ಸಂತೆಯಲ್ಲಿ ನಿಂತ ಅವಳು
ಲೇಖನ ಸಂತೆಯಲ್ಲಿ ನಿಂತ ಅವಳು (ಮಹಿಳಾ ಜಾಹಿರಾತು) ಸಂತೆಯಲ್ಲಿ ನಿಂತ ಅವಳು (ಮಹಿಳಾ ಜಾಹಿರಾತು) ಸಂತೆಯಲ್ಲಿ ನಿಂತ ಅವಳು (ಮಹಿಳಾ ಜಾಹಿರಾತು) ಪ್ರಾಚೀನ ಕಾಲದಿಂದ ಇಂದಿನವರೆಗೂ ಮಾರುಕಟ್ಟೆಗೆ ಒಂದು ಆರೋಗ್ಯಕರವಾದ ನೀತಿ ಸಂಹಿತೆಯನ್ನು ರೂಪಿಸುವ ವಿವೇಕ ಮತ್ತು ವ್ಯವಧಾನ ಸಾಮುದಾಯಿಕ ಜವಾಬ್ದಾರಿಯಾಗಿ ಯಾವ ಕಾಲದಲ್ಲಿ ಯಾರಲ್ಲಿಯೂ ಕಾಣಿಸಿಕೊಂಡಿಲ್ಲ. ಆರೋಗ್ಯಕರ ಸಮಾಜಕ್ಕೆ ಲಾಭಗಳಿಕೆಯ ವ್ಯವಹಾರಿಕತೆಯನ್ನು ನಿಯಂತ್ರಿಸುವ ಶಕ್ತಿಯಿಲ್ಲದಿದ್ದರೆ ಇಡೀ ವ್ಯವಸ್ಥೆಯೇ ನರಳಬೇಕಾಗುತ್ತದೆ. ಮಾರುಕಟ್ಟೆ ಸಂಸ್ಕೃತಿ ಗಳಿಕೆಯ ತೂಗು ಕತ್ತಿಯನ್ನು ನಿರಂತರ ಗ್ರಾಹಕನ ಮೇಲೆ ಬೀಸುತ್ತಿರುತ್ತದೆ. ಇದರಿಂದ ವ್ಯಕ್ತಿ ಸಮಾಜಗಳು ಹಲವಾರು ಅಪಾಯಗಳಿಗೆ ಒಳಗಾಗಬೇಕಾಗುತ್ತದೆ. ಭಾರತೀಯ ಸಮಾಜದಲ್ಲಿ ಹೆಣ್ಣನ್ನು ವ್ಯಕ್ತಿಯೆಂದು ಪರಿಗಣಿಸಿದ ಉದಾಹರಣೆಗಳಿಲ್ಲ. ಚರಿತ್ರೆಯುದ್ದಕ್ಕೂ ಹೆಣ್ಣನ್ನು ವಸ್ತು ಮುಖೇನವೆ ಗುರುತಿಸುವುದು ಯಾವ ಮಹಾತ್ಮರಿಗೂ ಅಪರಾಧವಾಗಿ ಕಾಣಿಸಿಲ್ಲ. ಗಂಡಸು ಸಂಪಾದಿಸಬಹುದಾದ ನಿರ್ಜೀವ ಭೌತಿಕ ವಸ್ತುವಿನಲ್ಲಿ ಹೆಣ್ಣನ್ನು ಪ್ರಭುತ್ವ ಮತ್ತು ಧರ್ಮ ಸತ್ತೆಗಳು ನಿರ್ಲಜ್ವವಾಗಿ ಸೇರಿಸಿಕೊಂಡು ಬಂದಿರುವ ಬಗ್ಗೆ ಯಾವ ಸಮಾಜ ಸುಧಾರಕನ ಸಂಕಟಕ್ಕೆ ನಿಲುಕದ ಹಾಗೇ ಉಳಿದಿದೆ. ಸರಕು ಸಂಸ್ಕೃತಿಯ ವಿಶೇಷತೆ ಮತ್ತು ಹಿತ ಅಡಗಿರುವುದು ಹೆಣ್ಣನ್ನು ಬಳಸಿಕೊಳ್ಳುವ ವಿಧಾನದಲ್ಲಿ . ಸಾಮಾಜಿಕವಾಗಿ ಹೆಣ್ಣನ್ನು ಬದುಕಿನುದ್ದಕ್ಕೂ ಅನ್ಯರ ಹಂಗಿನಲ್ಲಿರುವ ಬೆಲೆಯುಳ್ಳ ಪ್ರಾಣಿ, ವಸ್ತುವಾಗಿಸಿರುವ ಸಾಮಾಜಿಕ ಬದುಕಿನ ಸಂರಚನೆಯಲ್ಲಿಯೇ ಅಫೀಮಿನಂತಹ ಧರ್ಮ ಮತ್ತು