ದಾರಾವಾಹಿ-04 ಅದ್ಯಾಯ-04 ಮುಂಬೈ ಪೆದುಮಾಳರ ಮನೆಯನ್ನು ತೊರೆದು ಹೊರಟ ಏಕನಾಥ ಕದಿಕೆಬೆಟ್ಟಿನ ತನ್ನ ಮಾವನ ಮನೆಗೆ ಬಂದು ತಲುಪಿದ. ಯಾವ ಸೂಚನೆಯನ್ನೂ ನೀಡದೆ ಬಂದು ನಿಂತ ಗಂಡನನ್ನು ಕಂಡ ದೇವಕಿಗೆ ಅಚ್ಚರಿಯಾಯಿತು. ‘ಅಯ್ಯೋ ದೇವರೇ! ಏನ್ರಿ ಇದು, ಒಂದು ಪತ್ರವನ್ನಾದರೂ ಬರೆಯುತ್ತಿದ್ದವರು ಇವತ್ತು ಏನೂ ತಿಳಿಸದೆ ಪ್ರತ್ಯಕ್ಷವಾಗಿಬಿಟ್ಟಿರಲ್ಲ…!’ ಎಂದು ಖುಷಿಯಿಂದ ಅಂದವಳು, ಅವನು ತಂದಿದ್ದ ಸಾಮಾನು ಸರಂಜಾಮುಗಳನ್ನು ಒಳಗಿಡಲು ಮುಂದಾದಳು. ಆದರೆ ಅವನೊಂದಿಗಿದ್ದ ದೊಡ್ಡ ಹೊರೆಯನ್ನು ಕಂಡವಳಿಗೆ ಆತಂಕ ಸುಳಿಯಿತು. ‘ಹೌದು ಮಾರಾಯ್ತೀ, ಯಾವಾಗಲೂ ತಿಳಿಸಿಯೇ ಬರುವುದಲ್ಲವಾ. ಈ ಸಲ ನಿಮ್ಮನ್ನೊಂದಿಷ್ಟು ಅಚ್ಚರಿ ಪಡಿಸುವ ಅಂತ ಅನ್ನಿಸಿತು. ಎದ್ದು ಬಂದುಬಿಟ್ಟೆ!’ ಎಂದು ಏಕನಾಥನೂ ನಗುತ್ತ ಅಂದಾಗ ದೇವಕಿಯ ಕಳವಳ ಮರೆಯಾಯಿತು. ಪ್ರೀತಿಯಿಂದ ನಗುತ್ತ ಗಂಡನನ್ನು ಒಳಗೆ ಕರೆದೊಯ್ದು ವಿಶ್ರಾಂತಿಗೆ ವ್ಯವಸ್ಥೆ ಮಾಡಿದಳು. ಏಕನಾಥ ಆಹೊತ್ತು ಹೆಂಡತಿಯೊಂದಿಗೆ ಗೆಲುವಿನಿಂದ ಮಾತಾಡಿದನಾದರೂ ಆನಂತರ ದಿನವಿಡೀ ಗಂಭೀರವಾಗಿ ಕಳೆದ. ಮರುದಿನವೂ ಅದೇ ಸ್ಥಿತಿಯಲ್ಲಿದ್ದ. ದೇವಕಿಗೆ ಮರಳಿ ಆತಂಕವೆದ್ದಿತು. ‘ಏನಾಯ್ತುರೀ…? ನಿನ್ನೆಯಿಂದ ನಿಮ್ಮನ್ನು ಗಮನಿಸುತ್ತಿದ್ದೇನೆ, ಯಾವುದೋ ಚಿಂತೆಯಲ್ಲಿರುವ ಹಾಗಿದೆಯಲ್ಲಾ? ಬೊಂಬೈಯಲ್ಲಿ ಏನಾದರೂ ತೊಂದರೆಯಾಯ್ತಾ…?’ ಎಂದು ಮೃದುವಾಗಿ ಕೇಳಿದಳು. ‘ಹೌದು ಮಾರಾಯ್ತೀ ಸ್ವಲ್ಪ ಸಮಸ್ಯೆಯಾಯಿತು. ಗುರುಗಳಿಗೂ ನನಗೂ ಜಗಳವಾಯಿತು. ಇನ್ನು ಮುಂದೆ ಅವರ ಸಹವಾಸವೇ ಬೇಡವೆಂದು ನಿರ್ಧರಿಸಿ ಬಂದುಬಿಟ್ಟೆ!’ ಎಂದು ಏಕನಾಥ ಅನ್ನುತ್ತಿದ್ದಂತೆಯೇ ಅವನ ಮಾವ ಸುಬ್ಬಣ್ಣನೂ ಬಂದು ಅಳಿಯನೆದುರು ಕುಳಿತರು. ಏಕನಾಥ ಅವರಿಗೂ, ಹೆಂಡತಿಗೂ ತನ್ನ ಮತ್ತು ಗುರುಗಳ ನಡುವಿನ ಮನಸ್ತಾಪದ ಕಾರಣವನ್ನು ನೋವಿನಿಂದ ವಿವರಿಸಿದ. ಆದರೆ ಸುಬ್ಬಣ್ಣನಿಗೆ, ಅಳಿಯ ತನ್ನ ಸಂಸಾರವನ್ನು ಊರಲ್ಲಿ ಬಿಟ್ಟು ಎಲ್ಲೋ ಪರವೂರಿನಲ್ಲಿ ದುಡಿಯುತ್ತಿದ್ದುದು ಸ್ವಲ್ಪವೂ ಇಷ್ಟವಿರಲಿಲ್ಲ. ಅವನು ಊರಿಗೆ ಬಂದಾಗಲೆಲ್ಲ ಅದನ್ನು ಸೂಕ್ಷ್ಮವಾಗಿ ಗಮನಕ್ಕೆ ತರುತ್ತಿದ್ದರು. ಇಂದು ಅವನೇ ಆ ನಿರ್ಧಾರ ತೆಗೆದುಕೊಂಡಿರುವುದನ್ನು ತಿಳಿದವರಿಗೆ ನಿರಾಳವಾಯಿತು. ‘ಬಹಳ ಒಳ್ಳೆಯದಾಯ್ತು ಮಾರಾಯಾ. ಸರಿಯಾದ ನಿರ್ಧಾರ ಮಾಡಿದ್ದಿ. ಇನ್ನೂ ಎಷ್ಟು ಕಾಲ ಅಂತ ಇನ್ನೊಬ್ಬರ ಅಡಿಯಾಳಾಗಿ ಬದುಕುತ್ತಿ ಹೇಳು? ಇಲ್ಲಿಯತನಕ ಅಲ್ಲಿದ್ದುಕೊಂಡು ಏನೇನು ಕಲಿತಿದ್ದಿಯೋ ಅದನ್ನು ಬಳಸಿಕೊಂಡು ಊರಲ್ಲೇ ದುಡಿಯುತ್ತ ಹೆಂಡತಿ ಮಕ್ಕಳೊಂದಿಗೆ ನೆಮ್ಮದಿಯಿಂದ ಸಂಸಾರ ಮಾಡು. ಮುಂದೆಲ್ಲಾ ಸರಿ ಹೋಗುತ್ತದೆ!’ ಎಂದು ಧೈರ್ಯ ತುಂಬಿದರು. ದೇವಕಿಗೂ ಗಂಡನ ಯೋಚನೆ ಇಷ್ಟವಾಯಿತು. ತಾನೂ ಸಾಂತ್ವನ ಹೇಳಿದಳು. ಆದ್ದರಿಂದ ಏಕನಾಥ ಹೆಂಡತಿಯ ಮನೆಯಲ್ಲಿ ನಾಲ್ಕು ದಿನ ಸಮಾಧಾನದಿಂದ ಕಳೆದ. ಬಳಿಕ ಮಾವನಿಂದ ಒಪ್ಪಿಗೆ ಪಡೆದು ದೇವಕಿಯನ್ನೂ ಮಕ್ಕಳು ದೀಕ್ಷಾ ಮತ್ತು ದ್ವಿತೇಶ್ನನ್ನು ಕರೆದುಕೊಂಡು ತನ್ನ ಮನೆಗೆ ಹೋಗಿ ವಾಸಿಸತೊಡಗಿದ. ಆದರೆ ಒಂದು ತಿಂಗಳು ಕಳೆಯುವಷ್ಟಲ್ಲಿ ಮುಂದೆ ಜೀವನಕ್ಕೇನು ಮಾಡುವುದು…? ಎಂಬ ಚಿಂತೆ ಅವನನ್ನು ಕಾಡತೊಡಗಿತು. ಇಷ್ಟು ವರ್ಷಗಳ ಕಾಲ ಮುಂಬೈಯಲ್ಲಿದ್ದು ವಿವಿಧ ದೇವರು ದಿಂಡರುಗಳ ಪೂಜೆ ಪುನಸ್ಕಾರಗಳನ್ನು ಶ್ರದ್ಧಾಭಕ್ತಿಯಿಂದ ಮಾಡಿಕೊಂಡು ಬಂದ ತನ್ನಂಥ ಬಡವನ ಬದುಕಿಗೊಂದು ನೆಲೆಯನ್ನು ಕಂಡುಕೊಳ್ಳಲು ಆ ದುಷ್ಟ ಪೆದುಮಾಳ ಕೊನೆಗೂ ಅವಕಾಶ ಕೊಡಲಿಲ್ಲವಲ್ಲ! ಅವನೊಂದಿಗೆ ನಾಯಿಗಿಂತಲೂ ಕಡೆಯಾಗಿ ದುಡಿದ ಋಣಕ್ಕಾದರೂ ಅವನ ಮನಸ್ಸು ಕರಗಬೇಕಿತ್ತು. ಅವನು ಪರಮ ಸ್ವಾರ್ಥಿ! ಅವನ ಅಲ್ಪತನಕ್ಕೇ ತಾನಾವತ್ತು ಕೋಪಿಸಿಕೊಂಡು ಹದ್ದುಮೀರಿ ವಾದಿಸಿದ್ದು ಎಂದು ಯೋಚಿಸಿದ ಏಕನಾಥನಿಗೆ ಆವತ್ತು ತನಗೂ ಪೆದುಮಾಳರಿಗೂ ನಡೆದ ಬಿರುಸಾದ ಚರ್ಚೆಯ ಚಿತ್ರಣವು ಮುನ್ನೆಲೆ ಬಂತು. ‘ಗುರುಗಳೇ, ಇನ್ನೆಷ್ಟು ಸಮಯ ಅಂತ ನಾನೂ ಚಾಕರಿ ಮಾಡಿಕೊಂಡೇ ಬದುಕುವುದು ಹೇಳಿ? ನನಗೂ ಸಂಸಾರ ಉಂಟಲ್ಲವಾ. ತಾವು ದೊಡ್ಡ ಮನಸ್ಸು ಮಾಡಿ ಸಣ್ಣಪುಟ್ಟ ಪೂಜಾ ಕೈಂಕರ್ಯಗಳನ್ನು ನನಗೂ ವಹಿಸಿಕೊಟ್ಟು ಆಶೀರ್ವದಿಸಬೇಕು!’ ಎಂದು ಎಷ್ಟೊಂದು ನಮ್ರವಾಗಿ ಕೇಳಿಕೊಂಡೆ. ಆದರೆ ಅಷ್ಟು ಕೇಳಿದ ಅವರು ಹೇಗೆ ವರ್ತಿಸಿಬಿಟ್ಟರು! ತಾನು ಅವರ ಅರ್ಧ ಆಸ್ತಿಯನ್ನೇ ಕೇಳಿಬಿಟ್ಟೆನೇನೋ ಎಂಬಂಥ ರೋಷ ಅವರಲ್ಲಿ ಉಕ್ಕಿತು. ‘ಹೌದೌದೋ…ನಿನ್ನ ಕೆಲಸ ಕಲಿಯುವ ತರಾತುರಿಯಿಂದಲೇ ಅಂದುಕೊಂಡೆವು ನೀನೂ ನಮ್ಮ ಬುಡಕ್ಕೇ ಕೊಡಲಿಯಿಡುವ ಹುನ್ನಾರದಲ್ಲಿದ್ದಿ ಅಂತ!’ ಎಂದು ಬಿರುಸಿನಿಂದ ಅಂದವರು ಮರುಕ್ಷಣ ಏನಾಯಿತೋ, ತಟ್ಟನೆ ತಣ್ಣಗಾದರು. ಬಳಿಕ, ‘ಆದರೂ ಚಿಂತೆಯಿಲ್ಲ ಬಿಡು. ನಿನಗೂ ಒಂದಷ್ಟು ಕೆಲಸವನ್ನು ವಹಿಸಿಕೊಡಬಹುದಿತ್ತು. ಆದರೆ ನೀನಿನ್ನೂ ಪೂರ್ಣ ವಿದ್ಯೆಯನ್ನೇ ಕಲಿತಿಲ್ಲವಲ್ಲ ಮಾರಾಯಾ! ಒಂದೇ ಒಂದು ಪೂಜಾವಿಧಿಯ ಆಚರಣೆಯಾಗಲೀ ಪೂರ್ಣಾಹುತಿಯ ಕ್ರಮವಾಗಲಿ ನಿನಗೆಷ್ಟು ಗೊತ್ತುಂಟು ಹೇಳು? ನಿನ್ನ ನೇಮನಿಷ್ಠೆಯನ್ನು ನಾವೂ ಕಂಡವರಲ್ಲವಾ. ಸುದರ್ಶನ ಹೋಮದ ಮೊದಲ ಮಂತ್ರ ಹೇಳಿದ ನಂತರ ಬೆಬ್ಬೆಬ್ಬೇ! ಅಂತ ನನ್ನ ಮುಖ ನೋಡುತ್ತಿ. ಗಣೇಶ ಸ್ತೋತ್ತ್ರವಾದರೂ ನೆಟ್ಟಗೆ ಬರುತ್ತದೋ ನಿನಗೆ? ಅದೇ ಗೊತ್ತಿಲ್ಲದ ಮೇಲೆ ಸ್ವತಂತ್ರವಾಗಿ ಹ್ಯಾಗೆ ಬದುಕುತ್ತಿ ಹೇಳು? ಇದು ನಿನ್ನೂರು ಅಂಗೈಯಗಲದ ದೈವದ ಓಣಿ ಅಂತ ತಿಳಿಯಬೇಡ. ಇದು ಮಹಾರಾಷ್ಟ್ರ. ಬಹಳ ದೊಡ್ಡ ಸಾಗರವಿದು! ಇಲ್ಲಿ ಈಜಬೇಕಾದರೆ ಬರೇ ವಿದ್ಯೆಯೊಂದಿದ್ದರೆ ಸಾಲದು, ಗಟ್ಟಿ ಬುದ್ಧಿವಂತಿಕೆ ಮತ್ತು ಆತ್ಮಬಲವೂ ಬೇಕು. ಇಲ್ಲಿನ ಮಂದಿ ಏನೇನೋ ವ್ಯಾಪಾರ, ವಹಿವಾಟು ಮಾಡಿಕೊಂಡು ತಮಗಿಷ್ಟ ಬಂದಂತೆ ಬದುಕುತ್ತಿರಬಹುದು. ಆದರೆ ತಂತಮ್ಮ ದೈವ ದೇವರುಗಳ ವಿಷಯದಲ್ಲಿ ಮಾತ್ರ ಎಲ್ಲರೂ ಅತೀವ ಶ್ರದ್ಧಾಭಕ್ತಿಯುಳ್ಳವರು. ತಾವು ನಂಬಿದ ದೈವಶಕ್ತಿಗಳ ಪೂಜೆ ಪುನಸ್ಕಾರಗಳಲ್ಲಿ ಬಹಳ ಪ್ರಾಮಾಣಿಕವಾಗಿ ತೊಡಗಿಕೊಂಡವರು. ನಿನಗಿನ್ನೊಂದು ವಿಷಯ ಗೊತ್ತುಂಟೋ? ಅಂಥವರಲ್ಲಿ ಕೆಲವರಿಗೆ ನಮ್ಮ ಅನೇಕ ಮಂತ್ರ, ಸ್ತ್ರೋತ್ರಗಳೆಲ್ಲ ಬಾಯಿಪಾಠ ಬರುತ್ತವೆ. ಒಂದು ವೇಳೆ ನಾವು ತಪ್ಪು ಉಚ್ಛರಣೆ ಮಾಡಿದರೂ ನಮ್ಮನ್ನು ತಟ್ಟನೆ ಎಚ್ಚರಿಸಿ ಸರಿಪಡಿಸಿದಂಥ ಎಷ್ಟೋ ಘಟನೆಗಳು ನಮ್ಮ ಕಣ್ಣ ಮುಂದೆಯೇ ನಡೆದದ್ದಿವೆ! ಹೀಗಿರುವಾಗ ನಿನ್ನ ಅರೆಬರೆ ಶ್ಲೋಕ, ಆಚರಣೆಗಳಿಂದ ಅವರನ್ನೆಲ್ಲ ಮಂಗ ಮಾಡಲು ಹೊರಟೆಯೆಂದರೆ ಒಂದು ದಿನ ನಿನ್ನ ಹೆಣ ವರ್ಲಿ ಗಟಾರದಲ್ಲಿ ಬಿದ್ದು ಕೊಳೆತು ಹೋದೀತು! ಆದ್ದರಿಂದ ಈಗ ಸದ್ಯ ನಾವು ಹೇಳುವ ಕೆಲಸ ಮಾಡಿಕೊಂಡು ಸುಮ್ಮನಿದ್ದುಬಿಡು. ಯಾವುದಕ್ಕೂ ಕಾಲ ಕೂಡಿ ಬರಬೇಕು. ನಮಗೂ ವಯಸ್ಸಾಗುತ್ತ ಬಂತಲ್ಲವಾ ಮಾರಾಯಾ. ಈ ಕ್ಷೇತ್ರದಲ್ಲಿ ನಮ್ಮ ಓಡಾಟ ನಿಲ್ಲುವ ಹೊತ್ತಿಗೆ ನೀನೇ ಎಲ್ಲವನ್ನೂ ಸಂಭಾಳಿಸುವಿಯಂತೆ. ಈಗ ಹೋಗಿ ಕೆಲಸ ನೋಡಿಕೋ ಹೋಗು ಹೋಗು!’ ಎಂದು ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಅಸಡ್ಡೆಯಿಂದ ಮಾತಾಡಿದರು. ಆಗ ತನಗೂ ಸಹನೆ ತಪ್ಪಿತು. ‘ದೇವರ ಪೂಜೆ ಪುನಸ್ಕಾರಗಳನ್ನು ಮಾಡಲು ಅದೆಂಥ ಬುದ್ಧಿವಂತಿಕೆ ಬೇಕು? ಒಂದಿಷ್ಟು ಮಂತ್ರಗಳೂ ಆಚರಿಸುವ ನಿಯಮವೂ ಮತ್ತದಕ್ಕೆ ತಕ್ಕಂಥ ಶ್ರದ್ಧಾಭಕ್ತಿಯಿದ್ದರೆ ಸಾಲದಾ? ಅದೂ ಅಲ್ಲದೇ ನಿಮ್ಮೊಂದಿಗೆ ನಾನು ಎಷ್ಟು ವರ್ಷಗಳಿಂದ ದುಡಿಯುತ್ತಿದ್ದೇನೆ! ಯಾವತ್ತಾದರೂ ಒಂದು ಮಂತ್ರವನ್ನಾಗಲೀ, ಅದರ ಅಂತ್ಯದ ನಿಯಮವನ್ನಾಗಲೀ ನೀವು ನನಗೆ ನೋಡಲು, ಕಲಿಯಲು ಬಿಟ್ಟದ್ದುಂಟಾ? ಅದೇ ಹೊತ್ತಲ್ಲಿ ಏನಾದರೊಂದು ಅಗತ್ಯವಿಲ್ಲದ ಕೆಲಸ ಸೂಚಿಸಿ ಒಳಗೋ ಹೊರಗೋ ಅಟ್ಟುತ್ತಿದ್ದಿರಲ್ಲ. ಹಾಗಾದರೆ ನಾನಾದರೂ ಹೇಗೆ ಕಲಿಯಲು ಸಾಧ್ಯ?’ ಎಂದು ತಾನೂ ರೋಸಿ ಪ್ರಶ್ನಿಸಿದೆ. ಅಷ್ಟು ಕೇಳಿದ್ದೇ ಪೆದುಮಾಳರ ಕಣ್ಣುಗಳು ಹೇಗೆ ಕೆಂಡ ಕಾರತೊಡಗಿದವು! ‘ಓಹೋ… ನೀನು ಈ ಮಟ್ಟಕ್ಕೆ ಯೋಚಿಸುತ್ತಿದ್ದೀಯಾ…? ಅಂದರೆ ನಮ್ಮ ವಿದ್ಯೆಯನ್ನೆಲ್ಲ ನಿನಗೆ ನಾವು ನಮ್ರವಾಗಿ ಧಾರೆಯೆರೆದುಕೊಡಬೇಕು. ಆಮೇಲೆ ನೀನು ಮುಂಬೈಯ ರಾಜಮಾಂತ್ರಿಕನಂತೆ ಮೆರೆಯಬೇಕು. ನಾವು ಫುಟ್ಪಾತ್ನಲ್ಲಿ ಗಿಣಿಶಾಸ್ತ್ರ ಹೇಳಿಕೊಂಡು ಬದುಕಬೇಕು ಅಂತಾನಾ ನಿನ್ನ ಉಪಾಯ? ಅದೆಲ್ಲ ನಾವು ಜೀವಂತವಿರುವವರೆಗೆ ಆಗಿಹೋಗದ ಮಾತು ಬಿಡೋ! ಹ್ಯಾಗೂ ನೀನೀಗ ನಮ್ಮ ಮುಂದೆಯೇ ನಿಂತು ಮಾತಾಡುವಷ್ಟು ಬೆಳೆದುಬಿಟ್ಟಿದ್ದೀಯ. ಅಂದಮೇಲೆ ನಮ್ಮ ನಿರ್ಧಾರವನ್ನೂ ಕೇಳು. ಆದರೆ ಅದಕ್ಕಿಂತ ಮೊದಲು ನಿನಗೊಂದು ಕಥೆ ಹೇಳುತ್ತೇವೆ ಕೇಳು. ನಿನಗಿಂತಲೂ ಮೊದಲೊಬ್ಬ ಪದ್ಮನಾಭ ಅನ್ನುವ ಗುಳ್ಳೆ ನರಿಯಂಥವನು ನಮ್ಮವನೇ ಎಂದು ಸುಳ್ಳು ಹೇಳಿಕೊಂಡು ಬಂದಿದ್ದ. ಮಲಯಾಳಿ, ತುಳು, ಕನ್ನಡ ಭಾಷೆಯನ್ನೆಲ್ಲ ಕಲಸುಮೇಲೊಗರ ಮಾಡಿ ಮಾತಾಡುತ್ತಿದ್ದ. ನಿನ್ನ ಹಾಗೆಯೇ ನಮ್ಮ ಜೊತೆ ಅನ್ಯೋನ್ಯವಾಗಿ ಬೆರೆತು ಕೆಲಸ ಮಾಡುತ್ತಿದ್ದ. ಅವನು ತೋರಿಸುತ್ತಿದ್ದ ಪ್ರೀತಿ ಗೌರವ ಹೇಗಿತ್ತೆಂದರೆ, ನಮ್ಮಿಬ್ಬರು ಮಕ್ಕಳು ವಿದ್ಯಾಭ್ಯಾಸ ಮುಗಿಸಿ ಪರದೇಶಗಳಿಗೆ ಹೊರಟು ಹೋದವರು ಅಲ್ಲಿನ ಬಿಳಿ ಚರ್ಮದ ಹುಡುಗಿಯರನ್ನು ಕಟ್ಟಿಕೊಂಡು ಅಪ್ಪ ಅಮ್ಮನನ್ನು ಮರೆತುಬಿಟ್ಟ ಸಂದರ್ಭದಲ್ಲೇ ಅವನು ನಮ್ಮ ಪಾಲಿಗೆ ಮನೆ ಮಗನಂತಾಗಿಬಿಟ್ಟಿದ್ದ. ನಮ್ಮೆಲ್ಲಾ ಆಸ್ತಿಪಾಸ್ತಿಗೆ ಅವನೇ ವಾರಿಸುದಾರನಾಗುವ ಯೋಗ್ಯತೆಯುಳ್ಳವನು ಮತ್ತು ನಮ್ಮ ಕಡೆಗಾಲದಲ್ಲೂ ಆಸರೆಯಾದಾನು ಎಂದು ಯೋಚಿಸಿ ನಾವೂ ನೆಮ್ಮದಿಪಟ್ಟೆವು. ಹಾಗಾಗಿ ನಮ್ಮ ಸರ್ವ ವಿದ್ಯೆಗಳನ್ನೂ ಅವನಿಗೆ ಧಾರೆಯೆರೆಯಲು ಮುಂದಾದೆವು. ಆದರೆ ಅಷ್ಟರಲ್ಲಿ ಆ ಲಫಂಗ ಏನು ಮಾಡಿದ ಗೊತ್ತಾ?’ ಎಂದ ಪೆದುಮಾಳರು ನನ್ನನ್ನೊಮ್ಮೆ ಜಿಗುಪ್ಸೆಯಿಂದ ದಿಟ್ಟಿಸಿದವರು, ವೀಳ್ಯದ ಕಂಚಿನ ಹರಿವಾಣವನ್ನು ರಪ್ಪನೆ ಹತ್ತಿರ ಎಳೆದುಕೊಂಡು ಎಲೆಯಡಿಕೆ ಮತ್ತು ಸುಣ್ಣಕ್ಕೆ ಚಿಟಿಕೆ ತಂಬಾಕು ಬೆರೆಸಿ ಬಾಯಿಗಿಟ್ಟು ಜರಜರನೇ ಜಗಿಯುತ್ತ ದೀರ್ಘ ಶ್ವಾಸ ದಬ್ಬಿ ಮಾತು ಮುಂದುವರೆಸಿದರು. ‘ಹಿಂದೂ ಧರ್ಮಶಾಸ್ತ್ರ ಅಥವಾ ವೇದೋಪನಿಷತ್ತುಗಳಲ್ಲಿ ಉಲ್ಲೇಖವೇ ಇಲ್ಲದಂಥ ಯಾವು ಯಾವುದೋ ಹೆಸರುಗಳ ಕ್ಷುಧ್ರ ಭೂತ, ಪಿಶಾಚಿಗಳನ್ನು ಆ ಅವಿವೇಕಿ ಸೃಷ್ಟಿಸಿಕೊಂಡ! ಈಗ ಜೋಗಾಪುರಿಯ ನಟ್ಟನಡುವೆ ದೊಡ್ಡ ದೇವಸ್ಥಾನವೊಂದು ಎದ್ದು ನಿಂತಿದೆಯಲ್ಲ ಗೊತ್ತುಂಟಾ ನಿನಗೆ…?’ ಎಂದು ಪೆದುಮಾಳರು ತನ್ನನ್ನು ತೀಕ್ಷ್ಣವಾಗಿ ಪ್ರಶ್ನಿಸಿದರು. ‘ಹೌದು. ಗೊತ್ತಿದೆ. ಅದೀಗ ಇಡೀ ಮುಂಬೈಗೆ ಪ್ರಸಿದ್ಧವಾದ ದೇವಸ್ಥಾನವಲ್ಲವಾ. ಮಹಾ ಮಾಂತ್ರಿಕರೆನಿಸಿಕೊಂಡ ಪದ್ಮರಾಜ ಗುರೂಜಿಯವರು ಅದನ್ನು ನಡೆಸುತ್ತಿರುವುದು. ಅದರಿಂದೇನಾಯ್ತು?’ ಎಂದು ತಾನೂ ಆಶ್ಚರ್ಯದಿಂದ ಪ್ರಶ್ನಿಸಿದೆ. ‘ಹೇ, ಥೂ! ಅವನೆಂಥ ಮಹಾ ಮಾಂತ್ರಿಕ? ಅವನೊಬ್ಬ ನರವಂಚಕ! ಅದೆಂಥ ದೇವಸ್ಥಾನ ಸುಡುಗಾಡು. ನಮ್ಮ ಶ್ರೇಷ್ಠ ಹಿಂದೂ ಧರ್ಮಕ್ಕೆ ಮಸಿ ಬಳಿಯುವಂಥ ಕೆಲಸ ಮಾಡುತ್ತಿದ್ದಾನೆ ಆ ದರವೇಶಿ! ಅಲ್ಲಿ ಆರಾಧನೆ ನಡೆಯುತ್ತಿರುವುದು ಅವನೇ ಸೃಷ್ಟಿಸಿಕೊಂಡಿರುವ ಕ್ಷುಧ್ರ ಪಿಶಾಚಿಗಳಿಗೆ. ಮಂತ್ರಶಾಸ್ತ್ರಗಳ ಬಗ್ಗೆಯಾಗಲೀ ತಾಂತ್ರಿಂಕವಿದ್ಯೆಯ ಕುರಿತಾಗಲೀ ಎಳ್ಳಷ್ಟಾದರೂ ಜ್ಞಾನ ಉಂಟಾ ಅವನಿಗೆ? ಇದ್ದರೆ ಯಾರಿಂದ ಕಲಿತ, ಅವನ ಗುರು ಯಾರು…? ಅವನು ಕಲಿತದ್ದು ಮೂರನೇ ಕ್ಲಾಸು. ಆ ವಯಸ್ಸಿನಲ್ಲೇ ಯಾವುದೋ ಲಾರಿ ಹತ್ತಿ ಮುಂಬೈಗೆ ಓಡಿ ಬಂದವನು ಹೊಟೇಲು, ಬಾರುಗಳಲ್ಲಿ ಲೋಟ ತಟ್ಟೆ ತೊಳೆದುಕೊಂಡು ಬದುಕುತ್ತಿದ್ದ. ಬಿಡುವಿನಲ್ಲಿ ಫುಟ್ಪಾತ್ಗಳಲ್ಲಿರುವ ಗುಡಿ, ಗುಂಡಾರಗಳೆದುರು ಹುಚ್ಚನಂತೆ ಕುಣಿಯುತ್ತ, ಕಣ್ಣುಮುಚ್ಚಿ ಕೂರುತ್ತ ಇದ್ದನಂತೆ. ನಮ್ಮ ಪರಿಚಯದವರೊಬ್ಬರು ಅವನು ಮಹಾ ದೈವಭಕ್ತ ಬಾಲಕನೇ ಇರಬೇಕೆಂದು ಭ್ರಮಿಸಿ ಅವನನ್ನು ಹಿಡಿದು ಮಾತಾಡಿಸಿದರು. ಆಗ ಅವನು ಅನಾಥನೆಂದು ತಿಳಿದು ನಮ್ಮ ಹತ್ತಿರ ಕರೆತಂದು ಬಿಟ್ಟು ಹೋದರು. ಅಂದಿನಿಂದ ಅವನು ನಮ್ಮೊಂದಿಗೆ ಇರತೊಡಗಿದ. ಇಲ್ಲಿಗೆ ಬಂದ ನಂತರವೂ ಅವನುಆಗಾಗ ಮೂಕನಂತೆ ಮೂಲೆ ಸೇರಿ ಕುಳಿತು ಏನೇನೋ ಬಡಬಡಿಸುತ್ತಿದ್ದ. ಆಗೆಲ್ಲ ನಮಗೆ ಆತಂಕವಾಗುತ್ತಿತ್ತು. ಅವನನ್ನು ಆದಷ್ಟು ಪ್ರೀತಿಯಿಂದ ನೋಡಿಕೊಳ್ಳತೊಡಗಿದೆವು. ಒಮ್ಮೆ ಅವನ ಜಾತಕವನ್ನೂ ತಯಾರಿಸಿದೆವು. ಅದರಲ್ಲಿ ಅವನಿಗೆ ಜನ್ಮದೋಷವಿದ್ದುದು ಕಂಡು ಬಂತು. ಅದಕ್ಕೆ ಸೂಕ್ತ ಶಾಂತಿಯನ್ನೂ ಮಾಡಿಸಿದೆವು. ಆದರೂ ಅವನ ನಡವಳಿಕೆ ಸರಿ ಹೋಗಲಿಲ್ಲ. ಕೊನೆಗೆ ಇವಳ ಒತ್ತಾಯಕ್ಕೆ ಮಣಿದು ಮನೋವೈದ್ಯರ ಹತ್ತಿರವೂ ಕರೆದೊಯ್ದೆವು. ಅಲ್ಲಿ, ಅವನು ಎಂಥದ್ದೋ ಹಿಸ್ಟೀರಿಯಾ ಎಂಬ ಮನೋರೋಗಕ್ಕೆ ತುತ್ತಾಗಿದ್ದಾನೆ. ಅದು ಗುಣವಾಗಲು ದೀರ್ಘಕಾಲದ ಔಷಧಿ ಬೇಕಾಗುತ್ತದೆ! ಎಂದು ಡಾಕ್ಟರ್ ಹೇಳಿದರು. ಅದನ್ನೂ ಮಾಡಿಸತೊಡಗಿದೆವು. ಆದರೆ ಅಷ್ಟರಲ್ಲಾಗಲೇ ಅವನ ಹಣೆಬರಹ ಕೆಟ್ಟಿತೆಂದು ತೋರುತ್ತದೆ. ಒಮ್ಮೆ ಇವಳ ಒಂದಷ್ಟು ಚಿನ್ನಾಭರಣವನ್ನೂ ನಮ್ಮ ಹಣವನ್ನೂ ದೋಚಿಕೊಂಡು ರಾತ್ರೋರಾತ್ರಿ ಓಡಿ ಹೋಗಿಬಿಟ್ಟ! ಜೊತೆಗೆ ಅಷ್ಟೊತ್ತಿಗಾಗಲೇ ನಮ್ಮಿಂದ ಕೆಲವು ತಾಂತ್ರಿಕ ವಿದ್ಯೆಗಳನ್ನೂ ಕಲಿತಿದ್ದ ಫಟಿಂಗ! ಆದ್ದರಿಂದ ನಾವೂ ಸಾಕಷ್ಟು ಹುಡುಕಿದೆವು. ಆದರೆ ಈ ಮುಂಬೈಯಲ್ಲಿ ಅವನಂಥ ಹುಚ್ಚನನ್ನು ಪತ್ತೆಹಚ್ಚುವುದು ಅಸಾಧ್ಯದ ಮಾತು ಎಂಬರಿವಾಗಿ ಅವನಾಸೆ ಬಿಟ್ಟೆವು. ಇದಾದ ಕೆಲವು ವರ್ಷಗಳ ನಂತರ ನಮಗೊಂದು ವಿಸ್ಮಯ ಕಾದಿತ್ತು. ಆ ಹುಚ್ಚ ಪದ್ದುವು, ‘ಪದ್ಮರಾಜ ಗುರೂಜಿ’ ಎಂಬ ಹೆಸರಿನಿಂದ ಮೆರೆಯತೊಡಗಿದ್ದ! ಅದನ್ನು ತಿಳಿದ ಇವಳು ತಲೆ ಬಡಿದುಕೊಂಡು ಅತ್ತಳು. ಈಗ ನೋಡಬೇಕು ಆ ಲಫಂಗನ ಕಪಟ ಮಾಂತ್ರಿಕ ವಿದ್ಯೆಗಳನ್ನು. ಪ್ರತೀ ಶುಕ್ರವಾರ ಒಂದೊಂದು ಕ್ಷುಧ್ರ ಪಿಶಾಚಿಗಳು ಅವನ ಮೈಮೇಲೆ ಬರುತ್ತವಂತೆ! ಆಹೊತ್ತು ಅವನು ತನ್ನ ಕಾಲ ಬುಡದಲ್ಲಿ ಕೆಂಡದ ರಾಶಿಯನ್ನು ಸುರಿದುಕೊಂಡು ಅದರ ಸುತ್ತ ಆವೇಶದಿಂದ ನಡೆದಾಡುವುದೇನು, ಕುಣಿದು ಕುಪ್ಪಳಿಸುವುದೇನು. ಅಬ್ಬಾ ದೇವರೇ! ಅವನ ಅಬ್ಬರ, ಅಟ್ಟಹಾಸದ ಕ್ರೌರ್ಯವನ್ನು ನೋಡಬೇಕು. ಥೂ, ಥೂ! ಎಂಥ ನೀಚ ಜನ್ಮ ಅವನದ್ದು! ಆ ಹುಚ್ಚನ ಕೀಳುಮಟ್ಟದ ಕಪಿಚೇಷ್ಟೆಯನ್ನೂ ದೈವದೇವರುಗಳ ಅಲೌಕಿಕ ವರ್ತನೆ, ಪವಾಡಗಳೆಂದು ನಂಬಿ ಆ ಮೂರ್ಖನಿಂದಲೇ ತಮ್ಮ ಕಷ್ಟಕಾರ್ಪಣ್ಯಗಳನ್ನು ನಿವಾರಿಸಿಕೊಳ್ಳಲು ಹಾತೊರೆಯುತ್ತ ಅವನ ಸುತ್ತಲೂ ಭಯಭಕ್ತಿಯಿಂದ ಮುತ್ತಿಕೊಳ್ಳುವ ಪಾಪ ಜನಗಳ ಅವಸ್ಥೆಯನ್ನು ನೀನೂ ಒಮ್ಮೆ ನೋಡಬೇಕು. ಅಬ್ಬಾ! ಎಂಥ ಕಲಿಗಾಲ ಬಂತಪ್ಪಾ ಅಂತ ಅನ್ನಿಸುತ್ತದೆ. ಈ ಮುಂಬೈ ನಗರಕ್ಕೆ ಬರುವ ಮುಕ್ಕಾಲು ಪಾಲು ಜನರು ಪಾಪ ಯಾವ್ಯಾವುದೋ ಬಡ ಊರು, ಗ್ರಾಮಗಳಿಂದ ಒಂದಿಷ್ಟು ಹಣ, ಆಸ್ತಿ, ಅಂತಸ್ತನ್ನು ಸಂಪಾದಿಸಿಕೊಂಡು ನೆಮ್ಮದಿಯಿಂದ ಬಾಳಬೇಕೆಂಬ ಹಿರಿಯಾಸೆಯಿಂದ ಬರುತ್ತಾರೆ. ಅಂಥವರ ಓಟ, ಹುಡುಕಾಟವೆಲ್ಲವೂ ಆ ವಿಷಯವಸ್ತುಗಳ ಹಿಂದೆಯೇ ಹರಿದಾಡುತ್ತದೆ. ಆದರೆ ಅದಕ್ಕೆ ತಕ್ಕಂಥ ಯಶಸ್ಸು ದೊರಕದೆ ಮತ್ತು ಸ್ವಂತ ಊರನ್ನೂ ಆಪ್ತೇಷ್ಟರನ್ನೂ ತೊರೆದು ಸಾವಿರಾರು ಮೈಲಿ ದೂರ ಬಂದ ದುಃಖ, ಅನಾಥಭಾವಗಳೆಲ್ಲವೂ ಸೇರಿ ಅವರಲ್ಲನೇಕರ ಮನಸ್ಥಿತಿಗಳು ದುರ್ಬಲಗೊಳ್ಳುತ್ತವೆ. ಅಂಥ ವಿಷಮಸ್ಥಿತಿಯಲ್ಲೇ ಆ ಅಮಾಯಕರು ಮನಶ್ಶಾಂತಿಯನ್ನು ಹುಡುಕುತ್ತ ಪದ್ಮರಾಜನಂಥ ಮೋಸಗಾರರು ಬೀಸುವ ಬಲೆಗೆ ಬಿದ್ದುಬಿಡುತ್ತಾರೆ ಮತ್ತು ಅವರು ಹೇರುವ ಅನೇಕ ಮೂಢನಂಬಿಕೆಗಳಿಗೂ ಅವುಗಳ ಆಚರಣೆಗಳಿಗೂ ಬಲಿಯಾಗುತ್ತ ತಮ್ಮ ಜೀವನದ ಸಹಜ ಚೆಲುವನ್ನೇ ಕೆಡಿಸಿಕೊಂಡು ಮೊಂಡಾಮೊಚ್ಚಿ ಬಿಡುತ್ತಾರೆ. ಈಚೆಗೆ ಇಲ್ಲಿನ ಒಂದಷ್ಟು ಅಡ್ಡ ದಂಧಿಗರ ಮನಸ್ಥಿತಿಗಳೂ ಎಷ್ಟೊಂದು ಹದಗೆಟ್ಟಿವೆಯೆಂದರೆ, ಆ ಪದ್ಮರಾಜನ ಉನ್ಮಾದರೋಗವನ್ನೇ ದೈವಾವೇಶವೆಂದು ಭ್ರಮಿಸಿ ಅವನೇ ‘ದೇವರು’ ಎಂದು ಪೂಜಿಸುವುದನ್ನು ಕಂಡರೆ ತಿಳಿಯುತ್ತದೆ. ನಮ್ಮ ಸರಕಾರವು ಅದೇನೋ ಐಟಿ ಬಿಟಿ ದಾಳಿ ಅಂತ ಶುರು ಮಾಡಿದೆಯಲ್ಲ. ಅದಕ್ಕೆ ಸಂಬಂಧಿಸಿದ ಕಳ್ಳ ಖದೀಮರನ್ನೂ ದೇಶದ್ರೋಹಿಗಳನ್ನೂ ರೆಡ್ಹ್ಯಾಂಡ್ ಆಗಿ ಹಿಡಿಯಬೇಕೆಂದಿದ್ದರೆ ಆ ಸರಕಾರಿ ಅಧಿಕಾರಿಗಳು ಈ ಪದ್ಮರಾಜನಂಥ ಮಂತ್ರವಾದಿಗಳಿಗೆ ಆವೇಶ ಬರುವ ಹೊತ್ತಿನಲ್ಲಿ ವೇಷ ಮರೆಸಿಕೊಂಡು ಹೋಗಿ ತಾಳ್ಮೆಯಿಂದ ನಿಂತು ಕಾಯಬೇಕು ನೋಡು. ಇಡೀ ದೇಶವನ್ನು ನಾನಾ ರೀತಿಯಲ್ಲಿ ಕೊಳ್ಳೆ ಹೊಡೆಯುವ ಭಾರೀ ಕುಳಗಳೆಲ್ಲ ಅಂಥ ಸ್ಥಳಗಳಲ್ಲಿಯೇ ಸಿಗುತ್ತಾರೆ!’ ಎಂದು ಪೆದುಮಾಳರು ಜೋರಾಗಿ ನಕ್ಕವರು ಮತ್ತೆ ಮಾತು ಮುಂದುವೆರೆಸಿದರು. ‘ಥೂ, ಥೂ! ಇಂಥ ಮೋಸದ ವಿಚಾರಗಳಿಂದ ನಾವೆಂದೂ ಯಾರ ಮೇಲೂ ಮಂಕುಬೂದಿ ಎರಚಿದವರಲ್ಲ ಮಾರಾಯಾ! ಅದೇ ನಮಗೆ ನಮ್ಮ ವೃತ್ತಿಯಲ್ಲಿ ತೃಪ್ತಿ ನೀಡುವ ವಿಚಾರ. ನಿನಗೂ ಒಂದು ಕಿವಿ ಮಾತು ಹೇಳುತ್ತೇವೆ ಕೇಳು. ನಮ್ಮ ಪ್ರಾಚೀನ ಋಷಿಮುನಿಗಳ ಅನೇಕ ತಲೆಮಾರುಗಳು ಅವಿರತವಾಗಿ ಶ್ರಮಿಸುತ್ತ ತಮ್ಮ ದಿವ್ಯಜ್ಞಾನದಿಂದ ಸಾಕ್ಷಾತ್ಕರಿಸಿಕೊಂಡ ಜ್ಯೋತಿರ್ವಿಜ್ಞಾನವನ್ನಾಗಲೀ ವೇದೋಪನಿಷತ್ತುಗಳನ್ನಾಗಲೀ ಅಥವಾ ಪುರಾಣಗ್ರಂಥಗಳನ್ನಾಗಲೀ ಯಾರು ಧರ್ಮಶ್ರದ್ಧೆಯಿಂದ ಆಮೂಲಾಗ್ರವಾಗಿ ಅಭ್ಯಾಸಿಸುವುದಿಲ್ಲವೋ ಮತ್ತು ಅಂಥ ಜ್ಞಾನವನ್ನು ಪಡೆದರೂ ಸಮಾಜದಲ್ಲಿ ನ್ಯಾಯವಾಗಿ ವ್ಯವಹರಿಸುವುದಿಲ್ಲವೋ ಅಂಥವರು ಇಹಪರ ಎರಡರಲ್ಲೂ ಉದ್ಧಾರವಾಗೋದಿಲ್ಲ ಮಾತ್ರವಲ್ಲ ತಮ್ಮ ಕೊನೆಗಾಲದಲ್ಲೂ ಅವರು ಸೃಷ್ಟಿ ನಿಯಮದ ಪ್ರಕಾರ ಘೋರ ಶಿಕ್ಷೆಗೆ ಗುರಿಯಾಗುತ್ತಾರೆ!