ಅಂಕಣ ಸಂಗಾತಿ, ಕಗ್ಗಗಳ ಲೋಕ

ಅಂಕಣ ಬರಹ ಕಗ್ಗಗಳ ಲೋಕ ಆದರಣೀಯ ಡಾII ಡಿ. ವಿ. ಗುಂಡಪ್ಪನವರು ರಚಿಸಿದ ‘ಮಂಕುತಿಮ್ಮನ ಕಗ್ಗ’ ಒಂದು ಮೇರುಕೃತಿ. ಅವರ ಒಂದೊಂದು ಮುಕ್ತಕವೂ ಕೂಡ ಸಾರ್ವಕಾಲಿಕ ಸತ್ಯ! ಜೀವನದಲ್ಲಿ ಎದುರಾಗುವ ಸಾವಿರಾರು ಪ್ರಶ್ನೆಗಳಿಗೆ ತತ್ವಶಾಸ್ತ್ರ,ಸ್ವಾನುಭವ ಮತ್ತು ಆಧ್ಯಾತ್ಮದ ಹಿನ್ನೆಲೆಯಲ್ಲಿ ಉತ್ತರ ನೀಡುವ ಕಗ್ಗಗಳು ಓದುಗರಿಗೆ ಆಪ್ತವಾಗಿ ಬಿಡುತ್ತವೆ. ಒಬ್ಬ ಸಾಮಾನ್ಯ ಮನುಷ್ಯನಂತೆ ಮೈತ್ರಿಭಾವದಿಂದ ಬರೆದ ಈ ಕಗ್ಗಗಳು ಅಸಂಖ್ಯ ಮಂದಿಗೆ ಸಾಂತ್ವನ ನೀಡುತ್ತವೆ. “ಎಲ್ಲದರಲ್ಲೂ, ಎಲ್ಲರಲ್ಲೂ ಒಳ್ಳೆಯದನ್ನೇ ಕಂಡು , ಜೀವನದ ಸೊಬಗನ್ನು ಸವಿಯಬೇಕು” ಎಂದು ದಾರಿತೋರುವ ದಿವ್ಯಚೇತನ ನಮ್ಮ ಗುಂಡಪ್ಪನವರು. ಹೊಸ ಪೀಳಿಗೆಯ ಓದುಗರಿಗೆ ಡಿ.ವಿ.ಜಿ.ಯವರ ಕಗ್ಗಗಳ ಪರಿಚಯಿಸುವುದು ನನ್ನೀ ಬರಹಗಳ ಉದ್ದೇಶವಾಗಿದೆ ಮುಕ್ತಕ- ೬೦೦ ಬದುಕು ಜಟಕಾಬಂಡಿ, ವಿಧಿಯದರ ಸಾಹೇಬ I ಕುದುರೆ ನೀನ್ , ಅವನು ಪೇಳ್ದಂತೆ ಪಯಣಿಗರು II ಮದುವೆಗೋ ಮಸಣಕೋ ಹೋಗೆಂದ ಕಡೆಗೋಡು I ಪದ ಕುಸಿಯೆ ನೆಲವಿಹುದು ಮಂಕುತಿಮ್ಮ II ಭಾವಾರ್ಥ : ನಮ್ಮ ಬದುಕೇ ಒಂದು ಜಟಕಾಬಂಡಿ. ಆ ಬಂಡಿಯನ್ನು ಎಳೆದುಕೊಂಡು ಹೋಗುವ ಕುದುರೆಗಳು ನಾವು. ಬಂಡಿಯನ್ನೆಳೆಯುವುದು ನಮ್ಮ ಕಾರ್ಯವೇ ಹೊರತು ದಾರಿಯನ್ನು ಆಯ್ಕೆ ಮಾಡುವ ಹಕ್ಕು ನಮಗಿಲ್ಲ. ಬಂಡಿಯ ಒಡೆಯನಾದ ವಿಧಿಯು ತೋರಿದ ಹಾದಿಯಲ್ಲೇ ನಾವು ನಡೆಯಬೇಕು. ಅದು ಸುಖದ ಹಾದಿಯೋ, ದುಃಖದ ಹಾದಿಯೋ – ನಾವದನ್ನು ಆಯ್ಕೆ ಮಾಡುವಂತಿಲ್ಲ. ಬಾಲ್ಯ, ಯೌವನಾವಸ್ಥೆಯಲ್ಲಿ ಓಡಿದ ಪಾದಗಳು ವೃದ್ಧಾಪ್ಯ ತಲುಪಿದಾಗ ಸೋತು ಹೋಗಿ ಕುಸಿದುಬಿದ್ದಾಗ , ಭೂಮಿಯ ಮೇಲೆ ದಹನವೋ ದಫನವೋ ಆಗುವಲ್ಲಿಗೆ ನಮ್ಮ ಬದುಕಿನ ಓಟ ಕೊನೆಗೊಳ್ಳುತ್ತದೆ. ಬದುಕೆಂದರೆ ಇಷ್ಟೇ!! ಮುಕ್ತಕ – ೬೬೧ ಇಳೆಯಿಂದ ಮೊಳಕೆಯೊಗೆವಂದು ತಮಟೆಗಳಿಲ್ಲ Iಫಲ ಮಾಗುವಂದು ತುತ್ತೂರಿ ದನಿಯಿಲ್ಲIIಬೆಳಕೀವ ಸೂರ್ಯಚಂದ್ರರದೊಂದು ಸದ್ದಿಲ್ಲIಹೊಲಿ ನಿನ್ನ ತುಟಿಗಳನು ಮಂಕುತಿಮ್ಮ ಭಾವಾರ್ಥ: ಅತೀ ಸೂಕ್ಷ್ಮವಾದ ಮೊಳಕೆಗೆ ಭೂಮಿಯ ಮಣ್ಣಿನ ಪದರವನ್ನು ಒಡೆದು ಹೊರಬರುವುದು ಸುಲಭದ ಮಾತಲ್ಲ. ಆದರೂ ಅದು ತಾನೊಂದು ದೊಡ್ಡ ಸಾಧನೆಯನ್ನು ಮಾಡುತ್ತಿದ್ದೇನೆಂದು ಕೂಗಿ ಹೇಳಲ್ಲ. ಮಧುರವಾದ ಸವಿಯನ್ನು ಕೊಡುವ ಫಲವು ತನ್ನ ಬಗ್ಗೆ ಕೊಚ್ಚಿಕೊಳ್ಳುವುದಿಲ್ಲ. ಸೌರವ್ಯೂಹಕ್ಕೆ ಒಡೆಯನಾದ ಸೂರ್ಯನು ಹಗಲು ಹೊತ್ತು ಬೆಳಕನ್ನು ನೀಡಿದರೆ, ರಾತ್ರಿ ಚಂದ್ರನು ತಂಪನ್ನೀಯುವನು. ಇವರು ಮೌನವಾಗಿ ತಮ್ಮ ಕಾಯಕವನ್ನು ಮಾಡುವರೇ ಹೊರತು ತಮ್ಮ ಹಿರಿತನದ ಬಗ್ಗೆ ಜಂಬ ಪಟ್ಟುಕೊಂಡಿಲ್ಲ. ಇವರೆಲ್ಲಾ ತಮ್ಮ ಪಾಡಿಗೆ ತಮ್ಮ ಕಾಯಕವನ್ನು ಮೌನವಾಗಿ ಮಾಡುತ್ತಿರುವಾಗ ನೀನ್ಯಾಕೆ ಅವರಂತೆ ಮೌನವಾಗಿರಬಾರದು ಎಂದು ಮನುಷ್ಯರನ್ನು ಪೂಜ್ಯ ಡಿ.ವಿ.ಜಿ ಯವರು ಕೇಳುತ್ತಾರೆ. ******************************** ವಾಣಿ ಸುರೇಶ್ ಕಾಮತ್ ವಾಣಿ ಸುರೇಶ್ ಕಾಮತ್ , ವೃತ್ತಿಯಲ್ಲಿ ಶಿಕ್ಷಕಿಯಾಗಿರುವ ಇವರು ಬೆಂಗಳೂರು ವಾಸಿ. ಓದು ಮತ್ತು ತೋಟಗಾರಿಕೆ ಇವರ ಹವ್ಯಾಸ.

Read Post »