ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ಹುಯಿಲಗೋಳ ನಾರಾಯಣರಾಯ..!

ಲೇಖನ ಉದಯವಾಗಲಿ ನಮ್ಮ ಚಲುವ ಕನ್ನಡ ನಾಡು’ವಿನ ಹುಯಿಲಗೋಳ ನಾರಾಯಣರಾಯ..! ಇಂದು ಹುಯಿಲಗೋಳ ನಾರಾಯಣರಾಯರ ಜನ್ಮದಿನ. ಆ ನೆನಪಲ್ಲಿ ಈ ಬರಹ… ಹುಯಿಲಗೋಳ ನಾರಾಯಣರಾಯರು ಕನ್ನಡದ ಪ್ರಮುಖ ಸಾಹಿತಿಗಳಲ್ಲೊಬ್ಬರು. ಕರ್ನಾಟಕ ನಾಡಗೀತೆಯೆನಿಸಿದ್ದ ‘ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು’ ಗೀತೆಯನ್ನು ರಚಿಸಿದವರು. ೧೮೮೪ ಅಕ್ಟೋಬರ್ ೪ ರಂದು ಗದಗದಲ್ಲಿ ಜನಿಸಿದವರು. ಇವರ ತಂದೆ ಕೃಷ್ಣರಾಯರು, ತಾಯಿ ರಾಧಾಬಾಯಿ(ಬಹಿಣಕ್ಕ). ಬಾಲ್ಯದ ಶಿಕ್ಷಣವನ್ನು ಗದಗ, ಗೋಕಾಕ ಹಾಗೂ ಧಾರವಾಡಗಳಲ್ಲಿ ಪೂರೈಸಿದರು. ೧೯೦೨ ರಲ್ಲಿ ಧಾರವಾಡದಲ್ಲಿ ಮೆಟ್ರಿಕ್ ಪರೀಕ್ಷೆಯನ್ನು ಮುಗಿಸಿ ಉಚ್ಚ ಶಿಕ್ಷಣಕ್ಕಾಗಿ ಪುಣೆಯ ಫರ್ಗ್ಯೂಸನ್ ಕಾಲೇಜನ್ನು (ಮುಂಬೈ ವಿಶ್ವವಿದ್ಯಾಲಯ) ಸೇರಿದರು. ೧೯೦೭ ರಲ್ಲಿ ಬಿ.ಎ. ಪದವಿಯನ್ನು ಪಡೆದ ಬಳಿಕ ಧಾರವಾಡದ ವಿಕ್ಟೋರಿಯಾ ಪ್ರೌಢಶಾಲೆಯಲ್ಲಿ ಶಿಕ್ಷಕರಾದರು. ಕೆಲಕಾಲದ ನಂತರ ಶಿಕ್ಷಕ ವೃತ್ತಿಯನ್ನು ತ್ಯಜಿಸಿ, ಮುಂಬೈಗೆ ತೆರಳಿ, ಕಾನೂನು ಪದವಿಯನ್ನು ಪಡೆದು ೧೯೧೧ರಲ್ಲಿ ವಕೀಲಿ ವೃತ್ತಿಯನ್ನು ಗದಗದಲ್ಲಿಯೇ ಆರಂಭಿಸಿದವರು. ಇಂತಹ ಹುಯಿಲಗೋಳ ನಾರಾಯಣರಾಯರು ‘ಕರ್ನಾಟಕ ಏಕೀಕರಣ’ದಲ್ಲಿ ಪ್ರಮುಖ ಪಾತ್ರ ವಹಿಸದವರಲ್ಲಿ ಒಬ್ಬರು. ಅಲ್ಲದೇ ಧಾರವಾಡದ ವಿದ್ಯಾವರ್ಧಕ ಸಂಘದ ಸ್ಥಾಪನೆಯಲ್ಲೂ ಪ್ರಮುಖರಲ್ಲೊಬ್ಬರಾಗಿದ್ದವರು. ನಾರಾಯಣರಾಯರು ಮೂಲತಃ ನಾಟಕಕಾರರು. ಕನ್ನಡ ರಂಗಭೂಮಿಗಾಗಿ ಕಾಲ್ಪನಿಕ, ಐತಿಹಾಸಿಕ, ಪೌರಾಣಿಕ, ಸಾಮಾಜಿಕ ಹೀಗೆ ವಿವಿಧ ಬಗೆಯ ನಾಟಕಗಳನ್ನು ರಚಿಸಿ ಪ್ರದರ್ಶಿಸಿದವರು. ಇವರ ಅನೇಕ ಕವನಗಳು ಅಂದಿನ ಪತ್ರಿಕೆಗಳಾದ ‘ಜೈ ಕರ್ನಾಟಕ ವೃತ್ತ’ , ‘ಪ್ರಭಾತ’ , ‘ಧನಂಜಯ’ ಮೊದಲಾದವುಗಳಲ್ಲಿ ಪ್ರಕಟವಾದವು. ನಾರಾಯಣರಾಯರು ತಮ್ಮ ನಾಟಕಗಳಿಗಾಗಿ ಗೀತೆಗಳನ್ನೂ ರಚಿಸಿದರು. ನಾರಾಯಣರಾಯರು ‘ಮೂಡಲು ಹರಿಯಿತು’ ಎಂಬ ಕಾದಂಬರಿಯನ್ನೂ ಬರೆದಿದ್ದರೆಂದು ತಿಳಿದು ಬರುತ್ತದೆ. ಆದರೆ ಈ ಕಾದಂಬರಿಯ ಹಸ್ತಪ್ರತಿ ಈಗ ಲಭ್ಯವಿಲ್ಲ. ನಾಟಕಗಳು– ಹುಯಿಲಗೋಳ ನಾರಾಯಣರು ಐತಿಹಾಸಿಕ, ಪೌರಾಣಿಕ, ಸಾಮಾಜಿಕ, ಕಾಲ್ಪನಿಕ ನಾಟಕಗಳನ್ನು ರಚಿಸಿದವರು. ಅವುಗಳು ಕೆಳಕಂಡಂತಿವೆ– # ಕಾಲ್ಪನಿಕ ವಜ್ರಮುಕುಟ (೧೯೧೦) ಕನಕವಿಲಾಸ (೧೯೧೩) # ಐತಿಹಾಸಿಕ ಪ್ರೇಮಾರ್ಜುನ(೧೯೧೨) ಮೋಹಹರಿ(೧೯೧೪) ಅಜ್ಞಾತವಾಸ(೧೯೧೫) ಪ್ರೇಮವಿಜಯ(೧೯೧೬) ಸಂಗೀತ ಕುಮಾರರಾಮ ಚರಿತ(೧೯೧೭) ವಿದ್ಯಾರಣ್ಯ(೧೯೨೧) # ಪೌರಾಣಿಕ ಭಾರತ ಸಂಧಾನ(೧೯೧೮) ಉತ್ತರ ಗೋಗ್ರಹಣ(೧೯೨೨) # ಸಾಮಾಜಿಕ ಸ್ತ್ರೀ ಧರ್ಮ ರಹಸ್ಯ(೧೯೧೯) ಶಿಕ್ಷಣಸಂಭ್ರಮ(೧೯೨೦) ಪತಿತೋದ್ಧಾರ(೧೯೫೨) ಅವರಿಗೆ ಸಂದ ಪ್ರಶಸ್ತಿ ಹಾಗೂ ಗೌರವಗಳು ಹೀಗಿವೆ– ಆಗಿದ್ದ ಮುಂಬಯಿ ಸರಕಾರವು ಪತಿತೋದ್ಧಾರ ನಾಟಕಕ್ಕೆ ೧೯೫೪ರಲ್ಲಿ ಬಹುಮಾನ ನೀಡಿತು. ಕಲೋಪಾಸಕ ಮಂಡಳಿಯಿಂದ ಸನ್ಮಾನ – ೧೯೫೨ ಗದಗ – ಬೆಟಗೇರಿ ನಾಗರಿಕರಿಂದ ಸನ್ಮಾನ – ೧೯೩೫ ಗದಗ ವಕೀಲರ ಸಂಗದಿಂದ – ೧೯೫೫ ಕರ್ನಾಟಕ ಸರ್ಕಾರ ಪ್ರಥಮ ರಾಜ್ಯೋತ್ಸವ – ೧೯೫೬ ಕನ್ನಡ ಸಾಹಿತ್ಯ ಪರಿಷತ್ತು – ೧೯೬೧ ಇನ್ನಿತರ ವಿಷಯಗಳು– ಹುಲಗೋಳ ನಾರಾಯಣರಾಯರ ಸಂಗಡಿಗರು ಅಥವಾ ನಾಟ್ಯವಿಲಾಸಿಗಳು ಆಡಿದ ಇವರ ನಾಟಕಗಳ ಸಂಪಾದನೆಯನ್ನು ಸಮಾಜಶಿಕ್ಷಣ ಮತ್ತು ಸುಧಾರಣೆಗೆ ವಿನಿಯೋಗಿಸಲು ಇವರು ಉದ್ದೇಶಿಸಿದ್ದರು. ಅದರಂತೆಯೇ ಗದಗಿನಲ್ಲಿ ವಿಧ್ಯಾದಾನ ಸಮಿತಿಯಿಂದ ಪ್ರೌಢಶಾಲೆಯೊಂದು ನಿರ್ಮಾಣವಾಯಿತು. ನಾರಾಯಣರಾಯರು ಅನೇಕ ಸಾಮಾಜಿಕ ಸಂಘಟನೆಗಳಲ್ಲಿಯೂ ಸೇವೆ ಸಲ್ಲಿಸಿದ್ದರು… ‘ಉದಯವಾಗಲಿ’ ಗೀತೆ ರಚಿಸಿದರು. ಇಂತಹ ಹುಯಿಲಗೋಳ ನಾರಾಯಣರಾಯರು ೪, ಜುಲೈ ೧೯೭೧ರಂದು ಹುಬ್ಬಳ್ಳಿಯಲ್ಲಿ ನಿಧನರಾದರು… ಇಂತಹ ಹುಯಿಲಗೋಳ ನಾರಾಯಣರಾಯರ ಪುಸ್ತಿಕೆಗಳನ್ನ ಮುಂದೆ ಕನ್ನಡ ಪುಸ್ತಕ ಪ್ರಾಧಿಕಾರವು “ಹುಯಿಲಗೋಳ ನಾರಾಯಣರಾಯರು ಜೀವನ ಸಾಧನೆ”ಯನ್ನು ಪುಸ್ತಕದಲ್ಲಿ ಪ್ರೊ.ಸಂಪದಾ ಸುಭಾಷ್‌, ಕನ್ನಡ ಪುಸ್ತಕ ಪ್ರಾಧಿಕಾರ, ೨೦೧೨.ರಲ್ಲಿ ಪ್ರಕಟಿಸಿತು. ಹೀದ್ದರು ಹುಯಿಲಗೋಳ ನಾರಾಯಣರಾಯರು. ಮತ್ತು ಹೀಗಿತ್ತು ಹುಯಿಲಗೋಳ ನಾರಾಯಣರಾಯರ  ಸಾಹಿತ್ಯ ಸಾಧನೆ… **************************** ಕೆ.ಶಿವು.ಲಕ್ಕಣ್ಣವರ

ಹುಯಿಲಗೋಳ ನಾರಾಯಣರಾಯ..! Read Post »

ಇತರೆ, ಜೀವನ

ಯಾಕೆ ನೆಗೆಟಿವಿಟಿ?