-ಎಂದು ಆ ಋಷಿಮುನಿಗಳೇ ಬರೆದಿಟ್ಟಿದ್ದಾರೆ ಮಾರಾಯಾ! ಹಾಗಾಗಿ ಪದ್ಮರಾಜನಂಥ ದ್ರೋಹಿಯನ್ನು ಕಂಡ ಮೇಲೆ ಇನ್ನು ಮುಂದೆ ನಮ್ಮಲ್ಲಿಗೆ ಯಾರೇ ಬಂದರೂ ಅವರಿಗೆ ಪೂರ್ಣ ವಿದ್ಯೆಯನ್ನೆಂದೂ ನೀಡುವುದಿಲ್ಲ ಎಂದು ನಿರ್ಧರಿಸಿಬಿಟ್ಟೆವು!’ ಎಂದು ಪೆದುಮಾಳರು ಕಡ್ಡಿ ಮುರಿದಂತೆ ಹೇಳಿ ತನ್ನಲ್ಲಿ ಎಂಥ ನಿರಾಶೆ ಮೂಡಿಸಿದರು! ‘ಅಂದರೆ ಎಲ್ಲರೂ ಆ ಪದ್ಮರಾಜನಂತೆಯೇ ಮೋಸಗಾರರಾಗುತ್ತಾರೆ ಅಂತಲೇ ನಿಮ್ಮ ಮಾತಿನ ಅರ್ಥವಾ…?’ ಎಂದು ನಾನೂ ಕೆರಳಿ ಪ್ರಶ್ನಿಸಿದೆ. ‘ಹೌದೌದೋ… ಸರಿಯಾಗೇ ಊಹಿಸಿದೆ ನೀನು. ಮುಂದೊಂದು ದಿನ ನೀನೂ ಅವನಂತೆಯೇ ಆಗುತ್ತಿ ಅನ್ನುವುದನ್ನು ನಮ್ಮ ಜ್ಯೋತಿಷ್ಯವೇ ಹೇಳುತ್ತಿದೆಯಿಲ್ಲಿ! ಹಾಗಾಗಿ ನಿನಗೂ ನಮ್ಮಿಂದ ಯಾವ ವಿದ್ಯೆಯೂ ದಕ್ಕುವುದಿಲ್ಲ. ಅದಕ್ಕೇನು ಮಾಡಬೇಕೆಂದಿರುವಿ…?’ ಎಂದು ಅವರೂ ಗುಡುಗಿದರು. ‘ಹೌದಾ…? ಸರಿ ಹಾಗಾದರೆ, ನನ್ನ ನಿರ್ಧಾರವನ್ನೂ ಕೇಳಿಸಿಕೊಳ್ಳಿ. ಜೀವನ ಪರ್ಯಂತ ನಿಮ್ಮ ಗುಲಾಮನಾಗಿ ದುಡಿಯಲು ನನ್ನಿಂದಲೂ ಸಾಧ್ಯವಿಲ್ಲ. ನನ್ನ ಹೆಂಡತಿ ಮಕ್ಕಳು ಅಲ್ಲಿ ನತದೃಷ್ಟರಂತೆ ಬದುಕುತ್ತಿದ್ದಾರೆ. ಅವರ ಭವಿಷ್ಯಕ್ಕಾದರೂ ನಾನೊಂದಿಷ್ಟು ಹೆಚ್ಚಿಗೆ ಸಂಪಾದಿಸಬೇಕು. ಆದ್ದರಿಂದ ನಾಳೆನೇ ಊರಿಗೆ ಹೊರಟು ಹೋಗುತ್ತೇನೆ!’ ಎಂದು ತಾನೂ ಸಹನೆ ತಪ್ಪಿ ಅಂದೆ. ಆದರೆ ಆ ಮನುಷ್ಯನಿಗೆ ಆಗಲೂ ಆತಂಕವಾಗಲೀ, ಆಘಾತವಾಗಲೀ ಆಗಲೇ ಇಲ್ಲ! ‘ಹೇ, ಹೋಗಲೋ, ಹೋಗ್! ನಿನ್ನಿಂದಲೇ ನಮಗೆ ಬೆಳಕಾಗುತ್ತದೆಯೆಂದು ನೀನು ಭಾವಿಸಿದ್ದಿಯಾದರೆ ಅದು ನಿನ್ನ ಮೂರ್ಖತನ! ಹಾಗನ್ನುತ್ತಿಯಾದರೆ ನಮಗೂ ನಿನ್ನ ಅವಶ್ಯಕತೆಯಿಲ್ಲ. ನೀನಲ್ಲದಿದ್ದರೆ ನಿನ್ನಂಥ ಹತ್ತು ಜನರನ್ನು ನಿನ್ನ ಮಾವನಂಥವರೇ ತಂದು ನಮಗೆ ಒದಗಿಸುತ್ತಾರೆ ತಿಳ್ಕೋ. ಆದ್ದರಿಂದ ಇರುವುದಾದರೆ ಮುಚ್ಚಿಕೊಂಡಿರು. ಇಲ್ಲಾ ಈಗಲೇ ಹಾಳಾಗಿ ಹೋಗು! ಇಷ್ಟು ವರ್ಷ ಸಾಕಿ ಬೆಳೆಸಿದ್ದಕ್ಕೆ ಇಂದು ನಮ್ಮ ಅನ್ನದ ಬಟ್ಟಲಿಗೇ ಮಣ್ಣು ಹಾಕುವ ದುರ್ಬುದ್ಧಿ ನಿನಗೆ ಬಂದಿದೆಯೆಂದರೆ ಯಾರಿಂದೇನು ಮಾಡಲು ಸಾಧ್ಯ? ಎಲ್ಲಾ ನಿನ್ನ ಹಣೆಬರಹ. ಏನಾದರೂ ಮಾಡಿಕೋ ಹೋಗ್!’ ಎಂದು ಮುಖಕ್ಕೆ ಹೊಡೆದಂತೆ ಹೇಳಿದ್ದಲ್ಲದೇ ಹದಿನೈದು ವರ್ಷ ತಾನು ಗಾಣದೆತ್ತುವಿನಂತೆ ದುಡಿದದ್ದಕ್ಕೆ ನಯಾಪೈಸೆಯನ್ನೂ ಕೊಡದೆ ಉಟ್ಟಬಟ್ಟೆಯಲ್ಲೇ ಅಟ್ಟಿದಂಥ ಮಹಾ ಕೃತಘ್ನನಾತ!- ಎಂದು ಆವತ್ತಿನ ಇಡೀ ಘಟನೆಯನ್ನು ಮೆಲುಕು ಹಾಕಿದ ಏಕನಾಥನಿಗೆ ಪೆದುಮಾಳರ ಮೇಲೆ ಅಸಾಧ್ಯ ಸಿಟ್ಟು ಭುಗಿಲೆದ್ದು ಚಡಪಡಿಸಿದ. ಜೊತೆಗೆ ಊರಿಗೆ ಬಂದು ಕುಳಿತ ನಂತರ ಇಲ್ಲೂ ಸ್ಥಿರವಾದ ಉದ್ಯೋಗವಿಲ್ಲದೆ, ಕೈಯಲ್ಲಿ ಕಾಸೂ ಇಲ್ಲದೆ ಪರದಾಡುವ ತನ್ನ ಸ್ಥಿತಿಯನ್ನು ನೆನೆದು ಇನ್ನಷ್ಟು ದುರ್ಬಲ ಯೋಚನೆಗಳು ಅವನನ್ನು ಮುತ್ತಿಕೊಂಡವು. ಹದಿನೈದು ವರ್ಷಗಳ ಕಾಲ ತನ್ನತನವನ್ನೇ ಮರೆತು ಪೆದುಮಾಳನೆಂಬ ತಾಂತ್ರಿಕನ ಕೈಕೆಳಗೆ ದುಡಿದ ತಾನು ಇನ್ನು ಮುಂದೆಯೂ ಅವನ ಸಹಾಯವಿಲ್ಲದೆ ಸ್ವತಂತ್ರನಾಗಿ ಬದುಕಬಲ್ಲೆನೇ…? ಮುಂಬೈ ಎಂಬ ಆ ಮರಾಠಿ ನೆಲದಲ್ಲಿ ಏಗುತ್ತಿದ್ದಷ್ಟು ಸಮಯ ಕೂಡಿಡಲು ಸಾಧ್ಯವಾಗದಿದ್ದರೂ ಹೆಂಡತಿ ಮಕ್ಕಳ ಹೊಟ್ಟೆ ಬಟ್ಟೆ ಕಟ್ಟದಂತೆ ಬದುಕಲೇನೂ ಅಡ್ಡಿಯಿರಲಿಲ್ಲ. ವರ್ಷಕ್ಕೊಮ್ಮೆಯಾದರೂ ಊರಿಗೆ ಬಂದು ಸ್ವಲ್ಪಕಾಲ ಸಂಸಾರದೊಂದಿಗಿದ್ದು ಮರಳಿ ಹಿಂದಿರುಗುತ್ತಿದ್ದ ತನ್ನ ಜೀವನವು ಮೊನ್ನೆಮೊನ್ನೆಯವರೆಗೆ ಪರರ ಹಂಗಿನಲ್ಲಿತ್ತಾದರೂ ಅದರಲ್ಲೂ ಒಂದು ಬಗೆಯ ಸುಖವಿತ್ತು. ಹೀಗಿದ್ದವನು ಇದ್ದಕ್ಕಿದ್ದಂತೆ ಅಂಥ ಭದ್ರತೆಯನ್ನು ಕಳಚಿಕೊಂಡು ಬರುವ ದುಡುಕಿನ ನಿರ್ಧಾರವನ್ನೇನಾದರೂ ಮಾಡಿಬಿಟ್ಟೆನಾ…? ಎಂದು ಚಿಂತಿಸುತ್ತ ಗೊಂದಲಕ್ಕೆ ಬಿದ್ದ. ಮರುಕ್ಷಣ, ಇಲ್ಲ, ಇಲ್ಲ. ತಾನಿಟ್ಟ ಹೆಜ್ಜೆ ಸರಿಯಾಗೇ ಇದೆ. ಇನ್ನೂ ಎಷ್ಟು ಕಾಲಾಂತ ಗುಲಾಮಗಿರಿ ಮಾಡುತ್ತ ಬದುಕುವುದು? ಒಂದುವೇಳೆ ಇದು ನನ್ನ ದುಡುಕೇ ಆದರೂ ಚಿಂತೆಯಿಲ್ಲ. ಎಲ್ಲರಂತೆ ತಾನೂ ತನ್ನ ಕಾಲ ಮೇಲೆ ನಿಂತು ತೋರಿಸಬೇಕು. ಹಾಗಿಲ್ಲದ ತನ್ನ ಜನ್ಮವೇ ವ್ಯರ್ಥ! ಸಂಸಾರವನ್ನು ಸುಸೂತ್ರವಾಗಿ ದಡ ಸೇರಿಸುವ ಹಾಗೂ ಇಬ್ಬರು ವಂಶದ ಕುಡಿಗಳ ಭವಿಷ್ಯವನ್ನು ರೂಪಿಸುವ ದೊಡ್ಡ ಜವಾಬ್ದಾರಿ ತನ್ನ ಮೇಲಿದೆ. ಆದ್ದರಿಂದ ತನ್ನನ್ನು ಕಾಡುಕತ್ತೆಯಂತೆ ದುಡಿಸಿಕೊಳ್ಳುತ್ತ ಶ್ರೀಮಂತಿಕೆಯ ತುತ್ತತುದಿಗೇರಿ ಮೆರೆಯುತ್ತಿರುವ ಆ ದುಷ್ಟ ಪೆದುಮಾಳನಿಗಿಂತ ದುಪ್ಪಟ್ಟು ಎತ್ತರಕ್ಕೆ ಬೆಳೆದು ನಿಲ್ಲದಿದ್ದರೆ ಅಪ್ಪನಿಗೆ ಹುಟ್ಟಿದ ಮಗನೇ ಅಲ್ಲ ನಾನು! ಎಂದು ಏಕನಾಥ ರೋಷದಿಂದ ನಿರ್ಧರಿಸಿದವನು ಆ ಕಾರ್ಯಸಾಧನೆಯ ಬಗ್ಗೆ ತೀವ್ರ ಯೋಚನೆಗೆ ಬಿದ್ದ. ಸದ್ಯದ ಪರಿಸ್ಥಿತಿಯನ್ನು ನಿಭಾಯಿಸುವುದು ಹೇಗೆಂಬುದನ್ನು ಮೊದಲು ಕಂಡುಕೊಳ್ಳಬೇಕು. ಗಣಹೋಮ, ಆಶ್ಲೇಷಬಲಿ, ಮೃತ್ಯುಂಜಯ ಹೋಮ, ನಾಗ ಸಂಸ್ಕಾರ, ವರ್ಧಾಂತಿ, ಶ್ರಾದ್ಧಾ, ಸಮಾರಾಧನೆ, ವಾಸ್ತುಪೂಜೆ, ಸತ್ಯನಾರಾಯಣ ಪೂಜೆ, ಶಾಂತಿ ಹೋಮ, ಸುದರ್ಶನ ಹೋಮಗಳಂಥ ಹೆಚ್ಚಿನ ಪೂಜಾವಿಧಿಗಳು ಮತ್ತು ಸ್ವಲ್ಪಮಟ್ಟಿನ ಜ್ಯೋತಿಷ್ಯವೂ, ಇನ್ನೊಂದಷ್ಟು ವಾಸ್ತುಶಾಸ್ತ್ರವೂ ತನಗೆ ಸುಮಾರಾಗಿ ತಿಳಿದಿದೆ. ಆದರೆ ಅದನ್ನು ಸ್ವತಂತ್ರವಾಗಿ ನಿರ್ವಹಿಸಲು ಪೆದುಮಾಳನೆಂದೂ ಅವಕಾಶ ಕೊಡಲಿಲ್ಲ. ಹಾಗಾಗಿಯೇ ಆ ಧಾರ್ಮಿಕ ವಿಧಿಗಳನ್ನು ಧೈರ್ಯವಾಗಿ ವಹಿಸಿಕೊಳ್ಳಲು ಎಂಥದ್ದೋ ಅಳುಕು, ಅಂಜಿಕೆ ಕಾಡುತ್ತದೆ. ಅಷ್ಟುಮಾತ್ರವಲ್ಲದೇ ಧಾರ್ಮಿಕಾಚರಣೆಯ ವಿಷಯದಲ್ಲಿ ಮುಂಬೈ ಜನರ ಕಥೆಯೇ ಬೇರೆ. ಊರಿನವರ ಮನಸ್ಥಿತಿಯೇ ಬೇರಿದೆ. ನನ್ನ ಇಷ್ಟು ಸಣ್ಣ ಊರಿನಲ್ಲಿಯೇ ನೂರಾರು ಮಂದಿ ತಾಂತ್ರಿಕರೂ, ಜ್ಯೋತಿಷ್ಯರೂ, ವಾಸ್ತುತಜ್ಞರೂ ಇದ್ದು ಅವರವರ ನಡುವೆಯೇ ತೀವ್ರ ಪೈಪೋಟಿ ಇರುವಾಗ ತನಗೆಲ್ಲಿ ಅವಕಾಶ ಸಿಕ್ಕೀತು? ಎಂದು ಚಿಂತಿಸಿದ ಏಕನಾಥ ಮರಳಿ ಖಿನ್ನನಾದ. ಗೊಂದಲಗೊಂಡ ಅವನ ಮನಸ್ಸು ಒಂದರ ಮೇಲೊಂದರಂತೆ ವಿಚಾರಗಳನ್ನು ಮುನ್ನೆಲೆಗೆ ತಳ್ಳುತ್ತಲೇ ಇತ್ತಾದರೂ ಅವುಗಳ ಆಳದಲ್ಲೆಲ್ಲೋ ಅವಿತಿದ್ದ ಛಲ ಮತ್ತು ಆಶಾಭಾವನೆಗಳು ಪುಟಿದೆದ್ದುವು. ಆದ್ದರಿಂದ ಸ್ಪರ್ಧೆ, ಪೈಪೋಟಿ ಅನ್ನುವುದು ಎಲ್ಲಾ ಕ್ಷೇತ್ರಗಳಲ್ಲೂ ಇದ್ದೇ ಇರುವಂಥದ್ದು. ನಿನ್ನೆ ಮೊನ್ನೆ ಹುಟ್ಟಿದ ಹುಡುಗರೆಲ್ಲ ಧಾರ್ಮಿಕ ಕ್ರಿಯಾವಿಧಿಗಳ ಬಗ್ಗೆ ನಾಲ್ಕೈದು ಪಾಠ ಹೇಳಿಸಿಕೊಂಡು ಕಾರ್ಯಭಾರಕ್ಕಿಳಿದು ಮಿಂಚುತ್ತಿರುವಾಗ ತಾನು ಹದಿನೈದು ವರ್ಷಗಳ ಅನುಭವ ಇರುವವನು ಹೆದರುವುದಕ್ಕೆ ಅರ್ಥವಿದೆಯೇ! ಹೆಚ್ಚು ಬೇಡ, ಇನ್ನೊಂದು ತಿಂಗಳು ಇದೇ ರೀತಿ ಕುಳಿತೆನೆಂದರೆ ಹೆಂಡತಿ ಮಕ್ಕಳು ಉಪವಾಸ ಬೀಳುವುದು ಖಂಡಿತಾ! ಇಲ್ಲ, ಹಾಗಾಗಲು ಬಿಡಬಾರದು. ಇನ್ನು ಮುಂದೆ ಅರ್ಥವಿಲ್ಲದ್ದನ್ನು ಚಿಂತಿಸಿ ಫಲವಿಲ್ಲ. ಸ್ವಂತ ದುಡಿಮೆ ಸಿಗುವವರೆಗೆ ಯಾರೊಂದಿಗಾದರೂ ಸಹಾಯಕನಾಗಿಯಾದರೂ ಹೋಗಲೇಬೇಕು. ಅದಂತೂ ಸಿಕ್ಕೇ ಸಿಗುತ್ತದೆ. ತನ್ನ ಹಿರಿಯರೂ ತಾನೂ ನಂಬಿಕೊಂಡು ಬಂದಂಥ ಶ್ರೀ ಕೃಷ್ಣ ಪರಮಾತ್ಮನು ಎಂದೂ ತನ್ನ ಕೈ ಬಿಡಲಿಕ್ಕಿಲ್ಲ. ಪ್ರಯತ್ನ ನನ್ನದು. ಫಲಾನುಫಲ ಅವನದು!- ಎಂದು ನಿರ್ಧರಿಸಿದವನು ಸ್ವಲ್ಪ ನಿರಾಳನಾದ. (ಮುಂದುವರೆಯುವುದು) ****************************************** ಗುರುರಾಜ್ ಸನಿಲ್ ಗುರುರಾಜ್ ಸನಿಲ್ ಉಡುಪಿ ಇವರು ಖ್ಯಾತ ಉರಗತಜ್ಞ, ಸಾಹಿತಿಯಾಗಿ ನಾಡಿನಾದ್ಯಂತ ಹೆಸರು ಗಳಿಸಿದವರು. .‘ಹಾವು ನಾವು’, ‘ದೇವರಹಾವು: ನಂಬಿಕೆ-ವಾಸ್ತವ’, ‘ನಾಗಬೀದಿಯೊಳಗಿಂದ’, ‘ಹುತ್ತದ ಸುತ್ತಮುತ್ತ’, ‘ವಿಷಯಾಂತರ’ ‘ಕಮರಿದ ಸತ್ಯಗಳು ಚಿಗುರಿದ ಸುದ್ದಿಗಳು’ ಮತ್ತು ಅವಿಭಜಿತ ದಕ್ಷಿಣ ಕನ್ನಡಜಿಲ್ಲೆಗಳ ನೈಸರ್ಗಿಕ ನಾಗಬನಗಳ ಉಳಿವಿನ ಜಾಗ್ರತಿ ಮೂಡಿಸುವ ‘ನಾಗಬನವೆಂಬ ಸ್ವರ್ಗೀಯ ತಾಣ’ , ‘ಗುಡಿ ಮತ್ತು ಬಂಡೆ’ ಎಂಬ ಕಥಾಸಂಕಲವನ್ನು ಹೊರ ತಂದಿದ್ದಾರೆ. ಇತ್ತೀಚೆಗೆ ‘ಆವರ್ತನ’ ಮತ್ತು ‘ವಿವಶ’ ಎರಡು ಕಾದಂಬರಿಗಳು ಬಂದಿವೆ.‘ಹಾವು ನಾವು’ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯು 2010ನೇ ಸಾಲಿನ ‘ಮಧುರಚೆನ್ನ ದತ್ತಿನಿಧಿ ಪುಸ್ತಕ ಪ್ರಶಸ್ತಿ’ ನೀಡಿ ಗೌರವಿಸಿದೆ. ‘ ‘ಕರುಣಾ ಎನಿಮಲ್ ವೆಲ್ಫೇರ್ ಅವಾರ್ಡ್(2004)’ ‘ಕರ್ನಾಟಕ ಅರಣ್ಯ ಇಲಾಖೆಯ ‘ಅರಣ್ಯಮಿತ್ರ’(2013)’ ಕರ್ನಾಟಕ ಕಾರ್ಮಿಕ ವೇದಿಕೆಯು ‘ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ(2015)’ ಪಡೆದಿದ್ದಾರೆ. ಪ್ರಸ್ತುತ ಉಡುಪಿಯ ಪುತ್ತೂರಿನಲ್ಲಿ ವಾಸವಾಗಿದ್ದಾರೆ.
