ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ಗುರುವಿನ ಋಣ

ಗುರುವಿನ ಋಣ ಜಯಶ್ರೀ ಜೆ.ಅಬ್ಬಿಗೇರಿ         ಆಗ ನಾನಿನ್ನೂ ಪುಟ್ಟ ಫ್ರಾಕು  ಧರಿಸಿ ಪುಟ್ಟ ಪುಟ್ಟ ಹೆಜ್ಜೆ ಇಡುತ್ತಿದ್ದ ಕಾಲ. ಸದಾ ನನ್ನ ಕೈಯಲ್ಲಿ ಬಿಳಿ ಚೌಕಟ್ಟಿನ ಕರಿ ಪಾಟಿ ಹಿಡಿದು, ಬೆರಳಲ್ಲಿ ಪೆನ್ಸಿಲ್ ಸಿಕ್ಕಿಸಿಕೊಂಡು ದೊಡ್ಡ ಪಂಡಿತರಂತೆ ಗಂಭಿರವಾಗಿ ಬರೆಯುವದನ್ನು ಕಂಡು ನನ್ನಪ್ಪ, ನಮ್ಮವ್ವ ಎಷ್ಟು ಶ್ಯಾನೆ ಅದಾಳ ನೋಡು ಎನ್ನುತ್ತ ಪ್ರೀತಿಯಿಂದ ಹಣೆಗೆ ಹೂ ಮುತ್ತನ್ನಿಕ್ಕಿ ಅಕ್ಷರವನ್ನು ತೀಡಿಸುತ್ತಿದ್ದರು.ಆಗಿನಿಂದ ನನ್ನ  ಅಕ್ಷರದ ಹುಚ್ಚು ಮತ್ತಷ್ಟು ಹೆಚ್ಚಿತು. ಅಣ್ಣನ ಜೊತೆ ನಾನೂ ಶಾಲೆಗೆ ಹೋಗಲೇಬೇಕು ಎಂಬ ಹಟಕ್ಕೆ ಮಣಿದು,  ನನ್ನ ಕಾಟ ತಾಳಲಾರದೇ ಅಪ್ಪ ನನ್ನ ಕಿರುಬೆರಳು ಹಿಡಿದು ಶಾಲೆಯ ಮೆಟ್ಟಿಲು ಹತ್ತಿಸಿದ್ದರು.         ಸಂಪೂರ್ಣ ಬಿಳಿವಸ್ತ್ರಧಾರಿಯಾಗಿ ಬಿಳಿ ಟೋಪಿ ಧರಿಸಿದ್ದ ಹೆಡ್ ಮಾಸ್ಟರ್ ನನ್ನನ್ನೇ ದಿಟ್ಟಿಸುತ್ತ ಬಲಗೈಯನ್ನು ತಲೆಯ ಮೇಲೆ ಹಾಯಿಸಿ ಎಡಗಿವಿಯ ತುದಿಯನ್ನು ಮುಟ್ಟಲು ಸೂಚಿಸಿದರು.ನನ್ನ ಬಲಗೈಗೆ ಎಡಗಿವಿ ತುದಿಯನ್ನು ಮುಟ್ಟಲಾಗಲಿಲ್ಲ. ನಿಮ್ಮ ಹುಡುಗಿಗೆ ಇನ್ನೂ 5 ವರ್ಷ 10 ತಿಂಗಳಾಗಿಲ್ಲ ಎಂದು ಕರಾರುವಕ್ಕಾಗಿ ನುಡಿದರು.ಅದಕ್ಕೆ ಅಪ್ಪ ಹೌದ್ರಿ ಸರ್ ಆದ್ರ ಇಕಿಗೆ ಕಲಿಯುವ ಹುಚ್ಚು ಬಾಳ ಐತಿ ಈಗಾಗಲೇ ಅಕ್ಷರ ಅಂಕಿ ಎಲ್ಲಾ ಕಲ್ತಾಳ ಅಂದ. ಹೆಡ್ ಮಾಸ್ಟರ್  ವಿಸ್ಮಯದಿಂದ ಹುಬ್ಬೇರಿಸಿ ನನ್ನ ಅಕ್ಷರ ಅಂಕಿ ಜ್ಞಾನವನ್ನು ನಾನಾ ರೀತಿಯಲ್ಲಿ ಪರೀಕ್ಷಿಸಿ, ಶಹಬ್ಬಾಸಗಿರಿ ಕೊಟ್ಟು, ಒಂದು ವರ್ಷ ಮೊದಲೇ ಹುಟ್ಟಿದ್ದೀನೆಂದು ದಾಖಲಿಸಿ, ಒಂದನೇ ಕ್ಲಾಸ್ ಕಡೆ ಬೊಟ್ಟು ಮಾಡಿದರು.        ಊರಿಗೊಂದೇ ಸರಕಾರಿ ಶಾಲೆ. ಊರಿನ ಎಲ್ಲ ವರ್ಗದ ಮಕ್ಕಳಿಗೆ ಅಲ್ಲಿಯೇ ಶಿಕ್ಷಣ. ಮೆಸ್ಟ್ರು ಎಲ್ಲರಿಗೂ ಕಂಪಲ್ಸರಿ  ಕಲಿಸಲೇಬೇಕೆಂದು ಹಟ ತೊಟ್ಟು ಆಲಸ್ಯತನ ತೋರಿದವರಿಗೆ ಬೆನ್ನಿನ ಮೇಲೆ ಕೋಲಿನಿಂದ ಬಾಸುಂದೆ ಮೂಡಿಸುತ್ತಿದ್ದರು.ಕೋಲಿನ ಭಯಕ್ಕೆ ಎಲ್ಲ ಮಕ್ಕಳು ಪುಸ್ತಕ ಮುಖದ ಮುಂದೆ ಹಿಡಿಯುತ್ತಿದ್ದರು. ಕೋಲಿನ ಸುದ್ದಿ ಮನೆಯಲ್ಲಿ ಹೇಳಿದರೆ ಬೋನಸ್ಸಾಗಿ ಅಲ್ಲಿಯೂ ಬೆತ್ತದ ರುಚಿ ನೋಡಬೇಕಿತ್ತು. ಹೀಗಾಗಿ ಓದು ಬರಹ ಅನಿವಾರ್ಯವಾಗಿತ್ತು.         ಊರ ಹೊರಗಿನ ದೊಡ್ಡ ಆಲದ ಮರದ ಕೆಳಗೆ ಶಿಸ್ತಿನ ಸಿಪಾಯಿಯಂತೆ ನಿಂತ ಗುರುಗಳು ಪದ್ಯ ಲೆಕ್ಕ ಕಲಿಸುತ್ತ, ಪ್ರಶ್ನೆ ಕೇಳಿದರೆ ನಾ ಮುಂದು ತಾ ಮುಂದು ಎಂದು ಉತ್ತರಿಸಿ, ಆಟದ ಪಿರಿಯಡ್ಗೆ ಬೆಲ್ ಹೊಡೆದ ತಕ್ಷಣ ಹೋ! ಎಂದು ಜೋರಾಗಿ ಕೂಗುತ್ತ ಮೈದಾನಕ್ಕೆ ಲಗ್ಗೆಯಿಟ್ಟು, ಮೈ ಕೈ ಜೊತೆಗೆ ಬಟ್ಟೆಗೂ ಕೆಂಪು ಮಣ್ಣು ಮೆತ್ತಿಸಿಕೊಳ್ಳುವದರಲ್ಲಿ ಎಲ್ಲಿಲ್ಲದ ಖುಷಿ. ರಾಷ್ಟ್ರೀಯ ಹಬ್ಬಗಳ ರಿಹರ್ಸಲ್ಲಿನಲ್ಲಿ ಗುರು ಬಳಗ ಪಡುವ ಶ್ರಮಕ್ಕೆ ಸೆಲ್ಯೂಟ್ ಹೊಡೆಯಬೇಕೆನಿಸುತ್ತಿತ್ತು. ಹಬ್ಬಗಳಂದು ಹಾಡು ಭಾಷಣ ರೂಪಕ ನಾಟಕಗಳಲ್ಲಿ ಭಾಗವಹಿಸಿ ಪೆಪ್ಪರಮೆಂಟ್ ಚೀಪುತ್ತ ಕುಣಿದು ಕುಪ್ಪಳಿಸುತ್ತಿದ್ದೆವು.              1ನೇ ಕ್ಲಾಸಿನಿಂದ 7ನೇ ಕ್ಲಾಸಿನವರೆಗೆ ಫುಲ್ ಸಿಲ್ಯಾಬಸ್ನ್ನು ಹೋಲ್ ಸೇಲಾಗಿ ಒಬ್ಬರೇ ಗುರುಗಳು ಬೋಧಿಸುತ್ತಿದ್ದುದರಿಂದ ಅವರಿಗೆ ನಮ್ಮ ಶಕ್ತಿ ದೌರ್ಬಲ್ಯ ಪ್ರತಿಭೆಗಳು ಚೆನ್ನಾಗಿ ಗೊತ್ತಿರುತ್ತಿತ್ತು. ತಾಲೂಕಾ ಮಟ್ಟದಲ್ಲಿ ಅತ್ಯಧಿಕ ಪ್ರಶಸ್ತಿ ಪತ್ರ ಬಾಚಿಕೊಂಡು ಬಂದ ನನ್ನನ್ನು ಮೇಸ್ಟ್ರು ತಮ್ಮ ಕುಂಕಿಯ (ಹೆಗಲ) ಮೇಲೆ ಕೂಡ್ರಿಸಿಕೊಂಡು ಸಂಭ್ರಮಿಸುತ್ತ ಹೆಡ್ ಮಾಸ್ಟರ್ ಕಡೆಯಿಂದ 5 ಪೇನೆ(ಪೆನ್ಸಿಲ್) ಗಳನ್ನು ಬಹುಮಾನವಾಗಿ ಕೊಡಿಸಿದ್ದನ್ನು ನೆನೆದಾಗಲೊಮ್ಮೆ ಕಣ್ಣಲ್ಲಿ ನೀರು ಜಿನುಗುತ್ತೆ. ನಮ್ಮ ಕಲಿಕೆಯಲ್ಲಿ ಸಂತೃಪ್ತ ಭಾವ ಕಂಡ  ಗುರುಗಳದು ಅದೆಂಥ ನಿಸ್ವಾರ್ಥ, ಸಾರ್ಥಕ ಸೇವೆ ಎಂದೆನಿಸಿತ್ತದೆ..         ನಮ್ಮ ಕ್ಲಾಸ್ ಸರ್ ಎಂದರೆ ಎಲ್ಲ ಮಕ್ಕಳಿಗೆ  ಎಲ್ಲಿಲ್ಲದ ಭಯ. ಅವರ ಹೆಜ್ಜೆಯ ಸಪ್ಪಳಕ್ಕೆ ಕ್ಲಾಸಿಗೆ ಕ್ಲಾಸೇ ಬೆಚ್ಚಿ ಬೀಳುತ್ತಿತ್ತು.ಅವರು ಎಂದೂ ಯಾರಿಗೂ ತಮ್ಮ ಬೆತ್ತದ ರುಚಿ ತೋರಿಸಿರಲಿಲ್ಲ. ಅವರದೇನಿದ್ದರೂ ಕಣ್ಣಿನಲ್ಲಿಯೇ ಹೆದರಿಸುವ ಪರಿ. ಕ್ಲಾಸ್ ಮುಗಿದ ಮೇಲೂ ಕಾಸು ತೆಗೆದುಕೊಳ್ಳದೇ ತಮ್ಮ ಮನೆಯಲ್ಲಿ ಬದಾಮು ಹಾಲು ಕೊಟ್ಟು ಹೇಳಿ ಕೊಟ್ಟ ಪಾಠಗಳು ಇಂದಿಗೂ ಮನದಲ್ಲಿ ಅಚ್ಚೊತ್ತಿವೆ.        ಕೈಯಲ್ಲಿ ಮಾರುದ್ದದ ಕೋಲು ಹಿಡಿದೇ ಕ್ಲಾಸಿಗೆ ಬರುತ್ತಿದ್ದ ಇಂಗ್ಲೀಷ್ ಸರ್ ಭಾಷೆ ಕಲಿಸುವ ರೀತಿ ಬ್ರಿಟೀಷರನ್ನೂ ದಂಗು ಬಡಿಸುವಂತಿರುತ್ತಿತ್ತು. ಹಳೆಗನ್ನಡದ ಕವಿತೆ ರಾಮಾಯಣ ಮಹಾಭಾರತದ ಪ್ರಸಂಗಗಳನ್ನು ಕನ್ನಡ ಗುರುಗಳ ಬಾಯಲ್ಲಿ ಕೇಳುತ್ತಿದ್ದರೆ ಎಂಥವರಿಗೂ ರೊಮಾಂಚನವಾಗುತ್ತಿತ್ತು. ಬೋಧಿಸುವದು ಗಣಿತವಾದರೂ ಸ್ಪಧರ್ಾತ್ಮಕ ಪರೀಕ್ಷೆಗಳಿಗೆ ಮಕ್ಕಳನ್ನು ಹೇಗೆ ಸಿದ್ಧಗೊಳಿಸಬೇಕೆಂಬುದನ್ನು  ಗಣಿತ ಶಿಕ್ಷಕರ ಗರಡಿಯಲ್ಲಿಯೇ ತಿಳಿಯಬೇಕು.ವಿಜ್ಞಾನದ ಮೆಸ್ಟ್ರಂತೂ  ದಿನ ನಿತ್ಯ ಹೊಸ ಹೊಸ ಪ್ರಯೋಗಗಳನ್ನು ಮಾಡಿ ತೋರಿಸಿ  ಜ್ಞಾನದ ದಾಹ ಹೆಚ್ಚಿಸುತ್ತಿದ್ದರು. ರಾಷ್ಟ್ರೀಯ ಭಾವೈಕ್ಯತೆಯನ್ನು ಹಿಂದಿ ಭಾಷೆಯಿಂದ ಸಾಧಿಸಲು ಸಾಧ್ಯವಿದೆಯೆಂದು ತೋರಿಸಿಕೊಟ್ಟವರು ಹಿಂದಿ ಭಾಷಾ ಶಿಕ್ಷಕರು . ಮಕ್ಕಳು ಕೀಟಲೆ ಮಾಡಿದರೆ ಚೆನ್ನ ಎನ್ನುತ್ತ ದೇಶಭಕ್ತಿಯ ಮೊಳಕೆಯೊಡಿಸಿದವರು  ಇತಿಹಾಸ ಗುರುಗಳು. ಆಟ ಆಡಿಸಿ ಮೈ ಕೈ ಗಟ್ಟಿ ಮಾಡಿಸಿದ ದೈಹಿಕ ಶಿಕ್ಷಕರನ್ನು ಕೈಯಲ್ಲಿ ಕುಂಚ ಹಿಡಿಸಿ ಬಣ್ಣ ಬಳಿಸಿ, ಬದುಕಿನ ರಂಗು ಹೆಚ್ಚಿಸಿದ ಡ್ರಾಯಿಂಗ್ ಶಿಕ್ಷಕರನ್ನು ನೆನಸದೇ ಇರುವದಾದರೂ ಹೇಗೆ?          ಕ್ವಿಜ್ದಲ್ಲಿ ಭಾಗವಹಿಸುವದು ನನಗೆ ಇಷ್ಟದ ಸಂಗತಿ.ಯಾವುದೇ ಸಂಘಗಳು ಕ್ವಿಜ್ ಸ್ಪಧರ್ೆ ಏರ್ಪಡಿಸಿದಾಗಲೂ ರಸಪ್ರಶ್ನೆಯಲ್ಲಿ ಅತ್ಯಧಿಕ ಪ್ರಶಸ್ತಿ ಪಡೆದ ದಾಖಲೆ ಇದ್ದ ನನ್ನ ಹೆಸರನ್ನೇ ಗೆಳೆತಿಯರು ಸೂಚಿಸಿ ಇದನ್ನು ನೀನು ಗೆಲ್ಲಲೇಬೇಕೆಂದು ತಾಕೀತು ಮಾಡುತ್ತಿದ್ದರು. ಹುಡುಗರೆಲ್ಲ ಕೇಕೆ ಸೀಟಿ ಹಾಕಿ ಅನುಮತಿಸುತ್ತಿದ್ದರು.        ಅದು ಓಪನ್ ಕ್ವಿಜ್ ಕಾಂಪಿಟೇಶನ್ ಆಗಿದ್ದರಿಂದ ಯಾವುದೇ ವಯೋಮಾನದವರು, ವೃತ್ತಿಯಲ್ಲಿರುವವರು  ಭಾಗವಹಿಸಬಹುದಿತ್ತು ಬಹುಮಾನವಾಗಿಟ್ಟ ಸಂಚಾರಿ ಫಲಕವನ್ನು ಸತತ 3 ವರ್ಷ ಪ್ರಥಮ ಬಂದವರಿಗೆ ಶಾಶ್ವತವಾಗಿ ತಮ್ಮದಾಗಿಸಿಕೊಳ್ಳಬಹುದು ಎಂಬ ಷರತ್ತು ಹೊಂದಿತ್ತು. ಎರಡು ವರ್ಷ ಸಂಚಾರಿ ಫಲಕ ಪಡೆದು ಫೈನಲ್ ಘಟ್ಟ ತಲುಪಿದ್ದೆ. ಈ ವರ್ಷ ಏನಾಗುತ್ತೋ ಎನ್ನುವ ಭಯ ಕಾಡುತ್ತಿತ್ತು. ಪ್ರೇಕ್ಷಕರಾಗಿ ನಿಂತ ಸಹಪಾಠಿಗಳೆಲ್ಲ ನನ್ನ ಹೆಸರು ಕೂಗಿ ಉತ್ತೇಜಿಸುತ್ತಿದ್ದರು. ರಸ ಪ್ರಶ್ನೆ ಹುಚ್ಚು ಹಿಡಿಸಿದ್ದ ಮಾರ್ಗದರ್ಶಕರು ಪ್ಲೀಸ್ ಇದೊಂದನ್ನು ಗೆದ್ದು ಬಿಡು ಹೆದರ ಬೇಡ ಗೆಲ್ಲುವ ತಾಕತ್ತು ನಿನ್ನಲ್ಲಿದೆ. ಎಂದು ಧೈರ್ಯ ತುಂಬಿದ್ದರು.ಅದು ನಮ್ಮ ಕಾಲೇಜಿನ ಪ್ರತಿಷ್ಟೆಯ ವಿಷಯವಾಗಿತ್ತು.          ಸಿಕ್ಕ ಸಿಕ್ಕ ಪೇಪರ್ ಚೂರುಗಳನ್ನೆಲ್ಲ ಓದುವ ನನ್ನ ಚಟಕ್ಕೆ ಅಂದು ಅದೃಷ್ಟ ಖುಲಾಯಿಸಿತ್ತು. ಇಡೀ ಕಾಲೇಜು ನನ್ನ ಗೆಲುವಿನಿಂದ ಬೀಗಿತ್ತು. ಶೀಲ್ಡ್ಗೆ ನಾನು ಮುತ್ತಿಟ್ಟಾಗ ಮಾರ್ಗದರ್ಶಕರಾಗಿದ್ದ ಮೇಸ್ಟ್ರು ದೂರದಿಂದಲೇ ತಮ್ಮೆರಡು ಥಮ್ಸ್ ಅಪ್ ಮಾಡಿ ನನ್ನೆಡೆಗೆ ಹೆಮ್ಮೆಯಿಂದ ನೋಡಿದ ರೀತಿ ಇಂದಿಗೂ ಕಣ್ಮರೆಯಾಗಿಲ್ಲ.      .       ಇವೆಲ್ಲ ನಡೆದು ದಶಕಗಳೇ ಕಳೆದರೂ ಈಗ ತಾನೆ ಬಿಮ್ಮನೆ ಬಿರಿದ ಮಲ್ಲಿಗೆ ಹೂವಿನಂತೆ ಸುವಾಸನೆ ಬೀರಿ ನನ್ನನ್ನು ಕಾಡುತ್ತವೆ. ಒಂದೇ ಒಂದು ಬಾರಿ ಆ ಮಹಾನುಭವರನ್ನೆಲ್ಲ ಮತ್ತೆ ಕಾಣುವಂತಾದರೆ ಎಂದು ಮನಸ್ಸು ಹಂಬಲಿಸುತ್ತದೆ. ದೀಪದಂತೆ ತಾನುರಿದು ನಮಗೆ ಜ್ಞಾನದ ಬೆಳಕು ನೀಡುವ ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ತಮ್ಮೊಂದಿಗೆ ಹಂಚಿಕೊಳ್ಳಬೇಕೆನಿಸಿತು.. ತಮಗೆ ಕಲಿಸಿದ ಶಿಕ್ಷಕರ ನೆನಪು ಇನ್ನೂ ಹಸಿರಾಗಿದೆಯಲ್ಲವೆ? ಹಾಗಿದ್ದರೆ ಅವರಿಗೊಂದು ವಿಶ್ ಮಾಡಿ.ದೊಡ್ಡವರಾದ ಮೇಲೆ ಅಥವಾ ಜೀವನದಲ್ಲಿ ಸೆಟ್ಲ್ ಆದ ಮೇಲೆ ಅವರನ್ನು ಕಂಡು ಕೃತಜ್ಞತೆ ಸಲ್ಲಿಸಲೇ ಇಲ್ಲವಲ್ಲಾ ಎಂಬ ಭಾವ ಕಾಡುತ್ತಿದ್ದರೆ  ಅವರನ್ನೊಮ್ಮೆ ಕಂಡು ಅವರ ಕಂಗಳಲ್ಲಿ ಹೊಳೆಯುವ ಖುಷಿ ನೋಡಿ ಆನಂದಿಸಿ. ಸಾಧ್ಯವಾಗದಿದ್ದರೆ ಅಪರೋಕ್ಷವಾಗಿ ನೂರಾರು ಬಾರಿ ಆ ಕಾಣುವ ದೇವರಿಗೆ ಕೃತಜ್ಞತೆ ಅಪರ್ಿಸಿ.     ನಮ್ಮ ತಪ್ಪುಗಳನ್ನು ತಿದ್ದಿ ತೀಡಿ, ಮೆಚ್ಚುಗೆಯ ಮಾತುಗಳನ್ನಾಡಿ, ಬೆನ್ನು ತಟ್ಟಿ, ಪ್ರೀತಿ ಕಾಳಜಿ ಹರಿಸಿ, ಅಕ್ಷರ ಕಲಿಸಿ ಅರಿವು ಮೂಡಿಸಿದ ಗುರುಗಳ ಬಗ್ಗೆ  ಹೇಳುತ್ತ ಸಾಗಿದರೆ, ಮನದಲ್ಲಿ ಹೆಮ್ಮೆಯ ಭಾವ ಮೂಡುತ್ತೆ. ಇಂಥವರ ಕೈಯಲ್ಲಿ ಕಲಿತು ಬಾಳು ಬೆಳಗಿಸಿಕೊಂಡಿದ್ದೇವೆಲ್ಲ ಎಂದು  ಖುಷಿ ನೂರ್ಮಡಿಯಾಗುತ್ತೆ. ಇವರ ಋಣವ ತೀರಿಸುವದೆಂತು? ಎಂಬ ಪ್ರಶ್ನೆಯೂ ದೊಡ್ಡದಾಗಿ ಕಾಡುತ್ತೆ. ಬಾಳು ಬೆಳಗಿಸುವ ಗುರುಗಳು ಹೇಳಿಕೊಟ್ಟ ಸಲಹೆ ಸೂಚನೆ ಜೀವನ ಮೌಲ್ಯಗಳನ್ನು ನಾವು  ಚಾಚೂ ತಪ್ಪದೇ ಪಾಲಿಸುತ್ತ ಇತರರಿಗೂ ಆ ಬೆಳಕಿನಲ್ಲಿ ನಡೆಯಲು ನೆರವಾಗುತ್ತಾ ಸಾಗಿದರೆ ಅವರ ಋಣವನ್ನು ಸ್ವಲ್ಪ ಮಟ್ಟಿಗಾದರೂ ತೀರಿಸಬಹುದೇನೋ? ಬನ್ನಿ ನಮಗೆಲ್ಲ ಅರಿವು ನೀಡಿದ ಗುರುಗಳಿಗೆ ನೂರೆಂಟು ನಮನ ಸಲ್ಲಿಸಿ ಇಂದಿನಿಂದಲೇ ತೀರಿಸಲಾಗದ ಗುರುವಿನ ಋಣವನು ತೀರಿಸಲು ಯತ್ನಿಸೋಣ. ************