ಹಿಂಸಾವಾದದ ಪ್ರಭುತ್ವದ ಕೌರ್ಯ ಗಟ್ಟಿಗೊಂಡಿದೆ. ಇದನ್ನು ಅರ್ಥಮಾಡಿಕೊಳ್ಳುವುದರ ಮೂಲಕ ಸ್ತ್ರೀಯ ಬದುಕಿನ ಸಂಕಥನವನ್ನು ಕಟ್ಟಿಕೊಳ್ಳಲು ಸಾಧ್ಯ. ಮಾರುಕಟ್ಟೆಯಲ್ಲಿ ಮಹಿಳೆ ಕಳೆದು ಹೋಗುತ್ತಿರುವ ಸಂಗತಿ ನಮಗೇನೂ ಹೊಸ ಸಂಗತಿಯಲ್ಲ. ನಮ್ಮ ಪುರಾಣ ಪುಣ್ಯ ಪುರುಷರ ಬೆನ್ನ ಹಿಂದೆ, ಕಣ್ಣ ಮುಂದೆ, ಕಾಲ ಕೆಳಗೆ, ಕಾಲ ಮೇಲೆ ಹೆಣ್ಣನ್ನು ಇಟ್ಟುಕೊಂಡು ದಮನಿಸಿದ ಸಂಗತಿಗಳು ನಮ್ಮ ಸಾಮಾಜಿಕ ಮೌಲ್ಯಗಳೆಂದು ಧರ್ಮ ಮುದ್ರೆಯ ಮೂಲಕ ನಿರಂತರ ಭಕ್ತಿಪೂರ್ವಕವಾಗಿ ಪಠಿಸುವ ಪರಿಪಾಠ ಇಂದಿಗೂ ನಿಂತಿಲ್ಲ. ಮಹಾಭಾರತದಲ್ಲಿ ಧರ್ಮರಾಯ ಕೈ ಹಿಡಿದ ಹೆಂಡತಿ ದ್ರೌಪದಿಯನ್ನು ಹಿರಿಯರ ಸಮ್ಮುಖದಲ್ಲಿ ಜೂಜಿನಲ್ಲಿ ಪಣಕ್ಕಿಟ್ಟು ಸೋಲುವುದರ ಮೂಲಕ ಧರ್ಮವನ್ನು ಎತ್ತಿ ಹಿಡಿದ ಕಥೆಯನ್ನು ರಸವತ್ತಾಗಿ ಹೇಳುವ ಮುಂದೆ ದ್ರೌಪದಿಯ ಅಸಹಾಯಕತೆ ನೆನಪಾಗುವುದೇ ಇಲ್ಲ. ಸಪ್ತಪದಿ ತುಳಿದು ಸುಖ-ದುಃಖದಲ್ಲಿ ಸಮವಾಗಿರೆಂದು ಕೈ ಹಿಡಿದು ಬಂದ ಹೆಂಡತಿಯನ್ನು ತುಂಬಿದ ಸಭೆಯಲ್ಲಿ ನಿಲ್ಲಿಸಿ ಪಾತಿವ್ರತ್ಯ ಪರೀಕ್ಷಿಸುವ ರಾಮ ಮಹಾತ್ಮನೆಂದು ಕರೆಯಿಸಿಕೊಂಡಿದ್ದರ ಹಿಂದೆ ಸೀತೆಯ ದಯನೀಯತೆ ಮರೆತು ಹೋಗುತ್ತದೆ. ಸತ್ಯಕ್ಕಾಗಿ ಹರಿಶ್ಚಂದ್ರ ಹೆಂಡತಿಯನ್ನು ಮಾರುವಾಗ ಚಂದ್ರಮತಿ ಅನುಭವಿಸಿದ ಸಂಕಟದ ಅರಿವು ಯಾರ ಹೃದಯಕ್ಕೂ ತಟ್ಟುವುದಿಲ್ಲ. ಯಯಾತಿ ಮಹಾರಾಜ ತನ್ನ ಸ್ತ್ರೀಯರಿಗೆ ಹೆಸರುಳಿಸಿಕೊಳ್ಳುವ ಸಲುವಾಗಿ ದಾನವಾಗಿ ಕುದುರೆ ಕೇಳಿದ ಗಾವಲನಿಗೆ ಹೊಟ್ಟೆಯಲ್ಲಿ ಹುಟ್ಟಿದ ಮಗಳು ಮಾಧವಿಯನ್ನು ದಾನವಾಗಿ ನೀಡಿದ್ದು ಉಳಿದಿರುವುದೇ ಹೊರತು ಮಾಧವಿಯ ಛಿದ್ರಗೊಂಡ ಕನಸುಗಳು ಮರೆತು ಹೋಗಿವೆ. ಗುರುವಿಗೆ ದಕ್ಷಿಣೆ ಕೊಟ್ಟು ಗುರು ಭಕ್ತಿಯನ್ನು