ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

‘ಗುರುಕುಲ ಸಾಹಿತ್ಯ ಶರಭ

ಗುರುಕುಲ ಸಾಹಿತ್ಯ ಶರಭ’ ಪ್ರಶಸ್ತಿಗೆ ರಾಘವೇಂದ್ರ ಈ ಹೊರಬೈಲು ಅವರ ಕೃತಿ ಆಯ್ಕೆ ಮೂಲತಃ ಶಿವಮೊಗ್ಗ ಜಿಲ್ಲೆಯ ಹೊರಬೈಲು ಗ್ರಾಮದ, ಪ್ರಸ್ತುತ ಚಿಕ್ಕಬಳ್ಳಾಪುರ ಜಿಲ್ಲೆ, ಚಿಂತಾಮಣಿ ತಾಲ್ಲೂಕಿನ ಬಟ್ಲಹಳ್ಳಿ ಸರ್ಕಾರಿ ಪ್ರೌಢಶಾಲೆಯ ಆಂಗ್ಲಭಾಷಾ ಶಿಕ್ಷಕರೂ ಹಾಗೂ ಹವ್ಯಾಸಿ ಬರಹಗಾರರೂ ಆಗಿರುವ ರಾಘವೇಂದ್ರ ಈ ಹೊರಬೈಲು ಅವರ ‘ಬದುಕು ಪುಕ್ಸಟ್ಟೆ ಅಲ್ಲ’ ಎಂಬ ಲೇಖನ ಸಂಕಲನಕ್ಕೆ ಗುರುಕುಲ ಕಲಾ ಪ್ರತಿಷ್ಠಾನ(ರಿ) ರಾಜ್ಯ ಘಟಕ-ತುಮಕೂರುರವರು ಕೊಡುವ ‘ಗುರುಕುಲ ಸಾಹಿತ್ಯ ಶರಭ’ ಪ್ರಶಸ್ತಿ ಒಲಿದಿದೆ. ತುಮಕೂರಿನಲ್ಲಿ ನಡೆಯುವ ಪ್ರಥಮ ‘ಗುರುಕುಲ ಸಾಹಿತ್ಯ ಸಮ್ಮೇಳನದಲ್ಲಿ’ ಪ್ರಶಸ್ತಿಯನ್ನು ಪ್ರಧಾನ ಮಾಡಲಾಗುವುದೆಂದು ಪ್ರತಿಷ್ಠಾನದ ಅಧ್ಯಕ್ಷ ಶ್ರೀಯುತ ಹುಲಿಯೂರುದುರ್ಗ ಲಕ್ಷ್ಮೀನಾರಾಯಣರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ವ್ಯಕ್ತಿತ್ವ ವಿಕಸನ ಲೇಖನಗಳ ಸಂಕಲನವಾದ ‘ಬದುಕು ಪುಕ್ಸಟ್ಟೆ ಅಲ್ಲ’ ಕೃತಿಯ ಲೇಖನಗಳು ಬದುಕಿನ ದಿಕ್ಕನ್ನು ಬದಲಿಸಬಲ್ಲವು. ನಲ್ವತ್ತು ಲೇಖನಗಳಿರುವ ಈ ಕೃತಿಯು ‘ಗೋಮಿನಿ ಪ್ರಕಾಶನದಿಂದ’ ಪ್ರಕಟವಾಗಿದೆ. ಬಹುಮುಖ ಪ್ರತಿಭೆಯ ರಾಘವೇಂದ್ರ ಈ ಹೊರಬೈಲುರವರು ಈಗಾಗಲೇ ಮೂರು ಕೃತಿಗಳನ್ನು ಪ್ರಕಟಿಸಿದ್ದು, ಇವರ ನೂರಾರು ಲೇಖನಗಳು, ಕಥೆಗಳು, ನ್ಯಾನೋ ಕಥೆಗಳು, ಮಕ್ಕಳ ಕಥೆಗಳು, ಕವನಗಳು, ಮಕ್ಕಳ ಕವನಗಳು, ಚುಟುಕುಗಳು ರಾಜ್ಯದ ಎಲ್ಲಾ ಪ್ರಮುಖ ಪತ್ರಿಕೆ ಹಾಗೂ ನಿಯತಕಾಲಿಕೆಗಳಲ್ಲಿ ಪ್ರಕಟವಾಗಿವೆ.

‘ಗುರುಕುಲ ಸಾಹಿತ್ಯ ಶರಭ Read Post »