ಗುರುವಿನ ಋಣ Read Post »

ಇತರೆ

ಓ ನಮ್ಮ ಶಿಕ್ಷಕ ನೀ ನಮ್ಮ ರಕ್ಷಕ

ಓ ನಮ್ಮ ಶಿಕ್ಷಕ ನೀ ನಮ್ಮ ರಕ್ಷಕ ವಿಭಾ ಪುರೋಹಿತ್ ಓ ನಮ್ಮ ಶಿಕ್ಷಕನೀ ನಮ್ಮ ರಕ್ಷಕ ಮರೆಯಲೆಂತು ನಿನ್ನ ಸೇವೆಕರೆವ ಜ್ಞಾನ ಹಾಲ ಗೋವೆನಿನಗೆ ನಮ್ಮ ನಮನವುನಿನ್ನ ಅಡಿಗೆ ಸುಮನವು————ಧಾರವಾಡದ ಜಿ. ಎಸ್. ಕುಲಕರ್ಣಿ ಧಾರವಾಡದ ಜಿ.ಎಸ್ . ಕುಲಕರ್ಣಿ ಅವರ ಸಾಲುಗಳು ಇಲ್ಲಿ ನೆನೆಯಬಹುದು ಮನಃಪಟಲಕ್ಕೆ ಬಂದು ಅಚ್ಚೊತ್ತಿದ ಕೆಲವು ಘಟನೆಗಳನ್ನು ಬರೆಯದೇ ಇರಲಾಗುವುದಿಲ್ಲ.ಎಲ್ಲಿಂದಲೋ ಬಂದ ದಿವ್ಯ ಚೇತನ ಬೆನ್ನುತಟ್ಟಿ ಬರೆಯಲಾರಂಭಿಸಿತು.ಮೂವತ್ತು ವ ರ್ಷಗಳ ಹಿಂದೆ ಓಡಾಡಿದ ಜಾಗ,ಆಟವಾಡಿದ ಸ್ಥಳ,ಮಣ್ಣಿ ಗೆ,ಕಲ್ಲಿಗೆ ಅಕ್ಕರೆಯಿಂದ ಮುತ್ತಿಟ್ಟು ಆಡುತ್ತಿದ್ದ ಕುಂಟಾಟ ಒಂದಾದ ಮೇಲೊಂದು ನೆನಪಿನ ಪರದೆಯ ಮೇಲೆ ಮೂಡಿ ಬಂದವು.ನಾವು ಕಲಿತ ಶಾಲೆ,ಶಾಲಾಪ್ರಾಂಗಣ,ಆಟದ ಮೈದಾನಗಳೆಲ್ಲವು ನಮ್ಮನ್ನು ಕೈಬೀಸಿ ಕರೆಯುತ್ತಿದ್ದಂತೆ ಭಾಸ.ಅದೇ ಧ್ವಜಸ್ತಂಭ,ಹಿಂದೆ ರಾಷ್ಟ್ರೀಯ ಹಬ್ಬಗಳಂದು ಎದೆ ಉಬ್ಬಿಸಿ ನಿಂತು ಅತ್ತಿತ್ತ ಅಲ್ಲಾಡದೆ ‘ ಜನಗಣ ಮನ ‘ ಹಾಡಿ ಸೆಲ್ಯುಟ್ ಮಾಡಿದ್ದು .ಗೆಳೆಯ ಗೆಳತಿಯರೊಡನೆ ತುಂಟಾಟವಾಡಿದ ದಿನಗಳು ಕಣ್ಮುಂದೆ ತೇಲಿ ಹೋದವು. ಜ್ಞಾನಕ್ಕೆ ಹ್ಯಾಗೆ ಜಾತಿ ಮತ ಭಾಷೆಗಳ ತಾರತಮ್ಯವಿಲ್ಲ ವೋ,ಅದೇ ರೀತಿ ಬಾಲ್ಯ.ಬಾಲ್ಯ ಜೀವನಾವಸ್ಥೆಯ ಒಂದು ಅದ್ಭುತವಾದ ಘಟ್ಟ.ಎಲ್ಲರೊಡನೆ ಬೆರೆತು ಬಾಳಿದ,ಆಡಿ ದ ಸವಿ ಸವಿ ನೆನಪಿದೆ.ಈರ್ಷೆ,ಮತ್ಸರ ಎಂಬ ಪದಗಳೇ ಗೊತ್ತಿಲ್ಲದ ನಿರ‍್ಮಲ ಮನೋಭಾವ. ಮುಗ್ಧಮನ ಶುದ್ಧ ಮ ನ. ಅಂದಿನ ಪರಿಸರ ಎಷ್ಟೊಂದು ಸಕಾರಾತ್ಮಕ !ಸುತ್ತ ಮುತ್ತಲು ಧಾರ್ಮಿಕವಾಗಿ,ಸಾಂಸ್ಕೃತಿಕವಾಗಿ ಹಾಗೂ ಶೈಕ್ಷಣಿ ಕವಾಗಿ ಬೆಳವಣಿಗೆಯಾಗಲು ಸಂಪೂರ್ಣ ಹೇಳಿ ಮಾಡಿಸಿ ದಂತಹ ವಾತಾವರಣ. ಸರ್ವಸದ್ಗುಣಗಳನ್ನು ಹೊಂದಿದಂಥ ನನ್ನ ಬಾಲ್ಯ ಭೂಮಿ ಕೃಷ್ಣಾಪುರ,ಜಿ|| ಯಾದಗಿರಿ. ಮುಂದೊಂದುದಿನ ಅಲ್ಲಿಗೆ ಭೇಟಿ ಕೊಡುತ್ತೇನೆಂದು ನಾನು ಅಂದುಕೊಂಡಿರಲೇ ಇಲ್ಲ. ಫೆಬ್ರವರಿ ೧೫,೨೦೧೯ ಆ ಪುನರ್ಮಿಲನದ ಸುಸಂಧಿ.ಇಂಥಹ ಸದಾವಕಾಶವನ್ನು ಕಲ್ಪಿಸಿಕೊಟ್ಟ ಹಳೆಯ ವಿದ್ಯಾರ್ಥಿ ಸಂಘದ ರೂವಾರಿಗಳಿಗೆ ಮನದಲ್ಲಿ ಕೃತಜ್ಞತಾ ಭಾವವಿತ್ತು. ಬೆಂಗಳೂರಿನಿಂದ ಆ ಪುಣ್ಯ ಭೂಮಿಗೆ ಕಾಲಿಟ್ಟ ಕೂಡಲೇ ತಿರುಪತಿಗಿರಿವಾಸ ಶ್ರೀವೆಂಕ ಟೇಶನಂತೆ ಮೊದಲು ದರುಶನ ನೀಡಿದ್ದು ನಮ್ಮ ಸಮಾಜ ಪಾಠದ ಗುರುಗಳಾದ ರಾಮರೆಡ್ಡಿಯವರು.ಮನದಲ್ಲಿ ಉ ಲ್ಲಾಸ,ರೋಮಾಂಚನದೊಂದಿಗೆ ಪುಳಕಿತಗೊಂಡು ಅವರ ಪಾದಗಳಿಗೆ ನಮಸ್ಕರಿಸಿದೆ. ಹಳೆಯ ವಿದ್ಯಾರ್ಥಿ ಸಂಘದಿಂದ ಹಮ್ಮಿಕೊಂಡಿದ್ದ ಕಾರ‍್ಯ ಕ್ರಮದ ರೂಪುರೇಷೆಯಂತೆ ಪ್ರಥಮವಾಗಿ ಗುರುವೃಂದ ವನ್ನು ಬಿಜಾಸ್ಪೂರ ಶಾಲೆಯಿಂದ ಕೃಷ್ಣಾಪುರ ಕ್ಯಾಂಪ್ ಶಾಲೆಗೆ ಮೆರವಣಿಗೆಯಲ್ಲಿ ಕರೆತರಲಾಯಿತು.ನೂರಾರು ವಿ ದ್ಯಾರ್ಥಿಗಳು,ಊರಿನಜನರು ಹಾಗೂ ಗುರುಗಳು,ಕಡು ಬಿಸಿಲಿನ ಶಾಖವನ್ನು ಮರೆತು ಗುರುವಂದನೆಯ ಧನ್ಯತೆ ಯ ತಂಪನ್ನು ಸವಿಯುತ್ತ ಹೆಜ್ಜೆಹಾಕಿದರು.ಇದರೊಂದಿಗೆ ಗ್ರಾಮೀಣ ಸೊಗಡಿನ ಡೊಳ್ಳು ಕುಣಿತವು ಸರ್ವರಕಣ್ಮನ ತಣಿಸಿತು. ವಿಶಾಲವಾದ ಶಾಲಾ ಪ್ರಾಂಗಣ ಗುರುವಂದನಾ ಕಾರ‍್ಯಕ್ರ ಮದ ಮೆರವಣಿಗೆಗೆ ಹಾತೊರೆಯುತ್ತಿದ್ದಂತೆ ಕಂಡಿತು. ಪ್ರತಿ ಯೊಬ್ಬರಿಗೂ ಮಂದಹಾಸ ಬೀರಿ ಮಡಿಲಲ್ಲಿ ಕೂರಿಸಿಕೊಂ ಡಿತು ನಮ್ಮ ತರಗತಿಗೆ ಕಲಿಸಿದ ಗುರುಗಳು ಕೇವಲ ನಾಲ್ಕು ಜನ ಮಾತ್ರ ಹಾಜರಿದ್ದರು.ಉಳಿದವರು ನಮ್ಮನ್ನಗಲಿದ್ದಾ ರೆಂದು ತಿಳಿದು ತುಂಬ ನೋವಾಯಿತು.ಇನ್ನೊಮ್ಮೆ ಅವರ ದರ್ಶನ ಸಾಧ್ಯವಾಗಲಿಲ್ಲವೆಂದು ಮನ ಕೊರಗಿತು.ಗುರು ವೃಂದಕ್ಕೆ ಸನ್ಮಾನಿಸಲಾಯಿತು.ನಂತರ ಗುರುಗಳೆಲ್ಲರು ತಾವು ಅನು ಭವಿಸಿದ ಬದುಕಿನ ಸತ್ವಯುತ ನುಡಿಗಳನ್ನಾಡಿ ಸಭೆಯನ್ನು ಮೂಕ ವಿಸ್ಮಿತಗೊಳಿಸಿದರು. ಅಪಾರ ಜೀವನಾನುಭವ ವುಂಡವ ಅವರ ಕಣ್ಣುಗಳು ಒದ್ದೆಯಾದವು. ಹನಿ ಹನಿ ನೆನ ಪಿನ ಬುತ್ತಿಯನ್ನು ಸವಿಸವಿಯಾಗಿ ಹೃದಯ ತುಂಬಿ ಹಂಚಿಕೊಂಡರು. ಈ ವೇದಿಕೆಯಲ್ಲಿ ಮತ್ತೊಂದು ಅಪರೂಪದ ಕ್ಷಣ ನಮಗೆಲ್ಲ ಕಾದಿತ್ತು.ನಮ್ಮ ಹಿರಿಯ ಗುರುಗಳಾದ ಶ್ರೀ ರಾಮರೆಡ್ಡಿಯ ವರ ಪುಸ್ತಕದ ಬಿಡುಗಡೆ ಸಮಾರಂಭ. ಪುಸ್ತಕದ ಹೆಸರು“ ಚೌಚೌಇಂಗ್ಲೀಷ “.ಇದರಲ್ಲಿ ನಾನು ಗ್ರಹಿಸಿದಂತೆ ಮೂರು ವಿಶೇಷತೆಗಳಿವೆ.ಮೊದಲನೆಯದಾಗಿ ಪುಸ್ತಕದ ಮುನ್ನುಡಿ ಶಿಷ್ಯನಿಂದ ಬರೆಯಲ್ಪಟ್ಟಿರುವುದು.ಎರಡನೇಯದಾಗಿ ಪುಸ್ತಕವು ಲೋಕಾರ್ಪಣೆಗೊಂಡಿದ್ದು ಅವರ ವಿದ್ಯಾರ್ಥಿಗಳ ಹಸ್ತದಿಂದಲೇ,ಹಾಗೂ ಮೂರನೇಯದು ಆಂಗ್ಲಭಾಷೆ ಯನ್ನು ‘ ಕಬ್ಬಿಣದಕಡಲೆ ‘ ಎಂದು ಭಾವಿಸುವ ಸರಕಾರಿ ಕನ್ನಡ ಶಾಲೆಯ ಮಕ್ಕಳಿಗೆ ನೀರುಕುಡಿದಷ್ಟೇ ಸುಲಭವಾಗಿ ತಿಳಿಯುವಂತಿರುವ ವಿವರಣಾ ಶೈಲಿ. ಇಳಿವಯಸ್ಸಿನಲ್ಲೂ ರಾಮರೆಡ್ಡಿ ಗುರುಗಳ ಉತ್ಸಾಹ ಮೆಚ್ಚುವಂಥದ್ದು.ಇಂಥ ಗುರುಗಳಿಗೆ ಶಿಷ್ಯರಾದ ನಾವೇ ಧನ್ಯರು. ಭಾವಸಾಗರದಲ್ಲಿ ತೇಲಿ ಹೋದ ನಮ್ಮನ್ನು ಹೊಟ್ಟೆಯು ತಾಳ ಹಾಕಿ ಬಡಿದೆಬ್ಬಿಸಿತು.ಹಸಿವನ್ನು ತಣಿಸಲು ‘ಜಲೀಲ ಮತ್ತು ತಂಡದವರು’ ಸಜ್ಜಾಗಿನಿಂತಿದ್ದರು.ಶಾಲೆಯ ಪವಿತ್ರ ಮಂದಿರದಲ್ಲಿಯಾವತಾರತಮ್ಯವಿಲ್ಲದೇ ಸಾಲಾಗಿ ಕುಳಿತು ಒಟ್ಟಾಗಿಊಟಮಾಡಿದೆವು.ತಾಯಿಯ ಮಡಿಲಲ್ಲಿ ಕೂತು ಉಂಡಂತೆ ಅನುಭವವಾಯಿತು.ಇದು ಬರಿ ಶಾಲೆಯಲ್ಲ ಮಾತೃಶಾಲೆಯೆಂದೆನಿಸಿತು.ಬಾಲ್ಯದ ಶಾಲಾದಿನಗಳನ್ನು ಮೆಲುಕು ಹಾಕಿಸುವ ಇಂಥ ಗುರುವಂದನಾ‌ ಕಾರ‍್ಯಕ್ರಮ ‘ನ ಭೂತೋ ನ ಭವಿಷ್ಯತಿ’ ಅಂದರೆ ಅತಿಶಯೋಕ್ತಿಯಾಗ ಲಾರದು. ಕನ್ನಡಮಾದ್ಯಮ ಸರಕಾರಿ ಶಾಲೆ ಎಂದು ಕಡೆಗೆಣಿಸುವವರಿಗೆ ಕೃಷ್ಣಾಪುರ (ಬಿಜಾಸ್ಪೂರ) ಶಾಲೆ ಆದರ್ಶಪ್ರಾಯವಾ ಗಿದೆ.ಈ ಶಾಲೆಯಿಂದಕಲಿತ ವಿದ್ಯಾರ್ಥಿಗಳು ಪ್ರತಿಯೊಂದು ರಂಗದಲ್ಲಿ ಉನ್ನತಿ ಪಡೆದ್ದಿದ್ದಾರೆ.ಅಭಿಯಂತರರು,ವೈದ್ಯ ರು,ಉಪನ್ಯಾಸಕರು,ಶಿಕ್ಷಕರು,ಪತ್ರಕರ್ತರು,ಸಾಹಿತಿಗಳು,ಆರಕ್ಷಕರು,ಸಮಾಜಸೇವಕರು,ಸೈನಿಕರು ಇತ್ಯಾದಿ ಹೀಗೆ ದೇಶ ಕಾಯುವ ಮತ್ತು ದೇಶ ಕಟ್ಟುವ ಕ್ಷೇತ್ರದಲ್ಲಿ ಸೇವೆ ಸ ಲ್ಲಿಸುತ್ತಿದ್ದಾರೆ.ಎಲ್ಲಕ್ಕಿಂತ ಮಿಗಿಲಾಗಿ ತಮ್ಮ ಬದುಕನ್ನು ತಾ ವೇ ಸಮರ್ಥವಾಗಿ ಸಾಗಿಸಲು ದೃಢವಾದ ನೆಲೆಯನ್ನು ಕಂ ಡುಕೊಂಡಿದ್ದಾರೆ.ಇಂಥ ಸರಕಾರಿ ಶಾಲೆಗಳೇ ಸಮಾಜದ ಇಂದಿನ ಅವಶ್ಯಕತೆಯೂ ಸಹ. . **************************************************

ಓ ನಮ್ಮ ಶಿಕ್ಷಕ ನೀ ನಮ್ಮ ರಕ್ಷಕ Read Post »