ಲೇಖನ ಯಾಕೆ ನೆಗೆಟಿವಿಟಿ? ಮಾಲಾ.ಮ. ಅಕ್ಕಿಶೆಟ್ಟಿ.  “ಆಕೆ ಯಾವಾಗಲೂ ಹಾಗೆಯೇ ಬಿಡಿ. ಏನ್ ಹೇಳಿದ್ರು ನೆಗೆಟಿವ್ ಆಗಿ ಯೋಚಿಸಿ, ಅದರಲ್ಲೇ ಮುಳುಗಿರುತ್ತಾಳೆ. ಇದ್ದ ಗಳಿಗೆಯನ್ನು ಆನಂದಿಸಲು ಬರಲ್ಲ. ಬರೀ ನೆಗೆಟಿವ್. ಜೀವನವನ್ನು ಆನಂದಿಸುವುದೂ ಒಂದು ಕಲೆ. ಅದು ಆಕೆಗೆ ಗೊತ್ತಿಲ್ಲ. ಎಲ್ಲರದೂ ಒಂದೊಂದು ಸಮಸ್ಯೆ ಇದ್ದೇ ಇರುತ್ತೆ. ಯಾರಿಗೂ ಸಮಸ್ಯೆ ತಪ್ಪಿದ್ದಿಲ್ಲ. ಜೀವನ ಇದ್ದ ಹಾಗೆ ನಡೆದುಕೊಂಡು ಹೋಗಬೇಕು. ಅದು ಬಿಟ್ಟು ಸತತ ಇಪ್ಪತ್ತನಾಲ್ಕು ಗಂಟೆಯೂ ನಕಾರಾತ್ಮಕವಾಗಿ ಯೋಚಿಸಿದರೆ ಹೇಗೆ? ಅದೇನೊ ಅಂತಾರಲ್ಲ ಪ್ರತಿ ಪರಿಹಾರಕ್ಕೂ ಇಂಥವರು ಸಮಸ್ಯೆಯನ್ನು ಹುಟ್ಟಿಸಿಬಿಡತಾರೆ ಅನ್ನೊ ಗುಂಪಿನಲ್ಲಿ ಇವಳೂ ಒಬ್ಬಳು”  ಎಂದು ನಾವು, ನೀವು ಹೀಗಿರುವವರನ್ನು ಭಾರಿ ಬಾರಿ ಟೀಕಿಸಿ ಮಾತನಾಡಿರಬಹುದು.ಕೊರೊನಾ ರೋಗದ ಬೆನ್ನಲ್ಲೇ ಎಲ್ಲಾ ವಯಸ್ಸಿನವರನ್ನೂ ಈ ನಕಾರಾತ್ಮಕತೆ ಕಾಡುತ್ತಿದೆ.ಆದರೆ ಎಲ್ಲರೂ ಮಾಡುವ ತಪ್ಪು ಇಲ್ಲೇ ಇದೆ. ಹೌದು ಸಕಾರಾತ್ಮಕವಾಗಿ ಇರಬೇಕು, ಯೋಚಿಸಬೇಕು… ಎಲ್ಲಾ ಸರಿ. ಆದರೆ ಯಾಕೆ ವ್ಯಕ್ತಿ ಇಷ್ಟೊಂದು ನಕಾರಾತ್ಮಕವಾಗಿ ಯೋಚಿಸುತ್ತಾನೆ ಅನ್ನುವುದನ್ನು ನಾವು, ಅಂದರೆ ಅಂತ ಅಂಥ ವ್ಯಕ್ತಿಗಳಿಗೆ ಉಪದೇಶ ಮಾಡುವಾಗ ಯೋಚಿಸಬೇಕಾಗುತ್ತದೆ.ಪೊಜಿಟಿವ್ ಥಿಂಕ್ ಮಾಡಿ, ಮಾಡಿ, ಎಂದು ಒತ್ತಾಯಿಸಿದಾಗ ಅತೀವ ದುಃಖದಲ್ಲಿದ್ದ ವ್ಯಕ್ತಿ ಹೇಗೆ ತಾನೇ ಪೊಜಿಟಿವ್ ಆಗಿ ಯೋಚಿಸಬಲ್ಲ! ಆದ್ದರಿಂದ ನೆಗೆಟಿವ್ ವ್ಯಕ್ತಿಗಳ ಹಿಂದಿರುವ ಕಾರಣಗಳನ್ನು ವಿಶ್ಲೇಷಿಸಬೇಕಾಗುತ್ತದೆ.               ತಾನು ಅತಿಯಾಗಿ ಪ್ರೀತಿಸಿದ ವ್ಯಕ್ತಿ ಮರಣ ಹೊಂದಿದಾಗ, ಆತ್ಮೀಯರಿಂದ ಬೇರ್ಪಟ್ಟ ನೋವು ಅಪಾರ.ಈ ಆತ್ಮೀಯರು.. ತಂದೆ ,ತಾಯಿ, ಅಕ್ಕ, ಅಣ್ಣ, ತಂಗಿ, ತಮ್ಮ, ತಂಗಿ, ಗೆಳೆಯ,ಗೆಳತಿ ಅಥವಾ ತನ್ನದು ಅಂದುಕೊಂಡ ಯಾವುದೇ ಜೀವ, ಇತ್ಯಾದಿಗಳ ಯಾದಿಯನ್ನು ಹೊಂದಿರುತ್ತದೆ. ಜೀವನವೇ ಅವರು ಎಂದಾಗ ಅವರಿಲ್ಲದ ಜೀವನಕ್ಕೆ ಅರ್ಥವೇ ಇಲ್ಲ ಎನ್ನಿಸುವುದು ತೀರ ಸ್ವಾಭಾವಿಕ. ಅನುಭವಗಳು ಜೀವನಕ್ಕೆ ಪಾಠ ಕಲಿಸುತ್ತಾ ಎನ್ನುವುದೇನೋ ಸರಿ. ಆದರೆ ಆದ ಕೆಟ್ಟ ಅನುಭವಗಳು ಮನುಷ್ಯನನ್ನು ನೆಗೆಟಿವ್ ಕೂಪಕ್ಕೆ ತಳ್ಳುವುದೂ ಅಷ್ಟೇ ಸತ್ಯವಾಗಿದೆ. ಕೆಟ್ಟ ಅನುಭವಗಳು  ಒಬ್ಬನನ್ನು ಮೇಲೆತ್ತುವಂತೆ ಮಾಡಿದರೆ, ಇನ್ನುಳಿದವರಿಗೆ ಅಂಥ ಘಟನೆಗಳಿಂದ ಹೊರಬಾರದಂತೆ ಮಾಡಿರುತ್ತವೆ. ಪೆಟ್ಟು ತಿಂದ ವ್ಯಕ್ತಿ ಪೆಟ್ಟನ್ನು ಚಾಲೆಂಜ್ ಆಗಿ ತೆಗೆದುಕೊಂಡು ನಾಗಾಲೋಟದಲ್ಲಿ ಮುಂದುವರಿದು ಪ್ರಗತಿಯನ್ನು ಸಾಧಿಸಬಹುದು… ಆದರೆ ಅದು ಎಲ್ಲರ ಜೀವನದಲ್ಲೂ ಸಾಧ್ಯವಿಲ್ಲ.          ಎಷ್ಟೇ ಪೊಜಿಟಿವ್ ಆಗಿ ಇರಲು ಬಯಸಿದರೂ ಬರುವ ಸಂದರ್ಭಗಳು ಮನುಷ್ಯನನ್ನು ಕುಗ್ಗಿಸಿ ನೆಲಕಚ್ಚುತ್ತವೆ. ಅಂಥ ಸಂದರ್ಭ ಎಂದರೆ ಭಯ ಪೀಡಿತರಾಗುವ ಅನುಭವಗಳು ಅವರಲ್ಲಿ ಬೇರೂರಿ ಬಿಡುತ್ತವೆ.ಇನ್ನೊಂದೆಡೆ, ಮರಳಿ ಪ್ರಯತ್ನ ಮಾಡು ಎನ್ನುವ ಸಿದ್ಧಾಂತವನ್ನು ಕಟ್ಟಾ ನಿರ್ವಹಿಸಿದಾಗಲೂ ಮಾಡಿದ ಪ್ರಯತ್ನಗಳಿಗೆ ಬೆಲೆಯೇ ಇರಲ್ಲ; ಎಲ್ಲ ವಿಫಲವಾಗುತ್ತವೆ ಅಥವಾ ಪ್ರಯತ್ನಕ್ಕೆ ಫಲವೇ ಇರೋದಿಲ್ಲ. ಇನ್ನಷ್ಟು ಸಂದರ್ಭಗಳಲ್ಲಿ ಒಳ್ಳೆಯದೇ ಆಗುತ್ತೆ ಎಂದು ಕಾದು ಕಾದು ಕುಳಿತಿರುತ್ತಾರೆ. ಆದರೆ ಕಾಯುವಿಕೆಗೆ ಸಫಲತೆ ಸಿಕ್ಕಿರಲ್ಲ. ಒಳ್ಳೆಯ ಗಳಿಗೆ ನಿರೀಕ್ಷೆಯಲ್ಲಿ ದಿನ, ತಿಂಗಳು ವರ್ಷಗಳನ್ನು ಸವೆಸಿದರೂ ಸಾಧನೆ ಆಗಿರಲ್ಲ.ಕಾದು ಬರೀ ಸುಣ್ಣವಾಗುತ್ತಾರೆ ಅಷ್ಟೇ. ಕೆಲವು ಸಲ ಮನೆಯವರಿಂದ ಅಥವಾ ಸ್ನೇಹಿತರಿಂದ ನಿರೀಕ್ಷಿಸಿದ ಮಟ್ಟದ ಸಹಾಯ, ಸಹಕಾರಗಳು, ವ್ಯಕ್ತಿಗೆ ಸಿಕ್ಕಿರಲ್ಲ. ಒಂದು ಕಿರುಬೆರಳಷ್ಟೇ ಸಹಾಯ, ಸಹಕಾರ, ಉತ್ತೇಜನದ ಲಾಲಸೆಯನ್ನು ಇಟ್ಟುಕೊಂಡ ವ್ಯಕ್ತಿ ಒಮ್ಮೆಲೇ ಮೇಲಿಂದ ಕೆಳಗೆ ಬಿದ್ದಿರುತ್ತಾನೆ. ಇದಕ್ಕೆ ವಿರುದ್ಧವಾದ ಸಂದರ್ಭಗಳಲ್ಲಿ ವ್ಯಕ್ತಿಯ ಸಹಾಯ, ಪ್ರೋತ್ಸಾಹ, ಕೆಲಸಕ್ಕೆ ಬಂದಿರಲ್ಲ. ಕಾರಣ ಅವರಲ್ಲಿ ಆತ್ಮವಿಶ್ವಾಸದ ಕೊರತೆ ಚಿಮ್ಮುತ್ತಿರುತ್ತದೆ. ತಮ್ಮ ಮೇಲೆ ತಮಗೆ ವಿಶ್ವಾಸವಿಲ್ಲ. ಈ ಕೆಲಸದಲ್ಲಿ ನಾನು ಸೋತರೆ ಹೇಗೆ? ಜನ ಏನೆಂದಾರು? ಎಂಬುದರಲ್ಲಿ ಕಾಲಹರಣವಾಗುತ್ತದೆ. ಇಂಥದ್ದೇ ಸಂದರ್ಭಗಳು ವ್ಯಕ್ತಿಯನ್ನು ಜಿಗುಪ್ಸೆ ಹೊಂದುವಂತೆ ಮಾಡುತ್ತವೆ. ಈ ಜಿಗುಪ್ಸೆ ಜೀವನದುದ್ದಕ್ಕೂ ಮುಂದುವರಿದು ಜನ ಎಲ್ಲ ಆತ ಬರೀ ನೆಗೆಟಿವ್ ಬಿಡು ಎಂಬ ನೇಮಪ್ಲೇಟ್ ತಯಾರಿಸಿ, ಹಾಕುವುದರಲ್ಲಿ ಉತ್ಸುಕರಾಗಿರುತ್ತಾರೆ.                               ಆದರೆ ನಿಜಸಂಗತಿ ಇರೋದೇ ಇಲ್ಲಿ. ಒಬ್ಬ ವ್ಯಕ್ತಿ ಯಾವ ಕಾರಣಗಳಿಂದ ನೆಗೆಟಿವ್ ಆಗಿ ಯೋಚಿಸುತ್ತಾನೆ ಎಂಬುದನ್ನು ಅರಿಯಬೇಕಾಗಿದೆ. ಮೂಲ ಸಮಸ್ಯೆಗಳಿಗೆ ಪರಿಹಾರಗಳು ಸೃಷ್ಟಿಯಾದಾಗ ಸ್ವಾಭಾವಿಕವಾಗಿ ಪೊಜಿಟಿವ್ ಎಡೆಗೆ ಮನುಷ್ಯ ವಾಲಬಹುದು. ಇಲ್ಲಾದರೆ ಎಂದೂ ಆಗಲ್ಲ. ಪಾಸಿಟಿವ್ ಆಗಿ ಆಗಿ ಎಂದರೆ ನಾಟಕೀಯ ನಗುವನ್ನು ಹೊದ್ದು ಹೃದಯದಲ್ಲಿ ನೋವು ತುಂಬಿಕೊಂಡು ಸಾಗಬೇಕಾಗುತ್ತದೆ. ಇಂಥವರಿಗೆ ನಿಜವಾಗಿಯೂ ಸಹಾಯ ಮಾಡುವ ಮನಸ್ಸಿದ್ದರೆ ಅವರೊಂದಿಗೆ ಒಂದು ಆಪ್ತ ಸಮಾಲೋಚನೆಯ ಅಗತ್ಯವಿದೆ.ಸಮಸ್ಯೆಯ ಆಳ ಅರಿತು, ಪರಿಹಾರ ಒದಗಿಸಿ.ಇಲ್ಲಾ ಅವರಿಗೆ ಸಾಂತ್ವನ ನೀಡುವ ವ್ಯಕ್ತಿಗಳ ಹತ್ತಿರವಾದರೂ ಕರೆದುಕೊಂಡು ಹೋಗಿ. ಅವರಂಥದ್ದೇ ಸಮಸ್ಯೆಯಿಂದ ಬಳಲಿ, ಅವುಗಳನ್ನು ಮೆಟ್ಟಿನಿಂತ ವ್ಯಕ್ತಿಗಳ ಪರಿಚಯ ಮಾಡಿರಿ.ಅತೀಯಾದ negativity ಯಿಂದ ದೇಹಾರೋಗ್ಯದ ಮೇಲೆ ಆಗುವ ದುಷ್ಪರಿಣಾಮಗಳ ಬಗ್ಗೆ ಮನವರಿಕೆ ಮಾಡಿಕೊಡಿ.ನೀವು ಕೊಡುವ ಸಲಹೆಗಳು ಅಥವಾ ಕ್ರಮಗಳು ನೈಜವಾದಲ್ಲಿ, ಖಂಡಿತ ವ್ಯಕ್ತಿ ತನ್ನ ನೆಗೆಟಿವಿಟಿಯಿಂದ ಹೊರಬರಬಹುದು.ಹೀಗೆ ಮಾಡಿದಾಗ ಒಳ್ಳೆಯ ಮಾರ್ಗದರ್ಶನ ಹಾಗೂ ಸಹಾಯ ಮಾಡಿದ ಆತ್ಮ ಸಂತೋಷ ನಿಮಗೂ ಇರುತ್ತದೆ. **************************************