ಮರೆಯುವ ಸಲುವಾಗಿ ಗಾಲವ ರಾಜರಿಂದ ರಾಜರಿಗೆ ಮಾಧವಿಯನ್ನು ಹೆತ್ತು ಕೊಡುವ ಯಂತ್ರದಂತೆ ಮಾರಿ ಕುದುರೆ ಪಡೆಯುತ್ತ ಹೋದ ಸಂಗತಿ ನಮಗೆ ಮಾರಿದ ದಾಖಲೆ ಕಡತಗಳಲ್ಲಿ ಮಿಂಚುತ್ತಿದೆ. ಇಂದಿಗೂ ಗಂಡಸಿನ ಅಹಮ್ಮಿಗೆ ಪೆಟ್ಟು ಬೀಳುವುದೆಲ್ಲ ಆತನ ಒಡೆತನದಲ್ಲಿರುವ ಹೆಂಗಸರನ್ನು ಕುರಿತು ಮಾತನಾಡಿದಾಗ ಮಾತ್ರ. ನಮ್ಮ ಸುತ್ತ ಮುತ್ತಲೂ ನಡೆಯುತ್ತಿರುವ ಘಟನೆಗಳಿಗೆ ಒಂದಿಲ್ಲಾ ಒಂದು ರೀತಿಯಲ್ಲಿ ಹೆಣ್ಣನ್ನು ತಳುಕು ಹಾಕಲಾಗಿರುತ್ತದೆ. ಹೆಣ್ಣನ್ನು ಮಾರುವ, ಕೊಳ್ಳುವ, ಪಣಕ್ಕಿಡುವ, ಕದ್ದು ಪರಾರಿಯಾಗುವ ವಿಷಯಗಳೆಲ್ಲ ಮಾರುಕಟ್ಟೆಯ ಸಂಸ್ಕೃತಿಯ ಇನ್ನೊಂದು ರೂಪ. ಅಷ್ಟೇ ಅಲ್ಲ ಹೆಣ್ಣನ್ನು ನಿರ್ಜೀವ ವಸ್ತುವಾಗಿ ಸಂಭೋದಿಸುವುದನ್ನು ಕಾಣಬಹುದು. ಇಂದಿಗೂ ಅದು, ಇದು ಎಂದೇ ಕರೆಯಲಾಗುತ್ತದೆ. ಅಷ್ಟೇ ಅಲ್ಲ ಎತ್ತು ಕತ್ತೆಗಳನ್ನು ಓಡಿಸಿಕೊಂಡು ಹೋದರು ಎನ್ನುವಂತೆ ಹೆಣ್ಣನ್ನು ಓಡಿಸಿಕೊಂಡು ಹೋಗಲಾಯಿತೆಂದು ಕರೆಯುವುದನ್ನೆಲ್ಲ ನೋಡಿದಾಗ ಹೆಣ್ಣಿನ ಇರುವಿಕೆಯನ್ನು ಸಾಂಸ್ಕೃತಿಕವಾಗಿ ಹೇಗಿದೆಯೆಂಬುದನ್ನು ಮತ್ತೇ ಮತ್ತೇ ವೇದಪುರಾಣಗಳನ್ನು ಉದಾಹರಣೆಗೆ ಬಳಸಬೇಕಾಗಿಲ್ಲ. ಇಂದು ಜಾಗತೀಕರಣ, ಖಾಸಗೀಕರಣ, ಉದಾರೀಕರಣ ಕಾರಣಗಳಿಂದ ಅಭಿವೃದ್ಧಿ ಶೀಲ ದೇಶಗಳು ತಮ್ಮ ಬಹುಮುಖ ಅಸ್ತಿತ್ವವನ್ನು ಕಳೆದುಕೊಳ್ಳುವ ಅಪಾಯದಲ್ಲಿವೆ. ವ್ಯಾಪಾರಿ ಉದ್ದೇಶದಿಂದ ಬರುವ ವ್ಯಕ್ತಿ ಸಂಗತಿಗಳೆಲ್ಲ ಬರಿ ಲಾಭದ ಮೇಲೆ ಕಣ್ಣಿಟ್ಟಿರುತ್ತವೆ. ಲಾಭ ಗಳಿಕೆಗಾಗಿ ಜೀವ ವಿರೋಧಿ ತಂತ್ರಗಳನ್ನೆಲ್ಲ ಯಥೇಚ್ಛವಾಗಿಯೇ ಬಳಸುತ್ತೇವೆ. ಐವತ್ತು ವರ್ಷದ ಹಿಂದೆ ಭಾರತಕ್ಕೆ ಕಾಲಿಟ್ಟ ಬ್ರಿಟಿಷರ ಕೈಯಲ್ಲಿ ತಕ್ಕಡಿ ಉದಾಹರಣೆಗೆ ಮಾತ್ರವಿತ್ತೆಂಬುದನ್ನು ನೆನಪಿಸಿಕೊಳ್ಳಬೇಕಾಗಿದೆ. ಇಂದು ಮತ್ತೆ ಅದೇ ಅಪಾಯದಲ್ಲಿ ದೇಶ ಸಿಲುಕುತ್ತಿದೆ. ವ್ಯಕ್ತಿ ಹಿತಾಸಕ್ತಿಯ ರಾಜಕಾರಣಕ್ಕೆ ಯಾವುದೇ ತಾತ್ವಿಕ ಬದ್ಧತೆಯಿಲ್ಲದೆ ಇರುವುದರಿಂದ ಏನೆಲ್ಲ ಆಪತ್ತುಗಳನ್ನು ಆಹ್ವಾನಿಸಿದ್ದೇವೆ. ವಿಶ್ವ ವಾಣಿಜ್ಯ ನೀತಿಗೆ ಒಪ್ಪಿಗೆ ನೀಡುವಾಗ ನಮ್ಮ ದೇಶದ ಆರ್ಥಿಕ, ಸಾಮಾಜಿಕ ಹಿನ್ನೆಲೆಯಲ್ಲಿ ಅಸ್ತಿತ್ವಕ್ಕೆ ಧಕ್ಕೆ ಭವಿಷ್ಯತ್ತಿನಲ್ಲಿ ಬರಬಹುದೆಂಬ ಮುಂಜಾಗರೂಕತೆ, ಮುಂದಾಲೋಚನೆಗಳಿಲ್ಲದೆ ವಧಾಸ್ಥಾನಕ್ಕೆ ಬಂದು ನಿಂತಿರುವೆವು. ಬಹುರಾಷ್ಟ್ರೀಯ ಕಂಪನಿಗಳಿಗೆ ರತ್ನಗಂಬಳಿಯನ್ನು ಹಾಸಿ ನಡುಮನೆಗೆ ಕರೆದುಕೊಂಡಿದ್ದೇವೆ. ಹೀಗೆ ಬಂದವರಿಗೆ ನಮ್ಮ ಮನೆಯ ಹೆಂಗಸರಿಂದ ರಾಜೋಪಚಾರ ನೀಡಲು ಭ್ರಮೆ ಮತ್ತು ದುರಾಸೆಯ ಒತ್ತಡಗಳನ್ನು ಹೇರಿದ್ದೇವೆ. ಈ ಜಾಗತೀಕರಣ ಪ್ರಕ್ರಿಯೆಯಿಂದ ಬಹುಸಂಖ್ಯಾತ ದುಡಿವ ವರ್ಗ ಮತ್ತು ಮಹಿಳೆಯರು ಅಗ್ಗದ ವಸ್ತುಗಳಾಗಿ ಬಳಕೆಗೊಳ್ಳುತ್ತಿರುವ ಶೋಚನೀಯ ವಾತಾವರಣ ದೇಶದುದ್ದಕ್ಕೂ ಕಾಣಿಸುತ್ತಿದೆ. ಧಾರ್ಮಿಕವಾಗಿಯೇ ಹೆಣ್ಣನ್ನು ಭೋಗಪ್ರದ ಜೀವವೆಂದು ಸಾರಿದ್ದಷ್ಟೇ ಅಲ್ಲ ಅದನ್ನು ಸಂಸ್ಕೃತಿಯಾಗಿಯೂ ಬೆಳಸಿಕೊಂಡು ಬರುತ್ತಿರುವೆವು. ಈ ಹಳೆಯ ಪುರಾಣ ಮೂಲದ ಸ್ತ್ರೀ ಮಾದರಿಗಳು ಇಂದು ಸಾಣೆ ಹಿಡಿಯಲ್ಲಿಟ್ಟು ಹೊಸ ರೂಪದಲ್ಲಿ ತಳಕು ಬಳುಕಿನಿಂದ ನಾವು ಕೊಳ್ಳುವ ವಸ್ತುಗಳಿಗೆ ಕಿರುನಗೆ ಬೀರಲು ನಿಂತಿರುವಳು. ಬಂಡವಾಳ ಹೂಡುವ ಬಹುರಾಷ್ಟ್ರೀಯ ಕಂಪನಿಗಳು ಮತ್ತು ಸ್ವದೇಶಿ ಬಂಡವಾಳ ಶಾಹಿಗಳು ರಾಷ್ಟ್ರದ ಆರ್ಥಿಕ ಸ್ವಾಯತ್ತತೆ, ಸಾವಲಂಬನೆಯ ನೆಲೆಗಳನ್ನು ಕ್ರಮೇಣ ನಿಷ್ಕ್ರಿಯಗೊಳಿಸುತ್ತಿವೆ. ಇದಕ್ಕಾಗಿ ರಾಜಕೀಯ ಅರಾಜಕತೆಯನ್ನು