ಇತರೆ

ಕಸಾಪಗೆ ಮಹಿಳಾ ಅಧ್ಯಕ್ಷರು

ಚರ್ಚೆ ಕಸಾಪಗೆ ಮಹಿಳಾ ಅಧ್ಯಕ್ಷರು ಒಂದು ಚರ್ಚೆ ಮೆಲ್ಕಂಡವಿಷಯವಾಗಿ ಸಂಗಾತಿ ಪತ್ರಿಕೆ ಕನ್ನಡದ ಬರಹಗಾರರಿಗೆ ಕೆಲವು ಪ್ರಶ್ನೆಗಳನ್ನು ಹಾಕಿತ್ತು ಅದಕ್ಕೆ ಬಂದ ಉತ್ತರಗಳನ್ನು ಇಲ್ಲಿ ಒಂದೊಂದಾಗಿಪ್ರಕಟಿಸಲಾಗುತ್ತಿದೆ. ಸಂಗಾತಿ ಕೇಳಿದ ಪ್ರಶ್ನೆಗಳು ಪ್ರಶ್ನೆ ಒಂದು,ಇದಕ್ಕಿರುವ ಕಾರಣಗಳೇನು?ಇದನ್ನು ಹೇಗೆ ವಿಶ್ಲೇಷಿಸುತ್ತೀರಿ? ಪ್ರಶ್ನೆ ಎರಡು,ಸಮಾನತೆಯ ಈ ಯುಗದಲ್ಲಿ ಮಹಿಳೆಯೊಬ್ಬರು ಅಧ್ಯಕ್ಷರಾಗುವುದು ಸಾದ್ಯವೆಂದು ನಂಬುವಿರಾ?ಸಾದ್ಯವೆಂದಾದರೆ ಹೇಗೆ? ಪ್ರಶ್ನೆ ಮೂರು,ಮಹಿಳೆಯೊಬ್ಬರು ಅಧ್ಯಕ್ಷರಾಗದಂತೆ ತಡೆಯುವ ಶಕ್ತಿಗಳನ್ನು ಹೇaaಗೆ ಎದುರಿಸಬಹುದು? ಪ್ರಶ್ನೆ ನಾಲ್ಕು, ಮಹಿಳೆಗೆ ಈ ಅಧ್ಯಕ್ಷಸ್ಥಾನ ಮೀಸಲಾತಿ ರೂಪದಲ್ಲಿ ಸಿಗಬೇಕೆಂದು ಬಯಸುವಿರಾ ಇಲ್ಲ ಚುನಾವಣೆಯ ಮೂಲಕವೇ ದೊರೆಯಬೇಕೆಂದು ಬಯಸುವಿರಾ? ಪ್ರಶ್ನೆ ಐದು, ಈ ನಿಟ್ಟಿನಲ್ಲಿ ಮಹಿಳಾ ಅಧ್ಯಕ್ಷರ ಪರ ಒಲವಿರುವ ಪುರುಷ ಮತ್ತು ಮಹಿಳೆಯರು ಯಾವ ರೀತಿಯ ಹೆಜ್ಜೆಗಳನ್ನು ಇಡಬೇಕು ವಿನುತಾ ಹಂಚಿನಮನಿ ಸ್ಥಾಪನೆಯಾಗಿ ಶತಮಾನಗಳಾದರು ರಾಜ್ಯ ಕಸಾಪಗೆ ಮಹಿಳೆಯೊಬ್ಬರು ಇದುವರೆಗು ಅದ್ಯಕ್ಷರಾಗಿಲ್ಲ‌. ಪ್ರಶ್ನೆ ಒಂದು,ಇದಕ್ಕಿರುವ ಕಾರಣಗಳೇನು?ಇದನ್ನು ಹೇಗೆ ವಿಶ್ಲೇಷಿಸುತ್ತೀರಿ? ಮಹಿಳೆಯರ ಅನಾಸಕ್ತಿ, ಹಿಂಜರಿತ ಮೊದಲನೆಯದಾದರೆ, ಪುರುಷರ ಅಧಿಕಾರಿಶಾಹಿ ಪ್ರವೃತ್ತಿ ಎರಡನೆಯದು. ಮಹಿಳೆ ಯಾವತ್ತೂ ಹೋರಾಟ ಮಾಡಿಯೇ ಹಕ್ಕುಗಳನ್ನು ಪಡೆದಿರು ಇತಿಹಾಸವಿರುವಾಗ ಈಗ ಈ ಕ್ಷೇತ್ರದಲ್ಲಿ ಅಂತಹ ಕಾಲ ಬಂದಿದೆ. ಮನೆ ಮಕ್ಕಳು ಅಂತ ತನ್ನ ಚಿಪ್ಪಿನಲ್ಲಿ ಜವಾಬ್ದಾರಿಯನ್ನು ನಿರ್ವಹಿಸುವವಳು ಹೊರಗಿನ ಲೋಕದಲ್ಲಿಯೂ ಸಮಾನತೆಯನ್ನು ಕೇಳುತ್ತಿರುವುದು ಒಳ್ಳೆಯ ಬೆಳವಣಿಗೆ. ಪ್ರಶ್ನೆ ಎರಡು,ಸಮಾನತೆಯ ಈ ಯುಗದಲ್ಲಿ ಮಹಿಳೆಯೊಬ್ಬರು ಅದ್ಯಕ್ಷರಾಗುವುದು ಸಾದ್ಯವೆಂದು ನಂಬುವಿರಾ?ಸಾದ್ಯವೆಂದಾದರೆ ಹೇಗೆ? ಸಮಾನತೆಯ ಈ ಯುಗದಲ್ಲಿ ಮಹಿಳೆ ಅಧ್ಯಕ್ಷೆಯಾಗುವುದು ಹೆಚ್ಚು ಸೂಕ್ತ. ಸಾಹಿತ್ಯದಂತಹ ಸೃಜನಶೀಲ ಕ್ಷೇತ್ರದಲ್ಲಿ ಮಹಿಳೆಯ ಭಾವನಾತ್ಮಕ ವ್ಯಕ್ತಿತ್ವ ಹೆಚ್ಚು ಕ್ರಿಯಾಶೀಲತೆಯನ್ನು ಪಡೆಯಬಹುದು. ಅವಳ ಹೋರಾಟದ ಮನೋಭಾವ, ಪ್ರಾಮಾಣಿಕತೆ ಕನ್ನಡ ಸಾಹಿತ್ಯ ಲೋಕದ ಸ್ತ್ರೀಯರಿಗೆ ನ್ಯಾಯ ಒದಗಿಸಬಹುದು. ಪ್ರಶ್ನೆ ಮೂರು,ಮಹಿಳೆಯೊಬ್ಬರು ಅದ್ಯಕ್ಷರಾಗದಂತೆ ತಡೆಯುವ ಶಕ್ತಿಗಳನ್ನು ಹೇಗೆ ಎದುರಿಸಬಹುದು? ಮಹಿಳೆ ಅಧ್ಯಕ್ಷೆಯಾಗದಂತೆ ತಡೆಯುವ ಸ್ವಾರ್ಥಶಕ್ತಿಗಳಿಗೆ ಮಹಿಳೆಯರ ಕೃತ್ತುತ್ವ ಶಕ್ತಿಯನ್ನು ಮನವರಿಕೆ ಮಾಡಿಕೊಡಬೇಕು. ಅವಳ ಸಾಹಿತ್ಯದ ಜ್ಞಾನ, ಸಂಘಟನಾ ಶಕ್ತಿ, ನ್ಯಾಯಪರತೆಗಳನ್ನು ಸಾಕ್ಷ್ಯಸಹಿತ ತೋರಿಸಿಕೊಡಬೇಕು. ಅದಕ್ಕಾಗಿ ಮಹಿಳೆ ತನ್ನ ಸಮಯ ಮೀಸಲಾಗಿಡಬೇಕು. ಪ್ರಶ್ನೆ ನಾಲ್ಕು, ಮಹಿಳೆಗೆ ಈ ಅದ್ಯಕ್ಷಸ್ಥಾನ ಮೀಸಲಾತಿ ರೂಪದಲ್ಲಿ ಸಿಗಬೇಕೆಂದು ಬಯಸುವಿರಾ ಇಲ್ಲ ಚುನಾವಣೆಯ ಮೂಲಕವೇ ದೊರೆಯಬೇಕೆಂದು ಬಯಸುವಿರಾ? ಮಹಿಳೆಗೆ ಅಧ್ಯಕ್ಷ ಸ್ಥಾನ ಚುನಾವಣೆಯ ಮೂಲಕ ದೊರೆಯಬೇಕು. ಮಹಿಳೆ ಸಮಾನತೆಗಾಗಿ ಕೇಳುತ್ತಿರುವಾಗ ಮೀಸಲಾತಿಯ ಭಿಕ್ಷೆ ಅವಮಾನಕರ. ನಮ್ಮ ಪ್ರತಿಭೆ ನಮ್ಮ ಗುರುತಾಗಿರುವಾಗ ಮೀಸಲಾತಿಯಂತಹ ದಯಾಭಿಕ್ಷೆ ಯಾಕೆ ಬೇಕು? ಪ್ರಶ್ನೆ ಐದು, ಈ ನಿಟ್ಟಿನಲ್ಲಿ ಮಹಿಳಾ ಅದ್ಯಕ್ಷರ ಪರ ಒಲವಿರುವ ಪುರುಷ ಮತ್ತು ಮಹಿಳೆಯರು ಯಾವ ರೀತಿಯ ಹೆಜ್ಜೆಗಳನ್ನು ಇಡಬೇಕು ಸರಿಯಾದ ವ್ಯಕ್ತಿಯನ್ನು ಹುಡುಕಿ ಪ್ರೇರಪಿಸಬೇಕು. ಅವರ ಸಾಧನೆಯ ದಾರಿಗೆ ದೀಪವಾಗಬೇಕು, ಕಣ್ಣಾಗಬೇಕು.ಸ್ವಲ್ಪ ಮಟ್ಟಿಗೆ ತ್ಯಾಗ ಹೊಂದಾಣಿಕೆಯನ್ನು ಮನೆಯವರೊಂದಿಗೆ ಮಾಡಿಕೊಳ್ಳಬೇಕು. ಸಮಾಜದಲ್ಲಿ ಜನ ಮನದ ಧ್ವನಿಯಾಗಿ ಆಗು ಹೋಗುಗಳ ಮೇಲೆ ಬೆಳಕು ತೂರಿ ಸಾಹಿತ್ಯಲೋಕದಲ್ಲಿ ನಡೆಯುತ್ತಿರುವ ಪಕ್ಷಪಾತದಂತ ಅನ್ಯಾಯಗಳ ವಿರುದ್ಧ ಸೆಣಸಾಡುವ ಶಕ್ತಿಯನ್ನು ಗುಂಪುಗಳ ಅಂದರೆ ಸಂಘ ಸಂಸ್ಥೆಗಳ ಮೂಲಕ ಸಂಬಂಧ ಪಟ್ಟವರ ಗಮನಕ್ಕೆ ತರಬೇಕು. ಸಮಾಜಸೇವೆಯಲ್ಲಿ ತೊಡಗಿರುವ ಸಾಹಿತಿ, ಲೇಖಕಿ ಅಥವಾ ನ್ಯಾಯಾಂಗದಲ್ಲಿ ಇಲ್ಲವೆ ಶಿಕ್ಷಣ ಸಂಸ್ಥೆಗಳಲ್ಲಿ ಸಮಾಜಪರ ಕೆಲಸಗಳಲ್ಲಿ ತೊಡಗಿರುವ ಮಹಿಳೆ ಇದಕ್ಕೆ ನ್ಯಾಯ ಒದಗಿಸಬಲ್ಲರು. ಈ ಕ್ಷೇತ್ರದ ಜನ ಅವಳನ್ನು ಅವಳ ಚಟುವಟಿಕೆ, ಬರವಣಿಗೆಗಳ ಮೂಲಕ ಗುರುತಿಸುವಂತಿರಬೇಕು. *****************************************************

ಕಸಾಪಗೆ ಮಹಿಳಾ ಅಧ್ಯಕ್ಷರು Read Post »

ಇತರೆ, ಪ್ರಬಂಧ

ಫ್ಲೈಟ್ ತಪ್ಪಿಸಿದ ಮೆಹೆಂದಿ

ಪ್ರಬಂಧ    ಫ್ಲೈಟ್ ತಪ್ಪಿಸಿದ  ಮೆಹೆಂದಿ ಸುಮಾ ವೀಣಾ                                         ಫ್ಲೈಟ್  ರಾತ್ರಿ ಹತ್ತು ಗಂಟೆಗೆ ಅಂದುಕೊಂಡು ಬೆಳಗ್ಗೆ 6 ಗಂಟೆಗೆಎದ್ದು  ವಿದೇಶೀ ಲಲನೆಯರಿಗಿಂತ ನಾವೇನು ಕಡಿಮೆ ನಾವೂ ಹೇರ್ ಕಲರ್ ಮಾಡಿಕೊಳ್ಳೋಣ  ಎನ್ನುತ್ತಲೇ ನಾನು ನನ್ನ ತಮ್ಮನ ಹೆಂಡತಿ ಶಾಲಿನಿ ಇಬ್ಬರೂ ಮೆಹೆಂದಿ ಕಲೆಸಿ ತಲೆಗೆ ಮೆತ್ತಿಕೊಂಡೆವು.  ಫಿಲ್ಟರ್ ಕಾಫಿ ಹೀರುತ್ತಾ   ಹರಟುತ್ತಿರಬೇಕಾದರೆ ನಮ್ಮ ಮೊಬೈಲಿಗೆ ಮೆಸೇಜ್  ಮಹಾಶಯ ಬಂದು “ನನ್ನನ್ನು ಒಮ್ಮೆ ನೋಡುವಿರಾ! ನೋಡುವಿರಾ!” ಎಂದು ವಿನಂತಿಸಿಕೊಳ್ಳಲಾರಂಭಿಸಿದ. ಹಾಗೆ  ತಲೆಯನ್ನೊಮ್ಮೆ ನೇವರಿಸಿಕೊಂಡರೆ ಮೆಹೆಂದಿ ಕೈಗೆಲ್ಲಾ ತಾಗಿ ಇರಿಸು ಮುರಿಸಾಯಿತು.  ಆದರೂ ಬಿಡದೆ ಮೊಬೈಲನ್ನೊಮ್ಮೆ ತೀಡಿದೆವು. ಆ ಮೆಸೇಜ್  ಮಹಾಶಯ ನಮ್ಮನ್ನೇ ಗುರಾಯಿಸುವಂತಿದ್ದ. ಅವನನ್ನು ಓದಿದರೆ ಅವನು ನಮ್ಮ ಫಾರಿನ್ ಟೂರ್ ಕುರಿತೇ ಎಚ್ಚರ  ನೀಡಿದಂತೆ ಇತ್ತು. ಫ್ಲೈಟ್  ಬೆಳಗ್ಗೆ ಹತ್ತು ಗಂಟೆಗೇ ಎಂದಿತ್ತು.   ನಾನು ಶಾಲಿನಿ ಇಬ್ಬರೂ ತಡಬಡಾಯಿಸಿಕೊಂಡು ಕಾಫಿಮಗ್ ಅನ್ನು ಕೆಳಕ್ಕೆ  ಕುಕ್ಕರಿಸಿ  “ಇನ್ನು ಹೊರಡಲು ಹೆಚ್ಚಿಗೆ ಸಮಯವೇನು ಉಳಿದಿಲ್ಲ! ಹೊರಡೋಣ! ಹೊರಡೋಣ!” ಎಂದು ಕೈ ಸನ್ನೆ ಮಾಡಿಕೊಂಡೆವು. ಮಾತನಾಡುವುದಕ್ಕೆ ಸಮಯವಿರಲಿಲ್ಲ ರಾತ್ರಿಯೇ ಲಗೇಜ್ ಪ್ಯಾಕ್  ಮಾಡಿಕೊಂಡಿದ್ದರೆ ಬಹುಶಃ ಗಾಬರಿಯಾಗುತ್ತಿರಲಿಲ್ಲವೇನೋ…..?? “ರಾತ್ರಿ ಹತ್ತು ಗಂಟೆಗಲ್ಲವ ಫ್ಲೈಟ್” ಎಂದು ಹರಟುತ್ತಿದ್ದೆವು. ಮೆಸೇಜ್ ಮಹಾಶಯ ಎಚ್ಚರಿಸದೇ ಇರದಿದ್ದರೆ ನಾವು ಇನ್ನೂ ಹಾಗೆ ಇರುತ್ತಿದ್ದವೋ ಏನೋ??  ಏರ್ಪೋರ್ಟಿಗೆ ಟ್ಯಾಕ್ಸಿಯಲ್ಲೇ ಹೋಗೋಣ  ಎಂದು ಟ್ಯಾಕ್ಸಿಯನ್ನೂ ಬುಕ್ ಮಾಡಿ ಕರೆಸಿಕೊಂಡೆವು. ಸೂಟ್ಕೇಸ್ನಲ್ಲಿ ಬಟ್ಟೆಗಳನ್ನು , ಟ್ರಾವಲಿಂಗ್  ಬ್ಯಾಗ್ನಲ್ಲಿ ತಿಂಡಿತೀರ್ಥಗಳನ್ನು ತುರುಕಿಕೊಂಡು ಟ್ಯಾಕ್ಸಿ ಹತ್ತಿ ಹೊರಟೆವು. ಟ್ಯಾಕ್ಸಿ  ಏರ್ಪೋರ್ಟ್ ಪ್ರವೇಶಿಸಿದೊಡನೆ ದಢಕ್ಕನೆ ನಿಂತಿತು. ಸಧ್ಯ! ವಾರಕ್ಕೆ ಮೊದಲೇ ಟಿಕೇಟ್ ಪ್ರಿಂಟ್ ಅವ್ಟು, ಪಾಸ್ಪೋರ್ಟ, ವೀಸಗಳನ್ನು ಬೇರೊಂದು ಬ್ಯಾಗಿಗೆ ತುರುಕಿ ಇಟ್ಟಿದ್ದೆವು.  ಅದನ್ನೇ ಕ್ಯೂನಲ್ಲಿ ನಿಂತು ಬೀಗುತ್ತಾ ತೋರಿಸಿ “ನಮಗೆ ವಿಂಡೋ ಸೈಡ್ ಸಿಕ್ಕರೆ ಸಾಕು ವಿಂಗ್ ಹತ್ತಿರ ಬೇಡ” ಎಂದುಕೊಂಡೆವು. ಅಲ್ಲೇ ಏಕೋ ಕಸಿವಿಸಿಯಾಗಲು ಪ್ರಾರಂಭವಾಯಿತು.  ಅದಕ್ಕೆ ಕಾರಣ ಅಲ್ಲಿದ್ದವರು ಸೆಲಿಬ್ರಿಟಿಗಳನ್ನಲ್ಲ ಅಪರಾಧಿಗಳನ್ನು ಗಮನಿಸುವಂತೆ, ನೋಡುವಂತೆ, ಧಿಕ್ಕರಿಸುವಂತೆ ರೆಪ್ಪೆ ಬಡಿಯದೆ ನಮ್ಮನ್ನೇ ನೋಡುತ್ತಿದ್ದರು. ನಾನು ಶಾಲಿನಿ “ ನಾವು ಈಗಷ್ಟೆ  ಫಾರಿನ್  ಟೂರ್ ಹೊರಟಿರುವುದು.  ಇನ್ನು ಫಾರಿನ್ನವರಾಗಿಲ್ಲವಲ್ಲ “ಏಕೆ ಹೀಗೆ ನೋಡುತ್ತಾರೆ” ಅಂದುಕೊಂಡೆವು.      ಹಾಗೆ ಎರಡು ಹೆಜ್ಜೆ ಮುಂದೆ ಇಡುವಷ್ಟರಲ್ಲಿ ಯುವತಿಯೊಬ್ಬಳ ಭಾರೀ ಕನ್ನಡಕದಿಂದ  ಪ್ರೇರಿತರಾದ ನಾವು ತಂಪು ಕನ್ನಡಕವನ್ನು ಹುಡುಕಿ ಹಾಕಿಕೊಂಡವು. ತಲೆಯನ್ನೊಮ್ಮೆ ನೇವರಿಸಿಕೊಳ್ಳಬೇಕೆಂದಾಗಲೇ ನಮಗೆ ಹೊಳೆದದ್ದು ನಮ್ಮ  ತಲೆಯ ಮೆಹೆಂದಿಗೆ ಜಲಭಾಗ್ಯ ಕರುಣಿಸಿಲ್ಲವೆಂದು.  ಅಷ್ಟರಲ್ಲಾಗಲೇ ನಮ್ಮ ಕೈಗೆ ಬೋರ್ಡಿಂಗ್ ಪಾಸ್ ದೊರೆಯಿತು,. ಯಾವ ಲೌಂಜಿನಲ್ಲಿ ಕುಳಿತುಕೊಳ್ಳಬೇಕೆಂಬ ವಿವರ ಪಡೆದುಕೊಂಡೆವು. ಹಾಗೆ ಅತ್ತಿಗೆ ನಾದಿನಿಯರಿಬ್ಬರೂ  ಒಬ್ಬರ ಮುಖವನ್ನೊಮ್ಮೆ ನೋಡಿಕೊಂಡೆವು ನಗು ಬರಲಿಲ್ಲ. ನಮ್ಮ ಅವಾಂತರಕ್ಕೆ  ನಮ್ಮಿಬ್ಬರಿಗೂ ಸಿಟ್ಟು ಬರುತ್ತಿತ್ತು .ಲೌಂಜಿನಲ್ಲೊಮ್ಮೆ ನಮ್ಮ ಲಗೇಜನ್ನು ಕುಕ್ಕರಿಸಿ ವಾಶ್ ರೂಮಿಗೆ ದೌಡಿಟ್ಟೆವು  ಮೆಹೆಂದಿ ವಾಶ್ ಮಾಡಲೆಂದು.  ಎಲ್ಲರ ಕಣ್ಣು ನಮ್ಮ ಮೇಲೆಯೇ.  ಮನೆ ಅಲ್ಲವಲ್ಲ ಬೇಕಾದ ಹಾಗೆ ತಲೆತೊಳೆದುಕೊಳ್ಳಲು, ಇನ್ನು ಜನ್ಮಾಪಿ ಮೆಹೆಂದಿ ಸಹವಾಸ ಮಾಡುವುದಿಲ್ಲ ಎಂದು ಶಪಥ ಮಾಡಿ ಒಬ್ಬರ ತಲೆಯನ್ನು ಒಬ್ಬರು ಪರಸ್ಪರ ತೊಳೆದುಕೊಂಡು ತಕ್ಷಣ ಲೌಂಜಿನ ಕಡೆಗೆ ಓಡಿಬಂದೆವು . ನಮ್ಮ ಸಹಪ್ರಾಯಣಿಕರೆಲ್ಲಾ ಫ್ಲೈಟ್ ಹತ್ತಿದ್ದರು. ಸಮಯ ಹತ್ತಾಗುವ ಹಾಗಿತ್ತು  ನಮಗೆ ಮತ್ತೆ ಪ್ರಯಾಣಕ್ಕೆ ಅವಕಾಶವಿರಲಿಲ್ಲ. ಕೈಕೈ ಹಿಡಿದುಕೊಂಡು ಲಗೇಜ್ ಕಡೆ ಗಮನ  ಹರಿಸಿದೆವು ಅದೂ ಅಲ್ಲಿರಲ್ಲಿಲ್ಲ . ಫಾರಿನ್ ಪ್ರಯಣಕ್ಕೆ ವಿಘ್ನ ಬಂತು ! ಅಲ್ಲಿರುವವರೆಲ್ಲರೂ ನಮ್ಮನ್ನೇ ನೋಡುತ್ತಿದ್ದರು.  ನಮ್ಮ ಕೋಪ ನೆತ್ತಿಗೇರಿತ್ತು.  ಎಲ್ಲರನ್ನು ಸುಟ್ಟುರಿಯುವಂತೆ ನೋಡುವ ಹಾಗಾಯಿತು ಏರ್ಪೋರ್ಟ್ ಸಿಬ್ಬಂದಿಯ ಮೇಲೂ ರೇಗಾಡಲೂ ಪ್ರಾರಂಭಿಸಿದೆವು. ನೀರಿಗಿಳಿದ ಮೇಲೆ ಚಳಿಯೇನು? ಎಂಬಂತೆ ಕೈಗಳನ್ನು ಜೋರಾಗಿಯೇ ಬೀಸಿಕೊಂಡು ಕಿರುಚಾಡಲು ಪ್ರಾರಂಭಿಸಿದೆವು. ಆದರೆ ನನಗೆ ಗಂಟಲಲ್ಲಿ ಏನೋ ಹಿಡಿದ ಅನುಭವ ಆಗುತ್ತಿತ್ತು.  “ಮಮ್ಮಿ! ಮಮ್ಮಿ!  ನಾನು ಎದ್ದು ಹೊರಗೆ ಹೋಗ್ತೀನಿ ನೀವೇ ಲೈಟ್ ಆಫ್ ಮಾಡಿಕೊಳ್ಳಿ” ಎಂದು ಅಲ್ಲೇ ಇದ್ದ ಚಿನ್ನು ಎರಡೆರಡು ಬಾರಿ ಕಿರುಚಿದಾಗ ನನಗೆ ದೂರದಲ್ಲಿ ಯಾರೋ ಕರೆದಂತಾಯಿತು. ಮೂರನೆಯ ಬಾರಿ ಕಿರುಚಿದಾಗ ಎದ್ದು ಕುಳಿತೆ “ ಅಯ್ಯೋ ಫ್ಲೈಟ್ ಮಿಸ್ ಆಗಲಿಲ್ವ”, “ಫ್ಲೈಟ್ ಹೋಯ್ತು”, ಲಗೇಜ್” , ಮೆಹಂದಿ,  ಶಾಲಿನಿ…. ಮತ್ತೆ ಆ ಜಗಳ ಇತ್ಯಾದಿ ಇತ್ಯಾದಿ ನೆನಪು ಮಾಡಿಕೊಂಡು ಲೈಟ್ ನೋಡಿದ ಬಳಿಕ ನನಗೆ ಅರಿವಾಯ್ತು “ಅಯ್ಯೋ! ನಾನು ಕನಸು ಕಂಡಿದ್ದು! “ಎಂದು ಮತ್ತೆ ಮತ್ತೆ ಕನಸನ್ನು ನೆನಪು ಮಾಡಿಕೊಂಡು  ಹಾಗೆ ಮಲಗಿದ್ದೆ. ಮತ್ತೆ ಚಿನ್ನು “ವ್ಯಾನ್ ಬೇಗ ಬರುತ್ತೆ” ಎಂದು ಎಚ್ಚರಿಸಿದಳು.  ಮನಸ್ಸಿಲ್ಲದೆ ಎದ್ದು  ಕನಸಿನಲ್ಲಿ ಮಿಸ್ ಮಾಡಿಕೊಂಡ ಫ್ಲೈಟನ್ನು ನೆನಪಿಸಿಕೊಂಡು ಸ್ನಾನ ,ಪೂಜೆ ಮುಗಿಸಿ  ದೋಸೆ ಹಾಕಿ ತಿರುವಿ ಮತ್ತೆ ಬೇಯಿಸುತ್ತಾ ಹಾಟ್ ಬಾಕ್ಸ್ನೊಳಗೆ ಹಾಕುವಾಗಲೆ ಇನ್ನೂ ಹಳೆಯ ನೆನಪುಗಳು ,ಮರುಕಳಿಸುತ್ತಾ ಹೋದವು.  ಹೊಟ್ಟೆ ಹುಣ್ಣಾಗುವಂತೆ ನಗಲಾರಂಭಿಸಿದೆ. “ಯಾಕೆ? ಮಮ್ಮಿ ಒಬ್ಬರೇ ನಗುವುದು” ಎಂದು ಚಿನ್ನು ಕೇಳಿದಳು. “ಏನೋ ನೆನಪಾಯಿತು” ಅಂದೆ. “ಅದೇ ನಮ್ಮ ಸೋದರ ಮಾವ ಶ್ರೀನಿವಾಸ ತಾತ ಇದ್ರಲ್ಲ ಅವರು ನೆನಪಾದರು” ಎಂದು ಘಟನೆಯನ್ನು ಚುಟುಕಾಗಿ ಹೇಳಿದೆ.  “ನಯನನ ಮದುವೆ ಇನ್ನೆರಡು  ವಾರವಿತ್ತು ಮನೆಯಲ್ಲಿ ಎಲ್ಲರೂ ಮದುವೆ ಸಾಮಾಗ್ರಿ ಖರೀದಿಗೆಂದು ಹೋಗಿದ್ದರು, ಕಾಲಿಂಗ್ ಬೆಲ್ ಸದ್ದಾಯಿತು. ಸರಿ ಬಾಗಿಲು ತೆಗೆದರೆ ಶ್ರೀನಿವಾಸ ತಾತ ಅಲ್ಲಿದ್ದರು “ಬನ್ನಿ ಬನ್ನಿ” ಎಂದು ಅವರನ್ನು ಕೂರಿಸಿ ತಿಂಡಿಕಾಫಿ ಕೊಟ್ಟೆ ಆದರೆ ಅವರು  ತೆಗೆದುಕೊಳ್ಳುವ ಸ್ಥಿತಿಯಲ್ಲಿ  ಇರಲಿಲ್ಲ ಅವರ  ಮುಖದಲ್ಲಿ ಗಾಬರಿಯಿತ್ತು “ಮದುವೆಮುಂದಕ್ಕೆ ಹೋಯ್ತ’?   ಎಂದರು “ಇಲ್ಲ ಎಂದೆ ಮದುವೆ ನಿಂತು ಹೋಯ್ತ?”  ಎಂದರು “ಇಲ್ಲ!” ಎಂದೆ ಅಷ್ಟರಲ್ಲಿ  ಅಲ್ಲೇ ಟೇಬಲ್ ಮೇಲೆ ಇದ್ದ  ನಯನಳ ಮದುವೆ ಆಮಂತ್ರಣ ಪತ್ರಿಕೆ ನೋಡಿ ತಂತಾನೆ ನಗಲಾರಂಭಿಸಿದರು. ನನಗೆ ಗಾಬರಿ ಇದೇಕೆ ಹೀಗೆ” ಹುಷಾರಾಗೇ  ಇದ್ರಲ್ಲ ಅಂದುಕೊಂಡೆ ಸರಿ ! ನಾನು ಹೊರಡುವೆ  ಎಂದು ಎದ್ದು ನಿಂತು ಮನೆಯವರನ್ನೆಲ್ಲಾ ನಾನು ಕೇಳಿರುವುದಾಗಿ ತಿಳಿಸು ನಾನು ಇವತ್ತೆ ವರಪೂಜೆ ಅಂದುಕೊಂಡು ಬಂದೆ ಸರಿಯಾಗಿ ದಿನಾಂಕ ನೋಡಿರಲಿಲ್ಲ ಎಂದು ನಗುತ್ತಲೇ ಅವರಿಗಾದ ಮದುವೆ ದಿನಾಂಕ ಕುರಿತ ಗೊಂದಲವನ್ನು  ವಿವರಿಸಿದರು. ಪರವಾಗಿಲ್ಲ ಬಿಡಿ ಬರುವ ವಾರ  ಅತ್ತೆಯನ್ನೂ ಕರೆದುಕೊಂಡು ಬನ್ನಿ       ಎಂದೆ. ಇಲ್ಲ!  ಇಲ್ಲ! ನಾನು ಹೇಗೂ ಬಂದಿದ್ದೇನಲ್ಲಾ ಅವಳೇ ಮದುವೆಗೆ ಬರುತ್ತಾಳೆ   ಮದುವೆಗೆ ಎನ್ನುತ್ತಾ ನಗುತ್ತಲೇ ಹೊರಟರು” ಎಂದು ಹೇಳಿ ಮುಗಿಸಿಲ್ಲ. ಚಿನ್ನು ಮತ್ತೆ ಜೋರಾಗಿ ನಗಲಾರಂಭಿಸಿದಳು ಅರೆ…..!! ಅವರ್ಬಿಟ್ ಇವರ್ಬಿಟ್ ಅವರ್ಯಾರು ಅನ್ನೋಹಂಗೆ ನಿನಗೇನಾಯ್ತು? ಎಂದೆ.” ನಾನು ಮಧು ಬರ್ತಡೆ ಆದ ಮೇಲೆ ಅವರ ಮನೆಗೆ ಗಿಫ್ಟ್ ತೆಗೆದುಕೊಂಡು ಹೋಗಿದ್ದೆ ಅಲ್ವ” ಎಂದಳು. ಗಿಫ್ಟ್ ಹಿಡಿದುಕೊಂಡು ಅವರ ಮನೆ ಬಾಗಿಲು ಬಡಿದರೆ “ನಿನ್ನೆ ಕರೆದರೆ ಇವತ್ತು ಬಂದಿದ್ದೀಯ ಬಾ” ಎಂದು ಕರೆದು ಕೂರಿಸಿ ಸ್ವೀಟ್, ಕೇಕ್  ತಂದು ನನ್ನ ಮುಂದೆ  ಹಿಡಿದ. ತನ್ನ ತಪ್ಪನ್ನ ಇನ್ನೊಮ್ಮೆ ಹೇಳಲಾರದೆ ,ಮುರುಕು ಡಿಲೇಟೆಡ್ ವಿಶಸ್   ಹೇಳಿ  ಮನೆಗೆ ಬಂದೆ “  ಹೇಗ್ ಮಿಸ್ ಮಾಡಿಕೊಳ್ತಿವಿ ಅಲ್ವ? ಪರೀಕ್ಷೆ  ಟೈಮಲ್ಲಿ ಹೀಗಾದರೆ …..! ಎಂದು ಉದ್ಗಾರ  ಎಳೆದಳು.  “ ಅನುಭವವೇ ಗುರು ಅಂತ ಅದಕ್ಕೆ ಹೇಳೋದು” ಎಂದು ನಾನು ಹೇಳಿದೆ. ಇನ್ನು  ಮುಂದೆ ಯಾವುದೇ ಪರೀಕ್ಷೆ, ಪೂಜೆ, ವೃತ ಫಂಕ್ಷನ್ಗಳೇ ಇರಲಿ ಪಂಕ್ಚುವಲ್ ಆಗಿ ಹೋಗಬೇಕು, ಮೊಬೈಲ್ನಲ್ಲಿ  ಅಲರಾಂ ಸೆಟ್ ಮಾಡಿ ಆದರೂ ಸರಿ,  ಕ್ಯಾಲೆಂಡರ್ ನಲ್ಲಿ  ಗುರುತು ಮಾಡಿಯಾರೂ ಸರಿ, ವಾರ್ಡ್ರೋಬ್ಗಳ ಮೇಲೆ ಚೀಟಿ ಅಂಟಿಸದರೂ ಸರಿ” ಎಂದೆ  ಅದಕ್ಕೆ ಅವಳು” ಕ್ಯಾಲೆಂಡರಿನಲ್ಲೂ ಸರಿಯಾಗಿ ಬರೆಯಬೇಕು ಸೆಪ್ಟೆಂಬರ್ನಲ್ಲಿ ಹೋಗಬೇಕಾದ ಕಾರ್ಯಕ್ರಮದ  ವಿವರವನ್ನು ಅಕ್ಟೋಬರ್ನಲ್ಲಿ ಬರೆಯಬಾರದಷ್ಟೇ” ಎಂದಳು. ಇಬ್ಬರೂ ನಕ್ಕೆವು ಗಡಿಯಾರ ನೋಡಿದರೆ ಸ್ವಲ್ಪ ಹೆಚ್ಚೇ ಮುಂದೇ ಓಡಿದಂತಿತ್ತು. ನೆನಪಿನ ಮಡಿಕೆಗಳನ್ನು  ತೆರೆಯಲು ಈಗ ಸಮಯವಿಲ್ಲ ಎಂದು ಹೇಳುತ್ತಾ ನೆನಪಿನ ಬುತ್ತಿಯನ್ನು, ಚಿನ್ನುವಿಗೆ ಮದ್ಯಾಹ್ನಕ್ಕೆ ಬೇಕಾದ  ಬುತ್ತಿಯನ್ನು ಮುಚ್ಚಿ ಯಥಾಪ್ರಕಾರ ನಿತ್ಯದ ಕೆಲಸಗಳಲ್ಲಿ ನಿರತಳಾದೆ. ಆದರೆ ಕಂಡ ಕನಸು, ಫಾರಿನ್  ಹೋಗುವ ಆತುರದ ಕನಸು ಮತ್ತೆ ಮತ್ತೆ ನನ್ನನ್ನು ಪ್ರಶ್ನಿಸುತ್ತದೆ.  ಯಾವಾಗ   ಇನ್ನೊಮ್ಮೆ ಫ್ಲೈಟ್ ಹತ್ತುವುದು ಎಂದು? **************************************   