ಇತರೆ

ಮಕಾನದಾರರ ಪ್ಯಾರಿ ಪದ್ಯಗಳಲ್ಲಿ ಭಾಷೆಯ ಬೆಡಗು

ಮಕಾನದಾರರ ಪ್ಯಾರಿ ಪದ್ಯಗಳಲ್ಲಿ ಭಾಷೆಯ ಬೆಡಗು ಶಮಾ. ಜಮಾದಾರ.   ಮಾನವೀಯ ಸಂಬಂಧಗಳನ್ನು ಸಾಹಿತ್ಯದಲ್ಲಿ ಹುಡುಕುವ ಸಮನ್ವಯ ಕವಿ, ಎ. ಎಸ್. ಮಕಾನದಾರ ಅವರು. ನ್ಯಾಯಾಲಯದ ಕಡತಗಳಲ್ಲಿ ತಡಕಾಡುತ್ತಲೇ ಸಾಹಿತ್ಯದ ಲೋಕದಲ್ಲಿ ಸದಾ ಸುದ್ದಿಯಲ್ಲಿ ಇರುತ್ತಾರೆ.. ಅಕ್ಕಡಿಸಾಲುಗಳಲ್ಲಿ ಅಕ್ಷರ ಬೀಜ ಬಿತ್ತುತ್ತಾ..ಮತ್ತು ಪ್ಯಾರಿಯ ಎದೆಯಲ್ಲಿ ಪ್ರೀತಿಯ ದೀಪ ಬೆಳಗುತ್ತಾ. ಸುಮಾರು ವರ್ಷಗಳಿಂದ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡ ಎ. ಎಸ್. ಮಕಾನದಾರ ಅವರು ಈವರೆಗೂ ಆರು ಸ್ವರಚಿತ ಕವನ ಸಂಕಲನಗಳನ್ನು ನಮ್ಮ ಕೈಯಲ್ಲಿ ಇಟ್ಟಿದ್ದಾರೆ. ಉಳಿದ ಪ್ರಕಾರದ ಸಾಹಿತ್ಯದಲ್ಲೂ ಕೂಡ ಹಿಂದೆ ಬಿದ್ದಿಲ್ಲ. ಅವರ ಕವನ ಸಂಕಲನಗಳು, ಎದೆ ಸುಡುವ ನೆನಹುಗಳು ಕೆಳಗಲಮನಿಯ ಮಾಬವ್ವ ಮತ್ತು ಇತರೆ ಕವಿತೆಗಳು ಸಖಿಸಖ ಮೌನದ ಬೀಜ ಅಕ್ಕಡಿ ಸಾಲು ಪ್ಯಾರಿ ಪದ್ಯ.         ಆರೂ ಕವನ ಸಂಕಲನದ ಕವನಗಳು ಓದುಗರ ಮನದ ಮಾತಾಗಿವೆ. ಈಗ ಎಲ್ಲರ ಮನಕುಣಿಸುತಿರುವ ಪ್ಯಾರಿ ಪದ್ಯ ಸಂಕಲನವು..ಅನೇಕ ಹೊಸ ಗುಣಲಕ್ಷಣಗಳಿಂದ ಚರ್ಚೆಯಲ್ಲಿದೆ. ಹೊಸ ನೋಟ, ಹೊಸ ರೂಪ, ಪುಟ್ಟ ಹನಿಗಳಲ್ಲಿ ಜೇನೊಸರುವ ಮಾಧುರ್ಯ.. ಈ ಪ್ಯಾರಿಯನ್ನು ಕಂಡವರೆಲ್ಲಾ..ಪ್ಯಾರ್ಗೇ ಆಗಬುಟ್ಟೈತೆ..ಎಂದು ಪ್ಯಾರಿಯ ಹಿಂದೆ ಮುಂದೆ ಸುಳಿದಾಡುವ ದೃಶ್ಯ.. ಈಗ ಎಲ್ಲೆಲ್ಲೂ ಕಂಡುಬರುತ್ತಿದೆ. ಆ ಸಾಲಿನಲ್ಲಿ ನಾನು ಕೂಡ ಮುಂಚೂಣಿಯಲ್ಲಿರುವೆ.                             ಪ್ಯಾರಿಯ ಆ ಲಚಕ್, ಆ ನಜಾ಼ಕತ್ ನ್ನು ಉರ್ದು..ಹಿಂದಿ ಭಾಷೆಯ ಸಿರಿಯಲ್ಲಿ ಕವಿ ಕಟ್ಟಿಕೊಟ್ಟು..ಓದುಗರನ್ನು ಫಿದಾ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.  ಒಂದೊಂದು ಹನಿಗೂ ಮಧುರವಾದ ಕನ್ನಡ, ಉರ್ದು ಶೀರ್ಷಿಕೆ ಕೊಟ್ಟು ಇನ್ನೂ ಸುಂದರ ಗೊಳಿಸಿದ್ದಾರೆ. ಸಜನಿ, ಪ್ಯಾರಿ, ಲೇ ಇವಳೇ, ಹೂವಿ, ಸಾಕಿ, ಮಾಷುಕಾ, ದಿಲ್ ರುಬಾ..ಗೆಳತಿ, ಯಾ ರಬ್..ಆಹಾ!! ಸಂಬೋಧನೆಯೇ ಇಷ್ಟು ರಸಿಕತೆಯಿಂದ ಕೂಡಿರಲು ಒಳಗಿನ ಹೂರಣವೆಷ್ಟು ಸಿಹಿಯಾಗಿರಬೇಡ ಅಂತ.               ಒಂದು ಕೃತಿ ಗೆಲುವಿನ ಹೂಮುಡಿದು ಎಲ್ಲರ ಕೈಯಲ್ಲಿ ನಲಿಯಬೇಕಾದರೆ..ಅದಕ್ಕೆ ಮುದಗೊಳ್ಳುವ ಭಾಷೆಯ ಬೆಡಗು ಕೂಡ ಕಾರಣವಾಗುತ್ತದೆ. ಸಜನಿ.. ನೀ ಹಚ್ಚಿದ ಸುರಮಾ ಪೂಸಿದ ಅತ್ತರನಿಂದ ನನ್ನ ಜನಾಜಾ ಅರಳಿದೆ..      ಇಲ್ಲಿ, ಸುರಮಾ, ಅತ್ತರ ಜನಾಜಾ..ಸಜನಿ ಎಂಬ ಶೀರ್ಶಿಕೆಯನ್ನು ಪೋಷಿಸಿ ಬೆಳೆಸಿದವು. ಇದೇ ತೆರನಾಗಿ, ಮೆಹಬೂಬಾ, ದುವಾ ಕುಬುಲ್ ಆಗಿದೆ ಎದೆಗೆ ಒರಗಿದ ಪ್ರೇಯಸಿ ಮುಂಗುರುಳು ತೀಡುತ ಹನಿಸಿ ಬಿಟ್ಟಳು ತುಂಬಿ ತುಳುಕಿತು ಚಮ್ಲಾ..      ಇಲ್ಲಿ ಕೂಡ ಮೆಹಬೂಬಾಳ ಮೆಹರ್ಬಾನಿಯಿಂದ ಜಿಂದಗಿಯ ಚಮ್ಲಾ..ತುಂಬಿ ತುಳುಕಾಡಿದ ಧನ್ಯತೆ, ಬೇಡಿದ ದುವಾ ಸಿದ್ದಿಸಿದ ತೃಪ್ತಿ.. ಕವಿಯ ಕೈಚಳಕದಲ್ಲಿ ಅರ್ಥಪೂರ್ಣ ಶಬ್ದಗಳ ಆಯ್ಕೆಯಲ್ಲಿ ಸಾಕಾರವಾಗಿದೆ. ಹೂವಿ…ಆಹಾ!! ಎಂತಹ ಕೋಮಲ ಭಾವವಿದು. ಹೂವಿ ಕಮಲದ ಮುಖದವಳೇ ಕವಡೆಯ ಕಣ್ಣವಳೇ ಮಾಗಿದ ಹಣ್ಣಿನಂತವಳೇ ಕೇದಗಿಬನದಲಿ ಸರ್ಪವಾಗಿ ಕಾಡುವವಳೇ ಯಾವೂರ ಮಾಯಾಂಗನೆ ನೀ.        ಇಲ್ಲಿ ಗಮನಿಸಬೇಕಾದುದು..ಹೂವಿಯ ಚೆಲುವು, ಸ್ವಭಾವ, ವೈಯಾರ..ಎಲ್ಲವನ್ನೂ ಕನ್ನಡದ ಮೆದುಭಾಷೆಯಲ್ಲಿ ಬಣ್ಣಿಸಿ ಓದುಗರದೆಯ ಓಣಿಯಲ್ಲಿ ಗುಲ್ಲೆಬ್ಬಿಸಿದ್ದಾರೆ ಕವಿ.       ಸಾಕಿ ಎನ್ನುತ್ತಾ.. ಆತ್ಮಸಖಿಯೊಂದಿಗೆ ಮಾತಿಗಿಳಿವ ತರೀಖಾ.. ಯಾರಬ್ ಎನ್ನುತಾ ಆ ದೇವರ ಮುಂದೆ ಮಂಡಿಯೂರುವ ಪ್ರೀತಿ, ಪ್ಯಾರೀ..ಎಂದು ಹಿಗ್ಗುತಾ ಅವಳ ಪ್ರೀತಿಯ ಸೆರಗಿನಲ್ಲಿ ಅಡಗುವ ರಸಿಕತೆ..ಆ ಆಶಿಕ್ ನ ಆಷಿಯಾನಾ..ಫಕೀರ್ ನ ಏಕತಾರಿಯ ತಂತಿ ನುಡಿಸಿದ ವಿರಹ ವೇದನೆ.. ದಿಲ್ ರುಬಾ ಎನ್ನುತ್ತಾ ದಿಲ್ ಕಶ್ ಅಂದಾಜಿನ ಶರಣಾಗತಿ..ಸನಮ್ ಳೊಂದಗಿನ ಸೂಜಿದಾರವಾಗಿ ಗಡಿಗಳನ್ನು ಹೊಲಿಯುವ ಅನುಸಂಧಾನ.. ದಿವಾನಿಯೊಂದಗಿನ ಆ ದಿವಾನಾಪನ್..ಮೊಹಬತ್ತಿನ ಇಬಾದತ್ ನಲ್ಲಿ ಸಾಜನ್ ಜೊತೆಯಲ್ಲಿ ಸಜ್ದಾ ಮಾಡಿ ದುವಾಗಾಗಿ ಕೈಯೆತ್ತುವ ಆ ಇಷ್ಕ್ ಸುಭಾನಲ್ಹಾ!!  ಸಖ ಸತ್ತ ಹೃದಯ ಮಸಣ ಸೇರಿತು ನಿನ್ನ ಕುಡಿಮೀಸೆಯ ಕುಂಚದಿಂದ ತುಟಿಯ ಮಾಸ್ತಿಗಲ್ಲಿಗೆ ಹೆಸರು ಬರೆದು ಬಿಡು ಭಗ್ನ ಪ್ರೇಮಿಗಳು ಅಧ್ಯಯನಕ್ಕೆ ಬರಲಿ ಬಿಡು ಸುಡುಕೆಂಡಗಳ ಹಾಡು ಹಾಡಲಿ ಬಿಡು.           ತುಟಿಯ ಮಾಸ್ತಿಗಲ್ಲು..ಎಂತಹ ಅದ್ಭುತ ಕಲ್ಪನೆ.. ಮೀಸೆಯ ಕುಂಚದ ಕಚಗುಳಿ ಮೈನವಿರೇಳಿಸಿತು!! ಐತಿಹಾಸಿಕ ಪ್ರೇಮ ಕಥೆಯ ಮೇಲೆ ಪಿಹೆಚ್ಡಿ ಮಾಡಲು ಬರುವ ವಿರಹಿಗಳ ಎದೆಯಂಗಳದ ಕೋಗಿಲೆ ಸುಡುವ ಕೆಂಡದಂತಹ ಹಾಡು ಹಾಡಲೆನ್ನುವ ಆ ಸಖಿಯ ಉವಾಚ..ಮಾಯ್ದ ಗಾಯಗಳನ್ನು ಕೆದಕಿ..ಹೊಸಗಾಯ ಮಾಡುತ್ತದೆ. ಸಾಕಿ ಮೈಯತ್ ತೊಳೆಯಲು ಗುಸುಲ್ ನೀರು ಸಿದ್ಧವಾಗಿದೆ ಸಿದ್ಧ ಸಮಾಧಿಗೂ ಕವಿತೆ ಬದ್ಧವಾಗಿದೆ.            ಇಲ್ಲಿ ಮೈಯತ್ ಮತ್ತು ಗುಸುಲ್.. ಶಬ್ದಗಳು ಬಹಳಷ್ಟು ಸೂಕ್ತವಾಗಿ ಧ್ವನಿಸಿವೆ. ಪರ್ಯಾಯ ಪದಗಳನ್ನು ಅಲ್ಲಿ ಯೋಚಿಸಲೂ ಆಗದು. ಭಾವಲೋಲುಪ್ತತೆಗೆ ಆಪ್ತವೆನಿಸುವ ಭಾಷಾ ಶೃಂಗಾರದ ಬಗ್ಗೆ ಕವಿ ಪ್ರತಿ ಕ್ಷಣದಲ್ಲೂ ಯೋಚಿಸಬೇಕಾಗುತ್ತದೆ. ಕೊಟ್ಟ ಶೀರ್ಷಿಕೆಗೆ ಸೂಕ್ತ ಅರ್ಥ ಸೂಸುವ ಪದರತ್ನಗಳನು ಹೆಕ್ಕಿ.. ಹೆಕ್ಕಿ ಹಾರದಂತೆ ಪೋಣಿಸುವ ಕಲೆ, ಪ್ಯಾರಿಯ ಕವಿಗೆ ಕರತಲಾಮಲಕವಾಗಿದೆ. ಬಳಸಿದ ಅನ್ಯಭಾಷೆಯ ಶಬ್ದಗಳು ಎಲ್ಲೂ ಬಲವಂತದ ಬಳಕೆ ಅನಿಸಿಲ್ಲ. ಓದಿದೊಡನೆ ಕವಿಯ ಆ ಆಂತರಿಕ ತಲ್ಲಣಗಳು ಶಬ್ದಗಳಲ್ಲಿ ವ್ಯಕ್ತವಾಗಿ..ಎದೆಗಿಳಿದು ಸಿಹಿಕಹಿ ಸವಿಯನ್ನು ಉಣಿಸುವುದಕ್ಕೆ ನಿಂತುಬಿಡುತ್ತವೆ.             ಪ್ಯಾರಿಯ ಪ್ಯಾರ್ ಕಹಾನಿಯು ಸುಹಾನಿಯೆನಿಸುವ ಆ ಸಾರ್ಥಕ ಗಳಿಗೆಯು ಪುಟಪುಟಗಳಲ್ಲಿ..ಪುಟ್ಟ ಪುಟ್ಟ ಹೆಜ್ಜೆಗಳನಿಟ್ಟು ಓದುಗರನ್ನು ತೃಪ್ತಿಯ ಶಿಖರವನ್ನೇರಿಸುವುದು..ಸುಳ್ಳಲ್ಲ.             ಸಾಹಿತ್ಯ ಲೋಕದಲ್ಲಿ ಹೊಸ ಪ್ರಯತ್ನಗಳು ಸಾಗುತ್ತಲೇ ಇರುತ್ತವೆ. ಬಹಳಷ್ಟು ಕೃತಿಗಳು ಕೆಲದಿನಗಳ ಮಟ್ಟಿಗೆ ಸದ್ದು ಮಾಡಿ ನೇಪಥ್ಯಕ್ಕೆ ಸರಿದು ಬಿಡುವುದು ಸಹಜ. ಆದರೆ ಎ. ಎಸ್. ಮಕಾನದಾರ ಅವರ ಸಾಹಿತ್ಯ.. ಹಳೆಯದಾದರೂ ತನ್ನ ಘಮಲನ್ನು..ತಾಜಾತನವನ್ನು ಕಳೆದುಕೊಳ್ಳದೇ..ನಿತ್ಯ ನೂತನವೆನಿಸುತ್ತದೆ. ಸಾರ್ವಕಾಲಿಕ ಸಲ್ಲುವ ಇಂತಹ ಸಾಹಿತ್ಯದ ರಚನೆ..ನಿರಂತರವಾಗಿರಲಿ ಎಂದು ಹಾರೈಸುತ್ತೇನೆ. **************************

ಮಕಾನದಾರರ ಪ್ಯಾರಿ ಪದ್ಯಗಳಲ್ಲಿ ಭಾಷೆಯ ಬೆಡಗು Read Post »

ಇತರೆ

ಪಟ ಗಾಳಿಯಲಿ ಹಾರಿ

ಕೆಲವು ದಶಕಗಳ ಹಿಂದೆ ಆಷಾಢಮಾಸದಲ್ಲಿ ತಲೆಯೆತ್ತಿದರೆ “ ಜಿಗಿ ಜಿಗಿಯುತ ಪಟ ಗಾಳಿಯಲಿ ತೇಲಿ ಬಾನಲ್ಲಿ ಹಾರಾಡುತ್ತಿದ್ದ ಪಟಗಳು ಕಾಣುತ್ತಿದ್ದವು ನಮ್ಮ ಹಳೇ ಮೈಸೂರು ಪ್ರದೇಶದ ಊರು, ಕೇರಿ, ಹಳ್ಳಿ ಹಾಡಿಗಳಲ್ಲಿ. ಈಗ ಅವೆಲ್ಲಾ ಮರೆಯಾಗಿವೆ

ಪಟ ಗಾಳಿಯಲಿ ಹಾರಿ Read Post »

ಇತರೆ, ದಾರಾವಾಹಿ

ಅಷ್ಟು ಕೇಳಿದ ಸುಮಿತ್ರಮ್ಮನಿಗೆ ವಿಸ್ಮಯವಾಯಿತು. ‘ಅಯ್ಯೋ ದೇವರೇ, ಇವರ ಶಕ್ತಿಯೇ…!’ ಎಂದುಕೊಂಡವರು ಗುರೂಜಿಯ ಮೇಲೆ ಇನ್ನಷ್ಟು ಗೌರವ ತಳೆದು, ‘ಹೌದು ಹೌದು ಗುರೂಜೀ…ಅದೊಂದು ಘಟನೆಯಲ್ಲಿ ನಾವಿಬ್ಬರೂ ಅರೆಜೀವವಾಗಿ ಬಿಟ್ಟಿದ್ದೆವು!’ ಎಂದರು ನೋವಿನಿಂದ.