ದಾರಾವಾಹಿ- ಅದ್ಯಾಯ-03 ಮುತ್ತಯ್ಯ ಕೊಡುವ ಅರ್ಧ ಸಂಬಳ ಗೋಪಾಲನ ಸಂಸಾರ ನಿರ್ವಹಣೆಗೆ ಸಾಕಾಗುತ್ತಿರಲಿಲ್ಲ. ಅವನು ತನ್ನ ಗುಡಿಸಲನ್ನು ಬಾಡಿಗೆದಾರರಿಗೆ ಪುಕ್ಕಟೆ ನೀಡಿದ್ದೇನೆಂದು ಕಣ್ಣುಕಟ್ಟಿಗೆ ಹೇಳುತ್ತಿದ್ದ. ಆದರೆ ಅದರ ಬಾಡಿಗೆಯನ್ನು ಗೋಪಾಲ ದಂಪತಿಯ ದುಡಿಮೆಯಿಂದಲೇ ಸೂಕ್ಷ್ಮವಾಗಿ ವಸೂಲಿ ಮಾಡುತ್ತಿದ್ದ. ಈ ಸಂಗತಿಯನ್ನು ಅರಿತಿದ್ದ ಗೋಪಾಲನೂ ಅವನ ತೋಟದ ಕೆಲಸಕ್ಕೆ ನಿತ್ಯ ಹೋಗುವುದನ್ನು ನಿಲ್ಲಿಸಿಬಿಟ್ಟ. ವಾರದಲ್ಲಿ ಎರಡು, ಮೂರು ದಿನ ಮಾತ್ರ ದುಡಿಯುತ್ತ ಉಳಿದ ದಿನಗಳಲ್ಲಿ ಹೊರಗಡೆ ಹೆಚ್ಚಿಗೆ ಸಂಬಳಕ್ಕೆ ಹೋಗುತ್ತಿದ್ದ. ಆದರೆ ಅದು ಮುತ್ತಯ್ಯನಿಗೆ ಹಿಡಿಸುತ್ತಿರಲಿಲ್ಲ. ಅವನು ಆಗಾಗಗೋಪಾಲನ ಗುಡಿಸಲಿನೆದುರು ಬಂದು,‘ಏನಲೇ ಗೋಪಾಲ, ನೀನು ವಾರ ಪೂರ್ತಿ ಕೆಲಸಕ್ಕೆ ಯಾಕೆ ಬರುವುದಿಲ್ಲ ಮಾರಾಯಾ, ಹೊರಗೆ ದುಡಿಯುವುದಕ್ಕಾ ನಿನಗೆ ಮನೆ ಕೊಟ್ಟಿರುವುದು…?’ ಎಂದು ಗದರಿಸುತ್ತಿದ್ದ. ಆಗೆಲ್ಲ ಗೋಪಾಲನೂ,‘ಅಯ್ಯೋ ಹಾಗೆಲ್ಲ ಭಾವಿಸಬೇಡಿ ಧಣಿ, ನಿಮ್ಮಲ್ಲಿಯೇ ದುಡಿಯಲಿಕ್ಕೆ ಬಂದವರಲ್ಲವ ನಾವು. ಆದರೂ ಕೆಲವೊಮ್ಮೆ ನಿಮ್ಮ ತೋಟದಲ್ಲೂ ಕೆಲಸ ಕಮ್ಮಿ ಇರುತ್ತದಲ್ಲ ಆವಾಗ ಸಂಜೀವ ಶೆಟ್ಟರೋ ಡ್ಯಾನಿ ಪರ್ಬುಗಳೋ ತಮ್ಮ ಹೊಲ, ತೋಟಗಳ ಅಗತ್ಯದ ಕೆಲಸಕ್ಕೆ ಕರೆಯುತ್ತಾರೆ. ಹೋಗಿ ಮಾಡಿಕೊಟ್ಟು ಬರುತ್ತೇನಷ್ಟೆ. ಅವರೂ ನನ್ನ ಕಷ್ಟದ ಕಾಲದಲ್ಲಿ ಸಹಾಯ ಮಾಡುತ್ತಾರೆ. ಇಲ್ಲಿ ನಾನಿಲ್ಲದಿದ್ದರೂ ರಾಧಾ ಬರುತ್ತಾಳಲ್ಲ ಧಣಿ…!’ ಎಂದು ಅವನನ್ನು ಪುಸಲಾಯಿಸುತ್ತಿದ್ದ. ರಾಧಾಳ ಹೆಸರೆತ್ತುತ್ತಲೇ ಮುತ್ತಯ್ಯ ಮೃದುವಾಗುತ್ತಿದ್ದ. ಅವಳ ಸೌಂದರ್ಯಕ್ಕೆ ಅವನು ಯಾವತ್ತೋ ಮನ ಸೋತಿದ್ದ. ಎರಡು ಮಕ್ಕಳ ತಾಯಿಯಾಗಿ ಬಡತನದ ಬೇಗೆಯಲ್ಲಿ ಬೇಯುತ್ತಿದ್ದರೂ ಅವಳ ಮೋಹಕ ಚೆಲುವಿನ್ನೂ ಮಾಸಿರಲಿಲ್ಲ. ಹಾಲು ಬೆಳದಿಂಗಳಿನಂಥ ಅವಳ ರೂಪವು ಅವನನ್ನು ಹುಚ್ಚೆಬ್ಬಿಸುತ್ತಿತ್ತು. ಹಾಗಾಗಿಗೋಪಾಲ ಬೆಳಿಗ್ಗೆ ಮನೆಯಿಂದ ಹೊರಡುವ ತನಕ ಅವನ ಸುಳಿವಿರುತ್ತಿರಲಿಲ್ಲ. ಅವನು ಸೈಕಲ್ ಹತ್ತಿ ‘ಹೋಗಿ ಬರುತ್ತೇನೆ ಮಾರಾಯ್ತೀ!’ ಎಂದು ಹೆಂಡತಿ ಮಕ್ಕಳಿಗೆ ಬೆಲ್ ಹೊಡೆದ ಸೂಚನೆ ದೊರೆತ ಕೂಡಲೇ ಮುತ್ತಯ್ಯನ ಸವಾರಿಯು ಗೋಪಾಲನ ಗುಡಿಸಲ ಮುಂದೆ ಪ್ರಕಟವಾಗುತ್ತಿತ್ತು. ಇವತ್ತೂ ಅದೇ ಚಪಲದಿಂದ ಬಂದಿದ್ದ. ಆದರೆ ಅಲ್ಲಿನ ದೃಶ್ಯವೊಂದು ಅವನ ಮನಸ್ಸನ್ನು ಕೆಡಿಸಿಬಿಟ್ಟಿತು. ‘ರಾಧಾ, ಹೇ, ರಾಧಾ ಎಲ್ಲಿದ್ದಿ ಮಾರಾಯ್ತೀ…! ಸ್ವಲ್ಪ ಹೊರಗೆ ಬಾ! ಇಲ್ಲಿ ನೋಡಿಲ್ಲಿ ನಿನ್ನ ಮಕ್ಕಳ ಅವಸ್ಥೆ! ಥೂ! ಹೊರಗೆಲ್ಲಾ ಹೇಸಿಗೆ ಮಾಡಿಟ್ಟಿದ್ದಾರೆ. ಏನಿದು ತೋಟದೊಳಗೆಲ್ಲಾ, ಭಾಷೆ ಬೇಡವಾ ನಿಮಗೆ! ಅವುಗಳನ್ನು ಕಕ್ಕಸಿನಲ್ಲಿ ಕೂರಿಸಲೇನು ದಾಡಿ ನಿಂಗೆ!’ ಎಂದು ಜೋರಾಗಿ ಸಿಡುಕಿದ. ರಾಧಾ ಅನ್ನಕ್ಕೆ ನೀರಿಡುತ್ತಿದ್ದವಳು ಮುತ್ತಯ್ಯನ ಒರಟು ಧ್ವನಿ ಕೇಳಿ ಆತಂಕದಿಂದ ಹೊರಗೆ ಬಂದಳು. ಮಕ್ಕಳಿಬ್ಬರೂ ತೋಟದ ಮೂಲೆಯಲ್ಲಿ ಕುಳಿತು ಪಂಚಾತಿಕೆ ಹೊಡೆಯುತ್ತ ಸಂಡಾಸು ಮಾಡುತ್ತಿದ್ದರು. ಆದರೆ ಮುತ್ತಯ್ಯನ ಕೆಕ್ಕರು ದೃಷ್ಟಿಗೆ ಹೆದರಿ ರಪ್ಪನೆದ್ದು ಅಪರಾಧಿಗಳಂತೆ ನಿಂತಿದ್ದರು. ರಾಧಾಳಿಗೆ ನಾಚಿಕೆಯಾಯಿತು. ಅವರತ್ತ ಹೋಗಿ ಕಿವಿ ಹಿಂಡಿ ಎಳೆದೊಯ್ದು ಒಳಗೆ ಬಿಟ್ಟು, ಆತುರಾತುರವಾಗಿ ಹೊರಗೆ ಬಂದು, ‘ತಪ್ಪಾಯ್ತು ಧಣಿ… ಮಕ್ಕಳು ಯಾವತ್ತೂ ಹೀಗೆ ಮಾಡಿದವರಲ್ಲ. ಇವತ್ತೇನಾಯಿತೋ?’ ಎಂದು ಸಂಕೋಚದಿಂದ ಹಿಡಿಯಾಗಿ ಕ್ಷಮೆಯಾಚಿಸಿದಳು. ಮುತ್ತಯ್ಯ ಅಷ್ಟಕ್ಕೇ ಮೆತ್ತಗಾದ. ‘ಹ್ಞೂಂ ಪರ್ವಾಗಿಲ್ಲ, ಬಿಡು. ಇನ್ನು ಮುಂದೆ ಅವು ಹಾಗೆ ಮಾಡದಂತೆ ನೋಡಿಕೋ. ಅವನೆಲ್ಲಿ ಹೋದ ಗೋಪಾಲ…? ತೋಟದ ಮಡಲು, ಕಾಯಿ ತಪ್ಪರಿಗೆಗಳನ್ನೆಲ್ಲಾ ಹೆಕ್ಕಿ ಮನೆಯತ್ತ ತಂದು ಹಾಕು ಅಂತ ಮೊನ್ನೆಯಿಂದ ಬೊಬ್ಬೆ ಹೊಡೆಯುತ್ತಿದ್ದೇನೆ. ಅವನಿಗದು ನಾಟುವುದೇ ಇಲ್ಲವಲ್ಲಾ! ಒಂದೋ ನೀನು ಹೆಕ್ಕಿ ಹಾಕು. ಇಲ್ಲಾ ಅವನು ಬಂದ ಕೂಡಲೇ ರಾಶಿ ಹಾಕಿಸು. ತೋಟ ನೋಡಲೇ ಬೇಸರವಾಗುತ್ತದೆ!’ ಎಂದು ಹೇಳುವಾಗ ಅವನ ದೃಷ್ಟಿ ಅವಳ ಎದೆಯ ಮೇಲೆ ನೆಟ್ಟಿತ್ತು. ಅಷ್ಟರಲ್ಲಿ ಮಕ್ಕಳಿಬ್ಬರೂ ಆಡಲು ತೋಟದತ್ತ ಓಡಿದರು. ಅದನ್ನು ಕಂಡ ಮುತ್ತಯ್ಯ ಮೀಸೆಯಡಿಯಲ್ಲೇ ನಕ್ಕ. ರಾಧಾಳನ್ನು ಅನುಭವಿಸುವ ಬಯಕೆ ಮತ್ತೆ ಅವನಲ್ಲಿ ಹೆಡೆಯೆತ್ತಿತು. ಅವನ ಮುಖಭಾವವನ್ನು ಗಮನಿಸಿದ ರಾಧಾಳಿಗೆ ಭಯ, ಮುಜುಗರ ಒಟ್ಟೊಟ್ಟಿಗಾಯಿತು. ತಲೆತಗ್ಗಿಸಿ ಎದೆಯ ಭಾಗವನ್ನು ಸೆರಗಿನಿಂದ ಮತ್ತಷ್ಟು ಮುಚ್ಚಿಕೊಳ್ಳುತ್ತ, ‘ಆಯ್ತು ಧಣಿ. ಅವರು ಬಂದ ಕೂಡಲೇ ಹೇಳುತ್ತೇನೆ. ನನಗೆ ಮನೆ ಕೆಲಸವೇ ತುಂಬಾ ಇದೆ’ ಎಂದು ಹೇಳಿ ರುಮ್ಮನೆ ಒಳಗೆ ಹೋದಳು. ಬಳುಕುತ್ತ ಕಣ್ಮರೆಯಾದ ಅವಳ ಮೈಮಾಟವನ್ನು ಕಂಡ ಮುತ್ತಯ್ಯ ಉನ್ಮತ್ತನಾಗಿ, ‘ಆಯ್ತು… ಪರ್ವಾಗಿಲ್ಲ. ನೀನೇನೂ ಮಾಡಬೇಡ. ನಿನ್ನ ಕಷ್ಟ ನನಗಿಲ್ಲಿ ‘ಎದ್ದು’ ಕಾಣುತ್ತಿದೆ!’ ಎಂದು ಆಸೆಯಿಂದ ಹೇಳಿದವನು ಸ್ವಲ್ಪಹೊತ್ತು ಅಲ್ಲೇ ಅಂಗಳದಲ್ಲಿ ಸುತ್ತಾಡುತ್ತ ಯೋಚಿಸಿದ. ಥೂ! ಈದೇವರು ಬಡ ಹೆಂಗಸರಿಗೇ ಯಾಕೆ ನಮ್ಮಂಥ ಗಂಡಸರನ್ನು ಹುಚ್ಚೆಬ್ಬಿಸುವ ರೂಪ, ಲಾವಣ್ಯವನ್ನು ಕೊಡುತ್ತಾನೋ? ಇವರ ವನಪು ವೈಯ್ಯಾರಗಳೆಲ್ಲ ನಮ್ಮ ತಲೆ ಹಾಳು ಮಾಡಿ ಬಿಡುತ್ತವೆ ಕರ್ಮದ್ದು. ನನ್ನವಳೂ ಒಬ್ಬಳಿದ್ದಾಳೆ. ಆದರೆ ಪ್ರಯೋಜನವೇನುಬಂತು? ದರಿದ್ರವಳಿಗೆ ಯಾವಾಗಲೂ ಒಂದಲ್ಲಾ ಒಂದು ಕಾಯಿಲೆ! ಮೈಬಗ್ಗಿಸಿ ದುಡಿಯದೆ ಕೂತುಂಡು ಆನೆಮರಿಯಂತಾಗಿದ್ದಾಳೆ ಲೌಡಿ. ಅಂಥವಳ ಜೊತೆ ಏಗುವುದೋ ಬಿಡುವುದೋ ದೇವರಿಗೇ ಗೊತ್ತು! ಆದರೆ ಮನೆ ಕೆಲಸದ ನಾಗವೇಣಿ ಕೆಳ ಜಾತಿಯವಳಾದರೂ ಎಷ್ಟೊಂದು ಪಸಂದಾಗಿದ್ದಾಳೆ. ನಾನೂ ಉಪ್ಪು ಹುಳಿ ಖಾರ ತಿನ್ನುವವನಲ್ಲವಾ! ಅದಕ್ಕೇ ಆವತ್ತೊಮ್ಮೆ ಆಗುವುದಾಗಲಿ ಎಂದುಕೊಂಡು ಅವಳನ್ನು ಬಾಚಿ ತಬ್ಬಿ ಕೊಂಡದ್ದು. ಅವಳು ರಂಪ ಮಾಡಿಬಿಡುತ್ತಾಳೇನೋ ಎಂದು ಭಾವಿಸಿದ್ದೆ. ಆದರೆ ನಡೆದದ್ದು ಬೇರೆಯೇ. ಮೊದಲಿಗೆ ಬೆಚ್ಚಿಬಿದ್ದು ದಿಟ್ಟಿಸಿದವಳು ತಕ್ಷಣ ಮೆದುವಾಗಿ ನಗುತ್ತ ತೋಳ ತೆಕ್ಕೆಗೆ ಬಿದ್ದುಬಿಟ್ಟಳು. ಆವತ್ತಿನಿಂದ ಒಂದಿಷ್ಟು ಸುಖ ಅವಳಿಂದ ಸಿಗದಿರುತ್ತಿದ್ದರೆ ಈ ಕಾಡುಹಂದಿಯನ್ನು ಕಟ್ಟಿಕೊಂಡು ನಾನೇನು ಮಾಡಬೇಕಿತ್ತೋ. ಆದರೆ ಆ ನಾಗಿಯ ಗಂಡ ಕುಡ್ಚೇಲ ಮಣಿಯಾಣಿಯ ದುಡ್ಡಿನ ಪೀಡನೆ ನೆನೆದರೆ ಮಾತ್ರ ಅವಳನ್ನೂ ಮುಟ್ಟುವುದು ಬೇಡ ಅಂತನ್ನಿಸುತ್ತದೆ! ಎಂದು ತಲೆಕೊಡವಿಕೊಂಡ. ಬಳಿಕ ಮತ್ತೆ, ಈ ರಾಧಾ ಸಖತ್ ಆಗಿದ್ದಾಳೆ. ನಾಗಿಯಷ್ಟು ಚಾಲಾಕಿನವಳೂ ಅಲ್ಲ. ಗೋಪಾಲನೂ ದುರಾಸೆಯ ಮನುಷ್ಯನಲ್ಲ. ಅವಕಾಶ ಸಿಕ್ಕಿದರೆ ಇವಳನ್ನೇ ಒಲಿಸಿಕೊಂಡು ಪರ್ಮನೆಂಟಾಗಿ ಇಟ್ಟುಕೊಳ್ಳಬೇಕು! ಎಂಬ ಯೋಚನೆಯಲ್ಲಿ ತೇಲಾಡುತ್ತ ಮೆತ್ತಗೆ ರಾಧಾಳ ಮನೆಯೊಳಗೆ ಅಡಿಯಿಟ್ಟ. ಅಷ್ಟರವರೆಗೆ ಅಡುಗೆ ಕೋಣೆಯಲ್ಲಿದ್ದ ರಾಧಾ, ಮುತ್ತಯ್ಯ ಹೊರಟು ಹೋದನೆಂದು ಭಾವಿಸಿ ಹೊರಗೆ ಬಂದವಳು ಅವನನ್ನು ಕಂಡು ನಡುಗಿಬಿಟ್ಟಳು. ಮುತ್ತಯ್ಯ ಪಡಸಾಲೆಯಲ್ಲಿ ನಿಂತಿದ್ದ. ‘ಏ…,ಏನೂ…ಏನು ಬೇ…ಕಿ…ತ್ತು…ಧಣೀ…!’ ಎಂದೆನ್ನುತ್ತ ಮೂಲೆಗೆ ಸರಿದು ನಿಂತಳು. ‘ಅರೆರೇ, ನೀನೆಂಥದು ಮಾರಾಯ್ತೀ ಇಷ್ಟೊಂದು ಹೆದರುವುದು? ನಾನೇನು ಹುಲಿನಾ, ಸಿಂಹನಾ…? ಎರಡು ಮಕ್ಕಳ ತಾಯಿ ನೀನು, ನಾನ್ಯಾಕೆ ಬಂದೆನೆಂದು ತಿಳಿಯದಷ್ಟು ಪೆದ್ದಿಯಾ…? ನಿನ್ನ ಆತಂಕ ನನಗೂ ಅರ್ಥವಾಗುತ್ತದೆ. ಹೆದರಬೇಡ. ಸ್ವಲ್ಪ ಹೊತ್ತು ಸುಮ್ಮನಿದ್ದುಬಿಡು. ಆಮೇಲೆ ನಿನ್ನನ್ನು ರಾಣಿಯಂತೆ ನೋಡಿಕೊಳ್ಳುವ ಜವಾಬ್ದಾರಿ ನನ್ನದು!’ ಎಂದು ನಾಲಗೆಯಿಂದ ಕೆಳದುಟಿ ಸವರುತ್ತ ಮುಂದುವರೆದ. ರಾಧಾ ಮತ್ತಷ್ಟು ಬೆದರಿದಳು. ದುಃಖ ಉಮ್ಮಳಿಸಿ ಬಂತು. ಮುತ್ತಯ್ಯ ಅವಳನ್ನು ಬಾಚಿ ತಬ್ಬಿಕೊಳ್ಳಲು ಮುಂದಾದ. ಅದನ್ನು ತಿಳಿದವಳಿಗೆ ಕೆಟ್ಟ ರೋಷವೆದ್ದಿತು. ‘ಛೀ! ಮುಟ್ಬೇಡಿ ನನ್ನ! ಇಂಥ ಕೆಲಸ ಮಾಡಲು ನಾಚಿಕೆಯಾಗುವುದಿಲ್ಲವಾ ನಿಮಗೆ…? ನೀವೆಣಿದಂಥ ಹೆಂಗಸಲ್ಲ ನಾನು. ಮರ್ಯಾದೆಯಿಂದ ಹೊರಟು ಹೋಗಿ. ಇಲ್ಲವಾದರೆ ಜೋರಾಗಿ ಬೊಬ್ಬೆ ಹೊಡೆಯುತೇನಷ್ಟೆ!’ ಎಂದು ಒರಟಾಗಿ ಗದರಿಸಿದಳು. ನಾಗವೇಣಿಯಂತೆ ಇವಳೂ ತಾನು ಮುಟ್ಟಿದ ಕೂಡಲೇ ತೆಕ್ಕೆಗೆಬಿದ್ದು ಮಂದಹಾಸ ಬೀರುತ್ತಾಳೆಂದುಕೊಂಡಿದ್ದ ಮುತ್ತಯ್ಯನ ಲೆಕ್ಕಾಚಾರವೆಲ್ಲ ತಲೆ ಕೆಳಗಾಗಿಬಿಟ್ಟಿತು. ಅವನು ಅವಕ್ಕಾದವನು, ‘ಆಯ್ತು, ಆಯ್ತು ಮಾರಾಯ್ತೀ. ಕಿರುಚಬೇಡ. ನಿನಗಿಷ್ಟವಿದ್ದರೆ ಮಾತ್ರ. ಯಾರನ್ನೂ ನಾನು ಬಲವಂತ ಮಾಡುವವನಲ್ಲ. ಇರಲಿ. ಕುಡಿಯಲಿಕ್ಕೆ ಸ್ವಲ್ಪ ನೀರಾದರೂ ಕೊಡುತ್ತೀಯಾ ಇಲ್ವಾ…?’ ಎಂದ ಹುಸಿನಗುತ್ತ. ‘ನೀರೂ ಇಲ್ಲ, ಮಣ್ಣೂ ಇಲ್ಲ! ಮನೆಗೆ ಹೋಗಿ ಕುಡಿದು ಕೊಳ್ಳಿ. ಹ್ಞೂಂ ಹೊರಡಿ!’ ಎಂದು ರಾಧಾ ಇನ್ನಷ್ಟು ಕೋಪದಿಂದ ಗುಡುಗಿದವಳು ತಿರುಗಿ ಅಡುಗೆ ಕೋಣೆಗೆ ನುಸುಳಿ ದಢಾರ್ರನೇ ಕದವಿಕ್ಕಿಕೊಂಡಳು. ಮುತ್ತಯ್ಯನಿಗೆ ಕಪಾಳಕ್ಕೆ ಹೊಡೆದಷ್ಟು ಅವಮಾನ, ಭಯಒಟ್ಟೊಟ್ಟಿಗಾಯಿತು. ರಪ್ಪನೆ ಹೊರಗೆ ಧಾವಿಸಿದ. ಅವನಿಗೆ ತಾನು ಕೆಲವೇ ಕ್ಷಣಗಳ ಹಿಂದಷ್ಟೇ ಕಂಡು ಮೋಹಿಸಿದ್ದ ರಾಧಾಳ ರೂಪವು ಈಗ ಮಹಾಕಾಳಿಯಂತಾಗಿ ಕಣ್ಣೆದುರು ಸುಳಿಯಿತು. ‘ಅಬ್ಬಾ! ಇವಳೇ…ಇಷ್ಟೊಂದು ಜೋರಿದ್ದಾಳಾ…!’ ಎಂದುಕೊಂಡವನು, ಯಾರಾದರೂ ಕೇಳಿಸಿಕೊಂಡರಾ…? ಎಂದು ಒಮ್ಮೆಸುತ್ತಮುತ್ತ ಕಳ್ಳ ದೃಷ್ಟಿ ಬೀರಿದ. ಪುಣ್ಯಕ್ಕೆ ಯಾರೂ ಕಾಣಿಸಲಿಲ್ಲ. ಮತ್ತೆ ಅಲ್ಲಿ ನಿಲ್ಲಲಾಗದೆ ರಪರಪನೇ ತೋಟದತ್ತ ಹೆಜ್ಜೆ ಹಾಕಿದ. ಆದರೆ ಅವನ ಹಸಿವಿನ್ನೂ ತಣಿದಿರಲಿಲ್ಲ. ಆ ನಿರಾಶೆಯು ಅವಳ ಮೇಲಿನ ಕೋಪವಾಗಿ ಮಾರ್ಪಟ್ಟಿತು. ‘ಅಲ್ಲಾ, ಎಷ್ಟೊಂದು ಸೊಕ್ಕು ಈ ಹಡೆರಂಡೆಗೆ! ಮನೆ ಕೊಟ್ಟ ಧಣಿ ಅಂತಾನ್ನೂ ಲೆಕ್ಕಿಸದೆ ನಾಯಿಯನ್ನು ಗದರಿಸುವಂತೆ ಗದರಿಸಿಬಿಟ್ಟಳಲ್ಲ! ಇವಳು ಉರುವಲು ಬೇಕೆಂದು ಬಂದಾಗಲೆಲ್ಲ ಪಾಪ ಬಡಹೆಂಗಸು ಎಂದುಕೊಂಡು ಒಣ ಮಡಲು, ತಪ್ಪರಿಗೆ, ತೆಂಗಿನ ಹೆಡೆ, ಕಾಯಿ, ಬಾಳೆಹಣ್ಣುಗಳನ್ನೆಲ್ಲ ಬಾಚಿ ಬಾಚಿ ಕೊಡುತ್ತಿದ್ದೆನಲ್ಲ. ಅವಕ್ಕೆಲ್ಲ ಬೆಲೆಯೇ ಇಲ್ಲವಾ ಹಾಗಾದರೆ? ಇಲ್ಲ, ಇನ್ನು ಇವಳನ್ನು ಸುಮ್ಮನೆ ಬಿಡಲಿಕ್ಕಿಲ್ಲ. ಇಂದಲ್ಲ ನಾಳೆ ಅನುಭವಿಸಿಯೇ ತೀರಬೇಕು. ಇನ್ನೂ ಸ್ವಲ್ಪ ಕಾಲ ಮನವೊಲಿಸುವ ನಾಟಕವಾಡುವ. ಒಲಿದರೆ ಗೆದ್ದಳು. ಇಲ್ಲವಾದರೆ ಸೆರಗು ಹರಿದಾದರೂ ಚಿಂತೆಯಿಲ್ಲ, ಒಮ್ಮೆ ರುಚಿ ನೋಡಲೇಬೇಕು! ಎಂದು ನಿರ್ಧರಿಸಿ ಸ್ವಲ್ಪ ಸ್ಥಿಮಿತಕ್ಕೆ ಬಂದ. ಮರುಕ್ಷಣ ಅವನಿಗೆ ಮತ್ತೊಂದು ಯೋಚನೆ ಹುಟ್ಟಿತು. ಇವಳು ಕೋಪದ ಬರದಲ್ಲಿ ಗಂಡ ಬಂದ ತಕ್ಷಣ ತನ್ನ ಮೇಲೆ ಚಾಡಿ ಹೇಳದೆ ಬಿಡಲಾರಳು. ಅವನಿಗೆ ತಿಳಿದರೆ ಕಷ್ಟ. ಹಾಗಾಗಲು ಬಿಡಬಾರದು ಎಂದುಕೊಂಡು ರಪ್ಪನೆ ಹಿಂದಿರುಗಿ ನಡೆದ. ಅವಳ ಅಂಗಳದಲ್ಲಿ ನಿಂತುಕೊಂಡು, ‘ರಾಧಾ…!’ ಎಂದು ಮೃದುವಾಗಿ ಕರೆದ. ರಾಧಾಳಿಗೆ ಮತ್ತೆ ಅಳುಕೆದ್ದಿತು. ಆದರೂ ತೋರಿಸಿಕೊಳ್ಳದೆ ಒಳಗಿನಿಂದಲೇ, ‘ಏನು…?’ ಎಂದು ಒರಟಾಗಿ ಪ್ರಶ್ನಿಸಿದಳು. ‘ಸ್ವಲ್ಪ ಹೊರಗೆ ಬಾ ಮಾರಾಯ್ತೀ…’ ಎಂದು ಅಂಗಲಾಚಿದ. ಆದರೆ ಅವಳು, ‘ಈ ನೀಚ ಇನ್ನೊಮ್ಮೆ ತನ್ನನ್ನು ಮುಟ್ಟಲು ಪ್ರಯತ್ನಿಸಬೇಕು, ಸಿಗಿದೇ ಹಾಕುತ್ತೇನೆ!’ ಎಂದುಕೊಂಡು ಕತ್ತಿಯನ್ನು ಸೆರಗಿನ ಮರೆಯಲ್ಲಿಟ್ಟುಕೊಂಡೇ ಹೊಸ್ತಿಲಿಗೆ ಬಂದು, ‘ಏನೂ…!’ ಎಂಬಂತೆ ಅವನನ್ನು ತೀಕ್ಷ್ಣವಾಗಿ ದಿಟ್ಟಿಸಿದಳು. ಆದರೆ ಅವನ ಮುಖ ಕಂಡು ಹೇಸಿಗೆಯೆನಿಸಿತು. ದೃಷ್ಟಿ ತಪ್ಪಿಸಿ ಎತ್ತಲೋ ನೋಡುತ್ತ ನಿಂತಳು. ಮುತ್ತಯ್ಯ ಮತ್ತೊಮ್ಮೆ ಬೆದರಿದ. ಆದರೂ ತನ್ನ ಅದುರುವ ದೇಹವನ್ನು ಹತೋಟಿಗೆ ತಂದುಕೊಳ್ಳುತ್ತ, ‘ಬೇಜಾರು ಮಾಡಿಕೊಳ್ಳಬೇಡ ಮಾರಾಯ್ತಿ. ಏನೋ ಕೆಟ್ಟ ಗಳಿಗೆ. ನಿನ್ನ ಚಂದಕ್ಕೆ ಮನಸ್ಸು ಮರುಳಾಯಿತು. ಹೆಣ್ಣಿನಾಸೆ ಯಾವ ಗಂಡಸನ್ನು ಬಿಟ್ಟಿದೆ ಹೇಳು? ನನ್ನ ಹೆಂಡತಿಯೊಬ್ಬಳು ಸರಿಯಿರುತ್ತಿದ್ದರೆ ಇಂಥದ್ದಕ್ಕೆಲ್ಲ ಕೈಹಾಕಲಿಕ್ಕಿತ್ತಾ ನಾನು? ಅದನ್ನೆಲ್ಲ ನಿನ್ನ ಹತ್ತಿರ ಹೇಳಿ ಪ್ರಯೋಜನವಿಲ್ಲ ಬಿಡು. ನನ್ನಿಂದ ತಪ್ಪಾಯ್ತು. ನಡೆದದ್ದನ್ನು ಮರೆತುಬಿಡು. ಗಂಡನಿಗೆ ತಿಳಿಸಿ ನಿಷ್ಠೂರ ಕಟ್ಟಿಕೊಳ್ಳುವುದು ಬೇಡ. ಹ್ಞಾಂ, ಇನ್ನೊಂದು ಮಾತು. ಕಾಯಿ, ಗೀಯಿ, ಕಟ್ಟಿಗೆ ಬೇಕಾದರೆ ಹಿಂದಿನಂತೆಯೇ ಸಂಕೋಚಪಡದೆ ತೆಗೆದುಕೊಂಡು ಹೋಗು ಮಾರಾಯ್ತಿ. ಒಟ್ಟಾರೆ ನೀವು ಒಕ್ಕಲಿನವರು ಚೆನ್ನಾಗಿರಬೇಕುಅಷ್ಟೇ. ನಾನೇನು ಹೋಗುವಾಗ ಕೊಂಡು ಹೋಗುತ್ತೇನಾ!’ ಎಂದು ವೈರಾಗಿಯಂತೆ ನುಡಿದು ಹಿಂಬದಿಯನ್ನು ಪರಪರ ಕೆರೆದುಕೊಳ್ಳುತ್ತ ಹೊರಟು ಹೋದ. ರಾಧಾಳಿಗೆ ಅವನ ಮಾತು, ವರ್ತನೆಗಳು ಅಸಹ್ಯವೆನಿಸಿದುವು. ಏನೂ ಉತ್ತರಿಸಿದೆ ತುಟಿ ಕಚ್ಚಿ ನಿಂತಳು. ಮುತ್ತಯ್ಯನ ಕೀಳು ಚಪಲ, ನೀಚತನವನ್ನು ಹಿಂದಿನಿಂದಲೂ ಅನುಭವಿಸುತ್ತ ಬಂದವಳಿಗೆ ಇಂದಿನ ಘಟನೆಯಿಂದ ಸಹನೆ ತಪ್ಪಿಬಿಟ್ಟಿತು. ಇಂಥವರಹಂಗಿನ ಗುಡಿಸಲೂ ಸಾಕು! ಈ ಲಂಪಟರ ಹಸಿದ ದೃಷ್ಟಿಗೆ ಬಲಿಯಾಗಿದ್ದೂ ಸಾಕು. ಒಂದಿಷ್ಟಿರುವ ಬಂಗಾರ ಮಾರಿ ಹೋದರೂ ಚಿಂತೆಯಿಲ್ಲ. ಆದಷ್ಟು ಬೇಗ ಒಂದು ತುಂಡು ಸ್ವಂತ ಭೂಮಿಯನ್ನು ಮಾಡಿಕೊಳ್ಳಲೇಬೇಕು. ಆಮೇಲೆ ಬೀಡಿ ಕಟ್ಟಿ, ಗಂಜಿ ಉಂಡಾದರೂ ಬದುಕಬಹುದು. ಯಾವುದಕ್ಕೂ ಇವರೊಮ್ಮೆ ಮನೆಗೆ ಬಂದುಕೊಳ್ಳಲಿ. ಕೊರಳಪಟ್ಟಿ ಹಿಡಿದು ಎರಡರಲ್ಲೊಂದು ಇತ್ಯಾರ್ಥ ಮಾಡಿಯೇ ತೀರುತ್ತೇನೆ! ಎಂದು ಕುದಿಯುತ್ತ ಗಂಡನ ದಾರಿ ಕಾಯತೊಡಗಿದಳು. (ಮುಂದುವರೆಯುವುದು) ************************** ಗುರುರಾಜ್ ಸನಿಲ್ ಗುರುರಾಜ್ ಸನಿಲ್ ಉಡುಪಿ ಇವರು ಖ್ಯಾತ ಉರಗತಜ್ಞ, ಸಾಹಿತಿಯಾಗಿ ನಾಡಿನಾದ್ಯಂತ ಹೆಸರು ಗಳಿಸಿದವರು. .‘ಹಾವು ನಾವು’, ‘ದೇವರಹಾವು: ನಂಬಿಕೆ-ವಾಸ್ತವ’, ‘ನಾಗಬೀದಿಯೊಳಗಿಂದ’, ‘ಹುತ್ತದ ಸುತ್ತಮುತ್ತ’, ‘ವಿಷಯಾಂತರ’ ‘ಕಮರಿದ ಸತ್ಯಗಳು ಚಿಗುರಿದ ಸುದ್ದಿಗಳು’ ಮತ್ತು ಅವಿಭಜಿತ ದಕ್ಷಿಣ ಕನ್ನಡಜಿಲ್ಲೆಗಳ ನೈಸರ್ಗಿಕ ನಾಗಬನಗಳ ಉಳಿವಿನ ಜಾಗ್ರತಿ ಮೂಡಿಸುವ ‘ನಾಗಬನವೆಂಬ ಸ್ವರ್ಗೀಯ ತಾಣ’ , ‘ಗುಡಿ ಮತ್ತು ಬಂಡೆ’ ಎಂಬ ಕಥಾಸಂಕಲವನ್ನು ಹೊರ ತಂದಿದ್ದಾರೆ. ಇತ್ತೀಚೆಗೆ ‘ಆವರ್ತನ’ ಮತ್ತು ‘ವಿವಶ’ ಎರಡು ಕಾದಂಬರಿಗಳು ಬಂದಿವೆ.‘ಹಾವು ನಾವು’ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯು 2010ನೇ ಸಾಲಿನ ‘ಮಧುರಚೆನ್ನ ದತ್ತಿನಿಧಿ ಪುಸ್ತಕ ಪ್ರಶಸ್ತಿ’ ನೀಡಿ ಗೌರವಿಸಿದೆ. ‘ ‘ಕರುಣಾ ಎನಿಮಲ್ ವೆಲ್ಫೇರ್ ಅವಾರ್ಡ್(2004)’ ‘ಕರ್ನಾಟಕ ಅರಣ್ಯ ಇಲಾಖೆಯ ‘ಅರಣ್ಯಮಿತ್ರ’(2013)’ ಕರ್ನಾಟಕ ಕಾರ್ಮಿಕ ವೇದಿಕೆಯು ‘ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ(2015)’ ಪಡೆದಿದ್ದಾರೆ. ಪ್ರಸ್ತುತ ಉಡುಪಿಯ ಪುತ್ತೂರಿನಲ್ಲಿ ವಾಸವಾಗಿದ್ದಾರೆ.
ಸ್ವರ್ಗದ ಪಕ್ಷಿ ನವಿಲು ಈ ದೇಶದಲ್ಲಿ ಅಡ್ಡಾಡುತ್ತಿದೆ, ಈ ನೆಲದಲ್ಲಿ ದೊಡ್ಡ ದೊಡ್ಡ ನದಿಗಳು ಹರಿಯುತ್ತಿದೆ, ನಳನಳಿಸುವ ಹಸಿರಿನ ತೋಟಗಳು, ಉದ್ಯಾನಗಳು ಇಲ್ಲಿ ವಿಪುಲವಾಗಿವೆ, ಸ್ವರ್ಗದಲ್ಲಿರುವ ಬಂಗಾರ ವರ್ಣದ ಬಾಳೆಹಣ್ಣು ಇಲ್ಲಿ ಹೇರಳವಾಗಿದೆ ಎಂದೆಲ್ಲ ವಿವರಿಸಿದ. ಇವನ ಫಾರಸಿ ದ್ವಿಪದಿಯೊಂದು ಹೀಗಿದೆ.
ಓದುವುದು – ಏನು ? ಏಕೆ ? ಹೇಗೆ ?
ಗೋನವಾರ ಕಿಶನ್ ರಾವ್
ಇದು ಬರೀ ಕವಿತೆ ಬರೆಯುವದಕ್ಕೆ ಮಾರ್ಗ ಸೂಚಿ ಎಂದಾಗಲಿ ದಯವಿಟ್ಟು ಎಲ್ಲಾ ಪ್ರಕಾರದ ಬರಹಗಳಿಗೆ ಅನ್ವಯಿಸುತ್ತದೆ ಎಂದು ಬಲವಾಗಿ ನಂಬಹುದಾಗಿದೆ.
ಓದುವುದು – ಏನು ? ಏಕೆ ? ಹೇಗೆ ? Read Post »
ದಾರಾವಾಹಿ- ಅದ್ಯಾಯ-02 ಗೋಪಾಲ ಮೂಲತಃ ಈಶ್ವರಪುರ ಜಿಲ್ಲೆಯ ಅಶೋಕ ನಗರದವನು. ಅವನ ಹೆಂಡತಿ ರಾಧಾ ಕಾರ್ನಾಡಿನವಳು. ‘ಗಜವದನ’ ಬಸ್ಸು ಕಂಪನಿಯಲ್ಲಿ ಹಿರಿಯ ಚಾಲಕರಾಗಿದ್ದ ಸಂಜೀವಣ್ಣನ ಮೂರು ಗಂಡು, ಎರಡು ಹೆಣ್ಣು ಮಕ್ಕಳಲ್ಲಿ ಗೋಪಾಲ ಕೊನೆಯವನು. ಸಂಜೀವಣ್ಣ ತಮ್ಮ ಪ್ರಾಮಾಣಿಕ ದುಡಿಮೆಯಲ್ಲಿ ಆಸ್ತಪಾಸ್ತಿಯನ್ನೇನೂ ಮಾಡಿರಲಿಲ್ಲ. ಆದರೆ ಮಕ್ಕಳು ಓದುವಷ್ಟು ವಿದ್ಯೆಯನ್ನೂ, ತನ್ನ ಸಂಸಾರ ಸ್ವತಂತ್ರರಾಗಿರಲೊಂದು ಹಂಚಿನ ಮನೆಯನ್ನೂ ಕಟ್ಟಿಸಿ, ಒಂದಷ್ಟು ಸಾಲಸೋಲ ಮಾಡಿ ಇಬ್ಬರು ಹೆಣ್ಣು ಮಕ್ಕಳಿಗೆ ಮದುವೆ ಮಾಡಿ ಕೊಟ್ಟಿದ್ದರು. ಆ ಸಾಲ ತೀರುವ ಹೊತ್ತಿಗೆ ಹಿರಿಯ ಗಂಡು ಮಕ್ಕಳಿಬ್ಬರ ಮದುವೆಯೂ ನಡೆಯಿತು. ಆದರೆ ಗೋಪಾಲ ಅಪ್ಪ ಅಮ್ಮನ ಮುದ್ದಿನ ಕಣ್ಮಣಿಯಾಗಿದ್ದವನು. ಹಾಗಾಗಿ ಅವನು ಏಳನೆಯ ತರಗತಿಯವರೆಗೆ ಮಾತ್ರವೇ ಓದಿ ಮತ್ತೆ ಯಾರ ಒತ್ತಾಯಕ್ಕೂ ಮಣಿಯದೆ ಶಾಲೆಬಿಟ್ಟು ಉಂಡಾಡಿ ಗುಂಡನಂತೆ ಬೆಳೆಯತೊಡಗಿದ. ಕುಡಿಮೀಸೆ ಚಿಗುರಿ, ಐದಾರು ಮಳೆಗಾಲ ಕಳೆಯುತ್ತಲೇ ಮನೆ ಕಟ್ಟಡಗಳಿಗೆ ಸುಣ್ಣಬಣ್ಣ ಬಳಿಯುವ ಕೆಲಸಕ್ಕೆ ಸೇರಿಕೊಂಡ. ಬಹಳ ಬೇಗನೇ ಆ ಕೆಲಸವನ್ನು ಕಲಿತ. ತನ್ನದೇ ತಂಡವೊಂದನ್ನು ಕಟ್ಟಿಕೊಂಡು ಸ್ವತಃ ವಹಿಸಿಕೊಂಡು ದುಡಿಯುತ್ತ ಸಂಪಾದಿಸತೊಡಗಿದ. ತಮ್ಮ ಮಗ ವಿದ್ಯೆಯ ವಿಷಯದಲ್ಲಿ ಹಿಂದೆಬಿದ್ದರೂ ದುಡಿಮೆಯಲ್ಲಿ ಮೆಲುಗೈ ಸಾಧಿಸಿದ ಹಾಗೂ ಅವನು ತನ್ನ ಕೈಕೆಳಗೆ ಹತ್ತಾರು ಮಂದಿಯನ್ನು ದುಡಿಸತೊಡಗಿದ್ದನ್ನು ಕಂಡು ಹೆಮ್ಮೆಪಟ್ಟುಕೊಂಡ ಹೆತ್ತವರು ಅವನಿಗೂ ಮದುವೆ ಮಾಡಲು ಹೊರಟರು. ಹೆಣ್ಣಿನ ಕಡೆಯವರೂ ಗಂಡಿನ ಪ್ರಸ್ತುತ ದುಡಿಮೆಯ ಆಧಾರದ ಮೇಲೆಯೇ ಹೆಣ್ಣು ಕೊಟ್ಟರು. ಅದ್ಧೂರಿಯ ಮದುವೆಯೂ ನಡೆಯಿತು. ಗೋಪಾಲನ ಸಂಗಾತಿಯಾಗಿ ರಾಧಾ ಮನೆಗೆ ಬಂದಳು. ಇಷ್ಟಾಗುವ ಹೊತ್ತಿಗೆ ಸಂಜೀವಣ್ಣನಿಗೂ ವೃದ್ಧಾಪ್ಯ ಸಮೀಪಿಸಿತು. ಚಾಲಕವೃತ್ತಿಯಿಂದ ನಿವೃತ್ತರಾದರು. ಆನಂತರದ ಕೆಲವು ವರ್ಷಗಳ ಕಾಲ ಮಕ್ಕಳೊಂದಿಗೆ ನೆಮ್ಮದಿಯ ಬಾಳು ಕಂಡರಾದರೂ ಕೆಲವು ವರ್ಷ ಸಂಧಿವಾತ, ಸಕ್ಕರೆ ಕಾಯಿಲೆಗಳಿಂದ ನರಳುತ್ತ ತೀರಿಕೊಂಡರು. ಸಂಜೀವಣ್ಣ ಗತಿಸುವ ಕೆಲವು ತಿಂಗಳ ಹಿಂದಷ್ಟೇ ಅವರ ಎರಡನೆಯ ಮಗ ಕೇಶವ ಮಲೆವೂರಿನಲ್ಲಿ ತನ್ನ ಟೈಲರ್ ಶಾಪಿನ ಪಕ್ಕದಲ್ಲಿ ಖಾಲಿಯಿದ್ದ ಬಾಡಿಗೆ ಮನೆಯನ್ನು ಗೊತ್ತುಪಡಿಸಿ ತನ್ನ ಸಂಸಾರವನ್ನು ಕರೆದುಕೊಂಡು ಹೋಗಿ ನೆಲೆಸಿದ್ದ. ಇನ್ನೊಬ್ಬ ಸಹೋದರ ದಿನೇಶ, ಸೈಕಲ್ ಶಾಪ್ ಹೊಂದಿದ್ದವನು ಬೇರೆ ಮನೆ ಕಟ್ಟಿಕೊಂಡು ಕುಟುಂಬದೊಂದಿಗೆ ವಾಸಿಸುತ್ತಿದ್ದ. ಆದ್ದರಿಂದ ಹಿರಿಯ ಮಗ ಮಾಧವನೇ ಮನೆಯ ಜವಾಬ್ದಾರಿಯನ್ನು ಹೊರಬೇಕಾಯಿತು. ಅವನು ಅಪ್ಪನಿಂದ ಬಸ್ಸು ಚಾಲನೆ ಕಲಿತಿದ್ದವನು ಬಾಡಿಗೆ ಟೆಂಪೋ ಚಾಲಕನಾಗಿ ದುಡಿಯುತ್ತಿದ್ದ. ಅಪ್ಪನ ನಂತರ ಅವರ ಉದ್ಯೋಗ ಮಾಧವನಿಗೆ ಸಿಕ್ಕಿತು. ಹೊಸ ಬಸ್ಸಿನ ಚಾಲಕನಾಗಿ ದುಡಿಮೆಯಾರಂಭಿಸಿದ. ತಾಯಿಯನ್ನೂ ಅವಳ ಕೊನೆಗಾಲದಲ್ಲಿ ಪ್ರೀತಿಯಿಂದ ನೋಡಿಕೊಂಡ. ಹಾಗಾಗಿ ಅವಳು ತೀರಿದ ನಂತರ ಅವಳ ಇಚ್ಛೆಯಂತೆ ಮನೆಯು ಮಾಧವನ ಹೆಸರಿಗೆ ವರ್ಗವಾಯಿತು. ಹೆತ್ತವರ ಮುದ್ದಿನ ಪುತ್ತಳಿಯಂತೆ ಬೆಳೆದಿದ್ದ ಗೋಪಾಲ ಅವರು ಗತಿಸಿದ ನಂತರ ಕೆಲವು ಕಾಲ ಅನಾಥಪ್ರಜ್ಞೆಯಿಂದ ನರಳಿದ. ಆದರೆ ಚೆಲುವೆಯಾದ ಹೆಂಡತಿಯಾಗಿ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದ ರಾಧಾ ಮತ್ತು ಅಣ್ಣ, ಅತ್ತಿಗೆಯರ ಒಡನಾಟದಿಂದ ಮರಳಿ ಸುಖವಾಗಿ ಸಂಸಾರ ಮಾಡತೊಡಗಿದ. ಆದರೆ ಬರಬರುತ್ತ ಅಣ್ಣನ ಹೆಂಡತಿ ಶ್ಯಾಮಲಾಳಿಗೆ ಮೈದುನನ ಅನ್ಯೋನ್ಯ ದಾಂಪತ್ಯವನ್ನು ಕಂಡು ಮತ್ಸರ ಹುಟ್ಟತೊಡಗಿ, ಕ್ರಮೇಣ ಅವಳ ಅಸಲಿ ಮುಖ ಮುನ್ನೆಲೆಗೆ ಬರಲಾರಂಭಿಸಿತು. ಅವಳ ಅಂಥ ನಡವಳಿಕೆಯಲ್ಲಿ ಬೇರೊಂದು ಉದ್ದೇಶವೂ ಅಡಗಿತ್ತು. ‘ಮಾವನನ್ನೂ, ಅತ್ತೆಯನ್ನೂ ತಾವೇ ಗಂಡ ಹೆಂಡತಿ ಕಷ್ಟಪಟ್ಟು ನೋಡಿಕೊಂಡಿದ್ದು. ಅದರ ಫಲವಾಗಿಯೇ ನಮಗೆ ಈ ಮನೆ ದಕ್ಕಿದ್ದು. ಹೀಗಿರುವಾಗ ಇಬ್ಬರು ಮೈದುನರು ಪಿತ್ರಾರ್ಜಿತ ಪಾಲು ಗೀಲು ಅಂತ ತಕರಾರೆತ್ತದೆ ಬೇರೆ ಸಂಸಾರ ಹೂಡಿದ್ದಾರೆ. ಆದರೆ ಈ ಗೋಪಾಲನ ಕುಟುಂಬ ಮಾತ್ರ ತಮಗೂ ಈ ಮನೆಯಲ್ಲಿ ಹಕ್ಕಿದೆ ಎಂಬಂತೆ ಠಿಕಾಣಿ ಹೂಡಿರುವುದು ಎಷ್ಟು ಸರಿ? ಇವರನ್ನು ಹೀಗೆಯೇ ಬಿಟ್ಟರೆ ನಾಳೆ ಅಪ್ಪ ಅಮ್ಮನ ಆಸ್ತಿಯಲ್ಲಿ ತಮಗೂ ಪಾಲಿದೆ. ಅಣ್ಣ, ಅತ್ತಿಗೆ ಹೆತ್ತವರನ್ನು ವಂಚಿಸಿ ಮನೆಯನ್ನು ತಮ್ಮ ಹೆಸರಿಗೆ ಬರೆಯಿಸಿಕೊಂಡಿದ್ದಾರೆ!’ ಎಂದು ಇಬ್ಬರೂ ಆಡಿಕೊಂಡರೆ ಅಥವಾ ಪೊಲೀಸರಿಗೆ ದೂರುಕೊಟ್ಟರೆ ನನ್ನ ಸಂಸಾರದ ಗತಿಯೇನಾದೀತು? ಇಲ್ಲ ಇವರನ್ನು ಇಲ್ಲಿರಲು ಬಿಡಬಾರದು. ಆದಷ್ಟು ಬೇಗ ಓಡಿಸಬೇಕು!’ ಎಂಬದು ಅವಳ ದೂರಾಲೋಚನೆಯಾಗಿತ್ತು. ಅಂದಿನಿಂದ ವಿನಾಕಾರಣ ಗೋಪಾಲನನ್ನು ಚುಚ್ಚಿ, ಹೀಯಾಳಿಸಿ ಮಾತಾಡುವುದು, ಅದಕ್ಕೆ ತಕ್ಕಂತೆ ವರ್ತಿಸುವುದನ್ನು ಆರಂಭಿಸಿದಳು. ಅವನು ಕೆಲಸಕ್ಕೆ ಹೊರಟು ಹೋದ ಮೇಲೆ ರಾಧಾಳನ್ನು ಹಿಡಿದು ಪೀಡಿಸತೊಡಗಿದಳು. ಅವಳಿಗೆ ವಿಶ್ರಾಂತಿ ಕೊಡದೆ ದುಡಿಸತೊಡಗಿದಳು. ‘ಗತಿಯಿಲ್ಲದವರು. ಸ್ವತಂತ್ರವಾಗಿ ಬದುಕಲು ಯೋಗ್ಯತೆ ಇಲ್ಲದವರು!’ ಎಂಬಂಥ ವ್ಯಂಗ್ಯ, ತುಚ್ಛ ಮಾತುಗಳಿಂದ ಗಂಡ ಹೆಂಡತಿಯ ನೆಮ್ಮದಿಯನ್ನು ಎಷ್ಟು ಸಾಧ್ಯವೋ ಅಷ್ಟು ಬಗೆಯಲ್ಲಿ ಕೆಡಿಸಲಾರಂಭಿಸಿದಳು. ರಾಧಾ ಮುಗ್ಧೆ ಮತ್ತು ಸಹನಶೀಲೆ ಹೆಣ್ಣು. ಪತಿಯೇ ಪರದೈವ. ಅವನ ಕುಟುಂಬವೂ ತನಗೆ ಅಷ್ಟೇ ಪೂಜ್ಯವಾದುದು. ಆದ್ದರಿಂದ ತನ್ನಿಂದ ಅವರಿಗೆ ಯಾವುದೇ ರೀತಿಯ ಅಪಚಾರವಾಗದಂತೆ ಅನುಸರಿಸಿಕೊಂಡು ಬಾಳಬೇಕು. ಅದುವೇ ತನಗೂ ತನ್ನ ಕುಟುಂಬಕ್ಕೂ ಶ್ರೇಯಸ್ಸು! ಎಂಬ ತನ್ನಮ್ಮನ ಗುಣ ಸ್ವಭಾವಗಳನ್ನು ತಾನೂ ಮೈಗೂಡಿಸಿಕೊಂಡು ಬಂದಿದ್ದಳು. ಆದ್ದರಿಂದ ಅಕ್ಕ ಅದೇನೇ ಅಂದರೂ ಎಂಥ ಕಿರುಕುಳ ಕೊಟ್ಟರೂ ತುಟಿ ಪಿಟಿಕ್ ಎನ್ನದೆ ಸಹಿಸಿಕೊಳ್ಳುತ್ತಿದ್ದಳೇ ಹೊರತು ಗಂಡನೊಡನೆ ದೂರು ಹೇಳಿ ದುಃಖಿಸುವುದಾಗಲೀ ಬೇರೆ ಮನೆ ಮಾಡುವಂತೆ ಒತ್ತಾಯಿಸುವುದಾಗಲೀ ಮಾಡಿದವಳಲ್ಲ. ಅಂಥ ಆಲೋಚನೆ ಅವಳಲ್ಲಿ ಕೆಲವು ಬಾರಿ ಸುಳಿದಾಡಿದ್ದೂ ಉಂಟು. ಆದರೆ ತಾನು ದುಡುಕಿ ಹಾಗೇನಾದರೂ ಮಾಡಿಬಿಟ್ಟರೆ ಒಡಹುಟ್ಟಿದವರನ್ನು ಅಗಲಿಸಿದ ಶಾಪ ತನಗೆ ತಟ್ಟುವುದು ಖಚಿತ ಎಂದು ಯೋಚಿಸಿ ಭಯದಿಂದ ಸುಮ್ಮನಾಗುತ್ತಿದ್ದಳು. ಗೋಪಾಲನಿಗೂ ಅಣ್ಣ ಅತ್ತಿಗೆಯೆಂದರೆ ಬಹಳ ಆತ್ಮೀಯತೆಯಿತ್ತು. ಮದುವೆಯಾಗಿ ಬಂದ ಆರಂಭದಲ್ಲಿ ಅತ್ತಿಗೆ ಅವನನ್ನು ಮಗನಷ್ಟೇ ಅಕ್ಕರೆಯಿಂದ ನೋಡಿಕೊಳ್ಳುತ್ತಿದ್ದಳು. ಹಾಗಾಗಿ ಅವನಿಗೂ ಅವಳೊಡನೆ ಮಧುರ ಬಾಂಧವ್ಯವಿತ್ತು. ಆದರೆ ತನ್ನ ಅಪ್ಪ ಅಮ್ಮ ತೀರಿಕೊಂಡ ಮೇಲೆ ಅವಳಲ್ಲಾದ ಬದಲಾವಣೆ ಅವನನ್ನು ಅಚ್ಚರಿಗೊಳಿಸಿತ್ತು. ಆ ಕುರಿತು ಕೆಲವು ಬಾರಿ ಯೋಚಿಸಿ ತಳಮಳಗೊಂಡಿದ್ದ. ಆದರೆ ಅವಳು ತಮ್ಮನ್ನು ಮನೆಯಿಂದ ತೊಲಗಿಸಲೆಂದೇ ಹಾಗೆಲ್ಲಾ ವರ್ತಿಸುತ್ತಿದ್ದಾಳೆ ಎಂಬ ಸತ್ಯ ಅವನ ಪೆದ್ದು ಮನಸ್ಸಿಗೆ ಹೊಳೆಯಲಿಲ್ಲ. ಆದ್ದರಿಂದ ಅತ್ತಿಗೆ ತನ್ನ ತಲೆ ಕಂಡ ಕೂಡಲೇ ಏನಾದರೊಂದು ಚುಚ್ಚಿ ಮಾತಾಡಿ ನೋಯಿಸುವುದು, ಅಸಡ್ಡೆ ತೋರಿಸುವುದರ ಬಗ್ಗೆ ಅವನು ದಿವ್ಯ ಮೌನ ತಳೆಯುತ್ತಿದ್ದ. ಆದರೆ ರಾಧಾಳಲ್ಲಿ ಈಗೀಗ ಹಿಂದಿನ ಲವಲವಿಕೆಯಿಲ್ಲದೆ, ದಿನೇದಿನೇ ಅವಳು ಸೊರಗುತ್ತಿದ್ದುದನ್ನು ಕಾಣುತ್ತ ಬಂದವನು ಚಿಂತೆಗೊಳಗಾದ. ಆವತ್ತೊಂದು ದಿನ ಬೆಳಿಗ್ಗೆ ಕೆಲಸಗಾರರನ್ನು ಕೆಲಸಕ್ಕೆ ಹಚ್ಚಿ ಬೇಗನೇ ಮನೆಗೆ ಹಿಂದಿರುಗಿದ. ‘ರಾಧಾ, ದೇವಸ್ಥಾನಕ್ಕೆ ಹೋಗದೆ ಕೆಲವು ವಾರಗಳು ಕಳೆದವಲ್ಲ ಮಾರಾಯ್ತೀ. ಇವತ್ತು ಸ್ವಲ್ಪ ಪುರುಸೋತ್ತು ಮಾಡಿಕೊಂಡು ಬಂದಿದ್ದೇನೆ. ನಡೆ ಹೋಗಿ ಬರುವ’ ಎಂದ. ಕೆಲವು ತಿಂಗಳಿನಿಂದ ಹೊರಗೆಲ್ಲೂ ಹೋಗದೆ ಗಂಡನ ಮನೆಯಲ್ಲಿ ಜೀತದಾಳಿನಂತೆ ದುಡಿಯುತ್ತ ಸೋತುಹೋಗಿದ್ದ ರಾಧಾಳಿಗೆ ಗಂಡ ಇಂದು ತನ್ನ ಇಷ್ಟದೇವತೆ ಮಹಾಕಾಳಿಯಮ್ಮನ ಸನ್ನಿಧಿಗೆ ಕರೆದೊಯ್ಯುತ್ತೇನೆಂದುದು ಬಹಳ ಸಂತೋಷವಾಯಿತು. ‘ಆಯ್ತುರೀ, ಈಗಲೇ ಹೊರಟೆ!’ ಎಂದವಳು ತರಾತುರಿಯಲ್ಲಿ ಸ್ನಾನ ಮಾಡಿ ತನ್ನ ಮದುವೆಯಲ್ಲಿ ತವರಿನಿಂದ ಉಡುಗೊರೆ ಬಂದಿದ್ದ ಹೊಸ ಕಾಟನ್ ಸೀರೆಯೊಂದನ್ನು ಉಟ್ಟು ಸರಳವಾಗಿ ಸಿಂಗರಿಸಿಕೊಂಡು ಹೊರಟಳು. ದೇವಸ್ಥಾನಕ್ಕೆ ಹೋಗಿ ಗಂಡನ ಹೆಸರಿನಲ್ಲಿ ಅಮ್ಮನವರಿಗೆ ಮಂಗಳಾರತಿ ಸೇವೆಯನ್ನು ನೀಡಿ, ಹಣ್ಣುಕಾಯಿ ಮಾಡಿಸಿದಳು. ಗಂಡ ಹೆಂಡತಿ ಇಬ್ಬರೂ ಮಹಾಕಾಳಿಯಮ್ಮನೊಡನೆ ಭಕ್ತಿಯಿಂದ ತಮ್ಮ ಮನೋಭಿಲಾಷೆಗಳನ್ನು ನಿವೇದಿಸಿಕೊಂಡು ಸಾಂಷ್ಟಾಂಗ ನಮಸ್ಕರಿಸಿದ ನಂತರ ಅಮ್ಮನವರಿಂದ ಅಭಯ ದೊರಕಿದಂಥ ಪ್ರಸನ್ನತೆ ಇಬ್ಬರಲ್ಲೂ ಮೂಡಿತು. ಅರ್ಚಕರಿಂದ ಪ್ರಸಾದ ಪಡೆದು ಗರ್ಭಗುಡಿಯೆದುರಿನ ಸಂಪಿಗೆ ವನದೊಳಗೆ ಹೋಗಿ ಕುಳಿತರು. ಗೋಪಾಲನೇ ಮೌನ ಮುರಿದ. ‘ಯಾಕೆ ರಾಧಾ ಏನಾಗಿದೆ ನಿನಗೆ? ಮನೆಯಲ್ಲಿ ನೀನು ಮುಂಚಿನಂತೆ ನಗುನಗುತ್ತ ಓಡಾಡದೆ ಎಷ್ಟು ದಿನಗಳಾದವು? ಹೊಟ್ಟೆಗಾದರೂ ಸರಿಯಾಗಿ ತಿಂತಿಯೋ ಇಲ್ವೋ? ಎಷ್ಟೊಂದು ಸೊರಗಿ ಹೋಗಿದ್ದಿ ನೋಡು. ಹುಷಾರಿಲ್ವಾ ಅಥವಾ ಬೇರೇನಾದರೂ ಚಿಂತೆ ಮಾಡುತ್ತಿದ್ದೀಯಾ, ಏನಾಯ್ತೆಂದು ನನ್ನ ಹತ್ತಿರವಾದರೂ ಹೇಳಬೇಕಲ್ವಾ ನೀನು?’ ಎಂದು ಆಕ್ಷೇಪಿಸಿದ. ರಾಧಾಳಿಗೆ ದುಃಖ ಒತ್ತರಿಸಿ ಬಂತು. ಮುಖವನ್ನು ಬೇರೆಡೆ ತಿರುಗಿಸಿಕೊಂಡು, ‘ಛೇ! ಹಾಗೇನಿಲ್ಲರೀ. ಚೆನ್ನಾಗಿಯೇ ಇದ್ದೇನಲ್ಲ. ನೀವು ಸುಮ್ಮನೆ ಏನೇನೋ ಯೋಚಿಸುತ್ತಿದ್ದೀರಷ್ಟೇ’ ಎಂದು ಬಲವಂತದ ನಗು ತಂದುಕೊಳ್ಳುತ್ತ ಅಂದಳು. ಗೋಪಾಲ ಅವಳ ಕಣ್ಣುಗಳು ಒದ್ದೆಯಾದುದನ್ನು ನೋಡಿದ. ಅವನ ಮನಸ್ಸು ಹಿಂಡಿತು. ‘ನೋಡು ರಾಧಾ, ನಾವು ದೇವಿಯ ಸನ್ನಿಧಿಯಲ್ಲಿ ಕುಳಿತಿದ್ದೇವೆ. ಸುಳ್ಳು ಹೇಳಬೇಡ. ನಿನ್ನ ಕಣ್ಣೀರೇ ಹೇಳುತ್ತದೆ, ನೀನು ನನ್ನೊಡನೆ ಏನನ್ನೋ ಮುಚ್ಚಿಡುತ್ತಿದ್ದಿ ಅಂತ. ಹೆದರ ಬೇಡ. ಸತ್ಯ ಹೇಳು!’ ಎಂದು ಮೃದುವಾಗಿ ಕೇಳಿದ. ರಾಧಾ ಮೊದಲಿಗೆ ವಿಷಯ ಹೇಳಲು ಹಿಂಜರಿದಳು. ಆದರೆ ಗಂಡನ ಒತ್ತಾಯ ಅವಳಿಂದ ಸತ್ಯವನ್ನು ಹೊರಡಿಸಿತು. ಆದ್ದರಿಂದ ಅತ್ತಿಗೆಯ ಚುಚ್ಚು ಮಾತುಗಳನ್ನೂ ಅವಳು ದಿನವಿಡೀ ನೀಡುತ್ತಿದ್ದ ಕಿರುಕುಳವನ್ನೂ ಒಂದೊಂದಾಗಿ ವಿವರಿಸುತ್ತ ಅತ್ತಳು. ಗೋಪಾಲ ಅವಕ್ಕಾದ. ತನ್ನ ಅತ್ತಿಗೆ ತುಂಬಾ ಒಳ್ಳೆಯವಳು. ಹಾಗಾಗಿ ಅವಳೆಂದೂ ತನ್ನ ಹೆಂಡತಿಯನ್ನು ಹಿಂಸಿಸುವ, ಶೋಷಿಸುವ ಮಟ್ಟಕ್ಕಿಳಿಯುವವಳಲ್ಲ ಎಂದೇ ಅವನು ಭಾವಿಸಿದ್ದ. ಆದರೆ ಕೇವಲ ಆರು ಕೋಣೆಯ ಒಂದು ಮನೆಯೂ ಐದು ಸೆಂಟ್ಸಿನಷ್ಟು ಜಾಗವೂ ಯಾವ ಸಂಬಂಧವನ್ನೂ ಹರಿದು ಚಿಂದಿ ಮಾಡಬಲ್ಲದು ಎಂಬ ಸತ್ಯವು ಅವನಿಗೆ ತಿಳಿಯಲೇ ಇಲ್ಲ! ಹಾಗಾಗಿ ಅಣ್ಣ ಅತ್ತಿಗೆಯ ಮೇಲೆ ಅವನಿಗೆ ಜಿಗುಪ್ಸೆ ಹುಟ್ಟಿತು. ‘ನನ್ನನ್ನು ಕ್ಷಮಿಸು ರಾಧಾ. ಇಷ್ಟೆಲ್ಲ ನನ್ನ ಗಮನಕ್ಕೆ ಬರಲೇ ಇಲ್ಲ ನೋಡು! ಅಣ್ಣ, ಅತ್ತಿಗೆಯ ಮೇಲೆ ನಾನು ಇಟ್ಟುಕೊಂಡಿದ್ದ ಕುರುಡು ನಂಬಿಕೆ, ಪ್ರೀತಿಯೇ ಇಷ್ಟಕ್ಕೆಲ್ಲ ಕಾರಣವಾಯಿತೇನೋ. ನನ್ನನ್ನೇ ನಂಬಿ ಬಂದವಳು ನೀನು. ನಿನಗೆ ಸುಖವಿಲ್ಲದ ಆ ಮನೆಯಿನ್ನು ನನಗೂ ಬೇಡ, ಅವರ ಸಂಬಂಧವೂ ಬೇಡ. ನಿನ್ನ ದುಃಖಕ್ಕೆ ಇನ್ನು ಮುಂದೆ ನಾನು ಅವಕಾಶ ಕೊಡುವುದಿಲ್ಲ. ಆದಷ್ಟು ಬೇಗ ಬೇರೆ ಮನೆ ಮಾಡುತ್ತೇನೆ. ಹೊರಟು ಹೋಗುವ’ ಎಂದು ಹೆಂಡತಿಯನ್ನು ಸಂತೈಸಿದ. ಆದರೆ ರಾಧಾಳಿಗೆ ಅವನ ನಿರ್ಧಾರ ಕೇಳಿ ಆತಂಕವಾಯಿತು. ‘ಅಯ್ಯಯ್ಯೋ, ಮನೆ ಬಿಟ್ಟು ಹೋಗುವುದೆಲ್ಲ ಬೇಡ ಮಾರಾಯ್ರೇ. ಯಾವುದೋ ಚಿಂತೆ, ಬೇಸರದಿಂದ ಅವರು ಹಾಗೆಲ್ಲಾ ನಡೆದುಕೊಳ್ಳುತ್ತಿರಬಹುದು. ಅದನ್ನೆಲ್ಲ ನಾವು ತಲೆಗೆ ಹಚ್ಚಿಕೊಳ್ಳದಿದ್ದರಾಯ್ತು. ಇವತ್ತಲ್ಲ ನಾಳೆ ಸರಿ ಹೋದಾರು!’ ಎಂದಳು ದುಗುಡದಿಂದ. ತನ್ನ ಹೆಂಡತಿಯ ಒಳ್ಳೆಯ ಮನಸ್ಸನ್ನು ಕಂಡು ಗೋಪಾಲನಿಗೆ ಹೆಮ್ಮೆಯೆನಿಸಿತು. ಆದರೆ ಅವನು ಪ್ರತ್ಯೇಕ ಸಂಸಾರ ಹೂಡಲು ನಿರ್ಧರಿಸಿಯಾಗಿತ್ತು. ಆದ್ದರಿಂದ, ‘ನಿನ್ನ ಆತಂಕ ನನಗೂ ಅರ್ಥವಾಗುತ್ತದೆ ರಾಧಾ. ಅಂಥದ್ದೇನೂ ಆಗುವುದಿಲ್ಲ. ಏನೇನೋ ಯೋಚಿಸಬೇಡ. ಮನೆಬಿಟ್ಟು ಹೋಗುವಾಗ ಅಣ್ಣ, ಅತ್ತಿಗೆಯೊಂದಿಗೆ ನಿಷ್ಠೂರ ಕಟ್ಟಿಕೊಂಡು ಹೋಗದಿದ್ದರಾಯ್ತು. ಸ್ವಲ್ಪ ಕಾಲವಷ್ಟೆ. ನಂತರ ಅವರಿಗೂ ತಮ್ಮ ತಪ್ಪಿನರಿವಾಗಬಹುದು. ಅಣ್ಣ ಒಳ್ಳೆಯವನು. ಅವನಿಗೆ ಬೇಸರವಾದರೂ ಹೋಗುವುದು ಅನಿವಾರ್ಯ. ಹಳಸಿಹೋದ ಸಂಬಂಧಗಳೊಡನೆ ಬದುಕುವುದು ಬಹಳ ಕಷ್ಟ!’ ಎಂದು ಅವಳನ್ನು ಸಮಾಧಾನಿಸಿದ. ಗಂಡನ ಮಾತು ರಾಧಾಳಿಗೂ ಸರಿಯೆನಿಸಿತು. ಮೌನವಾಗಿ ಸಮ್ಮತಿಸಿದಳು. ಗೋಪಾಲ ಅಂದುಕೊಂಡಂತೆಯೇ ಒಂದು ವಾರದೊಳಗೆ ಅಣ್ಣ, ಅತ್ತಿಗೆಯೊಡನೆ ಗೌರವದಿಂದ ಬೀಳ್ಗೊಂಡ. ತಮ್ಮನ ನಿರ್ಧಾರದಿಂದ ಅಣ್ಣ ಮೊದಲಿಗೆ ಅವಕ್ಕಾದಂತೆ ತೋರಿದ. ಗೋಪಾಲ ಹೊರಟುವ ಹೊತ್ತಲ್ಲಿ ಅವನ ಕಣ್ಣಾಲಿಗಳು ತುಂಬಿದವು. ಆದರೆ ಅವನು ಅವರನ್ನು ತಡೆಯುವ ಮನಸ್ಸು ಮಾಡಲಿಲ್ಲ. ಏಕೆಂದರೆ ಅವನ ಹೆಂಡತಿ ಹಿಂದಿನ ದಿನವೇ, ‘ನೋಡಿ ಮಾರಾಯ್ರೇ, ಅವರು ಬೇರೆ ಹೋಗುವ ವಿಷಯದಲ್ಲಿ ನೀವೇನಾದರೂ ತಕರಾರೆತ್ತಿದಿರೋ ಜಾಗ್ರತೆ! ನಿಮ್ಮ ಈಗಿನ ಗತಿಗೋತ್ರವಿಲ್ಲದ ಸಂಪಾದನೆಯಿಂದ ಮುಂದೆ ನಿಮ್ಮ ಹೆಂಡತಿ ಮಕ್ಕಳು ಗೆರಟೆ ಹಿಡಿದು ಭಿಕ್ಷೆ ಬೇಡಬೇಕಾದೀತು. ಎಚ್ಚರವಿಟ್ಟುಕೊಳ್ಳಿ!’ ಎಂದು ಆ ಸಂಬಂಧದ ಚಿಗುರನ್ನಲ್ಲೇ ಚಿವುಟಿ ಬಿಟ್ಟಿದ್ದಳು. ಆದ್ದರಿಂದ ತಮ್ಮನ ಸಂಸಾರವು ಹೊಸ್ತಿಲು
