ಅಂಕಣ ಬರಹ–02 ಶಾಂತಿ ವಾಸು ಹೋದ ಅಂಕಣದಲ್ಲಿ ರೇಡಿಯೋ ನಮ್ಮ ಜೀವನವನ್ನು ಆಕ್ರಮಿಸಿದ ಕಾಲ ಹಾಗೂ ರೀತಿಯನ್ನು ನೋಡಿದೆವು. ನಮ್ಮನ್ನು ಆಧುನಿಕ ಕಾಲದ ಪ್ರತಿನಿಧಿಗಳನ್ನಾಗಿಸಿದ ರೇಡಿಯೋ ಬಗ್ಗೆ ಈಗ ಇನ್ನಷ್ಟು ವಿಷಯಗಳನ್ನು ತಿಳಿಯೋಣ ಬನ್ನಿ. ಸಂಶೋಧನೆಗಾಗಿ ನೋಬಲ್ ಪ್ರಶಸ್ತಿ ಪಡೆದ ಇಟಲಿಯ ಗೂಗ್ಮಿಯೆಲ್ಮೋ ಮಾರ್ಕೋನಿಯಿಂದ 1885 ರಲ್ಲಿ ತಂತಿರಹಿತ ಸಂದೇಶ ರವಾನಿಸುವ ಮೂಲಕ ಕಂಡುಹಿಡಿಯಲ್ಪಟ್ಟ ರೇಡಿಯೋ ಎಂಬ ಒಂದು ಅದ್ಭುತವನ್ನು ಭಾರತಕ್ಕೆ ಕೊಡುಗೆಯಾಗಿ ನೀಡಿದ ಭೌತವಿಜ್ಞಾನಿ, ಪ್ರಕಾಶ ಶಾಸ್ತ್ರ, ಸಸ್ಯ ಜೀವಶಾಸ್ತ್ರ, ದೂರಸಂಪರ್ಕ ಹಾಗೂ ರೇಡಿಯೋ ವಿಜ್ಞಾನಿ ಸರ್. ಜಗದೀಶ್ ಚಂದ್ರ ಬೋಸ್ ಅವರ ಕೊಡುಗೆ ರೇಡಿಯೋ ಹಾಗೂ ದೂರ ಸಂಪರ್ಕದ ಬೆಳವಣಿಗೆಯಲ್ಲಿ ಅತ್ಯಂತ ಮಹತ್ತರವಾದದ್ದು. ಭಾರತ ಕಂಡ ಶ್ರೇಷ್ಠ ವಿಜ್ಞಾನಿಗಳಲ್ಲಿ ಒಬ್ಬರಾದ ಹಾಗೂ ತಮ್ಮ ಸಂಶೋಧನೆಗಳಿಗೆ ಅಗತ್ಯವಾದ ಉಪಕರಣಗಳನ್ನು ತಾವೇ ಸ್ವತಃ ಕಂಡು ಹಿಡಿದುಕೊಂಡಿದ್ದ ಮಹಾಜ್ಞಾನಿ, ಅಧ್ಯಾತ್ಮ ಚಿಂತಕ, ನಮ್ಮ ಭಾರತದ ಹೆಮ್ಮೆಯ ಪುತ್ರ “ಜ್ಞಾನ ಯಾರ ಸ್ವತ್ತೂ ಅಲ್ಲ. ಅವರವರ ಶ್ರಮದ ಪ್ರತಿಫಲ ಅವರವರಿಗೆ” ಎಂದು ಜಗತ್ತಿಗೆ ಸಾರಿದ, ಪ್ರತಿಷ್ಠಿತ ನೈಟ್ ಹುಡ್ ಪ್ರಶಸ್ತಿಯೊಂದಿಗೆ ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳಿಗೆ ಭಾಜನರಾಗಿ, ಕಲ್ಕತ್ತಾದಲ್ಲಿ “ಬೋಸ್ ಇನ್ಸ್ಟಿಟ್ಯೂಟ್” ಆರಂಭಿಸಿದ ನಮ್ಮ ಭಾರತದ ಹೆಮ್ಮೆಯ ಸಸ್ಯ ವಿಜ್ಞಾನಿ ಇವರು ಎಂಬುದು ಹೆಮ್ಮೆ ಪಡತಕ್ಕ ವಿಷಯ. ರೇಡಿಯೋದ ಕಾರ್ಯವಿಧಾನ, ಉಪಯೋಗಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಸಲುವಾಗಿ 1932ರಲ್ಲಿ ಮಂಗಳೂರಿನ ವಿದ್ವಾನ್. ಹೊಸಬೆಟ್ಟು ರಾಮರಾವ್ ಅವರು “ಆಕಾಶವಾಣಿ” ಎಂಬ ಹೆಸರಿನ ಸುಮಾರು 20 ಪುಟಗಳ ಒಂದು ಪುಸ್ತಕವನ್ನು ಬರೆದಿದ್ದರು . ಮೈಸೂರು ವಿಶ್ವವಿದ್ಯಾನಿಲಯದ ಮನಃಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದ ಡಾಕ್ಟರ್ ಎಂ.ವಿ.ಗೋಪಾಲಸ್ವಾಮಿಯವರು ದೇಶಕ್ಕೆ ಹೊಸತನ್ನು ಪರಿಚಯಿಸುವ ಸಲುವಾಗಿ ಲಂಡನ್ನಿನಿಂದ ಕಡಿಮೆ ವಿದ್ಯುತ್ ಬಳಕೆಯ “ಟಾಲ್” ಎಂಬ ಟ್ರಾನ್ಸಮೀಟರನ್ನು ತಂದು 1935 ಸೆಪ್ಟೆಂಬರ್ 10ರಂದು, ರಾಷ್ಟಕವಿ ಕುವೆಂಪುರವರಿಂದ ಕವನವಾಚನ ಮಾಡಿಸುವ ಮೂಲಕ ಭಾರತ ದೇಶದ ಮೊದಲ ಬಾನುಲಿ ಕೇಂದ್ರವನ್ನು ಮೈಸೂರಿನ ತಮ್ಮ ವಿಠ್ಠಲವಿಹಾರ ಮನೆಯಲ್ಲಿ ಸ್ಥಾಪಿಸಿದರು. ಆಗಿನ ಮೈಸೂರಿನ ಮಹಾರಾಜರು ಸ್ವತಃ ಕಾಲೇಜಿನ ಅಸೆಂಬ್ಲಿಯಲ್ಲಿ ಹಾಜರಿದ್ದು ಅದನ್ನು ಆಲಿಸಿದ್ದರು ಎಂಬುದು ವಿಶೇಷ. ಬಾನಿನಿಂದ ತರಂಗಗಳು ಹೊತ್ತು ತಂದ ಉಲಿಯನ್ನು ರೇಡಿಯೋದಲ್ಲಿ ಕೇಳಬಹುದಾದ ಅದ್ಭುತವನ್ನು ಅಂದಿನ ಮೈಸೂರು ಆಕಾಶವಾಣಿ ಸಹಾಯಕ ನಿರ್ದೇಶಕ, ಸಾಹಿತಿ ನಾ. ಕಸ್ತೂರಿಯವರು “ಆಕಾಶವಾಣಿ” ಎಂದು ಕರೆದರು. ಭಾನುವಾರ ಹೊರತು ಪಡಿಸಿ, ಮಿಕ್ಕ ದಿನಗಳಲ್ಲಿ ಶಾಸ್ತ್ರೀಯ ಸಂಗೀತ ಹಾಗೂ ಬಾನುಲಿ ಭಾಷಣವನ್ನು ಪ್ರಸಾರ ಮಾಡುತ್ತಿದ್ದ ಬಾನುಲಿ ಕೇಂದ್ರವನ್ನು ಸ್ವಾತಂತ್ರ್ಯಾ ನಂತರ ಅಂದರೆ 1950 ರಲ್ಲಿ ಸಂವಿಧಾನ ಅಳವಡಿಕೆಯೊಂದಿಗೆ ದೇಶದ ಎಲ್ಲ ಪ್ರಸಾರ ಸೇವೆಗಳನ್ನು ಕೇಂದ್ರ ಸರ್ಕಾರದ ವ್ಯಾಪ್ತಿಗೆ ಒಳಪಡಿಸಲಾಯಿತು. ಹಾಗೂ 1956 ರಲ್ಲಿ ಕೇಂದ್ರಸರ್ಕಾರವು “ಆಕಾಶವಾಣಿ” ಎಂಬ ಹೆಸರನ್ನೇ ಅಧಿಕೃತವಾಗಿ ಘೋಷಣೆ ಮಾಡಿತು. ದಾಖಲೆಗಳ ಪ್ರಕಾರ 1954 ರಲ್ಲಿ ಭಾರತದ ಮೊದಲ ವ್ಯಾಪಾರಿ ರೇಡಿಯೋ ಅಂದರೆ ಆಂಟೆನೋ ಇದ್ದ ಕಮರ್ಷಿಯಲ್ ಟ್ರಾನ್ಸಿಸ್ಟರ್ ಮಾರಾಟವಾಯಿತು. ಇದನ್ನು ಹೋದ ಕಡೆಯಲ್ಲೆಲ್ಲ ಹೊತ್ತು ಹೋಗಬಹುದಾದರಿಂದ, ಹಾಗೂ ದರದ ದೃಷ್ಟಿಯಿಂದ ಅಗ್ಗವಾಗಿದ್ದ ಟ್ರಾನ್ಸಿಸ್ಟರ್ ಎಂಬುದು ಆ ದಿನಗಳಲ್ಲಿ ಒಂದು ಮನರಂಜನಾ ವಸ್ತುವಾಗಿ ಬಹುದೊಡ್ಡ ಮಾರುಕಟ್ಟೆಯೊಂದಿಗೆ ಬಹು ಜನಪ್ರಿಯತೆಯ ಕೇಂದ್ರ ಬಿಂದುವಾಯಿತು. ಪೂರ್ಣ ಪ್ರಮಾಣದಲ್ಲಿ ವಾಣಿಜ್ಯ ದೃಷ್ಟಿಯಿಂದ ಆರಂಭವಾದ ರೇಡಿಯೋ ಎಂಬ ಆ ಕಾಲದ ಆಧುನಿಕ ತಂತ್ರಜ್ಞಾನವು, ಜಾಹೀರಾತು ಪ್ರಪಂಚಕ್ಕೆ ಭದ್ರವಾದ ಅಡಿಗಲ್ಲನ್ನು ನೆಟ್ಟಿತು. ಜಾಹೀರಾತುಗಳನ್ನು ಕೇವಲ ಕೇಳಬಹುದಾಗಿದ್ದ ಆ ಕಾಲಘಟ್ಟದಲ್ಲಿ ಆಲ್ ಇಂಡಿಯಾ ರೇಡಿಯೋ (A.I.R)ದ ಭಾಗವಾಗಿ 1959ರಲ್ಲಿ ದೂರದರ್ಶನವನ್ನು ಆರಂಭಿಸಲಾಯಿತು. ಇದು ಕೂಡ ವಾಣಿಜ್ಯ ದೃಷ್ಟಿಯಿಂದಲೇ ಸ್ಥಾಪಿತವಾದದ್ದೆಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಹಾಗಾಗಿ ಮೊದಲೇ ಹೇಳಿದ ಜಾಹೀರಾತಿನೊಂದಿಗೆ ದೂರದರ್ಶನದಲ್ಲಿ ಡಾಬರ್ ಚವನ್ ಪ್ರಾಶ್, ನಿರ್ಮಾ ವಾಷಿಂಗ್ ಪೌಡರ್ ವಿಕೋ ಟರ್ಮರಿಕ್ ಕ್ರೀಮ್, ಲಿರಿಲ್ ಸೋಪು ಹಾಗೂ ಸಿಯಾರಾಂ ಸೂಟಿಂಗಿನ ಜಾಹೀರಾತು ಕೂಡ ಸೇರಿಕೊಂಡದ್ದು ಹೌದಲ್ಲವೇ? ಆಗಿನ ಜನರಿಗೆ ಆದ ಹೊಸ ಹೊಸ ಅವಿಷ್ಕೃತ ವಸ್ತುಗಳ ಪರಿಚಯ, ನೋಡುವ ಮುಟ್ಟುವ ಉತ್ಸಾಹ, ಉಪಯೋಗಿಸುವಾಗಿನ ಪುಳಕ ಈಗೊಂದೂ ಇಲ್ಲ. ಏಕೆಂದರೆ ಕೆಲವೇ ಕೆಲವನ್ನು ಹೊರತುಪಡಿಸಿ ಮಿಕ್ಕೆಲ್ಲವೂ ಆಗಿನದ್ದರ ಸುಧಾರಿತ ವ್ಯವಸ್ಥೆ ಹಾಗೂ ರೂಪಾಂತರ ಅಷ್ಟೇ ಆಗಲೀ ಯಾವುದೂ ಹೊಸತಲ್ಲ. ಶ್ರೀಸಾಮಾನ್ಯರಿಗಾಗಿಯೇ, ರೇಡಿಯೋಗಳ ನಿಗದಿತ ಕಾರ್ಯಕ್ರಮಗಳ ಏಕತಾನತೆಯನ್ನು ಹೋಗಲಾಡಿಸವ ಸಲುವಾಗಿ, ಸುಧಾರಿತ ಹಾಗೂ ಉತ್ತಮಗುಣಮಟ್ಟದ ಕಾರ್ಯಕ್ರಮ ರೂಪಿಸುವ ಹಾಗೂ ಸರ್ಕಾರದ ವರಮಾನವನ್ನು ಹೆಚ್ಚುಮಾಡುವ ಹೆಚ್ಚು ಸ್ಪಷ್ಟತೆಯ ಎಫ್. ಎಂ (frequency modulation ಆವರ್ತನ ಮಾಡ್ಯುಲೇಶನ್) ಕೇಂದ್ರಗಳು ಸ್ಥಾಪಿತವಾದವು. MHz(ಮೆಗಾಹರ್ಡ್ಜ್) ತರಂಗಾಂತರದ ಮೇಲೆಯೇ ಇಂದಿಗೂ ಕಾರ್ಯಕ್ರಮವನ್ನು ಪ್ರಸಾರ ಮಾಡುತ್ತಿರುವ ಎಫ್.ಎಂ. ರೇಡಿಯೋಗಳು ಹಾಗೂ ದೂರದರ್ಶನದ ಹಲವಾರು ಚಾನೆಲ್ಲುಗಳಿಗೆ ಜಾಹೀರಾತುಗಳಿಂದ ಬರುವ ಹಣವೇ ಜೀವಾಳ ಹಾಗೂ ಹಿರಿಮೆ. ********************************************************
ಸಿದ್ಧಿಸಿತೆನಗೆ ” ಸಿದ್ಧರ ಬೆಟ್ಟ “ಯಾನ
ಪ್ರವಾಸ ಕಥನ ಸಿದ್ಧಿಸಿತೆನಗೆ -ಸಿದ್ಧರ ಬೆಟ್ಟ ಯಾನ ಚಂದ್ರಮತಿ ಪುರುಷೋತ್ತಮ್ ಭಟ್ ಬಹುದಿನದ ಬಯಕೆ, ನೋಡಲೇ ಬೇಕೆಂಬ ತುಡಿತದ ಜೊತೆಗೆ ನಲವತ್ತರ ಹರೆಯ ದಾಟಾಯ್ತು ಈಗಲೂ ನೋಡದಿದ್ದರೆ ಇನ್ನು ಯಾವಾಗ ನೋಡೋದು ಅನ್ನೋ ಅನಿಸಿಕೆ. ನನ್ನ ಮಗಳು ಹಾಗೂ ಅವಳ ಗೆಳೆಯರು ಬರ್ತೀರ ಆಂಟಿ ಸಿದ್ಧರ ಬೆಟ್ಟಕ್ಕೆ ಅಂದಾಕ್ಷಣ ವೈ ನಾಟ್ ! ಎಂದು ‘ ರೋಗಿ ಬಯಸಿದ್ದು ಹಾಲು ಅನ್ನ ವೈದ್ಯ ಹೇಳಿದ್ದು ಹಾಲು ಅನ್ನ ‘ ಅಂತ ಹುಂ ಎಂದು ಹೊರಟೇ ಬಿಟ್ಟೆ. ತುಂಬಾ ದಿನದಿಂದ ಅಂದು ಕೊಂಡ ಈ ಬೆಟ್ಟ ನೋಡುವ ಭಾಗ್ಯಬಂದೊದಗಿಯೇ ಬಿಟ್ಟಿತು. ಸೂರ್ಯೋದಯಕ್ಕೂ ಮುಂಚೆ ಸುಮಾರು 4.45 ರ ಸಮಯಕ್ಕೆ ಶುರುವಾಯ್ತು ನಮ್ಮ ಪಯಣ. ಜನಸಂದಣಿ ಇರದ ಈ ಸಮಯದಲ್ಲಿ ನಮ್ಮ ಬೆಂದಕಾಳೂ ಕೂಡ ಸುಂದರ ಹಾಗೂ ಸುಖಕರವೆನಿಸುವುದು. ಬೆಂಗಳೂರಿನಿಂದ 100 ಕಿ.ಮೀ ದೂರದಲ್ಲಿರುವ ಸಿದ್ದರ ಬೆಟ್ಟಕ್ಕೆ ಐದು ಮಂದಿಯನ್ನು ಹೊತ್ತು ಡಸ್ಟರ್ ಶರವೇಗದಲ್ಲಿ ನಗರವನ್ನು ದಾಟಿ ಇನ್ನೇನು ಸಿದ್ಧರ ಬೆಟ್ಟದ ದಾರಿ ತಲುಪಿದ್ದಂತೆಯೆ ನಮ್ಮನ್ನು ಸೆಳೆದದ್ದು ಆ ಊರಿನ ರುಚಿಕರವಾದ ತಟ್ಟೆ ಇಡ್ಲಿ . ಅಲ್ಲಿಂದ 8 ರಿಂದ 10 ಕಿ.ಮೀ ದೂರದಲ್ಲಿ ಈ ಬೆಟ್ಟ . ತಲುಪಿದಾಗ ಸುಮಾರು ಮುಂಜಾನೆ 6.30 ಸಮಯ. ಸದ್ದು ಗದ್ದಲ ಇಲ್ಲದ ನಿರ್ಜನ ಪ್ರಶಾಂತ ತಾಣ. ಸಿಲಿಕಾನ್ ಸಿಟಿಯಿಂದ ಬರುವ ಯಾತ್ರಿಕರಿಗೆ ಒಮ್ಮೆ ಯಾದರೂ ಹಾಯ್ ಎನಿಸದೇ ಇರದು.ಈ ಬೆಟ್ಟವು ಸುಮಾರು 6 ಕಿಲೋಮೀಟರ್ ಚಾರಣ. 1700ಅಡಿ ಎತ್ತರದಲ್ಲಿರುವ ಈ ಬೆಟ್ಟವು ಔಷಧೀಯ ಸಸ್ಯಗಳ ಬೀಡು. ೨೦೦೦ ಕ್ಕೂ ಹೆಚ್ಚು ಸಸ್ಯಗಳಿರುವುದು ಶ್ಲಾಘನೀಯ. ಈ ನಿಟ್ಟಿನಲ್ಲಿ ಕೆ.