Read Post »

ಇತರೆ

ಸಂಬಂಧಗಳು_ ಒಲವು, ಪ್ರೀತಿ ಪರಿಶುದ್ಧತೆ

ಸ್ನೇಹಕ್ಕೆ ಆಡಂಬರ ಅಡ್ಡಿಯಾಗಬಾರದು. ಪ್ರೀತಿ ಷರತ್ತುಗಳಿಗೆ ಒಳಪಡಬಾರದು. ಸಂಬಂಧಗಳು ಲೆಕ್ಕಾಚಾರದ ಹಣಿಯ ಮೇಲೆ ನಿಲ್ಲಬಾರದು. ನಿಷ್ಕಲ್ಮಷ ನಿಸ್ವಾರ್ಥ ಗೆಳೆತನದಿಂದ ಜೀವನದ ಮಹತ್ವ ಎಷ್ಟು ಎತ್ತರಕ್ಕೆ ಏರುತ್ತದಲ್ಲವೇ??

ಸಂಬಂಧಗಳು_ ಒಲವು, ಪ್ರೀತಿ ಪರಿಶುದ್ಧತೆ Read Post »

ಇತರೆ

ಸೋಮಾರಿತನದ ಸುಖ

ಆಗೆಲ್ಲ ಮನೆಗಳಲ್ಲಿ ಒಂದೇ ಒಂದು ಹಂಡೆ ಒಲೆಯ,ನೀರಿನ ತೊಟ್ಟಿಯ ಬಚ್ಚಲು ಮನೆ ಇರ್ತಾ ಇದ್ದದ್ದು.ಮನೆಯಿಂದ ಹೊರಗೆ ಒಂದು ಶೌಚಾಲಯ.ಈಗ ಬಚ್ಚಲು,ಶೌಚಗಳೆಲ್ಲ ಮಲಗುವ ಕೋಣೆಯ ಒಳಗೇ ಸೇರಿಕೊಂಡು ಬಿಟ್ಟಿವೆ.ಮನೆಯಲ್ಲಿ ಎಷ್ಟು ರೂಂಗಳಿವೆಯೋ ಅಷ್ಟು ಅಟ್ಯಚ್ಡ್ ಬಾತ್ ರೂಮ್ ಗಳು. ಅಷ್ಟೂ ತೊಳೆಯಲು ಮತ್ತಷ್ಟು ವಿಷಗಳು.

ಸೋಮಾರಿತನದ ಸುಖ Read Post »

ಇತರೆ, ನಿಮ್ಮೊಂದಿಗೆ

ಮೊದಲ ಮಳೆಯ ಜಿನುಗು

ಸುರಿಯುತ್ತಿದ್ದ ಮಳೆಯೊಂದು ಯಾವುದೋ ಅಡ್ಡ ಗಾಳಿಯ ನೆವಕೆ ಹಾರಿಯೇ ಬಿಟ್ಟಿತು. ಅವಳ ಸಂಬಂಧಿಗಳು ಊರು ಖಾಲಿ ಮಾಡಿ ಆ ಊರ ನೆಂಟಸ್ತಿಕೆ ತಪ್ಪಿ ಹೋಯಿತು. ಅವ ಓದಲಿಕ್ಕೆ ಮತ್ತೆಲ್ಲಿಗೋ ಹೋದ.ದಾರಿಗಳು ಹೇಳದೆ ಕೇಳದೆ ದಾರಿ ಬದಲಿಸಿದವು.

ಮೊದಲ ಮಳೆಯ ಜಿನುಗು Read Post »