ಫ್ಲೈಟ್ ತಪ್ಪಿಸಿದ ಮೆಹೆಂದಿ Read Post »

ಇತರೆ

ಕಸಾಪಗೆ ಮಹಿಳಾ ಅಧ್ಯಕ್ಷರು

ಚರ್ಚೆ ಕಸಾಪಗೆ ಮಹಿಳಾ ಅಧ್ಯಕ್ಷರು ಒಂದು ಚರ್ಚೆ ಮೆಲ್ಕಂಡವಿಷಯವಾಗಿ ಸಂಗಾತಿ ಪತ್ರಿಕೆ ಕನ್ನಡದ ಬರಹಗಾರರಿಗೆ ಕೆಲವು ಪ್ರಶ್ನೆಗಳನ್ನು ಹಾಕಿತ್ತು ಅದಕ್ಕೆ ಬಂದ ಉತ್ತರಗಳನ್ನು ಇಲ್ಲಿ ಒಂದೊಂದಾಗಿಪ್ರಕಟಿಸಲಾಗುತ್ತಿದೆ. ಸಂಗಾತಿ ಕೇಳಿದ ಪ್ರಶ್ನೆಗಳು ಪ್ರಶ್ನೆ ಒಂದು,ಇದಕ್ಕಿರುವ ಕಾರಣಗಳೇನು?ಇದನ್ನು ಹೇಗೆ ವಿಶ್ಲೇಷಿಸುತ್ತೀರಿ? ಪ್ರಶ್ನೆ ಎರಡು,ಸಮಾನತೆಯ ಈ ಯುಗದಲ್ಲಿ ಮಹಿಳೆಯೊಬ್ಬರು ಅಧ್ಯಕ್ಷರಾಗುವುದು ಸಾದ್ಯವೆಂದು ನಂಬುವಿರಾ?ಸಾದ್ಯವೆಂದಾದರೆ ಹೇಗೆ? ಪ್ರಶ್ನೆ ಮೂರು,ಮಹಿಳೆಯೊಬ್ಬರು ಅಧ್ಯಕ್ಷರಾಗದಂತೆ ತಡೆಯುವ ಶಕ್ತಿಗಳನ್ನು ಹೇಗೆ ಎದುರಿಸಬಹುದು? ಪ್ರಶ್ನೆ ನಾಲ್ಕು, ಮಹಿಳೆಗೆ ಈ ಅಧ್ಯಕ್ಷಸ್ಥಾನ ಮೀಸಲಾತಿ ರೂಪದಲ್ಲಿ ಸಿಗಬೇಕೆಂದು ಬಯಸುವಿರಾ ಇಲ್ಲ ಚುನಾವಣೆಯ ಮೂಲಕವೇ ದೊರೆಯಬೇಕೆಂದು ಬಯಸುವಿರಾ? ಪ್ರಶ್ನೆ ಐದು, ಈ ನಿಟ್ಟಿನಲ್ಲಿ ಮಹಿಳಾ ಅಧ್ಯಕ್ಷರ ಪರ ಒಲವಿರುವ ಪುರುಷ ಮತ್ತು ಮಹಿಳೆಯರು ಯಾವ ರೀತಿಯ ಹೆಜ್ಜೆಗಳನ್ನು ಇಡಬೇಕು ಡಾ.ಪಾರ್ವತಿ ಜಿ.ಐತಾಳ್ ಮಹಿಳಾ ಅಧ್ಯಕ್ಷರು ಖಂಡಿತಾ ಬೇಕು …………………………………………. ಮಹಿಳೆಯರ ಸ್ಥಿತಿಗತಿಗಳು ಮೊದಲಿನಂತಿಲ್ಲ, ಅವರಿಗೆ ಬೇಕಾದಷ್ಟು ಸ್ವಾತಂತ್ರ್ಯ ಸಿಕ್ಕಿದೆ, ಶಿಕ್ಷಣ-ಉದ್ಯೋಗಾವಕಾಶಗಳು ಸಿಕ್ಕಿವೆ ಅನ್ನುತ್ತಾರೆ. ಸಾವಿರಾರು ವರ್ಷಗಳಿಂದ ಶೋಷಣೆ-ದಬ್ಬಾಳಿಕೆ, ಹಿಂಸೆ-ದೌರ್ಜನ್ಯಗಳಿಂದ ನಲುಗುತ್ತಲೇ ಬಂದಿರುವ ಹಿಂದಿನ ಕಾಲದ ಸ್ತ್ರೀಯರ ದುಸ್ಥಿತಿಗೆ ಹೋಲಿಸಿ ನೋಡಿದರೆ ಈ ಮಾತುಗಳು ನಿಜವೇ ಆದರೂ ಇವೆಲ್ಲವೂ ಹೊರನೋಟಕ್ಕೆ ಕಾಣುವ ಬದಲಾವಣೆಗಳು ಅಷ್ಟೆ. ಸ್ತ್ರೀಯರ ಇಂದಿನ ನಿಜಸ್ಥಿತಿಯ ಬಗ್ಗೆ ಸೂಕ್ಷ್ಮವಾಗಿ ಪರಿಶೀಲಿಸಿ ನೋಡಿ ತಿಳಿಯ ಬೇಕಾದುದು ಬಹಳಷ್ಟಿದೆ.          ಸದಾ ಸಾಮಾಜಿಕ ಸಮಾನತೆಯ ಬಗ್ಗೆ ಏರುಧ್ವನಿಯಲ್ಲಿ ಭಾಷಣ ಬಿಗಿಯುವ  ಅನೇಕರು ಸ್ತ್ರೀಯರಿಗೆ ಸಮಾನ ಸ್ಥಾನ ಕೊಡುವ ವಿಚಾರದಲ್ಲಿ ತೆರೆಯ ಹಿಂದೆ ಸರಿಯುತ್ತಾರೆ. ಯಾಕೆಂದರೆ ಅವರು ತಮ್ಮ ತಮ್ಮ ಮನೆಗಳಲ್ಲೇ ತಾಯಿ, ಹೆಂಡತಿ, ಮಗಳಂದಿರು ಅಕ್ಕ ತಂಗಿಯರನ್ನು  ಅಡುಗೆ ಕೆಲಸ, ಮನೆಗೆಲಸ ಮತ್ತು ಇನ್ನಿತರ ಹಲವಾರು ವಿಚಾರಗಳಲ್ಲಿ ಅಸಮಾನತೆಯ ನೆಲೆಯಲ್ಲೇ ನಡೆಸಿಕೊಳ್ಳುವವರಾಗಿರುತ್ತಾರೆ. ಇವೆಲ್ಲವೂ ಸಂಪ್ರದಾಯ-ಪದ್ಧತಿಗಳ ಹೆಸರಿನಲ್ಲೇ ನಡೆಯುತ್ತವೆ. ಹೆಂಗಸರು ಮಾಡುವ ಕೆಲಸಗಳನ್ನು ತಾವು ಮಾಡುವುದು ತಮ್ಮ ಘನತೆಗೆ ಕಡಿಮೆ ಎಂದು ತಿಳಿದುಕೊಳ್ಳುವ ಪುರುಷರು ಇಂದಿಗೂ ನಮ್ಮ ಸುತ್ತು ಮುತ್ತ ಇದ್ದಾರೆ. ವೇದಿಕೆಯ ಮೇಲೆ ಸಮಾನತೆಯ ಮಾತುಗಳನ್ನಾಡಿ ಮನೆಗೆ ಹೋದ ಕೂಡಲೇ ಹೆಂಗಸರ ಕೈಯಲ್ಲಿ ಸೇವೆ ಮಾಡಿಸಿಕೊಳ್ಳುವವರಿದ್ದಾರೆ. ಬೆರಳೆಙಿಕೆಯ ಮಂದಿ ಸ್ತ್ರೀಯರ ಬಗ್ಗೆ ಸಹಾನುಭೂತಿ ತೋರಿಸುವವರಿದ್ದರೂ ಅವರು ಸಮಾನ ಜವಾಬ್ದಾರಿಯನ್ನು ಹೊರಲು ಎಂದೂ ಸಿದ್ಧರಾಗುವುದಿಲ್ಲ. ಮನೆಯಲ್ಲೇ ಗಾಣದೆತ್ತಿನಂತೆ ದುಡಿಯುವ ಪೂರ್ಣಕಾಲಿಕ ಗೃಹಿಣಿಯಾದರೂ ಉದ್ಯೋಗದಲ್ಲಿದ್ದು ಇಮ್ಮಡಿ ಜವಾಬ್ದಾರಿಗಳನ್ನು ಹೊರುವ ಸ್ತ್ರಿಯಾದರೂ ಅವರನ್ನು ಪುರುಷರು ನಡೆಸಿಕೊಳ್ಳುವ ರೀತಿಯಲ್ಲಿ ಇನ್ನೂ ಬದಲಾವಣೆಯಾಗಿಲ್ಲ.   ರಾಜಕೀಯದಲ್ಲೂ ಅಷ್ಟೆ. ಸ್ತ್ರೀಯರಿಗೆ ೩೩% ಮೀಸಲಾತಿಯ ಪ್ರಶ್ನೆ ಇನ್ನೂ ಬಗೆಹರಿದಿಲ್ಲ.ಪಂಚಾಯತ್-ನಗರಸಭೆಗಳಲ್ಲಿ ಮಹಿಳೆಯರು ಸ್ಪರ್ಧಿಸಿ ಆಯ್ಕೆಗೊಳ್ಳುತ್ತಾರಾದರೂ ಆಡಳಿತ ಸೂತ್ರವನ್ನು ಪೂರ್ತಿಯಾಗಿ ಕೈಯೊಳಗಿಟ್ಟುಕೊಳ್ಳುವವರು ಬಹಳ ಕಡಿಮೆ. ಎಷ್ಟೋ ಸಲ ಅವರು ಪುರುಷರ ಕೈಗೊಂಬೆಗಳಾಗಿರುತ್ತಾರೆ.ಹೆಣ್ಣಿನ ಸ್ಥಾನಮಾನಗಳ ಸುತ್ತ ಸುತ್ತಿಕೊಂಡಿರುವ ಸಾಂಪ್ರದಾಯಿಕ ಕಟ್ಟುಪಾಡುಗಳೇ ಇದಕ್ಕೆ ಕಾರಣ. ತನ್ನ ದೈನಂದಿನ ಬದುಕಿನ ಜಂಜಾಟಗಳಿಂದ ದಣಿಯುವ ಆಕೆಗೆ    ಯಾವುದರಲ್ಲಿಯೂ ಆಸಕ್ತಿ ಉಳಿಯುವುದಿಲ್ಲ.    ವಿವಾಹ ಮತ್ತು ಕುಟುಂಬ ವ್ಯವಸ್ಥೆಗಳು ಭಾರತೀಯ ಸಂಸ್ಕೃತಿಯ ಜೀವಾಳ. ಅದು ಇವತ್ತಿನ ವರೆಗೆ ಜೀವಂತವಾಗಿದ್ದರೆ  ಮಹಿಳೆಯರ ಸಹನೆ, ತ್ಯಾಗ ಹಾಗೂ ಶರಣಾಗತಿಯ ಮನೋಭಾವಗಳೇ ಕಾರಣ. ಇಂದಿನ ಬದಲಾದ ವಾತಾವರಣದಲ್ಲಿ ಸಾಮಾಜಿಕ ಮತ್ತು ರಾಜಕೀಯ ಚಟುವಟಿಕೆಗಳಲ್ಲಿ ಸಕ್ರಿಯ ಪಾತ್ರ ವಹಿಸುವಲ್ಲಿ ಹೆಣ್ಣಿನ ಪಾಲಿಗೆ ಅಡ್ಡಿಯಾಗುವುದು ಇವೇ ವಿಷಯಗಳು. ಮನೆಗೆ ಬೇಕಾದ ಹಣ ಸಂಪಾದನೆ ಮಾಡುವವನೆಂದು ಎದೆಯುಬ್ಬಿಸಿ ಹೇಳುವ ಗಂಡಸರಿಗಿಂತ ದುಪ್ಪಟ್ಟು ಕೆಲಸಗಳನ್ನು ಮನೆಯಲ್ಲಿ ಮಾಡುವ ಮಹಿಳೆಯರು ಮನೆ-ಗಂಡ-ಮಕ್ಕಳಿಗಾಗಿ ತಮ್ಮ ಸಮಯ ಮತ್ತು ಶಕ್ತಿಗಳನ್ನು ಪೂರ್ತಿಯಾಗಿ ವ್ಯಯಿಸಬೇಕಾಗುತ್ತದೆ. ಕೌಟುಮಬಿಕ ಬದುಕಿನಿಂದ ದೂರ ಉಳಿಯುವ ಮಹಿಳೆಯರಿಗಷ್ಟೇ ಹೊರಗಿನ ಕೆಲಸಗಳಲ್ಲಿ ಭಾಗವಹಿಸುವುದು ಸುಲಭವಾಗುತ್ತದೆ.   ಸಾಹಿತ್ಯ ಕ್ಷೇತ್ರದಲ್ಲೂ ಅಷ್ಟೆ.ಮಹಿಳೆಯರು ಬರವಣಿಗೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಸುಮಾರು ಒಂದು-ಒಂದೂವರೆ ಶತಮಾನಗಳಷ್ಟೇ ಆಗಿವೆ. ಅದರಲ್ಲೂ ಇಂದು ಪುರುಷ ಸಾಹಿತಿಗಳಿಗೆ ಸಮನಾಗಿ ನಿಲ್ಲುವವರು ಬೆರಳೆಣಿಕೆಯಷ್ಟು ಮಾತ್ರ ಇದ್ದಾರೆ. ಇನ್ನು ಸಭೆ-ಸಮ್ಮೇಳನಗಳನ್ನು ನೋಡಿದರೆ ವೇದಿಕೆಯಲ್ಲಿ ಹತ್ತರಲ್ಲಿ ಒಂಬತ್ತು ಮಂದಿಯೂ ಪುರುಷರೇ ಆಗಿರುತ್ತಾರೆ. ವೆದಿಕೆಯ ಒಂದು ಬದಿಯಲ್ಲಿ ನಿಂತು ಪ್ರಾರ್ಥನೆ ಹಾಡುವುದೋ ಸ್ವಾಗತಿಸುವುದೋ ಕಾರ್ಯಕ್ರಮ ನಿರೂಪಿಸುವುದೋ ಮುಂತಾದ ಚಿಲ್ಲರೆ ಕೆಲಸಗಳಿಗೆ ಮಹಿಳೆಯರ ಪಾತ್ರ ಸೀಮಿತವಾಗಿರುತ್ಯದೆ. ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪನೆಯಾಗಿ ನೂರು ವರ್ಷಗಳು ಕಳೆದರೂ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪಟ್ಟ ಸಿಕ್ಕಿದ ಮಹಿಳೆಯರು ಒಬ್ಬರೋ ಇಬ್ಬರೋ ಮಾತ್ರವೆಂದರೆ ಏನರ್ಥ?  ಸಿಕ್ಕುವ ಎಲ್ಲಾ ಅಧಿಕಾರ-ಅವಕಾಶಗಳನ್ನು ಬಾಚಿಕೊಳ್ಳಲು ಪುರುಷ ವರ್ಗವೇ ಹೊಂಚು ಹಾಕುತ್ತಿರುವಾಗ ಮೊದಲೇ ಬಸವಳಿದು ತನಗೇನೂ ಬೇಡವೆಂದು ದೂರ ನಿಲ್ಲುವ ಮಹಿಳೆಯರಿಗೆ ಸ್ಥಾನಮಾನಗಳು ಸಿಗುವುದಾದರೂ ಹೇಗೆ?   ಹೌದು. ನಮ್ಮಲ್ಲಿ ಪ್ರತಿಭಾವಂತ ಮಹಿಳೆಯರು, ಪ್ರಾಮಾಣಿಕವಾಗಿ ಕೆಲಸ ಮಾಡಬಲ್ಲವರು ಸಾಕಷ್ಟು ಮಂದಿ ಇದ್ದಾರೆ. ಅಂಥವರು ಕನ್ನಡ ಸಾಹಿತ್ಯ ಪರಿಷತ್ತಿನಂಥ ಸಂಸ್ಥೆಗಳ ಅಧ್ಯಕ್ಷ ಪದವಿಗೆ ಏರಬೇಕು. ಮನೆಯಲ್ಲಿ ತನ್ನ ದುಡಿಮೆಯನ್ನು ಗುರುತಿಸುವವರಿಲ್ಲದಿದ್ದರೂ ನಿಸ್ವಾ ರ್ಥವಾಗಿ ಕರ್ಮಯೋಗಿಯಂತೆ ದುಡಿಯುವ ಮಹಿಳೆ ಒಂದು ಸಾರ್ವಜನಿಕ ಸಂಸ್ಥೆಯಲ್ಲೂ ಹಣದಾಸೆ-ಅಧಿಕಾರದಾಸೆಗೆ ಬಲಿಯಾಗದೆ ಸಮರ್ಪಕವಾಗಿ ಸೇವೆ ಮಾಡಬಲ್ಲಳು. ಬಹುಶಃ  ಮಹಿಳೆಯರ ಸಮಸ್ಯೆಯ ನಿವಾರಣೆಗಾಗಿಯೂ ಆಕೆ ಪ್ರಯತ್ನಿಸಬಲ್ಲಳು. ಅದರೆ ಮಹಿಳೆ ಅಧ್ಯಕ್ಷಳಾಗಬೇಕಿದ್ದರೆ ಚುನಾವಣಾ ಪ್ರಚಾರದಿಂದ ಹಿಡಿದು ಅಧಿಕಾರಾವಧಿಯ ಕೊನೆಯ ತನಕವೂ ಪುರುಷರ ಸಹಕಾರ-ಬೆಂಬಲಗಳು ಆಕೆಗೆ ಅಗತ್ಯವಿದೆ. ಹಾಗೆಂದು ಮೀಸಲಾತಿಯ ಅಗತ್ಯವಿಲ್ಲ.   ಸರಕಾರವೇ ಒಂದು ಬಾರಿ ಕೇವಲ ಪುರುಷರು ಮಾತ್ರ ಚುನಾವಣೆಗೆ ಸ್ಪರ್ಧಿಸುವುದು, ಇನ್ನೊಮ್ಮೆ ಮಹಿಳೆಯರು ಮಾತ್ರ ಸ್ಪರ್ಧಿಸುವುದು ಎಂಬ ನಿಯಮವನ್ನು ಮಾಡುವುದು  ಸೂಕ್ತ. ಇದರಿಂದ ಮಹಿಳೆಯರಿಗೆ ಸಮಾನ ಅವಕಾಶಗಳು ಸಿಕ್ಕುವುದು ಖಾತ್ರಿಯಾಗುತ್ತದೆ. ***********************************************

ಕಸಾಪಗೆ ಮಹಿಳಾ ಅಧ್ಯಕ್ಷರು Read Post »

ಇತರೆ

ಏನಿರದಿದ್ದರೂ ಸೂಕ್ಷ್ಮಮನಸ್ಸಿರ ಬೇಕು

ಲೇಖನ ಏನಿರದಿದ್ದರೂ ಸೂಕ್ಷ್ಮಮನಸ್ಸಿರ ಬೇಕು ನೂತನ ದೋಶೆಟ್ಟಿ ಅವಳು ಸ್ವೇಹಿತೆಯರ ಸಹಾಯದಿಂದ ಡಿಗ್ರಿ ಮುಗಿಸಿದಳು. ತರಗತಿಯ ಸಮಯದಲ್ಲಿ ಲಕ್ಷ್ಯ ಕೊಟ್ಟು ಕೇಳುತ್ತಿದ್ದರೂ ಬರೆದುಕೊಳ್ಳಲು ಅವರ ನೆರವು ಬೇಕಾಗುತ್ತಿತ್ತು. ಪರೀಕ್ಷೆಯ ಸಮಯದಲ್ಲಿ ಅವರು ಅವಳಿಗೆ ಇಡಿಯ ಪುಸ್ತಕವನ್ನು, ನೋಟ್ಸುಗಳನ್ನು ಓದಿ ಹೇಳುತ್ತಿದ್ದರು. ತಮ್ಮ ಪರೀಕ್ಷೆಯ ಸಿದ್ಧತೆಯ ಜೊತೆಗೆ ಅವಳ ಪರೀಕ್ಷೆಯ ಸಿದ್ಧತೆಯನ್ನು ಮಾಡುವ/ಮಾಡಿಸುವ ಜವಾಬ್ದಾರಿ ಅವಳ ಸ್ನೇಹಿತೆಯರದು. ಅದನ್ನು ಅವರೆಲ್ಲ ಮನಃಪೂರ್ವಕವಾಗಿ ಮಾಡುತ್ತಿದ್ದರು. ಪರಿಕ್ಷೆ ಮುಗಿದ ಮೇಲೆ ಸ್ನೇಹಿತೆಯರೆಲ್ಲ ಸೇರಿ ಪಿಕ್ಚರ್ ಪ್ರೋಗ್ರ‍್ರಾಂ ಹಾಕುತ್ತಿದ್ದರು. ಅದಕ್ಕೆ ಅವಳು ನಾನು ಹೇಗೆ ನಿಮ್ಮೊಡನೆ ಬರಲಿ? ನೀವೆಲ್ಲ ಹೋಗಿ ನೋಡಿಕೊಂಡು ಬನ್ನಿ ಎಂದರೆ ಅವಳಂತೆ ತಾವೂ ಸಿನಿಮಾವನ್ನು ಕೇಳಿಸಿಕೊಂಡೇ ಸಂತಸ ಪಡುತ್ತಿದ್ದರು. ಅದಕ್ಕಾಗಿ ಅವರು ತಮ್ಮ ಮನೆಯ ಹತ್ತಿರದಲ್ಲಿದ್ದ ಟಾಕೀಸಿನ ಹಿಂಭಾಗದ ವಿಸ್ತಾರವಾದ ಕಟ್ಟೆಯ ಮೇಲೆ ಕುಳಿತು ಮೈಯೆಲ್ಲ ಕಿವಿಯಾಗಿ ಸಿನಿಮಾವನ್ನು ಕೇಳಿಸಿಕೊಂಡು ಆನಂದಿಸುತ್ತಿದ್ದರು. ಇದು ಅವರ ಸ್ನೇಹ. ಅವರು ಅಂಜುಂಗೆ ಗೆಳತಿಯರಷ್ಟೇ ಅಲ್ಲ. ಆಕೆಯ ಕಣ್ಣಾಗಿದ್ದರು. ಆಕೆ ತಮ್ಮಂತೆಯೇ ಕಾಲೇಜಿನ ದಿನಗಳನ್ನು ಆನಂದಿಸಬೇಕೆಂದು ತಾವು ನೋಡುತ್ತಿದ್ದುದನ್ನು ಕೆಲವು ಬಾರಿ ಆಕೆಗೆ ಹೇಳುತ್ತ, ಕೆಲವು ಬಾರಿ ಅವಳಂತೆಯೇ ಕಿವಿಗಳಲ್ಲಿ ಆಸ್ವಾದಿಸುತ್ತ, ಜಾತಿ ಧರ್ಮಗಳ ಗಡಿ ಮೀರಿದ ನಿಸ್ಪೃಹ ಸ್ನೇಹಕ್ಕೆ ಮಾದರಿಯಂತಿದ್ದರು. ಸದಾ ಉತ್ಸಾಹದ ಚಿಲುಮೆಯಾದ ಅಂಜುಂ ಓದು ಮುಗಿದ ಕೂಡಲೇ ಉದ್ಯೋಗದ ಸಂದರ್ಶನಕ್ಕೆ ಸಿದ್ಧಳಾದಳು. ಅದಕ್ಕಾಗಿ ಮಾತಿನ ಮೂಲಕ ಅರಿಯಬಹುದಾದ ಮೊಬೈಲನ್ನು ಬಳಸಿ ಉಳಿದ ಆಪ್‌ಗಳನ್ನು ಅದರಲ್ಲಿ ಅಳವಡಿಸಿಕೊಂಡಳು. ಸಂದರ್ಶನದಲ್ಲಿ ಅವಳಿಗೆ ತನ್ನ ಕಾರ್ಯ ವಿಧಾನವನ್ನು ವಿವರಿಸಲು ಕೇಳಿದಾಗ ಅವಳು ನೀಡಿದ ಪ್ರಾತ್ಯಕ್ಷಿಕೆಗೆ ಉದ್ಯೋಗದಾತರು ದಂಗಾಗಿ ಉದ್ಯೋಗ ಅವಳಿಗೆ ಒಲಿದು ಬಂತು. ಆ ಪ್ರತಿಷ್ಠಿತ ಕಂಪನಿ ಅವಳಿಗೆ ಒಬ್ಬ ಸಹಾಯಕನನ್ನು ನೀಡಿ ಅವಳಿಗೆ ಗೌರವ ಸಲ್ಲಿಸಿತು. ಅಂಜುಂ ಇದನ್ನೆಲ್ಲ ಛಲದಿಂದ, ಸ್ವಾಭಿಮಾನದಿಂದ, ಆತ್ಮಬಲದಿಂದ ಸಾಧಿಸಿದಳು.ಅವಳ ಮುಂದಿನ ಬಾಳಿನ ಬಗ್ಗೆ ಯೋಚಿಸಬೇಕಾದ ಹಿರಿಯರು ಹೆದರಿದರು. ಆಗ ಆಕೆಯ ಬಾಳಿಗೆ ಬೆಳಕು ತಂದವರು ಮಧ್ಯಮ ದೃಷ್ಟಿ ಹೊಂದಿದ್ದ ಚಂದ್ರಶೇಖರ. ಇದನ್ನು ಒಪ್ಪದ ಆಕೆಯ ಹಿರಿಯರು ಆಕೆಯನ್ನು ತಮ್ಮ ಮನೆ, ಮನಗಳಿಂದ ದೂರ ಮಾಡಿದರು. ಒಂದು ರೀತಿಯಲ್ಲಿ ಅದು ಆಕೆಯ ಸುದೈವವೇ. ಈಗ ಒಲಿದು ಬಂದ ಪತಿಯೊಂದಿಗೆ ಸುಖದ ಸಂಸಾರ ನಡೆಸುತ್ತಿದ್ದಾಳೆ ಅಂಜುಂ. ಅವಳಿಗೆ ಎರಡು ಗಂಡು ಮಕ್ಕಳು. ಮಾಧ್ಯಮಿಕ ಶಾಲೆಯಲ್ಲಿ ಓದುತ್ತಿದ್ದಾರೆ. ಅವತ್ತು ರಾತ್ರಿ ಪ್ರಯಾಣದಲ್ಲಿ ಒಂದು ಕಡೆ ಬಸ್ಸು ನಿಂತಾಗ ಇಳಿದ ನಾನು ಉಳಿದ ಹೆಂಗಸರನ್ನು ಸೇರಿಕೊಂಡು ‘ಹೆಂಗಸರಿಗೆ’ ಬೋರ್ಡಿನ ಕಡೆಗೆ ಹೊರಟೆ. ಸರತಿ ಸಾಲಿನಲ್ಲಿ ನನ್ನ ಹಿಂದೆ ಗಂಡ-ಹೆಂಡತಿ ಇಬ್ಬರು ಬರುತ್ತಿದ್ದರು. ನಾನು ಅವರನ್ನು ನಿದ್ದೆಗಣ್ಣಿನಲ್ಲಿ ಸರಿಯಾಗಿ ಗಮನಿಸಿರಲಿಲ್ಲ. ಟಾಯ್ಲೆಟ್ಟಿನ ಮುಂಬಾಗದವರೆಗೂ ಆಕೆಯ ಕೈಹಿಡಿದು ಬಂದ ಆ ಗಂಡ ಅವಳನ್ನು ಬಿಟ್ಟು, ನನ್ನನ್ನು ಉದ್ದೇಶಿಸಿ ‘ಮೇಡಂ, ಇವರನ್ನು ಸ್ವಲ್ಪ ಒಳಗೆ ಕರೆದುಕೊಂಡು ಹೋಗಿ’ ಎಂದರು. ಆಗಲೇ ನಾನು ಅವರಿಬ್ಬರನ್ನು ಸರಿಯಾಗಿ ಗಮನಿಸಿದ್ದು. ತಕ್ಷಣವೇ ಅವರ ಗುರುತು ಹತ್ತಿದ ನಾನು ‘ನೀವು ಚಂದ್ರಶೇಖರ ಅಲ್ವೆ? ‘ ಎಂದೆ. ಹೌದು ಎಂದ ಅವರಿಗೆ ನನ್ನ ಪರಿಚಯವನ್ನು ನಾನು ಹೇಳುತ್ತಿದ್ದಂತೆ ಅವರಿಗಾದ ಆನಂದ ಅಷ್ಟಿಷ್ಟಲ್ಲ. ನಗುನಗುತ್ತಲೇ ಮಾತಾಡುವ ಅಂಜುಂ ಈಗ ಕಿಲಕಿಲ ಎಂದಳು. ಸರಿಸುಮಾರು ಒಂದು ದಶಕದ ನಂತರ ಭೇಟಿಯಾದರೂ ಗುರುತು ಪರಿಚಯವನ್ನು ನಾವಿಬ್ಬರೂ ಮರೆತಿರಲಿಲ್ಲ. ಅವರಿಬ್ಬರನ್ನು ಮರೆಯುವುದಾದರೂ ಹೇಗೆ ಸಾಧ್ಯ? ಹಿಂತಿರುಗಿ ನಾವು ಮೂವರೂ ಬರುವಾಗ ಅವರ ಮಕ್ಕಳನ್ನು ಬೋರ್ಡಿಂಗ್ ಸ್ಕೂಲಿನಲ್ಲಿ ಬಿಟ್ಟಿದ್ದು ಅವರನ್ನು ತಾವು ನೋಡಲು ಹೋಗುತ್ತಿರುವುದಾಗಿ ಹೇಳಿದರು.ನೋಡುವುದೆಂದರೆ ಅವರಿಗೆ ಭಾವಿಸುವುದು, ಊಹಿಸುವುದು, ಸ್ಪರ್ಶಿಸುವುದು. ಇಂದ್ರಿಯಗಳನ್ನು ಮೀರಿದ ಭಾವಬಂಧದಲ್ಲಿ ಎಲ್ಲ ಸುಖವನ್ನೂ ಸೂರೆಗೊಳ್ಳುವ ಈ ಜೋಡಿಯನ್ನು ಕಂಡು ಮನ ತುಂಬಿ ಬಂದಿತು. ಅವರ ಸಂತೋಷಕ್ಕೆ , ತುಂಬು ಜೀವನಕ್ಕೆ ಅವರ ಮುಖದಲ್ಲಿ ಸದಾ ಇರುತ್ತಿದ್ದ ನಗು, ಮಂದಹಾಸ, ಹೊಳಪುಗಳೇ ಸಾಕ್ಷಿಯಾಗಿದ್ದವು. ಜಾತಿವಾದಗಳನ್ನು ಮುಂದಿಟ್ಟುಕೊಂಡಿದ್ದರೆ ಇವರ ಮುಖಗಳಲ್ಲಿ ಇವನ್ನು ಕಾಣುತ್ತಿದ್ದೆವೋ ಇಲ್ಲವೊ. ಅದೆಲ್ಲವನ್ನೂ ಮೀರಿದ ಮಾನವತಾವಾದ, ಮಾನವೀಯತೆಯ ನೆಲೆಯಲ್ಲಿ ಅವರಿಟ್ಟ ಹೆಜ್ಜೆಗಳು, ಅದಕ್ಕೆ ಸಹಾಯ ಮಾಡಿದ ಎಲ್ಲರೂ ಆ ಕ್ಷಣಕ್ಕೆ ನನಗೆ ಮಹಾತ್ಮರೆನಿಸಿದರು.ಒಲವು ನಲಿವುಗಳ ಭಾಷೆಯನ್ನು ಆಡುವ ಅರ್ಹತೆಯನ್ನು ಹೊಂದಿರುವ ಏಕಮಾತ್ರ ಜಾತಿ ಮಾನವಜಾತಿ. ನಮ್ಮ ನಡುವೆ ಇಂತಹ ಜಾತಿಯನ್ನು ಸದ್ದಿಲ್ಲದೇ ಸಲಹುತ್ತಿರುವ ಅಂಜುಂ, ಚಂದ್ರಶೇಖರ್ ರ ಸಂತತಿ ಸಾವಿರವಾಗಲಿ.