ಫ್.ಡಿ ಗೆ ಧನ್ಯವಾದ ಹೇಳಲೇ ಬೇಕು ಶುರುವಾಯ್ತು ಸೆಲ್ಫಿಯಿಂದಲೇ ನಮ್ಮ ಉತ್ಸಾಹದ ಆರೋಹಣ ಚಾರಣ. ಹಸಿರಿನ ಔಷಧೀಯ ಮರಗಿಡಗಳ ನಡುವೆ ಹಕ್ಕಿಗಳ ಕಲರವ ಹಾಗೂ ತುಂತುರು ಮಳೆಯಲ್ಲಿ ಹತ್ತಿದ ಕ್ಷಣ ಅದ್ಬುತ ! ನೂರಾರು ಮೆಟ್ಟಿಲುಗಳ ನಂತರ ಕಡಿದಾದ ಬೆಟ್ಟದಲ್ಲಿ ಮುಂದಕ್ಕೆ ಹತ್ತಲು ಗಟ್ಟಿ ಕಲ್ಲುಗಳೇ ನಮಗೆ ಆಸರೆಯಾದವು. ಅಂತು ಇಂತೂ ಅಸಾಧ್ಯ ಎನಿಸಿದರೂ ಅಲ್ಲಲ್ಲಿ ತಂಗುದಾಣ ನಮ್ಮನ್ನು ಪ್ರೋತ್ಸಾಹಿಸಿತು. ಕ್ಷಣಕಾಲ ನಿಬ್ಬೆರಗಾದೆವು ! ನೋಡಿದರೆ ದೊಡ್ಡ ಕಲ್ಲು ಬಂಡೆಯನ್ನೇ ಕೊರೆದು ಮಾಡಿದ ಕಿರಿದಾದ ಮೆಟ್ಟಿಲುಗಳು. ಜಿನುಜಿನುಗುವ ಮಳೆಯಲ್ಲಿ ಹತ್ತುತ್ತಾ ಕಾಲು ಜಾರಿದರೆ ಎನ್ನುವ ಆತಂಕದಲ್ಲಿ ಮುಂದೆ ಮುಂದೆ ಹೆಜ್ಜೆ ಇಟ್ಟೆವು. ಹತ್ತಿದಾಕ್ಷಣ ಜಯಶಾಲಿಯದೆವಾ ? ಅನ್ನೋ ಅನಿಸಿಕೆಯ ಜೊತೆ ಜೊತೆಗೆಮಂಜು ಮುಸುಕಿದ ತುದಿಬೆಟ್ಟವು ‘ ಮಾನವ ನೀನೆಷ್ಟು ಅಲ್ಪ ! ಎಂದು ನಗುವುದೇನೋ ಎನ್ನಿಸಿತು. ಸೌಂದರ್ಯ , ಪ್ರಶಾಂತತೆ ನಮ್ಮನ್ನು ಮೂಖವಿಸ್ಮಿತಗೊಳಿಸಿತು. ಅಚ್ಚರಿ ! ಆ ತುತ್ತತುದಿಯಲ್ಲಿ ಕಲ್ಲು ಬಂಡೆಯಲ್ಲೂ ಸದಾಕಾಲ ಎಳಿನೀರಿನಂತಹ ತಣ್ಣೀರು ಕಾಣಸಿಗುವುದು. ಸಿದ್ಧರು ಸಿದ್ಧಿ ಫಡೆದಂತಹ ಸ್ಥಳ ಆಗಿರೋದರಿಂದ ಆಸ್ತಿಕರಿಗೆ ಹೇಳಿಸಿದ ಸ್ಥಳ ಕೂಡ . ಅಲ್ಲಿ ಈಗಲೂ ಬಂದವರೆಲ್ಲರಿಗೂ ಆಶೀರ್ವದಿಸಲು ಒಬ್ಬರು ಸಿದ್ಧರು ದೊಡ್ಡ ಕಲ್ಲು ಬಂಡೆಯ ಒಳಗಡೆ ತಪಸ್ಸು ಮಾಡುತ್ತಾ ಕುಳಿತಿರುತ್ತಾರೆ. ಆಶೀರ್ವಾದ ಪಡೆದ ನಾವು ಕೊಂಚ ಹೊತ್ತು ಅಲ್ಲೇ ಧ್ಯಾನ ಮಗ್ನರಾದೆವು. ಇನ್ನೂ ಬೆಟ್ಟದ ತುದಿ ನೋಡುವ ಬಯಕೆ ಹೊತ್ತು ಬಂದ ನಾವು ತುಸು ವಿಶ್ರಮಿಸಿ ಮುಂದಿನ ಹೆಜ್ಜೆ ಬೆಳೆಸಿದೆವು. ಅಲ್ಲಿಂದ ಮುಂದೆ ದೊಡ್ಡ ಬಂಡೆಯೊಳಗಿಂದ ಹತ್ತುತ್ತಾ ಹತ್ತುತ್ತಾ ಹೊರಬಂದು ನೋಡಿದರೆ ಅಲ್ಲಿರುವ ಮನಮೋಹಕ ಪ್ರಕೃತಿಯ ವೈಚಿತ್ರ್ಯ ! ಮಂಜಿನ ಸಹಿತ ಬೀಸುತ್ತಿರುವ ಶೀತಗಾಳಿಯು ಹಾಗೂ ಮುಂಜಾನೆಯ ಹೊಂಗಿರಣದಿಂದ ಫಳ ಫಳಿಸುತ್ತಿರುವ ಆ ಬೆಟ್ಟವು ನಮ್ಮನ್ನು ಬೇರೆ ಲೋಕಕ್ಕೆ ಕರೆದೊಯ್ದು ಬಿಟ್ಟಿತು. ಹನ್ನೆರೆಡು ಗಂಟೆಯವರೆಗೂ ಹಿಮಾವೃತ ಬೆಟ್ಟವನ್ನು ನೋಡಿದನುಭವ ಅವರ್ಣನೀಯ ! ನಮ್ಮ ಕರ್ನಾಟಕ ಆಹಾ ಎಷ್ಟು ಅದ್ಭುತ ! ಎಂದೆನಿಸಿತು. ವಾರೆ ವಾವ್ ! ಈ ಸಿದ್ಧರ ಬೆಟ್ಟ ನೋಡುವಾವಕಾಶ ಎಲ್ಲರಿಗೂ ಸಿದ್ಧಿಸಲಿ ಸಿದ್ಧರ ಆಶೀರ್ವಾದ ಪಡೆಯಲಿ . ಎನ್ನುತ್ತಾಮತ್ತೊಂದಿಷ್ಟು ಸೆಲ್ಫಿ ಒಂದಿಷ್ಟು ಮಸ್ತಿ ಮಾಡುತ್ತಾ ಬೆಟ್ಟದಿಂದ ನಿಧಾನವಾಗಿ ಅವರೋಹಣ ಮಾಡಿದೆವು. ಏರಿಳಿತಗಳ ರೋಚಕ ಅನುಭವವನ್ನು ಮೆಲುಕು ಹಾಕುತ್ತಾ ನಗರಿಗೆ ಹಿಂತಿರುಗಿ ಪ್ರಯಾಣ ಬೆಳೆಸಿದೆವು. ——— ಮಾರ್ಗ :ಬೆಂಗಳೂರು – ತುಮಕೂರು -ತೋವಿನಕೆರೆ – ತುಂಬಾಡಿ – ಸಿದ್ಧರಬೆಟ್ಟಸರಿಯಾದ ಸಮಯ : ಜೂನ್-ಜುಲೈ-ಆಗಸ್ಟ್ಚಾರಣದ ಸಮಯ : ಒಂದು ಗಂಟೆಸಾಧ್ಯ : ಚಾರಣಾಸಕ್ತರು ಹಾಗೂ ಪ್ರಕೃತಿ ಪ್ರಿಯರಿಗೆ ಮಾತ್ರ ನಿಷೇಧ : ಪ್ಲಾಸ್ಟಿಕ್ಸಲಹೆ : ಒಂಟಿ ಪಯಣ ಬೇಡ. ಗುಂಪಿನ ಜೊತೆ ಯೋಗ್ಯ “ಪ್ರಕೃತಿಯನ್ನು ಉಳಿಸಿ ಪ್ರೀತಿಸಿ ಆದರಿಸಿ ಆನಂದಿಸಿ “ *********************************
ಸಿದ್ಧಿಸಿತೆನಗೆ ” ಸಿದ್ಧರ ಬೆಟ್ಟ “ಯಾನ Read Post »
ಪ್ರೇಮಪತ್ರ
ಪ್ರೇಮಪತ್ರ ಕಂಡಕ್ಟರ್ ಸೋಮು. ಕಿರುಬೆರಳಿನಂತವಳೇ, ಅಲ್ಲಿ ಗಿಳಿಯೊಂದು ಮಾತನಾಡುತ್ತದೆ, ಆ ಮಾತು ಎಷ್ಟು ಅರ್ಥಗರ್ಭಿತವೆಂದರೆ ಮನುಷ್ಯರ ಮಾತೂ ಕೂಡ ಅಲ್ಲಿ ಅರ್ಥ ಕಳೆದುಕೊಳ್ಳುತ್ತದೆ. ಕಾರಣ ಅದು ಕಾಡಿನಲ್ಲಿದೆ; ನೀನು ನಾಡಿನಲ್ಲಿ ಇರುವೆ!? ನನ್ನ ಪತ್ರದ ಪ್ರತಿ ಒಕ್ಕಣೆಯಲ್ಲೂ ಹೀಗೆ ನಿನ್ನ ಕಾಲು ಎಳೆಯದಿದ್ದರೆ ನಮ್ಮ ಪ್ರೇಮಕ್ಕೆ ಲವಲವಿಕೆಯಿರುವುದಿಲ್ಲ. ನಿನ್ನ ಮರೆತು ಗಿಳಿಯ ಸಂಗತಿ ಏಕೆ ಹೇಳಿದೆ ಎಂದು ಮುನಿಸೆ? ನಿನ್ನ ಮುನಿಸಿನಲ್ಲೂ ಒಂದು