ಇತರೆ, ದಾರಾವಾಹಿ

ದಾರಾವಾಹಿ ಆವರ್ತನ ಅದ್ಯಾಯ-25 ಸುಮಿತ್ರಮ್ಮನ ಭಯಭಕ್ತಿಯ ಪ್ರಾರ್ಥನೆಗೆ ಒಲಿದು ನಾಗರಹಾವು ಮಾಯವಾದುದು (ವಾಸ್ತವದಲ್ಲಿ  ಆ ಹಾವು ಅವರೆಲ್ಲರ ಕಣ್ಣು ತಪ್ಪಿಸಿ ಹೊರಗೆ ಹೊರಟು ಹೋದುದು) ವಠಾರದವರಿಗೆಲ್ಲ ವಿಸ್ಮಯವನ್ನು ತರಿಸಿತು! ಜೊತೆಗೆ ಸುಮಿತ್ರಮ್ಮನ ಮೇಲೆ ಅವರೆಲ್ಲರಲ್ಲಿ ಆವರೆಗೆ ಇದ್ದಂಥ ಅಸಹನೆ, ಅಸಡ್ಡೆಗಳೂ ತುಸು ಮರೆಯಾಗಿ ಅದರ ಬದಲಿಗೆ ಯರ್ರಾಬಿರ್ರಿ ಗೌರವಾದರಗಳು ಮೂಡಿಬಿಟ್ಟವು. ಇತ್ತ ತಮ್ಮ ಪ್ರಾರ್ಥನೆಗೆ ಬೆಲೆಕೊಟ್ಟು ನಾಗದೇವನು ಹೊರಟು ಹೋದುದು ಸುಮಿತ್ರಮ್ಮನನ್ನೂ ರೋಮಾಂಚನಗೊಳಿಸಿತು. ಅದೇ ಕಾರಣದಿಂದ ಅವರಲ್ಲಿ ನಾಗರಹಾವಿನ ಬಗ್ಗೆ ಸ್ವಲ್ಪ ಧೈರ್ಯವೂ ಹುಟ್ಟಿತು. ಆದರೆ ಲಕ್ಷ್ಮಣಯ್ಯನ ಮನಸ್ಸು ಹಾಳಾಗಿತ್ತು. ಸುಂದರಯ್ಯ ಮತ್ತು ತಮ್ಮ ಹೆಂಡತಿ ಜೋಯಿಸರಲ್ಲಿ ಪ್ರಶ್ನೆಯಿಡುವ ವಿಚಾರ ಎತ್ತಿದಾಗಿನಿಂದ ಅವರು, ಅಯ್ಯೋ, ದೇವರೇ…ಮುಂದೇನಾಗುತ್ತದೋ…? ಎಂಬ ಚಿಂತೆಯಿಂದ ಒದ್ದಾಡುತ್ತಿದ್ದವರು, ಈ ನೆರಕರೆಯವರನ್ನು ನಮ್ಮ ಆಪತ್ಕಾಲದಲ್ಲಿ ಯಾಕಾದರೂ ಕರೆಯುತ್ತೇವೆ? ನಮ್ಮಿಂದಾಗದ ಸಮಸ್ಯೆಯನ್ನು ಅವರಾದರೂ ಬಗೆಹರಿಸಿಕೊಡಲಿ ಎಂದಲ್ಲವಾ? ಆದರೆ ಅವರು ಬಂದು ಮಾಡಿದ್ದಾದರೂ ಏನು? ಆ ಫಟಿಂಗ ಸುಂದರಯ್ಯನಿಗೆ ಯಾಕಾದರೂ ಬೇಕಿತ್ತು ನಾಗದೋಷ ಮಣ್ಣು ಮಸಣ ಅಂತ ಇವಳ ತಲೆಗೆ ಹುಳ ಬಿಡುವ ಕೆಲಸ? ಛೇ! ಛೇ! ಅಧಿಕ ಪ್ರಸಂಗಿ ಮನುಷ್ಯನನ್ನು ತಂದು! ಎಂದು ಬೈದುಕೊಂಡರು. ಮತ್ತೆ ಯೋಚನೆ ಬಂತು. ಅಲ್ಲಾ, ಇನ್ನು ಇವಳಾದರೂ ಸುಮ್ಮನಿರುತ್ತಾಳಾ…? ಇವಳಿಂದ ಇನ್ನೇನೇನು ಅನುಭವಿಸಲಿಕ್ಕುಂಟೋ ಕೃಷ್ಣ, ಕೃಷ್ಣಾ…! ತಮ್ಮ ಕೈಕಾಲು ಗಟ್ಟಿ ಇರುವವರೆಗೆ ತಾವು ಯಾರ ಹಂಗಿಗೂ ಬೀಳಬಾರದು ಅಂತ ಕೇವಲ ಪೆನ್ಷನ್ ಹಣದಿಂದಲೇ ಜೀವನ ನಡೆಸುತ್ತಿರುವುದೂ ಈ ಕತ್ತೆಗೆ ತಿಳಿಯುವುದಿಲ್ಲವಾ? ಕಷ್ಟಪಟ್ಟು ಉಳಿಸಿರುವ ಇನ್ಷೂರ್ ಹಣವನ್ನೂ ಈ ತಲೆ ಕೆಟ್ಟವಳು ಇಂತಹದ್ದೇ ಹರಕೆ ಕರ್ಮಗಳಿಗೆ ಸುರಿದು ಹಾಳು ಮಾಡುತ್ತಾಳೋ ಏನೋ? ಇನ್ನು ಇವಳು ಆ ಜೋಯಿಸನ ಹತ್ತಿರ ಹೋದಳೆಂದರೆ ಅವನು ಸುಮ್ಮನಿರುತ್ತಾನಾ? ಅವನ ಅಪರ ಕರ್ಮಗಳಿಗೆ ತಾವೆಷ್ಟು ಸಾವಿರ ಬಿಚ್ಚಬೇಕೋ…?’ ಎಂದು ತೀವ್ರ ಚಿಂತೆಯಿಂದ ತಮ್ಮ ಅರೆ ಬಕ್ಕ ತಲೆಯನ್ನು ಪರಪರನೇ ಕೆರೆದುಕೊಂಡರು. ಬಳಿಕ ಸುಂದರಯ್ಯನನ್ನೂ ಹೆಂಡತಿಯನ್ನೂ ಕೆಕ್ಕರಿಸಿ ನೋಡಿ ರಪ್ಪನೆ ಒಳಗೆ ನಡೆದುಬಿಟ್ಟರು. ಗಂಡ ನೆರಕರೆಯವರೆದು ತಮ್ಮನ್ನು ಗುರಾಯಿಸಿ ಹೊರಟು ಹೋದುದು ಸುಮಿತ್ರಮ್ಮನಿಗೆ ಕೆಟ್ಟ ಅವಮಾನವೆನಿಸಿ ಅವರನ್ನು ಸರಿಯಾಗಿ ಬೈದು ಬಿಡಬೇಕೆಂದುಕೊಂಡರು. ಆದರೆ ಇಂಥ ಹೊತ್ತಲ್ಲಿ ಕೋಪಿಸಿಕೊಂಡರೆ ನಂತರ ಈ ಮನುಷ್ಯ ಜೋಯಿಸರ ಹತ್ತಿರ ಹೋಗಲು ನಯಾಪೈಸೆ ಬಿಚ್ಚಲಾರರು. ಹಾಗಾಗಿ ಕಾರ್ಯವಾಸಿ ಮುದಿ ಕತ್ತೆ ಕಾಲನ್ನೂ ಹಿಡಿಯಲೇಬೇಕು ಎಂದು ಯೋಚಿಸಿ ತಮ್ಮ ಸಿಟ್ಟನ್ನು ಹತೋಟಿಗೆ ತಂದುಕೊಂಡರು. ಆದರೆ ಸುಂದರಯ್ಯ ಮಾತ್ರ ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ತಮ್ಮ ಕಾರ್ಯಸಿದ್ಧಿಯ ಖುಷಿಯಿಂದ ನಗುತ್ತ ಎಲ್ಲರೊಡನೆ ಹೊರಟು ಹೋದರು. ಅಂದು ರಾತ್ರಿ ಊಟವಾದ ಮೇಲೆ ಸುಮಿತ್ರಮ್ಮ ಗಂಡನ ಸಮೀಪ ಬಂದು ಕುಳಿತುಕೊಂಡು ಎಲೆಯಡಿಕೆ ನೀಡುತ್ತ ತಾವೂ ಒಂದಿಷ್ಟು ಬಾಯಿಗೆ ತುರುಕಿಸಿಕೊಂಡು ಮಾತಿಗೆ ಪೀಠಿಕೆ ಹಾಕಿದರು. ‘ಅಲ್ಲ ಮಾರಾಯ್ರೇ ನಾವು ಇಲ್ಲಿಗೆ ಬಂದು ಎಷ್ಟು ವರ್ಷವಾಯ್ತು ಹೇಳಿ…?’ ಎಂದು ಆತಂಕದಿಂದ ಕೇಳಿದರು. ಲಕ್ಷ್ಮಣಯ್ಯನಿಗೆ ಹೆಂಡತಿಯ ಉದ್ದೇಶ ಅರ್ಥವಾಯಿತು. ಆದರೂ ತೋರಿಸಿಕೊಳ್ಳದೆ, ‘ಯಾಕೆ ಮಾರಾಯ್ತೀ… ನೀನೂ ನನ್ನ ಜೊತೆಯಲ್ಲೇ ಬಂದವಳಲ್ಲವಾ. ನಿನಗೂ ಗೊತ್ತಿರಬೇಕಲ್ವಾ…?’ ಎಂದು ತಿರುಗೇಟು ಕೊಟ್ಟು ಸುಮ್ಮನಾದರು. ‘ಅಯ್ಯೋ, ಹಾಗಲ್ಲ ಮಾರಾಯ್ರೇ. ನಾವಿಲ್ಲಿಗೆ ಬಂದ ನಂತರ ಈ ವಠಾರದೊಳಗೆ ಯಾವತ್ತಾದರೂ ನಾವು ನಾಗರಹಾವನ್ನು ನೋಡಿದ್ದುಂಟಾ ಹೇಳಿ?’ ‘ಇಲ್ವಲ್ಲ ಯಾಕೇ…?’ ‘ಹಾಗಿದ್ದರೆ ಇವತ್ತು ಅಂಥ ಹಾವು ಏಕಾಏಕಿ ನಮ್ಮನೆಯೊಳಗೆಯೇ ಕಾಣಿಸಿಕೊಂಡಿದೆ ಅಂದರೆ ಏನರ್ಥ? ಯೋಚಿಸಿದಿರಾ…?’ ಎಂದು ಅಸಹನೆಯಿಂದ ಗಂಡನ ಮುಖ ನೋಡಿದರು. ‘ಓಹೋ, ಇದಾ ವಿಷಯಾ? ಅರ್ಥವಾಯಿತು ಬಿಡು. ಹೌದು ಅದರ ಬಗ್ಗೆ ನಾನೂ ಯೋಚಿಸಿದೆ. ನಮ್ಮನೆಯೊಳಗೆ ಇಲಿಯೋ ಕಪ್ಪೆಯೋ ಸೇರಿಕೊಂಡಿರಬೇಕು. ಅವುಗಳನ್ನು ಹಿಡಿಯಲು ಆ ಹಾವು ಬಂದಿರಬೇಕು ಅಂತ ಆಮೇಲೆ ಅರ್ಥವಾಯಿತು. ಯಾಕೆ ಇದು ಸರಿಯಾದ ಯೋಚನೆ ಅಲ್ಲವಾ?’ ಎಂದರು. ಆಗ ಸುಮಿತ್ರಮ್ಮನ ಮುಖ ಇನ್ನಷ್ಟು ಬಿಗುವಾಯಿತು. ಅದನ್ನು ಗಮನಿಸಿದ ಲಕ್ಷ್ಮಣಯ್ಯ, ‘ಅಲ್ಲ ಮಾರಾಯ್ತೀ ಹಾವು ಬಂದೂ ಆಯ್ತು. ನಿನ್ನ ಪ್ರಾರ್ಥನೆಗೆ ಓಗೊಟ್ಟು ಹೊರಗೆ ಹೋಗಿಯೂ ಆಯ್ತು. ಆದರೆ ನಿನ್ನ ತಲೆಯೊಳಗೆ ಹೊಕ್ಕಿರುವ ಹಾವಿನ್ನೂ ನಿನ್ನನ್ನು ಬಿಟ್ಟು ಹೋಗಲಿಲ್ಲವಲ್ಲ…!’ ಎಂದು ನಗುತ್ತ ಅಂದವರು, ‘ಆ ವಿಷಯವನ್ನು ಅಷ್ಟೊಂದು ದೊಡ್ಡದು ಮಾಡಿ ಆಲೋಚಿಸುವ ಅಗತ್ಯ ಉಂಟಾ ಹೇಳು? ಹಾವುಗಳ ಆಹಾರದ ಜೀವಿಗಳು ಇದ್ದರೆ ಮಾತ್ರ ಅವು ಮನೆಯೊಳಗೆ ಬರುತ್ತವೆ ಅಂತ ನನ್ನ ಸ್ನೇಹಿತ ಶ್ರೀಪತಿ ಬೆಳಿಗ್ಗೆನೇ ಹೇಳಿದ್ದ. ನೀನು ಮೊದಲು ಮನೆಯನ್ನು ಸ್ವಚ್ಛವಾಗಿಟ್ಟುಕೋ. ಆಮೇಲೆ ಯಾವ ಹಾವು ಬರುತ್ತದೆ ಅಂತ ನೋಡುವ. ಯಾರೋ ಬುದ್ಧಿ ಕೆಟ್ಟವರು ಏನೇನೋ ಕಥೆ ಕಟ್ಟಿ ಹೇಳುತ್ತಾರೆಂದರೆ ನೀನೂ ಅದನ್ನೆಲ್ಲ ನಂಬಿ ಮಂಡೆ ಹಾಳು ಮಾಡಿಕೊಳ್ಳುವುದು ಎಷ್ಟು ಸರಿ ಹೇಳು?’ ಎಂದು ಬೇಸರದಿಂದ ಹೇಳಿದರು.    ಸುಮಿತ್ರಮ್ಮನಿಗೆ ತಟ್ಟನೆ ರೇಗಿತು. ‘ನಿಮ್ಮ ಮಂಡೆ! ಇಲಿ, ಕಪ್ಪೆಗಳು ಇರಲು ಈ ಮನೆಯೇನು ಮಸಣದಗುಡ್ಡೆಯ ಡಂಪಿಂಗ್‍ಯಾರ್ಡ್ ಅಂತ ತಿಳಿದುಕೊಂಡ್ರಾ…? ನಿಮ್ಮ ಶ್ರೀಪತಿಗೆ ಮೊದಲೇ ತಲೆಕೆಟ್ಟಿದೆ. ಹಾಗಾಗಿಯೇ ಅವನು ಹೆಂಡತಿ ಮಕ್ಕಳನ್ನು ಓಡಿಸಿ ಒಂಟಿ ಭೂತದಂತೆ ಬದುಕುತ್ತಿರುವುದು. ನೀವು ಅವನ ಮಾತುಕಟ್ಟಿಕೊಂಡು ನನಗೆ ಬುದ್ಧಿ ಹೇಳಲು ಬರಬೇಡಿ ಗೊತ್ತಾಯಿತಾ!’ ಎಂದು ಸಿಡುಕಿದರು. ಆಗ ಲಕ್ಷ್ಮಣಯ್ಯ, ‘ಅಯ್ಯೋ ದೇವರೇ…ಇವಳಿಗೆ ಬುದ್ಧಿ ಹೇಳುವುದು ವ್ಯರ್ಥ!’ ಎಂದು ಸುಮ್ಮನಾದರು. ಅದನ್ನು ಗಮನಿಸಿದ ಸುಮಿತ್ರಮ್ಮ ಸೌಮ್ಯವಾಗಿ, ‘ಸ್ವಲ್ಪ ಸರಿಯಾಗಿ ಯೋಚಿಸಿ ನೋಡಿ ಮಾರಾಯ್ರೇ. ಆಗ ನಿಮಗೂ ಸುಂದರಯ್ಯನ ಮಾತು ಸತ್ಯ ಅಂತ ಅನ್ನಿಸುತ್ತದೆ. ನಮಗೇ ಗೊತ್ತಿರದ ಯಾವುದೋ ದೋಷ, ಸಮಸ್ಯೆ ಇದ್ದರೆ ಮಾತ್ರ ನಾಗರಹಾವು ಕಾಣಿಸಿಕೊಳ್ಳುವುದು ಅಂತ ನಮ್ಮ ಅಜ್ಜಿ ಪಿಜ್ಜಂದಿರ ಕಾಲದಿಂದಲೂ ನಾವು ನಂಬಿಕೊಂಡು ಬಂದವರಲ್ಲವಾ! ಆ ನಂಬಿಕೆಯನ್ನು ಅಷ್ಟುಬೇಗ ಬಿಟ್ಟು ಬಿಡಲು ನಿಮ್ಮಿಂದಾಗಬಹುದು. ನನ್ನಿಂದ ಸಾಧ್ಯವಿಲ್ಲ. ನಾವು ಹೆಂಗಸರು ನಿಮ್ಮಷ್ಟು ಗಟ್ಟಿ ಮನಸ್ಸಿನವರಲ್ಲ…ಹಾಗಾಗಿ ಅದು ಹೌದೋ ಅಲ್ಲವೋ ಅಂತ ತಿಳಿದುಕೊಳ್ಳುವುದಕ್ಕೇ ನಾಳೆ ಬೆಳಿಗ್ಗೆ ಜೋಯಿಸರ ಹತ್ತಿರ ಹೋಗುತ್ತಿದ್ದೇನೆ. ನೀವು ಒಂದೈನ್ನೂರು ರೂಪಾಯಿ ಕೊಡುತ್ತೀರಿ ಅಷ್ಟೆ. ಬೇರೇನೂ ಮಾತಾಡಬೇಡಿ!’ ಎಂದು ಗದರಿಸುವ ಧ್ವನಿಯಲ್ಲೇ ಆಜ್ಞಾಪಿಸಿದರು.    ಅಷ್ಟು ಕೇಳಿದ ಲಕ್ಷ್ಮಣಯ್ಯನ ಹೊಟ್ಟೆ ಚುರುಕ್ಕೆಂದಿತು. ‘ಅಲ್ಲ ಮಾರಾಯ್ತೀ, ನೀನಿಷ್ಟೊಂದು ಹೆದರು ಪುಕ್ಕೆಲಿ ಆದದ್ದು ಯಾವಾಗ? ಹಿಂದೆಲ್ಲಾ ಎಂಥೆಂಥ ಸಮಸ್ಯೆಗಳು ಬಂದರೂ ಡೋಂಟ್ ಕೇರ್! ಅನ್ನುತ್ತಿದ್ದವಳು ಈಗ ವಯಸ್ಸಾಗುತ್ತ ಬಂದಂತೆ ಏನೇನೋ ಯೋಚಿಸುತ್ತ, ಆ ಮುಠ್ಠಾಳ ಸುಂದರಯ್ಯನ ಮಾತನ್ನೂ ಕಟ್ಟಿಕೊಂಡು ನಿನ್ನ ನೆಮ್ಮದಿ ಕೆಡಿಸಿಕೊಂಡಿರುವುದಲ್ಲದೇ ನನ್ನ ಹಣವನ್ನೂ ಪೋಲು ಮಾಡುವುದು ಸರಿಯಾ ಹೇಳು…?’ ಎಂದು ಹತಾಶೆಯಿಂದ ಅಂದವರು, ‘ಸಾಯುವತನಕ ಯಾರ ಹಂಗಿನಲ್ಲೂ ಬೀಳದೆ ಬದುಕಬೇಕೆಂದಿರುವ ನನ್ನ ಸ್ವಾಭಿಮಾನವನ್ನು ಹಾಳು ಮಾಡಬೇಡ ಮಾರಾಯ್ತೀ…ಒಮ್ಮೆ ತಾಳ್ಮೆಯಿಂದ ಯೋಚಿಸಿನೋಡು, ನೀನು ಹೇಳುವಂತೆ ನಮ್ಮಲ್ಲಿ ಇಲಿ, ಕಪ್ಪೆಗಳಿಲ್ಲದಿರಬಹುದು. ಆದರೆ ಹೊರಗೆ ಬೇರೆ ಯಾವುದೋ ಪ್ರಾಣಿಗೆ ಹೆದರಿಯೂ ಆ ಹಾವು ಒಳಗೆ ಓಡಿ ಬಂದಿರಬಹುದಲ್ಲಾ? ಸುಮ್ಮನೆ ಏನೇನೋ ಚಿಂತಿಸಿ ಕೊರಗಬೇಡ. ಬಾ ಹೋಗಿ ಆರಾಮವಾಗಿ ಮಲಗಿಕೊಳ್ಳುವ!’ ಎಂದು ಮೃದುವಾಗಿ ಕರೆದರು.    ಸುಮಿತ್ರಮ್ಮನಿಗೆ ಮರಳಿ ರೇಗಿತು, ‘ಅಂದರೆ ನಿಮ್ಮ ಈ ಉಪದೇಶದ ಅರ್ಥ ನಾಳೆ ನೀವು ಹಣ ಕೊಡುವುದಿಲ್ಲವೆಂದಾ…? ಸರಿ. ಆಯ್ತು ಮಾರಾಯ್ರೇ. ನೀವೇನಾದರೂ ಮಾಡಿಕೊಳ್ಳಿ. ಆದರೆ ಮುಂದೇನಾದರೂ ಹೆಚ್ಚುಕಮ್ಮಿಯಾದರೆ ಅದಕ್ಕೆಲ್ಲ ನೀವೇ ಹೊಣೆಯಾಗುತ್ತೀರಿ ಎಂಬುದನ್ನೂ ನೆನಪಿಟ್ಟುಕೊಳ್ಳಿ ಅಷ್ಟೇ!’ ಎಂದು ಸಿಡುಕಿ ಮುಖ ತಿರುವಿ ಕುಳಿತುಬಿಟ್ಟರು. ‘ಆಯ್ತು. ಆಯ್ತು. ಅದೇನಾಗುತ್ತದೋ ನಾನೇ ನೋಡಿಕೊಳ್ಳುತ್ತೇನೆ. ಆದರೆ ಇನ್ನು ಮುಂದೆ ಇಂಥ ಕಳಪೆ ವಿಷಯಗಳನ್ನೆಲ್ಲ ನನ್ನ ತಲೆಗೆ ಕಟ್ಟುವುದನ್ನು ನೀನೂ ನಿಲ್ಲಿಸಿಬಿಡಬೇಕು ಅಷ್ಟೇ!’ ಎಂದು ಲಕ್ಷ್ಮಣಯ್ಯನೂ ಒರಟಾಗಿ ಹೇಳಿ ಎದ್ದು ಹೋಗಿ ಮಲಗಿಕೊಂಡರು.                                                            *** ಮರುದಿನ ಬೆಳಿಗ್ಗೆ ಸುಮಿತ್ರಮ್ಮ ಎಂದಿನಂತೆ ಬೇಗನೆದ್ದವರು, ಎದುರಿನ ಗುಡ್ಡೆಯತ್ತ ಹೋಗಿ ಗೋಮಯ ತಂದು ನಿನ್ನೆ ನೆರೆಕರೆಯವರು ಹೊಕ್ಕಿದ್ದ ಕೋಣೆಗಳಿಗೆಲ್ಲ ಸಿಂಪಡಿಸಿ ಅಶುದ್ಧ ನಿವಾರಿಸಿಕೊಂಡರು. ನಂತರ ಉಪಾಹಾರ ತಯಾರಿಸಿ, ಕಾಫಿ ಮಾಡಿ ಗಂಡನಿಗೆ ಕೊಟ್ಟು ತಾವೂ ಸೇವಿಸಿದರು. ಅಷ್ಟರಲ್ಲಿ ಮರಳಿ ಅವರನ್ನು ಹಾವಿನ ಚಿಂತೆ ಕಾಡಿತು.  ಅಯ್ಯೋ ದೇವರೇ! ಆ ಹಾವು ಮತ್ತೆ ಬಂದರೇನಪ್ಪಾ ಮಾಡುವುದು! ಎಂದುಕೊಂಡು ಭಯಪಟ್ಟರು. ಅದೇ ಹೊತ್ತಿಗೆ ಲಕ್ಷ್ಮಣಯ್ಯನೂ ಪೇಟೆಗೆ ಹೊರಡುತ್ತಿದ್ದರು. ಅವರನ್ನು ಕಂಡ ಸುಮಿತ್ರಮ್ಮನಿಗೆ ಸಿಟ್ಟು ಬಂತು. ‘ಏನ್ರೀ, ಎಲ್ಲಿಗೆ ಹೊರಟಿದ್ದೀರೀ…?’ ಎಂದರು ಸಿಡುಕಿನಿಂದ. ‘ಪೇಟೆಯಲ್ಲಿ ಸ್ಪಲ್ಪ ಕೆಲಸವಿದೆ ಮಾರಾಯ್ತೀ…!’ ಎಂದು ಲಕ್ಷ್ಮಣಯ್ಯ ಹೊರಡುವ ಗಡಿಬಿಡಿಯಲ್ಲೇ ಉತ್ತರಿಸಿದರು. ‘ಕೆಲಸವಿದ್ದರೆ ಅಲ್ಲೇ ಇರಲಿ. ಇವತ್ತು ನೀವು ಎಲ್ಲಿಗೂ ಹೋಗುವುದು ಬೇಡ. ನಿನ್ನೆ ನೀವೇ ಹೇಳಿದಿರಲ್ಲ, ಮನೆಯೊಳಗೆ ಇಲಿ, ಕಪ್ಪೆಗಳಿರಬಹುದು ಅಂತ. ಇದ್ದರೆ ನನ್ನೊಬ್ಬಳಿಂದಲೇ ಅವುಗಳನ್ನು ಹಿಡಿಯಲು ಆಗಲಿಕ್ಕಿಲ್ಲ. ಇಬ್ಬರೂ ಸೇರಿಯೇ ಹಿಡಿದು ಹೊರಗೆ ಹಾಕುವ. ಸ್ವಲ್ಪ ಸಹಾಯ ಮಾಡಿ!’ ಎಂದು ಒರಟಾಗಿ ಆಜ್ಞಾಪಿಸಿದರು. ಅಷ್ಟು ಕೇಳಿದ ಲಕ್ಷ್ಮಣಯ್ಯನಿಗೆ ಒಳಗೊಳಗೇ ನಗು ಬಂತು. ‘ಹ್ಞೂಂ, ಆಯ್ತು ಮಾರಾಯ್ತೀ…’ ಎಂದುತ್ತರಿಸಿ ಉದಾಸೀನದಿಂದ ಕುಳಿತುಕೊಂಡರು. ಸುಮಿತ್ರಮ್ಮ, ಗಂಡನೊಂದಿಗೆ ಮನೆಯ ಮೂಲೆ ಮೂಲೆಗಳನ್ನು ಗುಡಿಸಿ ಒರೆಸಿ ಹಳೆಯ ಸಾಮಾನುಗಳನ್ನೆಲ್ಲ ಹೊತ್ತೊಯ್ದು ಹಿತ್ತಲಿನ ಶೆಡ್ಡಿನೊಳಗೆಸೆದು ಬಂದು ಸ್ನಾನ ಮಾಡಿದ ನಂತರ ನೆಮ್ಮದಿಯ ಉಸಿರುಬಿಟ್ಟರು. ಅಷ್ಟಾಗುವ ಹೊತ್ತಿಗೆ ಮಧ್ಯಾಹ್ನ ಸಮೀಪಿಸಿತು. ಆದ್ದರಿಂದ ಹಿಂದಿನ ರಾತ್ರಿಯ ಅಡುಗೆಯನ್ನೇ ಬಿಸಿ ಮಾಡಿ ಇಬ್ಬರೂ ಉಂಡು ಒಂದು ಸುತ್ತು ನಿದ್ದೆ ತೆಗೆದರು. ಸುಮಿತ್ರಮ್ಮ ಎದ್ದು ಗಂಡನಿಗೆ ಕಾಫಿ ಮಾಡಿ ಕೊಟ್ಟು ಹಿಂದಿನ ದಿನ ನಾಗರಹಾವಿನ ರಂಪಾಟದ ಕಥೆಯಿಂದಾಗಿ ಮೂಲೆ ಸೇರಿದ್ದ ಬಟ್ಟೆಬರೆಗಳನ್ನು ಗಂಡನಿಂದಲೇ ಕೊಡವಿ ಕೊಡವಿ ಪರೀಕ್ಷಿಸಿ ಹಾವಿಲ್ಲ ಎಂದು ಖಚಿತವಾದ ನಂತರ ಅವನ್ನೆಲ್ಲ ಒಗೆದು ಹಾಕಿದರು. ಅಷ್ಟೊತ್ತಿಗೆ ಸಂಜೆಯಾಯಿತು. ಕಾಲು ಸೇರಕ್ಕಿಯ ಅನ್ನ ಮಾಡಿಟ್ಟು ಅದಕ್ಕೊಂದು ಮೆಂತೆ ಸಾರು ಮಾಡುವ ಎಂದುಕೊಂಡು ತಯಾರಿ ನಡೆಸಿದರು.    ಗ್ಯಾಸಿನ ಒಂದು ಒಲೆಯಲ್ಲಿ ಸಾರು ಕುದಿಯುತ್ತಿತ್ತು. ಇನ್ನೊಂದರ ಮಂದಾಗ್ನಿಯಲ್ಲಿ ಸಾರಿಗೆ ಹುಯ್ಯುವ ಒಗ್ಗರಣೆಯೆಣ್ಣೆ ಬಿಸಿಯೇರುತ್ತಿತ್ತು. ಸುಮಿತ್ರಮ್ಮ ಅದಕ್ಕೆ ಸಾಸಿವೆ ಸುರಿದು ಸಿಡಿದ ನಂತರ ಕರಿಬೇವಿನ ಸೊಪ್ಪು, ಬೆಳ್ಳುಳ್ಳಿ, ಉದ್ದು ಮತ್ತು ಒಣಮೆಣಸಿನ ಚೂರುಗಳನ್ನು ಸುರುವಿದರು. ಸ್ವಲ್ಪ ಹೊತ್ತು ತಿರುವಿದ ನಂತರ ಇನ್ನೇನು ಸೌಟನ್ನೆತ್ತಿ ಸಾರಿನ ಪಾತ್ರೆಗೆ ಹುಯ್ಯಬೇಕು ಎಂಬಷ್ಟರಲ್ಲಿ ಒಗ್ಗರಣೆಯಂಥದ್ದೇ ಶಬ್ದವೊಂದು ಸುಮಿತ್ರಮ್ಮನ ಪಕ್ಕದಲ್ಲೇ ಗಟ್ಟಿಯಾಗಿ ಹೊಮ್ಮಿತು! ಅವರು ಬೆಚ್ಚಿಬಿದ್ದರು. ಶಬ್ದವು ಕಾಲ ಬುಡದಲ್ಲೇ ಬಂದಿದ್ದಲ್ಲವಾ ಎಂದುಕೊಂಡವರು, ಆ ಹೆದರಿಕೆಯ ನಡುವೆಯೂ ಕೈಯಲ್ಲಿದ್ದ ಸೌಟನ್ನು ರಪ್ಪನೆ ಸಾರಿನ ಪಾತ್ರೆಗೆಸೆದು ಮಾರು ದೂರ ನೆಗೆದು ನಿಂತರು. ಅದು ಜುಂಯ್ಯೀ…! ಎಂದು ಅರಚಿ ಸ್ತಬ್ಧವಾಯಿತು. ಆದರೆ ಕಾಲ ಹತ್ತಿರದಿಂದ ಬರುತ್ತಿದ್ದ ಶಬ್ದವು ಇನ್ನೂ ಜೋರಾಗಿ ಬಂತು. ಹೆದರುತ್ತ ಅತ್ತ ಇಣುಕಿದರು. ಆದರೆ ಅಲ್ಲಿ ಉಪ್ಪಿನಕಾಯಿಯ ಜಾಡಿಗಳ ಎಡೆಯಲ್ಲಿ ನಿನ್ನೆಯ ಫಣಿರಾಜನು ಇವತ್ತೂ ಅದೇ ಭಂಗಿಯಲ್ಲಿ ನಿಂತುಕೊಂಡು ಬುಸುಗುಟ್ಟುತ್ತಿದ್ದ! ಸುಮಿತ್ರಮ್ಮನ ಹೃದಯ ನಡುಗಿಬಿಟ್ಟಿತು. ‘ಅಯ್ಯಯ್ಯೋ ದೇವರೇ…ಹಾವು, ಹಾವು…!’ ಎಂದು ಕೂಗುತ್ತ ಹೊರಗೆ ಓಡಿದರು. ಅದೇ ಹೊತ್ತಿಗೆ ಶೌಚಕ್ಕೆ ಹೋಗಿ ಪಂಚೆ ಸುತ್ತಿಕೊಳ್ಳುತ್ತ ಬರುತ್ತಿದ್ದ ಲಕ್ಷ್ಮಣಯ್ಯ ಹೆಂಡತಿಯ ಬೊಬ್ಬೆ ಕೇಳಿ ಅದುರಿಬಿದ್ದು ಪಂಚೆಯನ್ನು ಅರ್ಧಂಬರ್ಧ ಸುತ್ತಿಕೊಂಡು ಹೊರಗೆ ಧಾವಿಸಿದರು. ಸುಮಿತ್ರಮ್ಮ ಇನ್ನೇನು ವರಾಂಡ ದಾಟಿ ಅಂಗಳಕ್ಕೆ ಜಿಗಿಯಬೇಕು ಎಂಬಷ್ಟರಲ್ಲಿ ಗಬಕ್ಕನೇ ಅವರ ರಟ್ಟೆ ಹಿಡಿದು ನಿಲ್ಲಿಸಿ, ‘ಹೇ, ಹೇ, ಎಲ್ಲಿಗೆ ಓಡುತ್ತಿ ಮಾರಾಯ್ತಿ… ಹೆದರಬೇಡ. ನಿಲ್ಲು ನಿಲ್ಲು! ಎಲ್ಲಿದೆ ಹಾವು…? ನೋಡುವ ಬಾ!’ ಎಂದು ಸಾಂತ್ವನಿಸಿದರು. ಆಗ ಸುಮಿತ್ರಮ್ಮ ಸ್ವಲ್ಪ ಹತೋಟಿಗೆ ಬಂದರು.   