ಯಾಕೆ ನೆಗೆಟಿವಿಟಿ? Read Post »

ಇತರೆ

‘ಜೈ ಜವಾನ್, ಜೈ ಕಿಸಾನ್’

ಲೇಖನ ‘ಜೈ ಜವಾನ್, ಜೈ ಕಿಸಾನ್’ ಜಯಘೋಷದ ಲಾಲ್ ಬಹಾದ್ದೂರ್ ಶಾಸ್ತ್ರಿ ಇಂದು ಮಹಾತ್ಮ ಗಾಂಧಿ ಹುಟ್ಟಿದ ದಿನವೂ ಹೌದು. ಹಾಗೆಯೇ ಲಾಲ್ ಬಹಾದ್ದೂರ್ ಶಾಸ್ತ್ರೀಯ ಹುಟ್ಟು ಹಬ್ಬವೂ ಹೌದು. ಗಾಂಧಿ ಸ್ಮರೀಸಿ, ಲಾಲ್ ಬಹಾದ್ದೂರ್ ಶಾಸ್ತ್ರಿಯವರ ಸ್ಮರಣೆ ಮಾಡದೇ ಬಿಟ್ಟರೆ ಅದು ಮಹಾ ತಪ್ಪಾಗುತ್ತದೆ. ಇಬ್ಬರೂ ರಾಷ್ಟ್ರದ ಹಿತ ಚಿಂತಕರು, ಆ ಕಾರಣಕ್ಕೆ ಈ ಇಬ್ಬರ ಒಂದೇ ದಿನದ ಹುಟ್ಟು ಹಬ್ಬದ ಸ್ಮರಣೆಯನ್ನು ಮಾಡೋಣ… ಇತರರಿಗೆ ಹೋಲಿಸಿದರೆ, ರಾಷ್ಟ್ರದ ಅತ್ಯುನ್ನತ ಹುದ್ದೆಗೆ ಹೊಸಬರಾಗಿದ್ದರೂ ಸಹ, 1965ರಲ್ಲಿ ಭಾರತ ಮತ್ತು ಪಾಕಿಸ್ಥಾನದ ನಡುವೆ ಜರುಗಿದ ಯುದ್ಧದಂತಹ ವಿಷಮ ಪರಿಸ್ಥಿತಿಯಲ್ಲಿಯೂ ಶಾಸ್ತ್ರೀಯವರು ದೇಶವನ್ನು ಯಶಸ್ವಿಯಾಗಿ ಮುನ್ನಡೆಸಿದವರು. ದೇಶದ ಪ್ರಧಾನಿಯಾಗಿದ್ದರೂ ಕೂಡ ಜನಸಾಮಾನ್ಯನಂತೆ ಇರುತ್ತಿದ್ದರು. ಜೀವನುದುದ್ದಕ್ಕೂ ಗಾಂಧೀ ಅನುಯಾಯಿಯಾಗಿ ಸತ್ಯ, ಅಹಿಂಸೆಯನ್ನು ಪ್ರತಿಪಾದಿಸಿ “ಶಾಂತಿದೂತ’ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದರು. ಇಂದಿನ ಯುವಕರಿಗೆ ಐಕಾನ್‌ ಆಗಬಲ್ಲ ಬದುಕು ಶಾಸ್ತ್ರೀಜಿ ಅವರದು. ಸರಳತೆ, ನೇರ ನಡೆನುಡಿ, ಶಿಸ್ತು, ಕರ್ತವ್ಯ ನಿಷ್ಠೆ ಹೀಗೆ ಮುಂತಾದ ಅವರ ಸನ್ಮಾರ್ಗಗಳು ನಮ್ಮ ಜೀವನಕ್ಕೆ ದಾರಿದೀಪವಾಗುತ್ತವೆ. ಒಂದು ಸದೃಢ ರಾಷ್ಟ್ರ ನಿರ್ಮಾಣದ ದಿಶೆಯಲ್ಲಿ, ಸ್ವಪೋಷಣೆ ಮತ್ತು ಸ್ವಾವಲಂಬನೆಗಳನ್ನು ಆಧಾರಸ್ತಂಭಗಳೆಂದು ಭಾವಿಸುವ ಆವಶ್ಯಕತೆಯನ್ನು ಮನಗಂಡು ಶಾಸ್ತ್ರೀಯವರು ಜೈ ಜವಾನ್‌ ಜೈ ಕಿಸಾನ್‌ಎಂಬ ಘೋಷವಾಕ್ಯವನ್ನು ಜನಪ್ರಿಯಗೊಳಿಸಿದರು. ಶಾಸ್ತ್ರೀಜಿ ಅವರ ಇಡೀ ಜೀವನವೇ ನಮಗೆ ಪ್ರೇರಣೆ. ಬಾಲ್ಯದಿಂದಲೇ ಸ್ವಾಭಿಮಾನ ಮತ್ತು ಅಚಲ ವ್ಯಕ್ತಿತ್ವದ ಶಿಖರವೆನಿಸಿದ ಶಾಸ್ತ್ರೀಜಿ, ರಾಷ್ಟ್ರದ ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದರಿಂದ ಹಿಡಿದು, ರಾಷ್ಟ್ರ ರಾಜಕೀಯದಲ್ಲಿ ವಿವಿಧ ಸ್ತರದ ಜವಾಬ್ದಾರಿಗಳನ್ನು ನಿರ್ವಹಿಸುವವರೆಗೂ ತಮ್ಮ ಛಾಪನ್ನು ಮೂಡಿಸಿದ್ದಾರೆ. ನಿರಾಡಂಬರವಾದ ಅವರ ನಿಲುವುಗಳ ಮೂಲಕ ಜನರ ಹೃದಯ ಸಿಂಹಾಸನದಲ್ಲಿ ಶಾಶ್ವತವಾಗಿ ನೆಲೆನಿಂತಿದ್ದಾರೆ. ಶಾಸ್ತ್ರೀಜಿ ಅವರು ಕೇಂದ್ರ ರೈಲ್ವೇ ಸಚಿವರಾದ ಸಂದರ್ಭ ತೋರಿದ ನೈತಿಕ ಜವಾಬ್ದಾರಿ ಪ್ರಸ್ತುತದ ವರೆಗೂ ರಾಜಕಾರಣಿಗಳಿಗೆ ಆದರ್ಶವಾಗುವಂತದ್ದು. 1956ರಲ್ಲಿ ಆಗಿನ ಆಂಧ್ರ ಪ್ರದೇಶದ ಅರಿಯಳೂರಲ್ಲಿ ಜರುಗಿದ ರೈಲ್ವೆ ಅಪಘಾತದಿಂದಾಗಿ 144 ಜನ ಸಾವನ್ನಪ್ಪಿದರು. ಇದರಿಂದ ಹತಾಶರಾದ ಶಾಸ್ತ್ರೀಜಿ ನೈತಿಕ ಜವಾಬ್ದಾರಿಯ ಕಾರಣ ನೀಡಿ ರಾಜೀನಾಮೆ ನೀಡಿದರು. ಇಂತಹ ಆದರ್ಶವನ್ನು ಮೆರೆದ ಅಪರೂಪದ ವ್ಯಕ್ತಿತ್ವ ಅವರದು. ಆದರೆ ಈಗಿನವರಲ್ಲಿ ಇಂತಹ ನಿರ್ಧಾರಗಳನ್ನು ನಾವು ಎದುರು ನೋಡಬಹುದೆ? ರಕ್ಷಣಾ ನಿಧಿಗೆ ವೈಯಕ್ತಿಕ ವ್ಯಕ್ತಿಯೋರ್ವನ ಅತ್ಯಧಿಕ ಕೊಡುಗೆ ಸಾಕ್ಷಿ– ಪ್ರಧಾನಿಯಾದ ಅನಂತರ ಆರ್ಥಿಕ ಸ್ಥಿತಿಯನ್ನು ಸದೃಢಗೊಳಿಸುವ, ಭಾರತೀಯ ಸೇನೆಯನ್ನು ಸಶಕ್ತಗೊಳಿಸುವ ಮತ್ತು ಕೃಷಿ ಕ್ಷೇತ್ರವನ್ನು ಸ್ವಾವಬಂಭಿಯನ್ನಾಗಿಸುವ ಕಾರ್ಯದಲ್ಲಿ ನಿರತರಾದರು. ಕ್ಷೀರ ಕ್ರಾಂತಿ ಮತ್ತು ಹಸುರು ಕ್ರಾಂತಿಗೆ ಮುನ್ನುಡಿ ಬರೆದರು. ಸೇನಾ ಅಭಿವೃದ್ಧಿಗಾಗಿ ಹಗಲಿರುಳು ದುಡಿದರಲ್ಲದೆ ಹೈದರಾಬಾದ್‌ನ ನಿಜಾಮನ ಬಳಿ ಸಹಾಯ ಕೇಳಿದಾಗ ಆತ 5 ಸಾವಿರ ಕೆ.ಜಿ. ಚಿನ್ನವನ್ನು ರಾಷ್ಟ್ರೀಯ ರಕ್ಷಣಾ ನಿಧಿಗೆ ನೀಡುತ್ತಾನೆ. ಇಲ್ಲಿಯವರೆಗೂ ಇದು ರಾಷ್ಟ್ರೀಯ ರಕ್ಷಣಾ ನಿಧಿಗೆ ವ್ಯಕ್ತಿಯೋರ್ವನ ಅತ್ಯಧಿಕ ಕೊಡುಗೆಯಾಗಿದೆ ಎನ್ನುವುದು ವಿಶೇಷ. ಇದು ರಾಷ್ಟ್ರದ ಹಿತಕ್ಕಾಗಿ ನೀಡಿದ ದೇಣಿಗೆ ಮಾತ್ರವಲ್ಲದೆ ಪ್ರಧಾನಿಯ ಮಾತಿಗೆ ಕೊಟ್ಟ ಗೌರವವಲ್ಲದೆ ಮತ್ತೇನು. ಶಾಂತ ಸ್ವರೂಪಿ ಶಾಸ್ತ್ರೀಜಿ ಜನತೆಗೆ ಹೆಚ್ಚು ಆಪ್ತವಾದದ್ದು ತಮ್ಮ ಕಾರ್ಯವೈಖರಿಯ ಮೂಲಕ ಮಾತನಾಡಿದಾಗ! ಜಗತ್ತು ನಿಬ್ಬೆರಗಾಗುವಂತಹ ನಿರ್ಣಯಗಳನ್ನು ಕೈಗೊಂಡಾಗ! 1962ರಲ್ಲಿ ಚೀನ ವಿರುದ್ಧದ ಯುದ್ಧದಲ್ಲಿ ಭಾರತ ಸೋಲಬೇಕಾಯಿತು. 