ಚೆಲುವಿದೆ. ಗಿಳಿ ಮುನಿಸಿಕೊಳ್ಳ್ದದಿದ್ದರೂ ಕೊಕ್ಕು ಮಾತ್ರ ಕೆಂಪಗಿದೆ, ನಿನಗೆ ಮುನಿಸು ಬಂದರೆ ದೇಹ ಪೂರ್ತಿ ಕೆಂಪು, ಥೇಟ್ ಬ್ಯಾಡಗಿ ಮೆಣಸಿನಕಾಯಿ ಥರ! ಆ ಖಾರದ ರುಚಿಯ ಸವಿಯಲು ನಾನು ಕಾತರನಾಗಿರುವೆ. ಅದು ಸರಿ, ಮೊನ್ನೆ ದೇವಸ್ಥಾನದಲ್ಲಿ ಕಂಡ ನೀನು ಇದ್ದಕ್ಕಿದ್ದ ಹಾಗೆ ಎಲ್ಲಿ ಮಾಯವಾಗಿ ಹೋದೆ ಹುಡುಗಿ, ನಾನಂತೂ ಎಲ್ಲಾ ಕಂಬಗಳ ಸುತ್ತೀ ಸುತ್ತೀ ಸಾಕಾಯ್ತು. ಜೊತೆಗೆ ಬಂದವನು ನನ್ನ ಅಳಿಯ ಇರಬೇಕು ನನ್ನನ್ನೇ ದುರುಗುಟ್ಟಿಕೊಂಡು ನೋಡ್ತಾ ಇದ್ದ. ನಿನ್ನ ಲಂಗ ದಾವಣಿ ಮೇಲಾಣೆ ಅವನು ಕೈಗೆ ಸಿಕ್ಕಿದ್ದಿದ್ದರೆ ದೇವರಿಗೆ ನೈವೇದ್ಯ ಮಾಡಿಬಿಡುತ್ತಿದ್ದೆ. ಅವನೇ ಅಲ್ಲವೇ ನಾನು ನಿನಗೆ ಬರೆದ ಮೊದಲ ಪತ್ರವನ್ನು ನಿನ್ನ ಅಪ್ಪನಿಗೆ ಕೊಟ್ಟದ್ದು, ಐಸ್ ಕ್ರೀಮ್ ಪಾರ್ಲರ್ ನಲ್ಲಿ ನಾವಿಬ್ಬರೇ ಇದ್ದದ್ದನ್ನ ಕದ್ದು ನೋಡಿ ನಿಮ್ಮ ಅಮ್ಮನಿಗೆ ಹೇಳಿದ್ದು. ಆ ಶನಿಯೊಂದು ಇಲ್ಲ ಅಂದಿದ್ದರೆ ಇಷ್ಟು ಹೊತ್ತಿಗೆ ನಾನು ಎರಡು ಮಕ್ಕಳ ತಂದೆಯಾಗಿರುತ್ತಿದ್ದೆ. ನೀನು ಸಾಕ್ಷಾತ್ ಸತಿ ಸಾವಿತ್ರಿ ಯಾಗಿರುತ್ತಿದ್ದೆ. ಹನಿಮೂನ್ ಹಾಳಾಗಿ ಹೋಗಲಿ ಆದರ್ಶ ದಂಪತಿಗಳು ಸ್ಪರ್ಧೆಗಾದರೂ ಹೋಗಬಹುದಿತ್ತು. ಈಗಲೂ ಕಾಲ ಮಿಂಚಿಲ್ಲ ನೀನು ‘ಹ್ಞೂ…’ ಅನ್ನು ನಿಮ್ಮ ಅಪ್ಪನಿಗೊಂದು ಟ್ವೀಟ್ ಬಿಸಾಕಿ ಟಾಟಾ ಮಾಡೋಣ. ಶಾಸ್ತ್ರೋಕ್ತವಾಗಿ ಮೂರು ಗಂಟು ಹಾಕ್ತೀನಿ. ಹನಿಮೂನ್ ಗೆ ಕೆಮ್ಮಣ್ಣು ಗುಂಡಿಗೆ ಹೋಗೋಣ, ಅಲ್ಲಿಂದ ಬರುವ ಹೊತ್ತಿಗೆ ಕೆಮ್ಮಣ್ಣು ತಿನ್ನುವ ಆಸೆ ಹುಟ್ಟುವಂತೆ ಮಾಡಿರ್ತೀನಿ! ನಮ್ಮ ಲವ್ ಶುರುವಾಗಿದ್ದು ಫೇಸ್ಬುಕ್ ನಲ್ಲಿ ಹಾಗಾಗಿ ಹುಟ್ಟೋ ಮಕ್ಕಳಿಗೆ ಒಂದಕ್ಕೆ ‘ಫೇಸ್’ ಎಂದೂ, ಮತ್ತೊಂದಕ್ಕೆ’ಬುಕ್’ ಎಂದೂ ಹೆಸರಿಡೋಣ ಏನಂತೀ?! ಅವಳಿ-ಜವಳಿ ಆದವು ಅಂತ ಇಟ್ಕೋ ‘ವೈ-ಫೈ’ ಅಂತ ಹೆಸರಿಡೋಣ! ನಿನ್ನ ಪ್ರೀತಿಯ ಕಣಕಣದಲ್ಲೂ ಅಕ್ಷರಶಃ ನಾನಿದ್ದೇನೆ ಎಂದು ನನಗೆ ಗೊತ್ತು. ನನ್ನೆಲ್ಲಾ ತಲೆಹರಟೆಗಳನ್ನು ಸಹಿಸಿಕೊಂಡು ಬಂದಿರುವ ನಿನಗೆ ಜೀ ಕನ್ನಡ ದವರಿಗೆ ಹೇಳಿ ಕುಟುಂಬ ಅವಾರ್ಡ್ ಕೊಡಿಸ್ತೀನಿ. ನೀನು ಇತ್ತೀಚೆಗೆ ಫೇರ್ ನೆಸ್ ಕ್ರೀಮು ಬದಲಿಸಿದಂತೆ ಕಾಣುತ್ತೆ. ನಿನ್ನ ತ್ವಚೆ ಮೊದಲಿಗಿಂತಲೂ ಕೋಮಲ ಮತ್ತು ಮೃದು ; ಕಳೆದ ವೀಕೆಂಡ್ನಲ್ಲಿ ಈ ಸೌಂದರ್ಯ ರಹಸ್ಯ ನನ್ನ ಅನುಭವಕ್ಕೆ ಬಂತು ಒಂದು ಕಿಸ್ನ ಮೂಲಕ. ನೆನಪಿರಲಿ ಆ ಕ್ರೀಮಿನಲ್ಲಿ ನಾನಿದ್ದೇನೆ. ನಿನ್ನ ಮುಖದ ಕಾಂತಿಗೆ ಕಾರಣ ನಾನೆ. ಈ ಗುಟ್ಟನ್ನು ನಿನ್ನ ತಂಗಿಗೆ ಹೇಳಬೇಡ, ಹೇಳಿದರೆ ಆಗುವ ಅನಾಹುತಕ್ಕೆ ನಾನು ಕಾರಣನಲ್ಲ. ನಿನ್ನ ಚೆಲುವು ನನ್ನಲ್ಲಿ ಕನಸುಗಳನ್ನು ಬಿತ್ತಿದೆ, ಹೊಸ ಹೊಸ ಆಸೆಗಳನ್ನು ಚಿಗುರಿಸಿದೆ, ನನ್ನನ್ನು ನಾನೇ ಮರೆಯುವಂತೆ ಮಾಡಿದೆ. ಈ ಮರೆಯುವಿಕೆಯಿಂದ ಎಂಥಾ ಅಪಘಾತವಾಗುತ್ತಿತ್ತೆಂದರೆ, ಒಮ್ಮೆ ಬಚ್ಚಲು ಮನೆಯಿಂದ ನೇರ ರಸ್ತೆಗೆ ಬಂದು ನಿಂತ್ತಿದ್ದೇನೆ;ಟವಲ್ ಮರೆತಿರಲಿಲ್ಲ ನಿನ್ನ (?) ಪುಣ್ಯ. ಈ ಪ್ರೀತಿಯ ಆಟದಲ್ಲಿ ಅಂತ್ಯ ಬೇಡವೇಬೇಡ, ಸೋಲು ಗೆಲುವು ಯಾವನಿಗೆ ಬೇಕು, ಇಬ್ಬರೂ ಉಸಿರಿರುವ ವರೆಗೆ ಸೆಣಸುತ್ತಿರೋಣ. ಪ್ರೀತಿಯ ಪರಾಕಾಷ್ಠೆ ಮಿಲನದಲ್ಲಿ ಅಂತ್ಯವಾಗಬಾರದು. ಬದುಕಿನ ಅನಂತ ನಡಿಗೆಯಲ್ಲಿ ಸದಾ ಜತೆಗಿರೋಣ. ಹೆಗಲಿಗೆ ಹೆಗಲು ತಾಕಿಸುತ್ತಾ ನಡೆಯೋಣ, ಕ್ಷಿತಿಜದಂಚಿನತ್ತ ಸಾಗೋಣ. ಮತ್ತದೇ ಬಸವನಗುಡಿಯ ರಾಕ್ ಗಾರ್ಡನ್ ನ ಕಪ್ಪು ಕಲ್ಲಿನ ಮೇಲೆ ನಿನಗಾಗಿ ಕಾಯುತ್ತಿರುತ್ತೇನೆ, ಉಪ್ಪು-ಖಾರ-ಉಳಿ ಬೆರೆತ ಹುರಿಗಡಲೆಯೊಂದಿಗಿನ ನಿನ್ನ ಹಾಜರಿಗೆ ಕಾಯುತ್ತಿರುತ್ತೇನೆ, ತೆಳ್ಳಗಿನ, ಕುಳ್ಳಗಿನ ಹುಡುಗಿಗೊಂದು ಉಮ್ಮಾ… *************************************************
ಕರೋನ ಅಬ್ಬರದಲ್ಲಿ ಕುಸಲಾಳ ಮನಸ್ಸಿನ ಏಕಾಂತ ಹೊಯ್ದಾಟ..!
ಪ್ರಸ್ತುತ ಕರೋನ ಅಬ್ಬರದಲ್ಲಿ ಕುಸಲಾಳ ಮನಸ್ಸಿನ ಏಕಾಂತ ಹೊಯ್ದಾಟ..! ಕೆ.ಶಿವು.ಲಕ್ಕಣ್ಣವರ ಹೌದಾ.. ನಿಜಾನಾ.. ಇದು ಹೇಗೆ ಸಾಧ್ಯ..? ನಿಜಕ್ಕೂ ಕೊರೊನಾ ವೈರಸ್ ಹಿಂದಿರೋ ಕರಾಳ ಸತ್ಯ ಇದೇನಾ..? ಇಡೀ ಜಗತ್ತನ್ನೇ ಕಿರುಬೆರಳಲ್ಲಿ ಆಡಿಸ್ತಿರೋ ಕೊರೊನಾ ವೈರಸ್ ಹುಟ್ಟಿನ ಹಿಂದೆ ದೊಡ್ಡ ಷಡ್ಯಂತ್ರವೇ ಇದ್ಯಾ..? ಸೋಶಿಯಲ್ ಮೀಡಿಯಾದಲ್ಲಿ ಕಳೆದೊಂದು ವರ್ಷದಿಂದ ವೈರಲ್ ಆಗ್ತಿರೋ ಒಂದು ವಿಡಿಯೋನ ನೋಡಿದವರ ತಲೆಯಲ್ಲಿ ಇಷ್ಟೊಂದು ಪ್ರಶ್ನೆಗಳು ಹರಿಡಾದ್ತಿವೆ. ಕೊರೊನಾ ವೈರಸ್ ಕಾಣಿಸಿಕೊಂಡ ಆರಂಭದಲ್ಲಿ ಶುರುವಾಗಿದ್ದ ಚರ್ಚೆಯೊಂದಕ್ಕೆ ಈ ವಿಡಿಯೋದಿಂದ ಮತ್ತೆ ಪುಷ್ಟಿ ಪುಷ್ಟಿ ನೀಡುತ್ತಿದೆ. ಏನಿದು ವಿಡಿಯೋ..? ಜಗತ್ತು ತಲೆ ಕೆಡಿಸಿಕೊಂಡಿರೋದೇಕೆ..? ಇದು ಆ ಕುಸಲಾಳ ಮನದಾಳದಲ್ಲಿ ಹೀಗೆಯೇ ಆ ಒಂದು ರಾತ್ರಿಯಿಂದ ಪದೆಪದೇ ಮೇಲೇಳಿತ್ತಿರುವ ಪ್ರಶ್ನೆ. ಅದುವೇ ಎಪಿಸೋಡ್ 10. 2018ರಲ್ಲಿ ಪ್ರಸಾರವಾದ ವೆಬ್ ಸಿರೀಸ್ ಇದು. ಸದ್ಯ ಈ ಕಂಟೆಂಟ್ ಯುಎಸ್ಎ ಹಾಗೂ ಯುಕೆಗೆ ಮಾತ್ರ ಲಭ್ಯವಿದೆ. 10ನೇ ಎಪಿಸೋಡ್ನಲ್ಲಿ ಬರುವ ಕೆಲ ಸೀನ್ಗಳಲ್ಲಿ ಕೊರೊನಾ ವೈರಸ್ನ ಉಲ್ಲೇಖ ಇದೆ. ಈ ವೈರಸ್ ಬಗ್ಗೆ, ಅದ್ರ ಹುಟ್ಟಿನ ಬಗ್ಗೆ, ಅದರ ಲಕ್ಷಣಗಳ ಬಗ್ಗೆ ಸಂಭಾಷಣೆ ಇದೆ. ಇದು ಕುಸಲಾಳನ್ನು ಕಂಗೆಡುಸುತ್ತಲೇ ಇದೆ. ಆ ಒಂದು ಕುಸಲಾಳ ಮನಸ್ಸಿನ ನಾಟಕದ ಪಾತ್ರದಾರಿಗಳ ಸಂಭಾಷಣೆ ಕುಸಲಾಳ ಮನಸ್ಸಿನ ಮೇಲೆ ಗಾಯ ಮಾಡಿದವು. ಆ ಪಾತ್ರಧಾರಿಗಳ ಸಂಭಾಷಣೆಗಳು ಹೀಗಿವೆ ನೋಡಿ… ಸೀನ್ ನಂಬರ್ 1: ಪಾತ್ರಧಾರಿ 1 -ನಾವು ಇದರ ಬಗ್ಗೆ ಮತ್ತಷ್ಟು ಸಂಶೋಧನೆ ಮಾಡಬೇಕಿದೆ. ಪಾತ್ರಧಾರಿ 2 -ಆದ್ರೆ ಅದು ಕೊರೊನಾ ವೈರಸ್ ರೀತಿ ಕಾಣುತ್ತಿದೆ..! ಪಾತ್ರಧಾರಿ 1 -ಕೊರೊನಾ..? MERS? ಪಾತ್ರಧಾರಿ 2 -MERS, SARS ಇವು ಸಾಮಾನ್ಯ ಜ್ವರಗಳಾಗಿದ್ವು. ಅವೆಲ್ಲವೂ ಒಂದು ವಿಧಕ್ಕೆ ಸೇರಿದ ಜ್ವರಗಳು. ಅವುಗಳ ಜೀನ್ ಇನ್ಫರ್ಮೇಶನ್ ಕೂಡ ಒಂದೇ ಆಗಿತ್ತು. ಆದ್ರೆ ಕೊರೊನಾ ವೈರಸ್ ರೆಸ್ಪಿರೇಟರಿ ಸಿಸ್ಟಮ್( ಉಸಿರಾಟ)ಗೆ ಅಟ್ಯಾಕ್ ಮಾಡುತ್ತೆ. 2015ರಲ್ಲಿ MERS ಸಾಂಕ್ರಾಮಿಕ ಕಾಯಿಲೆ ಬಂದಾಗ ಅದರ ಮರಣ ಪ್ರಮಾಣ 20% ಇತ್ತು. ಪಾತ್ರಧಾರಿ 1 -ಆಯುಧವಾಗಿ ಬಳಸೋಕೆ ಅದು ಸಾಕಾಗ್ತಾ ಇರ್ಲಿಲ್ವಾ? ಪಾತ್ರಧಾರಿ 2 -ನಾನ್ ಹೇಳಿದ ಹಾಗೆ ಕೊರೊನಾ ರೂಪಾಂತರಗೊಂಡ ವೈರಸ್. ಸಾವಿನ ಪ್ರಮಾಣ ಹೆಚ್ಚಾಗುವಂತೆ ಯಾರೋ ಅದನ್ನ ತಿರುಚಿದ್ದಾರೆ. ಇದರ ಮರಣ ಪ್ರಮಾಣ 90%. ಪಾತ್ರಧಾರಿ 1 -90%..!!! ಪಾತ್ರಧಾರಿ 2 -ಕೊರೊನಾ ಬಗ್ಗೆ ಅದಕ್ಕಿಂತಲೂ ಗಂಭೀರ ವಿಚಾರ ಏನು ಅಂದ್ರೆ ಈ ಕೊರೊನಾ ವೈರಸ್ ಬೆಳೆಯೋದಕ್ಕೆ 2 ರಿಂದ 14 ದಿನಗಳ ಸಮಯ ತೆಗೆದುಕೊಳ್ಳುತ್ತೆ. ಈ ವೈರಸ್ ಕಾಣಿಸಿಕೊಂಡ 5 ನಿಮಿಷಗಳಲ್ಲಿ ನೇರ ಶ್ವಾಸಕೋಶಕ್ಕೆ ಅಟ್ಯಾಕ್ ಮಾಡುವಂತೆ ರೂಪಿಸಲಾಗಿದೆ. ಪಾತ್ರಧಾರಿ 1 -ಇದಕ್ಕೆ ಔಷಧ ಇಲ್ವಾ..? ಪಾತ್ರಧಾರಿ 2 -ಈ ಸಮಯದಲ್ಲಿ ಈ ವೈರಸ್ಗೆ ಯಾವುದೇ ರೀತಿಯ ವ್ಯಾಕ್ಸಿನ್ ಲಭ್ಯವಿಲ್ಲ. ಅದನ್ನ ಅಭಿವೃದ್ಧಿಪಡಿಸೋದು ಕೂಡ ತುಂಬಾ ಕಷ್ಟ. ಸೀನ್ ನಂಬರ್ 2: ಪಾತ್ರಧಾರಿ 3 -ಮನುಷ್ಯನೇ ರೂಪಿಸಿದ ವೈರಸ್..??? ಪಾತ್ರಧಾರಿ 4 -ಹೌದು. ಪಾತ್ರಧಾರಿ 3 -ಮರಣ ಪ್ರಮಾಣ..? ಪಾತ್ರಧಾರಿ 4 -90% ಪಾತ್ರಧಾರಿ 3 -ಅವ್ರು ಬಯೋಕೆಮಿಕಲ್ ಟೆರರಿಸ್ಟ್ ಅಟ್ಯಾಕ್ಗೆ ಪ್ಲ್ಯಾನ್ ಮಾಡ್ತಿದ್ದಾರೆ. ನಾವು ಸಮಯ ಮತ್ತು ಸ್ಥಳವನ್ನು ಫೈಂಡ್ ಔಟ್ ಮಾಡಬೇಕು. ಸೀನ್ ನಂಬರ್ 3: ಪಾತ್ರಧಾರಿ 5 -ನಾನು ಮನುಷ್ಯನ ದೇಹದ ಮೇಲಿನ ಟೆಸ್ಟ್ನ ಪೂರ್ತಿ ಮಾಡಿದ್ದೇನೆ. ಪಾತ್ರಧಾರಿ 6 -ಹೇಗಾಯ್ತು ಟೆಸ್ಟ್..? ಪಾತ್ರಧಾರಿ 5 -ನಾವು ಜೆನೆರಿಕ್ ಮೆಟೀರಿಯಲ್ನ ಯಶಸ್ವಿಯಾಗಿ ಆತನ ದೇಹಕ್ಕೆ ಇಂಜೆಕ್ಟ್ ಮಾಡಿದ್ವಿ. ಕೋರ್ಸ್ ಪ್ರಾಜೆಕ್ಟ್ನ ಸ್ಟಾರ್ಟ್ ಮಾಡೋಕೆ ಇದು ಸೂಕ್ತ ಸಮಯ. ಇವಿಷ್ಟು ಪಾತ್ರಧಾರಿಗಳ ನಡುವೆ ಬರುವ ಸಂಭಾಷಣೆ. ಸೌತ್ ಕೊರಿಯಾದ ಭದ್ರತಾ ಸಂಸ್ಥೆಯ (ಎನ್ಎಸ್ಎ – ನ್ಯಾಷನಲ್ ಸೆಕ್ಯುರಿಟಿ ಏಜೆನ್ಸಿ) ಏಜೆಂಟ್ ಒಬ್ಬನ ಸ್ನೇಹಿತ ನಿಗೂಢವಾಗಿ ಸಾವನ್ನಪ್ಪಿರ್ತಾನೆ. ಈ ವಿಚಾರದ ಬಗ್ಗೆ ಎನ್ಎಸ್ಎ ತನಿಖೆ ಆರಂಭ ಮಾಡಿದಾಗ ಶತ್ರುಗಳು ಕೊರೊನಾ ವೈರಸ್ನ ಬಯೋಕೆಮಿಕಲ್ ವೆಪನ್ ಆಗಿ ಬಳಸಿದ್ದಾರೆ ಅನ್ನೋದು ಬೆಳಕಿಗೆ ಬರುತ್ತೆ. ಇದು ಒಂದು ಕುಸಲಾಳ ಮನಸ್ಸಿನ ವೆಬ್ ಸಿರೀಸ್ನ ಆ ಎಪಿಸೋಡ್ನಲ್ಲಿ ಬರುವ ಸ್ಟೋರಿ. ಅಚ್ಚರಿಯ ವಿಷಯ ಏನು ಅಂದ್ರೆ ಚೀನಾದಲ್ಲಿ ಮೊದಲ ಕೊರೊನಾ ಕೇಸ್ ಪತ್ತೆಯಾಗಿದ್ದು 2019ರ ನವೆಂಬರ್ನಲ್ಲಿ. ಆದ್ರೆ ಈ ವೆಬ್ ಸಿರೀಸ್ ಪ್ರಸಾರವಾಗಿದ್ದು 2018ರಲ್ಲಿ ಇದು ಹೇಗೆ ಸಾಧ್ಯ? ಕೊರೊನಾ ವೈರಸ್ ಬಗೆಗಿನ ಭವಿಷ್ಯವಾಣಿಗಳು ಈ ಹಿಂದೆಯೇ ಕೆಲವು ಬಂದಿದ್ರೂ ಕೂಡ ಈ ವೆಬ್ ಸಿರೀಸ್ನಲ್ಲಿ ಹೇಳಿರುವ ಡೈಲಾಗ್ಗಳು ಕರಾರುವಕ್ಕಾಗಿವೆ. ಇದು ಯಾರದ್ದೋ ಷಡ್ಯಂತ್ರದ ಫಲ ಅನ್ನೋದನ್ನ ಸಿನಿಮಾ ಡೈಲಾಗ್ ಅಂದ್ರೂ ಕೊರೊನಾದ ಬಗ್ಗೆ ಹೇಳಿರೋ ಲಕ್ಷಣಗಳು 100ಕ್ಕೆ 100ರಷ್ಟು ಸತ್ಯ. ಇದು ಹೇಗೆ ಸಾಧ್ಯ..? ‘ಕೊರೊನಾ’ ಸೃಷ್ಟಿಸಿದ್ದೇ ಚೀನಾ ಅಂದಿದ್ರು ಹಲವರು..! ಕೊರೊನಾ ಕಾಣಿಸಿಕೊಂಡ ಆರಂಭದಲ್ಲಿ ಚೀನಾದವರೇ ಈ ವೈರಸ್ನ ತಮ್ಮ ಲ್ಯಾಬ್ನಲ್ಲಿ ರೂಪಿಸಿದ್ರು. ಜಗತ್ತಿನ ಮೇಲೆ ಇದ್ರ ಮೂಲಕ ದಾಳಿ ನಡೆಸೋಕೆ ಮುಂದಾಗಿದ್ರು. ಆದ್ರೆ ಬೈ ಮಿಸ್ಟೇಕ್ ಅಲ್ಲಿನ ಲ್ಯಾಬ್ನಿಂದಲೇ ವೈರಸ್ ಲೀಕ್ ಆಗಿದೆ ಅನ್ನೋ ವದಂತಿಗಳು ಹರಿದಾಡಿದ್ವು. ಅದ್ರ ಸತ್ಯಾಸತ್ಯತೆ ಯಾರಿಗೂ ಗೊತ್ತಿಲ್ಲ. ಆದ್ರೀಗ ವೆಬ್ಸಿರೀಸ್ನಲ್ಲಿ ತೋರಿಸಿರುವ ಷಡ್ಯಂತ್ರದ ಸೀನ್, ನಿಜಕ್ಕೂ ಹಾಗೆಯೇ ಆಗಿದ್ಯಾ ಅನ್ನೋ ಅನುಮಾನ ಹುಟ್ಟುಹಾಕಿದೆ. ಚೀನಾದಲ್ಲಿ ಕಾಣಿಸಿಕೊಂಡ ಕೊರೊನಾ ವೈರಸ್ಗೂ ಸೌತ್ ಕೊರಿಯಾದ ವೆಬ್ ಸಿರೀಸ್ಗೂ ಏನ್ ಸಂಬಂಧ..? ನೆಟ್ಫ್ಲಿಕ್ಸ್ನಲ್ಲಿ ಈ ಬಗ್ಗೆ ಸ್ಟೋರಿ ಬಂದಿದೆ ಅಂದ್ರೆ ಇದ್ರ ಬಗ್ಗೆ ಮೊದಲೇ ಅರಿವಿತ್ತು ಅಂತ ಅರ್ಥ. ಅದು ಗೊತ್ತಿದ್ದೂ ಮುಂಜಾಗ್ರತ ಕ್ರಮ ತೆಗೆದುಕೊಳ್ಳೋಕೆ ತಡವಾಗಿದ್ದು ಏಕೆ? ಇಡೀ ಚೀನಾಗೆ ಹಬ್ಬುವವರೆಗೂ ಯಾಕೆ ತಲೆಕೆಡಿಸಿಕೊಂಡಿರಲಿಲ್ಲ. ಇಡೀ ಜಗತ್ತಿಗೇ ವೈರಸ್ ಈಗ ಹರಡಿಬಿಟ್ಟಿದೆ. ಆರ್ಥಿಕತೆಗೆ ದೊಡ್ಡ ಹೊಡೆತ ನೀಡಿದೆ. ಇದ್ರ ಹಿಂದೆ ನಿಜಕ್ಕೂ ಷಡ್ಯಂತ್ರ ಇದ್ದಿದ್ದು ಹೌದಾ ಅನ್ನೋ ಬಗ್ಗೆ ನೆಟ್ಟಿಗರು ಈಗ ತಲೆಕೆಡಿಸಿಕೊಳ್ತಿದ್ದಾರೆ. ಹೀಗೆಯೇ ಆ ಕುಸಲಾಳ ಏಕಾಂತ ಮನಸ್ಸಿನ ಅಲೆಗಳು ಏಳುತ್ತಲೇ ಇದ್ದವು. ಆ ಏಕಾಂತ ಮನಸ್ಸಿನ ತಾಕಲಾಟ ತಾಳಲಾರದೇ ಅವಳು ದಿಗ್ಗನೇ ಆ ಒಂದು ಬೆಡ್ ರೂಮಿನಿಂದ ಎದ್ದು ಹೊರ ಬಂದು ದೇವಾಲಯಕ್ಕೆ ಹೊರಡಲು ಅಣಿಯಾದಳು. ದೇವಾಲಯಕ್ಕೆ ಹೋಗಿ ಆ ದೇವರ ದರ್ಶನ ಪಡೆದುಕೊಂಡು ಮನಸ್ಸಿನಲ್ಲೇ ಆ ದೇವರನ್ನು ಬೇಡಿಕೊಂಡಳು ಅಯ್ಯೋ ದೇವರೇ ಈ ಕರೋನ ಸಂದರ್ಭದಲ್ಲಿ ನೀನೇ ಗತಿ ಈಗ ನಮಗೆ. ನಮ್ಮನ್ನು ಅಂದರೆ ಮಾನವರನ್ನು ನೀನೇ ಕಾಪಾಡಪಾ ಈಗ. ಹೀಗೆಯೇ ಆ ದೇವರನ್ನು ಬೇಡಿಕೊಳ್ಳುತ್ತಲೇ ಮಕ್ಕಳು ಮತ್ತು ಗಂಡನು ಆಫೀಸಿನಿಂದ ಮನೆಗೆ ಬರುವುದು ಸಮಯವಾಗಿದೆ ಎಂದು ದೇವಸ್ಥಾನದಿಂದ ಮನೆಗೆ ವಾಪಾಸಾದಳು ಕುಸಲಾಳು… *************************************
ಕರೋನ ಅಬ್ಬರದಲ್ಲಿ ಕುಸಲಾಳ ಮನಸ್ಸಿನ ಏಕಾಂತ ಹೊಯ್ದಾಟ..! Read Post »
ಗಜಲ್ ಸಿದ್ಧರಾಮ ಕೂಡ್ಲಿಗಿ ನನಸಾದ ಕನಸುಗಳು ಮತ್ತೆ ಕನಸಾದವಲ್ಲ ಅದೆಂಥ ನೋವುಕಂಬನಿಯೆಲ್ಲ ಮುತ್ತಾಗಿ ಮತ್ತೆ ಕಂಬನಿಯಾದವಲ್ಲ ಅದೆಂಥ ನೋವು ಇರುಳ ಕನವರಿಕೆಗಳೆಲ್ಲ ನೆನಪಿನೊಂದಿಗೆ ಉರಿವ ಚಿಕ್ಕೆಗಳಾದವುತಣ್ಣಗಿದ್ದ ಚಂದಿರ ಮತ್ತೆ ಉರಿಗೋಳವಾದನಲ್ಲ ಅದೆಂಥ ನೋವು ನೀ ನಡೆದು ಹೋದ ಹಾದಿಯ ಹೂಗಳೆಲ್ಲ ಮುಖ ಬಾಡಿಸಿದವುಮುಳ್ಳುಗಳೆಲ್ಲ ಹೂವಾಗಿ ಮತ್ತೆ ಮುಳ್ಳಾದವಲ್ಲ ಅದೆಂಥ ನೋವು ಉಲ್ಲಾಸದಿಂದಿದ್ದ ತಂಗಾಳಿಯೂ ಸಹ ಚಂಡಮಾರುತವಾಯಿತುತಣ್ಣನೆಯ ಮಳೆಯೂ ಕೆಂಡದ ಮಳೆಯಾಯಿತಲ್ಲ ಅದೆಂಥ ನೋವು ನಿನ್ನೆದುರು ನಲಿಯುತ್ತಿದ್ದ ಸಿದ್ಧನ ಹೃದಯ ಮಿಡಿತವನ್ನೇ ಮರೆತಿದೆಸಂತಸದಿಂದಿದ್ದ ಉಸಿರು ವೇದನೆಯ ಉಸಿರಾಯಿತಲ್ಲ ಅದೆಂಥ ನೋವು