ಹುಟ್ಟು ಹಾಕುತ್ತದೆ. ಪ್ರಜ್ಞಾವಂತರ ಗಮನ ತನ್ನ ಮೇಲೆ ಬೀಳದಿರುವಂತೆ ಮತೀಯ ಭಯೋತ್ಪಾದಕತೆಯನ್ನು ಪ್ರಚೋದಿಸುತ್ತದೆ. ಜನ ಸಾಮಾನ್ಯರನ್ನೊಳಗೊಂಡ ಹಾಗೇ ಇಡೀ ಜನ ಸಮುದಾಯಗಳಲ್ಲಿ ಪರಸ್ಪರ ಸಂದೇಹ, ಅಪನಂಬುಗೆಯನ್ನುಂಟು ಮಾಡಿ ಆಂತರಿಕ ನೆಮ್ಮದಿಯನ್ನು ಕಿತ್ತುಕೊಳ್ಳತ್ತದೆ. ಇದಕ್ಕೆಲ್ಲ ಸ್ತ್ರೀಯನ್ನು ಒಂದಲ್ಲಾ ಒಂದು ರೀತಿಯಲ್ಲಿ ತಳುಕು ಹಾಕಿರುತ್ತದೆ. ಇಲ್ಲಿಯ ಭೌದ್ಧಿಕ ಮತ್ತು ಭೌತಿಕ ಸಂಪತ್ತಿನ ಮೇಲೆ ಆಕ್ರಮಣಕಾರಿ ನೀತಿಯನ್ನು ಹೇರುತ್ತದೆ. ಮಹಿಳೆಯರಲ್ಲಿ ಉಪಭೋಗಪ್ರದವಾದ ಮನೋವೃತ್ತಿಯನ್ನು ಉದ್ದೀಪಿಸುತ್ತದೆ. ದುಡಿಯುವ ವರ್ಗದ ದುಡಿಯುವ ಅವಕಾಶಗಳನ್ನು ಯಂತ್ರಗಳ ಬಾಯಿಗೆ ಒಡ್ಡುತ್ತದೆ. ಹೀಗೆ ಆರ್ಥಿಕ ಅಸಹಾಯಕತೆಯಿಂದ ಬಳಲುವ ಜನವರ್ಗ ವ್ಯಾಪಾರಿ ತಂತ್ರಗಳಿಗೆ ಹೊಸ ಹೊಸ ರೂಪದಲ್ಲಿ ಬಲಿಯಾಗುತ್ತದೆ. ಮುಂದುವರೆದ ದೇಶಗಳು ಉತ್ಪಾದಿಸುತ್ತಿರುವ ಕಾಂಡೋಂನಿಂದ ಹಿಡಿದು ಮಕ್ಕಳು ತಿನ್ನುವ ಚಾಕೋಲೇಟ್ನವರೆಗೂ ನಮ್ಮ ದೇಶದಲ್ಲಿ ಮಾರುಕಟ್ಟೆ ಕಳೆದುಕೊಂಡಿರುವ ಕಾರಣಕ್ಕಾಗಿ ಜಾಗತಿಕ ಮಾರುಕಟ್ಟೆಯನ್ನು ಮುಕ್ತವಾಗಿಟ್ಟಿದೆ. ಎಲ್ಲ ರೀತಿಯಿಂದಲೂ ಹಸಿದು ಕುಳಿತಿರುವ ಹಿಂದುಳಿದ ದೇಶಗಳು ದಿಢೀರನೆ ಈ ವ್ಯಾಪಾರಿ ಜಾಲಕ್ಕೆ ಬಿದ್ದು ದೇಶೀಯ ಸಾರ್ವಜನಿಕ ಉದ್ಯಮ ವ್ಯವಹಾರಗಳೆಲ್ಲ ಕುಸಿದು ಹೋಗಿವೆ. ಸರಕಾರಿ, ಸಾರ್ವಜನಿಕ ಉದ್ಯಮಗಳು ಕೃತಕ ನಷ್ಟದ ಕಾರಣಕ್ಕಾಗಿ ಶಾಶ್ವತವಾಗಿ ಬೀಗ ಜಡಿದು ಖಾಸಗಿಯವರ ಕೈಯಲ್ಲಿ ಬೀಗ ನೀಡುತ್ತಿರುವೆವು. ಇದರಿಂದ ಮಾರುಕಟ್ಟೆಯ ನೀತಿ ಹೇಗೆ ರೂಪಿಸಲ್ಪ ಡುತ್ತಿದೆಯೆಂದರೆ ‘ಅಕ್ಕನನ್ನು ತೆಗೆದುಕೊಂಡರೆ ತಂಗಿ ಫ್ರೀ’ ಎಂದು ರಸ್ತೆ ಬದಿಯಲ್ಲಿ ನಿಂತು ಕೂಗಿ ಕೂಗಿ ಕರೆಯುವಂತಾಗಿದೆ. ಹೀಗೆ ಗ್ರಾಹಕನಲ್ಲಿ ಅಗ್ಗದರ ಮತ್ತು ಫ್ರೀ ಎನ್ನವುದರ ಆಮಿಷ ತೋರಿಸಿ ತನ್ನ ಉತ್ಪಾದನಾ ವಸ್ತುಗಳನ್ನು ಬಳಸುವಂತೆ ಮಾನಸಿಕ ರೋಗಕ್ಕೆ ಒಳಪಡಿಸಿದರೆ ಮುಗಿದೇ ಹೋಯಿತು. ಮಾನಸಿಕವಾಗಿ ಗುಲಾಮನಾದ ಗ್ರಾಹಕನನ್ನು ನಿರಂತರ ಶೋಷಿಸುವ ವಿಧಾನ ಬಂಡವಾಳಿಗರಿಗೆ ಚೆನ್ನಾಗಿ ತಿಳಿದಿರುತ್ತದೆ. ಹೀಗೆ ತಾನು ಉತ್ಪಾದಿಸಿದ ವಸ್ತುವಿಗೆ ಗ್ರಾಹಕನ ಮನೆಯ ಬಾಗಿಲನ್ನು ತಟ್ಟಲು ಅಗ್ಗದ ಕೂಲಿಯಲ್ಲಿ ಮಹಿಳೆಯರನ್ನು ದುಡಿಸಿಕೊಳ್ಳಲಾಗುತ್ತಿದೆ. ಏಕ ಕಾಲದಲ್ಲಿ ನಮ್ಮ ಮಹಿಳೆಯರು ಮತ್ತು ನಮ್ಮ ಗಂಡಸರ ಜೇಬಿನ ಭಾರ ಹಗುರವಾಗುವುದು. ಹೆಣ್ಣಿನ ಸೌಂದರ್ಯ ಬಹುಕಾಲದಿಂದ ಬಲಿಷ್ಠ ಗಂಡಸಿನ ಉಪಭೋಗಕ್ಕಾಗಿ ವೃದ್ಧಿಯಾಗುತ್ತಿತ್ತು. ಅದಕ್ಕಾಗಿಯೇ ಒಂದು ವರ್ಗದ ಹೆಣ್ಣನ್ನು ಸಿದ್ಧಗೊಳಿಸಲಾಗುತ್ತಿತ್ತು. ಇಂದು ಸಹ ವಿಶ್ವ ಮಾರುಕಟ್ಟೆಯಲ್ಲಿ ಒಂದು ವಸ್ತುವಿನ ಅಸ್ತಿತ್ವವನ್ನು ಸ್ಥಾಪಿಸಬೇಕಾದರೆ ಹೆಣ್ಣಿನ ಸೌಂದರ್ಯ ದೇಹವೊಂದು ಮುಖ್ಯ ಪಾತ್ರವಹಿಸುತ್ತದೆ. ಈ ಶತಮಾನದ ಅಂತ್ಯದಲ್ಲಿ ವಿಶ್ವ ಸುಂದರಿಯರ ಸ್ಪರ್ಧೆ ಗಲ್ಲಿ-ಗಲ್ಲಿಗಳಲ್ಲಿ ನಡೆಯುತ್ತಿದೆ. ಬಹು ಜನಪ್ರಿಯತೆಯನ್ನು ಗಳಿಸಿಕೊಂಡಿರುವ ವಿಶ್ವ ಸುಂದರಿ ಸ್ಪರ್ಧೆಯ ಹಿಂದೆ ಬಂಡವಾಳ ಶಾಹಿಗಳ ಕೈಗಳಿವೆ. ಸಾವಿರಾರು ವರ್ಷಗಳಿಂದ ಪುರಾಣಗಳ ಮೂಲಕ ನಮ್ಮ ನೆತ್ತಿಯ ಮೇಲೆ ಕುಣಿಯುತ್ತಿದ್ದ ಮೇನಕೆ, ತಿಲೋತ್ತಮೆ, ಊರ್ವಶಿಯರು ಪಾಯಿಖಾನೆಗಳನ್ನು ಬಿಡದೆ ಹಾಗೆ ಎಲ್ಲೆಂದರಲ್ಲಿ ತಳವೂರಿರುವರು. ಇಷ್ಟು ಶತಮಾನಗಳಲ್ಲಿ ಹುಟ್ಟಿದ ಸುಂದರಿಯರು ದಿಢೀರನೆ ಈ ಶತಮಾನದ ಅಂಚಿನಲ್ಲಿ ನಮ್ಮಂತಹ ದೇಶದಲ್ಲಿ ದಿಢೀರನೆ ಕಾಣಿಸಿಕೊಂಡಿರುವುದರ ಬಗ್ಗೆ ಅಶ್ಚರ್ಯಪಡುವುದೇನೂ ಇಲ್ಲ. ಬೆಂಗಳೂರಿನಂತಹ ನಗರಗಳಲ್ಲಿ ಮಧ್ಯಮ ವರ್ಗದ ಜನ ಸಂಪತ್ತಿನ ಗಳಿಕೆಗಾಗಿ ಮನೆಯ ಮಕ್ಕಳನ್ನು ಅನಾರೋಗ್ಯದ ಚಟುವಟಿಕೆಗಳಿಗೆ ಪ್ರೇರೇಪಿಸುತ್ತಿರುವರು. ಸ್ಥಳೀಯ ವಸ್ತುವನ್ನು ಒಳಗೊಂಡ ಹಾಗೇ ವಿದೇಶ ಉತ್ಪಾದಿತ ವಸ್ತುಗಳಿಗೆ ಮಹಿಳೆಯರನ್ನು ರೂಪದರ್ಶಿಯರನ್ನಾಗಿ ಬಳಸಿಕೊಳ್ಳುವುದನ್ನು ಹೆಮ್ಮೆಯ ಸಂಗತಿ ಎಂದು ಕಾಣುತ್ತಿರುವೆವು. ಜಾಹೀರಾತುಗಳಿಗೂ ವಸ್ತುಗಳಿಗೂ ಕಾರ್ಯಕಾರಣ ಸಂಬಂಧ ಏನೆಂಬುದನ್ನು ಕಾಣುತ್ತಿಲ್ಲ. ಮನೋ ವಿಕಾರಕ್ಕೆ ಆಸ್ಪದ ನೀಡುವ, ಸಾಮಾಜಿಕ ಸ್ವಾಸ್ಥ್ಯ ಕೆಡಿಸಬಹುದಾದ ಜಾಹೀರಾತುಗಳ ಮೇಲೆ ಕನಿಷ್ಠ ಪ್ರಮಾಣದ ನಿಯಂತ್ರಣ ಸಮಾಜ ಮತ್ತು ಸರಕಾರಕ್ಕಿಲ್ಲದಾಗಿದೆ. ದುಡಿಯುವ ವರ್ಗದ ಬದುಕಿನ ಸಂದೇಶದ ಮೇಲೆ ಜಾಹಿರಾತುಗಳು ದಾಳಿಗಿಳಿದಿವೆ. ನಮ್ಮ ದೇಶೀ ಪಾರಂಪರಿಕ ನಂಬಿಕೆ ಮತ್ತು ಸಂಸ್ಕೃತಿಯನ್ನು ಕ್ರಮೇಣ ವಿನಾಶಗೊಳಿಸುವ ಎಲ್ಲ ಹುನ್ನಾರಗಳು ಈ ಜಾಹಿರಾತುಗಳ ಮೂಲಕ ನಮ್ಮ ಮನೆ ಮನೆಯ ಮಕ್ಕಳ ಮನಸ್ಸಿನ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತಿರುವುದರ ಕಡೆ ನಮ್ಮ ಗಮನ ಕೇಂದ್ರಿಕರಿಸಬೇಕಾಗಿದೆ. ಉದಾಹರಣೆಗೆ: ನಮ್ಮ ಕೌಟುಂಬಿಕ ಬದುಕಿನ ಸೌಹಾರ್ದ ಸಂಬಂಧದ ಪ್ರತೀಕವಾಗಿದ್ದ ಮನೆಗೆ ಬಂದವರ ಬಾಯಾರಿಕೆ ನೀರು ಕೊಡುವ ಸ್ಥಾನದಲ್ಲಿ ಚಹಾ, ಕಾಫಿಗಳು ಹಲವು ವರ್ಷಗಳ ಅಧಿಪತ್ಯ ಸ್ಥಾಪಿಸಿದ್ದವು. ಇಂದು ಅದರ ಸ್ಥಾನದಲ್ಲಿ ಕೊಕೋ ಕೋಲಾ, ಪೆಪ್ಸಿ, ಸೆವೆನ್ ಅಫ್, ಲಿಮ್ಕಾ ಮಿಂಚುತ್ತಿವೆ. ಅದು ಹೇಗೆಂದರೆ ನಮ್ಮ ರೂಪದರ್ಶಿಯರನ್ನು ಜನಪ್ರಿಯ ನಟ-ನಟಿಯರನ್ನು ಬಳಸಿಕೊಂಡು ಮಾಡುತ್ತಿರುವ ಜಾಹಿರಾತು ಇಡೀ ನಮ್ಮ ಕೃಷಿ ಸಂಸ್ಕೃತಿಯನ್ನೆ ನಾಶ ಮಾಡುವಂತಿದೆ. ಹೊಲಕ್ಕೆ ಹೋಗಿ ಬಾಯಾರಿದೆ ಎಂದು ಯಾರಾದರೂ ಕೇಳಿದರೆ ಬಾವಿಯ ನೀರನ್ನು ಸೇದಿ ಬಾಯಾರಿಕೆಯನ್ನು ನೀಗುವ ನಮ್ಮ ಮಾನವ ಸಹಜತೆಯೇ ಮರೆಯಾಗಿ ಅದರ ಸ್ಥಾನದಲ್ಲಿ ಒಬ್ಬ ನಟನು ರೈತರ ವೇಷದಲ್ಲಿ ಬಂದು ಬಾವಿಯಿಂದ ಸೇದಿ ನೀರು ಕೇಳಿದ ಬೆಡಗಿಯರಿಗೆ ನೀಡುವುದೇನೆಂದರೆ ಪೆಪ್ಸಿ, ಕೊಕೋ ಕೋಲಾದ ಬಾಟಲಿಗಳನ್ನು. ಅಷ್ಟೇ ಅಲ್ಲ ಆ ಬೆಡಗಿಯರು ಅದನ್ನು ಕುಡಿದು ಆತನಿಗೆ ಮುತ್ತಿಕ್ಕಿ ಮೂರ್ಛೆ ಗೊಳಿಸುವುದು. ಇದು ಏಕಕಾಲದಲ್ಲಿ ನಮ್ಮ ನೆಲದ ಸಂಸ್ಕೃತಿಯನ್ನು ನಮ್ಮ ಮನೆಯ ಹೆಣ್ಣು ಮಕ್ಕಳನ್ನು ಮುಂದಿಟ್ಟೆ ಮಾಡುವುದು. ಹೀಗೆ ಮಾರುಕಟ್ಟೆಯ ಸಂಸ್ಕೃತಿ ತಮ್ಮ ಪಾರಂಪರಿಕ ನಂಬಿಕೆ, ನಡತೆ, ವಿಚಾರಗಳನ್ನು ಕ್ರಮೇಣ ನಾಶಗೊಳಿಸುವುದು. ಇಂತಹದ್ದನ್ನು ದಿನ-ದಿನವು ನೋಡುವ ಮಕ್ಕಳು ಬಾವಿಯಲ್ಲಿ ತೆಂಗಿನ ಕಾಯಿಗಳಲ್ಲಿ ಬಾಯಾರಿಕೆಗೆ ನೀರಿರುವುದು ಎಂಬುದನ್ನು ಮರೆತು ಬಾಯಾರಿಕೆ ಎಂದರೆ ಕೊಕೋ ಕೋಲಾ, ಪೆಪ್ಸಿ, ಸೆವೆನ್ ಅಪ್ ಎಂದು ಭಾವಿಸುವ ಅಪಾಯಗಳು ನಮ್ಮೆದುರಿಗಿದೆ ನಮ್ಮ ಸಾಮಾಜಿಕ ಪಿಡುಗಾದ ವರದಕ್ಷಿಣೆ, ವರೋಪಚಾರಗಳ ಬಗ್ಗೆ ಕಾನೂನು ಬದ್ಧವಾಗಿ ತಡೆಯುವ ಕ್ರಮವನ್ನು ಬಿಗಿಗೊಳಿಸುವಷ್ಟರಲ್ಲಿಯೇ ಅದು ನುಣುಚಿಕೊಂಡು ಹೊಸ ರೂಪದಲ್ಲಿ ಯುವ ಜನತೆಯ ಮನಸ್ಸಿನಲ್ಲಿ ಬೇರೂರಿದೆ. ಸಾಂಪ್ರದಾಯಿಕವಾಗಿ ಮದುವೆಯಲ್ಲಿ ಸ್ಥಿತಿವಂತರು ವರನನ್ನು ಎದುರುಗೊಳ್ಳಲು, ಬೀಳ್ಕೊಡಲು ಕುದುರೆ, ಎತ್ತಿನಬಂಡಿ, ಟಾಂಗಾ, ತೆರೆದ ಜೀಪುಗಳನ್ನು ಬಳಸಿ ತಮ್ಮ ಸಂತೋಷ, ಸಂಭ್ರಮ ಯೋಗ್ಯತೆ, ಅಂತಸ್ತುಗಳನ್ನು ಪ್ರದರ್ಶಿಸುತ್ತಿದ್ದರು. ಇಂದು ಕುದುರೆಗಾಡಿ, ಎತ್ತಿನ ಬಂಡಿಯ ಸ್ಥಾನದಲ್ಲಿ ಹೀರೋ
ಸಂತೆಯಲ್ಲಿ ನಿಂತ ಅವಳು Read Post »