1947-48ರ ಯುದ್ಧದಲ್ಲಾದ ಮುಖಭಂಗಕ್ಕೆ ಪರಿಹಾರವನ್ನು ಪಡೆದುಕೊಳ್ಳಲೋ ಅಥವಾ ಶಾಂತ ಮತ್ತು ವಾಮನಾಕಾರನಾದ ಪ್ರಧಾನಿ ಇರುವುದನ್ನು ಕಂಡೋ ಪಾಕಿಸ್ಥಾನ ಭಾರತದ ಮೇಲೆ 1965ರಲ್ಲಿ ಯುದ್ಧ ಸಾರಿತು. ಜಮ್ಮು-ಕಾಶ್ಮೀರಕ್ಕೆ ಮುತ್ತಿಗೆ ಹಾಕಿದ ಪಾಕಿಸ್ಥಾನಕ್ಕೆ ಅಚ್ಚರಿಯ ರೀತಿಯಲ್ಲಿ ಲಾಹೋರ್‌ ಅತಿಕ್ರಮಣದ ಮೂಲಕ ಉತ್ತರಿಸಿದರು. ಅಷ್ಟೇ ಅಲ್ಲದೆ ಭಾರತೀಯ ಸೇನೆಗೆ ಸಂಪೂರ್ಣ ಸ್ವಾತಂತ್ರವನ್ನು ನೀಡಿ, ಗಡಿ ದಾಟುವ ಆವಶ್ಯಕತೆ ಬಿದ್ದರೆ ಹಿಂಜರಿಯದೆ ಒಳನುಗ್ಗಿ, ಅಂತಾರಾಷ್ಟ್ರೀಯ ಸಂಬಂಧದ ಕುರಿತು ಚಿಂತಿಸಬೇಡಿ ಎಂದು ಧೈರ್ಯ ತುಂಬಿದರು. ಅದರ ಪರಿಣಾಮವಾಗಿ ಲಾಹೋರ್‌, ಹಾಜಿ ಪಿರ್‌ ಪಾಸ್‌ ಮತ್ತು ಸಿಯಾಲ್‌ ಕೋಟ್‌ನಲ್ಲಿ ನಮ್ಮ ಸೇನೆ ಪಾಕಿಸ್ಥಾನವನ್ನು ಹಿಮ್ಮೆಟ್ಟಿಸಿತ್ತು. ಅಮೆರಿಕದಿಂದ ಗೋಧಿಯ ಸರಬರಾಜು ನಿಂತಿತು ಈ ಯುದ್ಧದ ಸಂದರ್ಭ ಶಾಸ್ತ್ರೀಜಿಗೆ ಎದುರಾದ ಸವಾಲುಗಳು ಒಂದೆರಡಲ್ಲ. ಪಾಕಿಸ್ಥಾನದ ವಿರುದ್ಧ ತಿರುಗಿಬಿದ್ದ ಕಾರಣಕ್ಕಾಗಿ ಅಮೆರಿಕದಿಂದ ಬರಬೇಕಾದ ಗೋಧಿಯ ಸರಬರಾಜು ನಿಂತಿತು. ಶಾಸ್ತ್ರೀಜಿ ಹಸುರು ಕ್ರಾಂತಿಗೆ ಕರೆಕೊಟ್ಟಿದ್ದು ಆಗಲೇ. ಅಲ್ಲಿಯವರೆಗೂ ಆಹಾರದ ಕೊರತೆಯನ್ನು ನೀಗಿಸುವುದಕ್ಕಾಗಿ ರಾಷ್ಟ್ರದ ಜನತೆಗೆ ಸೋಮವಾರದ ಉಪವಾಸವನ್ನು ಆಚರಿಸುವಂತೆ ಭಿನ್ನಹ ಮಾಡಿದರು. ಅದಕ್ಕೆ ಇಡೀ ರಾಷ್ಟ್ರ ಸ್ಪಂದಿಸುವುದರ ಹಿಂದಿದ್ದ ಆ ವ್ಯಕ್ತಿಯ ನೈತಿಕ ಮೌಲ್ಯ ಎಂಥಹದು ಯೋಚಿಸಿ. ಕೇವಲ ನುಡಿದ್ದಿದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ. ಬದಲಾಗಿ ಹೇಳಿದ್ದನ್ನು ಪಾಲಿಸಿದ್ದರಿಂದ ರಾಷ್ಟ್ರವ್ಯಾಪಿ ಬೆಂಬಲ ವ್ಯಕ್ತವಾಯಿತು. ಶಾಸ್ತ್ರೀಜಿ ಎಲ್ಲರಿಗೂ ಹತ್ತಿರವಾಗುವುದು ಏಕೆ?– ಈ ಪ್ರಶ್ನೆಗೆ ಉತ್ತರ ಅವರ ಸರಳತೆ ಎನ್ನುವ ಪ್ರಭಾವಲಯ ಎಲ್ಲರನ್ನು ಸರಳವಾಗಿಯೇ ಆಕರ್ಷಿಸುತ್ತದೆ ಎನ್ನುವುದು. ಭಾರತದ ಅತ್ಯಂತ ಹೆಚ್ಚು ಜನಸಂಖ್ಯೆವುಳ್ಳ ರಾಜ್ಯದ ಗೃಹಮಂತ್ರಿಯಾಗಿದ್ದರೂ ಅವರಿಗೆ ಸ್ವಂತ ಮನೆ ಇರಲಿಲ್ಲ! ಆದ್ದರಿಂದಲೇ ಅವರನ್ನು Homeless Home Minister ಎಂದೂ ಇತರೆ ನಾಯಕರು ಕರೆಯುತ್ತಿದ್ದರು. ರಾಷ್ಟ್ರದ ಪ್ರಧಾನಿಯಾದಾಗಲೂ ಸ್ವಂತದೊಂದು ವಾಹನ ಇರಲಿಲ್ಲ! ಸರಕಾರಿ ವಾಹನವನ್ನು ಮನೆಯ ಕೆಲಸಕ್ಕಾಗಿ ಬಳಸುತ್ತಿರಲಿಲ್ಲ! ಮನೆಯವರೆಲ್ಲರ ಒತ್ತಾಯದಿಂದಾಗಿ ಕಾರು ಖರೀದಿಸಲು ನಿರ್ಧರಿಸಿದ ಶಾಸ್ತ್ರೀಜಿ ಪಿ.ಎನ್‌.ಬಿ. ಬ್ಯಾಂಕ್‌ನಲ್ಲಿ 5,000 ರೂ. ಲೋನ್‌ ಮಾಡಬೇಕಾಯಿತು! ಆದರೆ ದುರ್ದೈವದ ಸಂಗತಿ ಎಂದರೆ ಆ ಲೋನ್‌ ತೀರಿಸುವ ಮುಂಚೆಯೇ ಶಾಸ್ತ್ರೀಜಿ ಸಾವನ್ನಪ್ಪಿ ರಾಷ್ಟ್ರವನ್ನು ಅಗಲಿದರು. ನದಿ ಈಜಿದ್ದ ಶಾಸ್ತ್ರೀಜಿ– ಲಾಲ್‌ ಬಹದ್ದೂರ್‌ ಶಾಸ್ತ್ರೀಜಿ ಅವರು ಹುಟ್ಟು ಧೈರ್ಯವಂತ. ಇದೇ ಧೈರ್ಯದೊಂದಿಗೆ ಪಾಕಿಸ್ಥಾನದೊಂದಿಗೆ ಯುದ್ಧಕ್ಕಿಳಿದಿದ್ದರು. ಅವರು ತಮ್ಮ ಚಿಕ್ಕ ವಯಸ್ಸಿನಲ್ಲಿ ತಮ್ಮ ಸ್ನೇಹಿತನ ಮನೆಗೆ ನದಿ ದಾಟಿ ಹೋಗಬೇಕಾಗಿರುತ್ತದೆ. ದೋಣಿಯಲ್ಲಿ ಹೋಗಿದ್ದ ಅವರು ವಾಪಸು ಆಗುವಾಗ ದೋಣಿಯಲ್ಲಿ ಬರಲು ಅವರಲ್ಲಿ ದುಡ್ಡು ಇರುವುದಿಲ್ಲ. ಆಗ ಅವರು ದೋಣಿಗಾಗಿ ಕಾಯದೇ, ದುಡ್ಡಿಗಾಗಿ ಇನ್ನೊಬ್ಬರನ್ನು ಕೇಳದೇ ತುಂಬಿ ಹರಿಯುತ್ತಿದ್ದ ನದಿಗೆ ಧುಮುಕುತ್ತಾರೆ. ನದಿಯನ್ನು ಈಜಿ ದಡ ಸೇರುತ್ತಾರೆ. ಸೆಳೆತ, ಸುಳಿ, ನೀರಿನ ರಭಸ ಯಾವುದನ್ನು ಲೆಕ್ಕಿಸದೇ ಧೈರ್ಯದಿಂದ ನದಿ ದಾಟಿದ್ದರು. ಪರಿಸ್ಥಿತಿಯಲ್ಲಿ ಒದಗಿಬರುವ ಸಮಸ್ಯೆಗಳಿಗೆ ನಮ್ಮ ಅಚಲ ಧೈರ್ಯವೇ ಉತ್ತರ ನೀಡುತ್ತದೆ ಎಂಬುದಕ್ಕೆ ಶಾಸ್ತ್ರೀಜಿ ಅವರ ಈ ಘಟನೆ ನಮಗೆ ಸ್ಫೂರ್ತಿಯಾಗಬಲ್ಲದು. ನೇರ ನಡೆತೆ, ನಿಷ್ಠೆ– ಶಾಸ್ತ್ರೀಜಿ ಅವರು ಪ್ರಧಾನಿಯಾದರು ಉಡುಗೆ, ನಡೆಯಲ್ಲೂ ಸರಳವಾಗಿರುತ್ತಿದ್ದರು. ಒಮ್ಮೆ ಅವರ ಹೆಂಡತಿಗೆಂದು ಸೀರೆ ತರಲು ಅಂಗಡಿಗೆ ಹೋದಾಗ ಅಂಗಡಿಯವರು ಸೀರೆಯನ್ನು ಉಚಿತವಾಗಿ ಕೊಡಲು ಬಂದಾಗ ಅದನ್ನು ತೆಗೆದುಕೊಳ್ಳದೇ ದುಡ್ಡು ನೀಡಿ, ಹೆಂಡತಿಗೆ ಸೀರೆ ತೆಗೆದುಕೊಂಡು ಕೊಡುತ್ತಾರೆ. ಎಂದಿಗೂ ತಾನು ಪ್ರಧಾನಿ ಎಂಬ ಹಮ್ಮು-ಬಿಮ್ಮು ಇಲ್ಲದೇ, ಅಧಿಕಾರ ದುರುಪಯೋಗ ಮಾಡಿಕೊಳ್ಳದೇ ನೇರ, ನಿಷ್ಠೆಯಿಂದ ಇದ್ದವರು ಶಾಸ್ತ್ರೀಜಿ. ****************************************** ಕೆ.ಶಿವು.ಲಕ್ಕಣ್ಣವರ