Read Post »

ಇತರೆ

ಜೀವ ಪ್ರಕೃತಿ-ಜೀವನ

ನಮ್ಮ ಮೆದುಳು ಹೆಚ್ಚು ಸಂಕೀರ್ಣವಾದದ್ದು. ಪ್ರಕೃತಿಯಿಂದ ನಮಗೆ ನೀಡಲ್ಪಟ್ಟ ವಿಶೇಷ ಕೊಡುಗೆಗಳಾದ ಬುದ್ಧಿ, ಯೋಚನೆ ಹಾಗೂ ವಾಚನಾ ಶಕ್ತಿಯನ್ನು ಪಡೆದಿರುವ ನಾವು ಉಳಿದ ಪ್ರಾಣಿಗಳಿಗಿಂತ ಭಿನ್ನ. ನಮ್ಮ ಹಿರಿಯರು ಅದನ್ನು ಚೆನ್ನಾಗಿ ಕಂಡುಕೊಂಡಿದ್ದರು .ನಾವು ಪ್ರಕೃತಿಯಿಂದ ದೂರ ಸಾಗುತ್ತಿದ್ದೇವೆ.

ಜೀವ ಪ್ರಕೃತಿ-ಜೀವನ Read Post »

You cannot copy content of this page

Scroll to Top