ಏನಿರದಿದ್ದರೂ ಸೂಕ್ಷ್ಮಮನಸ್ಸಿರ ಬೇಕು Read Post »

ಇತರೆ

ನಾ ಮೆಚ್ಚಿದ ನಾಟಕ

ಲೇಖನ ನಾ ಮೆಚ್ಚಿದ ನಾಟಕ ಮಾಲಾ ಮ ಅಕ್ಕಿಶೆಟ್ಟಿ.   ಸುಮಾರು ಒಂದುವರೆ ವರ್ಷದ ಹಿಂದೆ  ಬೆಳಗಾವಿಯಲ್ಲಿ ಕುವೆಂಪು ವಿರಚಿತ “ಶ್ರೀರಾಮಾಯಣ ದರ್ಶನಂ” ನ ನಾಟಕ ರೂಪ, ದೇಹ ಮತ್ತು ಮನಸ್ಸಿಗೆ ಆನಂದ ನೀಡಿತ್ತು. ಅದ್ಭುತವಾದ ನಾಟಕ ಪ್ರದರ್ಶನವನ್ನು ನೋಡಿದ ಕೃತಜ್ಞತಾಭಾವ ಆ ವರ್ಷಕ್ಕೆ ಸಲ್ಲುತ್ತದೆ. ಜ್ಞಾನಪೀಠ ಪ್ರಶಸ್ತಿಯನ್ನು ಪಡೆದ ಈ ಕೃತಿ ನಿರ್ಮಾಣಕ್ಕೆ ಸುಮಾರು ಒಂಬತ್ತು ವರ್ಷ ತಗುಲಿದೆ. ಅಂದರೆ ಕುವೆಂಪು ಇದನ್ನು ತಮ್ಮ ಮೂವತ್ತೆರಡನೇ ವಯಸ್ಸಿನಲ್ಲಿ ಪ್ರಾರಂಭಿಸಿ ನಲ್ವತ್ತೋಂದರಲ್ಲಿ ಮುಗಿಸಿದರು. ಈ ಕೃತಿಗೆ ಐವತ್ತು ವರ್ಷಗಳು ತುಂಬಿದ ಸವಿನೆನಪಿಗಾಗಿ ನಾಟಕರೂಪದಲ್ಲಿ ಪ್ರದರ್ಶನ ಮಾಡಲಾಗಿತ್ತು.        ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಡಿಯಲ್ಲಿ ಈ ನಾಟಕವನ್ನು ಪ್ರದರ್ಶಿಸಲಾಗಿತ್ತು. ಮೂಲ ಕೃತಿ ನಡುಗನ್ನಡದಲ್ಲಿ ಇದ್ದು 5 ಸಂಚಿಕೆಗಳು, 22291 ಸಾಲುಗಳು ಹಾಗೂ 877 ಪುಟಗಳನ್ನು ಹೊಂದಿದೆ. ಇಂಥ ಬೃಹತ್ ಕೃತಿಯನ್ನು ಅದೂ ಮೂಲ ನಡುಗನ್ನಡದಲ್ಲಿ ನಾಟಕ ರೂಪಕ್ಕೆ ಇಳಿಸಿರುವುದು ಹೆಮ್ಮೆಯ ವಿಚಾರ. ನಾಟಕ 5 ಗಂಟೆಗೆ ಸೀಮಿತಗೊಂಡು 50 ಕಲಾವಿದರನ್ನು ಪರಿಚಯಿಸುತ್ತದೆ. ಈ ಮೊದಲು ಕುವೆಂಪುರವರ “ಮಲೆಗಳಲ್ಲಿ ಮದುಮಗಳು” 9 ಗಂಟೆಗಳವರೆಗೆ ನಾಟಕ ರೂಪದಲ್ಲಿ ಪ್ರದರ್ಶಿಸಲಾಗಿತ್ತು.ಆದರೆ ರಾಜ್ಯಾದ್ಯಂತ ಆಗಿರಲಿಲ್ಲ. ಆದರೆ ಇದು ರಾಜ್ಯಾದ್ಯಂತ ಪ್ರದರ್ಶನಗೊಂಡಿತು. ವೈಚಾರಿಕತೆಯ ತಳಹದಿಯನ್ನು ಇಲ್ಲಿ ಕಾಣಬಹುದು.           ನಾಟಕದ ಪ್ರಯೋಗ ಮೂಲ ನಡುಗನ್ನಡದಲ್ಲಾಗುತ್ತೋ ಅಥವಾ ಹೊಸಗನ್ನಡಕ್ಕೆ ರೂಪಾಂತರವಾಗಿರುತ್ತೊ ಎಂಬ ಗೊಂದಲದಲ್ಲಿದ್ದೆವು. ಆದರೆ ಪ್ರದರ್ಶನದ ಮೊದಲ ದೃಶ್ಯದಲ್ಲಿ ಅದು ಮನವರಿಕೆಯಾಯಿತು. ಅದನ್ನು ಮೂಲ ನಡುಗನ್ನಡದಲ್ಲೇ ಇಡಲಾಗಿತ್ತು. ಆದರೆ ಒಂದಂತೂ ನಿಜ ನಾಟಕದ ದೃಶ್ಯ, ನಟನೆ ಹಾಗೂ ಪ್ರದರ್ಶನದ ಶೈಲಿ ಮೂಲ ಕೃತಿಯನ್ನು ಓದದವರಿಗೂ ತಿಳಿಯುವಂತೆ ಪ್ರಸ್ತುತಪಡಿಸಿದರು. ಬಾಲವಿಲ್ಲದ ಹನುಮಾನ, ಬಾಣ ಬಿತ್ತಳೆಗಳಿಲ್ಲದ ರಾಮ ಹಾಗೂ ಇತರರು ಹಾಗೂ ಯುದ್ಧ ಸನ್ನಿವೇಶಗಳು ಅಮೋಘವಾಗಿ ಮೂಡಿಬಂದವು. ಕುಂಭಕರ್ಣನ ಪಾತ್ರವು ಪಾತ್ರಧಾರಿಯಿಲ್ಲದೆ ಯಶಸ್ವಿಯಾಗಿ ಪ್ರೇಕ್ಷಕರಿಗೆ ತಿಳಿಯುವಂತೆ, ಕೇವಲ ಎರಡು ದೊಡ್ಡ ಪಾದಗಳ ಮೂಖಾಂತರ ಮತ್ತು ಸಂಭಾಷಣೆ, ಬೆಳಕಿನ ಟೆಕ್ನಿಕ್ ನ ಸಹಾಯದಿಂದ ಪ್ರಸ್ತುತಪಡಿಸಲಾಗಿತ್ತು.              ಮರಾಠಿ ಭಾಷೆಯ ಪ್ರಭಾವ ಜಾಸ್ತಿನೇ ಇದೆ ಎನ್ನುವ ಬೆಳಗಾವಿಯಲ್ಲಿ ಜೀರಿಗೆ ಹಾಲ್ ತುಂಬಿತ್ತು. ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡಾಭಿಮಾನಿಗಳು ಕನ್ನಡದ ಉತ್ಕೃಷ್ಟ ಕೃತಿಯ ನಾಟಕದ ಪ್ರದರ್ಶನಕ್ಕೆ ಸಾಕ್ಷಿಯಾಗಿದ್ದರು. ಸುಮಾರು 5 ಗಂಟೆಗಳಲ್ಲಿ ಸಂಪೂರ್ಣ ಕೃತಿಯನ್ನು ಹಿಡಿದಿಡಲು ಪ್ರಯತ್ನಿಸಲಾಗಿತ್ತು. ಅದೂ ಅಲ್ಲದೆ ಪೂರ್ತಿ 5 ಗಂಟೆಗಳು ಹೇಗೆ ಕಳೆದವು ಎಂದು ಗೊತ್ತಾಗದಷ್ಟು ನಾಟಕ ಪ್ರೇಕ್ಷಕರನ್ನು ಹಿಡಿದಿಟ್ಟುಕೊಂಡಿತ್ತು. ಹಿಂದಿನ ಕಾಲದ ಶ್ರೀಲಂಕಾ ಮತ್ತು ಅಯೋಧ್ಯೆಯ ವಸ್ತ್ರಾಲಂಕಾರವನ್ನು ಮರುಸೃಷ್ಟಿಸಲಾಗಿತ್ತು. ವಸ್ತ್ರಾಲಂಕಾರ ವಿಭಿನ್ನವಾಗಿ ಮನಸೂರೆಗೊಂಡು ಜೊತೆಗೆ ಸಂಗೀತದ ರಸಾನುಭವ ತುಂಬಾನೇ ನೂತನವಾದ ಪ್ರಯೋಗವೆನಿಸಿತು.ರಾಮಾಯಣದಲ್ಲಿ ಬರುವ ಆಯಾ ಪ್ರದೇಶಗಳಿಗೆ ಹೋಲುವಂಥ ವಿಶಿಷ್ಟವಾದ ಸಂಗೀತವನ್ನು ಪ್ರಯೋಗಿಸಿದರು. ಅಯೋಧ್ಯೆಯನ್ನು ಯಕ್ಷಗಾನ, ನಗಾರಿ, ಚಂಡೆ ಮಾದರಿಯಲ್ಲಿ, ಲಂಕಾವನ್ನು ನಾಗಾಲ್ಯಾಂಡ್ ಹಾಗೂ ಚಾವು ಮಾದರಿಯಲ್ಲಿ,ಕಿಷ್ಕಿಂದವನ್ನು ಮಿಳಾವ್ ಮತ್ತು ತಮಟೆ ವಾದ್ಯಗಳೊಂದಿಗೆ ವಿಭಿನ್ನವಾಗಿ ಪ್ರಯೋಗಿಸಿದರು.       ನಾಟಕದ ಸಂಭಾಷಣೆ ಎಲ್ಲಿಯೂ ಬೋರ್ ಅನಿಸಲಿಲ್ಲ ಜೊತೆಗೆ ಮಧ್ಯಮಧ್ಯದಲ್ಲಿ ಬರುವ ಸಂಗೀತ ಪ್ರೇಕ್ಷಕರನ್ನು ಮನರಂಜಿಸಿತು. ಅದರಲ್ಲಂತೂ ನಾಗಾಲ್ಯಾಂಡ್ನ ಮಾದರಿಯ ಸಂಗೀತ ಮನಸೂರೆಗೊಂಡಿತು. ಪ್ರತಿ ಹಂತವನ್ನು ಬೆಳಗಾವಿ ಪ್ರೇಕ್ಷಕರು ಆನಂದಿಸಿದರು. ನಾಟಕದ ಕೊನೆಯವರೆಗೂ ಹೆಚ್ಚಿನ ಸಂಖ್ಯೆಯಲ್ಲಿ ಜನರಿದ್ದು ಇಂಥ ನಾಟಕಗಳ ಪ್ರದರ್ಶನ ಹೆಚ್ಚೆಚ್ಚು ನಡೆಯಬೇಕೆಂಬುದನ್ನು ಪರೋಕ್ಷವಾಗಿ ಒತ್ತಾಯಿಸದಂತೆ ಕಂಡು ಬಂತು.              ಸಿನಿಮಾರಂಗವಂತೂ ಅತ್ಯಂತ ಜನಪ್ರಿಯ. ಸಮಾಜಮುಖಿ ವಿಚಾರಗಳನ್ನು ಸಿನಿಮಾದ ಮುಖಾಂತರ ಹೇಳುವುದು ತುಂಬಾನೇ ಸುಲಭ. ಎಲ್ಲ ವರ್ಗದವರು ಹಾಗೂ ಶಿಕ್ಷಣದ ವ್ಯತ್ಯಾಸಗಳಿದ್ದರೂ ಸಿನಿಮಾ ಎಲ್ಲರನ್ನು ರಂಜಿಸಿ ಪ್ರೇಕ್ಷಕರನ್ನು ತನ್ನತ್ತ ಸೆಳೆಯುತ್ತದೆ. ಇದಕ್ಕೆ ಹೋಲಿಸಿದರೆ ನಾಟಕ ಪ್ರದರ್ಶನಕ್ಕೆ ಪ್ರೇಕ್ಷಕರ ಸಂಖ್ಯೆ ಕಡಿಮೆಯೇ. ಜೊತೆಗೇ ಓದುವ ಹವ್ಯಾಸವೂ ಜನರಲ್ಲಿ ಕಡಿಮೆ.          ಸಿನಿಮಾದಲ್ಲಿ ನಟಿಸುವ ನಟರ ನಟನೆ ತುಂಬಾನೇ ಸ್ವಾಭಾವಿಕ ಅಥವಾ ನೈಸರ್ಗಿಕ ಎಂದೆನಿಸುತ್ತದೆ. ಆದರೆ ಜನ ನಾಟಕವನ್ನು ನಾಟಕವಾಗಿಯೇ ಸ್ವೀಕರಿಸುತ್ತಾರೆ.ಬಹುಶಃ ಅದು ಸಿನಿಮಾದಂಥ ಸ್ವಾಭಾವಿಕತೆಯನ್ನು ತಂದು ಕೊಡಲ್ಲ. ಹಾಗೆಯೇ ಯೋಚಿಸಿದಾಗ ನಟರ ಅಭಿನಯ ಅಷ್ಟೊಂದು ಪ್ರತಿಭಾನ್ವಿತವಾಗಿರಬಹುದು ಜೊತೆಗೆ ಸಿನಿಮಾದ ಆಧುನಿಕ ತಂತ್ರಜ್ಞಾನ ಇದಕ್ಕೆ ಸಾಥ್ ನೀಡುತ್ತದೆ. ಪಾತ್ರಧಾರಿಗಳ ನಟನೆ ಪ್ರಶಂಸಾ ಅರ್ಹತೆಯನ್ನು ಪಡೆದಾಗೂ ಅದು ಕೇವಲ ನಾಟಕವೆಂದೇ ಪರಿಗಣಿಸಲಾಗುತ್ತದೆ. ಆದರೆ ಒಂದೊಂದು ನಿಜ ಸಿನಿಮಾದಲ್ಲಿರುವ ಹಾಗೆ ಬಹಳ ಟೆಕ್ಸ್ ಗಳಿಗೆ ನಾಟಕದಲ್ಲಿ ಅವಕಾಶವೇ ಇಲ್ಲ. ಎಲ್ಲವೂ ಒಂದೇ ಟೇಕ್ನಲ್ಲಿ ಅತ್ಯದ್ಭುತವಾಗಿ ಮೂಡಿಬರಲು ಪಾತ್ರಧಾರಿಗಳು ಶ್ರಮಪಡಬೇಕು. ವಿಪರ್ಯಾಸವೆಂದರೆ ಈ ಶ್ರಮ ಬಹಳಷ್ಟು ಸಿನಿಮಾ ಪ್ರಿಯರಿಗೆ ಕಂಡು ಬರುವುದೇ ಇಲ್ಲ. “ಶ್ರೀರಾಮಾಯಣ ದರ್ಶನಂ” ನಾಟಕದಲ್ಲಿ ಆಶ್ಚರ್ಯವನ್ನುಂಟು ಮಾಡಿದ್ದು ನಡುಗನ್ನಡ. ಹೈಸ್ಕೂಲ್ ಹಂತದಲ್ಲಿ ಯಾವುದಾದರೂ ಪದ್ಯ ಹಳಗನ್ನಡ ಅಥವಾ ನಡುಗನ್ನಡದಲ್ಲಿದ್ದಾಗ ಬಾಯಿಪಾಠ ಮಾಡುವುದು, ಕಡ್ಡಾಯವಾದಾಗ ಪಟ್ಟ ಕಷ್ಟಗಳು ಮಾಡಿದವರಿಗೇನೇ ಗೊತ್ತು. ಅಂಥದ್ರಲ್ಲಿ ಸಂಪೂರ್ಣ ಐದು ಗಂಟೆಗಳ ಕಾಲ ನಡೆಯುವ ಎಲ್ಲಾ ಸಂಭಾಷಣೆಯೂ ಅಪ್ಪಟ ನಡುಗನ್ನಡದಲ್ಲಿ ಪ್ರಸ್ತುತಪಡಿಸಲಾಗಿದೆ. ಇಷ್ಟೊಂದನ್ನು ನೆನಪಿಟ್ಟುಕೊಂಡು ದೃಶ್ಯಕ್ಕೆ ತಕ್ಕಂತೆ ಪ್ರದರ್ಶಿಸುವುದು ಶ್ಲಾಘನೀಯ. ಕನ್ನಡದ ಮತ್ತಷ್ಟು ಕೃತಿಗಳು ಹೀಗೆಯೇ ನಾಟಕದ ರೂಪ ಪಡೆದರೆ ಅನುಕೂಲ ಜಾಸ್ತಿ.ಜೊತೆಗೆ ಅತ್ಯುತ್ತಮ ಕೃತಿಗಳನ್ನು ಓದದವರು ಇದರ ಮುಖೇನ ಕೃತಿಗಳನ್ನು ಅರ್ಥಮಾಡಿಕೊಳ್ಳಬಹುದು ಹಾಗು ಪರೋಕ್ಷವಾದ ಓದನ್ನು ಆಸ್ವಾದಿಸಬಹುದು. ಇದಕ್ಕೆ “ಶ್ರೀರಾಮಾಯಣ ದರ್ಶನಂ” ಒಂದು ಉತ್ತಮ ಉದಾಹರಣೆಯಾಗಿದೆ.ನಾಟಕ ಬಹಳಷ್ಟು ಪ್ರದರ್ಶನಗಳನ್ನು ರಾಜ್ಯಾದ್ಯಂತ ಕಂಡಿತು. ನಾಟಕವನ್ನು ನೋಡಿ ಆನಂದಿಸಿದ ನನಗೆ ಇಂಥ ಹೆಚ್ಚೆಚ್ಚು ಪ್ರಯೋಗಗಳು ಕನ್ನಡದಲ್ಲಿ ಆಗಬೇಕೆಂದೆನಿಸಿತು.  ***************************************************

ನಾ ಮೆಚ್ಚಿದ ನಾಟಕ Read Post »

ಇತರೆ

ಕೊಂಕಣಿ ಕವಿ ಪರಿಚಯ

ಲೇಖನ ಕೊಂಕಣಿ ಕವಿ ಪರಿಚಯ  ಮೆಲ್ವಿನ್ ಕಾವ್ಯನಾಮ : ಮೆಲ್ವಿನ್ ರಾಡ್ರಿಗಸ್. ಬಿಬಿಮ್ ಓದಿನ ನಂತರ ಸೋಷಿಯೋಲಜಿಯಲ್ಲಿ ಸ್ನಾತಕೋತ್ತರ ಪದವಿ ಪಡೆದ ಮೆಲ್ವಿನ್ ಅವರು ಕರಾವಳಿಯ ಪ್ರಸಿದ್ಧ “ದಾಯ್ಜಿ ವರ್ಲ್ಡ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ ನ ನಿರ್ದೇಶಕರಾಗಿದ್ದಾರೆ. ಸಾಹಿತ್ಯ ಸೇವೆಯಲ್ಲಿ ಇವರಿಗೆ ದೊರೆತ ಪ್ರಶಸ್ತಿಗಳು ಅಪಾರ. ಕೊಂಕಣಿ ಭಾಷಾ ಮಂಡಲ್ ಗೋವಾ (1989) ಕೊಂಕಣಿ ಕುಟುಂಮ್, ಬೆಹರೈನ್ (2006) ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಪುರಸ್ಕಾರ (2006). ಡಾಕ್ಟರ್ ಟಿ.ಎಮ್.ಎ ಪೈ ಫೌಂಡೇಶನ್ ಉತ್ತಮ‌ಕೊಂಕಣಿ ಪುಸ್ತಕ ಪ್ರಶಸ್ತಿ.(2009) ಸಾಹಿತ್ಯ ಅಕಾಡೆಮಿ ಪ್ರಶಸ್ತಿ(2011) ವಿಮಲಾ ಪೈ ವಿಶ್ವಕೊಂಕಣಿ ಕವಿತಾ ಪ್ರಶಸ್ತು (2016). ಇವರ ಕೆಲವು ಕೃತಿಗಳು. ಮೊಗಾಪೆಳೊ – 1988; ಫಿಂತಾಂ – 2000 ವಾಟ್ – 2003 ಪ್ರಕೃತಿಚೊ ಪಾಸ್ – 2008 & 2019 ವಿಂಚ್ಣಾರ್ ಕವಿತಾ – 2012 ದೇವಿ ನಿನ್ಕಾಸಿ – 2015; ಉಗ್ತೇಂ ದಾರ್ – 2018 ( ಕೆ, ಎಸ್ ನರಸಿಂಹಸ್ವಾಮಿಯವರ “ತೆರೆದ ಬಾಗಿಲು” ಕವಿತೆಯ ಕೊಂಕಣಿ ಅನುವಾದ. ನಿಮಗಾಗಿ ಅವರ ಎರಡು ಕವಿತೆಗಳು ಕನ್ನಡ ಅನುವಾದದೊಂದಿಗೆ. ಪಾಂಚ್ ಬಾಯ್ಲಾಂಚೊ ದಾದ್ಲೊ ಹಾಂವ್ ಸದಾಂಯ್ ಚಿಂತಾಲೊಂ – ಹೊ ದಾದ್ಲೊ ಕಸೊ ಆಪ್ಲ್ಯಾ ಪಾಂಚ್ ಬಾಯ್ಲಾಂಕ್ ಆಟಾಪುನ್ ಆಸಾ ಎಕಾಚ್ ಘರಾಂತ್! ಹಾಂವೆಂ ತಾಚ್ಯಾ ಘರಾಕ್ ಕಾನ್ ದಿಲೆ. ಗೊಮ್ಟಿ ಚಿರ್ಡಿತಾನಾ ಭಾಯ್ರ್ ಯೇಂವ್ಕ್ ಉಸ್ಮಡ್ಚ್ಯಾ ಉಸ್ವಾಸಾಚ್ಯಾ ಆಕ್ಲಾಸಾಚ್ಯೊ ಬೋಬೊ! ಇನ್‌ಕ್ವಿಜಿಸಾಂವಾಚ್ಯಾ ಕಾಳಾರಯ್ ಅಶ್ಯೋಚ್ ಆಸ್ತಾಲ್ಯೊ ಕೊಣ್ಣಾ! ಜಶೆಂ- ಮಧ್ಯಾನ್ ರಾತಿಚ್ಯಾ ಮೊನೆಪಣಾಂತ್ ತಡಿಕ್ ಮಾರ್‍ಚ್ಯಾ ಲ್ಹಾರಾಂಚಿ ಗಾಜ್- ತಸಲಿ ಉಚಾಂಬಳಾಯ್! ಕಾಂಯ್ ನಿದುನ್ ಆಸಲ್ಲೆ ಬಾಯ್ಲೆಚ್ಯಾ ಘಾಗ್ರ್ಯಾಕ್ ಉಜೊ ದಿಲ್ಯಾರ್ ಜಾವ್ಯೆತಾ ತಸಲಿ! ಬೋವ್‌ಶ್ಯಾ ಕೆಸ್ಟ್ಯಾಂಕ್ ಧರ್ನ್ ವಣ್ಟಿಕ್ ಆಪ್ಟಿತಾನಾ ಜಾಂವ್ಚೆ ಕಾಂಪ್ಣೆಕ್ ಥರ್ಥರ್‍ಚ್ಯಾ ಪಾಕಾಸಾಂ ವಯ್ಲ್ಯಾ ನಳ್ಯಾಂಚೆ ಕಾಂಪೆರೆ…. ಹಾಂವೆಂ ಮ್ಹಜೆಂ ದಾರ್ ಉಗ್ತೆಂ ಕೆಲೆಂ! ಪಯ್ಲೆಚ್ಯಾ ಹಾತಾಂತ್ ಮುಸಾಳ್ ದುಸ್ರೆಚ್ಯಾ ಹಾತಾಂತ್ ಬಯ್ತಾಡ್ ಎಕ್ಲಿ ಘುಂವ್ಡಾವ್ನ್ ಆಸಾ ಪೆಂಕ್ಟಾದಾಬ್ ಆನ್ಯೇಕ್ಲಿ ಮೆಳಲ್ಲ್ಯಾಂಚಿಂ ಮಾಸಾಂ ಚಾಬ್ ಉರಲ್ಲಿ ಶಿಂಪ್ಡಾವ್ನ್ ಆಸಾ ಮಿರ್‍ಸಾಂಗೆ ಪಿಟಿ ಆಂಗ್ಣಾಂತ್ ಮ್ಹಾಭಾರತ್ ಲಾಯ್-ಲುಟಿ, ಖೊಂಟೊ ಮುಟಿ. ಕಾಲ್ ತೊ ಪಾಂಚ್ ಬಾಯ್ಲಾಂಕ್ ಎಕಾಚ್ ಘರಾಂತ್ ಘೆವ್ನ್ ರಾಂವ್ಚೊ ದಾದ್ಲೊ ಮೆಳ್ಳೊ. ಕಿತೆಂ ಸಾಂಗುಂ! ಖರೋಚ್ ತೊ ಮ್ಹಾಕಾ ಪಾಂಚ್ ಲಿಪಿಂಕ್ ಪೊಟ್ಲುನ್ ಧರಲ್ಲೆ ಕೊಂಕ್ಣಿಬರಿ ದಿಸ್ಲೊ! -ಮೆಲ್ವಿನ್ ರೊಡ್ರಿಗಸ್ ಐದು ಹೆಂಡಿರ ಗಂಡ. ನಾನು ಸದಾ ಯೋಚಿಸುತಿದ್ದೆ.. ಈ ಗಂಡಸು ಹೇಗೆ ತನ್ನ ಐದೂ ಹೆಂಡತಿಯರನ್ನು ಸಂಭಾಳಿಸುತಿದ್ದಾನೆ ಅದು ಕೂಡ ಒಂದೇ ಮನೆಯೊಳಗೆ! ನಾನು ಅವನ ಮನೆಗೆ ಕಿವಿ ಹಚ್ಚಿದೆ. ಕತ್ತು ಹಿಸುಕುವಾಗ ಹೊರ ಬರಲು ಚಡಪಡಿಸುವ ಉಸಿರಿನ ಅಸಹಾಯಕ ಚೀರುವಿಕೆ. ಇನ್‍ಕ್ವಿಸಿಷನ್ ಕಾಲದಲ್ಲೂ ಹೀಗೆಯೇ ಇದ್ದಿತ್ತೇನೋ! ಹಾಗೇ- ಮಧ್ಯರಾತ್ರಿಯ ಮೌನದೊಳಗೆ ದಡವನ್ನು ಅಪ್ಪಳಿಸುವ ಅಲೆಗಳ ಭೋರ್ಗರೆತದ ಮೊರೆತ ಮಲಗಿದ್ದ ಹೆಂಡತಿಯ ಬಟ್ಟೆಗಳಿಗೆ ಉರಿ ಹಚ್ಚಿದಂತೆ. ಬಹುಶಃ ಜುಟ್ಟು ಹಿಡಿದು ತಲೆಯನ್ನು ಗೋಡೆಗೆ ಅಪ್ಪಳಿಸುವಾಗಿನ ಅದುರುವಿಕೆಗೆ ನಡುಗುವ ತೊಲೆಗಳ ಮೇಲಿನ ಹೆಂಚುಗಳ ನಡುಕ. ನಾನು ನನ್ನ ಬಾಗಿಲನ್ನು ತೆರೆದಿಟ್ಟೆ. ಒಬ್ಬಳ ಕೈಯಲ್ಲಿತ್ತು ಒನಕೆ ಮತ್ತೊಬ್ಬಳ ಹಿಡಿಯಲ್ಲೊಂದು ಕೋಲು. ಇನ್ನೊಬ್ಬಳು ತಿರುಗಿಸುತಿದ್ದಳು ಛಾಟಿಯಂತಹುದೇನನ್ನೋ ಸಿಕ್ಕಿದವರ ಮಾಂಸವನ್ನೇ ಕಚ್ಚಲು ತಯಾರಾಗಿದ್ದ ಮಗದೊಬ್ಬಳು. ಇನ್ನು ಉಳಿದವಳು ಮೆಣಸಿನ ಪುಡಿ ಎರಚುತಿದ್ದಳು. ಅಂಗಳದೊಳಗೆ ಮಹಾಭಾರತ ಜಗಳ- ಕದನ ಮಾರಾಮಾರಿ. ನಿನ್ನೆ.. ಐದು ಜನ ಪತ್ನಿಯರ ಜೊತೆ ಒಂದೇ ಮನೆಯಲ್ಲಿ ವಾಸಿಸುತ್ತಿರುವ ಆ ಗಂಡಸು ಎದುರಾದ. ಏನೆಂದು ಹೇಳಲಿ..! ನನಗೆ ಅವನು ಪಕ್ಕಾ ಐದು ಲಿಪಿಗಳನ್ನು ಅಪ್ಪಿಕೊಂಡ ಕೊಂಕಣಿ ಭಾಷೆಯಂತೆಯೇ ಕಂಡ. ಕನ್ನಡಕ್ಕೆ: ಶೀಲಾ ಭಂಡಾರ್ಕರ್. ಝುಜ್     ವಾಜಪೇಯಿ ಆನಿ ಆಡ್ವಾಣಿಚ್ಯಾ ಕದೆಲಾಂಚೊ         ಏಕ್ ಪಾಯ್             ಆಪ್ಲ್ಯಾ ಉತ್ರಾಂನಿ ಮೊಡುನ್                 ಮುಶಾರ್ರಫಾಚ್ಯೆ ಮಿಲಿಟರಿ ಫವ್ಜೆಚಿ                     ತೋಖ್ಣಾಯ್     ಕರ್‍ತಾಂ, ಭಾರತಾಕ್ ಬೆಂಡುನ್         ದಾವ್ಯಾ ಹಾತಾನ್ ಖಾಡ್ಕಿ ಉಕ್ಲುನ್             ಉಜ್ವ್ಯಾ ಹಾತಾನ್ ವಾಕೊರ್ ಧರುನ್                 ಹೊ ಪಾಕಿಸ್ತಾನಿ ಕೆಲ್ಸಿ                     ಮ್ಹಜ್ಯಾ ಗಳ್ಯಾಲಾಗ್ಚೆಂ ಖಾಡ್ ಕಾಡ್ತಾ!     ಪಾಕಿಸ್ತಾನಿ ಸೊಜೆರಾಂಚ್ಯಾ ಹಾತಾಂತ್         ಸಾಂಪ್ಡಾಲ್ಲ್ಯಾ             ಭಾರತೀಯ್ ಸೊಜೆರಾಚಿ ಕಾಂಪ್                 ಮ್ಹಜ್ಯಾ ಶಿರಾಂನಿ!                     ಖಿಣಾಕ್ ಸೊಜೆರಾಚೊ ಆವ್ತಾರ್ ಜಾವ್ನ್                         ಗಳೊ ಕಾಪಿತ್ ಕೊಣ್ಣಾ                             ಮ್ಹಳ್ಳಿ ಭಿರಾಂತ್!     ರಾತ್ ಇಕ್ರಾಂಕ್ ತೆಂಕ್ಲ್ಯಾ         ಸೆಲುನಾಂತ್             ಆಮ್ಚ್ಯಾ ದೊಗಾಂವಿಣೆಂ ತಿಸ್ರೊ ನಾ                 ದಾವೊ ದೊಳೊ ತಿರ್‍ಸೊ ಕರುನ್                     ಸೆಲುನಾಂತ್ಲ್ಯಾ ಆರ್‍ಶಾಭಾಯ್ರ್                         ಜನೆರಾಚ್ಯಾ ಹಿಂವಾಂತ್ಲೊ                             ನಿದೊಂಕ್ ಗೆಲ್ಲೊ, ದುಬಾಯಾಂತ್ಲೊ     ಮಾರೊಗ್ ದೆಖ್ತಾನಾ         ಕಾರ್‍ಗಿಲ್ ದೊಂಗ್ರಾವಯ್ಲ್ಯಾ ಕುಲ್ಕುಲ್ಯಾಂತ್‌ಯ್             ಝುಜ್‌ಲ್ಲ್ಯಾ ಸೊಜೆರಾಂಬರಿ                 ಗೊಮ್ಟ್ಯಾಚ್ಯೊ ಕಾತಿ                     ವಾಕೊರಾಚ್ಯೆ ಧಾರಿಲಾಗಿಂ                         ಝುಜ್ತಾತ್ ಭೊಗ್ತಾ     ಹಾಂವ್ ‘ಮಲ್ಬಾರಿ’ ಯಾ ‘ಮದ್ರಾಸಿ’         ತೊ ವಿಚಾರ್‍ತಾ:             ‘ಮಂಗ್ಳುರಿ’ ಮ್ಹಜಿ ಜಾಪ್.                 ‘ಆಮ್ಚಿಂ ಮಿಸ್ಸಾಯ್ಲಾಂ ಆತಾಂ                     ವಯ್ರ್‌ಥಾವ್ನ್ ಸಕಯ್ಲ್‌ಪಾಸೂನ್     ತುಮ್ಚ್ಯಾ ಕೇರಳಾಚಿಂ ಸಯ್ತ್ ಖಿಮಾಂ         ಕರ್‍ಚ್ಯೆ ತಾಕ್ತೆಚಿಂ’             ತೊ ಮ್ಹಜ್ಯೆ ಗೊಮ್ಟೆಚಿ ಕಾತ್                 ವೋಡ್ನ್ ಧರ್‍ನ್ ಉರ್‌ಲ್ಲಿಂ ಖಾಡಾಚಿಂ                     ಥೊಡಿಂ ಮುಳ್ಕಾಟಾಂ ಖರ್‍ವಟಾಯ್ತಾ     ‘ಸಗ್ಳೆಂ ಕಾಶ್ಮೀರ್ ಆಮ್ಚೆಂ         ಹೊ ಕಂಟ್ರೋಲಾಚೊ ಗೀಟ್ ವೊಡ್ಲಾ ದೆಕುನ್             ಆಕಾಂತ್‌ವಾದಾಚೆಂ ಪೀಟ್                 ಫುಗನಾಸ್ತಾಂ ರಾವ್ತಾ?’                     ಮದೆಂ ಮದೆಂ ಉರ್ದುಂತ್     ಗಾಳಿ ದೀವ್ನ್ ಆಸ್‌ಲ್ಲೊ ಕೆಲ್ಸಿ, ಎಕಾನೇಕ್         ‘ಬುಲ್‌ಶಿಟ್’ ಮ್ಹಣೊನ್             ದಾರ್ ಉಗ್ಡೊನ್ ಭಾಯ್ರ್ ಥಿಂಪಿ ಥುಕ್ತಾ     ಓಲ್ಡ್‌ಸ್ಪಾಯ್ಸಾಚೆ ಥೊಡೆ ಥೆಂಬೆ         ಮ್ಹಜ್ಯಾ ಗಾಲಾಂಚೆರ್ ಪುಸ್ತಾನಾ             ಜಾಂವ್ಚ್ಯಾ ಹುಲೊಪಾನ್                 ಲಾಹೋರ್ ಸೊಲ್ಲ್ಯಾಚಿಂ ಕೊಸಾಳ್‌ಲ್ಲಿಂ ರುಪಾಂ                     ಮ್ಹಜ್ಯಾ ದೊಳ್ಯಾಂ ಸಾಮ್ಕಾರ್ ಕುಪಾಂ                         ಜಾವ್ನ್ ಮಾಂಡ್ತಾತ್     ‘ಆಮಿ ಬೋರ್ಡರಾವಯ್ಲೆ ಮನಿಸ್         ಇಂಡಿಯಾಚ್ಯಾ ಗುಳ್ಯಾಂಕ್             ಆಮ್ಚೆ ಸಂಬಂಧ್ ತುಟ್ತಾತ್                 ಕಾಳ್ಜಾಂ ಫಾಳ್ತಾತ್                     ಆನಿ ಕುಟ್ಮಾಂ ಕೊಸಾಳ್ತಾತ್                         ತರಿ ಆಮಿ     ಭಿಯಾನ್ ನಿದನಾಂವ್         ಆಮಿ ರಗ್ತಾಂತ್ ನ್ಹಾತಾಂವ್             ಆನಿ ಹರ್‍ಯೆಕಾ ಮನ್ಶಾಸಂಬಂಧಾ ಮಧೇಂಯ್                 ಉಣ್ಯಾರ್ ಎಕ್ಯೆ ಬೊಂದುಕೆಕ್ ಜಾಗೊ ದಿತಾಂವ್                     ಮ್ಹಜ್ಯಾ ಸಾತ್ ವರ್‍ಸಾಂಚ್ಯಾ     ಫಾತಿಮಾಚೊ ಅತ್ಮೊ         ಬೋರ್ಡರಾಚೆರ್ ಪಾಸಾಯೊ ಮಾರ್‍ತಾ         ಆನಿ ಆಮ್ಚೆಕುಶಿಂ ಉಸಾಳ್ಚ್ಯಾ             ಗುಳಿಯಾಂಚಿ ದಿಶಾ ಬದ್ಲಿತಾ                     ತಶೆಂ ಆಮಿ                         ಭಿರಾಂತೆವಿಣೆಂ ಭೊಂವ್ತಾಂವ್’     ಧಾರುಣ್ ಲೆಕ್‌ಲ್ಲ್ಯಾ ಕೆಲ್ಸಿಚೆಂ         ಕಾಳೀಜ್ ಲೊಣಿಯೆಬರಿ ಕಡ್ತಾ             ಆನಿ ದೊಳ್ಯಾಂತ್ಲೆಂ ಏಕ್ ದೂಕ್                 ಝಡೊನ್ ಮ್ಹಜ್ಯಾ ಆಂಗಾರ್                     ಪಾಂಗರ್‌ಲ್ಲ್ಯಾ ವಸ್ತ್ರಾಚೆರ್ ಇರ್‍ತಾ     ಮ್ಹಜ್ಯಾ ಗಾಲಾಂಚೆರ್         ‘ನೀವಿಯಾ ಕ್ರೀಮ್’ ಮಾಖ್ತಾನಾ             ತಾಚ್ಯಾ ತಳಾತಾಭಿತರ್                 ಕಾಂಪ್ಚ್ಯಾ ಶಿರೆಂಚೊ ಶಿರ್‍ಶಿರೊ                     ಮ್ಹಜ್ಯಾ ಗಾಲಾಂಚ್ಯೆ ಕಾತಿವಯ್ಲ್ಯಾನ್                         ಚರೊನ್ ಕಾಳ್ಜಾಕ್ ಕಸ್ಕಸಾಯ್ತಾ     ಹಾಂವ್ ಉಟ್ತಾಂ         ಆನಿ ಹರ್‍ಶೆಂಚ್ಯಾಕ್‌ಯ್ ಪಾಂಚ್ ಧಿರಾಮ್             ಚಡ್ತಿಕ್ ಭಕ್ಷಿಸ್ ದಿತಾನಾ                 ‘ಶುಕ್ರಿಯಾ ಸಾಹೀಬ್                     ಬಡಿ ಮೆಹರ್‌ಬಾನಿ ಆಪ್‌ಕಿ’                         ತೊ ಮ್ಹಣ್ತಾ ಆನಿ ಭಾಯ್ರ್ ವೆಚ್ಯಾಕ್                             ದಾರ್ ಉಗ್ತೆಂ ಕರ್‍ತಾ     ಕಾಳೊಕಾಂತ್ಲ್ಯಾ ದುಬಾಯಾಂತ್ಲ್ಯಾ         ರಸ್ತ್ಯಾರ್ ಚಲೊನ್ ವೆತಾನಾ             ಮ್ಹಜ್ಯಾ ಗಾಲಾಂಕ್ ಆಪಡ್ತಾಂ                 ಸಕಡ್ ಸಾಫ್ ಸಫಾಯ್ ಜಾಲಾಂ                     ಮ್ಹಳ್ಳ್ಯಾಚಿ ಖಾತ್ರಿ ಕರ್‍ಚೆ ಆದಿಂ     ರಸ್ತ್ಯಾ ಬಗ್ಲೆಚ್ಯಾ ರುಕಾಚೆರ್         ಸೊಜೆರಾಂಚೆ ಕೊಣ್ಣಾ             ದೋನ್ ಅತ್ಮೆ                 ಕಿಡ್ಕಿಡ್ಚೆ ಆಯ್ಕತಾತ್     ಮ್ಹಜ್ಯೆ ಮತಿಂತ್ ನವ್ಯಾನ್         ಏಕ್ ಝುಜ್ ಸುರು ಜಾತಾ             ಆಕೇರ್ ನಾತ್‌ಲ್ಲೆಂ ಝುಜ್!   –  ಮೆಲ್ವಿನ್ ರೊಡ್ರಿಗಸ್ ಯುದ್ಧ ವಾಜಪೇಯಿ ಮತ್ತು ಆಡ್ವಾಣಿಯ ಕುರ್ಚಿಯ ಒಂದು ಕಾಲನ್ನು ತನ್ನ ಮಾತುಗಳಿಂದಲೇ ಮುರಿದು ಮುಷರ್ರಫ್ಪನ ಮಿಲಿಟರಿಯ ಗುಣಗಾನ ಮಾಡುತ್ತಾ, ಭಾರತವನ್ನು ಬೆಂಡೆತ್ತಿ ಎಡಕೈಯಲ್ಲಿ ಗದ್ದವನ್ನೆತ್ತಿ ಬಲಗೈಯಲ್ಲಿ ವಸ್ತರ ಹಿಡಿದು ಈ ಪಾಕಿಸ್ತಾನಿ ಕ್ಷೌರಿಕ ನನ್ನ ಕುತ್ತಿಗೆ ಬಳಿಯ ಗಡ್ಡ ತೆಗೆಯುತ್ತಾನೆ ಪಾಕಿಸ್ತಾನಿ ಸೈನಿಕನ ಕೈಯಲ್ಲಿ ಸಿಲುಕಿದ ಭಾರತೀಯ ಸೈನಿಕನ ನಡುಕ ನನ್ನ ಮೈಯಲ್ಲಿ ಕ್ಷಣದಲ್ಲೇ ಸೈನಿಕನ ಅವತಾರ ತಾಳಿ  ಕುತ್ತಿಗೆ ಸೀಳುವನೋ ಎಂಬ ಹೆದರಿಕೆ ರಾತ್ರಿ ಹನ್ನೊಂದಾಗುತ್ತಿದೆ ಸಲೂನಿನಲ್ಲಿ ನಮ್ಮಿಬ್ಬರ ವಿನಹ ಮತ್ತೊಬ್ಬನಿಲ್ಲ ಎಡಗಣ್ಣ ಕಿರಿದು ಮಾಡಿ ಸೆಲೂನಿನ ಗಾಜಿನಾಚೆಗೆ ಜನವರಿಯ ಚಳಿಯನ್ನು ಹೊದ್ದು ಮಲಗಿದ, ದುಬಾಯಿಯ ರಸ್ತೆ ನೋಡುವಾಗ ಕಾರ್ಗಿಲ್ ಶಿಖರದ ಚಳಿಯಲ್ಲಿಯೂ ಹೋರಾಡಿದ ಸೈನಿಕನಂತೆ ಕುತ್ತಿಗೆಯ ಚರ್ಮ ವಸ್ತರದ ಮೊನಚಿನೊಡನೆ ಹೋರಾಡಿದ ಭಾವ ನಾನು ‘ಮಲ್ಬಾರಿ’ ಯಾ ‘ಮದ್ರಾಸಿ’ ಅವನ ಪ್ರಶ್ನೆ ‘ಮಂಗಳೂರಿಗ’ ನನ್ನ ಉತ್ತರ ನಮ್ಮ ಮಿಸ್ಸಾಯ್ಲ್ ಗಳು ಈಗ ಮೇಲಿನಿಂದ ಕೆಳಗಿನ ತನಕ ನಿಮ್ಮ ಕೇರಳವನ್ನು ಕೂಡಾ ಖೈಮಾ ಮಾಡುವ ತಾಕತ್ತು ಪಡೆದಿವೆ ಅವನು ನನ್ನ ಕುತ್ತಿಗೆಯ ಚರ್ಮ ಹಿಡಿದೆಳೆದು ಅಳಿದುಳಿದ ಗಡ್ಡದ ಚೂರುಗಳನ್ನು ಕೆರೆಯುತ್ತಾನೆ ಇಡೀ ಕಾಶ್ಮೀರ ನಮ್ಮದು ಈ ಕಂಟ್ರೋಲಿನ ಗೆರೆ ಎಳೆದ ಕೂಡಲೇ ಭಯೋತ್ಪಾದನೆ ಉಬ್ಬರಿಸದೆ ನಿಂತಿತೆ? ನಡು ನಡುವೆ ಉರ್ದುವಿನಲ್ಲಿ ಬೈಯುತ್ತಾ ಇದ್ದ ಕ್ಷೌರಿಕ, ಒಮ್ಮೆಲೇ ‘ಬುಲ್ ಶಿಟ್’ ಎನ್ನುತ್ತಾ ಬಾಗಿಲು ತೆರೆದು ಉಗುಳುತ್ತಾನೆ ಓಲ್ಡ್ ಸ್ಪೈಸ್ ನ ಕೆಲ ಹನಿಗಳನ್ನು ನನ್ನ ಕೆನ್ನೆಗಳಿಗೆ ಹಚ್ಚುವಾಗ ಎದ್ದ ಉರಿಗೋ ಇರಬಹುದು ಮುರಿದ ಲಾಹೋರ್ ಒಪ್ಪಂದದ ತುಣುಕುಗಳು ನನ್ನ ಕಣ್ಣೆದುರು ಮೋಡಗಳಾಗಿ ಆವರಿಸುತ್ತವೆ ನಾವು ಬಾರ್ಡರ್ ಮೇಲಿನ ಜನರು ಇಂಡಿಯಾದ ಗುಂಡುಗಳಿಗೆ ನಮ್ಮ ಸಂಬಂಧಗಳು ಹರಿಯುತ್ತವೆ ಹೃದಯಗಳು ಬಿರಿಯುತ್ತವೆ ಮತ್ತು ಕುಟುಂಬಗಳು ಮುರಿಯುತ್ತವೆ ಆದರೂ ನಾವು ಹೆದರಿ ಮಲಗುವುದಿಲ್ಲ ನಾವು ರಕ್ತಸ್ನಾನ ಮಾಡುತ್ತೇವೆ ಮತ್ತು ಪ್ರತಿ ಮನುಷ್ಯ ಸಂಬಂಧದ ನಡುವೆಯೂ ಒಂದು ಬಂದೂಕಿಗೆ ಜಾಗ ನೀಡುತ್ತೇವೆ. ನನ್ನ ಏಳು ವರ್ಷದ ಫಾತಿಮಾಳ ಆತ್ಮ ಬಾರ್ಡರ್ ನಲ್ಲಿ ಅಲೆಯುತ್ತಾ ನಮ್ಮ ದಿಕ್ಕಿಗೆ ಹಾರುವ ಗುಂಡುಗಳ ದಿಕ್ಕನ್ನು ಬದಲಿಸುತ್ತವೆ ಹಾಗಾಗಿ ನಾವು ಹೆದರದೆ ತಿರುಗಾಡುತ್ತೇವೆ. ಕಾಠಿಣ್ಯ ತುಂಬಿದ ಕ್ಷೌರಿಕನ ಹೃದಯ ಬೆಣ್ಣೆಯಂತೆ ಕರಗುತ್ತದೆ ಆತನ ಒಂದು ಕಣ್ಣ ಹನಿ ಉದುರಿ ನನಗೆ ಹೊದಿಸಿದ ಬಟ್ಟೆಯಲ್ಲಿ ಇಂಗುತ್ತದೆ. ನನ್ನ ಕೆನ್ನೆಗಳಿಗೆ ‘ನೀವಿಯಾ ಕ್ರೀಮ್’ ಹಚ್ಚುವಾಗ ಆತನ ಅಂಗೈಯೊಳಗೆ ನಡುಗುವ ನರಗಳ ನಡುಕ ನನ್ನ ಕೆನ್ನೆಯ ಚರ್ಮದೊಳಗಿಂದ ಹರಿದು ಹೃದಯವನ್ನು ಅಲ್ಲಾಡಿಸುತ್ತದೆ ನಾನು ಎದ್ದು ಎಂದಿಗಿಂತ ಐದು ಧಿರಾಮ್ ಹೆಚ್ಚು ಭಕ್ಷೀಸು ನೀಡುವಾಗ ‘ಶುಕ್ರಿಯಾ ಸಾಹೀಬ್ ಬಡಿ ಮೆಹರ್ ಬಾನಿ ಆಪ್ ಕಿ’ ಎನ್ನುತ್ತಾ ಹೊರ ಹೋಗಲು ಬಾಗಿಲು ತೆರೆಯುತ್ತಾನೆ. ಕತ್ತಲಿನ ದುಬಾಯಿಯ ರಸ್ತೆಯಲ್ಲಿ ನಡೆಯುವಾಗ ನನ್ನ ಕೆನ್ನೆಗಳನ್ನು ಮುಟ್ಟುತ್ತೇನೆ ಎಲ್ಲಾ ಸಫಾಯ್ ಆಗಿದೆ ಎಂಬುದರ ಖಾತರಿ ಮಾಡುವ