‘ಜೈ ಜವಾನ್, ಜೈ ಕಿಸಾನ್’ Read Post »

ಇತರೆ

ಮಹಾತ್ಮಾಗಾಂಧೀಜಿಯವರ ಚಿಂತನೆಗಳ ಪ್ರಸ್ತುತತೆ :

ಲೇಖನ ಮಹಾತ್ಮಾಗಾಂಧೀಜಿಯವರ  ಚಿಂತನೆಗಳ ಪ್ರಸ್ತುತತೆ : “ಹಸಿದ ಹೊಟ್ಟೆಯವನಿಗೆ ಯಾವ ಉಪದೇಶವೂ ಮುಖ್ಯವಲ್ಲ” ಪಾಪವನ್ನು ದ್ವೇಷಿಸಿ ಪಾಪಿಯನ್ನಲ್ಲ” ಇವು ನಮ್ಮ ನೆಚ್ಚಿನ ಬಾಪೂಜಿಯವರ ನುಡಿಮುತ್ತುಗಳು.”ಅಯ್ಯಾ ನೀನೇನು ದೇವರಲ್ಲ, ಆದರೆ ದೇವರನ್ನು ಬಲವಾಗಿ ನಂಬಿದವನು, ದಂತವಿಲ್ಲದಿದ್ದರೂ ಬದುಕಿದ್ದ ಕಾಲದಲ್ಲೇ ದಂತಕಥೆಯಾದವನು” ಇವು  ಮಹಾತ್ಮಾ ಗಾಂಧೀಜಿಯವರ ಕುರಿತು ಕವಿ ಸಿ.ಪಿ.ಕೆ.ತಮ್ಮ ವಂದನೆ ಕವಿತೆಯಲ್ಲಿ ಮನೋಜ್ಞವಾಗಿ ಮೂಡಿಸಿದ ಸಾಲುಗಳು. ಮೋಹನದಾಸ ಕರಮಚಂದ ಗಾಂಧಿ ಎಂಬ ಬಾಲಕ ಯಾರಿಗೂ ನಿಲುಕದ ಅತಿಮಾನವನೇನೂ ಆಗಿರಲಿಲ್ಲ. ಎಲ್ಲರಂತೆಯೇ ಹುಟ್ಟಿ ಬೆಳೆದ ಒಬ್ಬ ಸಾಮಾನ್ಯ ಮಗು. ಅವರ ಬಾಲ್ಯ ಕೂಡ ಎಲ್ಲ ಮಕ್ಕಳ ಬಾಲ್ಯದಂತೆಯೇ ಇತ್ತು.ಗುಜರಾತಿನ ಕಾಥೇವಾಡ ಪ್ರಾಂತ್ಯದ ಪೋರ್ ಬಂದರ್ ನಲ್ಲಿ ೧೮೬೯ ರ ಅಕ್ಟೋಬರ್ ೨ ರಂದು ಸಹೃದಯ ಕರಮಚಂದ ಗಾಂಧಿ ಹಾಗೂ ದೈವ ಭಕ್ತೆ ಪುತಲೀಬಾಯಿಯವರಿಗೆ ಭಾವೀ ದಂತಕಥೆಯಾದ ಮೋಹನದಾಸನ ಜನನವಾಯಿತು. ಮೋಹನದಾಸರನ್ನು ಬಾಲ್ಯದಲ್ಲಿ ಮನೆಯವರು ಪ್ರೀತಿಯಿಂದ ಮೋನಿಯಾ ಎಂದು  ಕರೆಯುತ್ತಿದ್ದರಂತೆ .ಮೋನಿಯಾ ಕೂಡ ಎಲ್ಲರಂತೆ ತಂಟೆ ಮಾಡುತ್ತಿದ್ದನಂತೆ, ಹಠವಾದಿಯಾಗಿದ್ದನಂತೆ ಸುಳ್ಳು ಹೇಳಿದ್ದ, ಓದಿನಲ್ಲಿ ಸಾಮಾನ್ಯ ವಿದ್ಯಾರ್ಥಿಯಾಗಿದ್ದ.ಒಮ್ಮೆ ಸ್ನೇಹಿತರ ಒತ್ತಾಯಕ್ಕೆ ಮಣಿದು ಧೂಮಪಾನ ಮಾಡಿದ್ದನಂತೆ , ಮಾಂಸ ಸೇವಿಸಿದ್ದನಂತೆ.  ಆದರೆ ಮಾಡಿದ ತಪ್ಪುಗಳಿಗೆ ಪಶ್ಚಾತಾಪ ಪಟ್ಟು ಶ್ರವಣಕುಮಾರ, ಸತ್ಯ ಹರಿಶ್ಚಂದ್ರರ ಕಥೆಗಳಿಂದ ಪ್ರಭಾವಿತರಾಗಿ ತನ್ನ ಬದುಕನ್ನೇ ಬದಲಿಸಿಕೊಂಡು ಮಹಾನ್ ಚೇತನವಾಗಿ ಹೊಮ್ಮಿ ದಂತಕಥೆಯಾದ. ಗಾಂಧೀಜಿ ಚಿಂತನೆಗಳ ಬಗ್ಗೆ ಅವಲೋಕಿಸಿದಾಗ ,  ಗಾಂಧೀಜಿ ಜೀವನವೇ ಅವರ ಚಿಂತನೆ, ಅವರ ಚಿಂತನೆಯೇ ಅವರ ಜೀವನ.ಅವುಗಳಲ್ಲಿ ವ್ಯತ್ಯಾಸವಿಲ್ಲ..ಗಾಂಧೀಜಿಯವರು ಸತ್ಯ ಅಹಿಂಸೆ ಹಾಗೂ ಸೇವೆಯಲ್ಲಿ ಅಪಾರ ಶೃದ್ಧೆ ಇಟ್ಟಿದ್ದರು.ಸತ್ಯವೇ ಅವರ ಉಸಿರಾಗಿತ್ತು.ಅಹಿಂಸೆ ಹಾಗೂ ಸತ್ಯದ ನಡೆಯಿಂದ ಗಾಂಧೀಜಿ ಬದುಕಿ ತೋರಿಸಿದ್ದರು.ಅವುಗಳಿಂದಲೇ ಬ್ರಿಟಿಷರನ್ನು ಮಣಿಸಿ ಸ್ವಾತಂತ್ರ್ಯ ನೀಡುವಂತೆ ಮಾಡಿದ್ದರು.ಪಾರದರ್ಶಕತೆ ಗಾಂಧೀಜಿಯವರ ಬಹುಮುಖ್ಯಗುಣ.ಈ ವಿಶಿಷ್ಟ ಗುಣದಿಂದಲೇ ಜನಮನಗೆದ್ದ ನಾಯಕರಾದರು.ಗಾಂಧೀಜಿಯವರು ಮೂಲ ಶಿಕ್ಷಣಕ್ಕೆ ಹಚ್ಚಿನ ಒತ್ತು ನೀಡಿದ್ದರು.ಶೀಲವಿಲ್ಲದ ಶಿಕ್ಷಣ ತಪ್ಪು ಎಂದು ಭಾವಿಸಿದ್ದಅಂಗನೈತಿಕತೆಯ ನೆಲೆಗಟ್ಟಿಲ್ಲದ ಶಿಕ್ಷಣ ವಿನಾಶಕ್ಕೆ ಹಾದಿ ಎಂಬುದು ಗಾಂಧೀಜಿಯವರ ತತ್ವವಾಗಿತ್ತು. ಸರಳತೆ: ಸರಳತೆ ಗಾಂಧೀಜಿ ಜೀವನದ ಅವಿಭಾಜ್ಯ ಅಂಗವಾಗಿತ್ತು.ತೊಡುವ ಬಟ್ಟೆ, ಆಹಾರ ಪದ್ಧತಿ ಎಲ್ಲವೂ ಸರಳವಾಗಿದ್ದವು.” Simplicity is the Essence of Universality” ಎಂಬುದು ಅವರ ತತ್ವವಾಗಿತ್ತು.ಸಮಾಜ ಸೇವೆಯಲ್ಲಿ ನಿರತನಾದ ವ್ಯಕ್ತಿ ಸರಳತೆ ಹಾಗೂ ಸ್ವಾವಲಂನೆಯನ್ನು ಅನುಸರಿಸಬೇಕೆಂದು ನಂಬಿದ್ದರು ಗಾಂಧೀಜಿ.ದಕ್ಷಿಣ ಆಫ್ರಿಕೆಯಿಂದ ಹಿಂದಿರುಗಿದ ಭಾರತಕ್ಕೆ ಮರಳಿ ನಮಗೆ ಸ್ವಾತಂತ್ರ್ಯ ತಂದುಕೊಡುವ ಹೊತ್ತಿಗೆ ಅವರ ಉಡುಗೆ ಒಂದು ತುಂಡಿನ ಮುಂಡ(ಲುಂಗಿ) ಕೈ ಯಲ್ಲೊಂದು ಕೋಲು ಇದಕ್ಕಿಂತ ಸರಳವಾಗಿರಲು ಒಬ್ಬ ಮನುಷ್ಯನಿಗೆ ಸಾಧ್ಯವೆ?ಸರಳತೆ ಹಾಗೂ ಸ್ವವಲಂಬನೆಗೆ ಕಲಶವಿಟ್ಟಂತೆ ತಾವೇ ಸ್ವತಃ ಬಡಗಿ, ಕ್ಷೌರಿಕ, ಚಮ್ಮಾರ, ನೇಕಾರ, ಸೇವಕ, ಬಾಣಸಿಗರಾದರು.ಈ ಮೂಲಕ ನೈತಿಕತೆಯಿಂದ ಕೂಡಿದ ಯಾವ ಕೆಲಸವೂ ಮೇಲಲ್ಲ , ಕೀಳಲ್ಲ ಎಂದು ತೋರಿಸಿದರು . “ಇರುವ ಕೆಲಸವ ಮಾಡು ಕಿರಿದೆನದೆ ಮಾಡು” ಎಂಬ ಶರಣವಾಣಿಗನುಸಾರವಾಗಿ ಗಾಂಧೀಜಿ ಬದುಕಿದರು. ದುಬಾರಿಯಾದ ಆಡಂಬರದ ಜೀವನ ನಡೆಸಿ ದುಂದುವೆಚ್ಚ ಮಾಡುವ ಇಂದಿನ ಜನಾಂಗಕ್ಕೆ ಗಾಂಧೀಜಿ ಹೆಚ್ಚು ಪ್ರಸ್ತುತ.ಇಂದು ಕೊರೊನಾದಂತಹ ಮಹಾಪಿಡುಗಿನ ಈ ಸಂದರ್ಭದಲ್ಲಿ ಗಾಂಧಿಜೀಯವರ ಸರಳಜೀವನ, ಸ್ವಾವಲಂಬನೆಗೆ ಹೆಚ್ಚಿನ ಒತ್ತು ಸಿಕ್ಕಿದೆ. ಸರಳ ಮದುವೆ, ಸರಳಸಭೆಸಮಾರಂಭಗಳು,  ಸರಳ ಆಹಾರ, ಸರಳ ಜೀವನದ ಪಾಲನೆಯ ಅವಶ್ಯಕತೆ ಗಾಂಧಿ ಕಾಲಕ್ಕಿಂತ ಈಗ ಅನಿವಾರ್ಯ ಹಾಗೂ ಅವಶ್ಯಕ.ಅವರ ಸರಳತೆ ಹಾಗೂ ಸ್ವಾವಲಂಬನೆ ಸಾರ್ವತ್ರಿಕತೆ ಹಾಗೂ ಸರ್ವೋದಯದ ಮೂಲ ತತ್ವವಾಗಿದೆ.ಎಲ್ಲವನ್ನು ಯಂತ್ರ ಅಥವಾ ಕೆಲಸದಾಳುಗಳ ಮೂಲಕ ಮಾಡಿ ಶ್ರಮಕಡಿಮೆಮಾಡಿಕೊಂಡು ಆಲಸಿಗಳಾಗುತ್ತಿರುವ ಇಂದಿನ ಜನಾಂಗಕ್ಕೆ ಗಂಧಿ ವಿಚಾರಗಳು ಹೆಚ್ಚು ಪ್ರಸ್ತುತ. ಧರ್ಮ ಸಹಿಷ್ಣುತೆ : ಧರ್ಮ ಸಹಿಷ್ಣುತೆ ಯು ಬಾಪೂಜಿ ಜೀವನದ ಅವಿಭಾಜ್ಯ ಅಂಗ.ಅವರೇ ತಮ್ಮ ಕಥೆಯಲ್ಲಿ ಹೇಳಿರುವಂತೆ “ನನಗೆ ಸ್ಕೂಲಿನಲ್ಲಿ ಯಾವ ಧರ್ಮಿಕ ಶಿಕ್ಷಣವೂ ದೊರೆಯಲಿಲ್ಲ, ಸುತ್ತಲಿನ ವಾತಾವರಣದಿಂದಲೇ ನಾನು ಅಷ್ಟು ಇಷ್ಟು ಧರ್ಮ ಭಾವನೆ ಹೊಂದಿದ್ದೆ.