ಗಜಲ್ ಪ್ರೇಮಾ ಹೂಗಾರ ಅಳು ಬಂದರೂ ಅಳಲಾರೆ ಆ ಹನಿಯಲ್ಲಿ ಜಾರಿಹೋಗುವೆ ಎಂಬ ಸಂಕಟನಗು ಬಂದರೂ ನಗಲಾರೆ ಆ ನಗುವಿನೊಂದಿಗೆ ಕಳೆದುಹೋಗುವೆ ಎಂಬ ಸಂಕಟ ನಿನ್ನ ಗಜಲ್ ಸಾಲಿನಲ್ಲಾದರೂ ಜೀವಂತ ಇರುವೆನಲ್ಲ ಎಂಬುದೇ ಸಮಾಧಾನಹಾಡು ಬಂದರೂ ಹಾಡಲಾರೆ ಆ ಹಾಡಿನೊಂದಿಗೆ ಹಾರಿಹೋಗುವೆ ಎಂಬ ಸಂಕಟ ಅಕ್ಷರಗಳ ಜೊತೆಗೇ ಒಂದಾಗಿ ಬೆರೆತೆವು ನಲಿದೆವು ಮುನಿಸ ತೋರಿದೆವು ರೋದಿಸಿದೆವುಬರೆಯಬೇಕೆಂದರೂ ಬರೆಯಲಾರೆ ಆ ಬರಹದೊಂದಿಗೆ ಖಾಲಿಯಾಗುವೆ ಎಂಬ ಸಂಕಟ ಬದುಕಿನ ಪ್ರತಿ ಕ್ಷಣದಲೂ ಜೊತೆಯಾದೆವು ಪ್ರತಿ ಕ್ಷಣವನು ಹಂಚಿಕೊಂಡೆವುನಡೆಯಬೇಕೆಂದರೂ ನಡೆಯಲಾರೆ ಆ ನಡೆಯೊಂದಿಗೆ ಕಾಣೆಯಾಗುವೆ ಎಂಬ ಸಂಕಟ ಬದುಕಿನ ಸುದೀರ್ಘ ಪಯಣದಲಿ ಪ್ರೇಮಳ ಜೊತೆಯಾದೆ ಒಲವಿನಲಿ ಬಂದಿಯಾದೆಮರೆಯಬೇಕೆಂದರೂ ಮರೆಯಲಾರೆ ಆ ಮರೆವಿನೊಂದಿಗೇ ಕಂಬನಿಯಾಗುವೆ ಎಂಬ ಸಂಕಟ ನಾಟಿ ಹೋದ ನೆನಪುಗಳೆಲ್ಲ ಮತ್ತೆ ಮೊಳಕೆ ಒಡೆಯುತ್ತಿವೆತೇಲಿ ಬಿಟ್ಟ ದೋಣಿಗಳೆಲ್ಲ ಮತ್ತೆ ಜಗಕೆ ಕರೆಯುತ್ತಿವೆ ನೀನುಡಿಸಿದ ಕೆಂಪು ಸೀರೆಯ ನೆರಿಗೆಗಳು ಇನ್ನೂ ನಾಚುತಿವೆ ಸಾಕಿನೋಟ ಕಸಿದ ಕಾಡಿಗೆಯೊಳಗೆ ಹೊಸ ಬಯಕೆ ಚಿಮ್ಮುತಿವೆ ನಗುವ ಗೋರಿಯ ಮೇಲೆ ನೇಪಥ್ಯದ ಪ್ರೇಮದ ನೆಪಬೇಡಹೊಣೆಯಿಲ್ಲದ ಕನಸುಗಳಿಗೆ ಚಂದ್ರನ ಕಟ್ಟಿ ನೊಗಕೆ ಜರೆಯುತ್ತಿವೆ ಗೋಧೂಳಿಯು ಹೊತ್ತು ತರುವ ನಂಜಿನ ಆ ಮಹಾಮೌನ………..ಸಾಕು ಸಾಕಿನ್ನು ಮುನಿದ ತೋಳುಗಳು ನೀ ಬರುವ ಹರಕೆ ಬಯಸುತ್ತಿವೆ ನೀ ತುಳಿದು ಹೋದ ಅಂಗಳದ ರಂಗವಲ್ಲಿಯೂ ನನ್ನ ಅಣಕಿಸುತಿದೆಈ ಹೊಸ್ತಿಲು ತಲೆಬಾಗಿಲು ನಮ್ಮ ಪ್ರೀತಿ ಸಾರಲು ಯುಗಕೆ ಕನವರಿಸುತ್ತಿವೆ ಪ್ರೇಮಾ ಕಾದ ಎಲ್ಲ ಘಳಿಗೆಗಳಿಗೂ ಪಂಚಭೂತಗಳೇ ಸಾಕ್ಷಿಹೇಳು ಯಾವ ಕಟ್ಟೆ ಕಟ್ಟಲಿ ನೀನಿರದ ಕಣ್ಣೀರು ಈ ಲೋಕಕೆ ಹರಿಯುತ್ತಿವೆ **********************************
ಗಜಲ್ ಮುರಳಿ ಹತ್ವಾರ್ ಹೊಳೆವ ನೀರ ಮೇಲೆ ಅರಳಿದ ತಾವರೆಯಲ್ಲಿ ನಿನ್ನದೇ ನೆನಪುಸುಳಿವ ತಂಗಾಳಿಗೆ ನಾಚಿ ಸರಿವ ಅಲೆಯಲ್ಲಿ ನಿನ್ನದೇ ನೆನಪು ಶಿಶಿರದಾ ಎಳೆಬಿಸಿಲು ಉಸಿರಿತ್ತು ತೆರೆವ ಚಿಗುರಿನೆಲೆಯಲ್ಲಿಆ ನೆಲೆಯ ಹಕ್ಕಿಗಳ ಚಿಲಿಪಿಲಿಯ ಹಾಡಿನಲ್ಲಿ ನಿನ್ನದೇ ನೆನಪು! ಬಸಿರೊಡೆದ ಮುಗಿಲು ಸುರಿಸುವ ತಿಳಿನೀರ ಹನಿಹನಿಗಳ ಸ್ಪರ್ಶದಲಿಹಸಿರೊಡೆದ ಮನದಿ ಮೂಡುವ ಕಾಮನಬಿಲ್ಲಿನಲ್ಲಿ ನಿನ್ನದೇ ನೆನಪು! ನೆಗೆನೆಗೆದು ಧುಮುಕುತ್ತ ಸರಿಸರಿವ ನದಿಗಳ ಬಳುಕಿನಲ್ಲಿಅಬ್ಬರದ ಅಲೆಗಳಲಿ ದಡವನಪ್ಪುವ ಶರಧಿಯಲ್ಲಿ ನಿನ್ನದೇ ನೆನಪು! ಚಳಿಯೊಡೆವ ಇರುಳುಗಳು ಮಬ್ಬಿಟ್ಟ ನಸುಕಿನ ಮಂಜಿನಲಿರಾಧೆಯ ನೆನೆನೆನೆದು ಮೆರೆವ ಮುರಳಿಯ ಗಾನದಲ್ಲಿ ನಿನ್ನದೇ ನೆನಪು! ಮತ್ತೆ ಬೇಕೆನಿಸಿದೆ…! ತಂಪು ಕನ್ನಡಕಗಳ ಹೊಳಪಿಸಿದ ಆ ಕಿರಣಗಳು ಮತ್ತೆ ಬೇಕೆನಿಸಿದೆಕನಸಿನ ಹೊದಿಕೆಗಳಲಿ ಅರಳಿದ ಆ ಕನಸುಗಳು ಮತ್ತೆ ಬೇಕೆನಿಸಿದೆ ಅಮ್ಮನ ಕೈತುತ್ತು ಅಪ್ಪನ ಕೈ ಬೆರಳು ಬರೆಸಿ ಬೆಳೆಸಿದ ಆ ಹೆಜ್ಜೆಯ ಗುರುತುನಡೆದ ದಾರಿಯ ಅಡಿಅಡಿಗೆ ನೆರಳಿತ್ತ ತಂಪಿನ ಮರಗಳು ಮತ್ತೆ ಬೇಕೆನಿಸಿದೆ ಚಿಗುರೊಡೆದ ಮೀಸೆಯ ಹರೆಯ ಚುಂಬಿಸಲು ನಾಚಿದ ಸವಿ ಹೃದಯಯೌವನದ ದಿನಗಳ ಶೃಂಗರಿಸಿದ ಆ ಗೆಳೆತನಗಳು ಮತ್ತೆ ಬೇಕೆನಿಸಿದೆ ಉರಿ ಬಿಸಿಲ ಕ್ಷಣಗಳ ಪ್ರಯಾಣ ಕೆಲವೊಮ್ಮೆ ನಮ್ಮೀ ಜೀವನ ಯಾನಮೈಮರೆಸಿ ತಣಿಸುವ ಅಮೃತ ಗಾನದ ಆ ಮುರಳಿಯ ಕೊರಳು ಮತ್ತೆ ಬೇಕೆನಿಸಿದೆ! ******************
ಗಜಲ್ ಸುಜಾತಾ ರವೀಶ್ ನೆಲವ ನೋಡುತ ನಡೆಯಲು ಒಲವು ಪದವಾಗಿ ಇಳಿಯಿತಲ್ಲ ಗೆಳೆಯಾಛಲವ ಬಿಡುತ ಸಾಗಿರಲು ನಲಿವು ಹದನಾಗಿ ಉಳಿಯಿತಲ್ಲ ಗೆಳೆಯಾ ಬಲವ ತೋರಲು ಬದುಕಿದು ಗೆಲುವು ಕಾಣುವುದು ತೋರಿಕೆಯಲಿ ಮಾತ್ರನಿಲುವ ಬದಲು ಮಾಡಿರಲು ಜಗವು ಸೊಗವೆಂದು ತಿಳಿಯಿತಲ್ಲ ಗೆಳೆಯಾ ಹಮ್ಮಿನ ಪರದೆ ಸುತ್ತೆತ್ತಲೂ ಧಿಮ್ಮನೆ ಕವಿಯುತ ಮಂಜಾಯಿತೇಕೆ ದೃಷ್ಟಿ ಬಿಮ್ಮನು ತೊರೆದು ವರ್ತಿಸಲು ಘಮ್ಮನೆ ಪರಿಮಳ ಸುಳಿಯಿತಲ್ಲ ಗೆಳೆಯಾ ಎಳವೆ ಕಲಿಸಿದ ರಾಗಗಳ ಆಲಾಪ ಮರೆತರೆ ಪ್ರಬುದ್ದರಾದಂತೆಯೇಸುಳಿವೆ ಕಾಣಿಸದೆ ನೋವುಗಳ ಪ್ರಲಾಪ ಜೀವನದಿ ಅಳಿಯಿತಲ್ಲ ಗೆಳೆಯಾ ಅಧ್ಯಾತ್ಮ ಅರಸಿದ ಸುಜಿಮನ ಸಂತೋಷ ಹೊಂದುತ ಶಾಂತವಾಗಿಹುದುತಾಧ್ಯಾತ್ಮ ತಿಳಿಯಲಿ ತೇಲುತಲಿ ಸಂತೃಪ್ತಿ ಬಾಂಧವ್ಯ ಬೆಳೆಯಿತಲ್ಲ ಗೆಳೆಯಾ ***************************** ಜಗದ ಕನ್ನಡಿಯಲ್ಲಿ ಎದೆಯ ಪ್ರತಿಬಿಂಬವ ಕಾಣದಾದೆಯಾ ಮನದ ಮಂಟಪದಲ್ಲಿ ಪ್ರೀತಿಯ ಪ್ರತಿರೂಪ ನೋಡದಾದೆಯಾ ಮಗುವ ಹೃದಯದಲಿ ಇರದು ದ್ವೇಷಾಸೂಯೆ ಕಲ್ಮಶಗಳು ನಗುವ ಪರಿಮಳದೆ ಇಳೆಯ ಸುಗಂಧಮಯ ಮಾಡದಾದೆಯಾ ಮನಸು ಮನಸುಗಳ ನಡುವೆ ಅಹಂನ ಬೇಲಿ ಕಟ್ಟಿದವರ್ಯಾರು? ಕನಸು ನನಸುಗಳ ಚೆಲ್ಲಾಟಕ್ಕೆ ಪೂರ್ಣವಿರಾಮ ಕೊಡದಾದೆಯಾ ಕಲ್ಪನೆ ವಾಸ್ತವಗಳ ಪರಿಧಿಯಂಚಿಗೆ ಲಕ್ಷ್ಮಣರೇಖೆ ಎಳೆದವರಾರು? ಭಾವನೆ ಸ್ಪಂದನೆಗಳ ಸವಿಪ್ರಸಾದದ ರಸದೌತಣ ನೀಡದಾದೆಯಾ ರಾಜಿಯ ಪ್ರಸಕ್ತಿ ಬರದ ಹಾಗಿಂತು ನಿಷ್ಠುರನಾಗಿ ನಡೆಯಬೇಡ ಸುಜಿಯ ಜೀವನ ನಿನಗಾಗಿಯೇ ಎಂದರಿತಿದ್ದರೂ ಬೇಡದಾದೆಯಾ ******************************