ಬದಲಾಗುತ್ತ ಹೋದ ಅವಳ ದೇವರು
ಬದಲಾಗುತ್ತ ಹೋದ ಅವಳ ದೇವರು ಎಂ. ಆರ್. ಅನಸೂಯ ಅವಳು ಏಳೆಂಟು ವರ್ಷದವಳಿದ್ದಾಗ ಅಮ್ಮ ಹೇಳಿದ್ದು ಕೇಳಿದಾಗ ದೇವರೆಂದರೆ ಭಕ್ತಿಯಿಂದ ಕೇಳಿದರೆ ಸಾಕು ಕೇಳಿದ್ದನ್ನೆಲ್ಲಾ ಕೊಡುವಂಥಾ ಸರ್ವಶಕ್ತನೆಂಬ ನಂಬಿಕೆ. ತಾಯಿಯ ಕೈ ಹಿಡಿದು ನಡೆವ ಮಗುವಿನ ನಂಬಿಕೆ, ಮಳೆ ಬರುವುದೆಂದು ಬೀಜ ಬಿತ್ತನೆ ಮಾಡುವ ರೈತನ ನಂಬಿಕೆ ದೇವರ ಪ್ರಸಾದವೆಂದು ಕಣ್ಣಿಗೊತ್ತಿಕೊಂಡು ತಿನ್ನುವಂಥ ಭಕ್ತರ ನಂಬಿಕೆ. ಭಕ್ತಿಯೆಂದರೆ ಹೇಗಿರಬೇಕು ಎಂಬುದಕ್ಕೆ ಅಮ್ಮನ ಮಾತೇ ವೇದವಾಕ್ಯ.ದಾಸವಾಳ ಹಾಗೂ ಗಿಡದ ಮೇಲೆ ಮೊಸರು ಚೆಲ್ಲಿದಂತೆ ಮೈತುಂಬ ಹೂ ಬಿಟ್ಟ ನಂದಿ ಬಟ್ಟಲ ಹೂಗಳನ್ನು ಬಿಡಿಸಿ ತಂದು ಮಾಲೆಯನ್ನು ಕಟ್ಟಿ ಪುಟ್ಟ ದೇವರ ಗೂಡನ್ನು ಒರೆಸಿ ಸಾರಿಸಿ ದೇವರ ಭಾವ ಚಿತ್ರಗಳಿಗೆ ನಂದಿ ಬಟ್ಟಲ ಹೂವಿನ ಹಾರ ಹಾಕಿ, ದೇವರ ವಿಗ್ರಹಗಳಿಗೆ ದಾಸವಾಳ ಹೂಗಳನ್ನು ಮುಡಿಸಿ, ಹಣತೆ ಹಚ್ಚಿ ಕೈ ಮುಗಿದು ನಿಂತು ಕಣ್ಮುಚ್ಚಿ ಚಿತ್ರ ವಿಚಿತ್ರ ಬೇಡಿಕೆ ಗಳನ್ನಿಡುವುದು ಏಕೆಂದರೆ ದೇವರು ಸರ್ವಶಕ್ತ ಹಾಗೂ ದಯಾಮಯಿ ! ಆ ಮುಗ್ಧ ಮನಕ್ಕೆ ಅದೊಂದು ತನ್ಮಯಗೊಳಿಸುವ ಆಪ್ಯಾಯಮಾನವಾದಂಥ ಪ್ರೀತಿಯ ಕೆಲಸ. ಬೇಡಿಕೆಗಳು ಈಡೇರದಿದ್ದರೂ ದೇವರನ್ನೇನು ದೂರಲಿಲ್ಲ ಕಡಿಮೆಯಾಗದ ಭಕ್ತಿ ನಿಷ್ಠೆ. ಏಕೆಂದರೆ ತನ್ನ ಭಕ್ತಿಯಲ್ಲೇ ಏನೋ ಕೊರತೆಯೆಂಬ ಭಾವವಷ್ಟೆ. ಗಣೇಶೋತ್ಸವದ ಹಾಗು ರಾಮನವಮಿಯ ಹರಿಕಥೆಗಳನ್ನು ನಿದ್ದೆಮಾಡದೆ ಕೇಳಿದ ಕಥೆಗಳು ಇದಕ್ಕೆ ಪೂರಕ. ಪ್ರತಿ ನವರಾತ್ರಿಯಲ್ಲಿ ಅಮ್ಮನೂ ಅನೂಚಾನವಾಗಿ ಮಾಡಿದ ದೇವಿ ಮಹಾತ್ಮೆಪಾರಾಯಣವನ್ನು ಬಾಲ್ಯದಿಂದಲೆ ಮುಂದುವರೆಸಿದಳು ಕೌಮಾರ್ಯದ ತನಕ ಸೊಗಸಾದ ಬದುಕಿನಿಂದಾಗಿ ಎಲ್ಲ ಚಂದವೇ.ಒರಗಲು ಹೆತ್ತವರ ಹಾಗೂ ಒಡಹುಟ್ಟಿದವರ ಹೆಗಲು.ಮುಂದಿನ ಹಂತಗಳಲ್ಲಿ ಅವಳ ಬದುಕು ಸುಖದ ಸುಪ್ಪತ್ತಿಗೆಯಾಗಿರಲಿಲ್ಲ. ಬದುಕು ಬಂದಂತೆ ಸ್ವೀಕರಿಸದೆ ಗತ್ಯಂತರವಿಲ್ಲ. ಬದುಕಲ್ಲಿ ಬಂದ ನೋವು,ಅವಮಾನ,ತಿರಸ್ಕಾರಗಳನ್ನೆದುರಿಸುತ್ತಲೇ ಗಟ್ಟಿಯಾದಳು.ಬದುಕಕಲಿಸಿದ ಪಾಠಗಳಿಗೆ ಋಣಿಯಾದಳು. ಒಂಟಿಯಾಗಿ ಅಸಹಾಯಕಳಾಗಿ ಸೋತಾಗ ಕಣ್ಣೀರು ಹಾಕುತ್ತ ದೇವರ ಮುಂದೆ ಕೂತು ಕ್ಷಣಿಕ ನೆಮ್ಮದಿಯ ಕಂಡವಳು. ಎಂತಹ ಸೋಲಿನಲ್ಲು ಕಂಗಾಲಾಗದ ಸ್ವಾಭಿಮಾನಿಯಾದ ಅವಳ ಅವಿರತ ಶ್ರಮಕ್ಕೆ ಹಾಗು ಬಿಡದ ಪ್ರಯತ್ನಗಳಿಗೆ ಅವಳ ದೇವರು ಜೊತೆಗಿದ್ದಾನೆಂಬ ಭರವಸೆಯ ಭಾವವೊಂದೇ ಸಾಕು ಅವಳಿಗೆ ಹತ್ತಾಳಿನ ಬಲ ಕೊಡುತ್ತಿತ್ತು.ತನ್ನ ಗುರಿ ಮುಟ್ಟುವ ತನಕ ಅವಳಿಗೆ ಅದೇ ಧ್ಯಾನ ಅದೇ ಪ್ರಪಂಚ. ಅವಳ ದೇವರು ಮಂದಿರದಲ್ಲಿರದೆ ಅವಳು ತೊಡಗಿದ ಕಾಯಕದಲ್ಲಿ ಕಾಣುತ್ತಿದ್ದ. ಜ್ಞಾನ ದೇಗುಲವಾದ ಶಾಲೆಯ ಶಿಕ್ಷಕಿಯಾಗಿ ಸೇವೆ ಸಲ್ಲಿಸುವ ಅವಕಾಶವೊದಗಿದ್ದು ತನ್ನ ಸುಕೃತವೆಂದೇ ಭಾವಿಸಿದಳು. ಸರ್ಕಾರಿ ಶಾಲೆಯ ಬಡ ಮಕ್ಕಳನ್ನು ದೇವರ ಮಕ್ಕಳೆಂದೇ ಭಾವಿಸಿ ಪ್ರಾಮಾಣಿಕತೆ ಹಾಗೂ ಅರ್ಪಣಾ ಭಾವದಿಂದ ಕಲಿಸಿದಳು. ಅವಳೆಂದು ಗಂಟೆಗಟ್ಟಲೆ ಪೂಜೆ ಮಾಡಲೇ ಇಲ್ಲ.ಅವಳ ನಂಬಿಕೆಯ ದೇವರ ಮುಂದೆ ಕೈಮುಗಿದು ಕ್ಷಣ ಕಾಲ ಕಣ್ಮುಚ್ಚಿದರೆ ಸಾಕಷ್ಟೆ. ಅಶಕ್ತರಿಗೆ ಕೈಲಾದ ಸಹಾಯ, ಹಸಿದ ಹೊಟ್ಟೆಗೆ ಅನ್ನವಿಡುತ್ತ ಅನ್ನಗಳಿಕೆಯ ದಾರಿ ತೋರುವುದು ಅವಳ ದೇವರಿಗೆ ಇಷ್ಟವೆಂಬ ಸ್ವಷ್ಟ ಅರಿವಿತ್ತು. ಪುಣ್ಯ ಕ್ಷೇತ್ರಗಳ ಯಾತ್ರೆಯೆಂದರೆ ಪ್ರವಾಸದ ಅನುಭವದೊಂದಿಗೆ ದೈವ ದರ್ಶನವಷ್ಟೆ. ಕಾಶಿಯವಿಶ್ವನಾಥನ ದರ್ಶನ ಭಾಗ್ಯಕ್ಕಿಂತ ಅವಳು ಕಾಯುತ್ತಿರುವುದು ಜೀವ ಚೈತನ್ಯದಾಯಿನಿಯು ಜೀವನದಿಯಾದ ಗಂಗೆಯ ವಿಶಾಲ ಹರಿವನ್ನು ಕಣ್ತುಂಬಿ ಕೊಳ್ಳುವ ಧನ್ಯತಾ ಭಾವದ ಅಮೃತ ಘಳಿಗೆಗಾಗಿ. ಅವಳೇ ಕೈಯಾರೆ ಬೆಳೆಸಿದ ಹೂ ಗಿಡಗಳ ಹೂ ಬಿಡಿಸಿ ಮನೆಯಲ್ಲಿನ ದೇವರನ್ನು ಅಲಂಕರಿಸಿ ನೋಡಿ ತೃಪ್ತಿ ಪಡುವುದು ಇಂದಿಗೂ ಅವಳಿಗೆ ಇಷ್ಟವಾದ ಕೆಲಸವೇ. ಮನೆಯಲ್ಲಿ ಪೂಜಿಸುವಾಗ ಆಗುವ ತಲ್ಲೀನತೆಯನ್ನು ಅರೆಗಳಿಗೆಯಾದರೂ ಅನುಭವಿಸಿದ ಅವಳಿಗೆ ಇನ್ಯಾವ ಜಾತ್ರೆ, ಯಾತ್ರೆಗಳ ಜನ ಜಂಗುಳಿಯ ನಡುವೆ ಅಂಥಾ ಏಕಾಗ್ರತೆ ಲಭ್ಯವಾಗಲೇ ಇಲ್ಲ. ಜಿ.ಎಸ್.ಶಿವರುದ್ರಪ್ಪ ನವರ ಕವಿತೆಯಲ್ಲಿ ಕಾಣುವ “ಎಲ್ಲೊ ಹುಡುಕಿದೆ ಇಲ್ಲದ ದೇವರ ಕಲ್ಲು ಮಣ್ಣುಗಳ ಗುಡಿಯೊಳಗೆ ಇಲ್ಲೇ ಇರುವ ಪ್ರೀತಿ ಸ್ನೇಹಗಳ ಗುರುತಿಸದಾದೆನು ನಮ್ಮೊಳಗೆ” ಎಂಬ ಸಾಲುಗಳನ್ನು ಅಂತರ್ಗತ ಮಾಡಿ ಕೊಂಡವಳು ಜನ ಮಾನಸರ ನಂಬಿಕೆಯ ಶ್ರದ್ಧಾ ಕೇಂದ್ರಗಳಾಗಿರುವ ಮಂದಿರಗಳ ವಿರೋಧಿಯೇನಲ್ಲ. ಮಂದಿರದಲ್ಲಿನ ಆದಿ ಶಕ್ತಿಗೆ ಕೈ ಮುಗಿವಂತೆ ಚರ್ಚ್ ಗಳಲ್ಲಿನ ಏಸುಮಾತೆಗೂ ಕೈಮುಗಿದು ನಿಂತವಳು. ಇಡೀ ಪ್ರಪಂಚವನ್ನೆ ಆಳುವಂಥ ಅತಿಮಾನುಷ ಶಕ್ತಿಯೊಂದಿದೆ ಎಂಬುದು ಅವಳ ಅಚಲ ನಂಬಿಕೆ. ಪ್ರಕೃತಿಯೇ ದೇವರೆನ್ನುತ್ತ ತನ್ನ ಇತಿಮಿತಿಯಲ್ಲೇ ಬೀದಿ ಗಿಡಗಳಿಗೆ ನೀರೆರೆದು ಗೊಬ್ಬರ ಸುರಿದು ಬೆಳೆಸುತ್ತ ತೃಪ್ತಿ ಕಂಡವಳು.ತಾನು ಬೆಳೆಸಿದ ಗಿಡಗಳಲ್ಲಿ ತನ್ನೊಂದಿಗೆ ಪಕ್ಷಿ ಪ್ರಾಣಿಗಳ ಪಾಲಿದೆ ಎಂಬುದನ್ನವಳು ಅರಿತವಳು. ಹಸಿದ ಬೀದಿನಾಯಿಗೆ ಉಣಿಸಿಡುವ ಹಾಗೆಯೇ ಬೀದಿ ಬದಿಯ ಮರಗಳಿಗೆ ನೀರೆರೆಯುತ್ತಾಳೆ ಹರಿಜನರೆಂದು ಕರೆಯುತ್ತ ಹರಿದರ್ಶನಕ್ಕೆಡೆ ಮಾಡಿಕೊಡದ ಅಸ್ಮೃಶ್ಯತಾ ಆಚರಣೆಗೆ ವಿರೋಧವಿದೆ. ಅವಳ ದೇವರು ಜೀವಪರ ಕಾಳಜಿಯುಳ್ಳ ದೇವನೂರರ ಗ್ರಾಮ ದೇವತೆ ” ಮನೆ ಮಂಚಮ್ಮ” ನಲ್ಲಿದ್ದಾನೆ. ಜೀವಪರವಾದ ಮಾನವೀಯ ಮನಸ್ಸುಗಳಿಗೆ ದೇವರೊಲಿಯುತ್ತಾನೆಂಬುದು ಅವಳ ಗ್ರಹಿಕೆ. ಆದ್ದರಿಂದಲೇ “ತನು ಕರಗದವರಲ್ಲಿ ಪುಷ್ಪವನೊಲ್ಲೆಯಯ್ಯಾ ನೀನು ಮನ ಕರಗದವರಲ್ಲಿ ಗಂಧಾಕ್ಷತೆಯನೊಲ್ಲಯ್ಯಾ ನೀನು” ಎಂಬ ಅಕ್ಕನ ವಚನವನ್ನು ಅವಳೆಂದೂ ಮರೆಯಳು “ಬದಲಾವಣೆ ಜಗದ ನಿಯಮ” ವೆನ್ನುವಂತೆ ನಮ್ಮಲ್ಲಿನ ಚಿಂತನೆಗಳು ನಿಂತ ನೀರಾಗದೆ ಹರಿಯುವ ಹೊಳೆಯಾಗ ಬೇಕು. ಹೂ ಅರಳಿ ದಂತೆ ವಿಕಾಸವಾಗ ಬೇಕು. ಬಾಲ್ಯದ ಅವಳ ದೇವರಂತೆ ಮಂದಿರದ ಕೂತು ಪೂಜೆ ಪುರಸ್ಕಾರ ಇತ್ಯಾದಿಗಳಿಗೆ ಒಲಿಯುವವನಲ್ಲ ಈಗ ಆವಳ ದೇವರು ಅಶಕ್ತರ, ದೀನ ದಲಿತರ ಸೇವೆಗೆ ಒಲಿಯುವ, ಪರಿಸರದ ವಿನಾಶವನ್ನು ತಡೆಗಟ್ಟುವುದನ್ನು ಮೆಚ್ಚುವ ದೇವರು. ಹೀಗೆ ಅವಳ ದೇವರ ಸ್ವರೂಪವು ಕೂಡಾ ಬದಲಾಗಿದೆ ******************************
ಬದಲಾಗುತ್ತ ಹೋದ ಅವಳ ದೇವರು Read Post »
ಕೇಂದ್ರ ಕೃಷಿ ಕಾಯ್ದೆ ರೈತರಿಗೆ ಮಾರಕ ಹೇಗೆ?
ಕೃಷಿ ರಂಗದ ಸಮಸ್ಯೆಗಳಿಗೆ ಪರಿಹಾರವಿರುವುದು ವಿಕೆಂದ್ರೀಕೃತ ಅರ್ಥ ನೀತಿಯಲ್ಲಿ ; ಸಹಕಾರಿ ತತ್ವದಲ್ಲಿ. ಬೇಸಾಯ, ಉತ್ಪಾದನೆ , ಸಂಗ್ರಹಣೆ ಮತ್ತು ಮಾರಾಟ ವ್ಯವಸ್ಥೆಯನ್ನು ಸಹಕಾರಿ ರಂಗದಲ್ಲೇ ಕೈಗೊಳ್ಳುವುದು. ಕೃಷಿ ಪೂರಕ ಮತ್ತು ಕೃಷಿ ಆಧಾರಿತ ಉದ್ದಿಮೆಗಳನ್ನು ಗ್ರಾಮೀಣ ಭಾಗದಲ್ಲಿ ಪ್ರಾರಂಭಿಸಲು ಪ್ರೋತ್ಸಾಹ ನೀಡುವುದರಿಂದ. ಕೇಂದ್ರೀಕೃತ ಅರ್ಥವ್ಯವಸ್ಥೆಯಾದ ಬಂಡವಾಳವಾದಿ ನೀತಿಯನ್ನು ಕೈಬಿಡದೇ ರೈತರ ಬದುಕನ್ನು ಹಸನಾಗಿಸಲು ಸಾಧ್ಯವಾಗದು
ಕೇಂದ್ರ ಕೃಷಿ ಕಾಯ್ದೆ ರೈತರಿಗೆ ಮಾರಕ ಹೇಗೆ? Read Post »
ಆವರ್ತನ
ಇದು ಗುರುರಾಜ್ ಸನಿಲ್ ಅವರ ‘ಆವರ್ತನ’ ಎಂಬ ಸಾಮಾಜಿಕ ಕಾದಂಬರಿ. ಪ್ರಸ್ತುತ ಕಾಲಘಟ್ಟದ ಸಮಾಜದಲ್ಲಿ ನಮ್ಮ ಕೆಲವು ನಂಬಿಕೆ, ಆಚರಣೆಗಳು ಯಾವ ಯಾವ ರೀತಿಗಳಲ್ಲಿ ಜನಜೀವನ ಶೋಷಣೆಗೂ, ಹಸಿರು ಪರಿಸರ ಮತ್ತು ವನ್ಯಜೀವರಾಶಿಗಳ ಮಾರಣಹೋಮಕ್ಕೂ ಕಾರಣವಾಗುತ್ತಿವೆ ಎಂಬುದನ್ನು ಬಹಳ ಸಮೀಪದಿಂದ ಕಾಣುತ್ತ ಬಂದವರು ಇವರು.. ಹಾಗಾಗಿ ಅದೇ ಕಥಾವಸ್ತುವನ್ನು ಕಾದಂಬರಿ ಪ್ರಕಾರದಲ್ಲೂ ಆಯ್ದುಕೊಂಡು ಜನಜಾಗ್ರತಿ ಮೂಡಿಸುವುದು ಅಗತ್ಯ ಎಂದು ತೋರಿ ಈ ಕೃತಿಯನ್ನು ರಚಿಸಿದ್ದಾರೆ. ಇದು ಪುಸ್ತಕರೂಪದಲ್ಲಿ ಪ್ರಕಟವಾಗುವ ಮುನ್ನ ಸಂಗಾತಿಯ ಓದುಗರನ್ನು ತಲುಪಲೆಂದು ಪ್ರತಿ ಬಾನುವಾರ ಇದನ್ನು ಕಂತುಗಳಲ್ಲಿ ಪ್ರಕಟಿಸಲಾಗುತ್ತಿದೆ. ದಾರಾವಾಹಿ ಕ್ಷೇತ್ರದಲ್ಲಿ ಇದು ಸಂಗಾತಿಯ ಮೊದಲ ಪ್ರಯತ್ನ ಓದುಗರು ತಮ್ಮ ಅನಿಸಿಕೆ ತಿಳಿಸಬೇಕೆಂದು ಕೋರುತ್ತೇವೆ
ಪ್ರೇಮಪತ್ರ ಸ್ಪರ್ದೆ
ಪ್ರೇಮಪತ್ರ ಸ್ಪರ್ದೆ ಪಂಜು ಅಂತರ್ಜಾಲ ವಾರಪತ್ರಿಕೆ ವತಿಯಿಂದ 2021 ರ ಪ್ರೇಮ ಪತ್ರ ಸ್ಪರ್ಧೆಗೆ ನಿಮ್ಮ ಪ್ರೇಮ ಪತ್ರಗಳನ್ನು ಆಹ್ವಾನಿಸಲಾಗಿದೆ. ನಿಯಮಗಳು: ಪ್ರೇಮ ಪತ್ರ ನಿಮ್ಮ ಸ್ವಂತ ಬರಹವಾಗಿರಬೇಕುಕನಿಷ್ಟ 500 ಪದಗಳ ಬರಹವಾಗಿರಬೇಕುಫೇಸ್ ಬುಕ್ ಮತ್ತು ಬ್ಲಾಗ್ ಸೇರಿದಂತೆ ಬೇರೆಲ್ಲೂ ಪ್ರಕಟವಾಗಿರಬಾರದು.ನಿಮ್ಮ ಬರಹವನ್ನು ಕಳುಹಿಸಿಕೊಡಬೇಕಾದ ಮಿಂಚಂಚೆ: editor.panju@gmail.com, smnattu@gmail.com ಮಿಂಚಂಚೆಯ ಸಬ್ಜೆಕ್ಟ್ ನಲ್ಲಿ “ಪಂಜು ಪ್ರೇಮ ಪತ್ರ ಸ್ಪರ್ಧೆ” ಎಂದು ತಿಳಿಸಲು ಮರೆಯದಿರಿ. ಮಿಂಚಂಚೆಯಲ್ಲಿ ನಿಮ್ಮ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ, ನಿಮ್ಮ ಕಿರು ಪರಿಚಯ ಹಾಗು ಫೇಸ್ ಬುಕ್ ಲಿಂಕ್ ಕಳುಹಿಸಿ.. ಬರಹಗಳು ತಲುಪಬೇಕಾದ ಕೊನೆಯ ದಿನಾಂಕ: 10.02.2021 ಬಹುಮಾನಗಳು: ಮೊದಲ ಬಹುಮಾನ: 3000 ರೂಪಾಯಿ ಎರಡನೇ ಬಹುಮಾನ: 2000 ರೂಪಾಯಿ ಮೂರನೇ ಬಹುಮಾನ: 1000 ರೂಪಾಯಿ ಹಾಗು ತೀರ್ಪುಗಾರರ ಮೆಚ್ಚುಗೆ ಪಡೆದ ಐವರಿಗೆ ಸಮಾಧಾನಕರ ಬಹುಮಾನ ನೀಡಲಾಗುವುದು. ಈ ಪತ್ರಗಳನ್ನು ಪಂಜುವಿನಲ್ಲಿ ಪ್ರಕಟಣೆಗೆ ಬಳಸಿಕೊಳ್ಳುವ ಹಕ್ಕು ‘ಪಂಜು’ಗೆ ಇರುತ್ತದೆ. ***********************************************************************
ಹೀಗೊಂದು ಚಿಂತನೆ.