ನನ್ನ ಪ್ರಕಾರ ಧರ್ಮ ಎಂದರೆ, ಆತ್ಮ ಸಾಕ್ಷಾತ್ಕಾರ, ಆತ್ಮಜ್ಞಾನ.” ಗಾಂಧೀಜಿ ಎಲ್ಲ ಧರ್ಮವನ್ನು ಪ್ರೀತಿಸಲು , ಗೌರವಿಸಲು ಅವರ ಬಾಲ್ಯದ ಪರಿಸರವೂ ಕಾರಣವಾಗಿತ್ತು.ಅವರ ದೆಕರಮಚಂದರಿಗೆ ಎಲ್ಲ ಧರ್ಮದ ಮಿತ್ರರೂ ಇದ್ದರಂತೆ. ಭಗವದ್ಗೀತೆ, ಬುದ್ಧಚರಿತೆ, ಬೈಬಲ್, ಪೈಗಂಬರ್ ಚರಿತ್ರೆಮೊದಲಾದ ಧರ್ಮಗ್ರಂಥಗಳ ಆಳವಾದ ಅಧ್ಯಯನದಿಂದ ಎಲ್ಲ ಧರ್ಮಗಳ ಮೂಲತತ್ವಗಳೂ ಒಂದೇ ಎಂದು ತಿಳಿದು ಧರ್ಮಸಹಿಷ್ಣುವಾದರು. ಜಾತಿ ,ಮತ, ಧರ್ಮ ಕುಲ ವೆಂದು ಹೊಡೆದಾಡಿಕೊಳ್ಳುವ , ಮನುಷ್ಯ ಮನುಷ್ಯರನ್ನು ಶತ್ರುಗಳಂತೆ ಕಾಣುವ ಈ ಅಣ್ವಸ್ತ್ರ ಯುಗದಲ್ಲಿ ರಾಮ,ರಹೀಮ, ಏಸಶಿಕ್ಷಣದ್ಧ ಎಲ್ಲರೂ ಒಂದೇ ಎನ್ನುವ ಸರ್ವ ಧರ್ಮ ಸಹಿಷ್ಣುತಾ ಭಾವವು ಏಕತೆಯನ್ನು ಬೆಳೆಸಬಲ್ಲುದು. ಇಂದು ಎಷ್ಟೋ ಧರ್ಮಸಂಘರ್ಷಗಳನ್ನು ಕಣ್ಣಾರೆ ಕಂಡಿದ್ದೇವೆ, ಕಿವಿಯಾರೆ ಕೇಳಿದ್ದೇವೆ.ಅದನ್ನೆಲ್ಲ ಮರೆತು ಬದುಕುವ ಕಾಲವನ್ನು ಕೊರೊನಾ ತಂದಿದೆ. ಎಲ್ಲರೂ ಒಂದೇ ಎಂಬ ಭಾವ ಹಿಂದಿಗಿಂತ ಇಂದು ಪ್ರಸ್ತುತ. ಸಮಗ್ರ ಶಿಕ್ಷಣ : ಗಾಂಧಿಜೀಯವರು ಸಮಗ್ರ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದ್ದರು. ಅವರ ಪ್ರಕಾರ ಶಿಕ್ಷಣವೆಂದರೆ ಮಗುವನ್ನು ಮಾನವನನ್ನಾಗಿಸುವ ಸರ್ವತ್ರ ಸಾಧನ.ದೇಹ ಮೆದುಳು ಚೈತನ್ಯ ಎಲ್ಲವನ್ನು ರೂಪಿಸುವುದೇ ಆಗಿದೆ.ಸಮಾಜದ ಸಪ್ತ ಮಹಾಪಾತಕಗಳಲ್ಲಿ ಒಂದಾದ ” ಶೀಲವಿಲ್ಲದ ಶಿಕ್ಷಣ ” ದಿಂದ ಸಮಾಜದ ಪತನವಾಗುತ್ತದೆ. ಎಂದು ನಂಬಿದ್ದರು ಗಾಂಧಿ.ಸಮಗ್ರತೆ, ಕಠಿಣ ಪರಿಶ್ರಮ ಹಾಗೂ ಇಚ್ಛಾಶಕ್ತಿ ಇಲ್ಲದ ಮಕ್ಕಳು ಉಪ್ಪಿಲ್ಲದ ಆಹಾರದಂತೆ. ಇಂದು ನಾವುಕಾಣುವುದು ಇಂಥ ಉಪ್ಪಿನ ಕೊರತೆಯಿರುವ ವಿದ್ಯಾರ್ಥಿಗಳನ್ನು.ಗಾಂಧೀಜಿಯವರು ಕಸುಬು ಆಧಾರಿತ ಕರಕುಶಲ ಕಲೆಯ ಕಲಿಕೆಗೆ ಹೆಚ್ಚು ಒತ್ತನೀಡಿದ್ದರು ಅವುಗಳಲ್ಲಿ ತೋಟಗಾರಿಕೆ, ನೇಕಾರಿಕೆ, ಕೃಷಿ ಮರದ ಕೆಲಸ ಮಡಕೆ ಮಾಡುವಂತಹ ಸ್ವಾವಲಂಬನೆಯ ಕೆಲಸಗಳು ಸೇರಿದ್ದವು . ಇದರಿಂದ ಶಾರೀರಿಕ ಶಿಕ್ಷಣ  ಸ್ವಾಭಾವಿಕವಾಗಿಯೇ ಸಿಗುತ್ತಿತ್ತು  ಅಲ್ಲದೇ ಸ್ವಾವಲಂಬನೆಯನ್ನೂ ಸಾಧಿಸಿದಂತಾಗುತ್ತಿತ್ತು.  ಸಾಕಷ್ಟು ದೂರ ದರ್ಶಿತ್ವವುಳ್ಳ ಗಾಂಧೀಜಿ ಮೂಲ ಶಿಕ್ಷಣದ ಪರಿಕಲ್ಪನೆಯನ್ನು ಹೊಂದಿದ್ದರು.೭ ರಿಂದ ೧೪ ವರ್ಷದೊಳಗಿನ ಎಲ್ಲ ಮಕ್ಕಳಿಗೂ ಮಾತೃ ಭಾಷೆಯಲ್ಲಿ ಶಿಕ್ಷಣ ನೀಡುವುದು ಇದರ ಉದ್ದೇಶವಾಗಿತ್ತು.ಇದರಿಂದ ಬಾಲ ಕಾರ್ಮಿಕ ಪದ್ದತಿ ಸ್ವಾಭಾವಿಕವಾಗಿಯೇ ಕಡಿಮೆಯಾಗುವುದೆಂಬ ಧೋರಣೆ ಇತ್ತು.  ಅಲ್ಲದೇ ಇಂದು ನಾವು ನೀಡುವ ಶಿಕ್ಷಣ  ನೈತಿಕತೆಯ ಅಡಿಪಾಯದ ಮೇಲೆ ಸಚ್ಚಾರಿತ್ರ್ಯವನ್ನು ಬೆಳೆಸಿದಾಗ ಮಾತ್ರ ಗಾಂಧೀಜಿಯವರ ಸಮಗ್ರ ಶಿಕ್ಷಣದ ಕನಸು ನನಸಾದೀತು. ನೈರ್ಮಲ್ಯ: ಗಾಂಧೀಜಿಯವರು ಆಂತರಿಕ ಹಾಗೂ ಬಾಹ್ಯ ನೈರ್ಮಲ್ಯಕ್ಕೆ ಹೆಚ್ಚಿನ ಒತ್ತು ನೀಡಿದ್ದರು.ದಕ್ಷಿಣ ಆಫ್ರಿಕಾದಲ್ಲಿರುವಾಗ ಅಲ್ಲಿನ ಭಾರತೀಯರಿಗೆ  ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಿದ್ದರು ನಂತರ ಭಾರತದಲ್ಲಿ  ಕೊಳೆಗೇರಿಗಳನ್ನು ತಾವೇ ಸ್ವತಃ ಸ್ವಚ್ಛ ಗೊಳಿಸಿದರು.ಆದರೆ ಬಾಪೂಜಿ ಹಾಕಿಕೊಟ್ಟ ನೈರ್ಮಲ್ಯೀಕರಣದ ಕನಸು ಪೂರ್ಣ ಪ್ರಮಾಣದಲ್ಲಿ ಯಶಸ್ವಿಯಾಗಬೇಕಾದರೆ, ಜನರಲ್ಲಿ ಸ್ವಚ್ಛತೆಯ ಬಗ್ಗೆ ಆರೋಗ್ಯದ ಬಗ್ಗೆ ಕಾಳಜಿ ಬರಬೇಕು.ಎಲ್ಲೆಂದರಲ್ಲಿ ಉಗುಳುವ, ಪರಿಪಾಠ ನಿಲ್ಲಬೇಕು.ಪ್ಲಾಸ್ಟಿಕ್ ನ್ನು ಎಸೆಯುವ,  ತೇಲಿಬಿಡುವ, ಸುಡುವ ಪ್ರಕ್ರಿಯೆ  ನಿಲ್ಲಬೇಕು.ಇಂದಿನ ಸ್ವಚ್ಛ ಭಾರತ್ ಮಿಷನ್ ನ ಉದ್ದೇಶಗಳಾದ ಬಯಲು ಶೌಚ ನಿರ್ಮೂಲನೆ, ಸಾರ್ವಜನಿಕರಲ್ಲಿ ನೈರ್ಮಲ್ಯಕ್ಕಾಗಿ ಮಾನಸಿಕ ಬದಲಾವಣೆ ಕೊಳೆಗೇರಿಗಳ ಸಂಪೂರ್ಣ ನಿರ್ಮೂಲನೆ, ಸಾಮಾಜಿಕ ಸ್ವಾಸ್ತ್ಯದ ಕುರಿತು ಜನಜಾಗೃತಿ ಇವೆಲ್ಲ ಗಾಂಧೀಜಿ ಅಂದು ಹಾಕಿಕೊಟ್ಟ ಅಡಿಪಾಯಗಳು. ಅದನ್ನು ನೆಲೆಗೊಳಿಸಬೇಕಾದ ಜವಾಬ್ಧಾರಿ ನಮ್ಮ ಮೇಲಿದೆ. ನೈರ್ಮಲ್ಯದ ವಿಷಯದಲ್ಲಿ ಕೊರೊನಾ ನಮಗೆ ಪಾಠವನ್ನು ಕಲಿಸುತ್ತಿದೆ .ಗಾಂಧೀಜಿಯವರ ನೈರ್ಮಲ್ಯೀಕರಣ ಅಂದಿಗಿಂತ ಇಂದು ಹೆಚ್ಚು ಪ್ರಸ್ತುತವಾಗಿವೆ.ವೈಯ್ಯಕ್ತಿಕ ಸ್ವಚ್ಛತೆಯ ಜೊತೆಗೆ ಸಾಮಾಜಿಕ ಸ್ವಚ್ಛತೆಯ ಕಲ್ಪನೆ ಈಗ ಜನರಲ್ಲಿ ಮೂಡಬೇಕಾದ ಅವಶ್ಯಕತೆಯಿದೆ. ಹೀಗೆ ಗಾಂಧೀಜಿಯವರು ನುಡಿದಂತೆ ನಡೆದರು, ನಡೆಯಲ್ಲಿಯೇ ನುಡಿಯನ್ನು ಪ್ರತ್ಯಕ್ಷವಾಗಿ ತೋರಿಸಿದರು. ಅವರ ಚಿಂತನೆಗಳು , ಅಹಿಂಸೆ , ಸತ್ಯಗಳು, ಸಹಕಾರ ಮನೋಧರ್ಮ, ಸರಳತೆ, ಧರ್ಮಸಹಿಷ್ಣುತೆ, ಸ್ವಚ್ಛತೆ ,ಸ್ವಾವಲಂಬನೆ ಮೂಲಶಿಕ್ಷಣ ಇವೆಲ್ಲ ಈಗ ಹೆಚ್ಚು ಪ್ರಸ್ತುತವಾಗಿವೆ.ಕೊರೊನಾದಂತಹ ಈ ಸಾಂಕ್ರಾಮಿಕ ಪಿಡುಗಿನ ಈ ಕಠಿಣ ಪರಿಸ್ಥಿತಿಯಲ್ಲಿ ಗಾಂಧೀಜಿಯವರ ಒಂದೊಂದು ಚಿಂತನೆಯೂ ಅತ್ಯಮೂಲ್ಯವಾಗಿವೆ.ಅವರ ಚಿಂತನೆಗಳು ಎಂದಿಗೂ ಪ್ರಸ್ತುತ. ***************************** . ಶುಭಲಕ್ಷ್ಮಿ ಆರ್ ನಾಯಕ

ಮಹಾತ್ಮಾಗಾಂಧೀಜಿಯವರ ಚಿಂತನೆಗಳ ಪ್ರಸ್ತುತತೆ : Read Post »

ಇತರೆ, ಗಾಂಧಿ ವಿಶೇಷ

ಗಾಂಧಿ ವಿಶೇಷ ರಾಮಭಕ್ತ ಗಾಂಧೀಜಿ-– ಭಾರತವ ಬೆಳಗಿಸಲು ತತ್ವಗಳ ಮಾಡಿ, ದೇಶವನುಳಿಸಲು ಅಹಿರ್ನಿಶಿ ದುಡಿದರು….ಕಾಲುನಡಿಗೆಯೇ ಮುದ್ರೆಯಾಗಿಸಿ, ನಿದ್ರೆ ಮರೆತು ದೇಹದಂಡಿಸಿ ಸಾಗಿದರು…. ಊರೂರು ಅಲೆದರು, ಜನಗಳ ಒಟ್ಟಾಗಿಸಿ ತಾನೊಬ್ಬನೇ ಎಂದು ಮೆರೆಯದವರು….ದಂಡಿನೊಡನೆ ನಡಿಗೆ ಹೊರಟು, ಉಪ್ಪಿಗೆ ತೆರ ತೆರಲಾಗದೆಂದು ಸತ್ಯಾಗ್ರಹವ ಘೋಷಿಸಿದವರು…. ಹೋರಾಟಕ್ಕಾಗಿಯೇ ಹುಟ್ಟಿಬಂದು ಹೊಡೆದಾಟವ ಒಪ್ಪದಾತ್ಮ, ಶಾಂತಿಯನ್ನಪ್ಪಿ ನಡೆಯಿತು…ಇಷ್ಟಪಟ್ಟ ಕಡಲೆಕಾಯಿ, ನಿತ್ಯ ಪ್ರಯೋಗದ ಜೀವನ ಈ ಒಣದೇಹಿಯ ಮುಂದೆ ಮಂಡಿಯೂರಿತು…. ಹುಡುಕಿಬಂದ ಕಷ್ಟಗಳನು ಇಷ್ಟಪಟ್ಟು ಮೆಟ್ಟಿನಡೆದು, ಗದ್ದುಗೆಯಾಸೆ ಪಡದವರು….ದೇಶವೊಂದೇ ಗಮನದಲ್ಲಿ, ಸೇವೆಯೊಂದೇ ಕಾರ್ಯದಲೆಂದು ತೋರಲು ಮುಂದಾಳಾಗಿ ನಡೆದವರು….. ದೇಶವ ಒಗ್ಗೂಡಿಸಿ, ಆಂಗ್ಲರ ಬೆಚ್ಚಿಸಿದ ಸತ್ಯವಂತ ಮಹಾತ್ಮನ ಅಸಹಕಾರ ಚಳುವಳಿ….ಕನ್ನಡಕಧಾರಿಯ ಉಪವಾಸ ಸತ್ಯಾಗ್ರಹಕೆ, ನೀಡಿ ತೊಲಗಿದರು ಭಾರತಕ್ಕೆ ಸ್ವಾತಂತ್ರ್ಯದ ಬಳುವಳಿ…. ಕೋಲನು ಹಿಡಿದು ದೇಶವಿದೇಶ ಅಲೆದ, ಸ್ವಚ್ಛತಾ ಕಾರ್ಯದ ರೂವಾರಿ ಇವರು….ದೇಹ ಸವೆಸಿ, ಅಹಿಂಸೆಯ ಪಸರಿಸಿ, ಗುಂಡೇಟನುಂಡು ಅಸುನೀಗಿದವರು…. ಗುಜರಾತಿನಲ್ಲಿ ಜನಿಸಿ, ಮೊಳಗಿಸಿ, ಎಚ್ಚರಿಸಿ, ಹಾಕಿದರು ಸ್ವಾತಂತ್ರ್ಯ ಸಂಗ್ರಾಮಕ್ಕೆ ಬುನಾದಿ….ಅಂದಿಗೂ, ಇಂದಿಗೂ, ಎಂದೆಂದಿಗೂ ಧರ್ಮ, ಅಹಿಂಸೆಯ ಜಗಕೆ ತೋರಿ ಅಮರರಾದರು ರಾಮಭಕ್ತ ನಮ್ಮ ಕರಮಚಂದ ಗಾಂಧಿ…. ****************************** ಶಾಂತಿವಾಸು

Read Post »

ಇತರೆ, ಗಾಂಧಿ ವಿಶೇಷ

ಗಾಂಧಿ ವಿಶೇಷ ಕನ್ನಡ ಶಾಯರಿಗಳು 01 ಅಜ್ಜ… ರೇಛಲೋ ಇತ್ತು ನೋಡ್ರೀನಿಮ್ಮ ಕಾಲ್ದಗಾಸತ್ಯ, ನ್ಯಾಯ, ನೀತಿ, ಧರ್ಮಕಾಲು ಮುಕ್ಕಡೋ ಇದ್ದವ್ರೀಈಗಲೂ ಇದ್ದಾವ್… ರೀಕಿಮ್ಮತ್ ಇಲ್ರೀಅವೇ..!ಹಿಕ್ಮತ್ ಮಾಡ್ಯಾರ್ರೀ !! 02 ಬಾಪುಸ್ವಾತಂತ್ರ್ಯ ಪೂರ್ವದಾಗನಿಮ್ಮಾತು ತಣ್ಣಗಿತ್ತುಬೆಚ್ಚಗಾತು ರಕ್ತಹರಿಲಿಲ್ಲ ಮತ್ತೆ..?ಅದೇ ಮಹಾತ್ಮನತಾಕತ್ತು ಅಲ್ವೇನ್ರೀ…? 03 ಮಹಾತ್ಮ ಅಂಥಜಗತ್ತಿನಾಗ್ಕ್ಯಾಮೆರಾದೊಳಗಕೂಡಲಿಲ್ಲ ನೋಡ್ರೀ..!ನಮ್ಮ ಎದಿಯಾಗನಿಮ್ಮ ಇಟಗೊಂಡಿವ್ರೀಹಂಗಾ ಬದುಕ್ದ್ರೀ ನೀವು…!! 04 ಬ್ರಿಟಿಷರಿಗೆದಂಡಿಗೆ ಹೋದ್ರುಚಳುವಳಿಗೆ ಹೋದ್ರುನಿಮ್ಮ ನಡಿಗೆಹಾವು ಹರದ್ಹಂಗಸಾಯ್ ಹೊಡದ್ಹಂಗರೀ…! 05 ಖರೇ ಹೇಳಾವ್ರೇನೀವು ಒಬ್ಬರೇನೋಡ್ರಲ್ಲಾ..!ರಾಮ್ ರಹೀಮ್ಮನ್ ಮೇ ಹೈಸಬ್ಕಾ ಭಗವಾನ್ ಏಕ್ಹೈ ಅಂದೋರೂ..!! *************************** ಹುಳಿಯಾರ್ ಷಬ್ಬೀರ್

Read Post »

ಇತರೆ, ಗಾಂಧಿ ವಿಶೇಷ

ಗಾಂಧಿ ವಿಶೇಷ ಗಾಂಧೀಗೆ, ಗಾಂಧೀ ಎಂದಾಗ,ಅದಾರು ಈ ಗಾಂಧೀಎಂಬ ಪ್ರಶ್ನೆ ಭುಗಿಲೆನ್ನುತ್ತದೆ.ಹೀಗೀಗೆ ಹೀಗೀಗೆ ಎಂದು ಬಿಡಿಸಿಟ್ಟಾಗ,ಓ ಅದಾ,ಲಂಗೋಟಿ ಅಜ್ಜ ಎನ್ನದವರಿಲ್ಲ.ಮೂರ್ಖ ಮುದುಕ,ಸತ್ತ ಅಹಿಂಸೆಯ ಫಾರ್ಮಲಾ ಬಳಸಿಬ್ರಟಿಷರನ್ನೇನೋ ನಡುಗಿಸಿದ ಆದರೆಭಾರತೀಯನಿಂದೇ ಮುಳುಗಿದ.ಎಷ್ಟೆಲ್ಲಾ ಇತ್ತು,ಕುರ್ಚಿಯ ಗಟ್ಟಿ ತಾಕತ್ತುಇರಲಿಲ್ಲವೆಂದ ಮೇಲೆಅವನದೇನು ಆದರ್ಶ.ಹಗರಣದಿ ಸಿಲುಕಿಜೇಲಿನಲ್ಲಿದ್ದೂ ಮಂತ್ರಿಯಾಗುವಈಗಿನ ಬಿಳಿ ಟೋಪಿಯವರಲ್ಲಿಇವನ್ಯಾವ ಲೆಕ್ಕ.ನಿಜವಾಗಿಯೂ ತನ್ನಫ್ಯೂಚರ್ ಹಾಳು ಮಾಡಿಕೊಂಡ.ಸ್ವತಂತ್ರ ಭಾರತ,ಸ್ವತಂತ್ರ ನಾಡೆಂದುದಿಕ್ಕು ದಿವಾಳಿಯಿಲ್ಲದೇ ಅಡ್ಡಾಡಿಬದುಕ ಕೊನೆ ಮಾಡಿಕೊಂಡ.ಆದರೂ ಅಜ್ಜಮತ್ತೆ ಹುಟ್ಟಿ ಬರುವಯತ್ನ ಮಾತ್ರ ಬೇಡ.ಬಂದರೂ ನಾ ಗಾಂಧೀಎನ್ನಬೇಡ.ಪಕ್ಷ,ಓಟು,ಕುರ್ಚಿಯಲಿನಿನ್ನ ಎಳದಾಡಿಕ್ಷಣ ಕ್ಷಣವೂ ಕೊಲ್ಲುತ್ತಾರೆ‌ಅಷ್ಟೊಂದು ಮುಂದುವರೆದಿದೆನೀ ಕಟ್ಟಿದ ನಿನ್ನ ಭಾರತ. ************************************ ರಜಿಯಾ ಬಳಬಟ್ಟಿ

