ಒಂದು ಕಿಂಡಿಯಲ್ಲಿ ಗೂಡು , ಪಕ್ಕದ ಎರಡು ಕಿಂಡಿಗಳಲ್ಲಿ ಅಲ್ಪ ಸ್ವಲ್ಪ ಬೇರು ನಾರುಗಳು , ಅರೆಬರೆ ಕಟ್ಟಿದ ಗೂಡು….! ಇದೇಕೆ ಹೀಗೆ….? ಗೂಡು ಕಟ್ಟುವಾಗ ಯಾವ ರೀತಿಯ ನಾರುಗಳು ಬೇಕು ಎಂಬ ಆಯ್ಕೆಗಾಗಿ ತಂದು ಇಟ್ಟಂತೆಯೂ ಕಾಣುವುದಿಲ್ಲ.  ಗೂಡು ಕಟ್ಟಲು ಆರಂಭಿಸಿದ ಹಕ್ಕಿಗೆ ತಾನು ಯಾವ ಕಿಂಡಿಯಲ್ಲಿ ಗೂಡು ಕಟ್ಟುತ್ತಿರುವೆ ಎಂಬುದು ಮರೆತು ಹೋಗಿರಬಹುದೇ….? ‘ಮರೆವು ಎಂಬುದು ಮನುಷ್ಯರಿಗೆ ಮಾತ್ರವೇ…? ಪ್ರಾಣಿ ಪಕ್ಷಿಗಳಿಗೂ ಇದೆಯೇ…..?’ ಎಂಬ ಸಂಶಯ ನನಗೆ ಬಂದದ್ದು ಈ ಕಾರಣಕ್ಕಾಗಿ.         ದಿನದಲ್ಲಿ ಕಡಿಮೆಯೆಂದರೆ ನಾಲ್ಕು ಬಾರಿಯಾದರೂ ಹಟ್ಟಿಗೆ ಹೋಗಿ ನೋಡುವ ಹುಚ್ಚು. ಇಷ್ಟಾದರೂ ಹಕ್ಕಿ ನನ್ನ ಕಣ್ಣಿಗೆ ಸ್ಪಷ್ಟವಾಗಿ ಕಾಣಿಸಿಕೊಳ್ಳಲೇ ಇಲ್ಲ.  ಆ ದಿನ ಗೂಡಿನಲ್ಲಿ ಕಂಡದ್ದು ಮೂರು ಮೊಟ್ಟೆ! ತವರಿಗೆ ಬಂದವಳ ಬಾಣಂತನ ಮಾಡಿಸಿ ಕಳುಹಿಸುವ ಜವಾಬ್ದಾರಿ ಇಲ್ಲವೇ….. ಪ್ರತಿದಿನ ಹಟ್ಟಿಯ ಒಂದು ಮೂಲೆಯಲ್ಲಿ ಒಂದಿಷ್ಟು  ಗೋಧಿ, ಭತ್ತ, ಅಕ್ಕಿಕಾಳುಗಳನ್ನು ಇಟ್ಟೆ. ಹಕ್ಕಿ ಮೊದಲೆರಡು ದಿನ ನಾನಿಟ್ಟ ಕಾಳುಗಳ ಕಡೆ ತಿರುಗಿಯೂ ನೋಡದ್ದು ನನ್ನ ಮನಸಿಗೇಕೋ ಬೇಸರ. ಮತ್ತೆರಡು ದಿನ ಕಳೆದಾಗ ನಾನಿಡುವ ಕಾಳುಗಳನ್ನು ಆಸೆಯಿಂದ ಆರಿಸಿಕೊಂಡದ್ದು ಸುಳ್ಳಲ್ಲ. ಮೊಟ್ಟೆಯೊಡೆದು ಮರಿಗಳು ಹೊರ ಬರುವ ಕ್ಷಣಕ್ಕಾಗಿ ತಾಯಿ ಹಕ್ಕಿಗಿಂತ ಹೆಚ್ಚು ಕಾತರದಿಂದ ಕಾದುಕೊಂಡಿರುವವಳು ನಾನೇ ಏನೋ……?    ಅದೊಂದು ದಿನ ಗೂಡನ್ನು ಇಣುಕಿ ನೋಡುವಾಗ ಮುದ್ದು ಮುದ್ದಾದ ಮೂರು ಪುಟಾಣಿಗಳು. ನಾನು ಅಲ್ಲಿಗೆ ಹೋಗುತ್ತಿದ್ದಂತೆ ಇನ್ನೂ ಕಣ್ಣು ಬಿಡದ ಪಾಪಚ್ಚಿಗಳು ಕೊಕ್ಕನ್ನು ದೊಡ್ಡದಾಗಿ ತೆರೆದು , ಚಿಂವ್ ಚಿಂವ್ ದನಿಯೊಂದಿಗೆ ತಲೆ ಎತ್ತಿದವು. ಪಾಪ…. ಅಮ್ಮ ಬಂದಿರಬಹುದೆಂಬ ಭಾವ. ಅಮ್ಮ ಎಲ್ಲೋ ಆಹಾರದ ಅನ್ವೇಷಣೆಯಲ್ಲಿರಬಹುದು. ಅವುಗಳಿಗೇನು ನಮ್ಮಂತೆ ಎಣ್ಣೆ- ನೀರೇ…… ಬಾಣಂತನವೇ…. ನನಗೆ ಮಗ ಹುಟ್ಟಿದ ಸಮಯದಲ್ಲಿ ಎರಡು ತಿಂಗಳು ಕೋಣೆಯೊಳಗೆ ಬಂಧಿಯಾಗಿದ್ದು, ಎಣ್ಣೆ ಹಚ್ಚಿ , ಬಿಸಿ ನೀರು ಸ್ನಾನ , ಪಥ್ಯದ ಊಟ , ವಿಶ್ರಾಂತಿ ಎಲ್ಲ  ನೆನಪುಗಳೂ ಮರುಕಳಿಸಿದವು. ಅಷ್ಟೊತ್ತಿಗಾಗಲೇ ಒಂದು ಹಕ್ಕಿ ಬಾಯಿಯಲ್ಲಿ ಏನನ್ನೋ ಕಚ್ಚಿಕೊಂಡು ಹಾರಿ ಬರುವುದು ಕಂಡೆ. ಅದರ ಅಮ್ಮನೋ …. ಅಪ್ಪನೋ ಅರಿಯೆ . ನನ್ನನ್ನು ಕಂಡು ದೂರದಲ್ಲೇ ಕುಳಿತುಕೊಂಡಿತು. ನನ್ನಿಂದಾಗಿ ಪುಟಾಣಿಗಳು ಹಸಿದುಕೊಂಡಿರುವುದು ಬೇಡವೆಂದು ದೂರ ಸರಿದೆ. ಮಕ್ಕಳಿಗೆ ತಿನ್ನಿಸಿ ಪುರ್ರನೆ ಹಾರಿ ಹೋಯಿತು.       ಮನೆಯೊಳಗಿದ್ದರೂ ನನ್ನ ಮನಸೆಲ್ಲ ಪುಟ್ಟ ಕಂದಮ್ಮಗಳ ಕಡೆಗೇ ಇತ್ತು. ಮೂರು ಮಕ್ಕಳಲ್ಲಿ ಎಷ್ಟು ಹೆಣ್ಣು….?  ಎಷ್ಟು ಗಂಡು …?ಎಂಬ ಯೋಚನೆ ಒಂದು ಕಡೆ .  ಪ್ರಾಣಿ ಪಕ್ಷಿಗಳು ಹೆಣ್ಣು ಗಂಡೆಂಬ ಬೇಧ ಭಾವ ಮಾಡುತ್ತವೆಯೇ…? ಅದೇನಿದ್ದರೂ ನಮ್ಮಂತಹ ಮನುಷ್ಯರಿಗೇ ಎಂಬ ಯೋಚನೆ ಇನ್ನೊಂದು ಕಡೆ. ನಮಗೆ ಮನೆಯೊಳಗೆ ಗಂಡು ಬೇಕು . ಹಟ್ಟಿಯಲ್ಲಿ ಹೆಣ್ಣೇ ಬೇಕು. ಎಲ್ಲದರಲ್ಲಿಯೂ ತನ್ನ ಲಾಭವನ್ನೇ ನೋಡುವ ಸ್ವಾರ್ಥಿಗಳು….!       ಆಗಾಗ ಹೋಗಿ ಗೂಡನ್ನು ಇಣುಕಿ ನೋಡುವುದು ಅಭ್ಯಾಸವಾಯ್ತು. ಸಣ್ಣ ಸದ್ದಾದರೂ  ತಿನ್ನಲು ಬಂದಿರಬಹುದೆಂದು ಬಾಯಿ ತೆರೆಯುವುದು, ಉಳಿದ ಸಮಯದಲ್ಲಿ ನಿದ್ದೆ ಮಾಡುವುದು ಈ ಮರಿಗಳಿಗೆ ಇಷ್ಟೇ ಕೆಲಸವೋ….. ನನ್ನ ಕಲ್ಪನೆಗೆ ನನಗೇ ನಗು ಬಂತು. ಚಿಕ್ಕ ಮಗುವಿನ ಮೂಗು, ತುಟಿಗಳನ್ನು ಮುಟ್ಟಿದರೆ ತಿನ್ನಲು ಬಾಯಿ ತೆರೆಯುತ್ತದೆ. ಉಳಿದ ಸಮಯದಲ್ಲಿ ಮಲಗಿ ನಿದ್ರಿಸುತ್ತದೆ. ಇದು ಸಹಜ ತಾನೇ…. ಎಲ್ಲಾ ಜೀವಿಗಳೂ ಅದರದರ ಕಾಲಕ್ಕೆ ಆಯಾ ಕೆಲಸ ಕಾರ್ಯಗಳನ್ನು ಕಲಿತು ನಡೆಸಿಕೊಂಡು ಹೋಗುತ್ತವೆ.            ನನ್ನ ಹೆಜ್ಜೆಯ ಸದ್ದಿಗೆ ಎಚ್ಚರಗೊಳ್ಳುವ ಮರಿಗಳು ಚಿಂವ್ ಚಿಂವ್ ಎನ್ನುತ್ತಾ ದೊಡ್ಡದಾಗಿ ಬಾಯಿ ಅಗಲಿಸುವುದನ್ನು ನೋಡುವುದೇ ಚಂದ.  ನನಗೆ ಇದೊಂದು ಆಟ. ಆ ಮರಿಗಳಿಗೆ ಎಷ್ಟು ಸಂಕಟವಾಗಿತ್ತೋ ಆ ದೇವರೇ ಬಲ್ಲ. ಈ ದೃಶ್ಯಗಳನ್ನು ಮೊಬೈಲಿನಲ್ಲಿ ಸೆರೆ ಹಿಡಿಯುವ ಬಯಕೆಯಾಗಿ ಮೊಬೈಲ್ ಹಿಡಿದು ಹಟ್ಟಿಯ ಕಡೆಗೆ ನಡೆದೆ. ಎಲ್ಲಿದ್ದನೋ ನನ್ನ ಮಗ…! ಕಣ್ಣೆದುರು ಪ್ರತ್ಯಕ್ಷ. ನನ್ನನ್ನು ತಡೆದು ನಿಲ್ಲಿಸಿ “ಏನು ಆಪುಟಾಣಿಗಳ ವಿಡಿಯೋ ಮಾಡುವ ಯೋಚನೆಯಾ…..?” ಕೇಳಿದ. “ಹೌದು ಎಷ್ಟು ಸುಂದರ ಮರಿಗಳು . ಅವುಗಳ ಚಿಂವ್ ಚಿಂವ್ ಕೂಗು, ಬಾಯಿ ಅಗಲಿಸುವ ದೃಶ್ಯ ಎಲ್ಲವೂ ಅದ್ಭುತ” ಎಂದೆ. “ಇನ್ನೂಕಣ್ಣು ಬಿಡದ ಮರಿಗಳಿಗೆ ಯಾಕೆ ಹಿಂಸೆ ಕೊಡುತ್ತೀ…? ಅವುಗಳಿಗೆ ನಿನ್ನಿಂದಾಗಿ ತೊಂದರೆ “ ಎಂದ. “ತೊಂದರೆ ಏನಿಲ್ಲ. ನಾನು ಅವುಗಳನ್ನು ಮುಟ್ಟುವುದೇ ಇಲ್ಲ. ಸುಮ್ಮನೆ ನೋಡಿ ವಿಡಿಯೋ ಮಾಡಿ ಬರುವೆ” ಎಂದೆ. “ ನಿನ್ನಿಂದಾಗಿ ಆ ಮರಿಗಳ ನಿದ್ರೆ ಹಾಳಾಗಲೂ ಬಹುದು. ನಿನ್ನನ್ನು ಅಲ್ಲಿ ಕಂಡು ಅದರ ಅಮ್ಮ ಹತ್ತಿರ ಬರದೇ ಇರಲೂ ಬಹುದು. ನಿನಗೆ ನೆಮ್ಮದಿಯಲ್ಲಿರುವವರನ್ನು ಕಂಡರೆ ಹೊಟ್ಟೆ ಉರಿಯಾ…? ನಾನು ಬೆಳಗ್ಗೆ ಒಳ್ಳೆ ನಿದ್ದೆಯಲ್ಲಿರುವಾಗಲೂ ಹೀಗೇ ಕಿರಿಕಿರಿ ಮಾಡ್ತಾ ಇರ್ತೀಯ….” ಅಂದ. ಅವನ ಮಾತಿಗೆ ಬೆಲೆ ಕೊಟ್ಟು ಆ ದೃಶ್ಯಗಳನ್ನು ಸೆರೆ ಹಿಡಿಯುವ ಯೊಚನೆ ಬಿಟ್ಟೆ. ಆದರೂ ಸಮಾಧಾನವೇ ಇಲ್ಲ. ಒಂದೆರಡು ಸಲ ಮೊಬೈಲ್ ತರುವ ಪ್ರಯತ್ನ ಮಾಡಿ ಸಿಕ್ಕಿ ಬಿದ್ದದ್ದೂ ಆಯ್ತು. ಮಗನ ಹದ್ದಿನ ಕಣ್ಣನ್ನು ತಪ್ಪಿಸಲು ಸಾಧ್ಯವಾಗಲೇ ಇಲ್ಲ. ಕೊನೆಗೆ ,  ಫ್ಲ್ಯಾಷ್ ಲೈಟ್ ಹಾಗೂ ಮೊಬೈಲ್ ಕಿರಣಗಳು ಪ್ರಾಣಿ ಪಕ್ಷಿಗಳಿಗೆ ಎಷ್ಟು ಹಾನಿಕಾರಕ .ಅದರಲ್ಲೂ ಇನ್ನೂ ಕಣ್ಣು  ಬಿಡದ ಮರಿಗಳಿಗೆ ಎಷ್ಟು ಮಾರಕ. ಇದು ಅಪರಾಧ ಕೂಡಾ….  ಎಂಬುದನ್ನು ಇಂಟರ್ ನೆಟ್ಟಿನಲ್ಲಿ ತೋರಿಸಿಕೊಟ್ಟ. ಮಕ್ಕಳಿಂದಲೂ ನಾವು ಕಲಿಯುವುದು ಸಾಕಷ್ಟಿದೆ ಎಂಬುದನ್ನು ಅರಿತುಕೊಂಡೆ. ಇದಾದ ಮೇಲೆ ಮನಸ್ಸು ಹಟ್ಟಿಯ ಕಡೆಗೆ ಸೆಳೆದರೂ ದೇಹಕ್ಕೆ ಕಡಿವಾಣ ಹಾಕಿ ನಿಲ್ಲಿಸಿದೆ. ದಿನಕ್ಕೊಂದೆರಡು ಬಾರಿ ದೂರದಿಂದಲೇ ನೋಡಿ ಸಮಾಧಾನ ಪಟ್ಟುಕೊಂಡೆ.     ಆ ಹಕ್ಕಿಯ ಹೆಸರೇನೆಂದು ತಿಳಿಯುವ ಕುತೂಹಲದಿಂದ ಗೂಗಲಣ್ಣನಲ್ಲಿ ಜಾಲಾಡಿದೆ. ಹಕ್ಕಿಯನ್ನು ಸ್ಪಷ್ಟವಾಗಿ ನೋಡದ ಕಾರಣ ಗೂಗಲಣ್ಣ ಸರಿಯಾದ ಮಾಹಿತಿ ನೀಡಲಿಲ್ಲ.  ಅಲ್ಲೂ ಒಂದೇ ರೀತಿಯ ಹಕ್ಕಿಗಳು ಹಲವಾರು. ನಮ್ಮ ಆತ್ಮೀಯರೊಬ್ಬರಲ್ಲಿ ವಿಚಾರಿಸಿದಾಗ ,ಈ ಹಕ್ಕಿ ಕೆಂಪು ಕೊರಳಿನ ನೊಣ ಹಿಡುಕ (Tickle’s Blue flycatcher) ಎಂದು ತಿಳಿಯಿತು. ದಿನ ನಿತ್ಯ ನವಿಲು, ಕಾಗೆ , ಕೊಕ್ಕರೆ , ಮರಕುಟಿಗ , ಮಡಿವಾಳ ಹಕ್ಕಿಗಳನ್ನು ನೋಡಿ ಪರಿಚಯವಿದ್ದರೂ ಈ ಹೆಸರು ನನಗೆ ಹೊಸದು.        ಕೊನೆಗೂ ಆ ದಿನ ಬಂದೇ ಬಂತು…….. ನಾನು ಹಟ್ಟಿಯ ಕಡೆಗೆ ಹೋಗುವಾಗ ದೊಡ್ಡ ಹಕ್ಕಿ ಅಲ್ಲೇ ಪಕ್ಕದಲ್ಲಿದ್ದ ಮರದಲ್ಲಿ ಕುಳಿತು ಜೋರಾಗಿ ಚೀರುತ್ತಿತ್ತು. ಆಶ್ಚರ್ಯವೆಂದರೆ ಯಾವತ್ತೂ ನನ್ನನ್ನು ಕಂಡ ಕೂಡಲೇ ಹಾರಿ ಹೋಗುತ್ತಿದ್ದ ಹಕ್ಕಿ ಇಂದು ಜಾಗ ಬಿಟ್ಟು ಕದಲಲೇ ಇಲ್ಲ. ಗೂಡಿನ ಕಡೆಗೆ ನೋಡಿದೆ . ಮರಿಗಳಿಲ್ಲ. ನನ್ನೆದೆ ಧಸಕ್ಕೆಂದಿತು. ಏನಾಗಿರಬಹುದು…..?  ಬೇರೆ ಯಾವುದಾದರೂ ಹಕ್ಕಿಗಳು ಧಾಳಿ ಮಾಡಿರಬಹುದೇ…….? ಹಾವೋ… ಬೆಕ್ಕೋ…… ಇನ್ಯಾವುದಾದರೂ ಪ್ರಾಣಿಗಳೋ ಆಕ್ರಮಣ ಮಾಡಿರಬಹುದೇ….? ನನ್ನ ಕೈ ಕಾಲುಗಳಲ್ಲಿ ಸಣ್ಣ ನಡುಕ. ನನಗೇ ಇಷ್ಟು  ಭಯವಾಗಿದೆ. ಇನ್ನು ಆ ಕಂದಮ್ಮಗಳ  ಅಪ್ಪ ಅಮ್ಮನ ಪರಿಸ್ಥಿತಿ …….. ಅಯ್ಯೋ…. ಯಾರಿಗೂ ಬೇಡಪ್ಪಾ…… ಆದರೂ ನನ್ನ ಕಣ್ಣುಗಳು ಸುತ್ತ ಮುತ್ತ ಹುಡುಕುತ್ತಲೇ ಇದ್ದವು. ಮರದ ಮೇಲಿದ್ದ ಹಕ್ಕಿಯ ಚೀರಾಟವನ್ನು ಗಮನಿಸಿದೆ. ಅದರ ದೃಷ್ಟಿ ಅಲ್ಲೇ ಕೆಳಗೇ ಇತ್ತು. ಆ ಕಡೆಗೆ ನೋಡಿದೆ. ಅಬ್ಬಾ…..