ಕೊಂಕಣಿ ಕವಿ ಪರಿಚಯ Read Post »

ಇತರೆ, ಮಕ್ಕಳ ವಿಭಾಗ

ಮಕ್ಕಳಿಗೆ ಬದುಕಿನ ಪಾಠ

ಲೇಖನ ಮಕ್ಕಳಿಗೆ ಬದುಕಿನ ಪಾಠ ನಿಖಿಲ ಎಸ್. ಮಕ್ಕಳಿಗೆ ಬೇಕು ಶಿಕ್ಷಣದ ಜೊತೆಗೆ ಜೀವನದ ಪಾಠ.ಒಬ್ಬ ತಂದೆ ತಾನು ಅನುಭವಿಸಿದ ನೋವು ನನ್ನ ಮಕ್ಕಳಿಗೆ ಬರಬಾರದು ಎನ್ನುವಷ್ಟು ಚೆನ್ನಾಗಿ ಓದಿಸಿ,ಒಂದು ಒಳ್ಳೆಯ ನೌಕರಿ ಸೇರಿಸಬೇಕು, ಎಂಬ ಭಾವನೆ ಹೆಚ್ಚಿನ ಪೋಷಕರದ್ದಾಗಿರುತ್ತದೆ. ಇದು ಸಹಜ ಹಾಗೆಯೇ ಇದು ತಪ್ಪಲ್ಲ. ಆದರೆ ಮಕ್ಕಳಿಗೆ ಕಷ್ಟವೇ ಇರಬಾರದು ಎಂದು ಮುದ್ದಿನಿಂದ ಬೆಳೆಸುವುದರಿಂದ ಜೀವನದ ಶಿಕ್ಷಣ ಪಾಠ ಕಲಿಸದೆ ಕೇಳಿದೆಲ್ಲವನ್ನು ತಕ್ಷಣವೇ ಅವರ ಕೈಗೆಟಕುವಂತೆ ನೀಡುವುದರಿಂದ ಮಕ್ಕಳು ಹಣವನ್ನು ಗೆಲ್ಲುತ್ತಾರೆ ವಿನಹ ಜೀವನವನ್ನಲ್ಲ.“ಮಕ್ಕಳಿಗೆ ಆಸ್ತಿಯನ್ನು ಮಾಡುವುದರ ಬದಲು ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ ಎಂದು ಡಾ. ಅಬ್ದುಲ್ ಕಲಾಂ ಅವರು ಹೇಳಿದ್ದಾರೆ. . ”ಬಾಲ್ಯದಿಂದಲೇ ಜೀವನ ಶಿಕ್ಷಣ ಕಲಿಸಬೇಕೆನ್ನುವ ಸತ್ಯ ಈ ಮಾತಿನ ಹಿಂದಿದೆ.ಹಾಗಿದ್ದರೆ ಜೀವನ ಶಿಕ್ಷಣವೆಂದರೇನು ಎಂಬುದು ಸಹಜವಾಗಿ ಏಳುವ ಪ್ರಶ್ನೆ.ಸಂಸ್ಕಾರ, ಆತ್ಮವಿಶ್ವಾಸ, ಸವಾಲುಗಳನ್ನು ಸ್ವೀಕರಿಸುವ ಆತ್ಮಸ್ದೈರ್ಯ, ಕಠಿಣಪರಿಶ್ರಮ, ಮಾನವೀಯತೆ, ಸ್ವತಂತ್ರ ನಿರ್ಧಾರವನ್ನು ತೆಗೆದುಕೊಳ್ಳುವ ಭರವಸೆ, ಸಕರಾತ್ಮಕ ಮನೋಬಾವನೆಯನ್ನ ಬೆಳೆಸಿಕೊಳ್ಳುವುದೇ ಜೀವನ. ಸಂಸ್ಕಾರಕಲಿಸಿ: ಜೀವನದಲ್ಲಿ ಮುಖ್ಯವಾಗಿ ಬೇಕಿರುವುದು“ಸಂಸ್ಕಾರ”ಸುಂದರಬದುಕಿಗೊಂದು ಭದ್ರ ಬುನಾದಿ,ಮನೆಯೇ ಮೊದಲ ಪಾಠಶಾಲೆ. ಮಕ್ಕಳಿಗೆ ವಯಸ್ಸಿಗೆ ಬರುವವರೆಗೂ ತಂದೆ-ತಾಯಿಯೇ ಆದರ್ಶರಾಗಿರುತ್ತಾರೆ.ಅವರ ನಡವಳಿಕೆಗಳನ್ನೆ ಅನುಸರಿಸುತ್ತಾರೆ. “ಬಿತ್ತಿದಂತೆ ಬೆಳೆ” ಎಂಬ ನಾಣ್ಣುಡಿಯಂತೆ ಮಕ್ಕಳಿಗೆ ಮೌಲ್ಯವನ್ನು ತಿಳಿಹೇಳಿದರೆ ಆ ಆದರ್ಶದಂತೆಯೇ ಬೆಳೆಯುತ್ತಾರೆ. ಅವರಲ್ಲಿ ಸಕರಾತ್ಮಕ ಚಿಂತನೆಯನ್ನ ಬೆಳೆಸುವುದು. ಹಿರಿಯರನ್ನ ಗೌರವಿಸುವುದು. ಭಗವಂತನ ಶ್ರದ್ದೆ ಮತ್ತು ನಂಬಿಕೆಯನ್ನಿಡುವುದು. ಕುಟುಂಬ, ಸಂಬಂದಿಕರೊಂದಿಗೆ ಉತ್ತಮ ಬಾಂದವ್ಯವನ್ನ ಹೊಂದುವುದು. ಜೊತೆಗಿರುವ ಸ್ನೇಹಿತರನ್ನು ಆಧರಿಸಿ ಜೀವನದ ದಿಕ್ಕು ಸಾಗುವುದಿದೆ. ಅವಲಂಬನೆ ತಗ್ಗಿಸಿ: ಹೆತ್ತವರು ಮಕ್ಕಳಿಗೆ ಬದುಕಿನ ಅನುಭವಗಳನ್ನು ಕಲಿಸಬೇಕು. ಮಗು ಎಡವಿಬಿದ್ದಾಗ ಅಳುತ್ತಾರೆ. ಆ ನೋವಿನ ಅನುಭವದಿಂದ ಮುಂದೆ ಎಚ್ಚರಿಕೆಯಿಂದ ಹೆಜ್ಜೆಯನ್ನು ಹಾಕಿ ಮುಂದೆ ಸಾಗಬೇಕು.ಮಕ್ಕಳು ಕೇಳಿದನ್ನೆಲ್ಲಾ ತಂದು ಕೊಡುವ ಬದಲು ಆ ವಸ್ತುವನ್ನು ಖರೀದಿಸುವ ಶ್ರಮವನ್ನ ತಿಳಿಸಿಕೊಡಬೇಕು. ಮಕ್ಕಳು ಪ್ರತಿಯೊಂದು ವಿಷಯದಲ್ಲೊ ಪೋಷಕರನ್ನೇ ಅವಲಂಬಿಸಿದರೆ ಕಲಿಕೆ ಮುಗಿದ ನಂತರ ನೀರಿನಿಂದ ಹೊರ ತೆಗೆದ ಮೀನಿನಂತಾಗುತ್ತದೆ. ಯಾವುದಾದರೂ ಸಣ್ಣಪುಟ್ಟ ವಿಷಯದಲ್ಲಿ ಮಕ್ಕಳೇ ನಿರ್ದಾರ ತೆಗೆದುಕೊಳ್ಳುವಂತಾಗಬೇಕು. ಒತ್ತಡ ಬೇಡ: ನನ್ನ ಮಗ ನಾನು ಹೇಳಿದ ಹಾಗೆ ಕೇಳಬೇಕು, ಹೇಳಿದ್ದನ್ನೆ ಓದಬೇಕು, ನಾನು ಹಾಕಿದ ಗೆರೆ ದಾಟಬಾರದು ಎಂಬ ಭಾವನೆ ಬೆಳೆಸಿಕೊಳ್ಳದೆ ಅವರ ಮನಸ್ಸನ್ನು ಅರಿತು ಅವರು ಬಯಸಿದ ಕ್ಷೇತ್ರದಲ್ಲಿ ಅವರಿಗೆ ಇಷ್ಟವಾದ ವಿಷಯವನ್ನು ಆಯ್ದುಕೊಳ್ಳಲು ಅವಕಾಶ ನೀಡಬೇಕು. ಸ್ನೇಹಬಾವದಿಂದಿರಿ: ಮಕ್ಕಳ ಪ್ರತಿಯೊಂದು ಚಟುವಟಿಕೆಗಳಲ್ಲಿ ಹಸ್ತಕ್ಷೇಪ ಮಾಡದೇ ಕೆಲವವೊಂದು ನಿರ್ದಾರವನ್ನು ಅವರೇ ತೆಗೆದುಕೊಳ್ಳುವ ಹಾಗೆ ಸ್ವಾತಂತ್ರ್ಯ ನೀಡಬೇಕು.ಮಕ್ಕಳಿಗೆ ಜೀವನಶಿಕ್ಷಣದ ಪಾಟವನ್ನು ಕೊಡುವವರು ಬೆಳೆಯುವ ಪರಿಸರ, ತಂದೆ-ತಾಯಿ, ಗುರು-ಹಿರಿಯರು ಅವರ ಮಾರ್ಗದರ್ಶನಲ್ಲಿ ಮಕ್ಕಳು ಉತ್ತಮವಾಗಿ ಬೆಳೆಯಲು ಸಾದ್ಯ… ***************************************************************

ಮಕ್ಕಳಿಗೆ ಬದುಕಿನ ಪಾಠ Read Post »

ಇತರೆ

ಪ್ರತಿಭಾ ಪಲಾಯನ ನಿಲ್ಲಲಿ

ಲೇಖನ ಪ್ರತಿಭಾ ಪಲಾಯನ ನಿಲ್ಲಲಿ ಭಾರತ ದೇಶವು ಇಡೀ ಜಗತ್ತಿನ ಭೂಪಟದಲ್ಲಿಯೇ ರಾರಾಜಮಾನವಾಗಿರಲು ಕಾರಣ ನಮ್ಮ ದೇಶದ  ಕಲೆ,ಸಾಹಿತ್ಯ,ಸಂಸ್ಕೃತಿ,ನಾಗರಿಕತೆ,ಸಹಬಾಳ್ವೆ, ಸಹಮತ, ಸಿರಿ ಸಂಪತ್ತು, ವಾಯುಗುಣ, ಅನೇಕಾನೇಕ ಸಂಪನ್ಮೂಲಗಳ ಆಗರವಾಗಿದ್ದರಿಂದಲೇ ಭಾರತ ಹೆಮ್ಮೆಯ ರಾಷ್ಟ್ರವಾಗಿ ಕಂಗೊಳಿಸುತ್ತಿದೆ.ಅದೆಲ್ಲಕ್ಕಿಂತ ಹೆಚ್ಚಾಗಿ ಭಾರತದಲ್ಲಿರುವ ಶ್ರೇಷ್ಠ ಪ್ರತಿಭೆಗಳಿಂದ ದೇಶವು ಅನಾದಿಕಾಲದಿಂದಲೂ ಜಗದ್ವಿಖ್ಯಾತಿ ಪಡೆಯುತ್ತಾ ಬಂದಿದೆ.ಆರ್ಯಭಟ, ಶ್ರೀನಿವಾಸ ರಾಮಾನುಜನ್, ಸಿ.ವಿ.ರಾಮನ್,ವಿಶ್ವೇಶ್ವರಯ್ಯ, ಅಬ್ದುಲ್ ಕಲಾಂ ರಂತಹ ಅನೇಕಾನೇಕ ಅಪ್ರತಿಮ ಪ್ರತಿಭೆಗಳು ಈ ದೇಶದ ಮಣ್ಣಿನ ಹೆಮ್ಮೆ.ಇವರಂತಹ ಲಕ್ಷಾಂತರ ಪ್ರತಿಭೆಗಳಿಗೆ ಭಾರತಮಾತೆ ದಿನೇ ದಿನೇ ಜನ್ಮಕೊಡುತ್ತಿದ್ದಾಳೆ.ಆದರೆ ಆ ಪ್ರತಿಭೆಗಳ ಸೇವೆ ನಮ್ಮ ರಾಷ್ಟಕ್ಕೆ ಅರ್ಪಿತವಾಗುತ್ತಿಲ್ಲ,ಸಿಗುತ್ತಿಲ್ಲ ಎನ್ನುವುದೊಂದು ದೊಡ್ಡ ದುರಂತವೇ ಸರಿ.  ಅಧಿಕೃತ ಸಮೀಕ್ಷೆಯೊಂದರ ಪ್ರಕಾರ “ಅಮೇರಿಕಾದ ಶೇ.೩೭ ವೈದ್ಯರು, ಶೇ.೩೩ ನಾಸಾ ವಿಜ್ಣಾನಿಗಳು, ಶೇ.೩೯ ರಷ್ಟು ಸಾಫ್ಟವೇರ್ ತಂತ್ರಜ್ಞರು ಭಾರತೀಯ ಸಂಜಾತರಾಗಿದ್ದಾರೆ” ಎಂಬ ಆಶ್ಚರ್ಯಕರ ವಿಷಯವು ದಿಗ್ಬ್ರಮೆಯನ್ನುಂಟು ಮಾಡುತ್ತಿದೆ. ನಮ್ಮ ದೇಶದ ಈ ಪ್ರತಿಭೆಗಳು ವಿದೇಶದಲ್ಲಿ ಸೇವೆ ಸಲ್ಲಿಸುತ್ತಿರುವದರಿಂದಲೇ ಅಮೇರಿಕಾ ಬಲಾಢ್ಯ ರಾಷ್ಟ್ರವಾಗಿದೆ. ಅಮೇರಿಕಾ ಮಾತ್ರವಲ್ಲ ಜಗತ್ತಿನ ಎಲ್ಲಾ ರಾಷ್ಟ್ರಗಳಲ್ಲೂ ಬಾರತೀಯ ಸಂಜಾತರು ತಮ್ಮ ಸೇವೆ ಸಲ್ಲಿಸುತ್ತಲಿದ್ದಾರೆ. ಮಹತ್ವದ ಈ ಸೇವೆ ನಮ್ಮ ದೇಶಕ್ಕೆ ಯಾಕಿಲ್ಲ ಎಂಬ ಪ್ರಶ್ನೆ ನಮ್ಮನ್ನೆಲ್ಲಾ  ಸಹಜವಾಗಿ ಕಾಡುತ್ತಿದೆಯಲ್ಲವೇ?  ಅಭಿವೃದ್ಧಿ ಹೊಂದುತ್ತಿರುವ ನಮ್ಮ ದೇಶದಲ್ಲಿ ಆರ್ಥಿಕ ಮುಗ್ಗಟ್ಟು ಒಂದು ಕಾರಣವಿರಬಹುದು. ಹಣದಾಸೆಗಾಗಿಯೋ ಅಥವಾ ಈ ದೇಶದಲ್ಲಿ ಪ್ರತಿಭೆಗಳಿಗೆ ಅವಕಾಶ ಇಲ್ಲವೆಂಬುದಕ್ಕಾಗಿಯೋ ಏನೋ ಪ್ರತಿಭೆಗಳ ಪಲಾಯನವಾಗುತ್ತಲೇ ಇದೆ.ವಿದೇಶಗಳಲ್ಲಿರುವ ಭಾರತೀಯ ಸಂಜಾತರು ಸ್ವದೇಶದಲ್ಲಿರುವ ತಮ್ಮ ಕುಟುಂಬಕ್ಕೆ ಹಣ ರವಾನೆ  ಮಾಡುವುದರಲ್ಲಿ ವಿಶ್ವದಲ್ಲಿಯೇ ನಂ.೧ ಸ್ಥಾನದಲ್ಲಿದೆ ಎಂದು ವಿಶ್ವಬ್ಯಾಂಕ್ ಇತ್ತಿಚೆಗೆ ಸಾಕ್ಷಿಸಮೇತ ಧೃಡಿಕರಿಸಿದೆ. ಈ ವರ್ಷವೊಂದರಲ್ಲಿಯೇ ೪೨೨೫ ಶತಕೋಟಿ ರೂ.ಗಳು ವಿದೇಶದಿಂದ ನಮ್ಮ ದೇಶಕ್ಕೆ ಬಂದಿದೆ ಎಂಬ ಅಂಶವನ್ನು ನೋಡಿದಾಗ ವಿದೇಶದಲ್ಲಿ ಸೇವೆ ಸಲ್ಲಿಸುತ್ತಿರುವ ಭಾರತಿಯ ದ್ಯೆತ್ಯ ಪ್ರತಿಭೆಗಳ ಪಲಾಯನ ಎಷ್ಟಿದೆ ಎಂಬುದು ಗೊತ್ತಾಗುತ್ತದೆಯಲ್ಲವೇ? ಈ ದೇಶದ ಪ್ರತಿಭೆಗಳು ಇಲ್ಲಿಯೇ ಸೇವೆ ಸಲ್ಲಿಸಿದರೆ ಭಾರತ ಶ್ರೀಮಂತ ರಾಷ್ಟ್ರವಾಗಿ, ಅಭಿವೃದ್ಧಿಶೀಲ ರಾಷ್ಟ್ರವಾಗಿ ಹೊರಹೊಮ್ಮಲು ಸಾಧ್ಯವಿದೆ.ಅಷ್ಟೇ ಅಲ್ಲ ಈ ದೇಶದ ಏಳ್ಗೆಗೆ ಸಹಕಾರ ಕೂಡಾ ಸಿಕ್ಕಂತಾಗುತ್ತದೆ.ಈ ನೆಲದ ಪ್ರತಿಭೆಗಳು  ಜಗತ್ತಿನಲ್ಲಿಯೇ ಶ್ರೇಷ್ಠರು ಎಂಬುದನ್ನು ಎಲ್ಲರೂ ಅರಿತುಕೊಳ್ಳಬೇಕಾಗಿದೆ.    ಆದ್ದರಿಂದ ಸರ್ಕಾರಗಳು ಕೂಡಾ ಪ್ರತಿಭೆಗಳತ್ತ ಗಮನ ಹರಿಸಿ,ಇಲ್ಲಿಯೇ ಯೋಗ್ಯ ನೆಲೆಯನ್ನು ಕಂಡುಕೊಳ್ಳುವಂತೆ ಪ್ರೋತ್ಸಾಹಿಸಬೇಕಾಗಿದೆ.ಅವರ ಸಮಸ್ಯೆಗಳಿಗೆ ಸ್ಪಂದಿಸಿ ಸೂಕ್ತ ಪರಿಹಾರ ಹುಡುಕಿ, ಆರ್ಥಿಕವಾಗಿ ಹೆಚ್ಚಿನ ಸಹಾಯ, ಸಹಕಾರ ಕೊಟ್ಟು ಪ್ರೋತ್ಸಾಹ ನೀಡಿದರೆ ಖಂಡಿತವಾಗಿಯೂ ಪ್ರತಿಭಾ ಪಲಾಯನ ನಿಲ್ಲುತ್ತದೆ. ಅಂದಾಗ ಮಾತ್ರ ದೇಶದ ಆರ್ಥಿಕತೆ ಸದೃಢವಾಗಿ ಭಾರತವು ಬಲಾಡ್ಯ ರಾಷ್ಟವಾಗಿ ಹೊರಹೊಮ್ಮುತ್ತದೆ ಎಂಬುವದರಲ್ಲಿ ಸಂದೇಹವೇ ಇಲ್ಲ.ಇಂತಹ ಒಂದು ಪರಿಣಾಮಕಾರಿ ಸಂದೇಶವನ್ನು ಎಲ್ಲರಿಗೂ ತಲುಪಿಸುವ ಕಾರ್ಯಕ್ಕೆ ಕೈ ಜೋಡಿಸೋಣ..!  ಒಗ್ಗಟ್ಟಾಗಿ ದೇಶದ ಹಿತ ಕಾಪಾಡೋಣ ಬನ್ನಿ….! ಎಲ್ಲರೂ ಒಂದಾಗೋಣ..! *********************************** ಶ್ರೀನಿವಾಸ. ಎನ್.ದೇಸಾಯಿ

ಪ್ರತಿಭಾ ಪಲಾಯನ ನಿಲ್ಲಲಿ Read Post »

You cannot copy content of this page

Scroll to Top