Read Post »

ಇತರೆ, ಗಾಂಧಿ ವಿಶೇಷ

ಗಾಂಧಿ ವಿಶೇಷ ಗಾಂಧಿ ದಿಗ್ದರ್ಶನ ಕಲಿಸಿಕೊಟ್ಟ ಪಾಠ ಶೂನ್ಯಹಣದಾಹ, ಅಧಿಕಾರ ಮೋಹಕ್ಕೆ ನಾಗಾಲೋಟಬೆಟ್ಟದಷ್ಟು ಪಾಪಕ್ಕೆಕ್ಷಮೆಯೂ ಸಿಗಲಿಕ್ಕಿಲ್ಲ !ವಿದ್ಯೆ ವಂಚಿತ ಬಾಲಕರಶೋಷಿತ ಕಿಶೋರಿಯರಹಸಿದ ಕಣ್ಬೆಳಕಲ್ಲಿ ಜಗದ ಹೆಣವೇ ಕಾಣುತಿದೆ;ಗಾಳಿಯಲ್ಲಾದರೂ ಗಾಂಧಿವಾದ ತೀಡಬಾರದೇನೆರಳು ಬಿಸಿಲಿನ ನಡುವೆದಣಿದ ದೀನರಿಗೆ ಭಾಗ್ಯ ಯೋಜನೆಮರಿಚಿಕೆಯಾಗಿ, ಮಸಲತ್ತು ನಡೆದಿದೆಇನ್ಯಾರದೊ ಜೇಬಿಗೆ ತುತ್ತಾಗಿದೆ.ಭ್ರಷ್ಟ ನೋಡುವುದೇ ಕಷ್ಟಹಗಲಿನಲ್ಲೇ ಒಂಟಿ ಹೆಣ್ಣು ತಿರುಗಾಡುವಂತಿಲ್ಲಇನ್ನೆಲ್ಲಿ ರಾಮರಾಜ್ಯ! ಕನಸೇ ಅದುಭಗ್ನ ರಾಜಕಾರಣ,ಸೊರಗು ದೇಶಪ್ರೇಮಸಾವಿಗೆ ಶರಣಾಗುವ ಅನ್ನದಾತರುವ್ಯಸನಿ ಯುವಕರು, ಢೊಂಗಿ ದಾನಿಗಳುಅಮಾನವೀಯ ಅಂಧಾನುಕರಣೆಗೆಚೂರಾದರೂ ಗಾಂಧಿತತ್ವ ನೆನಪಾಗಲಿ…ಶ್ವೇತಕಾಯ,ನಡುವಲ್ಲಿ ಕೆಂಪುಬತ್ತಿ ತಿರುಗುತ್ತಕೇ ಕೇ ಹಾಕುತ್ತ ರಥಗಳ ಹಿಂಡುದೊರಗು ಖಾದಿ,ಅಲ್ಲ ಮೆರಗು,ಪೊಗರುಧರಿಸಿದ ನಾಯಕರು !ಸಿಂಹಾಸನಕ್ಕೆ ವರಗಿ,ಹಾರಕ್ಕೆ ಕೊರಳೊಡ್ಡಿಮೈಕಾಸುರನ ಮೇಲೆರಗಿಭಾಷಣಶೂರರು,ಹೊಗಳುಭಟ್ಟರುಮಹಾತ್ಮನೆಂದು ಜಪಿಸುತ್ತಾರೆ.ಗಾಂಧಿನಿಯಮ ಯಾರಿಗೂ ಬೇಕಿಲ್ಲನಡೆಯುವುದೆಲ್ಲ ನಿಯಮಬಾಹಿರವೇ !ಇತ್ತೀಚೆಗೆ ಹೊಸ ಚಹಾದ ಪರಿಮಳ ಸೂಸಿದೆಸ್ವಚ್ಛಭಾರತದ ಪೊರಕೆಗಳು ಅಲ್ಲಲ್ಲಿ ಸೆಳೆಯುತ್ತಿವೆಕೊಳೆಯಾಗಿದ್ದ ನನ್ನ ಚಿತ್ರ ಈಗ ಗರಿಗರಿನವರಂಗುಗಳಲ್ಲಿ ಓಡಾಡುತ್ತಿವೆ.ನಕಲಿ ಫೋಟೊಗಳು ಇದ್ದಂತಿಲ್ಲಒಂದೇಕಡೆ ಬೀಗಜಡಿದು ಕೂತಿಲ್ಲವೆಂದುಸ್ವಲ್ಪ ನಿಟ್ಟುಸಿರು ಬಿಟ್ರೇ…‌…ಹಗರಣಗಳು, ಪ್ರಕರಣಗಳು ಚಳುವಳಿ ರೂಪತಾಳಿಮೀ ..ಟೂ ಮೆನ್ ಟೂ ಗಳ ಕೂಗಾಟಧರ್ಮದ ಮೆಟ್ಟಿಲಿಗೆ ಕ್ರಾಂತಿಹೆಜ್ಜೆಯ ಹುನ್ನಾರಸಂಸ್ಕೃತಿ, ಸಂಪ್ರದಾಯ, ಸಂಸ್ಕಾರಗಳು ಗಾಳಿಗೆ ತೂರಿವೆಶಿಕ್ಷಣದಲ್ಲಿ ಸಮಾನತೆ,ದುರ್ಬಲರ ಸಂರಕ್ಷಣೆ,ಗಡಿಕಾಯ್ವ ಯೋಧರ ಸ್ಥಿತಿಗತಿಗಳ ಚಿಂತನೆಯಿಲ್ಲ.ಭಾರತೀಯತೆ, ಮಾನವೀಯತೆಯನ್ನೇ…ಮರೆತಿದ್ದಾರೆ !!! ಹೇ ರಾಮ ಹೇ ರಾಮ ************************************* ವಿಭಾ ಪುರೋಹಿತ್

Read Post »

ಇತರೆ, ಗಾಂಧಿ ವಿಶೇಷ

ಗಾಂಧಿ ವಿಶೇಷ ಮತ್ತೆ ಹುಟ್ಟಿ ಬನ್ನಿ ಗಾಂಧಿ ಮತ್ತೆ ಹುಟ್ಟಿ ಬನ್ನಿ ಓ ಪರಮಪೂಜ್ಯ ಗಾಂಧಿಅಹಿಂಸೆ ಏರಲೇಬೇಕಿದೆ ಎಲ್ಲರೆದೆಯ ಗಾದಿಸತ್ಯ ಸ್ವಾವಲಂಬನೆ ನೀವು ನಡೆದ ಹಾದಿಆತ್ಮನಿರ್ಭರ ನಡೆಗೆ ಅದುವೆ ತಾನೇ ಬುನಾದಿ ಬಿತ್ತುತ್ತಲೇ ಸಾಗಿದಿರಿ ಅಹಿಂಸೆಯ ಬೀಜಅವು ಮೇಲೆದ್ದು ಚಿಗುರಿ ಮರವಾದದ್ದು ನಿಜಅಲ್ಲಲ್ಲಿ ತೂಗುತಿವೆ ಪ್ರೀತಿ ಗೂಡುಗಳ ಸಾಲುಗೆದ್ದಲು,ವಿಷ ಸರ್ಪಗಳೂ ಕೇಳುತಿವೆ ಪಾಲು ಸತ್ಯವೆಂದರೆ ನೀವು ಮಹಾತ್ಮರೆಂದರೆ ನೀವುನಿತ್ಯ ನಿಮ್ಮ ಭಜನೆ ಭಾಷಣಗಳು ಹಲವುನಿಮ್ಮ ಜೀವನಸಾರ ನುಡಿಗೆ ಮೀಸಲು ಮಾಡಿನಿಮ್ಮಂತೆ ಬಾಳುವುದನು ಮರೆತೆವು ನೋಡಿ ನೀವು ಹಚ್ಚಿಟ್ಟ ದೀಪ ಕಾಣದು ಹೊರಗಣ್ಣಿಗೆಒಳಗಣ್ಣ ರೆಪ್ಪೆ ಬಿಡಿಸೊ ಕಲೆ ಸಿದ್ದಿಸಿಲ್ಲ ನಮಗೆಬೇಡುವೆವು ಮತ್ತೆ ಬನ್ನಿ ಪರಮ ಪೂಜ್ಯ ಗಾಂಧಿಎಲ್ಲ ಹೃದಯದೊಳಗೆ ಮತ್ತೆ ಜನಿಸಿ ಬನ್ನಿ ಗಾಂಧಿ ****************************************** ರೇಖಾ ಭಟ್

Read Post »

ಇತರೆ, ಗಾಂಧಿ ವಿಶೇಷ

ಗಾಂಧಿ ವಿಶೇಷ ಎರಡು ಕವಿತೆಗಳು ಸ್ಮಾರಕ ಅಂದು ಸ್ವತಂತ್ರ ಪೂರ್ವದಂದು ತನು ಮನ ತೊರೆದು ಕುಡಿ ಕುಟುಂಬ ಬಿಟ್ಟು ಬಂಧು ಬಳಗ ಮರೆತು ಸ್ವತಂತ್ರಕ್ಕಾಗಿ ಪಣ್ಣ ತೊಟ್ಟು ನಿಂತೆ. ಇಂದಿನ ರಾಜಕಾರಣಿಗಳು ಅಂತರಾತ್ಮಕ್ಕೆ ಹೆದರಿ ಭದ್ರತಾ ಸಿಬ್ಬಂದಿಯಾಗಿ ನಿನ್ನನು ಸೌಧದ ಹೊರಗೆ ಇಟ್ಟಿದ್ದಾರೆ ಆದರೆ, ಬೆವರು ಹರಿಸುವ ಕಾರ್ಮಿಕರು ಗೌರವಾರ್ಥಕವಾಗಿ ಉದ್ಯಾನವನದಲ್ಲಿ ಪ್ರತಿಷ್ಠಾಪಿಸಿ ಸ್ಮರಿಸಿ ಮೆರೆಸಿದ್ದಾರೆ ಜನಸಂದಣಿಯ ನಡುವೆ ಮೌನವಾಗಿ ನೀನು ಸ್ಮಾರಕವಾಗಿ ನಿಂತಿದ್ದೀಯಾ ಗಾಂದಿ (ಆಂಗ್ಲದ ಮೌನಿಮೆಂಟ್ ಅನುವಾದ) ಪರಿಮಳ ಗಾಂಧಿಯ ಕಸ್ತೂರಿ ಭಾರತದ ಕಸ್ತೂರಿ ಗುಜುರಾತಿನ ಕುವರಿ ದೇಶದ ಉದ್ದಗಲಕ್ಕೂ ನಿನ್ನ ನಾಮ ಸ್ಮರಣೆ ವಿವಿಧ ಸಂಘ ಸಂಸ್ಥೆಗಳಲ್ಲಿ ಹಾದಿ ಬೀದಿಗಳಲ್ಲಿ ಬಾಪುವಿನ ಹೆಜ್ಜೆಗೆ ಹೆಜ್ಜೆ ಹಾಕಿ ಬಾಪುವಿನ ನೆರಳಾದಾಕ್ಕೆ ಬಾಪುವಿನ ಭಾವಕ್ಕೆ ಲಹರಿಯಾದಾದ್ದಕ್ಕೆ ಭಾರತದ ಸಂಸ್ಕೃತಿ ಸಂಕೇತವಾದಾದ್ದಕ್ಕೆ ನಿನ್ನ ತ್ಯಾಗಕ್ಕೆ ಎಲ್ಲೆಯುಂಟೆ ಕುಟುಂಬ ದೇಶಕ್ಕೆ ಗಾಂಧಿ ನೆನಪಾದರೆ ಕಸ್ತೂರಿ ಬಾಯಿ ಮರೆಯಾಗದು ಗಾಂಧಿ ಪರಿಮಳ ಕಸ್ತೂರಿ ಭಾರತದ ಕಸ್ತೂರಿ ಬಾಯಿ ********************************************* ರತ್ನಾ ನಾಗರಾಜ್

Read Post »

You cannot copy content of this page

Scroll to Top