ಮರಿ ಅಲ್ಲೇ ಇದೆ. ಹಾಗಿದ್ದರೆ ಹಕ್ಕಿಯ ಕಿರುಚಾಟ ಯಾಕಾಗಿ…..? ಆ ಮರಿ ಗೂಡಿನಿಂದ ಅಲ್ಲಿವರೆಗೆ ಹೇಗೆ ಬಂತು…? ಹೋ…… ಮಗ ಮೊತ್ತ ಮೊದಲ ಬಾರಿಗೆ ಅಂಬೆಗಾಲಿಟ್ಟು ಮುಂದೆ ಮುಂದೆ ಬರುವಾಗ ಮುಗ್ಗರಿಸಿದ್ದು , ಪುಟ್ಟ ಪುಟ್ಟ ಹೆಜ್ಜೆ ಇಟ್ಟು ನಡೆಯಲು ಅಪ್ಪನ ಕೈಯ ಆಸರೆ ಬಯಸಿದ್ದು ಒಂದೊಂದಾಗಿ ಕಣ್ಣ ಮುಂದೆ ಬಂತು. ಅಂದರೆ ಈ ಮರಿಯೂ ಹಾರಲು ಕಲಿಯುತ್ತಿದೆ. ಮರದಲ್ಲಿದ್ದ ಹಕ್ಕಿ ಹುರಿದುಂಬಿಸುತ್ತಿದೆ. ಇನ್ನಷ್ಟು ಹತ್ತಿರದಿಂದ ಮರಿಯ ಫೊಟೋ ತೆಗೆಯಲು  ಹತ್ತಿರ ಹತ್ತಿರ ಹೋಗುತ್ತಿದ್ದಂತೆ ಆ ಮರಿಯೂ ಪುರ್ರನೆ ಹಾರಿ ಹೋಯ್ತು. ಅಷ್ಟು ಹೊತ್ತು ಚೀರಾಡುತ್ತಿದ್ದ ಹಕ್ಕಿ ಸಂತೋಷದಿಂದ ಹಾಡುತ್ತಾ ಹಾರಿತು. ಹಕ್ಕಿ ಮನೆಯೊಂದಿಗೆ ನನ್ನ ಮನವೂ ಬರಿದಾಯ್ತು.       ಆ ಗೂಡು ಹಕ್ಕಿ ಜೋಡಿಯ ನಿರೀಕ್ಷೆಯಲ್ಲಿದೆಯೋ……. ಇಲ್ಲವೋ….  ನಾನರಿಯೆ. ನಾನಂತೂ ಇನ್ನೊಂದು ಹಕ್ಕಿ ಜೋಡಿಯ ನಿರೀಕ್ಷೆಯಲ್ಲಿರುವೆ. ************

ಅನುಭವ Read Post »

ಇತರೆ

ಪ್ರಸ್ತುತ

ಕೊರೊನಾ ಕಾಲದ ರಂಗಸಂಸ್ಕೃತಿ ಚಿಂತನೆಗಳು ಮಲ್ಲಿಕಾರ್ಜುನ ಕಡಕೋಳ ಕೊರೊನಾ ಎಂಬ ಕರಾಳ ರಾಕ್ಷಸ ಹಾವಳಿಯಿಂದಾಗಿ ಮನುಷ್ಯರ ಬದುಕು ತೀವ್ರ ಸ್ವರೂಪದ ಆಘಾತವನ್ನು ಎದುರಿಸುವಂತಾಗಿದೆ. ಸಾಂಸ್ಕೃತಿಕ ಬದುಕಿಗೂ ತೀವ್ರವಾದ ಪೆಟ್ಟು ಬಿದ್ದಿದೆ. ನಿಸ್ಸಂದೇಹವಾಗಿ ಅದನ್ನು ಯಾರೂ ಅಲ್ಲಗಳೆಯಲಾರರು. ಹಾಗಂತ ಕೊರೊನಾ ಪೂರ್ವದಲ್ಲಿ ನಮ್ಮ ಸಾಹಿತ್ಯ, ಸಂಗೀತ, ನಾಟಕ ಹೀಗೆ ಎಲ್ಲಾ ಕಲೆಗಳಿಗೆ ಸಿಗುತ್ತಿದ್ದ ಪ್ರೋತ್ಸಾಹ, ಸಹಾಯ, ಸಹಕಾರ, ಅಭಿವ್ಯಕ್ತಿ ಸ್ವಾತಂತ್ರ್ಯ ಅಮೋಘವಾಗಿತ್ತು. ಅದರಿಂದಾಗಿ ಅತ್ಯಂತ ಸಮೃದ್ಧವಾದ ಸಾಂಸ್ಕೃತಿಕ ಬದುಕು ಮೈಮನ ತುಂಬಿ ಚೆಂಗುಲಾಬಿಯಂತೆ ಅರಳಿಕೊಂಡಿತ್ತೆಂದು ಭ್ರಮಿಸಬೇಕಿಲ್ಲ. ಈಗ ಕೊರೊನಾ ಬಂದಮೇಲೆ ಅಂತಹ ಸಾಂಸ್ಕೃತಿಕ ವೈಭವ, ಅನನ್ಯತೆಗಳನ್ನೆಲ್ಲ ಕೊರೊನಾ ಇಡಿಯಾಗಿ ನುಂಗಿ ನೊಣೆಯಿತು, ಎಂಬ ಸೋಂಕಿತನೆಪ ಹುಡುಕಿ ವರ್ತಮಾನದ ವೈರಾಣು ಹಳಿಯಮೇಲೆ ನಿಂತು ಹಳೆಯ ಹಂಬಲಿಕೆಗಳನ್ನು ತೋಡಿಕೊಳ್ಳುವ ಹೊಸದೊಂದು ಪ್ಯಾಸಿನೆಟಿಂಗ್ ಹಳಹಳಿಕೆ ಹುಟ್ಟಿಕೊಂಡಿದೆ. ಯಾವುದೇ ಸಾಹಿತ್ಯ, ಕಲೆ, ಸಂಗೀತ, ನಾಟಕ, ಜನಸಂಸ್ಕೃತಿಯು ಇಂತಹ ವೈರಸ್, ಬ್ಯಾಕ್ಟೀರಿಯಾಗಳಿಗೆ ಬಲಿಯಾಗುವಷ್ಟು ದುರ್ಬಲವಾಗಿರುವುದಿಲ್ಲ ಎಂಬುದನ್ನು ಮರೆಯಬಾರದು. ವೈರಾಣುಗಳು ಮನುಷ್ಯರಜೀವ ಕೊಲ್ಲಬಹುದು. ಆದರೆ ಅವಕ್ಕೆ ಮನುಷ್ಯನೊಳಗಿನ ಸಾಂಸ್ಕೃತಿಕ ಬದುಕನ್ನು, ಅದರ ಮೌಲ್ಯಗಳನ್ನು ಕೊಲ್ಲಲಾಗದು. ಸಾಂಸ್ಕೃತಿಕ ಬದುಕು ಮನುಷ್ಯರ ನಿತ್ಯದಜೀವ ಬದುಕಿಗಿಂತ ಹೆಚ್ಚು ಗಟ್ಟಿಮುಟ್ಟು. ಪ್ಲೇಗ್, ಕಾಲರಾ, ಇನಫ್ಲುಯೆಂಜಾ ಮೊದಲಾದ ಸಾಂಕ್ರಾಮಿಕ ರೋಗಗಳ ಆಪತ್ತಿನ ಕಾಲದಲ್ಲಿ ಹುಟ್ಟಿಕೊಂಡ ಕಲೆ, ಸಾಹಿತ್ಯ ಕೃತಿಗಳಿಗೆ ಸಾವಿಲ್ಲ. ಆದರೆ ಆ ಕಾಲದ ರೋಗಗಳಿಗೆ ಸಾವುಬಂತು. ರೋಗಕಾಲದಲ್ಲಿ ಜನ್ಮತಾಳಿದ ಕೃತಿಗಳು ಅಜರಾಮರ. ಹೀಗೆಯೇ ಇಂದಲ್ಲ ನಾಳೆ ಕೊರೊನಾ ಹೋಗಿಯೇ ಹೋಗುತ್ತದೆ. ಆದರೆ ಅದೀಗ ಸೃಷ್ಟಿಸುತ್ತಿರುವ ” ಭೀಕರತೆ ” ನಮಗೆಲ್ಲ ಸವಾಲು ಆಗಬೇಕಿದೆ. ಅದು ಸಾಂಸ್ಕೃತಿಕ ಸೇನಾನಿಗಳು ಎದುರಿಸಬೇಕಾದ ನಿಜವಾದ ಸವಾಲು. ಸಾಂಸ್ಕೃತಿಕ ಚಟುವಟಿಕೆಗಳು ಸ್ಥಗಿತಗೊಂಡ ಮಾತ್ರಕ್ಕೆ ಅದು ಜನಸಂಸ್ಕೃತಿಯ ಸ್ಥಗಿತತೆ ಮತ್ತು ಸಾವು ಎಂದರ್ಥವಲ್ಲ. ಸಂಸ್ಕೃತಿಯ ಜೀವಬೇರುಗಳು ಆಳದಲ್ಲಿ ಅಂತರ್ಜಲದಂತೆ ನಿರಂತರ ಹರಿಯುತ್ತಿರುತ್ತವೆ. ಹಾಗೆಯೇ ಭೂಮಿಯೊಳಗೊಂದು ರಂಗಭೂಮಿಯ ಜುಳುಜುಳು ನೀರಧಾರೆ ಅಂತಃಶ್ರೋತವಾಗಿ ಹರಿಯುತ್ತಿರುತ್ತದೆ. ಅದೊಂದು ಹಾಳತವಾಗಿ ಹರಿಯುವ ರಂಗಧಾರೆ. ವೃತ್ತಿನಿರತರ ಅಸಡ್ಡೆತನದಿಂದ ವೃತ್ತಿಪರತೆ ಮುಕ್ಕಾಗುತ್ತಿದೆ ಎಂಬುದು ನೆನಪಿಸಿಕೊಳ್ಳಬೇಕಿದೆ. ಬೇಕಾದರೆ ಹವ್ಯಾಸಿಗಳು ಗುಣಾತ್ಮಕ ವೃತ್ತಿಪರತೆ ಮರೆತರಡ್ಡಿಯಿಲ್ಲ. ನಾಟಕವನ್ನೇ ವೃತ್ತಿ ಮಾಡಿಕೊಂಡಿರುವ ವೃತ್ತಿನಿರತರು ವೃತ್ತಿಪರತೆಯ ಗುಣಗ್ರಾಹಿ ರಂಗಭೂಮಿ ಕಟ್ಟದಿದ್ದರೇ ಅದು ಅಕ್ಷಮ್ಯವಾದೀತು. ರಂಗಭೂಮಿ ಕುರಿತಾದ ತಮ್ಮ ಹತ್ತಿಪ್ಪತ್ತು ವರ್ಷಗಳ ಕೆಲಸ ತೃಪ್ತಿಕರವಾಗಿಲ್ಲ ಎಂಬುದನ್ನು ಕೊರೊನಾ ಕಾಲದ ಸಾಮಾಜಿಕ ಜಾಲತಾಣದ ಚಿಂತನ, ಚರ್ಚೆಗಳು ಒಪ್ಪುತ್ತವೆ. ಇಷ್ಟು ವರ್ಷಗಳ ಕಾಲ ಇದಕ್ಕಾಗಿ ವ್ಯಯವಾಗಿರುವ ಸರಕಾರದ ಕೋಟಿ, ಕೋಟಿ ಹಣ ಜನರ ಹಣವೇ ಆಗಿರುವುದರಿಂದ ಅದನ್ನು ಸಾರ್ವಜನಿಕವಾಗಿ ದುರುಪಯೋಗ ಎಂತಲೇ ಭಾವಿಸಬೇಕಾಗುತ್ತದೆ. ಹಾಗಾದರೆ ಜನಪರ ರಂಗಭೂಮಿ, ಗುಣಾತ್ಮಕ ಮೌಲ್ಯದ ರಂಗಭೂಮಿ ಗಗನ ಕುಸುಮವೇ.? ಕಡೆಯಪಕ್ಷ ಎಪ್ಪತ್ತು ಎಂಬತ್ತರ ದಶಕಗಳಲ್ಲಿ ಕಲಾತ್ಮಕತೆಯೊಂದಿಗೆ ರಂಗಸಂಸ್ಕೃತಿಯು ಜನಚಳವಳಿಯಾಗಿ ರೂಪುಗೊಂಡಿತ್ತು. ಅಂದಿನ ಎಲ್ಲಾ ಪ್ರಗತಿಪರ ಚಳವಳಿಗಳಿಗೆ ಸಮಷ್ಟಿಪ್ರಜ್ಞೆಯ ವಿಚಾರಗಳು ಸಂವೇದನಾಶೀಲ ಆಶಯಗಳಾಗಿದ್ದವು. ಎಚ್ಚರಗಳಾಗಿದ್ದವು. ಅಂತಹ ಚಾರಿತ್ರಿಕ ಸಂಗತಿಗಳನ್ನು ನೆನೆಯುವುದು ಈಗಿನ ಕೆಲವರಿಗೆ ಅಲರ್ಜಿ. ಒಂದುಬಗೆಯ ಎಸಿಡಿಟಿ. ಹಾಗಾದರೆ ಇನ್ನುಮುಂದೆ ಸಾಂಸ್ಕೃತಿಕ ಬದ್ಧತೆ, ಆಶಯಗಳ ಅಗತ್ಯವಿಲ್ಲವೇ.? ಕಾರ್ಪೊರೇಟ್ ಬೀಜಗಣ್ಣುಗಳಿಂದ ಸಂಸ್ಕೃತಿ ನಿರ್ಮಾಣ ಕಾರ್ಯದ ಬಿತ್ತುಣಿಕೆ ಸಾಧುವೇ.? ಸಾಧ್ಯವೇ.? ಹಾಗೆ ನೋಡಿದರೆ ಇದು ಕೇವಲ ಕನ್ನಡ ಸಂದರ್ಭದ ವಿದ್ಯಮಾನ ಆಗಿರದೇ ಬಹುಪಾಲು ವರ್ತಮಾನ ಭಾರತದ ಸಾಂಸ್ಕೃತಿಕ ಸಂದರ್ಭವೂ ಇದೇ ಆಗಿದ್ದೀತು.? ಸರಕಾರದ ನಾಲ್ಕು ರಂಗಾಯಣಗಳು ಮತ್ತು ಆರಂಭ ಹಂತದಲ್ಲಿರುವ ಕೊಂಡಜ್ಜಿ ವೃತ್ತಿ ರಂಗಭೂಮಿ ಕೇಂದ್ರ ಹೊರತುಪಡಿಸಿ, ರಾಜ್ಯದಲ್ಲಿ ಅಜಮಾಸು ಎಪ್ಪತ್ನಾಲ್ಕು ರೆಪರ್ಟರಿಗಳು ರಾಜ್ಯ ಮತ್ತು ಕೇಂದ್ರ ಸರಕಾರದ ಅನುದಾನ ಪಡೆಯುತ್ತಿವೆ. ಒಬ್ಬೊಬ್ಬ ಕಲಾವಿದನಿಗೆ ಮಾಸಿಕ ಆರುಸಾವಿರ. ಪ್ರಾಚಾರ್ಯನಿಗೆ ಅದರ ಎರಡರಷ್ಟು ಪಗಾರ. ಹೀಗೆ ಒಂದೊಂದು ರೆಪರ್ಟರಿಯಲ್ಲಿ ಹದಿನೈದಿಪ್ಪತ್ತು ಮಂದಿಯ ಲೆಕ್ಕದಲ್ಲಿ ಅನುದಾನ ಪಡೆಯುತ್ತಿವೆ. ರೆಪರ್ಟರಿ ನಡೆಸುತ್ತಿದ್ದೇವೆಂದು ನಟಿಸುತ್ತಿರುವವರು ಇಲ್ಲದಿಲ್ಲ. ಹೀಗೆ ಫೇಕ್ ರೆಪರ್ಟರಿಗಳಂತೆ ಕೆಲವು ವೃತ್ತಿನಾಟಕ ಕಂಪನಿಗಳು ಸರಕಾರದ ಹಣ ಪೋಲು ಮಾಡುತ್ತಿರುವ ರಂಗಸಂಸ್ಕೃತಿಯ ಬದ್ಧತೆ, ಬನಾವಟಿ ಎಂತಹುದೆಂದು ಬಿಚ್ಚಿ ಹೇಳಬೇಕಿಲ್ಲ. ವರ್ತಮಾನದ ಕೆಲವರ ಈ ಅಡ್ಡಹಾದಿ ರಂಗನಡೆಯನ್ನು ನಿರ್ದಾಕ್ಷಿಣ್ಯವಾಗಿ ಖಂಡಿಸುವವರಿಲ್ಲ. ಇದಕ್ಕೆ ಸಂಬಂಧಿಸಿದ ಅಧಿಕಾರಶಾಹಿ ಹಾಗೂ ಮಧ್ಯವರ್ತಿಗಳ ನೇಪಥ್ಯ ಹುನ್ನಾರ ಬಣ್ಣಿಸಲಸದಳ. ಇದೊಂದು ಸಾಂಸ್ಕೃತಿಕ ದಲ್ಲಾಳಿಗಳ ದೊಡ್ಡಜಾಲ. ಈ ಜಾಲ, ಹುನ್ನಾರಗಳ ಒಳಮರ್ಮ ಹೊರ ಬರಬೇಕಿದೆ. ಆಗ ಸರಕಾರಿ ಸಾಹಿತಿ, ಕಲಾವಿದರ ಸಂಸ್ಕೃತಿಯ ಚಿಂತನಕೋರ ಅಸಲಿ ಬಣ್ಣಗಳು ಬಟಾ ಬಯಲಾಗುತ್ತವೆ. ರಂಗಸಂಸ್ಕೃತಿಯ ಚಿಂತನೆಗಳೆಂದರೆ ಬಹುಪಾಲು ಬುದ್ದಿಜೀವಿ ರಂಗತಜ್ಞರಿಗೆ ಆಧುನಿಕ ರಂಗಭೂಮಿಯದೇ ಅಗಾಧ ನೆನಹು. ಆಧುನಿಕೋತ್ತರದ ಗಿಳಿಪಾಠಗಳ ಪಾಂಡಿತ್ಯ ಪ್ರದರ್ಶನ. ನಾಟಕಗಳೂ ಸರಳತೆಯಿಂದ ಸಾವಿರ ಮೈಲುದೂರ. ಅವು ಜನಸಾಮಾನ್ಯರಿಗೆ ಅಲ್ಲವೇಅಲ್ಲ ಎನ್ನುವುದು ಅತಿಶಯೋಕ್ತಯೇನಲ್ಲ. ಆದರೆ ಇವತ್ತಿಗೂ ಪ್ರಜಾಸತ್ತಾತ್ಮಕ ಬಾಹುಳ್ಯದ ಪ್ರೀತಿ ಉಳಿಸಿಕೊಂಡಿರುವ ನಾಡಿನ ಹಳ್ಳಿ ಹಳ್ಳಿಗಳಲ್ಲೂ ಲೋಕಮೀಮಾಂಸೆಗೆ ಭಾಜನವಾದುದು ಕಂಪನಿಶೈಲಿ ನಾಟಕಗಳು. ನೂರೈವತ್ತು ವರ್ಷಗಳ ರಂಗಸಂಸ್ಕೃತಿಯ ಅನನ್ಯತೆ ಬದುಕಿದ ಇಂತಹ ವೃತ್ತಿರಂಗಭೂಮಿಯ ದ್ಯಾಸವೇ ಸೋಕಾಲ್ಡ್ ಬುದ್ದಿಜೀವಿಗಳಿಗೆ ಇರುವುದಿಲ್ಲ. ಅಷ್ಟಕ್ಕೂ ಸಂಸ್ಕೃತಿಯ ನಿರ್ಮಾಪಕರಂತೆ ಫೋಜು ಕೊಡುವವರು ಟೀವಿಗಳಲ್ಲಿ, ಯು ಟ್ಯೂಬುಗಳಲ್ಲಿ ಪಾಂಡಿತ್ಯಪೂರ್ಣ ಚರ್ಚೆಮಾಡುವವರು ಸಧ್ಯದ ಕೊರೊನಾ ನಿವಾರಣೆಯಲ್ಲಿ ತಮ್ಮ ಪಾತ್ರವೇನೆಂದು ತಮಗೆ ತಾವೇ ಪ್ರಶ್ನಿಸಿಕೊಳ್ಳುವ ಬದಲು ರಂಗನಾಟಕಗಳ ಪ್ರದರ್ಶನಗಳಿಲ್ಲ, ಕೂಡಲೇ ಸರಕಾರ ನೆರವಾಗಬೇಕೆಂದು ಇನ್ನೂ ಮುಂತಾಗಿ ಪಾಂಡಿತ್ಯದ ಒಣತೌಡು ಕುಟ್ಟುತ್ತಿದ್ದಾರೆ ಅನಿಸುತ್ತಿದೆ. ಹಾಗೆಂದು ಸರಕಾರದಲ್ಲಿ ನೆರವು ಯಾಚಿಸಬಾರದೆಂಬುದು ನನ್ನ ಉದ್ದೇಶವಲ್ಲ. ಕೊರೊನಾ ಕಾಲದಲ್ಲಿ ಕೋಟಿ ಕೋಟಿ ವಲಸಿಗ ಕೂಲಿಕಾರರು, ವೃದ್ಧರು, ಸಣ್ಣಸಣ್ಣ ಮಕ್ಕಳು, ಬಸುರಿ, ಬಾಣಂತಿಯರು ನೂರಾರು ಮೈಲುಗಟ್ಟಲೇ ಕಾಲ್ನಡಿಗೆಯಲ್ಲಿ ನಡಕೊಂಡು ಹೋದವರು. ಅವರ ಅಂಗಾಲುಗಳು ಕೆಂಡದಂತೆ ಕಾದ ಹಂಚಿನ ಮೇಲಿನ ರೊಟ್ಟಿಯಾದುದು, ಆದರೆ ಹಸಿವಿನಿಂದ ಸುಡುವ ಹೊಟ್ಟೆಗೆ ರೊಟ್ಟಿಯಿಲ್ಲದೇ ನಡುದಾರಿಯಲ್ಲೇ ಪ್ರಾಣ ಬಿಟ್ಟವರೆಷ್ಟೋ..!? ಇವರೆಲ್ಲರಿಗೂ ತಮ್ಮ ಹುಟ್ಟೂರುಗಳನ್ನು ಮುಟ್ಟಲೇಬೇಕೆಂಬ ನೆಲಧರ್ಮಪ್ರೀತಿಯ ಗುರಿಯಿತ್ತು. ಹಾಗೆ ಹುಟ್ಟೂರು ಮುಟ್ಟಿದಮೇಲೆ ಅಲ್ಲಿಯೇ ಬದುಕು ಕಟ್ಟಿಕೊಳ್ಳುವ ಬದುಕಿನ ಯಥಾರ್ಥ ಕನಸುಗಳಿದ್ದವು. ಕೋಟಿ ಕೊಟ್ಟರೂ ಮರಳಿ ಪೇಟೆಗೆ ಬರುವುದು ಬೇಡವೆಂಬ ಕಣ್ಣೀರಿನ ಸಂಕಟಗಳಿದ್ದವು. ಕಡೆಯಪಕ್ಷ ಇಂತಹ ಸಹಸ್ರಾರು ಸಂಕಟಗಳನ್ನು ಕತೆ, ಕಾದಂಬರಿ, ನಾಟಕಗಳಲ್ಲಿ ಹೇಗೆ ತರುವುದೆಂಬ ಗಂಭೀರ ಚರ್ಚೆಗಳು ಜರುಗುತ್ತಿಲ್ಲವೆಂಬ ಇರಾದೆ ನನ್ನದು. ಇನ್ನು ಈ-ಪಂಡಿತರು ಸಾಮಾನ್ಯ ಜನರ ಸಂಕಷ್ಟಗಳಿಗೆ ಪ್ರಾಣಮಿತ್ರರಂತೆ ಸ್ಪಂದಿಸಿದ್ದು, ನೆರವು ಮಾಡಿದ್ದು ಅಷ್ಟಕ್ಕಷ್ಟೇ. ಹಾಗೆ ಮಾಡಿದ ಕೆಲವರಿಗೆ ನೆರವಿಗಿಂತ ಬೆಂಕಿಬಿದ್ದ ಮನೆಯಲ್ಲಿ ಗಳಗಳನ್ನು ಹಿರಿದಂತೆ ತಮ್ಮ ಇಮೇಜಿಗೆ ಸಿಗಬೇಕಾದ ಕೀರ್ತಿಕಾಮನೆಯ ತಲಬು. ದುಃಸ್ಥಿತಿಯಲ್ಲಿರುವ ಕಲಾವಿದರಿಗೆ ಸರಕಾರ ನೀಡುವ ಎರಡುಸಾವಿರ ರುಪಾಯಿಗಳಿಗೂ ದೇಹಿ ಎಂದು ಅರ್ಜಿಗುಜರಾಯಿಸಿದ ಕಾರು, ಬಂಗಲೆಗಳುಳ್ಳ ಅನುಕೂಲಸ್ಥ ಕೆಲವು ರಂಗಕರ್ಮಿಗಳು ನಮ್ಮನಡುವಿದ್ದಾರೆ. ಇಂಥವರು ಹತ್ತಾರು ವರ್ಷಕಾಲ ರಂಗಭೂಮಿಯಲ್ಲಿ ಹೆಸರು ಮಾಡಿದವರು. ರೆಪರ್ಟರಿಗಳಲ್ಲಿ ಕಲಿತು ಬಂದವರು. ಕಡೆಯಪಕ್ಷ ಅಲ್ಲಿ ಇವರು ಮಾನವೀಯತೆಯ ಪಾಠ ಕಲಿಯಲಿಲ್ಲವೇ.? ಅಥವಾ ಸೋಕಾಲ್ಡ್ ರೆಪರ್ಟರಿಗಳು ಇಂತಹ ಕೆಲವರಿಗೆ ಅಂತಃಕರಣದ, ನಿಸ್ವಾರ್ಥದ ಪಾಠ ಹೇಳಿ ಕೊಡಲಿಲ್ಲವೇ.? ಕೊರೊನಾ ಕೇವಲ ದೈಹಿಕ ಬಾಧೆಯಾಗಿ ಮನುಷ್ಯರ ಜೀವ ಹೊತ್ತೊಯ್ಯುತ್ತಿಲ್ಲ. ಅದು ಮನುಷ್ಯ ಮನುಷ್ಯರ ನಡುವೆ ಸೃಷ್ಟಿಸುತ್ತಿರುವ ಅಂತರ ಕೇವಲ ದೈಹಿಕ ಅಂತರವಾಗಿರದೇ ಸಾಮಾಜಿಕ ಅಂತರ ಎಂದು ಅಪಾರ್ಥದ ಹೆಸರಿಂದ ಕರೆಸಿಕೊಂಡಿತು. ಹೀಗೆ ಮಾಡುವ ಮೂಲಕ ಕೆಲಮಟ್ಟಿಗೆ ನೇಪಥ್ಯದಲ್ಲಿದ್ದ ಹಲವು ಭಾರತಗಳು ಬಯಲುರಂಗಕ್ಕೆ ಬಂದವು. ಮುಖ್ಯವಾಗಿ ಬಾಲ್ಕನಿ ಭಾರತ, ನೆಲಭಾರತಗಳು ಬಹಳ ಸ್ಪಷ್ಟವಾಗಿ ಗೋಚರಗೊಂಡವು. ಯಾರನ್ನೋ ಸಂಪ್ರೀತಗೊಳಿಸಲು ಬಾಲ್ಕನಿ ಭಾರತದಲ್ಲಿ ನಿಂತು ಬೆಳಕಿನ ಹಣತೆ ಹಚ್ಚಿದ ಕಣ್ಣುಗಳಿಗೆ ಕತ್ತಲೆಯ ನೆಲದಲ್ಲಿ ನಡೆದುಕೊಂಡು ಹೋಗುತ್ತಿರುವ ನೆಲಭಾರತದ ಕೋಟಿ, ಕೋಟಿ ಮಂದಿ ಕಾಣಿಸಲೇಇಲ್ಲ. ಹಾಗೆಯೇ ಎಂದಿನಂತೆ ಗ್ರಾಮಭಾರತ ಮತ್ತು ನಗರ ಭಾರತ, ಸ್ಲಂಭಾರತ, ಹಸಿವಿನ ಭಾರತ, ಹೊಟ್ಟೆತುಂಬಿದ ಭಾರತ ಹೀಗೆ ಹತ್ತುಹಲವು ಭಾರತಗಳನ್ನು ತುಂಬಾ ನಿಚ್ಚಳವಾಗಿ ಕೊರೊನಾ ವಿಂಗಡಿಸಿ ತೋರಿಸಿತು. ಇನ್ನೊಂದು ಅಪಾಯದ ಮತ್ತು ಸುಳ್ಳು ಸಂಗತಿಯೆಂದರೆ ಕೊರೊನಾದ ಮೂಲವೇ ಒಂದು ಅಲ್ಪಸಂಖ್ಯಾತ ಸಮುದಾಯ. ಹಾಗಂತ ಕೆಲವು ಖಾಸಗಿ ಟೀವಿಗಳು ಕುತ್ಸಿತ ನಿರ್ಧಾರದ ಸುದ್ದಿಗಳನ್ನು ಬಿತ್ತರಿಸಿದವು. ಅವಕ್ಕೆ ತಮ್ಮ ಜಾಣತನದ ಬಿತ್ತರಿಕೆಯ ಖುಷಿಯ ಮುಂಚೂಣಿ. ಕೊರೊನಾದ ಈ ತೆರನಾದ ವಿಭಜನೆಗಳು ಸ್ವಾತಂತ್ರ್ಯೋತ್ತರ ಭಾರತದ ಕ್ಷಣಗಳನ್ನು ನೆನಪಿಸುವ ಸಾಮಾಜಿಕ ಅಸ್ವಸ್ಥತೆಗಳನ್ನು ನಿರ್ಮಿಸಿತು. ಕೊರೊನಾಕಿಂತಲೂ ಅಪಾಯಕಾರಿಯಾದ ಕೋಮು ದ್ವೇಷದಕ್ರಿಮಿಗಳು ಅವಕಾಶ ಬಳಸಿಕೊಂಡವು. ಸಣ್ಣದೊಂದು ಸಮಾಧಾನದ ಸಂಗತಿಯೆಂದರೆ ಮಂದಿರ, ಮಸೀದೆ, ಚರ್ಚುಗಳಿಗೆ ಕೆಲವು ತಿಂಗಳ ಮಟ್ಟಿಗಾದರೂ ಬೀಗ ಜಡಿಸಿ ಪವಾಡ ಮಾಡಿದ ಕೀರ್ತಿ ಕೊರೊನಾಕ್ಕೆ ಸಲ್ಲಬೇಕು. ಕೊರೊನೋತ್ತರ ಭಾರತ, ಅದರ ಸಾಂಸ್ಕೃತಿಕ ಬದುಕಿನ ಚಿಂತನೆಗಳು ಹೇಗಿರಬೇಕೆಂಬ ಸಿದ್ದತೆಗಳನ್ನು ಕೆಲವು ಸ್ಥಾಪಿತ ಸಂಘಟನೆಗಳು ಈಗಾಗಲೇ ನೀಲನಕ್ಷೆ ರೂಪಿಸತೊಡಗಿವೆ. ಸಾವು ನೋವಿನ ಸೂತಕದ ಮನೆಯಲ್ಲಿ ಸಡಗರ, ಸಂಭ್ರಮಗಳು ಸಾಧ್ಯವೇ.? ಇಂಥದರ ನಡುವೆ ಗಡಿಯಲ್ಲಿ ಯುದ್ಧದ ಕಾರ್ಮೋಡಗಳು ಗಸ್ತು ಹೊಡೆಯುತ್ತಿವೆ. ದೀಪವು ನಿನ್ನದೇ ಗಾಳಿಯೂ ನಿನ್ನದೇ ಆರದಿರಲಿ ಬೆಳಕು ಎಂಬ ಹಾಡಿನ ಪಾಡು ಜನಸಾಮಾನ್ಯರದು. ತಾತ್ಪೂರ್ತಿಕವಾಗಿ ಸ್ಥಗಿತಗೊಂಡ ಸಂಸ್ಕೃತಿಯ ಜೀವಧಾರೆ ಮತ್ತೆ ಉಕ್ಕಿ ಹರಿಯುವುದು ಕಾಣಬಲ್ಲೆನೆಂಬ ಕನಸುಗಳು ನನ್ನಲ್ಲಿ ಯಾವತ್ತೂ ಬತ್ತುವುದಿಲ್ಲ.ಮಲ್ಲಿಕಾರ್ಜುನ ಕಡಕೋಳ

ಪ್ರಸ್ತುತ Read Post »

You cannot copy content of this page

Scroll to Top