ಅಂಕಣ ಗಜಲ್ ಜಯಶ್ರೀ.ಭ. ಭಂಡಾರಿ. ಸರಿದು ಹೋಯ್ತು ಮತ್ತೊಂದು ಪ್ರೇಮಿಗಳ ದಿನಮರೆಯಲಾರೆ ನಾವಿಬ್ಬರೂ ಸಂಧಿಸಿದ ಆ ಸುದಿನ ಸಖನೇ ಜೋರಾದ ಮಳೆ ಅಬ್ಬರಕ್ಕೆ ನಡುಗಿ ನಿಂತಿದ್ದೆ ಮರದ ಕೆಳಗೆಸರಿ ಸಮಯಕೆ ಹಿತವಾಗಿ ಬಂದು ತುಂಬಿ ನಿಂತೆ ಮೈಮನ ಸಖನೇ ಪ್ರೀತಿ ದೇವನಿಟ್ಟ ವರ ಅದಕೆ ನೀ ನನಗೆ ದಕ್ಕಿದೆ ನೀ ನಿಟ್ಟೆ ಹಣೆಗೆ ಚುಕ್ಕಿ ಅದಕೆ ಸಲ್ಲಿಸುವೆ ದೇವಗೆ ನಮನ ಸಖನೇ ಪ್ರತಿ ಬಾರಿ ಈ ದಿನ ನಮ್ಮದೆ ಗುಲಾಬಿಯಲಿ ರಂಗಾಗಲುಹೊಸ ಚೈತನ್ಯ ತುಂಬಿ ಬರುತಿರಲು ಒಲವ ಗಾನ ಸಖನೇ. ನೋವು ನಲಿವುಗಳನ್ನು ಸಮನಾಗಿ ಸ್ವೀಕರಿಸುವ ನಾವುಬದುಕು ಬಂಡಿಯಲಿ ಅಪರಂಜಿಗಳಾಗಿ ಮಾದರಿಯಾಗೋಣ ಸಖನೇ ಪ್ರೇಮಿಗಳು ನಾವು ಪ್ರತಿದಿನ ಪ್ರತಿಕ್ಷಣ ಸಾಂಗತ್ಯದಲ್ಲಿಒಂದೆ ದಿನದ ಆಚರಣೆ ಬೇಕಿಲ್ಲ ಈ ಜಯಳಿಗೆ ಸದಾ ನಿನ್ನದೇ ಧ್ಯಾನ ನಿಶಾಪಾನ ಸಖನೇ ನೀನಗೇಕೆ ಅರಿವಾಗುತ್ತಿಲ್ಲ ನನ್ನ ಒಲವು ಮೌನವೇನೀ ಹೀಗೆ ಮರೆತು ಕುಳಿತರೆ ಹೇಗೆ ಮೌನವೇ. ಮನಸಿನಾಳಕಿಳಿದ ಈ ಪ್ರೀತಿ ಕೇವಲ ನೆಪವೇನೋಡಿದಾಗಲೆಲ್ಲ ಹತ್ತಿರ ಬರ್ತಿದ್ದೆ ಮೌನವೇ. ನೀ ಮೀಟಿದೆ ಹೃದಯದಿ ಹಿತವಾದ ನೆನಪೇಅಳುಕಿಸಲಾರದು ಯಾವ ಶಾಯಿ ಮೌನವೇ ಪ್ರೇಮಿಗಳು ನಾವು ಮರೆಯದಿರು ಜೀವವೇ.ಅನುರಾಗವಿದು ದುಡುಕಿ ದೂರಾಗದಿರು ಮೌನವೇ. ನೀನಿರದ ಸಂಭ್ರಮ ಯಾತಕೆ ಮನವೇಎಂದಿಗಾದರೂ ಬಾ ಒಪ್ಪಿಕೊಳ್ಳುವೆ ಮೌನವೇ.. ಮೌನ ಮಾತಾಗಿ ಬಾ ಪ್ರೇಮ ಬೊಕ್ಕಸವೇನೋವು ಮರೆತು ಮುತ್ತಾಗೋಣ ಮೌನವೇ. ಜೀವನವೆಂಬ ಜೋಕಾಲಿ ಜೀಕೋಣ ಸಖನೇಸುಖವೆನೆಂದು ಅರಿತು ಬೆರೆತು ಬಾಳೋಣ ಮೌನವೇ ನೆಪವೆಂದು ಹೇಳಿ ತಲ್ಲಣಿಸದಿರು ದೊರೆಯೇದೊರೆಸಾನಿ ಜಯಳಿಗೆ ನಿನ್ನೊಲುಮೆ ನೀಡು ಮೌನವೇ. ******************************
ಗಜಲ್ ರೇಖಾ ಭಟ್ ಗುಡಿಸಲುಗಳ ಹೊಸ್ತಿಲಲಿ ಹಣತೆಗಳು ಬೆಳಗಿದರೆ ಅಂದು ದೀಪಾವಳಿಹಬ್ಬಿದ ಗೆದ್ದಲುಬಳ್ಳಿ ಉದುರಿ ಹಸೆಚಿತ್ರ ಮೂಡಿದರೆ ಅಂದು ದೀಪಾವಳಿ ಹಬ್ಬವೆಂದರೆ ಹೊಸ ಬಟ್ಟೆ ಹೊಸ ವೇಷ ಹೊಸ ನೋಟ ಇಷ್ಟೇ ಅಲ್ಲಹರಿದ ಅಂಗಿಯ ತುದಿಯಲಿ ಪಾಯಸವು ಅಂಟಿದ್ದರೆ ಅಂದು ದೀಪಾವಳಿ ರಂಗು ಬೆಳಕಿನಲಿ ನಡೆವ ನಶೆಯ ಕೂಟಗಳಿಗೆ ದೀಪಾವಳಿಯೇ ಆಗಬೇಕೆ‘ಮದ್ಯ’ದಲಿ ಕರಗುವ ಪುಡಿಗಾಸು ಕೂಸಿನ ಕಾಲ್ಗೆಜ್ಜೆಗಾದರೆ ಅಂದು ದೀಪಾವಳಿ ನೊಂದ ಜೀವಗಳಲಿ ಆಶಾಭಾವದ ಮಿಣುಕು ಮೊದಲು ಉದಿಸಬೇಕಿದೆ ಇಲ್ಲಿಕಸಮುಸುರೆಯಲಿ ಕನಸರಳಿಸುವ ಕೈಗಳಿಗೆ ಬಿಡುವಾದರೆ ಅಂದು ದೀಪಾವಳಿ ಬದುಕೇ ಹಬ್ಬವಾದವರಿಗೆ ಈ ಹಬ್ಬಗಳ ಸಾಲು ನಾಮಾಂಕಿತ ‘ರೇಖೆ’ಗಳುಸೋತ ಕಂಗಳ ಆಳವನು ಬೆಳಕೊಂದು ತಡವಿ ತಬ್ಬಿದರೆ ಅಂದು ದೀಪಾವಳಿ ನಿನ್ನೊಲವ ಅರಿತ ಮೇಲೆ ಪ್ರೀತಿಯ ವ್ಯಾಖ್ಯಾನವನು ಹುಡುಕಲಿಲ್ಲಜೀವಭಾವ ಬೆರೆತ ಮೇಲೆ ಅನುಸಂಧಾನದ ಅರ್ಥವನು ಹುಡುಕಲಿಲ್ಲ ನಿನ್ನ ಮೇಲೆ ಮುನಿಸು ಹೆಚ್ಚಿದಂತೆಲ್ಲಾ ಕುದಿಯುವುದು ನನ್ನದೇ ಹೃದಯನೀ ನನ್ನೊಳಗಿರುವೆ ಎಂದರಿತ ಮೇಲೆ ಸಲ್ಲದ ನೆಪಗಳನು ಹುಡುಕಲಿಲ್ಲ ಎಂಟು ದಿಕ್ಕಿಂದ ತೂರಿಬರುತಿವೆ ರಾಗಗಳು ಯಾವುದಕ್ಕೆ ಕಿವಿ ತೆರೆಯಲಿಅನುರಾಗದ ಅಲೆಗಳು ಎದೆಯ ತುಂಬಿದ ಮೇಲೆ ವಿರಹದ ಹಾಡುಗಳನು ಹುಡುಕಲಿಲ್ಲ ಈ ಪ್ರೀತಿಯು ಮಧುರ ಮಾಯೆಯಂತೆ ಆದರೂ ಮೊದಲ ಆದ್ಯತೆ ನಿನಗೆನಿನ್ನ ಸನಿಹ ನನ್ನ ಸ್ವರ್ಗ ಎಂದು ತಿಳಿದ ಮೇಲೆ ಯಾವ ಆಕರ್ಷಣೆಗಳನು ಹುಡುಕಲಿಲ್ಲ ಬರಿದೇ ಇನ್ನೇನು ಹುಡುಕಲಿ ತೃಪ್ತಿಯಾಳದಲಿ ‘ರೇಖೆ’ಯ ಮನವು ನೆಲೆನಿಂತಾಗಆತ್ಮಕ್ಕೆ ಪ್ರೇಮ ದರ್ಶನವಾದ ಮೇಲೆ ಕಾಣದ ದೇವರನು ಹುಡುಕಲಿಲ್ಲ *****************************************