ಚಿಂತನೆ ಹೀಗೊಂದು ಚಿಂತನೆ. ಗೋನವಾರ ಕಿಶನ್ ರಾವ್ “What is wonderful about great literature is that it transforms the man who reads it towards the condition of the man who wrote, and brings to birth in us also the creative impulse. ~E.M. Forster“ ಬೆಳಗಾಗೆದ್ದು ಕೈಯಲ್ಲಿ ಕಾಫಿ ಕಪ್ಪು ಹಿಡಿದು, ಅಂದಿನ ದಿನ ಪತ್ರಿಕೆ, ತಿರುವಿ ಹಾಕುತ್ತಿದ್ದೇವೆ ಎಂದು ಭಾವಿಸಿಕೊಳ್ಳಿ. ಪುಟ ತಿರುವುತ್ತ ಹೋಗುತ್ತೀದ್ದೀರಿ,ಅಲ್ಲೊಂದು ಕೊಲೆ,ಇಲ್ಲೊಂದು ಸಾವು,ಮಗದೊಂದು ಪುಟದಲ್ಲಿ ಅಪಘಾತ. ಎಲ್ಲದಕ್ಕೂ ನಿರ್ಲಿಪ್ತ ಭಾವ.ಪತ್ರಿಕೆ ಪಕ್ಕಕ್ಕಿಟ್ಟು ಮೊಬೈಲ್ ಕೈಗೆತ್ತಿಗೊಳ್ಳುವಿರಿ ಸಾಮಾಜಿಕ ಜಾಲತಾಣದಲ್ಲಿ ಒಂದು ಸಂದೇಶ. ಶ್ರೀ……….. ಯವರು ಇಂದು ಹೃದಯಾಘಾತದಿಂದ ನಿಧನರಾಗಿದ್ದಾರೆ.ಅನೇಕರ ಮರು ಸಂದೇಶಗಳು.ನೀವು ಸಹ ಒಂದು ಓಂ ಶಾಂತಿ ಎಂದು ಟಂಕಿಸಿ ಮುಂದೆ ಸಾಗುವಿರಿ.ಅಲ್ಲಿಯೂ ನಿರ್ಲಿಪ್ತ ಮನೋಭಾವ ! ಯೋಚಿಸಿ ನೋಡಿ. ಒಂದು ಸಾವಿನ ಸುದ್ದಿ ಮೂರು ವಿಧದ ಪರಿಣಾಮ ಬೀರುತ್ತದೆ ಅಲ್ಲವೆ ? ಸದರಿ ಶ್ರೀ ಯವರ ನಿಧನಕ್ಕೆ ನೇರ ಪರಿಣಾಮ ಹೊಂದಿದವರು ಅವರ ಹತ್ತಿರದ ದೂರದ ಸಂಬಂಧಿಕರು.ಎರಡನೆಯವರು ಆಪ್ತವಲಯ.ಅವರು ಸಾಧ್ಯವಾದರೆ, ದಹನ ಕಾರ್ಯದಲ್ಲಿ ಭಾಗಿಗಳಾಗುವರು. ಅನಾನುಕೂಲ, ಅನಾರೋಗ್ಯದಂತಹ ಬಲವಾದ ಕಾರಣಗಳಿದ್ದರೆ,ದೂರವಾಣಿಗಳ ಮುಖಾಂತರ ಸಂಪರ್ಕಿಸಿ ಸಂತಾಪ ಸೂಚಿಸುವರು.ಈ ಮೂರರನ್ನು ಮೀರಿದವರಿರುತ್ತಾರೆ.ಏನೂ, ಸಂಬಂಧವಿಲ್ಲದವರು. ಪ್ರಪಂಚದ ಒಳಿತು-ಕೆಡುಕುಗಳ ಗೋಜು ಅವರಿಗೆ ಬೇಕಿಲ್ಲ.ತಮ್ಮ ಪಾಡಿಗೆ ತಾವು ಒಂದು ಗುಡ್ ಮಾರ್ನಿಂಗ್, ಗುಡ್ ಇವನಿಂಗ್ ಸಂದೇಶ ಹಾಕುತ್ತ ಹೋಗುತ್ತಿರುತ್ತಾರೆ.ವಿಚಿತ್ರ ಅಲ್ಲವೇ ಯಾಕೆ ಹೀಗೆ ? ಶ್ರೀ ಯವರ ಹೃದಯಾಘಾತದಿಂದ ದಿಂದ ಅವರ ಸಂಬಂಧಿಕರಿಗೆ ಮಾತ್ರ ಕೆಟ್ಟ ಸುದ್ದಿ. ಉಳಿದ ಕೆಲವರಿಗೆ ಅದು ಸುದ್ದಿಯೇ ಅಲ್ಲ.ನಗರದ ಯಾವುದೇ ವಿಸ್ತರಣೆಯಲ್ಲಿ ಉಂಟಾದ ಸಾವಿನ ಸುದ್ದಿ ನಮ್ಮಲ್ಲಿ ಅನೇಕರನ್ನು ನಿರ್ಭಾವುಕರನ್ನಾಗಿ ಮಾಡಬಲ್ಲದು. ಮನಸ್ಸಿಗೆ ಆಪ್ತವಾದ ಕೃತಿಗಳನ್ನು ಕುರಿತು ಯೋಚಿಸುವಾಗ, ಉದಾಹರಣೆಗೆ ಮಹಾಭಾರತ,ರಾಮಾಯಣ ಕಾವ್ಯಗಳಲ್ಲಿ, ಕುಂತಿ ಬೀರಿದ ಪ್ರಭಾವ ಮಾದ್ರಿ ಬೀರಲಿಲ್ಲ. ಸೀತೆ, ದ್ರೌಪದಿ, ಪ್ರಾಮುಖ್ಯರಾದಷ್ಟು ಊರ್ಮಿಳೆ, ಮಾಂಡವಿ,ಶೃತಕೀರ್ತಿ ಆಗಿಯೇ ಇಲ್ಲ. ಊರ್ಮಿಳೆಯ ಹೆಸರು ಅಲ್ಲಿ ಇಲ್ಲಿ ಒಂದಷ್ಟು ಚರ್ಚಿತವಾಗಿದ್ದರೆ, ಮಾಂಡವಿ ಶೃತಕೀರ್ತಿ ಹೆಸರು ಬಹಳಷ್ಟು ಜನ ಕೇಳಿಯೂ ಇರಲಿಕ್ಕಿಲ್ಲ. ಅಭಿಮನ್ಯುವಿನ ಸಾವಿನಷ್ಟು ಘಟೋತ್ಕಚನ ಸಾವು ಕಾಡಿಲ್ಲ. ಉಪಕಾರ್ ಚಿತ್ರದ ನಾಯಕ ಮನೋಜ ಕುಮಾರನ ಮೇಲೆ ತೋರಿದ ಪ್ರೀತಿ ಅನುಕಂಪ ನಮ್ಮ ಊರಿನ ರೈತನ ಮೇಲೆ ತೋರಿದ್ದೇವೆಯೇ ? ಉಹೂಂ! ಸಂದೇಹಗಳ ಸರ ಮಾಲೆ !! ಬೇಂದ್ರೆಯವರ ಕವಿತೆ ‘ರಾಮಾಯಣ’ದ ಈ ಸಾಲುಗಳನ್ನು ನೋಡಿ. ಲಕ್ಷ್ಮಣನಿಗೆ ವನವಾಸವು,ಉರ್ಮಿಳೆ ಕುರುಡುಗಳೆದ ಕ್ಷಣಕ್ಷಣಾ | ಬರಲಿಲ್ಲವು ಲೆಕ್ಕಕ್ಕೆ ವರುಷಗಳು ಹದಿನಾಲ್ಕು ಭಣಭಣಾ| ಭರತನು ಕಣ್ಣಿಗೆ ಕಾಣುವ ಅಳತೆಯೊಳಿದ್ದನು ತಾ ದಿನದಿನಾ| ತಪವು ಭರತಗೂ ಮಾಂಡವಿಗೂ ತಪ, ವಿರಹವೇ ಪಾರಾಯಣಾ | ಶತೃಘ್ನನು ಅರಮನೆಯೊಳಗಿದ್ದರೂ ಶೃತಕೀರ್ತಿಗೂ ರಣರಣಾ | ರಾಮನ ವಿರಹವು ಸೀತಾವಿರಹವು ತುಂಬಿದೆ ರಾಮಾಯಣಾ || ಸಣ್ಣವರತ್ತರೆ ಎಣಿಕೆಗೆ ಬಾರದು ಅಯ್ಯೋ ನಾರಾಯಣಾ || ಸಾಹಿತ್ಯ ಸಂಜೀವಿನಿ ಎಂದರೆ, ಬೇಂದ್ರೆ. ನಮ್ಮೆಲ್ಲರ ಪ್ರತಿ ಸಂದೇಹಗಳಿಗೆ, ಬೇಂದ್ರೆಯವರಲ್ಲಿ ಅವರ ಕವಿತೆಗಳಲ್ಲಿ ಮದ್ದಿದೆ.ಅದು ಬೇಂದ್ರೆ ತಾಕತ್ತು! ಸಾಹಿತ್ಯದ ತಾಕತ್ತು.ನಮ್ಮ ನೋವಿನ ಸಂಗತಿಗಳು ನಮಗೆ ಯಾವಾಗಾದರೂ ಸುಖವಾಗಿ-ಸುಂದರವಾಗಿ ಕಂಡಿವೆಯಾ ? ಅಥವಾ ಅವುಗಳನ್ನು ನಾವು, ಸುಖಿಸಿದ ನೆನಪಿದೆಯೇ ? ಇಲ್ಲವೆಂದಾದಲ್ಲಿ ಭಾರತದ ‘ದ್ರೌಪದಿ’,ರಾಮಾಯಣದ ‘ಸೀತೆ’,ಭಾಗವತದ ‘ಕಯಾದು’ ನಮಗೆ ಯಾಕೆ ಹತ್ತಿರವಾಗುತ್ತಾರೆ. ಈ ಕತೆಗಳು ಸಾಹಿತ್ಯಿಕವಾಗಿ ಸುಂದರ ಎನಿಸಿಕೊಂಡು ಓದಿಸಿಕೊಂಡು ಹೋಗುತ್ತವೆಯೇ ? ಯಾಕಿದ್ದೀತು? ಅದು ಸಾಹಿತ್ಯಕ್ಕಿರುವ ಸಶಕ್ತ ಪದಜಾಲ.ಮತ್ತದರಲ್ಲಿ ಅಡಕವಾಗಿರುವ ಸತ್ಯ.ಸ್ಪಷ್ಟವಾಯಿತಲ್ಲ ! ಒಂದು ಕೃತಿ ಅದು ಗದ್ಯ ಪದ್ಯ ವಿಮರ್ಶೆ ನಾಟಕ ಏನೇ ಆಗಿರಲಿ.ನಮ್ಮನ್ನು ಸೆಳೆಯುವ ಶಕ್ತಿ ಆ ಸತ್ಯಕ್ಕಿದೆ. ಅದೇ ಸಾಹಿತ್ಯದ ಕಾಣ್ಕೆ ಮತ್ತು ಅದರಲ್ಲಿರುವ ನೈಜತೆಗೆ ಹತ್ತಿರವಿರುವ ಪಾತ್ರ, ಪರಿಸರ,ಕಟ್ಟಿಕೊಡುವ ಕಲೆ,ಹಿಡಿದಿಟ್ಟ ಭಾಷೆ. ನೈಜತೆ ಅಥವಾ ನಾವು ಕರೆಯುವ ನಿರ್ಮಲಾಂತಃಕರಣ ಮತ್ತು ಅಷ್ಟೇ ಶುದ್ಧವಾದ ಮನಕ್ಕೆ ನೀಡುವ ಪ್ರೀತಿ. ಈ ರೀತಿಯ ಪ್ರೀತಿಗೆ ಸಮಾನವಾದದ್ದು ಏನಾದರೂ ಇದ್ದೀತೆ ?ಖಂಡಿತ ಇರಲಾರದು.ಒಬ್ಬ ಲೇಖಕ ಬರೆಯುತ್ತಿರುವುದು ನೈಜತೆಯಿಂದ ಕೂಡಿಲ್ಲ ಎಂದು ಓದುಗನ ಅರಿವಿಗೆ ಬಂತೆಂದು ತಿಳಿಯಿರಿ ಅದು ನಮ್ಮ ನೆನಪಿನಿಂದ ಮಾಯ. ಅದು ಆ ಕೃತಿಯ ಮತ್ತು ಆ ಲೇಕಖನ ಸೋಲು ಹೌದು. ಒಂದು ಪುಸ್ತಕ ಓದುತ್ತಿದ್ದೇವೆ.ಅದರ ಚೌಕಟ್ಟು, ವಸ್ತು, ಪಾತ್ರಗಳು ನಮ್ಮನ್ನು ವಿಸ್ಮಯ ಲೋಕಕ್ಕೆ ಕೊಂಡೊಯ್ಯುತ್ತ ತನ್ಮಯತೆ ಮೂಡಿಸಿದರೆ ಅ ಪುಸ್ತಕ ಯಶಸ್ಸು ಕಾಣಬಲ್ಲದು. ನಾಲ್ಕು ಜನರ ಬಾಯಲ್ಲಿ ಅದರ ಮಾತು ಬರಬಹುದು ಚರ್ಚೆಗೆ ಒಳಗಾಗಬಹುದು. ವಿಮರ್ಶಕ ಅದನ್ನು ತನ್ನ ಲೇಖನಗಳಲ್ಲಿ ಮಾದರಿ ಪುಸ್ತಕವಾಗಿ ಬಳಸಬಹುದು. ಎಲ್ಲದಕ್ಕೂ ಮೀರಿ ಒಳ್ಳೆಯ ಮಾರುಕಟ್ಟೆ ಪಡೆಯಬಹುದು. ಒಂದು ವೇಳೆ ಅದೇ ಪುಸ್ತಕದ ಪಾತ್ರಗಳ ಮಿತಿಯನ್ನು ದಾಟಿ ಲೇಖಕನೇ ಮಾತಾಡಿದ್ದರೆ ಅಂತಹ ಕೃತಿಗಳು ಅಪಮೌಲ್ಯ ಹೊಂದುತ್ತವೆ. ಇಲ್ಲಿ ಯಾವುದೇ ಒಬ್ಬ ಬರಹಗಾರ/ಕವಿ ಹೇಳುತ್ತಿರುವುದು ಸ್ವಯಂ ಅವನವೇ ಆಗಿರಬೇಕೆ ? ಅವನ ಕಲ್ಪನೆ, ಪ್ರಯತ್ನಗಳಿಗೆ ಬೆಲೆ ಇಲ್ಲವೇ ? ಅದು ಹಾಗಲ್ಲ . ಅಂತಹ ಕಲ್ಪನೆಯಲ್ಲೂ ಪ್ರಾಮಾಣಿಕತನ ಇದ್ದಾಗಲೇ ಸೃಜನಶೀಲತೆ ಗರಿಗೆದರಲು ಸಾಧ್ಯ. ಇಲ್ಲವಾದರೆ, ಅದು ಒಂದು ರೂಪಾಯಿಗೆ ಒಂದು ಆನೆಯ ಕಥೆ ! ಅಷ್ಟೆ !! ಓದು,ಸಿನೆಮಾ ಧಾರಾವಾಹಿ ಇನ್ನಾವುದೇ ಕಲೆ ಮತ್ತೊಂದು ಏನೇ ಆಗಿರಲಿ ಆನಂದ, ಸಾಮಾನ್ಯ ಜ್ಞಾನ ಅಥವಾ ಏನೋ ಒಂದು ಸಾಹಿತ್ಯಿಕ ಸಂವೇದನೆ ಒದಗಿಸಬೇಕು. ಕಾವ್ಯಕಲೆಯ ಸದ್ಯ ಪ್ರಯೋಜನ ಕವಿ ಸಹೃದಯರಿಬ್ಬರಿಗೂ ಏಕಕಾಲಕ್ಕೆ ಉಂಟಾಗಬೇಕು ಹಾಗಾದಾಗ ಮಾತ್ರವೇ ಸೌಂದರ್ಯದ ಅನುಭೂತಿ ಮತ್ತು ಸಾಹಿತ್ಯದ ಕೊನೆಯ ಮಜಲನ್ನು ತಲುಪಿದ ತೃಪ್ತಿ. ಇವೆಲ್ಲ ಒಂದು ಕೃತಿ/ಲೇಖಕನಿಂದ ಸಿಗದೇ ಹೋದಾಗ, ಅದು ಸಾರಸ್ವತ ವಲಯದಲ್ಲಿ ಕಳೆದು ಹೋಗುತ್ತದೆ. ಒಂದು ಕೃತಿಯಲ್ಲಿರುವ ಒಂದು ಪಾತ್ರ ನಮ್ಮನ್ನು ಚಿಂತನೆಗೆ ಒಳಪಡಿಸುತ್ತದೆ ಅದರಲ್ಲಿ ನಾವೂ ಒಂದು ಪಾತ್ರವಾಗಿ ಹೋಗುತ್ತೇವೆ. ಯಾವುದೋ ದೃಶ್ಯ/ಪ್ಯಾರಾ ನಮ್ಮ ಕಣ್ಣನ್ನು ಹನಿಗೂಡಿಸುವ ತಾಕತ್ತು ಹೊಂದಿರುತ್ತದೆ.ಜೀವಂತವಿರುವ ಮತ್ತು ಸನಿಹದ ಸಂಪರ್ಕ ಇರುವ ಸ್ನೇಹಿತನಿಗಿಂತ, ಕಾರಂತರ ಚೋಮ, ಅನಂತಮೂರ್ತಿಯವರ ಪ್ರಾಣೇಶಾಚಾರ್, ತ್ರಿವೇಣಿ ಯವರ ಕಾವೇರಿ ನಮಗೆ ಬಹಳ ಹತ್ತಿರವಾಗುತ್ತಾರೆ.ಇದು ಹೇಗೆ ?ಒಂದು ಅನಿಸಿಕೆಯ ಪ್ರಕಾರ ನಮ್ಮ ಮನಸ್ಸು ಇದಕ್ಕೆ ಕಾರಣ.ಕಾಲ್ಪನಿಕ ಪಾತ್ರಗಳು,ನಮ್ಮೊಂದಿಗೆ, ಯಾವುದೇ ರೀತಿಯ ಪೈಪೋಟಿಗೆ ಇಳಿಯಲಾರವು ಎನ್ನುವ ಧೈರ್ಯ.ಇನ್ನೂ ಒಂದು ವಿಶಿಷ್ಟ ಲಕ್ಷಣ ಎಂದರೆ ಆ ಪಾತ್ರ ನಾವೂ ಆಗುವ ಸದವಕಾಶ ಇಲ್ಲಿದೆ.ಕನಿಷ್ಠ ಕೆಲವು ಸಮಯವಾದರೂ ನಮ್ಮನ್ನು ನಮ್ಮಿಂದ ದೂರ ಕರೆದೊಯ್ಯುವ ತಾಕತ್ತು ಇರುವುದು.ಇದು ಒಂದು ರೀತಿಯ ಬಯಲು ಆಲಯದೊಳಗೋ ಆಲಯವು ಬಯಲೋಳಗೋ ಎನ್ನುವ ಉಭಯ ರೀತಿಯ ಲೋಕ. ಬದುಕಿನ ಲಕ್ಷಣ.ಸಾಹಿತ್ಯ ಕಲಿಸುವ ಬದುಕು,ಬದುಕು ಕಲಿಸುವ ವಿದ್ಯೆ . ಫ್ಲೋರಿಡಾ ದೇಶದ ಭೌಗೋಳಿಕ ಸಂಗತಿಗಳಿಗಿಂತ, ಅಟ್ಲಾಂಟಿಕ್ ಸಾಗರದ ತೀರ ಪ್ರದೇಶಕ್ಕಿಂತ ಅದನ್ನು ನೋಡಲು ಹೋಗುವ ದಾರಿಯಲ್ಲಿ ಕಂಡ ವಿಶಾಲವಾದ ನದಿ ಮತ್ತು ಅದಕ್ಕಿರುವ ಹೆಸರಾದ ‘ಇಂಡಿಯಾ ರಿವರ’ ಬೋರ್ಡ್ ಓದಿದಾಗ ಧಿಡೀರನೆ ಇಡೀ ಅಮೆರಿಕ ನಮ್ಮದಾಗಿಬಿಡುತ್ತದೆ. ಶ್ರೀಲಂಕಾದ ಮೇಲೆ ಟಿಪ್ಪಣಿ ಬರೆಯಿರಿ ಎಂದಾಗ, ಅದರ ರಾಜಧಾನಿ ಯಾವುದು? ಅಲ್ಲಿಯ ಜನಸಂಖ್ಯೆ ಎಷ್ಟು ? ಅಲ್ಲಿಯ ಉಷ್ಣತಾಮಾನಕ್ಕಿಂತ ಸೇತುಕಟ್ಟಿ ಶ್ರೀಲಂಕೆಗೆ ಹೋದ ರಾಮಾಯಣದಿಂದಾಗಿ ಶ್ರೀಲಂಕಾ ನಮ್ಮದಾಗಿಬಿಡುತ್ತದೆ. ಇದನ್ನು ನಮಗೆ ಲಿಸುವುದು,ಬಾಹ್ಯ ಸಂಗತಿಗಳಲ್ಲ ಭಾವನಾ ಪ್ರಪಂಚ. ಅದು ಸಾಹಿತ್ಯ ಎಂದೇ ಧೃಡವಾದ ನಂಬಿಕೆ. ನಂಬಿಕೆ ಹುಸಿಯಾಗಲಾರದು ಎನ್ನುವುದು ಸಹ ನಂಬಿಕೆಯೇ. ಎಲ್ಲ ನಂಬಬೇಕು ಎನ್ನುವ ಹಟವೂ ಸಲ್ಲ. ನಂಬದಿರ್ದನು ತಂದೆ ನಂಬಿದನು ಪ್ರಹ್ಲಾದ ನಂಬಿಯೂ ನಂಬದಿರುವ ಇಬ್ಬಂದಿ ನೀನು ಕಂಬದಿನೋ, ಬಿಂಬದಿನೋ ಮೋಕ್ಷ ಅವರಿಂಗಾಯ್ತು. ಸಿಂಬಳದ ನೊಣ ನೀನು – ಮಂಕುತಿಮ್ಮ. *************************************************************** ಪರಾಮರ್ಶನ ಸೂಚಿ. ವಿನಯ :- ಬೇಂದ್ರೆಯವರ ಆಯ್ದ ಕವನಗಳು. ಮಂಕುತಿಮ್ಮನ ಕಗ್ಗ :- ಡಿ.ವಿ.ಜಿ








